Friday, November 21, 2025

ಪ್ರಶ್ನಪತ್ರಿಕೆ


ಹಿಂದಿನ ಸಂಚಿಕೆಯಲ್ಲಿ "ದೇವರ ಎಲೆ" ಅನ್ನುವ ಶೀರ್ಷಿಕೆಯಡಿ ಶ್ರೀ ಶಂಕರಾಚಾರ್ಯ ಮತ್ತು ಶ್ರೀ ಮಂಡನ ಮಿಶ್ರ ಪಂಡಿತ ಇವರಿಬ್ಬರ ನಡುವೆ ನಡೆದ ಪ್ರಶ್ಮೋತ್ತರದ ಒಂದು ಶ್ಲೋಕವನ್ನೂ, ಮಿಶ್ರರು ಕೇಳಿದ ಪ್ರತಿ ಪ್ರಶ್ನೆಯನ್ನೂ ಆಚಾರ್ಯರು ಹೇಗೆ ಬೇರೆಯದೇ ಅರ್ಥಕೊಟ್ಟು ತಿರುಗಿಸಿ ಉತ್ತರಿಸಿ, ಮಿಶ್ರರ ಮಾನಸಿಕ ಮತ್ತು ಬೌದ್ಧಿಕ ಸಮತೋಲನ ತಪ್ಪಿಸಿದರು ಅನ್ನುವುದನನ್ನೂ ನೋಡಿದೆವು. (ಈ ಸಂಚಿಕೆಯನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು). ಇದು ಕೇವಲ ಪ್ರಾರಂಭವಷ್ಟೇ. "ಶ್ರೀ ಶಂಕರ ದಿಗ್ವಿಜಯ" ಕೃತಿಯಲ್ಲಿ ಈ ಸಂದರ್ಭದಲ್ಲಿ ಮುಂದುವರೆದ ಪ್ರಶ್ನೋತ್ತರವನ್ನೂ, ನಂತರದ ಸರ್ಗಗಳಲ್ಲಿ ಬರುವ ಇನ್ನೂ ಗಹನವಾದ ಕರ್ಮ-ವೇದಾಂತಗಳ ಸಂಬಂಧಿತ ಆಳವಾದ ವಾದ-ವಿವಾದ-ಸಂವಾದ ವಿಷಯಗಳನ್ನೂ ನೋಡಬಹುದು. ಇಬ್ಬರು ಪಂಡಿತೋತ್ತಮರ ಬೌದ್ಧಿಕ ಸ್ತರದ ಸ್ವಲ್ಪ ಮಟ್ಟಿನ ಪರಿಚಯ ಇದರಿಂದ ಆಗುತ್ತದೆ. ಅವರ ಮಟ್ಟದ ಜ್ಞಾನದ ಅರಿವು ಪೂರ್ಣವಾಗಿ ಆಗಬೇಕಾದರೆ ಅನೇಕ ವರುಷಗಳ ಅಧ್ಯಯನ ಮತ್ತು ಸಿದ್ಧತೆ ಬೇಕು ಎನ್ನುವಷ್ಟು ಮಾತ್ರ ತಿಳಿಯಬಹುದು! 

*****

ಸರಿಯಾಗಿ ಪ್ರಶ್ನೆ ಕೇಳುವುದೂ ಒಂದು ಕಲೆ. ಅದಕ್ಕೆ ಹೊಂದಿದಂತೆ ಸರಿಯಾಗಿ ಉತ್ತರಿಸುವುದು ಇನ್ನೂ ಒಂದು ದೊಡ್ಡ ಕಲೆ. ಇದರ ಪರಿಚಯವನ್ನು ಭಗವದ್ಗೀತೆ ಮತ್ತು ಉಪನಿಷತ್ತುಗಳ ಅಧ್ಯಯನದಿಂದ ತಿಳಿದುಕೊಳ್ಳಬಹುದು. ಪ್ರಶ್ನೋಪನಿಷತ್ತು ಎಂದು ಜನಜನಿತವಾಗಿರುವ "ಷಟ್ ಪ್ರಶ್ನೋಪನಿಷತ್ತು" ಒಳಗೊಂಡ ಗುರು-ಶಿಷ್ಯರ ಪ್ರಶ್ನೆ-ಉತ್ತರಗಳು ಮತ್ತು ಭಗವದ್ಗೀತೆಯ ಅರ್ಜುನ-ಕೃಷ್ಣರ ಸಂವಾದಗಳು ಈ ಕಲೆಗಳ ಉತ್ತಮ ಉದಾಹರಣೆಗಳು. ತನ್ನ ಮನಸ್ಸಿನಲ್ಲಿ ಹುದುಗಿರುವ ಸಂಶಯಗಳನ್ನು ಸರಿಯಾದ ಶಬ್ದಗಳಲ್ಲಿ ವ್ಯಕಪಡಿಸಿ ಕೇಳುವುದು ಮತ್ತು ಆ ಸಂಶಯಗಳನ್ನು ನಿವಾರಿಸಿ, ಅದಕ್ಕೆ ಸಂಬಂಧಿಸಿದ ಎಲ್ಲಾ ಪದರಗಳಿಗೂ ಒಟ್ಟಿಗೆ ಉತ್ತರಿಸುವುದನ್ನು ಇವುಗಳಲ್ಲಿ ಕಾಣಬಹುದು. 

ಕೇಳಿದ ಪ್ರಶ್ನೆ ಅದಕ್ಕೆ ಉತ್ತರ ಕೊಡುವವರಿಗೆ ಸರಿಯಾಗಿ ಅರ್ಥವಾಗಬೇಕು. ನಾವು ಕೇಳಿದ್ದೊಂದು. ಉತ್ತರ ಕೊಡುವವರು ಅರ್ಥ ಮಾಡಿಕೊಂಡದ್ದು ಇನ್ನೊಂದು. ಅವರು ಉತ್ತರಿಸಿದ್ದು ಮತ್ತೊಂದು. ಕಡೆಗೆ ಅದನ್ನು ನಾವು ತಿಳಿದುಕೊಂಡಿದ್ದು ಮಗದೊಂದು. ಹೀಗಾಗಿ ಅನೇಕ ವೇಳೆ ಒಟ್ಟಾರೆ ಪರಿಸ್ಥಿತಿ ಗೋಜಲು-ಗೋಜಲಾಗಿ ತಲೆ ಚಚ್ಚಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುವುದು ನಡೆಯುತ್ತಿರುತ್ತದೆ. ವಿದ್ಯಾರ್ಥಿಗಳಿಗೆ ಪಾಠ ಹೇಳುವ ಶಿಕ್ಷಕರಿಗೆ ಇದು ಸರಿಯಾಗಿ ಗೊತ್ತಾಗಬೇಕು. 

ಅನೇಕ ವಿಶ್ವವಿದ್ಯಾಲಯಗಳಲ್ಲಿ ಉತ್ತರ ಪತ್ರಿಕೆಗಳನ್ನು ಇಬ್ಬರು ಮೌಲ್ಯಮಾಪಕರು ನೋಡಿ ಅಂಕ ಹಾಕುವ ಪದ್ಧತಿ ಇದೆ. ಈ ಎರಡು ಅಂಕಗಳ ಸರಾಸರಿ ತೆಗೆದುಕೊಳ್ಳುವುದು ಕೆಲವೆಡೆ ಉಂಟು. ಮತ್ತೆ ಕೆಲವು ಕಡೆ ಎರಡರಲ್ಲಿ ಹೆಚ್ಚಿನದನ್ನು ಒಪ್ಪಿಕೊಳ್ಳುವುದೂ ಇದೆ. ಇಷ್ಟಿದ್ದರೂ ಇಬ್ಬರು ಕೊಟ್ಟ ಅಂಕಗಳಲ್ಲಿ ತುಂಬಾ ವ್ಯತ್ಯಾಸ ಇದ್ದಾಗ ಮೂರನೆಯ ಮೌಲ್ಯಮಾಪಕರ ತಲೆಗೆ ಕಟ್ಟುವುದೂ ಉಂಟು. ಇವೆಲ್ಲ ವ್ಯವಸ್ಥೆ ಇದ್ದರೂ, ಪ್ರಶ್ನಪತ್ರಿಕೆ ಕೊಡುವವರು ಒಬ್ಬರು ಮತ್ತು ಮೌಲ್ಯ ನಿರ್ಧರಿಸುವವರು ಇನ್ನೊಬ್ಬರು ಆದಾಗ ಎಡವಟ್ಟು ಪರಿಸ್ಥಿತಿ ಉಂಟಾಗುವುದೂ ಆಗುತ್ತದೆ. ಇದರ ಪರಿಹಾರಕ್ಕಾಗಿ ಪ್ರಶ್ನಪತ್ರಿಕೆ ತಯಾರು ಮಾಡಿದವರು ಅದರ ಜೊತೆಗೆ ಒಂದು "ಮಾದರಿ ಉತ್ತರ ಪತ್ರಿಕೆ" (ಮಾಡಲ್ ಆನ್ಸರ್) ಕೂಡ ಕೊಡುವ ಪದ್ಧತಿಯೂ ಉಂಟು.  

ಶಿಕ್ಷಕರಿಗೆ ಒಂದು ಶೈಕ್ಷಣಿಕ ವರ್ಷ ಅಥವಾ ವೃತ್ತದಲ್ಲಿ ಅತ್ಯಂತ ಕಷ್ಟದ ದಿನಗಳು ಯಾವುವು? ಇದು ಶಿಕ್ಷಣ ನೀಡಿದವರಿಗೆ ಗೊತ್ತು. ಅದು ಪರೀಕ್ಷೆಯ ನಂತರ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾಲ. ಆ ದಿನಗಳಲ್ಲಿ ಶಿಕ್ಷಕರ ಬಳಿ ಮಾತಾಡುವಾಗ ಬಹಳ ಜಾಗರೂಕರಾಗಿರಬೇಕು. ಆ ಕಾಲದಲ್ಲಿ ಅನೇಕರು ಖಿನ್ನತೆಗೆ (ಡಿಪ್ರೆಷನ್) ಒಳಗಾಗಿರುತ್ತಾರೆ. ವರುಷವೆಲ್ಲ ಬಹಳ ಚೆನ್ನಾಗಿ ಪಾಠ ಹೇಳಿದ್ದೇವೆ ಎಂದು ತಮ್ಮ ಬೆನ್ನು ತಾವೇ ಚಪ್ಪರಿಸಿಕೊಂಡವರಿಗೆ ಅದು ಸತ್ಯದ ಅರಿವು ಮೂಡಿಸುವ ಕಾಲ. "ನಾನು ಹೇಳಿಕೊಟ್ಟಿದ್ದು ಇದೇ ಏನು?" ಎಂದು ಅವರಿಗೆ ಅವರೇ ಪ್ರಶಿಸಿಕೊಳ್ಳುವ ಕಾಲ ಅದು. ಮೌಲ್ಯಮಾಪನ ಕೊಠಡಿಗಳಲ್ಲಿ ಸೀಲಿಂಗ್ ಫ್ಯಾನ್ ಮತ್ತು ಹಗ್ಗಗಳು ಇರಲೇಬಾರದು ಎಂದು ಹೇಳುವುದು ಕೇವಲ ವಿನೋದಕ್ಕೆಂದು ತಿಳಿಯಬಾರದು. 

*****

ಒಂದು ವಿಷಯವನ್ನು ವಿವರಿಸುವಾಗ ಅಥವಾ ಒಂದು ಪ್ರಶ್ನೆಗೆ ಉತ್ತರ ಕೊಡುವಾಗ ಉದಾಹರಣೆಗಳನ್ನು ಕೊಡುವುದು ಸಾಮಾನ್ಯ ಪದ್ಧತಿ. ಹೀಗೆ ಕೊಡುವ ದೃಷ್ಟಾಂತಗಳನ್ನು ಆರಿಸಿಕೊಳ್ಳುವಾಗ ಎರಡು ಮೂರು ಬಾರಿ ಯೋಚಿಸಿ ನಂತರ ಅವನ್ನು ಉಪಯೋಗಿಸಬೇಕಾಗುತ್ತದೆ. ಇಲ್ಲದಿದ್ದಲ್ಲಿ ಕೇಳುಗರು ಅದರ ಪೂರ್ಣ ವಿರುದ್ಧ ಅರ್ಥ ತಿಳಿದುಕೊಳ್ಳುವ ಸಾಧ್ಯತೆ ಇರುತ್ತದೆ. ಜೊತೆಗೆ ಹೇಳುತ್ತಿರುವ ವಿಷಯವನ್ನೇ ಮರೆ ಮಾಡಿ ಚರ್ಚೆಯನ್ನು ಮತ್ತೆಲ್ಲಿಗೋ ಎಳೆದುಕೊಂಡು ಹೋಗುವ ಸಂದರ್ಭಗಳೂ ಉಂಟು.  

ಒಂದು ಹಳೆಯ ಉದಾಹರಣೆಯನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದು. "ಪಾನ ನಿರೋಧ ಚಳುವಳಿ" ಸರ್ಕಾರದ ಒಂದು ಮುಖ್ಯ ಕಾರ್ಯಕ್ರಮವಾಗಿದ್ದ ಕಾಲ. ಕೇವಲ ಕೆಲವರು ಕುಡಿದು ಅನೇಕರು ಕುಡಿಯದಿದ್ದಾಗ ಇಂತಹ ಚಳುವಳಿ ಬೇಕಿತ್ತು. ಎಲ್ಲರೂ ಕುಡಿಯುವ ಮತ್ತು ಅಲ್ಲೊಬ್ಬರು-ಇಲ್ಲೊಬ್ಬರು ಕುಡಿಯದ ಈ ದಿನಗಳಲ್ಲಿ ಇಂತಹ ಚಳುವಳಿ ತೀರಾ ಅನವಶ್ಯಕ. ಅದಕ್ಕಿಂತ ಹೆಚ್ಚಾಗಿ ಅನೇಕ ಸರಕಾರಗಳು ಕುಡಿತದ ವಸ್ತುಗಳ ಮಾರಾಟದ ಹಣದಿಂದಲೇ ನಡೆಯಬೇಕಾದ ಈಗಿನ ಸ್ಥಿತಿಯಲ್ಲಿ ಇದನ್ನು ನೆನೆಸಿಕೊಳ್ಳುವುದೂ ಒಂದು ಪಾಪದ ಕೆಲಸವೇ. 

ಕುಡಿತದಿಂದ ಆಗುವ ಕೆಟ್ಟ ಪರಿಣಾಮಗಳು ಏನೆಂದು ಹಳ್ಳಿಯ ಜನರಿಗೆ ವಿವರಿಸುವ ಕೆಲಸ ಒಬ್ಬ ಸರ್ಕಾರೀ ನೌಕರನಿಗೆ ಸಿಕ್ಕಿತು. ಅವನು ಬಹಳ ಉತ್ಸಾಹದಿಂದ ಮೊದಲ ಹಳ್ಳಿಗೆ ಹೋದ. ಎರಡು ಗಾಜಿನ ಲೋಟ, ಸ್ವಲ್ಪ ನೀರು, ಒಂದಷ್ಟು ಸಾರಾಯಿ ಮತ್ತು ಒಂದು ಸಣ್ಣ ಡಬ್ಬಿಯಲ್ಲಿ ಕೆಲವು ಹುಳುಗಳು. ಇವಿಷ್ಟು ಅವನ ಜೊತೆ ಹೊಂದಿಸಿಕೊಂಡು ಹೊರಟ. ಸಾರಾಯಿ ಕುಡಿದರೆ ಅರೋಗ್ಯ ಕೆಡುತ್ತದೆ ಎಂದು ತೋರಿಸುವುದು ಅವನ ಉದ್ದೇಶ. ಹಳ್ಳಿಯ ಜನರೆಲ್ಲಾ ನೆರೆದಿದ್ದರು. ಅಶ್ವಥ ಕಟ್ಟೆಯ ಬಳಿ ಇವನ ಭಾಷಣ. ಕಟ್ಟೆಯ ಕಲ್ಲ ಮೇಲೆ ಎಲ್ಲರಿಗೂ ಕಾಣುವಂತೆ ಎರಡು ಗಾಜಿನ ಲೋಟಗಳನ್ನೂ ಇಟ್ಟ. ಮೊದಲನೆಯದರಲ್ಲಿ ನೀರು ಹುಯ್ದ. ಎರಡನೆಯದರಲ್ಲಿ ಸ್ವಲ್ಪ ಸಾರಾಯಿ. "ಈಗ ನೋಡಿ. ಎರಡರಲ್ಲೂ ಹುಳಗಳನ್ನು ಹಾಕುತ್ತೇನೆ. ಏನಾಗುವುದು ಎಂದು ಗಮನಿಸಿ" ಎಂದ. ಎಲ್ಲರೂ ನೆಟ್ಟ ನೋಟದಲ್ಲಿ ನಿಂತರು. 

ನೀರಿನಲ್ಲಿ ಹಾಕಿದ ಹುಳಗಳು ಓಡಾಡಿಕೊಂಡಿದ್ದವು. ಸಾರಾಯಿಯಲ್ಲಿ ಹಾಕಿದ ಹುಳಗಳು ಸ್ವಲ್ಪ ಹೊತ್ತು ಒದ್ದಾಡಿದವು. ನಂತರ ಸತ್ತವು. "ನೋಡಿ. ಸಾರಾಯಿಯಲ್ಲಿ ಹಾಕಿದ ಹುಳಗಳು ಸತ್ತವು. ಇದರಿಂದ ಏನು ಕಲಿತಿರಿ?" ಎಂದು ಹಳ್ಳಿಗರನ್ನು ಕೇಳಿದ. ತಲೆತಲಾಂತರದಿಂದ ಕುಡಿತವನ್ನೇ ಉದ್ಯೋಗ ಮಾಡಿಕೊಂಡಿದ್ದ ಕುಟುಂಬದ ಮಹಾ ಕುಡುಕ ಚಕ್ರವರ್ತಿಯೊಬ್ಬ ಚೆನ್ನಾಗಿ ಕುಡಿದೇ ಅಲ್ಲಿ ಬಂದು ಕುಳಿತಿದ್ದ. "ಚೆನ್ನಾಗಿ ಗೊತ್ತಾಯ್ತು ಬುದ್ಧಿ. ಸಾರಾಯಿ ಕುಡಿಯುವುದರಿಂದ ಹೊಟ್ಟೆಯಲ್ಲಿರುವ ಹುಳುಗಳೆಲ್ಲ ಸತ್ತು ಅರೋಗ್ಯ ಚೆನ್ನಾಗಿ ಆಗುತ್ತದೆ" ಅಂದ. ಮುಂದೆ ಪಾನ ನಿರೋಧದ ಕಥೆ ಹೇಳಬೇಕಾಗಿಲ್ಲ. 
***** 

ಈಚಿನ ದಿನಗಳಲ್ಲಿ ಪ್ರಶ್ನಪತ್ರಿಕೆಗಳು ಪರೀಕ್ಷೆಗೆ ಮುಂಚೆ ಬಹಿರಂಗಪಟ್ಟು ಪರೀಕ್ಷೆಗಳು ಮುಂದೂಡಿಕೆ ಆಗುವುದು ಸರ್ವೇ ಸಾಧಾರಣ ಸಂಗತಿ. ಅನೇಕ ವಿದ್ಯಾರ್ಥಿಗಳು ಪರೀಕ್ಷೆಗೆ ಓದುವುದಕ್ಕಿಂತ ಪ್ರಶ್ನಪತ್ರಿಕೆ ಎಲ್ಲಿ ಸಿಗುವುದು ಎಂದು ತಿಳಿಯುವುದನ್ನೇ ಅಧ್ಯಯನ ಮಾಡುವುದೂ ಉಂಟು. ಇದು ಕೇವಲ ಕೆಲವರ ಹವ್ಯಾಸ ಆಗಿಲ್ಲದೇ ಒಂದು ಉದ್ಯಮವಾಗಿಯೇ ಬೆಳೆದಿದೆ. ಇಂತಹ ವಿದ್ಯಮಾನಗಳನ್ನು ತನಿಖೆ ಮಾಡಲೆಂದೇ ಕೆಲವು ಅಧಿಕಾರಿಗಳು ನಿಯುಕ್ತರಾಗಿ ಹೆಚ್ಚಿನ ಉದ್ಯೋಗ ಸೃಷ್ಟಿಯೂ ಆಗುತ್ತಿದೆ. ಪ್ರಶ್ನಪತ್ರಿಕೆಗಳು ಬಹಿರಂಗವಾಗದಂತೆ ಮಾಡಲು ಹೆಚ್ಚಿನ ಭದ್ರತೆ ವ್ಯವಸ್ಥೆ ಸಹ ಮಾಡುವುದರಿಂದ ಇನ್ನಷ್ಟು ಉದ್ಯೋಗಗಳು ತೆರೆದುಕೊಳ್ಳುತ್ತಿವೆ. ಇವುಗಳಿಂದ ದೇಶದ ಆರ್ಥಿಕತೆ ಮೇಲೆ ಆಗುತ್ತಿರುವ ಸತ್ಪರಿಣಾಮಗಳು ಮತ್ತು ಜಿ. ಡಿ. ಪಿ. ಪ್ರಮಾಣದಲ್ಲಿ ಹೆಚ್ಚಳ, ಇವನ್ನು ಅಧ್ಯಯನ ಮಾಡಿ ವರದಿ ಕೊಡಲು ಕೇಂದ್ರ ಸರ್ಕಾರ ಒಂದು ತಜ್ಞರ ಸಮಿತಿ ರಚಿಸುತ್ತಿದೆ ಎಂದು ಒಂದು ಗುಮಾನಿ. ಇಂತಹ ಸಮಿತಿಯಲ್ಲಿ ಅತ್ಯಂತ ಹೆಚ್ಚು ಪ್ರಶ್ನಪತ್ರಿಕೆ ಬಹಿರಂಗ ಪಡಿಸಿದವರನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸೇರಿಸಬೇಕೆಂದು ಚಳುವಳಿ ನಡೆಯುವ ಸಂಭವಗಳೂ ನಿಚ್ಚಳವಾಗಿ ಕಾಣಿಸುತ್ತಿವೆ. 

ಕೆಲವೊಮ್ಮೆ ಪರೀಕ್ಷೆಗಳು ಮುಗಿದ ನಂತರ ಹೀಗೆ ಬಹಿರಂಗವಾಗಿರುವ ಪ್ರಶ್ನಪತ್ರಿಕೆಗಳಲ್ಲಿ ಇರುವ ಕೆಲವು ಪ್ರಶ್ನೆಗಳ ಬಗ್ಗೆ ಬಹಿರಂಗ ಚರ್ಚೆ ಆಗಿ ಅನೇಕ ಪ್ರಶ್ನೆಗಳೇ ತಪ್ಪು ಎಂದು ಕಂಡುಬರುವುದೂ ಉಂಟು. ಇಂತಹ ಸಂದರ್ಭಗಳಲ್ಲಿ ವಿದ್ಯಾರ್ಥಿಗಳಿಗೆ ಅನ್ಯಾಯ ಆಗಬಾರದು ಅನ್ನುವ ಸಾಮೂಹಿಕ ಹಿತ ದೃಷಿಯಿಂದ ಎಲ್ಲ ವಿದ್ಯಾರ್ಥಿಗಳಿಗೂ ಆ ಪ್ರಶ್ನೆಗಳಿಗೆ ನಿಗದಿ ಪಡಿಸಿದ ಅಂಕಗಳನ್ನು "ಕೃಪಾಂಕ" (ಗ್ರೇಸ್ ಮಾರ್ಕ್ಸ್) ಎಂದು ಕೊಡುವುದುಂಟು. ಈ ಕಾರಣದಿಂದ ಪ್ರಶ್ನಪತ್ರಿಕೆಗಳಲ್ಲಿ ಹೆಚ್ಚು ಹೆಚ್ಚು ತಪ್ಪು ಪ್ರಶ್ನೆಗಳು ಕಂಡುಬರಲಿ ಎಂದು ವಿದ್ಯಾರ್ಥಿಗಳು ದೇವಾಲಯಗಳಲ್ಲಿ ಬಂದು ಪ್ರಾರ್ಥಿಸುವುದರಿಂದ ದೈವಭಕ್ತಿಯೂ ಹೆಚ್ಚುತ್ತಿದೆ ಎಂದು ವರದಿಗಳು ತಿಳಿಸುತ್ತವೆ. 

*****

ಪ್ರಶ್ನಪತ್ರಿಕೆಗಳ ಬಗ್ಗೆ ಇನ್ನಷ್ಟು ವಿಚಾರಗಳನ್ನು ಮತ್ತೊಮ್ಮೆ ಸಮಯ ಬಂದಾಗ ನೋಡೋಣ. ಅಷ್ಟರಲ್ಲಿ ಈ ವಿಷಯದಲ್ಲಿ ನಡೆಯುವ ಬೆಳವಣಿಗೆಗಳ ಬಗ್ಗೆ ಅವಶ್ಯ ಗಮನವಿಡೋಣ. 

Monday, November 17, 2025

ದೇವರ ಎಲೆ


ಹಿಂದಿನ ಒಂದು ಸಂಚಿಕೆಯಲ್ಲಿ "ಪಂಡಿತರ ಮನೆ ಎಲ್ಲಿದೆ?" ಎನ್ನುವ ಶೀರ್ಷಿಕೆಯ ಅಡಿಯಲ್ಲಿ ಶ್ರೀ ಶಂಕರಾಚಾರ್ಯರು ಮಾಹಿಷ್ಮತಿ ನಗರಕ್ಕೆ ಬಂದು ಮಂಡನ ಮಿಶ್ರ ಪಂಡಿತರ ಮನೆ ಹುಡುಕುವಾಗ ನೀರು ತರಲು ಹೊರಟಿದ್ದ ಹೆಣ್ಣು ಮಕ್ಕಳನ್ನು ಆ ಬಗ್ಗೆ ವಿಚಾರಿಸಿದ್ದು ಮತ್ತು ಅವರು ಕೊಟ್ಟ ಉತ್ತರವನ್ನು ನೋಡಿದ್ದೆವು. (ಈ ಸಂಚಿಕೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ). ಆಚಾರ್ಯರು ಅದೇ ಜಾಡಿನಲ್ಲಿ ನಡೆದು ಮಂಡನ ಮಿಶ್ರ ಪಂಡಿತರ ಮನೆ ತಲುಪಿದರು. "ಶ್ರೀ ಶಂಕರ ದಿಗ್ವಿಜಯ" ಕೃತಿಯಲ್ಲಿ ಮಿಶ್ರರ ಮನೆ ವಿಶಾಲವಾಗಿ ಒಂದು ಅರಮನೆಯಂತೆ ಇತ್ತು ಎಂದು ವರ್ಣಿತವಾಗಿದೆ. ಆಚಾರ್ಯರು ಆ ಮನೆಯ ಮುಂದೆ ಬಂದು ನಿಂತಾಗ ಮುಂಬಾಗಿಲು ಮುಚ್ಚಿತ್ತು. ಅಲ್ಲಿ ಕಂಡ ಲಕ್ಷಣಗಳಿಂದ ಅಂದು ಆ ಮನೆಯಲ್ಲಿ ಶ್ರಾದ್ಧ (ಪಿತೃಕಾರ್ಯ) ನಡೆಯುತ್ತಿರುವುದಾಗಿ ಆಚಾರ್ಯರು ತಿಳಿದರು. 

ಶ್ರಾದ್ಧ ನಡೆಯುವ ದಿನ ಬೆಳಗ್ಗೆ ಪ್ರತಿದಿನದಂತೆ ಆ ಮನೆಯ ಮುಂದೆ ರಂಗೋಲಿ ಹಾಕುವುದಿಲ್ಲ. ಅಂದು ಬಂದ ಅಭ್ಯಾಗತರನ್ನು ಸ್ವಾಗತಿಸಿ, ಮನೆಯ ಹೆಬ್ಬಾಗಿಲ ಮುಂದೆ ಕಾಲು ತೊಳೆದು, ನಂತರ ಮನೆಯ ಒಳಗೆ ಕರೆದುಕೊಂಡು ಹೋಗಿರುವ ಲಕ್ಷಣಗಳು ಕಾಣಿಸುತ್ತವೆ. ಇವನ್ನು ಕಂಡ ಅತಿಥಿಗಳು ಮನೆಯನ್ನು ಪ್ರವೇಶಿಸುವುದಿಲ್ಲ. ಗೃಹಸ್ಥರಿಂದ ಆಹ್ವಾನ ಪಡೆದು ಬಂದವರಿಗೆ "ಅಭ್ಯಾಗತರು" ಎಂದೂ, ಆಹ್ವಾನವಿಲ್ಲದೆ ಬಂದವರನ್ನು "ಅತಿಥಿಗಳು" ಎಂದೂ ನಿರ್ದೇಶಿಸುವುದು ಕ್ರಮ. (ಇದರ ಬಗ್ಗೆ ಹೆಚ್ಚು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ ಓದಿ). ಶ್ರಾದ್ಧ ಕಾರ್ಯ ಮುಗಿದ ನಂತರ ಮನೆಯ ಮುಂದೆ ರಂಗೋಲಿ ಹಾಕುತ್ತಾರೆ. ಅದಾದ ನಂತರ ಬೇರೆಯವರು ಆ ಮನೆಯೊಳಗೆ ಪ್ರವೇಶ ಮಾಡಲು ಅಭ್ಯಂತರವಿಲ್ಲ. 

ಆಚಾರ್ಯರು ತಾವು ಬಂದ ಕೆಲಸವನ್ನು ಮುಂದೆ ಹಾಕಲು ಇಷ್ಟಪಡಲಿಲ್ಲ. ವಾಯುಮಾರ್ಗದಿಂದ ಮನೆಯನ್ನು ಪ್ರವೇಶಿಸಿದರು. (ಆ ಮನೆ ವಿಶಾಲವಾಗಿದ್ದು ತೊಟ್ಟಿಯ ಮನೆಯಾಗಿತ್ತು. ಮನೆಯ ಹೊರಗಡೆ ಇದ್ದ ದೊಡ್ಡ ಮರವೊಂದನ್ನು ಹತ್ತಿ ಮನೆಯ ಕಡೆಗೆ ಬಾಗಿರುವ ಕೊಂಬೆಯ ಮೂಲಕ ಒಳಗಡೆ ಇಳಿದರು ಎಂದು ಕೆಲವರು ಹೇಳುತ್ತಾರೆ. ಯೋಗಶಕ್ತಿಯಿಂದ ಅಲ್ಲಿ ತಲುಪಿದರು ಎಂದೂ ಅಭಿಪ್ರಾಯವಿದೆ). ಅಂಗಳದಲ್ಲಿ ಇಳಿದು ಅಭ್ಯಾಗತರಾದ ಜೈಮಿನಿ-ವ್ಯಾಸರನ್ನು ಸತ್ಕರಿಸುತ್ತಿದ್ದ ಮಂಡನ ಮಿಶ್ರರ ಎದುರು ನಿಂತರು!
*****

ತಾವು ಶ್ರದ್ದೆಯಿಂದ ಮಾಡುತ್ತಿದ್ದ ಪಿರ್ತುಕಾರ್ಯದ ಮಧ್ಯೆ ಏಕಾಏಕಿಯಾಗಿ ಬಂದು ನಿಂತ ಯತಿಯೊಬ್ಬರನ್ನು ಕಂಡು ಮಂಡನ ಮಿಶ್ರರಿಗೆ ಆಶ್ಚರ್ಯವೂ, ಕೋಪವೂ ಒಟ್ಟಿಗೆ ಆದವು. ಶ್ರಾದ್ಧದ ದಿನ ಕೋಪ ಮಾಡಿಕೊಳ್ಳಬಾರದು ಎಂದು ನಿಯಮ. (ಬೇರೆ ದಿನ ಕೋಪ ಮಾಡಿಕೊಳ್ಳಬಹುದು ಎಂದು ಅರ್ಥವಲ್ಲ. ಎಂದೂ ಕೋಪ ಮಾಡಿಕೊಳ್ಳಬಾರದು. ಶ್ರಾದ್ಧದ ದಿನವಂತೂ ಸರ್ವಥಾ ಕೂಡದು ಎಂದು ತಾತ್ಪರ್ಯ). ಆಚಾರ್ಯರು, ಜೈಮಿನಿ-ವ್ಯಾಸರು ಪರಸ್ಪರ ವಂದಿಸಿದರು. ಆಚಾರ್ಯರನ್ನು ಉದ್ದೇಶಿಸಿ ಮಂಡನ ಮಿಶ್ರರು ಕೆಲವು ಪ್ರಶ್ನೆಗಳನ್ನು ಕೇಳಿದರು. ಆಚಾರ್ಯರು ಉತ್ತರಿಸಿದರು. ಪರಸ್ಪರ ದೀರ್ಘ ಸಂವಾದವೇ ನಡೆಯಿತು. 

ವಾದದ ಸಮಯದಲ್ಲಿ ವಾದಿ-ಪ್ರತಿವಾದಿಗಳು ಒಬ್ಬರು ಇನ್ನೊಬ್ಬರ ಮಾನಸಿಕ ಮತ್ತು ಬೌದ್ಧಿಕ ಸಮತೋಲನವನ್ನು ತಪ್ಪಿಸಿ ಇಕ್ಕಟ್ಟಿಗೆ ಸಿಲುಕಿಸುವುದು ಒಂದು ರೀತಿಯ ತಂತ್ರ. ಆಗ ಎದುರಾಳಿ ತಪ್ಪು ಮಾಡುವ ಸಾಧ್ಯತೆ ಹೆಚ್ಚು. (ಅನೇಕ ಕ್ರೀಡೆಗಳಲ್ಲೂ ಕೆಲವು ಆಟಗಾರರು ಈ ತಂತ್ರ ಉಪಯೋಗಿಸುವುದನ್ನು ನಾವು ನೋಡಿದ್ದೇವೆ). ಆಚಾರ್ಯರು ಇದೇ ರೀತಿಯ ತಂತ್ರವನ್ನು ಉಪಯೋಗಿಸಿದರು. ಮಿಶ್ರರ ಪ್ರತಿ ಪ್ರಶ್ನೆಗೂ ಇನ್ನೊಂದು ಅರ್ಥ ತೆಗೆದು, ಅದಕ್ಕೆ ಚಮತ್ಕಾರಿಕವಾದ ಉತ್ತರ ಕೊಟ್ಟು ಅವರ ಸಮತೋಲನವನ್ನು ಕೆದಕುತ್ತಾ ಹೋದರು. ಇದರಿಂದ ಇನ್ನಷ್ಟು ಕೋಪಗೊಂಡ ಮಿಶ್ರರು ಕೆಲವು ಅಪಶಬ್ದಗಳ ಪ್ರಯೋಗ ಮಾಡಬೇಕಾಯಿತು. 

ಈ ಸಂದರ್ಭದಲ್ಲಿ ಮಿಶ್ರರು ಮತ್ತು ಆಚಾರ್ಯರ ನಡುವೆ ನಡೆದ ಸಂವಾದ ಬಹಳ ಸೊಗಸಾಗಿದೆ. ತರ್ಕ ಮತ್ತು ಸಂಸ್ಕೃತ ಕಲಿಯುತ್ತಿರುವ ವಿದ್ಯಾರ್ಥಿಗಳು ಇದನ್ನು ಅವಶ್ಯ ಗಮನಿಸಬೇಕು. ಪ್ರತಿ ಪದಕ್ಕೂ, ಪ್ರತಿ ಪ್ರಶ್ನೆಗೂ ಬೇರೆ ಅರ್ಥ ಅನುಸಂಧಾನ ಮಾಡಿ ಆಚಾರ್ಯರು ಉತ್ತರಿಸುತ್ತಾ ಹೋದರು. ಕಡೆಗೆ ಇಬ್ಬರ ನಡುವಿನ ಮಾತುಗಳು ದಿಕ್ಕು ತಪ್ಪಿ ಎಲ್ಲೆಲ್ಲಿಗೋ ಹೋಯಿತು. 

*****
ಈ ಸಂದರ್ಭದ "ಶ್ರೀ ಶಂಕರ ದಿಗ್ವಿಜಯ" ಕೃತಿಯ ಒಂದು ಶ್ಲೋಕವನ್ನು ನೋಡಬಹುದು. ಅದು ಹೀಗಿದೆ:

ಕುತೋ ಮುಂಡೀ ಗಲಾನ್ಮುಂಡೀ 
ಪಂಥಾಸ್ತೇ ಪೃಚ್ಛತಾ ಮಯಾ 
ಕಿಮಾಹ ಪಂಥಾ ತ್ವನ್ಮಾತಾ 
ಮುಂಡೇತ್ಯಾಹ ತಥೈವಹಿ 

ಮಿಶ್ರರು "ಕುತೋಮುಂಡೀ?" ಎಂದು ಕೇಳಿದರು. "ತಲೆ ಬೋಳಿಸಿಕೊಂಡಿರುವ ಯತಿಯೇ, ಎಲ್ಲಿಂದ ಬಂದೆ?" ಎಂದು ಪ್ರಶ್ನೆ. ಇದಕ್ಕೆ ಆಚಾರ್ಯರು "ಎಲ್ಲಿಂದ ಬೋಳಿಸಿದೆ?" ಎಂದು ಅರ್ಥಮಾಡಿ "ಗಲಾನ್ಮುಂಡೀ", ಅಂದರೆ "ಕುತ್ತಿಗೆಯಿಂದ ಮೇಲೆ ಬೋಳಿಸಿದೆ", ಎಂದು ಉತ್ತರ ಕೊಟ್ಟರು. 

ಇದರಿಂದ ಕೆರಳಿದ ಮಿಶ್ರರು "ಪಂಥಾಸ್ತೇ ಪೃಚ್ಛತಾ ಮಯಾ" ಎಂದರು. "ನಾನು ಕೇಳಿದ್ದು ದಾರಿಯನ್ನು" ಎಂದು ಪ್ರಶ್ನೆ. ಇದಕ್ಕೆ ಆಚಾರ್ಯರು "ದಾರಿಯನ್ನು ಕೇಳಿದೆ" ಎಂದು ಅರ್ಥಮಾಡಿ "ಕಿಮಾಹ ಪಂಥಾ?", "ದಾರಿಯನ್ನು ಕೇಳಿದೆಯಲ್ಲಾ, ಅದು ಏನು ಹೇಳಿತು?", ಎಂದು ಪುನಃಪ್ರಶ್ನೆ ಮಾಡಿದರು. 

ಮಿಶ್ರರು ಮತ್ತಷ್ಟು ಕೋಪಗೊಂಡರು. "ತ್ವನ್ಮಾತಾ ಮುಂಡೇತ್ಯಾಹ", ಅಂದರೆ "ನಿನ್ನ ತಾಯಿ ವಿಧವೆ ಎಂದಿತು" ಎಂದು ಹೇಳಿದರು. ಆಚಾರ್ಯರು "ತಥೈವಹಿ", ಅಂದರೆ "ಹಾಗಿದ್ದರೆ ಸರಿ" ಅಂದರು. ("ದಾರಿಯನ್ನು ಪ್ರಶ್ನೆ ಕೇಳಿದ್ದು ನೀನು. ಅದು ಕೊಟ್ಟ ಉತ್ತರವೂ ನಿನಗೇ ಸೇರಿದ್ದು. ಅಂದರೆ ಅದಕ್ಕೂ ನನಗೂ ಸಂಬಂಧವಿಲ್ಲ" ಎಂದು ಅರ್ಥ).  

ಪ್ರಶ್ನೋತ್ತರ ಎಲ್ಲಿಂದ ಎಲ್ಲಿಗೋ ಹೋಯಿತು ಎಂದು ಮತ್ತೆ ಹೇಳಬೇಕಾಗಿಲ್ಲ. ಹೀಗೇ ಸಂಭಾಷಣೆ ಮುಂದುವರೆಯಿತು. 

*****

ಇದೆಲ್ಲವನ್ನೂ ಜೈಮಿನಿ-ವ್ಯಾಸರು ನೋಡುತ್ತಿದ್ದರು. ಈಗ ವ್ಯಾಸರು ಮಧ್ಯೆ ಪ್ರವೇಶಿಸಿದರು. 

"ಮಿಶ್ರರೇ, ಬಂದಿರುವವರು ಯತಿಗಳು. ಬಂದಿರುವುದು ಶ್ರಾದ್ಧಕಾಲ. ಹೀಗಿರುವಾಗ ಅವರೊಡನೆ ಹೀಗೆ ಸಂವಾದ ಸಲ್ಲದು. ಬಂದಿರುವುದು "ಶ್ರಾದ್ಧ ಸಂರಕ್ಷಕನಾದ ಶ್ರೀ ಮಹಾವಿಷ್ಣು" ಎಂದು ತಿಳಿದು ಅವರನ್ನು ಸತ್ಕರಿಸಿರಿ" ಎಂದರು. 

ಮಿಶ್ರರಿಗೆ ತಮ್ಮ ತಪ್ಪಿನ ಅರಿವಾಯಿತು. ತಕ್ಷಣ ಆಚಾರ್ಯರನ್ನು "ಭಿಕ್ಷಾ ಸ್ವೀಕಾರ" ಮಾಡಬೇಕೆಂದು ಕೋರಿದರು. ಆಚಾರ್ಯರು "ನನಗೆ ವಾದಭಿಕ್ಷೆ ಬೇಕು. ಅನ್ನದ ಭಿಕ್ಷೆ ಅಲ್ಲ" ಅಂದರು. ಮಿಶ್ರರು "ತಮ್ಮೊಡನೆ ವಾದ ಮಾಡುವುದು ಒಂದು ಭಾಗ್ಯವೇ. ಆದರೆ ಇಂದು ಶ್ರಾದ್ಧ ಕಾಲ. ಇಂದು ಈ ಭಿಕ್ಷಾ ಸ್ವೀಕರಿಸಿ. ವಾದ ನಾಳೆ ನಡೆಯಬಹುದು" ಎಂದರು. ಆಚಾರ್ಯರು ಒಪ್ಪಿದರು. 

ಆಚಾರ್ಯರಿಗೆ ಮತ್ತೊಂದು ಎಲೆಯಲ್ಲಿ ಬಡಿಸಿ ಭಿಕ್ಷಾಸ್ವೀಕಾರ ಆಯಿತು. ಜೈಮಿನಿ-ವ್ಯಾಸರನ್ನು ಕೂಡಿಸಿಕೊಂಡು ಶ್ರಾದ್ಧ ಕರ್ಮವೂ ನಡೆಯಿತು. ಹೀಗೆ ಮಿಶ್ರರು "ಯತಿಭಿಕ್ಷಾ" ಮತ್ತು "ಶ್ರಾದ್ಹಕಾರ್ಯ" ಎರಡನ್ನೂ ನಡೆಸಿದರು. 

ಮಾರನೆಯ ದಿನದಿಂದ ನಡೆದ ಐತಿಹಾಸಿಕ ವಾದದ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಎಂಟು ದಿನಗಳ ಅಖಂಡ ವಾದದಲ್ಲಿ ಸೋತ ಮಂಡನ ಮಿಶ್ರರು ಆಚಾರ್ಯರಿಂದ ಸನ್ಯಾಸ ಸ್ವೀಕರಿಸಿ "ಶ್ರೀ ಸುರೇಶ್ವರಾಚಾರ್ಯ" ಎಂದು ಪ್ರಸಿದ್ಧರಾದರು. 

*****

ಕಾಶ್ಮೀರದ ರಾಜಧಾನಿ ಶ್ರೀನಗರ ಪಟ್ಟಣದ ಹೊರಭಾಗದಲ್ಲಿ "ಶಂಕರಾಚಾರ್ಯ ದೇವಾಲಯ" ಎಂದು ಹೆಸರಿನ ಸಣ್ಣ ಬೆಟ್ಟ ಇದೆ. ಅಲ್ಲಿ ಒಂದು ಶಿವನ ದೇವಾಲಯವಿದೆ. ಅದರ ಗರ್ಭಗುಡಿಯ ಕೆಳಭಾಗದಲ್ಲಿ ಒಂದು ಗುಹೆಯಿದೆ. ಶ್ರೀ ಶಂಕರಾಚಾರ್ಯರು ಈ ಗುಹೆಯಲ್ಲಿ ವಾಸಿಸಿ ತಪಸ್ಸು ಮಾಡಿದರೆಂದು ಹೇಳುತ್ತಾರೆ. (ಹೆಚ್ಚಿನ ವಿವರಗಳಿಗೆ ಇಲ್ಲಿ ಕ್ಲಿಕ್ಈ ಮಾಡಿ ಓದಬಹುದು). ಬೆಟ್ಟದ ದೇವಾಲಯದಿಂದ ನೋಡಿದರೆ ಒಂದು ಕಡೆ "ದಾಲ್ ಲೇಕ್" ಸರೋವರ ಕಾಣುತ್ತದೆ. ಅದರ ಬಳಿ "ಸುರೇಶ್ವರಿ" ಎನ್ನುವ ಹೆಸರಿನ ದೇವಿಯ ದೇವಾಲಯವೊಂದು ಇತ್ತಂತೆ. ಈಗ ಇಲ್ಲ. "ಕಾಶ್ಮೀರಪುರವಾಸಿನಿ" ಶಾರದೆಯನ್ನು ನಮ್ಮ ಕರ್ನಾಟಕಕ್ಕೆ ಕರೆತಂದು ಶೃಂಗೇರಿಯಲ್ಲಿ ನೆಲೆಯಾಗುವಂತೆ ಮಾಡಿದ ಮಹಾನುಭಾವರು ಶ್ರೀ ಶಂಕರಾಚಾರ್ಯರು. ಹಾಗೆಯೇ ಶ್ರೀ ಸುರೇಶ್ವರಾಚಾರ್ಯರನ್ನು ಶೃಂಗೇರಿ ಪೀಠದ ಮೊದಲ ಮಠಾಧೀಶರಾಗಿ ನೇಮಿಸಿದರು. 

ಮಂಡನ ಮಿಶ್ರರ ಮನೆಯಲ್ಲಿ ನಡೆದ ಈ ಘಟನೆ ನಂತರ ಶ್ರಾದ್ಧಗಳಲ್ಲಿ "ಶ್ರಾದ್ಧ ಸಂರಕ್ಷಕ ಶ್ರೀ ಮಹಾವಿಷ್ಣು" ಬಂದಿದ್ದಾನೆ ಎಂದು ಭಾವಿಸಿ "ದೇವರ ಎಲೆ" ಹಾಕುವ ಸಂಪ್ರದಾಯ ನಡೆದು ಬಂದಿದೆ. (ದ್ವೈತಿಗಳಲ್ಲಿ ಈ ಸಂಪ್ರದಾಯ ಇಲ್ಲ). ಜ್ಞಾನವೃದ್ಧರು ಮತ್ತು ವಯೋವೃದ್ಧರೊಬ್ಬರನ್ನು ಕರೆದು ಈ ಎಲೆಯಲ್ಲಿ ಭೋಜನಕ್ಕೆ ಕೂಡಿಸುತ್ತಿದ್ದರು. ಅಥವಾ ಆ ಸಮಯದಲ್ಲಿ ಅನಿರೀಕ್ಷಿತವಾಗಿ ಬಂದ ಅತಿಥಿಗೆ ಅಲ್ಲಿ ಅವಕಾಶ ಇತ್ತು. ಯಾರೂ ಬಾರದಿದ್ದರೆ ನಂತರ ಮನೆಯ ಹಿರಿಯರು ಅಥವಾ ಶ್ರಾದ್ಧ ಮಾಡುವ ಕರ್ತೃಗಳಲ್ಲಿ ಒಬ್ಬರು ಅಲ್ಲಿ ಭೋಜನ ಮಾಡುತ್ತಿದ್ದರು. 

"ನಾಲ್ಕು ಮಾತುಗಳು" ಅನ್ನುವ ಸಂಚಿಕೆಯಲ್ಲಿ ಶ್ರಾದ್ಧ ಕರ್ಮಗಳಲ್ಲಿ ದೌಹಿತ್ರರ ಆಹ್ವಾನದ ವಿಷಯ ಬಂದಿದೆ. (ವಿವರಗಳನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು). ಮಿತ್ರರೊಬ್ಬರು ದೌಹಿತ್ರರು ಹೆಣ್ಣಾಗಿದ್ದರೆ ಈ ಎಲೆಯಲ್ಲಿ ಭೋಜನ ಮಾಡಲು ಕೂಡಿಸುತ್ತಾರೆ ಎಂದು ತಿಳಿಸಿದ್ದಾರೆ. ಅವರವರ ಮನೆಯ ಸಂಪ್ರದಾಯದಂತೆ ಇದು ನಡೆಯುತ್ತದೆ. 

ಹೀಗೆ ನಡೆದುಬಂದಿರುವ "ದೇವರ ಎಲೆ" ಒಂದು ಐತಿಹಾಸಿಕ ಮತ್ತು ಧಾರ್ಮಿಕ ಹಿನ್ನೆಲೆ ಇರುವ, ಬಹಳ ಗೌರವದಿಂದ ಕೂಡಿರುವ ಆಚರಣೆ. 

Sunday, November 16, 2025

ಪಂಡಿತರ ಮನೆ ಎಲ್ಲಿದೆ?


ಪ್ರಯಾಗ ನಗರದಿಂದ ಹೊರಟ ಆಚಾರ್ಯರು ಆಗ ತಾನೇ ಮಾಹಿಷ್ಮತಿ ನಗರಕ್ಕೆ ಬಂದು ತಲುಪಿದ್ದರು. ವ್ಯರ್ಥವಾಗಿ ಕಾಲ ಹರಣ ಮಾಡುವ ಪ್ರವೃತ್ತಿ ಅವರದ್ದಲ್ಲ. ಅವರಿಗೆ ಆಗ ಸುಮಾರು ಹದಿನೇಳು-ಹದಿನೆಂಟನೆಯ ವಯಸ್ಸು. ಆ ವಯಸ್ಸಿನ ಬಹುತೇಕ ಯುವಕರಿಗೆ ವಿದ್ಯಾಭ್ಯಾಸವೂ ಮುಗಿದಿರುವುದಿಲ್ಲ. ಜೀವನದಲ್ಲಿ ತಮ್ಮ ಗುರಿ ಏನು ಎನ್ನುವುದೇ ಗೊತ್ತಿರುವುದಿಲ್ಲ. ಆದ ಕಾರಣ ಗುರಿ ಸಾಧನೆಯ ವಿಷಯವಂತೂ ಬಲು ಬಲು ದೂರವೇ. ಆಚಾರ್ಯರಾದರೋ ತಮ್ಮ ಎಂಟನೆಯ ವಯಸ್ಸಿನಲ್ಲಿಯೇ ನಾಲ್ಕು ವೇದಗಳನ್ನು ಕಲಿತು ವಿದ್ವಾಂಸರೆಂದು ಹೆಸರು ಪಡೆದಿದ್ದರಂತೆ. ಹದಿನಾರನೆಯ ವಯಸ್ಸಿಗೇ ಭಾಷ್ಯಗಳನ್ನೂ, ಸ್ತೋತ್ರ ಕಾವ್ಯಗಳನ್ನೂ ರಚಿಸಿದ್ದ ಹಿರಿಮೆ ಅವರದ್ದು. 

ಹುಟ್ಟಿದ್ದು ದಕ್ಷಿಣ ದೇಶದ ಒಂದು ಸಣ್ಣ ಊರಿನಲ್ಲಿ. ಈ ವೇಳೆಗಾಗಲೇ ಅನೇಕ ಘನ ವಿದ್ವಾಂಸರನ್ನು ವಾದಗಳಲ್ಲಿ ಜಯಿಸಿ, ದೇಶವೆಲ್ಲ ಸುತ್ತಿ, ಕಾಶಿಯವರೆಗೂ ಬಂದು ತಮ್ಮ ವಿದ್ವತ್ತಿನ, ಸಾಧನೆಯ ಪರಿಚಯ ಮಾಡಿಕೊಟ್ಟಿದ್ದವರು. ಅನೇಕ ಮಂದಿ ಶಿಷ್ಯರನ್ನು ಸಂಪಾದಿಸಿದ್ದವರು. ತಮ್ಮ ಗುರಿ ಸಾಧನೆಯ ಮುಂದಿನ ಹೆಜ್ಜೆಯಾಗಿ ಈಗ ತಕ್ಷಣ ಮಾಹಿಷ್ಮತಿಯ ಪ್ರಸಿದ್ಧ ಪಂಡಿತರೂ, ಕರ್ಮಠರೂ ಆದ ಮಂಡನ ಮಿಶ್ರರನ್ನು ಕಂಡು ಅವರನ್ನು ವಾದಕ್ಕೆ ಆಹ್ವಾನಿಸಲು ಹೊರಟಿದ್ದರು. 

ಅದು ವೈದಿಕ ಧರ್ಮ ಅನುಸರಿಸುವವರಿಗೆ ಬಹಳ ಕಠಿಣ ಪರಿಸ್ಥಿತಿಯ ಕಾಲ. ಬೌದ್ಧ ಧರ್ಮ ಎಲ್ಲೆಲ್ಲೂ ಹರಡಿ ವಿಜೃಂಭಿಸುತ್ತಿದ್ದ ಸಮಯ. ಪ್ರಯಾಗದ ಖ್ಯಾತ ಪಂಡಿತರಾದ ಕುಮಾರಿಲ ಭಟ್ಟರು ಬೌದ್ಧ ಧರ್ಮದ ಸೂಕ್ಷ್ಮಗಳನ್ನು ತಿಳಿದುಕೊಳ್ಳದ ಹೊರತು ಬೌದ್ಧ ಪಂಡಿತರನ್ನು ವಾದಗಳಲ್ಲಿ ಸೋಲಿಸುವುದು ಸುಲಭ ಸಾಧ್ಯವಲ್ಲ ಎಂದು ಮನಗಂಡು, ಮಾರುವೇಷದಲ್ಲಿ ಅವರ ವಿದ್ಯಾಲಯವನ್ನೇ ಸೇರಿ ಎಲ್ಲಾ ಸೂಕ್ಷ್ಮಗಳನ್ನೂ ತಿಳಿದರು. ನಂತರ ಅದನ್ನು ಖಂಡನೆಮಾಡಿ ಕಡೆಗೆ ತುಷಾಗ್ನಿ (ಭತ್ತದ ಹೊಟ್ಟು ಉರಿಯುವ ಬೆಂಕಿ) ಪ್ರವೇಶಿಸಿದರು. ಆಚಾರ್ಯರು ಅವರನ್ನು ಕಾಣಲು ಹೋಗುವ ವೇಳೆಗೆ ಅವರಾಗಲೇ ಬೆಂಕಿಯಲ್ಲಿ ಬೇಯುತ್ತಿದ್ದರು. 

ಕುಮಾರಿಲ ಭಟ್ಟರು ಆಚಾರ್ಯರನ್ನು ಮಂಡನ ಮಿಶ್ರರನ್ನು ವಾದಕ್ಕೆ ಆಹ್ವಾನಿಸುವಂತೆ ತಿಳಿಸಿ ತಮ್ಮ ಜೀವನ ಮುಗಿಸಿದರು. ಆಚಾರ್ಯರು ಮಂಡನ ಮಿಶ್ರ ಪಂಡಿತರು ಆಗ ವಾಸವಿದ್ದ ಮಾಹಿಷ್ಮತಿ ನಗರಕ್ಕೆ ಈ ಕಾರಣದಿಂದ ಬಂದಿದ್ದರು. ಅವರಿಗೆ ಮಂಡನ ಪಂಡಿತರ ಮನೆ ಸೇರಬೇಕಾಗಿತ್ತು. ಅದಕ್ಕಾಗಿ ಮಂಡನ ಪಂಡಿತರ ಮನೆ ಎಲ್ಲಿದೆ ಎಂದು ಯಾರನ್ನಾದರೂ ಕೇಳಲು ನೋಡುತ್ತಿದ್ದರು. ಆಗ ಮಧ್ಯಾನ್ಹದ ಸಮಯ.  

ಆಚಾರ್ಯರು ತಮ್ಮ ದಾರಿಯಲ್ಲಿ ಎದುರಿನಿಂದ ನೀರು ತರಲು ಬರುತ್ತಿದ್ದ ಕೆಲವು ಹೆಣ್ಣು ಮಕ್ಕಳನ್ನು ಕಂಡರು. ಅವರನ್ನು "ಮಂಡನ ಪಂಡಿತರ ಮನೆ ಎಲ್ಲಿದೆ?" ಎಂದು ಕೇಳಿದರು. 

*****

ಅನೇಕ ಪ್ರಾಚೀನ ನಗರಗಳು ಈಗಲೂ ಜೀವತುಂಬಿ ಧಾರ್ಮಿಕ, ಸಾಂಸ್ಕೃತಿಕ ಮತ್ತು ವಿದ್ಯಾ ಕೇಂದ್ರಗಳಾಗಿ ಕಾಣಸಿಗುತ್ತವೆ. ಕಾಶಿ, ಪ್ರಯಾಗ (ಅಲಹಾಬಾದ್), ಅಯೋಧ್ಯಾ, ದ್ವಾರಕಾ, ಉಜ್ಜಯನಿ ಮುಂತಾದುವು ಕೆಲವು ಉದಾಹರಣೆಗಳು. ಮಾಹಿಷ್ಮತಿಯೂ ಹಿಂದೆ ಇಂತಹ ಒಂದು ನಗರವಾಗಿತ್ತು. ನರ್ಮದಾ ನದಿಯ ದ್ವೀಪವೊಂದರಲ್ಲಿ ಈ ಪಟ್ಟಣ ಇತ್ತಂತೆ. ಕಾವೇರಿ ನದಿಯು ಎರಡು ಭಾಗವಾಗಿ ಶ್ರೀರಂಗಪಟ್ಟಣ ದ್ವೀಪ ಇರುವಂತೆ. 

ಸುಪ್ರಸಿದ್ಧನಾದ ಮಾಂಧಾತ ಚಕ್ರವರ್ತಿಯ ಮಗ ಮುಚುಕುಂದ ಮಹಾರಾಜನು ಈ ನಗರದ ಕಾರಣ ಕರ್ತನಂತೆ. ಬಹಳ ಕಾಲ "ಹೈಹಯ" ಎಂಬ ಹೆಸರಿನ ರಾಜವಂಶದವರ ರಾಜಧಾನಿಯಾಗಿತ್ತು. ಕಾರ್ತಿವೀರ್ಯಾರ್ಜುನನು ಈ ಮಾಹಿಷ್ಮತಿಯ ರಾಜನಾಗಿದ್ದು ಶ್ರೀ ಪರಶುರಾಮರಿಂದ ಹತನಾದನು ಎಂದು ತಿಳಿದುಬರುತ್ತದೆ. ಈಗ ಈ ನಗರವಿಲ್ಲ. ಅನೇಕ ಭೌತಿಕ ಕಾರಣಗಳಿಂದ ಕಣ್ಮರೆಯಾದ ನಗರಗಳಲ್ಲಿ ಮಾಹಿಷ್ಮತಿಯೂ ಒಂದು. (ಈಚಿನ ಪ್ರಸಿದ್ಧ ಚಲನಚಿತ್ರ "ಬಾಹುಬಲಿ" ಮಾಹಿಷ್ಮತಿ ಎನ್ನುವ ನಗರದ ಕಥೆ ಎಂದು ಈ ಚಿತ್ರ ನೋಡಿರುವವರು ನೆನಪಿಸಿಕೊಳ್ಳಬಹುದು). 

ನರ್ಮದೆಯು ನಾವು ಪ್ರತಿದಿನ ನೆನೆಸಿಕೊಳ್ಳುವ ಒಂದು ಜೀವನದಿ. "ಗಂಗೇಚ ಯಮುನೇಚೈವ ಗೋದಾವರಿ ಸರಸ್ವತಿ, ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂಕುರು" ಎಂದು ಕಲಶ ಸ್ಥಾಪನೆ ಸಂದರ್ಭಗಳಲ್ಲಿ ಆಹ್ವಾನಿಸುತ್ತೇವೆ. ನಮ್ಮ ದೇಶದಲ್ಲಿ ಪೂರ್ವದಿಂದ ಹರಿದು ಪಶ್ಚಿಮ ಸಮುದ್ರ ಸೇರುವ ಅತ್ಯಂತ ದೊಡ್ಡ ನದಿ ಇದು. ಮಧ್ಯ ಪ್ರದೇಶ ಮತ್ತು ಗುಜರಾತು ರಾಜ್ಯಗಳ ಅನೇಕ ಎಕರೆ ಪ್ರದೇಶಗಳಿಗೆ ನೀರಾವರಿ ಮತ್ತು ಕುಡಿಯುವ ನೀರಿನ ಸ್ರೋತ ಈ ನದಿ. ಈಚಿನ "ಸರ್ದಾರ್ ಸರೋವರ್ ಡ್ಯಾಮ್" ಗುಜರಾತಿನ ಬಹುತೇಕ ಮರುಭೂಮಿಗೂ ಜೀವ ಕೊಟ್ಟಿರುವ ಸಂಗತಿ ಎಲ್ಲರಿಗೂ ಗೊತ್ತು. 

ಆಚಾರ್ಯ ಶಂಕರರಿಗೂ ನರ್ಮದೆಗೂ ಒಂದು ವಿಶೇಷ ನಂಟು. ದಕ್ಷಿಣದ ಕೇರಳದಲ್ಲಿ ಹುಟ್ಟಿದ ಅವರು ಸನ್ಯಾಸ ಸ್ವೀಕರಿಸಲು ಗುರುವನ್ನು ಹುಡುಕಿಕೊಂಡು ಹೊರಟಾಗ ಅವರಿಗೆ ಗುರುಗಳಾದ ಶ್ರೀ ಗೋವಿಂದ ಭಗವತ್ಪಾದರು ಸಿಕ್ಕಿದುದು ಈ ನರ್ಮದೆಯ ತೀರದಲ್ಲೇ. ಶ್ರೀ ಗೌಡಪಾದಾಚಾರ್ಯರ ಶಿಷ್ಯರಾದ ಶ್ರೀ ಗೋವಿಂದ ಭಗವತ್ಪಾದರು ತಮ್ಮನ್ನು ಹುಡುಕಿಕೊಂಡು ಬಂದ ಈ ಶಿಷ್ಯನಿಗೆ ಸನ್ಯಾಸ ಕೊಟ್ಟು ಶ್ರೀ ಶಂಕರಾಚಾರ್ಯ ಎಂದು ಹೆಸರು ಕೊಟ್ಟರು. ಅಲ್ಲಿಂದ ಪ್ರಾರಂಭವಾದ ಆಚಾರ್ಯರ ದೇಶ ಪರ್ಯಟನೆ ಈಗ ಮತ್ತೆ ಅವರನ್ನು ನರ್ಮದೆಯ ತೀರಕ್ಕೆ ತಂದಿತ್ತು. 

*****

"ಕುತ್ರಾಲಯೋ ಮಂಡನ ಪಂಡಿತಸ್ಯ?" ("ಮಂಡನ ಪಂಡಿತರ ಮನೆ ಎಲ್ಲಿದೆ?") ಎಂದು ಆಚಾರ್ಯರು ಕೇಳಿದ ನೀರು ತರಲು ಹೊರಟಿದ್ದ ಹೆಣ್ಣು ಮಕ್ಕಳು ಬೇರೆ ಯಾರೋ ಆಗಿರದೆ ಮಂಡನ ಮಿಶ್ರರ ಮನೆಯ ಕೆಲಸದವರೇ ಆಗಿದ್ದರು. ತಮ್ಮನ್ನು ಕೇಳುತ್ತಿರುವ ಸನ್ಯಾಸಿ ಯುವಕನನ್ನು ಅವರು ನೋಡಿದರು. ಕಂಡ ಕೂಡಲೇ ಗೌರವ ಹುಟ್ಟುವ ಆಕರ್ಷಕ ವ್ಯಕ್ತಿತ್ವ. ತೇಜಸ್ವಿ ಸನ್ಯಾಸಿ. ಮಿಶ್ರರ ಮನೆಯ ದಾರಿ ಬೇರೆ ಯಾರಿಗೋ ಹೇಳಿದಂತೆ ಸುಮ್ಮನೆ ಹೇಳಿದರೆ ಹೇಗೆ? ಅವರು ಎರಡು ಶ್ಲೋಕಗಳಲ್ಲಿ ಮಂಡನ ಮಿಶ್ರ ಪಂಡಿತರ ಮನೆಯ ಗುರುತು ಹೇಳಿದರು:

ಸ್ವತಃ ಪ್ರಮಾಣಂ ಪರತಃ ಪ್ರಮಾಣಂ 
ಕೀರಾಂಗನಾ ಯತ್ರ ಗಿರಂ ಗಿರಂತಿ 
ದ್ವಾರಸ್ಥ ನೀಡಾಂತರ ಸಂನಿರುದ್ಧಾ 
ಜಾನೀಹಿ ತಂ ಮಂಡನಮಿಶ್ರ ಗೇಹಂ 

ಫಲಪ್ರದಂ ಕರ್ಮ ಫಲಪ್ರದೋಜ:
ಕೀರಂಗನಾ ಯತ್ರ ಗಿರಂ ಗಿರಂತಿ 
ದ್ವಾರಸ್ಥ ನೀಡಾಂತರ ಸಂನಿರುದ್ಧಾ 
ಜಾನೀಹಿ ತಂ ಮಂಡನ ಪಂಡಿತೌಕಃ  

"ಹೀಗೇ ಸ್ವಲ್ಪ ಮುಂದೆ ಹೋಗಿ. ಒಂದು ಮನೆಯ ಮುಂದೆ ಪಂಜರಗಳನ್ನು ತೂಗುಹಾಕಿದ್ದಾರೆ. ಅದರಲ್ಲಿರುವ ಗಿಳಿಗಳು "ಸ್ವತಃ ಪ್ರಮಾಣಂ ಪರತಃ ಪ್ರಮಾಣಂ" ಎಂದು ಕೂಗುತ್ತಿರುತ್ತವೆ. ಮತ್ತೆ ಕೆಲವು ಪಂಜರದ ಗಿಣಿಗಳು "ಫಲವನ್ನು ಕೊಡತಕ್ಕದ್ದು ಕರ್ಮ; ಫಲವನ್ನು ಕೊಡುವವನು ಈಶ್ವರ" ಎಂದು ಹೇಳುತ್ತಿರುತ್ತವೆ. ಅದೇ ಮಂಡನ ಮಿಶ್ರ ಪಂಡಿತರ ಮನೆ ಎಂದು ತಿಳಿಯಿರಿ!"

ಒಂದು ಸಾಮಾನ್ಯ ಪ್ರಶ್ನೆಗೆ ಎಂತಹ ಸುಂದರ ಉತ್ತರ! "ಮಂಡನ ಮಿಶ್ರರ ಮನೆಗೆ ಬರುವ ಅನೇಕ ಮೀಮಾಂಸಕರು, ತಾರ್ಕಿಕರು ಮತ್ತು ವಿದ್ವಾಂಸರು ನಡೆಸುವ ವಿದ್ವತ್ಸಭೆಗಳಲ್ಲಿ ನಡೆಯುವ ಚರ್ಚೆಗಳನ್ನು ಕೇಳಿಸಿಕೊಂಡಿರುವ ಗಿಣಿಗಳೂ ಸಹ ತಮ್ಮತಮ್ಮಲ್ಲಿ (ಬೇರೆ ವಿಷಯಗಳನ್ನು ಮಾತಾಡುವುದು ಬಿಟ್ಟು) ವೇದ-ಶಾಸ್ತ್ರ ಸಂಬಂಧಿ ವಿಷಯಗಳ ವಾಕ್ಯಾರ್ಥ ಮಾಡುತ್ತಿರುತ್ತವೆ. ಅದೇ ಪಂಡಿತರ ಮನೆ" ಎಂದು ಭಾವಾರ್ಥ. 

ಮಂಡನ ಮಿಶ್ರರ ಮನೆಯ ಕೆಲಸದ ಹೆಣ್ಣು ಮಕ್ಕಳೇ ಈ ರೀತಿ ಹೇಳುವವರಾದರೆ ಮಂಡನ ಮಿಶ್ರರು ಸ್ವತಃ ಎಂತಹ ದೊಡ್ಡ ವಿದ್ವಾಂಸರಾಗಿರಬೇಕು!

*****

ಮೇಲೆ ಹೇಳಿದ ಪ್ರಸಂಗ ಶ್ರೀ ವಿದ್ಯಾರಣ್ಯರು ರಚಿಸಿದ್ದು ಎನ್ನಲಾದ (ಅವರು ಸನ್ಯಾಸ ತೆಗೆದುಕೊಳ್ಳುವ ಮೊದಲಿನ "ಮಾಧವ" ಎನ್ನುವ ಹೆಸರಿನಲ್ಲಿ ರಚಿಸಿದ್ದು) "ಶ್ರೀ ಶಂಕರ ದಿಗ್ವಿಜಯ" ಕಾವ್ಯದ ಎಂಟನೆಯ ಸರ್ಗದಲ್ಲಿ ಕಂಡುಬರುತ್ತದೆ. ಈ ಕಾವ್ಯವು 16 ಸರ್ಗಗಳಲ್ಲಿ 1,800 ಶ್ಲೋಕಗಳ ಸುಂದರ ಕೃತಿ. ಒಂದು ಕಾವ್ಯ ಎಂದು ಓದಿ ರಸಾಸ್ವಾದನೆ ಮಾಡಬಹುದು. ಶ್ರೀ ಶಂಕರ ಭಗವತ್ಪಾದರ ಜೀವನ ಚರಿತ್ರೆ ಎಂದಾದರೂ ಓದಬಹುದು. 

ಶ್ರೀ ವಿದ್ಯಾರಣ್ಯರು ಕನ್ನಡಿಗರಿಗೆ ಪ್ರಾತಃ ಸ್ಮರಣೀಯರು. ವಿಜಯನಗರ ಸ್ಥಾಪನೆಗೆ ಮೂಲ ಕಾರಣರು. ಹದಿನಾಲ್ಕನೇ ಶತಮಾನದಲ್ಲಿ ನಮ್ಮ ಕರ್ನಾಟಕದಲ್ಲಿ ಸಮಾಜಕ್ಕೆ ಅವಿಸ್ಮರಣೀಯ ಸೇವೆ ಸಲ್ಲಿಸಿದವರು. ಇದರ ಬಗ್ಗೆ ಹೆಚ್ಚಿನ ವಿವರಗಳನ್ನು ಮುಂದೆ ಒಂದು ದಿನ ನೋಡೋಣ. 

Monday, November 10, 2025

ಜಾಗ ಬಿಟ್ಟವರುಂಟೇ?


ಒಂದು ಬಹಳ ಹಳೆಯ ಕಥೆ. ಎಲ್ಲರಿಗೂ ಗೊತ್ತಿರುವಂಥದ್ದೇ. ಎಲ್ಲರ ಬಾಯಿಯಲ್ಲಿ ಒಂದೇ ನಾಲಿಗೆ ಇರುವುದು. (ಹಾವುಗಳಿಗೆ ಎರಡು ನಾಲಿಗೆಯಂತೆ. ಆದರೆ ಹಾವಿನ ಸ್ವಭಾವದ ಮನುಷ್ಯರಿಗೂ ಒಂದೇ ನಾಲಿಗೆ). ಹಲ್ಲುಗಳು ಸಂಖ್ಯೆಯಲ್ಲಿ ಅನೇಕ. ಅವುಗಳಲ್ಲಿ ಒಗ್ಗಟ್ಟು ಚೆನ್ನಾಗಿ ಇದೆ. ಕಬಡ್ಡಿ ಆಟದಲ್ಲಿ ಎದುರಾಳಿಯನ್ನು ಹಿಡಿದುಹಾಕಲು ಕೈ-ಕೈ ಹಿಡಿದುಕೊಂಡು ನಿಂತಿರುವ ಆಟಗಾರರಂತೆ ಅವುಗಳ ಮಾಟ. ಜೊತೆಗೆ, ಮೇಲೆ-ಕೆಳಗೆ ಸೇರಿಕೊಂಡು ಹಿಡಿದು-ಕಚ್ಚುವ ಅಭ್ಯಾಸ ಬೇರೆ. ಮಧ್ಯದಲ್ಲಿ ಸಿಕ್ಕಿದ್ದನ್ನು ಅಗಿದು ನುಣ್ಣಗೆ ಮಾಡುವ ಚಪಲ ಕೂಡ ಉಂಟು. ನಾಲಿಗೆಗೂ ಹಲ್ಲುಗಳಿಗೂ ಒಮ್ಮೆ ಜಗಳ ಆಯಿತಂತೆ. ಎಲ್ಲವೂ ನಾಲಿಗೆಯ ಮೇಲೆ ಬಿದ್ದವು. "ನೋಡು, ಹುಷಾರ್, ನೀನು ಇರುವುದು ಒಬ್ಬ. ನಾವು ಗುಂಪಾಗಿ ಇದ್ದೇವೆ. ಕಡಿದು ಚಟ್ನಿ ಮಾಡುತ್ತೇವೆ" ಅಂದವಂತೆ. ನಾಲಿಗೆ ಒಂದು ನಿಮಿಷ ಯೋಚಿಸಿತು. ನಂತರ ಹೇಳಿತು: "ಇರಬಹುದು. ಆದರೆ ನಾನು ಒಂದೇ ಒಂದು ತಪ್ಪು ಮಾತನಾಡಿದರೆ ನೀವು ಅಷ್ಟು ಮಂದಿಯನ್ನೂ ಬೇರೆ ಯಾರೋ ಉದುರಿಸಿಬಿಡುತ್ತಾರೆ. ನಾನು ಏನೂ ಕಷ್ಟ ಪಡಬೇಕಾಗಿಲ್ಲ". ಅದೇ ಜಗಳದ ಕಡೆ. ಅಂದಿನಿಂದ ಹಲ್ಲುಗಳು ನಾಲಿಗೆಯ ಸಹವಾಸ ಬೇಡ ಅಂತ ತೀರ್ಮಾನಿಸಿವೆಯಂತೆ. 

ಹುಟ್ಟುವಾಗ ಇಲ್ಲದವು ಮಧ್ಯೆ ಬಂದು ಕೂಡುತ್ತವೆ. ನಂತರವೂ ಒಮ್ಮೆ ಬಿದ್ದು ಮತ್ತೆ ಹುಟ್ಟುತ್ತವೆ. ಆಮೇಲೆ ಬಿದ್ದರೆ ಕಥೆ ಮುಗಿಯಿತು. ಆದರೂ ಮುಖದ ಅಂದಕ್ಕೆ, ಹೊಟ್ಟೆಯ ಯೋಗಕ್ಷೇಮಕ್ಕೆ ಈ ಹಲ್ಲುಗಳು ಬಹಳ ಮುಖ್ಯ. ಬೊಚ್ಚುಬಾಯಿ ಆಗುವುದು ಯಾರಿಗೂ ಬೇಡ. ಹಲ್ಲುಗಳ ಚಂದದ ಬಗ್ಗೆ ಅನೇಕ ರೀತಿ ವಿವರಣೆಗಳಿವೆ. ಮಲ್ಲಿಗೆ ಮೊಗ್ಗಿನ ತರಹ ಅನ್ನುತ್ತಾರೆ. ಮುತ್ತಿನ ತರಹ ಅನ್ನಬಹುದು. ಚರ್ಮದ ಬಣ್ಣ ಏನೇ ಇರಬಹುದು. ಎಲ್ಲರಿಗೂ ಬಿಳಿ ಬಣ್ಣದ ಹಲ್ಲೇ ಬೇಕು. ಅದನ್ನು ಬಿಳಿಯಾಗಿಡಲು ಅನೇಕ ಸಾಹಸ ಮಾಡುತ್ತಾರೆ. ಅವು ಸ್ವಲ್ಪ ಸೊಟ್ಟ ಇದ್ದರೆ "ವಕ್ರ ದಂತ ಚಿಕಿತ್ಸಾಲಯ" ದರ್ಶನ ಮಾಡುತ್ತಾರೆ. ಗಂಟೆಗಟ್ಟಲೆ ಅಲ್ಲಿ ಕಾದು ಕುಳಿತಿದ್ದು, ಕಾಸು ಕೊಟ್ಟು ಸರಿ ಮಾಡಿಸಿಕೊಳ್ಳುತ್ತಾರೆ. 

ಏನು ಮಾಡಿದರೂ ಬಾಯಿ ಬಿಡದವರು ದಂತ ವೈದ್ಯರ ಮುಂದೆ ಬಾಯಿ ಬಾಯಿ ಬಿಡುತ್ತಾರೆ. ಕೆಲವರ ಬಾಯಿ ಮುಚ್ಚಿಸುವುದು ಬಹಳ ಕಷ್ಟ. ಅಂತಹವರನ್ನು ದಂತ ವೈದ್ಯರ ಬಳಿ ಕಳುಹಿಸಬೇಕು. ಅಲ್ಲಿ ಹೆಚ್ಚು ಮಾತಾಡುವಂತಿಲ್ಲ. ಹೆಚ್ಚೇನು, ಮಾತೇ ಆಡುವಂತಿಲ್ಲ. "ಬಾಯಿ ತೆಗಿ" ಅಂದರೆ ತೆಗಿಯಬೇಕು. ಸುಮ್ಮನೆ ತೆಗೆದರೆ ಸಾಲದು. ಗಂಟಲು ನೋವು ಬರುವವರೆಗೂ ಹಿಗ್ಗಿಸಬೇಕು. "ಬಾಯಿ ಮುಚ್ಚು" ಅಂದಾಗ ತಕ್ಷಣ ಮುಚ್ಚಬೇಕು. ಇಷ್ಟೆಲ್ಲಾ ಮಾಡಿ ಕಡೆಗೆ ನಾವೇ ದುಡ್ಡು ಕೊಟ್ಟು ಬರಬೇಕು. ಆದರೂ ಹಲ್ಲುಗಳು ಬಾಯಲ್ಲಿ ಉಳಿಯಬೇಕು. ಇದು ಕೊನೆಯಿರದ ಒಂದು ಆಸೆ. 

*****

ಮನುಷ್ಯನ ದೇಹದ ರೂಪಕ್ಕೆ ಮೆರಗುಕೊಡುವ ಒಂದು ಮುಖ್ಯ ಭಾಗ ಕೂದಲು. ಅದನ್ನು ಸರಿಯಾಗಿ ಗಮನಿಸದಿದ್ದರೆ ಅದೇ ಕುರೂಪಕಾರಕ ಆಗುವುದೂ ಹೌದು. ಅದನ್ನು ದೇಹದ ಒಂದು ಅಂಗ ಎನ್ನುವಂತಿಲ್ಲ. ಕತ್ತರಿಸಿ ಬಿಸಾಡಿದರೂ ಮತ್ತೆ ಮತ್ತೆ ಚಿಗುರುವುದು ಈ ಕೂದಲು. ನೀರು, ಗೊಬ್ಬರ ಬೇಕಾಗಿಲ್ಲ. ಒಬ್ಬನೇ ವ್ಯಕ್ತಿಗೆ ಬೇರೆ ಬೇರೆ ಕಾಲಗಳಲ್ಲಿ ವಿವಿಧ ರೀತಿಯ ನೋಟಗಳನ್ನೂ ಮತ್ತು ಹೊಳಪನ್ನು ಕೊಡುವ ಶಕ್ತಿ ಈ ಕೂದಲೆಂಬುದಕ್ಕೆ ಮತ್ತು ಅದಕ್ಕೆ ಮಾಡುವ ಕೇಶವಿನ್ಯಾಸಗಳಿಗೆ ಉಂಟು. ಹೆಂಗಸರಿಗಂತೂ ಅದು ಸೌಂದರ್ಯದ ಅಳತೆಗೋಲುಗಳಲ್ಲಿ ಒಂದು. "ನೀಲವೇಣಿ", "ನಾಗವೇಣಿ", "ಮೊಣಕಾಲುವರೆಗಿನ ಜಡೆ", ಹೀಗೆ ವರ್ಣನೆಗಳು. ಹಿಂದೆ ಗಂಡಸರೂ ಶಿಖೆ ಬಿಡುತ್ತಿದ್ದರು. ಈಗ ಅದಿಲ್ಲ. ಶಿಖೆ ಇಲ್ಲ ಅಂದ ಮಾತ್ರಕ್ಕೆ ಕೂದಲು ಉದ್ದ ಬಿಡುವುದೇನೂ ಕಡಿಮೆಯಾಗಿಲ್ಲ ಅನ್ನುವುದೇನೋ ಸತ್ಯವೇ. 

ಗಂಡುಮಕ್ಕಳಿಗೂ ಚಿಕ್ಕ ವಯಸ್ಸಿನಲ್ಲಿ ಮೊಗ್ಗಿನ ಜಡೆ, ಮುತ್ತಿನ ಜಡೆ ಇತ್ಯಾದಿ ಹಾಕಿ ಫೋಟೋ ತೆಗೆಸುತ್ತಿದ್ದ ಕಾಲ ಒಂದಿತ್ತು. ಬೋಡು ಬುರುಡೆ ವೃದ್ಧರೂ ಚೆನ್ನಾಗಿ "ಭೃಂಗಾಮಲಕ ತೈಲ" ಹಚ್ಚಿಕೊಂಡು ಕೂದಲು ಬೆಳೆಯುವುದೆಂದು ಕನ್ನಡಿ ನೋಡಿಕೊಳ್ಳುತ್ತಿದ್ದ ಕಾಲವೂ ಇತ್ತು. ಕೆಲವರು ಈಗಲೂ ಅದನ್ನು ಮುಂದುವರೆಸಿರಬಹುದು.  ಚಿಕ್ಕ ವಯಸ್ಸಿನಲ್ಲೇ ತಲೆಗೂದಲು ಬರಿದಾದ ಗಂಡುಗಳಿಗೆ ವಿವಾಹವೇ ಕಷ್ಟ. ತಲೆಯ ಒಳಗಡೆ ಏನೂ ಇಲ್ಲದಿದ್ದರೂ ಚಿಂತೆಯಿಲ್ಲ. ಹೊರಗಡೆ ಕೂದಲು ಹುಲುಸಾಗಿ ಬೆಳೆದಿರಬೇಕು. ಮದುವೆಯಾದಮೇಲೆ ಎಲ್ಲ ಕೂದಲು ಉದುರಿಹೋದರೂ ಪರವಾಗಿಲ್ಲ. "ಹೆಂಡತಿ ಜುಟ್ಟು ಹಿಡಿದು, ಎಳೆದು, ಕಿತ್ತುಹಾಕಿದಳು" ಎಂದು ಅವಳ ಮೇಲೆ ಗೂಬೆ ಕೂರಿಸಬಹುದು. ಕೂದಲಿಗೆಂದೇ ಮುಡುಪಾದ ಅನೇಕ ಸೌಂದರ್ಯವರ್ಧಕ ಸ್ಥಳಗಳು ಉಂಟು. ಬಣ್ಣ ಬದಲಾಯಿಸುವುದರಿಂದ ಹಿಡಿದು ಅನೇಕ ಸೊಗಸು ಹೆಚ್ಚಿಸುವ ಕ್ರಿಯೆಗಳಿವೆ. ಅವರವರ ಇಷ್ಟ ಮತ್ತು ಹಣದಚೀಲಕ್ಕೆ ತಕ್ಕಂತೆ. 

ಶ್ರೀಕೃಷ್ಣನನ್ನು ನೆನೆಯುವಾಗ ಅವನ ವರ್ಣನೆ ಗುಂಗುರು ಕೂದಲಿನಿಂದಲೇ ಪ್ರಾರಂಭ, "ಕುಟಿಲ ಕುಂತಲಂ, ಕುವಲಯದಳ ನೀಲಂ, ಕೋಟಿ ಮದನ ಲಾವಣ್ಯಂ" ಎಂದು ಪ್ರಾರಂಭ. ಚಾಣಕ್ಯನ ಕೂದಲು ವಿಶ್ವ ಪ್ರಸಿದ್ಧ. ಒಂದು ದೊಡ್ಡ ರಾಜ ಸಂತತಿಯನ್ನೇ ನುಂಗಿ ನೀರು ಕುಡಿದದ್ದು ಅವನ ಉದ್ದ ಕೂದಲೇ. ನೂರು ಮಂದಿ ಕೌರವರನ್ನು ಬಲಿ ತೆಗೆದುಕೊಂಡದ್ದೂ ದ್ರೌಪದಿಯ ಕೂದಲೇ ಅಲ್ಲವೇ?

ಶ್ರೀಕೃಷ್ಣ ಹಾಲು ಕುಡಿಯಲು ಯಶೋದೆಯನ್ನು ಬಹಳ ಸತಾಯಿಸುತ್ತಿದನಂತೆ. ಅವಳು ಒಂದು ದಿನ "ಹಾಲು ಕುಡಿದರೆ ನಿನ್ನ ಕೂದಲು ತುಂಬಾ ಚೆನ್ನಾಗಿ ಬೆಳೆಯುತ್ತದೆ" ಎಂದು ಪುಸಲಾಯಿಸಿದಳು. ಕೃಷ್ಣ ಹಾಲಿನ ಲೋಟ ಹಿಡಿದ. ಒಂದೊಂದು ಗುಟುಕು ಕುಡಿದ ಕೂಡಲೇ, "ಅಮ್ಮಾ, ಕೂದಲು ಬೆಳೆದಿದೆಯೇ ನೋಡು" ಎಂದು ಕೇಳುತ್ತಾ ಇನ್ನೊಂದು ರೀತಿ ಅಮ್ಮನನ್ನು ಸತಾಯಿಸಿದನಂತೆ. ಲೀಲಾಶುಕ ಕವಿ ಇದನ್ನು ತನ್ನ "ಕೃಷ್ಣ ಕರ್ಣಾಮೃತ" ಕೃತಿಯ ಶ್ಲೋಕವೊಂದರಲ್ಲಿ (ಕ್ಷೀರೇ ಅರ್ಧಪಿತೇ ಹರಿಃ) ಬಲು ಸೊಗಸಾಗಿ ವರ್ಣಿಸಿದ್ದಾನೆ. 

*****

ಉಗುರುಗಳು ನಮ್ಮ ದೇಹಗಳ ಒಂದು ಮುಖ್ಯ ಅಂಗ. "ಅದೇನು? ಹೃದಯ ಅಥವಾ ಮಿದುಳಿಗಿಂತ ಮುಖ್ಯವೇ? ಅಥವಾ ಕೈ-ಕಾಲುಗಳಿಗಿಂತ ದೊಡ್ಡವೇ? ಅದು ಹೇಗೆ?" ಎಂದು ಯಾರಾದರೂ ಕೇಳಬಹುದು. ಪ್ರತಿಯೊಂದು ಅಂಗಕ್ಕೂ ಅದರದರ ಪ್ರಾಮುಖ್ಯತೆ ಇದ್ದೇ ಇದೆ. ಉಗುರುಗಳ ನಿಜವಾದ ಉಪಯೋಗ ಅವು ಇಲ್ಲದವರನ್ನು ಕೇಳಬೇಕು. ಯಾವುದಾದರೂ ಅಪಘಾತದಲ್ಲಿ ಅದನ್ನು ಕಳೆದುಕೊಂಡವರು, ಇಲ್ಲವೇ ತೀರ ನುಣುಪಾಗಿ ಕತ್ತರಿಸಿಕೊಂಡವರಿಗೆ ಅದು ಗೊತ್ತಾಗುವುದು. ಬೆರಳುಗಳ ಭದ್ರತೆಗೆ ಮತ್ತು ಅವುಗಳ ಪರಿಣಾಮಕಾರಿ ಉಪಯೋಗಕ್ಕೆ ಉಗುರುಗಳು ಅತ್ಯವಶ್ಯಕ. ಹಾಗೆಂದು ಅವು ಹೆಚ್ಚು ಬೆಳೆಯಲು ಬಿಡುವಂತೆಯೂ ಇಲ್ಲ. ಅವುಗಳು ಎಷ್ಟಿರಬೇಕೋ ಅಷ್ಟಿರಬೇಕು. ಇಲ್ಲದೆ ಇರುವಂತಿಲ್ಲ. ಹಿತ-ಮಿತವಾಗಿ ಅನ್ನುವುದಕ್ಕೆ ಅವನ್ನು ಉದಾಹರಣೆಯಾಗಿ ಕೊಡಬಹುದು!

ಗಿನ ಲೊಲಬ್ರಿಗಿಡ (Gina Lollobrigida) (1927-2023) ಐವತ್ತು-ಅರವತ್ತರ ದಶಕದಲ್ಲಿ ಒಬ್ಬ ಅಪ್ರತಿಮ ಸುಂದರಿ. ಇಟಲಿ ದೇಶದ ನಟಿ, ರೂಪದರ್ಶಿ ಮತ್ತು ಛಾಯಾಚಿತ್ರಗ್ರಾಹಕಿ. "ಹಾಲಿವುಡ್ ಚಲನಚಿತ್ರಗಳ ಸ್ವರ್ಣಯುಗ" ಅನಿಸಿಕೊಂಡ ಆ ಕಾಲದಲ್ಲಿ ಮತ್ತೊಬ್ಬ ಇಟಾಲಿಯನ್ ನಟಿ ಮತ್ತು ಸುಂದರಿ ಸೋಫಿಯಾ ಲೊರೆನ್ (Sophia Loren) ಜತೆಯಲ್ಲಿ ಪ್ರಬಲ ಪ್ರತಿಸ್ಪರ್ಧಿ. ಆ ಸಮಯದಲ್ಲಿ ಗಿನ ಲೊಲಬ್ರಿಗಿಡ ತನ್ನ ಉಗುರುಗಳನ್ನು ಒಂದು ಮಿಲಿಯನ್ ಡಾಲರ್ ಮೊತ್ತಕ್ಕೆ (ಹತ್ತು ಲಕ್ಷ ಡಾಲರ್) ವಿಮೆ ಮಾಡಿಸಿದ್ದಳು ಎನ್ನುವ ಸುದ್ದಿ ಹರಡಿತ್ತು. ಆಗಿನ ಮಿಲಿಯನ್ ಡಾಲರ್ ಅಂದರೆ ಈಗಿನ ಲೆಕ್ಕದಲ್ಲಿ ಬಹಳ ದೊಡ್ಡ ಮೊತ್ತ. 

ಈಗಲೂ ಅನೇಕರು, ವಿಶೇಷವಾಗಿ ಹೆಣ್ಣುಮಕ್ಕಳು, ತಮ್ಮ ಉಗುರುಗಳ ಅಂದಕ್ಕೆ, ಬಣ್ಣ ಬಳಿಯುವ ಚಂದಕ್ಕೆ, ವಿಶೇಷ ಗಮನ ಕೊಡುತ್ತಾರೆ. ಉಗುರುಗಳ ನಿರ್ವಹಣೆಗಾಗಿಯೇ ಕ್ಲಿನಿಕ್ಕುಗಳಿವೆ. ಉಗುರುಗಳ ಸೌಂದರ್ಯ ನಿರ್ವಹಣೆಯ ವ್ಯವಹಾರ ಶತಕೋಟಿ ಡಾಲರುಗಳ ಪ್ರಮಾಣದಲ್ಲಿ ನಡೆಯುತ್ತಿದೆ. ಈ ಸೌಂದರ್ಯವರ್ಧಕಗಳ ದೊಡ್ಡ ದೊಡ್ಡ ಜಾಹಿರಾತುಗಳು ಅಲ್ಲಲ್ಲಿ ಕಂಡುಬರುತ್ತವೆ. 

*****
ಹಲ್ಲು, ಕೂದಲು ಮತ್ತು ಉಗುರುಗಳು ದೇಹದ ಭಾಗಗಳಾದುವು. ಇಡೀ ದೇಹವನ್ನು ಹೊತ್ತ ಮನುಷ್ಯರ ಕಥೆ ಏನು? ಮನುಷ್ಯನು ಸುಮ್ಮನೆ ಇರುವವನಲ್ಲ. ಅವನಿಗೆ ಒಂದು ಸ್ಥಾನ ಬೇಕು. ಸ್ಥಾನಕ್ಕೆ ತಕ್ಕ ಮಾನವೂ ಬೇಕು. ವಾಸ್ತವವಾಗಿ ಸ್ಥಾನಕ್ಕೂ ಮಾನಕ್ಕೂ ಏನೂ ಸಂಬಂಧವಿಲ್ಲ. ಆದರೂ ಸ್ಥಾನ-ಮಾನ ಅನ್ನುವುದು ಈಗಿನ ರಾಜಕೀಯದಲ್ಲಿ ಜೊತೆ-ಜೊತೆಯಾಗಿ ಉಪಯೋಗಿಸುವುದು ಬಂದಿದೆ. ಬರೀ ಸ್ಥಾನ ಸಿಕ್ಕರೆ ಸಾಲದು. ಸರಿಯಾದ ಸ್ಥಾನ ಸಿಗಬೇಕು. ಸರಿಯಾದದ್ದು ಅಂದರೆ ಹೇಗೆ? ಹೇಳುವುದು ಕಷ್ಟ. ಒಬ್ಬನ ಯೋಗ್ಯತೆಗಿಂತ ಸ್ವಲ್ಪ ಹೆಚ್ಚಿದ್ದರೆ ಒಳ್ಳೆಯದು. ತುಂಬಾ ಹೆಚ್ಚಿದ್ದರೆ ಇನ್ನೂ ಒಳ್ಳೆಯದು. ಸಭೆ-ಸಮಾರಂಭಗಳಲ್ಲಿ ಆದರೆ ಮೊದಲನೇ ಸಾಲು. ಮೊದಲ ಸಾಲಿನ ಮಧ್ಯದಲ್ಲಿ ಆದರೆ ಇನ್ನೂ ಉತ್ತಮ. "ಅವನಿಗಿಂತ ಒಳ್ಳೆಯ ಜಾಗದಲ್ಲಿ ನನಗೆ ಕೊಡಬೇಕಾಗಿತ್ತು" ಎಂದು ಜಗಳ ನಡೆಯುವುದು ಸರ್ವೇ ಸಾಮಾನ್ಯ. 

ವಿಧಾನಸಭೆ ಸದಸ್ಯ ಆಗಬೇಕು. ಸದಸ್ಯನಾದ ಮೇಲೆ ಮಂತ್ರಿ ಆಗಬೇಕು. ಮಂತ್ರಿ ಆದಮೇಲೆ ಮುಖ್ಯ ಮಂತ್ರಿ ಆಗಬೇಕು. ಮುಖ್ಯ ಮಂತ್ರಿ ಆದಮೇಲೆ ಪ್ರಧಾನ ಮಂತ್ರಿ ಆಗಬೇಕು. ನೇರವಾಗಿ ಪ್ರಧಾನ ಮಂತ್ರಿ ಆದರೆ ಇನ್ನೂ ಒಳ್ಳೆಯದು. "ಅಂತಹ ಸ್ಥಾನವನ್ನು ನಾನು ಅಲಂಕರಿಸುವುದರಿಂದ(?) ಆ ಸ್ಥಾನಕ್ಕೆ ಗೌರವ" ಎಂದು ಹೇಳಿಕೊಳ್ಳುವುದು ಸಾಮಾನ್ಯ. ಸ್ಥಾನಕ್ಕೆ ತಕ್ಕ ಅಧಿಕಾರ ಬೇಕು. ಹಿಂದೆ-ಮುಂದೆ ಬಾಲಬಡುಕರು ಬೇಕು. ಕಾರುಗಳ ಸಾಲು ಬೇಕು. ಕೆಂಪು ಗೂಟದ ಕಾರುಗಳು. ಒಳಗೆ ತಣ್ಣಗಿರುವ, ಹೊರಗಡೆ ಹೊಳೆಯುವ ಕಾರುಗಳು. ಬಾಗಿಲು ತೆಗೆಯುವವರು, ಸಲ್ಯೂಟ್ ಹೊಡೆಯುವವರು, ಹಾರ ಹಾಕುವವರು, ತುರಾಯಿ ಕೊಡುವವರು, ನಿಂಬೆ ಹಣ್ಣು (ಈಗ ಕಡಿಮೆಯಾಗಿರಬಹುದು) ಹಿಡಿದಿದ್ದರೆ ಇನ್ನೂ ಒಳ್ಳೆಯದು. ಹೀಗೆ ಆಸೆಗಳು. 

ಆಯಿತು. ಸ್ಥಾನ ಸಿಕ್ಕಿತು. ಒಮ್ಮೆ ಸಿಕ್ಕಿದ ಮೇಲೆ ಆ ಸ್ಥಾನ ಬಿಡುವಂತೆ ಆಗಬಾರದು. ಹೋಗಲಿ.  ಬಿಡೋಣ. ಯಾವಾಗ? ಅದಕ್ಕಿಂತ ದೊಡ್ಡ ಸ್ಥಾನ ಸಿಕ್ಕಿದ ಕೂಡಲೇ ಬಿಡೋಣ. ಬಸ್ಸಿನಲ್ಲಿ ಟವಲ್ ಹಾಕಿ ಸೀಟು ಹಿಡಿದಂತೆ ಅಧಿಕಾರಕ್ಕಾಗಿ ಕಾದಿರುವುದು. ಇದು ನಮ್ಮ ಸುತ್ತ-ಮುತ್ತ ನಡೆಯುತ್ತಲೇ ಇರುವುದು. ಕರ್ನಾಟಕದಲ್ಲಂತೂ ಈಗ ಕೆಲವು ದಿನಗಳಿಂದ ಇದು ಬಹಳ ಜೋರಾಗಿ ನಡೆದಿದೆ. "ಜಾಗ ಖಾಲಿ ಇಲ್ಲ" ಎಂದು ಕೆಲವರು. "ಖಾಲಿ ಆದಾಗ ಕೊಡಿ" ಎಂದು ಮತ್ತೆ ಕೆಲವರು. "ಖಾಲಿ ಮಾಡಿಸಿ ಕೊಡಿ" ಎಂದು ಇನ್ನೂ ಕೆಲವರು!
*****

ಮೇಲೆ ಹಲ್ಲು, ಕೂದಲು, ಮತ್ತು ಉಗುರುಗಳ ವಿಷಯ ನೋಡಿದೆವು. ಇವು ಮೂರೂ ಬಹಳ ಬೆಲೆ ಬಾಳುವುವು. ಯಾವಾಗ? ಹಲ್ಲು ಬಾಯಿಯ ಒಳಗಡೆ ಗಟ್ಟಿಯಾಗಿ ಕೂತಿದ್ದಾಗ. ಕೂದಲು ತಲೆಯಲ್ಲಿ ಭದ್ರವಾಗಿ ಬೇರೂರಿದ್ದಾಗ. ಉಗುರು ಬೆರಳಿನ ಭಾಗವಾಗಿದ್ದಾಗ. ಅದೇ ಹಲ್ಲು ನೆಲದ ಮೇಲೆ ಬಿದ್ದಾಗ? ಅಥವಾ ಕೈಗೆ ಸಿಕ್ಕಾಗ? ಕೂದಲು ಆಹಾರದ ಮಧ್ಯೆ ಬಂದಾಗ? ಉಗುರು ಕಾಲಿನ ಕೆಳಗೆ ಸಿಕ್ಕಿ ಗಾಯವಾದಾಗ? ಇವೆಲ್ಲವೂ ಅಪಶಕುನ ಅನ್ನುತ್ತಾರೆ. "ಛೀ, ಇದೇನಿದು ಅಸಹ್ಯ?" ಎಂದು ಮುಖ ಸಿಂಡರಿಸುತ್ತಾರೆ. 

ಮನುಷ್ಯರೂ ಅಷ್ಟೇ. ಒಳ್ಳೆಯ ಸ್ಥಾನದಲ್ಲಿದ್ದಾಗ ಅವರಿಗೆ ಒಂದು ಬೆಲೆ. ಅದೇ ಆ ಸ್ಥಾನದಿಂದ ಕೆಳಗಿಳಿದಾಗ? ಯೋಗ್ಯ ಮುನುಷ್ಯನಾದರೆ ಅವನಿಗೆ ಯಾವಾಗಲೂ ಬೆಲೆ ಇದ್ದೇ ಇರುತ್ತದೆ. ಇಲ್ಲದಿದ್ದರೆ ಆ ಸ್ಥಾನ ಹೋದಮೇಲೆ ಮುಗಿಯಿತು. 

ಈ ನಾಲ್ಕನ್ನೂ ಸೇರಿಸಿ ಒಂದು ಸುಭಾಷಿತ ಹೀಗೆ ಹೇಳುತ್ತದೆ:

ಸ್ಥಾನಭ್ರಷ್ಟಾ: ನ ಶೋಭಂತೇ ದಂತಾಃ ಕೇಶಾ: ನಖಾ: ನರಾಃ
ಇತಿ ವಿಜ್ಞಾಯ ಮತಿಮಾನ್ ಸ್ವಸ್ಥಾನಂ ನ ಪರಿತ್ಯಜೇತ್  

ಹಲ್ಲುಗಳು, ಕೂದಲು, ಉಗುರು ಮತ್ತು ಮನುಷ್ಯರು ತಮ್ಮ ಸ್ಥಾನಗಳನ್ನು ಕಳೆದುಕೊಂಡಾಗ ತಮ್ಮ ಮೌಲ್ಯ ಕಳೆದುಕೊಳ್ಳುತ್ತವೆ. ಇದನ್ನು ತಿಳಿದಿರುವ ಬುದ್ಧಿವಂತರು ತಮ್ಮ ಜಾಗಗಳನ್ನು ಬಿಡುವುದಿಲ್ಲ!

*****

ಮಹಾರಾಷ್ಟ್ರದ ರಾಜಕೀಯದಲ್ಲಿ ವಿಶೇಷ ನಡೆಯಿತು. ಹಿಂದೆ ಮುಖ್ಯಮಂತ್ರಿಗಳಾಗಿದ್ದ ಒಬ್ಬರು ಇನ್ನೊಂದು ಸರಕಾರ ಬೀಳಿಸುವ ಸಲುವಾಗಿ ಉದಯಿಸಿದ ಮತ್ತೊಂದು ಮಂತ್ರಿ ಮಂಡಲದಲ್ಲಿ ಉಪಮುಖ್ಯಮಂತ್ರಿ ಆಗಬೇಕಾಯಿತು. ಮುಂದಿನ ಚುನಾವಣೆಯಲ್ಲಿ ಅವರ ಪಕ್ಷಕ್ಕೆ ಹೆಚ್ಚಿನ ಜನಬೆಂಬಲ ಸಿಕ್ಕಿತು. ಈಗ ಮಧ್ಯದಲ್ಲಿ ಮುಖ್ಯಮಂತ್ರಿ ಆಗಿದ್ದವರು ಅದೇ ಸ್ಥಾನ ಬೇಕೆಂದರು. ಕಡೆಗೆ ಅವರು ಉಪಮುಖ್ಯಮಂತ್ರಿ ಆಗಬೇಕಾಯಿತು. ಕಾಲಕಾಲಕ್ಕೆ ಮೌಲ್ಯಯುತ ಜಾಗಗಳೇನೋ ಸಿಕ್ಕಿವೆ. ಆದರೆ ಜಾಗ ಬಿಡಬೇಕಾದಾಗ ಬಹಳ ಸಂಕಟ. ಕಡೆಯವರೆಗೂ ಹಿಡಿದುಕೊಂಡಿರುವುದು. ವಿಧಿಯೇ ಇಲ್ಲದಿದ್ದರೆ ಆಗ ನೋಡೋಣ. ಹೀಗೆ ಕುರ್ಚಿಯ ಆಟ. 

ಏನಾದರಾಗಲಿ, ಬುದ್ಧಿವಂತರು ಜಾಗ ಬಿಡುವುದಿಲ್ಲ. ಅವರಿಗಿಂತ ಬುದ್ಧಿವಂತರು ಈ ಜಾಗ ಹಿಡಿಯುವ ಪ್ರಯತ್ನ ಬಿಡುವುದಿಲ್ಲ. ಪೆದ್ದು ಪ್ರಜೆಗಳು ಈ ಕಣ್ಣಾಮುಚ್ಚಾಲೆ ಆಟ ನೋಡುತ್ತಾ ಕೂಡಬೇಕು. 

ಜಾಗ ಬಿಟ್ಟವರುಂಟೇ?

Thursday, November 6, 2025

ಅದು ನಾನು ಬರೆದದ್ದಲ್ಲವಪ್ಪ


ತಿರುಪತಿಯಲ್ಲಿ ತಿಮ್ಮಪ್ಪ ಬಂದು ನಿಂತಿದ್ದಾನೆ. ಎಷ್ಟೋ ಕಾಲದಿಂದ ಅಲ್ಲಿದ್ದಾನೆ. ಅವನು ನಿಂತಿರುವ, ನೆಲೆಸಿರುವ ಬೆಟ್ಟಕ್ಕೇ ಅನೇಕ ಹೆಸರುಗಳು. ಶೇಷಾಚಲ ಅನ್ನುತ್ತಾರೆ. ವೃಷಭಾಚಲ ಅನ್ನುತ್ತಾರೆ. ಅಂಜನಾದ್ರಿ ಅನ್ನುತ್ತಾರೆ. ವೆಂಕಟಾಚಲ ಅನ್ನುತ್ತಾರೆ. ಏಳು ಬೆಟ್ಟಗಳ ಸಮೂಹ ಇರುವುದರಿಂದ ಏಳುಮಲೈ, ಏಡುಕುಂಡಲ, ಸಪ್ತಗಿರಿ ಅನ್ನುತ್ತಾರೆ. ಅವನ ಬೆಟ್ಟಕ್ಕೇ ಅನೇಕ ಹೆಸರುಗಳಾದಮೇಲೆ ಅವನಿಗೆಷ್ಟು ಹೆಸರಿರಬೇಕು? ನಮಗೆ ಗೊತ್ತಿಲ್ಲದಷ್ಟು. ತಿಮ್ಮಪ್ಪ, ಶ್ರೀನಿವಾಸ, ವೆಂಕಟೇಶ, ಏಡುಕುಂಡಲವಾಡ, ವೆಂಕಟಾಚಲಪತಿ, ಶೇಷಗಿರಿವಾಸ, ಸಪ್ತಗಿರೀಶ, ಬಾಲಾಜಿ, ಗೋವಿಂದ ಮುಂತಾದ ಅನೇಕ ಹೆಸರುಗಳು ಅವನಿಗೆ ಉಂಟು. ಯಾವ ಹೆಸರಿನಿಂದ ಕರೆದರೂ ಅವನು "ಓ" ಅನ್ನುತ್ತಾನಂತೆ. 

ಅವನನ್ನು ನೋಡುವುದು ಅಷ್ಟು ಸುಲಭವಲ್ಲ. ಬೆಟ್ಟ ಏರಿ ಹೋಗಬೇಕು. ಅನೇಕರು ನಾಲ್ಕಾರು ಗಂಟೆಗಳ ಕಾಲ ನಡೆದು, ಬೆಟ್ಟಗಳನ್ನು ಕಾಲ್ನಡಿಗೆಯಲ್ಲಿ ಹತ್ತಿ, ಶ್ರಮಪಟ್ಟು ಅವನನ್ನು ನೋಡುತ್ತಾರೆ. ಮತ್ತೆ ಕೆಲವರು ಅವನ ದೇವಾಲಯದ ಹತ್ತಿರದವರೆಗೆ ಹೋಗುವ ವಾಹನಗಳಲ್ಲಿ ಹೋಗುತ್ತಾರೆ. ಲೌಕಿಕ ಅಧಿಕಾರಗಳಲ್ಲಿ ಇರುವವರಿಗೆ ದೇವಾಲಯದ ಮಹಾದ್ವಾರದವರೆಗೆ ವಾಹನಗಳಲ್ಲಿ ಹೋಗುವ ಅವಕಾಶವುಂಟು. 

ಕಾಸು-ಕಾಸು ಗೋಲಕಗಳಲ್ಲಿ ಕೂಡಿಟ್ಟು ಅದರ ಹಣದಲ್ಲಿ ಯಾತ್ರೆ ಮಾಡುವವರುಂಟು. "ಕಳ್ಳ ಒಕ್ಕಲು" ಎಂದು ಹೇಳಿ ತಿರುಪತಿ ಯಾತ್ರೆ ಮಾಡುವ ಮತ್ತೊಬ್ಬರೊಡನೆ ಹೋಗುವವರುಂಟು. ಒಂದೇ ದಿನದಲ್ಲಿ ದರ್ಶನ ಮಾಡಿಸುವ ಲಕ್ಷುರಿ ಬಸ್ಸುಗಳಲ್ಲಿ ಬಂದುಹೋಗುವವರುಂಟು. ಅನೇಕ ದಿನ ಕಾಲ್ನಡಿಗೆಯಲ್ಲಿ ಹೋಗುತ್ತಾ, ದಾರಿಯಲ್ಲಿ ಸಿಗುವ ಅನೇಕ ಕ್ಷೇತ್ರಗಳನ್ನು ಸಂದರ್ಶಿಸಿ ದೊಡ್ಡ ಯಾತ್ರೆ ಮಾಡುವವರೂ ಉಂಟು. 

ಇಷ್ಟೆಲ್ಲಾ ಪಾಡುಪಟ್ಟು ಅಲ್ಲಿಗೆ ಹೋಗಿ ಅವನನ್ನು ನೋಡುವುದು ಎಷ್ಟುಹೊತ್ತು? ನಮ್ಮ ಮುಂದೆ ನಿಂತವರು ಅದೆಷ್ಟೋ ಸಾವಿರ ಜನ. ನಮ್ಮ ಹಿಂದೆ ನಿಂತವರೂ ಅದೆಷ್ಟೋ ಸಾವಿರ ಮಂದಿ. ಬ್ರಹ್ಮೋತ್ಸವ, ವಿಶೇಷ ದಿನಗಳಲ್ಲಿ ಲಕ್ಷ ಲಕ್ಷ ಮಂದಿ. ಎಲ್ಲರೂ ಬಂದಿರುವುದು, ನಿಂದಿರುವುದು ಅವನನ್ನು ನೋಡಲೆಂದೇ. ಆದ ಕಾರಣ ಅವನನ್ನು ನೋಡಸಿಗುವುದು ಕೆಲವು ಸೆಕೆಂಡುಗಳು ಮಾತ್ರ. ದೂರದಿಂದ ಕತ್ತು ಕೊಂಕಿಸಿ ನೋಡುತ್ತಾ ಹೋಗಬೇಕು. ಅಲ್ಲಿ ಹೋಗುತ್ತಿದ್ದಂತೆಯೇ "ಜರಗಂಡಿ, ಜರಗಂಡಿ" ಎಂದು ಮುಂದೆ ತಳ್ಳುತ್ತಾರೆ. ಹಿಂದಿರುಗಿ ಬರುವಾಗಲೂ ಸಾಧ್ಯವಾದಷ್ಟು ಕತ್ತು ಹಿಂದೆ ತಿರುಗಿಸಿ ನೋಡುವ ಪ್ರಯತ್ನ. ಸಿಕ್ಕಿದಷ್ಟು, ಕಂಡಷ್ಟು ದರ್ಶನ. ಆದರೂ ಅದೊಂದು ಧನ್ಯಭಾವ ಸುತ್ತುವರೆಯುತ್ತದೆ. ಇಷ್ಟಾಯಿತಲ್ಲ ಅನ್ನುವ ಸಂತಸ. ಇದೂ ಇಲ್ಲದೆ ಹೋಗುವವರು ಎಷ್ಟೋ ಜನ ಎಂದು ನೆನೆದು ಅದೊಂದು ಸಾಂತ್ವನ!
***** 

ಗರ್ಭಗುಡಿಯಿಂದ ಹೊರಗೆ ಬಂದು, ವಿಮಾನ ಶ್ರೀನಿವಾಸನ ದರ್ಶನ ಮಾಡಿ ತಿರುಗಿದರೆ ಕಾಣುವುದು ಮಡಕೆಗಳಲ್ಲಿ ಸಾಲಾಗಿ ಇಟ್ಟಿರುವ ಪ್ರಸಾದದ ದೊಡ್ಡ ಕೂಟ. ಒಂದರಲ್ಲಿ ಪುಳಿಯೋಗರೆ. ಇನ್ನೊಂದರಲ್ಲಿ ಸಿಹಿ ಪೊಂಗಲ್. ಅದರ ಪಕ್ಕ ಖಾರದ ಪೊಂಗಲ್. ಮೊಸರನ್ನವೂ ಉಂಟು. ಬೇರೆ ಇನ್ನೇನೋ ಇರಬಹುದು. ನಮಗೆ ಅವೆಲ್ಲಾ ಕಾಣುವುದಿಲ್ಲ. ಕೊಡುವವರ ಮುಂದೆ ಕೈ ಹಿಡಿದಾಗ ಅವರ ಮುಂದೆ ಇರುವ ಮಡಕೆಯಲ್ಲಿ ಏನಿದೆಯೋ ಅದು ಕೊಡುತ್ತಾರೆ. ಅದೇನೆಂದು ಅವರಿಗೂ ಗೊತ್ತಿಲ್ಲ. ಒಂದು ಬರಿದಾದ ನಂತರ ಮತ್ತೊಂದು ತೆಗೆಯುತ್ತಾರೆ. ಗಂಡ-ಹೆಂಡತಿ, ತಾಯಿ-ಮಗ ಜೊತೆಯಲ್ಲಿ ಹೋಗಿರಬಹುದು. ಒಬ್ಬರಿಗೆ ಪುಳಿಯೋಗರೆ, ಇನ್ನೊಬ್ಬರಿಗೆ ಮೊಸರನ್ನ ಸಿಗಬಹುದು. ಹೀಗೂ ಆಗಬಹುದು. ಒಟ್ಟಿನಲ್ಲಿ ಎಲ್ಲರಿಗೂ ಪ್ರಸಾದ ಸಿಕ್ಕಿತು. ಅವರವರ ಭಾಗ್ಯಕ್ಕೆ ಅನುಸಾರ ಸಿಕ್ಕಿತು. 

ದರ್ಶನ ಹೇಗಾಯಿತು ಎಂದು ಪ್ರಸಾದ ಕೈಯಲ್ಲಿ ಹಿಡಿದು ಹೊರಗೆ ಬಂದವರನ್ನು ಕೇಳಿ. "ದಿವ್ಯ ದರ್ಶನ" ಅನ್ನುವರು ಕೆಲವರು. "ಬಹಳ ಚೆನ್ನಾಗಿ ಆಯಿತು" ಅನ್ನುವವರು ಕೆಲವರು. ಎಲ್ಲರಿಗೂ ಬಹಳ ತೃಪ್ತಿಯ ದರ್ಶನ. ಇನ್ನೊಮ್ಮೆ ನೋಡಬೇಕು ಅನ್ನಿಸುವುದು. ಆದರೆ ಈಗ ಇಷ್ಟಾಯಿತು. ಅದೇ ದೊಡ್ಡದು. ನೋಡಿದ್ದು ಕೆಲವು ಸೆಕೆಂಡುಗಳು. ಅಥವಾ ಒಂದೆರಡು ನಿಮಿಷಗಳು. ಮುಖ ಕಂಡರೆ ಕಾಲು ಕಾಣಲಿಲ್ಲ. ಶಂಖ ಕಂಡರೆ ಚಕ್ರ ಕಾಣಲಿಲ್ಲ. ಹೆಚ್ಚು ಜನರಿಗೆ ಕಂಡದ್ದು ದೊಡ್ಡ ನಾಮವೇ!

ಅದೊಂದು ಸಾಲಿಗ್ರಾಮ ಶಿಲೆಯ ದಿವ್ಯ ಮೂರ್ತಿ. ಅವನ ತುಟಿಯ ಮೇಲಿನ ಕಿರುನಗೆ ಒಂದು ವಿಶೇಷ. "ಪೂರ್ಣಾನಾನ್ಯ ಸುಖೋಧ್ಭಾಸಿ ಮಂದಸ್ಮಿತಮ್ ಆಧೀಶಿತು:" ಅನ್ನುತ್ತಾರೆ. ಅವನ ಮುಗುಳ್ನಗೆಯನ್ನು ನೋಡಿದರೇ ಅದೊಂದು ಪರಮ ಸುಖ ಕೊಡುತ್ತದೆ ಎಂದು ಅದರ ಅರ್ಥ. ಅಂತಹ ಮುಗುಳ್ನಗೆ ಇನ್ನೆಲ್ಲೂ ಕಾಣಸಿಗದು. "ನಗೆ ಮೊಗದಲಿ ಚೆನ್ನಿಗ ನಿಂತಿಹನು" ಎಂದು ಅದನ್ನು ಕಂಡ ಶ್ರೀ ವಿಜಯದಾಸರು ಹಾಡಿದರು. ಅಂತಹ ಮುಗುಳ್ನಗೆಯನ್ನು ನೋಡಿದವರೆಷ್ಟು ಮಂದಿ?

ಪ್ರಸಾದ ಹೇಗಿದೆ ಎಂದು ಕೇಳಿ. "ಪ್ರಸಾದ ಪ್ರಸಾದವೇ. ಹಾಗೆ ಕೇಳಬಾರದು" ಎಂದು ಕೆಲವರು ಹೇಳಬಹುದು. ಆದರೆ ಹೆಚ್ಚು ಜನ "ತುಂಬಾ ಚೆನ್ನಾಗಿದೆ" ಅನ್ನುತ್ತಾರೆ. ಮೊಸರನ್ನ ಸಿಕ್ಕವರು ಹಾಗೆ ಹೇಳುತ್ತಾರೆ. ಪೊಂಗಲ್ ಸಿಕ್ಕವರೂ ಹಾಗೆಯೇ ಹೇಳುತ್ತಾರೆ. ಪುಳಿಯೋಗರೆ ಸಿಕ್ಕವರೂ ಹಾಗೆಯೇ ಹೇಳುತ್ತಾರೆ. ನಮಗೆ ಗೊತ್ತಿಲ್ಲದ ಇನ್ನೊಂದು ಸಿಕ್ಕಿದವರೂ ಅದೇ ಹೇಳುತ್ತಾರೆ!

ಈ ದರ್ಶನ, ಪ್ರಸಾದಗಳ ಅನುಭವ ಶ್ರೀನಿವಾಸನ ವಿಶೇಷ. 

*****

ಒಂದು ಸತ್ವಯುತ ಗ್ರಂಥ ಅಥವಾ ಕೃತಿಯನ್ನು ಓದಿದ ಅನುಭವವೂ ಹೀಗೆಯೇ. ಆ ಗ್ರಂಥಕರ್ತೃವಿನ ಎಲ್ಲ ಕೃತಿಗಳನ್ನೂ ಓದಿದವರೂ ಉಂಟು. ಅದನ್ನು ಓದಲೇಬೇಕು ಎಂದು ತೀರ್ಮಾನಿಸಿ, ಶ್ರಮಪಟ್ಟು ಒಂದು ಗ್ರಂಥ ಸಂಪಾದಿಸಿ, ಗಮನವಿಟ್ಟು ಓದಿ, ಮನನ ಮಾಡುವವರು ಕೆಲವರು. ಯಾರೋ ಓದುತ್ತಿದ್ದಾಗ, ಅವರು ಪುಸ್ತಕ ಕೆಳಗಿಟ್ಟು ಮತ್ತೇನೋ ಮಾಡಲು ಹೋದಾಗ, ನಾಲ್ಕು ಪುಟ ಓದಿದವರು ಕೆಲವರು. ಮೊದಲು ಕೆಲವು ಪುಟ, ಮಧ್ಯೆ ಅಲ್ಲೊಂದು-ಇಲ್ಲೊಂದು ಪುಟ ಮತ್ತು ಕೊನೆಯ ಎರಡು ಪುಟ ಓದಿ "ಪುಸ್ತಕ ಓದಿದ್ದೇನೆ" ಅನ್ನುವವರು ಕೆಲವರು. "ಅಂತಹ ಕೃತಿ ಓದಿಲ್ಲವೇ?" ಎಂದು ಯಾರಾದರೂ ಮೂಗು ಮುರಿದಾರು ಎಂದು ಓದುವವರೂ ಉಂಟು. ಒಟ್ಟಿನಲ್ಲಿ ಎಲ್ಲರೂ ಓದಿದ್ದಾರೆ ಎಂದು ಹೇಳಿಸಿಕೊಳ್ಳಬಹುದು. 

ಓದಿದವರಿಗೆ ಎಷ್ಟು ಅರ್ಥವಾಯಿತು? ಅವರ ಸಿದ್ಧತೆಯಂತೆ, ಅನುಭವದಂತೆ, ಅರಗಿಸಿಕೊಳ್ಳುವ ಶಕ್ತಿಯಂತೆ ಅರ್ಥವಾಯಿತು. ಹಿನ್ನೆಲೆ ತಿಳಿದು, ಸಮಾನ ಗ್ರಂಥಗಳನ್ನು ಓದಿ, ಸಾಮ್ಯ-ವೈರುಧ್ಯಗಳನ್ನು ತೂಕ ಮಾಡಿ, ಓದಿದವರಿಗೆ ಒಂದು ಮಟ್ಟದ ಅರ್ಥ ತಿಳಿಯಿತು. ಒಂದೇ ಗ್ರಂಥವನ್ನು ಓದಿದವರಿಗೆ ಅಷ್ಟು ತಿಳಿಯಿತು. ಮತ್ತೆ-ಮತ್ತೆ ಓದಿ ಮೆಲಕು ಹಾಕಿದವರಿಗೆ ಒಂದು ರೀತಿ ತಿಳಿಯಿತು. ಗ್ರಂಥ ಹತ್ತಿರವಿಟ್ಟುಕೊಂಡು ಆಗಾಗ ಓದಿದವರಿಗೆ ಮತ್ತಷ್ಟು ತಿಳಿಯಿತು. ಹೀಗೆ ಓದಿದವರೆಲ್ಲರಿಗೂ ತಿಳಿಯಿತು. ಆದರೆ ಆ ತಿಳಿವಿನ ಆಳ-ಅಗಲಗಳು ಬೇರೆ ಬೇರೆ. 

*****

ಕನ್ನಡಕ್ಕೆ ಇಬ್ಬರು "ವರ" ಆಗಿ ಬಂದವರು. ಒಬ್ಬರು "ವರಕವಿ" ಬೇಂದ್ರೆಯವರು. ಮತ್ತೊಬ್ಬರು "ವರನಟ" ರಾಜಕುಮಾರ್. ವರಕವಿ ಬೇಂದ್ರೆ ಅವರ ಹೆಸರು "ದತ್ತಾತ್ರೇಯ ರಾಮಚಂದ್ರ ಬೇಂದ್ರೆ". ಅವರ ಕಾವ್ಯನಾಮ "ಅಂಬಿಕಾತನಯದತ್ತ". ಇದು ಎಲ್ಲರಿಗೂ ಗೊತ್ತಿರುವುದೇ. ಎಲ್ಲರಿಗೂ ಅಂದರೆ ಕನ್ನಡ ಗೊತ್ತಿರುವ ಕನ್ನಡಿಗರಿಗೆ. ಕನ್ನಡ ಗೊತ್ತಿಲ್ಲದ ಅನೇಕ ಸಾಹಿತ್ಯಾಸಕ್ತರಿಗೂ ಇದು ಗೊತ್ತು. 

ಬೇಂದ್ರೆಯವರು ಒಬ್ಬ ವರಕವಿ ಆಗಿದ್ದರು ಅನ್ನುವ ಜೊತೆಗೆ ಒಬ್ಬ ದಾರ್ಶನಿಕರು ಕೂಡ ಹೌದು. ಜೀವನದ ಹೊರಗೆ ನಿಂತು ಜೀವನದ ಪದರಗಳನ್ನು ನೋಡುವ, ವಿಶ್ಲೇಷಿಸುವ, ದಾಖಲಿಸುವ ಕೌಶಲ್ಯ ಅವರಿಗೆ ಕರಗತವಾಗಿತ್ತು. ಅವರ ಕೃತಿಗಳನ್ನು ಓದಿದವರಿಗೆ ಒಂದಷ್ಟು ಅರ್ಥವಾಯಿತು. ಅವರ ಗೀತೆಗಳನ್ನು ಕೇಳಿದವರಿಗೆ ಒಂದಷ್ಟು ಅರ್ಥವಾಯಿತು. ಹತ್ತಿರದಿಂದ ನೋಡಿ, ಅವರೊಡನಾಟ ಪಡೆದವರಿಗೆ ಇನ್ನಷ್ಟು ಅರ್ಥವಾಯಿತು. 

ಅವರ "ನಾಕು ತಂತಿ" 1964 ಇಸವಿಯಲ್ಲಿ ಹೊರಬಂದಿತು. 1973 ಇಸವಿಯಲ್ಲಿ ಅದಕ್ಕೆ "ಜ್ಞಾನಪೀಠ" ಪ್ರಶಸ್ತಿ ಬಂದಿತು. ಬಹಳ ಜನಪ್ರಿಯವಾದ ಈ ಕೃತಿಯ ಗೀತೆಗಳು ಈಗಲೂ ಹಾಡಲ್ಪಡುತ್ತವೆ. "ನಾನು, ನೀನು, ಆನು, ತಾನು" ಅನ್ನುವ ನಾಲ್ಕು ತಂತಿಗಳು ಮತ್ತು ಇವುಗಳ ಸುತ್ತ ಇರುವ ಸಂಬಂಧಗಳ ವಿವರಣೆ. ಕೆಲವರು ಇದನ್ನು ಗಂಡು-ಹೆಣ್ಣಿನ ಸಂಬಂಧದ ಸುತ್ತ ಇದೆ ಎಂದು ವಿವರಿಸಿದರು. ಮತ್ತೆ ಕೆಲವರು ಇದು ಪಾರಮಾರ್ಥಿಕ ಎಂದರು. ಅದ್ವೈತದ ಪರವಾಗಿ ಕೆಲವರು ಅರ್ಥ ಮಾಡಿದರು. ಮತ್ತೆ ಕೆಲವರು ದ್ವೈತದ ಅರ್ಥ ಕೊಟ್ಟರು. ಎಲ್ಲರೂ ಓದಿದ್ದು, ಹಾಡಿದ್ದು ಒಂದೇ ಕೃತಿಯನ್ನು. ಅವರವರ ಮನೋಧರ್ಮದಂತೆ ಅವರವರ ಅರ್ಥ ಕೂಡಿಕೊಂಡಿತು. 

ಇಷ್ಟು ಅರ್ಥಗಳಲ್ಲಿ ಯಾವುದು ಸರಿ? ಅವರ ಸ್ನೇಹಿತರೊಬ್ಬರಿಗೆ ಈ ಪ್ರಶ್ನೆ ಕಾಡಿತು. ಪ್ರಶ್ನೆಗೆ ಯಾರು ಉತ್ತರ ಹೇಳಬೇಕು? ಬರೆದವರನ್ನೇ ಕೇಳೋಣ ಎಂದು ಅವರು ಬೇಂದ್ರೆಯವರನ್ನೇ ಕೇಳಿದರು. "ಅದು ನಾನು ಬರೆದದ್ದಲ್ಲವಪ್ಪ. ಅದು ಬರೆದದ್ದು ಅಂಬಿಕಾತನಯದತ್ತ. ಅವನು ಬರೆದ. ಹೋದ. ಈಗ ನಾನು ಅದನ್ನು ಓದಿದರೆ ನಿಮ್ಮಂತೆ ಒಬ್ಬ ಓದುವಂತೆ. ಅಷ್ಟೇ. ನನಗೂ ಒಂದು ಅರ್ಥ ಹೊಳೆಯಬಹುದು. ಅದೇ ಸರಿಯೆಂದು ಹೇಗೆ ಹೇಳುವುದು? ನಿಮ್ಮ ಅರ್ಥವೂ ಸರಿಯಿರಬಹುದು" ಅಂದರಂತೆ. ಅವರೊಡನೆ ಚೆನ್ನಾದ ಒಡನಾಟ ಇದ್ದ "ವಿದ್ಯಾವಾಚಸ್ಪತಿ" ಬನ್ನಂಜೆ ಗೋವಿಂದಾಚಾರ್ಯರು ತಮ್ಮ ಉಪನ್ಯಾಸ ಕಾಲದಲ್ಲಿ ಕೆಲವೊಮ್ಮೆ ಇದನ್ನು ನೆನೆಸಿಕೊಳ್ಳುತ್ತಿದ್ದರು. 

*****

ನಾಕು ತಂತಿಯ ಅನೇಕ ಅರ್ಥಗಳಲ್ಲಿ ನಾನು-ನೀನು ಅನ್ನುವುವು ಹೊರಗೆ ಕಾಣುವ ಬಾಹ್ಯ ರೂಪಗಳು, ಆನು ಮತ್ತು ತಾನು ಅನ್ನುವವು ಸ್ವಯಂ ಮತ್ತು ಬ್ರಹ್ಮ, ಅಥವಾ ಜೀವ ಮತ್ತು ಬ್ರಹ್ಮ ಎಂದು ಕೆಲವರು ಅರ್ಥ ಮಾಡುತ್ತಾರೆ. ಮನಸ್ಸು, ಬುದ್ಧಿ, ಅಹಂಕಾರ ಮತ್ತು ಚಿತ್ತ ಎನ್ನುತ್ತಾರೆ. (ಇಲ್ಲಿ ಅಹಂಕಾರ ಎಂದರೆ ನಾನು ಎನ್ನುವ ಅರಿವು ಎಂದು ಅರ್ಥ. ದುರಹಂಕಾರ ಎಂದಾಗ ಬರುವ ಅಹಂಕಾರ ಎಂದರ್ಥವಲ್ಲ). ಇನ್ನೂ ಮುಂದೆ ಹೋಗಿ ಅನ್ನಮಯ ಕೋಶ, ಪ್ರಾಣಮಯ ಕೋಶ, ಮನೋಮಯ ಕೋಶ ಮತ್ತು ವಿಜ್ಞಾನಮಯ ಕೋಶ ಅನ್ನುತ್ತಾರೆ. ಅವರವರ ಅನುಭವ ಮತ್ತು ಸಾಧನೆಯ ಆಳದ ಮೇಲೆ ಅರ್ಥಗಳು ತೆರೆದುಕೊಳ್ಳುವಂತಹ ಒಂದು ಕೃತಿ ಅದು. 

Monday, November 3, 2025

ಅಣ್ಣನು ಹಾವು ತಿಂದನು


ಅಂದು ಸಂಜೆ ಕಾರ್ಯಾಲಯದಿಂದ ಹಿಂದಿರುಗಿದ ತಂದೆಗೆ ಪ್ರತಿದಿನ ತನ್ನ ಬರವನ್ನು ನಿರೀಕ್ಷಿಸುತ್ತಾ ಕಾಯುತ್ತಿದ್ದ ಮಕ್ಕಳು ಮನೆಯಲ್ಲಿ ಕಾಣಿಸಲಿಲ್ಲ. ಮಕ್ಕಳು ಇಲ್ಲದಿದ್ದರೂ ಅವರು ಅಲ್ಲಿಯೇ ಸುತ್ತ-ಮುತ್ತ ಇದ್ದ ಕುರುಹುಗಳು ಕಾಣುತ್ತಿದ್ದವು. ಶಾಲೆಯ ಚೀಲಗಳು, ಪುಸ್ತಕಗಳು ಅಲ್ಲಲ್ಲಿ ಹರಡಿದ್ದವು. ತೆರೆದಿದ್ದ ಪುಸ್ತಕದಲ್ಲಿ ಅರ್ಧ ವಾಕ್ಯ ಬರೆದು, ಅದನ್ನು ಪೂರ್ತಿ ಮಾಡುವ ಮೊದಲೇ ಎಲ್ಲೋ ಓಡಿಹೋಗಿದ್ದುದು ಕಾಣುತ್ತಿತ್ತು. ಮಕ್ಕಳಿಗೆ ಆಟದ ಸೆಳೆತ ಅಂತಹುದು. ಎಲ್ಲ ಎತ್ತಿಟ್ಟು ಒಪ್ಪ-ಓರಣ ಮಾಡಿ ಹೋದರೆ ಅವರನ್ನು ಮಕ್ಕಳು ಎಂದೇಕೆ ಕರೆಯಬೇಕು? ಹಿರಿಯರಿಗೇ ಇಲ್ಲದ ಶಿಸ್ತನ್ನು ಮಕ್ಕಳ ಮೇಲೆ ಏಕೆ ಹೇರಬೇಕು? 

ಮಗಳು ಈಗ ತಾನೇ ಕನ್ನಡ ಕಲಿಯಲು ಪ್ರಾರಂಭಿಸಿದ್ದಾಳೆ. ಏನೋ ಬರೆಯುತ್ತಿದ್ದಾಳೆ. ಏನೆಂದು ನೋಡೋಣ ಅನ್ನಿಸಿತು. ನೋಟ್ ಪುಸ್ತಕವನ್ನು ಹಿಡಿದು ಅಲ್ಲೇ ಕುರ್ಚಿಯ ಮೇಲೆ ಕುಳಿತ. ಒಂದು ವಾಕ್ಯ ಪೂರ್ತಿಯಾಗಿದೆ. ಎರಡನೆಯದು ಪ್ರಾರಂಭವಾಗಿದೆ. ಓದಿದ. 

"ಅಣ್ಣನು ಹಾವು ತಿಂದನು. ಅದನ್ನು" ಅಷ್ಟು ಬರೆಯುವಲ್ಲಿ ಆಟದ ಮೇಲೆ ಗಮನ ತಿರುಗಿರಬೇಕು. ಅರ್ಧಕ್ಕೇ ಬಿಟ್ಟು ಓಡಿಹೋಗಿದ್ದಾಳೆ. 

ಇದೇನು, ಹೀಗಿದೆ? ಮೊನ್ನೆ ಗೋಕುಲಾಷ್ಟಮಿಗೆ ಅಜ್ಜಿ ಮಾಡಿಟ್ಟಿದ್ದ ಚಕ್ಕುಲಿ, ಕೋಡುಬಳೆ, ತೇಂಗೊಳಲು, ಸಿಹಿ ಉಂಡೆ, ಇವನ್ನು ಕೊಟ್ಟರೂ ತಿನ್ನುವುದಿಲ್ಲ. ಹಾವನ್ನು ತಿಂದನೇ? ಅನುಮಾನವಾಯಿತು. ಅದೂ ಎಂಥ ಹಾವೋ, ಏನೋ. 

ಒಹೋ, ಇದು ಅವಳ ಅಣ್ಣನ ಸಮಾಚಾರವಲ್ಲ. ಶಾಲೆಯ ಪಾಠದ ಪುಸ್ತಕದ ಸಾಲು. ನಗು ಬಂತು. ಅಷ್ಟರಲ್ಲಿ ಆಟ ಮುಗಿಸಿ ಮಗಳು ಓಡಿ ಬಂದಳು. 

"ಇದೇನು, ಹೀಗೆ ಬರೆದಿದ್ದಿ? ನಿಮಗೆ ಚೀನಾ ದೇಶದ ಕತೆಯ ಪಾಠ ಇದೆಯೇ?"
"ಇಲ್ಲಪ್ಪ"
"ಮತ್ತೆ ಅಣ್ಣ ಹಾವು ತಿಂದಿದ್ದಾನೆ ಅಂತ ಬರೆದಿದ್ದೀಯೆ. ಎಲ್ಲಿ, ಪಾಠ ತೋರಿಸು"

ಮಗಳು ಪುಸ್ತಕದಲ್ಲಿದ್ದ ಪಾಠ ತೋರಿಸಿದಳು. 

"ಅಣ್ಣನು ಹೂವು ತಂದನು. ಅದನ್ನು ಅಮ್ಮನಿಗೆ ಕೊಟ್ಟನು" ಎಂದಿತ್ತು ಪುಸ್ತಕದಲ್ಲಿ. ಮಗು ಕಾಗುಣಿತ ಕಲಿಯುವ ಕಷ್ಟದಲ್ಲಿ ಹೂವು ಹಾವಾಗಿತ್ತು. ತಂದದ್ದು ತಿಂದಾಗಿತ್ತು. 

*****

ಕನ್ನಡ ರಾಜ್ಯೋತ್ಸವ ಬಂದಿದೆ. ಈ ಸಂದರ್ಭದಲ್ಲಿ ಎಲ್ಲೆಡೆಯೂ ಒಂದು ಸಂಭ್ರಮದ ವಾತಾವರಣ. ವಾಟ್ಸಪ್ಪನಲ್ಲಂತೂ ಶುಭಾಶಯಗಳ ಮಹಾಪೂರ. 

ಸ್ವಾತಂತ್ರ್ಯಾನಂತರ ಭಾಷಾವಾರು ಪ್ರಾಂತಗಳ ರಚನೆಗೆ ಬಹಳ ಬೇಡಿಕೆ ಇದ್ದ ಕಾಲ. "ಕರ್ನಾಟಕ ಕುಲ ಪುರೋಹಿತ" ಎಂದೇ ಖ್ಯಾತರಾದ ಆಲೂರು ವೆಂಕಟ ರಾಯರು, ಹುಯಿಲುಗೋಳ ನಾರಾಯಣ ರಾಯರು, ಅ. ನ. ಕೃಷ್ಣ ರಾಯರು ಇನ್ನೂ ಮುಂತಾದ ಅನೇಕ ಮಹನೀಯರು "ಕರ್ನಾಟಕ ಏಕೀಕರಣ" ಆಗಬೇಕೆಂದು ಹೋರಾಡುತ್ತಿದ್ದ ಕಾಲ. ಇದೇ ರೀತಿ ಎಲ್ಲ ತೆಲುಗು ಮಾತನಾಡುವ ಪ್ರದೇಶವು "ವಿಶಾಲಾಂಧ್ರ" ಎಂದು ಒಂದಾಗಬೇಕೆಂದು ತೆಲುಗರೂ ಹೊಡೆದಾಡುತ್ತಿದ್ದರು. "ಪೊಟ್ಟಿ ಶ್ರೀರಾಮುಲು" ಅನ್ನುವವರು ಆಮರಣಾಂತ ಉಪವಾಸ ಸತ್ಯಾಗ್ರಹ ಇದಕ್ಕಾಗಿ ಮಾಡಿದರು. (ಇದರ ವಿವರಗಳನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು) 56 ದಿನಗಳ ಅಖಂಡ ಉಪವಾಸದ ನಂತರ ಶ್ರೀರಾಮುಲು ಅಮರರಾದರು. ತದನಂತರ ಭಾಷಾವಾರು ಪ್ರಾಂತಗಳ ರಚನೆಗೆ ಇನ್ನೂ ಹೆಚ್ಚಿನ ಬಲ ಬಂದು ಕಡೆಗೆ ಆ ಕೆಲಸವಾಯಿತು. 1956ನೆಯ ಇಸವಿ ನವೆಂಬರ್ ಒಂದರಂದು "ವಿಶಾಲ ಮೈಸೂರು ರಾಜ್ಯ" ರೂಪುಗೊಂಡಿತು. ಅದರ ನೆನಪಿನಲ್ಲಿ "ಕನ್ನಡ ರಾಜ್ಯೋತ್ಸವ" ಆಚರಿಸುತ್ತ ಬಂದಿದ್ದೇವೆ. ಐವತ್ತು ವರುಷಗಳ ಕನ್ನಡಿಗರ ಕನಸು ಅಂದು ನನಸಾಯಿತು. ಹೀಗೆಯೇ ವಿಶಾಲಾಂಧ್ರ ಸಹ ಅಸ್ತಿತ್ವಕ್ಕೆ ಬಂದಿತು. ನವೆಂಬರ್ ಮೊದಲ ದಿನ ಎರಡು ರಾಜ್ಯಗಳಲ್ಲೂ ಸರ್ಕಾರೀ ರಜಾದಿನವಾಗಿ ಸಮಾರಂಭಗಳು ನಡೆಯುವ ಸಂಪ್ರದಾಯ ಪ್ರಾರಂಭವಾಯಿತು. 

ನಂತರ ರಾಜ್ಯಕ್ಕೆ ಹೆಸರು ಬದಲಾವಣೆ ಮಾಡುವ ಬೇಡಿಕೆ ಬಂದಿತು. "ಕನ್ನಡನಾಡು", "ಕರ್ಣಾಟಕ" ಅಥವಾ "ಕರ್ನಾಟಕ" ಎಂದು ಪರ-ವಿರೋಧ ಚರ್ಚೆ ನಡೆದು ಕಡೆಗೆ 1973, ನವೆಂಬರ್ ಒಂದರಂದು "ಕರ್ನಾಟಕ" ಎಂದು ಮರುನಾಮಕರಣ ಆಯಿತು. ಹುಯಿಲುಗೋಳ ನಾರಾಯಣ ರಾಯರ "ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು" ಬದಲಾಯಿಸಿ "ಉದಯವಾಯಿತು ನಮ್ಮ ಚೆಲುವ ಕನ್ನಡ ನಾಡು" ಎಂದು ಕೆಲವರು ಹಾಡಿದ್ದೂ ಉಂಟು. 

*****


ಮೈಸೂರು ರಾಜ್ಯ "ವಿಶಾಲ ಮೈಸೂರು ರಾಜ್ಯ" ಎಂದಾಗಿ ನಂತರ "ಕರ್ನಾಟಕ" ಕೂಡ ಆಗಿದೆ. ವಿಶಾಲಾಂಧ್ರ ಈಗ ಎರಡಾಗಿ "ತೆಲಂಗಾಣ" ಮತ್ತು "ಸೀಮಾಂಧ್ರ" (ಆಂಧ್ರ ಪ್ರದೇಶ ಎಂದು ಕರೆಯುವುದು) ಆಗಿವೆ. ಕರ್ನಾಟಕದಲ್ಲೂ ಆಗಾಗ್ಗೆ "ಕಲ್ಯಾಣ ಕರ್ನಾಟಕ" ಬೇರೆ ಆಗಬೇಕೆಂಬ ಕೂಗು ಕೇಳಿ ಬರುತ್ತದೆ. "ಹೆಸರಾಯಿತು ಕರ್ನಾಟಕ; ಉಸಿರಾಗಲಿ ಕನ್ನಡ" ಎನ್ನುವುದು ಒಂದು ಆಶಯವಾಗಿಯೇ ಉಳಿದಿದೆ. 

ಅನೇಕ ರಾಜಕೀಯ ಕಾರಣಗಳಿಂದ ಏಕೀಕೃತ ಕರ್ನಾಟಕದ ವಿಭಜನೆಯ ಕೂಗು ಆಗಾಗ ಕೇಳಿಬರುತ್ತಿದ್ದರೂ ಆಂಧ್ರದ ರೀತಿ ವಿಭಜನೆಯ ಲಕ್ಷಣಗಳು ವಿಪರೀತವಾಗಿ ಕಾಣಿಸುತ್ತಿಲ್ಲ. ಎಲ್ಲ ಬೆಳವಣಿಗೆ ಕೆಲಸಗಳೂ ಬೆಂಗಳೂರಿನಲ್ಲಿ ಆಗುತ್ತಿವೆ ಎನ್ನುವುದು ಒಂದು ಉತ್ತರ ಕರ್ನಾಟಕದ ಕೂಗಾಗಿದೆ. ಸಮಾಧಾನ ಪಡಿಸಲು ಬೆಳಗಾವಿಯಲ್ಲಿ ಒಂದು ವಿಧಾನ ಸೌಧ ರಚನೆಯಾಗಿ ಆಗಾಗ ಅಲ್ಲಿ ಅಧಿವೇಶನಗಳೂ ನಡೆಯುತ್ತಿವೆ. ಆದರೆ ಎಲ್ಲ ಸರಿಯಾಗಿದೆ ಎಂದು ಹೇಳುವ ಸ್ಥಿತಿ ಇದೆ ಅನ್ನುವಂತಿಲ್ಲ. 

ಕೇಂದ್ರ ಸರಕಾರ ಯಾರೇ ನಡೆಸಲಿ, ಯಾವುದೇ ಪಕ್ಷ ಅಧಿಕಾರದಲ್ಲಿರಲಿ, ಹಿಂದಿ ಭಾಷೆಯ ಹೇರಿಕೆ ಅವ್ಯಾಹತವಾಗಿ ನಡೆದಿದೆ. ತಮಿಳುನಾಡಿನಂತೆ ಅರವತ್ತರ ದಶಕದಲ್ಲಿ ಕನ್ನಡ ಭಾಷಿಕರು ಬಲವಾಗಿ ನಿಲ್ಲದಿದ್ದುದಕ್ಕೆ ತೆರುತ್ತಿರುವ ಬೆಲೆ ಇದು. 

*****

ಕರ್ನಾಟಕದ ರಾಜಧಾನಿಯಾದ ಬೆಂಗಳೂರಿನ ಕಥೆ ಒಂದು ದೊಡ್ಡ ವ್ಯಥೆಯೇ ಆಗಿದೆ. ಹೊರರಾಜ್ಯಗಳಿಂದ ಬಂದವರು ತಾವಾಗಿ ಕನ್ನಡ ಕಲಿಯುವುದಿಲ್ಲ. ದಶಕಗಳೇ ಕಳೆದರೂ ಬೇರೆಯೇ ಆಗಿ ಉಳಿಯುತ್ತಾರೆ. ಕಲಿಸುವ ಪ್ರಯತ್ನ ಕನ್ನಡಿಗರು ಮಾಡುವುದಿಲ್ಲ. "ಕನ್ನಡ ಕಲಿಯಿರಿ" ಎಂದು ಹೇಳುವುದು ಒಂದು ರೀತಿಯ ಗೂಂಡಾಗಿರಿ ಎನ್ನುವಂತೆ ಮೀಡಿಯಾದಲ್ಲಿ ಪ್ರತಿಬಿಂಬಿತ ಆಗುತ್ತಿದೆ. ಈಗ ಬೆಂಗಳೂರಿನ ಒಟ್ಟಾರೆ ಜನಸಂಖ್ಯೆಯಲ್ಲಿ ಶೇಕಡಾ ಕೇವಲ ಮೂವತ್ತೈದರಷ್ಟು ಕನ್ನಡಿಗರು ಉಳಿದಿದ್ದಾರೆ. "ಒಂದು ಸಂಸ್ಕೃತಿ ನಾಶ ಮಾಡಬೇಕಾದರೆ ಅತ್ಯಂತ ಸುಲಭ ಉಪಾಯ ಅಲ್ಲಿನ ಭಾಷೆ ಹಾಳುಮಾಡುವುದು" ಎಂದು ಒಂದು ಹೇಳಿಕೆಯಿದೆ. ಇದರ ಪ್ರಯೋಗಶಾಲೆ ಕರ್ನಾಟಕವೇ ಆಗಿರುವುದು ನಮ್ಮ ದೌರ್ಭಾಗ್ಯ. 

ಈಗಿನ ತಲೆಮಾರಿನ ಅನೇಕ ಕನ್ನಡಿಗರಿಗೆ ಕನ್ನಡ ಮಾತನಾಡುವುದು ಗೊತ್ತು. ಓದಲು ಕಷ್ಟ. ಬರೆಯಲು ಬರದು. ಅಕಸ್ಮಾತ್ ಬರೆದರೂ "ಹೂವು" ಹಾವು" ಆಗಬಹುದು. "ತಂದು" ಅನ್ನುವುದು "ತಿಂದು" ಆಗಬಹುದು. ಅಂದು ಆ ಮನೆಯಲ್ಲಿ ಆಗಿದ್ದು ಕಲಿಯುವ ಮಗುವಿನ ತಪ್ಪು. ಇಂದು ಎಲ್ಲೆಡೆ ಆಗುತ್ತಿರುವುದು ನಮ್ಮ ಉದಾಸೀನದಿಂದ ಆಗುತ್ತಿರುವ ಪ್ರಮಾದ. 

ಕನ್ನಡದ ಕೆಲಸಕ್ಕೆ ಎಂದು ಸ್ಥಾಪಿತವಾದ ಸಂಸ್ಥೆ "ಕನ್ನಡ ಸಾಹಿತ್ಯ ಪರಿಷತ್ತು". ಆ ಸಂಸ್ಥೆಯ ಮುಖ್ಯ ಕಚೇರಿ "ಪರಿಷನ್ಮಂದಿರ" ಇರುವ ರಸ್ತೆಗೆ ಕನ್ನಡದ "ಆದಿಕವಿ" ಪಂಪನ ನೆನಪಾಗಿ "ಪಂಪ ಮಹಾಕವಿ ರಸ್ತೆ" ಎಂದು ಹೆಸರಿದೆ. ಇದನ್ನೂ ಬದಲಾಯಿಸುವ ಪ್ರಯತ್ನ ನಡೆಯುತ್ತಿದೆ ಎಂದು ಸುದ್ದಿ. ಪಂಪನ ಕೃತಿಗಳನ್ನು ಓದುವುದು ಅತ್ತ ಇರಲಿ. ಅವನ ಹೆಸರೂ ನಮಗೆ ಬೇಡವಾಗಿದೆ.  

ಹಳಗನ್ನಡ ಎಂದೋ ಮರೆತುಹೋಯಿತು. ನಡುಗನ್ನಡ ನಡುವಿನಲ್ಲಿ ಬಿಟ್ಟುಹೋಯಿತು. ನವೋದಯ ಕನ್ನಡ ರಾಜ್ಯೋತ್ಸವದ ಕಾಲದಲ್ಲಿ ಮಾತ್ರ ನೆನಪಿಗೆ ಬರುತ್ತಿದೆ. "ನೀವು ಇಂಗ್ಲೀಷಿನಲ್ಲಿ ಬರೆದರೆ ತಕ್ಷಣ ಓದುತ್ತೇವೆ. ಕನ್ನಡ ಆದರೆ ಕಷ್ಟ" ಎಂದು ಐವತ್ತು ದಾಟಿದವರೇ ಹೇಳುತ್ತಾರೆ. ಅವರಿಗಿಂತ ಚಿಕ್ಕವರಿಗೆ ಇದು ಕನ್ನಡ ಎನ್ನುವುದು ಗೊತ್ತಾಗುವುದೂ ಶ್ರಮವೇ. 

ಐವತ್ತು-ಅರವತ್ತರ ದಶಕದಲ್ಲಿ ಕನ್ನಡ ಚಲನಚಿತ್ರಗಳು ಕನ್ನಡ ಭಾಷೆಯ ರಾಯಭಾರಿಗಳಾಗಿ ಕೆಲಸ ಮಾಡುತ್ತಿದ್ದವು. ಏಕೀಕರಣದ ಕಾಲದಲ್ಲಿ ಚಿತ್ರರಂಗ ದೊಡ್ಡ ಕಾಣಿಕೆ ನೀಡಿತು. ಇಂದು ಅನೇಕ ಕನ್ನಡ ಚಲನಚಿತ್ರಗಳಲ್ಲಿ ಕನ್ನಡ ಎಲ್ಲಿದೆ ಎಂದು ಹುಡುಕಬೇಕಾಗಿದೆ. 

*****

ದೈನಂದಿನ ಕಾರ್ಯಕ್ರಮದಲ್ಲಿ ಒಂದು ಪುಟವೋ, ಅರ್ಧ ಪುಟವೋ ಕನ್ನಡ ಬರೆಯುವುದು, ಬರೆದಿರುವುದನ್ನು ಓದುವುದು, ನಮ್ಮ-ನಮ್ಮಲ್ಲಿ ಕನ್ನಡ ಮಾತನಾಡುವುದು, ಅಕ್ಕ-ಪಕ್ಕದವರಿಗೆ ಕನ್ನಡ ಕಲಿಸುವುದು, ಕನ್ನಡದ ವಿಷಯದಲ್ಲಿ ರಾಜಕೀಯವಾಗಿ ಗಟ್ಟಿ ನಿಲುವುಗಳನ್ನು ಪಕ್ಷಭೇದ ಇಲ್ಲದೆ ತೆಗೆದುಕೊಳ್ಳುವುದು, ಕನ್ನಡಿಗರು ಒಟ್ಟಾಗಿ ಒಗ್ಗಟ್ಟಿನಿಂದ ಇರುವುದು ಈಗ ರಾಜ್ಯೋತ್ಸವ ಆಚರಿಸುವ ಮುಖ್ಯ ಅಂಗವಾಗಬೇಕು. 

ಇಲ್ಲದಿದ್ದರೆ "ಹೂವು ಹಾವಾಗುವುದು" ಮತ್ತು "ತರುವುದು ತಿನ್ನುವುದು" ಆಗುವುದು ಮಕ್ಕಳ ಕಾಗುಣಿತದ ತಪ್ಪಿನಿಂದಲ್ಲ; ನಮ್ಮ ಪ್ರಮಾದದಿಂದಲೇ ನಡೆದು ನಮ್ಮ ಎದುರೇ ಭೂತಾಕಾರವಾಗಿ ಬಂದು ನಿಲ್ಲುತ್ತದೆ. 

Saturday, November 1, 2025

ನನಗೇ ಏಕೆ ಹೀಗಾಗುತ್ತದೆ?


ಈಗಿನ ದಿನಗಳಲ್ಲಿ "ಕರೆಂಟ್ ಹೋಯಿತು" ಅಥವಾ "ಪವರ್ ಫೇಲ್ಯೂರ್" ಆಯಿತು ಅನ್ನುವ ಮಾತುಗಳು ಕೇಳಿಬರುವುದು ಬಹಳ ಕಡಿಮೆ. ಅನೇಕರ ಮನೆಗಳಲ್ಲಿ "UPS" ಸೌಲಭ್ಯ ಇರುತ್ತದೆ. ಕಣ್ಣ ರೆಪ್ಪೆ ಅಲುಗಾಡುವ ಸಮಯದಲ್ಲಿ ಅದು ಕೆಲಸ ಮಾಡಲು ಪ್ರಾರಂಭಿಸುತ್ತದೆ. ಸ್ವಲ್ಪ ಮುಂದುವರಿದ ರೀತಿಯ ವ್ಯವಸ್ಥೆ ಇದ್ದರಂತೂ ವ್ಯತ್ಯಾಸ ಗೊತ್ತೇ ಆಗದಂತೆ ವಿದ್ಯುತ್ ಸರಬರಾಜು ಹಸ್ತಾಂತರವಾಗುತ್ತದೆ. ಇಂತಹ ಸೌಲಭ್ಯ ದುಬಾರಿ ಅನ್ನುವ ಸ್ಥಿತಿಯ ಮನೆಗಳಲ್ಲಿ ಈಗಲೂ "ಕರೆಂಟ್ ಹೋಯಿತು" ಅನ್ನುವುದು ಕೇಳಿ ಬರುತ್ತದೆ. ಅನೇಕ ದಿನಚರಿಯ ಕೆಲಸ-ಕಾರ್ಯಗಳು ಅಲ್ಲಲ್ಲೇ ನಿಲ್ಲುತ್ತವೆ. ಬಾವಿಯಲ್ಲಿ ಅಥವಾ ನೆಲದಡಿಯ ಸಂಪಿನಲ್ಲಿ ನೀರುಂಟು. ಆದರೆ ಸ್ನಾನವಿಲ್ಲ. ಅಡಿಗೆಗೆ ಬೇಕಾದ ಪದಾರ್ಥ ರುಬ್ಬುವಂತಿಲ್ಲ. ಹೊಲಗಳ ಪಂಪುಸೆಟ್ಟುಗಳು ಹಗಲೆಲ್ಲಾ ನಿದ್ರೆ ಮಾಡುತ್ತವೆ. ಹೀಗೆ ನಡೆಯುತ್ತದೆ. 

ಒಮ್ಮೆ ಒಬ್ಬ ಸ್ನೇಹಿತರ ಮನೆಯಲ್ಲಿ ಕುಳಿತಿದ್ದಾಗ ಹೀಗೇ ವಿದ್ಯುತ್ ನಿಲುಗಡೆ ಆಯಿತು. ದೂರದರ್ಶನದಲ್ಲಿ ಬಹಳ ಮುಖ್ಯವಾದ ಕ್ರಿಕೆಟ್ ಪಂದ್ಯ ನೋಡುತ್ತಿದ್ದ ಮಗನಿಗೆ ಬಹಳ ಕೋಪ ಬಂತು. "ಹಾಳಾದ್ದು, ಯಾವಾಗಲೂ ನಮ್ಮ ರಸ್ತೆಯಲ್ಲಿಯೇ ಹೀಗಾಗುತ್ತೆ. ಹಿಂದಿನ ರಸ್ತೆಯಲ್ಲಿ ಯಾವಾಗಲೂ ವಿದ್ಯುತ್ ಇರುತ್ತೆ" ಎಂದು ಕೂಗಾಡಿದ. ಅಲ್ಲಿಯೇ ಇದ್ದ ತಂದೆ "ಹೌದೇ? ಅದು ಹೇಗೆ ಗೊತ್ತು?" ಎಂದು ಕೇಳಿದರು. "ನಮ್ಮ ಮನೆಯಲ್ಲಿ ಹೀಗಾದಾಗ ಹೊರಗೆ ಹೋಗಿ ನೋಡಿದರೆ ಹಿಂದಿನ ರಸ್ತೆಯಲ್ಲಿ ಯಾವಾಗಲೂ ವಿದ್ಯುತ್ ಇರುತ್ತೆ" ಅಂದ ಮಗ. "ಒಂದು ಕೆಲಸ ಮಾಡು. ನಮ್ಮ ಮನೆಯಲ್ಲಿ ವಿದ್ಯುತ್ ಇದ್ದಾಗ ಆಗಾಗ ಹೊರಗೆ ಹೋಗಿ ನೋಡು. ಆಗ ಗೊತ್ತಾಗುತ್ತೆ" ಅಂದರು ತಂದೆ.

ನಮ್ಮ ಕಷ್ಟಗಳು ನಮಗೆ ಗೊತ್ತಾಗುತ್ತವೆ. ಅಂತೆಯೇ ಬೇರೆಯವರ ಕಷ್ಟಗಳು ಅವರಿಗೆ ಗೊತ್ತಾಗುತ್ತವೆ. ಎದುರುಗಡೆಯವನಿಗೆ ಹೊಟ್ಟೆನೋವು. ನಮ್ಮ ಕಣ್ಣಿಗೆ ಅವನು ಸರಿಯಾಗಿಯೇ ಇದ್ದಾನೆ. ನಮಗೂ ಒಮ್ಮೊಮ್ಮೆ ಹೊಟ್ಟೆ ನೋವು ಬರುತ್ತದೆ. ಆಗ ಎದುರುಗಡೆಯವರಿಗೆ ನಾವೂ ಸರಿಯಾಗಿಯೇ ಕಾಣುತ್ತೇವೆ. ಇಷ್ಟು ಸಾಮಾನ್ಯ ಜ್ಞಾನ ಇದ್ದರೂ, "ನೋಡು, ಯಾವಾಗಲೂ ನನಗೇ ಹೀಗಾಗುತ್ತದೆ!" ಎಂದು ಪರಿತಪಿಸುವುದು ಮನುಷ್ಯನ ಅಭ್ಯಾಸ. 

*****

ಹಿಂದಿನ ಸಂಚಿಕೆಯಲ್ಲಿ "ಪರಸ್ಪರ ಗುರು-ಶಿಷ್ಯರು" ಅನ್ನುವ ಶೀರ್ಷಿಕೆಯ ಅಡಿಯಲ್ಲಿ ಬೃಹದಶ್ವ ಮುನಿ ಪಾಂಡವಾಗ್ರಜ ಧರ್ಮರಾಯನಿಗೆ ನಳ ಮಹಾರಾಜನ ವೃತ್ತಾಂತ ಹೇಳಿದುದನ್ನು ನೋಡಿದೆವು. (ಇದನ್ನು ಓದಲು ಇಲ್ಲಿ ಕ್ಲಿಕ್ ಮಾಡಿ). ಯುಧಿಷ್ಠಿರನೂ ಹೀಗೆಯೇ "ನನಗೇ ಏಕೆ ಹೀಗಾಯಿತು?" ಅಂದುಕೊಂಡಿರಬೇಕು! 

ನಳಮಹಾರಾಜನ ಕಥೆಯಲ್ಲಿ ಧರ್ಮಜನಿಗಾದದ್ದು ಎಲ್ಲವೂ ನಳನಿಗೂ ಆಗಿತ್ತು. ಅವನೂ ತಮ್ಮನಿಗೆ ಜೂಜಿನಲ್ಲಿ ಎಲ್ಲವನ್ನೂ ಸೋತನು. ಕಾಡು ಪಾಲಾದನು. ಧರ್ಮಜನಿಗೆ ಹೆಂಡತಿ ದೂರವಾಗಲಿಲ್ಲ. ನಳನು ಹೆಂಡತಿಯನ್ನೂ ಬಿಟ್ಟು ಹೋಗಬೇಕಾಯಿತು. ಧರ್ಮಜನು ಕಂಕಭಟ್ಟನಾಗಿ ವಿರಾಟ ಮಹಾರಾಜನ ಸೇವೆ ಮಾಡಿದನು. ನಳನೋ ಕಾರ್ಕೋಟಕನ ಕೈಲಿ ಕಚ್ಚಿಸಿಕೊಂಡು ವಿರೂಪ ಪಡೆದು, ಬಾಹುಕನಾಗಿ ಋತುಪರ್ಣ ಮಹಾರಾಜನ  ಸಾರಥಿಯಾಗಿ ದುಡಿದನು. ಹೀಗೆ ಕೆಲವು ಸಂಗತಿಗಳಲ್ಲಿ ಅವನು ಧರ್ಮರಾಯನಿಗಿಂತ ಹೆಚ್ಚಿನ ದುಃಖ ಪಟ್ಟನು. 

ಧರ್ಮರಾಯನ ಕಷ್ಟ ದೊಡ್ಡದೋ ಅಥವಾ ನಳ ಮಹಾರಾಜನ ಕಷ್ಟ ದೊಡ್ಡದೋ ಎಂದು ಚರ್ಚೆ ಮಾಡಬಹುದು. ಕೆಲವರು ಅದು ದೊಡ್ಡದು ಎನ್ನಬಹುದು. ಮತ್ತೆ ಕೆಲವರು ಇದು ದೊಡ್ಡದು ಅನ್ನಬಹುದು. ಬೃಹದಶ್ವ ಮುನಿ ಬಂದು ನಳನ ವಿಷಯ ಹೇಳುವವರೆಗೆ ಧರ್ಮರಾಯನಿಗೆ ತನ್ನ ವ್ಯಥೆಯೇ ದೊಡ್ಡದಾಗಿತ್ತು. ಇವರಿಬ್ಬರೂ ತಾವು ಸ್ವತಃ ಜೂಜಾಡಿ ರಾಜ್ಯ ಕಳೆದುಕೊಂಡವರು. ಶ್ರೀರಾಮಚಂದ್ರನು ಯಾವ ತಪ್ಪನ್ನೂ ಮಾಡದೆ, ತನಗೆ ನ್ಯಾಯವಾಗಿ ಬರಬೇಕಾಗಿದ್ದ ರಾಜ್ಯ ತಪ್ಪಿ, ಕಾಡುಪಾಲಾಗಿ, ಹೆಂಡತಿಯನ್ನು ಕಳೆದುಕೊಂಡು, ಏನೆಲ್ಲಾ ಕಷ್ಟಗಳನ್ನು ಅನುಭವಿಸಿದನು! ಯಾವ ರೀತಿಯಲ್ಲಿ ಕಂಡರೂ ಶ್ರೀರಾಮನ ಕಷ್ಟಗಳು ಇನ್ನೂ ದೊಡ್ಡವಲ್ಲವೇ?

ದ್ರೌಪದಿಗೆ ಬಂದ ಕಷ್ಟಗಳೇನು ಕಡಿಮೆಯೇ? ತುಂಬಿದ ಸಭೆಯಲ್ಲಿ ಚಕ್ರವರ್ತಿಯ ಧರ್ಮಪತ್ನಿ ಮಹಾರಾಣಿಯಾದವಳಿಗೆ ವಸ್ತ್ರಹರಣದ ಪ್ರಯತ್ನವಾಯಿತು. ಅದಕ್ಕಿಂತ ಕಷ್ಟ ಬೇರೆ ಇದೆಯೇ? ಕುಮಾರವ್ಯಾಸ ಹೇಳುವುದಿದು:

ಜನನವೇ ಪಾಂಚಾಲ ರಾಯನ
ರಮನೆ ಮನೋವಲ್ಲಭರದಾರೆನೆ  
ಮನುಜಗಿನುಜರು ಗಣ್ಯವೇ ಗೀರ್ವಾಣರಿಂ ಮಿಗಿಲು 
ಎನಗೆ ಬಂದೆಡರೀ ವಿರಾಟನ 
ವನಿತೆಯರ ಮುಡಿಯ ಕಟ್ಟುವ 
ತನುವ ತಿರುಗುವ ಕಾಲನೊತ್ತುವ ಕೆಲಸದುತ್ಸಾಹ 

ಮಹಾರಾಜ ದ್ರುಪದನ ಪ್ರೀತಿಯ ಮಗಳು. ಬೆಂಕಿಯಲ್ಲಿ ಹುಟ್ಟಿದವಳು. ಅವಳ ಕಾಲದ ಅಪ್ರತಿಮ ಸುಂದರಿ. ದೇವತೆಗಳನ್ನು ಮೀರಿಸಿದ ಐವರು ಗಂಡಂದಿರು. ರಾಜಸೂಯ ಯಾಗದಲ್ಲಿ ಧರ್ಮರಾಯನ ಜೊತೆಗೆ ಕುಳಿತಾಗ ಬಾಗಿ ವಂದಿಸಿದ ರಾಜಕುಲಸ್ತೋಮ. ಹುಟ್ಟಿದಂದಿನಿಂದ ಕೈಗೊಂದು, ಕಾಲ್ಗೊಂದು ಸೇವಕರು. "ಯಾರಲ್ಲಿ?" ಎಂದರೆ ನಾಲ್ಕು ಜನ ಓಡಿ ಬರುತ್ತಿದ್ದರು. ಈಗ ವಿರಾಟ ಮಹಾರಾಜನ ಅಂತಃಪುರದಲ್ಲಿ ಯಾವ ಹೆಂಗಸು ಕರೆದರೂ ಓಡೋಡಿ ಹೋಗಬೇಕು. ಅವರ ತಲೆ ಬಾಚಿ ಹೆರಳು ಕಟ್ಟಬೇಕು. ಅವರ ಹಿಂದೆ ತಿರುಗಬೇಕು. ಅವರು ಕಾಲು ನೀಡಿದರೆ ಕಾಲೊತ್ತಬೇಕು! ಹುಟ್ಟಿದಂದಿನಿಂದ ಬಡತನವಿತ್ತಪ್ಪ. ಇದೇ ಜೀವನದ ಕೆಲಸ ಅಂದರೆ ಅದೊಂದು ತರಹ. ಇಲ್ಲಿ ಹಾಗಲ್ಲ. ಅವಳ ಕಷ್ಟವೇನು ಎಂದು ಅವಳೇ ಹೇಳಿಕೊಳ್ಳಬೇಕಾದ ಪರಿಸ್ಥಿತಿ! ಇದು ತನ್ನ ತಪ್ಪಿನಿಂದ ಬಂದದ್ದಲ್ಲ. ಈ ಕಷ್ಟಗಳು ಎದುರು ಬಂದು ನಿಲ್ಲುವವರೆಗೂ ಹೀಗಾಗಿದೆ ಅಥವಾ ಹೀಗಾಗಬಹುದು ಎಂದು ಗೊತ್ತೂ ಇಲ್ಲ. 

ಅದೆಲ್ಲಾ ಹೋಗಲಿ ಎಂದು ಬಿಟ್ಟರೂ, ಸಭೆಯಲ್ಲಿ ದುಃಶಾಸನನ ಕೋಟಲೆ. ದುರ್ಯೋಧನ, ಕರ್ಣ, ಶಕುನಿಯರ ಚುಚ್ಚುಮಾತು. ಕಾಡಿನಲ್ಲೂ ನೆಮ್ಮದಿಯಿಲ್ಲ. ಅಲ್ಲಿಗೂ ಬಂದ ಮೈದುನನಾದ ಸೈ೦ಧವ. ಮತ್ತೆ ವಿರಾಟನ ಮನೆಯಲ್ಲಿ ಕೀಚಕ. ದಿನವೆಲ್ಲ ಮೈಮುರಿದು ದುಡಿದೆ ಎಂದರೂ ನೆಮ್ಮದಿಯ ಬದುಕಿಲ್ಲ. 
*****

ಮಹಾರಾಣಿಯಾಗಿದ್ದವಳು ಸೈರಂಧ್ರಿ ಆದದ್ದು ದ್ರೌಪದಿ ಒಬ್ಬಳೇ ಏನು? ಹಿಂದೆ ಹೀಗಾಗಿದ್ದು ಉಂಟೋ? ಅವಳಂತೆ, ಅವಳಷ್ಟು ಕಷ್ಟ ಪಟ್ಟವರು ಮತ್ಯಾರಾದರೂ ಇದ್ದಾರೋ?

ದಮಯಂತಿಯೂ ದ್ರೌಪದಿಯಂತೆ ರಾಜಪುತ್ರಿ. ವಿದರ್ಭ ರಾಜನ ಮಗಳು. ಮಕ್ಕಳಿಲ್ಲದ ಭೀಮರಾಜ ದಮ ಎಂಬ ಋಷಿಯನ್ನು ಆಶ್ರಯಿಸಿ, ಅವರ ಸಲಹೆಯಂತೆ ಪುತ್ರಕಾಮೇಷ್ಟಿ ಯಾಗಮಾಡಿ ಪಡೆದ ಮಗಳಿಗೆ ದಮಯಂತಿ ಎಂದು ಹೆಸರಿಟ್ಟ. ಅವಳೂ ದ್ರೌಪದಿಯಂತೆ ವರ ಪ್ರಸಾದವೇ. ಅವಳೂ ಅವಳ ಕಾಲದ ಅಪ್ರತಿಮ ಸುಂದರಿ. ಗುಣದಲ್ಲಿ, ನಯ-ವಿನಯದಲ್ಲಿ ಎಲ್ಲ ಕಾಲದ ಶ್ರೇಷ್ಠರ ಸಾಲಿನಲ್ಲಿ ಎದ್ದು ಕಾಣುವವಳು. ದೇವತೆಗಳೂ ಅವಳನ್ನು ವಿವಾಹವಾಗಲು ಬಯಸಿ ಸ್ವಯಂವರಕ್ಕೆ ಬಂದಿದ್ದರು. ದ್ರೌಪದಿಯಂತೆಯೇ ಅವಳ ಬಾಲ್ಯ ಕಳೆದಿತ್ತು. ಗಂಡನಾದವನು ನಳ ಚಕ್ರವರ್ತಿ. ದ್ರೌಪದಿಯಂತೆಯೇ ಸುತ್ತ ಮುತ್ತ ನೌಕರ-ಚಾಕರರು. ಜೂಜಿನಲ್ಲಿ ರಾಜ್ಯ ಕಳೆದುಕೊಂಡ ಗಂಡನ ಜೊತೆ ಕಾಡು ಸೇರಿದಳು. ಹಕ್ಕಿಗಳನ್ನು ಹಿಡಿಯಲು ಗಂಡ ತನ್ನ ಬಟ್ಟೆಯನ್ನೇ ಬಲೆಯಾಗಿ ಎಸೆದ. ಆ ಹಕ್ಕಿಗಳೋ ಆ ಬಟ್ಟೆಯನ್ನೇ ಎತ್ತಿಕೊಂಡು ಹಾರಿಹೋದವು. ತಾನು ಉಟ್ಟ ಸೀರೆಯನ್ನು ಹರಿದು ಅರ್ಧ ಗಂಡನಿಗೆ ಕೊಟ್ಟಳು. (ದ್ರೌಪದಿಯಂತೆ ಮತ್ತೊಬ್ಬ ವಸ್ತ್ರಹರಣ ಮಾಡಲಿಲ್ಲ ಅನ್ನುವುದು ಮಾತ್ರ ವ್ಯತ್ಯಾಸ.) ಗಂಡ ಮಧ್ಯರಾತ್ರಿಯಲ್ಲಿ ಅವಳನ್ನು ಬಿಟ್ಟು ಹೊರಟುಹೋದ. (ದ್ರೌಪದಿಗೆ ಈ ಕಷ್ಟ ಇರಲಿಲ್ಲ). 

ಕಾಡಿನಲ್ಲಿ ಒಂದು ಹೆಬ್ಬಾವು ಅವಳನ್ನು ನುಂಗಲು ಪ್ರಾರಂಭಿಸಿತು. ಅವಳ ಕೂಗು ಕೇಳಿ ಬಂದ ಬೇಡನೊಬ್ಬ ಅವಳನ್ನು ಉಳಿಸಿದ. ಆದರೆ ಅವಳನ್ನು ಕಾಡಲು ತಯಾರಾದ. ಧೈರ್ಯದಿಂದ ಅವನನ್ನು ಹೆದರಿಸಿ ಓಡಿಸಿದಳು. ಯಾರೋ ವ್ಯಾಪಾರಿಗಳ ಗುಂಪಿನ ಜೊತೆ ಪ್ರಯಾಣ ಮುಂದುವರೆಸಿದಳು. ಕಾಡಾನೆಗಳು ಬಂದು ಅವರನ್ನೆಲ್ಲಾ ಮುತ್ತಿದ್ದವು. ಹೇಗೋ ಪಾರಾಗಿ ಚೈದ್ಯ ರಾಜನ ಅರಮನೆ ತಲುಪಿದಳು. ಅಲ್ಲಿಯಾದರೋ,  ತನ್ನ ತಾಯಿಯ ತಂಗಿಯ ಮನೆ ಎಂದು ಗೊತ್ತಿಲ್ಲ. ಆ ಚಿಕ್ಕಮ್ಮನು ದಮಯಂತಿಯನ್ನು ತನ್ನ ಮಗಳ ಸೈರ೦ಧ್ರಿಯನ್ನಾಗಿ ನೇಮಿಸಿದಳು. ಮುಂದೆ ಅನೇಕ ಬೆಳವಣಿಗೆಗಳು ನಡೆದು, ತಂದೆಯ ಮನೆ ಸೇರಿ, ಇನ್ನೊಂದು ಸ್ವಯಂವರದ ನೆಪ ಹೂಡಿ, ಕಡೆಗೆ ಗಂಡನ ಜೊತೆ ಸೇರಿದಳು. ನಳನು ಪುಷ್ಕರನೊಡನೆ ಮತ್ತೆ ಜೂಜಿಗೆ ಕುಳಿತಾಗ ಪುಷ್ಕರನು ಕೇಳಿದ್ದೇನು? ನಳನು ಗೆದ್ದರೆ ರಾಜ್ಯ ನಳನಿಗೆ. ಪುಷ್ಕರನು ಗೆದ್ದರೆ? ನಳನ ಬಳಿ ಪಂಥವಿಡಲು ರಾಜ್ಯವಿಲ್ಲ. ದಮಯಂತಿಯನ್ನು ನಳ ಪುಷ್ಕರನಿಗೆ ಒಪ್ಪಿಸಬೇಕು! ನಳನು ಪುಣ್ಯಕ್ಕೆ ಗೆದ್ದ. ನಳನು ಮತ್ತೆ ರಾಜ್ಯ-ಕೋಶಗಳನ್ನು ಪಡೆದ ನಂತರ ದಮಯಂತಿ ಮತ್ತೆ ರಾಣಿಯಾಗಿ ಬದುಕಿದಳು. 

ದ್ರೌಪದಿಗಿಂತ ಎಷ್ಟೋ ಮುಂಚೆ, ಅವಳಂತೆ ಕಷ್ಟಪಟ್ಟು, ಕಾಡುಪಾಲಾಗಿ, ಸೈರ೦ಧ್ರಿಯಾಗಿ, ಅದೇ ರೀತಿ ಪಾಡುಪಟ್ಟವಳು ದಮಯಂತಿ. 
*****

ಕರ್ಣನು ಒಮ್ಮೆ ತನ್ನ ಹೆತ್ತ ತಾಯಿ ಆಗತಾನೇ ಹುಟ್ಟಿದ ತನ್ನನ್ನು ನದಿಯಲ್ಲಿ ತೇಲಿಬಿಟ್ಟು, ತಾನು ಸೂತಪುತ್ರನೆಂದು ಬದುಕಬೇಕಾಯಿತು ಎಂದು ಕೃಷ್ಣನ ಬಳಿ ಹೇಳಿಕೊಂಡು ಕೊರಗುತ್ತಾನೆ. ಕೃಷ್ಣ ಹೇಳುತ್ತಾನೆ: "ನಿನ್ನದು ಅಷ್ಟೇ ಕಥೆ. ನನ್ನನ್ನು ನೋಡು. ನಾನು ಹುಟ್ಟಿದ್ದೇ ಸೆರೆಮನೆಯಲ್ಲಿ. ಹುಟ್ಟುವ ಮೊದಲೇ ನನ್ನನ್ನು ಕೊಲ್ಲಲು ಸೋದರಮಾವನೇ ಹೊರಗಡೆ ಕಾದಿದ್ದ. ಹುಟ್ಟಿದ ತಕ್ಷಣ ನನ್ನ ತಂದೆಯೇ ನನ್ನನ್ನು ಬೇರೆಲ್ಲೋ ಕೊಂಡೊಯ್ದ. ಮಹಾರಾಜ ಉಗ್ರಸೇನನ ಮೊಮ್ಮಗನಾದ ನಾನು ಹಸುಕಾಯುವ ಗೊಲ್ಲನಾಗಿ ಬೆಳೆದೆ. ಹಾಲು ಕುಡಿಯುವ ಕಂದನಿಗೆ ಹಾಲಿನಲ್ಲೇ ವಿಷವುಣಿಸಲು ಒಬ್ಬಳು ರಕ್ಕಸಿ ಬಂದಳು. ಮಗುವಾಗಿದ್ದಾಗ ನನ್ನನ್ನು ಮುಗಿಸಲು ಸರತಿಯಮೇಲೆ ರಕ್ಕಸರ ಗುಂಪೇ ಬಂತು. ನಂತರ ಜರಾಸಂಧನ ಕಾಟ. ಯುದ್ಧಗಳ ಮೇಲೆ ಯುದ್ಧ. ಗೋಕುಲದಿಂದ ಮಧುರೆಗೆ. ಮಧುರೆಯಿಂದ ದ್ವಾರಕೆಗೆ. ನಿನಗಾದರೆ ಒಬ್ಬರು ಸಾಕುವ ದಂಪತಿಗಳು ಸಿಕ್ಕಿದರು. ನಂತರ ಅಂಗರಾಜನಾದೆ. ಈಗ ಹೇಳು. ನಿನ್ನ ಕಷ್ಟ ಹೆಚ್ಚೋ, ನನ್ನ ಕಷ್ಟ ಹೆಚ್ಚೋ?". 

ಕರ್ಣ ಏನು ಹೇಳಬೇಕು?
*****

ಒಳ್ಳೆಯ ಆರೋಗ್ಯದಲ್ಲಿದ್ದ ಸ್ನೇಹಿತರೊಬ್ಬರು ಕರೋನ ಸಮಯದಲ್ಲಿ ವಿಚಿತ್ರ ಖಾಯಿಲೆಗೆ ತುತ್ತಾದರು. ಎರಡು ತಿಂಗಳು ಆಸ್ಪತ್ರೆ ವಾಸದ ನಂತರ ಇಪ್ಪತ್ತೈದು ಕೆಜಿ ತೂಕ ಕಳೆದುಕೊಂಡು ಕುಂಬಳಕಾಯಿಯಂತೆ ಇದ್ದವರು ನುಗ್ಗೆಕಾಯಿಯಂತೆ ಆದರು. ನಡೆದಾಡಲೂ ಆಗದು. ಭೋಕ್ತಾಪುರುಷ ಆಗಿದ್ದವರಿಗೆ ಎರಡು ಚಮಚ ಆಹಾರ ತಿನ್ನಲೂ ಕಷ್ಟ. ಆಸ್ಪತ್ರೆಯಿಂದ ವೈದ್ಯರು ಅವರನ್ನು ಪುನರ್ವಸತಿ ಕೇಂದ್ರಕ್ಕೆ (ರಿಹ್ಯಾಬಿಲಿಟೇಷನ್ ಸೆಂಟರ್) ಕಳಿಸಿದರು. 

ಇನ್ನೊಬ್ಬ ಸ್ನೇಹಿತರು ಅವರನ್ನು ನೋಡಲು ಪುನರ್ವಸತಿ ಕೇಂದ್ರಕ್ಕೆ ಹೋದರು. ಅವರ ಪರಿಸ್ಥಿತಿ ನೋಡಿ ಇವರಿಗೆ ಕಣ್ಣೀರು. "ಇದೇನು? ಹೀಗಾಯಿತು!" ಎಂದರು. ಅವರು ಹೇಳಿದರು: "ಆಂಬ್ಯುಲೆನ್ಸ್ ವಾಹನದಲ್ಲಿ ಮಲಗಿ ಆಸ್ಪತ್ರೆಯಿಂದ ಇಲ್ಲಿಗೆ ಬರುವ ದಾರಿಯಲ್ಲಿ ನಾನೂ ಹಾಗೆ ಯೋಚಿಸುತ್ತಿದ್ದೆ. ನನಗೇ ಏಕೆ ಹೀಗಾಯಿತು? ಎಂದು. ಇಲ್ಲಿ ಬಂದ ಮೇಲೆ, ಇಲ್ಲಿರುವ ಇತರರನ್ನು ನೋಡಿದ ಮೇಲೆ, ನಾನೇ ಭಾಗ್ಯವಂತ ಅನ್ನಿಸುತ್ತಿದೆ. ಸುತ್ತ ನೋಡಿ. ಮಧುಮೇಹದಿಂದ ಕಾಲು ಕತ್ತರಿಸಿ ಕಳೆದುಕೊಂಡಿರುವವರು ಕೆಲವರು. ಅಪಘಾತದಲ್ಲಿ ಕೈ ಹೋದವರು ಕೆಲವರು. ಬೆನ್ನು ಮೂಳೆ ಮುರಿದಿರುವವರು ಇಲ್ಲುಂಟು. ಹೀಗೆ ನಾನಾ ರೀತಿ ಕಷ್ಟಪಡುತ್ತಿರುವವರು ಅನೇಕರು. ನಾನಾದರೋ, ಕಷ್ಟವಾದರೂ ನಿಧಾನವಾಗಿ ಓಡಾಡಬಲ್ಲೆ. ಸ್ವಲ್ಪವಾದರೂ ಮೊದಲಿನಂತೆ ಆಗಬಲ್ಲೆ ಅನ್ನುವ ಅವಕಾಶ ಇದೆ. ಇಲ್ಲಿರುವ ಕೆಲವರಿಗೆ ಅದೂ ಕಷ್ಟ ಅನಿಸುವುದಿಲ್ಲವೇ?"

ಇವರು ಸುತ್ತ ಕಣ್ಣಾಡಿಸಿದರು.  ಅವರು ಹೇಳಿದುದರಲ್ಲಿ ಸ್ವಲ್ಪವೂ ಉತ್ಪ್ರೇಕ್ಷೆ ಇರಲಿಲ್ಲ. 

***** 

ಕೇವಲ ನಮ್ಮ ಕಷ್ಟಗಳನ್ನೇ ನೋಡಿಕೊಳ್ಳುತ್ತಾ, ನಮ್ಮ ಹಣೆಬರಹ ಎಂದು ಪರಿತಪಿಸುತ್ತಾ, "ನನಗೇ ಏಕೆ ಹೀಗಾಗುತ್ತದೆ?" ಎಂದು ಹೇಳಿಕೊಳ್ಳುತ್ತಾ ಇದ್ದರೆ ಕಷ್ಟಗಳ ತೀವ್ರತೆ ಇನ್ನೂ ಹೆಚ್ಚಾಗುವುದು. (ಅದು ಹೇಗೆ ಸಾಧ್ಯ ಎಂದು ಕೇಳಬಹುದು. ಕಷ್ಟಗಳು ಹೆಚ್ಚಾಗುವುದಿಲ್ಲ. ಇರುವ ಕಷ್ಟಗಳ ಅನುಭವ ಮಾನಸಿಕವಾಗಿ ಮತ್ತಷ್ಟು ಹೆಚ್ಚಾಗುತ್ತದೆ.) ನಮಗಿಂತಲೂ ಹೆಚ್ಚು ಕಷ್ಟ ಪಟ್ಟವರು, ಪಡುತ್ತಿರುವವರು ಅನೇಕರಿದ್ದಾರೆ. ಇದು ಕೇವಲ ನಮ್ಮ ಕಥೆಗಳಲ್ಲ. ಅಥವಾ ಕೇವಲ ಇಂದಿನ ಕಥೆಯಲ್ಲ!