Tuesday, April 1, 2025
"ಹಂಸ ಮಂತ್ರ " ಮತ್ತು "ಅಜಪಾಜಪ"
Saturday, March 29, 2025
ಅನುಭವದ ಆಳ-ಅಗಲಗಳು
- ತನ್ನ ತಪ್ಪುಗಳಿಂದ ಆದ ಅನುಭವಗಳಿಂದಲೂ ಪಾಠ ಕಲಿಯದೆ ಅದೇ ತಪ್ಪುಗಳನ್ನು ಮತ್ತೆ ಮತ್ತೆ ಮಾಡುತ್ತಾ ತೊಂದರೆ ಅನುಭವಿಸುವನು ಪೆದ್ದ.
- ತನ್ನ ತಪ್ಪುಗಳಿಂದ ಆದ ಅನುಭವಗಳಿಂದ ಪಾಠ ಕಲಿತು ಅದೇ ತಪ್ಪುಗಳನ್ನು ಮತ್ತೆ ಮಾಡದೆ ಸುಧಾರಿಸಿಕೊಳ್ಳುವವನು ಸಾಮಾನ್ಯ ಮನುಶ್ಯ.
- ಇನ್ನೊಬ್ಬರ ತಪ್ಪುಗಳಿಂದ ಅವರು ಅನುಭವಿಸುವ ತೊಂದರೆಗಳನ್ನು ಕಂಡು, ಅಂತಹ ತಪ್ಪುಗಳನ್ನು ಮಾಡದೇ ಮುಂದುವರೆದು, ಪರರ ಅನುಭವಗಳಿಂದ ಪಾಠ ಕಲಿಯುವವನು ಜಾಣ.
Wednesday, March 26, 2025
ಅನುಭವದಿಂದ ಬಂದ ಅರ್ಥ
ಅದು ಹೋಳಿಗೆ ಇರಲಿ, ಒಬ್ಬಟ್ಟೀ ಇರಲಿ, ತಯಾರಿಸಲು ಮೈದಾ ಹಿಟ್ಟಿನ ಕಣಕ ಬೇಕೇ ಬೇಕು. ಕಣಕದ ಉಂಡೆಯನ್ನು ಲಟ್ಟಿಸಿ ಅಗಲ ಮಾಡಿ, ಅದರೊಳಗೆ ಹೂರಣದ ಉಂಡಿಯಿಟ್ಟು ಸುತ್ತಿ, ಮತ್ತೆ ಲಟ್ಟಿಸಿ ಅಗಲ ಮಾಡಿ ಕಾದ ಹೆಂಚಿನ ಮೇಲೆ ಬೇಯಿಸಿ ತಯಾರಿಸಬೇಕು. ತಿನ್ನುವವರಿಗೆ ಬಲು ಸಿಹಿ. ಆದರೆ ಮಾಡುವವರಿಗೆ ಬಲು ರೇಜಿಗೆಯ ಕೆಲಸ. ಅದೇನೂ ಉಪ್ಪಿಟ್ಟಿನಂತೆ ಒಮ್ಮೆ ಕೆದಕಿ ಇಡುವ ತಿನಿಸಲ್ಲ. ದೋಸೆಯಂತೆ ಒಂದಾದ ಮೇಲೊಂದು ಗುಂಡಗೆ ಬರೆಯಬೇಕು. ಆಗೆಲ್ಲಾ ಸೌದೆ ಒಲೆಗಳು. ಮಾಡುವವರಿಗೆ ಅವರು ಎಷ್ಟು ಶಾಂತ ಸ್ವಭಾವದವರಾದರೂ ಮಾಡಿ ಮುಗಿಸುವ ವೇಳೆಗೆ ಹೊಗೆಯಿಂದ ಕಣ್ಣು ಕೆಂಪಗಾಗುತ್ತಿದುದು ಸಹಜವೇ!
ಅಡಿಗೆ ಮಾಡುವವರ ಕಷ್ಟ ಅವರಿಗೇ ಗೊತ್ತು. ಮೊದಲು ಪದಾರ್ಥಗಳನ್ನು ಹೊಂದಿಸಬೇಕು. ಈಗಿನಂತೆ ಆಗ "ಎಲ್ಲ ಕ್ಲೀನ್" ಮಾಡಿದ ಪದಾರ್ಥಗಳು ಸಿಗುತ್ತಿರಲಿಲ್ಲ. ಹೊಂದಿಸಿದ ಪದಾರ್ಥಗಳನ್ನು ಶುದ್ದಿ ಮಾಡಬೇಕು. ನಂತರ ಸಂಸ್ಕರಿಸಿ ಅಡುಗೆ ತಯಾರಿಸಬೇಕು. ಈ ತಿನಿಸು ಮಾಡುವಾಗ ಅಷ್ಟು ಕಣಕ ಮತ್ತು ಅಷ್ಟು ಹೂರಣ ಮಾಡಬೇಕು. ಎಲ್ಲ ಮಾಡಿದ ಮೇಲೆ ಒಮ್ಮೊಮ್ಮೆ ಸ್ವಲ್ಪ ಹೂರಣ ಮಿಗಬಹುದು. ಅಥವಾ ಸ್ವಲ್ಪ ಕಣಕ ಮಿಗಬಹುದು. ಹೂರಣ ಮಿಕ್ಕರೆ ಅದನ್ನೇ ಮಿಠಾಯಿ ತರಹ ಮಾಡಿ ಕೊಡುತ್ತಿದ್ದರು. ಕಣಕ ಮಿಕ್ಕರೆ ಕಷ್ಟವೇ! ಕಡೆಗೆ ಅದನ್ನು ಬಿಸಾಡಲಾರದೆ ಅದನ್ನೇ ಒಂದು ರೊಟ್ಟಿಯಂತೆ ತಟ್ಟಿ ಮುಗಿಸುತ್ತಿದ್ದರು. ಅದು ಹೋಳಿಗೆಯೂ ಅಲ್ಲ; ಒಬ್ಬಟ್ಟೂ ಅಲ್ಲ. ಅದೊಂದು ಕಣಕದ ರೊಟ್ಟಿ. ನೋಡಲು ಬಿಳಿಚಿಕೊಂಡ ಒಬ್ಬಟ್ಟಿನಂತೆ. ಏಕೆಂದರೆ ಅದರೊಳಗೆ ಹೂರಣದ ಕೆಂಪಿಲ್ಲ. ಹೂರಣದ ಕಂಪೂ ಇಲ್ಲ.
ಕೆಲವರು ಮಾತಾಡುವಾಗ ಅವರ ಮಾತಿನ ರೀತಿ ಹೋಳಿಗೆಯಂತೆ ಇರುತ್ತದೆ. ಅವರ ಮಾತಿನಲ್ಲಿ ಒಂದು ರೀತಿಯ ಮೋಡಿ, ಒಂದು ಅರ್ಥ, ಒಂದು ಸೊಗಸು ಇರುತ್ತದೆ. ಒಂದು ಒಬ್ಬಟ್ಟು ತಿಂದ ನಂತರ ಇನ್ನೊಂದು ತಿನ್ನಲು ಆಸೆ ಆಗುವಂತೆ ಒಂದು ಮಾತು ಕೇಳಿದ ನಂತರ ಇನ್ನಷ್ಟು ಕೇಳಬೇಕು ಅನ್ನಿಸುತ್ತದೆ. ಮತ್ತೆ ಕೆಲವರು ಹಾಗಲ್ಲ. ಕೇವಲ ಮಾತು, ಅಷ್ಟೇ. ಮುಗಿದರೆ ಸಾಕು ಅನ್ನಿಸುತ್ತದೆ. "ಅವನ ಮಾತಿನಲ್ಲಿ ಏನೂ ಹೂರಣವಿಲ್ಲ" ಅನ್ನುವುದು ಇದರಿಂದ ಬಂದದ್ದು. ಅಂತಹವರ ಮಾತು ಕಣಕದ ರೊಟ್ಟಿಯಂತೆ. ಬರೀ ಶಬ್ದಗಳು. ಅರ್ಥವಿಲ್ಲದ ಶಬ್ದಗಳಷ್ಟೇ. "ಒಡಕು ಮಡಕೆಗೆ ಕಲ್ಲು ಹಾಕಿದಂತೆ" ಅನ್ನುತ್ತಿದ್ದರು. ಅಂತಹವರು ಹೋದ ಮೇಲೆ "ಸದ್ಯ, ಮಳೆ ನಿಂತಿತು" ಎಂದು ನಿಟ್ಟುಸಿರು ಬಿಡುತ್ತಿದ್ದರು.
*****
ಅಂತೂ ರೇಜಿಗೆಯ ಕೆಲಸ ಮುಗಿಸಿ ಒಬ್ಬಟ್ಟು, ಹೋಳಿಗೆ ತಯಾರಿಸಿದ್ದಾಯಿತು. ಜೊತೆಗೆ ಒಂದು ಕಣಕದ ರೊಟ್ಟಿಯೂ ಬಂದಿದೆ. ತಯಾರು ಮಾಡಿದ್ದನ್ನು ಸದುಪಯೋಗ ಮಾಡಬೇಕಲ್ಲ. ಅದಕ್ಕೇ ತಿನ್ನುವ ವಿಧಾನದ ಕಡೆಗೆ ಹೋಗೋಣ.
ಅದೇನು? ತಿನ್ನುವ ವಿಧಾನ? ಎಂದು ಕೆಲವರು ಮುಖ ಸಿಂಡರಿಸಬಹುದು. ತಿನ್ನುವ ರೀತಿಯಲ್ಲಿ ಕೆಲಬಲರು ಕೆಲ ರೀತಿ ಅನುಸರಿಸುತ್ತಾರೆ. ಕೆಲವರಿಗೆ ಹೋಳಿಗೆಯಷ್ಟೇ ಸಾಕು. ಮತ್ತೆ ಕೆಲವರಿಗೆ ಅದರ ಜೊತೆ ಸ್ವಲ್ಪ (ಧಾರಾಳವಾಗಿಯೇ ಅನ್ನಿ) ತುಪ್ಪ ಬೇಕು. ಮತ್ತೆ ಕೆಲವರಿಗೆ ಅದರ ಜೊತೆ ಬಿಸಿ ಹಾಲು ಬೇಕು. ಇನ್ನೂ ಕೆಲವರಿಗೆ ಸ್ವಲ್ಪ ತುಪ್ಪ, ಅದರ ಮೇಲೆ ಅಷ್ಟು ಹಾಲು ಬೇಕು. ಜೇನಿನ ರುಚಿ ಕಂಡವರಿಗೆ (ಅದರಲ್ಲೂ ಡಯಾಬಿಟಿಸ್ ಇರುವವರಿಗೆ!) ಇವುಗಳ ಜೊತೆ ಸ್ವಲ್ಪ ಹೆಜ್ಜೇನು. (ಹೆಜ್ಜೇನು ಅಂತ ಈಗ ಸಿಗುವುದಿಲ್ಲ. ಅದು ವಿಶೇಷವಾಗಿ ಮಲೆನಾಡಿನ ದಟ್ಟ ಕಾಡಿನಲ್ಲಿ ಸಂಪಾದಿಸಿ ತಂದಿರುತ್ತಿದ್ದುದು).
ಒಟ್ಟಿನಲ್ಲಿ ಐದು ಬಗೆಯ ತಿನ್ನುವ ರೀತಿ ಆಯಿತು:
- ಕೇವಲ ಕಣಕದ ರೊಟ್ಟಿ. ಇದನ್ನು ತಿಂದದ್ದೇ ಭಾಗ್ಯ. ತಿಂದ ಕೆಲಸವಾಯಿತು. ಹೊಟ್ಟೆ ತುಂಬಿತು. ಮತ್ತೇನೂ ಪ್ರಯೋಜನವಿಲ್ಲ.
- ಕೇವಲ ಹೋಳಿಗೆ ಮಾತ್ರ. ಹೊಟ್ಟೆಯೂ ತುಂಬಿತು. ಸ್ವಲ್ಪ ರುಚಿಯೂ ಸಿಕ್ಕಿತು.
- ಹೋಳಿಗೆಯ ಜೊತೆ ಅಷ್ಟು ತುಪ್ಪ. ಇದರಲ್ಲಿ ವಿಶೇಷ ಅನ್ನಿಸುವ ಹೆಚ್ಚಿನ ಮಟ್ಟದ ಅನುಭವ.
- ಹೋಳಿಗೆಯ ಮೇಲೆ ತುಪ್ಪ. ಅದರ ಮೇಲೆ ಬಿಸಿ ಹಾಲು. ಈಗ ಪೂರ್ಣ ಪ್ರಮಾಣದ ಅಧಿಕ ಎನಿಸುವ ಅನುಭವ ಉಂಟಾಯಿತು.
- ಹೋಳಿಗೆಯ ಮೇಲೆ ತುಪ್ಪ. ಮೇಲೆ ಬಿಸಿ ಹಾಲು. ಒಂದಷ್ಟು ಜೇನು ತುಪ್ಪ. ಏನು ಸಾಧ್ಯವೋ ಎಲ್ಲವೂ ಮೇಳೈಸಿವೆ. ಇದಕ್ಕಿಂತ ಹೆಚ್ಚಿನ ರುಚಿ ಇನ್ನಿಲ್ಲ. ಆಹಾರ, ಪೋಷಕಾಂಶ, ರುಚಿ ಎಲ್ಲವೂ ದೊರಕಿತು.
"ಬಾಹ್ಯಾರ್ಥ - ಅಂತರಾರ್ಥ - ಗೂಡಾರ್ಥ" ಎನ್ನುವ ಶೀರ್ಷಿಕೆಯಡಿ ಹಿಂದೊಂದು ಸಂಚಿಕೆಯಲ್ಲಿ ಬಗೆಬಗೆಯ ಸಾಹಿತ್ಯ ಕೃತಿಗಳನ್ನು ಓದಿದಾಗ ಆಗುವ ಅನುಭವಗಳು ಮತ್ತು ಅರ್ಥ ವಿಶೇಷಗಳ ಬಗ್ಗೆ ಚರ್ಚೆ ಮಾಡಿದ್ದೆವು. (ಮತ್ತೆ ಓದಬೇಕಾಗಿದ್ದರೆ ಇಲ್ಲಿ ಕ್ಲಿಕ್ ಮಾಡಿ). ಆದರಲ್ಲಿ ಹೊರಗಿನ ಅರ್ಥ, ಒಳಗಿನ ಅರ್ಥ ಮತ್ತು ಸಾಮಾನ್ಯವಾಗಿ ತಿಳಿಯಲಾಗದ ವಿಶೇಷಾರ್ಥ (ಗೂಡಾರ್ಥ) ಇವುಗಳ ಬಗ್ಗೆ ಮತ್ತು ಇವುಗಳಲ್ಲಿರುವ ವ್ಯತ್ಯಾಸಗಳ ಬಗ್ಗೆ ನೋಡಿದ್ದೆವು. ಆ ಸಂಬಂಧದ ಎಲ್ಲ ವಿಷಯಗಳನ್ನೂ ಈ ಹೋಳಿಗೆ ತಿನ್ನುವ ವಿಧಾನಕ್ಕೆ ಹೋಲಿಸಬಹುದು:
- ಭಾಷೆ ಬರುತ್ತದೆ ಎಂದು ಸುಮ್ಮನೆ ಓದಿದರೆ ಅದು ಕಣಕದ ರೊಟ್ಟಿ ತಿಂದಂತೆ. ಏನೂ ಅರ್ಥವಾಗಲಿಲ್ಲ.
- ಬಾಹ್ಯಾರ್ಥ ತಿಳಿಯುವಂತೆ ಓದಿದರೆ ಅದು ಕೇವಲ ಹೋಳಿಗೆ ತಿಂದಂತೆ. ಸ್ವಲ್ಪ ಅರ್ಥವಾಯಿತು.
- ಅಂತರಾರ್ಥ ತಿಳಿಯುವಂತೆ ಓದಿದರೆ ಹೋಳಿಗೆಯ ಜೊತೆ ತುಪ್ಪವೂ ಸೇರಿದಂತೆ ಹೆಚ್ಚಿನ ಪ್ರಯೋಜನ ಆಯಿತು.
- ಬಾಹ್ಯಾರ್ಥ, ಅಂತರಾರ್ಥ, ಗುಹ್ಯರ್ಥಗಳು ತಿಳಿದರೆ ಹೋಳಿಗೆ, ತುಪ್ಪ, ಹಾಲು ಸೇರಿದಂತೆ. ಪೂರ್ಣ ಪ್ರಯೋಜನ ಸಿಕ್ಕಿತು.
- ಈ ಮೂರೂ ಅರ್ಥಗಳ ಜೊತೆಗೆ ಅನುಭವದ ಅರ್ಥ ಸೇರಿದರೆ ಹೋಳಿಗೆ, ತುಪ್ಪ, ಹಾಲು ಇವುಗಳ ಜೊತೆ ಹೆಜ್ಜೇನು ಕೂಡಿದಂತೆ. ಅದೊಂದು ಪರಮ ಗತಿಯ ಅನುಭವ ಕೊಡುವ ಪೂರ್ಣ ಅರ್ಥ.
Thursday, March 20, 2025
"ಪ್ರಾಣಾಪಾಯ" ಇಲ್ಲ ತಾನೇ?
ನಮ್ಮ ಪುರಾತನ ವಾಂಗ್ಮಯ ಮತ್ತು ನಂಬಿಕೆಗಳ ಪ್ರಕಾರ ಜೀವಿಯು ತನ್ನ ಜನ್ಮದ ಆಯುಸ್ಸಿನ ಸಮಯ ಕಳೆದ ನಂತರ ಇದ್ದ ದೇಹದಿಂದ ಬಿಡುಗಡೆ ಹೊಂದಿ ಸೂಕ್ಷ್ಮರೂಪದಲ್ಲಿ ವಾತಾವರಣದಲ್ಲಿ ತೇಲುತ್ತಿರುತ್ತಾನೆ. ಮುಂದೆ ಬರುವ ಮಳೆಯ ಹನಿಯಲ್ಲಿ ಬೆರೆತು ಮತ್ತೆ ಭೂಮಿಗೆ ಹಿ೦ದಿರುಗುತ್ತಾನೆ. ಅಲ್ಲಿ ಬೆಳೆವ ಧಾನ್ಯವೋ, ಸೊಪ್ಪು-ಸದೆಯೋ, ಹಣ್ಣು-ಹಂಪಲೋ, ಗೆಡ್ಡೆ-ಗೇಣಸೋ ಸೇರಿ ಅದರ ಮೂಲಕ ಎಲ್ಲಿ ಹುಟ್ಟಬೇಕೋ ಅಲ್ಲಿ ತಲುಪುತ್ತಾನೆ. ಮನುಷ್ಯ ಜನ್ಮ ಬರಬೇಕಾದರೆ ಈ ರೀತಿ ಪದಾರ್ಥದಲ್ಲಿ ಸೇರಿ ತಂದೆಯ ಶರೀರವನ್ನು ಪ್ರವೇಶಿಸುತ್ತಾನೆ. ತಂದೆಯ ಶರೀರದಲ್ಲಿ ಮೂರು ತಿಂಗಳ ಕಾಲ ರೂಪಾಂತರವಾಗಿ ಮುಂದೆ ತಾಯಿಯ ಗರ್ಭವನ್ನು ಹೊಂದುತ್ತಾನೆ. ತಾಯಿಯ ಗರ್ಭದಲ್ಲಿರುವಾಗ ಆಕೆ ಸೇವಿಸಿದ ಆಹಾರ ಪದಾರ್ಥಗಳ ರಸವನ್ನು ಹೊಕ್ಕುಳ ಬಳ್ಳಿಯ ಮೂಲಕ ಸೇವಿಸಿ ಆಕೆಯ ಶ್ವಾಸದ ಗಾಳಿಯನ್ನೇ ಹಂಚಿಕೊಂಡು ಉಸಿರಾಡುತ್ತಾನೆ. ಈಗಿನ ವಿಜ್ಞಾನದ ಫಲವಾದ ಸ್ಕಾನಿಂಗ್ ಚಿತ್ರಗಳಿಂದ ಬೆಳವಣಿಗೆಯ ಹಂತಗಳನ್ನೂ, ಉಸಿರಾಟ ಮತ್ತು ಚಲನೆಯನ್ನೂ ನೋಡಬಹುದು.
ಈ ಹೊಕ್ಕುಳ ಬಳ್ಳಿಯ ನಂಟಿನ ಕಾರಣಕ್ಕೇ ತಾಯಿ-ಮಗುವಿನ ವಿಶೇಷ ಸಂಬಂಧ ಉಂಟಾಗುವುದು. ಈ ರೀತಿಯ ಸಂಬಂಧವನ್ನು ಇನ್ನು ಯಾವುದೇ ರೀತಿಯ ಬಾಂಧವ್ಯದಲ್ಲಿ ಕಾಣಲಾಗದು. ತಂದೆಯಲ್ಲಿಯೂ ಕೂಡ. ಯಾವ ಮನುಷ್ಯನಿಗೇ ಆದರೂ ನೇರವಾಗಿ ದೇಹ ಸಂಬಂಧ ಇರುವುದು ತನ್ನ ತಾಯಿಯ ಜೊತೆಯೇ! ಅದು ಒಂದು ಎರಡಾದಂತೆ. ತಾಯಿ-ಮಕ್ಕಳ ಸಂಬಂಧದ ಬಗ್ಗೆ ಹೆಚ್ಚಿನ ವಿಷಯ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ. ಆದ್ದರಿಂದ ಮೊದಲು "ಮಾತೃದೇವೋ ಭವ". ನಂತರ "ಪಿತೃದೇವೋ ಭವ". ಸನ್ಯಾಸ ಸ್ವೀಕರಿಸಿ ಯಾರಿಗೂ (ತಮ್ಮ ಗುರುಗಳನ್ನು ಬಿಟ್ಟು) ನಮಸ್ಕರಿಸದ ಮಠಾಧಿಪತಿಗಳೂ ತಮ್ಮ ತಾಯಿಗೆ ನಮಸ್ಕರಿಸುವ ಪದ್ಧತಿಯೂ ಇದನ್ನೇ ಸೂಚಿಸುತ್ತದೆ.
ತಾಯಿಯ ಗರ್ಭದಲ್ಲಿ ಒಂಭತ್ತು ತಿಂಗಳು ಕಳೆದ ಬಳಿಕ ಪೂರ್ಣ ಪ್ರಮಾಣದಲ್ಲಿ ಬೆಳೆದು ಶಿಶುವಿನ ರೂಪ ತಳೆದು ಜನಿಸುತ್ತಾನೆ. ತಾಯಿಯಿಂದ ಬೇರ್ಪಟ್ಟ ನಂತರ ಹೊರಗಿನ ವಾತಾವರಣದ ಗಾಳಿಯಿಂದ ಮೊದಲ ಶ್ವಾಸ ತೆಗೆದುಕೊಳ್ಳುತ್ತಾನೆ. ಮಗು ಹುಟ್ಟಿದ ತಕ್ಷಣ ಅಳುವುದೇ ಮೊದಲ ಶ್ವಾಸ ಪ್ರಾಂಭವಾದ ಗುರುತು. ಹುಟ್ಟಿದ ಮಗು ಶ್ವಾಸನಾಳದಲ್ಲಿ ಕಲ್ಮಶಗಳು ತುಂಬಿದ ಕಾರಣ ಅಳದಿದ್ದರೆ, ವೈದ್ಯರು ಅಥವಾ ದಾದಿ ಮಗುವನ್ನು ಕಾಲಲ್ಲಿ ಹಿಡಿದು ತಲೆ ಕೆಳಗೆಮಾಡಿ ಅಲ್ಲಾಡಿಸಿ ಶ್ವಾಸನಾಳ ಕಲ್ಮಶದಿಂದ ಬಿಡುಗಡೆ ಮಾಡಿ ಉಸಿರಾಟ ಶುರುವಾಗಲು ಸಹಾಯಮಾಡುತ್ತಾರೆ.
ಅಂದು ಪ್ರಾರಂಭವಾದ ಉಸಿರಾಟ ಮತ್ತು ಹೃದಯ ಬಡಿತ ಒಂದು ಕ್ಷಣ ನಿಲ್ಲದೆ ಜೀವಿಯು ಬದುಕಿರುವವರೆಗೂ ನಡಿಯುತ್ತಲೇ ಇರುತ್ತದೆ! ವಿರಾಮವಿಲ್ಲದ ಕಮ್ಮಾರನ ತಿದಿಯಂತೆ ಒತ್ತುತ್ತಿರುವ ಎರಡು ಶ್ವಾಸಕೋಶ ಮತ್ತು ನಿಲ್ಲದೆ ಒತ್ತುತ್ತಿರುವ ಪಂಪಿನಂತಹ ಹೃದಯ ಸೃಷ್ಟಿಯ ವಿಸ್ಮಯವೇ ಸರಿ. (ತಿದಿಗೆ ಇಂಗ್ಲೀಷಿನಲ್ಲಿ ರೀಡ್ ಅನ್ನಬಹುದು. ಹಿಂದೆ ಕಂಪನಿ ನಾಟಕಗಳಲ್ಲಿ ಡಬಲ್ ರೀಡ್ ಹಾರ್ಮೋನಿಯಂ ಉಪಯೋಗಿಸುತ್ತಿದ್ದರು. ಅವೂ ತಿದಿಯಂತೆ ಕೆಲಸ ಮಾಡುತ್ತಿದ್ದವು. ವಾದ್ಯಗಾರ ತನ್ನ ಕಾಲುಗಳಿಂದ ಈ ರೀಡುಗಳನ್ನು ಒತ್ತುತ್ತಿದ್ದುದು ಇಂತಹ ಹಾರ್ಮೋನಿಯಂ ವಾದನ ನೋಡಿದ್ದವರು ನೆನಪಿಸಿಕೊಳ್ಳಬಹುದು),
ಹೀಗೆ ಪ್ರಾಂರಂಭವಾದ ಮೊದಲ ಶ್ವಾಸದಿಂದ ಹಿಂದಿನ ಸಂಚಿಕೆಯಲ್ಲಿ ಹೇಳಿದ ಎಪ್ಪತ್ತೇಳು ಕೋಟಿ ಎಪ್ಪತ್ತಾರು ಲಕ್ಷ ಸಂಖ್ಯೆಯ ಲೆಕ್ಕ ಶುರು. ಒಂದು ಓಟದ ಅಥವಾ ಸ್ಲೋ ಸೈಕಲ್ ರೇಸಿನ ಪಂದ್ಯಾಳುಗಳಂತೆ ಎಲ್ಲರೂ ಕಡೆಯ ಗೆರೆಯವರೆಗೆ ಓಡದೇ ಇರಬಹುದು. ಅನೇಕರು ಮುಂಚೆಯೇ ಬೀಳಬಹುದು. ಕೆಲವರು ಐವತ್ತು ವರುಷ ತಲುಪುವುದೂ ಇಲ್ಲ. ನಿಜ ಜೀವನದಲ್ಲಿ ಹಾಗೆಯೇ ಆಗುತ್ತದೆ. ನೂರು ವರುಷ ತಲುಪುವವರು ಐದು ಸಾವಿರದಲ್ಲಿ ಒಬ್ಬರಂತೆ. ಆದ್ದರಿಂದಲೇ ಶತಮಾನ ಶಾಂತಿ ಅನ್ನುವುದು ಬಲು ಅಪರೂಪ. ಸ್ಲೋ ಸೈಕಲ್ ರೇಸ್ ನೋಡಿದವರು ಅದನ್ನು ನೆನೆಸಿಕೊಂಡರೆ ಜೀವನದ ಈ ರೇಸ್ ಸಾಮ್ಯ ಕಾಣುತ್ತದೆ. ಇಲ್ಲಿ ಹೇಳಿರುವುದರಲ್ಲಿ ಏನೂ ವಿಶೇಷವಿಲ್ಲ. ಇವು ಎಲ್ಲರಿಗೂ ಗೊತ್ತಿರುವ ವಿಷಯವೇ ಸರಿ. ಆದರೂ ಇವುಗಳ ಬಗ್ಗೆ ನಾವು ಚಿಂತಿಸುವುದು ಕಮ್ಮಿಯೇ. ಆದ್ದರಿಂದ ಪ್ರಾಸ್ತಾವಿಕವಾಗಿ ಈ ವಿವರಗಳನ್ನು ಕೊಡಬೇಕಾಯಿತು.
*****
Sunday, March 16, 2025
ಜೀವನದ "ಸ್ಲೋ ಸೈಕಲ್ ರೇಸ್"
- ಉಸಿರು ಒಳಗಡೆ ತೆಗೆದುಕೊಳ್ಳಲು ಎರಡು ಸೆಕೆಂಡುಗಳು.
- ಉಸಿರು ಬಿಡಲು ಎರಡು ಸೆಕೆಂಡುಗಳು.
- ಒಂದು ಸಲ ಉಸಿರಾಡಲು (ಒಂದು ಶ್ವಾಸ) ನಾಲ್ಕು (4) ಸೆಕೆಂಡುಗಳು.
- ಅಂದರೆ, ಒಂದು ನಿಮಿಷಕ್ಕೆ (ಅರವತ್ತು ಸೆಕೆಂಡುಗಳು) ಹದಿನೈದು (15) ಶ್ವಾಸಗಳು.
- ಒಂದು ಗಂಟೆಗೆ (60x15) 900 ಶ್ವಾಸಗಳು.
- ಒಂದು ದಿನಕ್ಕೆ (24 ಗಂಟೆಗಳು) (900x24) 21,600 ಶ್ವಾಸಗಳು.
- ಒಂದು ವರುಷಕ್ಕೆ (360 ದಿನ ಸರಾಸರಿ) (21,600 x 360) 77, 76,000 ಶ್ವಾಸಗಳು.
- ನೂರು ವರುಷಕ್ಕೆ (77,76,000 x 100) 77,76,00,000 ಶ್ವಾಸಗಳು!
ಆರು ಮೂರೆರಡೊಂದು ಸಾವಿರಮೂರೆರಡು ಶತ ಶ್ವಾಸಜಪಗಳಮೂರುವಿಧ ಜೀವರೊಳಗಬ್ಜಜಕಲ್ಪ ಪರ್ಯಂತತಾರಚಿಸಿ ಸಾತ್ವರಿಗೆ ಸುಖ ಸಂಸಾರ
ಮಿಶ್ರರಿಗೆ ಅಧಮ ಜನರಿಗಪಾರದುಃಖಗಳೀವ ಗುರು ಪವಮಾನ ಸಲಹೆಮ್ಮ
ಈ ಸೂತ್ರದಲ್ಲಿ ಸ್ವಲ್ಪ ಒಗಟಿದೆ. ಮೊದಲ ಸಾಲಿನಲ್ಲಿ ಆರು ಮೂರು ಎನ್ನುವುದನ್ನು ಗುಣಿಸಬೇಕು. ಆಗ ಹದಿನೆಂಟು ಬರುತ್ತದೆ. ಎರಡೊಂದು ಎನ್ನುವುದನ್ನು ಕೂಡಬೇಕು. ಆಗ ಮೂರು ಸಿಗುತ್ತದೆ. ಹದಿನೆಂಟು + ಮೂರು = ಇಪ್ಪತ್ತೊಂದು ಸಾವಿರ ಆಯಿತು. ಎರಡನೆಯ ಸಾಲಿನ ಮೂರೆರಡು ಅನ್ನುವಲ್ಲಿ ಮೂರನ್ನು ಎರಡರಿಂದ ಗುಣಿಸಬೇಕು. ಆಗ ಆರು ನೂರು ಬಂತು. ಒಟ್ಟು ಇಪ್ಪತ್ತೊಂದು ಸಾವಿರದ ಆರು ನೂರು ಆಯಿತು!
ಈ ಪದ್ಯದಲ್ಲಿ ಇನ್ನೊಂದು ವಿಶೇಷವಿದೆ. ಇದು "ಭಾಮಿನಿ ಷಟ್ಪದಿ" ಪದ್ಯ. ಭಾಮಿನಿ ಷಟ್ಪದಿಯಲ್ಲಿ ಒಟ್ಟು ಆರು ಸಾಲುಗಳು. ಮೊದಲ ಸಾಲಿನಲ್ಲಿ ಏಳು ಮತ್ತು ಏಳು ಒಟ್ಟು ಹದಿನಾಲ್ಕು ಮಾತ್ರೆಗಳು. ಎರಡನೆಯ ಸಾಲಿನಲ್ಲಿಯೂ ಹೀಗೆ ಹದಿನಾಲ್ಕು ಮಾತ್ರೆಗಳು. ಮೂರನೆಯ ಸಾಲಿನಲ್ಲಿ ಏಳು, ಏಳು ಮತ್ತು ಎಂಟು ಮಾತ್ರೆಗಳು. ಅಂದರೆ ಇಪ್ಪತ್ತೆರಡು ಮಾತ್ರೆಗಳು. ಮೂರು ಸಾಲು ಸೇರಿದರೆ ಐವತ್ತು ಮಾತ್ರೆಗಳು. ನಾಲ್ಕು, ಐದು ಮತ್ತು ಆರನೆಯ ಸಾಲಿನಲ್ಲಿ ಹೀಗೆಯೇ ಮತ್ತೆ ಐವತ್ತು ಮಾತ್ರೆಗಳು. ಒಟ್ಟಿನಲ್ಲಿ ಎಲ್ಲ ಸೇರಿ ನೂರು ಮಾತ್ರೆಗಳು! ನೂರು ವರುಷದ ಲೆಕ್ಕಕ್ಕೆ ನೂರು ಮಾತ್ರೆಗಳ ಛಂದಸ್ಸು! ಆದಕಾರಣ ಹೀಗೆ ಗುಣಿಸುವ ಮತ್ತು ಕೂಡುವ ಲೆಕ್ಕದ ಒಗಟಿನ ಸೂತ್ರ ಕೊಟ್ಟಿದ್ದಾರೆ.
ಭಾರತೀಯ ತತ್ವಶಾಸ್ತ್ರದಲ್ಲಿ "ಸಂಖ್ಯಾ ಶಾಸ್ತ್ರ" ಬಹಳ ಮಹತ್ವದ್ದು. ಕೆಲವು ವಿಷಯಗಳು ಸುಲಭವಾಗಿ ಅರ್ಥ ಆಗುವುದಿಲ್ಲ. ಬಹುಶ್ರುತ ವಿದ್ವಾಂಸರಾದ ಕೀರ್ತಿಶೇಷ ಬನ್ನಂಜೆ ಗೋವಿಂದಾಚಾರ್ಯರು ಇಂತಹ ವಿಷಯಗಳನ್ನು ವಿವರಿಸುವುದರಲ್ಲಿ ಎತ್ತಿದ ಕೈ ಆಗಿದ್ದರು. ಅವರನ್ನು ಇಂತಹ ಸಂದರ್ಭಗಳಲ್ಲಿ ಖಂಡಿತ ನೆನೆಯಬೇಕು.
*****
ಮನುಷ್ಯನು ದೇಹದ ಒಳಗಿನ ಲೆಕ್ಕದಲ್ಲಿ ಒಟ್ಟು 77,76,00,000 ಬಾರಿ ಉಸಿರಾಡಿದರೆ ನೂರು ವರುಷ ಆಗುತ್ತದೆ. ಪ್ರಾಣಾಯಾಮಾದಿಗಳನ್ನು ಅಭ್ಯಾಸ ಮಾಡಿ ಶ್ವಾಸದ ಮೇಲೆ ಹಿಡಿತ ಸಾಧಿಸಿದರೆ, ಉಸಿರು ಬಿಗಿ ಹಿಡಿದು ಎಂಟು ಸೆಕೆಂಡಿಗೆ ಒಂದರಂತೆ ಉಸಿರಾಡಿದರೆ ಹೊರಗಿನ ಕಾಲ ಎರಡು ನೂರು ವರುಷ ಬದುಕಬಹುದು! ಸ್ಲೋ ಸೈಕಲ್ ರೇಸಿನಂತೆ. ಅದೇ ರೀತಿ ಆರು ಸೆಕೆಂಡಿಗೆ ಒಮ್ಮೆ ಉಸಿರಾಡಿದರೆ ನೂರೈವತ್ತು ವರ್ಷ. ಮೂರು ಸೆಕೆಂಡಿಗೊಮ್ಮೆ ಆದರೆ, ಏದುಸಿರು ಬಿಟ್ಟರೆ ಎಪ್ಪತ್ತೈದೇ ವರ್ಷ. ಹೀಗೆಯೇ ಲೆಕ್ಕ.
ಮೇಲಿನ ಪದ್ಯದಲ್ಲಿ ಶ್ವಾಸಜಪದ ಬಗ್ಗೆ ಹೇಳಿದ್ದಾರೆ. ಮೂರುವಿಧ ಜೀವರು ಎಂದಿದ್ದಾರೆ.
ಇವುಗಳ ಬಗ್ಗೆ ಮುಂದಿನ ಸಂಚಿಕೆಯಲ್ಲಿ ವಿವರವಾಗಿ ನೋಡೋಣ.