Thursday, December 4, 2025

ಶ್ರೀಕೃಷ್ಣ ಅಂದರೆ ಯಾರು?


ಶ್ರೀಕೃಷ್ಣ ಅಂದರೆ ಯಾರು? ಹೀಗೆ ಯಾರಾದರೂ ನಮ್ಮನ್ನು ಪ್ರಶ್ನೆ ಮಾಡಿದರೆ ನಮ್ಮಲ್ಲಿ ಬಹುತೇಕರು ಪ್ರಶ್ನೆಗೆ ಉತ್ತರ ಕೊಡುವ ಬದಲು ಪ್ರಶ್ನೆ ಕೇಳಿದವರ ಮುಖವನ್ನು ದಿಟ್ಟಿಸಿ ನೋಡುವುದು ಸಹಜ. ಇದೇನು, ಇಂತಹ ಪ್ರಶ್ನೆ ಕೇಳುವುದೇ? ನಮ್ಮಲ್ಲಿ ರಾಮ, ಕೃಷ್ಣರನ್ನು ತಿಳಿಯದ ಮಂದಿ ಇದ್ದಾರೆಯೇ? ವಾಮನ, ತ್ರಿವಿಕ್ರಮ ನೆನಪಿಲ್ಲದಿರಬಹುದು. ವರಾಹ, ಸಂಕರ್ಷಣ ಯಾರೆಂದು ಗೊತ್ತಿಲ್ಲದಿರಬಹುದು. ದಾಮೋದರ ಮತ್ತು ಪ್ರದ್ಯುಮ್ನ ತಿಳಿದಿಲ್ಲದಿರಬಹುದು. ಆದರೆ ರಾಮ, ಕೃಷ್ಣ ಗೊತ್ತಿಲ್ಲವೇ? ಗಣಪ, ಹನುಮ, ಶಿವ, ರಾಮ, ಕೃಷ್ಣ, ಇವರು ಚಿಕ್ಕ ಮಕ್ಕಳಿಗೂ ಗೊತ್ತು. ಅಷ್ಟೇ ಅಲ್ಲ. ಇದು ಚಿಕ್ಕ ಮಕ್ಕಳಿಗೂ ಗೊತ್ತು ಎನ್ನುವುದು ಕೂಡ ಎಲ್ಲರಿಗೂ ಗೊತ್ತು. ಹೀಗಿರುವಾಗ, ಇದೆಂಥ ಪ್ರಶ್ನೆ? 

ಇಂತಹ ಪ್ರಶ್ನೆ ಸುಮ್ಮನೆ ಮಾಡಿದುದಲ್ಲ. ಅದಕ್ಕೆ ಕಾರಣಗಳಿವೆ. ಏನು ಕಾರಣಗಳು ಎನ್ನುವುದನ್ನು ಸ್ವಲ್ಪ ನೋಡೋಣ. 
*****

ಇಂದಿನ ಎಲೆಕ್ಟ್ರಾನಿಕ್ ಯುಗದಲ್ಲಿ ಅಂಚೆಯ ಪೆಟ್ಟಿಗೆ (ಪೋಸ್ಟ್ ಬಾಕ್ಸ್) ಅನ್ನುವ ಒಂದು ವಸ್ತು ಹೆಚ್ಚು ಕಡಿಮೆ ಮರೆತೇಹೋಗಿದೆ. ಕೊರಿಯರ್ ಸೇವೆ ಬಂದು ಹರಡಿದ ನಂತರ ಪೋಸ್ಟ್ ಆಫೀಸಿಗೆ ಹೋಗುವ ಸಂದರ್ಭಗಳು ಬಹಳ ಕಡಿಮೆ ಆದವು. ಸುಮಾರು ನಲವತ್ತು ವರುಷಗಳ ಹಿಂದೆ ಪೋಸ್ಟ್ ಕಾರ್ಡು, ಅಂಚೆ ಚೀಟಿ, ಅಂಚೆ ಡಬ್ಬ, ಅಂಚೆ ಕಚೇರಿ, ಇವೆಲ್ಲ ಪ್ರತಿದಿನ ನೋಡುತ್ತಿದ್ದ, ಆಗಾಗ ಉಪಯೋಗಿಸುತ್ತಿದ್ದ ಸೇವೆಗಳು. ಯಾವುದೋ ಸಂದರ್ಭಗಳಲ್ಲಿ ಪೋಸ್ಟ್ ಮ್ಯಾನ್ ಆಗಮನ ನಿರೀಕ್ಷಿಸಿ ಮನೆಯ ಬಾಗಿಲ ಬಳಿ ಕಾಯುತ್ತಿದ್ದುದೂ ಇರುತ್ತಿತ್ತು. ಕೆಲವು ಅಂಗಡಿಗಳಲ್ಲಿ ಒಂದು ಸಣ್ಣ ಡಬ್ಬಿಯಲ್ಲಿ ಅಂಚೆ ಚೀಟಿಗಳನ್ನು ಇಟ್ಟುಕೊಂಡು ಐದು ಪೈಸೆ ಚೀಟಿಯನ್ನು ಆರು ಪೈಸೆಗೆ ಮಾರುತ್ತಿದ್ದುದೂ ಉಂಟು. ಅಂಚೆ ಕಚೇರಿ ದಿನದ ವಹಿವಾಟು ಮುಗಿಸಿ ಮುಚ್ಚಿದ ನಂತರ ಅಥವಾ ರಜಾ ದಿನಗಳಲ್ಲಿ ಇವುಗಳ ಸೇವೆ ಅಮೂಲ್ಯವಾಗಿಯೂ ಇತ್ತು. 

ಬೇರೆಡೆಗೆ ಕಳುಹಿಸಬೇಕಾದ ಪತ್ರಗಳನ್ನು ಅಂಚೆಯ ಡಬ್ಬದಲ್ಲಿ ಹಾಕುವುದು ಆಗ ಒಂದು ಮುಖ್ಯ ಕೆಲಸ ಆಗಿರುತ್ತಿತ್ತು. ಅಲ್ಲಲ್ಲಿ ಸಣ್ಣ ಕೆಂಪು ಬಣ್ಣದ ಪೋಸ್ಟ್ ಡಬ್ಬಗಳಿರುತ್ತಿದ್ದುವು. ಅವುಗಳ ಮೇಲೆ "Next Clearance" ಎಂದು ಸಮಯ ತೋರಿಸುವ ಬಿಲ್ಲೆಗಳನ್ನು ಹಾಕಿರುತ್ತಿದ್ದರು. ಪ್ರತಿಯೊಂದು ಡಬ್ಬಕ್ಕೂ ಕಾಗದ-ಲಕೋಟೆಗಳನ್ನು ಹಾಕಲು ಒಂದು ಕಿಂಡಿ ಇರುತ್ತಿತ್ತು. ಮುಖ್ಯ ಅಂಚೆ ಕಚೇರಿಗಳ ಮುಂದೆ ದೊಡ್ಡ ಕೆಂಪು ಬಣ್ಣದ ಪೋಸ್ಟ್ ಬಾಕ್ಸುಗಳು. ಅವುಗಳಿಗೆ ಎರಡು ಕಡೆ ಕಿಂಡಿಗಳು. ಒಂದೇ ಸಮಯದಲ್ಲಿ ಇಬ್ಬರು ಪತ್ರಗಳನ್ನು ಅವುಗಳಲ್ಲಿ ಹಾಕುವ ಅನುಕೂಲತೆಗೆ. ಯಾವ ಕಿಂಡಿಯಲ್ಲಿ ಹಾಕಿದರೂ ಅವು ಬೀಳುತ್ತಿದ್ದುದು ಆ ಬಾಕ್ಸುಗಳ ಒಂದೇ ದೊಡ್ಡ ಹೊಟ್ಟೆಗೆ. 

ಬೆಂಗಳೂರಿನಲ್ಲಿ ವಿಧಾನಸೌಧ ಮತ್ತು ಆಗ ಇದ್ದ ಟ್ರಂಕ್ ಟೆಲಿಫೋನ್ ಎಕ್ಸ್ಚೇಂಜ್ ಕಟ್ಟಡದ ಮಧ್ಯೆ ಇದ್ದ ಹಳೆಯ ಜಿ. ಪಿ. ಓ. ಕಟ್ಟಡದ ಮುಂದೆ (ಈಗ ಅಲ್ಲಿ ಒಂದು ಸೌಧದಂತಹ ಜಿ.ಪಿ.ಓ. ಕಟ್ಟಡ ಬಂದಿದೆ) ಒಂದು ಬಲು ದೊಡ್ಡ ಪೋಸ್ಟ್ ಬಾಕ್ಸ್ ಇತ್ತು. ಅದಕ್ಕೆ ಆರು ಕಿಂಡಿಗಳು! ಅದೂ ಸಹ ದೊಡ್ಡ ದೊಡ್ಡ ಕಿಂಡಿಗಳು. ಒಂದೇ ಸಮಯದಲ್ಲಿ ಆರು ಮಂದಿ ದಪ್ಪ ಕಾಗದ-ಪಾತ್ರಗಳನ್ನು ಅಲ್ಲಿ ತುರುಕಬಹುದಾಗಿತ್ತು. ಎಲ್ಲಿ ತುರುಕಿದರೂ ಅವೆಲ್ಲಾ ತಲುಪುತ್ತಿದ್ದುದು ಆ ಅತಿ ದೊಡ್ಡ ಬಾಕ್ಸಿನ ಒಂದೇ ಬಕಾಸುರ ಹೊಟ್ಟೆಗೆ. ಹೀಗಿದ್ದರೂ ಸಂಜೆಯ ಹೊತ್ತಿನಲ್ಲಿ ಅಲ್ಲಿ ಹೆಚ್ಚಿನ ಜನ ಪತ್ರಗಳನ್ನು ಪೋಸ್ಟ್ ಮಾಡಲು ಬಂದಿರುತ್ತಿದ್ದರು. ಹಳೆಯ ತಲೆಮಾರಿನ ಜನ ಇದನ್ನು ನೆನೆಪಿಸಿಕೊಳ್ಳಬಹುದು. ಆತುರಾತುರದಲ್ಲಿ ಸಂಜೆ ಅಲ್ಲಿಗೆ ಹೋಗಿ, ಡಬ್ಬದಲ್ಲಿ ಪತ್ರ-ಲಕೋಟೆಗಳನ್ನು ಹಾಕಿ, ಕೈ ಮುಗಿದು ಬಂದಿರುವ ಉದಾಹರಣೆಗಳು ಅನೇಕ. 
*****

ಯಾವುದೇ ಪೂಜೆ-ಪುನಸ್ಕಾರ, ಹವನ-ಹೋಮ, ವ್ರತ-ನಿಯಮಗಳನ್ನು ಆಚರಿಸಿದಮೇಲೆ ಕಡೆಯಲ್ಲಿ ಇದೆಲ್ಲ ಪರಮಪುರುಷನಿಗೆ ಸೇರಲಿ ಎಂದು ಭಾವಿಸಿ "ಶ್ರೀಕೃಷ್ಣಾರ್ಪಣಮಸ್ತು" ಎಂದು ಹೇಳುವುದು ವಾಡಿಕೆ. ಜಪ-ತಪ, ದಾನ-ಧರ್ಮಗಳನ್ನು ಮಾಡಿದ್ದು ಕೂಡ ಕಡೆಗೆ ಹೀಗೆಯೇ ವಿನಿಯೋಗ. ಅಷ್ಟೇ ಏಕೆ? ದಾಸರು "ಕೈ ಮೀರಿ ಹೋದದ್ದೇ ಕೃಷ್ಣಾರ್ಪಣ" ಅಂದುಬಿಟ್ಟರು. ಇದನ್ನು ನಾವು ಕೊಡಬೇಕೆಂದು ಕೊಟ್ಟದ್ದಲ್ಲ. ಕೈತಪ್ಪಿ ಜಾರಿರಬಹುದು. ಯಾರೋ ಕಿತ್ತುಕೊಂಡು ಹೋಗಿರಬಹುದು. ಇಲ್ಲವೇ ಕುತಂತ್ರ, ಮೋಸಗಳಿಗೆ ಸಿಕ್ಕಿ ಕಳೆದುಕೊಂಡಿರಬಹುದು. ಹೀಗಿದ್ದರೂ ಸಹ, ಅಂತಹವುಗಳೆಲ್ಲದರ ಗತಿಯೂ ಕಡೆಯ ವಿನಿಯೋಗವನ್ನು  ಮಾಡುವುದು "ಶ್ರೀಕೃಷ್ಣಾರ್ಪಣಮಸ್ತು" ಎಂದು ಹೇಳಿಯೇ. ಕೆಲವರು "ಪರಮೇಶ್ವರಾರ್ಪಣಮಸ್ತು" ಅನ್ನಬಹುದು. ಆದರೂ ಈ ಸಂದರ್ಭಗಳಲ್ಲಿ ಶ್ರೀಕೃಷ್ಣನನ್ನು ನೆನೆಸಿಕೊಳ್ಳುವುದೇ ಹೆಚ್ಚು ವ್ಯಾಪಕ. 

ಈ ಕೃಷ್ಣ ಯಾರು? 

ಕೃಷ್ಣ ಯಾರು ಅಂದರೆ? ಅವನೇ. ಮಥುರೆಯ ಕಂಸನ ಕಾರಾಗೃಹದಲ್ಲಿ ಹುಟ್ಟಿದವನು. ಕಂಸನ ತಂಗಿ ದೇವಕಿಯ ಮಗ. ದೇವಕಿ-ವಸುದೇವರ ಮಗ. ಅವರ ಎಂಟನೆಯ ಕೂಸು. ಹುಟ್ಟಿದ ತಕ್ಷಣ ಅವರಪ್ಪ ಅವನನ್ನು ಎತ್ತಿಕೊಂಡು ತುಂಬಿ ಹರಿಯುತ್ತಿದ್ದ ಯಮುನೆಯನ್ನು ದಾಟಿ, ಗೋಕುಲ ತಲುಪಿ, ಅಲ್ಲಿನ ನಂದಗೋಪನ ಹೆಂಡತಿ ಯಶೋದೆ ಪಕ್ಕ ಮಲಗಿಸಿ, ಅಲ್ಲಿದ್ದ ಹೆಣ್ಣು ಮಗುವನ್ನು ಹೊತ್ತುಕೊಂಡು ಬರಲಿಲ್ಲವೇ? ಅವನೇ. ಪೂತನಿಯಿಂದ ಪ್ರಾರಂಭಿಸಿ, ಅದೆಷ್ಟೋ ರಕ್ಕಸರನ್ನು ಕೊಂದು, ಕಾಳೀಯನನ್ನು ಮರ್ದಿಸಿ, ಗೋವರ್ಧನ ಎಬ್ಬಿಸಿ, ಗೋಪಿಯರ ಮನೆಯ ಹಾಲು-ಮೊಸರು-ಬೆಣ್ಣೆ ಕದ್ದು ಕುಡಿದು-ತಿಂದು-ತೇಗಿ, ಹೆಣ್ಣುಮಕ್ಕಳ ಸೀರೆ-ವಸ್ತ್ರಗಳನ್ನು ಅಪಹರಿಸಿ, ಜಲಕ್ರೀಡೆ-ರಾಸಕ್ರೀಡೆ ಆಡಿ-ಆಡಿಸಿ, ಇನ್ನೂ ಏನೇನೂ ಮಾಡಿದನಲ್ಲ. ಅವನೇ. 

ಅಣ್ಣ ಬಲರಾಮನೊಡನೆ ಅಕ್ರೂರನ ಜೊತೆ ಮಧುರೆಗೆ ಹೋಗಿ, ಚಾಣೂರ-ಮುಷ್ಟಿಕ-ಕುವಲಯಾಪೀಡ ಆನೆ, ಇವೆಲ್ಲ ಕೊಂದು, ಕಡೆಗೆ ಕಂಸನಿಗೂ ಒಂದು ಗತಿ ಕಾಣಿಸಿ, ಅಪ್ಪ-ಅಮ್ಮನನ್ನು ಸೆರೆಯಿಂದ ಬಿಡಿಸಿದನಲ್ಲ.  ಅವನೇ. ಭೀಮಸೇನನಿಂದ ಜರಾಸಂಧನನ್ನು ಕೊಲ್ಲಿಸಿ, ಕುರುಕ್ಷೇತ ಯುದ್ಧ ಮಾಡಿಸಿ, ಕೌರವರನ್ನು ಕೊನೆಗಾಣಿಸಿ, ಪಾಂಡವರಿಗೆ ರಾಜ್ಯ ಕೊಡಿಸಿದವನು. ಹದಿನಾರು ಸಾವಿರದ ನೂರಾ ಎಂಟು ಹೆಣ್ಣುಗಳನ್ನು ಮದುವೆ ಮಾಡಿಕೊಂಡವನು. ದ್ವಾರಕಾವತಿ ನಿರ್ಮಿಸಿ, ಯಾದವರನ್ನೆಲ್ಲ ಅಲ್ಲಿಗೆ ಸೇರಿಸಿದವನು. ಹೀಗೆ ಬೇರೆ ಇನ್ನೂ ಏನೇನೋ ಮಾಡಿದವನು. ಅವನೇ. ತಲೆಗೆ ನವಿಲುಗರಿ ಸಿಕ್ಕಿಸಿಕೊಂಡು ಕೊಳಲು ನುಡಿಸುತ್ತಿರುವ ಮುರಳೀಧರ. ದನಗಳನ್ನು ಕಾಯುವ ಗೋಪಾಲ. ಅವನೇ ಶ್ರೀಕೃಷ್ಣ. 

ಕಪ್ಪು ಬಣ್ಣದವನಾದ್ದರಿಂದ ಕೃಷ್ಣ. ವಸುದೇವನ ಮಗ ಆದುದರಿಂದ ವಾಸುದೇವ. ಅವನೇ ವಾಸುದೇವ ಶ್ರೀಕೃಷ್ಣ. ಹೀಗೆ ಸಾಮಾನ್ಯವಾಗಿ ಹೇಳುವುದು. 

*****

ಸರಿ ಹಾಗಿದ್ದರೆ. ಶ್ರೀಕೃಷ್ಣನು ದೇವಕಿ-ವಸುದೇವರ ಎಂಟನೆಯ ಮಗ. ದ್ವಾಪರಯುಗದಲ್ಲಿ ಹುಟ್ಟಿದವನು. ಅವನು ಶ್ರೀವಿಷ್ಣುವಿನ ಒಂದು ಅವತಾರರೂಪ. ಅವನೇ ಅರ್ಜುನನಿಗೆ ಭಗವದ್ಗೀತೆಯನ್ನು ಉದಪದೇಶಿಸಿದವನು. "ಯತ್ಕರೋಷಿ ಯದಶ್ನಾಸಿ ಯಜ್ಜುಹೋಷಿ ದದಾಸಿ ಯತ್, ಯತ್ತಪಸ್ಯಸಿ ಕೌಂತೇಯ ತತ್ಕುರುಶ್ವ ಮದರ್ಪಣಂ" ಎಂದವನು. "ನೀನು ಮಾಡಿದ್ದನ್ನೆಲ್ಲ, ನೀನು ಸೇವಿಸಿದ್ದನ್ನೆಲ್ಲ, ಹೋಮಾದಿಗಳಲ್ಲಿ ಹಾಕಿದ್ದನ್ನು, ದಾನಾದಿಗಳಲ್ಲಿ ಕೊಟ್ಟಿದ್ದನ್ನು, ಜಪ-ತಪಗಳಲ್ಲಿ ಪಡೆದದ್ದನ್ನು, ಎಲ್ಲವನ್ನೂ ನನಗೆ ಅರ್ಪಿಸು" ಎಂದು ಭಗವದ್ಗೀತೆಯಲ್ಲಿ ಹೇಳಿದವನು. ಅದಕ್ಕೇ ಅವನಿಗೆ ಅರ್ಪಿಸಲು ಎಂದು ಉದ್ದೇಶಿಸಿ "ಶ್ರೀಕೃಷ್ಣಾರ್ಪಣಮಸ್ತು" ಅನ್ನುತ್ತೇವೆ. 

ಒಪ್ಪೋಣ. ಹಾಗಿದ್ದರೆ ಮಹಾಭಾರತ ನಡೆಯುವುದಕ್ಕೆ ಮುನ್ನ, ದ್ವಾಪರ ಯುಗಕ್ಕೆ ಮುಂಚೆ, ಈ ಕೃಷ್ಣ ಹುಟ್ಟುವ ಮುಂಚೆ, ಏನು ಮಾಡುತ್ತಿದ್ದರು? ಹೇಗೆ ಅರ್ಪಣೆ ನಡೆಯುತ್ತಿತ್ತು? ಇದೊಂದು ಪ್ರಶ್ನೆ ಉಳಿಯಿತು. ಅಲ್ಲವೇ?

ಕೇಶವಾದಿ (ಚತುರ್ವಿಂಶತಿ) ಇಪ್ಪತ್ತನಾಲ್ಕು ನಾಮಗಳು ಎನ್ನುತ್ತೇವೆ. ಕೇಶವನಿಂದ ಹಿಡಿದು, ನಾರಾಯಣ, ಮಾಧವ ಮುಂತಾದ ಇಪ್ಪತ್ತನಾಲ್ಕು ಹೆಸರುಗಳು ಉಂಟು. ಅದರಲ್ಲಿ ಕಡೆಯದು ಶ್ರೀಕೃಷ್ಣ. ಹದಿನಾಲ್ಕನೆಯವನು ವಾಸುದೇವ. ಹತ್ತೊಂಭತ್ತನೆಯವನು ಒಬ್ಬ ನರಸಿಂಹನೂ ಇದ್ದಾನೆ. ಇದು ಎಂದಿನಿಂದಲೂ ಉಂಟು. ಸೃಷ್ಟಿಯ ಮೊದಲಿನಿಂದಲೂ ಇದೆ. ಈ ಕೃಷ್ಣ ಯಾರು? ಈ ಇಪ್ಪತ್ತನಾಲ್ಕರಲ್ಲಿ ಹದಿನಾಲ್ಕನೆಯವನು ವಾಸುದೇವ. ಈ ವಾಸುದೇವ ಯಾರು? ದ್ವಾಪರದ ಕೃಷ್ಣ ಹುಟ್ಟುವ ಮುಂಚೆ ಇವರು ಹೇಗೆ ಇದ್ದರು?

*****

ಗೀತೋಪದೇಶ ಕಾಲದಲ್ಲಿ, ಕಡೆಯಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ಒಮ್ಮೆ ತನ್ನ ವಿರಾಟ್ ರೂಪ ತೋರಿಸುತ್ತಾನೆ. ಅರ್ಜುನನಂತಹವನೂ ಅದನ್ನು ನೋಡಲಾರ. "ಸ್ವಾಮಿ, ಇದನ್ನು ಮರೆ ಮಾಡು. ನನ್ನ ಮೈ ಸುಡುತ್ತಿದೆ. ಮೊದಲಿನ ಸೌಮ್ಯ ರೂಪ ತೋರಿಸು" ಎಂದು ಅಂಗಲಾಚಾಚುತ್ತಾನೆ. ಪರಮಪುರುಷನ ವಿರಾಟ್ ರೂಪವನ್ನು ನಾವು ಕಲ್ಪಿಸಿಕೊಳ್ಳುವುದೂ ಕಷ್ಟ. ಅವನ ಆಯುಧಗಳು ಮೂರು ಅವನ ಜೊತೆಯಲ್ಲಿಯೇ ಇರುತ್ತವೆ. ಸುದರ್ಶನ ಚಕ್ರ, ಪಾಂಚಜನ್ಯ ಶಂಖ ಮತ್ತು ಕೌಮೋದಕಿ ಗದೆ. ಒಂದು ಅಭಯ ಹಸ್ತವೋ, ಕಮಲದ ಕೈಯ್ಯೋ ಬೇಕು. ಅದಕ್ಕೆ ನಾಲ್ಕು ಕೈಗಳ ಶ್ರೀಹರಿಯನ್ನು ಚಿಂತಿಸುವುದು. ಈ ನಾಲ್ಕು ಕೈಗಳಲ್ಲಿ ಶಂಖ, ಚಕ್ರ, ಗದೆ, ಪದ್ಮ. ಇವುಗಳನ್ನು ಹೇಗೆ ಹಿಡಿದುಕೊಳ್ಳಬೇಕು? ಇದು ಇಪ್ಪತ್ತುನಾಲ್ಕು ರೀತಿ ಸಾಧ್ಯ. ಆದ್ದರಿಂದ ಇಪ್ಪತ್ತುನಾಲ್ಕು ರೂಪಗಳು. ಅವುಗಳಿಗೆ ಕೇಶವನಿಂದ ಶ್ರೀಕೃಷ್ಣನವರೆಗೆ ಇಪ್ಪತ್ತುನಾಲ್ಕು ಮೂಲ ಹೆಸರುಗಳು. 


ಶ್ರೀಕೃಷ್ಣಾರ್ಪಣಮಸ್ತು ಎನ್ನುವಾಗ ವಾಸ್ತವವಾಗಿ ನೆನೆಯುವುದು ಈ ಇಪ್ಪತ್ನಾಲ್ಕು ಮೂಲ ರೂಪಗಳ ಕಡೆಯವನಾದ ಶ್ರೀಕೃಷ್ಣನನ್ನು. ಮೇಲಿನ ಚಿತ್ರದಲ್ಲಿರುವುದು ಶ್ರೀಕೃಷ್ಣ ರೂಪ. ಅವನು ಕ್ರಮವಾಗಿ ಗದೆ, ಪದ್ಮ, ಚಕ್ರ ಮತ್ತು ಶಂಖಗಳನ್ನು ಹಿಡಿದಿದ್ದಾನೆ. ಹದಿನಾಲ್ಕನೆಯವನು ವಾಸುದೇವ. "ಸರ್ವತ್ರ ವಾಸಯತಿ ಇತಿ ವಾಸುದೇವಃ". "ಎಲ್ಲ ಕಡೆಯೂ ವಾಸವಾಗಿ ಇದ್ದಾನೆ. ಆದ್ದರಿಂದ ಅವನಿಗೆ ವಾಸುದೇವ ಎಂದು ಹೆಸರು". ದ್ವಾಪರದ ವಸುದೇವ ಹುಟ್ಟುವ ಮೊದಲೂ ಈ ವಾಸುದೇವ ಮತ್ತು ಶ್ರೀಕೃಷ್ಣರು ಇದ್ದೇ ಇದ್ದರು. ಅನಾದಿ ಕಾಲದಿಂದ ಇದ್ದಾರೆ. ಅನಂತ ಕಾಲದವರೆಗೆ ಇರುತ್ತಾರೆ. 

ಇಪ್ಪತ್ತುನಾಲ್ಕು ಜನರು ಸಾಲಾಗಿ ನಿಂತಿದ್ದಾರೆ. ಹೇಗೆ ಕರೆಯಬೇಕು? ಈ ಕಡೆಯಿಂದ ಕರೆದರೆ "ಕೇಶವಾದಿಗಳೇ, ಬನ್ನಿ" ಎನ್ನಬೇಕು. ಆ ಕಡೆಯಿಂದ ಕೊಟ್ಟರೆ "ಶ್ರೀಕೃಷ್ಣಾದಿಗಳೇ, ತೆಗೆದುಕೊಳ್ಳಿ" ಆನ್ನಬೇಕು. ಆದ್ದರಿಂದ ಸಮರ್ಪಣೆ ಮಾಡುವಾಗ (ಇಪ್ಪತ್ತನಾಲ್ಕರಲ್ಲಿ) ಕಡೆಯ ರೂಪ ಶ್ರೀಕೃಷ್ಣ ಆದುದರಿಂದ "ಶ್ರೀಕೃಷ್ಣಾರ್ಪಣಮಸ್ತು" ಅನ್ನುವುದು.. 

***** 

ಹಾಗಿದ್ದರೆ, ನಾವು ಪ್ರತಿದಿನ ಮಾಡುತ್ತಿರುವುದು ತಪ್ಪೇ? ನಾವು ನವಿಲುಗರಿಯ, ದನಕಾಯುವ, ಬೆಣ್ಣೆ ಕದಿಯುವ, (ಅಥವಾ ಬಿ. ಆರ್. ಛೋಪ್ರಾ ಮಹಾಭಾರತ ಧಾರಾವಾಹಿಯ ನಿತೀಶ್ ಭಾರದ್ವಾಜನನ್ನು) ಇಲ್ಲವೆಂದರೆ ಗೀತೋಪದೇಶ ಮಾಡುತ್ತಿರುವ ಪಾರ್ಥಸಾರಥಿಯನ್ನು ನೆನೆಯುತ್ತೆವಲ್ಲ! ಅದು ಸರಿಯೇ?

ಪರಮಪುರುಷನ ಪೂರ್ಣ ರೂಪ ನಮ್ಮ ಕಲ್ಪನೆಗೆ ನಿಲುಕದ್ದು. ಆದ್ದರಿಂದ ಅವನು ನಮಗೆ ಬಲು ಸುಲಭ ಮಾಡಿಕೊಟ್ಟಿದ್ದಾನೆ. ನಾವು ಹೇಗೆ ಕಲ್ಪಿಸಿಕೊಳ್ಳುತ್ತೇವೆಯೋ, ಹಾಗೆ ತೋರುತ್ತಾನೆ. ಅದಕ್ಕೆ ಅವನೇನು ವೇಷ ಹಾಕಬೇಕಾಗಿಲ್ಲ. ಮೇಕಪ್ ಬೇಕಿಲ್ಲ. ಎಲ್ಲೆಡೆ ವ್ಯಾಪಿಸಿ ನಿಂತಿದ್ದಾನೆ. ಆ ಕೃಷ್ಣನನ್ನು ನೆನೆದು ಕರೆದರೆ ಹಾಗೆ ಬರುತ್ತಾನೆ. ಈ ಕೃಷ್ಣನನ್ನು ನೆನೆದು ಕರೆದರೆ ಹೀಗೆ ಬರುತ್ತಾನೆ. ಅಷ್ಟೇ. 

ಜಿ. ಪಿ. ಓ. ಮುಂದೆ ಇರುವ ಅಂಚೆ ಡಬ್ಬಿಯ ಆರು ಕಿಂಡಿಗಳಲ್ಲಿ ಯಾವ ಕಿಂಡಿಯಲ್ಲಿ ಪತ್ರ ಹಾಕಿದರೂ ಆ ಡಬ್ಬಿಯ ದೊಡ್ಡ ಹೊಟ್ಟೆಯನ್ನೇ ಸೇರುತ್ತದೆ. "ಅಯ್ಯೋ, ಆ ಕಿಂಡಿಯಲ್ಲಿ ಹಾಕಬೇಕಿತ್ತು. ಇದರಲ್ಲಿ ಹಾಕಿಬಿಟ್ಟೆನಲ್ಲ" ಎಂದು ಚಿಂತಿಸಬೇಕಿಲ್ಲ. ಈ ಕೃಷ್ಣನು ತೆಗೆದುಕೊಂಡರೂ ಒಂದೇ. ಆ ಕೃಷ್ಣನು ತೆಗೆದುಕೊಂಡರೂ ಒಂದೇ. ಇಪ್ಪತ್ತುನಾಲ್ಕು ಮೂಲ ರೂಪಗಳಲ್ಲಿ ಕಡೆಯವನು ಶ್ರೀಕೃಷ್ಣ (ಮೇಲೆ ತೋರಿಸಿರುವ ಚಿತ್ರದಂತೆ) ಎಂದು ಗೊತ್ತಿದ್ದರೆ ಒಳ್ಳೆಯದು. ಅಷ್ಟೇ. 

ಇನ್ನೊಂದು ವಿಶೇಷವುಂಟು. ಅಂಚೆ ಡಬ್ಬಿಯ ಪತ್ರಗಳಲ್ಲಿ ಸ್ವಲ್ಪ ವ್ಯತ್ಯಾಸ ಆಗಬಹುದು. ಎಲ್ಲೋ ಒಂದು ಕಳೆದುಹೋಗಬಹುದು. ಕಾಗದಗಳ ಗಂಟುಗಳನ್ನು ತೆಗೆದುಕೊಂಡು ಹೋಗುತ್ತಿರುವ ವಾಹನವೋ, ವಿಮಾನವೋ, ಅಪಘಾತಕ್ಕೆ ಈಡಾಗಿ ಸುಟ್ಟು ಹೋಗಬಹುದು. ಮಳೆಯಲ್ಲಿ ನೆನೆದುಹೋಗಬಹುದು. ಬೆಂಗಳೂರಿನ ಜಯನಗರದ ಪಾಪಣ್ಣನ ಪತ್ರ ನೇಪಾಳದ ಗಡಿಯಲ್ಲಿರುವ ಬಿಹಾರದ ಜಯನಗರದ ಪಾಪಣ್ಣನಿಗೆ ರಾಂಗ್ ಡೆಲಿವರಿ ಆಗಬಹುದು. ಕೆಲವೊಮ್ಮೆ ಹತ್ತು ಹನ್ನೆರಡು ವರುಷಗಳ ನಂತರ ಸಿಗಬಹುದು. "ಶ್ರೀಕೃಷ್ಣಾರ್ಪಣಮಸ್ತು" ಡಬ್ಬಿಯಲ್ಲಿ ಹಾಕಿದ ಯಾವ ವಸ್ತುವೂ ಕಳೆದುಹೋಗುವುದಿಲ್ಲ. ತಪ್ಪು ವಿಳಾಸಕ್ಕೆ ಸೇರುವುದಿಲ್ಲ. ಅವನಿಗೇ ಹೋಗಿ ತಲಪುತ್ತದೆ. ಮತ್ತೆ ಅಷ್ಟೇ ಅಲ್ಲ. ಒಂದಕ್ಕೆ ಎರಡಾಗಿ, ನಾಲ್ಕಾಗಿ, ಅನಂತವಾಗಿ, ಹಿಂದಿರುಗಿ ಕೊಡುವ (ಅನಂತಮಡಿಮಾಡಿ ಹಿಂದಿರುಗಿ ಕೊಡುವ) ರೀತಿ ಅವನಿಗೆ ಚೆನ್ನಾಗಿ ಗೊತ್ತು. 

ಅನುಮಾನವಿದ್ದರೆ ಸುದಾಮನನ್ನು (ಕುಚೇಲನನ್ನು) ಕೇಳಬಹುದು. ಕೊಟ್ಟಿದ್ದು ಮೂರು ಹಿಡಿ ಒಣ ಅವಲಕ್ಕಿ. ಅದಕ್ಕೇನು ಕಡಲೆ, ಕಡಲೆಕಾಯಿ ಬೀಜ, ಗೋಡಂಬಿ, ಕರಿಬೇವು, ಒಗ್ಗರಣೆ, ಹಾಕಿರಲೂ ಇಲ್ಲ. ಅವನಿಗೆ ಹಿಂತಿರುಗಿ ಸಿಕ್ಕಿದ್ದು ಶ್ರೀಕೃಷ್ಣನ ಎಂಟು ಹೆಂಡಿರು ಸಾಲಾಗಿ ಬಡಿಸಿದ ಮೃಷ್ಟಾನ್ನ ಭೋಜನ. ದ್ವಾರಾವತಿಯ ಶ್ರೀಕೃಷ್ಣನ ಅರಮನೆಗೆ ಮಿಗಿಲಾದ ಅರಮನೆ. ಅನಂತ ಐಶ್ವರ್ಯ. ಕಡೆಗೆ ಮತ್ತೆ ಹುಟ್ಟುವ ಅವಶ್ಯಕತೆ ಇಲ್ಲದ "ಸಾಯುಜ್ಯ" ಎನ್ನುವ ಮೋಕ್ಷ ಸಾಮ್ರಾಜ್ಯ!

Monday, December 1, 2025

ತಳೋದರಿಯ ಮಾತುಳನ ಮಾವನ...




ಹಿಂದಿನ ಸಂಚಿಕೆಯಲ್ಲಿ ಸಹೋದರಿ, ತಳೋದರಿ, ಮತ್ತು ಮಂಡೋದರಿ ಪದಗಳ ಸಾಮ್ಯ ಮತ್ತು ಭೇದಗಳ ಸ್ವಲ್ಪಮಟ್ಟಿನ ವಿವರಣೆ ನೋಡಿದ್ದೆವು. ಈ ಸಂಚಿಕೆಯನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು. ವಿಶೇಷವಾಗಿ "ತಳೋದರಿ" ಅನ್ನುವ ಪದದ ಹಿನ್ನೆಲೆ ಮತ್ತು ಸೊಬಗು ಏನು ಎನ್ನುವುದನ್ನು ನೋಡಿದೆವು. 

ಎಲಿಜಬೆತ್ ಟೇಲರ್ ಅನ್ನುವ ಪ್ರಸಿದ್ಧ ಆಂಗ್ಲ ಚಲನಚಿತ್ರಗಳ ನಟಿ "ಕ್ಲಿಯೋಪಾತ್ರ" ಚಿತ್ರೀಕರಣದ ವೇಳೆಯಲ್ಲಿ ಇಪ್ಪತ್ತೊಂದು ಅಂಗುಲದ ನಡು ಹೊಂದಿದ್ದಳು ಎನ್ನುವುದು ಇತಿಹಾಸದಲ್ಲಿ ದಾಖಲಾಗಿದೆ.  1963ರ ಚಲನಚಿತ್ರದಲ್ಲಿ ರೋಮ್ ನಗರಕ್ಕೆ ಅವಳು ಬರುವ ದೃಶ್ಯದ ಚಿತ್ರೀಕರಣ ಈಗಲೂ ನೋಡುಗರನ್ನು ಆಕರ್ಷಿಸುತ್ತದೆ. AI ಮೊದಲಾದ ಸಾಧನಗಳಿಲ್ಲದ ಕಾಲದ ಅಂತಹ ದೃಶ್ಯದ ಚಿತ್ರೀಕರಣ ಒಂದು ವಿಸ್ಮಯವೇ ಸರಿ. "ಕೃಶಾಂಗಿ" ಎನ್ನುವ ಪದಕ್ಕೆ ಮುಖ್ಯವಾದ ಲಕ್ಷಣ ಹೀಗೆ ಸಣ್ಣ ನಡುವಿರುವುದು. 

ಅನೇಕ ಸಾಹಿತ್ಯ ಕೃತಿಗಳಲ್ಲಿ ಸ್ತ್ರೀಯರ ವರ್ಣನೆಗಳಲ್ಲಿ ಈ ನಡುವಿನ ಸೂಕ್ಷ್ಮತೆ ಬಗ್ಗೆ ವಿವರಣೆಗಳಿವೆ. ಹಸೆಗೆ ಕರೆಯುವ ಹಾಡುಗಳಲ್ಲಿ "ಬಡ ನಡುವಿನ ಬಾಲೆಯರು" ಎಂದು ಸಂಬೋಧನೆಗಳಿವೆ. ಪುರುಷರಿಗೇ ಆಗಲಿ, ಸ್ತ್ರೀಯರಿಗಗೇ ಆಗಲಿ, ಕೆಲವು ಅಂಗಗಳು ಹ್ರಸ್ವವಾಗಿರಬೇಕು. ಕೆಲವು ದೀರ್ಘವಾಗಿರಬೇಕು. (ಕೈ ಮೊಟುಕಾಗಿದ್ದು ಮೂಗು ಬಲು ಉದ್ದವಿದ್ದರೆ ಹೇಗೆ?).  ಕೆಲವು ಸಣ್ಣ ಇರಬೇಕು. ಕೆಲವು ದೊಡ್ಡವಿರಬೇಕು. (ಕೈ-ಕಾಲು ಸಣ್ಣ; ಹೊಟ್ಟೆ ಡುಬ್ಬಣ್ಣ ಅನ್ನುವುದು ಕೇಳಿದ್ದೆವಲ್ಲ!). ಕೆಲವು ಅವಕ್ಕೆ ಅನುಗುಣವಾದ ಬಣ್ಣ ಹೊಂದಿರಬೇಕು. ಹೀಗೆ ಸೌಂದರ್ಯ ಶಾಸ್ತ್ರಗಳ ನಿಯಮಗಳು ಉಂಟು. 

"ನಾವೇನು ಮಾಡುವುದು? ದೇವರು ಅಂಗಾಂಗ ಕೊಟ್ಟಂತಿದ್ದೇವೆ" ಎಂದು ದೇವರ ತಲೆಯಮೇಲೆ ಹೇರುವುದುಂಟು. ಆಯಿತು. ನಮ್ಮ ವಿಷಯಗಳಲ್ಲಿ ಅದು ಸರಿ ಇರಬಹುದು. ಹಾಗಿದ್ದರೂ, ಸೌಂದರ್ಯ ವರ್ಧನೆ ಮಾಡಲು ಎಲ್ಲರೂ ಪಡುವ ಪಾಡು ಅಷ್ಟಿಷ್ಟಲ್ಲ. ಬೊಕ್ಕತಲೆಗೆ ಕೂದಲು ಕಸಿ ಮಾಡುವುದರಿಂದ ಹಿಡಿದು ವಾರಕ್ಕೊಮ್ಮೆ ಮುಖ ತಿದ್ದುವ-ತೀಡುವ ಅಂಗಡಿಗಳ ಮುಂದೆ ಇರುವ ಸರತಿಯ ಸಾಲು ಕಂಡಿದ್ದೆವಲ್ಲ. ನಮ್ಮ ಕಥೆ-ಕವನಗಳ ಪಾತ್ರಗಳಲ್ಲಿ ಹೀಗೆ ಚೆನ್ನಾಗಿರುವುದು ವಿವರಿಸುವುದಕ್ಕೆ ಏನಡ್ಡಿ? ಹೀಗೆ ಚೆನ್ನಾಗಿರುವವರೂ ಅನೇಕರು ಇದ್ದಾರಲ್ಲವೆ? ರಾಕ್ಷಸರನ್ನು ಚಿತ್ರಿಸುವಾಗ ಇವಕ್ಕೆ ವಿರುದ್ಧವಾದ ವರ್ಣನೆಗಳೂ ಉಂಟಲ್ಲ! 

"ತಳೋದರಿ" ಪದವನ್ನು ಕೇವಲ ಒಂದು ಸಾರಿ ಮಾತ್ರ ಉಪಯೋಗಿಸಿ ಅದನ್ನು ವಿಶ್ವ ವಿಖ್ಯಾತ ಮಾಡಿದ ಶ್ರೇಯಸ್ಸು ನಮ್ಮ ಹೆಮ್ಮೆಯ ಕವಿ "ಕುಮಾರವ್ಯಾಸ" ಬಿರುದಿನ ಗದುಗಿನ ನಾರಾಣಪ್ಪನಿಗೆ ಸೇರಬೇಕು ಎಂದು ಸಂಚಿಕೆಯ ಕೊನೆಯಲ್ಲಿ ಹೇಳಿದ್ದೆವು. ಅದು ಏಕೆ ಎಂದು ಈಗ ನೋಡೋಣ. 

*****

ಮನೆಗೆ ಬಂದ ಅತಿಥಿ-ಅಭ್ಯಾಗತರನ್ನು ತೃಪ್ತಿ ಪಡಿಸಲು ಗೃಹಿಣಿ ಮಾಡುವ ಕಸರತ್ತುಗಳಿಗೂ ಕವಿ ತನ್ನ ಕಾವ್ಯ ರಚನೆಯಲ್ಲಿ ಕಾಣುವ ಕಷ್ಟಗಳಿಗೂ ಏನೋ ಒಂದು ವಿಧವಾದ ಸಾದೃಶ್ಯವಿದೆ. ಹಿಂದೆ ಮಾಡಿದ ಅಡಿಗೆ ಪುನರಾವರ್ತನೆ ಆಗಬಾರದು. ಕವಿಗೆ ಹಿಂದೆ ಮಾಡಿದ ವರ್ಣನೆ ಮತ್ತೆ ಬಂದಿರಬಾರದು. ಉಗ್ರಾಣದಲ್ಲಿ ಇರುವ ಪದಾರ್ಥಗಳಿಂದಲೇ ಅಡಿಗೆ ತಯಾರಾಗಬೇಕು. ಕವಿಯ ಪದಸಂಪತ್ತಿನಿಂದಲೇ ಕಾವ್ಯ ಮೂಡಬೇಕು. ಕೆಲವಾದರೂ ಮಾಡಿದ ಪದಾರ್ಥ ಮಕ್ಕಳಿಗೂ ಹಿಡಿಸಬೇಕು. ಹೆಚ್ಚು ತಿಳಿಯದ ಓದುಗರಿಗೂ ಸ್ವಲ್ಪವಾದರೂ ಅರ್ಥ ಆಗುವಂತಿರಬೇಕು. ದೊಡ್ಡವರಿಗೂ ಇಷ್ಟವಾಗುವ ಉಪ್ಪು-ಹುಳಿ-ಖಾರ  ಇರಬೇಕು. ತಿಳಿದ ಓದುಗರಿಗೂ ರಂಜಿಸುವ ರೀತಿ ಕಾವ್ಯ ಇರಬೇಕು. 

ಅತಿಥಿ-ಅಭ್ಯಾಗತರಲ್ಲಿ ಅಡಿಗೆ ಮಾಡುವುದರಲ್ಲಿ ನುರಿತವರು ಇರುತ್ತಾರೆ. ಅವರನ್ನೂ ಮೆಚ್ಚಿಸಬೇಕು. ಕವಿಗೂ ಪಂಡಿತ ವಿಮರ್ಶಕ ಜನರ ಮನ ಗೆಲ್ಲಬೇಕು. ಮುಂದೊಂದು ದಿನ ಇನ್ನೆಲ್ಲೋ ಸಿಕ್ಕಾಗ "ಆಹಾ, ಅಂದು ನಿಮ್ಮ ಮನೆಯ ಊಟ ಈಗಲೂ ನೆನೆಸಿಕೊಳ್ಳುತ್ತೇವೆ" ಎಂದು ಊಟ ಮಾಡಿದವರು ಹೇಳಬೇಕು. ಕವಿಗೆ ತನ್ನ ಕೃತಿ ಬಹು ಕಾಲದವರೆಗೆ ನಿಲ್ಲುವಂತೆ ಆಗಬೇಕು. ಅಡಿಗೆ ಶುಚಿ-ರುಚಿಯಾಗಿ ಇರಬೇಕು. ಕವಿಯ ಕೃತಿ ಸತ್ವಯುತವಾಗಿ ಒಂದು ಮಾದರಿಯಾಗಿ ಉಳಿಯಬೇಕು. ಹೀಗೆ ಆಸೆಗಳು. 

ಕುಮಾರವ್ಯಾಸನ "ಕರ್ಣಾಟ ಭಾರತ ಕಥಾಮಂಜರಿ" ಈ ಎಲ್ಲ ಮಾನದಂಡಗಳಲ್ಲಿಯೂ ಗೆದ್ದು ನಿಂತು ಶತಮಾನಗಳ ನಂತರ ಈಗಲೂ ಜನಪ್ರಿಯವಾಗಿರುವ ಕೃತಿ. ಅವನೇ ಹೇಳುವಂತೆ "ಅರಸುಗಳಿಗಿದು ವೀರ, ದ್ವಿಜರಿಗೆ ಪರಮ ವೇದದ ಸಾರ, ಯೋಗ್ಗೀಶ್ವರರ ತತ್ವ ವಿಚಾರ, ಮಂತ್ರಿ ಜನಕೆ ಬುದ್ಧಿಗುಣ" ಮುಂತಾದ ಯೋಗ್ಯತೆಯುಳ್ಳದ್ದು. ವಿರಹಿಗಳ ಶೃಂಗಾರವೂ ಹೌದು. ವಿದ್ಯಾಪರಿಣಿತರ ಅಲಂಕಾರವೂ ಸರಿಯೇ. ಒಟ್ಟಿನಲ್ಲಿ "ಕಾವ್ಯಕೆ ಗುರು" ಆ ಕೃತಿ.  

*****

ಕವಿ ನಾರಾಣಪ್ಪನು ತನ್ನ ಮಂಗಳಾಚರಣೆ ಮಾಡುವಾಗ "ಪೀಠಿಕಾ ಸಂಧಿ" ಭಾಗವಾಗಿ ಇಪ್ಪತ್ತಮೂರು ಪದ್ಯಗಳಲ್ಲಿ ದೇವನ, ದೇವತೆಗಳ ಸ್ತುತಿ ಮಾಡುತ್ತಾನೆ. "ಇಳೆಯ ಜಾಣರು ಮೆಚ್ಚುವಂತೆ" ರಚಿಸಲು ಪಣ ತೊಡುತ್ತಾನೆ. ಅವನಲ್ಲಿ ಅಹಂಕಾರ ಭಾವವಿಲ್ಲ. ಆದರೆ ವೀರನ ಗತ್ತು ಇದೆ. "ವೀರ ನಾರಾಯಣನೆ ಕವಿ, ಕುಮಾರವ್ಯಾಸ ಲಿಪಿಕಾರ" ಎಂದು ವಿನಯದಿಂದ ಹೇಳಿದರೂ "ಪದವಿಟ್ಟಳುಪದೊಂದಗ್ಗಳಿಕೆ" ಅವನದು. ಒಮ್ಮೆ ಬರೆದರೆ ಮುಗಿಯಿತು. ಮತ್ತೆ ಅಳಿಸಿ, ತಿದ್ದಿ, ಒದ್ದಾಡುವಂತಿಲ್ಲ. ಹೀಗೆ ಶಪಥ ಹೂಡಿ ಮುಂದುವರೆಯುತ್ತಾನೆ. 

ಕೃತಿ "ಭಾಮಿನಿ ಷಟ್ಪದಿ" ರಚನೆ. ಪ್ರತಿ ಪದ್ಯವೂ ಆರು ಸಾಲುಗಳು ಇರಬೇಕು. ಮೊದಲ ಸಾಲು ಏಳು ಮತ್ತು ಏಳು, ಒಟ್ಟು ಹದಿನಾಲ್ಕು ಮಾತ್ರೆಗಳು. ಎರಡನೆಯ ಸಾಲೂ ಹೀಗೆಯೇ ಹದಿನಾಲ್ಕು ಮಾತ್ರೆಗಳು. ಮೂರನೆಯದು ಏಳು, ಏಳು, ಎಂಟು, ಒಟ್ಟು ಇಪ್ಪತ್ತೆರಡು ಮಾತ್ರೆಗಳು. ಮೊದಲ ಅರ್ಧ ಪದ್ಯ ಒಟ್ಟು ಐವತ್ತು ಮಾತ್ರೆಗಳು. ಎರಡನೇ ಅರ್ಧ ಪದ್ಯವೂ ಒಟ್ಟು ಹೀಗೆ ಐವತ್ತು ಮಾತ್ರೆಗಳು. ಒಂದು ಪದ್ಯಕ್ಕೆ ಸರಿಯಾಗಿ ಒಂದು ನೂರು ಮಾತ್ರೆಗಳು. ಹೆಚ್ಚು-ಕಡಿಮೆ ಆಗುವಂತಿಲ್ಲ. ಅಷ್ಟು ಕಾಲ ಹಿಡಿಯುವಂತೆ ಪದಗಳ ಜೋಡಣೆ ಇರಬೇಕು.  

ಪ್ರತಿ ಪದ್ಯವೂ ಒಂದು ದೊಡ್ಡ ಹಾರದ ಮುತ್ತೊಂದರಂತೆ ಇರಬೇಕು. ಹಿಂದು-ಮುಂದಕ್ಕೆ ಕೊಂಡಿಯಂತಿರಬೇಕು. ಕಥೆಯ ಒಟ್ಟು ಓಟಕ್ಕೆ ಸರಿಯಾಗಿ ಕೂಡಿಕೊಂಡಿರಬೇಕು. ಬೇಕಾದ ರಸ-ಭಾವಗಳಿಗೆ ಪೂರಕವಾಗಿರಬೇಕು. ಒಂದು ಪದ್ಯವೂ ಊಟದ ಮಧ್ಯೆ ಸಣ್ಣ ಕಲ್ಲಿನ ಚೂರು ಸಿಕ್ಕಂತೆ ಇರಬಾರದು. ಇವು ಅವನ ಮುಂದಿರುವ ಅನೇಕ ಸವಾಲುಗಳಲ್ಲಿ ಕೆಲವು ಮಾತ್ರ. 

ಒಂದು ಸಣ್ಣ ಪತ್ರ ಬರೆಯಬೇಕಾದರೆ ಹೇಗೆ ಪ್ರಾರಂಭ ಮಾಡಬೇಕು, ಯಾವ ಪದ ಉಪಯೋಗಿಸಬೇಕು, ಎಂದು ತಿಣುಕಾಡಿ, ಹತ್ತು ಬಾರಿ ಬದಲಾಯಿಸಿ, ಹೊಡೆದುಹಾಕಿ, ತಿದ್ದಿ-ತೀಡಿ, ಒದ್ದಾಡುವ ಪರಿಸ್ಥಿತಿಯ ಮುಂದೆ ಇವನ್ನು ಗಮನಿಸಬೇಕು. ಎಲ್ಲ ಬರೆದು ಮುಗಿಸಿದ ಮೇಲೆ "ಅಯ್ಯೋ, ಇದು ಸೇರಿಸುವುದು ಬಿಟ್ಟೆ ಹೋಯಿತಲ್ಲ!" ಎಂದು ಗೋಳಾಡುವುದು ಕೂಡದು. 

*****

ಇಷ್ಟೆಲ್ಲಾ ಕಠಿಣ ಚೌಕಟ್ಟಿನ ಸಂದರ್ಭದಲ್ಲಿ ಪೀಠಿಕಾ ಸಂಧಿಯ ಇಪ್ಪತ್ತಮೂರನೆಯ ಮತ್ತು ಕಡೆಯ ಪದ್ಯದಲ್ಲಿ ಕವಿ ಒಂದು ಸುಂದರ ಒಗಟು ಇಟ್ಟಿದ್ದಾನೆ. ಬಹಳ ಜನಪ್ರಿಯವಾಗಿರುವ ಆ ಪದ್ಯ ಹೀಗಿದೆ:

ವೇದಪುರುಷನ ಸುತನಸುತನ ಸ 
ಹೋದರನ ಮೊಮ್ಮಗನ ಮಗನ ತ
ಳೋದರಿಯ ಮಾತುಳನ ರೂಪನನತುಳ ಭುಜಬಲದಿ 
ಕಾದಿ ಗೆಲಿದನ ಅಣ್ಣ ನವ್ವೆಯ 
ನಾದಿನಿಯ ಜಠರದಲಿ ಜನಿಸಿದ 
ನಾದಿ ಮೂರತಿ ಸಲಹೊ ಗದುಗಿನ ವೀರನಾರಯಣ 

ಮೇಲೆ ಕೊಟ್ಟಿರುವ ಚಿತ್ರವನ್ನು ನೋಡಿಕೊಂಡು ಈ ಪದ್ಯವನ್ನು ಓದಿಕೊಂಡರೆ ಒಗಟನ್ನು ಸುಲಭವಾಗಿ ಬಿಡಿಸಿಕೊಳ್ಳಬಹುದು.  

  • ವೇದಪುರುಷನ - ಶ್ರೀಮನ್ನಾರಾಯಣನ  
  • ಸುತನ (ಮಗ) - ಚತುರ್ಮುಖ ಬ್ರಹ್ಮನ  
  • ಸುತನ (ಮಗ) - ನಾರದನ  
  • ಸಹೋದರನ - ಮರೀಚಿಯ 
  • ಮೊಮ್ಮಗನ - ಮಗ ಕಶ್ಯಪನ ಮಗನಾದ ಇಂದ್ರನ 
  • ಮಗನ - ಅರ್ಜುನನ
  • ತಳೋದರಿಯ - ಹೆಂಡತಿಯಾದ ಸುಭದ್ರೆಯ 
  • ಮಾತುಳನ - ಸೋದರಮಾವನಾದ ಕಂಸನ 
  • ಮಾವನ - ಕಂಸನಿಗೆ ಹೆಣ್ಣುಕೊಟ್ಟ ಮಾವ ಜರಾಸಂಧನನ್ನು 
  • ಅತುಲ ಭುಜಬಲದಿ ಕಾದು ಗೆಲಿದನ - ಭೀಮಸೇನನ 
  • ಅಣ್ಣನ - ಧರ್ಮರಾಯನ 
  • ಅವ್ವೆಯ - ತಾಯಿ ಕುಂತಿಯ 
  • ನಾದಿನಿಯ - ದೇವಕಿಯ 
  • ಜಠರದಲಿ ಜನಿಸಿದ ಅನಾದಿ ಮೂರುತಿ - ಶ್ರೀಕೃಷ್ಣ 
ಶ್ರೀಮನ್ನಾರಾಯಣನಿಂದ ಪ್ರಾರಂಭಿಸಿ ಹದಿಮೂರು ಜನರ ನಂತರ ಅವನ ಇನ್ನೊಂದು ರೂಪನಾದ ಶ್ರೀಕೃಷ್ಣನೇ ಬಂದು ನಿಂತ. ಅವನು ನಮ್ಮನ್ನು ಸಲಹಲಿ ಎಂದು ಪ್ರಾರ್ಥನೆ. ಒಂದು ಹದಿಮೂರು ಮುತ್ತುಗಳ ಹಾರ. ಶ್ರೀಮನ್ನಾರಾಯಣನ ಅವತಾರಿ ಶ್ರೀಕೃಷ್ಣನೇ ಆ ಹಾರದ ಪದಕ. 

*****

 ಈ ಪದ್ಯದಲ್ಲಿ ಅಡಗಿದ ಬೇರೆ ವಿಶೇಷಗಳು ಏನುಂಟು?

  • ಕವಿಯ ಇಷ್ಟ ದೈವ ವೀರ ನಾರಾಯಣ. ಪದ್ಯದ ಪ್ರಾರಂಭ ನಾರಾಯಣನಿಂದ. ಕಡೆಯಾದದ್ದು ಶ್ರೀಕೃಷ್ಣನಿಂದ. ಇದು ಕೌರವ-ಪಾಂಡವರ ಕಥೆ ಎಂದು ಮೇಲು ನೋಟಕ್ಕೆ ಕಂಡರೂ, ಇದರ ಕಥಾನಾಯಕ ಶ್ರೀಕೃಷ್ಣನೇ. ಇದನ್ನು ಕವಿ ಹೀಗೆ ಸೂಚಿಸಿದ್ದಾನೆ.
  • ನಾರಾಯಣನೇ ಅವತರಿಸಿ ಶ್ರೀಕೃಷ್ಣನಾದ ಎಂದು ಹೇಳಿದಂತಾಯಿತು. 
  • ಕೆಲವು ಮುಖ್ಯ ಪಾತ್ರಧಾರಿಗಳನ್ನು (ಅರ್ಜುನ, ಭೀಮ, ಧರ್ಮಜ, ಕುಂತಿ, ಇಂದ್ರ, ಶ್ರೀಕೃಷ್ಣ, ಸುಭದ್ರೆ) ಪರಿಚಯಿಸಿದ್ದಾಯಿತು. (ಬೇರೆಯವರು ಯಾಕಿಲ್ಲ ಎಂದು ಕೇಳಬಹುದು. ನೂರು ಮಾತ್ರೆಗಳ ನೆನಪಿಡಬೇಕು). 
  • ಪಾಂಡವರ-ಯಾದವರ ಕೊಂಡಿ ಇಲ್ಲಿ ಸಿಕ್ಕಿತು. 
ಇನ್ನು ಕೆಲವು ಸಂಗತಿಗಳು:
  • ಮಹಾನಾರಾಯಣೋಪನಿಷತ್ತು ಮುಂತಾದುವು ಹೇಳುವಂತೆ ನಾರಾಯಣನು ವೇದಪ್ರತಿಪಾದ್ಯನಾದ ವೇದಪುರುಷನು. 
  • ನಾರಾಯನಿಗೆ ಅನೇಕ ನೇರ ಮಕ್ಕಳಿದ್ದರೂ ಬ್ರಹ್ಮನೇ ಮೊದಲಿಗನು. ಅಲ್ಲಿಂದ ಸೃಷ್ಟಿ ಪ್ರಾರಂಭ. 
  • ಚತುರ್ಮುಖನಿಗೆ ಅನೇಕ ಮಾನಸ ಪುತ್ರರಿದ್ದಾರೆ. ಅವರಲ್ಲಿ ಯಾರನ್ನಾದರೂ ತೆಗೆದುಕೊಳ್ಳಬಹುದು. ನಾರದರು ಎಲ್ಲರಿಗೂ ಪರಿಚಿತರು. ಹೀಗಾಗಿ ಅವರನ್ನು ತೆಗೆದುಕೊಳ್ಳುವುದು ವಾಡಿಕೆ. 
  • ಮಾನಸ ಪುತ್ರರೆಲ್ಲರೂ ಬ್ರಹ್ಮನಿಂದ ನೇರ ಹುಟ್ಟಿದವರಾದದ್ದರಿಂದ ಅವನೇ ತಾಯಿ ಮತ್ತು ತಂದೆ. ಹೀಗೆ ಹುಟ್ಟಿದವರೆಲ್ಲರೂ ಸಹೋದರರು. 
  • ಅರ್ಜುನನು ಇಂದ್ರನ ವರಪ್ರಸಾದದಿಂದ ಹುಟ್ಟಿದವನು. ಹೀಗಾಗಿ ಮಗನು. 
  • ಅರ್ಜುನನಿಗೆ ಅನೇಕ ಹೆಂಡತಿಯರಿದ್ದರೂ, ಪಾಂಡವ-ಯಾದವ ಕುಲಗಳ ಕೊಂಡಿ ಸುಭದ್ರೆ. 
  • ಶ್ರೀಕೃಷ್ಣ-ಬಲರಾಮರಂತೆ ಕಂಸನು ಸುಭದ್ರೆಗೂ ಸೋದರಮಾವ. ದೇವಕಿಯ ಅಣ್ಣ. 
  • ಕಂಸನು ಜರಾಸಂಧನ ಇಬ್ಬರು ಹೆಣ್ಣು ಮಕ್ಕಳಾದ ಆಸ್ತಿ-ಪ್ರಾಪ್ತಿಯರನ್ನು ಮದುವೆಯಾಗಿದ್ದನು. ಆದ್ದರಿಂದ ಜರಾಸಂಧನು ಕಂಸನಿಗೆ ಹೆಣ್ಣು ಕೊಟ್ಟ ಮಾವ. 
  • ಭೀಮನ ಅವ್ವೆ ಕುಂತಿಯಾದರೂ ಧರ್ಮರಾಯ ಎಲ್ಲರಿಗೂ ಹಿರಿಯ. ಆದ್ದರಿಂದ ಮುಖ್ಯ. ಅಲ್ಲದೆ ಒಂದು ನೂರು ಮಾತ್ರೆಗಳ ಪದಗಳನ್ನು ಕೂಡಿಸಬೇಕಲ್ಲ!
  • ಕುಂತಿಯು ವಸುದೇವನ ಸಹೋದರಿ. ಇಬ್ಬರೂ ಯಾದವ ಶೂರಸೇನನ ಮಕ್ಕಳು. ಅವಳ ಹುಟ್ಟು ಹೆಸರು ಪೃಥಾ. ಶೂರಸೇನನ ತಮ್ಮ ಕುಂತಿಭೋಜನು ಮಕ್ಕಳಿಲ್ಲದ್ದರಿಂದ ಅವಳನ್ನು ದತ್ತು ತೆಗೆದುಕೊಂಡ. ಆಗ ಅವಳ ಹೆಸರು ಕುಂತಿ ಎಂದಾಯಿತು. 
  • ಕುಂತಿ ಮತ್ತು ವಸುದೇವನ ಹೆಂಡತಿ ದೇವಕಿ ಈ ಕಾರಣದಿಂದ ಅತ್ತಿಗೆ-ನಾದಿನಿಯರು. ಶ್ರೀಕೃಷ್ಣನಿಗೆ ಕುಂತಿ ಸೋದರತ್ತೆ. 
*****

ಮಂಗಳಾಚರಣೆಯ ಈ ಕೊನೆಯ ಪದ್ಯದ ಮೂಲಕ ಕವಿ ತನ್ನ ಇಷ್ಟದೈವ ಗದುಗಿನ ವೀರನಾರಾಯಣನಿಂದ ಕಥಾನಾಯಕ ಶ್ರೀಕೃಷ್ಣವರೆಗೆ ಒಂದು ದೊಡ್ಡ ಮಂಗಳಾರತಿ ಮಾಡಿ ಪ್ರಾರಂಭಿಸಿದ್ದಾನೆ. ಇಲ್ಲಿ ಬಳಸಿದ "ತಳೋದರಿ" ಪದವೂ ಹೀಗೆ ವಿಶ್ವ ವಿಖ್ಯಾತ ಆಯಿತು! 

Friday, November 28, 2025

ಸಹೋದರಿ, ತಳೋದರಿ ಮತ್ತು ಮಂಡೋದರಿ


ಕಳೆದ ತಿಂಗಳ ಒಂದು ಸಂಚಿಕೆಯಲ್ಲಿ (ಅಕ್ಟೋಬರ್ 2025) ಸಹೋದರರು ಮತ್ತು ಅಣ್ಣ-ತಮ್ಮಂದಿರ ನಡುವಿನ ವ್ಯತ್ಯಾಸದ ಪ್ರಸ್ತಾಪ ಬಂದಿತ್ತು. ಒಂದು ತಾಯಿಯ ಮಕ್ಕಳು ಸಹೋದರರು ಎಂದು ನಿರ್ದೇಶಿಸುವಾಗ, ಚಕ್ರವರ್ತಿ ಯಯಾತಿಯ ಮಗಳು ಮಾಧವಿಯ ನಾಲ್ವರು ಮಕ್ಕಳಾದ ಪ್ರದರ್ತನ, ವಸುಮನ, ಶಿಬಿ ಮತ್ತು ಅಷ್ಟಕ ಇವರು ನಾಲ್ಕು ಬೇರೆ ಬೇರೆ ತಂದೆಯರ ಮಕ್ಕಳಾದರೂ ಒಂದೇ ತಾಯಿ ಮಾಧವಿಯ ಮಕ್ಕಳಾದುದರಿಂದ ಸಹೋದರರು ಎಂದು ಹೇಳಿತ್ತು. "ನಾಲ್ಕು ಮಾತುಗಳು" ಎಂಬ ಶೀರ್ಷಿಕೆಯ ಈ ಸಂಚಿಕೆಯನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು.

ಇದನ್ನು ಓದಿದ ಸ್ನೇಹಿತರೊಬ್ಬರು "ಸಹೋದರಿ" ಶಬ್ದಕ್ಕೂ "ತಳೋದರಿ" ಶಬ್ದಕ್ಕೂ ಏನಾದರೂ ಸಂಬಂಧವಿದೆಯೇ?" ಎಂದು ಕೇಳಿದ್ದಾರೆ. ಹಾಗೆಯೇ, "ರಾವಣನ ಹೆಂಡತಿ ಮಂಡೋದರಿ. ಈ "ಮಂಡೋದರಿ" ಅನ್ನುವುದಕ್ಕೂ ಸಹೋದರಿ ಮತ್ತು ತಳೋದರಿ ಅನ್ನುವುದಕ್ಕೂ ಸಂಬಂಧ ಏನು?" ಎಂದು ಕೇಳಿದ್ದಾರೆ. ಇವುಗಳ ಬಗ್ಗೆ ಸ್ವಲ್ಪ ಈಗ ನೋಡೋಣ. 

*****

ಒಂದು ತಾಯಿಯ ಹೊಟ್ಟೆಯಲ್ಲಿ (ಅಂದರೆ ಗರ್ಭದಲ್ಲಿ) ಹುಟ್ಟಿದ ಗಂಡು ಮಕ್ಕಳು ಪರಸ್ಪರ ಸಹೋದರರು. ಹೆಣ್ಣು ಮಕ್ಕಳು ಸಹೋದರಿಯರು. ಗಂಡು ಮಕ್ಕಳು ಮತ್ತು ಹೆಣ್ಣು ಮಕ್ಕಳು ಒಟ್ಟಿಗೆ ಸೇರಿ ಪರಸ್ಪರ ಸಹೋದರ-ಸಹೋದರಿಯರು. ಒಂದು ತಂದೆಯ ಮಕ್ಕಳು ಅಣ್ಣ-ತಮ್ಮಂದಿರು ಮತ್ತು ಅಕ್ಕ-ತಂಗಿಯರು. ಯದುವಂಶದ ಬಲರಾಮ ರೋಹಿಣಿಯ ಮಗ. ಶ್ರೀಕೃಷ್ಣ ದೇವಕಿಯ ಮಗ. ಸುಭದ್ರೆ ರೋಹಿಣಿಯ ಮಗಳು. ಮೂವರೂ ವಸುದೇವನ ಮಕ್ಕಳು. ಹೀಗಾಗಿ, ಬಲರಾಮ ಮತ್ತು ಸುಭದ್ರೆ ಸಹೋದರ-ಸಹೋದರಿಯರು. ಬಲರಾಮ-ಶ್ರೀಕೃಷ್ಣ ಅಣ್ಣ-ತಮ್ಮ. ಸುಭದ್ರೆ ಬಲರಾಮನ ಸಹೋದರಿ. ಶ್ರೀಕೃಷ್ಣನ ತಂಗಿ.  

ದೇವಕಿಯನ್ನು ಮದುವೆಯಾದ ತಕ್ಷಣ ವಸುದೇವ ಸೆರೆಮನೆಯನ್ನು ಸೇರಿದ. ಆಮೇಲೆ ಕಂಸನ ಸರ್ಪಗಾವಲು. ನಂತರ ದೇವಕಿಯ ಎಂಟು ಮಕ್ಕಳು ಹುಟ್ಟುವವರೆಗೂ ಅಲ್ಲಿಯೇ ಇದ್ದ. ಅಷ್ಟು ಮಾತ್ರವಲ್ಲ. ಶ್ರೀಕೃಷ್ಣ ಗೋಕುಲದಲ್ಲಿ ಎಂಟು ವರುಷದವರೆಗೆ ಬೆಳೆದು, ಮಥುರೆಗೆ ಬಂದು ಕಂಸನನ್ನು ಕೊಲ್ಲುವವರೆಗೂ ಅಲ್ಲಿಯೇ ಇದ್ದ. ಕಂಸನ ಆಡಳಿತದಲ್ಲಿ ಈಗಿನಂತೆ ಖೈದಿಗಳನ್ನು ಪೆರೋಲ್ ಮೇಲೆ ಬಿಡುಗಡೆ ಮಾಡುವ ವ್ಯವಸ್ಥೆಯೂ ಇರಲಿಲ್ಲ. ಸುಭದ್ರೆ ಕಂಸನ ವಧೆಯಾಗಿ ವಸುದೇವನ ಬಿಡುಗಡೆಯಾದ ನಂತರ ಹುಟ್ಟಿದವಳಿರಬೇಕು. ಕೃಷ್ಣನಿಗಿಂತ ಸುಮಾರು ಹತ್ತು ವರುಷ ಚಿಕ್ಕವಳು. ಪುಟ್ಟ ತಂಗಿಯಾದ್ದರಿಂದ ಕೃಷ್ಣನಿಗೆ ಅವಳ ಮೇಲೆ ತುಂಬಾ ವಾತ್ಸಲ್ಯ. 

ವಸುದೇವನಿಗೆ ರೋಹಿಣಿ ಮತ್ತು ದೇವಕಿ ಅಲ್ಲದೆ ಬೇರೆ ಹೆಂಡತಿಯರೂ ಇದ್ದರು. ಸುತನು, ವೈಶಾಖಿ, ಭದ್ರುವ, ಮದಿರ, ಉಪಾದೇವಿ ಮೊದಲಾದವರು. ಬಲರಾಮ, ಕೃಷ್ಣ ಮತ್ತು ಸುಭದ್ರೆ ಅಲ್ಲದೆ ಬೇರೆ ಮಕ್ಕಳೂ ಇದ್ದರು. ಪೌಂಡ್ರಕ ವಾಸುದೇವ (ವಸುದೇವ-ಸುತನು ಇವರ ಮಗ), ಶಥ, ಶರಣ, ನಂದಕ, ಅವಗಾಹ ಮೊದಲಾದವರು. ಇವರೆಲ್ಲರೂ ಅಣ್ಣ-ತಮ್ಮ-ತಂಗಿಯರು. ರೋಹಿಣಿಯನ್ನೇನೋ ಮೊದಲೇ ವಿವಾಹವಾಗಿದ್ದ. ಮಿಕ್ಕ ಐವರನ್ನು ಯಾವಾಗ ಮದುವೆಯಾದ ಎಂದು ಖಚಿತವಾಗಿ ಗೊತ್ತಾಗುವುದಿಲ್ಲ. 

ವಸುದೇವನಿಗೆ ಐವರು ತಂಗಿಯರು ಬೇರೆ ಇದ್ದರು. ಪೃಥಾ (ಮುಂದೆ ಕುಂತಿಭೋಜನ ದತ್ತು ಮಗಳಾದ ನಂತರ ಕುಂತಿ ಎಂದು ಪ್ರಸಿದ್ಧಳಾದಳು), ಶ್ರುತಕೀರ್ತಿ, ಶ್ರುತದೇವಿ, ರಾಜಾಧಿದೇವಿ, ಮತ್ತು ಶ್ರುತಶ್ರವಸ್ ತಂಗಿಯರು. ದೇವಶ್ರವ ಮತ್ತು ದೇವಭಾಗ ಎಂದು ಇಬ್ಬರು ತಮ್ಮಂದಿರು. ಶಿಶುಪಾಲ ಮತ್ತು ದಂತವಕ್ತ್ರರು ಕ್ರಮವಾಗಿ ಶ್ರುತಶ್ರವೆ ಮತ್ತು ಶ್ರುತದೇವೆಯರ ಮಕ್ಕಳು. ಒಟ್ಟಿನಲ್ಲಿ ಅವರ ಕುಟುಂಬದ ಸದಸ್ಯರದ್ದೇ ಮೂರು-ನಾಲ್ಕು ಕ್ರಿಕೆಟ್ ಟೀಮ್ ಮಾಡಬಹುದಿತ್ತು.

***** 

ಸಹೋದರ-ಸಹೋದರಿಯರನ್ನು ನೋಡಿದ್ದಾಯಿತು. ಇನ್ನು ತಳೋದರಿಯನ್ನು ನೋಡೋಣ. 

ದ್ರವ ಪದಾರ್ಥವಿರುವ ಒಂದು ಪಾತ್ರೆ. "ತುಪ್ಪದ ತಂಬಿಗೆ" ಅನ್ನೋಣ. (ಬಿಂದಿಗೆಯಲ್ಲಿ ತುಪ್ಪ ಇಡುವ ಸಿರಿವಂತರ ಮನೆ ಆದರೆ "ತುಪ್ಪದ ಬಿಂದಿಗೆ" ಎನ್ನಲೂಬಹುದು). ಮೊದಲು ಅದರ ತುಂಬಾ ತುಪ್ಪ ಇತ್ತು. ಉಪಯೋಗಿಸುತ್ತಾ ಇದ್ದಂತೆ ಕಡಿಮೆಯಾಗುತ್ತಾ ಹೋಯಿತು. ಈಗ ಹೆಚ್ಚು-ಕಡಿಮೆ ಖಾಲಿಯಾಗಿದೆ. ತುಪ್ಪ ಇಲ್ಲವೇ ಇಲ್ಲ ಅನ್ನುವಂತಿಲ್ಲ. ಒಂದೆರಡು ಚಮಚದಷ್ಟು ತಂಬಿಗೆಯ "ತಳ" ಭಾಗದಲ್ಲಿ ಉಳಿದಿದೆ. ಖಂಡಿತ ಇದೆ. ಅಂದರೆ ಇದ್ದೂ ಇಲ್ಲದಂತೆ ಇದೆ. 

ಹೊಟ್ಟೆಯೂ ಅಷ್ಟೇ. ಕೆಲವರಿಗೆ ದೂರದಿಂದಲೇ ಕಾಣುವಂತೆ ಇರುತ್ತದೆ. ಅವರ ದೇಹದ ಎಲ್ಲಾ ಅಂಗಗಳಿಗಿಂತ ಹೊಟ್ಟೆಯೇ ಪ್ರಧಾನ. ನಮ್ಮ ಊರಿನಲ್ಲಿ ಒಬ್ಬರು ಶಾಸ್ತ್ರಿಗಳಿದ್ದರು. ಅವರ ಹೆಸರು ಹೇಳಿದರೆ ಯಾರಿಗೂ ತಿಳಿಯದು. "ಹೊಟ್ಟೆ ಶಾಸ್ತ್ರಿಗಳು" ಅಂದರೆ ಸಣ್ಣ ಮಕ್ಕಳಿಗೂ ಗೊತ್ತು. ಮತ್ತೆ ಕೆಲವರಿಗೆ ಹೊಟ್ಟೆಯೇ ಇರುವುದಿಲ್ಲ. ಹೊಟ್ಟೆಯೇ ಇಲ್ಲದೆ ಹೇಗೆ ಬದುಕಿದ್ದಾರೆ? ಇದೆ. ಆದರೆ ಕಾಣುವಂತೆ ಇಲ್ಲ. ಎಲ್ಲೋ ತಳದಲ್ಲಿ ಇದೆ. ಸುದಾಮನನ್ನು ಕಂಡ ಭಟರು ಶೀಕೃಷ್ಣನಿಗೆ ಹೇಳುತ್ತಾರೆ: "ಅವನ ಹೊಟ್ಟೆ ಬೆನ್ನಿಗೆ ಅಂಟಿಕೊಂಡಿದೆ".

ಹೊಟ್ಟೆ ಬೆನ್ನಿಗೆ ಅಂಟಿಕೊಂಡಂತಿದ್ದರೆ, ಕಂಡೂಕಾಣದಂತಿದ್ದರೆ, ಎಲ್ಲೋ ತಳದಲ್ಲಿದ್ದರೆ ಅಂತಹ ಹೆಣ್ಣು "ತಳೋದರಿ" ಅನ್ನಿಸಿಕೊಳ್ಳುತ್ತಾಳೆ. ಬಾಳೆಯ ಎಲೆಯಂತಹ ಹೊಟ್ಟೆಯಿರುವವಳು "ತಳೋದರಿ". ಬಾಳೆಯ ಗುಡಾಣದಂತಿರುವ ಹೊಟ್ಟೆಯವಳು 'ಗುಂಡೋದರಿ". (ಮನೆಯ ಹಿತ್ತಿಲಿನ ಬಾಳೆಯ ಗಿಡದಲ್ಲಿ ಗೊನೆ ಮೂಡಿ, ಕಾಯಿ ಬಲಿತ ನಂತರ ಅದನ್ನು ಕಡಿದು ತಂದು, ಚಿಪ್ಪುಗಳಾಗಿ ಕತ್ತರಿಸಿ, ಮಣ್ಣಿನ ಗುಡಾಣಗಳಲ್ಲಿ ಬಾಳೆಲೆಗಳ ಮಧ್ಯದಲ್ಲಿ ಸುತ್ತಿ ಬಿಸಿಲಲ್ಲಿ ಇಡುತ್ತಿದ್ದರು. ಮೂರು-ನಾಲ್ಕು ದಿನದಲ್ಲಿ ಹಣ್ಣಾಗುತ್ತಿದ್ದವು. ಗಿಡದಲ್ಲೇ ಬಿಟ್ಟರೆ ಅಳಿಲು, ಹಕ್ಕಿ-ಪಕ್ಷಿಗಳ ಕಾಟ. ಅದನ್ನು ತಪ್ಪಿಸಲು ಈ ಉಪಾಯ).

ಯಾರನ್ನಾದರೂ ವರ್ಣಿಸುವುದು ಹೇಗೆ? ಅವರ  ಅಂಗಾಂಗಗಳನ್ನು ತಾನೇ ವರ್ಣಿಸುವುದು. ಎತ್ತರದ ನಿಲುವು. ಆಜಾನುಬಾಹು (ಕೈಗಳು ಮೊಣಕಾಲು ಮುಟ್ಟುವಂತಿವೆ ಎಂದು). ಮಾಟವಾದ ಮೂಗು. ಮುತ್ತಿನಂತಹ ಹಲ್ಲು. ಈ ರೀತಿ. ಹೊಟ್ಟೆಯನ್ನು ಹೇಳುವಾಗ "ತಳೋದರಿ". ಅದೊಂದು ಸೌಂದರ್ಯದ ಲಕ್ಷಣ. ಆದ್ದರಿಂದ ಈ ಪದದ ಬಳಕೆ. 
*****

ಹಿಂದೆಲ್ಲಾ ಹೆಣ್ಣು ಮಕ್ಕಳಿಗೆ ಪ್ರಸವವಾದ ನಂತರ ಬಾಣಂತಿತನ (ಆಡುಮಾತಿನಲ್ಲಿ ಬಾಣಂತನ) ಮಾಡುವಾಗ "ಸೌಭಾಗ್ಯ ಶುಂಠಿ" ಲೇಹ್ಯವನ್ನು ಕೊಡುವುದರ ಜೊತೆಗೆ, ಶಿಶು ಜನನದಿಂದ ಖಾಲಿಯಾದ ಜಾಗದಲ್ಲಿ ಗಾಳಿ ತುಂಬಿ ಹೊಟ್ಟೆ ಉಬ್ಬರಿಸದಿರುವಂತೆ ಒಂದು ಉದ್ದದ ಬಟ್ಟೆಯ ತುಂಡಿನಿಂದ ಹೊಟ್ಟೆಯನ್ನು ಬಲವಾಗಿ ಕಟ್ಟುತ್ತಿದ್ದರು. ಗರ್ಭಿಣಿಯಾಗಿದ್ದಾಗ ಉಬ್ಬಿದ ಹೊಟ್ಟೆ ಮತ್ತೆ ಮೊದಲಿನಂತೆ ಆಗಿ, ಆ ಹುಡುಗಿ ಹಿಂದಿನಂತೆ ತಳೋದರಿಯೇ ಆಗಿ ಉಳಿಯಲಿ ಎನ್ನುವ ದೃಷ್ಟಿಯಿಂದ. 

ಅರ್ಜುನನೊಡನೆ ಮದುವೆಯಾಗುವ ಮೊದಲು ಸುಭದ್ರೆಯು ಅತ್ಯಂತ ಸುಂದರಿಯೂ, ತಳೋದರಿಯೂ ಆಗಿದ್ದಳಂತೆ. ಅಭಿಮನ್ಯುವಿನ ಜನನದ ಸಮಯದಲ್ಲಿ ಹೆರಿಗೆಗೆ ತೌರು ಮನೆ ದ್ವಾರಕಿಗೆ ಬಂದಳು. ಅವಳಿಗೆ (ಹಿರಿಯ ಅತ್ತಿಗೆ ಬಲರಾಮನ ಹೆಂಡತಿ) ರೇವತಿಯ ಜೊತೆಗೆ ಶ್ರೀಕೃಷ್ಣನ ಕಡೆಯಿಂದ ಹದಿನಾರು ಸಾವಿರದ ಒಂದು ನೂರಾ ಎಂಟು ಅತ್ತಿಗೆಯರು. ಹೊಟ್ಟೆ ಕಟ್ಟುವವರಿಗೆ ಏನೂ ಕಡಿಮೆಯಿರಲಿಲ್ಲ. ಹೀಗಾಗಿ ಸುಭದ್ರೆಯು ಅಭಿಮನ್ಯು ಹುಟ್ಟಿದಮೇಲೂ ತಳೋದರಿಯಾಗಿಯೇ ಉಳಿದಳು. 
*****

ರಾವಣನ ಹೆಂಡತಿಯಾದ ಮಂಡೋದರಿ ಅಸುರರ ರಾಜನಾದ ಮಯಾಸುರ ಮತ್ತು ಹೇಮಾ ಎನ್ನುವ ಹೆಸರಿನ ಅಪ್ಸರೆಯ ಮಗಳು. ಸಂಸ್ಕೃತದಲ್ಲಿ "ಮಂದ" ಅನ್ನುವ ಪದಕ್ಕೆ (ಇತರೆ ಅನೇಕ ಪದಗಳಂತೆ) ಅನೇಕ ಅರ್ಥಗಳಿವೆ. ಇವುಗಳಲ್ಲಿ "ಕೆಳಗೆ" ಎಂದೂ ಒಂದರ್ಥ. "ಮೆತ್ತಗಿರುವುದು" ಎಂದೂ ಒಂದರ್ಥ. ಮಂಡೋದರಿ ಅವಳ ತಾಯಿ ಅಪ್ಸರೆಯಂತೆ ಅತಿಲೋಕ ಸುಂದರಿ. ಅವಳೂ ತಳೋದರಿಯೇ. ಕೆಲವು ಕಥೆಗಳಲ್ಲಿ ರಾವಣನು ಈಶ್ವರನನ್ನು ಪಾರ್ವತಿಯನ್ನೇ ಕೊಡು ಎಂದು ಕೇಳಿದಾಗ (ಭೂಕೈಲಾಸ ನೆನಪಿಸಿಕೊಳ್ಳಬಹುದು) ಕಪ್ಪೆಯ ಮರಿ ಒಂದನ್ನು ಪಾರ್ವತಿಯಂತೆಯೇ ಸುಂದರಳಾದ ಹೆಣ್ಣಾಗಿ ಮಾಡಿ ಕೊಡಲಾಯಿತು ಎಂದು ಹೇಳಿದೆ. (ಹೀಗೆ ಮಾಡಿದವರು ಯಾರೆಂದರೆ ಬೇರೆ ಬೇರೆ ಕಥೆಗಳಲ್ಲಿ ಶಿವ, ಪಾರ್ವತೀ, ವಿಷ್ಣು ಎಂದೆಲ್ಲಾ ಉಂಟು). ಕಪ್ಪೆಗೆ "ಮಂಡೋದರಿ" ಎಂದೂ ಹೆಸರುಂಟು. ಈ ಕಾರಣಗಳಿಂದ ಅವಳಿಗೆ ಮಂಡೋದರಿ ಎಂದು ಹೆಸರು ಬಂತಂತೆ. 

ಸಹೋದರಿಗೂ ಮಂಡೋದರಿಗೂ ಸಂಬಂಧವಿಲ್ಲ. ಮೆತ್ತಗಿರುವ ಮತ್ತು ಕೆಳಗಿರುವ ಹೊಟ್ಟೆಯ ಕಾರಣದಿಂದ ಅವಳು ತಳೋದರಿಯೂ ಹೌದು, ಮಂಡೋದರಿಯೂ ಹೌದು. ಶ್ರೀಮದ್ರಾಮಾಯಣದ ಸುಂದರಕಾಂಡದಲ್ಲಿ ಹನುಮಂತನು ರಾವಣನ ಅಂತಃಪುರದಲ್ಲಿ ಮಂಡೋದರಿಯನ್ನು ನೋಡಿ ಸೀತೆ ಎಂದು ಕ್ಷಣ ಕಾಲ ಚಿಂತಿತನಾದನು ಎಂದು ಹೇಳುವ ಸಂಗತಿಯಿದೆ. ನಂತರ ಪಾದವನ್ನು ನೋಡಲಾಗಿ, ಮಂಡೋದರಿಗೆ ಕಾಕರೇಖೆ ಇತ್ತಂತೆ. ಸೀತಾದೇವಿಗೆ ಪದ್ಮರೇಖೆ. (ಅಂದರೆ ಮಂಡೋದರಿಯೂ ಸೀತೆಯಂತೆಯೇ ಸುಂದರಿ ಎಂದು ತಾತ್ಪರ್ಯ). 

*****

ಹೆಂಗಸರು ಮಾತ್ರ ತಳೋದರಿಯಾರಾಗಿರಬೇಕೇ? ಹೀಗೇಕೆಂದು "ಸ್ತ್ರೀ ವಿಮೋಚನಾ ವಾದಿ" ಸಂಘಗಳು ಯೋಚಿಸಬೇಕಾಗಿಲ್ಲ. ಗಂಡಸರೂ ಸಹ "ತಳೋದರ" ಆಗಿಯೇ ಇರಬೇಕಂತೆ. ಇದರಲ್ಲಿ ಅವರಿಗೆ ಏನೂ ವಿನಾಯಿತಿ ಇಲ್ಲ. ಶ್ರೀಮನ್ನಾರಾಯನನ್ನು ಚಿಂತಿಸುವಾಗ ಅವನನ್ನು ಪಾದದಿಂದ ಮೇಲೆ ಪ್ರತಿಯೊಂದು ಅಂಗವನ್ನೂ ನೆನಪಿಸಿಕೊಳ್ಳಬೇಕಂತೆ. ಹಾಗೆ ನೋಡುವಾಗ ಅವನ ಹೊಟ್ಟೆಯೂ ತೆಳುವೇ. ಶ್ರೀ ಮಧ್ವಾಚಾರ್ಯರು ತಮ್ಮ "ದ್ವಾದಶ ಸ್ತೋತ್ರ" ಕೃತಿಗಳಲ್ಲಿ ಹೀಗೆ ಹೇಳುತ್ತಾರೆ:

ಉದರಂ ಚಿಂತ್ಯಮೀಶಸ್ಯ ತನುತ್ವೇಪ್ಯಖಿಲಂಭರಂ 
ವಲಿತ್ರಯಾಂಕಿತ೦ ನಿತ್ಯಂ ಉಪಗೂಢ೦ ಶ್ರೀಯೈಕಯಾ 

ತನ್ನ ಹೊಟ್ಟೆಯಲ್ಲಿ ಹದಿನಾಲ್ಕು ಲೋಕಗಳನ್ನು ತುಂಬಿಕೊಂಡಿದ್ದರೂ ಅವನ ಹೊಟ್ಟೆಯು ಬಾಳೆ ಎಲೆಯಂತೆ ತೆಳುವಾಗಿಯೇ ಇದೆ. ಅಷ್ಟು ಮಾತ್ರವಲ್ಲ. ಅವನ ಹೊಟ್ಟೆಯಮೇಲೆ ಮೂರು ಗೆರೆಗಳು ಬೀಳುತ್ತವಂತೆ. ಹೊಟ್ಟೆ ಒಣಗಿಕೊಂಡವರಿಗೆ ಮಾತ್ರ ಈ ರೀತಿ ಗೆರೆಗಳು ಬೀಳುತ್ತವೆ ಎಂದು ನಾವು ನೋಡಿ ತಿಳಿದಿದ್ದೇವೆ. ಆದರೆ ಶ್ರೀಹರಿಯ ಹೊಟ್ಟೆಯ ಮೇಲಿನ ಗೆರೆಗಳು ಸುಲಭವಾಗಿ ಕಾಣುವುದಿಲ್ಲ. ಏಕೆಂದರೆ ಆ ತಾಯಿ ಮಹಾಲಕ್ಷ್ಮಿಯು ಅವನನ್ನು ಯಾವಾಗಲೂ ತಬ್ಬಿಕೊಂಡೇ ಕುಳಿತಿರುತ್ತಾಳೆ. ಅವಳ ಕರುಣೆಯಾದರೆ ಮಾತ್ರ ಸ್ವಲ್ಪ ಪಕ್ಕಕ್ಕೆ ತಿರುಗಿ ನಮಗೆ ಅದರ ದರ್ಶನ ಮಾಡಿಸುತ್ತಾಳೆ!

ಶ್ರೀಹರಿ ಹೀಗಿದ್ದರೆ ಅವನ ಹೆಂಡತಿ ಕಥೆಯೇನು? ಮಹಾಲಕ್ಸ್ಮಿ ದೇವಿಯೂ ತಳೋದರಿಯೇ. ಶ್ರೀಹರಿ ಪ್ರಳಯ ಕಾಲದಲ್ಲಿ ಆಲದೆಲೆಯ ಮೇಲೆ ಮಲಗಿದ. ಮಹಾಲಕ್ಷ್ಮಿಯು ಆಲದೆಲೆಯಾಗಿ ಜೊತೆಗಿದ್ದಳು. (ಛತ್ರ, ಚಾಮರ, ಮಂಚ, ಬೇರೆ ಪದಾರ್ಥಗಳು (ವ್ಯಜನ), ಪಾತ್ರೆ-ಪಡಗ, ಕಡೆಗೆ ಪ್ರಳಯದ ನೀರೂ ಅವಳೇ ಆಗಿ ಅವನನ್ನು ಸುತ್ತುವರೆದಿದ್ದಳು). ಮುಂದೆ ಸೃಷ್ಟಿ ಕಾರ್ಯ ಸಾಗಬೇಕು. ಮಹಾಲಕ್ಷ್ಮಿಯ ಮೂಲಕ ಮಕ್ಕಳು ಪಡೆಯಬೇಕಾದರೆ ತಳೋದರಿಯಾಗಿರುವ ಅವಳು ಬಾಣಂತಿತನದಲ್ಲಿ ಸರಿಯಾಗಿ ಹೊಟ್ಟೆ ಕಟ್ಟದಿದ್ದರೆ ಮುಂದೆ "ಗುಂಡೋದರಿ" ಆಗಬಹುದು. ಹೊಟ್ಟೆ ಕಟ್ಟಲು ಬೇರೆ ಯಾರೂ ಇಲ್ಲ. ಇರುವುದು ಅವರಿಬ್ಬರೇ. ಪಕ್ಕದ ಮನೆಯವರ ಸಹಾಯ ಕೇಳೋಣವೆಂದರೆ ಅಕ್ಕ-ಪಕ್ಕ ಮನೆಗಳೇ ಇಲ್ಲ. ಎಲ್ಲಾ ನೀರಿನಮಯ. ಏನು ಮಾಡುವುದು?

ಯೋಚಿಸಿ ಯೋಚಿಸಿ ಕಡೆಗೆ ಅವಳ ಸೌಂದರ್ಯ ಮಾಸಬಾರದೆಂದು ತನ್ನ ಕರುಳಿನಿಂದಲೇ ಬ್ರಹ್ಮನನ್ನು ಹೆತ್ತ. ಆಮೇಲೆ ಅವನಿಗೆ ಅದೇ ಅಭ್ಯಾಸವಾಗಿಹೋಯಿತು. ಪ್ರಾಣದಿಂದ ವಾಯುವನ್ನು ಹಡೆದ. ಮನಸ್ಸಿನಿಂದ ಚಂದ್ರನನ್ನೂ, ಕಣ್ಣಿನಿಂದ ಸೂರ್ಯನನ್ನೂ ಪಡೆದ. ಮುಖದಿಂದ ಇಂದ್ರನನ್ನೂ ಅಗ್ನಿಯನ್ನೂ ಮಕ್ಕಳಾಗಿ ಪಡೆದ. 

ಸೂಕ್ತಗಳ ರಾಜನಾದ "ಪುರುಷ ಸೂಕ್ತ" ಇದನ್ನೇ ಹೇಳುತ್ತದೆ:

ಚಂದ್ರಮಾ ಮನಸೋ ಜಾತಃ ಚಕ್ಷೋ: ಸೂರ್ಯೋ ಅಜಾಯತ 
ಮುಖಾತ್ ಇಂದ್ರಶ್ಚ ಅಗ್ನಿಶ್ಚ ಪ್ರಾಣಾತ್ ವಾಯುರಾಜಾಯತ 


ಈ ಕಾರಣದಿಂದ ಮಹಾಲಕ್ಷ್ಮಿಗೆ ಮಕ್ಕಳ ಹಡೆಯುವುದೂ, ಹೊಟ್ಟೆ ಕಟ್ಟಿಸಿಕೊಳ್ಳುವುದೂ ಬೇಕೇ ಆಗಲಿಲ್ಲ. ಅವಳು "ತಳೋದರಿ" ಆಗಿಯೇ ಉಳಿದಳು! ಅವನು ತಳೋದರ. ಅವಳು ತಳೋದರಿ. ಅನುರೂಪ ದಾಂಪತ್ಯ. 

ಶ್ರೀ ಪುರಂದರ ದಾಸರು ಇದನ್ನೇ "ಮರಳು ಮಾಡಿಕೊಂಡೆಯಲ್ಲೇ, ಮಾಯಾದೇವಿಯೇ"  ಎಂದು ಹೀಗೆ ಹಾಡುತ್ತಾರೆ:

ಮಕ್ಕಳು ಪಡೆದರೆ ನಿನ್ನ ಚೊಕ್ಕತನವು ಪೋಪುದೆಂದು 
ಪೊಕ್ಕುಲೊಳು ಮಕ್ಕಳ ಪಡೆದು ಕಕ್ಕುಲಾತಿ ಮೆರೆವಂತೆ
ಮರಳು ಮಾಡಿಕೊಂಡೆಯಲ್ಲೇ ಮಾಯಾದೇವಿಯೇ! 

ಇದರ ಬಗ್ಗೆ ಹೆಚ್ಚಿಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ ಓದಬಹುದು. 

*****

"ತಳೋದರಿ" ಅನ್ನುವ ಪದವನ್ನು ಕೇವಲ ಒಂದು ಸಾರಿ ಮಾತ್ರ ಉಪಯೋಗಿಸಿ ಅದನ್ನು ವಿಶ್ವ ವಿಖ್ಯಾತ ಮಾಡಿದ ಶ್ರೇಯಸ್ಸು ನಮ್ಮ ಕನ್ನಡದ ಹೆಮ್ಮೆಯ ಕವಿ ಕುಮಾರವ್ಯಾಸ ಬಿರುದಿನ ಗದುಗಿನ ನಾರಾಣಪ್ಪನಿಗೆ ಸೇರಬೇಕು. ಅದು ಹೇಗೆಂದು ಮುಂದಿನ ಸಂಚಿಕೆಯಲ್ಲಿ ನೋಡೋಣ. 

Tuesday, November 25, 2025

ಗುರುದ್ರೋಹ?


"ವರ್ಣಮಾತ್ರಂ ಕಲಿಸಿದಾತಂ ಗುರು" ಅನ್ನುವ ಶೀರ್ಷಿಕೆಯ ಹಿಂದಿನ ಸಂಚಿಕೆಯನ್ನು ಓದಿದ ಕೆಲವು ಓದುಗ ಮಿತ್ರರು ಶ್ರೀ ಶಂಕರಾಚಾರ್ಯರು ಮತ್ತು ಶ್ರೀ ಮಂಡನ ಮಿಶ್ರ ಪಂಡಿತರ ನಡುವೆ ನಡೆದ ಸಂಭಾಷಣೆ ಸಂದರ್ಭದಲ್ಲಿ ಬಂದ ಶ್ರೀ ಕುಮಾರಿಲ ಭಟ್ಟರು ತುಷಾಗ್ನಿಗೆ ಪ್ರವೇಶಿಸಿದ ಸಂಗತಿ ವಿವರಗಳನ್ನು ಕೇಳಿದ್ದಾರೆ. (ಈ ಸಂಚಿಕೆಯನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು). 

ಈ ಸಂದರ್ಭದ ಹಿನ್ನೆಲೆ ಮತ್ತು ವಿವರಗಳನ್ನು ಈಗ ನೋಡೋಣ. 

*****

ಕ್ರಿಕೆಟ್ ಒಂದು ಜನಪ್ರಿಯ ಕ್ರೀಡೆ. ಪ್ರಪಂಚದ ಅನೇಕ ಪ್ರದೇಶಗಳಲ್ಲಿ ಆಡುವ ಆಟ. (ಅದಕ್ಕಿಂತ ಜನಪ್ರಿಯ ಆಟಗಳೂ ಅನೇಕವಿವೆ. ಇಲ್ಲಿ ಉದಾಹರಣೆಗಾಗಿ ಅದೊಂದನ್ನು ತೆಗೆದುಕೊಂಡಿದೆ. ಇದರ ಬದಲು ಬೇರೆ ಕ್ರೀಡೆಯನ್ನು ತೆಗೆದುಕೊಂಡರೂ ಹೇಳುವುದರ ತಿರುಳಲ್ಲಿ ಏನೂ ವ್ಯತ್ಯಾಸ ಆಗುವುದಿಲ್ಲ). ಅದನ್ನು ಆಡಲು ಮುಖ್ಯವಾಗಿ ಕೆಲವು ವಸ್ತುಗಳು ಬೇಕು. ಒಂದು ದಾಂಡು ಅಥವಾ ಬ್ಯಾಟು. ಒಂದು ಚೆಂಡು ಅಥವಾ ಬಾಲು. ಮೂರೋ ಅಥವಾ ಆರೋ ಸ್ಟಂಪ್ ಅಥವಾ ಗೂಟಗಳು. ಗೂಟವಿಲ್ಲದಿದ್ದರೆ ಗೋಡೆಯ ಮೇಲೆ ಮೂರು ದಪ್ಪ ಗೆರೆಗಳು. ಇಷ್ಟಂತೂ ಬೇಕೇ ಬೇಕು. ಹೆಚ್ಚಿದ್ದರೆ ಇನ್ನೂ ಒಳ್ಳೆಯದು. ಆಡಲು ಆಟಗಾರರು. ತೀರ್ಪುಗಾರರಿದ್ದರೆ ಒಳ್ಳೆಯದು. ಎರಡು ತಂಡ ಇದ್ದರೆ ದ್ವಿಪಕ್ಷೀಯ ಸರಣಿ. ಹೆಚ್ಚಿನ ತಂಡಗಳಿದ್ದರೆ ಅದೊಂದು ದೊಡ್ಡ ಪಂದ್ಯಾವಳಿ. ಪ್ರಪಂಚದ ಎಲ್ಲ ಕ್ರಿಕೆಟ್ ಆಡುವ ದೇಶಗಳ ತಂಡಗಳು ಬಂದರೆ "ವಿಶ್ವ ಕಪ್" ಪಂದ್ಯಾವಳಿ. ಹೀಗೆ ನಡೆಯುತ್ತದೆ. 

ಇರುವ ಒಂದೇ ರೀತಿಯ ಬ್ಯಾಟಿನಲ್ಲಿ ಬೇರೆ ಬೇರೆ ದಾಂಡಿಗರು (ಬ್ಯಾಟ್ಸಮನ್) ತಮ್ಮ ಕೈಚಳಕ ತೋರಿಸುತ್ತಾರೆ. ಒಬ್ಬನಂತೆ ಇನ್ನೊಬ್ಬ ಇಲ್ಲ. ಏನೋ ಒಂದು ವ್ಯತ್ಯಾಸ. ಹಾಗೆಯೇ, ಹಿಡಿದ ಒಂದೇ ಚೆಂಡಿನಲ್ಲಿ ಬೌಲರುಗಳೂ ತಮ್ಮ ಕೌಶಲ್ಯ ತೋರಿಸುತ್ತಾರೆ. ಮೂಲ ಪರಿಕರ ಒಂದೇ ಆದರೂ ಅವರವರ ಶಕ್ತಿ, ಅನುಭವ, ತಯಾರಿ, ಕೌಶಲ್ಯ, ಪ್ರತಿಭೆ, ಸಮಯಪ್ರಜ್ಞೆ, ಪಂದ್ಯದಲ್ಲಿ ಉಳಿಯುವ ಶಕ್ತಿ, ಆ ತಕ್ಷಣದಲ್ಲಿ ಮಾಡುವ ಬದಲಾವಣೆಗಳು, ನಿಂತ ನಿಲುವಿನಲ್ಲಿ ಯೋಚಿಸಿ ಹೂಡುವ ಕಾರ್ಯತಂತ್ರ, ಹೀಗೆ ಅನೇಕ ತೆರನಾದ ವೈವಿಧ್ಯಗಳಿಂದ ಏನೋ ಹೊಸತನ್ನು, ನಿರೀಕ್ಷಿಸದ ತಿರುವನ್ನು ತಂದುಕೊಡುತ್ತಾರೆ. 

ಒಂದೇ ಚೆಂಡಿನಲ್ಲಿ ವೇಗದ ಬೌಲಿಂಗ್ ಮಾಡುವವನು ಒಬ್ಬ. ಅದರಲ್ಲಿಯೂ ಸೀಮ್ ಮತ್ತು ಸ್ವಿಂಗ್ ಎಂದು ಉಂಟು. ಅದೇ ಚೆಂಡಿನಲ್ಲಿ ಸ್ಪಿನ್ ಮಾಡುವವನು ಇನ್ನೊಬ್ಬ. ಬಲಗಡೆಯಿಂದ ಎಡಗಡೆಗೆ ಚೆಂಡು ತಿರುಗುವಂತೆ (ಆಫ್ ಸ್ಪಿನ್), ಎಡಗಡೆಯಿಂದ ಬಲಗಡೆ ತಿರುಗುವಂತೆ (ಲೆಗ್ ಸ್ಪಿನ್), ಗಾಳಿಯಲ್ಲಿ ಮೇಲೆ-ಕೆಳಗೆ ಹಾರುವಂತೆ (ಫ್ಲೈಟ್) ಮಾಡುವವರು ಉಂಟು. ಹೀಗೆ ತೋರಿಸಿ, ಹಾಗೆ ಹಾಕಿ ಎದುರಾಳಿಗೆ ಮಂಕುಬೂದಿ ಎರಚುವ ಪ್ರಯತ್ನಗಳೂ ನಡೆಯುತ್ತವೆ (ಗೂಗ್ಲಿ, ಚೈನಮನ್, ದೂಸ್ರಾ, ರಿವರ್ಸ್ ಸ್ವಿಂಗ್ ಇನ್ನೂ ಮುಂತಾದುವು) ಕೆಲವು ವಿಶೇಷ ಪ್ರತಿಭಾಶಾಲಿಗಳು ಇವುಗಳಲ್ಲಿ ಒಂದಕ್ಕಿಂತ ಹೆಚ್ಚನ್ನು, ಅಪರೂಪದ ಕೆಲವರು ಇವೆಲ್ಲವನ್ನೂ ಮಾಡುವವರು. ಕಾಲಕಾಲಕ್ಕೆ ಏನೋ ಒಂದು ಹೊಸದು ಬರುವುದು. ಆಟದಲ್ಲಿ ಒಂದು ಹೊಸ ತಿರುವು. ಹೊಸ ಉಲ್ಲಾಸ. ಹೀಗೆ ನಡೆಯುತ್ತಿರುವುದು. 

*****

ಕ್ರಿಕೆಟ್ ಆಟ ಪ್ರಾರಂಭವಾದಾಗ ಎರಡು ದೇಶದ ತಂಡಗಳ ಮಧ್ಯೆ ನಡೆವ ಯಾವುದೇ ಒಂದು ಸರಣಿ ಸೋಲು-ಗೆಲುವು ತೀರ್ಮಾನವಾಗದೆ ಇದ್ದರೆ, ಸರಣಿಯ ಕಡೆಯ ಪಂದ್ಯ ಯಾವುದಾದರೂ ಒಂದು ತಂಡ ಗೆಲ್ಲುವವರೆಗೂ ಆಡುತ್ತಿದ್ದರಂತೆ! ಮೊದಲ ಪಂದ್ಯಗಳು ಐದು ದಿನದ ಆಟದ ನಂತರ ತೀರ್ಮಾನವಾಗದೆ ಡ್ರಾ ಆದರೆ ಕಡೆಯ ಪಂದ್ಯಕ್ಕೆ ಸಮಯದ ನಿರ್ಬಂಧವಿರಲಿಲ್ಲ. 1939ರಲ್ಲಿ ಇಂಗ್ಲೆಂಡ್ ತಂಡ ದಕ್ಷಿಣ ಆಫ್ರಿಕಾ ಪ್ರವಾಸ ಹೊರಟಿತು. ಕಡೆಯ ಪಂದ್ಯ ಹೆಚ್ಚು ದಿನ ನಡೆಯಬಹುದು ಎಂದು ಗೊತ್ತಿತ್ತು. ಆಗ ಆಟಗಾರರು ಹಡಗಿನಲ್ಲಿ ಪ್ರಯಾಣ ಮಾಡಬೇಕಾಗಿತ್ತು. ಆದ್ದರಿಂದ ಕಡೆಯ ಪಂದ್ಯ ಪ್ರಾರಂಭವಾಗುವ ದಿನದಿಂದ ಹದಿಮೂರನೆಯ ದಿನ ದಕ್ಷಿಣ ಆಫ್ರಿಕಾದಿಂದ ಹೊರಡುವ ಹಡಗಿನಲ್ಲಿ ಅವರಿಗೆ ಇಂಗ್ಲೆಂಡ್ ಮರಳುವ ಪ್ರಯಾಣದ ವ್ಯವಸ್ಥೆ ಮಾಡಿದರು. 

ಡರ್ಬನ್ ನಗರದಲ್ಲಿ ನಡೆದ ಆ ಪಂದ್ಯ 12 ದಿನ ನಡೆದರೂ ತೀರ್ಮಾನವಾಗಲಿಲ್ಲ. ಹತ್ತು ದಿನ ಪಂದ್ಯ ನಡೆದು (ಮಧ್ಯೆ ಎರಡು ದಿನ ವಿರಾಮದ ದಿನಗಳು - ರೆಸ್ಟ್ ಡೇಸ್) 1981 ರನ್ನುಗಳ ಸಂಗ್ರಹವಾದರೂ ಪಂದ್ಯ ನಡೆಯುತ್ತಲೇ ಇತ್ತು! ಕಡೆಗೆ ಹಡಗು ಹೊರಡುವ ದಿನ ಬಂದಿದ್ದರಿಂದ, ಪ್ರಯಾಣ ಮುಂದೂಡಲು ಬೇರೆ ಹಡಗುಗಳ ಅಲಭ್ಯ ಕಾರಣದಿಂದ, ಪಂದ್ಯ ಡ್ರಾ ಎಂದು ಘೋಷಿಸಿ ಮುಕ್ತಾಯ ಮಾಡಿದರು!

ಹೀಗೆ ಪ್ರಾರಂಭವಾದ ಕ್ರೀಡೆ ಇಂದು ಅನೇಕ ಬದಲಾವಣೆಗಳನ್ನು ಕಂಡಿದೆ. ಐದು ದಿನದ ಟೆಸ್ಟ್ ಪಂದ್ಯಗಳ ಜೊತೆ, ಏಕದಿನ ಪಂದ್ಯಗಳು (ಒನ್ ಡೇ), 20 ಓವರುಗಳ ಪಂದ್ಯಗಳು, ಹೀಗೆ. ಸಮಯದ ಜೊತೆ ಪಂದ್ಯಗಳು ನಡೆಯುವ ನಿಯಮಗಳೂ ಬದಲಾಗುತ್ತಿವೆ. 

ಕ್ರಿಕೆಟ್ ಇಂಗ್ಲೆಂಡ್ ದೇಶದಲ್ಲಿ ಪ್ರಾರಂಭವಾಗಿ ಕೆಲಕಾಲ ಆ ದೇಶದ ತಂಡ ಮೇಲುಗೈ ಪಡೆದಿತ್ತು. ನಂತರ ಸ್ವಲ್ಪಕಾಲ ವೆಸ್ಟಿಂಡೀಸ್ ತಂಡ ಮೆರೆಯಿತು. ಆಮೇಲೆ ಆಸ್ಟ್ರೇಲಿಯಾ. ಭಾರತ ಮತ್ತು ಪಾಕಿಸ್ತಾನಗಳೂ ಕೆಲ ಕಾಲ ಮೆಲಗೈ ಪಡೆದುವು. "ವಿಶ್ವ ಕಪ್" ಆಡುವುದು ಬಂದಮೇಲಂತೂ ಪ್ರತಿ ನಾಲ್ಕು ವರುಷಗಳಿಗೊಮ್ಮೆ ಒಂದು ತಂಡ "ಚಾಂಪಿಯನ್" ಆಗುವುದು. ಆ ಸಮಯದಲ್ಲಿ ಯಾರ ಕೈ ಮೇಲೋ ಅವರು ಗೆದ್ದು ಬೀಗುವರು. 
*****

ಕ್ರೀಡೆಯಂತೆ ಆಟಗಾರರ ನಡವಳಿಕೆಗಳಲ್ಲೂ ವ್ಯತ್ಯಾಸಗಳು ಉಂಟು. ಕೆಲವರು ಎದುರಾಳಿ ಆಟಗಾರರನ್ನು ಬದ್ಧ ದ್ವೇಷಿಗಳು ಎಂದು ತಿಳಿಯುವರು. ಮತ್ತೆ ಕೆಲವರು ಎದುರಾಳಿಗಳ ಒಳ್ಳೆಯ ಗುಣಗಳನ್ನು ಗುರುತಿಸಿ ಅವರನ್ನು ಮೆಚ್ಚುವರು. ಮತ್ತ್ತೆ ಕೆಲವರು ಇವೆರಡೂ ಇಲ್ಲದ ತಟಸ್ಥ ಮನಃಸ್ಥಿತಿ ಹೊಂದಿದವರು. ಕೆಲವರಂತೂ ಎದುರಾಳಿಗೂ ಕೆಲವು ವಿಷಯಗಳನ್ನು ತಿಳಿಸಿಹೇಳಿ ಹೃದಯ ವೈಶಾಲ್ಯ ಮೆರೆಯುವವರು. ಹೀಗೆ ಎಲ್ಲ ರೀತಿಯ ಆಟಗಾರರೂ ಉಂಟು. 

ಇಂಗ್ಲೆಂಡ್ ದೇಶದ ಹವಾಮಾನ, ಆಟದ ಮೈದಾನ, ಪಿಚ್ ಸ್ಥಿತಿ-ಗತಿ ಬೇರೆ ರೀತಿಯದು. ಅವರನ್ನು ತವರು ನೆಲದಲ್ಲಿ ಸೋಲಿಸುವುದು ಬಲು ಕಷ್ಟ. ಹೀಗೆಯೇ ಭಾರತದಲ್ಲಿ. ಭಾರತದವರು ಇಂಗ್ಲೆಂಡ್ ತಂಡವನ್ನು ಅಲ್ಲಿಯೇ ಹೋಗಿ ಮಣಿಸಬೇಕಾದರೆ ಏನು ಮಾಡಬೇಕು? ಯಾರಾದರೂ ಆಟಗಾರನನ್ನು (ಸಾಧ್ಯವಾದರೆ ಆಟಗಾರರನ್ನು) ಅಲ್ಲಿಯ ಕೌಂಟಿ ಪಂದ್ಯಗಲ್ಲಿ ಆಡಲು ಕಳಿಸಬೇಕು. ಅಲ್ಲಿ ಹೋಗಿ, ಅವರೊಡನೆ ಸೇರಿ, ಅವರಂತೆ ಆಡಿ, ಅವರ ರಹಸ್ಯಗಳನ್ನು ತಿಳಿದು, ನಂತರ ಅವರನ್ನು ಭೇದಿಸಬೇಕು. ಇದು ಒಂದು ದಾರಿ. 

ಈಗಂತೂ ಬೇರೆ ದೇಶದವರ ಮಾಜಿ ಆಟಗಾರರನ್ನು ಹೆಚ್ಚು ಹಣ ಕೊಟ್ಟು "ಕೋಚ್" ಎಂದು ನೇಮಕ ಮಾಡಿಕೊಳ್ಳುವುದು ಬಂದಿದೆ. ಏನೇ ಆದರೂ, ಅವರ ರಹಸ್ಯ ಅರಿಯಲು ಅಲ್ಲಯೇ ಹೋಗಿ, ಅವರಂತೆ ಇದ್ದು, ಕಲಿತು ಬರುವುದು ಒಂದು ಅತ್ಯುತ್ತಮ ತಂತ್ರ. 

*****

ಇದೇನು? "ಗುರುದ್ರೋಹ" ಎಂದು ಶೀರ್ಷಿಕೆ ಕೊಟ್ಟು ಕ್ರಿಕೆಟ್ ಕಥೆ ನಡೆಯುತ್ತಿದೆಯಲ್ಲ? ಹೀಗೆ ಅನ್ನಿಸಬಹುದು. ಕ್ರಿಕೆಟ್ ಆಟದ ಮೇಲಿನ ಎಲ್ಲ ವಿವರಗಳೂ ತತ್ವಶಾಸ್ತ್ರಕ್ಕೂ ಅನ್ವಯಿಸುತ್ತವೆ. ಇಲ್ಲಿಯೂ ಅದೇ ರೀತಿ. ಅಲ್ಲಿ ಚೆಂಡು-ದಾಂಡು. ಇಲ್ಲಿ ವೇದ-ಬ್ರಹ್ಮಸೂತ್ರಗಳು ಮುಂತಾದ ಗ್ರಂಥಗಳು. ಅಲ್ಲಿ ನಾಯಕರು-ಆಟಗಾರರು. ಇಲ್ಲಿ ಭಾಷ್ಯಕಾರರು-ವ್ಯಾಖ್ಯಾನಕಾರರು. ಅಲ್ಲಿ ಸರಣಿ ಪಂದ್ಯಗಳು - ಪಂದ್ಯಾವಳಿಗಳು. ಇಲ್ಲಿ ವಾದ-ವಿವಾದಗಳು. ಅಲ್ಲೊಂದು ತೆರನಾದ ನಿಯಮಗಳು. ಇಲ್ಲೊಂದು ತೆರನಾದ ನಿಯಮಗಳು. 

ಅಲ್ಲಿನ ಆಟಗಾರರಂತೆ ಇಲ್ಲಿಯೂ ಉಂಟು. ಕೆಲವರು ಪ್ರತಿಪಕ್ಷದವರನ್ನು ದ್ವೇಷಿಸುವವರು. ಕೆಲವರು ಎದುರಾಳಿಯ ಯೋಗ್ಯತೆಯನ್ನು ಗೌರವಿಸುವವರು. ಮತ್ತೆ ಕೆಲವರು "ನಿಮ್ಮ ಮಾತು ಒಪ್ಪುವುದಿಲ್ಲ. ಆದರೆ ನೀವು ಹೇಳುವುದರಲ್ಲಿ ಕೆಲವು ಸತ್ಯಗಳಿವೆ" ಎನ್ನುವ ವಿಶಾಲ ಹೃದಯಿಗಳು. 

ಒಂದೇ ವಾಂಗ್ಮಯದ ಗ್ರಂಥಗಳಿಗೆ ಅವುಗಳಲ್ಲಿರುವ ಪದಸಂಪತ್ತಿನ ಬೇರೆ ಬೇರೆ ಅರ್ಥಗಳ ಸಹಾಯದಿಂದ ಬೇರೆ ಬೇರೆ ಭಾಷ್ಯಗಳು. ಒಂದೇ ಪದಕ್ಕೆ ಅನೇಕ ಅರ್ಥಗಳುಳ್ಳ ಭಾಷೆಯ ಸಂಪತ್ತು. ಅದರಿಂದ ಹೊರಟ ವಿವಿಧ ಅರ್ಥಗಳು. ಆ ಕಾರಣದಿಂದ ಬೇರೆ ಬೇರೆ ಸಿದ್ಧಾಂತಗಳು.

ದೇವರಿದ್ದಾನೆ ಎನ್ನುವವರು ಕೆಲವರು. ದೇವರಿಲ್ಲ ಎನ್ನುವವರು ಮತ್ತೆ ಕೆಲವರು. ಅವನು ಹೀಗಿದ್ದಾನೆ ಅನ್ನುವವರು ಸ್ವಲ್ಪ ಜನ. ಅವನು ಹೀಗಿಲ್ಲ; ಹಾಗಿದ್ದಾನೆ ಅನ್ನುವವರು ಮತ್ತೆ ಬೇರೆ ಜನ. ಮನುಷ್ಯ ಸತ್ತ ಮೇಲೆ ಮುಗಿಯಿತು. ಮುಂದಿನ ಲೋಕವಿಲ್ಲ ಎನ್ನುವವರು ಕೆಲವರು. ಕರ್ಮವೇ ಪ್ರಧಾನ ಎಂದು ಹಲವರು. ಜೀವನು ಪರಮಾತ್ಮನ ಭಾಗ. ಎರಡೂ ಒಂದೇ ಅನ್ನುವರು ಕೆಲವರು. ಇಲ್ಲ, ಇಲ್ಲ, ಎರಡೂ ಬೇರೆ ಅನ್ನುವವರು ಇನ್ನು ಕೆಲವರು. ಎರಡೂ ಒಂದೇ, ಆದರೆ ಸ್ವಲ್ಪ ವ್ಯತ್ಯಾಸ ಎಂದು ಇನ್ನೂ ಕೆಲವರು. ಈ ಭೇದಗಳಿಂದ ಹುಟ್ಟಿದ ಅನೇಕ ಸಿದ್ಧಾಂತಗಳು. 

"ಈ ಗ್ರಂಥಗಳು ಪ್ರಮಾಣ. ಅದರಿಂದ ಇದೇ ಸರಿ" ಎಂದು ಕೆಲವರೆಂದರೆ "ನಾವು ನಿಮ್ಮ ಗ್ರಂಥಗಳನ್ನೇ ಒಪ್ಪುವುದಿಲ್ಲ" ಎನ್ನುವವರು ಮತ್ತೆ ಕೆಲವರು. "ಈ ಗ್ರಂಥಗಳಿಗೆ ಹೀಗೆ ಅರ್ಥ" ಎಂದು ಒಬ್ಬರು ಹೇಳಿದರೆ, "ಇಲ್ಲ. ಅದರ ಅರ್ಥ ಹಾಗೆ" ಎಂದು ಇನ್ನೊಬ್ಬರು. ಕಣ್ಣಿಗೆ ಕಾಣುವುದೇ ಸತ್ಯ ಎಂದು ಒಂದು ಬಣ. ಕಾಣದ ಸತ್ಯವೂ ಇದೆ ಎಂದು ಇನ್ನೊಂದು ಬಣ. ನಿಯಮಗಳು ಬದಲಾದಾಗ ಪಂದ್ಯದ ಫಲಿತಾಂಶವೂ ಬೇರೆ ಆಗುವುದು ವಿಶೇಷವೇನಲ್ಲ. ಹೀಗೆ. 

ಈ ರೀತಿಯ ವಾದ-ವಿವಾದಗಳಲ್ಲಿ ಒಂದು ಕಾಲಘಟ್ಟದಲ್ಲಿ ಯಾರ ತಂಡವು ಬಲಶಾಲಿಯೋ ಆ ತಂಡದ ಸಿದ್ಧಾಂತ ಮೇಲುಗೈ ಪಡೆಯಿತು. ವಿಶ್ವ ಕಪ್ ಗೆದ್ದಂತೆ. "ನಿರೀಶ್ವರವಾದ", "ಏಕವಾದ", "ಅದ್ವೈತ", "ವಿಶಿಷ್ಟಾದ್ವೈತ", "ದ್ವೈತ" ಇನ್ನೂ ಮುಂತಾದುವು. ಇವೆಲ್ಲವೂ ಎಲ್ಲ ಕಾಲದಲ್ಲಿಯೂ ಇದ್ದವು. ಈಗಲೂ ಇವೆ. ಒಂದು ಸಿದ್ಧಾಂತ ಸ್ವಲ್ಪ ಮಾಸುವಂತಾದಾಗ ಪ್ರತಿಭಾಶಾಲಿ ಒಬ್ಬರು ಬಂದು ಅದನ್ನು ಮತ್ತೆ ಸ್ಥಾಪಿಸುವರು. ಹೀಗೆ ಹಗ್ಗ-ಜಗ್ಗಾಟ ನಡೆದೇ ಇರುವುದು. 

******

ಶ್ರೀ ಕುಮಾರಿಲ ಭಟ್ಟರು ಏಳನೆಯ ಶತಮಾನದಲ್ಲಿ ಜೀವಿಸಿದ್ದ ಮಹಾನ್ ವಿದ್ವಾಂಸರು. "ಭಟ್ಟಪಾದರು" ಎಂದು ಕೀರ್ತಿ ಸಂಪಾದಿಸಿದವರು. ಪೂರ್ವ ಮೀಮಾಂಸಾ ಮತ್ತು ಕರ್ಮ ಸಿದ್ಧಾಂತದಲ್ಲಿ ಪ್ರಚಂಡರು. ಶ್ರೀ ಶಂಕರಾಚಾರ್ಯರಿಗಿಂತ ವಯಸ್ಸಿನಲ್ಲಿ ಹಿರಿಯರು. ಆಚಾರ್ಯ ಶಂಕರರು ಅವರನ್ನು ಕಂಡಾಗ ಆಚಾರ್ಯರಿಗೆ ಹದಿನೇಳು-ಹದಿನೆಂಟು ವಯಸ್ಸು. ಕುಮಾರಿಲ ಭಟ್ಟರು ಆ ವೇಳೆಗೆ ವೃದ್ಧರು. 

ಕಾಲಚಕ್ರದಲ್ಲಿ ವೈದಿಕ ಸಿದ್ಧಾಂತಕ್ಕೆ ವಿರುದ್ಧವಾದ ಬೌದ್ಧ ಮತ ಪ್ರಬಲವಾಯಿತು. ಬೌದ್ಧ ಪಂಡಿತರು ವೈದಿಕರನ್ನು ವಾದಗಳಲ್ಲಿ ಸೋಲಿಸಿ ಮೇಲೆ ಬಂದರು. ಕುಮಾರಿಲ ಭಟ್ಟರು ಅವರನ್ನು ಖಂಡಿಸಿ ವಾದಿಸಿದರು. ಬೌದ್ಧರ ಸಿದ್ಧಾಂತದ ಸೂಕ್ಷ್ಮಗಳನ್ನು ತಿಳಿದಹೊರತು ಅವರನ್ನು ವಾದಗಳಲ್ಲಿ ಸೋಲಿಸಲು ಅಸಾಧ್ಯ ಎಂದು ಅವರಿಗೆ ಅನಿಸಿತು. ಏನು ಮಾಡುವುದು? ಅವರ ಗುಟ್ಟನ್ನು ಅವರು ಬಿಡುವುದಿಲ್ಲ. ಮಾರುವೇಷದಿಂದ ಬೌದ್ಧ ವಿದ್ಯಾಲಕ್ಕೆ ಹೋಗಿ ವಿದ್ಯಾರ್ಥಿಯಾಗಿ ಸೇರಿಕೊಂಡರು. ಅವರ ಎಲ್ಲ ಸೂಕ್ಷ್ಮಗಳನ್ನೂ ತಿಳಿದುಕೊಂಡರು. (ಇಂಗ್ಲೆಂಡ್ ದೇಶಕ್ಕೆ ಹೋಗಿ, ಕೌಂಟಿ ಕ್ರಿಕೆಟ್ ಆಡಿ ಅಲ್ಲಿನ ಪರಿಸ್ಥಿತಿ ತಿಳಿದಂತೆ). 

ಅವರು ಅಲ್ಲಿ ವಿದ್ಯಾಭ್ಯಾಸ ಮುಗಿಸಿ ಹೊರಬರುವ ದಿನಗಳು. ಬೌದ್ಧರಿಗೆ ವೇದಗಳಲ್ಲಿ ನಂಬಿಕೆಯಿಲ್ಲ. ಪಾಠ ಮಾಡುತ್ತಿದ್ದ ಗುರುಗಳು ವೇದಗಳನ್ನು ನಿಂದಿಸಿದರು. ವೇದಗಳಲ್ಲಿ ಪೂರ್ಣ ನಂಬಿಕೆಯುಳ್ಳ ಕುಮಾರಿಲ ಭಟ್ಟರಿಗೆ ದುಃಖವಾಗಿ ಕಣ್ಣಲ್ಲಿ ನೀರು ಬಂದಿತು. (ಇನ್ನೊಬ್ಬರ ಮನೆಗೆ ಹೋದಾಗ ಅವರ ಮನೆಯವರು ನಮ್ಮ ಹಿರಿಯರನ್ನು ನಿಂದಿಸಿದರೆ ನೋವಾಗುವ ರೀತಿ). ಗುಟ್ಟು ರಟ್ಟಾಯಿತು. "ಒಹೋ, ಇವನು ನಮ್ಮ ಗುಟ್ಟುಗಳನ್ನು ತಿಳಿಯಲು ಬಂದಿರುವ ಪತ್ತೇದಾರ" ಎಂದು ಸಹಪಾಠಿಗಳಿಗೆ ತಿಳಿದುಹೋಯಿತು. 

ಜೊತೆಯ ವಿದ್ಯಾರ್ಥಿಗಳು ಕುಮಾರಿಲ ಭಟ್ಟರನ್ನು ಮಾಳಿಗೆಯ ಮೇಲೆ ಕರೆದುಕೊಂಡು ಹೋಗಿ ಅಲ್ಲಿಂದ ಕೆಳಗೆ ತಳ್ಳಿದರು. ಕೆಳಗೆ ಬೀಳುವಾಗ ಭಟ್ಟರು "ವೇದಗಳು ಪ್ರಮಾಣೀಭೂತವಾಗಿದ್ದರೆ ನನಗೆ ಏನೂ ಆಗದಿರಲಿ" ಎಂದು ಕೇಳಿಕೊಂಡರು. ಕೆಳಗೆ ಬಿದ್ದಾಗ ಅವರಿಗೆ ಪ್ರಾಣಾಪಾಯ ಆಗಲಿಲ್ಲ. "ವೇದಗಳು ಪ್ರಮಾಣ. ಅದರಿಂದ ನನಗೆ ಏನೂ ಆಗದಿರಲಿ" ಅನ್ನಲಿಲ್ಲ. "ಪ್ರಮಾಣೀಭೂತವಾಗಿದ್ದರೆ" ಅಂದುದರಿಂದ ಸ್ವಲ್ಪ ಅನುಮಾನ ತೋರಿಸಿದಂತೆ ಆಯಿತು. ಅವರಿಗೆ ಒಂದು ಕಣ್ಣು ಹೊಯಿತು. ಆದರೆ ಬದುಕುಳಿದರು. 

*****

ವಿದ್ಯಾಲಯದಿಂದ ಹೊರಬಂದು, ಅಲ್ಲಿ ಕಲಿತ ತಿಳುವಳಿಕೆಯಿಂದ ಬೌದ್ಧ ಗ್ರಂಥಗಳನ್ನೆಲ್ಲ ಖಂಡಿಸಿ ಜಯಶಾಲಿಗಳಾದರು. ಕರ್ಮ ಸಿದ್ಧಾಂತವನ್ನು ಮತ್ತೆ ಬಲಶಾಲಿ ಮಾಡಿದರು. ತಮ್ಮ ಈ ಕೆಲಸವೆಲ್ಲಾ ಮುಗಿದ ಮೇಲೆ ಅವರಿಗೆ ಬೇಸರವಾಯಿತು. ಬೌದ್ಧ ಸಿದ್ಧಾಂತ ಖಂಡಿಸಲು ಹೋಗಿ ಅಲ್ಲಿ ವಿದ್ಯಾರ್ಥಿಯಾಗಿ ಕಲಿತರೂ, ಕಡೆಗೆ ಅಲ್ಲಿನ ಗುರುಗಳಿಗೆ ದ್ರೋಹ ಮಾಡಿದೆ ಅನಿಸಿತು. "ವರ್ಣ ಮಾತ್ರಂ ಕಲಿಸಿದಾತಂ ಗುರು" ಅನ್ನುವಾಗ ತಾನು ಬೌದ್ಧ ಗುರುವಿಗೆ ಮಾಡಿದ್ದು ದೊಡ್ಡ ಅನ್ಯಾಯ ಎಂದು ತೋರಿತು. ಇದು ಗುರುದ್ರೋಹ ಎಂದು ತೀರ್ಮಾನಿಸಿದರು. 

ಕೆಲವೊಮ್ಮೆ ವಾದಗಳಲ್ಲಿ "ವೇದಗಳು ಪ್ರಮಾಣ" ಎಂದು ಹೇಳುವಾಗ "ಈಶ್ವರನು ಹೇಳಿದ್ದರಿಂದ ಅವು ಪ್ರಮಾಣ" ಎಂದು ಒಪ್ಪಿದರೆ "ಅವು ಸ್ವತಃ ಪ್ರಮಾಣ" ಎನ್ನುವುದು ನಿರಾಕರಿಸಿದಂತೆ ಅನ್ನುವ ಕಾರಣಕ್ಕೆ "ಈಶ್ವರನೇ ಇಲ್ಲ" ಎಂದು ವಾದಿಸಿದ್ದರು. (ಇಲ್ಲಿ ಈಶ್ವರ ಅಂದರೆ ಸರ್ವಶಕ್ತನಾದ ಪರಮಾತ್ಮ ಎಂದು). ಇದು "ಈಶ್ವರ ದ್ರೋಹ" ಆಯಿತು. 

ಕರ್ಮಠರಾದದ್ದರಿಂದ ಈ ಗುರುದ್ರೋಹ ಮತ್ತು ಈಶ್ವರ ದ್ರೋಹ ಎರಡಕ್ಕೂ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕಾಯಿತು. ಇದಕ್ಕೆ ಪ್ರಾಯಶ್ಚಿತ್ತ ಅಂದರೆ "ತುಷಾಗ್ನಿ" ಮಾಡಿ ಅದರಲ್ಲಿ ಬೆಂದುಹೋಗುವುದು. ಒಂದೆಡೆ ಕುಳಿತುಕೊಂಡು ತನ್ನ ಸುತ್ತ ಭತ್ತದ ಹೊಟ್ಟಿನ ಗುಡ್ಡೆ ಮಾಡಿ, ಅದಕ್ಕೆ ಬೆಂಕಿ ಹೊತ್ತಿಸಿಕೊಂಡು ನಿಧಾನವಾಗಿ ಅದು ಸುಡುವಾಗ ಬೆಂದು ಸಾಯುವ ಭೀಕರ ಶಿಕ್ಷೆ. ಅನೇಕರು ಅದು ಬೇಡ ಎಂದು ಬೇರೆ ಬೇರೆ ರೀತಿಯಲ್ಲಿ ವಾದಿಸಿದರೂ ಅವರು ಒಪ್ಪದೇ ತುಷಾಗ್ನಿ ಪ್ರವೇಶಿಸಿದರು. 

*****

ಶ್ರೀ ಶಂಕರಾಚಾರ್ಯರಿಗೆ ತಮ್ಮ ಭಾಷ್ಯಗಳಿಗೆ ಕುಮಾರಿಲ ಭಟ್ಟರಿಂದ ವಾರ್ತಿಕಗಳನ್ನು (ವಿವರಣೆಗಳು ಅಥವಾ ಕಾಮೆಂಟರಿ) ಬರೆಸಬೇಕೆಂದು ಇಚ್ಛೆ. ಅದಕ್ಕಾಗಿ ಭಟ್ಟರನ್ನು ಕಾಣಲು ಅವರು ವಾಸವಿದ್ದ ಪ್ರಯಾಗಕ್ಕೆ ಬಂದರು. ಅವರು ಪ್ರಯಾಗಕ್ಕೆ ಬಂದು ತ್ರಿವೇಣಿ ಸಂಗಮದಲ್ಲಿ ಮಿಂದು ವಿಶ್ರಮಿಸುತಿದ್ದಾಗ ಜನಗಳು "ಅಯ್ಯೋ, ಕುಮಾರಿಲ ಭಟ್ಟರು ತುಷಾಗ್ನಿ ಪ್ರವೇಶಿಸಿಬಿಟ್ಟರಲ್ಲ" ಎಂದು ಕೂಗುತ್ತಿದ್ದುದು ಕೇಳಿಸಿತು. ತಕ್ಷಣ ಆ ಸ್ಥಳಕ್ಕೆ ಹೋದರು. ತುಷಾಗ್ನಿ ನಿದಾನವಾಗಿ ಉರಿಯುತ್ತಿತ್ತು. ಹೊಗೆಯಿಂದ ಭಟ್ಟರ ಕಣ್ಣುಗಲ್ಲಿ ನೀರು ಸುರಿಯುತ್ತಿತ್ತು. ಆದರೂ ಅವರು ಶಾಂತರಾಗಿದ್ದರು. ಕೂಗಾಟ-ಚೀರಾಟ ಇಲ್ಲ. (ಶ್ರೀ ಶಂಕರ ದಿಗ್ವಿಜಯ ಗ್ರಂಥದಲ್ಲಿ ಅವರು ಉರಿಯುತ್ತಿರುವ ಬೆಂಕಿಯ ಮಧ್ಯೆ ಪ್ರಜ್ವಲಿಸುವ ಮತ್ತೊಂದು ಬೆಂಕಿಯಂತೆ ಕಂಡರು ಎಂದು ಹೇಳುತ್ತಾರೆ). 

ಆಚಾರ್ಯರನ್ನು ಕಂಡ ಭಟ್ಟರು ಅವರನ್ನು ಸ್ವಾಗತಿಸಿ ಶಿಷ್ಯರ ಮೂಲಕ ಉಪಚರಿಸಿದರು. ಆಚಾರ್ಯರ ಜೊತೆ ಭಟ್ಟರು ಬೆಂಕಿಯಲ್ಲಿ ಕುಳಿತಿದ್ದಾಗಲೇ ಮಾತುಕತೆ ನಡೆಯಿತು. ಆಚಾರ್ಯರ ಭಾಷ್ಯದ ತಾತ್ಪರ್ಯ ಕೇಳಿ ಸ್ವತಃ ಭೇದವಾದಿಯಾಗಿದ್ದರೂ ಸಂತೋಷಪಟ್ಟರು. "ನನಗೆ ನಿಮ್ಮ ಭಾಷ್ಯಗಳಿಗೆ ವಾರ್ತಿಕ ಬರೆಯುವ ಅವಕಾಶ ಇಲ್ಲ. ಮಾಹಿಷ್ಮತಿ ನಗರದಲ್ಲಿ ನನ್ನ ಪ್ರಿಯ ಶಿಷ್ಯನಾದ ಮಂಡನ ಮಿಶ್ರ ಪಂಡಿತನಿದ್ದಾನೆ. ಅವನನ್ನು ವಾದದಲ್ಲಿ ಜಯಿಸಿ ನಿಮ್ಮ ಶಿಷ್ಯನನ್ನಾಗಿ ಮಾಡಿಕೊಳ್ಳಿ. ಅವನು ವಾರ್ತಿಕ ಬರೆದರೆ ನಾನು ಬರೆದಂತೆಯೇ. ನನ್ನ ಕಾಲ ಮುಗಿಯಿತು. ಅಪ್ಪಣೆ ಕೊಡಿ" ಎಂದು ಹೇಳಿ ಜೀವನ ಯಾತ್ರೆ ಮುಗಿಸಿದರು. 

ಆಚಾರ್ಯರು ಮಂಡನ ಮಿಶ್ರರ ಮನೆ ತಲುಪಿದ ನಂತರ ನಡೆದ ಘಟನೆಯ ವಿವರಗಳನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು. 
*****

ಈ ಸಂಚಿಕೆಯ ಮೇಲುಗಡೆ ಕೊಟ್ಟಿರುವ ಚಿತ್ರದಲ್ಲಿ ಶ್ರೀ ಕುಮಾರಿಲಭಟ್ಟರು ತುಷಾಗ್ನಿಯಲ್ಲಿ ಕುಳಿತಿರುವಾಗ ಶ್ರೀ ಶಂಕರಾಚಾರ್ಯರೊಡನೆ ಮಾತನಾಡುತ್ತಿರುವಂತೆ ಚಿತ್ರಿಸಲಾಗಿದೆ. ಚಿತ್ರದ ಮೇಲೆ ಒಂದು ಶ್ಲೋಕವನ್ನೂ ಬರೆದಿದ್ದಾರೆ. ಇದು ಮುಂಬೈ ನಗರದ ಮಾತುಂಗ ಬಡಾವಣೆಯ ಶ್ರೀ ಶಂಕರ ಮಠದ ಗೋಡೆಗಳ ಮೇಲಿನ ಚಿತ್ರ. ಅಲ್ಲಿ "ಶ್ರೀಶಂಕರ ದಿಗ್ವಿಜಯ" ಕೃತಿಯ ಕೆಲವು ದೃಶ್ಯಗಳನ್ನು ಚಿತ್ರಗಳ ಮೂಲಕ ವಿವರಿಸಿದ್ದಾರೆ. 

ಈ ಚಿತ್ರದಲ್ಲಿ ಕೊಟ್ಟಿರುವ ಶ್ಲೋಕ ಏಳನೆಯ ಸರ್ಗದ 104ನೇ ಶ್ಲೋಕ. ಅದು ಈ ರೀತಿ ಇದೆ:

ಜಾನೇ ಭವಂತಮಹಮಾರ್ಯಜನಾರ್ಥಜಾತಂ
ಅದ್ವೈತರಕ್ಷಣಕೃತೇ ವಿಹಿತಾವತಾರಮ್ 
ಪ್ರಾಗೇವ ಚೇನ್ನಯನವರ್ತ್ರು ಕೃತಾರ್ಥಯೇಥಾ:
ಪಾಪಕ್ಷಯಾಯ ನ ತದೇದೃಶಮಾಚರಿಷ್ಯಮ್ 

"ವೈದಿಕ ಜನರ ಹಿತಕ್ಕಾಗಿ ಅದ್ವೈತ ಸಿದ್ಧಾಂತವನ್ನು ರಕ್ಷಿಸಲು ತಾವು ಅವತಾರ ಮಾಡಿದ್ದೀರೆಂದು ನನಗೆ ಗೊತ್ತಿದೆ. ನನಗೆ ಈ ಮೊದಲೇ ನಿಮ್ಮ ಸಂಪರ್ಕ ಬಂದಿದ್ದರೆ  ನಾನು ಪಾಪ ಕಳೆದುಕೊಳ್ಳಲು ಈ ಕೆಲಸ ಮಾಡುತ್ತಿರಲಿಲ್ಲ. (ನಿಮ್ಮ ಭಾಷ್ಯಗಳಿಗೆ ವಾರ್ತಿಕಗಳನ್ನು ಬರೆದು ಪಾಪ ಕಳೆದುಕೊಳ್ಳುತ್ತಿದ್ದೆ. ಹೀಗೆ ತುಷಾಗ್ನಿಗೆ ಆಹುತಿಯಾಗಬೇಕಿರಲಿಲ್ಲ ಎಂದು ಸೂಚನೆ). 

ಆಸಕ್ತಿ ಇದ್ದವರು ಮುಂಬೈ ನಗರಕ್ಕೆ ಹೋದಾಗ ನೋಡಬಹುದು. 

Sunday, November 23, 2025

ವರ್ಣಮಾತ್ರಂ ಕಲಿಸಿದಾತಂ ಗುರು


ಕೆಲವು ವಾಕ್ಯಗಳು ಅಥವಾ ವಾಕ್ಯಖಂಡಗಳು (ನುಡಿಗಟ್ಟುಗಳು) ಆಗಾಗ್ಗೆ ನಮ್ಮ ಕಿವಿಗಳ ಮೇಲೆ ಬೀಳುತ್ತಿರುತ್ತವೆ. ಅವು ಪೂರ್ಣವಾಗಿರುವುದಿಲ್ಲ. ಅವನ್ನು ಕೇಳಿದ ತಕ್ಷಣ "ಇದರ ಹಿಂದೆ-ಮುಂದೆ ಇನ್ನೇನೋ ಇರಬೇಕು" ಎಂದು ಅನ್ನಿಸುತ್ತದೆ. ಅದು ಅನೇಕ ವೇಳೆ ಪೂರ್ತಿಯಾಗಿ ಹೇಳುವವರಿಗೂ ಗೊತ್ತಿಲ್ಲ; ಕೇಳುವವರಿಗೂ ಗೊತ್ತಿಲ್ಲ. ಯಾವುದೋ ಒಂದು ಉಕ್ತಿಯ ಭಾಗ ಅವು. 

ಹಿಂದು-ಮುಂದಿನ ಭಾಗಗಳು ಕೂಡ ಚೆನ್ನಾಗಿಯೇ ಇರಬೇಕು. ಆದರೆ ಈ ಭಾಗ ಅವುಗಳಿಗಿಂತ ಸ್ವಲ್ಪ ಹೆಚ್ಚಾಗಿ ಚೆನ್ನಾಗಿತ್ತು. ಹೀಗಾಗಿ ಅವುಗಳಿಗಿಂತ ವಿಸ್ತಾರವಾಗಿ ಪ್ರಸಾರವಾಯಿತು. ಈ ಕಾರಣದಿಂದ ಜನಮಾನಸದಲ್ಲಿ ಭದ್ರವಾಗಿ ನೆಲೆಯೂರಿ ನಿಂತಿತು. ಇದರ ಹಿಂದು-ಮುಂದಿನವು ಇಷ್ಟು ಜನಪ್ರಿಯವಾಗಲಿಲ್ಲ. ಕ್ರಮೇಣ ಮರೆತುಹೋದುವು. ಅಥವಾ ಹುಡುಕಿಕೊಂಡು ಹೋದವರಿಗೆ ಮಾತ್ರವೇ ಸಿಕ್ಕುವುವು.  ಇದು ಎಲ್ಲ ಭಾಷೆಗಳಲ್ಲೂ, ಎಲ್ಲ ಕಾಲಗಳಲ್ಲೂ ನಡೆದುಬಂದಿರುವ ಒಂದು ಸಂಗತಿ. ಒಂದು ಒಳ್ಳೆಯ ಊಟದಲ್ಲಿ ಎಲ್ಲ ಪರಿಕರಗಳೂ ಚೆನ್ನಾಗಿಯೇ ಇದ್ದವು. ಆದರೂ ಅವುಗಳಲ್ಲಿ ಒಂದು ಮಿಕ್ಕೆಲ್ಲವನ್ನೂ ಮೀರಿಸಿ, ಮನಸ್ಸಿಗೆ ಹಿತವೆನಿಸಿ ನೆನಪಿನಲ್ಲಿ ನಿಂತಿತು. ಸರದಲ್ಲಿರುವ ಎಲ್ಲ ಮಣಿಗಳೂ ಹೊಳೆಯುತ್ತಿದ್ದರೂ ಪದಕದ ಮಣಿ (ಪೆಂಡೆಂಟ್) ಆಕರ್ಷಿಸುವಂತೆ.  ಹೀಗೆ.

"ವರ್ಣಮಾತ್ರಂ ಕಲಿಸಿದಾತಂ ಗುರು" ಮತ್ತು "ಬಡವಂ ಬಲ್ಲಿದನಾಗನೇ" ಎನ್ನುವುವು ಈ ರೀತಿಯ ನುಡಿಗಟ್ಟುಗಳು. "ಧರೆಯೊಳ್ ದಾತರು ಪುಟ್ಟರೇ" ಎಂದೂ ಒಂದುಂಟು. "ಕೆಲವಂ ಬಲ್ಲವರಿಂದ ಕಲ್ತು" ಅನ್ನುವುದು ಮತ್ತೊಂದು. ಇವೆಲ್ಲಾ ಎಲ್ಲಿಂದ ಬಂದವು? ಹಿಂದಿನ ಪೀಳಿಗೆಯ ಮಕ್ಕಳು ಶಾಲೆಗಳಲ್ಲಿ ಇವೆಲ್ಲವನ್ನೂ ಕಲಿಯುತ್ತಿದ್ದರು. ಈಗ ಪಾಠಕ್ರಮವೇ ಬದಲಾಗಿ ಇವೆಲ್ಲವೂ ಮರೆತುಹೋಗುತ್ತಿವೆ. 
*****

"ಗದುಗಿನ ವೀರನಾರಾಯಣ" ಅಂಕಿತದ "ಕರ್ನಾಟ ಭಾರತ ಕಥಾಮಂಜರಿ" ಮೂಲಕ ಗದಗ ಪಟ್ಟಣವೂ, ಕುಮಾರವ್ಯಾಸನೂ, ಕನ್ನಡ ಭಾರತವೂ ಅಮರರಾದರು. ಮೊದಲಿಗೆ ಈ ಗದಗ ಪಟ್ಟಣವು ಧಾರವಾಡ ಜಿಲ್ಲೆಯ ಭಾಗವಾಗಿದ್ದು ಈಗ ಅದೇ ಒಂದು ಜಿಲ್ಲೆಯ ಕೇಂದ್ರವಾಗಿದೆ. ಈ ಗದಗ ನಗರದಿಂದ ಇಪ್ಪತ್ತೈದು ಮೈಲಿ ದೂರದ ಒಂದು ಊರು "ಲಕ್ಷ್ಮೇಶ್ವರ". ಇದು ಒಂದು ಕಾಲದಲ್ಲಿ ಬಾದಾಮಿ ಚಾಲುಕ್ಯರ ರಾಜಧಾನಿ. ಅಲ್ಲಿರುವ ಸೋಮೇಶ್ವರ ದೇವಾಲಯ ಮತ್ತು ಜೈನ ಬಸದಿಗಳು ಬಲು ವಿಖ್ಯಾತ.  

ಲಕ್ಷ್ಮೇಶ್ವರದ ಪುರಾತನ ಹೆಸರು "ಪುಲಿಗೆರೆ". ಕನ್ನಡದ "ಆದಿಕವಿ ಪಂಪ" ತನ್ನ ಪಂಪಭಾರತವನ್ನು ರಚಿಸಿದ್ದು ಈ ಪುಲಿಗೆರೆಯಲ್ಲಿ ಮತ್ತು ಹತ್ತಿರದ ಬನವಾಸಿಯಲ್ಲಿ ಎಂದು ನಂಬಿಕೆ. ಬನವಾಸಿ ಈ ಲಕ್ಶ್ಮೇಶ್ವರ ಅಥವಾ ಪುಲಿಗೆರೆಯಿಂದ ಐವತ್ತು ಮೈಲು ದೂರ. "ಪಸರಿಪ ಕನ್ನಡಕ್ಕೊಡೆಯನೋರ್ವನೇ ಸತ್ಕವಿಪಂಪನಾವಗಂ" ಎಂದು ಹೆಮ್ಮೆಯ ಹೇಳಿಕೆ. ಪಂಪನಿಗೆ ಬನವಾಸಿ ಬಲು ಪ್ರಿಯ. "ಆರಂಕುಸಮಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ" ಎಂದು ಹೇಳಿಕೊಳ್ಳುತ್ತಾನೆ.  "ಪುಲಿಗೆರೆಯ ತಿರುಳ್ಗನ್ನಡ" ಎಂದು ಅಂದಿನ ಕನ್ನಡಕ್ಕೆ ವಿಶೇಷಣ. 

ಆದಿಕವಿ ಪಂಪ ಹತ್ತನೆಯ ಶತಮಾನದವನು. ಇದೇ ಲಕ್ಷ್ಮೇಶ್ವರದ ಪುಲಿಗೆರೆಯ ಸೋಮ (ಪುಲಿಗೆರೆ ಸೋಮನಾಥ) ಅನ್ನುವ ಇನ್ನೊಬ್ಬ ಕವಿ ಹದಿಮೂರನೆಯ ಶತಮಾನದವನು. ಇವನು ಸಂಸ್ಕೃತ ಮತ್ತು ಕನ್ನಡಗಳಲ್ಲಿ ಉದ್ದಾಮ ಕವಿ. ಇವನ "ಸೋಮೇಶ್ವರ ಶತಕ" ಸಂಸ್ಕೃತದ "ಭರ್ತೃಹರಿ" ಮಹಾಕವಿಯ "ಶೃಂಗಾರ ಶತಕ", "ನೀತಿ ಶತಕ" ಮತ್ತು "ವೈರಾಗ್ಯ ಶತಕ" ಇವುಗಳಂತೆ ಒಂದು ಗ್ರಂಥ. ಒಂದು ನೂರು ಪದ್ಯಗಳುಳ್ಳ ಗ್ರಂಥವಾದ ಕಾರಣ ಶತಕವೆಂದು ಹೆಸರು. ಪ್ರತಿ ಪದ್ಯವೂ "ಹರಹರಾ ಶ್ರೀಚನ್ನ ಸೋಮೇಶ್ವರ" ಎನ್ನುವ ಅಂಕಿತ ಹೊಂದಿದೆ. 

"ಸೋಮೇಶ್ವರ ಶತಕ" ಪಾಲ್ಕುರಿಕೆ ಸೋಮ ಎನ್ನುವ ಕವಿಯ ಕೃತಿ ಎಂದೂ ಒಂದು ಅಭಿಪ್ರಾಯವಿದೆ. ಈ ಸೋಮನೂ ಸಂಸ್ಕೃತ, ತೆಲುಗು ಮತ್ತು ಕನ್ನಡದ ಕವಿ. ಈತನೂ ಹದಿಮೂರನೆಯ ಶತಮಾನದವನು. ಜಗಜ್ಯೋತಿ ಬಸವೇಶ್ವರರ ಅನುಯಾಯಿ. ಇವನ "ಬಸವಪುರಾಣ" ಎನ್ನುವ ತೆಲುಗು ಕೃತಿ ಪ್ರಸಿದ್ದವಾದದ್ದು. ಆದರೆ ಹೆಚ್ಚಿನ ವಿದ್ವಾಂಸರು "ಸೋಮೇಶ್ವರ ಶತಕ" ಪುಲಿಗೆರೆಯ ಸೋಮನಾಥ ರಚಿಸಿದ  ಕೃತಿ ಎಂದು ನಂಬುತ್ತಾರೆ. 

*****

ಪುರಾತನ ಕನ್ನಡ ಗ್ರಂಥಗಳಲ್ಲೊಂದಾದ ಅಮೋಘವರ್ಷ ನೃಪತುಂಗ (ಅಥವಾ ಶ್ರೀನಾಥ ಕವಿ) ಕೃತಿ "ಕವಿರಾಜಮಾರ್ಗ" ಹೇಳುವಂತೆ ಕನ್ನಡಿಗರು "ಕುರಿತೋದದೆಯುಂ ಕಾವ್ಯಪ್ರಯೋಗ ಪರಿಣತ ಮತಿಗಳ್". ಓದು ಬರಹ ಬರದಿದ್ದ ಹಳ್ಳಿಗಾಡಿನ ಜನಗಳೂ ಕಾವ್ಯ ಸೂಕ್ಷ್ಮಗಳನ್ನು ತಿಳಿದವರಾಗಿದ್ದರು. ಇದನ್ನು ನಾವೇ ನಮ್ಮ ಬಾಲ್ಯಕಾಲದಲ್ಲಿ ಕಂಡಿದ್ದೇವೆ. ಅನೇಕ ಹಳ್ಳಿಯ ಜನ ಓದು ಬರಹ ಬಾರದ "ಹೆಬ್ಬೆಟ್ಟು" ಎನ್ನುವವರಾಗಿದ್ದರೂ ಸರ್ವಜ್ಞ ವಚನಗಳು, ಹದಿಬದೆಯ ಧರ್ಮ, ಸೋಮೇಶ್ವರ ಶತಕ, ಜಾನಪದ ಸಾಹಿತ್ಯ, ಗಾದೆಗಳು, ಶರಣರ ವಚನಗಳು ಮತ್ತು ದಾಸರ ಪದಗಳಿಂದ ಚೆನ್ನಾದ ಲೋಕಜ್ಞಾನ ಹೊಂದಿದ್ದರು. ಆಡುಮಾತಿನ ಮಧ್ಯದಲ್ಲಿ ಇವುಗಳಿಂದ ಆಯ್ದ ನುಡಿಗಟ್ಟುಗಳನ್ನು ಸುಲಭವಾಗಿ ಸೇರಿಸುತ್ತಿದ್ದರು. 

ಸೋಮೇಶ್ವರ ಶತಕದ ಒಂದು ಪದ್ಯ ಹೀಗಿದೆ:

ಹಿತವಂ ತೋರುವನಾತ್ಮಬಂಧು ಪೊರೆವಾತಂ ತಂದೆ ಸದ್ಧರ್ಮದಾ 
ಸತಿಯೇ ಸರ್ವಕೆ ಸಾಧನಂ ಕಲಿಸಿದಾತಂ ವರ್ಣಮಾತ್ರಂ ಗುರು 
ಕೃತಿಮಾರ್ಗಂ ಬಿಡದಾತ ಸುವ್ರತಿ ಮಹಾಸಾದ್ವಿದ್ಯೆಯೇ ಪುಣ್ಯದಂ 
ಸುತನೇ ಸದ್ಗತಿದಾತನೈ ಹರಹರಾ ಶ್ರೀ ಚನ್ನ ಸೋಮೇಶ್ವರಾ 

"ಒಳ್ಳೆಯದನ್ನು  ಮಾಡುವವನೇ ನೆಂಟನು. (ಆಪತ್ತಿಗಾದವನೇ ನೆಂಟ ಅನ್ನುವ ಗಾದೆ ನೆನಪಿಸುವುದು). (ಬಾಲ್ಯದಲ್ಲಿ) ಕಾಪಾಡಿದವನೇ ತಂದೆ. (ಹೆತ್ತಮಾತ್ರಕ್ಕೆ ತಂದೆಯಾಗುವುದಿಲ್ಲ!). ಎಲ್ಲ ಸಾಧನೆಗೂ ಹೆಂಡತಿಯೇ (ಹೆಂಗಸರಿಗೆ ಗಂಡನೇ?) ಕಾರಣ. (ಹೆಂಡತಿಯ ಸಹಕಾರವಿಲ್ಲದಿದ್ದರೆ ಸಾಧನೆ ಸೊನ್ನೆ). ಒಂದಕ್ಷರ ಕಲಿಸಿದವನೂ ಗುರುವೇ. ಸರಿಯಾದ ದಾರಿಯಲ್ಲಿ ನಡೆಯುವವನೇ ಮುನಿ ಎನ್ನಿಸಿಕೊಳ್ಳುವವನು. ಒಳ್ಳೆಯ ರೀತಿ ಬದುಕುವುದನ್ನು ಕಲಿಸುವುದೇ ಬ್ರಹ್ಮವಿದ್ಯೆ. ಮಗನೇ ಸದ್ಗತಿ ಕೊಡುವವನು" ಎನ್ನುವುದು ಇದರ ತಾತ್ಪರ್ಯ. 

"ವರ್ಣಮಾತ್ರಂ ಕಲಿಸಿದಾತಂ ಗುರು" ಎಂದು ನಾವು ಮತ್ತೆ ಮತ್ತೆ ಕೇಳುವುದು ಈ ಶತಕ ಪದ್ಯದ ಒಂದು ವಾಕ್ಯಖಂಡ ಮಾತ್ರ. 

*****

ಹಿಂದೊಂದು ಸಂಚಿಕೆಯಲ್ಲಿ "ಪಂಡಿತರ ಮನೆ ಎಲ್ಲಿದೆ?" ಎನ್ನುವ ಶೀರ್ಶಿಕೆಯ ಅಡಿಯಲ್ಲಿ ಮಹಾವಿದ್ವಾಂಸರಾದ ಶ್ರೀ ಕುಮಾರಿಲ ಭಟ್ಟರು ಶ್ರೀ ಶಂಕರಾಚಾರ್ಯರು ಅವರನ್ನು ನೋಡಲು ಬರುವ ಸಮಯಕ್ಕೆ ತುಷಾಗ್ನಿಯಲ್ಲಿ ಸುಟ್ಟುಕೊಂಡು ಪ್ರಾಣಾರ್ಪಣೆ ಮಾಡುವ ಸಂಗತಿ ನೋಡಿದ್ದೆವು. ಗುರುದ್ರೋಹ ಮಾಡಿದ ಕಾರಣಕ್ಕೆ ಅವರಿಗೆ ಅವರೇ ಈ ಶಿಕ್ಷೆ ಕೊಟ್ಟುಕೊಂಡಿದ್ದರು. (ಇಲ್ಲಿ ಕ್ಲಿಕ್ ಮಾಡಿ ಈ ಸಂಚಿಕೆಯನ್ನು ಓದಬಹುದು)

ಈ ಸಂದರ್ಭವನ್ನು ವಿವರಿಸುವ ಶ್ರೀ ವಿದ್ಯಾರಣ್ಯ ಸ್ವಾಮಿಗಳ ರಚನೆ ಎನ್ನುವ "ಶ್ರೀ ಶಂಕರ ದಿಗ್ವಿಜಯ" ಕೃತಿಯಲ್ಲಿ ಕಂಡು ಬರುವ ಒಂದು ಶ್ಲೋಕ ಹೀಗಿದೆ (ಏಳನೆಯ ಸರ್ಗ, ನೂರನೆಯ ಶ್ಲೋಕ):

ಏಕಾಕ್ಷರಸ್ಯಾಪಿ ಗುರು: ಪ್ರದಾತಾ 
ಶಾಸ್ತ್ರೋಪದೇಷ್ಟಾ ಕಿಮು ಭಾಷಣೀಯಂ 
ಅಹಂ ಹಿ ಸರ್ವಜ್ಞ ಗುರೊರಧೀತ್ಯ 
ಪ್ರತ್ಯಾದಿಶೇ ತೇನ ಗುರೋರ್ಮಹಾಗ:


"ಒಂದು ಅಕ್ಷರವನ್ನು ಕಲಿಸಿದವನೂ ಗುರುವಾಗುತ್ತಾನೆ. ಬೌದ್ಧ ಗುರುವಿನಿಂದ ಕಲಿತು ಅವನ ಮತವನ್ನೇ ಖಂಡಿಸಿದೆ. ಅದು ಗುರುದ್ರೋಹವಲ್ಲವೇ? ಆದ್ದರಿಂದ ತುಷಾಗ್ನಿಯಲ್ಲಿ ಪ್ರಾಯೋಪವೇಶ ಮಾಡಿ ದೇಹತ್ಯಾಗ". 

ಶ್ರೀ ವಿದ್ಯಾರಣ್ಯರ ಕಾಲ ಕ್ರಿ. ಶ. 1295-1386 ಎಂಬುದಾಗಿ ನಿರ್ಣಯಿಸುತ್ತಾರೆ. ಹಾಗಿದ್ದರೆ ಈ ಕೃತಿಯು "ಸೋಮೇಶ್ವರ ಶತಕ" ಹೊರಬಂದ ಕೆಲವು ವರ್ಷಗಳಲ್ಲೇ ಬಂದಿರುವುದು. "ವರ್ಣಮಾತ್ರಂ ಕಲಿಸಿದಾತಂ ಗುರು" ಎನ್ನುವುದಕ್ಕೂ "ಏಕಾಕ್ಷರಸ್ಯಾಪಿ ಗುರು: ಪ್ರದಾತಾ" ಅನ್ನುವುದಕ್ಕೂ ಸಾಮ್ಯ ನೋಡಬಹುದು. ಇಲ್ಲಿ ಯಾರು ಯಾರಿಂದ ಪ್ರಭಾವಿತರಾದರು ಎನ್ನುವುದು ಮುಖ್ಯವಲ್ಲ. ಈಗಿನ ಕಂಪ್ಯೂಟರ್ ಯುಗದಂತೆ ಆಗ ಕೃತಿಗಳು ಸುಲಭವಾಗಿ ಎಲ್ಲರಿಗೂ ಸಿಗುತ್ತಿರಲಿಲ್ಲ. ಒಂದೇ ಅಂಶ ಅನೇಕರಿಗೆ ಬೇರೆ ಬೇರೆ ಕಾಲಘಟ್ಟದಲ್ಲಿ ಹೊಳೆಯಲೂಬಹುದು. "ಒಂದಕ್ಷರ ಕಲಿಸಿದವನನ್ನೂ ಗುರುವೆಂದು ತಿಳಿದು ಗೌರವ ಕೊಡಬೇಕು" ಎನ್ನುವುದು ನಮ್ಮ ದೇಶದಲ್ಲಿ ಒಂದು ಸಾಮಾನ್ಯ ನಿಯಮ ಆಗಿದ್ದಿತು ಅನ್ನುವುದು ಮುಖ್ಯ. 

*****

ಶ್ರೀ ಕುಮಾರಿಲ ಭಟ್ಟರು ತುಷಾಗ್ನಿಯಲ್ಲಿ ದೇಹತ್ಯಾಗ ಮಾಡಿದ್ದಕ್ಕೆ ಕಾರಣವನ್ನು ವಿವರವಾಗಿ ಮತ್ತೊಮ್ಮೆ ನೋಡೋಣ. 

ಶೀರ್ಷಿಕೆಯಲ್ಲಿ "ವರಣಮಾತ್ರಂ" ಎಂದು ಕಾಣುತ್ತದೆ. ಇದು ದೋಷವಲ್ಲ. ಬರೆದಲ್ಲಿ ಸರಿಯಾಗಿ ಕಂಡರೂ ಓಡುವೆಡೆ ಹೀಗೆ ಕೆಲವೊಮ್ಮೆ ಕಂಪ್ಯೂಟರ್ ಭಾಷೆಯಲ್ಲಿ ಆಗುತ್ತದೆ!

ಇದು 2025 ಇಸವಿಯ 100ನೇ ಲೇಖನ (ಬ್ಲಾಗ್ ಪೋಸ್ಟ್). ಈ ಕಳೆದ ಹನ್ನೊಂದು ತಿಂಗಳುಗಳು ಒಂದು ರೀತಿಯ ಪರೀಕ್ಷಾ ಕಾಲವೇ. ಹನ್ನೊಂದು ತಿಂಗಳಲ್ಲಿ ಮೂರು ಶಸ್ತ್ರ ಚಿಕಿತ್ಸೆಗಳ ನಡುವೆ ಒಂದು ನೂರು ಲೇಖನಗಳು ಹೊರಬರಲು ಸನ್ಮಿತ್ರರು ಮತ್ತು ಓದುಗರ ಪ್ರೋತ್ಸಾಹ ಹಾಗೂ ಸಹೃದಯ ಪ್ರತಿಕ್ರಿಯೆಗಳೇ ಕಾರಣ. ಕಾವ್ಯ-ಶಾಸ್ತ್ರ ರಸಾನುಭವ ನೋವನ್ನು ಮರೆಸಿ ಮನಸ್ಸಿಗೆ ಮುದವನ್ನು ಕೊಡುವುದು ಎನ್ನುವುದರ ಪ್ರತ್ಯಕ್ಷ ಅನುಭವ ಇಲ್ಲಾಯಿತು. ಈ ಯಾನದಲ್ಲಿ ಭಾಗಿಯಾದ ಎಲ್ಲರಿಗೂ ಅನಂತ ಕೃತಜ್ಞತೆಗಳು. 

Friday, November 21, 2025

ಪ್ರಶ್ನಪತ್ರಿಕೆ


ಹಿಂದಿನ ಸಂಚಿಕೆಯಲ್ಲಿ "ದೇವರ ಎಲೆ" ಅನ್ನುವ ಶೀರ್ಷಿಕೆಯಡಿ ಶ್ರೀ ಶಂಕರಾಚಾರ್ಯ ಮತ್ತು ಶ್ರೀ ಮಂಡನ ಮಿಶ್ರ ಪಂಡಿತ ಇವರಿಬ್ಬರ ನಡುವೆ ನಡೆದ ಪ್ರಶ್ಮೋತ್ತರದ ಒಂದು ಶ್ಲೋಕವನ್ನೂ, ಮಿಶ್ರರು ಕೇಳಿದ ಪ್ರತಿ ಪ್ರಶ್ನೆಯನ್ನೂ ಆಚಾರ್ಯರು ಹೇಗೆ ಬೇರೆಯದೇ ಅರ್ಥಕೊಟ್ಟು ತಿರುಗಿಸಿ ಉತ್ತರಿಸಿ, ಮಿಶ್ರರ ಮಾನಸಿಕ ಮತ್ತು ಬೌದ್ಧಿಕ ಸಮತೋಲನ ತಪ್ಪಿಸಿದರು ಅನ್ನುವುದನನ್ನೂ ನೋಡಿದೆವು. (ಈ ಸಂಚಿಕೆಯನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು). ಇದು ಕೇವಲ ಪ್ರಾರಂಭವಷ್ಟೇ. "ಶ್ರೀ ಶಂಕರ ದಿಗ್ವಿಜಯ" ಕೃತಿಯಲ್ಲಿ ಈ ಸಂದರ್ಭದಲ್ಲಿ ಮುಂದುವರೆದ ಪ್ರಶ್ನೋತ್ತರವನ್ನೂ, ನಂತರದ ಸರ್ಗಗಳಲ್ಲಿ ಬರುವ ಇನ್ನೂ ಗಹನವಾದ ಕರ್ಮ-ವೇದಾಂತಗಳ ಸಂಬಂಧಿತ ಆಳವಾದ ವಾದ-ವಿವಾದ-ಸಂವಾದ ವಿಷಯಗಳನ್ನೂ ನೋಡಬಹುದು. ಇಬ್ಬರು ಪಂಡಿತೋತ್ತಮರ ಬೌದ್ಧಿಕ ಸ್ತರದ ಸ್ವಲ್ಪ ಮಟ್ಟಿನ ಪರಿಚಯ ಇದರಿಂದ ಆಗುತ್ತದೆ. ಅವರ ಮಟ್ಟದ ಜ್ಞಾನದ ಅರಿವು ಪೂರ್ಣವಾಗಿ ಆಗಬೇಕಾದರೆ ಅನೇಕ ವರುಷಗಳ ಅಧ್ಯಯನ ಮತ್ತು ಸಿದ್ಧತೆ ಬೇಕು ಎನ್ನುವಷ್ಟು ಮಾತ್ರ ತಿಳಿಯಬಹುದು! 

*****

ಸರಿಯಾಗಿ ಪ್ರಶ್ನೆ ಕೇಳುವುದೂ ಒಂದು ಕಲೆ. ಅದಕ್ಕೆ ಹೊಂದಿದಂತೆ ಸರಿಯಾಗಿ ಉತ್ತರಿಸುವುದು ಇನ್ನೂ ಒಂದು ದೊಡ್ಡ ಕಲೆ. ಇದರ ಪರಿಚಯವನ್ನು ಭಗವದ್ಗೀತೆ ಮತ್ತು ಉಪನಿಷತ್ತುಗಳ ಅಧ್ಯಯನದಿಂದ ತಿಳಿದುಕೊಳ್ಳಬಹುದು. ಪ್ರಶ್ನೋಪನಿಷತ್ತು ಎಂದು ಜನಜನಿತವಾಗಿರುವ "ಷಟ್ ಪ್ರಶ್ನೋಪನಿಷತ್ತು" ಒಳಗೊಂಡ ಗುರು-ಶಿಷ್ಯರ ಪ್ರಶ್ನೆ-ಉತ್ತರಗಳು ಮತ್ತು ಭಗವದ್ಗೀತೆಯ ಅರ್ಜುನ-ಕೃಷ್ಣರ ಸಂವಾದಗಳು ಈ ಕಲೆಗಳ ಉತ್ತಮ ಉದಾಹರಣೆಗಳು. ತನ್ನ ಮನಸ್ಸಿನಲ್ಲಿ ಹುದುಗಿರುವ ಸಂಶಯಗಳನ್ನು ಸರಿಯಾದ ಶಬ್ದಗಳಲ್ಲಿ ವ್ಯಕಪಡಿಸಿ ಕೇಳುವುದು ಮತ್ತು ಆ ಸಂಶಯಗಳನ್ನು ನಿವಾರಿಸಿ, ಅದಕ್ಕೆ ಸಂಬಂಧಿಸಿದ ಎಲ್ಲಾ ಪದರಗಳಿಗೂ ಒಟ್ಟಿಗೆ ಉತ್ತರಿಸುವುದನ್ನು ಇವುಗಳಲ್ಲಿ ಕಾಣಬಹುದು. 

ಕೇಳಿದ ಪ್ರಶ್ನೆ ಅದಕ್ಕೆ ಉತ್ತರ ಕೊಡುವವರಿಗೆ ಸರಿಯಾಗಿ ಅರ್ಥವಾಗಬೇಕು. ನಾವು ಕೇಳಿದ್ದೊಂದು. ಉತ್ತರ ಕೊಡುವವರು ಅರ್ಥ ಮಾಡಿಕೊಂಡದ್ದು ಇನ್ನೊಂದು. ಅವರು ಉತ್ತರಿಸಿದ್ದು ಮತ್ತೊಂದು. ಕಡೆಗೆ ಅದನ್ನು ನಾವು ತಿಳಿದುಕೊಂಡಿದ್ದು ಮಗದೊಂದು. ಹೀಗಾಗಿ ಅನೇಕ ವೇಳೆ ಒಟ್ಟಾರೆ ಪರಿಸ್ಥಿತಿ ಗೋಜಲು-ಗೋಜಲಾಗಿ ತಲೆ ಚಚ್ಚಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುವುದು ನಡೆಯುತ್ತಿರುತ್ತದೆ. ವಿದ್ಯಾರ್ಥಿಗಳಿಗೆ ಪಾಠ ಹೇಳುವ ಶಿಕ್ಷಕರಿಗೆ ಇದು ಸರಿಯಾಗಿ ಗೊತ್ತಾಗಬೇಕು. 

ಅನೇಕ ವಿಶ್ವವಿದ್ಯಾಲಯಗಳಲ್ಲಿ ಉತ್ತರ ಪತ್ರಿಕೆಗಳನ್ನು ಇಬ್ಬರು ಮೌಲ್ಯಮಾಪಕರು ನೋಡಿ ಅಂಕ ಹಾಕುವ ಪದ್ಧತಿ ಇದೆ. ಈ ಎರಡು ಅಂಕಗಳ ಸರಾಸರಿ ತೆಗೆದುಕೊಳ್ಳುವುದು ಕೆಲವೆಡೆ ಉಂಟು. ಮತ್ತೆ ಕೆಲವು ಕಡೆ ಎರಡರಲ್ಲಿ ಹೆಚ್ಚಿನದನ್ನು ಒಪ್ಪಿಕೊಳ್ಳುವುದೂ ಇದೆ. ಇಷ್ಟಿದ್ದರೂ ಇಬ್ಬರು ಕೊಟ್ಟ ಅಂಕಗಳಲ್ಲಿ ತುಂಬಾ ವ್ಯತ್ಯಾಸ ಇದ್ದಾಗ ಮೂರನೆಯ ಮೌಲ್ಯಮಾಪಕರ ತಲೆಗೆ ಕಟ್ಟುವುದೂ ಉಂಟು. ಇವೆಲ್ಲ ವ್ಯವಸ್ಥೆ ಇದ್ದರೂ, ಪ್ರಶ್ನಪತ್ರಿಕೆ ಕೊಡುವವರು ಒಬ್ಬರು ಮತ್ತು ಮೌಲ್ಯ ನಿರ್ಧರಿಸುವವರು ಇನ್ನೊಬ್ಬರು ಆದಾಗ ಎಡವಟ್ಟು ಪರಿಸ್ಥಿತಿ ಉಂಟಾಗುವುದೂ ಆಗುತ್ತದೆ. ಇದರ ಪರಿಹಾರಕ್ಕಾಗಿ ಪ್ರಶ್ನಪತ್ರಿಕೆ ತಯಾರು ಮಾಡಿದವರು ಅದರ ಜೊತೆಗೆ ಒಂದು "ಮಾದರಿ ಉತ್ತರ ಪತ್ರಿಕೆ" (ಮಾಡಲ್ ಆನ್ಸರ್) ಕೂಡ ಕೊಡುವ ಪದ್ಧತಿಯೂ ಉಂಟು.  

ಶಿಕ್ಷಕರಿಗೆ ಒಂದು ಶೈಕ್ಷಣಿಕ ವರ್ಷ ಅಥವಾ ವೃತ್ತದಲ್ಲಿ ಅತ್ಯಂತ ಕಷ್ಟದ ದಿನಗಳು ಯಾವುವು? ಇದು ಶಿಕ್ಷಣ ನೀಡಿದವರಿಗೆ ಗೊತ್ತು. ಅದು ಪರೀಕ್ಷೆಯ ನಂತರ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾಲ. ಆ ದಿನಗಳಲ್ಲಿ ಶಿಕ್ಷಕರ ಬಳಿ ಮಾತಾಡುವಾಗ ಬಹಳ ಜಾಗರೂಕರಾಗಿರಬೇಕು. ಆ ಕಾಲದಲ್ಲಿ ಅನೇಕರು ಖಿನ್ನತೆಗೆ (ಡಿಪ್ರೆಷನ್) ಒಳಗಾಗಿರುತ್ತಾರೆ. ವರುಷವೆಲ್ಲ ಬಹಳ ಚೆನ್ನಾಗಿ ಪಾಠ ಹೇಳಿದ್ದೇವೆ ಎಂದು ತಮ್ಮ ಬೆನ್ನು ತಾವೇ ಚಪ್ಪರಿಸಿಕೊಂಡವರಿಗೆ ಅದು ಸತ್ಯದ ಅರಿವು ಮೂಡಿಸುವ ಕಾಲ. "ನಾನು ಹೇಳಿಕೊಟ್ಟಿದ್ದು ಇದೇ ಏನು?" ಎಂದು ಅವರಿಗೆ ಅವರೇ ಪ್ರಶಿಸಿಕೊಳ್ಳುವ ಕಾಲ ಅದು. ಮೌಲ್ಯಮಾಪನ ಕೊಠಡಿಗಳಲ್ಲಿ ಸೀಲಿಂಗ್ ಫ್ಯಾನ್ ಮತ್ತು ಹಗ್ಗಗಳು ಇರಲೇಬಾರದು ಎಂದು ಹೇಳುವುದು ಕೇವಲ ವಿನೋದಕ್ಕೆಂದು ತಿಳಿಯಬಾರದು. 

*****

ಒಂದು ವಿಷಯವನ್ನು ವಿವರಿಸುವಾಗ ಅಥವಾ ಒಂದು ಪ್ರಶ್ನೆಗೆ ಉತ್ತರ ಕೊಡುವಾಗ ಉದಾಹರಣೆಗಳನ್ನು ಕೊಡುವುದು ಸಾಮಾನ್ಯ ಪದ್ಧತಿ. ಹೀಗೆ ಕೊಡುವ ದೃಷ್ಟಾಂತಗಳನ್ನು ಆರಿಸಿಕೊಳ್ಳುವಾಗ ಎರಡು ಮೂರು ಬಾರಿ ಯೋಚಿಸಿ ನಂತರ ಅವನ್ನು ಉಪಯೋಗಿಸಬೇಕಾಗುತ್ತದೆ. ಇಲ್ಲದಿದ್ದಲ್ಲಿ ಕೇಳುಗರು ಅದರ ಪೂರ್ಣ ವಿರುದ್ಧ ಅರ್ಥ ತಿಳಿದುಕೊಳ್ಳುವ ಸಾಧ್ಯತೆ ಇರುತ್ತದೆ. ಜೊತೆಗೆ ಹೇಳುತ್ತಿರುವ ವಿಷಯವನ್ನೇ ಮರೆ ಮಾಡಿ ಚರ್ಚೆಯನ್ನು ಮತ್ತೆಲ್ಲಿಗೋ ಎಳೆದುಕೊಂಡು ಹೋಗುವ ಸಂದರ್ಭಗಳೂ ಉಂಟು.  

ಒಂದು ಹಳೆಯ ಉದಾಹರಣೆಯನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದು. "ಪಾನ ನಿರೋಧ ಚಳುವಳಿ" ಸರ್ಕಾರದ ಒಂದು ಮುಖ್ಯ ಕಾರ್ಯಕ್ರಮವಾಗಿದ್ದ ಕಾಲ. ಕೇವಲ ಕೆಲವರು ಕುಡಿದು ಅನೇಕರು ಕುಡಿಯದಿದ್ದಾಗ ಇಂತಹ ಚಳುವಳಿ ಬೇಕಿತ್ತು. ಎಲ್ಲರೂ ಕುಡಿಯುವ ಮತ್ತು ಅಲ್ಲೊಬ್ಬರು-ಇಲ್ಲೊಬ್ಬರು ಕುಡಿಯದ ಈ ದಿನಗಳಲ್ಲಿ ಇಂತಹ ಚಳುವಳಿ ತೀರಾ ಅನವಶ್ಯಕ. ಅದಕ್ಕಿಂತ ಹೆಚ್ಚಾಗಿ ಅನೇಕ ಸರಕಾರಗಳು ಕುಡಿತದ ವಸ್ತುಗಳ ಮಾರಾಟದ ಹಣದಿಂದಲೇ ನಡೆಯಬೇಕಾದ ಈಗಿನ ಸ್ಥಿತಿಯಲ್ಲಿ ಇದನ್ನು ನೆನೆಸಿಕೊಳ್ಳುವುದೂ ಒಂದು ಪಾಪದ ಕೆಲಸವೇ. 

ಕುಡಿತದಿಂದ ಆಗುವ ಕೆಟ್ಟ ಪರಿಣಾಮಗಳು ಏನೆಂದು ಹಳ್ಳಿಯ ಜನರಿಗೆ ವಿವರಿಸುವ ಕೆಲಸ ಒಬ್ಬ ಸರ್ಕಾರೀ ನೌಕರನಿಗೆ ಸಿಕ್ಕಿತು. ಅವನು ಬಹಳ ಉತ್ಸಾಹದಿಂದ ಮೊದಲ ಹಳ್ಳಿಗೆ ಹೋದ. ಎರಡು ಗಾಜಿನ ಲೋಟ, ಸ್ವಲ್ಪ ನೀರು, ಒಂದಷ್ಟು ಸಾರಾಯಿ ಮತ್ತು ಒಂದು ಸಣ್ಣ ಡಬ್ಬಿಯಲ್ಲಿ ಕೆಲವು ಹುಳುಗಳು. ಇವಿಷ್ಟು ಅವನ ಜೊತೆ ಹೊಂದಿಸಿಕೊಂಡು ಹೊರಟ. ಸಾರಾಯಿ ಕುಡಿದರೆ ಅರೋಗ್ಯ ಕೆಡುತ್ತದೆ ಎಂದು ತೋರಿಸುವುದು ಅವನ ಉದ್ದೇಶ. ಹಳ್ಳಿಯ ಜನರೆಲ್ಲಾ ನೆರೆದಿದ್ದರು. ಅಶ್ವಥ ಕಟ್ಟೆಯ ಬಳಿ ಇವನ ಭಾಷಣ. ಕಟ್ಟೆಯ ಕಲ್ಲ ಮೇಲೆ ಎಲ್ಲರಿಗೂ ಕಾಣುವಂತೆ ಎರಡು ಗಾಜಿನ ಲೋಟಗಳನ್ನೂ ಇಟ್ಟ. ಮೊದಲನೆಯದರಲ್ಲಿ ನೀರು ಹುಯ್ದ. ಎರಡನೆಯದರಲ್ಲಿ ಸ್ವಲ್ಪ ಸಾರಾಯಿ. "ಈಗ ನೋಡಿ. ಎರಡರಲ್ಲೂ ಹುಳಗಳನ್ನು ಹಾಕುತ್ತೇನೆ. ಏನಾಗುವುದು ಎಂದು ಗಮನಿಸಿ" ಎಂದ. ಎಲ್ಲರೂ ನೆಟ್ಟ ನೋಟದಲ್ಲಿ ನಿಂತರು. 

ನೀರಿನಲ್ಲಿ ಹಾಕಿದ ಹುಳಗಳು ಓಡಾಡಿಕೊಂಡಿದ್ದವು. ಸಾರಾಯಿಯಲ್ಲಿ ಹಾಕಿದ ಹುಳಗಳು ಸ್ವಲ್ಪ ಹೊತ್ತು ಒದ್ದಾಡಿದವು. ನಂತರ ಸತ್ತವು. "ನೋಡಿ. ಸಾರಾಯಿಯಲ್ಲಿ ಹಾಕಿದ ಹುಳಗಳು ಸತ್ತವು. ಇದರಿಂದ ಏನು ಕಲಿತಿರಿ?" ಎಂದು ಹಳ್ಳಿಗರನ್ನು ಕೇಳಿದ. ತಲೆತಲಾಂತರದಿಂದ ಕುಡಿತವನ್ನೇ ಉದ್ಯೋಗ ಮಾಡಿಕೊಂಡಿದ್ದ ಕುಟುಂಬದ ಮಹಾ ಕುಡುಕ ಚಕ್ರವರ್ತಿಯೊಬ್ಬ ಚೆನ್ನಾಗಿ ಕುಡಿದೇ ಅಲ್ಲಿ ಬಂದು ಕುಳಿತಿದ್ದ. "ಚೆನ್ನಾಗಿ ಗೊತ್ತಾಯ್ತು ಬುದ್ಧಿ. ಸಾರಾಯಿ ಕುಡಿಯುವುದರಿಂದ ಹೊಟ್ಟೆಯಲ್ಲಿರುವ ಹುಳುಗಳೆಲ್ಲ ಸತ್ತು ಅರೋಗ್ಯ ಚೆನ್ನಾಗಿ ಆಗುತ್ತದೆ" ಅಂದ. ಮುಂದೆ ಪಾನ ನಿರೋಧದ ಕಥೆ ಹೇಳಬೇಕಾಗಿಲ್ಲ. 
***** 

ಈಚಿನ ದಿನಗಳಲ್ಲಿ ಪ್ರಶ್ನಪತ್ರಿಕೆಗಳು ಪರೀಕ್ಷೆಗೆ ಮುಂಚೆ ಬಹಿರಂಗಪಟ್ಟು ಪರೀಕ್ಷೆಗಳು ಮುಂದೂಡಿಕೆ ಆಗುವುದು ಸರ್ವೇ ಸಾಧಾರಣ ಸಂಗತಿ. ಅನೇಕ ವಿದ್ಯಾರ್ಥಿಗಳು ಪರೀಕ್ಷೆಗೆ ಓದುವುದಕ್ಕಿಂತ ಪ್ರಶ್ನಪತ್ರಿಕೆ ಎಲ್ಲಿ ಸಿಗುವುದು ಎಂದು ತಿಳಿಯುವುದನ್ನೇ ಅಧ್ಯಯನ ಮಾಡುವುದೂ ಉಂಟು. ಇದು ಕೇವಲ ಕೆಲವರ ಹವ್ಯಾಸ ಆಗಿಲ್ಲದೇ ಒಂದು ಉದ್ಯಮವಾಗಿಯೇ ಬೆಳೆದಿದೆ. ಇಂತಹ ವಿದ್ಯಮಾನಗಳನ್ನು ತನಿಖೆ ಮಾಡಲೆಂದೇ ಕೆಲವು ಅಧಿಕಾರಿಗಳು ನಿಯುಕ್ತರಾಗಿ ಹೆಚ್ಚಿನ ಉದ್ಯೋಗ ಸೃಷ್ಟಿಯೂ ಆಗುತ್ತಿದೆ. ಪ್ರಶ್ನಪತ್ರಿಕೆಗಳು ಬಹಿರಂಗವಾಗದಂತೆ ಮಾಡಲು ಹೆಚ್ಚಿನ ಭದ್ರತೆ ವ್ಯವಸ್ಥೆ ಸಹ ಮಾಡುವುದರಿಂದ ಇನ್ನಷ್ಟು ಉದ್ಯೋಗಗಳು ತೆರೆದುಕೊಳ್ಳುತ್ತಿವೆ. ಇವುಗಳಿಂದ ದೇಶದ ಆರ್ಥಿಕತೆ ಮೇಲೆ ಆಗುತ್ತಿರುವ ಸತ್ಪರಿಣಾಮಗಳು ಮತ್ತು ಜಿ. ಡಿ. ಪಿ. ಪ್ರಮಾಣದಲ್ಲಿ ಹೆಚ್ಚಳ, ಇವನ್ನು ಅಧ್ಯಯನ ಮಾಡಿ ವರದಿ ಕೊಡಲು ಕೇಂದ್ರ ಸರ್ಕಾರ ಒಂದು ತಜ್ಞರ ಸಮಿತಿ ರಚಿಸುತ್ತಿದೆ ಎಂದು ಒಂದು ಗುಮಾನಿ. ಇಂತಹ ಸಮಿತಿಯಲ್ಲಿ ಅತ್ಯಂತ ಹೆಚ್ಚು ಪ್ರಶ್ನಪತ್ರಿಕೆ ಬಹಿರಂಗ ಪಡಿಸಿದವರನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸೇರಿಸಬೇಕೆಂದು ಚಳುವಳಿ ನಡೆಯುವ ಸಂಭವಗಳೂ ನಿಚ್ಚಳವಾಗಿ ಕಾಣಿಸುತ್ತಿವೆ. 

ಕೆಲವೊಮ್ಮೆ ಪರೀಕ್ಷೆಗಳು ಮುಗಿದ ನಂತರ ಹೀಗೆ ಬಹಿರಂಗವಾಗಿರುವ ಪ್ರಶ್ನಪತ್ರಿಕೆಗಳಲ್ಲಿ ಇರುವ ಕೆಲವು ಪ್ರಶ್ನೆಗಳ ಬಗ್ಗೆ ಬಹಿರಂಗ ಚರ್ಚೆ ಆಗಿ ಅನೇಕ ಪ್ರಶ್ನೆಗಳೇ ತಪ್ಪು ಎಂದು ಕಂಡುಬರುವುದೂ ಉಂಟು. ಇಂತಹ ಸಂದರ್ಭಗಳಲ್ಲಿ ವಿದ್ಯಾರ್ಥಿಗಳಿಗೆ ಅನ್ಯಾಯ ಆಗಬಾರದು ಅನ್ನುವ ಸಾಮೂಹಿಕ ಹಿತ ದೃಷಿಯಿಂದ ಎಲ್ಲ ವಿದ್ಯಾರ್ಥಿಗಳಿಗೂ ಆ ಪ್ರಶ್ನೆಗಳಿಗೆ ನಿಗದಿ ಪಡಿಸಿದ ಅಂಕಗಳನ್ನು "ಕೃಪಾಂಕ" (ಗ್ರೇಸ್ ಮಾರ್ಕ್ಸ್) ಎಂದು ಕೊಡುವುದುಂಟು. ಈ ಕಾರಣದಿಂದ ಪ್ರಶ್ನಪತ್ರಿಕೆಗಳಲ್ಲಿ ಹೆಚ್ಚು ಹೆಚ್ಚು ತಪ್ಪು ಪ್ರಶ್ನೆಗಳು ಕಂಡುಬರಲಿ ಎಂದು ವಿದ್ಯಾರ್ಥಿಗಳು ದೇವಾಲಯಗಳಲ್ಲಿ ಬಂದು ಪ್ರಾರ್ಥಿಸುವುದರಿಂದ ದೈವಭಕ್ತಿಯೂ ಹೆಚ್ಚುತ್ತಿದೆ ಎಂದು ವರದಿಗಳು ತಿಳಿಸುತ್ತವೆ. 

*****

ಪ್ರಶ್ನಪತ್ರಿಕೆಗಳ ಬಗ್ಗೆ ಇನ್ನಷ್ಟು ವಿಚಾರಗಳನ್ನು ಮತ್ತೊಮ್ಮೆ ಸಮಯ ಬಂದಾಗ ನೋಡೋಣ. ಅಷ್ಟರಲ್ಲಿ ಈ ವಿಷಯದಲ್ಲಿ ನಡೆಯುವ ಬೆಳವಣಿಗೆಗಳ ಬಗ್ಗೆ ಅವಶ್ಯ ಗಮನವಿಡೋಣ. 

Monday, November 17, 2025

ದೇವರ ಎಲೆ


ಹಿಂದಿನ ಒಂದು ಸಂಚಿಕೆಯಲ್ಲಿ "ಪಂಡಿತರ ಮನೆ ಎಲ್ಲಿದೆ?" ಎನ್ನುವ ಶೀರ್ಷಿಕೆಯ ಅಡಿಯಲ್ಲಿ ಶ್ರೀ ಶಂಕರಾಚಾರ್ಯರು ಮಾಹಿಷ್ಮತಿ ನಗರಕ್ಕೆ ಬಂದು ಮಂಡನ ಮಿಶ್ರ ಪಂಡಿತರ ಮನೆ ಹುಡುಕುವಾಗ ನೀರು ತರಲು ಹೊರಟಿದ್ದ ಹೆಣ್ಣು ಮಕ್ಕಳನ್ನು ಆ ಬಗ್ಗೆ ವಿಚಾರಿಸಿದ್ದು ಮತ್ತು ಅವರು ಕೊಟ್ಟ ಉತ್ತರವನ್ನು ನೋಡಿದ್ದೆವು. (ಈ ಸಂಚಿಕೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ). ಆಚಾರ್ಯರು ಅದೇ ಜಾಡಿನಲ್ಲಿ ನಡೆದು ಮಂಡನ ಮಿಶ್ರ ಪಂಡಿತರ ಮನೆ ತಲುಪಿದರು. "ಶ್ರೀ ಶಂಕರ ದಿಗ್ವಿಜಯ" ಕೃತಿಯಲ್ಲಿ ಮಿಶ್ರರ ಮನೆ ವಿಶಾಲವಾಗಿ ಒಂದು ಅರಮನೆಯಂತೆ ಇತ್ತು ಎಂದು ವರ್ಣಿತವಾಗಿದೆ. ಆಚಾರ್ಯರು ಆ ಮನೆಯ ಮುಂದೆ ಬಂದು ನಿಂತಾಗ ಮುಂಬಾಗಿಲು ಮುಚ್ಚಿತ್ತು. ಅಲ್ಲಿ ಕಂಡ ಲಕ್ಷಣಗಳಿಂದ ಅಂದು ಆ ಮನೆಯಲ್ಲಿ ಶ್ರಾದ್ಧ (ಪಿತೃಕಾರ್ಯ) ನಡೆಯುತ್ತಿರುವುದಾಗಿ ಆಚಾರ್ಯರು ತಿಳಿದರು. 

ಶ್ರಾದ್ಧ ನಡೆಯುವ ದಿನ ಬೆಳಗ್ಗೆ ಪ್ರತಿದಿನದಂತೆ ಆ ಮನೆಯ ಮುಂದೆ ರಂಗೋಲಿ ಹಾಕುವುದಿಲ್ಲ. ಅಂದು ಬಂದ ಅಭ್ಯಾಗತರನ್ನು ಸ್ವಾಗತಿಸಿ, ಮನೆಯ ಹೆಬ್ಬಾಗಿಲ ಮುಂದೆ ಕಾಲು ತೊಳೆದು, ನಂತರ ಮನೆಯ ಒಳಗೆ ಕರೆದುಕೊಂಡು ಹೋಗಿರುವ ಲಕ್ಷಣಗಳು ಕಾಣಿಸುತ್ತವೆ. ಇವನ್ನು ಕಂಡ ಅತಿಥಿಗಳು ಮನೆಯನ್ನು ಪ್ರವೇಶಿಸುವುದಿಲ್ಲ. ಗೃಹಸ್ಥರಿಂದ ಆಹ್ವಾನ ಪಡೆದು ಬಂದವರಿಗೆ "ಅಭ್ಯಾಗತರು" ಎಂದೂ, ಆಹ್ವಾನವಿಲ್ಲದೆ ಬಂದವರನ್ನು "ಅತಿಥಿಗಳು" ಎಂದೂ ನಿರ್ದೇಶಿಸುವುದು ಕ್ರಮ. (ಇದರ ಬಗ್ಗೆ ಹೆಚ್ಚು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ ಓದಿ). ಶ್ರಾದ್ಧ ಕಾರ್ಯ ಮುಗಿದ ನಂತರ ಮನೆಯ ಮುಂದೆ ರಂಗೋಲಿ ಹಾಕುತ್ತಾರೆ. ಅದಾದ ನಂತರ ಬೇರೆಯವರು ಆ ಮನೆಯೊಳಗೆ ಪ್ರವೇಶ ಮಾಡಲು ಅಭ್ಯಂತರವಿಲ್ಲ. 

ಆಚಾರ್ಯರು ತಾವು ಬಂದ ಕೆಲಸವನ್ನು ಮುಂದೆ ಹಾಕಲು ಇಷ್ಟಪಡಲಿಲ್ಲ. ವಾಯುಮಾರ್ಗದಿಂದ ಮನೆಯನ್ನು ಪ್ರವೇಶಿಸಿದರು. (ಆ ಮನೆ ವಿಶಾಲವಾಗಿದ್ದು ತೊಟ್ಟಿಯ ಮನೆಯಾಗಿತ್ತು. ಮನೆಯ ಹೊರಗಡೆ ಇದ್ದ ದೊಡ್ಡ ಮರವೊಂದನ್ನು ಹತ್ತಿ ಮನೆಯ ಕಡೆಗೆ ಬಾಗಿರುವ ಕೊಂಬೆಯ ಮೂಲಕ ಒಳಗಡೆ ಇಳಿದರು ಎಂದು ಕೆಲವರು ಹೇಳುತ್ತಾರೆ. ಯೋಗಶಕ್ತಿಯಿಂದ ಅಲ್ಲಿ ತಲುಪಿದರು ಎಂದೂ ಅಭಿಪ್ರಾಯವಿದೆ). ಅಂಗಳದಲ್ಲಿ ಇಳಿದು ಅಭ್ಯಾಗತರಾದ ಜೈಮಿನಿ-ವ್ಯಾಸರನ್ನು ಸತ್ಕರಿಸುತ್ತಿದ್ದ ಮಂಡನ ಮಿಶ್ರರ ಎದುರು ನಿಂತರು!
*****

ತಾವು ಶ್ರದ್ದೆಯಿಂದ ಮಾಡುತ್ತಿದ್ದ ಪಿರ್ತುಕಾರ್ಯದ ಮಧ್ಯೆ ಏಕಾಏಕಿಯಾಗಿ ಬಂದು ನಿಂತ ಯತಿಯೊಬ್ಬರನ್ನು ಕಂಡು ಮಂಡನ ಮಿಶ್ರರಿಗೆ ಆಶ್ಚರ್ಯವೂ, ಕೋಪವೂ ಒಟ್ಟಿಗೆ ಆದವು. ಶ್ರಾದ್ಧದ ದಿನ ಕೋಪ ಮಾಡಿಕೊಳ್ಳಬಾರದು ಎಂದು ನಿಯಮ. (ಬೇರೆ ದಿನ ಕೋಪ ಮಾಡಿಕೊಳ್ಳಬಹುದು ಎಂದು ಅರ್ಥವಲ್ಲ. ಎಂದೂ ಕೋಪ ಮಾಡಿಕೊಳ್ಳಬಾರದು. ಶ್ರಾದ್ಧದ ದಿನವಂತೂ ಸರ್ವಥಾ ಕೂಡದು ಎಂದು ತಾತ್ಪರ್ಯ). ಆಚಾರ್ಯರು, ಜೈಮಿನಿ-ವ್ಯಾಸರು ಪರಸ್ಪರ ವಂದಿಸಿದರು. ಆಚಾರ್ಯರನ್ನು ಉದ್ದೇಶಿಸಿ ಮಂಡನ ಮಿಶ್ರರು ಕೆಲವು ಪ್ರಶ್ನೆಗಳನ್ನು ಕೇಳಿದರು. ಆಚಾರ್ಯರು ಉತ್ತರಿಸಿದರು. ಪರಸ್ಪರ ದೀರ್ಘ ಸಂವಾದವೇ ನಡೆಯಿತು. 

ವಾದದ ಸಮಯದಲ್ಲಿ ವಾದಿ-ಪ್ರತಿವಾದಿಗಳು ಒಬ್ಬರು ಇನ್ನೊಬ್ಬರ ಮಾನಸಿಕ ಮತ್ತು ಬೌದ್ಧಿಕ ಸಮತೋಲನವನ್ನು ತಪ್ಪಿಸಿ ಇಕ್ಕಟ್ಟಿಗೆ ಸಿಲುಕಿಸುವುದು ಒಂದು ರೀತಿಯ ತಂತ್ರ. ಆಗ ಎದುರಾಳಿ ತಪ್ಪು ಮಾಡುವ ಸಾಧ್ಯತೆ ಹೆಚ್ಚು. (ಅನೇಕ ಕ್ರೀಡೆಗಳಲ್ಲೂ ಕೆಲವು ಆಟಗಾರರು ಈ ತಂತ್ರ ಉಪಯೋಗಿಸುವುದನ್ನು ನಾವು ನೋಡಿದ್ದೇವೆ). ಆಚಾರ್ಯರು ಇದೇ ರೀತಿಯ ತಂತ್ರವನ್ನು ಉಪಯೋಗಿಸಿದರು. ಮಿಶ್ರರ ಪ್ರತಿ ಪ್ರಶ್ನೆಗೂ ಇನ್ನೊಂದು ಅರ್ಥ ತೆಗೆದು, ಅದಕ್ಕೆ ಚಮತ್ಕಾರಿಕವಾದ ಉತ್ತರ ಕೊಟ್ಟು ಅವರ ಸಮತೋಲನವನ್ನು ಕೆದಕುತ್ತಾ ಹೋದರು. ಇದರಿಂದ ಇನ್ನಷ್ಟು ಕೋಪಗೊಂಡ ಮಿಶ್ರರು ಕೆಲವು ಅಪಶಬ್ದಗಳ ಪ್ರಯೋಗ ಮಾಡಬೇಕಾಯಿತು. 

ಈ ಸಂದರ್ಭದಲ್ಲಿ ಮಿಶ್ರರು ಮತ್ತು ಆಚಾರ್ಯರ ನಡುವೆ ನಡೆದ ಸಂವಾದ ಬಹಳ ಸೊಗಸಾಗಿದೆ. ತರ್ಕ ಮತ್ತು ಸಂಸ್ಕೃತ ಕಲಿಯುತ್ತಿರುವ ವಿದ್ಯಾರ್ಥಿಗಳು ಇದನ್ನು ಅವಶ್ಯ ಗಮನಿಸಬೇಕು. ಪ್ರತಿ ಪದಕ್ಕೂ, ಪ್ರತಿ ಪ್ರಶ್ನೆಗೂ ಬೇರೆ ಅರ್ಥ ಅನುಸಂಧಾನ ಮಾಡಿ ಆಚಾರ್ಯರು ಉತ್ತರಿಸುತ್ತಾ ಹೋದರು. ಕಡೆಗೆ ಇಬ್ಬರ ನಡುವಿನ ಮಾತುಗಳು ದಿಕ್ಕು ತಪ್ಪಿ ಎಲ್ಲೆಲ್ಲಿಗೋ ಹೋಯಿತು. 

*****
ಈ ಸಂದರ್ಭದ "ಶ್ರೀ ಶಂಕರ ದಿಗ್ವಿಜಯ" ಕೃತಿಯ ಒಂದು ಶ್ಲೋಕವನ್ನು ನೋಡಬಹುದು. ಅದು ಹೀಗಿದೆ:

ಕುತೋ ಮುಂಡೀ ಗಲಾನ್ಮುಂಡೀ 
ಪಂಥಾಸ್ತೇ ಪೃಚ್ಛತಾ ಮಯಾ 
ಕಿಮಾಹ ಪಂಥಾ ತ್ವನ್ಮಾತಾ 
ಮುಂಡೇತ್ಯಾಹ ತಥೈವಹಿ 

ಮಿಶ್ರರು "ಕುತೋಮುಂಡೀ?" ಎಂದು ಕೇಳಿದರು. "ತಲೆ ಬೋಳಿಸಿಕೊಂಡಿರುವ ಯತಿಯೇ, ಎಲ್ಲಿಂದ ಬಂದೆ?" ಎಂದು ಪ್ರಶ್ನೆ. ಇದಕ್ಕೆ ಆಚಾರ್ಯರು "ಎಲ್ಲಿಂದ ಬೋಳಿಸಿದೆ?" ಎಂದು ಅರ್ಥಮಾಡಿ "ಗಲಾನ್ಮುಂಡೀ", ಅಂದರೆ "ಕುತ್ತಿಗೆಯಿಂದ ಮೇಲೆ ಬೋಳಿಸಿದೆ", ಎಂದು ಉತ್ತರ ಕೊಟ್ಟರು. 

ಇದರಿಂದ ಕೆರಳಿದ ಮಿಶ್ರರು "ಪಂಥಾಸ್ತೇ ಪೃಚ್ಛತಾ ಮಯಾ" ಎಂದರು. "ನಾನು ಕೇಳಿದ್ದು ದಾರಿಯನ್ನು" ಎಂದು ಪ್ರಶ್ನೆ. ಇದಕ್ಕೆ ಆಚಾರ್ಯರು "ದಾರಿಯನ್ನು ಕೇಳಿದೆ" ಎಂದು ಅರ್ಥಮಾಡಿ "ಕಿಮಾಹ ಪಂಥಾ?", "ದಾರಿಯನ್ನು ಕೇಳಿದೆಯಲ್ಲಾ, ಅದು ಏನು ಹೇಳಿತು?", ಎಂದು ಪುನಃಪ್ರಶ್ನೆ ಮಾಡಿದರು. 

ಮಿಶ್ರರು ಮತ್ತಷ್ಟು ಕೋಪಗೊಂಡರು. "ತ್ವನ್ಮಾತಾ ಮುಂಡೇತ್ಯಾಹ", ಅಂದರೆ "ನಿನ್ನ ತಾಯಿ ವಿಧವೆ ಎಂದಿತು" ಎಂದು ಹೇಳಿದರು. ಆಚಾರ್ಯರು "ತಥೈವಹಿ", ಅಂದರೆ "ಹಾಗಿದ್ದರೆ ಸರಿ" ಅಂದರು. ("ದಾರಿಯನ್ನು ಪ್ರಶ್ನೆ ಕೇಳಿದ್ದು ನೀನು. ಅದು ಕೊಟ್ಟ ಉತ್ತರವೂ ನಿನಗೇ ಸೇರಿದ್ದು. ಅಂದರೆ ಅದಕ್ಕೂ ನನಗೂ ಸಂಬಂಧವಿಲ್ಲ" ಎಂದು ಅರ್ಥ).  

ಪ್ರಶ್ನೋತ್ತರ ಎಲ್ಲಿಂದ ಎಲ್ಲಿಗೋ ಹೋಯಿತು ಎಂದು ಮತ್ತೆ ಹೇಳಬೇಕಾಗಿಲ್ಲ. ಹೀಗೇ ಸಂಭಾಷಣೆ ಮುಂದುವರೆಯಿತು. 

*****

ಇದೆಲ್ಲವನ್ನೂ ಜೈಮಿನಿ-ವ್ಯಾಸರು ನೋಡುತ್ತಿದ್ದರು. ಈಗ ವ್ಯಾಸರು ಮಧ್ಯೆ ಪ್ರವೇಶಿಸಿದರು. 

"ಮಿಶ್ರರೇ, ಬಂದಿರುವವರು ಯತಿಗಳು. ಬಂದಿರುವುದು ಶ್ರಾದ್ಧಕಾಲ. ಹೀಗಿರುವಾಗ ಅವರೊಡನೆ ಹೀಗೆ ಸಂವಾದ ಸಲ್ಲದು. ಬಂದಿರುವುದು "ಶ್ರಾದ್ಧ ಸಂರಕ್ಷಕನಾದ ಶ್ರೀ ಮಹಾವಿಷ್ಣು" ಎಂದು ತಿಳಿದು ಅವರನ್ನು ಸತ್ಕರಿಸಿರಿ" ಎಂದರು. 

ಮಿಶ್ರರಿಗೆ ತಮ್ಮ ತಪ್ಪಿನ ಅರಿವಾಯಿತು. ತಕ್ಷಣ ಆಚಾರ್ಯರನ್ನು "ಭಿಕ್ಷಾ ಸ್ವೀಕಾರ" ಮಾಡಬೇಕೆಂದು ಕೋರಿದರು. ಆಚಾರ್ಯರು "ನನಗೆ ವಾದಭಿಕ್ಷೆ ಬೇಕು. ಅನ್ನದ ಭಿಕ್ಷೆ ಅಲ್ಲ" ಅಂದರು. ಮಿಶ್ರರು "ತಮ್ಮೊಡನೆ ವಾದ ಮಾಡುವುದು ಒಂದು ಭಾಗ್ಯವೇ. ಆದರೆ ಇಂದು ಶ್ರಾದ್ಧ ಕಾಲ. ಇಂದು ಈ ಭಿಕ್ಷಾ ಸ್ವೀಕರಿಸಿ. ವಾದ ನಾಳೆ ನಡೆಯಬಹುದು" ಎಂದರು. ಆಚಾರ್ಯರು ಒಪ್ಪಿದರು. 

ಆಚಾರ್ಯರಿಗೆ ಮತ್ತೊಂದು ಎಲೆಯಲ್ಲಿ ಬಡಿಸಿ ಭಿಕ್ಷಾಸ್ವೀಕಾರ ಆಯಿತು. ಜೈಮಿನಿ-ವ್ಯಾಸರನ್ನು ಕೂಡಿಸಿಕೊಂಡು ಶ್ರಾದ್ಧ ಕರ್ಮವೂ ನಡೆಯಿತು. ಹೀಗೆ ಮಿಶ್ರರು "ಯತಿಭಿಕ್ಷಾ" ಮತ್ತು "ಶ್ರಾದ್ಹಕಾರ್ಯ" ಎರಡನ್ನೂ ನಡೆಸಿದರು. 

ಮಾರನೆಯ ದಿನದಿಂದ ನಡೆದ ಐತಿಹಾಸಿಕ ವಾದದ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಎಂಟು ದಿನಗಳ ಅಖಂಡ ವಾದದಲ್ಲಿ ಸೋತ ಮಂಡನ ಮಿಶ್ರರು ಆಚಾರ್ಯರಿಂದ ಸನ್ಯಾಸ ಸ್ವೀಕರಿಸಿ "ಶ್ರೀ ಸುರೇಶ್ವರಾಚಾರ್ಯ" ಎಂದು ಪ್ರಸಿದ್ಧರಾದರು. 

*****

ಕಾಶ್ಮೀರದ ರಾಜಧಾನಿ ಶ್ರೀನಗರ ಪಟ್ಟಣದ ಹೊರಭಾಗದಲ್ಲಿ "ಶಂಕರಾಚಾರ್ಯ ದೇವಾಲಯ" ಎಂದು ಹೆಸರಿನ ಸಣ್ಣ ಬೆಟ್ಟ ಇದೆ. ಅಲ್ಲಿ ಒಂದು ಶಿವನ ದೇವಾಲಯವಿದೆ. ಅದರ ಗರ್ಭಗುಡಿಯ ಕೆಳಭಾಗದಲ್ಲಿ ಒಂದು ಗುಹೆಯಿದೆ. ಶ್ರೀ ಶಂಕರಾಚಾರ್ಯರು ಈ ಗುಹೆಯಲ್ಲಿ ವಾಸಿಸಿ ತಪಸ್ಸು ಮಾಡಿದರೆಂದು ಹೇಳುತ್ತಾರೆ. (ಹೆಚ್ಚಿನ ವಿವರಗಳಿಗೆ ಇಲ್ಲಿ ಕ್ಲಿಕ್ಈ ಮಾಡಿ ಓದಬಹುದು). ಬೆಟ್ಟದ ದೇವಾಲಯದಿಂದ ನೋಡಿದರೆ ಒಂದು ಕಡೆ "ದಾಲ್ ಲೇಕ್" ಸರೋವರ ಕಾಣುತ್ತದೆ. ಅದರ ಬಳಿ "ಸುರೇಶ್ವರಿ" ಎನ್ನುವ ಹೆಸರಿನ ದೇವಿಯ ದೇವಾಲಯವೊಂದು ಇತ್ತಂತೆ. ಈಗ ಇಲ್ಲ. "ಕಾಶ್ಮೀರಪುರವಾಸಿನಿ" ಶಾರದೆಯನ್ನು ನಮ್ಮ ಕರ್ನಾಟಕಕ್ಕೆ ಕರೆತಂದು ಶೃಂಗೇರಿಯಲ್ಲಿ ನೆಲೆಯಾಗುವಂತೆ ಮಾಡಿದ ಮಹಾನುಭಾವರು ಶ್ರೀ ಶಂಕರಾಚಾರ್ಯರು. ಹಾಗೆಯೇ ಶ್ರೀ ಸುರೇಶ್ವರಾಚಾರ್ಯರನ್ನು ಶೃಂಗೇರಿ ಪೀಠದ ಮೊದಲ ಮಠಾಧೀಶರಾಗಿ ನೇಮಿಸಿದರು. 

ಮಂಡನ ಮಿಶ್ರರ ಮನೆಯಲ್ಲಿ ನಡೆದ ಈ ಘಟನೆ ನಂತರ ಶ್ರಾದ್ಧಗಳಲ್ಲಿ "ಶ್ರಾದ್ಧ ಸಂರಕ್ಷಕ ಶ್ರೀ ಮಹಾವಿಷ್ಣು" ಬಂದಿದ್ದಾನೆ ಎಂದು ಭಾವಿಸಿ "ದೇವರ ಎಲೆ" ಹಾಕುವ ಸಂಪ್ರದಾಯ ನಡೆದು ಬಂದಿದೆ. (ದ್ವೈತಿಗಳಲ್ಲಿ ಈ ಸಂಪ್ರದಾಯ ಇಲ್ಲ). ಜ್ಞಾನವೃದ್ಧರು ಮತ್ತು ವಯೋವೃದ್ಧರೊಬ್ಬರನ್ನು ಕರೆದು ಈ ಎಲೆಯಲ್ಲಿ ಭೋಜನಕ್ಕೆ ಕೂಡಿಸುತ್ತಿದ್ದರು. ಅಥವಾ ಆ ಸಮಯದಲ್ಲಿ ಅನಿರೀಕ್ಷಿತವಾಗಿ ಬಂದ ಅತಿಥಿಗೆ ಅಲ್ಲಿ ಅವಕಾಶ ಇತ್ತು. ಯಾರೂ ಬಾರದಿದ್ದರೆ ನಂತರ ಮನೆಯ ಹಿರಿಯರು ಅಥವಾ ಶ್ರಾದ್ಧ ಮಾಡುವ ಕರ್ತೃಗಳಲ್ಲಿ ಒಬ್ಬರು ಅಲ್ಲಿ ಭೋಜನ ಮಾಡುತ್ತಿದ್ದರು. 

"ನಾಲ್ಕು ಮಾತುಗಳು" ಅನ್ನುವ ಸಂಚಿಕೆಯಲ್ಲಿ ಶ್ರಾದ್ಧ ಕರ್ಮಗಳಲ್ಲಿ ದೌಹಿತ್ರರ ಆಹ್ವಾನದ ವಿಷಯ ಬಂದಿದೆ. (ವಿವರಗಳನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು). ಮಿತ್ರರೊಬ್ಬರು ದೌಹಿತ್ರರು ಹೆಣ್ಣಾಗಿದ್ದರೆ ಈ ಎಲೆಯಲ್ಲಿ ಭೋಜನ ಮಾಡಲು ಕೂಡಿಸುತ್ತಾರೆ ಎಂದು ತಿಳಿಸಿದ್ದಾರೆ. ಅವರವರ ಮನೆಯ ಸಂಪ್ರದಾಯದಂತೆ ಇದು ನಡೆಯುತ್ತದೆ. 

ಹೀಗೆ ನಡೆದುಬಂದಿರುವ "ದೇವರ ಎಲೆ" ಒಂದು ಐತಿಹಾಸಿಕ ಮತ್ತು ಧಾರ್ಮಿಕ ಹಿನ್ನೆಲೆ ಇರುವ, ಬಹಳ ಗೌರವದಿಂದ ಕೂಡಿರುವ ಆಚರಣೆ. 

Sunday, November 16, 2025

ಪಂಡಿತರ ಮನೆ ಎಲ್ಲಿದೆ?


ಪ್ರಯಾಗ ನಗರದಿಂದ ಹೊರಟ ಆಚಾರ್ಯರು ಆಗ ತಾನೇ ಮಾಹಿಷ್ಮತಿ ನಗರಕ್ಕೆ ಬಂದು ತಲುಪಿದ್ದರು. ವ್ಯರ್ಥವಾಗಿ ಕಾಲ ಹರಣ ಮಾಡುವ ಪ್ರವೃತ್ತಿ ಅವರದ್ದಲ್ಲ. ಅವರಿಗೆ ಆಗ ಸುಮಾರು ಹದಿನೇಳು-ಹದಿನೆಂಟನೆಯ ವಯಸ್ಸು. ಆ ವಯಸ್ಸಿನ ಬಹುತೇಕ ಯುವಕರಿಗೆ ವಿದ್ಯಾಭ್ಯಾಸವೂ ಮುಗಿದಿರುವುದಿಲ್ಲ. ಜೀವನದಲ್ಲಿ ತಮ್ಮ ಗುರಿ ಏನು ಎನ್ನುವುದೇ ಗೊತ್ತಿರುವುದಿಲ್ಲ. ಆದ ಕಾರಣ ಗುರಿ ಸಾಧನೆಯ ವಿಷಯವಂತೂ ಬಲು ಬಲು ದೂರವೇ. ಆಚಾರ್ಯರಾದರೋ ತಮ್ಮ ಎಂಟನೆಯ ವಯಸ್ಸಿನಲ್ಲಿಯೇ ನಾಲ್ಕು ವೇದಗಳನ್ನು ಕಲಿತು ವಿದ್ವಾಂಸರೆಂದು ಹೆಸರು ಪಡೆದಿದ್ದರಂತೆ. ಹದಿನಾರನೆಯ ವಯಸ್ಸಿಗೇ ಭಾಷ್ಯಗಳನ್ನೂ, ಸ್ತೋತ್ರ ಕಾವ್ಯಗಳನ್ನೂ ರಚಿಸಿದ್ದ ಹಿರಿಮೆ ಅವರದ್ದು. 

ಹುಟ್ಟಿದ್ದು ದಕ್ಷಿಣ ದೇಶದ ಒಂದು ಸಣ್ಣ ಊರಿನಲ್ಲಿ. ಈ ವೇಳೆಗಾಗಲೇ ಅನೇಕ ಘನ ವಿದ್ವಾಂಸರನ್ನು ವಾದಗಳಲ್ಲಿ ಜಯಿಸಿ, ದೇಶವೆಲ್ಲ ಸುತ್ತಿ, ಕಾಶಿಯವರೆಗೂ ಬಂದು ತಮ್ಮ ವಿದ್ವತ್ತಿನ, ಸಾಧನೆಯ ಪರಿಚಯ ಮಾಡಿಕೊಟ್ಟಿದ್ದವರು. ಅನೇಕ ಮಂದಿ ಶಿಷ್ಯರನ್ನು ಸಂಪಾದಿಸಿದ್ದವರು. ತಮ್ಮ ಗುರಿ ಸಾಧನೆಯ ಮುಂದಿನ ಹೆಜ್ಜೆಯಾಗಿ ಈಗ ತಕ್ಷಣ ಮಾಹಿಷ್ಮತಿಯ ಪ್ರಸಿದ್ಧ ಪಂಡಿತರೂ, ಕರ್ಮಠರೂ ಆದ ಮಂಡನ ಮಿಶ್ರರನ್ನು ಕಂಡು ಅವರನ್ನು ವಾದಕ್ಕೆ ಆಹ್ವಾನಿಸಲು ಹೊರಟಿದ್ದರು. 

ಅದು ವೈದಿಕ ಧರ್ಮ ಅನುಸರಿಸುವವರಿಗೆ ಬಹಳ ಕಠಿಣ ಪರಿಸ್ಥಿತಿಯ ಕಾಲ. ಬೌದ್ಧ ಧರ್ಮ ಎಲ್ಲೆಲ್ಲೂ ಹರಡಿ ವಿಜೃಂಭಿಸುತ್ತಿದ್ದ ಸಮಯ. ಪ್ರಯಾಗದ ಖ್ಯಾತ ಪಂಡಿತರಾದ ಕುಮಾರಿಲ ಭಟ್ಟರು ಬೌದ್ಧ ಧರ್ಮದ ಸೂಕ್ಷ್ಮಗಳನ್ನು ತಿಳಿದುಕೊಳ್ಳದ ಹೊರತು ಬೌದ್ಧ ಪಂಡಿತರನ್ನು ವಾದಗಳಲ್ಲಿ ಸೋಲಿಸುವುದು ಸುಲಭ ಸಾಧ್ಯವಲ್ಲ ಎಂದು ಮನಗಂಡು, ಮಾರುವೇಷದಲ್ಲಿ ಅವರ ವಿದ್ಯಾಲಯವನ್ನೇ ಸೇರಿ ಎಲ್ಲಾ ಸೂಕ್ಷ್ಮಗಳನ್ನೂ ತಿಳಿದರು. ನಂತರ ಅದನ್ನು ಖಂಡನೆಮಾಡಿ ಕಡೆಗೆ ತುಷಾಗ್ನಿ (ಭತ್ತದ ಹೊಟ್ಟು ಉರಿಯುವ ಬೆಂಕಿ) ಪ್ರವೇಶಿಸಿದರು. ಆಚಾರ್ಯರು ಅವರನ್ನು ಕಾಣಲು ಹೋಗುವ ವೇಳೆಗೆ ಅವರಾಗಲೇ ಬೆಂಕಿಯಲ್ಲಿ ಬೇಯುತ್ತಿದ್ದರು. 

ಕುಮಾರಿಲ ಭಟ್ಟರು ಆಚಾರ್ಯರನ್ನು ಮಂಡನ ಮಿಶ್ರರನ್ನು ವಾದಕ್ಕೆ ಆಹ್ವಾನಿಸುವಂತೆ ತಿಳಿಸಿ ತಮ್ಮ ಜೀವನ ಮುಗಿಸಿದರು. ಆಚಾರ್ಯರು ಮಂಡನ ಮಿಶ್ರ ಪಂಡಿತರು ಆಗ ವಾಸವಿದ್ದ ಮಾಹಿಷ್ಮತಿ ನಗರಕ್ಕೆ ಈ ಕಾರಣದಿಂದ ಬಂದಿದ್ದರು. ಅವರಿಗೆ ಮಂಡನ ಪಂಡಿತರ ಮನೆ ಸೇರಬೇಕಾಗಿತ್ತು. ಅದಕ್ಕಾಗಿ ಮಂಡನ ಪಂಡಿತರ ಮನೆ ಎಲ್ಲಿದೆ ಎಂದು ಯಾರನ್ನಾದರೂ ಕೇಳಲು ನೋಡುತ್ತಿದ್ದರು. ಆಗ ಮಧ್ಯಾನ್ಹದ ಸಮಯ.  

ಆಚಾರ್ಯರು ತಮ್ಮ ದಾರಿಯಲ್ಲಿ ಎದುರಿನಿಂದ ನೀರು ತರಲು ಬರುತ್ತಿದ್ದ ಕೆಲವು ಹೆಣ್ಣು ಮಕ್ಕಳನ್ನು ಕಂಡರು. ಅವರನ್ನು "ಮಂಡನ ಪಂಡಿತರ ಮನೆ ಎಲ್ಲಿದೆ?" ಎಂದು ಕೇಳಿದರು. 

*****

ಅನೇಕ ಪ್ರಾಚೀನ ನಗರಗಳು ಈಗಲೂ ಜೀವತುಂಬಿ ಧಾರ್ಮಿಕ, ಸಾಂಸ್ಕೃತಿಕ ಮತ್ತು ವಿದ್ಯಾ ಕೇಂದ್ರಗಳಾಗಿ ಕಾಣಸಿಗುತ್ತವೆ. ಕಾಶಿ, ಪ್ರಯಾಗ (ಅಲಹಾಬಾದ್), ಅಯೋಧ್ಯಾ, ದ್ವಾರಕಾ, ಉಜ್ಜಯನಿ ಮುಂತಾದುವು ಕೆಲವು ಉದಾಹರಣೆಗಳು. ಮಾಹಿಷ್ಮತಿಯೂ ಹಿಂದೆ ಇಂತಹ ಒಂದು ನಗರವಾಗಿತ್ತು. ನರ್ಮದಾ ನದಿಯ ದ್ವೀಪವೊಂದರಲ್ಲಿ ಈ ಪಟ್ಟಣ ಇತ್ತಂತೆ. ಕಾವೇರಿ ನದಿಯು ಎರಡು ಭಾಗವಾಗಿ ಶ್ರೀರಂಗಪಟ್ಟಣ ದ್ವೀಪ ಇರುವಂತೆ. 

ಸುಪ್ರಸಿದ್ಧನಾದ ಮಾಂಧಾತ ಚಕ್ರವರ್ತಿಯ ಮಗ ಮುಚುಕುಂದ ಮಹಾರಾಜನು ಈ ನಗರದ ಕಾರಣ ಕರ್ತನಂತೆ. ಬಹಳ ಕಾಲ "ಹೈಹಯ" ಎಂಬ ಹೆಸರಿನ ರಾಜವಂಶದವರ ರಾಜಧಾನಿಯಾಗಿತ್ತು. ಕಾರ್ತಿವೀರ್ಯಾರ್ಜುನನು ಈ ಮಾಹಿಷ್ಮತಿಯ ರಾಜನಾಗಿದ್ದು ಶ್ರೀ ಪರಶುರಾಮರಿಂದ ಹತನಾದನು ಎಂದು ತಿಳಿದುಬರುತ್ತದೆ. ಈಗ ಈ ನಗರವಿಲ್ಲ. ಅನೇಕ ಭೌತಿಕ ಕಾರಣಗಳಿಂದ ಕಣ್ಮರೆಯಾದ ನಗರಗಳಲ್ಲಿ ಮಾಹಿಷ್ಮತಿಯೂ ಒಂದು. (ಈಚಿನ ಪ್ರಸಿದ್ಧ ಚಲನಚಿತ್ರ "ಬಾಹುಬಲಿ" ಮಾಹಿಷ್ಮತಿ ಎನ್ನುವ ನಗರದ ಕಥೆ ಎಂದು ಈ ಚಿತ್ರ ನೋಡಿರುವವರು ನೆನಪಿಸಿಕೊಳ್ಳಬಹುದು). 

ನರ್ಮದೆಯು ನಾವು ಪ್ರತಿದಿನ ನೆನೆಸಿಕೊಳ್ಳುವ ಒಂದು ಜೀವನದಿ. "ಗಂಗೇಚ ಯಮುನೇಚೈವ ಗೋದಾವರಿ ಸರಸ್ವತಿ, ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂಕುರು" ಎಂದು ಕಲಶ ಸ್ಥಾಪನೆ ಸಂದರ್ಭಗಳಲ್ಲಿ ಆಹ್ವಾನಿಸುತ್ತೇವೆ. ನಮ್ಮ ದೇಶದಲ್ಲಿ ಪೂರ್ವದಿಂದ ಹರಿದು ಪಶ್ಚಿಮ ಸಮುದ್ರ ಸೇರುವ ಅತ್ಯಂತ ದೊಡ್ಡ ನದಿ ಇದು. ಮಧ್ಯ ಪ್ರದೇಶ ಮತ್ತು ಗುಜರಾತು ರಾಜ್ಯಗಳ ಅನೇಕ ಎಕರೆ ಪ್ರದೇಶಗಳಿಗೆ ನೀರಾವರಿ ಮತ್ತು ಕುಡಿಯುವ ನೀರಿನ ಸ್ರೋತ ಈ ನದಿ. ಈಚಿನ "ಸರ್ದಾರ್ ಸರೋವರ್ ಡ್ಯಾಮ್" ಗುಜರಾತಿನ ಬಹುತೇಕ ಮರುಭೂಮಿಗೂ ಜೀವ ಕೊಟ್ಟಿರುವ ಸಂಗತಿ ಎಲ್ಲರಿಗೂ ಗೊತ್ತು. 

ಆಚಾರ್ಯ ಶಂಕರರಿಗೂ ನರ್ಮದೆಗೂ ಒಂದು ವಿಶೇಷ ನಂಟು. ದಕ್ಷಿಣದ ಕೇರಳದಲ್ಲಿ ಹುಟ್ಟಿದ ಅವರು ಸನ್ಯಾಸ ಸ್ವೀಕರಿಸಲು ಗುರುವನ್ನು ಹುಡುಕಿಕೊಂಡು ಹೊರಟಾಗ ಅವರಿಗೆ ಗುರುಗಳಾದ ಶ್ರೀ ಗೋವಿಂದ ಭಗವತ್ಪಾದರು ಸಿಕ್ಕಿದುದು ಈ ನರ್ಮದೆಯ ತೀರದಲ್ಲೇ. ಶ್ರೀ ಗೌಡಪಾದಾಚಾರ್ಯರ ಶಿಷ್ಯರಾದ ಶ್ರೀ ಗೋವಿಂದ ಭಗವತ್ಪಾದರು ತಮ್ಮನ್ನು ಹುಡುಕಿಕೊಂಡು ಬಂದ ಈ ಶಿಷ್ಯನಿಗೆ ಸನ್ಯಾಸ ಕೊಟ್ಟು ಶ್ರೀ ಶಂಕರಾಚಾರ್ಯ ಎಂದು ಹೆಸರು ಕೊಟ್ಟರು. ಅಲ್ಲಿಂದ ಪ್ರಾರಂಭವಾದ ಆಚಾರ್ಯರ ದೇಶ ಪರ್ಯಟನೆ ಈಗ ಮತ್ತೆ ಅವರನ್ನು ನರ್ಮದೆಯ ತೀರಕ್ಕೆ ತಂದಿತ್ತು. 

*****

"ಕುತ್ರಾಲಯೋ ಮಂಡನ ಪಂಡಿತಸ್ಯ?" ("ಮಂಡನ ಪಂಡಿತರ ಮನೆ ಎಲ್ಲಿದೆ?") ಎಂದು ಆಚಾರ್ಯರು ಕೇಳಿದ ನೀರು ತರಲು ಹೊರಟಿದ್ದ ಹೆಣ್ಣು ಮಕ್ಕಳು ಬೇರೆ ಯಾರೋ ಆಗಿರದೆ ಮಂಡನ ಮಿಶ್ರರ ಮನೆಯ ಕೆಲಸದವರೇ ಆಗಿದ್ದರು. ತಮ್ಮನ್ನು ಕೇಳುತ್ತಿರುವ ಸನ್ಯಾಸಿ ಯುವಕನನ್ನು ಅವರು ನೋಡಿದರು. ಕಂಡ ಕೂಡಲೇ ಗೌರವ ಹುಟ್ಟುವ ಆಕರ್ಷಕ ವ್ಯಕ್ತಿತ್ವ. ತೇಜಸ್ವಿ ಸನ್ಯಾಸಿ. ಮಿಶ್ರರ ಮನೆಯ ದಾರಿ ಬೇರೆ ಯಾರಿಗೋ ಹೇಳಿದಂತೆ ಸುಮ್ಮನೆ ಹೇಳಿದರೆ ಹೇಗೆ? ಅವರು ಎರಡು ಶ್ಲೋಕಗಳಲ್ಲಿ ಮಂಡನ ಮಿಶ್ರ ಪಂಡಿತರ ಮನೆಯ ಗುರುತು ಹೇಳಿದರು:

ಸ್ವತಃ ಪ್ರಮಾಣಂ ಪರತಃ ಪ್ರಮಾಣಂ 
ಕೀರಾಂಗನಾ ಯತ್ರ ಗಿರಂ ಗಿರಂತಿ 
ದ್ವಾರಸ್ಥ ನೀಡಾಂತರ ಸಂನಿರುದ್ಧಾ 
ಜಾನೀಹಿ ತಂ ಮಂಡನಮಿಶ್ರ ಗೇಹಂ 

ಫಲಪ್ರದಂ ಕರ್ಮ ಫಲಪ್ರದೋಜ:
ಕೀರಂಗನಾ ಯತ್ರ ಗಿರಂ ಗಿರಂತಿ 
ದ್ವಾರಸ್ಥ ನೀಡಾಂತರ ಸಂನಿರುದ್ಧಾ 
ಜಾನೀಹಿ ತಂ ಮಂಡನ ಪಂಡಿತೌಕಃ  

"ಹೀಗೇ ಸ್ವಲ್ಪ ಮುಂದೆ ಹೋಗಿ. ಒಂದು ಮನೆಯ ಮುಂದೆ ಪಂಜರಗಳನ್ನು ತೂಗುಹಾಕಿದ್ದಾರೆ. ಅದರಲ್ಲಿರುವ ಗಿಳಿಗಳು "ಸ್ವತಃ ಪ್ರಮಾಣಂ ಪರತಃ ಪ್ರಮಾಣಂ" ಎಂದು ಕೂಗುತ್ತಿರುತ್ತವೆ. ಮತ್ತೆ ಕೆಲವು ಪಂಜರದ ಗಿಣಿಗಳು "ಫಲವನ್ನು ಕೊಡತಕ್ಕದ್ದು ಕರ್ಮ; ಫಲವನ್ನು ಕೊಡುವವನು ಈಶ್ವರ" ಎಂದು ಹೇಳುತ್ತಿರುತ್ತವೆ. ಅದೇ ಮಂಡನ ಮಿಶ್ರ ಪಂಡಿತರ ಮನೆ ಎಂದು ತಿಳಿಯಿರಿ!"

ಒಂದು ಸಾಮಾನ್ಯ ಪ್ರಶ್ನೆಗೆ ಎಂತಹ ಸುಂದರ ಉತ್ತರ! "ಮಂಡನ ಮಿಶ್ರರ ಮನೆಗೆ ಬರುವ ಅನೇಕ ಮೀಮಾಂಸಕರು, ತಾರ್ಕಿಕರು ಮತ್ತು ವಿದ್ವಾಂಸರು ನಡೆಸುವ ವಿದ್ವತ್ಸಭೆಗಳಲ್ಲಿ ನಡೆಯುವ ಚರ್ಚೆಗಳನ್ನು ಕೇಳಿಸಿಕೊಂಡಿರುವ ಗಿಣಿಗಳೂ ಸಹ ತಮ್ಮತಮ್ಮಲ್ಲಿ (ಬೇರೆ ವಿಷಯಗಳನ್ನು ಮಾತಾಡುವುದು ಬಿಟ್ಟು) ವೇದ-ಶಾಸ್ತ್ರ ಸಂಬಂಧಿ ವಿಷಯಗಳ ವಾಕ್ಯಾರ್ಥ ಮಾಡುತ್ತಿರುತ್ತವೆ. ಅದೇ ಪಂಡಿತರ ಮನೆ" ಎಂದು ಭಾವಾರ್ಥ. 

ಮಂಡನ ಮಿಶ್ರರ ಮನೆಯ ಕೆಲಸದ ಹೆಣ್ಣು ಮಕ್ಕಳೇ ಈ ರೀತಿ ಹೇಳುವವರಾದರೆ ಮಂಡನ ಮಿಶ್ರರು ಸ್ವತಃ ಎಂತಹ ದೊಡ್ಡ ವಿದ್ವಾಂಸರಾಗಿರಬೇಕು!

*****

ಮೇಲೆ ಹೇಳಿದ ಪ್ರಸಂಗ ಶ್ರೀ ವಿದ್ಯಾರಣ್ಯರು ರಚಿಸಿದ್ದು ಎನ್ನಲಾದ (ಅವರು ಸನ್ಯಾಸ ತೆಗೆದುಕೊಳ್ಳುವ ಮೊದಲಿನ "ಮಾಧವ" ಎನ್ನುವ ಹೆಸರಿನಲ್ಲಿ ರಚಿಸಿದ್ದು) "ಶ್ರೀ ಶಂಕರ ದಿಗ್ವಿಜಯ" ಕಾವ್ಯದ ಎಂಟನೆಯ ಸರ್ಗದಲ್ಲಿ ಕಂಡುಬರುತ್ತದೆ. ಈ ಕಾವ್ಯವು 16 ಸರ್ಗಗಳಲ್ಲಿ 1,800 ಶ್ಲೋಕಗಳ ಸುಂದರ ಕೃತಿ. ಒಂದು ಕಾವ್ಯ ಎಂದು ಓದಿ ರಸಾಸ್ವಾದನೆ ಮಾಡಬಹುದು. ಶ್ರೀ ಶಂಕರ ಭಗವತ್ಪಾದರ ಜೀವನ ಚರಿತ್ರೆ ಎಂದಾದರೂ ಓದಬಹುದು. 

ಶ್ರೀ ವಿದ್ಯಾರಣ್ಯರು ಕನ್ನಡಿಗರಿಗೆ ಪ್ರಾತಃ ಸ್ಮರಣೀಯರು. ವಿಜಯನಗರ ಸ್ಥಾಪನೆಗೆ ಮೂಲ ಕಾರಣರು. ಹದಿನಾಲ್ಕನೇ ಶತಮಾನದಲ್ಲಿ ನಮ್ಮ ಕರ್ನಾಟಕದಲ್ಲಿ ಸಮಾಜಕ್ಕೆ ಅವಿಸ್ಮರಣೀಯ ಸೇವೆ ಸಲ್ಲಿಸಿದವರು. ಇದರ ಬಗ್ಗೆ ಹೆಚ್ಚಿನ ವಿವರಗಳನ್ನು ಮುಂದೆ ಒಂದು ದಿನ ನೋಡೋಣ.