ಅದೊಂದು ಸಣ್ಣ ಊರು. ಆ ಊರಿನಲ್ಲಿ ಕೆಲವೇ ಕೆಲವು ಮನೆಗಳು. ದುಡಿದು ಜೀವಿಸುವವರ ಮನೆಗಳು. ಅಷ್ಟು ಮನೆಗಳ ಮಧ್ಯೆ ಅದೊಂದು ಪುಟ್ಟ ಮನೆ. ಬಡವರ ಮನೆ. ಬಡವರ ಮನೆಯೆಂದು ಬಾಯಿಬಿಟ್ಟು ಹೇಳಬೇಕಾದ ಅವಶ್ಯಕತೆ ಇಲ್ಲ. ನೋಡಿದರೆ ಗೊತ್ತಾಗುವುದು. ಸಿರಿವಂತಿಕೆಯ ಪೀಠೋಪಕರಣಗಳಿಲ್ಲ. ಕಣ್ಣಿಗೆ ಕುಕ್ಕುವ ಅಲಂಕಾರ ವಸ್ತುಗಳಿಲ್ಲ. ಅಂದಿನ ದಿನದ ಸಂಪಾದನೆಯಿಂದ ಆ ದಿನದ ಕಾಲಹರಣ. ಹಾಗೆಂದು ಆ ಮನೆಯಲ್ಲಿರುವವರಿಗೆ ದುಃಖವಿಲ್ಲ. ಚಳಿ-ಮಳೆ-ಗಾಳಿಯಿಂದ ರಕ್ಷಣೆ ಕೊಡುವ ಒಂದು ಮನೆ ಇದೆ. ಅದೇ ದೊಡ್ಡದು. ಸಂಜೆ ಆದಮೇಲೆ ಬೆಳಗಿನವರೆಗೆ ಇರಲೊಂದು ಸೂರು ಉಂಟು. ಅದರಲ್ಲಿ ವಾಸ ಇರುವವರಿಗೆ ಅದೇ ಒಂದು ತೃಪ್ತಿ. 
ಒಂದು ದಿನ ಆ ಮನೆಯ ಸದಸ್ಯರೆಲ್ಲಾ ಹೊರಗಡೆ ಹೋಗಿದ್ದಾರೆ. ಕುಟುಂಬದ ಒಬ್ಬಳು ಹುಡುಗಿ ಮಾತ್ರ ಅಂದು ಮನೆಯಲ್ಲಿ ಉಳಿದಿದ್ದಾಳೆ. "ಕುಮಾರಿ" ಎಂದು ಅವಳ ಹೆಸರು. ಅವಳ ಪೂರ್ತಿ ಹೆಸರು ಗೊತ್ತಿಲ್ಲ. ಅಥವಾ "ಕುಮಾರಿ" ಎನ್ನುವುದೇ ಅವಳ ಪೂರ್ತಿ ಹೆಸರಿರಬಹುದು. ಕುಮಾರಿ ಮನೆಯ ಒಳಗಡೆ ಏನೋ ಕೆಲಸ ಮಾಡುತ್ತಿದ್ದಾಳೆ. 
ಹೊರಗಡೆ ಯಾರೋ ಬಂದ ಶಬ್ದವಾಯಿತು. ಆಚೆ ಬಂದು ನೋಡಿದಳು. ಪರಿಚಯದ ನೆಂಟನೊಬ್ಬ ಬಂದಿದ್ದಾನೆ. ಬಡವರ ಮನೆಯಾದರೂ ಪ್ರೀತಿ-ವಿಶ್ವಾಸಗಳಿಗೆ ಬಡತನವಿಲ್ಲ. ನೆಂಟ ಬಂದ ಈ ಸಮಯದಲ್ಲಿ ಕುಟುಂಬದ ಹಿರಿಯರೊಬ್ಬರೂ ಮನೆಯಲ್ಲಿಲ್ಲ. ಕುಮಾರಿಯೇ ಸ್ವಾಗತಿಸಿದಳು. ನೆಂಟ ಮನೆಯೊಳಗೆ ಬಂದ. ಕೈ-ಕಾಲು ತೊಳೆಯಲು ನೀರು ಕೊಟ್ಟಳು. ಕೈ-ಕಾಲು ತೊಳೆದುಕೊಂಡ. ಚಾಪೆ ಹಾಸಿತ್ತು. ಅದರ ಮೇಲೆ ಕುಳಿತುಕೊಂಡ. ಮಡಕೆಯಲ್ಲಿದ್ದ ತಣ್ಣಗಿನ ನೀರು ಕುಡಿಯಲು ಕೊಟ್ಟಳು. ಕುಡಿದು ದಣಿವಾರಿಸಿಕೊಂಡ. ಕುಶಲೋಪರಿ ಮಾತನಾಡಿಸಿದಳು. ಹೆಚ್ಚು ಮಾತನಾಡಲು ಕುಮಾರಿಗೆ ಗೊತ್ತಿಲ್ಲ. ನೆಂಟನಿಗೂ ಮುಂದೇನು ಎಂದು ತೋಚಲಿಲ್ಲ. "ಸರಿ. ಬಂದಿದ್ದೆ ಎಂದು ಹೇಳಿ. ಮತ್ತೊಮ್ಮೆ ಬರುತ್ತೇನೆ" ಎಂದು ಹೇಳಿ ಹೊರಡಲು ಅನುವಾದ. 
ಅವರ ಮನೆಯಲ್ಲಿ ಎಷ್ಟೇ ಬಡತನವಿದ್ದರೂ ಬಂದವರಿಗೆ ಆದರದ ಉಪಚಾರ ಇರುತ್ತಿತ್ತು. ಇದ್ದಿದ್ದರಲ್ಲೇ ಬಂದಿದ್ದವರಿಗೆ ಒಂದು ಪಾಲು ಅನ್ನ-ಆಹಾರ ಕೊಡುವ ಪರಿಪಾಠ. ಕುಮಾರಿಗೆ ಇದು ನೋಡಿ ಗೊತ್ತು. ನೆಂಟ ಮಧ್ಯಾನ್ಹದ ವೇಳೆಗೆ ಬಂದಿದ್ದಾನೆ. ದೂರದಿಂದ ಬಂದಂತೆ ತೋರುತ್ತಿದೆ. ಹಸಿದಿರುವ ಮುಖಭಾವ ಕಾಣುತ್ತಿದೆ. ಬರೀ ನೀರು ಕುಡಿದಿದ್ದಾನೆ. ಹೊರಟು ನಿಂತಿದ್ದಾನೆ. ಕುಮಾರಿಗೆ ಪಿಚ್ಚೆನ್ನಿಸಿತು. 
"ಊಟ ಮಾಡಿಕೊಂಡು ಹೋಗುವಿರಂತೆ. ಸ್ವಲ್ಪ ಇರಿ. ಬೇಗ ಅಡಿಗೆ ಮಾಡಿಬಿಡುತ್ತೇನೆ" ಅಂದಳು ಕುಮಾರಿ. 
ಅವನಿಗೂ ಪ್ರಾಯಶಃ ಅದೇ ಬೇಕಾಗಿತ್ತು. "ಆಗಲಿ. ಕುಳಿತಿರುತ್ತೇನೆ" ಅಂದ. ಚಾಪೆಯ ಮೇಲೆ ಕಾಲುನೀಡಿಕೊಂಡು ಆರಾಮವಾಗಿ ಕುಳಿತ. 
***** 
ಎಷ್ಟೋ ವೇಳೆ ಮನೆಗೆ ಬಂದವರಿಗೆ "ಇರಿ. ಊಟ ಮಾಡಿಕೊಂಡು ಹೋಗಿ" ಅನ್ನುವುದು ಅಭ್ಯಾಸ. ಹಾಗೆ ಹೇಳುವುದು ಮನೆಯವರ ಪದ್ಧತಿ. ತೊಂಭತ್ತು ಭಾಗ ಬಂದವರು "ಇಲ್ಲ. ಸ್ವಲ್ಪ ಕೆಲಸವಿದೆ. ಅವಸರವಿತ್ತು. ಇನ್ನೊಮ್ಮೆ ಬರುತ್ತೇನೆ" ಎಂದು ಹೇಳಿ ಹೋಗುತ್ತಾರೆ. ಇನ್ನು ಕೆಲವರು "ಬರುವಾಗಲೇ ಊಟಮಾಡಿಕೊಂಡು ಹೊರಟಿದ್ದೆ. ಏನೂ ಬೇಡ" ಎಂದು ಹೋಗಬಹುದು. ಮತ್ತೆ ಕೆಲವರು "ಸ್ನೇಹಿತರ ಮನೆಗೆ ಊಟಕ್ಕೆ ಹೇಳಿದ್ದಾರೆ. ಅಲ್ಲಿಗೆ ಹೊರಟಿದ್ದೆ. ಹಾಗೇ ಸುಮ್ಮನೆ ನಿಮ್ಮನ್ನು ನೋಡಿ ಹೋಗುವ ಎಂದು ಬಂದೆ. ಅವರು ಕಾಯುತ್ತಿರುತ್ತಾರೆ. ಇನ್ನೊಮ್ಮೆ ಬಂದಾಗ ಊಟ ಮಾಡಿಕೊಂಡೇ ಹೋಗುತ್ತೇನೆ. ನನಗೆ ನಿಮ್ಮ ಮನೆಯಲ್ಲಿ ಏನು ಸಂಕೋಚ!" ಎಂದು ಹೇಳಿ ಬಹಳ ಸಂಕೊಚದಿಂದ ಹೋಗಿಬಿಡಬಹುದು.
ಹಾಗೆ ಹೋಗುತ್ತಾರೆ ಅನ್ನುವ ಧೈರ್ಯದಿಂದಲೇ "ಇರಿ, ಊಟ ಮಾಡಿಕೊಂಡು ಹೋಗಿ" ಎಂದು ಕೆಲವರು ಹೇಳಬಹುದು. ಬಂದವರಿಗೂ ಸಾಮಾನ್ಯ ಗೊತ್ತಿರುತ್ತದೆ. ಹೇಳುವವರ ಮನಸ್ಸಿನಲ್ಲಿ ಏನಿರಬಹುದು ಅಂತ. ಇವರು ಹೇಳಿದ ಹಾಗೆ ಮಾಡಿದರು. ಅವರು ಕೇಳಿದಹಾಗೆ ಮಾಡಿದರು. ಇವರು ಊಟ ಹಾಕಲಿಲ್ಲ. ಅವರು ಮಾಡಲಿಲ್ಲ. ಆದರೂ ಕೇಳಿದ ಸಮಾಧಾನ ಇವರಿಗೆ. ಸಿಕ್ಕಿಹಾಕಿಕೊಂಡು ತೊಂದರೆ ಕೊಡಲಿಲ್ಲ ಅನ್ನುವ ಸಮಾಧಾನ ಅವರಿಗೆ. 
ಅದೆಲ್ಲ ಹಿಂದಿನ ಸಮಾಚಾರ. ಈಗ ಚಿಂತೆಯಿಲ್ಲ. ಸ್ವಿಗ್ಗಿ, ಜ್ಜೊಮಾಟೊ ಇವೆ. ಅವರಿಗೂ, ನಮಗೂ ಸೇರಿಸಿ ಊಟ-ತಿಂಡಿ ತರಿಸಿಬಿಡಬಹುದು. "ನಿಮಗೆ ಏನು ಬೇಕು?" ಎಂದು ಕೇಳಿ, ಅವರಿಗೆ ಬೇಕಾದದ್ದು ಅವರಿಗೆ, ನಮಗೆ ಬೇಕಾದದ್ದು ನಮಗೆ, ಅರ್ಧ ಘಂಟೆಯಲ್ಲಿ ಹಾಜರುಪಡಿಸಬಹುದು. ಅವರೂ ಸಂಕೋಚ ಪಡಬೇಕಾಗಿಲ್ಲ. ನಾವೂ ಕಷ್ಟ ಪಡುವಂತಿಲ್ಲ. ಜೇಬಲ್ಲಿ ದುಡ್ಡೂ ಇರಬೇಕೆಂದಿಲ್ಲ. ಕ್ರೆಡಿಟ್ ಕಾರ್ಡ್ ಉಂಟು. ತಿಂಗಳ ಬಿಲ್ ಬಂದಾಗ ನೋಡೋಣ. ಆಗ ಹಣ ಇಲ್ಲದಿದ್ದರೆ ಇನ್ನೊಂದು ಕಾರ್ಡಿಂದ ತೆಗೆದು ಕೊಟ್ಟರಾಯಿತು. 
ಕುಮಾರಿಗೆ ಈ ಅನುಕೂಲ ಇರಲಿಲ್ಲ. ಹಾಗೆ ಸುಮ್ಮನೆ ಹೇಳುವ ಮನಸ್ಸೂ, ಅಭ್ಯಾಸವೂ ಅವಳದಲ್ಲ. ಜೊತೆಗೆ ನೆಂಟನೂ ಊಟಕ್ಕೆ ಕಾದು ಕುಳಿತೇಬಿಟ್ಟನಲ್ಲ!
***** 
ಕುಮಾರಿ ಅಡಿಗೆ ಮನೆಯ ಒಳಗೆ ಬಂದಳು. ಅಕ್ಕಿಯ ಡಬ್ಬ ಬರಿದು. ಅಕ್ಕಿಯೇ ಇಲ್ಲದೆ ಏನು ಅಡಿಗೆ ಮಾಡುವುದು? ಅಡಿಗೆ ಮಾಡುತ್ತೇನೆ ಎಂದು ಹೇಳಿಯಾಯಿತು. ನೆಂಟ ಕಾದು ಕುಳಿತಿದ್ದಾನೆ. "ಸರ್ವಸ್ಯ ಗಾತ್ರಸ್ಯ ಶಿರಃ ಪ್ರಧಾನಂ" (ಇಡೀ ದೇಹಕ್ಕೆ ತಲೆಯೇ ಮುಖ್ಯ) ಅನ್ನುವಂತೆ ಊಟಕ್ಕೆ ಅನ್ನವೇ ಮುಖ್ಯ. ಅನ್ನವಿಲ್ಲದೇ ಏನು ಊಟ ಬಡಿಸುವುದು? ಕುಮಾರಿ ಅಡಿಗೆ ಮನೆಯೆಲ್ಲ ಹುಡುಕಿದಳು. ಸ್ವಲ್ಪ ಭತ್ತ ಸಿಕ್ಕಿತು. ಪರವಾಗಿಲ್ಲ. ಕುಟ್ಟಿದರೆ ಒಬ್ಬರ ಊಟಕ್ಕೆ ಸಾಕಾಗುವಷ್ಟು ಅನ್ನ ಮಾಡಬಹುದು. ಮರ್ಯಾದೆ ಉಳಿಯಿತು ಅಂದುಕೊಂಡಳು. ಆದರೆ ಭತ್ತ ಕುಟ್ಟಿ, ಜರಡಿ ಹಿಡಿದು, ನುಚ್ಚು ತೆಗೆದು, ಅಕ್ಕಿ ಬೇರ್ಪಡಿಸಿ, ಅನ್ನ ಮಾಡಬೇಕು. ಉಳಿದದ್ದು ಬೇಗ ತಯಾರು ಮಾಡಿ ಊಟ ಬಡಿಸಬೇಕು. ಕುಮಾರಿ ಚುರುಕು ಹುಡುಗಿ. ಒರಳಿನಲ್ಲಿ ಭತ್ತ ಹುಯ್ದು ಒನಕೆಯಿಂದ ಕುಟ್ಟತೊಡಗಿದಳು. 
ಕುಮಾರಿಗೆ ಬಳೆ ಅಂದರೆ ಬಹಳ ಇಷ್ಟ. ಚಿನ್ನದ ಬಳೆಗಳು ಹಾಕಿಕೊಳ್ಳುವ ಸ್ಥಿತಿಯಿಲ್ಲ. ಗಾಜಿನ ಬಳೆಗಳು. ಹಿಂದಿನ ವಾರ ಬಳೆಗಾರ ಬಂದಿದ್ದ. ಎರಡು ಕೈಗೂ ತುಂಬು ಬಳೆಗಳು ಹಾಕಿಸಿಕೊಂಡಾಗಿತ್ತು. ಕುಟ್ಟಲು ಹೋದರೆ ಮೊದಲ ಏಟಿಗೆ ಬಳೆಗಳು ಶಬ್ದಮಾಡಿದವು. ಶಬ್ದವಾದರೆ ಹೊರಗಡೆ ಕುಳಿತಿರುವ ನೆಂಟನಿಗೆ ಭತ್ತ ಕುಟ್ಟುವುದು ಗೊತ್ತಾಗುವುದು. ಸಂಕೋಚ ಮಾಡಿಕೊಂಡಾನು. ಅವನಿಗೆ ಗೊತ್ತಾಗದಂತೆ, ಶಬ್ದವಾಗದಂತೆ ಭತ್ತ ಕುಟ್ಟಬೇಕು. ಸರಿ, ಕೆಲವು ಬಳೆಗಳನ್ನು ತೆಗೆದಳು. ಎರಡನೇ ಏಟಿಗೆ ಶಬ್ದ ಕಡಿಮೆಯಾದರೂ ಶಬ್ದವೇ. ಎರಡನ್ನು ಬಿಟ್ಟು ಮತ್ತೆಲ್ಲ ಬಳೆ ತೆಗೆದಿಟ್ಟಳು. ಹಾಗಾದರೂ ಸ್ವಲ್ಪ ಶಬ್ದವಾಯಿತು. ಇದೂ ಸರಿಯಿಲ್ಲ ಎಂದು ಮತ್ತೊಂದು ಬಳೆ ತೆಗೆದಳು. ಈಗ ಎರಡೂ ಕೈಯಲ್ಲಿ ಒಂದೊಂದೇ ಬಳೆ. ಆದರೆ ಕುಟ್ಟುವಾಗ ಸದ್ಯ ಶಬ್ದವಿಲ್ಲ. 
ಬೇಗ ಬೇಗ ಭತ್ತ ಕುಟ್ಟಿ, ಅಕ್ಕಿ ತೆಗೆದು, ಅನ್ನ ಬೇಯಿಸಿ, ಅಡಿಗೆ ಮುಗಿಸಿ ನೆಂಟನಿಗೆ ಊಟ ಬಡಿಸಿದಳು. ನೆಂಟನಿಗೆ ಭತ್ತ ಕುಟ್ಟಿ ಅಕ್ಕಿ ಮಾಡಿದ್ದು ಗೊತ್ತಾಗಲಿಲ್ಲ. ಒಂದೇ ಬಳೆಯ ಹುಡುಗಿ ನೆಂಟನಿಗೆ ಊಟ ಬಡಿಸಿ, ಸತ್ಕರಿಸಿ ಕಳಿಸಿದಳು!
*****
ಅವಧೂತನೊಬ್ಬ ಎದುರು ಮನೆಯ ಜಗುಲಿಯಲ್ಲಿ ಕುಳಿತಿದ್ದ. ಕುಮಾರಿಯ ಈ ಜಾಣತನದ ಪ್ರಸಂಗ ನೋಡಿದ. ಅವನು ಇದರಿಂದ ಒಂದು ಪಾಠ ಕಲಿತ!
ಕೈತುಂಬಾ ಬಳೆ ಇದ್ದಾಗ ಬಹಳ ಶಬ್ದ. ಎರಡಿದ್ದಾಗ ಅವೆರಡರ ನಡುವೆ ಕಿಣಿ-ಕಿಣಿ ಶಬ್ದ. ಒಂದೇ ಬಳೆ ಇದ್ದಾಗ ಶಬ್ದವಿಲ್ಲ. ಬೇಕಿದ್ದ ಕೆಲಸ ಮಾಡಬಹುದು. 
ತುಂಬಾ ಜನವಿದ್ದರೆ ಅದೊಂದು ದೊಂಬಿಯ ಪರಿಸರ. ಘರ್ಷಣೆಗಳಿಗೆ ಅವಕಾಶ. ಪರಸ್ಪರ ವಿರೋಧಕ್ಕೆ ದಾರಿ. ಉದ್ದೇಶಿಸಿದ ಕೆಲಸವಾಗುವುದಿಲ್ಲ. 
ಇಬ್ಬರೇ ಇದ್ದರೆ ದೊಂಬಿಯಿಲ್ಲದಿದ್ದರೂ ಕಾಡುಹರಟೆಗೆ ನಾಂದಿ. ಸಮಯ ಹಾಳು. ಪ್ರಯೋಜನವಿಲ್ಲ. 
ಒಬ್ಬನೇ ಇದ್ದಾಗ ಅದು ಏಕಾಂತ. ಏಕಾಗ್ರತೆ ಸಾಧಿಸಬಹುದು. ಏಕಾಂತದ ಸಮ ಮತ್ತೊಂದಿಲ್ಲ. ಸಾಧನೆಗೆ ಇದು ಅತ್ಯವಶ್ಯಕ!
ಇದೇ ಅವಧೂತ ಕುಮಾರಿಯಿಂದ ಕಲಿತ ಪಾಠ!
ಕುಮಾರಿಯೇನು ಪಾಠ ಹೇಳಲಿಲ್ಲ. ಆದರೆ ಅವಳ ಕೆಲಸವನ್ನು ನೋಡಿದ ಅವಧೂತ ಏಕಾಂತದ ಪಾಠ ಕಲಿತುಕೊಂಡ. 
*****
ಶ್ರೀಮದ್ಭಾಗವತದ ಹನ್ನೊಂದನೆಯ ಸ್ಕಂಧದಲ್ಲಿ "ಅವಧೂತ ಗೀತೆ" ಎನ್ನುವ ಪ್ರಸಂಗ ಬರುತ್ತದೆ. ಅದರಲ್ಲಿ ಯದು ಮಾಹಾರಾಜನಿಗೆ ಸಿಕ್ಕ ಅವಧೂತನೊಬ್ಬ "ನನಗೆ ಇಪ್ಪತ್ನಾಲ್ಕು ಗುರುಗಳು. ಅವರೊಬ್ಬಬ್ಬರಿಂದ ಒಂದೊಂದು ಪಾಠ ಕಲಿತೆ" ಎಂದು ಹೇಳುತ್ತಾನೆ. ಹಾಗೆ ಹೇಳಿದ ಇಪ್ಪತ್ನಾಲ್ಕು ಪಾಠಗಳಲ್ಲಿ "ಒಂದೇ ಬಳೆಯ ಹುಡುಗಿ" ಕುಮಾರಿಯಿಂದ ಕಲಿತ ಈ ಪಾಠವೂ ಒಂದು. 
ಅದರ ವಿವರಗಳನ್ನು ಇನ್ನೊಮ್ಮೆ ಅವಕಾಶವಾದಾಗ ನೋಡೋಣ.  
Very nice narration from every little thing there some thing is there to learn for all of us
ReplyDeleteಒಂದೆ ಬಳೆ ಹುಡುಗಿಯ ಆಧ್ಯಾತ್ಮಿಕ ಪಾಠ! ಯಾಕಾಗಬಾರದು.ನಿಶ್ಶಬ್ಧದ ಪಾಠ.ಬಲು ಚೆನ್ನ
ReplyDeleteStory and the lesson learnt very inspiring
ReplyDeleteThe title is very interesting and makes a curious peep into the story. An adversity is overcome just out of good will to provide food to a needy guest reflects the beautiful state of mind in the days that have just gone by, still retained maybe, but rare to find in today's self centered and time crunch era of life.
ReplyDeleteThank you 👍
Meera Bapat
very nice narration. ekagrateya sutra ontiyaagiruvudu
ReplyDeleteಮನೆಯಲ್ಲಿ ಏನೇ ಅನಕೂಲಗಳು ಇದ್ದರು-ಇಲ್ಲದಿದ್ದರೂ, ಸಮಯ ಪ್ರಜ್ಞೆಯಿಂದ, ಎಲ್ಲವನ್ನೂ ನಿಭಾಯಿಸಲು ಸಾದ್ಯ.
ReplyDeleteಏಕಾಂತವು ಆತ್ಮೋನ್ನತಿ ಮತ್ತು ಆಧ್ಯಾತ್ಮಿಕ ಬೆಳವಣಿಗೆಗೆ ಹೇಗೆ ಸಾಧನವಾಗುವುದೆಂದು ಸರಳ ಸುಂದರ ಕತೆಯಿಂದ ತಿಳಿಯುತ್ತದೆ. ಅವಧೂತರು ಕಲಿತ ಮಿಕ್ಕ 23 ಪಾಠಗಳ ಬಗ್ಗೆಯೂ ಕುತೂಹಲ ಮೂಡಿಸಿದೆ.
ReplyDeleteಕಿರಿದರಲ್ಲಿ ಪಿರಿದರ್ಥವನ್ನು ಹೇಳುವ ಕಥೆ. ಈ ಕಥೆ ಬಗ್ಗೆ ನನಗೆ ಗೊತ್ತಿರಲಿಲ್ಲ ಧನ್ಯವಾದಗಳು
ReplyDelete