Showing posts with label srihari. Show all posts
Showing posts with label srihari. Show all posts

Thursday, January 1, 2026

ಹದಿನಾರು ಮತ್ತು ಇಪ್ಪತ್ತೊಂದು


ಅದೊಂದು ಬಲು ಸುಂದರವಾದ ಮಗು. ಆಗ ತಾನೇ ಹುಟ್ಟಿದ ಕೂಸು. ಅರಳಿದ ಕಮಲದಲ್ಲಿ ಮಲಗಿದ್ದ ಶಿಶು. ಸ್ವಲ್ಪ ವಿಚಿತ್ರವಾದ ಹಸುಳೆ. ಎಲ್ಲಾ ಸರಿ ಇದ್ದರೂ ತಲೆಗಳು ಮಾತ್ರ ನಾಲ್ಕು! ಅದಕ್ಕೆ ಸರಿಯಾಗಿ ನಾಲ್ಕು ಕೈಗಳು. ಅತಿ ಮೋಹಕವಾದ ಶರೀರ. ಎದ್ದ ಮಗು ತಕ್ಷಣ ಕಣ್ಣು ಬಿಟ್ಟಿತು. ತನ್ನ ಸುತ್ತ-ಮುತ್ತ ನೋಡಿತು. 

ಎಲ್ಲ ಕಡೆ ಆವರಿಸಿರುವ ಕತ್ತಲು. ಯಾರೂ ಬೇರೆಯವರು ಕಾಣರು. ತಾನು ಯಾರು? ತನಗೆ ಜನ್ಮ ಕೊಟ್ಟವರು ಯಾರು? ಎಲ್ಲಿಂದ ಬಂದೆ? ಯಾವುದೂ ತಿಳಿಯದು. ಇದೇನು ವಿಚಿತ್ರ?

ಸುಮ್ಮನೆ ಇರುವಂತಹ ಮಗುವಲ್ಲ ಅದು. ತನಗೆ ಆಸರೆಯಾಗಿ, ಹಾಸಿಗೆಯಾಗಿ ಹರಡಿದ್ದ ಕಮಲವನ್ನು ಗಮನಿಸಿತು. ಅದರ ಕೆಳಗಿದ್ದ ದೊಡ್ಡ ಕಾಂಡವನ್ನು ಕಂಡಿತು. ಕಮಲದ ದೇಟಿನೊಳಗೆ ಇಳಿಯಿತು. ಇಳಿದು ಎಲ್ಲೆಡೆ ಹುಡುಕಿತು. ಅಲ್ಲಿ ಎಷ್ಟು ಹುಡುಕಿದರೂ ಯಾರೂ ಕಾಣಲಿಲ್ಲ. 

ಕಾಂಡದ ಆಳದಿಂದ ಹೊರಗೆ ಬಂದು ಅದೇ ಕಮಲದಲ್ಲಿ ಪದ್ಮಾಸನ ಹಾಕಿ ಕೂತಿತು. ಅದಕ್ಕೇನು ಭಯವಿರಲಿಲ್ಲ. ಆದರೂ ಮುಂದೆ ಏನು ಮಾಡಬೇಕೆಂಬ ಸಮಸ್ಯೆ ಎದುರಿಗೆ ಇತ್ತು. ತನಗೆ ಜನ್ಮದಾತರು ಯಾರು? ಮುಂದೆ ತನ್ನ ಕೆಲಸವೇನು? ಈ ಪ್ರಶ್ನೆಗಳಿಗೆ ಉತ್ತರ ಹುಡುಕಲು ತೊಡಗಿತು. 

*****

ಹೀಗೆ ಕುಳಿತ ಮಗುವಿಗೆ ವಿಶಾಲ ಆಕಾಶದಲ್ಲಿ ಶಬ್ದದ ಅನುಭವ ಆಯಿತು. ಮಗು ಆ ಶಬ್ದವನ್ನು ಗಮನವಿಟ್ಟು ಕೇಳಿತು. ಅದು ವಿಶ್ವದ ಮೊದಲ "ಆಕಾಶವಾಣಿ". ಶರೀರವಿಲ್ಲದ, ಆದರೆ ಚೆನ್ನಾಗಿ ಕೇಳಿಸಿದ ಧ್ವನಿ. ಅದೊಂದು "ಅಶರೀರವಾಣಿ". ಎರಡೇ ಎರಡು ಶಬ್ದಗಳು. ನಂತರ ಮತ್ತೇನಿಲ್ಲ. ಅಷ್ಟೇ.

"ಹದಿನಾರು. ಇಪ್ಪತ್ತೊಂದು."

ಹದಿನಾರು ಅನ್ನುವ ಒಂದು ಶಬ್ದ. ಇಪ್ಪತ್ತೊಂದು ಅನ್ನುವ ಇನ್ನೊಂದು ಶಬ್ದ. ಈ ಶಬ್ದಗಳ ಹಿಂದೆ ಮೌನ. ಈ ಎರಡು ಶಬ್ದಗಳ ನಂತರ ಮತ್ತೆ ಅದೇ ಮೌನದ ತಾಂಡವ. 

ಮಗು ಈ ಎರಡು ಶಬ್ದಗಳಿಗೆ ಅರ್ಥ ಹುಡುಕಿತು. ಆಗ ಅದಕ್ಕೆ ಹೊಳೆಯಿತು. ಈ ಎರಡು ಶಬ್ದಗಳು ಎರಡು ಸಂಖ್ಯೆಯನ್ನು ಹೇಳುತ್ತಿವೆ. ಈ ಸಂಖ್ಯೆಗಳ ಅರ್ಥವೇನು?  

ಒಹೋ! ಇವು ವರ್ಣಮಾಲೆಯ ಅಕ್ಷರಗಳು!

ಯಾವ ಅಕ್ಷರಗಳು? ಮೊದಲನೆಯದು ಹದಿನಾರು ಎಂದು. ಎರಡನೆಯದು ಇಪ್ಪತ್ತೊಂದು ಎಂದು. ಅಷ್ಟು ಸಂಖ್ಯೆಯ ಸ್ವರ ಅಕ್ಷರಗಳಿಲ್ಲ. ಆದ್ದರಿಂದ ಅವು ವ್ಯಂಜನಾಕ್ಷರಗಳು. 

*****

ಹದಿನಾರು. ಕ-ವರ್ಗದ ಐದು ಅಕ್ಷರಗಳು. ಚ-ವರ್ಗದ ಐದು ಅಕ್ಷರಗಳು ಟ-ವರ್ಗದ ಐದು ಅಕ್ಷರಗಳು. ಅಲ್ಲಿಗೆ ಹದಿನೈದಾಯಿತು. ತ-ವರ್ಗದ "ತ" ಅನ್ನುವುದು ಹದಿನಾರನೆಯ ಅಕ್ಷರ. 

ಮುಂದೆ ಪ-ವರ್ಗದ ಮೊದಲನೆಯ ಅಕ್ಷರ "ಪ" ಅನ್ನುವುದು ಇಪ್ಪತ್ತೊಂದನೆಯ ಅಕ್ಷರ!

ಎರಡನ್ನೂ ಕೂಡಿಸಿದರೆ "ತಪ' ಎಂದಾಯಿತು. "ತಪ" ಅಂದರೆ ಏನು? "ತಪ್ ತಪನೇ" ಎಂದು. ತಪ ಅನ್ನುವುದರ ಅರ್ಥ "ಆಲೋಚಿಸು" ಎಂದು. ಯಾವುದನ್ನಾದರೂ ಕುರಿತು ಒಂದೇ ಮನಸ್ಸಿನಿಂದ ಯೋಚಿಸುವುದನ್ನೇ ತಪಸ್ಸು ಎನ್ನುವುದು. 

ಹೀಗೆ ಯೋಚಿಸಿದಾಗ ಮಗುವಿಗೆ ಆಕಾಶವಾಣಿಯ ಎರಡು ಶಬ್ದಗಳ ಸೂಚನೆಯ ಅರ್ಥವಾಯಿತು. ಜನನಕ್ಕೆ ಕಾರಣವಾಗಿ ಹುಟ್ಟಿಸಿ ತಂದವನು "ತಂದೆ". ತನ್ನ ಜನನಕ್ಕೆ ಕಾರಣನಾದ ತಂದೆಯನ್ನು ಕುರಿತು ತಪಸ್ಸು ಮಾಡಲು ಪ್ರಾರಂಭಿಸಿತು. 
******

ಅದೇನು ಸಾಧಾರಣವಾದ ತಪಸ್ಸಲ್ಲ. ಒಂದೆರಡು ದಿನ, ವಾರ, ತಿಂಗಳುಗಳ ತಪಸ್ಸಲ್ಲ. ಒಂದೆರಡು ವರುಷಗಳ ತಪಸ್ಸೂ ಅಲ್ಲ. ಒಂದು ನೂರು ವರುಷಗಳ ತಪಸ್ಸು. ನಮ್ಮ ವರುಷದಂತೆ ಮನುಷ್ಯಮಾನದ ವರುಷವಲ್ಲ. ಬ್ರಹ್ಮದೇವರ ವಯೋಮಾನದ ಲೆಕ್ಕದ ಒಂದು ನೂರು ವರ್ಷ!

ಒಂದು ನೂರು ವರುಷದ ತಪಸ್ಸಿನ ನಂತರ ಕೂಸಿನ ತಂದೆ ಕಾಣಿಸಿಕೊಂಡ. ಅವನು ನೀರಿನ ಮೇಲೆ ಮಲಗಿದವನು."ನಾರಾ" ಅಂದರೆ ನೀರು. ಆದ್ದರಿಂದ ಅವನು "ನಾರಾಯಣ".  

ಅವನು ಮಲಗಿರುವುದು ಹಾಲಿನ ಕಡಲ ಮೇಲಲ್ಲವೇ? ಹೌದು. ಆದರೆ ಹಾಲೂ ನೀರಿನಂತೆ. ದ್ರವ ರೂಪ. ಮೇಲಾಗಿ ಇದು ನಡೆದಾಗ ಅವನು "ಪ್ರಳಯಜಲ" ಅಂದರೆ ಎಲ್ಲೆಲ್ಲೂ ಆವರಿಸಿದ್ದ ನೀರಿನ ಮೇಲೆ ಮಲಗಿದ್ದವನು. ಯಾರಾದರೂ ಒಂದು ದ್ರವದ ಮೇಲೆ ಮಲಗಲು ಸಾಧ್ಯವೇ? ಅವನಿಗೆ ಸಾಧ್ಯ. 

ಹೀಗೆ ಕಾಣಿಸಿಕೊಂಡ ತಂದೆ ನಾರಾಯಣ ಮಗ ಬ್ರಹ್ಮನಿಗೆ ನಾಲ್ಕು ಶ್ಲೋಕಗಳ ಸಂಕ್ಷಿಪ್ತವಾದ ಉಪದೇಶ ಮಾಡಿದ. ಇದೇ ಪ್ರಪಂಚದ ಮೊದಲ ಪಾಠ. ಮೊಟ್ಟ ಮೊದಲ ಶಿಕ್ಷಣ. ಅದನ್ನೇ "ಚತುಶ್ಲೋಕೀ ಭಾಗವತ" ಅನ್ನುತ್ತಾರೆ. ಈ ನಾಲ್ಕು ಶ್ಲೋಕಗಳಲ್ಲಿ ಇಡೀ ಸೃಷ್ಟಿಯ ರಹಸ್ಯವನ್ನು ಕಮಲನಾಭ ನಾರಾಯಣನು ಕಮಲಸಂಭವ ಬ್ರಹ್ಮನಿಗೆ ತಿಳಿಸಿ ಹೇಳಿದ. 

***** 

"ಪ್ರಜ್ಞೆ" ಮತ್ತು "ಪ್ರತಿಭೆ" ಅನ್ನುವ ಪದಗಳಿಗೆ ಈಗಿನ ವಾಡಿಕೆಯಲ್ಲಿ ಅನೇಕ ರೀತಿಯ ಅರ್ಥಗಳನ್ನು ಆರೋಪಿಸುತ್ತಾರೆ (ಕೊಡುತ್ತಾರೆ). 

ಒಂದು ವಿಷಯವನ್ನು ಹೇಳಿದರೆ ಅದಕ್ಕೆ ಸಂಬಂಧಿಸಿದ ಎಲ್ಲ ಬೇರೆ ಬೇರೆ ವಿಷಯಗಳನ್ನು ಒಟ್ಟಿಗೆ ತಿಳಿಯುವ ಶಕ್ತಿಗೆ "ಪ್ರಜ್ಞೆ" ಎಂದು ಹೆಸರು. ("ನಿನಗೆ ಮೈಮೇಲೆ ಪ್ರಜ್ಞೆ ಇಲ್ಲವೇ?" ಎಂದು ಕೆಲವೊಮ್ಮೆ ಹೇಳುವುದುಂಟು. ಹೀಗೆ ಹೇಳಿದರೆ "ನಿನಗೆ ಸಮಯ-ಸಂದರ್ಭಗಳ ಹಿನ್ನೆಲೆಯಲ್ಲಿ ತಿಳಿಯುವ ಶಕ್ತಿ ಇಲ್ಲವೇ?" ಎಂದು ತಾನೇ ಕೇಳುವುದು? "ಮೈಮೇಲೆ ಎಚ್ಚರ ಇಲ್ಲವೇ?" ಅನ್ನುವುದು ಅದರ ಅರ್ಥವಲ್ಲ).

ಇದೇ ರೀತಿ ಸ್ವಲ್ಪ ವಿಷಯವನ್ನು ಹೇಳಿದರೆ ಊಹಾಪೋಹ ಮಾಡಿ ಅದನ್ನು ವಿಸ್ತರಿಸಿ ವಿಶಾಲವಾಗಿ ತಿಳಿದುಕೊಳ್ಳುವುದಕ್ಕೆ "ಪ್ರತಿಭೆ" ಎಂದು ಹೆಸರು. 

ಪ್ರಜ್ಞಾ ಮತ್ತು ಪ್ರತಿಭೆ ಇರುವವರಿಗೆ ಸ್ವಲ್ಪ ಸುಳಿವು ಕೊಟ್ಟರೆ ಸಾಕು. ಒಂದು ಸಣ್ಣ ಬೀಜ ಮುಂದೆ ಅರಳಿ ಒಂದು ದೊಡ್ಡ ಮರ ಆಗುವಂತೆ ಸೂಕ್ಶ್ಮವಾಗಿ ಹೇಳಿದ ವಿಷಯ ಅವರ ತಲೆಯಲ್ಲಿ ಅರಳಿ ಪೂರ್ತಿ ಅರಿವು ತುಂಬಿಕೊಳ್ಳುತ್ತದೆ. ಇದನ್ನೇ "ಉಗುರು ತೋರಿಸಿದರೆ ಹಸ್ತ ನುಂಗುವುದು" ಎಂದು ಹೇಳುವುದು.

ಬ್ರಹ್ಮದೇವರಿಗಿಂತ ಹೆಚ್ಚಿನ ಪ್ರಜ್ಞೆ ಮತ್ತು ಪ್ರತಿಭೆ ಈ ಜಗತ್ತಿನಲ್ಲಿ ಯಾರಿಗುಂಟು? 

***** 

ತಂದೆ ನಾರಾಯಣ ಹೇಳಿದ ಪಾಠದಿಂದ ಮುಂದಿನ ದಾರಿ ತಿಳಿದ ಚತುರ್ಮುಖ ಬ್ರಹ್ಮದೇವರು ಸೃಷ್ಟಿ ಕಾರ್ಯವನ್ನು ಪ್ರಾರಂಭಿಸಿದರು. ತನ್ನ ಮಾನಸ ಪುತ್ರರಾದ ನಾರದರಿಗೆ ಮುಂದೊಮ್ಮೆ ತಾವು ತಂದೆಯಿಂದ ಕೇಳಿದ ಭಾಗವತವನ್ನು ಉಪದೇಶಿಸಿದರು. ಕಾಲಾನಂತರ ಪರಾಶರ-ಸತ್ಯವತಿಯರ ಮಗನಾದ, ಶ್ರೀಹರಿಯ ಇನ್ನೊಂದು ರೂಪನಾದ ವೇದವ್ಯಾಸ ಮಹರ್ಷಿಯು ನಾರದರಿಂದ ಇದನ್ನು ಪಡೆದರು. ಅದನ್ನು ವಿಶಾಲವಾದ, ಹದಿನೆಂಟನೆಯ ಪುರಾಣವಾದ, ಹದಿನೆಂಟು ಸಾವಿರ ಶ್ಲೋಕದ "ಭಾಗವತ ಪುರಾಣ" ಮಾಡಿ ವಿವರಿಸಿದರು. 

ವೇದವ್ಯಾಸರು ಈ ಭಾಗವತ ಮಹಾಪುರಾಣವನ್ನು ತಮ್ಮ ಮಗನಾದ ಶುಕ ಮಹರ್ಷಿಗೆ ಕೊಟ್ಟರು. ಪರೀಕ್ಷಿತ್ ಮಹಾರಾಜನು ಶುಕಮುಖವಾಗಿ ಇದನ್ನು ಕೇಳಿದನು. ನಂತರ ಅದು ಎಲ್ಲೆಡೆ ಹರಡಿತು. 

*****

ಚತುರ್ಮುಖ ಬ್ರಹ್ಮರ ಮತ್ತೊಬ್ಬ ಮಗನಾದ ಕರ್ದಮ ಪ್ರಜಾಪತಿ ತನಗೆ ಬಂದ ಸೂಚನೆಯಂತೆ ಸ್ವಾಯಂಭುವ ಮನು ಮತ್ತು ಶತರೂಪಾ ದೇವಿಯರ ಮಗಳಾದ ದೇವಹೂತಿ ದೇವಿಯನ್ನು ವಿವಾಹವಾದರು. ಕರ್ದಮರ ತಪಸ್ಸಿಗೆ ಮೆಚ್ಚಿ ಅವರ ಮಗನಾಗಿ ಹುಟ್ಟುತ್ತೇನೆ ಎಂದು ಮಾತು ಕೊಟ್ಟಿದ್ದ ಮಹಾವಿಷ್ಣುವು ಕರ್ದಮ-ದೇವಹೂತಿಯರ ಮಗನಾಗಿ "ಕಪಿಲ ಋಷಿ" ಎಂದು ಅವತರಿಸಿದನು. ಕರ್ದಮರು ವಾನಪ್ರಸ್ಥರಾದ ಸಮಯದಲ್ಲಿ ದೇವಹೂತಿಯ ಮುಂದಿನ ರಕ್ಷಣೆಯ ಹೊಣೆ ಕಪಿಲರಿಗೆ ಒಪ್ಪಿಸಿದರು. 

ಸ್ವಲ್ಪ ಕಾಲಾನಂತರ ದೇವಹೂತಿಯು ಮಗನಾದ ಕಪಿಲನ ಬಳಿಗೆ ಬಂದು ತನಗೆ ಉಪದೇಶ ಮಾಡುವಂತೆ ಕೇಳಿದಳು. 

"ಕಪಿಲ, ನನಗೆ ಇನ್ನು ಬದುಕಿದ್ದು ಸಾಕಾಯಿತು. ನನಗೆ ಉಪದೇಶ ಮಾಡಿ ಮೋಕ್ಷ ಮಾರ್ಗವನ್ನು ಸೂಚಿಸು"

"ಅಮ್ಮಾ, ನೀನು ನನ್ನ ಹೆತ್ತ ತಾಯಿ. ತಾಯಿತನ ಬಹಳ ದೊಡ್ಡದು. ನಾನು ನಿನಗೆ ನಮಸ್ಕರಿಸಬೇಕೇ ಹೊರತು ನೀನು ನನಗೆ ನಮಸ್ಕಾರ ಮಾಡುವಂತಿಲ್ಲ. ಸನ್ಯಾಸಿಗಳಾದವರೂ ಸಹ ತಾಯಿಗೆ ನಮಸ್ಕರಿಸುತ್ತಾರೆ. ಗುರುವಿಗೆ ನಮಸ್ಕರಿಸದಿರುವವರಿಗೆ ಉಪದೇಶ ಮಾಡುವಂತಿಲ್ಲ. ಆದ್ದರಿಂದ ನಾನು ನಿನಗೆ ಉಪದೇಶ ಮಾಡಲಾಗದು"

"ಕಪಿಲ, ನೀನು ನಿಮಿತ್ತಕ್ಕೆ ನನ್ನ ಮಗನಾದರೂ ನೀನು ಶ್ರೀಹರಿ ಎಂದು ನಾನು ಬಲ್ಲೆ. ಆ ಕಾರಣದಿಂದ ನಾನು ನಮಸ್ಕರಿಸಬಹುದು. ನೀನು ಉಪದೇಶ ಮಾಡಬಹುದು"

"ನಾನು ಶ್ರೀಹರಿ ಎನ್ನುವ ಜ್ಞಾನ ನಿನಗೆ ಬಂದಿದೆ ಅಂದರೆ ಮತ್ತೆ ಯಾವ ಉಪದೇಶವೂ ಬೇಕಾಗಿಲ್ಲವಲ್ಲ!"

"ಅದೇನೇ ಇರಲಿ. ನಿನ್ನಿಂದ ವಿವರವಾಗಿ ಉಪದೇಶ ಪಡೆಯಬೇಕೆಂದು ನನಗೆ ಆಸೆ. ಈ ಆಸೆಯನ್ನು ಪೂರ್ಣ ಮಾಡು" 

ಮುಂದೆ ಮಾತಿಲ್ಲ. ತಾಯಿಯ ಆಸೆ ಪೂರ್ತಿ ಮಾಡಲು ಕಪಿಲ ಮುನಿಯು ದೇವಹೂತಿ ದೇವಿಗೆ ವಿವರವಾಗಿ ಮುಕ್ತಿ ಮಾರ್ಗವನ್ನು ಉಪದೇಶಿಸಿದನು. ಇದು ಭಾಗವತದ ಮೂರನೆಯ ಸ್ಕಂಧದಲ್ಲಿ "ಕಪಿಲ ಗೀತೆ" ಎಂದು ಪ್ರಸಿದ್ಧವಾಗಿದೆ. 

ಕರ್ದಮ-ದೇವಹೂತಿ-ಕಪಿಲ ಮುನಿ ಇವರ ಬಗ್ಗೆ ಹೆಚ್ಚಿನ ವಿವರ ಇರುವ ಇಂಗ್ಲಿಷ್ ಬ್ಲಾಗ್ ಇಲ್ಲಿ ಕ್ಲಿಕ್ ಮಾಡಿ ಓದಬಹುದು.  
*****

ಭಾರತೀಯ ತತ್ವ್ವಶಾಸ್ತ್ರದಲ್ಲಿ ಸಂಖ್ಯೆಗಳಿಗೆ ಬಹಳ ಮಹತ್ವ ಇದೆ. ಅನೇಕ ಗಹನ ವಿಷಯಗಳನ್ನು ಅರಿಯಲು ಅಂಕಿ-ಸಂಖ್ಯೆಗಳ ತಿಳುವಳಿಕೆ ಬಹಳ ಅವಶ್ಯಕ. ಇದೇ ಕಪಿಲ ಮಹರ್ಷಿ ಮುಂದೆ ಮೊದಲು ಸೂಚಿಸಿದ "ಹದಿನಾರು-ಇಪ್ಪತ್ತೊಂದು" ಸೂತ್ರವನ್ನು ಹಿಗ್ಗಿಸಿ "ಸಂಖ್ಯಾಶಾಸ್ತ್ರ" ರಚಿಸಿದ ಮೂಲ ಪುರುಷರು ಎಂದು ನಂಬಿಕೆ. ವೈದಿಕ ವಾಂಗ್ಮಯ ತಿಳಿಯುವ ಪ್ರಯತ್ನ ಮಾಡುವವರಿಗೆ ಇದರ ಅಭ್ಯಾಸ ಬೇಕು. 

ಹದಿನಾರು-ಇಪ್ಪತ್ತೊಂದು ಎಂದು ಆಕಾಶವಾಣಿಯಲ್ಲಿ ಕೇಳಿಬಂದ ಎರಡು ಶಬ್ದಗಳು ಕಡೆಗೆ ಹೀಗೆ "ಸಂಖ್ಯಾಶಾಸ್ತ್ರ" ಆಗಿ ರೂಪುಗೊಂಡಿತು!

Friday, November 28, 2025

ಸಹೋದರಿ, ತಳೋದರಿ ಮತ್ತು ಮಂಡೋದರಿ


ಕಳೆದ ತಿಂಗಳ ಒಂದು ಸಂಚಿಕೆಯಲ್ಲಿ (ಅಕ್ಟೋಬರ್ 2025) ಸಹೋದರರು ಮತ್ತು ಅಣ್ಣ-ತಮ್ಮಂದಿರ ನಡುವಿನ ವ್ಯತ್ಯಾಸದ ಪ್ರಸ್ತಾಪ ಬಂದಿತ್ತು. ಒಂದು ತಾಯಿಯ ಮಕ್ಕಳು ಸಹೋದರರು ಎಂದು ನಿರ್ದೇಶಿಸುವಾಗ, ಚಕ್ರವರ್ತಿ ಯಯಾತಿಯ ಮಗಳು ಮಾಧವಿಯ ನಾಲ್ವರು ಮಕ್ಕಳಾದ ಪ್ರದರ್ತನ, ವಸುಮನ, ಶಿಬಿ ಮತ್ತು ಅಷ್ಟಕ ಇವರು ನಾಲ್ಕು ಬೇರೆ ಬೇರೆ ತಂದೆಯರ ಮಕ್ಕಳಾದರೂ ಒಂದೇ ತಾಯಿ ಮಾಧವಿಯ ಮಕ್ಕಳಾದುದರಿಂದ ಸಹೋದರರು ಎಂದು ಹೇಳಿತ್ತು. "ನಾಲ್ಕು ಮಾತುಗಳು" ಎಂಬ ಶೀರ್ಷಿಕೆಯ ಈ ಸಂಚಿಕೆಯನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು.

ಇದನ್ನು ಓದಿದ ಸ್ನೇಹಿತರೊಬ್ಬರು "ಸಹೋದರಿ" ಶಬ್ದಕ್ಕೂ "ತಳೋದರಿ" ಶಬ್ದಕ್ಕೂ ಏನಾದರೂ ಸಂಬಂಧವಿದೆಯೇ?" ಎಂದು ಕೇಳಿದ್ದಾರೆ. ಹಾಗೆಯೇ, "ರಾವಣನ ಹೆಂಡತಿ ಮಂಡೋದರಿ. ಈ "ಮಂಡೋದರಿ" ಅನ್ನುವುದಕ್ಕೂ ಸಹೋದರಿ ಮತ್ತು ತಳೋದರಿ ಅನ್ನುವುದಕ್ಕೂ ಸಂಬಂಧ ಏನು?" ಎಂದು ಕೇಳಿದ್ದಾರೆ. ಇವುಗಳ ಬಗ್ಗೆ ಸ್ವಲ್ಪ ಈಗ ನೋಡೋಣ. 

*****

ಒಂದು ತಾಯಿಯ ಹೊಟ್ಟೆಯಲ್ಲಿ (ಅಂದರೆ ಗರ್ಭದಲ್ಲಿ) ಹುಟ್ಟಿದ ಗಂಡು ಮಕ್ಕಳು ಪರಸ್ಪರ ಸಹೋದರರು. ಹೆಣ್ಣು ಮಕ್ಕಳು ಸಹೋದರಿಯರು. ಗಂಡು ಮಕ್ಕಳು ಮತ್ತು ಹೆಣ್ಣು ಮಕ್ಕಳು ಒಟ್ಟಿಗೆ ಸೇರಿ ಪರಸ್ಪರ ಸಹೋದರ-ಸಹೋದರಿಯರು. ಒಂದು ತಂದೆಯ ಮಕ್ಕಳು ಅಣ್ಣ-ತಮ್ಮಂದಿರು ಮತ್ತು ಅಕ್ಕ-ತಂಗಿಯರು. ಯದುವಂಶದ ಬಲರಾಮ ರೋಹಿಣಿಯ ಮಗ. ಶ್ರೀಕೃಷ್ಣ ದೇವಕಿಯ ಮಗ. ಸುಭದ್ರೆ ರೋಹಿಣಿಯ ಮಗಳು. ಮೂವರೂ ವಸುದೇವನ ಮಕ್ಕಳು. ಹೀಗಾಗಿ, ಬಲರಾಮ ಮತ್ತು ಸುಭದ್ರೆ ಸಹೋದರ-ಸಹೋದರಿಯರು. ಬಲರಾಮ-ಶ್ರೀಕೃಷ್ಣ ಅಣ್ಣ-ತಮ್ಮ. ಸುಭದ್ರೆ ಬಲರಾಮನ ಸಹೋದರಿ. ಶ್ರೀಕೃಷ್ಣನ ತಂಗಿ.  

ದೇವಕಿಯನ್ನು ಮದುವೆಯಾದ ತಕ್ಷಣ ವಸುದೇವ ಸೆರೆಮನೆಯನ್ನು ಸೇರಿದ. ಆಮೇಲೆ ಕಂಸನ ಸರ್ಪಗಾವಲು. ನಂತರ ದೇವಕಿಯ ಎಂಟು ಮಕ್ಕಳು ಹುಟ್ಟುವವರೆಗೂ ಅಲ್ಲಿಯೇ ಇದ್ದ. ಅಷ್ಟು ಮಾತ್ರವಲ್ಲ. ಶ್ರೀಕೃಷ್ಣ ಗೋಕುಲದಲ್ಲಿ ಎಂಟು ವರುಷದವರೆಗೆ ಬೆಳೆದು, ಮಥುರೆಗೆ ಬಂದು ಕಂಸನನ್ನು ಕೊಲ್ಲುವವರೆಗೂ ಅಲ್ಲಿಯೇ ಇದ್ದ. ಕಂಸನ ಆಡಳಿತದಲ್ಲಿ ಈಗಿನಂತೆ ಖೈದಿಗಳನ್ನು ಪೆರೋಲ್ ಮೇಲೆ ಬಿಡುಗಡೆ ಮಾಡುವ ವ್ಯವಸ್ಥೆಯೂ ಇರಲಿಲ್ಲ. ಸುಭದ್ರೆ ಕಂಸನ ವಧೆಯಾಗಿ ವಸುದೇವನ ಬಿಡುಗಡೆಯಾದ ನಂತರ ಹುಟ್ಟಿದವಳಿರಬೇಕು. ಕೃಷ್ಣನಿಗಿಂತ ಸುಮಾರು ಹತ್ತು ವರುಷ ಚಿಕ್ಕವಳು. ಪುಟ್ಟ ತಂಗಿಯಾದ್ದರಿಂದ ಕೃಷ್ಣನಿಗೆ ಅವಳ ಮೇಲೆ ತುಂಬಾ ವಾತ್ಸಲ್ಯ. 

ವಸುದೇವನಿಗೆ ರೋಹಿಣಿ ಮತ್ತು ದೇವಕಿ ಅಲ್ಲದೆ ಬೇರೆ ಹೆಂಡತಿಯರೂ ಇದ್ದರು. ಸುತನು, ವೈಶಾಖಿ, ಭದ್ರುವ, ಮದಿರ, ಉಪಾದೇವಿ ಮೊದಲಾದವರು. ಬಲರಾಮ, ಕೃಷ್ಣ ಮತ್ತು ಸುಭದ್ರೆ ಅಲ್ಲದೆ ಬೇರೆ ಮಕ್ಕಳೂ ಇದ್ದರು. ಪೌಂಡ್ರಕ ವಾಸುದೇವ (ವಸುದೇವ-ಸುತನು ಇವರ ಮಗ), ಶಥ, ಶರಣ, ನಂದಕ, ಅವಗಾಹ ಮೊದಲಾದವರು. ಇವರೆಲ್ಲರೂ ಅಣ್ಣ-ತಮ್ಮ-ತಂಗಿಯರು. ರೋಹಿಣಿಯನ್ನೇನೋ ಮೊದಲೇ ವಿವಾಹವಾಗಿದ್ದ. ಮಿಕ್ಕ ಐವರನ್ನು ಯಾವಾಗ ಮದುವೆಯಾದ ಎಂದು ಖಚಿತವಾಗಿ ಗೊತ್ತಾಗುವುದಿಲ್ಲ. 

ವಸುದೇವನಿಗೆ ಐವರು ತಂಗಿಯರು ಬೇರೆ ಇದ್ದರು. ಪೃಥಾ (ಮುಂದೆ ಕುಂತಿಭೋಜನ ದತ್ತು ಮಗಳಾದ ನಂತರ ಕುಂತಿ ಎಂದು ಪ್ರಸಿದ್ಧಳಾದಳು), ಶ್ರುತಕೀರ್ತಿ, ಶ್ರುತದೇವಿ, ರಾಜಾಧಿದೇವಿ, ಮತ್ತು ಶ್ರುತಶ್ರವಸ್ ತಂಗಿಯರು. ದೇವಶ್ರವ ಮತ್ತು ದೇವಭಾಗ ಎಂದು ಇಬ್ಬರು ತಮ್ಮಂದಿರು. ಶಿಶುಪಾಲ ಮತ್ತು ದಂತವಕ್ತ್ರರು ಕ್ರಮವಾಗಿ ಶ್ರುತಶ್ರವೆ ಮತ್ತು ಶ್ರುತದೇವೆಯರ ಮಕ್ಕಳು. ಒಟ್ಟಿನಲ್ಲಿ ಅವರ ಕುಟುಂಬದ ಸದಸ್ಯರದ್ದೇ ಮೂರು-ನಾಲ್ಕು ಕ್ರಿಕೆಟ್ ಟೀಮ್ ಮಾಡಬಹುದಿತ್ತು.

***** 

ಸಹೋದರ-ಸಹೋದರಿಯರನ್ನು ನೋಡಿದ್ದಾಯಿತು. ಇನ್ನು ತಳೋದರಿಯನ್ನು ನೋಡೋಣ. 

ದ್ರವ ಪದಾರ್ಥವಿರುವ ಒಂದು ಪಾತ್ರೆ. "ತುಪ್ಪದ ತಂಬಿಗೆ" ಅನ್ನೋಣ. (ಬಿಂದಿಗೆಯಲ್ಲಿ ತುಪ್ಪ ಇಡುವ ಸಿರಿವಂತರ ಮನೆ ಆದರೆ "ತುಪ್ಪದ ಬಿಂದಿಗೆ" ಎನ್ನಲೂಬಹುದು). ಮೊದಲು ಅದರ ತುಂಬಾ ತುಪ್ಪ ಇತ್ತು. ಉಪಯೋಗಿಸುತ್ತಾ ಇದ್ದಂತೆ ಕಡಿಮೆಯಾಗುತ್ತಾ ಹೋಯಿತು. ಈಗ ಹೆಚ್ಚು-ಕಡಿಮೆ ಖಾಲಿಯಾಗಿದೆ. ತುಪ್ಪ ಇಲ್ಲವೇ ಇಲ್ಲ ಅನ್ನುವಂತಿಲ್ಲ. ಒಂದೆರಡು ಚಮಚದಷ್ಟು ತಂಬಿಗೆಯ "ತಳ" ಭಾಗದಲ್ಲಿ ಉಳಿದಿದೆ. ಖಂಡಿತ ಇದೆ. ಅಂದರೆ ಇದ್ದೂ ಇಲ್ಲದಂತೆ ಇದೆ. 

ಹೊಟ್ಟೆಯೂ ಅಷ್ಟೇ. ಕೆಲವರಿಗೆ ದೂರದಿಂದಲೇ ಕಾಣುವಂತೆ ಇರುತ್ತದೆ. ಅವರ ದೇಹದ ಎಲ್ಲಾ ಅಂಗಗಳಿಗಿಂತ ಹೊಟ್ಟೆಯೇ ಪ್ರಧಾನ. ನಮ್ಮ ಊರಿನಲ್ಲಿ ಒಬ್ಬರು ಶಾಸ್ತ್ರಿಗಳಿದ್ದರು. ಅವರ ಹೆಸರು ಹೇಳಿದರೆ ಯಾರಿಗೂ ತಿಳಿಯದು. "ಹೊಟ್ಟೆ ಶಾಸ್ತ್ರಿಗಳು" ಅಂದರೆ ಸಣ್ಣ ಮಕ್ಕಳಿಗೂ ಗೊತ್ತು. ಮತ್ತೆ ಕೆಲವರಿಗೆ ಹೊಟ್ಟೆಯೇ ಇರುವುದಿಲ್ಲ. ಹೊಟ್ಟೆಯೇ ಇಲ್ಲದೆ ಹೇಗೆ ಬದುಕಿದ್ದಾರೆ? ಇದೆ. ಆದರೆ ಕಾಣುವಂತೆ ಇಲ್ಲ. ಎಲ್ಲೋ ತಳದಲ್ಲಿ ಇದೆ. ಸುದಾಮನನ್ನು ಕಂಡ ಭಟರು ಶೀಕೃಷ್ಣನಿಗೆ ಹೇಳುತ್ತಾರೆ: "ಅವನ ಹೊಟ್ಟೆ ಬೆನ್ನಿಗೆ ಅಂಟಿಕೊಂಡಿದೆ".

ಹೊಟ್ಟೆ ಬೆನ್ನಿಗೆ ಅಂಟಿಕೊಂಡಂತಿದ್ದರೆ, ಕಂಡೂಕಾಣದಂತಿದ್ದರೆ, ಎಲ್ಲೋ ತಳದಲ್ಲಿದ್ದರೆ ಅಂತಹ ಹೆಣ್ಣು "ತಳೋದರಿ" ಅನ್ನಿಸಿಕೊಳ್ಳುತ್ತಾಳೆ. ಬಾಳೆಯ ಎಲೆಯಂತಹ ಹೊಟ್ಟೆಯಿರುವವಳು "ತಳೋದರಿ". ಬಾಳೆಯ ಗುಡಾಣದಂತಿರುವ ಹೊಟ್ಟೆಯವಳು 'ಗುಂಡೋದರಿ". (ಮನೆಯ ಹಿತ್ತಿಲಿನ ಬಾಳೆಯ ಗಿಡದಲ್ಲಿ ಗೊನೆ ಮೂಡಿ, ಕಾಯಿ ಬಲಿತ ನಂತರ ಅದನ್ನು ಕಡಿದು ತಂದು, ಚಿಪ್ಪುಗಳಾಗಿ ಕತ್ತರಿಸಿ, ಮಣ್ಣಿನ ಗುಡಾಣಗಳಲ್ಲಿ ಬಾಳೆಲೆಗಳ ಮಧ್ಯದಲ್ಲಿ ಸುತ್ತಿ ಬಿಸಿಲಲ್ಲಿ ಇಡುತ್ತಿದ್ದರು. ಮೂರು-ನಾಲ್ಕು ದಿನದಲ್ಲಿ ಹಣ್ಣಾಗುತ್ತಿದ್ದವು. ಗಿಡದಲ್ಲೇ ಬಿಟ್ಟರೆ ಅಳಿಲು, ಹಕ್ಕಿ-ಪಕ್ಷಿಗಳ ಕಾಟ. ಅದನ್ನು ತಪ್ಪಿಸಲು ಈ ಉಪಾಯ).

ಯಾರನ್ನಾದರೂ ವರ್ಣಿಸುವುದು ಹೇಗೆ? ಅವರ  ಅಂಗಾಂಗಗಳನ್ನು ತಾನೇ ವರ್ಣಿಸುವುದು. ಎತ್ತರದ ನಿಲುವು. ಆಜಾನುಬಾಹು (ಕೈಗಳು ಮೊಣಕಾಲು ಮುಟ್ಟುವಂತಿವೆ ಎಂದು). ಮಾಟವಾದ ಮೂಗು. ಮುತ್ತಿನಂತಹ ಹಲ್ಲು. ಈ ರೀತಿ. ಹೊಟ್ಟೆಯನ್ನು ಹೇಳುವಾಗ "ತಳೋದರಿ". ಅದೊಂದು ಸೌಂದರ್ಯದ ಲಕ್ಷಣ. ಆದ್ದರಿಂದ ಈ ಪದದ ಬಳಕೆ. 
*****

ಹಿಂದೆಲ್ಲಾ ಹೆಣ್ಣು ಮಕ್ಕಳಿಗೆ ಪ್ರಸವವಾದ ನಂತರ ಬಾಣಂತಿತನ (ಆಡುಮಾತಿನಲ್ಲಿ ಬಾಣಂತನ) ಮಾಡುವಾಗ "ಸೌಭಾಗ್ಯ ಶುಂಠಿ" ಲೇಹ್ಯವನ್ನು ಕೊಡುವುದರ ಜೊತೆಗೆ, ಶಿಶು ಜನನದಿಂದ ಖಾಲಿಯಾದ ಜಾಗದಲ್ಲಿ ಗಾಳಿ ತುಂಬಿ ಹೊಟ್ಟೆ ಉಬ್ಬರಿಸದಿರುವಂತೆ ಒಂದು ಉದ್ದದ ಬಟ್ಟೆಯ ತುಂಡಿನಿಂದ ಹೊಟ್ಟೆಯನ್ನು ಬಲವಾಗಿ ಕಟ್ಟುತ್ತಿದ್ದರು. ಗರ್ಭಿಣಿಯಾಗಿದ್ದಾಗ ಉಬ್ಬಿದ ಹೊಟ್ಟೆ ಮತ್ತೆ ಮೊದಲಿನಂತೆ ಆಗಿ, ಆ ಹುಡುಗಿ ಹಿಂದಿನಂತೆ ತಳೋದರಿಯೇ ಆಗಿ ಉಳಿಯಲಿ ಎನ್ನುವ ದೃಷ್ಟಿಯಿಂದ. 

ಅರ್ಜುನನೊಡನೆ ಮದುವೆಯಾಗುವ ಮೊದಲು ಸುಭದ್ರೆಯು ಅತ್ಯಂತ ಸುಂದರಿಯೂ, ತಳೋದರಿಯೂ ಆಗಿದ್ದಳಂತೆ. ಅಭಿಮನ್ಯುವಿನ ಜನನದ ಸಮಯದಲ್ಲಿ ಹೆರಿಗೆಗೆ ತೌರು ಮನೆ ದ್ವಾರಕಿಗೆ ಬಂದಳು. ಅವಳಿಗೆ (ಹಿರಿಯ ಅತ್ತಿಗೆ ಬಲರಾಮನ ಹೆಂಡತಿ) ರೇವತಿಯ ಜೊತೆಗೆ ಶ್ರೀಕೃಷ್ಣನ ಕಡೆಯಿಂದ ಹದಿನಾರು ಸಾವಿರದ ಒಂದು ನೂರಾ ಎಂಟು ಅತ್ತಿಗೆಯರು. ಹೊಟ್ಟೆ ಕಟ್ಟುವವರಿಗೆ ಏನೂ ಕಡಿಮೆಯಿರಲಿಲ್ಲ. ಹೀಗಾಗಿ ಸುಭದ್ರೆಯು ಅಭಿಮನ್ಯು ಹುಟ್ಟಿದಮೇಲೂ ತಳೋದರಿಯಾಗಿಯೇ ಉಳಿದಳು. 
*****

ರಾವಣನ ಹೆಂಡತಿಯಾದ ಮಂಡೋದರಿ ಅಸುರರ ರಾಜನಾದ ಮಯಾಸುರ ಮತ್ತು ಹೇಮಾ ಎನ್ನುವ ಹೆಸರಿನ ಅಪ್ಸರೆಯ ಮಗಳು. ಸಂಸ್ಕೃತದಲ್ಲಿ "ಮಂದ" ಅನ್ನುವ ಪದಕ್ಕೆ (ಇತರೆ ಅನೇಕ ಪದಗಳಂತೆ) ಅನೇಕ ಅರ್ಥಗಳಿವೆ. ಇವುಗಳಲ್ಲಿ "ಕೆಳಗೆ" ಎಂದೂ ಒಂದರ್ಥ. "ಮೆತ್ತಗಿರುವುದು" ಎಂದೂ ಒಂದರ್ಥ. ಮಂಡೋದರಿ ಅವಳ ತಾಯಿ ಅಪ್ಸರೆಯಂತೆ ಅತಿಲೋಕ ಸುಂದರಿ. ಅವಳೂ ತಳೋದರಿಯೇ. ಕೆಲವು ಕಥೆಗಳಲ್ಲಿ ರಾವಣನು ಈಶ್ವರನನ್ನು ಪಾರ್ವತಿಯನ್ನೇ ಕೊಡು ಎಂದು ಕೇಳಿದಾಗ (ಭೂಕೈಲಾಸ ನೆನಪಿಸಿಕೊಳ್ಳಬಹುದು) ಕಪ್ಪೆಯ ಮರಿ ಒಂದನ್ನು ಪಾರ್ವತಿಯಂತೆಯೇ ಸುಂದರಳಾದ ಹೆಣ್ಣಾಗಿ ಮಾಡಿ ಕೊಡಲಾಯಿತು ಎಂದು ಹೇಳಿದೆ. (ಹೀಗೆ ಮಾಡಿದವರು ಯಾರೆಂದರೆ ಬೇರೆ ಬೇರೆ ಕಥೆಗಳಲ್ಲಿ ಶಿವ, ಪಾರ್ವತೀ, ವಿಷ್ಣು ಎಂದೆಲ್ಲಾ ಉಂಟು). ಕಪ್ಪೆಗೆ "ಮಂಡೋದರಿ" ಎಂದೂ ಹೆಸರುಂಟು. ಈ ಕಾರಣಗಳಿಂದ ಅವಳಿಗೆ ಮಂಡೋದರಿ ಎಂದು ಹೆಸರು ಬಂತಂತೆ. 

ಸಹೋದರಿಗೂ ಮಂಡೋದರಿಗೂ ಸಂಬಂಧವಿಲ್ಲ. ಮೆತ್ತಗಿರುವ ಮತ್ತು ಕೆಳಗಿರುವ ಹೊಟ್ಟೆಯ ಕಾರಣದಿಂದ ಅವಳು ತಳೋದರಿಯೂ ಹೌದು, ಮಂಡೋದರಿಯೂ ಹೌದು. ಶ್ರೀಮದ್ರಾಮಾಯಣದ ಸುಂದರಕಾಂಡದಲ್ಲಿ ಹನುಮಂತನು ರಾವಣನ ಅಂತಃಪುರದಲ್ಲಿ ಮಂಡೋದರಿಯನ್ನು ನೋಡಿ ಸೀತೆ ಎಂದು ಕ್ಷಣ ಕಾಲ ಚಿಂತಿತನಾದನು ಎಂದು ಹೇಳುವ ಸಂಗತಿಯಿದೆ. ನಂತರ ಪಾದವನ್ನು ನೋಡಲಾಗಿ, ಮಂಡೋದರಿಗೆ ಕಾಕರೇಖೆ ಇತ್ತಂತೆ. ಸೀತಾದೇವಿಗೆ ಪದ್ಮರೇಖೆ. (ಅಂದರೆ ಮಂಡೋದರಿಯೂ ಸೀತೆಯಂತೆಯೇ ಸುಂದರಿ ಎಂದು ತಾತ್ಪರ್ಯ). 

*****

ಹೆಂಗಸರು ಮಾತ್ರ ತಳೋದರಿಯಾರಾಗಿರಬೇಕೇ? ಹೀಗೇಕೆಂದು "ಸ್ತ್ರೀ ವಿಮೋಚನಾ ವಾದಿ" ಸಂಘಗಳು ಯೋಚಿಸಬೇಕಾಗಿಲ್ಲ. ಗಂಡಸರೂ ಸಹ "ತಳೋದರ" ಆಗಿಯೇ ಇರಬೇಕಂತೆ. ಇದರಲ್ಲಿ ಅವರಿಗೆ ಏನೂ ವಿನಾಯಿತಿ ಇಲ್ಲ. ಶ್ರೀಮನ್ನಾರಾಯನನ್ನು ಚಿಂತಿಸುವಾಗ ಅವನನ್ನು ಪಾದದಿಂದ ಮೇಲೆ ಪ್ರತಿಯೊಂದು ಅಂಗವನ್ನೂ ನೆನಪಿಸಿಕೊಳ್ಳಬೇಕಂತೆ. ಹಾಗೆ ನೋಡುವಾಗ ಅವನ ಹೊಟ್ಟೆಯೂ ತೆಳುವೇ. ಶ್ರೀ ಮಧ್ವಾಚಾರ್ಯರು ತಮ್ಮ "ದ್ವಾದಶ ಸ್ತೋತ್ರ" ಕೃತಿಗಳಲ್ಲಿ ಹೀಗೆ ಹೇಳುತ್ತಾರೆ:

ಉದರಂ ಚಿಂತ್ಯಮೀಶಸ್ಯ ತನುತ್ವೇಪ್ಯಖಿಲಂಭರಂ 
ವಲಿತ್ರಯಾಂಕಿತ೦ ನಿತ್ಯಂ ಉಪಗೂಢ೦ ಶ್ರೀಯೈಕಯಾ 

ತನ್ನ ಹೊಟ್ಟೆಯಲ್ಲಿ ಹದಿನಾಲ್ಕು ಲೋಕಗಳನ್ನು ತುಂಬಿಕೊಂಡಿದ್ದರೂ ಅವನ ಹೊಟ್ಟೆಯು ಬಾಳೆ ಎಲೆಯಂತೆ ತೆಳುವಾಗಿಯೇ ಇದೆ. ಅಷ್ಟು ಮಾತ್ರವಲ್ಲ. ಅವನ ಹೊಟ್ಟೆಯಮೇಲೆ ಮೂರು ಗೆರೆಗಳು ಬೀಳುತ್ತವಂತೆ. ಹೊಟ್ಟೆ ಒಣಗಿಕೊಂಡವರಿಗೆ ಮಾತ್ರ ಈ ರೀತಿ ಗೆರೆಗಳು ಬೀಳುತ್ತವೆ ಎಂದು ನಾವು ನೋಡಿ ತಿಳಿದಿದ್ದೇವೆ. ಆದರೆ ಶ್ರೀಹರಿಯ ಹೊಟ್ಟೆಯ ಮೇಲಿನ ಗೆರೆಗಳು ಸುಲಭವಾಗಿ ಕಾಣುವುದಿಲ್ಲ. ಏಕೆಂದರೆ ಆ ತಾಯಿ ಮಹಾಲಕ್ಷ್ಮಿಯು ಅವನನ್ನು ಯಾವಾಗಲೂ ತಬ್ಬಿಕೊಂಡೇ ಕುಳಿತಿರುತ್ತಾಳೆ. ಅವಳ ಕರುಣೆಯಾದರೆ ಮಾತ್ರ ಸ್ವಲ್ಪ ಪಕ್ಕಕ್ಕೆ ತಿರುಗಿ ನಮಗೆ ಅದರ ದರ್ಶನ ಮಾಡಿಸುತ್ತಾಳೆ!

ಶ್ರೀಹರಿ ಹೀಗಿದ್ದರೆ ಅವನ ಹೆಂಡತಿ ಕಥೆಯೇನು? ಮಹಾಲಕ್ಸ್ಮಿ ದೇವಿಯೂ ತಳೋದರಿಯೇ. ಶ್ರೀಹರಿ ಪ್ರಳಯ ಕಾಲದಲ್ಲಿ ಆಲದೆಲೆಯ ಮೇಲೆ ಮಲಗಿದ. ಮಹಾಲಕ್ಷ್ಮಿಯು ಆಲದೆಲೆಯಾಗಿ ಜೊತೆಗಿದ್ದಳು. (ಛತ್ರ, ಚಾಮರ, ಮಂಚ, ಬೇರೆ ಪದಾರ್ಥಗಳು (ವ್ಯಜನ), ಪಾತ್ರೆ-ಪಡಗ, ಕಡೆಗೆ ಪ್ರಳಯದ ನೀರೂ ಅವಳೇ ಆಗಿ ಅವನನ್ನು ಸುತ್ತುವರೆದಿದ್ದಳು). ಮುಂದೆ ಸೃಷ್ಟಿ ಕಾರ್ಯ ಸಾಗಬೇಕು. ಮಹಾಲಕ್ಷ್ಮಿಯ ಮೂಲಕ ಮಕ್ಕಳು ಪಡೆಯಬೇಕಾದರೆ ತಳೋದರಿಯಾಗಿರುವ ಅವಳು ಬಾಣಂತಿತನದಲ್ಲಿ ಸರಿಯಾಗಿ ಹೊಟ್ಟೆ ಕಟ್ಟದಿದ್ದರೆ ಮುಂದೆ "ಗುಂಡೋದರಿ" ಆಗಬಹುದು. ಹೊಟ್ಟೆ ಕಟ್ಟಲು ಬೇರೆ ಯಾರೂ ಇಲ್ಲ. ಇರುವುದು ಅವರಿಬ್ಬರೇ. ಪಕ್ಕದ ಮನೆಯವರ ಸಹಾಯ ಕೇಳೋಣವೆಂದರೆ ಅಕ್ಕ-ಪಕ್ಕ ಮನೆಗಳೇ ಇಲ್ಲ. ಎಲ್ಲಾ ನೀರಿನಮಯ. ಏನು ಮಾಡುವುದು?

ಯೋಚಿಸಿ ಯೋಚಿಸಿ ಕಡೆಗೆ ಅವಳ ಸೌಂದರ್ಯ ಮಾಸಬಾರದೆಂದು ತನ್ನ ಕರುಳಿನಿಂದಲೇ ಬ್ರಹ್ಮನನ್ನು ಹೆತ್ತ. ಆಮೇಲೆ ಅವನಿಗೆ ಅದೇ ಅಭ್ಯಾಸವಾಗಿಹೋಯಿತು. ಪ್ರಾಣದಿಂದ ವಾಯುವನ್ನು ಹಡೆದ. ಮನಸ್ಸಿನಿಂದ ಚಂದ್ರನನ್ನೂ, ಕಣ್ಣಿನಿಂದ ಸೂರ್ಯನನ್ನೂ ಪಡೆದ. ಮುಖದಿಂದ ಇಂದ್ರನನ್ನೂ ಅಗ್ನಿಯನ್ನೂ ಮಕ್ಕಳಾಗಿ ಪಡೆದ. 

ಸೂಕ್ತಗಳ ರಾಜನಾದ "ಪುರುಷ ಸೂಕ್ತ" ಇದನ್ನೇ ಹೇಳುತ್ತದೆ:

ಚಂದ್ರಮಾ ಮನಸೋ ಜಾತಃ ಚಕ್ಷೋ: ಸೂರ್ಯೋ ಅಜಾಯತ 
ಮುಖಾತ್ ಇಂದ್ರಶ್ಚ ಅಗ್ನಿಶ್ಚ ಪ್ರಾಣಾತ್ ವಾಯುರಾಜಾಯತ 


ಈ ಕಾರಣದಿಂದ ಮಹಾಲಕ್ಷ್ಮಿಗೆ ಮಕ್ಕಳ ಹಡೆಯುವುದೂ, ಹೊಟ್ಟೆ ಕಟ್ಟಿಸಿಕೊಳ್ಳುವುದೂ ಬೇಕೇ ಆಗಲಿಲ್ಲ. ಅವಳು "ತಳೋದರಿ" ಆಗಿಯೇ ಉಳಿದಳು! ಅವನು ತಳೋದರ. ಅವಳು ತಳೋದರಿ. ಅನುರೂಪ ದಾಂಪತ್ಯ. 

ಶ್ರೀ ಪುರಂದರ ದಾಸರು ಇದನ್ನೇ "ಮರಳು ಮಾಡಿಕೊಂಡೆಯಲ್ಲೇ, ಮಾಯಾದೇವಿಯೇ"  ಎಂದು ಹೀಗೆ ಹಾಡುತ್ತಾರೆ:

ಮಕ್ಕಳು ಪಡೆದರೆ ನಿನ್ನ ಚೊಕ್ಕತನವು ಪೋಪುದೆಂದು 
ಪೊಕ್ಕುಲೊಳು ಮಕ್ಕಳ ಪಡೆದು ಕಕ್ಕುಲಾತಿ ಮೆರೆವಂತೆ
ಮರಳು ಮಾಡಿಕೊಂಡೆಯಲ್ಲೇ ಮಾಯಾದೇವಿಯೇ! 

ಇದರ ಬಗ್ಗೆ ಹೆಚ್ಚಿಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ ಓದಬಹುದು. 

*****

"ತಳೋದರಿ" ಅನ್ನುವ ಪದವನ್ನು ಕೇವಲ ಒಂದು ಸಾರಿ ಮಾತ್ರ ಉಪಯೋಗಿಸಿ ಅದನ್ನು ವಿಶ್ವ ವಿಖ್ಯಾತ ಮಾಡಿದ ಶ್ರೇಯಸ್ಸು ನಮ್ಮ ಕನ್ನಡದ ಹೆಮ್ಮೆಯ ಕವಿ ಕುಮಾರವ್ಯಾಸ ಬಿರುದಿನ ಗದುಗಿನ ನಾರಾಣಪ್ಪನಿಗೆ ಸೇರಬೇಕು. ಅದು ಹೇಗೆಂದು ಮುಂದಿನ ಸಂಚಿಕೆಯಲ್ಲಿ ನೋಡೋಣ. 

Thursday, May 15, 2025

ಸುಗುಣೆಯರು ಹದಿನಾರುಸಾವಿರ


ನಾವು ನಮ್ಮ ನಮ್ಮ ಅನುಭವಗಳಲ್ಲಿ ಕಂಡಂತೆ, ಪ್ರಪಂಚದಲ್ಲಿ ಸಂಬಂಧಗಳು ಬಹಳ ವಿಚಿತ್ರವಾದವು. ಮನುಷ್ಯ-ಮನುಷ್ಯರುಗಳ ಸಂಬಂಧಗಳೇ ಅನೇಕ ವೇಳೆ ನಮಗೆ ಅರ್ಥವಾಗುವುದಿಲ್ಲ. "ಅವರು ನೋಡಿದರೆ ಹಾಗೆ. ಇವರು ನೋಡಿದರೆ ಹೀಗೆ. ಒಂದು ಉತ್ತರ ಧ್ರುವ. ಒಂದು ದಕ್ಷಿಣ ಧ್ರುವ. ಆದರೆ ಕಿತ್ತರೆ ಕೀಳದಂತೆ ಇರುತ್ತಾರೆ. ಅವರ ಸಂಬಂಧವೇ ಅರ್ಥ ಆಗುವುದಿಲ್ಲ" ಎಂದು ಹೇಳುತ್ತಿರುತ್ತೇವೆ. ಇನ್ನು ಭಕ್ತ-ಭಗವಂತನ ಸಂಬಂಧಗಳು ನಮಗೆ ತಿಳಿಯುವುದಾದರೂ ಹೇಗೆ? ಶರಣಶ್ರೇಷ್ಠರಾದ ಅಲ್ಲಮ ಪ್ರಭುಗಳ ಈ ಕೆಳಕಂಡ ವಚನ ಸಂಬಂಧಗಳ ವಿಚಿತ್ರ ರೀತಿಯ ಜೊತೆ, ಭಕ್ತ-ಭಗವಂತನ ಸಂಬಂಧದ ಸೊಗಸನ್ನೂ ಹೇಳುತ್ತದೆ:

ಎತ್ತಣ ಮಾಮರ ಎತ್ತಣ ಕೋಗಿಲೆ ಎತ್ತಣಿಂದೆತ್ತಣ ಸಂಬಂಧವಯ್ಯ?
ಬೆಟ್ಟದ ನೆಲ್ಲಿಕಾಯಿ ಸಮುಂದ್ರದೊಳಗಣ ಉಪ್ಪು ಎತ್ತಣಿಂದೆತ್ತಣ ಸಂಬಂಧವಯ್ಯ?
ಗುಹೇಶ್ವರ ಲಿಂಗಕ್ಕೆಯೂ ಎನಗೆಯೂ ಎತ್ತಣಿಂದೆತ್ತಣ ಸಂಬಂಧವಯ್ಯ?

ಅನೇಕ ಸಂದರ್ಭಗಳಲ್ಲಿ ಯಾರೋ ಇಬ್ಬರ ನಡುವೆ ಇರುವ ಅನ್ಯೋನ್ಯತೆ, ಆತ್ಮೀಯತೆಗಳು ಬೇರೆಯರಿಗೆ ಅರ್ಥವಾಗುವುದು ಒತ್ತಟ್ಟಿಗಿರಲಿ; ಅದು ಅತ್ಯಂತ ಅಪಾರ್ಥವೂ ಆಗುವುದು ಕಂಡುಬರುವುದು. ಸಾಮಾನ್ಯ ಜನರ ನಡುವಣ ಸಂಬಂಧವೇ ಹೀಗಿರಬೇಕಾದರೆ ಭಕ್ತ-ಭಗವಂತ ಸಂಬಂಧಗಳು ಪ್ರಾಪಂಚಿಕ ದೃಷ್ಟಿಯಿಂದ ಬಲು ವಿಚಿತ್ರವಾಗಿರುವುದು ಏನು ವಿಶೇಷ?  

"ಜಾಣೆಯರ ಅರಸ" ಎನ್ನುವ ಹಿಂದಿನ ಸಂಚಿಕೆಯಲ್ಲಿ ಶ್ರೀಕೃಷ್ಣನು ನರಕಾಸುರನ ವಧೆ ಆದ ನಂತರ ಅವನ ಸೆರೆಯಲ್ಲಿದ್ದ ಹದಿನಾರುಸಾವಿರ ರಾಜಕುಮಾರಿಯರನ್ನು ಮದುವೆಯಾದದ್ದು ಚರ್ಚಿಸಿದೆವು. (ಇದನ್ನು ಓದಲು ಇಲ್ಲಿ ಕ್ಲಿಕ್ ಮಾಡಿ). "ಜಾಣೆಯರರಸ" ಎನ್ನುವುದರ ಬದಲು "ಸುಗುಣಿಯರರಸ" ಎನ್ನುವ ಪಾಠಾ೦ತರ "ಯಾರೇ ರಂಗನ ಕರೆಯಬಂದವರು" ಹಾಡಿನಲ್ಲಿ ಇರುವುದು ಏಕೆ? ಈ ಹದಿನಾರುಸಾವಿರ ರಾಜಕುಮಾರಿಯರು ಯಾರು? ಶ್ರೀಕೃಷ್ಣನು ಅವರನ್ನು ಏಕೆ ವಿವಾಹವಾದ? ಈ ಪ್ರಶೆಗಳು ಹುಟ್ಟಿದ್ದವು. ಅವುಗಳ ಪರಿಹಾರ ಹೇಗೆ ಎನ್ನುವ ವಿಷಯವನ್ನು ಈಗ ನೋಡೋಣ. 

*****

ಅನೇಕ ಭಕ್ತರು ಪರಮಾತ್ಮನನ್ನು ಉದ್ದೇಶಿಸಿ ತಪಸ್ಸು, ಸಾಧನೆಗಳನ್ನು ಮಾಡುತ್ತಾರೆ. ಅವನ ಸಾಕ್ಷಾತ್ಕಾರ ಆದಾಗ ತಮಗೆ ಏನು ಬೇಕು ಎಂದು ಈ ತಪಸ್ಸುಗಳನ್ನು ಮಾಡಿದರೋ ಅವನ್ನು ಬೇಡುತ್ತಾರೆ. "ನಿನ್ನೊಡನೆ ಯುದ್ಧದಲ್ಲಿ ಹೋರಾಡಿ ಸಾಯಬೇಕು" ಎಂದು ವೃಷಭಾಸುರನು ಕೇಳಿದ್ದನ್ನೂ, ಆ ಹೋರಾಟ ನಡೆದ ನೆನಪಿನಲ್ಲಿ ತಿರುಪತಿಯ ಬೆಟ್ಟಕ್ಕೆ "ವೃಷಭಾಚಲ" ಎಂದು ಹೆಸರು ಬಂದಿರುವುದನ್ನೂ "ಪದ್ಮ ಪುರಾಣ" ಹೇಳುತ್ತದೆ. "ಶ್ರೀನಿವಾಸ ಕಲ್ಯಾಣ" ಕಥೆ ಕೇಳಿದವರು ಇದನ್ನು ಬಲ್ಲರು. ಮುಚುಕುಂದ ಚಕ್ರವರ್ತಿಯು ತಡೆಯಿಲ್ಲದ ಬಹುಕಾಲದ ನಿದ್ರೆ ಕೇಳಿದನಂತೆ. ಅಪ್ಪನ ತೊಡೆಯ ಮೇಲೆ ಕುಳಿತುಕೊಳ್ಳುವ ಸಲುವಾಗಿ ತಪಸ್ಸು ಮಾಡಿದ ಧ್ರುವನು ವಾಸುದೇವನನ್ನು ಕಂಡ ತಕ್ಷಣ "ನನಗೆ ಏನೂ ಬೇಡ. ನಿನ್ನ ಜೊತೆ ಕರೆದುಕೊಂಡು ಹೋಗು" ಎಂದನಂತೆ. ನಿನ್ನಂತಹ ಮಗ ಬೇಕು ಎಂದು ಕೇಳಿದವರು ಅನೇಕರು. ಹೀಗುಂಟು. 

ಅಗ್ನಿಗೆ ಒಮ್ಮೆ ಹದಿನಾರು ಸಾವಿರ ಮಕ್ಕಳು ಒಟ್ಟಾಗಿ ಜನಿಸಿದರಂತೆ. ಅವರೆಲ್ಲರೂ ಶ್ರೀಹರಿಯನ್ನು ಉದ್ದೇಶಿಸಿ ಬಹಳ ದೀರ್ಘವಾದ, ಘೋರವಾದ ತಪಸ್ಸನ್ನು ಮಾಡಿದರು. ಶ್ರೀಹರಿಯು ಪ್ರತ್ಯಕ್ಷನಾದಾಗ ಅವನನ್ನು ಕಂಡು ಮೈಮರೆತರು. ಏನು ಬೇಕೆಂದು ಕೇಳಿದಾಗ "ನೀನು ನಮ್ಮನ್ನು ಮದುವೆ ಆಗು" ಎಂದು ಬೇಡಿದರು. ಅಗ್ನಿ ಪುತ್ರರಾದ ಈ ಋಷಿಗಳ ಕೋರಿಕೆ ಮನ್ನಿಸಲೇಬೇಕಾಯಿತು. ಶ್ರೀಹರಿಯು ನಸುನಗುತ್ತಾ "ಆಯಿತು. ನಿಮ್ಮ ಇಷ್ಟದಂತೆಯೇ ಆಗಲಿ. ಆದರೆ ಅದಕ್ಕೆ ತಕ್ಕ ಕಾಲ ಬರಬೇಕು. ಮುಂದೆ ಶ್ರೀಕೃಷ್ಣಾವತಾರ ಆದಾಗ ನೀವೆಲ್ಲರೂ ರಾಜಕುಮಾರಿಯರಾಗಿ ಹುಟ್ಟುವಿರಿ. ಆಗ ನಿಮ್ಮನ್ನು ಮದುವೆ ಆಗುತ್ತೇನೆ" ಎಂದು ವರ ಕೊಟ್ಟನು. ಈ ಋಷಿಗಳೇ ದ್ವಾಪರದಲ್ಲಿ ರಾಜಕುಮಾರಿಯರಾಗಿ ಹುಟ್ಟಿ ನರಕಾಸುರನ ಸೆರೆಮನೆ ಸೇರಿದರು. ನರಕಾಸುರನ ವಧೆ ಆದ ನಂತರ ಶ್ರೀಕೃಷ್ಣನು ಅವರನ್ನು ವಿವಾಹವಾಗಿ ದ್ವಾರಕೆಗೆ ಕರೆತಂದನು. 

ಭಕ್ತರ ಕೋರಿಕೆಗಳನ್ನು ಪರಮಾತ್ಮನು ಒಮ್ಮೊಮ್ಮೆ ತನಿ-ತನಿಯಾಗಿ (ತನಿ ಅನ್ನುವುದು ಕನ್ನಡ ಪದ. ನಾವು ಮರ್ತೆ ಬಿಟ್ಟಿದ್ದೇವೆ. ಬಿಡಿ ಬಿಡಿಯಾಗಿ ಎಂದು ಅದರ ಅರ್ಥ) ನೆರವೇರಿಸುತ್ತಾನೆ. ಕೆಲವೊಮ್ಮೆ ಅನೇಕ ಜನರ ಕೋರಿಕೆಗಳನ್ನು ಒಟ್ಟಾಗಿ ತೀರಿಸುತ್ತಾನೆ. ನಮ್ಮ ಸುಪ್ರೀಂ ಕೋರ್ಟ್ "ಅನೇಕ ರಿಟ್ ಅರ್ಜಿಗಳನ್ನು ಒಟ್ಟಾಗಿ ವಿಲೇವಾರಿ ಮಾಡಿತು" ಎನ್ನುವಂತೆ. ಇದರ ಬಗ್ಗೆ ಹೆಚ್ಚು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ ಓದಿ.  ಇಷ್ಟು ಜನ ಋಷಿಗಳ ಕೋರಿಕೆಯನ್ನು ಒಟ್ಟಾಗಿ ತೀರಿಸಿದುದು, ಮತ್ತು ಇನ್ನೂ ಅನೇಕರ ಕೋರಿಕೆಗಳ ಕಾರಣ ಮದುವೆಗಳು ಆದದ್ದು ಸೇರಿ ಶ್ರೀಕೃಷ್ಣನಿಗೆ ಒಟ್ಟು ಹದಿನಾರು ಸಾವಿರದ ನೂರಾ ಎಂಟು ಹೆಂಡಿರಾದರು. 

*****

ಶ್ರೀಪುರಂದರದಾಸರು ಈ ಸಂದರ್ಭವನ್ನು ತಿಳಿಸಲು "ಜಾಣೆಯರರಸ" ಎಂದು ಪ್ರಯೋಗಿಸಿದರು. ಶ್ರೀ ಕನಕದಾಸರು ಇದನ್ನೇ "ಸುಗುಣೆಯರು" ಎಂದರು. ಶ್ರೀಕೃಷ್ಣನು "ಸುಗುಣಿಯರರಸ" ಎಂದು ಪಾಠಾ೦ತರವಾಯಿತು. 

ಈ ಸಂದರ್ಭವನ್ನು ವಿವರಿಸುವ ಶ್ರೀಕನಕದಾಸರ "ಹರಿಭಕ್ತಿಸಾರ" ಕೃತಿಯ ಭಾಮಿನೀಷಟ್ಪದಿಯ ಮೂವತ್ತೊಂಬತ್ತನೆಯ ಪದ್ಯ ಈ ರೀತಿಯಿದೆ:

ಮಗನಕೊಂದವನಾಳುವಂತಾ 
ಸುಗುಣೆಯರು ಹದಿನಾರುಸಾವಿರ 
ಸೊಗಸುಗಾತಿಯರವರ ಮೋಹದ ಬಲೆಗೆ ವಿಟನಾಗಿ 
ಬಗೆಬಗೆಯ ರತಿಕಲೆಗಳಲಿ 
ಕೂರುಗವ ನಾಟಿಸಿ ಮೆರೆದು ನೀ ನೀ 
ಜಗಕೆ ಪಾವನನಾದೆ ರಕ್ಷಿಸು ನಮ್ಮನನವರತ

ಕುಬ್ಜೆ ಎಂಬುವವಳು ನೋಡಲು ವಿಕಾರವಾಗಿದ್ದಳು. ಅವಳು ಶಾಪದ ಫಲವಾಗಿ ಈ ರೀತಿ ಹುಟ್ಟಿದ ಅಪ್ಸರೆ. ಕಂಸನಿಗೆ ಪ್ರತಿದಿನ ಗಂಧ ತೇಯ್ದು ಅಲಂಕಾರಕ್ಕಾಗಿ ಒಪ್ಪಿಸುವುದು ಅವಳ ಕೆಲಸ. ಎಂಟು ವರ್ಷದ ಕೃಷ್ಣ ಸೋದರಮಾವ ಕಂಸನ ಆಹ್ವಾನದ ಮೇರೆಗೆ "ಬಿಲ್ಲುಹಬ್ಬ" ನೆಪದಲ್ಲಿ ಮಥುರೆಗೆ ಹೋದ. ಅಲ್ಲಿ ಅವಳನ್ನು ಕಂಡು ಅವಳ ಡೊಂಕನ್ನು ಸರಿಮಾಡಿ ನೆಟ್ಟಗೆ ಮಾಡಿದ. ಅವಳು ಭಕ್ತಿಯಿಂದ ಶ್ರೀಕೃಷ್ಣನಿಗೆ ಗಂಧವನ್ನು ಅರ್ಪಿಸಿದಳು. ಮುಂದೆ ಕೃಷ್ಣನು ಅವಳನ್ನು ವಿವಾಹವಾದ. ಅವರಿಗೆ "ವಿಶೋಕ" ಎನ್ನುವ ಮಗ ಹುಟ್ಟಿದ. ಮಹಾಭಾರತ ಯುದ್ಧ ಆದಾಗ ಈ ವಿಶೋಕ ಭೀಮಸೇನನ ರಥದ ಸಾರಥಿಯಾಗಿ ಕೆಲಸ ಮಾಡಿದ ಎಂದು ಮಹಾಭಾರತದಿಂದ  ತಿಳಿದು ಬರುತ್ತದೆ.

*****

ಇಷ್ಟು ಮಂದಿ ಹೆಂಡಿರ ಜೊತೆ ಶ್ರೀಕೃಷ್ಣ ಹೇಗೆ ಸಂಸಾರ ಮಾಡಿದ ಎಂದು ನೋಡುವ ಕುತೂಹಲ ದೇವರ್ಷಿ ನಾರದರಿಗೆ ಉಂಟಾಯಿತು. ದ್ವಾರಕೆಗೆ ಹೋದರು. ಶ್ರೀಕೃಷ್ಣನ ಮೊದಲಿನ ಮನೆಗೆ ಬಂದರು. ಶ್ರೀಕೃಷ್ಣ ಬಾವಿಯಲ್ಲಿ ನೀರು ಸೇದಿ ತುಂಬುತ್ತಿದ್ದ. "ದೇವರ್ಷಿಗಳು ಬರಬೇಕು. ಎಂತಹ ಭಾಗ್ಯ. ದಯಮಾಡಿಸಿ" ಎಂದು ಕರೆದು ಸತ್ಕರಿಸಿದ. ಎಲ್ಲಾ ಆದ ಮೇಲೆ ಎರಡನೇ ಮನೆಗೆ ಹೋದರು. ಅಲ್ಲಿ ಕೃಷ್ಣ ಮಗುವಿಗೆ ನೀರು ಹಾಕಿ ಮೈ ಒರೆಸುತ್ತಿದ್ದ. "ಬನ್ನಿ, ಬನ್ನಿ, ದೇವರ್ಷಿಗಳೇ!" ಎಂದು ಸ್ವಾಗತಿಸಿದ. ಉಪಚಾರ ಪಡೆದು ಮುಂದೆ ಹೊರಟರು. ಮೂರನೆಯ ಮನೆಯಲ್ಲಿ ಶ್ರೀಕೃಷ್ಣ ಮನೆಗೆ ಅಲಂಕಾರ ಮಾಡುತ್ತಿದ್ದ, "ಇದೇನು ನಮ್ಮ ಪುಣ್ಯ! ನಾರದರು ದಯಮಾಡಿಸಬೇಕು" ಎಂದು ಕೃಷ್ಣ ಉಪಚರಿಸಿದ. ಹೀಗೆ ಇನ್ನೂ ಕೆಲವು ಕಡೆ ಆಯಿತು. ಒಂದೊಂದು ಮನೆಯಲ್ಲಿ ಒಂದೊಂದು ರೀತಿ. ನಾರದರು ಮುಂದೆ ಹೋಗುವುದನ್ನೇ ಬಿಟ್ಟರು!

ಭಾಗವತದಲ್ಲಿ ಈ ಪ್ರಸಂಗಗಳೆಲ್ಲ ವಿವರವಾಗಿ ವರ್ಣಿತವಾಗಿವೆ. 

Wednesday, December 11, 2024

ಇಂದಿರಾರಮಣನ ಮಂದಿರದ ಒಳಗೆ


ಶ್ರೀ ಪುರಂದರದಾಸರ "ಹೂವ ತರುವರ ಮನೆಗೆ ಹುಲ್ಲ ತರುವ" ಪದದ ವಿಶೇಷಾರ್ಥಗಳ ಹಿಂದೆ ಬಿದ್ದು ಕಳೆದ ಸಂಚಿಕೆಯಲ್ಲಿ "ಪರಿಪರಿಯ ಪುಷ್ಪಗಳು" ಎನ್ನುವವರೆಗೆ ಬಂದಿದ್ದೆವು. (ಇದನ್ನು ಓದಲು ಇಲ್ಲಿ ಕ್ಲಿಕ್ ಮಾಡಿ) ಈಗ ಮುಂದಿನ ಎರಡು ಪದಗುಚ್ಛಗಳಾದ "ಇಂದಿರಾರಮಣಗೆ" ಮತ್ತು "ಮಂದಿರದ ಒಳಗೆ" ಎನ್ನುವ ಬಗ್ಗೆ ನೋಡೋಣ. 

ದಾಸರ ಪದದ ಉದ್ದೇಶ್ಯ ಹೂವು ತರುವರ ಮನೆಗೆ ಹುಲ್ಲ ತರುವವನ ಬಗ್ಗೆ ಹೇಳುವುದು. ಇಲ್ಲಿ "ಇಂದಿರಾರಮಣ" ಎಂದು ಸಂಬೋಧಿಸುವ ಅಗತ್ಯವೇನು? ಶ್ರೀಹರಿಯ ಅನಂತ ಹೆಸರುಗಳಲ್ಲಿ ಬೇರೆ ಯಾವುದಾದರೂ ಉಪಯೋಗಿಸಬಹುದಿತ್ತಲ್ಲ? ಒಂದು ಸರ್ಕಾರೀ ಕೆಲಸಕ್ಕೆ ಅರ್ಜಿ ಹಾಕಿದರೆ ಅರ್ಜಿ ಪತ್ರದಲ್ಲಿ "ಎರಡು ಗುರುತಿನ ಚಿಹ್ನೆಗಳು" ಎಂದು ಒಂದು ಕಾಲಂ ಇರುತ್ತದೆ. ಅಲ್ಲಿ "ಎಡಗೆನ್ನೆಯ ಮೇಲೆ ಒಂದು ಕಪ್ಪು ಚುಕ್ಕೆ" ಮತ್ತು "ಬಲಗಾಲಿನ ಮೇಲೆ ಒಂದು ಗಾಯದ ಮಚ್ಚೆ", ಅಥವಾ ಈ ರೀತಿಯ ಗುರುತುಗಳನ್ನು ಬರೆಯಬಹುದು. ಇದು ಒಂದು ಉದಾಹರಣೆ. ಹಾಗೆ ಶ್ರೀಹರಿ ಏನಾದರೂ ಕೆಲಸಕ್ಕೆ ಅರ್ಜಿ ಹಾಕಿದರೆ ಏನು ಬರೆಯಬಹುದು ಎಂದು ಯೋಚಿಸಿದರೆ ಅವನ ಅನೇಕ ಪರಿಚಯದ ನಡುವೆ ಅತ್ಯಂತ ಸುಲಭದ ಗುರುತುಗಳು ಅವನ ಹೆಂಡತಿ ಮತ್ತು ಅವನ ಭಂಟ. ಇವರಿಲ್ಲದೆ ಅವನಿಲ್ಲ. ಅಥವಾ ಅವನಿರುವೆಡೆಯೆಲ್ಲಾ ಇವರಿಬ್ಬರಿದ್ದಾರೆ! ಅದಕ್ಕೆ ಅವನನ್ನು ನೆನಸುವವಕ್ಕೆ ಇವರಿಬ್ಬರ ಮೊರೆ ಹೋಗುತ್ತಾರೆ. ಯಾವುದಾದರೂ ಗುಂಪಿನಲ್ಲಿ (ತಿರುಪತಿ ಬೆಟ್ಟದ ಮೇಲೆ ಮಾತ್ರವಲ್ಲ) "ಇಂದಿರಾರಮಣ" ಅಥವಾ "ಆಂಜನೇಯವರದ" ಎನ್ನಿ. ಹಲವಾರು ಮಂದಿ ಎಲ್ಲೆಲ್ಲಿಂದಲೋ "ಗೋವಿಂದಾ " ಎನ್ನುತ್ತಾರೆ. (ಇದರ ಬಗ್ಗೆ ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ). ಪರಮಾತ್ಮನ ಅತಿ ಸುಲಭ ಗುರುತುಗಳಲ್ಲಿ ಇವು ಅತಿ ಮುಖ್ಯ. ಅದರಲ್ಲೂ ಈ "ಇಂದಿರಾರಮಣ" ಎನ್ನುವುದು. ಇದರ ವಿಶೇಷವೇನು?

ಶ್ರೀಪುರಂದರದಾಸರು ಮಾಧ್ವ ಸಂಪ್ರದಾಯದ ಪರಂಪರೆಗೆ ಸೇರಿದವರು. ಈ ಪರಂಪರೆಯಲ್ಲಿ ಶ್ರೀಮನ್ನಾರಾಯಣನ ನಂತರದ ಸ್ಥಾನ ಮಹಾಲಕ್ಷ್ಮಿ ದೇವಿಗೆ. ಮತ್ತೆಲ್ಲ ಜೀವರು ಮಹಾಪ್ರಳಯ ಕಾಲದಲ್ಲಿ ಪರಮಾತ್ಮನ ಉದರದಲ್ಲಿ ಗಾಢ ನಿದ್ರೆಯಲ್ಲಿದ್ದರೂ  ಮಹಾಲಕ್ಷ್ಮಿ ಮಾತ್ರ ಜೊತೆಗೆ ಇರುತ್ತಾಳೆ. "ಮರುಳು ಮಾಡಿಕೊಂಡೆಯಲ್ಲೇ ಮಾಯಾದೇವಿಯೇ" ಎನ್ನುವ ಕೃತಿಯಲ್ಲಿ "ಪ್ರಳಯಕಾಲದಲ್ಲಿ ಆಲದೆಲೆಯ ಮೇಲೆ ಮಲಗಿದಾಗ ಹಲವು ಆಭರಣಗಳು ಜಲವು ಆಗಿ ಜಾಣತನದಿ, ಇರಳು ಹಗಲು ಏಕವಾಗಿ ಹರಿಯು ನಿನ್ನ ಬಿಡದಿರ್ಪ೦ತೆ" ಎಂದು ಸೂಚಿಸಿದ್ದಾರೆ. (ಶ್ರೀಹರಿಯ ಪ್ರತಿ ರೂಪಕ್ಕೂ ಅದಕ್ಕೆ ಹೊಂದುವ ಮಹಾಲಕ್ಷ್ಮೀದೇವಿಯ ಸ್ತ್ರೀ ರೂಪ ಉಂಟು. ವಾಸುದೇವ ರೂಪದಲ್ಲಿ ಪರಮಾತ್ಮನಿದ್ದರೆ ಆಗ ಮಾಯಾದೇವಿಯ ರೂಪದಲ್ಲಿ ಲಕ್ಷ್ಮಿ ಇದ್ದಾಳೆ. ಅದಕ್ಕೆ ಮಾಯಾದೇವಿ ಎಂದಿದ್ದಾರೆ).  "ಏನು ಧನ್ಯಳೋ ಲಕುಮಿ ಎಂಥ ಮಾನ್ಯಳೋ" ಎಂಬ ಕೃತಿಯಲ್ಲಿ "ಛತ್ರ ಚಾಮರ ವ್ಯಜನ ಪರ್ಯಂಕ ಪಾತ್ರ ರೂಪದಲ್ಲಿ ಹರಿಯ ನಿತ್ಯ ಸೇವೆ ಮಾಡುವಂಥ" ಎಂದು ಬಣ್ಣಿಸಿದ್ದಾರೆ. ಪ್ರತಿಯೊಂದು ಪಾತ್ರೆ, ಉಪಕರಣ, ಮತ್ತು ಪ್ರಳಯದ ನೀರಿನ ರೂಪದಲ್ಲಿ ಕೂಡ ತಾನೇ ನಿಂತು ಅವನ ಸೇವೆ ಮಾಡುತ್ತಾಳೆ. 

"ಶ್ರೀ ಸೂಕ್ತ" ಈ ತಾಯಿಯ ಆರಾಧನೆಗೇ ಮೀಸಲಾದ ಸ್ತುತಿ. ಪೂಜಾದಿಗಳಲ್ಲಿ ಪ್ರತಿನಿತ್ಯ ಇದರ ಪಾರಾಯಣ ನಡೆಯುತ್ತದೆ. ಋಗ್ವೇದದ ಹತ್ತನೆಯ ಮಂಡಲದ ೧೨೫ನೆಯ ಸೂಕ್ತ "ಅಂಭ್ರಣೀ ಸೂಕ್ತ" ಎಂದು ಹೆಸರುವಾಸಿಯಾಗಿದೆ. ಇದರಲ್ಲಿ ಮಹಾಲಕ್ಷ್ಮಿ ದೇವಿಯ ಅಗಾಧವಾದ ಶಕ್ತಿಗಳ ಬಗ್ಗೆ ವಿವರಿಸಿದ್ದಾರೆ. ಅವಳು ಅನೇಕ ತತ್ವಗಳು, ಸಮಸ್ತ ವೇದ ವೇದಾಂಗಗಳು, ಮೂರು ಗುಣಗಳು (ಸತ್ವ, ರಾಜಸ ಹಾಗೂ ತಮೋಗುಣಗಳು) ಮುಂತಾದವುಗಳಿಗೆ ಅಭಿಮಾನಿ ದೇವತೆ. ಬ್ರಹ್ಮಾದಿ ಸಕಲ ದೇವತೆಗಳಿಗೂ ಅವಳು ನಿಯಾಮಕಳು. ಕೇವಲ ಕುಡಿಗಣ್ಣ ನೋಟದಿಂದ ಸೃಷ್ಟಿ, ಸ್ಥಿತಿ, ಲಯಾದಿ ಕೆಲಸಗಳನ್ನು ಮಾಡುವವಳು ಮತ್ತು ಮಾಡಿಸುವವಳು (ದ್ವಾದಶ ಸ್ತ್ರೋತ್ರದಲ್ಲಿ ಯಸ್ಯ ಅಪಾಂಗಲವಮಾತ್ರಸ ಊರ್ಜಿತಾ ಸಾ ಮುಂತಾದ ವಿವರಣೆಗಳಿವೆ), ಶ್ರೀಹರಿಯು ವಾಮಾನನಾದಾಗ ಬ್ರಹ್ಮಚಾರಿ. ಬೌದ್ಧಾವತಾರದಲ್ಲಿ ಸನ್ಯಾಸಿ. ಆಗಲೂ ಮಹಾಲಕ್ಷ್ಮಿ ಅವನ ಜೊತೆಯಲ್ಲಿಯೇ ಇದ್ದಳು. (ಅದಕ್ಕೇ ಯಾರನ್ನಾದರೂ "ಹೆಂಡತಿಯನ್ನು ತಲೆಯಮೇಲೆ ಕೂಡಿಸಿಕೊಂಡಿದ್ದಾನೆ'" ಎಂದು ಹಾಸ್ಯ ಮಾಡಬಾರದು. ಅಂತಹವರು ಶ್ರೀಹರಿಯ ಮಾದರಿ ಅನುಸರಿಸಿದ್ದಾರೆ ಎಂದು ಗೌರವಿಸಬೇಕು!) ಈ ಅಂಭ್ರಣೀ ಸೂಕ್ತದಲ್ಲಿ ಮಹಾಲಕ್ಷ್ಮಿಯು "ನಾನು ಯಾರನ್ನು ಬೇಕೋ ಅವರನ್ನು ರುದ್ರನನ್ನಾಗಿ, ಬ್ರಹ್ಮನನ್ನಾಗಿಸುವೆ. ಋಷಿಯನ್ನಾಗಿಸುವೆ. ಬುದ್ಧಿಶಾಲಿಯನ್ನಾಗಿಸುವೆ." ಎನ್ನುತ್ತಾಳೆ.  ಅಂದರೆ ಹಾಗೆ ಮಾಡುವ ಶಕ್ತಿ ನನ್ನಲ್ಲಿದೆ ಎಂದು ಅರ್ಥ. "ವರಮಹಾಲಕ್ಷ್ಮಿ ವ್ರತ" ಮಾಡುವಾಗ ಇಷ್ಟೆಲ್ಲಾ ಅನುಸಂಧಾನವಿರಬೇಕು. ಬಹಳ ಚೆನ್ನಾಗಿ ಅಲಂಕಾರ ಮಾಡಿ ಮೊಬೈಲ್ನಲ್ಲಿ ಚಿತ್ರ ತೆಗೆದು ಫೇಸ್ ಬುಕ್ ನಲ್ಲಿ ಹಾಕಿದರೆ ಕೇವಲ ಪಾಸ್ ಮಾರ್ಕ್ಸ್ ಸಿಗಬಹುದಷ್ಟೇ.  

ಶ್ರೀಪುರಂದರದಾಸರ ಪರಂಪರೆಯಲ್ಲಿ ಮುಂದೆ ಬಂದ ಶ್ರೀ ಜಗನ್ನಾಥ ದಾಸರು ತಮ್ಮ "ಹರಿಕಥಾಮೃತಸಾರ" ಎಂಬ ಮೇರು ಕೃತಿಯಲ್ಲಿ ಮಹಾಲಕ್ಷ್ಮಿ ದೇವಿಯ ಬಗ್ಗೆ ಹೀಗೆ ಹೇಳುತ್ತಾರೆ:

ಜಗದುದರನತಿ ವಿಮಲ ಗುಣ 
ರೂಪಗಳನಾಲೋಚನದಿ ಭಾರತ 
ನಿಗಮತತಿಗಳತಿಕ್ರಮಿಸಿ ಕ್ರಿಯಾವಿಶೇಷಗಳ 
ಬಗೆಬಗೆಯ ನೂತನವ ಕಾಣುತ 
ಮಿಗೆ ಹರುಷದಿಂ ಪೊಗಳಿ ಹಿಗ್ಗುವ 
ತ್ರಿಗುಣಮಾನಿ ಮಹಾಲಕುಮಿ ಸಂತೈಸಲನುದಿನವು 

ಮಹಾಲಕ್ಷ್ಮೀದೇವಿಯು ನಮಗೆ ಬಹಳ ಹತ್ತಿರದವಳು. ನಮ್ಮ ಕೈಗಳ ಮುಂದೆಯೇ ಇದ್ದಾಳೆ. ಅದಕ್ಕೆ ಬೆಳಿಗ್ಗೆ ಎದ್ದ ತಕ್ಷಣ ಕೈಗಳನ್ನು ನೋಡಿಕೊಂಡು "ಕರಾಗ್ರೇ ವಸತೇ ಲಕ್ಷ್ಮೀ" ಎನ್ನುತ್ತೇವೆ. ನಾವು ಮಾಡುವ ಪೂಜೆ ಪುನಸ್ಕಾರಗಳೆಲ್ಲ ಅವಳ ಮೂಲಕವೇ ಮುಂದೆ ಹೋಗಬೇಕು. ಏನನ್ನು ಕೊಡಬೇಕಾದರೂ ಕೈಮೂಲಕವೇ ಕೊಡಬೇಕು ತಾನೇ?

ಮಹಾಲಕ್ಷ್ಮಿ ದೇವಿಯಿಲ್ಲದೆ ಶ್ರೀಹರಿಯಿಲ್ಲ. ಶ್ರೀಹರಿಯಿಲ್ಲದೇ ಮಹಾಲಕ್ಷ್ಮಿಯಿಲ್ಲ. ಎಲ್ಲರಿಗೂ ಎಲ್ಲ ಸಂಪತ್ತುಗಳನ್ನೂ ಕೊಡುವವಳು ಅವಳು. ಅವಳು ಕೊಟ್ಟರೆ ಉಂಟು. ಇಲ್ಲದಿದ್ದರೆ ಇಲ್ಲ. ಕಟ್ಟ ಕಡೆಗೆ ಜೀವನಿಗೆ ವಿರಿಜಾ ನದಿಯಲ್ಲಿ ಮುಳುಗಿಸಿ ಮುಕ್ತಿಗೆ ಕೊಂಡೊಯ್ಯುವವಳೂ ಅವಳೇ. ಆದ್ದರಿಂದ "ಇಂದಿರಾರಾಮಣ" ಎಂದು ಸೂಚಿಸಿದ್ದಾರೆ. ಸದ್ಯಕ್ಕೆ ಇಷ್ಟು ಸಾಕು. 

*****

"ಎಂದೆಂದೂ ವಾಸಿಪನು ಮಂದಿರದ ಒಳಗೆ" ಎನ್ನುವುದು ಮುಂದಿನದು. ಮಂದಿರ ಅಂದರೆ ದೇವಸ್ಥಾನ ಎಂದು ಎಲ್ಲರಿಗೂ ಗೊತ್ತು. ಈಚೆಗೆ "ರಾಮಮಂದಿರ" ಅಯೋಧ್ಯೆಯಲ್ಲಿ ನಿರ್ಮಾಣ ಆಯಿತು. ದರ್ಶನಕ್ಕೆ ಅನೇಕ ಮಂದಿರಗಳಿಗೆ ಹೋಗುತ್ತೇವೆ. ಮಂದಿರ ಅಂದರೆ ಮನೆ ಎನ್ನುವುದು ಸಾಮಾನ್ಯ ಅರ್ಥ. ಅದನ್ನೇ ಗೌರವಯುತವಾಗಿ ಹೇಳಿದಾಗ ಮಂದಿರ ಆಗುತ್ತದೆ. "ಹೂವ ತರುವರ ಮನೆಗೆ ಹುಲ್ಲ ತರುವ ಶ್ರೀಕೃಷ್ಣನು ಮಂದರದ ಒಳಗೆ ಎಂದೆಂದೂ ವಾಸಿಸುತ್ತಾನೆ" ಎಂದು ಹೇಳುವುದರಲ್ಲಿ ಏನು ವಿಶೇಷ? ಒಮ್ಮೆ ಪ್ರಾಣ ಪ್ರತಿಷ್ಠಾಪನೆ ಆದಮೇಲೆ ಆ ಮಂದಿರಗಳ ಒಳಗೆ ಎಂದೆಂದೂ ಇರಲೇಬೇಕಲ್ಲ! ಇಷ್ಟು ಮಾಡಲು ಹಿಂದಿನ ಸಂಚಿಕೆಯಲ್ಲಿ ಹೇಳಿದಂತೆ ಪರೀಕ್ಷೆಯಲ್ಲಿ ರಾಂಕ್ ಪಡೆಯಬೇಕೆ? ಇದು ಒಂದು ಮುಖ್ಯವಾದ ಪ್ರಶ್ನೆ. 

ಸರಿಯಾದ ರೀತಿಯಲ್ಲಿ ಗುಡಿ ಕಟ್ಟಿ, ಮೂರ್ತಿ ಸ್ಥಾಪಿಸಿ ಪ್ರಾಣಪ್ರತಿಷ್ಠೆ ಮಾಡಿದರೆ ಅಲ್ಲಿ ಆ ದೇವತೆ ಅಥವಾ ದೇವರು ವಾಸಿಸುವದರಲ್ಲಿ ಹೆಚ್ಚಿನದೇನೂ ಇಲ್ಲ. ವೈಯುಕ್ತಿಕವಾಗಿ ನಾವು ಯಾರಾದರೂ ಹೋದರೂ, ಹೋಗದಿದ್ದರೂ ಆ ಕೆಲಸ ಆಗಿಯೇಹೋಗುತ್ತದೆ. ಇಲ್ಲಿ ಮಂದಿರದ ಒಳಗೆ ಎಂದರೆ "ನಮ್ಮ ಹೃದಯ ಮಂದಿರ" ಎಂದು ತಿಳಿಯಬೇಕು. ಸಾರ್ವಜನಿಕವಾದ ಮಂದಿರದಲ್ಲಿ ಅವನು ವಾಸಿಸುವ ಕೆಲಸವನ್ನು ಯಾರೋ ಅಥವಾ ಎಲ್ಲರೂ ಸೇರಿ ಮಾಡುತ್ತಾರೆ. ಆದರೆ ನಮ್ಮ ಹೃದಯ ಮಂದಿರದಲ್ಲಿ ಅವನು ವಾಸಿಸಬೇಕಾದರೆ ಮತ್ಯಾರೋ ಏನು ಮಾಡಿದರೂ ಆಗುವುದಿಲ್ಲ. ನಮ್ಮ ಹೊಟ್ಟೆ ತುಂಬಬೇಕಾದರೆ  ನಾವೇ ಊಟ ಮಾಡಬೇಕು. "ಪವರ್ ಆಫ್ ಅಟಾರ್ನಿ" ಕೊಟ್ಟು ಮಾಡಿಸುವಂತಿಲ್ಲ. ಶ್ರೀಕೃಷ್ಹ್ನನು ನಮ್ಮ ಹೃದಯ ಮಂದಿರದಲ್ಲಿ ವಾಸಿಸಬೇಕಾದರೆ ಹಿಂದಿನ ಸಂಚಿಕೆಯಲ್ಲಿ ಹೇಳಿದ ಎಲ್ಲ ಕೆಲಸ ನಾವೇ ಮಾಡಬೇಕು. ಕೆಲವು ಕಡೆಗಳಲ್ಲಿ ಪರಿಕ್ಷೆಗಳಲ್ಲಿ ವಿದ್ಯಾರ್ಥಿಯ ಬದಲು ಮತ್ಯಾರೋ ಪರೀಕ್ಷೆ ಬರೆದರು ಎಂದು ಕೇಳುತ್ತೇವೆ. ಇಲ್ಲಿ ಆ ರೀತಿ ಮಾಡಲು ಸಾಧ್ಯವಿಲ್ಲ. ಇದನ್ನೇ "ವಾಸಿಪನು ಮಂದಿರದ ಒಳಗೆ" ಎಂದರೆ ನಮ್ಮ ಹೃದಯ ಮಂದಿರದಲ್ಲಿ ಬಂದು, ನಿಂತು, ವಾಸಿಸುತ್ತಾನೆ" ಎಂದು ಸೂಚಿಸಿದ್ದಾರೆ. 

ಆಯಿತು. ಒಪ್ಪಿಕೊಳ್ಳೋಣ. "ವಾಸಿಪನು ಮಂದಿರದ ಒಳಗೆ" ಎನ್ನುವುದರ ಒಳಗೆ "ಎಂದೆಂದೂ" ಎಂದೇಕೆ ಹೇಳಿದ್ದಾರೆ? ಅನೇಕ ಡಿಗ್ರಿ ಪರೀಕ್ಷೆಗಳಲ್ಲಿ ಪಾಸ್ ಮಾಡಿದ ನಂತರ ಯಾವುದೂ ಒಂದು ಸಂಸ್ಥೆಯ ಸದಸ್ಯತ್ವ ಪಡೆದ ಮೇಲೆ ಅವಧಿಯಂತೆ, ಸಾಮಾನ್ಯವಾಗಿ ಪ್ರತಿ ವರುಷ, ಆ ಸದಸ್ಯತ್ವವನ್ನು ನವೀಕರಿಸಬೇಕು. "ಡ್ರೈವಿಂಗ್ ಲೈಸನ್ಸ್" ಉದಾಹರಣೆ ತೆಗೆದುಕೊಳ್ಳಬಹುದು. ಡ್ರೈವಿಂಗ್ ಪರೀಕ್ಷೆ ಪಾಸ್ ಮಾಡಿ ಲೈಸನ್ಸ್  ಪಡೆದಿದ್ದಾಯಿತು. ಅದರ ಅವಧಿ ಮುಗಿಯುವ ಒಳಗೆ ಮತ್ತೆ ನವೀಕರಿಸಬೇಕು. ಇಲ್ಲದಿದ್ದರೆ ಅದು "ಲ್ಯಾಪ್ಸ್"" ಆಯಿತು ಅನ್ನುತ್ತೇವೆ. ಹೃದಯ ಮಂದಿರದ ಒಳಗೆ ಬಂದು ನೆಲಿಸಿದ ಪರಮಾತ್ಮನು ಮತ್ತೆ ಹೊರಟುಹೋಗಬಾರದು. ಅದಕ್ಕೆ ಎಂದೆಂದೂ ನೆಲೆಸುವನು ಎನ್ನುವುದು. 

ಇಷ್ಟೆಲ್ಲಾ ಕಸರತ್ತು ಮಾಡಿದರೆ ಮಾತ್ರ ಅವನು ನಮ್ಮ ಹೃದಯ ಮಂದಿರದಲ್ಲಿ ನೆಲೆಸುವನೇ? ಇಲ್ಲದಿದ್ದರೆ ಇಲ್ಲವೇ? ಈ ಪ್ರಶ್ನೆ ಸಹಜ. ಪ್ರತಿ ಜೀವಿಯು ಹುಟ್ಟುವಾಗಲೇ ಆ ಜೀವಿಯಜೊತೆಗೆ ಅವನೂ ಹುಟ್ಟುತ್ತಾನೆ. ಮೊದಲೆನೆಯ ಶ್ವಾಸದೊಂದಿಗೆ ಪ್ರಾಣವಾಯುವೂ ಮತ್ತು ಪರಮಾತ್ಮನೂ ಜೀವಿಯ ದೇಹವನ್ನು ಪ್ರವೇಶಿಸುತ್ತಾರೆ. ಅವರಿರುವವರೆಗೆ ಜೀವಿಯ ಜೀವನ. ಅವರು ಹೊರೆಟ ಒಡನೆ ಆ ದೇಹ ನಿರ್ಜೀವ. "ನೆಂಟನಗಲಿದ ಬಳಿಕ ಒಣಹೆಂಟೆಯಲಿ ಮುಚ್ಚುವರು" ಎಂದು ಇದನ್ನೇ ಶ್ರೀಕನಕದಾಸರು "ಶ್ರೀ ಹರಿಭಕ್ತಿಸಾರ"ದಲ್ಲಿ ಹೇಳಿರುವುದು. ಶ್ರೀ ಪುರಂದರದಾಸರೇ "ಆರು ಹಿತವರು ನಿನಗೆ ಈ ಮೂವರೊಳಗೆ" ಕೃತಿಯಲ್ಲಿ ಹೇಳುತ್ತಾರೆ:

ಮುನ್ನ ಶತಕೋಟಿ ರಾಯರುಗಳಾಳಿದಾ ನೆಲವ 
ತನ್ನದೆಂದೆನುತ ಶಾಸನವ ಬರೆಸಿ 
ಬಿನ್ನಣದ ಮನೆ ಕಟ್ಟಿ ಕೋಟೆ ಕೊತ್ತಳವಿಕ್ಕಿ
ಚೆನ್ನಿಗನ ಅಸುವಳಿಯೆ ಹೊರಗೆ ಹಾಕುವರು 

ಹಾಗಿದ್ದರೆ ಅವನು ಹೇಗೂ ಹೃದಯಮಂದಿರದ ಒಳಗಿದ್ದೇಯಿದ್ದಾನೆ! ಮತ್ತೇಕೆ ಚಿಂತೆ? ಹಾಗಲ್ಲ. ನಮ್ಮ ಬಳಿ ಒಂದು ಅಮೂಲ್ಯ ರತ್ನಾಭರಣವಿದೆ. ಅದು ನಮ್ಮದೇ ಪೆಟ್ಟಿಗೆಯಲ್ಲಿದೆ. ಪೆಟ್ಟಿಗೆ ಯಾವಾಗಲೂ ನಮ್ಮ ಬಳಿಯೇ ಇದೆ. ಆದರೆ ಅದಕ್ಕೆ ಬೀಗ ಹಾಕಿದೆ. ಸುತ್ತ ಕತ್ತಲು ಕವಿದಿದೆ. ಅದನ್ನು ನೋಡಲು, ಸಂತೋಷಪಡಲು, ಉಪಯೋಗಿಸಲು ಬೀಗದಕೈ ಬೇಕು. ಬೆಳಕು ಬೇಕು.  ಅದಕ್ಕೇ ಈ ಎಲ್ಲ ಕಸರತ್ತು. ಇಲ್ಲದಿದ್ದರೆ ಆ ಬಹು ಬೆಲೆಬಾಳುವ ಆದರೆ ಅತಿ ಭಾರದ ಪೆಟ್ಟಿಗೆ ಹೊತ್ತುಕೊಂಡು ತಿರುಗುತ್ತ, ಅಂತಹ ಶ್ರೀಮಂತಿಕೆ ಇದ್ದರೂ ಅದರ ಇರುವಿಕೆ ಗೊತ್ತಿಲ್ಲದೇ ಭಿಕ್ಷೆ ಬೇಡಿದಂತೆ ನಮ್ಮ ಪಾಡು. ಹಾಗಾಗಬಾರದು. ಎಂದೆಂದೂ ಹೃದಯ ಮಂದಿರದಲ್ಲಿ ಇರುವ ಅವನು ನಮಗೆ ಪ್ರತಿಕ್ಷಣವೂ ಕಾಣುತ್ತಿರಬೇಕು. ಇದನ್ನೇ "ಎಂದೆಂದೂ ವಾಸಿಪನು ಹೃದಯ ಮಂದಿರದ ಒಳಗೆ" ಎನ್ನುವುದು ಸೂಚಿಸುತ್ತದೆ. 

*****

ದ್ರಾಕ್ಷಿಯ ಗೊಂಚಲಿನ ಪ್ರತಿ ದ್ರಾಕ್ಷಿಯಲ್ಲಿ ಸಿಹಿ ರಸ ತುಂಬಿದೆ. ರಸ ಸಿಗಬೇಕಾದರೆ ಪ್ರತಿ ದ್ರಾಕ್ಷಿಯನ್ನೂ  ಜಗಿದು ನುಂಗಬೇಕು. ಆಗ ರಸದ ಪರಮಾವಧಿ ನಮಗೆ ಸಿಗುತ್ತದೆ. "ಅಯ್ಯೋ, ಎಷ್ಟು ಜಗಿಯುವುದು? ಬೇಜಾರು." ಎಂದು ನುಂಗುತ್ತಾ ಹೋದರೆ ನಷ್ಟ ನಮಗೇ.  ದ್ರಾಕ್ಷಿ ಬೆಳೆದ ರೈತನಿಗಲ್ಲ. ನಮ್ಮವರೆಗೂ ತಂದುಕೊಟ್ಟವರಿಗೂ ಅಲ್ಲ. 

ಸರಣಿ ದೀರ್ಘವಾಯಿತು. ಇನ್ನೂ "ಪರಿಪೂರ್ಣ", "ಸಕಲ ಸ್ವಾತಂತ್ರ್ಯ", "ಅರಮನೆಯಒಳಗೆ ಸರೀಭಾಗ" ಮತ್ತು ತೊಂಡರಿಗೆ ತೊಂಡನಾಗಿ ಸಂಚರಿಸುತಿಹನು" ಉಳಿದಿದೆ. ಇವನ್ನು ಮುಂದೆ ನೋಡೋಣ.