Monday, February 9, 2026

ಅವರೇ ಆಗಬೇಕೆಂದಿಲ್ಲ!


ಎರಡು ತಿಂಗಳ ಹಿಂದೆ (ಡಿಸೆಂಬರ್ 2025) "ಅಂಥ ಇಂಥವರಲ್ಲ" ಎನ್ನುವ ಶೀರ್ಷಿಕೆಯ ಅಡಿಯಲ್ಲಿ ಅನಂತಾದ್ರೀಶ ಅಂಕಿತದ ಗೋಕಾವಿ ಅನಂತಾದ್ರೀಶ ದಾಸರ (ಗೋಕಾಕ್  ಅನಂತಾಚಾರ್ಯರು) ಕೃತಿಯೊಂದರಲ್ಲಿ ವಿವರಿಸಿರುವ ಶ್ರೀ ರಾಘವೇಂದ್ರ ರಾಯರ ಗ್ರಂಥಗಳ ಮತ್ತು ಅವರ ವ್ಯಕ್ತಿತ್ವದ ಒಂದು ಸಣ್ಣ ನೋಟ ಕಾಣುವ ಪ್ರಯತ್ನ ಮಾಡಿದ್ದೆವು. (ಈ ಸಂಚಿಕೆಯನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು).

ಒಬ್ಬರ ಗುಣ ವಿಶೇಷಗಳನ್ನು ತಿಳಿದು ಅವುಗಳನ್ನು ಹೇಳುವುದು ಸ್ತೋತ್ರ ಎನಿಸಿಕೊಳ್ಳುತ್ತದೆ. ನಾವು ಅನೇಕರು ಪ್ರತಿದಿನ ನಮಗೆ ಅನುಕೂಲವಿರುವ ಸಮಯಗಳಲ್ಲಿ ನಮ್ಮ ನಮ್ಮ ಪದ್ದತಿಗಳಂತೆ ಸ್ತೋತ್ರಗಳನ್ನು ಹೇಳಿಕೊಳ್ಳುವ ಪರಿಪಾಠ ಇಟ್ಟುಕೊಂಡಿದ್ದೇವೆ. ಈ ರೀತಿಯ ಅನೇಕ ಸ್ತೋತ್ರಗಳು ಒಳ್ಳೆಯ ಕಾವ್ಯಗುಣಗಳನ್ನು ಹೊಂದಿವೆ. ಈ ಬಗೆಯ ಸ್ತೋತ್ರಗಳನ್ನು ಹೇಳಿಕೊಳ್ಳುವುದರಿಂದ ಪದಗಳ ಉಚ್ಚಾರಣೆ ಚೆನ್ನಾಗಿ ಆಗಿ ವಾಕ್ಶುದ್ಧಿಯೂ ಆಗುವುದು. ಸಾಮಾನ್ಯವಾಗಿ ಇಂತಹ ಸ್ತೋತ್ರಗಳು ಕಿವಿಗಳಿಗೆ ಇಂಪಾಗಿ, ಮನಸ್ಸಿಗೂ ಹಿತವಾಗಿ ಇರುತ್ತವೆ. ನೆನಪಿನ ಶಕ್ತಿ ವೃದ್ಧಿಯೂ ಆಗುವುದುಂಟು. ಒಟ್ಟಾರೆ ದಿನಚರಿ ಮತ್ತು ನಡವಳಿಕೆಯಲ್ಲಿ ಒಂದು ರೀತಿಯ ಶಿಸ್ತು ಸಹ ಬರುತ್ತದೆ.  

ಅನೇಕ ವೇಳೆ ಈ ಸ್ತೋತ್ರಗಳಲ್ಲಿ ಹೇಳಿರುವ ವಿಷಯಗಳು ನಮಗೆ ತಿಳಿದಿರುವುದಿಲ್ಲ. ಮನೆಯಲ್ಲಿ ಹಿರಿಯರು ಹೇಳಿಕೊಳ್ಳುತ್ತಿದ್ದಂತೆ, ಅಥವಾ ನಮ್ಮ ನಮ್ಮ ಗುರುಗಳು ಹೇಳಿಕೊಟ್ಟಿದ್ದಂತೆ ಈ ಸ್ತೋತ್ರಗಳನ್ನು ಹೇಳಿಕೊಳ್ಳುತ್ತೇವೆ. ಅಂದಿನ ಸಂದರ್ಭಗಳಿಂದಲೋ, ಅಥವಾ ಸಮಯದ ಅಭಾವದಿಂದಲೋ, ಅವುಗಳ ಪೂರ್ತಿ ಅರ್ಥ ವಿಶೇಷಗಳನ್ನು ಅವರು ಹೇಳಿರುವುದಿಲ್ಲ. ಚಿಕ್ಕ ವಯಸ್ಸಿನಲ್ಲಿ ಅದನ್ನು ಕೇಳಬೇಕೆಂದು ನಮಗೂ ತೋಚಿರುವುದಿಲ್ಲ. ಮುಂದೆಯೂ ನಾವು ತಿಳಿಯುವ ಪ್ರಯತ್ನ ಮಾಡಿರುವುದಿಲ್ಲ. ಕಾಲಕ್ರಮದಲ್ಲಿ ಅವುಗಳ ಅರ್ಥ ಹೇಗೋ ತಿಳಿದುಬಂದಾಗ "ಒಹೋ, ಇದರ ಅರ್ಥ ಹೀಗಿದೆಯೇ?" ಎಂದು ನಾವು ಆಶ್ಚರ್ಯಪಡುವಂತೆ ಆಗುತ್ತದೆ. 

*****

ನಮಗೆ ಯಾವುದೋ ಒಂದು ಸಂಸ್ಥೆಯಲ್ಲಿ ಒಂದು ಕೆಲಸ ಆಗಬೇಕು. ಅದನ್ನು ಮಾಡಿಸಿಕೊಳ್ಳುವುದಕ್ಕೆ ನಮಗೆ ಶಕ್ತಿಯಿಲ್ಲ. ಅಲ್ಲಿ ಯಾರನ್ನು ಕಾಣಬೇಕು ಎಂದು ತಿಳಿದಿಲ್ಲ. ಹೇಗೆ ಕೇಳಬೇಕು ಎಂದು ಗೊತ್ತಿಲ್ಲ. ಏನೇನು ದಸ್ತಾವೇಜು (ಡಾಕ್ಯುಮೆಂಟ್) ತೆಗೆದುಕೊಂಡು ಹೋಗಬೇಕು ಎಂದು ಅರಿವಿಲ್ಲ. ಆದರೂ ಆ ಕೆಲಸವಂತೂ ಆಗಬೇಕು. ಏನು ಮಾಡುವುದು? ಲೋಕಾರೂಢಿಯಲ್ಲಿ ಇಂತಹ ವಿಷಯ ತಿಳಿದ, ನಮಗೆ ಗೊತ್ತಿರುವ ಯಾರೋ ಒಬ್ಬರನ್ನು ಕೇಳುತ್ತೇವೆ. ಅವರು ಕೆಲವು ಸೂಚನೆಗಳನ್ನು ಕೊಡುತ್ತಾರೆ. ಅದರ ಪ್ರಕಾರ ದಸ್ತಾವೇಜು ಹೊಂದಿಸಿಕೊಳ್ಳುತ್ತೇವೆ. ಸಂಸ್ಥೆಯಲ್ಲಿ ಯಾರನ್ನು, ಯಾವಾಗ, ಹೇಗೆ ಕಾಣಬೇಕು ಎಂದು ಅವರು ಹೇಳಿಕೊಟ್ಟಂತೆ ಮಾಡುತ್ತೇವೆ. ಯಾವ ರೀತಿ ಕೇಳಬೇಕು ಎಂದು ಅವರು ಮಾರ್ಗದರ್ಶನ ಕೊಟ್ಟಂತೆ ನಡೆದುಕೊಳ್ಳುತ್ತೇವೆ. ಅನೇಕವೇಳೆ ಹೀಗೆ ಮಾಡುವುದರಿಂದ ನಮ್ಮ ಕೆಲಸ ಆಗುತ್ತದೆ. ಹೀಗಿದ್ದೂ, ಕೆಲವೊಮ್ಮೆ ಕೆಲಸ ಆಗದಿರುವುದೂ ಉಂಟು.  

ಕೆಲವು ಕೆಲಸಗಳು ಅವುಗಳ ಸೂಕ್ಷ್ಮತೆ ಗೊತ್ತಿರುವ ದೊಡ್ಡವರೊಬ್ಬರು ನಮ್ಮ ಜೊತೆ ಬಂದಾಗ ಬಹಳ ಸುಲಭವಾಗಿ ಆಗುತ್ತವೆ. ತುಂಬಾ ದೊಡ್ಡವರ ಬಳಿ ಹೀಗೆ ಸಹಾಯ ಕೇಳಿಕೊಂಡು ಹೋಗುವ ಜನರ ಸಂಖ್ಯೆಯೂ ದೊಡ್ಡದು. ಅವರು ಎಲ್ಲರ ಜೊತೆ ಹೋಗಿ ಕೆಲಸ ಮಾಡಿಸಿಕೊಡಲು ಆಗುವುದಿಲ್ಲ. ಆಗ ಅವರು ಒಂದು ಪತ್ರ (ಲೆಟರ್) ಬರೆದುಕೊಡುತ್ತಾರೆ. ಸಂಸ್ಥೆಯಲ್ಲಿ ಸರಿಯಾದವರ ಬಳಿ ಆ ಪತ್ರ ಕೊಟ್ಟರೆ ನಮ್ಮ ಕೆಲಸ ಸುಲಭವಾಗಿ ಆಗುತ್ತದೆ. ಆ ದೊಡ್ಡವರು ಕೊಟ್ಟ ಕಾಗದಕ್ಕೇ ಅಷ್ಟು ಶಕ್ತಿ ಉಂಟು! ಕೆಲವು ಕೆಲಸಗಳು ನಮಗೆ ಬಹಳ ಮುಖ್ಯ. ದೊಡ್ಡವರ ಬಳಿ ಹೋದಾಗ ಅವರು ನಮ್ಮ ಜೊತೆ ಬರುವುದಿಲ್ಲ. ಪತ್ರವನ್ನೂ ಕೊಡುವುದಿಲ್ಲ. ಯಾರೋ ಒಬ್ಬರ ಹೆಸರನ್ನು ಹೇಳಿ "ಅವರ ಬಳಿ ನಾನು ಕಳುಹಿಸಿದೆ ಎಂದು ಹೇಳು" ಅನ್ನುತ್ತಾರೆ. ಅಷ್ಟು ಮಾಡಿದರೆ ನಮ್ಮ ಕೆಲಸ ಆಗುತ್ತದೆ! 

ದೊಡ್ಡವರ ಶಕ್ತಿ ಅಂತಹುದು. ಕೆಲವೊಮ್ಮೆ, ಬಹಳ ಗಹನವಾದ ಕೆಲಸವಾದರೆ, ಅವರೇ ಬರಬೇಕಾಗುತ್ತದೆ. ಮತ್ತೆ ಕೆಲವು ಸಂದರ್ಭದಲ್ಲಿ ಅವರು ಕೊಟ್ಟ ಕಾಗದವೇ ಸಾಕಾಗುತ್ತದೆ. ಇನ್ನೂ ಅನೇಕ ಸಲ ಅವರ ಹೆಸರಿನಿಂದಲೇ ನಮ್ಮ ಕೆಲಸಗಳು ಸುಸೂತ್ರವಾಗಿ ಆಗುವುದುಂಟು. "ಇವರು ಅವರ ಕಡೆಯವರಂತೆ. ಮಾಡಿ ಕೊಟ್ಟುಬಿಡು" ಎಂದು ಮೇಲಧಿಕಾರಿಗಳು ಕೈಕೆಳಗಿನವರಿಗೆ ಹೇಳುತ್ತಾರೆ. ಒಟ್ಟಿನಲ್ಲಿ ನಮ್ಮ ಗುರಿ ಸಾಧಿಸಿತು. ನಮಗೆ ಬೇಕಾದುದು ಆಯಿತು. ನಮಗೆ ಅದು ಮುಖ್ಯ. 
*****

ಮಂತ್ರಾಲಯ ಪ್ರಭುಗಳ ವಿಷಯದಲ್ಲಿ ಇದು ಹೇಗೆ ಕೆಲಸ ಮಾಡುತ್ತದೆ? "ಕರೆದಲ್ಲಿ ಬರುವ ರಾಯರು" ಎಂದೇ ಅವರಿಗೆ ವಿಶೇಷಣ. ದೊಡ್ಡವರ ಬಳಿ ನಾವು ಹೋಗುವುದು ಲೋಕಾರೂಢಿ. ಇವರು ಅತ್ಯಂತ ಕರುಣಾಶಾಲಿಗಳು. ಅದಕ್ಕೇ ಅವರಿಗೆ "ನಮೋ ಅತ್ಯಂತ ದಯಾಳವೇ" ಅನ್ನುವುದು. ಅವರು ಬರೀ ದಯಾಳುಗಳಲ್ಲ. ಅವರು ಅತಿ ದಯಾಳುಗಳೂ ಅಲ್ಲ. ಅವರು ಅತ್ಯಂತ ದಯಾಳುಗಳು! ಅವರಿಗಿಂತ ದಯಾಳುಗಳಾಗಿರುವವರು ಕಾಣಸಿಗರು! ಅವರೇ ನಮ್ಮ ಬಳಿ ಬರುತ್ತಾರೆ. ಸರಿಯಾಗಿ ಕರೆಯಬೇಕು. ಅಷ್ಟೇ. 

ಶ್ರೀ ರಾಘವೇಂದ್ರ ಸ್ತೋತ್ರದಲ್ಲಿ ಒಂದು ಶ್ಲೋಕ ಹೀಗಿದೆ:

ಯತ್ಪಾದ ಕಂಜ ರಜಸಾ ಪರಿಭೂಷಿತಾಂಗಾ 
ಯತ್ಪಾದಪದ್ಮ ಮಧುಪಾಯಿತ ಮಾನಸಾ ಯೇ
ಯತ್ಪಾದಪದ್ಮ ಪರಿಕೀರ್ತನ ಜೀರ್ಣವಾಚ:
ತದ್ದರ್ಶನಮ್ ದುರಿತಕಾನನ ದಾವಭೂತಮ್  

ಏನಿದರ ವಿಶೇಷ?  

ರಾಯರೇ ಬರಬೇಕೆಂದಿಲ್ಲ. ಅವರೇ ಆಗಬೇಕೆಂದಿಲ್ಲ. ಅವರನ್ನು ನೋಡಿ ಬಂದವರು (ಅವರ ಪಾದಧೂಳಿ ಸೋಕಿರುವವರು), ಅವರ ಸ್ತೋತ್ರಾದಿಗಳನ್ನು, ಗುಣಗಳನ್ನು, ಮಹಿಮೆಗಳನ್ನು  ಮನಸ್ಸಿನಲ್ಲಿ ನೆನೆಯುತ್ತಿರುವವರು, ಅವರ ಮಹಿಮೆ ಹೊಗಳುತ್ತಾ ಇರುವವರು (ಜೀರ್ಣವಾಚ: ಅಂದರೆ ಸ್ತೋತ್ರಾದಿಗಳನ್ನು ಹೇಳಿ ಹೇಳಿ, ಸುಸ್ತಾ,ಗಿ ಮಾತನಾಡಲು ಶಕ್ತಿ ಇಲ್ಲದವರು ಎಂದು),  ಇಂತಹವರನ್ನು ನೋಡಿದರೂ ಸಾಕು. ದಟ್ಟವಾದ ಕಾಡಿನಂತೆ ಬೆಳೆದು ನಿಂತಿರುವ ನಮ್ಮ ಪಾಪ ರಾಶಿಗಳು ಬೆಂಕಿಯಿಂದ ಸುಟ್ಟು ಬೂದಿ ಆಗುವಂತೆ ನಾಶವಾಗುತ್ತವೆ ಎಂದು ಇದರ ಭಾವ. 

ತಿರುಪತಿಗೆ ಹೋಗಿ ತಿಮ್ಮಪ್ಪನನ್ನು ನೋಡಿಬಂದವರನ್ನು ಕಂಡರೆ ನಮಗೂ ಸ್ವಲ್ಪ ಪುಣ್ಯ ಬರುತ್ತದೆ ಎಂದು ಹೇಳುವುದು ಇದೇ ಭಾವದಲ್ಲಿ. ಇತರೆ ಪುಣ್ಯ ಕ್ಷೇತ್ರಗಳ ದರ್ಶನ ಮಾಡಿ ಬಂದವರ ಬಗ್ಗೆಯೂ ಹೀಗೆ ಹೇಳುವುದು ಉಂಟು.

*****

ಈ ಶ್ಲೋಕದ ಹಿಂದಿನ ಶ್ಲೋಕದಲ್ಲಿ "ಮಹಾ ವಂಧ್ಯಾ ಸುಪುತ್ರಪ್ರದಃ" ಎಂದು ಒಂದುಂಟು. ಏನಿದರ ಅರ್ಥ? ಕೆಲವು ಸ್ತ್ರೀಯರಿಗೆ ಸಂತಾನವಾಗುವುದಿಲ್ಲ. ಅದಕ್ಕೆ ಬೇರೆ ಬೇರೆ ಕಾರಣಗಳಿರಬಹುದು. ವೈದ್ಯಕೀಯ ವಿಜ್ಞಾನ ಕಾರಣಗಳನ್ನು ಹೇಳುತ್ತದೆ. ಕೆಲವರ ತಡೆಗಳನ್ನು ನಿವಾರಿಸಿದರೆ ಸಂತಾನ ಆಗುತ್ತದೆ. ಕೆಲವು ರೀತಿಯ ಕಾರಣಗಳಿಗೆ ನಿವಾರಣೆಯೇ ಇಲ್ಲ. "ವಂಧ್ಯಾ" ಅಂದರೆ ನಿವಾರಿಸಬಹುದಾದ ತೊಂದರೆ ಇರುವವರು. "ಮಹಾವಂಧ್ಯಾ" ಅಂದರೆ ನಿವಾರಿಸಲಾಗದ, ಶಾಶ್ವತ ತಡೆ ಇರುವವರು. 

ರಾಯರ ಮೊರೆ ಹೋದ ಇಂತಹವರಿಗೆ ಮಕ್ಕಳಾಗಿರುವುದು ಉಂಟು. ವೈದ್ಯರು ಸಾಧ್ಯವೇ ಇಲ್ಲ ಎಂದು ಹೇಳಿದ ಸಂದರ್ಭಗಳಲ್ಲೂ ಸಂತಾನ ಆಗಿರುವುದು ಉಂಟು. "ಮಹಾವಂಧ್ಯಾ ಸುಪುತ್ರಪ್ರದಃ". ಏನೋ ಒಂದು ಮಗು ಆಯಿತು ಎಂದಲ್ಲ. ಒಳ್ಳೆಯ, ಯೋಗ್ಯ ಮಗು. ಅನೇಕ ತಡೆಗಳೇ ಇಲ್ಲದ ಸ್ತ್ರೀಯರಿಗೂ ಒಳ್ಳೆಯ ಸಂತಾನ ಆಗುವುದಿಲ್ಲ. ಅಂತಹದರಲ್ಲಿ ರಾಯರ ಮೊರೆ ಹೋದ ನಿವಾರಿಸಲಾಗದ ತಡೆ ಇರುವವರಿಗೂ ಒಳ್ಳೆಯ ಸಂತಾನ ಆಗುತ್ತದೆ ಎಂದು ಇದರ ಅರ್ಥ. 

*****

ಗಂಗೆಯಲ್ಲಿ ಮಿಂದರೆ ಪುಣ್ಯ ಎಂದು ಅನೇಕರ ನಂಬಿಕೆ. ನಾವು ಕಾಶಿಗೆ ಹೋದೆವು. ಎಲ್ಲರೂ ಗಂಗಾಸ್ನಾನ ಮಾಡುತ್ತಿದ್ದಾರೆ. ಆದ್ದರಿಂದ ನಾವೂ ಮಾಡಿದೆವು. ಇದು ಒಂದು ಪಕ್ಷ. 

ಗಂಗೆಯಲ್ಲಿ ಮಿಂದರೆ ಪುಣ್ಯ ಎಂದು ನಾವು ನಂಬಿದ್ದೇವೆ. ಗಂಗೆಯ ಬಗ್ಗೆ ನಮಗೆ ಜ್ಞಾನ, ಗೌರವ ಇದೆ. ಗಂಗಾಸ್ನಾನ ಮಾಡಬೇಕೆಂಬ ಉತ್ಕಟ ಇಚ್ಛೆ ಇದೆ. ಪ್ರಯತ್ನ ಪಟ್ಟು ಹೋಗಿ ಮಾಡಿದೆವು. ಇದು ಇನ್ನೊಂದು ಪಕ್ಷ. 

ಎಲ್ಲರೂ ಸ್ತೋತ್ರ ಹೇಳುತ್ತಾರೆ. ನಾವೂ ಹೇಳಿದೆವು. ಹಾಗಲ್ಲ, ನಾವು ಆ ಸ್ತೋತ್ರದ ಅರ್ಥ ತಿಳಿದು ಹೇಳಿದೆವು. ಇವೆರಡರ ನಡುವಿನ ವ್ಯತ್ಯಾಸ ಮೇಲಿನ ಗಂಗಾಸ್ನಾನದ ವ್ಯತ್ಯಾಸದಂತೆ. ಅರ್ಥ ತಿಳಿಯುತ್ತಾ ಹೋದಂತೆ ಭಕ್ತಿ, ಗೌರವಗಳು ಹೆಚ್ಚಾಗಿ ಫಲವೂ ಹೆಚ್ಚು. ಜಾಮೂನನ್ನು ಸುಮ್ಮನೆ ನುಂಗಬಹುದು. ಜಗಿದೂ, ಜಗಿದೂ ನುಂಗಬಹುದು!

6 comments:

  1. ಲೇಖನ ಮತ್ತು ಮನಸೂರೆಗೊಳ್ಳುವ ಚಿತ್ರ ಎರಡೂ ಇಷ್ಟವಾಯಿತು.

    ReplyDelete
  2. Very nice article with explanation to show the day to day happenings which has been working for many many years.Made me think about certain things happened in my life also. It is the divine help I have received. UR….

    ReplyDelete
  3. Many times we blindly follow the tradition. Keshava Murthy sir has explained in simple terms why we have to follow after understanding the purpose. Very good examples. Thank you sir.

    ReplyDelete
  4. Very useful attitude we must. Develop faith in order to get benefit like we trust the dr while we take pills suggested by dr Cure may be due to capacity of pills but what plays more is our faith in dr as we know his background inprescribing medicine
    Many people singing Kurtis of santh Tyagaraj have same love for his lyrics ehich are set to tune with precise substance suitable to lyrics

    ReplyDelete
  5. ತುಂಬಾ ಅದ್ಭುತವಾದ ಕಥನ ಹಾಗೂ ನಿಜವಾಗ್ಲೂ ಅರ್ಥಪೂರ್ಣವಾಗಿದೆ. ನಿಮ್ಮ ಈ ಕಥೆಗೆ ವಂದನೆಗಳು. 🙏🌹

    ReplyDelete
  6. Very interesting topic

    ReplyDelete