Showing posts with label Pooje. Show all posts
Showing posts with label Pooje. Show all posts

Wednesday, December 11, 2024

ಇಂದಿರಾರಮಣನ ಮಂದಿರದ ಒಳಗೆ


ಶ್ರೀ ಪುರಂದರದಾಸರ "ಹೂವ ತರುವರ ಮನೆಗೆ ಹುಲ್ಲ ತರುವ" ಪದದ ವಿಶೇಷಾರ್ಥಗಳ ಹಿಂದೆ ಬಿದ್ದು ಕಳೆದ ಸಂಚಿಕೆಯಲ್ಲಿ "ಪರಿಪರಿಯ ಪುಷ್ಪಗಳು" ಎನ್ನುವವರೆಗೆ ಬಂದಿದ್ದೆವು. (ಇದನ್ನು ಓದಲು ಇಲ್ಲಿ ಕ್ಲಿಕ್ ಮಾಡಿ) ಈಗ ಮುಂದಿನ ಎರಡು ಪದಗುಚ್ಛಗಳಾದ "ಇಂದಿರಾರಮಣಗೆ" ಮತ್ತು "ಮಂದಿರದ ಒಳಗೆ" ಎನ್ನುವ ಬಗ್ಗೆ ನೋಡೋಣ. 

ದಾಸರ ಪದದ ಉದ್ದೇಶ್ಯ ಹೂವು ತರುವರ ಮನೆಗೆ ಹುಲ್ಲ ತರುವವನ ಬಗ್ಗೆ ಹೇಳುವುದು. ಇಲ್ಲಿ "ಇಂದಿರಾರಮಣ" ಎಂದು ಸಂಬೋಧಿಸುವ ಅಗತ್ಯವೇನು? ಶ್ರೀಹರಿಯ ಅನಂತ ಹೆಸರುಗಳಲ್ಲಿ ಬೇರೆ ಯಾವುದಾದರೂ ಉಪಯೋಗಿಸಬಹುದಿತ್ತಲ್ಲ? ಒಂದು ಸರ್ಕಾರೀ ಕೆಲಸಕ್ಕೆ ಅರ್ಜಿ ಹಾಕಿದರೆ ಅರ್ಜಿ ಪತ್ರದಲ್ಲಿ "ಎರಡು ಗುರುತಿನ ಚಿಹ್ನೆಗಳು" ಎಂದು ಒಂದು ಕಾಲಂ ಇರುತ್ತದೆ. ಅಲ್ಲಿ "ಎಡಗೆನ್ನೆಯ ಮೇಲೆ ಒಂದು ಕಪ್ಪು ಚುಕ್ಕೆ" ಮತ್ತು "ಬಲಗಾಲಿನ ಮೇಲೆ ಒಂದು ಗಾಯದ ಮಚ್ಚೆ", ಅಥವಾ ಈ ರೀತಿಯ ಗುರುತುಗಳನ್ನು ಬರೆಯಬಹುದು. ಇದು ಒಂದು ಉದಾಹರಣೆ. ಹಾಗೆ ಶ್ರೀಹರಿ ಏನಾದರೂ ಕೆಲಸಕ್ಕೆ ಅರ್ಜಿ ಹಾಕಿದರೆ ಏನು ಬರೆಯಬಹುದು ಎಂದು ಯೋಚಿಸಿದರೆ ಅವನ ಅನೇಕ ಪರಿಚಯದ ನಡುವೆ ಅತ್ಯಂತ ಸುಲಭದ ಗುರುತುಗಳು ಅವನ ಹೆಂಡತಿ ಮತ್ತು ಅವನ ಭಂಟ. ಇವರಿಲ್ಲದೆ ಅವನಿಲ್ಲ. ಅಥವಾ ಅವನಿರುವೆಡೆಯೆಲ್ಲಾ ಇವರಿಬ್ಬರಿದ್ದಾರೆ! ಅದಕ್ಕೆ ಅವನನ್ನು ನೆನಸುವವಕ್ಕೆ ಇವರಿಬ್ಬರ ಮೊರೆ ಹೋಗುತ್ತಾರೆ. ಯಾವುದಾದರೂ ಗುಂಪಿನಲ್ಲಿ (ತಿರುಪತಿ ಬೆಟ್ಟದ ಮೇಲೆ ಮಾತ್ರವಲ್ಲ) "ಇಂದಿರಾರಮಣ" ಅಥವಾ "ಆಂಜನೇಯವರದ" ಎನ್ನಿ. ಹಲವಾರು ಮಂದಿ ಎಲ್ಲೆಲ್ಲಿಂದಲೋ "ಗೋವಿಂದಾ " ಎನ್ನುತ್ತಾರೆ. (ಇದರ ಬಗ್ಗೆ ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ). ಪರಮಾತ್ಮನ ಅತಿ ಸುಲಭ ಗುರುತುಗಳಲ್ಲಿ ಇವು ಅತಿ ಮುಖ್ಯ. ಅದರಲ್ಲೂ ಈ "ಇಂದಿರಾರಮಣ" ಎನ್ನುವುದು. ಇದರ ವಿಶೇಷವೇನು?

ಶ್ರೀಪುರಂದರದಾಸರು ಮಾಧ್ವ ಸಂಪ್ರದಾಯದ ಪರಂಪರೆಗೆ ಸೇರಿದವರು. ಈ ಪರಂಪರೆಯಲ್ಲಿ ಶ್ರೀಮನ್ನಾರಾಯಣನ ನಂತರದ ಸ್ಥಾನ ಮಹಾಲಕ್ಷ್ಮಿ ದೇವಿಗೆ. ಮತ್ತೆಲ್ಲ ಜೀವರು ಮಹಾಪ್ರಳಯ ಕಾಲದಲ್ಲಿ ಪರಮಾತ್ಮನ ಉದರದಲ್ಲಿ ಗಾಢ ನಿದ್ರೆಯಲ್ಲಿದ್ದರೂ  ಮಹಾಲಕ್ಷ್ಮಿ ಮಾತ್ರ ಜೊತೆಗೆ ಇರುತ್ತಾಳೆ. "ಮರುಳು ಮಾಡಿಕೊಂಡೆಯಲ್ಲೇ ಮಾಯಾದೇವಿಯೇ" ಎನ್ನುವ ಕೃತಿಯಲ್ಲಿ "ಪ್ರಳಯಕಾಲದಲ್ಲಿ ಆಲದೆಲೆಯ ಮೇಲೆ ಮಲಗಿದಾಗ ಹಲವು ಆಭರಣಗಳು ಜಲವು ಆಗಿ ಜಾಣತನದಿ, ಇರಳು ಹಗಲು ಏಕವಾಗಿ ಹರಿಯು ನಿನ್ನ ಬಿಡದಿರ್ಪ೦ತೆ" ಎಂದು ಸೂಚಿಸಿದ್ದಾರೆ. (ಶ್ರೀಹರಿಯ ಪ್ರತಿ ರೂಪಕ್ಕೂ ಅದಕ್ಕೆ ಹೊಂದುವ ಮಹಾಲಕ್ಷ್ಮೀದೇವಿಯ ಸ್ತ್ರೀ ರೂಪ ಉಂಟು. ವಾಸುದೇವ ರೂಪದಲ್ಲಿ ಪರಮಾತ್ಮನಿದ್ದರೆ ಆಗ ಮಾಯಾದೇವಿಯ ರೂಪದಲ್ಲಿ ಲಕ್ಷ್ಮಿ ಇದ್ದಾಳೆ. ಅದಕ್ಕೆ ಮಾಯಾದೇವಿ ಎಂದಿದ್ದಾರೆ).  "ಏನು ಧನ್ಯಳೋ ಲಕುಮಿ ಎಂಥ ಮಾನ್ಯಳೋ" ಎಂಬ ಕೃತಿಯಲ್ಲಿ "ಛತ್ರ ಚಾಮರ ವ್ಯಜನ ಪರ್ಯಂಕ ಪಾತ್ರ ರೂಪದಲ್ಲಿ ಹರಿಯ ನಿತ್ಯ ಸೇವೆ ಮಾಡುವಂಥ" ಎಂದು ಬಣ್ಣಿಸಿದ್ದಾರೆ. ಪ್ರತಿಯೊಂದು ಪಾತ್ರೆ, ಉಪಕರಣ, ಮತ್ತು ಪ್ರಳಯದ ನೀರಿನ ರೂಪದಲ್ಲಿ ಕೂಡ ತಾನೇ ನಿಂತು ಅವನ ಸೇವೆ ಮಾಡುತ್ತಾಳೆ. 

"ಶ್ರೀ ಸೂಕ್ತ" ಈ ತಾಯಿಯ ಆರಾಧನೆಗೇ ಮೀಸಲಾದ ಸ್ತುತಿ. ಪೂಜಾದಿಗಳಲ್ಲಿ ಪ್ರತಿನಿತ್ಯ ಇದರ ಪಾರಾಯಣ ನಡೆಯುತ್ತದೆ. ಋಗ್ವೇದದ ಹತ್ತನೆಯ ಮಂಡಲದ ೧೨೫ನೆಯ ಸೂಕ್ತ "ಅಂಭ್ರಣೀ ಸೂಕ್ತ" ಎಂದು ಹೆಸರುವಾಸಿಯಾಗಿದೆ. ಇದರಲ್ಲಿ ಮಹಾಲಕ್ಷ್ಮಿ ದೇವಿಯ ಅಗಾಧವಾದ ಶಕ್ತಿಗಳ ಬಗ್ಗೆ ವಿವರಿಸಿದ್ದಾರೆ. ಅವಳು ಅನೇಕ ತತ್ವಗಳು, ಸಮಸ್ತ ವೇದ ವೇದಾಂಗಗಳು, ಮೂರು ಗುಣಗಳು (ಸತ್ವ, ರಾಜಸ ಹಾಗೂ ತಮೋಗುಣಗಳು) ಮುಂತಾದವುಗಳಿಗೆ ಅಭಿಮಾನಿ ದೇವತೆ. ಬ್ರಹ್ಮಾದಿ ಸಕಲ ದೇವತೆಗಳಿಗೂ ಅವಳು ನಿಯಾಮಕಳು. ಕೇವಲ ಕುಡಿಗಣ್ಣ ನೋಟದಿಂದ ಸೃಷ್ಟಿ, ಸ್ಥಿತಿ, ಲಯಾದಿ ಕೆಲಸಗಳನ್ನು ಮಾಡುವವಳು ಮತ್ತು ಮಾಡಿಸುವವಳು (ದ್ವಾದಶ ಸ್ತ್ರೋತ್ರದಲ್ಲಿ ಯಸ್ಯ ಅಪಾಂಗಲವಮಾತ್ರಸ ಊರ್ಜಿತಾ ಸಾ ಮುಂತಾದ ವಿವರಣೆಗಳಿವೆ), ಶ್ರೀಹರಿಯು ವಾಮಾನನಾದಾಗ ಬ್ರಹ್ಮಚಾರಿ. ಬೌದ್ಧಾವತಾರದಲ್ಲಿ ಸನ್ಯಾಸಿ. ಆಗಲೂ ಮಹಾಲಕ್ಷ್ಮಿ ಅವನ ಜೊತೆಯಲ್ಲಿಯೇ ಇದ್ದಳು. (ಅದಕ್ಕೇ ಯಾರನ್ನಾದರೂ "ಹೆಂಡತಿಯನ್ನು ತಲೆಯಮೇಲೆ ಕೂಡಿಸಿಕೊಂಡಿದ್ದಾನೆ'" ಎಂದು ಹಾಸ್ಯ ಮಾಡಬಾರದು. ಅಂತಹವರು ಶ್ರೀಹರಿಯ ಮಾದರಿ ಅನುಸರಿಸಿದ್ದಾರೆ ಎಂದು ಗೌರವಿಸಬೇಕು!) ಈ ಅಂಭ್ರಣೀ ಸೂಕ್ತದಲ್ಲಿ ಮಹಾಲಕ್ಷ್ಮಿಯು "ನಾನು ಯಾರನ್ನು ಬೇಕೋ ಅವರನ್ನು ರುದ್ರನನ್ನಾಗಿ, ಬ್ರಹ್ಮನನ್ನಾಗಿಸುವೆ. ಋಷಿಯನ್ನಾಗಿಸುವೆ. ಬುದ್ಧಿಶಾಲಿಯನ್ನಾಗಿಸುವೆ." ಎನ್ನುತ್ತಾಳೆ.  ಅಂದರೆ ಹಾಗೆ ಮಾಡುವ ಶಕ್ತಿ ನನ್ನಲ್ಲಿದೆ ಎಂದು ಅರ್ಥ. "ವರಮಹಾಲಕ್ಷ್ಮಿ ವ್ರತ" ಮಾಡುವಾಗ ಇಷ್ಟೆಲ್ಲಾ ಅನುಸಂಧಾನವಿರಬೇಕು. ಬಹಳ ಚೆನ್ನಾಗಿ ಅಲಂಕಾರ ಮಾಡಿ ಮೊಬೈಲ್ನಲ್ಲಿ ಚಿತ್ರ ತೆಗೆದು ಫೇಸ್ ಬುಕ್ ನಲ್ಲಿ ಹಾಕಿದರೆ ಕೇವಲ ಪಾಸ್ ಮಾರ್ಕ್ಸ್ ಸಿಗಬಹುದಷ್ಟೇ.  

ಶ್ರೀಪುರಂದರದಾಸರ ಪರಂಪರೆಯಲ್ಲಿ ಮುಂದೆ ಬಂದ ಶ್ರೀ ಜಗನ್ನಾಥ ದಾಸರು ತಮ್ಮ "ಹರಿಕಥಾಮೃತಸಾರ" ಎಂಬ ಮೇರು ಕೃತಿಯಲ್ಲಿ ಮಹಾಲಕ್ಷ್ಮಿ ದೇವಿಯ ಬಗ್ಗೆ ಹೀಗೆ ಹೇಳುತ್ತಾರೆ:

ಜಗದುದರನತಿ ವಿಮಲ ಗುಣ 
ರೂಪಗಳನಾಲೋಚನದಿ ಭಾರತ 
ನಿಗಮತತಿಗಳತಿಕ್ರಮಿಸಿ ಕ್ರಿಯಾವಿಶೇಷಗಳ 
ಬಗೆಬಗೆಯ ನೂತನವ ಕಾಣುತ 
ಮಿಗೆ ಹರುಷದಿಂ ಪೊಗಳಿ ಹಿಗ್ಗುವ 
ತ್ರಿಗುಣಮಾನಿ ಮಹಾಲಕುಮಿ ಸಂತೈಸಲನುದಿನವು 

ಮಹಾಲಕ್ಷ್ಮೀದೇವಿಯು ನಮಗೆ ಬಹಳ ಹತ್ತಿರದವಳು. ನಮ್ಮ ಕೈಗಳ ಮುಂದೆಯೇ ಇದ್ದಾಳೆ. ಅದಕ್ಕೆ ಬೆಳಿಗ್ಗೆ ಎದ್ದ ತಕ್ಷಣ ಕೈಗಳನ್ನು ನೋಡಿಕೊಂಡು "ಕರಾಗ್ರೇ ವಸತೇ ಲಕ್ಷ್ಮೀ" ಎನ್ನುತ್ತೇವೆ. ನಾವು ಮಾಡುವ ಪೂಜೆ ಪುನಸ್ಕಾರಗಳೆಲ್ಲ ಅವಳ ಮೂಲಕವೇ ಮುಂದೆ ಹೋಗಬೇಕು. ಏನನ್ನು ಕೊಡಬೇಕಾದರೂ ಕೈಮೂಲಕವೇ ಕೊಡಬೇಕು ತಾನೇ?

ಮಹಾಲಕ್ಷ್ಮಿ ದೇವಿಯಿಲ್ಲದೆ ಶ್ರೀಹರಿಯಿಲ್ಲ. ಶ್ರೀಹರಿಯಿಲ್ಲದೇ ಮಹಾಲಕ್ಷ್ಮಿಯಿಲ್ಲ. ಎಲ್ಲರಿಗೂ ಎಲ್ಲ ಸಂಪತ್ತುಗಳನ್ನೂ ಕೊಡುವವಳು ಅವಳು. ಅವಳು ಕೊಟ್ಟರೆ ಉಂಟು. ಇಲ್ಲದಿದ್ದರೆ ಇಲ್ಲ. ಕಟ್ಟ ಕಡೆಗೆ ಜೀವನಿಗೆ ವಿರಿಜಾ ನದಿಯಲ್ಲಿ ಮುಳುಗಿಸಿ ಮುಕ್ತಿಗೆ ಕೊಂಡೊಯ್ಯುವವಳೂ ಅವಳೇ. ಆದ್ದರಿಂದ "ಇಂದಿರಾರಾಮಣ" ಎಂದು ಸೂಚಿಸಿದ್ದಾರೆ. ಸದ್ಯಕ್ಕೆ ಇಷ್ಟು ಸಾಕು. 

*****

"ಎಂದೆಂದೂ ವಾಸಿಪನು ಮಂದಿರದ ಒಳಗೆ" ಎನ್ನುವುದು ಮುಂದಿನದು. ಮಂದಿರ ಅಂದರೆ ದೇವಸ್ಥಾನ ಎಂದು ಎಲ್ಲರಿಗೂ ಗೊತ್ತು. ಈಚೆಗೆ "ರಾಮಮಂದಿರ" ಅಯೋಧ್ಯೆಯಲ್ಲಿ ನಿರ್ಮಾಣ ಆಯಿತು. ದರ್ಶನಕ್ಕೆ ಅನೇಕ ಮಂದಿರಗಳಿಗೆ ಹೋಗುತ್ತೇವೆ. ಮಂದಿರ ಅಂದರೆ ಮನೆ ಎನ್ನುವುದು ಸಾಮಾನ್ಯ ಅರ್ಥ. ಅದನ್ನೇ ಗೌರವಯುತವಾಗಿ ಹೇಳಿದಾಗ ಮಂದಿರ ಆಗುತ್ತದೆ. "ಹೂವ ತರುವರ ಮನೆಗೆ ಹುಲ್ಲ ತರುವ ಶ್ರೀಕೃಷ್ಣನು ಮಂದರದ ಒಳಗೆ ಎಂದೆಂದೂ ವಾಸಿಸುತ್ತಾನೆ" ಎಂದು ಹೇಳುವುದರಲ್ಲಿ ಏನು ವಿಶೇಷ? ಒಮ್ಮೆ ಪ್ರಾಣ ಪ್ರತಿಷ್ಠಾಪನೆ ಆದಮೇಲೆ ಆ ಮಂದಿರಗಳ ಒಳಗೆ ಎಂದೆಂದೂ ಇರಲೇಬೇಕಲ್ಲ! ಇಷ್ಟು ಮಾಡಲು ಹಿಂದಿನ ಸಂಚಿಕೆಯಲ್ಲಿ ಹೇಳಿದಂತೆ ಪರೀಕ್ಷೆಯಲ್ಲಿ ರಾಂಕ್ ಪಡೆಯಬೇಕೆ? ಇದು ಒಂದು ಮುಖ್ಯವಾದ ಪ್ರಶ್ನೆ. 

ಸರಿಯಾದ ರೀತಿಯಲ್ಲಿ ಗುಡಿ ಕಟ್ಟಿ, ಮೂರ್ತಿ ಸ್ಥಾಪಿಸಿ ಪ್ರಾಣಪ್ರತಿಷ್ಠೆ ಮಾಡಿದರೆ ಅಲ್ಲಿ ಆ ದೇವತೆ ಅಥವಾ ದೇವರು ವಾಸಿಸುವದರಲ್ಲಿ ಹೆಚ್ಚಿನದೇನೂ ಇಲ್ಲ. ವೈಯುಕ್ತಿಕವಾಗಿ ನಾವು ಯಾರಾದರೂ ಹೋದರೂ, ಹೋಗದಿದ್ದರೂ ಆ ಕೆಲಸ ಆಗಿಯೇಹೋಗುತ್ತದೆ. ಇಲ್ಲಿ ಮಂದಿರದ ಒಳಗೆ ಎಂದರೆ "ನಮ್ಮ ಹೃದಯ ಮಂದಿರ" ಎಂದು ತಿಳಿಯಬೇಕು. ಸಾರ್ವಜನಿಕವಾದ ಮಂದಿರದಲ್ಲಿ ಅವನು ವಾಸಿಸುವ ಕೆಲಸವನ್ನು ಯಾರೋ ಅಥವಾ ಎಲ್ಲರೂ ಸೇರಿ ಮಾಡುತ್ತಾರೆ. ಆದರೆ ನಮ್ಮ ಹೃದಯ ಮಂದಿರದಲ್ಲಿ ಅವನು ವಾಸಿಸಬೇಕಾದರೆ ಮತ್ಯಾರೋ ಏನು ಮಾಡಿದರೂ ಆಗುವುದಿಲ್ಲ. ನಮ್ಮ ಹೊಟ್ಟೆ ತುಂಬಬೇಕಾದರೆ  ನಾವೇ ಊಟ ಮಾಡಬೇಕು. "ಪವರ್ ಆಫ್ ಅಟಾರ್ನಿ" ಕೊಟ್ಟು ಮಾಡಿಸುವಂತಿಲ್ಲ. ಶ್ರೀಕೃಷ್ಹ್ನನು ನಮ್ಮ ಹೃದಯ ಮಂದಿರದಲ್ಲಿ ವಾಸಿಸಬೇಕಾದರೆ ಹಿಂದಿನ ಸಂಚಿಕೆಯಲ್ಲಿ ಹೇಳಿದ ಎಲ್ಲ ಕೆಲಸ ನಾವೇ ಮಾಡಬೇಕು. ಕೆಲವು ಕಡೆಗಳಲ್ಲಿ ಪರಿಕ್ಷೆಗಳಲ್ಲಿ ವಿದ್ಯಾರ್ಥಿಯ ಬದಲು ಮತ್ಯಾರೋ ಪರೀಕ್ಷೆ ಬರೆದರು ಎಂದು ಕೇಳುತ್ತೇವೆ. ಇಲ್ಲಿ ಆ ರೀತಿ ಮಾಡಲು ಸಾಧ್ಯವಿಲ್ಲ. ಇದನ್ನೇ "ವಾಸಿಪನು ಮಂದಿರದ ಒಳಗೆ" ಎಂದರೆ ನಮ್ಮ ಹೃದಯ ಮಂದಿರದಲ್ಲಿ ಬಂದು, ನಿಂತು, ವಾಸಿಸುತ್ತಾನೆ" ಎಂದು ಸೂಚಿಸಿದ್ದಾರೆ. 

ಆಯಿತು. ಒಪ್ಪಿಕೊಳ್ಳೋಣ. "ವಾಸಿಪನು ಮಂದಿರದ ಒಳಗೆ" ಎನ್ನುವುದರ ಒಳಗೆ "ಎಂದೆಂದೂ" ಎಂದೇಕೆ ಹೇಳಿದ್ದಾರೆ? ಅನೇಕ ಡಿಗ್ರಿ ಪರೀಕ್ಷೆಗಳಲ್ಲಿ ಪಾಸ್ ಮಾಡಿದ ನಂತರ ಯಾವುದೂ ಒಂದು ಸಂಸ್ಥೆಯ ಸದಸ್ಯತ್ವ ಪಡೆದ ಮೇಲೆ ಅವಧಿಯಂತೆ, ಸಾಮಾನ್ಯವಾಗಿ ಪ್ರತಿ ವರುಷ, ಆ ಸದಸ್ಯತ್ವವನ್ನು ನವೀಕರಿಸಬೇಕು. "ಡ್ರೈವಿಂಗ್ ಲೈಸನ್ಸ್" ಉದಾಹರಣೆ ತೆಗೆದುಕೊಳ್ಳಬಹುದು. ಡ್ರೈವಿಂಗ್ ಪರೀಕ್ಷೆ ಪಾಸ್ ಮಾಡಿ ಲೈಸನ್ಸ್  ಪಡೆದಿದ್ದಾಯಿತು. ಅದರ ಅವಧಿ ಮುಗಿಯುವ ಒಳಗೆ ಮತ್ತೆ ನವೀಕರಿಸಬೇಕು. ಇಲ್ಲದಿದ್ದರೆ ಅದು "ಲ್ಯಾಪ್ಸ್"" ಆಯಿತು ಅನ್ನುತ್ತೇವೆ. ಹೃದಯ ಮಂದಿರದ ಒಳಗೆ ಬಂದು ನೆಲಿಸಿದ ಪರಮಾತ್ಮನು ಮತ್ತೆ ಹೊರಟುಹೋಗಬಾರದು. ಅದಕ್ಕೆ ಎಂದೆಂದೂ ನೆಲೆಸುವನು ಎನ್ನುವುದು. 

ಇಷ್ಟೆಲ್ಲಾ ಕಸರತ್ತು ಮಾಡಿದರೆ ಮಾತ್ರ ಅವನು ನಮ್ಮ ಹೃದಯ ಮಂದಿರದಲ್ಲಿ ನೆಲೆಸುವನೇ? ಇಲ್ಲದಿದ್ದರೆ ಇಲ್ಲವೇ? ಈ ಪ್ರಶ್ನೆ ಸಹಜ. ಪ್ರತಿ ಜೀವಿಯು ಹುಟ್ಟುವಾಗಲೇ ಆ ಜೀವಿಯಜೊತೆಗೆ ಅವನೂ ಹುಟ್ಟುತ್ತಾನೆ. ಮೊದಲೆನೆಯ ಶ್ವಾಸದೊಂದಿಗೆ ಪ್ರಾಣವಾಯುವೂ ಮತ್ತು ಪರಮಾತ್ಮನೂ ಜೀವಿಯ ದೇಹವನ್ನು ಪ್ರವೇಶಿಸುತ್ತಾರೆ. ಅವರಿರುವವರೆಗೆ ಜೀವಿಯ ಜೀವನ. ಅವರು ಹೊರೆಟ ಒಡನೆ ಆ ದೇಹ ನಿರ್ಜೀವ. "ನೆಂಟನಗಲಿದ ಬಳಿಕ ಒಣಹೆಂಟೆಯಲಿ ಮುಚ್ಚುವರು" ಎಂದು ಇದನ್ನೇ ಶ್ರೀಕನಕದಾಸರು "ಶ್ರೀ ಹರಿಭಕ್ತಿಸಾರ"ದಲ್ಲಿ ಹೇಳಿರುವುದು. ಶ್ರೀ ಪುರಂದರದಾಸರೇ "ಆರು ಹಿತವರು ನಿನಗೆ ಈ ಮೂವರೊಳಗೆ" ಕೃತಿಯಲ್ಲಿ ಹೇಳುತ್ತಾರೆ:

ಮುನ್ನ ಶತಕೋಟಿ ರಾಯರುಗಳಾಳಿದಾ ನೆಲವ 
ತನ್ನದೆಂದೆನುತ ಶಾಸನವ ಬರೆಸಿ 
ಬಿನ್ನಣದ ಮನೆ ಕಟ್ಟಿ ಕೋಟೆ ಕೊತ್ತಳವಿಕ್ಕಿ
ಚೆನ್ನಿಗನ ಅಸುವಳಿಯೆ ಹೊರಗೆ ಹಾಕುವರು 

ಹಾಗಿದ್ದರೆ ಅವನು ಹೇಗೂ ಹೃದಯಮಂದಿರದ ಒಳಗಿದ್ದೇಯಿದ್ದಾನೆ! ಮತ್ತೇಕೆ ಚಿಂತೆ? ಹಾಗಲ್ಲ. ನಮ್ಮ ಬಳಿ ಒಂದು ಅಮೂಲ್ಯ ರತ್ನಾಭರಣವಿದೆ. ಅದು ನಮ್ಮದೇ ಪೆಟ್ಟಿಗೆಯಲ್ಲಿದೆ. ಪೆಟ್ಟಿಗೆ ಯಾವಾಗಲೂ ನಮ್ಮ ಬಳಿಯೇ ಇದೆ. ಆದರೆ ಅದಕ್ಕೆ ಬೀಗ ಹಾಕಿದೆ. ಸುತ್ತ ಕತ್ತಲು ಕವಿದಿದೆ. ಅದನ್ನು ನೋಡಲು, ಸಂತೋಷಪಡಲು, ಉಪಯೋಗಿಸಲು ಬೀಗದಕೈ ಬೇಕು. ಬೆಳಕು ಬೇಕು.  ಅದಕ್ಕೇ ಈ ಎಲ್ಲ ಕಸರತ್ತು. ಇಲ್ಲದಿದ್ದರೆ ಆ ಬಹು ಬೆಲೆಬಾಳುವ ಆದರೆ ಅತಿ ಭಾರದ ಪೆಟ್ಟಿಗೆ ಹೊತ್ತುಕೊಂಡು ತಿರುಗುತ್ತ, ಅಂತಹ ಶ್ರೀಮಂತಿಕೆ ಇದ್ದರೂ ಅದರ ಇರುವಿಕೆ ಗೊತ್ತಿಲ್ಲದೇ ಭಿಕ್ಷೆ ಬೇಡಿದಂತೆ ನಮ್ಮ ಪಾಡು. ಹಾಗಾಗಬಾರದು. ಎಂದೆಂದೂ ಹೃದಯ ಮಂದಿರದಲ್ಲಿ ಇರುವ ಅವನು ನಮಗೆ ಪ್ರತಿಕ್ಷಣವೂ ಕಾಣುತ್ತಿರಬೇಕು. ಇದನ್ನೇ "ಎಂದೆಂದೂ ವಾಸಿಪನು ಹೃದಯ ಮಂದಿರದ ಒಳಗೆ" ಎನ್ನುವುದು ಸೂಚಿಸುತ್ತದೆ. 

*****

ದ್ರಾಕ್ಷಿಯ ಗೊಂಚಲಿನ ಪ್ರತಿ ದ್ರಾಕ್ಷಿಯಲ್ಲಿ ಸಿಹಿ ರಸ ತುಂಬಿದೆ. ರಸ ಸಿಗಬೇಕಾದರೆ ಪ್ರತಿ ದ್ರಾಕ್ಷಿಯನ್ನೂ  ಜಗಿದು ನುಂಗಬೇಕು. ಆಗ ರಸದ ಪರಮಾವಧಿ ನಮಗೆ ಸಿಗುತ್ತದೆ. "ಅಯ್ಯೋ, ಎಷ್ಟು ಜಗಿಯುವುದು? ಬೇಜಾರು." ಎಂದು ನುಂಗುತ್ತಾ ಹೋದರೆ ನಷ್ಟ ನಮಗೇ.  ದ್ರಾಕ್ಷಿ ಬೆಳೆದ ರೈತನಿಗಲ್ಲ. ನಮ್ಮವರೆಗೂ ತಂದುಕೊಟ್ಟವರಿಗೂ ಅಲ್ಲ. 

ಸರಣಿ ದೀರ್ಘವಾಯಿತು. ಇನ್ನೂ "ಪರಿಪೂರ್ಣ", "ಸಕಲ ಸ್ವಾತಂತ್ರ್ಯ", "ಅರಮನೆಯಒಳಗೆ ಸರೀಭಾಗ" ಮತ್ತು ತೊಂಡರಿಗೆ ತೊಂಡನಾಗಿ ಸಂಚರಿಸುತಿಹನು" ಉಳಿದಿದೆ. ಇವನ್ನು ಮುಂದೆ ನೋಡೋಣ. 

Friday, February 16, 2024

ಕರಡಿಗೆಯಿಂದ ಬಂದ ಕರಡಿ


ಕೋಶಗಳಲ್ಲಿ ಕೋಶಕಾರರು ಸಮಾನಾರ್ಥಕ ಪದಗಳನ್ನು ಕೊಡುತ್ತಾರೆ. ಅವು ಒಂದೇ ಅರ್ಥ ಕೊಡುವ ಪದಗಳಾದರೂ ಪದ-ಪದಗಳಲ್ಲಿ ಸೂಕ್ಷ್ಮವಾದ ಅರ್ಥ ಭೇದ ಇರುತ್ತದೆ ಎನ್ನುವುದನ್ನು "ಅಳಿಯ ಅಲ್ಲ; ಮಗಳ ಗಂಡ" ಎನ್ನುವ ಶೀರ್ಷಿಕೆಯಡಿ ನೋಡಿದೆವು. ಕೋಶದಲ್ಲಿ ನೋಡಿದರೆ "ಅಳಿಯ" ಅನ್ನುವ ಪದಕ್ಕೆ ಕೊಟ್ಟಿರುವ ಸಮಾನಾರ್ಥಕ ಪದಗಳಲ್ಲಿ "ಮಗಳ ಗಂಡ" ಅನ್ನುವುದೂ ಒಂದು. ಆದರೆ ಅಳಿಯ ಮತ್ತು ಮಗಳ ಗಂಡ ಎನ್ನುವ ಎರಡು ಪ್ರಯೋಗಗಳ ಸಂದರ್ಭ ಮತ್ತು ಸೂಕ್ಷ್ಮ ವ್ಯತ್ಯಾಸಗಳನ್ನು ನೋಡಿಯಾಯಿತು. 

"ಮಗಳ ಗಂಡ" ಎನ್ನುವ ಪದದಂತೆ "ಮಗನ ಹೆಂಡತಿ" ಎನ್ನುವ ಪದ ಪ್ರಯೋಗ ಏಕಿಲ್ಲ ಎಂದು ಕೆಲವು ಸ್ನೇಹಿತರು ಕೇಳಿರುತ್ತಾರೆ. ಒಂದು ವ್ಯಕ್ತಿಯನ್ನು ನಿರ್ದೇಶಿಸುವಾಗ "ಅವನು" ಎಂದು ಹೇಳುತ್ತಾರೆ. ಇಂಗ್ಲೀಷಿನಲ್ಲಿ ಹೇಳುವಂತೆ "He includes She" ರೀತಿ, ಮಗನ ಹೆಂಡತಿ ಪ್ರಾಯಶಃ ಮಗಳ ಗಂಡ ಅನ್ನುವುದರಲ್ಲೇ ಸೇರಿ ಹೋಗಿರಬೇಕು! 

"ಕೆಲವರು ಪದಗಳನ್ನು ಅಥವಾ ಪದಪುಂಜಗಳನ್ನು ತಪ್ಪಾಗಿ ಪ್ರಯೋಗಿಸಿ, ಅದನ್ನೇ ಮತ್ತನೇಕರು ಮುಂದುವರೆಸಿ, ಮುಂದೆ ಆ ತಪ್ಪೇ ಸರಿ ಎಂದು ಎಲ್ಲರೂ ತಿಳಿದು, ಆ ತಪ್ಪು ಪ್ರಯೋಗವೇ ಶಾಶ್ವತವಾಗಿ ಉಳಿಯಬಹುದು" ಎಂದು ಹಿಂದೆ ಹೇಳಲಾಗಿತ್ತು. ಅದರಲ್ಲಿಯೂ ಯಾರಾದರೂ ಹೆಸರು ಪಡೆದ ಜನ ಅಥವಾ ಪ್ರಭಾವಶಾಲಿಗಳು ಹೀಗೆ ಉಪಯೋಗಿಸಿದರೆ ಅದೇ ಭದ್ರವಾಗಿ ನಿಲ್ಲುತ್ತದೆ. "ಗತಾನುಗತಿಕೋ ಲೋಕಃ" ಅನ್ನುವಂತೆ ಒಬ್ಬರ ಹಿಂದೆ ಇನ್ನೊಬ್ಬರು. ಅಂತಹ ತಪ್ಪು ಪ್ರಯೋಗವೇ ಶಾಶ್ವತವಾಗಿ ನಿಂತಿರುವುದಕ್ಕೆ ಒಂದು ಅತ್ಯಂತ ಸುಂದರ ಉದಾಹರಣೆ "ಶಿವಪೂಜೆಯಲ್ಲಿ ಕರಡಿ ಬಿಟ್ಟ ಹಾಗೆ" ಎನ್ನುವ ಇನ್ನೊಂದು ಪ್ರಸಿದ್ಧ ಗಾದೆ. 

*****

ಅವರವರ ಸಂಪ್ರದಾಯದಂತೆ, ತಾವು ಅನುಸರಿಸುವ ಆರಾಧನಾ ಕ್ರಮದಂತೆ ದೇವರ ಚಿಹ್ನೆಗಳನ್ನು ದೇಹದ ಮೇಲೆ ಧರಿಸುವುದು ಪ್ರಪಂಚದ ಎಲ್ಲಾ ಕಡೆ ಇರುವ ಪದ್ಧತಿ. ಅನೇಕ ಬಗೆಯ ಹಲವು ಬಣ್ಣ ಮತ್ತು ಆಕಾರದ ನಾಮಗಳು, ವಿಭೂತಿ, ಆಂಗಾರ ಮತ್ತು ಅಕ್ಷತೆ, ಕುಂಕುಮ-ಕೇಸರಿ, ಶಿಲುಬೆ, ಚಂದ್ರ ಮತ್ತು ನಕ್ಷತ್ರ ಇತ್ಯಾದಿ ಸಂಕೇತಗಳನ್ನು ಅನೇಕ ಜನರು ಧರಿಸುವುದನ್ನು ನಾವು ನೋಡಿದ್ದೇವೆ. ಈಚೆಗೆ ಇದು ಕಡಿಮೆ ಆಗಿದ್ದರೂ ಈಗಲೂ ಅನೇಕರು ಈ ರೀತಿ ಧರಿಸುತ್ತಾರೆ. ಕೆಲವು ವೈದಿಕರು ಜನಿವಾರ, ಪವಿತ್ರದುಂಗುರ ತೊಡುತ್ತಾರೆ. ಅಂತೆಯೇ ಅನೇಕ ಶಿವಾರಾಧಕರು ಒಂದು ಸಣ್ಣ ಶಿವಲಿಂಗವನ್ನು ತಮ್ಮ ಕೊರಳಲ್ಲಿ ಧರಿಸುತ್ತಾರೆ. ಕೆಲವರು ಒಂದು ಬಟ್ಟೆಯಲ್ಲಿ ಲಿಂಗವನ್ನು ಸುತ್ತಿ ಕುತ್ತಿಗೆಗೆ ಕಟ್ಟಿಕೊಳ್ಳಬಹುದು. ಮತ್ತೆ ಕೆಲವರು ಶಿವಲಿಂಗವನ್ನು ಅದಕ್ಕಾಗಿಯೇ ಮಾಡಿದ ಲೋಹದ ಸಂಪುಷ್ಟದಲ್ಲಿ ಇಟ್ಟು ದಾರದಿಂದ ಇಳಿಬಿಟ್ಟು ಕುತ್ತಿಗೆಗೆ ಧರಿಸಬಹುದು. ಈ ರೀತಿಯ ಸಂಪುಷ್ಟಕ್ಕೆ "ಕರಡಿಗೆ" ಎಂದು ಕರೆಯುತ್ತಾರೆ. 

ಹಿಂದೆ ತುಂಬಾ ಬಳಕೆಯಲ್ಲಿ ಇದ್ದ ಪದಗಳಲ್ಲಿ "ಕರಂಡಕ" ಅನ್ನುವುದೂ ಒಂದು. ಈ ಪದಕ್ಕೆ "ಬಟ್ಟಲು" ಅಥವಾ ಕಪ್ ಎಂದು ಅರ್ಥ. ಈ ಕರಂಡಕದಿಂದ ಹುಟ್ಟಿದ ಪದ ಕರಡಿಕೆ. ಬಟ್ಟಲಿನಂತಹ ಒಂದು ಸಂಪುಷ್ಟದಲ್ಲಿ ಸಣ್ಣ ಶಿವಲಿಂಗವನ್ನು ಇಟ್ಟು ತಿರುಪಿನ ಮುಚ್ಚಳದಿಂದ ಮುಚ್ಚುವಂತೆ ಮಾಡುತ್ತಾರೆ. ಅದರ ಅನೇಕ ರೂಪಾಂತರಗಳೂ ಉಂಟು. ಮೇಲೆ ಚಿತ್ರದಲ್ಲಿ ತೋರಿಸಿರುವ ಕರಡಿಕೆ ಹೆಚ್ಚು ಬಳಕೆಯಲ್ಲಿ ಇರುತ್ತದೆ. ಇದಕ್ಕೆ ಎರಡು ಕಡೆ ದಾರ ಪೋಣಿಸುವ ರೀತಿ ಮಾಡಿ ಪದಕದಂತೆ ಕೊರಳಲ್ಲಿ ಧರಿಸಬಹುದು. ಪಂಚಲೋಹದ, ಬೆಳ್ಳಿಯ ಅಥವಾ ಹೆಚ್ಚು ಅನುಕೂಲವಂತರು ಬಂಗಾರದಲ್ಲಿ ಮಾಡಿಸಿಕೊಂಡು ಕೊರಳಿಗೆ ಆಭರಣದ ರೀತಿ ಕಟ್ಟಿಕೊಳ್ಳುತ್ತಾರೆ.  

ನಾವು ಆಹಾರವಾಗಿ ಸೇವಿಸುವ ಯಾವ ಪದಾರ್ಥವಾದರೂ ಅದನ್ನು ಮೊದಲು ಪರಮಾತ್ಮನಿಗೆ ಅರ್ಪಿಸಿ (ನೈವೇದ್ಯ ಮಾಡಿ) ನಂತರ ಸೇವಿಸಬೇಕು ಎನ್ನುವುದು ಶ್ರದ್ಧಾಳುಗಳು ಪಾಲಿಸುವ ಸಂಪ್ರದಾಯ. ಜನಿವಾರ ಅಥವಾ ಯಜ್ನೋಪವೀತ ಧರಿಸಿದವರು ಊಟಕ್ಕೆ ಮೊದಲು ತಮ್ಮಲ್ಲೇ ಇರುವ ಪಂಚ ಪ್ರಾಣರೂಪಿ ಅಂತರ್ಗತನಾದ ಪರಬ್ರಹ್ಮನಿಗೆ ಮೊದಲು ಸಮರ್ಪಿಸಿ ನಂತರ ಊಟ ಮಾಡುತ್ತಾರೆ. ಅದೇ ರೀತಿ ಕರಡಿಗೆಯಲ್ಲಿ ಶಿವಲಿಂಗವನ್ನು ಧರಿಸಿದ ಶ್ರದ್ಧಾಳುಗಳು ಅದರಲ್ಲಿನ ಶಿವಲಿಂಗವನ್ನು ಅಂಗೈನಲ್ಲಿ ಹಿಡಿದು ಅದಕ್ಕೆ ಅರ್ಪಿಸಿ ನಂತರ ಭೋಜನ ಮಾಡುತ್ತಾರೆ. ಈ ರೀತಿ ನಿವೇದನ ಮಾಡುತ್ತಿರುವ ಅನೇಕ ಚಿತ್ರಗಳನ್ನು ನೋಡಬಹುದು. ಕೊರಳಲ್ಲಿ ಕರಡಿಗೆಯಲ್ಲಿ ಶಿವಲಿಂಗವನ್ನು ಧರಿಸುವುದಕ್ಕೆ ಬಹಳ ಗೌರವ ಉಂಟು. ಸಾಮಾನ್ಯವಾಗಿ ಒಂದು ಸಮಾರಂಭದಲ್ಲಿ ಗುರುಗಳು ಉಪದೇಶ ಮಾಡಿ ಆರಾಧನೆಯ ರೀತಿಯನ್ನು ವಿವರಿಸಿ ಈ ರೀತಿಯ ಶಿವಪೂಜೆ ದಾರಿಯನ್ನು ತಿಳಿಸುತ್ತಾರೆ. ಇದು ಒಂದು ಸಂಕೇತವಾಗಿ ಪರಶಿವನು ಧರಿಸಿದವರ ಆಚಾರ-ವಿಚಾರ ಶುದ್ಧವಾಗಿರಲು ಅನುಗ್ರಹಿಸುತ್ತಾನೆ ಎಂದು ನಂಬಿಕೆ. 

*****

ಶಿವಪೂಜೆ ಮಾಡಲು ಏನೇನು ಸಾಧನಗಳು ಬೇಕು? ಶಿವನು ಅಭಿಷೇಕ ಪ್ರಿಯನು ಎಂದು ನಂಬಿಕೆ. ಅದಕ್ಕೆ ಮೋದಲಿಗೆ ಶುದ್ಧವಾದ ನೀರು ಬೇಕು. ಶಿವನಿಗೆ ಬಿಲ್ವಪತ್ರೆ ಅತಿ ಪ್ರಿಯ. ಆ ಪತ್ರೆ ಬೇಕು. ಇನ್ನೂ ಮುಂದೆ ಹಾಲು, ಮೊಸರು, ಜೇನು ತುಪ್ಪ, ತುಪ್ಪ, ಎಳನೀರು, ಸಕ್ಕರೆ, ಹೂವುಗಳು, ಧೂಪ, ದೀಪ, ಊದುಬತ್ತಿ, ಕರ್ಪೂರ, ನೈವೇದ್ಯಕ್ಕೆ ಪದಾರ್ಥಗಳು ಇತ್ಯಾದಿ. ಆದರೆ ಯಾವುದು ಇಲ್ಲದಿದ್ದರೂ ನೀರು, ಬಿಲ್ವ ಪತ್ರೆ, ಮತ್ತು ಏನಿಲ್ಲದಿದ್ದರೂ ನೈವೇದ್ಯಕ್ಕೆ ಒಂದು ಬೆಲ್ಲದ ತುಂಡು ಅಥವಾ ಕಲ್ಲು ಸಕ್ಕರೆಯೋ ಇತ್ಯಾದಿ ಶಿವ ಕೊಟ್ಟಿದ್ದು. ಈ ಪದಾರ್ಥಗಳಿದ್ದರೆ ಶ್ರದ್ದಾಭಕ್ತಿಗಳಿದ್ದರೆ ಶಿವಪೂಜೆ ಆಯಿತು. ಮಿಕ್ಕಿದ್ದಲ್ಲ ಇದ್ದರೂ ಇಲ್ಲದಿದ್ದರೂ ಪರವಾಗಿಲ್ಲ. ಶಿವನು ಯಾವ ಆಡಂಬರವನ್ನೂ ಕೇಳುವವನಲ್ಲ. 

ಆಯಿತು. ಮೇಲೆ ಹೇಳಿದ ಎಲ್ಲವೂ ತಯಾರಾಯಿತು. ಸಮಸ್ತವೂ ಉಂಟು. ಆದರೆ ಕರಡಿಗೆಯೇ ಇಲ್ಲ. ಕರಡಿಗೆ ಇಲ್ಲ ಅಂದರೆ ಶಿವಲಿಂಗ ಇಲ್ಲ. ಶಿವಲಿಂಗವೇ ಇಲ್ಲ ಅಂದರೆ ಎಲ್ಲಿಯ ಶಿವಪೂಜೆ? ಎಲ್ಲ ವಸ್ತುಗಳಿಗಿಂತಲೂ ಅತ್ಯಂತ ಮುಖ್ಯ ಬೇಕಾದದ್ದು ಶಿವಲಿಂಗ. ಅದು ಕರಡಿಗೆಯಲ್ಲಿ ಇದೆ. ಅದನ್ನೇ ಮರೆತರೆ ಹೇಗೆ?

ಯಾವುದಾದರೂ ಸಂದರ್ಭದಲ್ಲಿ ಅತಿ ಮುಖ್ಯವಾದದ್ದನ್ನು ತರುವುದು ಮರೆತು ಬಿಟ್ಟರೆ ಶಿವಪೂಜೆಯಲ್ಲಿ ಕರಡಿಗೆಯನ್ನು ಬಿಟ್ಟಂತೆ ಎಂದು ಹೇಳುವ ರೀತಿ ಇದರಿಂದ ಬಂತು. ಮುಂದೆ ಅದರಿಂದಲೇ "ಶಿವಪೂಜೆಯಲ್ಲಿ ಕರಡಿಗೆ ಬಿಟ್ಟ ಹಾಗೆ" ಎಂದು ಹೇಳುವ ಗಾದೆ ಬಂತು!

*****

ಕಾಲಕ್ರಮದಲ್ಲಿ ಯಾರೋ ಒಬ್ಬರು "ಕರಡಿಗೆ" ಪದದಲ್ಲಿನ "ಗೆ" ಬಿಟ್ಟರು! ಕರಡಿಗೆಯ ಬದಲು ಕರಡಿ ಎಂದು ಪ್ರಯೋಗವಾಯಿತು. ಶಿವಪೂಜೆಯಲ್ಲಿ ಕರಡಿ ಬಂದರೆ ಏನಾಗುತ್ತದೆ? ಅದನ್ನು ನೋಡಿದವರು ಚೆಲ್ಲಾಪಿಲ್ಲಿಯಾಗಿ ಓಡುತ್ತಾರೆ. ಅದಕ್ಕೆ ಸ್ವಾತಂತ್ರ್ಯ ಸಿಕ್ಕರೆ ಎಲ್ಲೆಂದರಲ್ಲಿ ನುಗ್ಗಿ ಎಲ್ಲವನ್ನೂ ಧ್ವಂಸ ಮಾಡುತ್ತದೆ. ಒಟ್ಟಿನಲ್ಲಿ, ಸುಖಮಯವಾಗಿ ನಡೆಯುತ್ತಿದ್ದ ಕಾರ್ಯಕ್ರಮ ಹಾಳಾಗುತ್ತದೆ. ಇದು ಶಿವಪೂಜೆಯಲ್ಲಿ ಕರಡಿ ಬಿಟ್ಟರೆ ಆಗುವ ಪರಿಣಾಮ. 

ವಿಚಿತ್ರವೆಂದರೆ, ಕರಡಿಗೆ ಬಹಳ ಜನರಿಗೆ ಗೊತ್ತಿಲ್ಲ. ಆದರೆ ಕರಡಿ ಎಲ್ಲರಿಗೂ ಗೊತ್ತು. ಕರಡಿಗೆ ಬಿಟ್ಟಂತೆ ಎಂದರೆ ಅನೇಕರಿಗೆ ಅರ್ಥ ಆಗುವುದಿಲ್ಲ. ಕರಡಿ ಬಿಟ್ಟರು ಅಂದರೆ ಎಲ್ಲರಿಗೂ ಗೊತ್ತು. ಕರಡಿ ಬಿಡುವುದು ಮನಸ್ಸಿಗೆ ರಂಜಕವೂ ಹೌದು. ಈ ಕಾರಣಗಳಿಂದ "ಶಿವಪೂಜೆಯಲ್ಲಿ ಕರಡಿ ಬಿಟ್ಟಂತೆ" ಎನ್ನುವುದು ತಪ್ಪು ಪ್ರಯೋಗವಾದರೂ ಬಹಳ ಜನಪ್ರಿಯವಾಯಿತು. ಒಂದು ಒಳ್ಳೆಯ ಕೆಲಸ ನಡೆಯುವಾಗ ಯಾರೋ ಅಥವಾ ಏನೋ ಬಂದು ಆ ಒಳ್ಳೆಯ ಕೆಲಸ ಹಾಳಾಗುವುದನ್ನು ನಿರ್ದೇಶಿಸುವುದಕ್ಕೆ ಈ ರೂಪಾಂತರಿತ ಗಾದೆ ಉಪಯೋಗವಾಯಿತು. 

ಕೊನೆಗೆ "ಶಿವಪೂಜೆಯಲ್ಲಿ ಕರಡಿಗೆ ಬಿಟ್ಟರು" ಮರೆತುಹೋಗಿ, "ಶಿವಪೂಜೆಯಲ್ಲಿ ಕರಡಿ ಬಿಟ್ಟರು" ಉಳಿದುಕೊಂಡಿತು. 

ಒಬ್ಬರು ತಪ್ಪು ಪ್ರಯೋಗಿಸಿ, ಅದನ್ನೇ ಮತ್ತನೇಕರು ಮುಂದುವರೆಸಿ, ಮುಂದೆ ಆ ತಪ್ಪೇ ಸರಿ ಎಂದು ಎಲ್ಲರೂ ತಿಳಿದು, ಆ ತಪ್ಪು ಪ್ರಯೋಗವೇ ಶಾಶ್ವತವಾಗಿ ಉಳಿಯಿತು!