Tuesday, July 1, 2025

ಏಕಾದಶಿಯ ದಿನ ಹಾಲು-ಹಣ್ಣು ಸೇವಿಸಿ


ಹಿಂದಿನ ಸಂಚಿಕೆಯಲ್ಲಿ, "ಮನವ ಕಬ್ಬಿಣ ಮಾಡು, ಹೇ ಮೃಡನೇ!" ಎಂಬ ಶೀರ್ಷಿಕೆಯ ಅಡಿಯಲ್ಲಿ, "ಸಂದರ್ಭ ನೋಡಿ ಮಾತುಗಳಿಗೆ ಅರ್ಥ ಮಾಡಬೇಕು" ಎನ್ನುವ ವಿಷಯವನ್ನು ಎರಡು ಬಾರಿ ನೋಡಿದ್ದೆವು. (ಈ ಸಂಚಿಕೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ). 

ಸಂದರ್ಭ ನೋಡಿ ಮಾತುಗಳಿಗೆ ಅರ್ಥ ಮಾಡಬೇಕು ಎನ್ನುವುದು ಎಲ್ಲ ಕಾಲಗಳಿಗೂ ಒಪ್ಪುವ, ತಪ್ಪಿಸಲಾಗದ, ತಪ್ಪಿಸಬಾರದಾದ ಅವಶ್ಯಕತೆ. ಯಾವುದೇ ಒಂದು ಸಂದರ್ಭದ ಅರ್ಥದ ತಿಳುವಳಿಕೆಗೆ ಆಯಾ ಗ್ರಂಥದ ಎಲ್ಲ ಭಾಗಗಳನ್ನೂ ಪೂರ್ತಿಯಾಗಿ ಓದಿ, ಹಿಂದು ಮುಂದಿನ ಭಾಗಗಳನ್ನು ಸಮನ್ವಯ ಮಾಡಿ, ನಂತರ ಅರ್ಥಗಳನ್ನು ಗ್ರಹಿಸಬೇಕು. ಯಾವುದೋ ಗ್ರಂಥದ ಒಂದು ಅಧ್ಯಾಯ ಓದಿ, ಅದರ ಹಿಂದೆ ಮುಂದೆ ತಿಳಿಯದೆ, ಸಂದರ್ಭಗಳ ಅರ್ಥ ತಿಳಿಯುವುದು ಬಹಳ ಅಪಾರ್ಥಕ್ಕೆ ದಾರಿ ಮಾಡುತ್ತದೆ. ಇದು ಕೃತಿಗಳನ್ನು ಓದದೇ ಇರುವುದಕ್ಕಿಂತಲೂ ಹೆಚ್ಚು ಅಪಾಯಕಾರಿ. ತುಂಬಾ ಆಳವಾದ ವಿಷಯಗಳಲ್ಲಂತೂ ಕೇವಲ ಆ ಒಂದು ಗ್ರಂತಹವನ್ನಲ್ಲ; ಅದಕ್ಕೆ ಸಂಬಂಧಿಸಿದಂತಹ ಇತರೆ ವಾಂಗ್ಮಯವನ್ನೂ ಅವಲೋಕಿಸಿ ಅರ್ಥಗಳನ್ನು ತಿಳಿಯುವ ಅವಶ್ಯಕತೆ ಇರುತ್ತದೆ. ಇಲ್ಲದಿದ್ದರೆ "ಎತ್ತು ಈಯಿತು ಅಂದರೆ ಕರು ಕೊಟ್ಟಿಗೆಯಲ್ಲಿ ಕಟ್ಟು" ಎನ್ನುವ ಗಾದೆಯಂತೆ ಅಪಾರ್ಥಕ್ಕೆ ಎಡೆಗೊಡುತ್ತದೆ. ಎತ್ತು ಕರು ಹಾಕುವುದಿಲ್ಲ ಎಂದು ತಿಳುವಳಿಕೆ ಇರುವವನು "ಎತ್ತು ಈಯಿತು" ಅಂದ ತಕ್ಷಣ ನಕ್ಕು ಸುಮ್ಮನಾಗುತ್ತಾನೆ. ಕರುವಿನ ಬಗ್ಗೆ ಯೋಚಿಸುವ ಪ್ರಸಂಗವೇ ಬರುವುದಿಲ್ಲ. 

ಈ ಸೂತ್ರವನ್ನು ಚೆನ್ನಾಗಿ ಅರಿಯಲು ಒಂದು ಉದಾಹರಣೆಯನ್ನು ನೋಡೋಣ. 

*****

ಸಾಮಾನ್ಯವಾಗಿ ನಮ್ಮ ಸಂಪ್ರದಾಯಗಳನ್ನು ಸ್ವಲ್ಪಮಟ್ಟಿಗೆ ತಿಳಿದ ಎಲ್ಲರಿಗೂ "ಏಕಾದಶಿ" ಅಂದ ತಕ್ಷಣ ನೆನಪಿಗೆ ಬರುವುದು "ಉಪವಾಸ". ಅನೇಕರು ಏಕಾದಶಿ ಉಪವಾಸ ಅಂದರೆ "ಪಕ್ಕದ್ಮನೆ ಸುಬ್ಬಮ್ಮನಿಗೆ ಇಂದು ಏಕಾದಶಿ ಉಪವಾಸ" ಹಾಡನ್ನು ಜ್ಞಾಪಿಸಿಕೊಂಡು, ಅಲ್ಲಿ ಬರುವ ತಿಂಡಿಗಳ ಪಟ್ಟಿಯನ್ನು ನೋಡಿ, ಪ್ರತಿದಿನ ಏಕಾದಶಿ ಯಾಕೆ ಆಗಬಾರದು ಎಂದು ಆತಂಕ ಪಡಬಹುದು. ಕೆಲವರು ಏಕಾದಶಿ ಉಪವಾಸ ಮಾಡುತ್ತಾರೆ. ಇನ್ನು ಕೆಲವರು ಆ ರೀತಿ ಉಪವಾಸ ಮಾಡುವವರನ್ನು ಅಪಹಾಸ್ಯ ಮಾಡುತ್ತಾರೆ. ತಮಾಷೆಯ ಸಂಗತಿಯೆಂದರೆ ಅನೇಕರಿಗೆ ಇದು ಒಂದು ವ್ರತ ಎಂದು ಗೊತ್ತಿಲ್ಲ. ಗೊತ್ತಿದ್ದವರಿಗೂ ಅದರ ಪೂರ್ತಿ ಆಚರಣೆ ಗೊತ್ತಿಲ್ಲ. 

ಯಾವುದಾದರೂ ರೆಸ್ಟೋರೆಂಟ್ ಬಳಿ ಸಂಜೆ ಎಂಟರ ನಂತರ ಹೋದವರಿಗೆ ಅಲ್ಲಿ ನಡೆಯುವ ಚಟುವಟಿಕೆಗಳ ಪರಿಚಯ ಇರುತ್ತದೆ. ಬೆಳಗ್ಗಿನಿಂದ ನಿಲ್ಲದ ಚಟುವಟಿಕೆ ಆದ ನಂತರ, ಗ್ರಾಹಕರ ಸೇವೆ ಮುಗಿದ ಮೇಲೆ, ಅಂದಿನ ದಿನ ಬಾಗಿಲು ಮುಚ್ಚುವ ಮುಂಚೆ ಕೆಲವು ದೈನಿಕ ಕೆಲಸಗಳಿರುತ್ತವೆ. ಅಡಿಗೆ ಮನೆಯವರಿಗೆ ಮಿಕ್ಕ ಪದಾರ್ಥಗಳನ್ನು ಕೆಡದಂತೆ ಎತ್ತಿಟ್ಟು, ಪಾತ್ರೆಗಳನ್ನು ಶುಚಿ ಮಾಡಿ ಒರೆಸಿಟ್ಟು, ಮಾರನೆಯ ದಿನದ ಅಡಿಗೆಗೆ ನೆನೆಹಾಕುವ ಪದಾರ್ಥಗಳ ಕೆಲಸ ಮುಗಿಸಿ, ಎಲ್ಲ ತಯಾರಿ  ಮಾಡಿದಮೇಲೆ ವಿಶ್ರಾಂತಿ. ಸರ್ವರ್ ಮತ್ತು ಕ್ಲೀನರುಗಳಿಗೆ ಮೇಜಿನ ಮೇಲೆ ಕುರ್ಚಿಗಳನ್ನು ಮಗುಚಿಹಾಕಿ, ಎಲ್ಲ ಸಂದಿಗಳನ್ನೂ ಗುಡಿಸಿ, ನೀರಿನಿಂದ ತೊಳೆದು, ಜಾಗ ಒಣಗಿಸಿ, ಮಾರನೆಯ ದಿನಕ್ಕೆ ಗ್ರಾಹಕರನ್ನು ಎದುರುಗೊಳ್ಳಲು ಸಿದ್ಧ ಮಾಡಿಡಬೇಕು. ಬೆಳಗ್ಗೆ ಆರು ಗಂಟೆಗೆ ಮೊದಲ ಗ್ರಾಹಕ ಬರುವ ವೇಳೆಗೆ ಎಲ್ಲಾ ತಯಾರಾಗಿರಬೇಕು. 

ಪ್ರತಿ ಮನೆಯಲ್ಲಿಯೂ ಗೃಹಿಣಿ ಅಥವಾ ಅಡಿಗೆ ಮನೆ ನೋಡಿಕೊಳ್ಳುವವರು ಈ ಕೆಲಸ ಪ್ರತಿದಿನ ಮಾಡುತ್ತಾರೆ. ಸ್ವಲ್ಪ ಪಾಲುಮಾಲಿಕೆ ಪಟ್ಟರೂ (ಈ ಪದ ಈಗ ಮರೆತೇಹೋಗಿದೆ) ಸಹ ಮನೆಮಂದಿಯ ಆರೋಗ್ಯದ ಮೇಲೆ ನೇರ  ಪರಿಣಾಮ ಆಗುತ್ತದೆ. ಜೊತೆಗೆ ಅಡಿಗೆ ಪದಾರ್ಥಗಳ ಅಪವ್ಯಯವಾಗಿ ಮನೆಯ ಆಯ-ವ್ಯಯ ಏರುಪೇರಾಗುತ್ತದೆ. ಮಾರನೆಯ ದಿನ ಬೆಳಿಗ್ಗೆ ಕೆಲಸ ಮಾಡುವಾಗ ಎಡಚೆಡಚು (ತಾಳ-ಮೇಳ ತಪ್ಪುವುದು) ಆಗುತ್ತದೆ. 

ನಮ್ಮ ದೇಹದಲ್ಲೂ ಇದೇ ರೀತಿಯ ವ್ಯವಸ್ಥೆ ಉಂಟು. ಜಠರ, ಸಣ್ಣ ಕರುಳು, ದೊಡ್ಡ ಕರುಳು ಮೊದಲಾದ ಜೀರ್ಣಾಂಗಗಳಿಗೂ ಆಗಾಗ ಸ್ವಲ್ಪ ವಿಶ್ರಾಂತಿ ಬೇಕು. ಭಾನುವಾರ ದಣಿದ ದೇಹಕ್ಕೆ ವಿಶ್ರಾಂತಿ ಬೇಕು ಎಂದು ಜಗಳವಾಡುವವರೂ ಹೊಟ್ಟೆಗೆ ವಿಶ್ರಾಂತಿ ಕೊಡಲು ತಯಾರಿರುವುದಿಲ್ಲ. ಕ್ರಮವಾದ ಉಪವಾಸ ಜೇರ್ಣೇ೦ದ್ರಿಯಗಳಿಗೆ ಈ ರೀತಿಯ ವಿಶ್ರಾಂತಿ ಕೊಡುತ್ತದೆ. ಏಕಾದಶಿ ಉಪವಾಸ ಈ ಕೆಲಸ ಮಾಡುತ್ತದೆ. ಈಗಿನ ತಲೆಮಾರಿನವರು ಇದನ್ನು ಬಿಟ್ಟು "ಇಂಟರ್ಮಿಟೆಂಟ್ ಫಾಸ್ಟಿಂಗ್" ಮತ್ತು "ಡಬ್ಬಿಯ ಆಹಾರ" ಮೊರೆ ಹೋಗುತ್ತಿರುವುದು ಒಂದು ವಿಪರ್ಯಾಸ. 

*****

ಏಕಾದಶಿ ಉಪವಾಸ ಒಂದು ದಿನದ ಕಟ್ಟಲೆಯಲ್ಲ. ಅದು ಮೂರು ದಿನದ ಒಂದು ವ್ರತ. ನವಮಿ ಎರಡು ಹೊತ್ತು ಊಟ ಮಾಡಬಹುದು. ಏಕಾದಶಿಯ ಹಿಂದಿನ ದಿನ, ದಶಮಿಯಂದು ಒಂದೇ ಹೊತ್ತಿನ ಊಟ. ರಾತ್ರಿ ಏನೂ ತಿನ್ನುವ ಹಾಗಿಲ್ಲ. (ಇದಕ್ಕೆ "ದಶಮಿ ಏಕಭುಕ್ತ" ಅನ್ನುತ್ತಾರೆ). ಎರಡನೆಯ ದಿನ ಏಕಾದಶಿಯಂದು ಪೂರ್ತಿ ಉಪವಾಸ. ಉಪವಾಸ ಎಂದರೆ ಉಪವಾಸವೇ. ನೀರನ್ನೂ ಕುಡಿಯುವಹಾಗಿಲ್ಲ. (ಇದಕ್ಕೆ "ನಿರ್ಜಲ ಏಕಾದಶಿ" ಅನ್ನುತ್ತಾರೆ). ಮೂರ್ನಾಲ್ಕು ತರಹ ತಿಂಡಿಗಳನ್ನೋ, ಎರಡು-ಮೂರು ಲೀಟರು ಹಾಲನ್ನೋ, ಮೂರು-ನಾಲ್ಕು ಕೆಜಿ ಹಣ್ಣನ್ನೋ ಸೇವಿಸುವುದಲ್ಲ. (ಎಂದೋ ಮಾಡಿಟ್ಟ ಚಕ್ಕುಲಿ-ಕೋಡುಬಳೆ-ರವೆಉಂಡೆ ಮುಂತಾದುವನ್ನು ನೋಡಲೇಬಾರದು). ಮೂರನೆಯ ದಿನ ದ್ವಾದಶಿ ಬೆಳಿಗ್ಗೆ ಬೇಗನೆ ಗೊತ್ತಾದ ಹೊತ್ತಲ್ಲಿ (ಸೂರ್ಯೋದಯದ ವೇಳೆಯಲ್ಲಿ) ಊಟ ಮಾಡುವುದು. ಇದಕ್ಕೆ "ಪಾರಣೆ" ಎನ್ನುತ್ತರೆ. ಹೀಗೆ ದ್ವಾದಶಿ ಪಾರಣೆ ಮಾಡಿದಮೇಲೆ ರಾತ್ರಿ ಊಟವಿಲ್ಲ. ಮತ್ತೆ ಮಾರನೆಯ ದಿನ (ತ್ರಯೋದಶಿ) ಮಧ್ಯಾಹ್ನ ಮತ್ತು ರಾತ್ರಿ ಊಟ ಮಾಡಬಹುದು. 

ಇದಲ್ಲದೆ, ದೇವರ ನೈವೇದ್ಯವಲ್ಲದ ಯಾವ ಪದಾರ್ಥವನ್ನೂ ತಿನ್ನುವಹಾಗಿಲ್ಲ. ಊಟಗಳ ಮಧ್ಯೆ (ಮಧ್ಯೇ ಮಧ್ಯೇ ಪಾನೀಯಂ ಸಮರ್ಪಯಾಮಿ ಅನ್ನುವಂತೆ) ಸ್ವಲ್ಪ ಸ್ವಲ್ಪ ಅದು-ಇದು ಎಂದು ತಿನ್ನುವ-ಕುಡಿಯುವ ಹಾಗಿಲ್ಲ. ಪಾರಣೆಯಂದು (ಪೂರ್ತಿ ಏಕಾದಶಿ ವ್ರತ ಕಾಲದಲ್ಲಿಯೂ) ಈರುಳ್ಳಿ-ಆಲೂಗಡ್ಡೆ-ಬದನೇಕಾಯಿ, ಜೊತೆಗೆ ಒಂದಷ್ಟು ಹಲಸಂದೆಕಾಳು ಸೇರಿಸಿ, ಹುಳಿ ಮಾಡಿಸಿ ಹೊಡೆಯುವಹಾಗಿಲ್ಲ. ವರುಷಕ್ಕೆ ನಾಲ್ಕು ತಿಂಗಳು "ಚಾತುರ್ಮಾಸ" ಕಾಲದಲ್ಲಿ ಆ ವ್ರತದ ನಿಯಮ ಕೂಡ ಪಾಲಿಸಬೇಕು. ಒಂದು ತಿಂಗಳು ಹಾಲು ಏಪಯೋಗಿಸಬಾರದು. ಒಂದು ತಿಂಗಳು ಮೊಸರಿಲ್ಲ. (ಮಜ್ಜಿಗೆ ಆಗಬಹುದು!). ಒಂದು ತಿಂಗಳು ತರಕಾರಿಗಳಿಲ್ಲ. (ತರಕಾರಿ ಇಲ್ಲದ ತಿಂಗಳಲ್ಲಿ ಮೆಣಸಿನಕಾಯಿ ಉಪಯೋಗ ಇಲ್ಲ. ಖಾರಕ್ಕೆ ಬರೀ ಮೆಣಸು).  ಒಂದು ತಿಂಗಳು ಬೇಳೆ-ಕಾಳು ಇಲ್ಲ. (ವಡೆ-ಆಂಬೊಡೆ ಮಾಡುವಂತಿಲ್ಲ. ಮಾಡಲೇಬೇಕಾದರೆ ಅಕ್ಕಿ ವಡೆ ಮಾಡಬಹುದು). ಏಕಾದಶಿ ವ್ರತದ ಕ್ರಮ ಹೀಗೆ. ಕೆಲವೊಮ್ಮೆ ಎರಡೆರಡು ಏಕಾದಶಿ ಬರುವುದುಂಟು. ಹೆದರಬೇಕಿಲ್ಲ. ಇದು ಸುಮಾರು ಮೂರು ವರುಷಗಳಿಗೆ ಒಂದು ಬಾರಿ ಮಾತ್ರ. 

"ಏಕಾದಶಿ ಮನೆಗೆ ಶಿವರಾತ್ರಿ ಬಂದಂತೆ" ಎಂದು ಒಂದು ಗಾದೆ. "ದುರ್ಭಿಕ್ಷದಲ್ಲಿ ಅಧಿಕ ಮಾಸ ಬಂದಂತೆ" ಎಂದು ಮತ್ತೊಂದು ಗಾದೆ. ಮೊದಲೇ ಖರ್ಚಿಗೆ ಕಾಸಿಲ್ಲದಿದ್ದಾಗ ಹೆಚ್ಚಿನ ವೆಚ್ಚದ ಬಾಬ್ತು ಬಂದಾಗ ಈ ಗಾದೆಗಳನ್ನು ಹೇಳುತ್ತಾರೆ. "ದುರ್ಭಿಕ್ಷದ ಅಧಿಕ ಮಾಸದ ಎರಡು ಏಕಾದಶಿಯಲ್ಲಿ ಶಿವರಾತ್ರಿ ಬಂದಂತೆ" ಎಂದು ಸದ್ಯ ಗಾದೆಯಿಲ್ಲ. (ಶಿವರಾತ್ರಿ ಏಕಾದಶಿಯಂದು ಬರುವುದು ಗಾದೆಯಲ್ಲಿ ಮಾತ್ರ. ನಿಜ ಜೀವನದಲ್ಲಿ ಇದು ಆಗುವುದಿಲ್ಲ). 
*****

ಮುಕುಂದರಾಯರು ದೊಡ್ಡ ಅಧಿಕಾರದ ಹುದ್ದೆಯಲ್ಲಿದ್ದು ನಿವೃತ್ತರಾದರು. ಬಹಳ ಪ್ರಯತ್ನ ಪಟ್ಟರೂ ಎಲ್ಲಿಯೂ ಎರಡನೇ ಕೆಲಸ ಸಿಗಲಿಲ್ಲ. ವಿಧಿಯಿಲ್ಲದೇ ದೇವರ ಬೆನ್ನುಹತ್ತಿದರು. ಯಾರೋ ಬಂಧುಗಳು ಸಂಜೆ ದೇವಸ್ಥಾನದಲ್ಲಿ ಏಳು ಗಂಟೆಯಿಂದ ಎಂಟು ಗಂಟೆವರೆಗೆ ನಡೆಯುವ "ಪುರಾಣ" ಬಹಳ ಒಳ್ಳೆಯದು ಎಂದು ಹೇಳಿದರು. ಮುಕುಂದರಾಯರು ಹೊರಡಲು ತಯಾರಾದರು. ಕೆಲಸದಲ್ಲಿದ್ದಾಗ ಕಾರಿತ್ತು. ಈಗ ಸಿಟಿ ಬಸ್ಸಿನಲ್ಲಿ ಹೋಗಬೇಕು. ಮೊದಲ ದಿನ ಪುರಾಣಕ್ಕೆ ಹೊರಟು ಬಸ್ಸು ಹಿಡಿದು ದೇವಸ್ಥಾನ ತಲುಪುವುದರಲ್ಲಿ ಏಳು ಮುಕ್ಕಾಲು ಗಂಟೆ ಆಯಿತು. ಕಡೆಗೆ ಕೂಡಲು ಜಾಗ ಸಿಗದೇ ಒಂದೆಡೆ ನಿಂತುಕೊಂಡೇ ಕಡೆಯ ಹದಿನೈದು ನಿಮಿಷದ ಪುರಾಣ ಕೇಳಿದರು. 

ಪುರಾಣೀಕರು ಮಾರನೆಯ ದಿನ ವೈಕುಂಠ ಏಕಾದಶಿಯ ಕಾರಣ ಏನು ಮಾಡಬೇಕೆಂದು ವಿವರಿಸುತ್ತಿದ್ದರು. "ನಾಳೆ ವೈಕುಂಠ ಏಕಾದಶಿ ಒಂದು ಪರ್ವಕಾಲ. ನಾನು ವಿವರಿಸಿದಂತೆ ಉಪವಾಸವಿದ್ದು, ಹಾಲು-ಹಣ್ಣು ಚೆನ್ನಾಗಿ ಸೇವಿಸಿ, ದೇವರನಾಮ-ಸ್ತೋತ್ರಾದಿಗಳನ್ನು ಹೇಳಿಕೊಂಡು ಕಾಲ ಕಳೆಯಬೇಕು. ಭೋಜನ ಮಾಡಬಾರದು ಎಂದು ಬೇರೆ ಹೇಳಬೇಕಿಲ್ಲ. ಅವಕಾಶವಿದ್ದವರು ದೇವಾಲಯಗಳಿಗೆ ಅವಶ್ಯ ಹೋಗಿ ದೇವರ ದರ್ಶನ ಪಡೆಯಬೇಕು. ನಾಳೆ ಎಂದಿನಂತೆ ಏಳು ಘಂಟೆಯಿಂದ ಎಂಟು ಘಂಟೆವರೆಗೆ ಇಲ್ಲಿಯೂ ಹಾಲು-ಹಣ್ಣಿಗೆ ವ್ಯವಸ್ಥೆ ಮಾಡಿದೆ. ತಪ್ಪದೇ ಬಂದು ಭಾಗವಹಿಸಿ" ಎಂದು ಹೇಳಿ ಅಂದಿನ ಪ್ರವಚನ ಮುಗಿಸಿದರು. ರಾಯರು ಮನೆಗೆ ಬಂದರು. 

ರಾಯರಿಗೆ ಹಾಲು-ಹಣ್ಣಿನಲ್ಲಿ ದಿನ ಕಳೆದು ಗೊತ್ತಿಲ್ಲ. ಆದರೂ ಅದನ್ನು ಪಾಲಿಸಬೇಕೆಂದು ತೀರ್ಮಾನಿಸಿದರು. ಮನೆಯಲ್ಲಿ ಎಲ್ಲರೂ ಪರ ಊರಿಗೆ ಹೋಗಿ ಅವರು ಒಬ್ಬರೇ ಉಳಿದಿದ್ದರು. ಬೆಳಗ್ಗೆ ಹಾಲಿನಂಗಡಿಗೆ ಹೋದಾಗ ಅಂಗಡಿಯವನು "ಸ್ವಾಮಿ, ಇಂದು ಹಾಲಿಗೆ ಬಹಳ ಬೇಡಿಕೆ. ಎಲ್ಲಾ ಖರ್ಚಾಗಿದೆ. ಐದು ಲೀಟರಿನ ಒಂದು ಪ್ಯಾಕೆಟ್ ಮಾತ್ರ ಇದೆ" ಅಂದ. ರಾಯರು ಅದನ್ನು ಕೊಂಡರು. ಹಣ್ಣಿನ ಅಂಗಡಿಯಲ್ಲಿಯೂ ಎಲ್ಲಾ ಖಾಲಿ ಖಾಲಿ. ಕಡೆಗೆ ಒಂದು ಹಲಸಿನ ಹಣ್ಣು, ಒಂದು ಕಲ್ಲಂಗರೇ ಹಣ್ಣು, ಸ್ವಲ್ಪ  ಮೂಸಂಬಿ, ಬಾಳೆಹಣ್ಣು ಸಿಕ್ಕಿತು. ಅವರ ಹೆಂಡತಿ ಯಾವಾಗಲೋ "ಐದು ತರಹದ ಹಣ್ಣು" ಎಂದು ಹೇಳಿದ್ದುದು ನೆನಪಿಗೆ ಬಂತು. ಕಷ್ಟಪಟ್ಟು ಇನ್ನೊಂದು ಅಂಗಡಿಯಲ್ಲಿ ಒಂದು ಚಕ್ಕೋತ ಕೊಂಡರು. ಇವುಗಳ ಭಾರವನ್ನು ಹೊತ್ತು ಮನೆಗೆ ಬಂದರು.

ಸ್ನಾನ ಮಾಡಿ ಹಲಸಿನ ಹಣ್ಣು ಹೆಚ್ಚಿದರು. ಹಾಲು ದೊಡ್ಡ ಪಾತ್ರೆಯಲ್ಲಿ ಜಾಗರೂಕರಾಗಿ ಉಕ್ಕದಂತೆ  ಕಾಯಿಸಿದರು. ಬಾಳೆಯ ಹಣ್ಣಿನ ಜೊತೆ ಹಲಸಿನ ಹಣ್ಣು ಸೇರಿಸಿ ತಿಂದರು. ಸ್ವಲ್ಪ ಹಾಲೂ ಸೇರಿತು. ವಿಶ್ರಾಂತಿಯ ನಂತರ ಚಕ್ಕೋತ ಹಣ್ಣು ಮತ್ತು ಹಾಲು ನಡೆಯಿತು. ಸಂಜೆಯ ವೇಳೆ ಬೇರೆ ಹಣ್ಣುಗಳು ಮತ್ತು ಮತ್ತಷ್ಟು ಹಾಲು ಹೊಟ್ಟೆ ಸೇರಿತು. ದೇವಸ್ಥಾನದಲ್ಲಿ ಪುರಾಣೀಕರು ಹೇಳಿದ್ದು ನೆನಪಿಗೆ ಬಂತು. "ಅಲ್ಲಿ ಹಣ್ಣು-ಹಾಲಿನ ವಿತರಣೆ ವ್ಯವಸ್ಥೆ ಇದೆ. ಹೋಗಬೇಕು" ಎಂದು ನೆನಪಾಯಿತು. ಬೇಗ ಹೊರಟು ಏಳು ಗಂಟೆಯ ಮುಂಚೆ ಅಲ್ಲಿ ಸೇರಿದರು. 

ಏಳಕ್ಕೆ ಪ್ರಾಂಭವಾದ ಪುರಾಣದಲ್ಲಿ ಭಗವದ್ಗೀತೆ ಮತ್ತು ಭಾಗವತದ ಕೆಲವು ಭಾಗಗಳ ಶ್ಲೋಕಗಳು ಮತ್ತು ಅವುಗಳ ವಿವರಣೆ ನಡೆಯಿತು. ಹಾಲು ಮತ್ತು ಹಣ್ಣುಗಳ ಸುಳಿವೇ ಇಲ್ಲ. ಇರಲಿ, ಪುರಾಣದ ನಂತರ ವಿತರಣೆ ಆಗಬಹುದು ಎಂದು ರಾಯರು ಕಾದರು. ಎಂಟು ಗಂಟೆಗೆ ಪುರಾಣ ಮುಗಿಯುತ್ತಿದ್ದಂತೆಯೇ ಎಲ್ಲರೂ ಅವಸರವಸರವಾಗಿ ಅವರವ ಮನೆಗೆ ಹೊರಟರು. ಒಬ್ಬರು ವಯಸ್ಸಾದ ಯಜಮಾನರು ಮಾತ್ರ ನಿಧಾನವಾಗಿ ಹೋಗುತ್ತಿದ್ದರು. ಮಕುಂದರಾಯರು  ಅವರ ಜೊತೆ ಹೆಜ್ಜೆ ಹಾಕುತ್ತ ಹಾಲು-ಹಣ್ಣಿನ ಬಗ್ಗೆ ಕೇಳಿದರು. 

"ಇದೇನು, ಹೀಗೆ ಕೇಳುತ್ತೀರಿ. ಒಂದು ಗಂಟೆ ಹಾಲು-ಹಣ್ಣೇ ಆಯಿತಲ್ಲ?" ಅಂದರು ಆ ಹಿರಿಯರು. "ಎಲ್ಲಿ ಆಯಿತು? ಬರೀ ಭಗವದ್ಗೀತೆ ಮತ್ತು ಭಾಗವತದ ಕೆಲವು ಭಾಗ ಹೇಳಿದರು, ಅಷ್ಟೇ" ಅಂದರು ರಾಯರು. "ಅದೇ ಸ್ವಾಮಿ. ಹಾಲು ಅಂದರೆ ಭಗವದ್ಗೀತೆ. ಹಣ್ಣು ಅಂದರೆ ಭಾಗವತ" ಅಂದರು ಯಜಮಾನರು. "ಅದು ಹೇಗೆ?" ಎಂದು ರಾಯರು ಕೇಳಿದರು. "ನಿನ್ನೆ ಪುರಾಣದಲ್ಲಿ ಹೇಳಿದ್ದು ನೀವು ಕೇಳಲಿಲ್ಲವೇ? "ದುಗ್ಧಮ್ ಗೀತಾಮೃತಮ್ ಮಹತ್".  ಭಗವದ್ಗೀತೆ ಎಂಬುದೇ ಹಾಲು. ಮತ್ತೆ  "ನಿಗಮಕಲ್ಪ ತರೋರ್ಗಲಿತಂ ಫಲಂ".  ಶ್ರೀಮದ್ಭಾಗವತವೇ ಹಣ್ಣು. ಏಕಾದಶಿಯ ದಿನ ಈ ಹಾಲು-ಹಣ್ಣು ಸೇವಿಸಿ ಎಂದೇ ಪುರಾಣೀಕರು ನಿನ್ನೆ ಹೇಳಿದ್ದು. ಇವತ್ತು ಅದೇ ವಿತರಣೆ ಆಯಿತಲ್ಲ. ಏಕಾದಶಿಯಂದು ಬೇರೆ ಹಣ್ಣು-ಹಾಲು ಯಾರು ಸೇವಿಸುತ್ತಾರೆ?" ಎಂದರು ಆ ಹಿರಿಯರು. 

*****

ಹಲಸಿನ ಹಣ್ಣು, ಕಲ್ಲಂಗಡಿ ಹಣ್ಣು, ಮೂಸಂಬಿ, ಚಕ್ಕೋತ, ಬಾಳೆಹಣ್ಣು ಮತ್ತು ಹಾಲಿನ ಕೊಳಗ ರಾಯರ  ತಲೆಯಸುತ್ತ ಸುತ್ತುವಂತೆ ಅವರಿಗೆ ಭಾಸವಾಯಿತು.  ಹಿರಿಯರು ಅವರ  ಮುಖ ನೋಡಿದರು. ಅವರಿಗೆ ಅರ್ಥ ಆಯಿತು. "ನಾಳೆ ಸ್ವಲ್ಪ ಬೇಗ ಬನ್ನಿ. ಪುರಾಣ ಪ್ರಾರಂಭವಾಗುವುದರ ಮುಂಚೆ ಇದನ್ನು ವಿವರಿಸುತ್ತೇನೆ" ಎಂದು ಹೇಳಿ ಅವರ ಮನೆ ಗಲ್ಲಿಯಲ್ಲಿ ತಿರುಗಿದರು ಆ ವೃದ್ಧರು. 

Sunday, June 29, 2025

ಮನವ ಕಬ್ಬಿಣ ಮಾಡು, ಹೇ ಮೃಡನೇ!


"ದೇವರಲ್ಲಿ ಬೇಡುವುದು ಸರಿಯೇ?" ಎಂಬ ಹಿಂದಿನ ಸಂಚಿಕೆಯಲ್ಲಿ ನಾವು ನಂಬಿದ, ಆರಾಧಿಸುವ  ದೇವರು-ದೇವತೆಗಳಲ್ಲಿ ಅನೇಕ ವಿಧವಾಗಿ ವರಗಳನ್ನು ಕೇಳಿಕೊಳ್ಳುವ ರೀತಿ, ಮತ್ತು ಅದರ ಸರಿ-ತಪ್ಪು ಎನ್ನುವ ವಿಚಾರವಾಗಿ ಚರ್ಚೆ ಮಾಡಿದೆವು. ಈ ಸಂಚಿಕೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

ನಾವು ದಿನಂಪ್ರತಿ ಉಪಯೋಗಿಸುವ ಅನೇಕ ಸ್ತೋತ್ರ-ಮಂತ್ರಗಳಲ್ಲಿ ಈ ರೀತಿಯ ಬೇಡುವಿಕೆ ವಿಶಾಲವಾಗಿ ಹರಡಿದೆ. ಅನೇಕರು ಬಹಳ ಭಕ್ತಿ-ಶ್ರದ್ಧೆಗಳಿಂದ ಅನುಷ್ಠಾನ ಮಾಡುವ ಇಂತಹ ಒಂದು ಆಚರಣೆ ರುದ್ರ-ಚಮಕಗಳ ಪಾರಾಯಣಾದಿಗಳು. ಅದರ ತಿರುಳು ಕೆಲವರಿಗೆ ಅರ್ಥವಾಗುತ್ತದೆ. ಅನೇಕರಿಗೆ ಗೊತ್ತಾಗುವುದಿಲ್ಲ. ಆದರೆ ನುರಿತವರು ಅದನ್ನು ಹೇಳುವಾಗ ಕೇಳುಗರೆಲ್ಲರಿಗೂ ಒಂದು ವಿಶೇಷ ಅನುಭವ ಆಗುವುದು ಅಲ್ಲಿ ಕುಳಿತು ಕೇಳಿದವರಿಗೆ ಗೊತ್ತು. ಇಲ್ಲಿಯೂ ಅನೇಕ ಬೇಡಿಕೆಗಳನ್ನು ರುದ್ರದೇವರ ಮುಂದೆ ಇಡುವುದು ಉಂಟು. ಇದರ ಬಗ್ಗೆ ತಿಳಿದವರು ಚೆನ್ನಾಗಿ ವಿವರಿಸಬಲ್ಲರು. ಆದರೂ ನಮ್ಮ ಯೋಗ್ಯತೆ ಇರುವಷ್ಟು ನೋಡುವುದರಲ್ಲಿ ತಪ್ಪೇನೂ ಇಲ್ಲ. 

*****

ಇದೊಂದು ನಮಗೆ ಬೇಕೇ ಬೇಕಾದ ಅತಿ ಹತ್ತಿರದ ಕುಟುಂಬ. ಒಬ್ಬ ಮಗನಾದ ಗಣೇಶನು ವಿಘ್ನಗಳನ್ನು ದೂರಮಾಡಿ ಎಲ್ಲವನ್ನೂ ಸುಗಮ ಮಾಡುವ "ಸುಮುಖ". ಇನ್ನೊಬ್ಬ ಮಗ ದೇವಸೇನಾಪತಿಯಾದ "ಕುಮಾರ". ತಾಯಿಯು ಬುದ್ಧಿ ಶಕ್ತಿಯ ಅಭಿಮಾನಿ ದೇವತೆಯಾದ "ಉಮಾದೇವಿ". ಮತಿ ಪ್ರೇರಕಳು. ತಂದೆಯಾದರೋ ಮನೋಭಿಮಾನಿ "ಮಹರುದ್ರದೇವರು". ಎಲ್ಲ ಸಾಧನೆಗಳ ದಾರಿಯಲ್ಲಿ ಬರುವ ತೊಂದರೆಗಳನ್ನು ನಿವಾರಿಸಲು ವಿಘ್ನೇಶ. ಸಾಧನೆಗಳಿಗೆ ಅಡ್ಡಿ ಪಡಿಸುವ ಆಸುರೀಶಕ್ತಿಗಳನ್ನು ಹತ್ತಿಕ್ಕಲು ದೇವತೆಗಳ ಸೇನಾಧಿಪತಿಯಾದ ಷಣ್ಮುಖ. ಕಪಿಯಂತೆ ದಿಕ್ಕಾಪಾಲಾಗಿ ಓಡುವ ಮನಸ್ಸು ನಿಯಂತ್ರಿಸಿ ಏಕಾಗ್ರತೆ ಸಾಧಿಸಲು ಶಂಭುವಿನ ಕರುಣೆ. ಸಾಧನೆಗೆ ಬುದ್ಧಿಯನ್ನು ಕೇಂದ್ರೀಕರಿಸಲು ಗಿರಿಜೆಯ ಅನುಗ್ರಹ. ಈ ಕುಟುಂಬವನ್ನು ಬಿಟ್ಟು ಸಾಧಕನಿಗೆ ಬೇರೆ ಗತಿಯಿಲ್ಲ. 

ಶ್ರೀ ಪುರಂದರದಾಸರು ತಮ್ಮ ಒಂದು ಉಗಾಭೋಗದಲ್ಲಿ ಇದನ್ನು ಹೀಗೆ ಒಟ್ಟುಗೂಡಿಸಿ ಹೇಳುತ್ತಾರೆ:

ಸತತ ಗಣನಾಥ ಸಿದ್ಧಿಯನೀವ ಕಾರ್ಯದಲಿ 
ಮತಿಪ್ರೇರಿಸುವಳು ಪಾರ್ವತಿದೇವಿ 
ಮುಕುತಿಪಥಕೆ ಮನವೀವ ಮಹರುದ್ರದೇವರು

ರುದ್ರದೇವರು ಸ್ವತಃ ವೈರಾಗ್ಯ ಮೂರ್ತಿಗಳು. ಅವರಿಗಾಗಿ ಏನನ್ನೂ ಇಟ್ಟುಕೊಂಡವರಲ್ಲ. ಆದರೆ ಭಕ್ತರಿಗಾಗಿ ಎಲ್ಲವನ್ನೂ ಕೊಡಬಲ್ಲವರು!
***** 

ನಮ್ಮ ಕುಟುಂಬದಲ್ಲಿ ಒಂದು ಸೊಗಸು. ನಮ್ಮ ಅಪ್ಪನ ತಂದೆಯ ಕಡೆ (ಪಿತಾಮಹ ವಂಶ) ಮಹಾವಿಷ್ಣುವಿನ ಆರಾಧಕರು. ನಮ್ಮ ಅಪ್ಪನ ತಾಯಿಯ ಕಡೆ (ಮಾತಾಮಹ ವಂಶ) ರುದ್ರದೇವರ ಆರಾಧಕರು. ಇವರ ಮನೆಯಲ್ಲಿ ಎಲ್ಲ ಆಚರಣೆಗಳೂ ಈ ರೀತಿ. ಅವರ ಮನೆಯಲ್ಲಿ ಎಲ್ಲ ಆಚರಣೆಗಳೂ ಆ ರೀತಿ. ಇದು ಹಿಂದಿನ ಮೂರು ತಲೆಮಾರುಗಳಿಂದ ನಡೆದುಬಂದಿತ್ತು. ಉಭಯ ಕುಟುಂಬಗಳಲ್ಲೂ ಒಳ್ಳೆಯ ಸಾಮರಸ್ಯ ನಡೆದಿತ್ತು. ಈ ವಿಷಯವಾಗಿ ಎಂದೂ ಭಿನ್ನಾಭಿಪ್ರಾಯ ಬಂದಿರಲಿಲ್ಲ. ಅವರವರ ನಂಬಿಕೆ, ಆಚರಣೆಗಳು ಅವರವರಿಗೆ. ಅವರ ಹಬ್ಬ-ಉತ್ಸವಗಳಿಗೆ ಇವರು ಹೋಗುವರು. ಇವರ ಹಬ್ಬ-ಆಚರಣೆಗಳಿಗೆ ಅವರು ಬರುವರು. ಒಂದು ಕುಟುಂಬದ ಉಪಸ್ಥಿತಿಯಿಲ್ಲದೆ ಇನ್ನೊಂದು ಕುಟುಂಬದ ಯಾವ ಸಮಾರಂಭವೂ ನಡೆಯದು.  ಹೀಗೆ ನಡೆದುಬಂದಿತ್ತು. 

ನಮ್ಮ ತಂದೆಯವರಿಗೆ ಇಬ್ಬರು ಸೋದರಮಾವಂದಿರು. ಅವರಿಬ್ಬರೂ ವಯಸ್ಸಿನಲ್ಲಿ ನಮ್ಮ ಅಜ್ಜಿಗಿಂತ (ಅವರ ಅಕ್ಕ) ಚಿಕ್ಕವರು. ದೊಡ್ಡ ಸೋದರಮಾವ ತಂದೆಯವರಿಗಿಂತ ಮೂರು ವರುಷ ದೊಡ್ಡವರು. ಚಿಕ್ಕ ಸೋದರಮಾವ ತಂದೆಯವರಿಗಿಂತ ಕೆಲವು ತಿಂಗಳು ದೊಡ್ಡವರು. ಹೀಗಾಗಿ ಇವರು ಮೂವರೂ ಒಂದೇ ಓರಗೆಯವರು. ಜೊತೆಯಲ್ಲಿ ಬೆಳೆದವರು. ಮಾವಂದಿರು - ಸೋದರಳಿಯ ನೆಂಟತನಕ್ಕಿಂತ ಹೆಚ್ಚಾಗಿ ಸ್ನೇಹಿತರು. ಮೂವರೂ ಸೇರಿದಾಗ ವಿನೋದ ಪ್ರಧಾನವಾಗಿ ಕಾಲ ಕಳೆಯುತ್ತಿತ್ತು. 

ನಾನು ಶಾಲೆಗಳಲ್ಲಿ ಓದುತ್ತಿದ್ದಾಗ ತಂದೆಯವರ ಜೊತೆ ಅವರಿರುವಲ್ಲಿಗೆ ಹೋಗುತ್ತಿದ್ದೆ. ಅವರುಗಳ ಮಾತಿನ ವಿಷಯ ಕೆಲವು ವೇಳೆ ಅರ್ಥವಾಗುತ್ತಿತ್ತು. ಕೆಲವು ವೇಳೆ ಇಲ್ಲ. ಆಗ ಕೇಳಿದ ಕೆಲವು ವಿಷಯಗಳು ಮುಂದೆ ಎಂದೋ ನೆನಪಿಗೆ ಬಂದು, ನಮ್ಮ ಜೀವನಾನುಭವದ ಹಿನ್ನೆಲೆಯಲ್ಲಿ  ಅರ್ಥವಾಗಿವೆ. ಇದು ನನ್ನೊಬ್ಬನ ವಿಶೇಷ ಎಂದು ಮಾತ್ರವಲ್ಲ. ಅನೇಕರಿಗೆ ಅವರವರ ಜೀವನಗಳಲ್ಲಿ ಇದೇ ರೀತಿ ಅನುಭವಗಳು ಆಗಿರುತ್ತವೆ. 
*****

ನಮ್ಮ ಬಾಲ್ಯದಲ್ಲಿ ಪ್ರತಿ ಊರಿನಲ್ಲೂ ಪ್ರತಿವರುಷ ಊರಹಬ್ಬ ಆಚರಿಸುತ್ತಿದ್ದರು. ಈಗಲೂ ಅನೇಕ ಕಡೆ ನಡೆಯುತ್ತವೆ. ಊರಹಬ್ಬಕ್ಕೆ ಬಹಳ ಪ್ರಾಮುಖ್ಯತೆ ಇತ್ತು. ಹೊರಗಡೆ ಪ್ರದೇಶಗಳಲ್ಲಿ ಓದು, ಕೆಲಸ, ವ್ಯವಹಾರ ಮುಂತಾದ ಕಾರಣಗಳಿಂದ ವಾಸಿಸುತ್ತಿದ್ದ ಜನರು ಊರಹಬ್ಬಕ್ಕೆ ಬಂದು ಸೇರುತ್ತಿದ್ದರು. ಬಂಧು-ಬಾಂಧವರನ್ನು ಮತ್ತು ಸ್ನೇಹಿತರನ್ನು ವರುಷಕ್ಕೊಮ್ಮೆ ನೋಡಲು ಇದು ಒಂದು ಒಳ್ಳೆಯ ಅವಕಾಶವಾಗಿತ್ತು. ಬೆಂಗಳೂರಿನಲ್ಲಿ ಪ್ರತಿ ವರುಷ ಚಿತ್ರಾಪೂರ್ಣಿಮೆ (ಉಗಾದಿಯನಂತರ ಬರುವ ಹುಣ್ಣಿಮೆ) ಊರಹಬ್ಬ ನಡೆಯುತ್ತದೆ. ಅದು "ಬೆಂಗಳೂರು ಕರಗ" ಎಂದು ಪ್ರಸಿದ್ಧಿ. "ಕೆಂಪೇಗೌಡ ದಿನಾಚರಣೆ" ಎಂದೂ ಕರೆಯುತ್ತಾರೆ. ಈಗಲೂ ಬಹಳ ವಿಜೃಂಭಣೆಯಿಂದ  ನಡೆಯುತ್ತದೆ. ಹತ್ತಾರು ದೇವಾಲಯಗಳು ತಮ್ಮ ಉತ್ಸವ ಮೂರ್ತಿಗಳನ್ನು ಕರೆತಂದು ಸಿಟಿ ಮಾರ್ಕೆಟ್ ಬಳಿ ಸೇರುತ್ತಾರೆ. ಬೇರೆ ಊರುಗಳಲ್ಲಿಯೂ ಹೀಗೆಯೇ ಉಂಟು. 

ಒಮ್ಮೆ ತಂದೆಯವರ ಜೊತೆಗೆ ಅವರ ತೌರುಮನೆಗೆ (ತನ್ನ ತಾಯಿಯ ಹುಟ್ಟಿದ ಮನೆಯನ್ನು ಅವರು ಕರೆಯುತ್ತಿದ್ದುದು ಹೀಗೆಯೇ. ತೌರುಮನೆ ಅಂದರೆ "ತಾಯಿಯ ಮನೆ". ಅದು ಗಂಡಸರಿಗೆ ಏಕೆ ಇರಬಾರದು? ಎಂದು ಕೇಳುತ್ತಿದ್ದರು!) ಹೋಗಿದ್ದೆ. ಆಗ ಕೆಂಗೇರಿ ಬೇರೆಯ ಊರಾಗಿತ್ತು. ಈಗಿನಂತೆ ಬೆಂಗಳೂರಿನ ಹೊಟ್ಟೆಯೊಳಗೆ ಸೇರಿಕೊಂಡಿರಲಿಲ್ಲ. ಮಧ್ಯಾನ್ಹದ ಊಟದ ನಂತರ ಮೂವರು ಜೊತೆಗಾರರು ಮನೆಯ ಜಗುಲಿಯ ಮೇಲೆ ಕುಳಿತು ಮಾತಾಡುತ್ತಿದ್ದರು. ನಾನು ಸ್ವಲ್ಪದೂರ ಕುಳಿತು ನೋಡುತ್ತಿದ್ದೆ. 

"ಮುಂದಿನ ತಿಂಗಳು ಊರ ಹಬ್ಬ. ತಪ್ಪದೆ ಬಾ. ಹೋದ ವರುಷದಂತೆ ಚಕ್ಕರ್ ಹಾಕಬೇಡ"
"ನೋಡೋಣ. ಶಾಲೆಗೆ ರಜೆ ಇದ್ದರೆ ಬರುತ್ತೇನೆ"
"ಅದೆಲ್ಲ ಆಗದು. ರಜೆ ಇಲ್ಲದಿದ್ದರೆ ರಜೆ ಹಾಕಿ ಬಾ"
"ಓದುತ್ತಿದ್ದಾಗ ಅವಾಗವಾಗ ಚಕ್ಕರ್ ಹೊಡೆಯುತ್ತಿದ್ದೆ. ಈಗ ಏನು ಕಷ್ಟ?"
ಮೂವರೂ ನಕ್ಕರು. 

ಅಷ್ಟರಲ್ಲಿ ಎದುರು ಮನೆ ಗೃಹಿಣಿ ತನ್ನ ಮಕ್ಕಳು ಕಾಣಲಿಲ್ಲವೆಂದು ಮನೆಯ ಹೊರಗಡೆ ಬಂದು ನೋಡಿದಳು. ಇಬ್ಬರು ಮಕ್ಕಳು ಚೆನ್ನಾಗಿ ಮಣ್ಣಿನಲ್ಲಿ ಆಟ ಆಡುತ್ತಿದ್ದರು. ಮೈಯೆಲ್ಲ ಧೂಳಿನಿಂದ ಮುಚ್ಚಿತ್ತು. ನೋಡಿದ ಅವಳಿಗೆ ಕೋಪ ಬಂತು. "ಆಡಿ, ಆಡಿ; ಚೆನ್ನಾಗಿ ಆಡಿ. ಆಮೇಲೆ ಮನೆಗೆ ಬನ್ನಿ. ನಿಮಗೆ ಹಬ್ಬ ಮಾಡುತ್ತೇನೆ" ಅಂದು ಹೇಳಿ ಒಳಗೆ ಹೋದಳು. 

"ಏನಪ್ಪಾ, ನಿಮ್ಮಣ್ಣ ನನ್ನ ಊರಹಬ್ಬಕ್ಕೆ ಕರೀತಿದಾನೆ. ಅವಳು ನೋಡಿದರೆ ಮಕ್ಕಳಿಗೆ "ಹಬ್ಬ ಮಾಡುತ್ತೇನೆ" ಎಂದು ಹೇಳುತ್ತಿದ್ದಾಳೆ"
"ಅಣ್ಣ ನಿನಗೂ ಅಂತದೇ ಹಬ್ಬ ಮಾಡಬಹುದು. ಹುಷಾರಾಗಿರು"
"ಅಯ್ಯೋ, ಹುಚ್ಚಪ್ಪಗಳಾ. ಸಂದರ್ಭ ನೋಡಿ ಮಾತಿಗೆ ಅರ್ಥ ಮಾಡಬೇಕು. ಒಂದು ಮಾತಿಗೆ ಎಲ್ಲ ಕಡೆಯೂ ಒಂದೇ ಅರ್ಥ ಇರುವುದಿಲ್ಲ. ಇದು ಚೆನ್ನಾಗಿ ಗೊತ್ತಿದ್ದೂ ನನ್ನ ಹಾಸ್ಯ ಮಾಡುತ್ತಿದ್ದೀರಾ?"
ಮೂವರು ಮತ್ತೊಮ್ಮೆ ನಕ್ಕರು. 
*****

ನಂತರ ಕೆಲವು ವರುಷಗಳು ಕಳೆದ ಮೇಲೆ ಹಿರಿಯ ಸೋದರಮಾವ ತಿರುಮಕೂಡಲು ನರಸೀಪುರದಲ್ಲಿ (ಟಿ. ನರಸೀಪುರ) ವಾಸವಾಗಿದ್ದರು. ಒಮ್ಮೆ ಅವರ ಹುಟ್ಟಿದ ಹಬ್ಬ ಬಂದಿತು. ಪ್ರಾಯಶಃ "ಭೀಮರಥಿ ಶಾಂತಿ" ಇರಬಹುದು. (70ನೆಯ ವರುಷದ ಹುಟ್ಟಿದ ಹಬ್ಬವನ್ನು ಭೀಮರಥಿ ಶಾಂತಿ ಎಂಬುದಾಗಿ ಆಚರಿಸುತ್ತಾರೆ). ತಿರುಮಕೂಡಲು ಕಪಿಲ-ಕಾವೇರಿ ನದಿಗಳ ಸಂಗಮ ಕ್ಷೇತ್ರ. ಉತ್ತರ ಭಾರತದಲ್ಲಿ ಗಂಗಾ-ಯಮುನಾ-ಸರಸ್ವತಿ ನದಿಗಳ ಸಂಗಮ ಪ್ರಯಾಗದಲ್ಲಿ ಇರುವಂತೆ ಇಲ್ಲಿ ಕಪಿಲಾ-ಕಾವೇರಿ-ಸ್ಫಟಿಕ ಸರೋವರ ನದಿಗಳ ತ್ರಿವೇಣಿ ಸಂಗಮವೆಂದು ಪ್ರತೀತಿ. ಇಲ್ಲಿನ "ಗುಂಜಾ ನರಸಿಂಹಸ್ವಾಮಿ" ಮತ್ತು "ಅಗಸ್ತ್ಯೇಶ್ವರ" ದೇವಾಲಯಗಳು ಇತಿಹಾಸ ಪ್ರಸಿದ್ಧ. 

"ಗರ್ಗೇಶ್ವರಿ" ಅನ್ನುವುದು ತಿರುಮಕೂಡಲಿನಿಂದ ಮೂರು ಮೈಲು ದೂರದ ಒಂದು ಕ್ಷೇತ್ರ. ಇಲ್ಲಿನ ದೊಡ್ಡ ಶಿವಲಿಂಗ "ಅರ್ಧನಾರೀಶ್ವರ" ಅನ್ನುತ್ತಾರೆ. ಈಗ ಈ ಊರೂ ನರಸೀಪುರದಲ್ಲಿಯೇ ಸೇರಿಹೋಗಿದೆ. ಈ ಗರ್ಗೇಶ್ವರಿ ದೇವಸ್ಥಾನದಲ್ಲಿ ಹುಟ್ಟು ಹಬ್ಬದ ಸಮಾರಂಭದ ಪ್ರಯುಕ್ತ "ಏಕಾದಶವಾರ ರುದ್ರಾಭಿಷೇಕ" ಏರ್ಪಡಿಸಿದ್ದರು. ಜ್ಞಾನವೃದ್ಧರೂ, ವಯೋವೃದ್ಧರೂ ಆದ ಘನಪಾಠಿ ಗುರುಗಳು ಶಿಷ್ಯರ ಸಮೇತ ಆಗಮಿಸಿ ರುದ್ರ-ಚಮಕಗಳ ಅದ್ಭುತ ಪಾರಾಯಣ-ಅಭಿಷೇಕಾದಿಗಳನ್ನು ನಡೆಸಿದರು. 

ಕಾರ್ಯಕ್ರಮ ಮುಗಿದ ನಂತರ ಊಟಕ್ಕೆ ತಯಾರಾಗುವ ವೇಳೆಯಲ್ಲಿ ಈ ಮೂವರೂ ಆ ಗುರುಗಳ ಬಳಿ ಕೆಲವು ವಿಷಯಗಳನ್ನು ಪ್ರಸ್ತಾಪಿಸಿದರು. 

"ಗುರುಗಳೇ. ರುದ್ರದೇವರು ಅಖಂಡ ವೈರಾಗ್ಯ ಮೂರ್ತಿಗಳು. ಅವರ ಬಳಿ ನಾವು ಈ ಪ್ರಾರ್ಥನೆಗಳನ್ನು ಮಾಡಿ ಅನೇಕ ವರಗಳನ್ನು ಕೇಳುತ್ತೇವೆ. ಇವುಗಳಲ್ಲಿ ಅನೇಕ ಕೋರಿಕೆಗಳು ಭೌತಿಕ ವಸ್ತುಗಳು. ಈ ನಮ್ಮ ಜೀವನ ಸುಖವಾಗಿರಲು ಕೇಳಿಕೊಳ್ಳುವುವು. ಹೆಚ್ಚೂ-ಕಡಿಮೆ ಪ್ರತಿಯೊಂದು ವಸ್ತುವನ್ನೂ ಕೇಳುತ್ತೇವೆ. ಇದು ಸರಿಯೇ?"
"ಏಕೆ? ಕೇಳಬಾರದೆಂದು ನಿಮ್ಮ ಅಭಿಪ್ರಾಯವೇ?"
"ವೈರಾಗ್ಯ ಮೂರ್ತಿಯ ಬಳಿ ವೈರಾಗ್ಯ ಹುಟ್ಟುವ ರೀತಿಯ ಬೇಡಿಕೆ ಇಡಬೇಕಲ್ಲದೆ ಈ ರೀತಿ ಸುಖ-ಸಾಧನಗಳನ್ನು ಕೇಳುವುದು ನ್ಯಾಯವೇ?"
"ಎಲ್ಲರಿಗೂ ಸುಲಭವಾಗಿ ವೈರಾಗ್ಯ ಬರುವುದಿಲ್ಲವಲ್ಲ?"
"ಅಂದಮಾತ್ರಕ್ಕೆ ವೈರಾಗ್ಯ ಕೇಳದೆ ಈ ಸುಖ ಸಾಧನಗಳನ್ನು ಕೇಳಬಹುದೇ?"

"ಈ ಭೂಮಿಯಲ್ಲಿ ಜೀವನ ಮಾಡುವಾಗ ಇಹ-ಪರ ಎರಡರ ಕುರಿತೂ ಯೋಚಿಸಬೇಕು. ಬಹಳ ಕಡಿಮೆ ಮಂದಿಗೆ ಚಿಕ್ಕ ವಯಸ್ಸಿನಲ್ಲಿ ವೈರಾಗ್ಯ ಬರುತ್ತದೆ. ಸಾಮಾನ್ಯವಾಗಿ ಹೆಚ್ಚಿನ ಮಂದಿಗೆ ಕಾಲಕ್ರಮದಲ್ಲಿ ವೈರಾಗ್ಯ ಬರುವುದು. ಕೆಲವರಿಗಂತೂ ಅದು ಬರುವುದೇಯಿಲ್ಲ. ಸಾಧನೆಗೆ ಅನೇಕ ಪರಿಕರಗಳು ಬೇಕಲ್ಲ. ಇಲ್ಲಿನ ಜೀವನವೂ ಚೆನ್ನಾಗಿ ನಡೆಯಬೇಕು. ನಾವು ವೈಯುಕ್ತಿಕವಾಗಿ ಏನನ್ನೂ ಬೇಡ ಅನ್ನಬಹುದು. ಆದರೆ ಗೃಹಸ್ಥರಾದ ನಮ್ಮನ್ನು ನಂಬಿ ನಮ್ಮ ಜೊತೆ ಬಾಳುವ ಕುಟುಂಬದವರ ವಿಷಯವೇನು? ಸನ್ಯಾಸಿಯಾಗಿ ಗುರುಕುಲ ನಡೆಸುವವನಾದರೂ ಅವನ ಚಿಕ್ಕ ವಯಸ್ಸಿನ ಶಿಷ್ಯವೃಂದದ ಕಥೆ ಏನು? ಒಂಟಿಯಾಗಿ ಸಾಧನೆ ಮಾಡುವವನಿಗೂ, ಅನೇಕ ಮಂದಿಯ ಜೊತೆಯಲ್ಲಿದ್ದು ಸಾಧನೆ ಮಾಡುವವನಿಗೂ ವ್ಯತ್ಯಾಸವಿಲ್ಲವೇ? ಇಲ್ಲಿಯೂ ಚೆನ್ನಾಗಿ ಬಾಳುವೆ ನಡೆಸಬೇಕು. ಮುಂದಿನ ದಾರಿಯೂ ಸರಿಯಾಗಿ ಗೊತ್ತಾಗಬೇಕು. ಈ ಪ್ರಾರ್ಥನೆಗಳು ಎರಡನ್ನೂ ಸರಿತೂಗಿಸಿ ಜೀವನ ನಡೆಸಲು ಬೇಕಾದುವನ್ನು ಕೇಳುತ್ತವೆ. ಇದರಲ್ಲಿ ತಪ್ಪೇನೂ ಕಾಣುವುದಿಲ್ಲ. ಆದರೆ, ಈ ಪರಿಕರಗಳಿಂದ ಸುಖಿಸುವುದರಲ್ಲಿ ಮುಳುಗಿ ಸಾಧನೆಯನ್ನು ಬಿಡಬಾರದು. ಆ ಎಚ್ಚರ ವಹಿಸಬೇಕು. ಆ ರುದ್ರರೇ ಇದನ್ನು ನಡೆಸಿಕೊಡುತ್ತಾರೆ ಎನ್ನುವುದು ಧೃಡವಾದ ನಂಬಿಕೆಯಾಗಿ ಇರಬೇಕು"

"ಒಂದು ಕಡೆ "ಲೋಹವನ್ನು ಕೊಡು ಎಂದು ಕೇಳುತ್ತೇವಲ್ಲ? ಬದುಕು ಹಸನಾಗಲು, ಸುಖಮಯವಾಗಲು ಬೆಳ್ಳಿ-ಬಂಗಾರ ಮುಂತಾದುವನ್ನು ಕೇಳುವ ಬದಲು ಕಬ್ಬಿಣವನ್ನು ಕೇಳುವುದೇ?"

"ಲೋಹ ಎಂದರೆ ಕೇವಲ ಕಬ್ಬಿಣ ಎಂದು ಅರ್ಥ ಮಾಡಬಾರದು. ಬೆಳ್ಳಿ-ಬಂಗಾರಗಳೂ ಲೋಹಗಳೇ ತಾನೇ? ಲೋಹ (ಮೆಟಲ್) ಆನ್ನುವುದು ವಿಜ್ಞಾದಲ್ಲಿಯೂ ಒಂದು ಧಾತುಗಳ ಕುಟುಂಬ. ಇದಲ್ಲದೆ ಅನೇಕ ವ್ಯವಹಾರಗಳಲ್ಲಿ ಮನುಷ್ಯನ ಮನಸ್ಸು ಬೇರೆ ಬೇರೆ ರೀತಿ ಪ್ರಕಟವಾಗುತ್ತದೆ. ಒಮ್ಮೆ "ಅವರದು ಹೂವಿನಂತಹ ಮನಸ್ಸು" ಎನ್ನುತ್ತೇವೆ. ಮತ್ತೊಮ್ಮೆ "ಅವನದು ಕಲ್ಲಿನ ಮನಸ್ಸು" ಅನ್ನುತ್ತೇವೆ. ಏಕೆ ಹೀಗೆ?"

"ವ್ಯವಹರಿಸುವಲ್ಲಿ ಮನಸ್ಸಿನ ಮೃದುತ್ವ ಅಥವಾ ಕಾಠಿಣ್ಯವನ್ನು ಗುರುತಿಸಲು ಹೀಗೆ ಹೇಳುತ್ತೇವೆ"
"ಕಲ್ಲನ್ನು ಭೇದಿಸಲು ಏನು ಬಳಸುತ್ತಾರೆ?"
"ಉಳಿ ಮತ್ತು ಸುತ್ತಿಗೆ"
"ಉಳಿ ಮತ್ತು ಸುತ್ತಿಗೆಯನ್ನು ಬಂಗಾರದಿಂದ ಮಾಡಬಹುದೋ?"
"ಅರ್ಥವಾಗಲಿಲ್ಲ"

"ಕಲ್ಲಿಗಿಂತಲೂ ಕಠಿಣವಾದುದು ಕಬ್ಬಿಣ. ಇಲ್ಲಿ ಲೋಹವನ್ನು ಕೊಡು ಅಂದರೆ ಕಬ್ಬಿಣದ ಉಂಡೆಯನ್ನು ಕೊಡು ಎಂದು ಅರ್ಥವಲ್ಲ. "ಸಾಧನೆಯ ದಾರಿಯಲ್ಲಿ ನಮ್ಮ ಮನಸ್ಸನ್ನು ಕಬ್ಬಿಣದಂತೆ ಗಟ್ಟಿ ಮಾದು" ಎಂದು ಕೇಳುವ ಭಾವ. ಯಾವುದೇ ಪ್ರಲೋಭನೆಗಳಿಗೆ ಮನಸ್ಸು ಮೆದುವಾಗಿ ಸಾಧನೆಯ ದಾರಿಯಿಂದ ವಿಮುಖವಾಗಬಾರದು. ಬೇರೆ ರೀತಿಯ ಸಂಪತ್ತನ್ನು ಕೇಳಿಯಾಗಿದೆ. ಇಲ್ಲಿ ನಮ್ಮ ಮನಸ್ಸನ್ನು ಕಬ್ಬಿಣದಂತೆ ಗಟ್ಟಿ ಮಾಡು ಎಂದು ಕೇಳುವ ಪ್ರಾರ್ಥನೆ. ಸಂದರ್ಭ ನೋಡಿ ಪದಗಳಿಗೆ ಅರ್ಥ ಮಾಡಬೇಕಲ್ಲವೇ?"

ಇನ್ನು ಕೆಲವು ಪ್ರಶ್ನೆಗಳಾದ ಮೇಲೆ ಊಟದ ಕರೆ ಬಂತು.  

*****

ರುದ್ರದೇವರ ಕರುಣೆಯಿಲ್ಲದೆ ಮನಸ್ಸು ಗಟ್ಟಿಯಾಗದು. ಶ್ರೀವಿಜಯದಾಸರು ಶಂಭುವಿನ ಕುರಿತಾದ ಅವರ ಒಂದು ದೇವರನಾಮದಲ್ಲಿ ಹೀಗೆ ಹೇಳುತ್ತಾರೆ:

ಕೈಲಾಸವಾಸ ಗೌರೀಶ ಈಶ 
ತೈಲಧಾರೆಯಂತೆ ಮನಸು ಕೊಡು ಹರಿಯಲ್ಲಿ ಶಂಭೋ 
ಕೈಲಾಸವಾಸ ಗೌರೀಶ ಈಶ  
 
ಮನಸು ಕಾರಣವಲ್ಲ ಪಾವ ಪುಣ್ಯಕ್ಕೆಲ್ಲ  
ಅನಲಾಕ್ಷ ನಿನ್ನ ಪ್ರೇರಣೆಯಿಲ್ಲದೆ 
ದನುಜಗಜ ಮದಹಾರಿ ದಂಡಪ್ರಣಾಮ ಮಾಳ್ಪೆ 
ಮಣಿಸೋ ಈ ಶಿರವನ್ನು ಸಜ್ಜನರ ಚರಣದಲಿ 

ಒಂದು ಪಾತ್ರೆಯಿಂದ ನೀರನ್ನು ಸುರಿಸಿದರೆ ಅದು ಬೀಳುವ ರೀತಿಯನ್ನೂ, ಮತ್ತೊಂದು ಪಾತ್ರೆಯಿಂದ ಎಣ್ಣೆಯನ್ನು ಸುರಿದರೆ ಅದು ಬೀಳುವ ರೀತಿಯನ್ನೂ ಒಟ್ಟಾಗಿ ನೋಡಿದರೆ ವ್ಯತ್ಯಾಸ ಸ್ಪಷ್ಟವಾಗಿ ಕಾಣುತ್ತದೆ. (ಇವನ್ನು ನಾವು ಪ್ರತಿದಿನ ನೋಡುತ್ತಿರುತ್ತೇವೆ. ಗಮನಿಸಿರುವುದಿಲ್ಲ) ಮನಸ್ಸು ಅಲ್ಲಿ-ಇಲ್ಲಿ ಹೋಗದಂತೆ ಒಂದೇ ಧಾರೆಯಾಗಿ ಕೇಂದ್ರೀಕರಿಸಲು ಆ ಶಂಭುವಿನ ಕರುಣೆ ಬೇಕು. 

ಪಂಡಿತ ಭೀಮಸೇನ ಜೋಶಿಯವರು ಹಾಡಿರುವ ಈ ಹಾಡನ್ನು ಇಲ್ಲಿ ಕೇಳಬಹುದು:

https://www.youtube.com/watch?v=KO772laPz3I


******

ಮೇಲಿನ ಹಾಡಿನಲ್ಲಿ "ಮನಸು ಕಾರಣವಲ್ಲ" ಮತ್ತು "ದನುಜ ಗಜ ಮದಹಾರಿ" ಎನ್ನುವ ಪದಗಳ ವಿಶೇಷಾರ್ಥಗಳನ್ನು ಮುಂದೊಮ್ಮೆ ನೋಡೋಣ. 

Friday, June 27, 2025

ದೇವರಲ್ಲಿ ಬೇಡುವುದು ಸರಿಯೇ?


ಹಿಂದಿನ ಸಂಚಿಕೆಗಳಲ್ಲಿ "ಅಷ್ಟ ಭೋಗ", "ಅಷ್ಟ ಭಾಗ್ಯ" ಮತ್ತು "ಅಷ್ಟ ಐಶ್ವರ್ಯ" ಇವುಗಳ ಬಗ್ಗೆ ಸ್ವಲ್ಪಮಟ್ಟಿಗೆ ಚರ್ಚೆ ಮಾಡಿದೆವು. (ಈ ಹಿಂದಿನ ಸಂಚಿಕೆಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ). ಇವುಗಳು ತಾವಾಗಿಯೇ ಸಿಗುವುದಿಲ್ಲ. ಕೆಲವನ್ನು ಸ್ವಲ್ಪ ಮಟ್ಟಿಗೆ ನಾವೇ ಸ್ವಂತ ಪರಿಶ್ರಮದಿಂದ ಗಳಿಸಬಹುದಾದರೂ ಅವುಗಳ ಪ್ರಮಾಣ ಹೆಚ್ಚಿರುವುದಿಲ್ಲ. ಅಷ್ಟೇ ಅಲ್ಲ, ಮನುಷ್ಯ ಸಹಜ ಬುದ್ಧಿಯ ಕಾರಣವಾಗಿ ಎಷ್ಟು ಸಂಪಾದನೆ ಮಾಡಿದರೂ ತೃಪ್ತಿ ಎನ್ನುವುದು ಬರುವುದಿಲ್ಲ. "ಇಷ್ಟು ದೊರಕಿದರೆ ಇನ್ನಷ್ಟು ಬೇಕೆಂಬಾಸೆ. ಅಷ್ಟು ದೊರಕಿದರೆ ಮತ್ತಷ್ಟು ಬೇಕೆಂಬಾಸೆ. ಕಷ್ಟ ಬೇಡ ಎಂಬಾಸೆ. ಕಡು ಸುಖವ ಕಾಂಬಾಸೆ." ಎಂದು ದಾಸರು ಹೇಳುವಂತೆ ಮನುಷ್ಯನಿಗೆ ಕಷ್ಟ ಬೇಡವೇ ಬೇಡ. ಸುಖ ಬೇಕೇ ಬೇಕು. ಅಷ್ಟೇ ಅಲ್ಲ. ಸುಖ ಇದ್ದಷ್ಟೂ ಇನ್ನೂ ಹೆಚ್ಚು ಬೇಕೆಂಬ ತವಕ. 

ತಾವಾಗಿಯೇ ಸಿಗದ, ನಾವು ಕಷ್ಟ ಪಟ್ಟರೂ ಪೂರ್ಣವಾಗಿ ಎಟುಕದ, ಆದರೆ ಬೇಕೆಂಬ ತುಡಿತವುಳ್ಳ ಈ ವಿಷಯಗಳನ್ನು ಪಡೆಯುವುದು ಹೇಗೆ? ನಮ್ಮ ಅನುಭವ ಹೇಳಿಕೊಟ್ಟಂತೆ ನಮ್ಮಲ್ಲಿ ಇಲ್ಲದಿದ್ದುದನ್ನು ಬೇರೆಯವರಿಂದ ಕೇಳಿ ಪಡೆಯಬಹುದು. ಹಾಗಿದ್ದರೆ ಯಾರನ್ನು ಕೇಳಬೇಕು? ಯಾರಾದರೂ ತಮ್ಮ ಬಳಿ ಇರುವುದನ್ನು ಮಾತ್ರ ಕೊಡಬಲ್ಲರು. ಅವರ ಬಳಿಯೇ ಇಲ್ಲದಿದ್ದುದನ್ನು ಯಾರಾದರೂ ಕೊಡುವುದು ಹೇಗೆ? ಆದಕಾರಣ ನಾವು ನಂಬಿದ ದೇವರನ್ನೋ, ದೇವತೆಯನ್ನೋ ಕೇಳಬಹುದು. ಅದರಲ್ಲಿಯೂ ಯಾರು ಸುಲಭವಾಗಿ ನಮಗೆ ಒಲಿಯುವವರೋ ಅವರನ್ನು ಕೇಳುವುದು. ಅವರಲ್ಲಿ ಕೊಡುವ ಶಕ್ತಿ ಇದ್ದರೂ ಕೇಳಿದರೆ ಕೊಡದವರನ್ನು ಬೇಡಿ ಏನು ಪ್ರಯೋಜನ? 

ಸಾಧನೆಯ ದಾರಿಯಲ್ಲಿ ನಡೆಯುತ್ತಿರುವ ಜಿಜ್ಞಾಸುವಿಗೆ "ಹೀಗೆ ಕೇಳುವುದು ಸರಿಯೇ?" ಎಂಬ ಅನುಮಾನ ಬರುವುದು ಸಹಜ. ವಾಸ್ತವವಾಗಿ ಈ ರೀತಿಯ ಅನುಮಾನ ಬರುವುದೇ ಒಂದು ಒಳ್ಳೆಯ ಸೂಚನೆ. ಎಷ್ಟು ಸಿಕ್ಕಿದರೂ ತೃಪ್ತಿ ಇಲ್ಲದ ಜೀವಕ್ಕೆ ಕೇಳುವುದರ ಎಲ್ಲೆ ಎಲ್ಲಿ? "ಕಿಂಗ್ ಮೈದಾಸ" ಕೇಳಿದಂತೆ ಮುಟ್ಟಿದ್ದೆಲ್ಲವೂ ಚಿನ್ನವಾಗಬೇಕು. ಅದು ನಿಜವಾಗಿ ಮುಟ್ಟಿದ್ದೆಲ್ಲಾ ಚಿನ್ನವಾದಾಗ, ತನ್ನ ಮುದ್ದಿನ ಮಗಳೂ ಒಂದು ಚಿನ್ನದ ಬೊಂಬೆಯಾಗಿ ಕುಳಿತಾಗ, ಅವನ ಕಣ್ಣು ತೆರೆಯಿತು. ಅಂತಹ ಅತಿರೇಕಕ್ಕೆ ಹೋಗದಿದ್ದರೆ ಆ ರೀತಿಯ ಪಾಠ ಕಲಿಯುವುದೂ ಸುಲಭ ಸಾಧ್ಯವಲ್ಲ. ಎಲ್ಲಕ್ಕಿಂತ ಮಿಗಿಲಾಗಿ ಒಮ್ಮೆ ಕೇಳುವುದು ಅಭ್ಯಾಸವಾದರೆ ಆ ದುರಭ್ಯಾಸ ನಿಲ್ಲಿಸುವುದು ಕಷ್ಟವೇ. ಇದರಿಂದ ಹೊರಬರುವುದು ಹೇಗೆ?
*****

ಒಬ್ಬ ದೊಡ್ಡ ಧನಿಕ ಇದ್ದಾನೆ. ಅವನ ಬಳಿ ಬೇಕಾದಷ್ಟು ಐಶ್ವರ್ಯ ಇದೆ. ಕೊಡುವ ಶಕ್ತಿಯ ಜೊತೆ ಕೊಡುವ ಮನಸ್ಸೂ ಇದೆ. ಅನೇಕರು ಅವನ ಬಳಿ ಬಂದು, ಬೇಡಿ, ಬೇಕಾದುದನ್ನು ತೆಗೆದುಕೊಂಡು ಹೋಗುತ್ತಾರೆ. ಈ ರೀತಿ ತೆಗೆದುಕೊಂಡು ಹೋಗುವವರ ಸರತಿಯ ಸಾಲೇ ಇದೆ. 

ಒಂದು ದಿನ ಮೊದಲನೆಯವನು ಬಂದ. ಅವನಿಗೆ ಸ್ವಂತ ಖರ್ಚಿಗೆ ಹಣ ಬೇಕು. ಅದನ್ನು ಕೇಳುವುದಕ್ಕಾಗಿ ಬಂದಿದ್ದಾನೆ. ಕೇಳಲು ನಾಚಿಕೆ. ಬಹಳ ಸಂಕೋಚದಿಂದ ತಲೆ ಕೆಳಗೆ ಮಾಡಿ ಬೇಡುತ್ತಾನೆ. ಕೊಡುವ ಧನಿಕನ ಕೈ ಯಾವಾಗಲೂ ಮೇಲೆ. ಕೇಳುವವನಿಗೆ ಅನುಮಾನ. "ಕೊಡುತ್ತಾನೋ ಇಲ್ಲವೋ ಗೊತ್ತಿಲ್ಲ. ಹೇಗೆ ಕೇಳುವುದು? ಯಾವ ರೀತಿ ಕೇಳಿದರೆ ಕೊಡಬಹುದು? ಇಲ್ಲ ಅಂದುಬಿಟ್ಟರೆ ಏನು ಮಾಡುವುದು? ಕೊಟ್ಟರೂ ಏನು ಹೇಳಿ ಕೊಡುತ್ತಾನೋ? ಸಾಲ ಎಂದು ಕೊಡಬಹುದು. ಇಷ್ಟು ಬಡ್ಡಿ ಎಂದು ಹೇಳಬಹುದು. ಈಗ ಇಲ್ಲ, ನಾಳೆ ಬಾ ಎನ್ನಬಹುದು. ಹತ್ತು ಬಾರಿ ಓಡಾಡಿಸಿ ಕೊಡಬಹುದು. ಇನ್ನೊಬ್ಬರ ಮುಂದೆ ಅವಮಾನ ಮಾಡಬಹುದು. ಏನಾದರೂ ಕೇಳಲೇಬೇಕು. ವಿಧಿಯಿಲ್ಲ" ಹೀಗೆಲ್ಲಾ ಮನಸ್ಸಿನಲ್ಲಿ ಗೊಂದಲ. ಕಡೆಗೆ ಧೈರ್ಯ ಮಾಡಿ ಕೇಳಿದ. ಸಾಹುಕಾರ ಕೊಟ್ಟೇಬಿಟ್ಟ. ಅವನ ಕೆಲಸವಾಯಿತು. ಹೊರಟುಹೋದ. 

ಈಗ ಎರಡನೆಯವನು ಬಂದ. ಇವನು ತನಗೋಸ್ಕರ ಹಣ ಕೇಳಲು ಬಂದವನಲ್ಲ. ಇವನು ಯಾವುದೋ ಸಂಸ್ಥೆಯ ಒಬ್ಬ ವಿಶ್ವಸ್ತ ಮಂಡಳಿಯವನು (ಟ್ರಸ್ಟೀ). ಕೇಳುತ್ತಿರುವುದು ತನಗಾಗಿ ಅಲ್ಲ. ಟ್ರಸ್ಟಿಗಾಗಿ. ಪಡೆವ ಹಣದಿಂದ ಸ್ವಂತಕ್ಕೆ ಪ್ರಯೋಜನ ಪಡೆಯುವ ಅಭಿಲಾಷೆ ಇಲ್ಲ. ಹಣ ತೆಗೆದುಕೊಂಡಮೇಲೆ ತನ್ನದು ಅನ್ನುವ ಭಾವನೆ ಇಲ್ಲ. ದುರುಪಯೋಗ ಮಾಡಬೇಕೆಂಬ ಇರಾದೆ ಇಲ್ಲ. ತನಗಾಗಿ ಎಂದು ಕೇಳದುದರಿಂದ ಸಂಕೋಚವೂ ಇಲ್ಲ. ಕೊಡುವವನು ಇದನ್ನು ಸಾಲ ಎಂದು ಕೊಡುವುದಿಲ್ಲ. ಹಣ ಕೇಳಲು ಬಂದಿದ್ದರೂ ಸಾಹುಕಾರ ಗೌರವದಿಂದ ಕಾಣುತ್ತಾನೆ. ಕೂಡಿಸಿ ಮಾತನಾಡಿಸುತ್ತಾನೆ. ಸಾಹುಕಾರ ಕೊಡುತ್ತಾನೆ. ಇವನು ತೆಗೆದುಕೊಂಡು ಹೋಗುತ್ತಾನೆ. ತೆಗೆದುಕೊಂಡುದನ್ನು ಸರಿಯಾಗಿ, ಕೇಳಿದ ಉದ್ದೇಶ ಸಾಧನೆಗೆ ಉಪಯೋಗಿಸುತ್ತಾನೆ. 

ಇಬ್ಬರಾದಮೇಲೆ ಮೂರನೆಯವನು ಬಂದ . ಅವನು ಏನನ್ನೂ ಕೇಳಲು ಬಂದವನಲ್ಲ. ಅವನಿಗೆ ಏನೂ ಬೇಕಾಗಿಲ್ಲ. ಇರುವುದರಲ್ಲೇ ತೃಪ್ತನಾಗಿದ್ದಾನೆ. ಅವನಿಗೆ ಯಾವ ಪದಾರ್ಥವನ್ನೂ ಕೇಳಬೇಕೆಂಬ ಅಭಿಲಾಷೆ ಇಲ್ಲ. ಬದಲಾಗಿ ಅವನೇ ಸಾಹುಕಾರನಿಗೆ ಕೊಡಲು ಹಣ್ಣನ್ನು ತಂದಿದ್ದಾನೆ. ಹಣ್ಣು ಕೊಡುತ್ತಾನೆ. ಅಷ್ಟೇ. ಆದರೆ ಸಾಹುಕಾರ "ನಿನಗೆ ಏನು ಬೇಕು? ಕೇಳು. ಸಂತೋಷದಿಂದ ಕೊಡುತ್ತೇನೆ" ಅನ್ನುತ್ತಾನೆ. "ನನಗೆ ಏನೂ ಬೇಡ. ನಿನ್ನನ್ನು ಕಾಣಲು ಬಂದೆ. ನೋಡಿದ್ದಾಯಿತು. ಅಷ್ಟು ಸಾಕು" ಅನ್ನುತ್ತಾನೆ ಬಂದವನು. ಸಾಹುಕಾರ ಬಲವಂತ ಮಾಡಿ ಏನನ್ನೋ ಕೊಡುತ್ತಾನೆ.  ಬಂದವನು ಅದನ್ನು ತೆಗೆದುಕೊಂಡು ಹೋಗುತ್ತಾನೆ. ಕೊಡು ಎಂದು ಕೇಳಲಿಲ್ಲ. ಕೊಡದಿದ್ದರೆ ದುಃಖವಿಲ್ಲ. ಸಾಹುಕಾರ ತಾನಾಗಿಯೇ ಕೊಟ್ಟಿದ್ದನ್ನು ತೆಗೆದುಕೊಂಡಾಗ ಸಂತೋಷವಿಲ್ಲ. ಸಂತೋಷವಿಲ್ಲ ಎಂದರೆ ವಿಷಾದವೂ ಇಲ್ಲ. ಒಂದು ರೀತಿಯ ನಿರ್ಲಿಪ್ತ ಭಾವನೆ. "ನೀನು ಕೊಟ್ಟೆ. ಅದನ್ನು ಗೌರವಪೂರ್ವಕ ಸ್ವೀಕರಿಸುತ್ತೇನೆ. ಅದರ ಮೌಲ್ಯ ನೋಡಿ ಅಲ್ಲ. ಕೊಟ್ಟವನಾದ ನಿನ್ನ ದೊಡ್ಡತನ ನೋಡಿ ತೆಗೆದುಕೊಂಡೆ" ಎನ್ನುವ ಭಾವ. 
*****

ಭಗವಂತನೆಂಬ ದೊಡ್ಡ ಸಾಹುಕಾರ. ಬಂದವರು ಮೂರು ರೀತಿಯ ಭಕ್ತರು. ಮೊದಲನೆಯವನು ತನಗೆ ಬೇಕು ಎಂದು ಕೇಳುವ "ಸಕಾಮಿ ಭಕ್ತ". ಕೇಳಿ ಪಡೆದದ್ದರಿಂದ ಸುಖ ಪಡುವ ಅಭಿಲಾಷೆ. ಸಾಹುಕಾರನ ಬಳಿ ಹೋಗುವಾಗಲೇ ಏನು ಬೇಕು ಎಂದು ತೀರ್ಮಾನ ಮಾಡಿ ಅದನ್ನು ಕೇಳಿದವ. ಕೇಳಿದ ಉದ್ದೇಶದಲ್ಲಿ ಅನುಮಾನವಿಲ್ಲ. ಅದು ಸ್ವಾರ್ಥಕ್ಕೇ. ಆದರೂ ಭಗವಂತ ಕೊಟ್ಟ. ಭಕ್ತನಿಗೆ ಸಂತೋಷ. ಮತ್ತೆ ಇನ್ನೊಂದು ದಿನ ಮತ್ತೊಂದು ಬೇಕಾದಾಗ ಹೀಗೆ ಅವನ ಬಳಿ ಹೋಗುತ್ತಾನೆ. ಎಂದೋ ಒಂದು ದಿನ ಮುಂದಿನ ಹಂತಕ್ಕೆ ತೇರ್ಗಡೆ ಆಗಬಹುದು. ಪರಮಾತ್ಮ ಕರುಣಾಳು. ಅವನನ್ನು ತಳ್ಳಿ ಓಡಿಸುವುದಿಲ್ಲ. ಹೆಚ್ಚಿನ ಭಕ್ತರು, ಅವರ ಅನುಷ್ಠಾನಗಳು ಈ ರೀತಿಯವೇ. 

ಎರಡನೆಯವನೂ ಬೇಡಲೆಂದೇ ಬಂದವನು. ಆದರೆ ಪಡೆದುದರಿಂದ ಸುಖ ಪಡುವ ಅಭಿಲಾಷೆ ಇಲ್ಲ. ಆ ಪರಿಕರಗಳಿಂದ ಮತ್ತಷ್ಟು ಸಾಧನೆ ಮಾಡಲು ಅನುಕೂಲ ಎಂದು ಬೇಡುತ್ತಿದ್ದಾನೆ. ಇವನಿಗೆ ಕೊಡುವುದರಿಂದ ಸರಿದಾರಿಯಲ್ಲಿ ಮುಂದುವರೆಯುತ್ತಾನೆ ಎನ್ನುವುದು ಅವನಿಗೂ ಗೊತ್ತು. (ಅವನಿಗೆ ಎಲ್ಲವೂ ಗೊತ್ತು). ಮೊದಲಿನವನಂತೆ ಇವನೂ ಬೇಡುವವನೇ ಆದರೂ ಇವನಿಗೆ ಗೌರವವೂ ಸಿಗುತ್ತದೆ. ಕೇಳಿದ್ದೂ ಸಿಗುತ್ತದೆ. ಈ ರೀತಿ ಭಕ್ತರು ಮೊದಲಿನವರಿಗಿಂತ ಸಂಖ್ಯೆಯಲ್ಲಿ ಕಡಿಮೆ. 

ಮೂರನೆಯವರದು ಬೇರೆಯೇ ರೀತಿ. ಅವರಿಗೆ ಭಗವಂತನ ಪ್ರೀತಿ ಬಿಟ್ಟು ಬೇರೆ ಏನೂ ಬೇಕಾಗಿಲ್ಲ. ಮಾಡಿದ ಪ್ರತಿ ಕೆಲಸವೂ ಅವನ ಪ್ರೀತಿಗಾಗಿ. ಸಂಕಲ್ಪ ಮಾಡುವಾಗ "ಅಸ್ಮಾಕಂ ಸಹಕುಟುಂಬಾನಾಂ" ಇಲ್ಲ. "ಲೋಕ ಕಲ್ಯಾಣಾರ್ಥಂ" ಮಾತ್ರವೇ ಉಂಟು. "ಪರಮೇಶ್ವರ ಪ್ರೇರಣಯಾ, ಪರಮೇಶ್ವರ ಪ್ರೀತ್ಯರ್ಥಂ" ಎನ್ನುವುದೇ ಧ್ಯೇಯ. "ಕರ್ಮ ಫಲ" ಎಂಬ ಹಣ್ಣನ್ನೂ ಭಗವಂತನಿಗೇ ಕೊಡುತ್ತಾರೆ. ಅದರ ಮೇಲೂ ಪ್ರೀತಿಯಾಗಲೀ, ಅಧಿಕಾರವಾಗಲೀ ಇಲ್ಲವೇ ಇಲ್ಲ. ಪರಮಾತ್ಮನೇ ತಾನಾಗಿ ಕೊಟ್ಟದ್ದನ್ನು "ಪ್ರಸಾದ" ಎಂದು ಸ್ವೀಕರಿಸುತ್ತಾರೆ. ತಿರಸ್ಕರಿಸುವ ಅಹಂಕಾರವಿಲ್ಲ. ಸಿಕ್ಕಿತು ಎಂಬ ಬೀಗುವಿಕೆಯಂತೂ ಮೊದಲೇ ಇಲ್ಲ. 

*****

ಸ್ವಾತಂತ್ರ್ಯಾನಂತರದ ಎರಡು-ಮೂರು ದಶಕಗಳಲ್ಲಿ ಹುಟ್ಟಿದ ತಲೆಮಾರಿನ ಜನರಿಗೆ ಮೂರು ರೀತಿಯಲ್ಲಿ ತೊಂದರೆಗಳು. ಹೆಚ್ಚಿನವರು ನಮ್ಮ ಅನುಷ್ಠಾನಗಳನ್ನು ಕ್ರಮವಾಗಿ ಕಲಿತವರಲ್ಲ. ಅಪ್ಪ, ಅಜ್ಜಂದಿರು ಮಾಡುತ್ತಿದ್ದರು. ಆದ್ದರಿಂದ ನಾವೂ ಮಾಡುತ್ತೇವೆ. (ನಮ್ಮ ಹಿಂದಿನ ತಲೆಮಾರಿನ ಜನ ಸಾಮಾನ್ಯವಾಗಿ ಇವನ್ನು ಕ್ರಮವಾಗಿ ಕಲಿತಿದ್ದರು. ಮುಂದಿನ ತಲೆಮಾರಿನವರು ಹೆಚ್ಚು-ಕಡಿಮೆ ಬಿಟ್ಟೀ ಬಿಟ್ಟರು.) ಮಂತ್ರ-ಸ್ತೋತ್ರಗಳ ಸರಿಯಾದ ಅರ್ಥಗಳು ತಿಳಿದಿಲ್ಲ. ಆದ್ದರಿಂದ ಹಿಂದಿನವರಂತೆ ಮಾಡುತ್ತಾ ಹೋಗುವುದು. ಇದು ಮೊದಲನೆಯ ತೊಂದರೆ. ಕ್ರಮೇಣ ವ್ಯವಹಾರ ಜ್ಞಾನದ ಜೊತೆಗೆ ಅನುಭವದ ಜ್ಞಾನ ಸೇರಿದಾಗ "ಇದೇನು ಹೀಗಿದೆ? ಕೆಲವು ಸರಿ ಕಾಣುವುದಿಲ್ಲ?" ಎನ್ನುವ ಅನುಮಾನ ಬರುತ್ತದೆ.

ಎರಡನೆಯ ಸಿಕ್ಕು  ಅಂದರೆ ನಮ್ಮಲ್ಲಿ ಪ್ರತಿಯೊಬ್ಬರಿಗೂ ನಾವು ಹುಟ್ಟಿದ ಮನೆಯ ಆಚರಣೆಯೇ ಸರ್ವಶ್ರೇಷ್ಠ.. ಹೀಗೆಂದು ಪ್ರತಿ ಮತವೂ, ಪಂಗಡವೂ ಹೇಳುತ್ತವೆ. ಬೇರೆಯದರಲ್ಲೂ ಸ್ವಲ್ಪ ಒಳ್ಳೆಯದಿರಬಹುದು ಎಂದು ಒಪ್ಪುವ ಉದಾರ ಮನೋಭಾವ ಕಡಿಮೆ. ಜೊತೆಗೆ ಯಾವುದಾದರೂ ಸರಿ ಇಲ್ಲ ಅಂದರೆ ಅದನ್ನು ಬಿಟ್ಟುಬಿಡುವ ದಾರ್ಢ್ಯ ಇರುವುದಿಲ್ಲ. ಏಕೆಂದರೆ ಅದು ಸರಿಯಾಗಿಲ್ಲ ಎಂದು ಖಚಿತವಾದ ಅಭಿಪ್ರಾಯಕ್ಕೆ ಬರುವ ತಳಹದಿ ಭದ್ರವಿಲ್ಲ. 

ಮೂರನೆಯ ಸಮಸ್ಯೆ ಅಂದರೆ ನಾವು ತತ್ವಕ್ಕೂ ಮತ-ಪಂಗಡಗಳಿಗೂ ಇರುವ ವ್ಯತ್ಯಾಸವನ್ನು ಮಸಕು-ಮಸಕಾಗಿ ಕಾಣುತ್ತೇವೆ. ನಮ್ಮ ವೈದಿಕ ವಾಂಗ್ಮಯದಲ್ಲಿ, ವಿಶೇಷವಾಗಿ ಉಪನಿಷತ್ತುಗಳಲ್ಲಿ, ಹೇಳುವಂತೆ "ಎಲ್ಲವನ್ನೂ ತಿಳಿ; ನಿನಗೆ ಸರಿ ಅನ್ನಿಸಿದ್ದನ್ನು ಮಾಡು" ಎನ್ನುವುದರಲ್ಲಿ ನಮಗೆ ಹೆಚ್ಚಿನ ಪರಿಶ್ರಮವಿಲ್ಲ. ಆದ್ದರಿಂದ ಮೊದಲಿನಿಂದ ಮಾಡಿಕೊಂಡು ಬಂದ ಯಾವುದನ್ನೂ ಅದು ಈಗ ನಮಗೆ ಸರಿಕಾಣುತ್ತಿಲ್ಲ ಎಂದು ಬಿಡುವುದಿಲ್ಲ. ಇದಕ್ಕೆ ಪೂರಕವಾಗಿ ನಮ್ಮ ಅನುಮಾನಗಳಿಗೆ ಮುಕ್ತ ಮನಸ್ಸಿನಿಂದ ಸಮಾಧಾನ ಹೇಳುವ ಹಿರಿಯರೂ ತಿಳಿದವರೂ ಸಿಗುವುದು ಬಹಳ ಅಪರೂಪ. 

*****

ನಮ್ಮ ಅನೇಕ ಮಂತ್ರ-ಸ್ತೋತ್ರಗಳಲ್ಲಿ ದೇವರಲ್ಲಿ ಅನೇಕ ವಸ್ತುಗಳನ್ನು ಬೇಡುವ ಪ್ರಕರಣಗಳಿವೆ. ಕೆಲವುಗಳಲ್ಲಿ ಬೇಡಿದ್ದನ್ನೇ ಮತ್ತೆ ಮತ್ತೆ ಕೇಳುವ ಅಂಶಗಳಿವೆ. ನಮ್ಮ ಅರಿವು ಆಳವಾದಂತೆ ಈ ರೀತಿ ಬೇಡುವುದು, ಮತ್ತೆ ಮತ್ತೆ ಅದನ್ನೇ ಕೇಳುವುದು, ಅನವಶ್ಯಕವಾದ ಪದಾರ್ಥಗಳ ಕೋರಿಕೆ, ಮುಂತಾದುವುಗಳ ಸಮಸ್ಯೆ ಕಾಡುತ್ತವೆ. ಇದಕ್ಕೆ ಪರಿಹಾರವೇನು?

ಅಂತಹವುಗಳ ಆಚರಣೆ ಬಿಡುವುದು ಒಂದು ಪರಿಹಾರ. ಆದರೆ ಅನೇಕ ಇಂತಹ ಸಂದರ್ಭಗಳಲ್ಲಿ ಅವುಗಳಲ್ಲಿ ನಮಗೆ ಹಿಡಿಸುವ, ಹಿತವಾದ ಅನೇಕ ವಿಷಯಗಳೂ ಸೇರಿರುತ್ತವೆ. ಕೆಲವಂತೂ ಮನಸ್ಸಿಗೆ ಹೆಚ್ಚಿನ ಮುದವನ್ನೂ, ಶಾಂತಿಯನ್ನೂ ಕೊಡುತ್ತವೆ. ಅನೇಕ ಕಡೆ ನಿಜವಾದ ಭಕ್ತಿ ಹೊರಹೊಮ್ಮುವ ಅವಕಾಶಗಳಿವೆ. ಹೀಗಾಗಿ ಅವನ್ನು ಬಿಡುವುದೂ ಪೂರ್ತಿಯಾಗಿ ಸರಿ ಕಾಣುವುದಿಲ್ಲ. 

ಮೇಲೆ ಚರ್ಚಿಸಿದ ಮೂವರು ಭಕ್ತರ ಗುಂಪುಗಳಲ್ಲಿ ಮೂರನೆಯ ಗುಂಪಿಗೆ ಹೋಗಲು ನಾವು ಬಹಳ ಬಹಳ ದೂರ ಹೋಗಬೇಕಾಗಿದೆ. ಇಂತಹ ಪ್ರಶ್ನೆಗಳು ಮನಸ್ಸಿನಲ್ಲಿ ಹುಟ್ಟಿವೆ ಅಂದರೆ ಮೊದಲನೆಯ ರೀತಿಯಲ್ಲಿ ಇರುವುದನ್ನು ದಾಟಿದ್ದೇವೆ ಅನ್ನಬಹುದು. ಆದ್ದರಿಂದ ಇಂತಹ ಬೇಡುವ ಸಂದರ್ಭಗಳಲ್ಲಿ ಮನಸ್ಸನ್ನು ಹದ ಮಾಡಿಕೊಂಡು ಕೇಳುವಾಗ "ಇದು ನಮ್ಮ ಭೋಗಕ್ಕಲ್ಲ. ಹೆಚ್ಚಿನ ಸಾಧನೆಗಾಗಿ ಬೇಡುತ್ತೇವೆ. ದುರುಪಯೋಗ ಮಾಡುವುದಿಲ್ಲ" ಅನ್ನುವ ಅನುಸಂಧಾನ ಇದ್ದು ಎರಡನೇ ವರ್ಗಕ್ಕೆ ಸೇರುವ ಪ್ರಯತ್ನ ಮಾಡಬಹುದು. 
***** 

ಮೂರನೆಯ ಗುಂಪಿನ ಭಕ್ತರ ಗುಣ-ಸ್ವರೂಪಗಳು ಮತ್ತು ಎರಡು-ಮೂರು ಉದಾಹರಣೆಗಳನ್ನು ಮುಂದಿನ ಸಂಚಿಕೆಯಲ್ಲಿ ಚರ್ಚಿಸುವ ಪ್ರಯತ್ನ ಮಾಡೋಣ. 

Thursday, June 26, 2025

ದೇವರಲ್ಲಿ ಬೇಡುವ ಅಷ್ಟ ಐಶ್ವರ್ಯಗಳು


ಹಿಂದಿನ ಸಂಚಿಕೆಗಳಲ್ಲಿ "ಅಷ್ಟ ಭೋಗಗಳು" ಮತ್ತು "ಅಷ್ಟ ಭಾಗ್ಯಗಳು" ಎನ್ನುವ ಶೀರ್ಷಿಕೆಗಳ ಅಡಿಯಲ್ಲಿ ಮನುಷ್ಯನಿಗೆ ಸಿಗಬಹುದಾದ ವಿವಿಧ ರೀತಿಯ ಭೋಗಗಳು ಮತ್ತು ಭಾಗ್ಯಗಳು ಯಾವುವು, ಅವುಗಳ ವಿಶೇಷತೆ ಏನು, ಎನ್ನುವುದನ್ನು ಕುರಿತು ಸ್ವಲ್ಪ ಚರ್ಚೆ ಮಾಡಿದೆವು. ಈ ಸಂಚಿಕೆಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

"ಸಂಕಟ ಬಂದಾಗ ವೆಂಕಟರಮಣ" ಎನ್ನುವುದು ಒಂದು ಬಹಳ ಪ್ರಸಿದ್ಧ ಗಾದೆ ಮಾತು. ಮನುಷ್ಯನಿಗೆ ಯಶಸ್ಸು ಸಿಕ್ಕಾಗ, ತಾನು ನೆನೆಸಿದ ಕೆಲಸ ಆದಾಗ, ತನ್ನ ಪ್ರಯತ್ನದ ಬಗ್ಗೆ ಅಪಾರ ಹೆಮ್ಮೆ. "ನನ್ನಿಂದಲೇ ಆಯಿತು. ನೋಡಿದೆಯಾ? ಹೇಗೆ ಮಾಡಿದೆ!" ಎಂದು ಬೀಗುತ್ತಾನೆ. ಆದರೆ ಅದು ಆಗದಿದ್ದಾಗ ಪರಮಾತ್ಮನ ನೆನಪು ಬರುತ್ತದೆ. ಕೆಲವರು "ದೇವರು ಕೈಕೊಟ್ಟ" ಎಂದು ಅವನನ್ನೇ ದೂಷಿಸಬಹುದು. ಮತ್ತೆ ಕೆಲವರು (ಇಂತಹವರ ಸಂಖ್ಯೆ ಬಹಳ ಕಡಿಮೆ) ಎಲ್ಲವನ್ನೂ ಅವನ ಮೇಲೆ ಬಿಟ್ಟು ತಮ್ಮ ಕರ್ತವ್ಯ ತಾವು ಮಾಡುತ್ತಾರೆ. 

ಮನುಷ್ಯ ಏನನ್ನಾದರೂ ಮಾಡುವುದು ಎರಡು ಕಾರಣಗಳಿಗಾಗಿ. ಒಂದು ಸುಖ ಪ್ರಾಪ್ತಿಗೆ. ಇನ್ನೊಂದು ದುಃಖ ನಿವೃತ್ತಿಗೆ. ಈ ವಿಷಯವನ್ನು ಹಿಂದಿನ ಸಂಚಿಕೆಗಳಲ್ಲಿ ಚರ್ಚಿಸಿರುವುದರಿಂದ ಅದನ್ನು ನೆನಪಿಸಿಕೊಂಡು, ಹೆಚ್ಚು ವಿಸ್ತರಿಸದೆ, ಮುಂದೆ ಹೋಗೋಣ. ದುಃಖ ನಿವೃತ್ತಿ ಆಗಬೇಕಾದಾಗ ಪರಮಾತ್ಮನ ನೆನಪು ತಾನೇತಾನಾಗಿ ವಿಜೃಂಭಿಸುತ್ತದೆ. ಆ ದುಃಖ ಕಳೆದ ತಕ್ಷಣ ಅವನ ನೆನಪೂ ಮಾಸುತ್ತದೆ. ಸುಖಪ್ರಾಪ್ತಿಗೆ ಮಾಡುವ ಅವನ ಸ್ಮರಣೆ ಮೇಲೆ-ಕೆಳಗೆ ಆಗುತ್ತಿದ್ದರೂ ಯಾವಾಗಲೂ ಸ್ವಲ್ಪವಾದರೂ ಇರುತ್ತದೆ!

ಹೀಗೆ ಸುಖಪ್ರಾಪ್ತಿಗೆ ಮನುಷ್ಯ ಮಾಡುವ ಪ್ರಾರ್ಥನೆಗಳಲ್ಲಿ ಯಾವ ಯಾವ ಬೇಡಿಕೆಗಳು ಸೇರಿವೆ, ಅವುಗಳಲ್ಲಿ ಮುಖ್ಯವಾದವು ಯಾವುವು ಮತ್ತು ಅವುಗಳ ಲಕ್ಷಣಗಳೇನು ಎನ್ನುವುದನ್ನು ಈಗ  ಸ್ವಲ್ಪ ನೋಡೋಣ. 
***** 

"ವರ" ಎನ್ನುವ ಪದವನ್ನು ಎರಡು ಮುಖ್ಯ ಹಿನ್ನೆಲೆಯಲ್ಲಿ ಬಳಸುತ್ತೇವೆ. ಮೊದಲನೆಯದು ವಿವಾಹಗಳ ವಿಷಯದಲ್ಲಿ. ಆಗ "ವಧು ಮತ್ತು ವರ" ಎನ್ನುವ ಪದಗಳು ಜೊತೆಯಾಗಿ ಬರುತ್ತವೆ. ಹೆಣ್ಣಿಗೆ "ವಧು" ಎಂದೂ ಗಂಡಿಗೆ "ವರ" ಎಂದೂ ಗುರುತಿಸುವುದು. ಎರಡನೆಯ ಸಂದರ್ಭ "ಶ್ರೇಷ್ಠ", "ಉತ್ತಮ", "ಒಳ್ಳೆಯದು", "ಅದಕ್ಕಿಂತ ಇದು ಚೆನ್ನ" ಮುಂತಾದ ಅರ್ಥದಲ್ಲಿ. ವಿವಾಹದ ಸಂದರ್ಭದಲ್ಲಿಯೂ ವಾಸ್ತವವಾಗಿ ಇದೇ ಅರ್ಥವೇ. "ಈ ಹುಡುಗಿಗೆ ಆ ಹುಡುಗ ಸರಿಯಾದ ಜೋಡಿ. ಈ ಜೋಡಿ ಚೆನ್ನಾಗಿರುತ್ತದೆ" ಎನ್ನುವ ರೀತಿಯಲ್ಲಿಯೇ ಅಲ್ಲಿಯೂ "ವರ" ಎನ್ನುವ ಪದ ಪ್ರಯೋಗ ಆಗುತ್ತದೆ. 

ಒಟ್ಟಿನಲ್ಲಿ, ಬೇಡುವ ಸಂದರ್ಭದಲ್ಲಿ "ವರ" ಅಂದರೆ "ನಮ್ಮಲ್ಲಿಲ್ಲದ್ದು, ಅದು ಇದ್ದರೆ ಚೆನ್ನ, ಅದು ನಮಗೆ ಬೇಕು, ಆದ್ದರಿಂದ ಅದನ್ನು ನಮಗೆ ಕೊಡಿ" ಎಂದು ಕೇಳುವುದು. ಕೊಡುವವರ ದೃಷ್ಟಿಯಲ್ಲಿಯೂ ಹಾಗೆಯೇ. ಅನೇಕ ವೇಳೆ "ನಿಮ್ಮಿಂದ ನಮಗೆ ಬಹಳ ಸಂತೋಷವಾಗಿದೆ. ಈ ವರವನ್ನು ಕೊಡುತ್ತೇವೆ" ಎಂದು ಕೊಡುವುದು. ಅಥವಾ "ನಾವು ಪ್ರೀತರಾಗಿದ್ದೇವೆ, ನಿಮಗೊಂದು ವರ ಕೊಡುತ್ತೇವೆ. ಏನು ಬೇಕು?' ಎಂದು ಕೇಳುವುದು. ಸಾಮಾನ್ಯವಾಗಿ "ಏನು ಬೇಕು?" ಎಂದು ಕೇಳಿ ಕೊಡಬಹುದು. ಒಮ್ಮೊಮ್ಮೆ ಅವರೇ ತೀರ್ಮಾನಮಾಡಿ "ನಿಮಗೆ ಇದನ್ನು ಕೊಡುತ್ತೇವೆ" ಎಂದು ಕೊಡಬಹುದು. ಮೊದಲನೆಯದು ಕೇಳಿದ್ದು ಕೊಡುವ ಕ್ರಿಯೆ. ಎರಡನೆಯದು ಕೊಟ್ಟಿದ್ದು ತೆಗೆದುಕೊಳ್ಳುವ ಕೆಲಸ. ಶಾಲೆಗೆ ಹೋಗುವ ವಿದ್ಯಾರ್ಥಿ "ನನಗೆ ಈ ಬ್ಯಾಗು ಕೊಡಿಸಿ" ಎನ್ನುವುದು ಮೊದಲಿನಂತೆ. ಕೊಡುವವರು ತಾವೇ ಒಂದು ಒಂದು ಬ್ಯಾಗು ತಂದು "ಇದನ್ನು ಉಪಯೋಗಿಸಿಕೋ" ಎನ್ನುವುದು ಎರಡನೆಯ ರೀತಿ. 

ಮೂರನೆಯದೂ ಒಂದು ಉಂಟು. ಒಂದಷ್ಟು ದುಡ್ಡು ಕೊಟ್ಟು "ನಿನಗೆ ಬೇಕಾದುದು ತೆಗೆದುಕೋ" ಎಂದು ಹೇಳುವಂತೆ. ದುಡ್ಡು ಸಿಕ್ಕವನು ತನಗೆ ಬೇಕಾದಾಗ, ಬೇಕಿದ್ದು ತೆಗೆದುಕೊಳ್ಳಬಹುದು. ಅಷ್ಟು ಮಟ್ಟಿಗೆ ಸ್ವಾತಂತ್ಯ ಸಿಕ್ಕಿತು. ದೇವೇಂದ್ರನು ಕರ್ಣನಿಗೆ ಶಕ್ತ್ಯಾಯುಧ ಕೊಟ್ಟಂತೆ. "ಒಂದು ಬಾರಿ ಪ್ರಯೋಗಿಸು. ಯಾರ ಮೇಲೆ ಪ್ರಯೋಗಿಸಿದರೂ ಅವರು ಸಾಯುತ್ತಾರೆ" ಎಂದು ಹೇಳಿದಂತೆ. ಎಂದು, ಯಾರ ಮೇಲೆ ಪ್ರಯೋಗಿಸಬೇಕು ಅನ್ನುವ ಸ್ವಾತಂತ್ರ್ಯ ಕರ್ಣನಿಗೆ ಸಿಕ್ಕಿತು. 

ವರರೂಪದಲ್ಲಿ ಬೇಕಿದ್ದು ಪಡೆಯಲು ಮಾಡುವ ಸಾಧನೆಗಳು "ಕಾಮ್ಯ ಕರ್ಮಗಳು". ಇಲ್ಲಿ ಇಡೀ ಶ್ರಮ ಯಾವುದೋ ಒಂದು ಉದ್ದೇಶಿತ ಲಾಭ ಪಡೆಯಲು ಮಾಡುವುದು. ಬಸ್ಸಿನಲ್ಲಿ ಹನ್ನೆರಡನೇ ನಂಬರಿನ ಸೀಟು ಕೊಡಿ ಎಂದಂತೆ. ಇನ್ನು ಕೆಲವು "ಯಾವುದೊ ಒಂದು ಸೀಟು ಕೊಟ್ಟರೆ ಸಾಕು" ಎನ್ನುವಂತಹುದು. "ಪುತ್ರಕಾಮೇಷ್ಠಿ" ಮಾಡಿದರೆ ಸಂತಾನವೇ ಬೇಕು. ಬೇರೆ ಯಾವುದೋ ಸಿಕ್ಕರೆ ಸಾಲದು. ಈ ರೀತಿ. 
***** 

ಎಲ್ಲಾ ಬೇಡಿಕೆಗಳಲ್ಲಿ ಮೊದಲನೆಯದು "ಆಯುಸ್ಸು". ದೀರ್ಘಾಯುಸ್ಸು ಬೇಕು. ತುಂಬಾ ದಿನ ಬದುಕಬೇಕು. ಚಿರಂಜೀವಿಯೇ ಆಗಬೇಕು. ಆದರೆ ಅದು ಕೇಳಿದರೂ ಕೊಡುವುದಿಲ್ಲ. ಹಿಂದೆ ಅನೇಕರು ಕೇಳಿದರು. ಆದರೆ ಒಬ್ಬರಿಗೂ ಸಿಗಲಿಲ್ಲ. ಕೈ ತೋರಿಸಿ ಅವಲಕ್ಷಣ ಎಂದು ಏಕೆ ಹೇಳಿಸಿಕೊಳ್ಳುವುದು? ಆದ್ದರಿಂದ ದೀರ್ಘಾಯುಸ್ಸು ಕೊಡಿ ಎಂದು ಕೇಳುವುದು. "ನಮ್ಮ ಮೊಮ್ಮಗನ ಮೊಮ್ಮಗನ ಮಗನ ಮದುವೆ ನೋಡಿದರೆ ಸಾಕು" ಎಂದು ಕೇಳಿ ಕೊಡುವವರಿಗೆ ಟೋಪಿ ಹಾಕುವ ಬುದ್ಧಿವಂತಿಕೆ. "ಮೊದಲು ಬದುಕಿರೋಣ. ಆಮೇಲೆ ಉಳಿದುದನ್ನು ಕೇಳಿದರಾಯಿತು" ಅನ್ನುವ ಜಾಣತನ. ಆಯುಸ್ಸೇ ಇಲ್ಲದಿದ್ದರೆ ಏನು ಪ್ರಯೋಜನ? 

ಎರಡನೆಯದು ಆರೋಗ್ಯ. ಕೇವಲ ಬದುಕಿದ್ದರೆ ಸಾಕೆ? ನೂರು ವರುಷ ಆಯುಸ್ಸು. ಕೈ-ಕಾಲು ಆಡುವಹಾಗಿಲ್ಲ. ಹಾಸಿಗೆ ಮೇಲೆ ಬಿದ್ದಿರಬೇಕು. ಆದರೆ ಉಸಿರಾಡುವುದರಿಂದ ಬದುಕಿದ್ದಾನೆ. ಇಂತಹ ಆಯುಸ್ಸಿನಿಂದ ಏನು ಪ್ರಯೋಜನ? ಆದ್ದರಿಂದ ಒಳ್ಳೆಯ ಅರೋಗ್ಯ ಬೇಕು. 

ಇವೆರಡೂ ಸಿಕ್ಕ ಮೇಲೆ ಮುಂದಿನದು ಐಶ್ವರ್ಯ. ಸುಮ್ಮನೆ ಬದುಕಿ ಗಟ್ಟಿಮುಟ್ಟಾಗಿದ್ದರೆ ಏನು ಸಂತಸ? ಬದುಕಿದ ಮೇಲೆ ಸುಖ ಪಡದೆ ಏನು ಪ್ರಯೋಜನ? ಸುಖ ಪಡಲು ಸಾಧನಗಳು ಬೇಕಲ್ಲ? ಅವುಗಳನ್ನು ಪಡೆಯಬೇಕು. ಈ ಕಾರಣಕ್ಕೆ ಮೂರನೆಯದಾದ ಐಶ್ವರ್ಯ ಬೇಕು.  ಒಮ್ಮೆ ಬೇಡಿದಾಗ ಮುಂದೆ ಬೇಡುವಂತೆ ಇಲ್ಲದಷ್ಟು ಸಿಗಬೇಕು. ಮತ್ತೆ ಮತ್ತೆ ಬೇಡುವಂತೆ ಜೀವನ ಇರಬಾರದು. ಇನ್ನೂ ಅದರ ಬದಲು ನಾವೇ ಇನ್ನೊಬ್ಬರಿಗೆ ಕೊಡುವ ಶಕ್ತಿ ಇರಬೇಕು. ಆದ್ದರಿಂದ ಹೇರಳವಾದ ಐಶ್ವರ್ಯ ಬೇಕು. 

ಈ ಮೂರು ಕಾರಣಗಳಿಂದ "ಆಯುರಾರೋಗ್ಯ ಐಶ್ವರ್ಯ" ಒಟ್ಟಿಗೆ ಕೂಡಿತು. ಎಲ್ಲಕ್ಕಿಂತ ಮೊದಲು ಇವನ್ನು ಕೇಳುವ ಪರಿಪಾಠ ಬಂತು. 
*****

ಐಶ್ವರ್ಯ ಅನ್ನುವ ಪದ ಒಂದು ರೀತಿ ಅಸ್ಪಷ್ಟ ಅಲ್ಲವೇ? ಕೇಳುವುದು ಖಚಿತವಾಗಿರಬೇಕು. ಆದ ಕಾರಣ ಇದರಲ್ಲಿ ಮತ್ತೆ ಕವಲುಗಳು ಬಂದವು. ಐಶ್ವರ್ಯದ ಬೇರೆ ಬೇರೆ ರೂಪಗಳಲ್ಲಿ ಕೇಳುವುದು ಪ್ರಾರಂಭವಾಯಿತು. ಅವುಗಳಲ್ಲಿ ಮತ್ತೆ ಎಂಟು ಮುಖ್ಯವಾಯಿತು. "ಅಷ್ಟ ಭೋಗ," "ಅಷ್ಟ ಭಾಗ್ಯ", ಇವುಗಳ ಜೊತೆ "ಅಷ್ಟ ಐಶ್ವರ್ಯ" ಸೇರಿದುವು. 

ಅಷ್ಟಐಶ್ವರ್ಯಗಳು ಯಾವುವು ಎನ್ನುವುದಕ್ಕೆ ಅನೇಕ ವ್ಯಾಖ್ಯಾನಗಳು ಉಂಟು. "ಅಷ್ಟ ಲಕ್ಷ್ಮಿ" ಚಿಂತಿಸುವ ಸಂದರ್ಭದಲ್ಲಿ ಕೆಲವನ್ನು ಹೇಳುವುದು ಉಂಟು. ಆದರೆ, ಜನಸಾಮಾನ್ಯರ ಬೇಡಿಕೆಯ ದೃಷ್ಟಿಯಲ್ಲಿ ಈ ಕೆಳಗಿನ ಎಂಟು ರೀತಿಯ ಐಶ್ವರ್ಯಗಳು ಹೆಚ್ಚಾಗಿ ಕಂಡುಬರುತ್ತವೆ:

  1. ಮೊದಲನೆಯದು "ಧನ". "ಕಾಂಚಾಣಂ ಕಾರ್ಯಸಿದ್ಧಿ:". ಕನ್ನಡದಲ್ಲಿ ಹೇಳುವಂತೆ ಎಲ್ಲಕ್ಕೂ "ದುಡ್ಡೇ  ದೊಡ್ಡಪ್ಪ". ಹಣವಿದ್ದರೆ ಬೇರೆ ಎಲ್ಲವನ್ನೂ ಪಡೆಯಬಹುದು ಎಂದು ನಂಬಿಕೆ. ಆದ್ದರಿಂದ ಆಯುರಾರೋಗ್ಯಗಳ ನಂತರ ಮೊದಲು ಕೇಳುವುದು ಧನವನ್ನು. ಕನ್ನಡದಲ್ಲಿ "ನಗದು" ಅಥವಾ ಎಲ್ಲರಿಗೂ ಸುಲಭವಾಗಿ ಅರ್ಥವಾಗುವ "ಕ್ಯಾಶ್". ದುಡ್ಡಿನಿಂದ ಆಯುಸ್ಸು ಮತ್ತು ಆರೋಗ್ಯಗಳನ್ನು ಪಡೆಯಲಾಗುವುದಿಲ್ಲ. ಅನಾರೋಗ್ಯದ ನಿವಾರಣೆಗೆ ದುಡ್ಡು ಸಹಾಯಕಾರಿ ಆಗಬಹುದು. ಆದರೂ ನಮ್ಮ ಅನುಭವದಲ್ಲಿ ಅನೇಕವೇಳೆ ಜೇಬಲ್ಲಿ ದುಡ್ಡಿದ್ದರೂ  ಪದಾರ್ಥಗಳು ಸಿಗುವುದಿಲ್ಲ. ಎಲ್ಲ ಕಡೆ "ಬಂದ್" ಅಥವಾ "ಕರ್ಫ್ಯೂ" ಇದ್ದಾಗ ಎಷ್ಟು ಹಣವಿದ್ದರೂ ಅನ್ನ ಸಿಗುವುದಿಲ್ಲ.  ಕೆಲವು ಪದಾರ್ಥಗಳು ಕೆಲವು ಕಾಲಗಳಲ್ಲಿ ಮಾತ್ರ ಸಿಗುತ್ತವೆ. ಇನ್ನು ಕೆಲವು ಯಾವುದೋ ಕೆಲವು ಪ್ರದೇಶಗಳಲ್ಲಿ ಮಾತ್ರ ಸಿಗುತ್ತವೆ. ಆದರೂ ದುಡ್ಡಿದ್ದರೆ ಹೆಚ್ಚಿನವನ್ನು ಪಡೆಯಲು ಸಹಕಾರಿ  ಎನ್ನುವುದು ಬಹುತೇಕ ಸತ್ಯ.  
  2. ಎರಡನೆಯದು "ಕನಕ". ಕನಕ ಎಂದರೆ ಚಿನ್ನ ಎಂದು ಅರ್ಥವಾದರೂ ಇಲ್ಲಿ ಅದರ ವ್ಯಾಪಕ ಅರ್ಥವಾದ ಚಿನ್ನ, ಬೆಳ್ಳಿ, ನವರತ್ನಗಳು ಮುಂತಾದ ಬೆಲೆಬಾಳುವ ವಸ್ತುಗಳ ಆಭರಣಗಳು ಎಂದು ಗ್ರಹಿಸಬೇಕು. ಇವೂ ಸಹ ಧನವೇ ಅಲ್ಲವೇ ಎಂಬ ಸಂದೇಹ ಬರಬಹುದು. ಇವು ಬೆಲೆಬಾಳುವ ವಸ್ತುಗಳು ಮತ್ತು ಈಗಿನ ಸಮಯದಲ್ಲಿ ಕೆಲವೇ ಘಂಟೆಗಳಲ್ಲಿ ಹಣವಾಗಿ ಪರಿವರ್ತಿಸಬಹುದು ಎನ್ನುವುದು ಸರಿಯಾದರೂ, ಇವು ಧನದ ಒಂದು ಉಪಯೋಗ ಎಂದು ಗಣಿಸಬೇಕು. 
  3. ಮೂರನೆಯದು ವಸ್ತುಗಳು. ವಸ್ತುಗಳು ಅನೇಕ ರೀತಿಯಲ್ಲಿರಬಹುದು. ಸಾಮಾನ್ಯವಾಗಿ ನಿರ್ಜೀವ ಭೋಗೋಪಯೋಗಿ ಪದಾರ್ಥಗಳಿಗೆ ವಸ್ತುಗಳು ಎಂದು ನಿರ್ದೇಶಿಸುವುದು. ಪೀಠೋಡಕರಣಗಳು, ಪಾತ್ರೆ-ಪಡಗ, ಆಯುಧಗಳು, ಮುಂತಾದುವುಗಳು. 
  4. ನಾಲ್ಕನೆಯದು ವಾಹನಗಳು. ಹಿಂದಿನ ಕಾಲದಲ್ಲಿ ವಾಹನಗಳು ಅಂದರೆ ಕುದುರೆ, ಆನೆ, ಸಾರೋಟು, ರಥ ಮುಂತಾದುವು ಆಗಿದ್ದವು. ಇಂದಿಗೆ ಅವು ಸ್ಕೂಟರ್, ಕಾರು, ಖಾಸಗಿ ನೌಕೆ, ಖಾಸಗಿ ವಿಮಾನ ಮುಂತಾದುವವೇ ಆಗಬಹುದು. 
  5. ಐದನೆಯದು ಗೃಹ ಅಥವಾ ಮನೆ. ಏಕವಚನದಲ್ಲೂ ಇರಬಹುದು ಅಥವಾ ಅನೇಕವೂ ಇರಬಹುದು. ಮನೆ, ಕೊಟ್ಟಿಗೆ, ಗೋಶಾಲೆ, ಅಶ್ವ-ಗಜ ಶಾಲೆ, ಮುಂತಾದುವುಗಳು. ಮನೆ ಅಂದರೆ ಅದರ ಜೊತೆ ಭೂಮಿ-ಕಾಣಿಯೂ ಸೇರಿತು. ವಸ್ತುಗಳು ಚರಾಸ್ತಿ (ಇಂಗ್ಲೀಷಿನಲ್ಲಿ "movable") ಆದರೆ  ಗೃಹ ಸ್ಥಿರಾಸ್ತಿ (ಇಂಗ್ಲಿಷಿನಲ್ಲಿ "immovable").  
  6. ಆರನೆಯದು "ಸಂತಾನ". ತಾನೊಬ್ಬನೇ ಇಷ್ಟೆಲ್ಲಾ ಸುಖದ ಸಾಧನಗಳನ್ನು ಇಟ್ಟುಕೊಂಡು ಏನು ಮಾಡುವುದು? ಅದಕ್ಕೆ ಮಕ್ಕಳು, ಮೊಮ್ಮಕ್ಕಳು,  ಬಂಧು-ಬಾಂಧವರು, ನೆಂಟರು-ಇಷ್ಟರು ಇರಬೇಕು. ಎಲ್ಲರೂ ತನ್ನನ್ನು ಓಲೈಸಬೇಕು ಎಂದು ಆಸೆ. 
  7. ಏಳನೆಯದು ಅಧಿಕಾರ. ಇದು  ಕಣ್ಣಿಗೆ ಕಾಣದ್ದು. ಅಮೂರ್ತ. ಇಂಗ್ಲೀಷಿನಲ್ಲಿ intangible. ಆದರೆ ಅದರ ಪ್ರಭಾವ ಕಾಣುತ್ತದೆ. ಸುತ್ತಲಿರುವವರೆಲ್ಲ ತಾನು ಹೇಳಿದಂತೆ ಕೇಳಬೇಕೆಂಬ ಇಚ್ಛೆ. 
  8. ಎಂಟನೆಯದು "ಅಂತಸ್ತು" ಅಥವಾ ಸಮಾಜದಲ್ಲಿ "ಮನ್ನಣೆ". ಹತ್ತು ಜನರಲ್ಲಿ ಎದ್ದು ಕಾಣಬೇಕು. ತಾನು ಬಂದರೆ ಎಲ್ಲರೂ ಎದ್ದು ಗೌರವ ಸೂಚಿಸಬೇಕು. ಅವರ ಕೆಲಸಗಳಿಗೆ ತನ್ನ ಸಲಹೆ ಮತ್ತು ಒಪ್ಪಿಗೆ ಪಡೆಯಬೇಕು. ಈ ರೀತಿಯ ಆಸೆ. 
ಮೊದಲಿನ ನಾಲ್ಕು ಸಾಮಾನ್ಯವಾಗಿ ಒಟ್ಟಾಗಿ "ಧನ, ಕನಕ, ವಸ್ತು, ವಾಹನಾದಿ" ಎಂದು ಸಮೂಹವಾಚಕದಿಂದ ಹೇಳುತ್ತಾರೆ. ಬೇರೆ ಇನ್ನೇನೇ ಇದ್ದರೂ ಅವೆಲ್ಲಾ ಸಾಮಾನ್ಯವಾಗಿ ಮೇಲೆ ಹೇಳಿದ ಎಂಟು ರೀತಿಯ ಐಶ್ವರ್ಯಗಳಲ್ಲಿ ಮಿಳಿತವಾಗುತ್ತವೆ. ಇವಿಷ್ಟೂ ಇದ್ದರೆ ನಿಜವಾಗಿ ಅಷ್ಟಐಶ್ವರ್ಯವಂತನಾದಂತೆ. 

*****

"ಇಷ್ಟೆಲ್ಲಾ ಬೇಕು. ಇನ್ನೂ ಬೇರೇನಾದರೂ ಇದ್ದರೆ  ಸೇರಿಸಿ ಕೊಡು" ಎಂದು ದೇವರನ್ನು-ದೇವತೆಗಳನ್ನು ಬೇಡುವವರು ಅನೇಕರು. (ನಮ್ಮ ಆಟೋರಿಕ್ಷಾ ಚಾಲಕರು ಮೀಟರಿಗೆ ಸೇರಿಸಿ ಕೊಡಿ ಎನ್ನುವಂತೆ). ಪೂಜೆ-ಪುನಸ್ಕಾರಗಳನ್ನು ಅವರು ಮಾಡುವುದೇ ದುಃಖಗಳ ಶಮನವಾಗಿ ಈ ಐಶ್ವರ್ಯಗಳ ಪ್ರ್ರಾಪ್ತಿ ಆಗಲಿ ಎನ್ನುವ ಕಾರಣಕ್ಕಾಗಿ. ಯಾವುದೇ ಕೆಲಸ ಮಾಡುವ ಮೊದಲು ಸಂಕಲ್ಪದಲ್ಲಿ "ಅಸ್ಮಾಕಂ ಸಹ-ಕುಟುಂಬಾನಾ೦  ಕ್ಷೇಮ, ಸ್ಥೈರ್ಯ, ಆಯುರಾರೋಗ್ಯ ಐಶ್ವರ್ಯ ಅಭಿವ್ರುಧ್ಯರ್ಥಂ, ಇಷ್ಟ ಕಾಮ್ಯಾರ್ಥ ಸಿಧ್ಯರ್ಥಂ ........" ಎಂಬ ದೊಡ್ಡ ಪಟ್ಟಿ ಕೊಟ್ಟ ನಂತರವೇ.  

ಆದರೆ ಅನೇಕ ಜಿಜ್ಞಾಸುಗಳಿಗೆ "ಇದೇನು, ಈ ರೀತಿ? ನಮ್ಮ ಅನೇಕ ಸ್ತೋತ್ರಗಳಲ್ಲಿ, ಹವನ-ಹೋಮ, ಜಪ-ತಪಾದಿ ಅನುಷ್ಠಾನಗಳಲ್ಲಿ ಈ ರೀತಿ ಬೇಡುವ ಸಂಗತಿಗಳಿವೆಯಲ್ಲ? ಇದು ಸರಿಯೇ? ಮನುಷ್ಯ ಜೀವನದ ಧ್ಯೇಯವು ಸಾಧನೆ ಮಾಡಿ ಜೀವನ-ಮರಣ ಚಕ್ರದಿಂದ ಬಿಡುಗಡೆ ಪಡೆಯುವುದಲ್ಲವೇ? ಹೀಗೆ ಕೇಳಿಕೊಳ್ಳುವುದು ಮಾಡಿದ ಕೆಲಸಕ್ಕೆ ಕೂಲಿ ಕೇಳಿದಂತೆ ಆಗಲಿಲ್ಲವೇ?" ಎನ್ನುವ ಪ್ರಶ್ನೆ ಕಾಡುವುದು ಸಹಜ. 

ಈ ವಿಷಯಗಳನ್ನು ಮುಂದಿನ ಸಂಚಿಕೆಯಲ್ಲಿ ಚರ್ಚಿಸೋಣ.  

Sunday, June 22, 2025

ಅಷ್ಟ ಭಾಗ್ಯಗಳು


ನಮ್ಮ ಆಚರಣೆಗಳಲ್ಲಿ ದೇವರು-ದೇವತೆಗಳನ್ನು ಪ್ರಾರ್ಥಿಸುವಾಗ "ಸಕಲ ಭೋಗ-ಭಾಗ್ಯ ಸಿಧ್ಯರ್ಥಂ" ಎಂದು ಸಂಕಲ್ಪಿಸಿ ಬೇಡುವುದು ಬಹಳ ಹಿಂದಿನಿಂದ ಬಂದ ಒಂದು ಕ್ರಮ. ಅನೇಕ ವೇಳೆ ಅಭಿವಾದನ ಮಾಡಿದ ಕಿರಿಯರಿಗೆ ಗುರು-ಹಿರಿಯರು ಆಶೀರ್ವಾದ ನೀಡುವಾಗ "ಸಕಲ ಭೋಗ-ಭಾಗ್ಯ ಸಿದ್ಧಿರಸ್ತು" ಎಂದು ಹೇಳುವುದೂ ಹೀಗೆಯೇ ನಡೆದು ಬಂದಿದೆ. 

ಸಾಮಾನ್ಯವಾಗಿ "ಅಷ್ಟ ಭೋಗಗಳು" ಮತ್ತು "ಅಷ್ಟ ಭಾಗ್ಯಗಳು" ಎಂಬುದಾಗಿ ವ್ಯವಹರಿಸುವುದು ವಾಡಿಕೆ. ಈ ಭೋಗಗಳು ಮತ್ತು ಭಾಗ್ಯಗಳು ಯಾವುವು? ಹೀಗೆಂದು ಮಿತ್ರರೊಬ್ಬರು ಕೇಳಿದ್ದರು. 

ಹಿಂದಿನ "ಅಷ್ಟ ಭೋಗಗಳು" ಎಂಬ ಶೀರ್ಷಿಕೆಯ ಸಂಚಿಕೆಯಲ್ಲಿ  ಭೋಗಗಳ ಬಗ್ಗೆ ಚರ್ಚೆ ಮಾಡಿದ್ದೆವು. (ಈ ಸಂಚಿಕೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ). 

ಈ ಸಂಚಿಕೆಯಲ್ಲಿ ಎಂಟು ಭಾಗ್ಯಗಳ ಬಗ್ಗೆ ಚರ್ಚೆ ಮಾಡೋಣ. 

*****

ಈಗ್ಗೆ ಸುಮಾರು ಅರವತ್ತು ವರುಷಗಳ ಹಿಂದಿನ ಸಮಯ. ಆಗ ನಾನು ಹೈಸ್ಕೂಲ್ ಸೇರಿ ಹತ್ತನೆಯ ತರಗತಿಯಲ್ಲಿ ಓದುತ್ತಿದ್ದೆ. ನಮ್ಮ ಊರಿನಲ್ಲಿ ಸುಬ್ಬರಾಯರು ಎಂಬ ಹೆಸರಿನ ನಿವೃತ್ತ ಉಪಾಧ್ಯಾಯರು ವಾಸವಾಗಿದ್ದರು. ನಮ್ಮ ಮನೆಯ ಬೀದಿಯಲ್ಲಿಯೇ ಅವರ ಮನೆ. ಅವರ ಕುಟುಂಬದ ಸದಸ್ಯರೆಲ್ಲ ಮೈಸೂರಿನಲ್ಲಿದ್ದರು. ಇವರಿಗೂ ಅಲ್ಲಿಗೆ ಬಂದಿರಲು ಮನೆಮಂದಿಯ ಒತ್ತಡವಿತ್ತು. ಆದರೆ ಅವರಿಗೆ ನಮ್ಮ ಊರಿನಲ್ಲಿ ಸ್ವಂತ ಮನೆ, ಮನೆಯ ಸುತ್ತ ದೊಡ್ಡ ತೋಟ, ಮತ್ತು ಸ್ವಲ್ಪ ಜಮೀನು ಇದ್ದವು. ಇವುಗಳನ್ನು ಬಿಟ್ಟು ಹೋಗಲು ಅವರಿಗೆ ಮನಸ್ಸಿಲ್ಲ, ಆದ್ದರಿಂದ ಒಬ್ಬರೇ ಇಲ್ಲಿ ವಾಸವಾಗಿದ್ದರು. ಬಹಳ ಚಟುವಟಿಕೆಯ ವ್ಯಕ್ತಿ. ಬಾಯಿತುಂಬಾ ಮಾತು. ವಿನೋದದ ಸ್ವಭಾವ. ಜನಪ್ರಿಯರು. 

ಊರು ದೊಡ್ಡದಾಗಿ ಬೆಳೆಯುತ್ತಿದ್ದಂತೆ ಅವರು ಮನೆಯ ಸುತ್ತವಿದ್ದ ತೋಟವನ್ನು ಮನೆ ಕಟ್ಟುವ ನಿವೇಶನಗಳಾಗಿ ಪರಿವರ್ತಿಸಿ, ಒಂದೊಂದಾಗಿ ಮಾರಲು ತೊಡಗಿದ್ದರು. ಎಲ್ಲಾ ಮಾರಿ ಮುಗಿದಮೇಲೆ ಮೈಸೂರಿಗೆ ಹೋಗಿ ಕುಟುಂಬದವರ ಜೊತೆ ಇರಬೇಕೆಂಬುದು ಅವರ ಇರಾದೆ. ಈ ಕೆಲಸಕ್ಕೆ ನಮ್ಮ ತಂದೆಯವರ ಸಹಾಯ ಪಡೆಯುತ್ತಿದ್ದರು. ಮೊದಲಿಗೆ ಜಮೀನು ಅಳತೆ ಮಾಡಿ ಸೈಟುಗಳು ಮಾಡಿದರು. ನಂತರ ಒಂದೊಂದಾಗಿ ಸುತ್ತಮುತ್ತಲಿದ್ದವರಿಗೆ ಮಾರಾಟದ ವ್ಯವಹಾರ. ಮಾರಾಟಕ್ಕೆ ಕ್ರಯಪತ್ರಗಳನ್ನು ಬರೆದು ಕೊಡಲು ನಮ್ಮ ತಂದೆಯವರ ಬಳಿ ಬರುತ್ತಿದ್ದರು. 

ಈಗ ಎಲ್ಲವೂ ಕಂಪ್ಯೂಟರ್ ಮಯವಾಗಿದೆ. ಆಗ ಕ್ರಯಪತ್ರ, ಭೋಗ್ಯಪತ್ರ ಮುಂತಾದುವನ್ನು ಛಾಪಾಕಾಗದದ ಮೇಲೆ (ಸ್ಟ್ಯಾಂಪ್ ಪೇಪರ್) ಕೈಬರಹದಲ್ಲಿ ಬರೆದು, ಕೊಳ್ಳುವವರು ಮತ್ತು ಮಾರುವವರು ಸಾಕ್ಷಿಗಳ ಸಮ್ಮುಖ ಸಹಿ ಮಾಡಿ, ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಹೋಗಿ ರಿಜಿಸ್ಟರ್ ಮಾಡಿ ಕೊಡುತ್ತಿದ್ದರು. ಈ ರೀತಿ ಪತ್ರಗಳನ್ನು ಬರೆದು ಕೊಡುವವರಿಗೆ "ಬಿಕ್ಕಲಂ" ಎನ್ನುತ್ತಿದ್ದರು. ಪತ್ರದ ಕೊನೆಯಲ್ಲಿ "ಬಿಕ್ಕಲಂ" ಎಂದು ಬರೆದವರ ಹೆಸರು ನಮೂದಿಸಿ ಸಹಿ ಮಾಡುತ್ತಿದ್ದರು. ಇಂತಹವರು ಕಚೇರಿಗಳ ಮುಂದೆ ಒಂದು ಹಳೆಯ ಮೇಜು, ಕುರ್ಚಿಗಳನ್ನು ಇಟ್ಟುಕೊಂಡು ಕುಳಿತಿರುತ್ತಿದ್ದರು. ಪ್ರತಿ ಪತ್ರಕ್ಕೂ ಬರೆದವರಿಗೆ ಸ್ವಲ್ಪ ಸಂಭಾವನೆ ಸಿಗುತ್ತಿತ್ತು. ಹೀಗೆ ಬಂದ ಹಣದಿಂದ ಅವರು ಜೀವನ ನಡೆಸುತ್ತಿದ್ದರು. ಸುಬ್ಬರಾಯರಿಗೆ ಅವರ ಬಳಿ ಹೋಗಿ ಕಾಯಲು ಇಷ್ಟವಿರಲಿಲ್ಲ. ಆದ್ದರಿಂದ ನಮ್ಮ ತಂದೆಯವರ ಬಳಿ ಬಂದು ಪತ್ರಗಳನ್ನು ಬರೆಸುತ್ತಿದ್ದರು. 

*****

ಒಂದು ಭಾನುವಾರ ಬೆಳಿಗ್ಗೆ ಸುಬ್ಬರಾಯರು ನಮ್ಮ ಮನೆಗೆ ಬಂದರು. ಬಾಗಿಲಬಳಿ ನನ್ನನ್ನು ಕಂಡರು. 

"ಅಪ್ಪನನ್ನು ಕರಿ. ಸ್ವಲ್ಪ ಕೆಲಸ ಇತ್ತು"
"ಅಪ್ಪ ಊರಲ್ಲಿಲ್ಲ. ಬೆಂಗಳೂರಿಗೆ ಹೋಗಿದ್ದಾರೆ"
"ಯಾವಾಗ ಬರುವುದು?"
"ಮೂರು ನಾಲ್ಕು ದಿನಗಳಾಗಬಹುದು"

ಸುಬ್ಬರಾಯರು ಹಿಂದಿರುಗಿ ಹೊರಟರು. ಹತ್ತು ಹೆಜ್ಜೆ ಹೋಗಿದ್ದವರು ಮತ್ತೆ ಹಿಂದಿರುಗಿ ಬಂದರು. 

"ನಿನಗೆ ಚೆನ್ನಾಗಿ ಕನ್ನಡ ಬರೆಯಲು ಬರುತ್ತದಲ್ಲವೇ?"
"ಸುಮಾರಾಗಿ ಬರೆಯುತ್ತೇನೆ"
"ನನಗೆ ಗೊತ್ತು. ನಿನ್ನ ಬರವಣಿಗೆಯೂ ನಿಮ್ಮಪ್ಪನ ಬರಹದಂತೆ ಚೆನ್ನಾಗಿದೆ"
"......." 
"ಒಂದು ಕ್ರಯಪತ್ರ ಬರೆಯಬೇಕಿತ್ತು. ನೀನೇ ಬರೆದುಕೊಡು"
"ನನಗೆ ಅಷ್ಟೆಲ್ಲಾ ಬರುವುದಿಲ್ಲ. ತಪ್ಪಾದರೆ ಛಾಪಾಕಾಗದ ಹಾಳಾಗುತ್ತೆ. ತಂದೆಯವರಿಗೂ ಕೋಪ ಬರುತ್ತೆ"
"ಪರವಾಗಿಲ್ಲ. ನಾನು ನಿಧಾನವಾಗಿ ಹೇಳುತ್ತೇನೆ. ನೀನು ಬರೆಯುತ್ತಾ ಹೋಗು"
"..........."
"ಅಪ್ಪನಿಗೆ ನಾನು ಹೇಳುತ್ತೇನೆ. ನನ್ನ ಜವಾಬ್ದಾರಿ. ತಪ್ಪಾದರೆ ಕಾಟು ಹೊಡೆದು ಬರೆಯಬಹುದು.  ಒಂದು ಮಾದರಿ ಪತ್ರ ತಂದಿರುತ್ತೇನೆ. ನೋಡಿಕೊಂಡು ಬರಿ. ಆ ಸೀನಪ್ಪನ ಹತ್ತಿರ ಕಾದು ಕುಳಿತುಕೊಳ್ಳಬೇಕು. ಅದು ನನಗೆ ಆಗದು. ನೀನೇ ಬರೆದುಕೊಡು"

ಸ್ವಲ್ಪ ಸಮಯದ ನಂತರ ಮತ್ತೆ ಬಂದು ಬಲವಂತವಾಗಿ ಕೂಡಿಸಿಕೊಂಡು ಬರೆಸಿದರು. ಉತ್ಸಾಹದಲ್ಲಿ ನಾನೂ ಕ್ರಯ ಪತ್ರ ಬರೆದೆ. 
*****

ಪತ್ರ ಬರೆದ ದಿನಾಂಕ, ಸ್ವತ್ತು ಕೊಳ್ಳುವವರು ಮತ್ತು ಮಾರುವವರ ವಿವರಗಳನ್ನು ಬರೆದ ನಂತರ ಸ್ವತ್ತಿನ ಸ್ವಲ್ಪ ವಿವರ ಬರೆದು (ಪೂರ್ತಿ ವಿವರ ಚಕ್ಕುಬಂದಿ (ಬೌಂಡರಿ) ಸಮೇತ ಷೆಡ್ಯೂಲಿನಲ್ಲಿ ಬರೆದಿರುತ್ತೆ) ನಂತರದ ಒಕ್ಕಣೆ ಹೀಗಿತ್ತು:

"......... ಈ ಸ್ವತ್ತನ್ನು ಈ ದಿನ ಗವರ್ನಮೆಂಟು ಹತ್ತು ಸಾವಿರ ರೂಪಾಯಿಗಳಿಗೆ ಶುದ್ಧ ಕ್ರಯ ಮಾಡಿಕೊಟ್ಟಿರುತ್ತೇನೆ. ಈ ಸ್ವತ್ತಿಗೆ ಯಾವುದೇ ಕ್ರಯ, ಭೋಗ್ಯ, ಆಧಾರ, ಜೀವನಾಂಶ, ಭಾಗಾಂಶ, ಲಾಭಾಂಶ, ಮೈನರು ಹಕ್ಕುಗಳು ಮುಂತಾದ ಬಾಧ್ಯತೆಗಳಿರುವುದಿಲ್ಲ. ಮುಂದೆ ಎಂದಾದರೂ ಈ ರೀತಿ ತೊಂದರೆಗಳು ಕಂಡುಬಂದರೆ ನನ್ನ ಸ್ವಂತ ಖರ್ಚಿನಿಂದ ಪರಿಹರಿಸಿಕೊಡುವುದು ನನ್ನ ಜವಾಬ್ದಾರಿ. 

ಈ ಸ್ವತ್ತನ್ನು ಇಂದೇ ನಿಮ್ಮ ಸುಪರ್ದಿಗೆ ಬಿಟ್ಟುಕೊಟ್ಟಿರುತ್ತೇನೆ. ಇಂದಿನಿಂದ ಈ ಸ್ವತ್ತನ್ನು ಮತ್ತು ಅದರಲ್ಲಿ ಇರುವ ಮತ್ತು ಕಂಡುಬರುವ ಜಲ, ತರು, ಅಕ್ಷೀಣ, ಪಾಷಾಣ, ನಿಧಿ, ನಿಕ್ಷೇಪ, ಮುಂತಾದ ಅಷ್ಟ ಭಾಗ್ಯಗಳಿಗೂ ನೀವೇ ವಾರಸುದಾರರಾಗಿ ನಿಮ್ಮ ವಂಶ ಪಾರಂಪರ್ಯವಾಗಿ ಸುಖದಿಂದ ಅನುಭವಿಸಿಕೊಂಡು ಬರತಕ್ಕದ್ದು. ........."

ತಪ್ಪಿಲ್ಲದೆ, ಬಹಳ ಜಾಗರೂಕನಾಗಿ, ಮೈಯೆಲ್ಲಾ ಕಣ್ಣಾಗಿ ಪತ್ರ ಬರೆಯುವುದು ಮುಗಿಯಿತು. 

*****

ಪತ್ರ ಪೂರ್ತಿ ಬರೆದನಂತರ "ಮೇಷ್ಟ್ರೇ, ಈ ಅಷ್ಟಭಾಗ್ಯಗಳು ಅಂದರೇನು?' ಎಂದು ಕೇಳಿದೆ. ಸುಬ್ಬರಾಯ ಮೇಷ್ಟ್ರು ವಿವರಿಸಿದರು. 
 
ಜಲ, ತರು, ಅಕ್ಷೀಣ, ಪಾಷಾಣ, ನಿಧಿ, ನಿಕ್ಷೇಪ, ಸಂಚಿತ ಮತ್ತು ಆಗಮಿ ಎನ್ನುವ ಎಂಟು ರೀತಿಯ ಸಂಪತ್ತುಗಳು ಸ್ಥಿರ ಸ್ವತ್ತುಗಳಲ್ಲಿ (ಇಮ್ಮೂವಬಲ್ ಪ್ರಾಪರ್ಟಿ) ಸೇರಿರುತ್ತವೆ.
  1. "ಜಲ" ಅಂದರೆ ನೀರು ಮತ್ತು ಅದರ ಮೂಲಗಳಾದ ಬಾವಿ, ಕುಂಟೆ (ಸಣ್ಣ ಕೆರೆ), ಕೆರೆ, ಸರೋವರ ಮುಂತಾದುವುಗಳು. ಕೆಲವು ದೊಡ್ಡ ಸ್ವತ್ತುಗಳಲ್ಲಿ (ನೂರಾರು ಎಕರೆ ಹರಡಿರುವ  ಪ್ರದೇಶಗಳು) ಸಣ್ಣ ತೊರೆ ಅಥವಾ ನದಿಗಳೂ ಇರಬಹುದು. ಇದರಲ್ಲಿ ನೆಲದ ಮೇಲೆ ಕಾಣಿಸದಿದ್ದು ಬೋರ್ವೆಲ್ ಮುಂತಾದುವು ಕೊರೆದಾಗ ಸಿಗುವ ಅಂತರ್ಜಲವೂ ಸೇರುತ್ತದೆ. ಜಲದ ಜೊತೆಯಲ್ಲಿ  ಇವುಗಳಲ್ಲಿರುವ ಜಲಚರಗಳೂ (ಮೀನು ಮುಂತಾದುವು) ಕೂಡಿರುತ್ತವೆ. 
  2. "ತರು" ಅಂದರೆ ಮರ ಅಥವಾ ಮರ-ಗಿಡಗಳು. ಮರಗಳಲ್ಲಿ ಪ್ರತಿವರುಷ ಬಿಡುವ ಹೂವು-ಹಣ್ಣುಗಳು, ಎಲೆ ಮುಂತಾದುವು ಸೇರಿದವು. ಮರಗಳನ್ನು ಕತ್ತರಿಸಿದರೆ ಅದರಲ್ಲಿ ಬರುವ ಮರದ ದಿಮ್ಮಿಗಳು, ಸೌದೆ ಮುಂತಾದುವು ಕೂಡ ಒಳಗೊಂಡಿರುತ್ತವೆ. ಮರದಲ್ಲಿ ಜೇನುಗೂಡಿದ್ದರೆ ಅದೂ ಸಹ. 
  3. "ಅಕ್ಷೀಣ" ಅಂದರೆ ಕೊನೆಯಿಲ್ಲದ ಪದಾರ್ಥಗಳು. ಇಂಗ್ಲಿಷಿನಲ್ಲಿ ಪರ್ಮನೆಂಟ್ ಅಥವಾ ಎವೆರ್ಲಾಸ್ಟಿಂಗ್ ಅನ್ನುತ್ತಾರೆ. ತೆಗೆದರೆ ಅಥವಾ ಕತ್ತರಿಸಿದರೆ ಮತ್ತೆ ಬರುವ ಪದಾರ್ಥಗಳು ಇರಬಹುದು. (ಕೆಲವರು ಅಕ್ಷೀಣ ಅನ್ನುವ ಕಡೆ "ತೃಣ" ಎಂದು ಹೇಳುತ್ತಾರೆ. ತೃಣ ಅಂದರೆ ಹುಲ್ಲು ಮತ್ತು ಅದರಂತಹವು). 
  4. "ಪಾಷಾಣ" ಅಂದರೆ ಕಲ್ಲು. ಈಗಂತೂ ಕಲ್ಲಿನ ಗಣಿಗಳಿಗಾಗಿಯೇ ಭೂಮಿ ಕೊಳ್ಳುತ್ತಾರೆ. ಪಾಷಾಣ ಕ್ಷೀಣವಾಗುವ ಭಾಗ್ಯ. ಅಂದರೆ ಒಮ್ಮೆ ತೆಗೆದರೆ ಹೋಯಿತು. ಅಷ್ಟು ಕಮ್ಮಿ ಆಯಿತು. ಮೇಲೆ ಹೇಳಿದ ಅಕ್ಷೀಣ ಹಾಗಲ್ಲ. 
  5. "ನಿಧಿ" ಅಂದರೆ ಭೂಮಿಯಲ್ಲಿ ಹೂತಿಟ್ಟ ಹಣ. ಇಂಗ್ಲಿಷಿನಲ್ಲಿ "ಟ್ರೆಷರ್" ಅನ್ನುತ್ತಾರೆ. ಹಿಂದೆ ಭೂಮಿಯಲ್ಲಿ ಪಾತ್ರೆಗಳಲ್ಲಿ, ಕೊಪ್ಪರಿಗೆಗಳಲ್ಲಿ ಹಣ ಹೂತಿಡುತ್ತಿದ್ದರು. ಅಂತಹ ನಾಣ್ಯಗಳು ಅಥವಾ ಬೆಳ್ಳಿ-ಬಂಗಾರದ ಒಡವೆಗಳು ಸಿಕ್ಕರೆ ಅದು ನಿಧಿ.
  6. "ನಿಕ್ಷೇಪ" ಅನ್ನುವುದು ಭೂಮಿಯಲ್ಲಿ ಹುದುಗಿರುವ ಲೋಹದ ಅದಿರುಗಳು ಮುಂತಾದುವನ್ನು ಸೂಚಿಸುತ್ತದೆ. ಇಂಗ್ಲಿಷಿನಲ್ಲಿ "ಮೈನಿಂಗ್" ಮಾಡುವ ಪದಾರ್ಥಗಳು.  
  7. "ಸಂಚಿತ" ಅಂದರೆ ಹಿಂದಿನಿಂದ ಕೂಡಿಕೊಂಡು ಬಂದಿರುವ ಪದಾರ್ಥಗಳು. ಭೂಮಿಯಲ್ಲದೆ ಬೇರೆ ಪದಾರ್ಥ ಭೂಮಿಗೆ ಹೊಂದಿಕೊಂಡು ಬಂದಿರುವುದು. 
  8. "ಆಗಮಿ" ಅಂದರೆ ಮುಂದೆ ಬರುವ ಪದಾರ್ಥಗಳು. ಇದು ಈಗ ಇಲ್ಲ. ಮುಂದೆಂದೋ ಆ ಭೂಮಿಯಲ್ಲಿ ಉಂಟಾಗಬಹುದು. ಕೆಲವುಕಡೆ ಭೂಮಿಯ ಆಂತರಿಕ ಪರಿಣಾಮಗಳ, ಮಳೆ ಮುಂತಾದ ಕಾರಣ ಆಗುವ ಬದಲಾವಣೆಗಳು. ಭೂಗರ್ಭದಲ್ಲಿ ಆಗುವ ಒತ್ತಡಗಳಿಂದ ಚಿಮ್ಮಿ ಬರಬಹುದಾದ ಸಂಪತ್ತು. 
ಕೆಲವರು ಸಂಚಿತ ಮತ್ತು ಆಗಮಿ ಪದಗಳ ಬದಲು "ತೇಜ" ಮತ್ತು "ಸೌಮ್ಯ" ಎಂದು ಪ್ರಯೋಗಿಸುತ್ತಾರೆ. ಆಗ ಅಷ್ಟ ಭಾಗ್ಯಗಳು "ಜಲ, ತರು, ಅಕ್ಷೀಣ, ಪಾಷಾಣ, ನಿಧಿ, ನಿಕ್ಷೇಪ, ತೇಜ, ಸೌಮ್ಯ" ಎಂದಾಗುತ್ತದೆ.

ಒಟ್ಟಿನಲ್ಲಿ "ನಿಮಗೆ ಇದನ್ನು ಕೊಟ್ಟಿದ್ದೇನೆ. ಇದರಲ್ಲಿ ಇರಬಹುದಾದ, ಬೆಳೆಯಬಹುದಾದ, ಹುದುಗಿರಬಹುದಾದ, ಹಿಂದಿನಿಂದ ಬಂದಿರಬಹುದಾದ, ಮುಂದೆ ಬರಬಹುದಾದ, ಎಲ್ಲ ರೀತಿಯ ಸಂಪತ್ತುಗಳೂ ನಿಮಗೆ ಸೇರಿದ್ದು. ಮುಂದೆ ಕಂಡು ಬಂತು ಅಂದು ಅದರಮೇಲೆ ನಾನು ಹಕ್ಕು ಸ್ಥಾಪಿಸುವುದಿಲ್ಲ" ಎಂದು ಹೇಳುವ ರೀತಿ ಈ ಒಕ್ಕಣೆಗಳು.  

*****

ಮೂರು ದಿನಗಳ ನಂತರ ತಂದೆಯವರು ಊರಿಗೆ ಬಂದಿದ್ದರು. ಸುಬ್ಬರಾಯರು ಅವರನ್ನು ಕಾಣಲು ಬಂದರು. ನಾನೂ ಮನೆಯಲ್ಲಿದ್ದೆ. ಸಂಭಾಷಣೆ ಹೀಗಿತ್ತು:

"ಏನು, ನೀವು ಹೇಳದೇ ಕೇಳದೇ ಪರಊರಿಗೆ ಹೋಗುವುದು? ಇದರಿಂದ ನಿಮಗೇ ನಷ್ಟ. ಸೀನಪ್ಪ, ನೀವು ಇಬ್ಬರನ್ನೂ ಬಿಟ್ಟು ಇಲ್ಲಿ ಮೂರನೆಯವನೊಬ್ಬ ಬಿಕ್ಕಲಂ ಹುಟ್ಟಿಕೊಂಡಿದ್ದಾನೆ. ಇನ್ನು ಮುಂದೆ ಅವನಿಗೇ ಚೆನ್ನಾಗಿ ಸಂಪಾದನೆ ಆಗುತ್ತದೆ"
"ಯಾರು ಸ್ವಾಮಿ, ಅವನು?"
"ಇವನೇ, ನಿಮ್ಮ ಕುಮಾರ ಕಂಠೀರವ. ಬಹಳ ತುರ್ತಿತ್ತು. ಒಂದು ಕ್ರಯ ಪತ್ರ ಬರೆಸಿದೆ. ಚೆನ್ನಾಗಿ ಬರೆದಿದ್ದಾನೆ. ಆದರೆ ತುಂಬಾ ಪ್ರಶ್ನೆ ಕೇಳುತ್ತಾನೆ"

ಇಬ್ಬರೂ ನಕ್ಕರು. ಅವರ ಬೇರೆ ವಿಷಯದ ಸಂಭಾಷಣೆ ಮುಂದುವರೆಯಿತು. ನಾನು ಶಾಲೆಗೆ ಹೊರಟೆ. 

Saturday, June 21, 2025

ಅಷ್ಟ ಭೋಗಗಳು


ಹಿಂದಿನ ಸಂಚಿಕೆಯಲ್ಲಿ "ಕುಳಿತುಕೊಳ್ಳುವ ಆಸನಗಳು" ಎನ್ನುವ ಶೀರ್ಷಿಕೆಯಡಿ ಧ್ಯಾನ-ಜಪ ಮುಂತಾದುವುಗಳ ಅನುಷ್ಠಾನಕ್ಕೆ ಕುಳಿತುಕೊಳ್ಳುವಾಗ ಉಪಯೋಗಿಸುವ ಪೀಠಗಳು (ಆಸನಗಳು) ಮತ್ತು ಅವುಗಳಿಂದ ಬರಬಹುದಾದ ಶುಭ-ಅಶುಭ ಫಲಗಳನ್ನು ನೋಡಿದೆವು. (ಈ ಸಂಚಿಕೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ). 

ನಮ್ಮ ಆಚರಣೆಗಳಲ್ಲಿ ದೇವರು-ದೇವತೆಗಳನ್ನು ಪ್ರಾರ್ಥಿಸುವಾಗ  "ಸಕಲ ಭೋಗ-ಭಾಗ್ಯ ಸಿಧ್ಯರ್ಥಂ" ಎಂದು ಸಂಕಲ್ಪಿಸಿ ಬೇಡುವುದು ನಡೆದುಬಂದ ವಾಡಿಕೆ. ಗುರು-ಹಿರಿಯರ ಆಶೀರ್ವಾದ ಪಡೆಯುವಾಗ "ಸಕಲ ಭೋಗ-ಭಾಗ್ಯ ಸಿದ್ಧಿರಸ್ತು" ಎಂದು ಅವರು ಆಶೀರ್ವದಿಸುವೂ ಉಂಟು. 

ಈ ಭೋಗಗಳು ಮತ್ತು ಭಾಗ್ಯಗಳು ಯಾವುವು? ಸಾಮಾನ್ಯವಾಗಿ "ಅಷ್ಟಭೋಗಗಳು" ಮತ್ತು "ಅಷ್ಟ ಭಾಗ್ಯಗಳು" ಎಂದು ಹೇಳುತ್ತಾರೆ. ಇವುಗಳ ವಿವರವೇನು ಎಂದು ಸ್ನೇಹಿತರೊಬ್ಬರು ಕೇಳಿದ್ದಾರೆ. 

ಈ ಅಷ್ಟ ಭಾಗ್ಯಗಳು ಯಾವವು ಎನ್ನುವುದನ್ನು ಈಗ ನೋಡೋಣ. 

*****

ಮನುಷ್ಯನು ಸುಖಜೀವನ ನಡೆಸುವುದಕ್ಕೆ ಕೆಲವು ರೀತಿಯ ಅನುಕೂಲಗಳು ಬೇಕೇ ಬೇಕು. ಸಮಾಜವನ್ನು ತೊರೆದು ಕಾಡು-ಮೇಡುಗಳಲ್ಲಿ ಸನ್ಯಾಸಿಯ ಜೀವನ ನಡೆಸುವುದು ಒಂದು ರೀತಿ. ಅಲ್ಲಿ ಯಾವುದೇ ಭೋಗಕ್ಕೆ ಸ್ಥಾನವಿಲ್ಲ. ಆದರೆ ಸಮಾಜದಲ್ಲಿ ಗೃಹಸ್ಥನಾಗಿ ಬದುಕುವ ವ್ಯಕ್ತಿಗೆ ಈ ರೀತಿಯ ಸನ್ಯಾಸಿ ಜೀವನ ಅಷ್ಟು ಹೊಂದುವುದಿಲ್ಲ. ಭೋಗ-ಭಾಗ್ಯಗಳ ಹಿಂದೆ ಬಿದ್ದು ಸಾಧನೆಯನ್ನು ಗೌಣವಾಗಿ ಕಾಣುವುದು ಮನುಷ್ಯ ಜೀವನದ ಉದ್ದೇಶವಲ್ಲ. ಆದರೆ, ಈ ಕಾರಣಕ್ಕಾಗಿ ಗೃಹಸ್ಥನು ಎಲ್ಲವನ್ನೂ ತ್ಯಜಿಸುವುದು ಸಾಧ್ಯವಿಲ್ಲ. ತನ್ನ ಸ್ವಂತ ಉಪಯೋಗಕ್ಕೆ, ಮತ್ತು ಅದಕ್ಕಿಂತ ಹೆಚ್ಚಾಗಿ ತನ್ನನ್ನು ನಂಬಿ ಜೊತೆಯಲ್ಲಿ ಬಾಳುವ ಕುಟುಂಬದ ಸದಸ್ಯರಿಗೆ ಸುಖ ಜೀವನ ನಡೆಸಲು ಈ ಭೋಗ-ಭಾಗ್ಯಗಳು ಬೇಕು. ಇವೆರಡಿಕ್ಕಿಂತ ಹೆಚ್ಚಾಗಿ ತನ್ನ ಮನೆಗೆ ಬಂದ ಅತಿಥಿ-ಅಭ್ಯಾಗತರ ಸೇವೆಗೆ ಈ ಭೋಗ ವಸ್ತುಗಳು ಬೇಕಾಗುತ್ತವೆ. 

ಕಾಳಿದಾಸ ಮಹಾಕವಿಯ "ರಘುವಂಶ" ಮಹಾಕಾವ್ಯದಲ್ಲಿ ವರತಂತು ಮಹರ್ಷಿಗಳ ಶಿಷ್ಯನಾದ ಕೌತ್ಸ ಎಂಬ ಋಷಿಯು ಗುರುಕುಲದಲ್ಲಿ ವಿದ್ಯಾಭ್ಯಾಸ ಮುಗಿಸಿ ತನ್ನ ಗುರುಗಳಾದ ವರತಂತುಗಳಿಗೆ ಗುರುದಕ್ಷಿಣೆ ಕೊಡಲು ರಘು ಮಹಾರಾಜನ ಬಳಿ ಸಹಾಯಕ್ಕಾಗಿ ಬರುವ ಪ್ರಸಂಗವಿದೆ. ಅಲ್ಲಿ ತನ್ನನ್ನು ಎದುರುಗೊಂಡು, ಸ್ವಾಗತಿಸಿ ಕುಶಲ ಪ್ರಶ್ನೆಗಳನ್ನು ಮಾಡಿದ ಮಹಾರಾಜನಿಗೆ ಕೌತ್ಸನು ಉತ್ತರ ಕೊಡುವಾಗ "ಸರ್ವೋಪಕಾರಕ್ಷಮಮಾಶ್ರಮಂ ತೇ" ಎಂದು ಹೇಳುತ್ತಾನೆ. ನಾಲ್ಕು ವರ್ಣಾಶ್ರಮಗಳಲ್ಲಿ ಗೃಹಸ್ಥಾಶ್ರಮ ಬಹಳ ಮುಖ್ಯವಾದವನು. ಉಳಿದ ಮೂರು ಆಶ್ರಮ ಜೀವಿಗಳಾದ ಬ್ರಹ್ಮಚಾರಿ, ಸನ್ಯಾಸಿ ಮತ್ತು ವಾನಪ್ರಸ್ಥರು ಗೃಹಸ್ಥರನ್ನೇ ಅನೇಕ ವಿಷಯಗಳಿಗೆ ಆಶ್ರಯಿಸಬೇಕಾಗುತ್ತದೆ. ಬ್ರಹ್ಮಚಾರಿಗಳ ಮತ್ತು ಸನ್ಯಾಸಿಗಳ ಜೀವನಕ್ಕೆ ಗೃಹಸ್ಥರೇ ಆಧಾರ. 

ಸ್ವಂತ ಸಂಪಾದನೆಯಲ್ಲದ ವಿದ್ಯಾರ್ಥಿಗಳು ಮತ್ತು ಸಂಪಾದನೆ ಮಾಡಬಾರದ ಸನ್ಯಾಸಿಗಳ ಜೀವನ ಸಮಾಜದಲ್ಲಿರುವ ಗೃಹಸ್ಥರ ಸಹಾಯದಿಂದಲೇ ನಡೆಯುತ್ತದೆ. ಹೀಗಿರುವಾಗ ಗೃಹಸ್ಥರು ಈ ಭೋಗ-ಭಾಗ್ಯಗಳ ವಿಷಯದಲ್ಲಿ ಅತಿಯಾದ ಆಸಕ್ತಿ ತಾಳದಿದ್ದರೂ ಪೂರ್ಣವಾಗಿ ನಿರಾಸಕ್ತರಾಗಲು ಸಾಧ್ಯವಿಲ್ಲ. 
*****  

  1. "ಅಷ್ಟ ಭಾಗ್ಯಗಳು" ಎಂದು ಪರಿಗಣಿತವಾದ ಎಂಟರಲ್ಲಿ ಮೊದಲನೆಯದು "ಅನ್ನ". ಯಾವ ಪ್ರಾಣಿಯ ಜೀವನ ನಡೆಯಬೇಕಾದರೂ ಮೊದಲನೆಯ ಅವಶ್ಯಕತೆ ಆಹಾರ. ಇಲ್ಲಿ ಅನ್ನ ಎಂದರೆ, ಹಿಂದೊಮ್ಮೆ ಬೇರೆ ಸಂಚಿಕೆಯಲ್ಲಿ ಚರ್ಚಿಸಿದಂತೆ, ಅಕ್ಕಿಯನ್ನು ಬೇಯಿಸಿ ಮಾಡಿದ ಪದಾರ್ಥ ಮಾತ್ರವಲ್ಲ. ದೇಹದ ಬೆಳವಣಿಗೆ ಮತ್ತು ಬೆಳೆದ ದೇಹವನ್ನು ಸುಸ್ಥಿತಿಯಲ್ಲಿ ಕಾಪಾಡಲು ಬೇಕಾಗುವ ಎಲ್ಲ ಖಾದ್ಯಗಳಿಗೂ "ಅನ್ನ" ಎಂದು ನಿರ್ದೇಶಿಸಿ "ಬೃಹದಾರಣ್ಯಕ ಉಪನಿಷತ್" ಹೇಳುವ "ಸಪ್ತಾನ್ನ ಪ್ರಕರಣ" ತಿಳಿಸಿಕೊಡುತ್ತದೆ. ಅನ್ನವಿಲ್ಲದೇ ಜೀವನವಿಲ್ಲ. ಆದ್ದರಿಂದ ಎಂಟು ಭಾಗ್ಯಗಳಲ್ಲಿ ಮೊದಲೆನೆಯದು ಅನ್ನ. 
  2. ಎರಡನೆಯ ಭಾಗ್ಯ "ಉದಕ". ನೀರಿಲ್ಲದೆ ಬದುಕುವುದು ಸಾಧ್ಯವಿಲ್ಲ. ಉಸಿರಾಡುವ ಎಲ್ಲಾ ಪ್ರಾಣಿಗಳಿಗೂ ಗಾಳಿಯ ನಂತರ ನೀರು ಅತಿ ಮುಖ್ಯ. ವಾಸ್ತವಾಗಿ ಅನ್ನಕ್ಕಿಂತ ಮೊದಲು ನೀರು ಬೇಕು. ಆದರೆ ಕುಡಿಯುವ ನೀರು ಸೃಷ್ಟಿಯಲ್ಲಿ ಸುಲಭವಾಗಿ ಸಿಗುವುದು. ಆದ್ದರಿಂದ ಇಲ್ಲಿ ಅನ್ನ  ಎರಡನೆಯದು ಎಂದು ಗಣಿತವಾಗಿದೆ. (ಮುಂದಿನ ಸಂಚಿಕೆಯಲ್ಲಿ ಚರ್ಚಿಸುವ "ಅಷ್ಟ ಭಾಗ್ಯಗಳು" ಎಂದು ನಿರ್ದೇಶಿಸುವ ಎಂಟು ಭಾಗ್ಯಗಳಲ್ಲಿ ನೀರೇ ಮೊದಲನೆಯದು. ಅದರಲ್ಲಿ ಅನ್ನ ಎಂಟರ ಲೆಕ್ಕದಲ್ಲಿ ಸೇರುವುದಿಲ್ಲ. ಮನುಷ್ಯನ ಅನ್ಯಾಯ ಜೀವನ ಕ್ರಮಗಳಿಂದ ಈಚಿನ ದಿನಗಳಲ್ಲಿ ನೀರು ಸಿಗುವುದು ಕಷ್ಟವಾಗಿದೆ).
  3. ಮೂರನೆಯ ಭಾಗ್ಯ "ತಾಂಬೂಲ". ತಾಂಬೂಲ ಎಂದರೆ ಕೇವಲ ಎಲೆ-ಅಡಿಕೆ-ಸುಣ್ಣ ಮಾತ್ರವಲ್ಲ. ತಾಂಬೂಲ ಸೇವನೆ ಊಟದ ಕೊನೆಯ ಅಧ್ಯಾಯ. ಅವುಗಳಲ್ಲಿ ಅವರವರ ಅಂತಸ್ತಿಗೆ ತಕ್ಕಂತೆ ಅಂತರವೂ ಉಂಟು. ಅದು ಕೇವಲ ಗೋಟು ಅಡಿಕೆ ಇರಬಹುದು ಅಥವಾ ಬಣ್ಣ ಕಟ್ಟಿದ, ಕಾಚು, ಸಕ್ಕರೆ, ಸುಗಂಧ ಮಿಶ್ರಿತವಾದ ಪುಡಿಯಡಕೆ ಇರಬಹುದು. ತಾಂಬೂಲ ಸೇವನೆ ಇದೆ ಅಂದರೆ ಊಟದ ನಂತರ ಸ್ವಲ್ಪ ವಿಶ್ರಾಂತಿಗೂ ಅವಕಾಶ ಇದೆ ಎಂದು ಅರ್ಥ. ಜೀವನದ ಇತರ ಚಟುವಟಿಕೆಗಳಿಗೆ ತಕ್ಷಣ ಓಡಬೇಕಾಗಿಲ್ಲ. ಕುಟುಂಬದ ಇತರ  ಸದಸ್ಯರ, ಬಂಧು-ಬಾಂಧವರ, ಸ್ನೇಹಿತರ ಕೂಡ ಸ್ವಲ್ಪ ವಿನೋದದ ಕ್ಷಣಗಳನ್ನೂ ಕಳೆಯುವ ಅವಕಾಶವೂ ಒಂದು ಭೋಗವೇ. 
  4. ನಾಲ್ಕನೆಯದು "ಪುಷ್ಪ". ಈಗ ಗಂಡಸರು ಹೂವಿನ ಹಾರಗಳನ್ನು ಧರಿಸುವುದು ತಪ್ಪಿಹೋಗಿದೆ. ಸ್ತ್ರೀಯರು ಕೂಡ  ಮರೆತಿದ್ದಾರೆ. ಸುಗಂಧಭರಿತ ಹೂವುಗಳು ಮತ್ತು ಹೂವಿನ ಹಾರಗಳನ್ನು ಉಪಯೋಗಿಸುವುದು ಒಂದು ಭೋಗದ ರೀತಿ. ಅನೇಕ ಬಣ್ಣದ, ಸುವಾಸನೆಯ, ಗಾತ್ರದ ಹೂವುಗಳು ಸೊಗಸನ್ನು ಹೆಚ್ಚಿಸುವುದರ ಜೊತೆಗೆ ವಾತಾವರಣವನ್ನೂ ರಂಗೇರಿಸಬಲ್ಲುದು. 
  5. ಐದನೆಯದು "ಚಂದನ". ಗಂಧದ ಮರಗಳು ಹೇರಳವಾಗಿ ಇದ್ದಾಗಿನ ಮಾತು. ಗಂಧ ತಂದು ತೇಯ್ದು ಸುಗಂಧ ಪೂಸಿಕೊಳ್ಳುತ್ತಿದ್ದ ಕಾಲದ ಮಾತು ಇದು. ಪುಟ್ಟಕೃಷ್ಣನ ದಾಸರು ವರ್ಣಿಸುವುದು "ಪೂಸಿದ ಶ್ರೀಗಂಧ ಮಯ್ಯೊಳಗಮ್ಮ" ಎಂದು. (ಈಗ ಅದು ಕೇವಲ ರಾಸಾಯನಿಕ ಗಂಧ ಸಿಂಪಡಣೆಗೆ ಸೀಮಿತವಾಗಿದೆ. ಕೆಲವುಕಡೆಯಂತೂ ದೊಡ್ಡ ಫ್ಯಾನುಗಳು ಈ ಕೆಲವನ್ನು ಬೇಜಾರಿಲ್ಲದೆ ಮಾಡುತ್ತವೆ). 
  6. ಆರನೆಯ ಭೋಗ "ವಸನ". ಮಾನ ಮುಚ್ಚಲು ಬಟ್ಟೆ ಅನ್ನ-ನೀರಿನ ನಂತರದ ಸ್ಥಾನ ಪಡೆಯುತ್ತದೆ. ಅದು ಭೋಗದ ವಸ್ತುವೂ ಆಗಬಹುದು. ಬರಿಯ ಶುಭ್ರ ಬಟ್ಟೆಯಿಂದ ಜರತಾರಿ ಸೀರೆ-ಪಂಚೆ-ದಿರಿಸು, ಮುಂಡಾಸು, ಮೇಲು ಹೊದಿಕೆ, ಮುಂತಾದ ಅನೇಕ ರೀತಿಯಲ್ಲಿ ಜೀವನಕ್ಕೆ ಸೊಗಸನ್ನು ತಂದುಕೊಡುವ ಭೋಗ ಈ ವಸನದ್ದು. 
  7. ಭೋಗಗಳಲ್ಲಿ ಏಳನೆಯದು "ಶಯ್ಯಾ". ಊಟವಾಗಿ ಹೊಟ್ಟೆ ತುಂಬಿತು. ಬಟ್ಟೆ ಸಿಕ್ಕಿತು. ನಂತರದ ಸ್ಥಾನ ದಣಿದ ದೇಹಕ್ಕೆ ನಿದ್ರೆ ಕೊಡುವುದು. ನೆಲದ ಮೇಲೆ ತೋಳನ್ನೇ ತಲೆದಿಂಬಾಗಿ ಇಟ್ಟುಕೊಂಡು ಮಲಗಬಹುದು. ಅದನ್ನು ಯಾರೂ ಭೋಗ ಅನ್ನುವುದಿಲ್ಲ. ಅದೇ ಸೊಗಸಾದ ಮೆತ್ತನೆಯ ಹಾಸಿಗೆಯ ಮೇಲೆ ಆಗಬಹುದು. ಸುಪ್ಪತ್ತಿಗೆಯೂ ಆಗಬಹುದು. ಇವು ನೆಲದ ಬದಲು ಸುಂದರ ಮಂಚದ ಮೇಲೂ ಇರಬಹುದು. ಸೊಳ್ಳೆಪರದೆ ಸೇರಿರಬಹುದು. ಹೊದೆಯಲು ಒಳ್ಳೆಯ ಪದರಗಳ ಹೊದಿಕೆ ಇರಬಹುದು. ಚಳಿಗಾಲದಲ್ಲಿ ಉಣ್ಣೆಯದು ಇರಬಹುದು. ಹೀಗೆ ಭೋಗದ ವಿವಿಧ ಮಜಲುಗಳು. ಜೊತೆಗೆ ತನ್ನದೇ ಮನೆಯಲ್ಲಿಯೂ ಇರಬಹುದು. 
  8. ಎಂಟನೆಯ ಭೋಗವೆಂದರೆ "ಅಲಂಕಾರ". ಬರೀ ಬಟ್ಟೆ ಉಟ್ಟರೆ ಸಾಕೆ? ಆಭರಣಗಳು ಬೇಡವೇ? ಚಿನ್ನ, ವಜ್ರ ಮುಂತಾದವು. ಕುಂಕುಮ ಮುಂತಾದ ಬಣ್ಣ-ಬಣ್ಣದ ದ್ರವ್ಯಗಳು. ಸುಂದರವಾದ ಕೈಚೀಲ. ಕೈಗೆ ಕಸೂತಿ ಹಾಕಿದ ಕರ್ಚೀಫು. ಸ್ವಲ್ಪ ವಯಸ್ಸಾದ ಮೇಲೆ ಕೈಗೊಂಡು ಕೊರೆದ ಬೆತ್ತದ ಕೋಲು. ಹೀಗೆ. ಅವರವರ ಯೋಗ್ಯತೆ-ಅಭಿರುಚಿಗಳಿಗೆ ತಕ್ಕಂತೆ ಇವುಗಳ ಪಟ್ಟಿಯನ್ನು ಪಸರಿಸಬಹುದು. 
ಇಲ್ಲಿಗೆ ಎಂಟು ರೀತಿಯ "ಅಷ್ಟ ಭೋಗ" ವಿಷಯದ ವಿವರಣೆ ಸಾಕು. ಮುಂದೆ ಇವನ್ನು ವಿಸ್ತರಿಸುವುದು ಅವರವರ ಮನಸ್ಸಿಗೆ ಬಿಡುವುದು ಒಳ್ಳೆಯದು. 

*****

ಅಷ್ಟ ಭೋಗಗಳ ವಿಷಯಗಳನ್ನು ಇಬ್ಬರು ಬಲ್ಲರು. ಇವು ಇಲ್ಲದವರು. ಇವು ಚೆನ್ನಾಗಿ ಇದ್ದು ಅನುಭವಿಸುವವರು. ಎಲ್ಲ ಭೋಗಗಳ ಸವಲತ್ತಿದ್ದರೂ ಅನುಭವಿಸಲು ಸಾಧ್ಯವಿಲ್ಲದವರ ವಿಷಯ ಚಿಂತಿಸುವುದು ಬೇಡ. 

"ಅಷ್ಟ ಭಾಗ್ಯಗಳು" ಎನ್ನುವುದನ್ನು ಮುಂದಿನ ಸಂಚಿಕೆಯಲ್ಲಿ ನೋಡೋಣ. 

Wednesday, June 18, 2025

ಕುಳಿತುಕೊಳ್ಳುವ ಆಸನಗಳು


ಹಿಂದಿನ ಸಂಚಿಕೆಯಲ್ಲಿ "ಚಂದ್ರ, ಸೂರ್ಯ ಮತ್ತು  ಬೆಲ್ಲದ ಪಾಯಸ" ಎಂಬ ಶೀರ್ಷಿಕೆಯಡಿ ಧ್ಯಾನ, ಜಪಾದಿಗಳಿಗೆ ಕುಳಿತುಕೊಳ್ಳುವಾಗ "ಒಳ್ಳೆಯ ಆಸನದ ಮೇಲೆ ಕುಳಿತು" ಎಂದು ಹೇಳಿತ್ತು. ಮಿತ್ರರೊಬ್ಬರು "ಒಳ್ಳೆಯ ಆಸನ" ಅಂದರೆ ಏನು? ಯಾವುದರ ಮೇಲೆ ಕುಳಿತುಕೊಳ್ಳಬೇಕು? ಯಾವುದರ ಮೇಲೆ ಕುಳಿತುಕೊಳ್ಳಬಾರದು? ಮುಂತಾದ ಬಹಳ ಆಸಕ್ತಿ ಹುಟ್ಟಿಸುವ ಪ್ರಶ್ನೆಗಳನ್ನು ಕೇಳಿದ್ದಾರೆ. (ಹಿಂದಿನ "ಚಂದ್ರ, ಸೂರ್ಯ ಮತ್ತು ಬೆಲ್ಲದ ಪಾಯಸ" ಎಂಬ ಸಂಚಿಕೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ) 

ಇಲ್ಲಿ ಕುಳಿತುಕೊಳ್ಳುವ ಆಸನ ಅಂದರೆ ಸಾಧಕನು ಕುಳಿತುಕೊಳ್ಳುವ ಪದ್ಮಾಸನ, ವಜ್ರಾಸನ, ಸುಖಾಸನ, ಸಿದ್ಧಾಸನ ಮುಂತಾದ ಆಸನಗಳಲ್ಲ. ಬರೀ ನೆಲದ ಮೇಲೆ ಕುಳಿತುಕೊಳ್ಳುವ ಬದಲು ಪೀಠವಾಗಿ ಉಪಯೋಗಿಸುವ ಸಾಧನಗಳ ವಿಷಯ. ಹಿಂದೆ ಅನೇಕ ಮನೆಗಳಲ್ಲಿ  ಕೃಷ್ಣಾಜಿನ (ಜಿಂಕೆಯ ಚರ್ಮ) ಅಥವಾ ವ್ಯಾಘರಾಜಿನ (ಹುಲಿಯ ಚರ್ಮ) ಇರುತ್ತಿದ್ದವು. ಈಗ ಪ್ರಾಣಿಗಳನ್ನು ಮನಸೋಇಚ್ಛೆ ಕೊಂದ ಪರಿಣಾಮವಾಗಿ ಇವು ಸಿಗುತ್ತಿಲ್ಲ. ವನ್ಯ ಮೃಗ ಸಂರಕ್ಷಣಾ ಕಾಯಿದೆ ಮತ್ತು ಕೆಲವು ಇತರ ಕಾನೂನುಗಳ ಪ್ರಕಾರ ಇಂತಹ ಪ್ರಾಣಿಗಳ ಚರ್ಮವನ್ನು ಇಟ್ಟುಕೊಳ್ಳುವುದು, ಮಾರುವುದು ಮುಂತಾದುವು ನಿಷೇಧಕ್ಕೆ ಒಳಗಾಗಿವೆ. ಇದು ಕಾನೂನಿನಲ್ಲಿ ಅಪರಾಧವೂ ಹೌದು. ವನ್ಯ ಜೀವಿಗಳ ರಕ್ಷಣೆಗಾಗಿ ಇಂತಹ ಕ್ರಮ ಅವಶ್ಯಕವೂ ಹೌದು. 

ಯಾವ ಆಸನ ಜಪ-ತಪಾದಿಗಳಿಗೆ ಒಳ್ಳೆಯದು? ಯಾವುದರಿಂದ ಮನಸ್ಸಿನ ಮೇಲೆ ಎಂತಹ ಪರಿಣಾಮ ಆಗುತ್ತದೆ? ಇವುಗಳ ಬಗ್ಗೆ ನಮ್ಮ ಹಿರಿಯರು ಒಂದು ಕೋಷ್ಠಕದ ರೀತಿಯ ಸೂತ್ರವನ್ನೇ ಕೊಟ್ಟಿದ್ದಾರೆ. ನಮ್ಮ ಪರಿಸರ ಅನುಕೂಲವಾಗಿದ್ದರೆ ಮನಸ್ಸನ್ನು ಸ್ವಲ್ಪಮಟ್ಟಿಗಾದರೂ ಹಿಡಿತದಲ್ಲಿಟ್ಟುಕೊಳ್ಳುವುದು ಸಾಧ್ಯ ಎನ್ನುವುದು ನಮ್ಮ ಅನುಭವಗಳಿಂದ ತಿಳಿದ ವಿಚಾರ. ತುಂಬಾ ಗದ್ದಲವಿರುವ ಪರಿಸರದಲ್ಲಿ ಧ್ಯಾನಾದಿಗಳು ಸುಲಭವಲ್ಲ. ಎಲ್ಲವೂ ಸರಿಯಿದ್ದಾಗಲೇ ಮನಸ್ಸು ನಮ್ಮ ಮಾತು ಕೇಳುವುದಿಲ್ಲ. ಇನ್ನು ತೊಂದರೆಗಳು ಮುತ್ತಿಕೊಂಡಿದ್ದಾಗ ಅದಕ್ಕೆ ಅಲ್ಲಿ ಇಲ್ಲಿ ಹರಿದಾಡಲು ಇನ್ನೂ ಸಲೀಸು. 

ಯಾವ ಯಾವ ರೀತಿಯ ಆಸನಗಳ ಮೇಲೆ ಕುಳಿತುಕೊಳ್ಳುವುದರಿಂದ ಸಾಧಕನಿಗೆ ಅನುಕೂಲ ಅಥವಾ ಅನಾನುಕೂಲ ಆಗುತ್ತದೆ, ಎನ್ನುವ ವಿಚಾರದ ಬಗ್ಗೆ ಸ್ವಲ್ಪ ಯೋಚಿಸೋಣ. 

*****

ಮೊದಲಿಗೆ ಯಾವ ರೀತಿಯ ಆಸನಗಳು ಸಿಗಬಹುದು ಎನ್ನುವುದನ್ನು ನೋಡೋಣ. ಸಾಮಾನ್ಯವಾಗಿ ಸುಲಭವಾಗಿ ಸಿಕ್ಕುವ, ಮತ್ತು ಪ್ರಯತ್ನಪೂರ್ವಕ ಪಡೆದುಕೊಳ್ಳಬಹುದ್ದಾದ ಆಸನಗಳೆಂದರೆ: 
  • ಧರಣಿ ಅಥವಾ ಶುದ್ಧವಾದ ನೆಲ (ಭೂಮಿಯ ಮೇಲೆ ಕುಳಿತುಕೊಳ್ಳುವುದು). 
  • ಹುಲ್ಲಿನ ಆಸನ (ಚಾಪೆಯಂತಹವು}. 
  • ದರ್ಭಾಸನ (ದರ್ಭೆ ಎಂಬ ಒಂದು ರೀತಿಯ ವಿಶೇಷವಾದ ಹುಲ್ಲು). 
  • ವಂಶಾಸನ (ಬಿದಿರಿನಿಂದ ಮಾಡಿದ ಆಸನ). 
  • ಪಾಷಾಣಾಸನ (ಕಲ್ಲಿನಲ್ಲಿ ಕೆತ್ತಿದ ಆಸನ). 
  • ದಾರುಕಾಸನ (ಮರದಿಂದ ಮಾಡಿದ ಮಣೆ ಮುಂತಾದುವು). 
  • ವ್ಯಾಘ್ರsಜಿನ (ಹುಲಿಯ ಚರ್ಮ).
  • ಕೃಷ್ಣಾಜಿನ (ಜಿಂಕೆಯ ಚರ್ಮ).

ಇವುಗಳ ಮೇಲೆ ಕುಳಿತುಕೊಳ್ಳುವುದರಿಂದ ಆಗುವ ಪರಿಣಾಮಗಳೇನು? ಈ ಕೆಳಗಿನ ಶ್ಲೋಕ ಅದರ ವಿವರಗಳನ್ನು ಕೊಡುತ್ತದೆ:

ವಂಶಾಸನೇ ದರಿದ್ರಸ್ಯಾತ್  ಪಾಷಾಣೇ ವ್ಯಾಧಿಸಂಭವಃ 
ಧರಣ್ಯಾ೦ ಸುಖಮಾಪ್ನೋತಿ  ದೌರ್ಭಾಗ್ಯ೦ ದಾರುಕಾಸನೇ
ತೃಣಾಸನೇ ಯಶೋಹಾನಿ: ಕುಶಾಸನೇ ಸರ್ವಸಿದ್ಧಿ:
ಕೃಷ್ಣಾಜಿನೇ ಜ್ಞಾನಸಿದ್ಧಿ: ಮೋಕ್ಷಸ್ಯಾತ್ ವ್ಯಾಘ್ರಚರ್ಮಣಿ 

*****

ವಿವಿಧ ರೀತಿಯ ಆಸನಗಳು ಮತ್ತು ಅವುಗಳಿಂದ ಆಗುವ ಪರಿಣಾಮಗಳು ಹೀಗಿವೆ:  
  • ವಂಶಾಸನದ ಮೇಲೆ (ಬಿದಿರಿನಿಂದ ಮಾಡಿದ ಆಸನಗಳು - ಬಿದಿರಿನಿಂದ ಮಾಡಿದ ಚಾಪೆ ಮತ್ತು ಪೀಠ ಮುಂತಾಡುವುಗಳು) ಕುಳಿತರೆ ಸಂಪತ್ತು ನಾಶವಾಗಿ ದಾರಿದ್ರ್ಯ ಬರುವುದು. 
  • ಕಲ್ಲಿನ ಮೇಲೆ ಕುಳಿತರೆ ರೋಗಗಳು ಬರುತ್ತವೆ. 
  • ಶುದ್ಧವಾದ ಭೂಮಿಯ ಮೇಲೆ ಕುಳಿತರೆ ಸುಖದ ಅನುಭವವಾಗುತ್ತದೆ. 
  • ಮರದ ಪೀಠ ಮತ್ತು ಕುರ್ಚಿ ಮುಂತಾದುವುಗಳ ಮೇಲೆ ಕುಳಿತರೆ ದೌರ್ಭಾಗ್ಯಕ್ಕೆ ದಾರಿಯಾಗುತ್ತದೆ. 
  • ಹುಲ್ಲು ಹಾಸಿನ ಮೇಲೆ ಕುಳಿತರೆ ಯಶಸ್ಸು ಕ್ಷಯಿಸುತ್ತದೆ. 
  • ಆದರೆ ದರ್ಭೆಯಿಂದ ಮಾಡಿದ ಆಸನವು ಬಹಳ ಒಳ್ಳೆಯದ್ದಾಗಿ ಎಲ್ಲರೀತಿಯಿಂದಲೂ ಸಿದ್ಧಿಯನ್ನು ಕೊಡುತ್ತದೆ. 
  • ಜಿಂಕೆಯ ಚರ್ಮದ ಮೇಲೆ ಕುಳಿತರೆ ಹೆಚ್ಚಿನ ಜ್ಞಾನ ವಿಕಾಸವಾಗುವುದು. 
  • ಹುಲಿಯ ಚರ್ಮದ ಮೇಲೆ ಕುಳಿತರೆ ಮೋಕ್ಷ ಪ್ರಾಪ್ತಿಯಾಗುವುದು. 

ಸಂಸಾರಿಗಳು (ಗೃಹಸ್ಥರು) ಹುಲಿಯ ಚರ್ಮದ ಮೇಲೆ ಕುಳಿತುಕೊಳ್ಳುವ ಪರಿಪಾಠವಿಲ್ಲ. ಹುಲಿಯು ಒಂದು ಹಿಂಸ್ರ ಪಶು ಆದುದರಿಂದ ಅದರ ಮೇಲೆ ಕುಳಿತು ಏಕಾಗ್ರತೆ ಸಾಧಿಸಲು ಹೆಚ್ಚಿನ ಸಿದ್ಧತೆ ಬೇಕು. ಆದ್ದರಿಂದ ಇದನ್ನು ಸನ್ಯಾಸಿಗಳು ಹೆಚ್ಚಾಗಿ ಉಪಯೋಗಿಸುತ್ತಾರೆ. ಸಿಕ್ಕಿದರೆ, ಜಿಂಕೆಯ ಚರ್ಮ ಬಹಳ ಒಳ್ಳೆಯದು.  ಕಲ್ಲು, ಮರ, ಬಿದಿರು ಮುಂತಾದುವುಗಳು ಒಳ್ಳೆಯದಲ್ಲ. 

ದರ್ಭಾಸನ ಬಹಳ ಯೋಗ್ಯವಾದದ್ದು. ಶ್ರಾದ್ಧಾದಿಗಳಲ್ಲಿ ಬಂದವರಿಗೆ ಕೂಡಲು ದರ್ಭೆಗಳನ್ನು ಕೊಡುವುದನ್ನು ಇಲ್ಲಿ  ನೆನೆಸಿಕೊಳ್ಳಬಹುದು. ಯಾವುದೂ ಸಿಕ್ಕದಿದ್ದರೆ ಭೂಮಿಯನ್ನು ಶುದ್ಧಮಾಡಿ ಕುಳಿತುಕೊಳ್ಳುವುದು ಒಳ್ಳೆಯದು. 

Monday, June 16, 2025

ಚಂದ್ರ, ಸೂರ್ಯ ಮತ್ತು ಬೆಲ್ಲದ ಪಾಯಸ


ಹೊಲದಲ್ಲಿ ಕಬ್ಬು ಬೆಳೆಯುವ ರೈತ ಆ ಕಬ್ಬನ್ನು  ಮೂರು ರೀತಿಯಲ್ಲಿ ಮಾರಿ ಹಣ ಗಳಿಸಬಹುದು. ಮೊದಲನೆಯದಾಗಿ, ಬೆಳೆ ಕಟಾವು ಮಾಡಿದ ಕೂಡಲೇ ಆ ಕಬ್ಬಿನ ಜಲ್ಲೆಗಳನ್ನು ಕಬ್ಬಿನ ರಸ ತೆಗೆದು ಮಾರುವ ಅಂಗಡಿಗಳಿಗೆ ಕೊಟ್ಟು ಹಣ ಪಡೆಯಬಹುದು. ಎರಡನೆಯದು, ಆ ಕಬ್ಬನ ರಾಶಿಯನ್ನು ಗಾಡಿ ಅಥವಾ ಟ್ರ್ಯಾಕ್ಟರುಗಳಲ್ಲಿ, ಇಲ್ಲವೇ ಲಾರಿಗಳಲ್ಲಿ ಸಾಗಿಸಿ ಹತ್ತಿರದ ಸಕ್ಕರೆ ಕಾರ್ಖಾನೆಗೆ ಮಾರಬಹುದು. ಮೂರನೆಯದಾಗಿ, ತನ್ನ ಹೊಲದಲ್ಲೇ ಆಲೆಮನೆ ಹಾಕಿ, ಬೆಲ್ಲ ಮಾಡಿ, ಆ ಬೆಲ್ಲವನ್ನು ಮಾರಬಹುದು. ಈ ರೀತಿ ಬೆಲ್ಲ ಮಾಡುವ ಕಡೆ ಅದರ ಸುಗಂಧ ಸ್ವಲ್ಪ ದೂರದವರೆಗೂ ಹರಡುತ್ತದೆ. ದೊಡ್ಡ ದೊಡ್ಡ ಕಡಾಯಿಗಳಲ್ಲಿ ಕಬ್ಬಿನ ಹಾಲನ್ನು ಕಾಯಿಸಿ ಮರದ ಅಚ್ಚುಗಳಲ್ಲಿ ಸುರಿದು ಗಟ್ಟಿಯಾದ ಮೇಲೆ ಆ ಅಚ್ಚುಗಳನ್ನು ಪಿಂಡಿಗಳೆಂಬ ಸಣ್ಣ ಸಣ್ಣ ಗಂಟುಗಳಾಗಿ ಮಾಡಿ ಮಾರುತ್ತಾರೆ. ಕೆಲವೆಡೆ ಉಂಡೆ ಬೆಲ್ಲ ಮಾಡುವುದೂ ಉಂಟು. 

ಹೀಗೆ ಹಾಕಿದ್ದ ಒಂದು ಬೆಲ್ಲ ಮಾಡುವ ಆಲೆಮನೆಗೆ ಇಬ್ಬರು ಬಂದು ಹೊಸ ಬೆಲ್ಲದ ಅಚ್ಚುಗಳನ್ನು ಕೊಂಡು ಅವರವರ ಮನೆಗೆ ತೆಗೆದುಕೊಂಡುಹೋದರು. ಮೊದಲನೆಯ ಮನೆಯಲ್ಲಿ ಆ ಬೆಲ್ಲವನ್ನು ಉಪಯೋಗಿಸಿ ಸೊಗಸಾದ ಗಸಗಸೆ ಪಾಯಸ ಮಾಡಿದರು. ಎರಡನೆಯ ಮನೆಯಲ್ಲಿ ಅದೇ ಆಲೆಮನೆಯಿಂದ ಬಂದ ಬೆಲ್ಲವನ್ನು ಬಳಸಿಕೊಂಡು ಆಕ್ಕಿ-ಕಡಲೆಬೇಳೆ ಪಾಯಸ ಮಾಡಿದರು. ಎರಡು ಮನೆಯವರೂ ಪಾಯಸ ಸೇವಿಸಿದರು. ಬೆಲ್ಲದಲ್ಲಿದ್ದ ಪೋಷಕಾಂಶಗಳ ಲಾಭ ಎರಡು ಮನೆಯವರಿಗೂ ಸಿಕ್ಕಿತು. ಎರಡೂ ಸಿಹಿಯಾಗಿತ್ತು. ಆದರೆ ತಯಾರಿಸಿದ ರೀತಿ ಬೇರೆ ಆಗಿತ್ತು. ರುಚಿಯೂ ಸ್ವಲ್ಪ ಭಿನ್ನ. ಕೊನೆಯ ಪ್ರಯೋಜನ ಮಾತ್ರ ಹೆಚ್ಚು-ಕಡಿಮೆ ಒಂದೇ ಎನ್ನಬಹುದು. 

*****

ಒಬ್ಬ ಬಹಳ ದೊಡ್ಡ ಸಾಹುಕಾರ ಇದ್ದಾನೆ. ಅವನಿಗೆ ಅನೇಕ ಪಟ್ಟಣಗಳಲ್ಲಿ, ಅನೇಕ ದೇಶಗಳಲ್ಲಿ, ಕೆಲವಾರು ಮನೆಗಳಿವೆ. ಈ ಪ್ರತಿಯೊಂದು ಮನೆಯೂ ಸುಸಜ್ಜಿತವಾಗಿವೆ. ಅವನಲ್ಲಿ ಅನೇಕ ವಾಹನಗಳಿವೆ. ಅವುಗಳಲ್ಲಿ ನಮ್ಮ ಊರಿನಲ್ಲಿರುವ ಕಾರೂ ಒಂದು. ಈ ಕಾರು ನಮ್ಮ ಮುಂದೆಯೇ ಒಡಾಡುತ್ತಿದೆ. ಇದನ್ನು ನಾವು ಪ್ರತಿ ದಿನವೂ ನೋಡುತ್ತೇವೆ. ಕೆಲವೊಮ್ಮೆ ತುಂಬಾ ಹತ್ತಿರದಲ್ಲಿ, ಚೆನ್ನಾಗಿ ಕಾಣುತ್ತದೆ. ಮತ್ತೆ ಕೆಲವು ವೇಳೆ ಎಲ್ಲೋ ದೂರದಲ್ಲಿ ಚಿಕ್ಕದ್ದಾಗಿ ಕಾಣುತ್ತದೆ. ಎಂದೋ ಒಂದು ದಿನ ಕಾಣಿಸದಿರುವಂತೆಯೂ ಉಂಟು. ಆದರೆ ಅದು ಇದ್ದೇ ಇದೆ. 

ಅವನ ಬೇರೆ ಪಟ್ಟಣಗಳಲ್ಲಿ, ಬೇರೆ ದೇಶಗಳಲ್ಲಿ ಇರುವ ಮನೆಗಳನ್ನೂ, ಕಾರುಗಳನ್ನೂ ನಾವು ನೋಡಿಲ್ಲ. ಆದರೆ ಅವು ಇವೆ ಎಂದು ಕೇಳಿದ್ದೇವೆ. ಅವನಬಳಿ ಇಷ್ಟೆಲ್ಲಾ ಇದ್ದರೂ ಅವನು ಎಲ್ಲಿಯೋ ದೂರದಲ್ಲಿರುವ ಮನೆಯಲ್ಲಿ ವಾಸವಾಗಿದ್ದನಂತೆ. ಆದರೆ ಇಷ್ಟೆಲ್ಲಾ ಮನೆಗಳೂ ವಾಹನಗಳೂ ಅವನ ಅಧೀನವಂತೆ. ಅವನು ಹೇಳಿದಂತೆ ಕೇಳುತ್ತವಂತೆ. ಅವನ್ನು ಎಲ್ಲವನ್ನೂ ಒಟ್ಟಿಗೆ ಅಥವಾ ಕ್ರಮವಾಗಿ ನೋಡುವ ಶಕ್ತಿ ನಮಗಿಲ್ಲ. ಆದರೆ ಅವೆಲ್ಲಾ ಇದ್ದೇ ಇವೆಯಂತೆ. ಹೀಗೆ ತಿಳಿದವರು ಹೇಳುವುದನ್ನು ಕೇಳಿದ್ದೇವೆ. 

ಇಷ್ಟೆಲ್ಲಾ ಇರುವ ಈ ಸಾಹುಕಾರನು ಅವನಿಗಿಂತ ದೊಡ್ಡ ಯಜಮಾನನ ಸೇವಕನಂತೆ. ಇವನ ಮಟ್ಟಿಗೆ ಅವನು ಸ್ವತಂತ್ರನಾದರೂ, ಆ ದೊಡ್ಡ ಯಜಮಾನ ಇವನ ನಿಯಾಮಕ. ಆ ನಿಯಾಮಕನ ನಿಯಮಗಳಂತೆ ಈ ಸಾಹುಕಾರನ ಇರವು ಮತ್ತು ಕೆಲಸ. ತನ್ನ ಪರಿಧಿಯಲ್ಲಿ ಇವನು ಸ್ವತಂತ್ರ. ಆದರೆ ಈ ದೊಡ್ಡ ಯಜಮಾನನ ಅಂಕೆಯಲ್ಲಿಯೇ ಇರಬೇಕು. ಆ ದೊಡ್ಡ ಯಜಮಾನನಿಗೆ ಮಾತ್ರ ಇನ್ನೊಬ್ಬ ಯಜಮಾನ ಅನ್ನುವವನು ಇಲ್ಲ. ಅವನು ಸರ್ವತಂತ್ರ ಸ್ವತಂತ್ರ. 

*****

ನಾವು ಪ್ರತಿದಿನವೂ ನೋಡುವ ಚಂದ್ರ ಎನ್ನುವ ವಸ್ತು ಒಂದು ಜಡ ಪದಾರ್ಥ. ಅದರ ಕರ್ತ ಒಬ್ಬ ಇದ್ದಾನೆ. ಹಿಂದಿನ ಒಂದು ಸಂಚಿಕೆಯಲ್ಲಿ ಲೇಖನಿ ಮತ್ತು ಅದನ್ನು ಹಿಡಿದ ಲೇಖಕನ ಬಗ್ಗೆ ಚರ್ಚಿಸಿದ್ದೇವೆ. ಲೇಖನಿ ಮೇಜಿನ ಮೇಲೆ ಬಿದ್ದಿರುತ್ತದೆ. ತಾನೇ ಸ್ವತಃ ಅದು ಏನನ್ನೂ ಬರೆಯಲಾಗದು. ಅದರ ಯಜಮಾನನಾದ ಲೇಖಕ ಉಪಯೋಗಿಸಿದಂತೆ ಅದರ ಕೆಲಸ. ಯಜಮಾನನ ಬಳಿ ಅನೇಕ ಲೇಖನಿಗಳು ಇವೆ. ಅವನು ಚೇತನ. ಇದು ಜಡ. ಲೇಖನ ಓದಿದ ನಾವು ಬರೆದವನು ಯಾರು ಎನ್ನುವುದನ್ನು ಅರಿಯುತ್ತೇವೆ. ನಾವು ಪ್ರತಿದಿನ ನೋಡುವ ಚಂದ್ರನೆಂಬ ಜಡ ವಸ್ತುವಿಗೆ ಒಬ್ಬ ಅಭಿಮಾನಿ ದೇವತೆ ಇದ್ದಾನೆ, ಅವನು ನಿಜವಾದ ಚಂದ್ರ. ಚಂದ್ರದೇವನು ನಮ್ಮ ಕಿವಿಗಳಲ್ಲಿಯೂ ಅಭಿಮಾನಿ ದೇವತೆಯಾಗಿದ್ದಾನೆ. ಅವನ ಕೆಲಸದಿಂದಲೇ ನಮಗೆ ಶಬ್ದಗಳು ಕೇಳಿಸುವುದು. ಅವನು ಕೆಲಸಮಾಡದಿದ್ದರೆ ನಾವು ಕಿವುಡು. ದೇವತೆಗಳು ಅನೇಕ ರೂಪಗಳಲ್ಲಿ, ಅನೇಕ ಸ್ಥಾನಗಳಲ್ಲಿ , ಒಂದೇ ಕಾಲದಲ್ಲಿ ಅನೇಕ ಕೆಲಸಗಳನ್ನು ನಿರ್ವಹಿಸಲು ಶಕ್ತರು. 

ಈ ಚಂದ್ರನೆಂಬುವ ದೇವತೆ ಇರುವುದು ಎಲ್ಲಿಯೋ ದೂರದಲ್ಲಿರುವ "ಚಂದ್ರಮಂಡಲ" ಎಂಬಲ್ಲಿ. ಆ ಚಂದ್ರಮಂಡಲದಲ್ಲಿರುವ ಚಂದ್ರನ ಅಧೀನದಲ್ಲಿ ನಾವು ನೋಡುವ ಚಂದ್ರ ಎನ್ನುವ ಪದಾರ್ಥ ಇದೆ. ಇದೇ ರೀತಿ ಅನಂತ ವಿಶ್ವದಲ್ಲಿ ಅನೇಕ ಚಂದ್ರನೆಂಬ ಪದಾರ್ಥಗಳಿವೆ. ಅವುಗಳೆಲ್ಲಕ್ಕೂ ಚಂದ್ರನೆಂಬ ದೇವತೆ ಅಭಿಮಾನಿಯಾಗಿ ಕಾರ್ಯ ನಿರ್ವಹಿಸುತ್ತಾನೆ. ಈ ಚಂದ್ರಮಂಡಲದಲ್ಲಿರುವ ಚಂದ್ರದೇವನ ಅಂತರ್ಯಾಮಿಯಾಗಿ ಆ ಪರಮಪುರುಷನು ಕುಳಿತಿದ್ದಾನೆ. ಪುರುಷ ಸೂಕ್ತ ಹೇಳುವಂತೆ ಈ ಚಂದ್ರ ಪರಮಪುರುಷನ ಮನಸ್ಸಿನಿಂದ ಹುಟ್ಟಿದವನು. ಅದಕ್ಕೇ "ಚಂದ್ರಮಾ ಮನಸೋ ಜಾತಃ" ಎನ್ನುವುದು. ಚಂದ್ರನ ಹುಣ್ಣಿಮೆ ಅಮಾವಾಸ್ಯೆಗಳು ನಮ್ಮ ಮನಸ್ಸಿನ ಮೇಲೆ ನೇರ ಪರಿಣಾಮ ಬೀರುತ್ತವೆ ಎಂದು ಮನಶಾಸ್ತ್ರ ಹೇಳುತ್ತದೆ. ಚಂದ್ರಮಂಡಲದಲ್ಲಿರುವ ಆ "ಪುರುಷಸೂಕ್ತ" ಪ್ರತಿಪಾದ್ಯ ಪರಮಪುರುಷನಿಗೆ "ಧನ್ವಂತರಿ" ಎಂದು ಹೆಸರು.  ನಾವು ಚಂದ್ರನನ್ನು ಆರಾಅಧಿಸುವಾಗ ಆ ಚಂದ್ರಮಂಡಲದಲ್ಲಿರುವ ಚಂದ್ರನನ್ನೂ, ಅವನ ಅಂತರ್ಯಾಮಿಯಾದ ಧನ್ವಂತರಿಯನ್ನು  ಪೂಜಿಸುತ್ತೇವೆ. 

ಈ ಧನ್ವಂತರಿಯು ಸಮುದ್ರ ಮಥನ ಕಾಲದಲ್ಲಿ ಅಮೃತ ಕಲಶವನ್ನು ಹಿಡಿದು ಬಂದು ದೇವತೆಗಳಿಗೆ ಅಮೃತ ಕೊಟ್ಟವನು. ಅವನಿಂದ ಸದಾಕಾಲವೂ ಅಮೃತ ಕಿರಣಗಳು ಹೊರಬರುತ್ತಿವೆ. ಆಯುರ್ವೇದ ಎನ್ನುವ ಆರೋಗ್ಯಶಾಸ್ತ್ರ ಅವನಿಂದ ಹುಟ್ಟಿತು. 

*****

ಇದೆ ರೀತಿ ನಾವು ಪ್ರತಿದಿನ ನೋಡುವ ಸೂರ್ಯ ಎನ್ನುವ ಜಡ ವಸ್ತು ಉಂಟು. ಅದು ನಮಗೆ ಪ್ರತಿದಿನ ಕಾಣುತ್ತದೆ. (ಭೂಮಿಯ ಕೆಲವು ಭಾಗಗಳಲ್ಲಿ, (ಉತ್ತರ ಮತ್ತು ದಕ್ಷಿಣ ಧ್ರುವ ಪ್ರದೇಶಗಳಲ್ಲಿ) ಕೆಲವು ದಿನಗಳು ಕಾಣುವುದಿಲ್ಲವಂತೆ). ಇಂತಹ ಅನೇಕ ಸೂರ್ಯರು ವಿಶಾಲ ವಿಶ್ವದಲ್ಲಿ ಇದ್ದಾರೆ. ಅವರೆಲ್ಲರ ಅಭಿಮಾನಿ ದೇವತೆಯಾಗಿ, ನಿಯಾಮಕನಾಗಿ, ಸೂರ್ಯದೇವ ಇದ್ದಾನೆ. ಅವನು ಇರುವುದು ಸೂರ್ಯಮಂಡಲದಲ್ಲಿ. ಸೂರ್ಯಮಂಡಲದಲ್ಲಿನ ಸೂರ್ಯದೇವನ ಅಂತರ್ಯಾಮಿಯಾಗಿ ಪರಮಪುರುಷನಾದ "ಸೂರ್ಯನಾರಾಯಣ" ಇದ್ದಾನೆ. ಈ ಸೂರ್ಯನು ಪುರುಷ ಸೂಕ್ತ ಹೇಳುವಂತೆ ಆ ಪರಮಪುರುಷನ ಕಣ್ಣಿನಿಂದ ಹುಟ್ಟಿದವನು. ಆದ್ದರಿಂದಲೇ "ಚಕ್ಷೋ: ಸೂರ್ಯೋ ಅಜಾಯತ". ಸೂರ್ಯನನ್ನು ಆರಾಧಿಸುವಾಗ ನಾವು ಈ ಸೂರ್ಯದೇವನನ್ನೂ, ಅವನ ಅಂತರ್ಗತನಾದ ಸೂರ್ಯನಾರಾಯಣನನ್ನೂ ಆರಾಧಿಸುತ್ತೇವೆ. 

ಈ ಸೂರ್ಯನಾರಾಯಣನು ನಮ್ಮ ಬುದ್ಧಿಯನ್ನು ಪ್ರಚೋದಿಸುವವನು. ಆದ್ದರಿಂದ ಅವನನ್ನು ಗಾಯತ್ರಿ ಮಂತ್ರ ಜಪದ ಮೂಲಕವಾಗಿ ವಿಶೇಷವಾಗಿ ಆರಾಧಿಸುತ್ತೇವೆ. 

*****

ಪುರುಷಸೂಕ್ತವು ನಿರ್ದೇಶಿಸುವ ಆ ಪರಮಪುರುಷನು ಎಲ್ಲ ಕಡೆಯೂ ವ್ಯಾಪಿಸಿದ್ದಾನೆ. ಅವನು ಇಡೀ ವಿಶ್ವವನ್ನು ಸೃಷ್ಟಿಸಿ ಅದರ ಒಳಗಡೆ ಪ್ರವೇಶಿಸಿದನು. ಒಳಗಡೆ ಪ್ರವೇಶಿಸುವುದರ ಜೊತೆ ಹೊರಗಡೆಯೂ ಉಳಿದನು. ಇದು ನಾವು ಮಾಡಬಹುದಾದ ಕೆಲಸವಲ್ಲ. ನಾವು ಒಳಗಿದ್ದರೆ ಹೊರಗಿಲ್ಲ. ಹೊರಗಿದ್ದರೆ ಒಳಗಿಲ್ಲ. ಸ್ವಲ್ಪ ಕಾಲಾನಂತರ ನಾವು ಎಲ್ಲೂ ಇಲ್ಲ. ಇನ್ನೂ ಸ್ವಲ್ಪ ಕಾಲಾನಂತರ ನಾವು ಇದ್ದೆವು ಅನ್ನುವ ನೆನಪೂ ಇರುವುದಿಲ್ಲ. ಅವನು ಹಾಗಲ್ಲ. ಅವನ ಲಕ್ಷಣ ಏನು? "ಅಂತರ್ಬಹಿಶ್ಚ ತತ್ಸರ್ವಂ ವ್ಯಾಪ್ಯ ನಾರಾಯಣಃ ಸ್ಥಿತಃ". ಆದ್ದರಿಂದ ಅವನಿಗೆ ಗೋವಿಂದ ಎಂದು ಹೆಸರು. 

ಅವನು ಎಲ್ಲ ಕಡೆಯೂ ಇದ್ದರೂ ನಾವು ದೇವಸ್ಥಾನಗಳಿಗೆ ಹೋಗುತ್ತೇವೆ. ಅಲ್ಲಿ ಅವನ ಅಭಿವ್ಯಕ್ತಿ ಹೆಚ್ಚಿನ ಮಟ್ಟದ್ದು. ಎಲ್ಲ ವಿದ್ಯುತ್ ತಂತಿಗಳಲ್ಲಿ ವಿದ್ಯುತ್ ಹರಿದರೂ ಹೈ ಟೆನ್ಶನ್ ವೈರಿನಲ್ಲಿ ಹೆಚ್ಚು ಪ್ರಖರ. ಆ ರೀತಿ. ಭಗವದ್ಗೀತೆಯಲ್ಲಿ ಹತ್ತನೆಯ ಅಧ್ಯಾಯದಲ್ಲಿ ಶ್ರೀಕೃಷ್ಣನು ತನ್ನ ವಿಭೂತಿರೂಪಗಳನ್ನು ಹೇಳುತ್ತಾನೆ. ಎಲ್ಲ ಕಡೆಯೂ ತಾನಿದ್ದರೂ ಕೆಲವು ಕಡೆಗಳಲ್ಲಿ ಅವನ ವಿಶೇಷ ಅಭಿವ್ಯಕ್ತಿ ಇದೆ. ಅವೇ ವಿಭೂತಿ ರೂಪಗಳು. 

"ಆದಿತ್ಯಾನಾಮ್ ಅಹಂ ವಿಷ್ಣು:" ಅನ್ನುವುದಕ್ಕೆ "ಸೂರ್ಯರಲ್ಲಿ ನಾನು ವಿಷ್ಣು" ಎಂದು ಅರ್ಥಮಾಡುತ್ತಾರೆ. "ದ್ವಾದಶ ಆದಿತ್ಯರು" ಅಂದರೆ ಹನ್ನೆರಡು ಸೂರ್ಯರು ಎಂದು ಅರ್ಥ ಮಾಡಿ ಅವರಲ್ಲಿ ವಿಷ್ಣು ಎಂಬುವವನು ಎಂದು ಅರ್ಥ ಮಾಡುತ್ತಾರೆ. ಇರುವುದು ಒಬ್ಬನೇ ಸೂರ್ಯ. ಅವನು ಅನಂತ ವಿಶ್ವದ ಅನೇಕ ಸೂರ್ಯರಿಗೆ ಅಭಿಮಾನಿ ದೇವತೆ. ಆದಿತ್ಯರು ಎನ್ನುವ ಹನ್ನೆರಡು ಅದಿತಿಯ ಮಕ್ಕಳು "ದ್ವಾದಶ ಆದಿತ್ಯರು". ಈ ಹನ್ನೆರಡು ಜನರಿಗೆ ಸೃಷ್ಟಿಯಲ್ಲಿ ಅವರದೇ ಆದ ವಿಶೇಷ ಕಾರ್ಯಗಳು೦ಟು. ಈ ಹನ್ನೆರಡು ಜನರಲ್ಲಿ ಒಬ್ಬನ ಹೆಸರು ವಿಷ್ಣು. "ಅವರಲ್ಲಿ (ಆದಿತ್ಯರಲ್ಲಿ) ನಾನು ವಿಷ್ಣು "ಎಂದು ಶ್ರೀಕೃಷ್ಣನು ಹೇಳುವುದು ಈ ವಿಷ್ಣುವನ್ನು . 

"ನಕ್ಷತ್ರಾಣಂ ಅಹಂ ಶಶಿ" ಅನ್ನುವುದೂ ಹೀಗೆಯೇ. ಅಲ್ಲಿ ಚಂದ್ರ ಅಂದರೆ ನಾವು ಕಾಣುವ ಜಡ ವಸ್ತು ಚಂದ್ರನಲ್ಲ. ಚಂದ್ರಮಂಡಲದಲ್ಲಿರುವ ಚಂದ್ರ. "ನಾವು ಕಾಣುವ ಚಂದ್ರ ನಕ್ಷತ್ರವಲ್ಲ. ಅವನು ಗ್ರಹವಲ್ಲ. ಉಪಗ್ರಹ", ಹೀಗೆನ್ನುವ ಇಂದಿನ ವಿಜ್ನ್ಯಾನದ ಅರ್ಥ ವಿಭೂತಿಯೋಗದ ಅರ್ಥವಲ್ಲ. 

*****

ಎಲ್ಲ ಮಂತ್ರ ಜಪಗಳ ಮೊದಲು ಒಳ್ಳೆಯ ಆಸನದ ಮೇಲೆ ಕುಳಿತು, ಮನಸ್ಸನ್ನು ಗಟ್ಟಿಮಾಡಿ ನಿಲ್ಲಿ,ಸಿ, ಅಂಗನ್ಯಾಸ, ಕರನ್ಯಾಸಗಳನ್ನು ಮಾಡಿ ಒಂದು "ಧ್ಯಾನ ಶ್ಲೋಕ" ಹೇಳಿಕೊಳ್ಳುತ್ತಾರೆ. ಧ್ಯಾನಶ್ಲೋಕದಲ್ಲಿ ತಾವು ಯಾವ ಮಂತ್ರ ಜಪಿಸುತ್ತಾರೋ ಆ ಆರಾಧ್ಯ ಮೂರ್ತಿಯನ್ನು ವರ್ಣಿಸುವ ಶ್ಲೋಕದ ಮೂಲಕ ಆ ಮೂರ್ತಿಯನ್ನು ತಮ್ಮ ಮನಸ್ಸಿನಲ್ಲಿ ಚಿಂತಿಸುತ್ತ, ಆ ದೇವರ/ದೇವತೆಯ ಮಂತ್ರವನ್ನು ಜಪಿಸುತ್ತಾರೆ. 

ಗಾಯತ್ರಿ ಮಂತ್ರ ಜಪಿಸುವ ವೇಳೆ ಕೆಲವರು ಆ ಪರಮಪುರುಷನ ಐದು ತಲೆಗಳುಳ್ಳ (ಮುಕ್ತಾ, ವಿದ್ರುಮ, ಹೇಮ, ನೀಲ, ಧವಳ) ಸ್ತ್ರೀರೂಪವನ್ನು ನೆನೆಸಿಕೊಂಡು ಜಪಿಸುತ್ತಾರೆ. (ಪಂಡಿತೋತ್ತಮರಾದ ದೇವುಡು ನರಸಿಂಹ ಶಾಸ್ತ್ರಿಗಳು ತಮ್ಮ "ಮಹಾ ಬ್ರಾಹ್ಮಣ" ಎನ್ನುವ ಕಾದಂಬರಿಯಲ್ಲಿ ಇದರ ವಿವರಗಳನ್ನು ಕೊಟ್ಟಿದ್ದಾರೆ). ಇವಳೇ ಗಾಯತ್ರಿ ಮಾತೆ. ಮತ್ತೆ ಕೆಲವರು ಕೇಯೂರ, ಮಕರ ಕುಂಡಲ, ಕಿರೀಟಗಳನ್ನು ಧರಿಸಿದ ಪರಮಪುರುಷನ ಪುರುಷ ರೂಪವನ್ನು ನೆನೆದು (ಧ್ಯಾಯೇತ್ ಸದಾ ಸವಿತೃ ಮಂಡಲ ಮಧ್ಯವರ್ತೀ ನಾರಾಯಣಃ) ಎಂದು ಅದೇ ಪರಮಪುರುಷನ ಪುರುಷ ರೂಪವನ್ನು ಆರಾಧಿಸುತ್ತಾರೆ.  ಇವನೇ "ಸೂರ್ಯನಾರಾಯಣ".  ಒಂದೇ ಆಲದ ಮನೆಯ ಬೆಲ್ಲದ ಎರಡು ಪಾಯಸ ಎರಡು ಮನೆಯವರಿಗೆ ಸಿಕ್ಕಿದಂತೆ. ಬೆಲ್ಲ ಒಂದೇ. ಮಾಡಿದ ಕ್ರಮ ಬೇರೆ ಆದ್ದರಿಂದ ಪಾಯಸ ಬೇರೆ ಬೇರೆ. 

ಪರಮಪುರುಷನು ನಮ್ಮ ದೇಹಗಳಲ್ಲಿ ಅನೇಕ ರೂಪಗಳಿಂದ ಇರುತ್ತಾನೆ. ಪ್ರತಿ ಮನುಷ್ಯ ದೇಹದಲ್ಲಿ (ಗಂಡು ದೇಹ, ಹೆಣ್ಣು ದೇಹ ಎನ್ನುವ ಭೇದವಿಲ್ಲದೆ) 72,000 ನಾಡಿಗಳಿವೆಯಂತೆ. ಬಲಗಡೆ 36,000 ಪುರುಷ ನಾಡಿ. ಎಡಗಡೆ 36,000 ಸ್ತ್ರೀ ನಾಡಿ. ಹೀಗೆಯೇ ಅವನ ಪ್ರತಿ ಪುರುಷ ರೂಪಕ್ಕೂ ಹೊಂದುವ ಸ್ತ್ರೀ ರೂಪಗಳಿವೆ ಎಂದು ಹೇಳುತ್ತಾರೆ. ಹೀಗೆ ಇರುವುದರಿಂದ ಪ್ರಾಯಶಃ ಪರಮಪುರುಷನನ್ನು ಹೇಗೆ ಗಾಯತ್ರಿ ಮಂತ್ರದಿಂದ ಸ್ತ್ರೀ ಮತ್ತು ಪುರುಷ ರೂಪಗಳೆರಡರಲ್ಲೂ ಆರಾಧಿಸುವುದು ಬಂದಿರಬಹುದು. "ಬೃಹತೀಸಹಸ್ರ" ಉಪಾಸನೆಯಲ್ಲಿ ಹೀಗೆ ಹೇಳುತ್ತಾರೆ. 

ಗಾಯತ್ರಿ ಅನ್ನುವುದು ಇಪ್ಪತ್ತನಾಲ್ಕು ಅಕ್ಷರಗಳ ಒಂದು ಛಂದಸ್ಸು. ಗಾಯತ್ರಿ ಮಂತ್ರ ಜಪಿಸುವಾಗ ಆ ಮಂತ್ರಕ್ಕೆ "ಗಾಯತ್ರಿ ಛಂದಃ" ಎಂದೇ ಹೇಳುವುದು. ಬೃಹತೀ ಅನ್ನುವುದು ಹೀಗೆಯೇ ಮೂವತ್ತಾರು ಅಕ್ಷರಗಳ ಛಂದಸ್ಸು. ಒಂಭತ್ತು ಅಕ್ಷರಗಳ ಒಂದು ಪಾದ. ಹೀಗೆ ನಾಲ್ಕು ಪಾದಗಳಾದರೆ ಮೂವತ್ತಾರು ಅಕ್ಷರಗಳು. ಇವು ಒಂದು ಸಾವಿರವಾದರೆ ಒಂದು ಬೃಹತೀ ಸಹಸ್ರ. ಹೀಗೆ ಲೆಕ್ಕ. ಸಂಖ್ಯಾಶಾಸ್ತ್ರದ ಪ್ರಕಾರ ಹೀಗೆ ವಿವರಣೆ. 

*****

ನಮ್ಮ ವೈದಿಕ ವಾಙ್ಮಯದಲ್ಲಿ ಅನೇಕ ಸಮನ್ವಯಗಳು ಮಾಡಬೇಕಾಗುತ್ತವೆ. "ಏಕಂ ಸತ್. ವಿಪ್ರಾ: ಬಹುಧಾ ವದಂತಿ" ಅನ್ನುವ ನಾಣ್ನುಡಿಯಂತೆ ಅನೇಕ ಮಂದಿ ತಿಳಿದವರು ಅನೇಕ ರೀತಿಯ ವಿವರಣೆಗಳನ್ನು ಕೊಡುತ್ತಾರೆ. ನಮ್ಮ ಪುರಾತನ ಕಲಿಕೆಯ ಮೂಲ ಮಂತ್ರ "ಎಲ್ಲವನ್ನೂ ತಿಳಿ. ಕಡೆಗೆ ನಿನಗೆ ನಿನ್ನ ಅನುಭವದಲ್ಲಿ ಸರಿ ಎಂದದ್ದು ಅನುಸರಿಸು" ಎಂದು. ಯಾವುದನ್ನು ಒಪ್ಪಬೇಕು, ಯಾವುದನ್ನು ಆಚರಿಸಬೇಕು ಅನ್ನುವುದು ಅವರವರ ಆಯ್ಕೆಗೆ ಬಿಟ್ಟದ್ದು. 

ಅಧ್ಯಯನ ಕಾಲದಲ್ಲಿ ಜಿಜ್ಞಾಸುವಿಗೆ ಅನೇಕ ಸಂದೇಹಗಳು ಬರುವುದು ಸಹಜ. ಯಾವುದೋ ಪ್ರಶ್ನೆಯ ಬೀಗಕ್ಕೆ ಮತ್ತೆಲ್ಲೋ ಕೀಲಿಕೈ ಇರುತ್ತದೆ. ಇವೆರಡನ್ನೂ ಸಮನ್ವಯ ಮಾಡಿದಾಗ ಆ ಸಂದೇಹ ಪರಿಹಾರವಾಗುತ್ತದೆ. ಅಧ್ಯಯನ ಮುಂದುವರೆದಂತೆ ಸಂದೇಹಗಳು  ಪರಿಹಾರವಾಗುತ್ತ, ಹೊಸ ಹೊಸ ಬೆಳಕು ಕಾಣುತ್ತದೆ.