Showing posts with label Buddhi. Show all posts
Showing posts with label Buddhi. Show all posts

Saturday, July 5, 2025

ಮನಸ್ಸು ಮತ್ತು ಗಜಚರ್ಮಾ೦ಬರಧರ


ಹಿಂದಿನ ಒಂದು ಸಂಚಿಕೆಯಲ್ಲಿ "ಮನವ ಕಬ್ಬಿಣ ಮಾಡು, ಹೇ ಮೃಡನೇ" ಎನ್ನುವ ಶೀರ್ಕಿಕೆಯಡಿ, ಜನಪ್ರಿಯ ರುದ್ರ-ಚಮಕಗಳ ಮೂಲಕ ಮಾಡುವ ಆರಾಧನೆಯಲ್ಲಿ ಶ್ರೀಶಂಭುವಿನ ಬಳಿ ಅನೇಕ ಲೌಕಿಕ ಸಂಪತ್ತುಗಳನ್ನು ಕೇಳುವುದರ ಔಚಿತ್ಯವನ್ನು ಪ್ರಶ್ನಿಸಿಕೊಂಡು ಅದಕ್ಕೆ ಉತ್ತರ ಹುಡುಕುವ ಪ್ರಯತ್ನ ಮಾಡಿದ್ದೆವು. (ಈ ಸಂಚಿಕೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ). ಅದರ ಕೊನೆಯಲ್ಲಿ "ಮನಸು ಕಾರಣವಲ್ಲ" ಮತ್ತು "ದನುಜ ಗಜ ಮದಹಾರಿ" ಎಂಬ ಎರಡು ಅಭಿವ್ಯಕಿಗಳಿಗೆ  ವಿಶೇಷಾರ್ಥಗಳನ್ನು ನೋಡುವ ಪ್ರಯತ್ನ ಮಾಡಬೇಕಿತ್ತು. ಈಗ ಅದನ್ನಿಷ್ಟು ನೋಡೋಣ. 

*****

ರುದ್ರದೇವರು ಮನೋಭಿಮಾನಿಗಳು. ನಮ್ಮ ಮನಸ್ಸು ನಾವು ಮಾಡುವ ಎಲ್ಲ ಕೆಲಸ-ಕಾರ್ಯಗಳಿಗೂ ಮೂಲ ಶಕ್ತಿ. ಎಲ್ಲ ರೀತಿಯ ಸಾಧನ-ಸಲಕರಣೆಗಳಿದ್ದರೂ ಮನಸ್ಸು ಕೆಲಸ ಮಾಡದಿದ್ದರೆ ಮನುಷ್ಯನು ನಿಷ್ಕ್ರಿಯನಾಗುತ್ತಾನೆ. ಅದೇ ರೀತಿ ಕೆಲವು ಅವಶ್ಯಕ ಸಂಪತ್ತುಗಳಿಲ್ಲದಿದ್ದರೂ ಕೂಡ ಮನುಷ್ಯನು ಮನಸ್ಸು ಮಾಡಿದರೆ ಅವುಗಳನ್ನು ಹೇಗೋ ಹೊಂದಿಸಿಕೊಂಡು, ಅಥವಾ ಅವುಗಳಿಗೆ ಪರ್ಯಾಯ ಪರಿಕರಗಳನ್ನು ಹುಡುಕಿಕೊಂಡು, ಉದ್ದೇಶಿತ ಕೆಲಸಗಳನ್ನು ಸಾಧಿಸುತ್ತಾನೆ.  ಇದು ನಾವು ನಮ್ಮ ನಮ್ಮ ಅನುಭವಗಳಿಂದ ಕಂಡುಕೊಂಡಿರುವ ಸತ್ಯ. 

"ನೀನು ಮನಸ್ಸು ಮಾಡಿದರೆ ಇದನ್ನು ಸುಲಭವಾಗಿ ಮಾಡಿ ಮುಗಿಸುವೆ. ಮುಖ್ಯ, ನೀನು ಮನಸ್ಸು ಮಾಡಬೇಕು" ಎನ್ನುವ ಮಾತನ್ನು ನಾವು ಮತ್ತೆ ಮತ್ತೆ ಆಡುತ್ತಿರುತ್ತೇವೆ ಅಥವಾ ಕೇಳುತ್ತಿರುತ್ತೇವೆ. "ಎಷ್ಟು ಹೇಳಿದರೂ ಅವನು ಮನಸ್ಸು ಮಾಡಲಿಲ್ಲ. ಕೆಲಸ ಆಗಲಿಲ್ಲ" ಅನ್ನುತ್ತೇವೆ. "ವೇರ್ ದೇರ್ ಈಸ್ ಎ ವಿಲ್, ದೇರ್ ಈಸ್ ಎ ವೇ" ಎಂದು ಇಂಗ್ಲಿಷಿನಲ್ಲಿ ಹೇಳುವುದೂ ಇದನ್ನೇ. "ಮನ ಏವ ಮನುಷ್ಯಾಣಾ೦ ಕಾರಣಂ ಬಂಧ ಮೊಕ್ಷಯೋ:" ಎನ್ನುವುದಂತೂ ಬಹಳ ಪ್ರಸಿದ್ಧವಾದ ನುಡಿ. ಮನುಷ್ಯನ ಕರ್ತೃತ್ವ ಶಕ್ತಿಗೆ ಮನಸ್ಸೇ ಕೀಲಿಕೈ. ಮನಸ್ಸು ಈ ಕಡೆ ತಿರುಗಿದರೆ ಅದನ್ನು ಮುಚ್ಚಿ ಬೀಗ ಹಾಕುತ್ತದೆ. ಆ ಕಡೆ ತಿರುಗಿದರೆ ಅದನ್ನು ತೆಗೆದು ದಾರಿಮಾಡುತ್ತದೆ. ನಮ್ಮ ಕೈಯಲ್ಲಿ ಇರುವ ಮತ್ತು ಸಿಕ್ಕುವ ಎಲ್ಲ ಶಕ್ತಿಗಳಲ್ಲಿ ಅತ್ಯಂತ ಪ್ರಮುಖವಾದವುಗಳಲ್ಲಿ  ಮನಸ್ಸು ಒಂದು ಮುಖ್ಯ ಶಕ್ತಿ. 

ನಾವು ಮಾಡುವ ಕೆಲಸಗಳು ಸರಿಯಾಗಿ, ನೇರವಾಗಿ, ಸಾರ್ಥಕವಾದರೆ, ನ್ಯಾಯಯುತವಾಗಿದ್ದರೆ ಅವುಗಳಿಂದ ಪುಣ್ಯ ಸಂಪಾದನೆ. ಅನ್ಯಾಯದ, ಅಧರ್ಮದ ಕೆಲಸಗಳಾದರೆ ಅವುಗಳಿಂದ ಪಾಪ ಸಂಪಾದನೆ. ಪಾಪ, ಪುಣ್ಯಗಳೆಂಬುವು ಮಾಡುವ ಕೆಲಸಗಳಿಂದ ಬಂದ ಫಲಿತಾಂಶಗಳು. ಆದ್ದರಿಂದಲೇ ಈ ರೀತಿ ಹೇಳುವುದು:

ಮನಸು ಕಾರಣವಲ್ಲ ಪಾಪ ಪುಣ್ಯಕ್ಕೆಲ್ಲ 
ಅನಲಾಕ್ಷ ನಿನ್ನ ಪ್ರೇರಣೆ ಇಲ್ಲದೇ 
ದನುಜಗಜ ಮದಹಾರಿ ದಂಡ ಪ್ರಣಾಮ ಮಾಳ್ಫೆ   
ಮಣಿಸೋ ಈ ಶಿರವನ್ನು ಸಜ್ಜನರ ಚರಣದಲಿ 
 
ಹೀಗಿರುವಲ್ಲಿ, ಮೇಲೆ ಏಕೆ "ಮನಸು ಕಾರಣವಲ್ಲ" ಎಂದು ಹೇಳಿರುವುದು? ಇದೊಂದು ವಿಚಿತ್ರ ಅಲ್ಲವೇ? ಇದು ಒಂದು ಸಾಧುವಾದ ಪ್ರಶ್ನೆಯೇ.  ಪಾಪ ಪುಣ್ಯಕ್ಕೆಲ್ಲಾ ಮನಸ್ಸೇ ಕಾರಣ ಎನ್ನುವುದು ಸರಿ. ಆದರೆ ಮನಸ್ಸು ಒಂದು ವಾಹನವಿದ್ದಂತೆ. ವಾಹನ ಸರಿಯಾಗಿ ನಡೆದರೆ ಅದರಿಂದ ಪ್ರಯೋಜನ. ಅದೇ ವಾಹನ ಅಡ್ಡಾದಿಡ್ಡಿಯಾಗಿ ನಡೆದು ಅಪಘಾತ ಮಾಡಿದರೆ? ಆಗ ವಾಹನದಿಂದ ಆಗುವ ಪ್ರಯೋಜನಕ್ಕಿಂತ ಹಾನಿಯೇ ಹೆಚ್ಚು. ಆದರೆ ಅದು ಅಪಘಾತ ಮಾಡಿದರೆ ಅದಕ್ಕೆ ವಾಹನ ಹೊಣೆ ಅಲ್ಲ. ಒಂದು ಕಾರು ರಸ್ತೆಯಲ್ಲಿ ನಡೆಯುತ್ತಿರುವ ಜನಗಳ ಮೇಲೆ ಹಾದು ಹೋಯಿತು ಎಂದರೆ ಅದು ಕಾರಿನ ತಪ್ಪಲ್ಲ. ಅದು ಅದನ್ನು ನಡೆಸುತ್ತಿರುವ ಚಾಲಕನ ಹೊಣೆ. ಹೀಗೆಯೇ ಮನಸ್ಸಿನ ಕೆಲಸಗಳಿಗೆ ಅದರ ಒಡೆಯನಾದ ಜೀವನೇ ಹೊಣೆ ಹೊರಬೇಕು. 

ಯಾವುದೋ ಒಂದು ಅಪಘಾತವಾದಾಗ ಸಂಬಂಧಿಸಿದ ವಾಹನದ ಚಾಲಕನು "ನನಗೇನೂ ಗೊತ್ತಿಲ್ಲ. ನಾನೇನು ಮಾಡಲಿ? ಕಾರು ಅಡ್ಡಾದಿಡ್ಡಿ ಚಲಿಸಿತು. ಅಪಘಾತಕ್ಕೆ ಅದೇ ಕಾರಣ. ಅದನ್ನೇ ಕೇಳಿ. ನನ್ನನ್ನೇನು ಕೇಳುತ್ತೀರಿ?" ಎಂದು ಹೇಳಿದರೆ ಕೇಳಿದವರು ನಗುತ್ತಾರೆ. ಮನಸ್ಸಿನ ವಿಷಯವೂ ಹೀಗೆ. ಅದನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು ಅದರಿಂದ ಪ್ರಯೋಜನ ಪಡೆಯುವುದು ಜೀವನ ಜವಾಬ್ದಾರಿ. ಚಾಲಕನು ವಾಹನವನ್ನು ಅಂಕೆಯಲ್ಲಿಟ್ಟುಕೊಂಡು ಸರಿಯಾಗಿ ನಡೆಸಬೇಕು. ಹೀಗೆ ಸರಿಯಾಗಿ ನಡೆಸಲು ತಿಳಿದವರಿಂದ ವಾಹನ ಚಾಲನೆ ಮೊದಲು ಕಲಿಯಬೇಕು. ಟ್ರ್ಯಾಫಿಕ್ ಸಿಗ್ನಲ್ಲುಗಳು ಸರಿಯಾಗಿ ಕೆಲಸ ಮಾಡಬೇಕು. ವಾಹನಗಳು ಸುಸ್ಥಿತಿಯಲ್ಲಿರಬೇಕು. ಮನಸ್ಸಿನೆಂಬ ವಾಹನ ನಡೆಸಲು ಕಲಿಸುವ ಪ್ರಭುಗಳು ಮಹಾರುದ್ರದೇವರು. ನಿಯಮಗಳಿಗೆ ವಿರುದ್ಧವಾಗಿ ಹೋಗದಂತೆ, ಸರಿದಾರಿಯಲ್ಲಿ ನಡೆಯುವಂತೆ ಮೇಲ್ವಿಚಾರಣೆ ಮಾಡುವವರು ಅವರು. ಚಾಲಕನು ಕಲಿಸುವ ಗೈಡನ್ನು ಪಕ್ಕದಲ್ಲಿ ಕೂಡಿಸಿಕೊಂಡರೆ ಅಪಘಾತ ಆಗುವ ಸಂದರ್ದಗಳಲ್ಲಿ ಅವರು ಅವನ್ನು ನಿವಾರಣೆ ಮಾಡುತ್ತಾರೆ. ಅವರ ಪ್ರಾರ್ಥನೆ ಮಾಡಿ, ಅವರ ಮೇಲ್ವಿಚಾರಣೆಯಲ್ಲಿ ಮನಸ್ಸೆಂಬ ವಾಹನ ನಡೆಸಿದರೆ ದುರ್ಘಟನೆಗಳು ಆಗುವುದಿಲ್ಲ. 

ಮನಸ್ಸು ಸರಿದಾರಿಯಲ್ಲಿ ಹರಿಯಬೇಕಾದರೆ ಏನು ಮಾಡಬೇಕು? ಕೆಟ್ಟವರ ಸಹವಾಸ ಮಾಡಿದರೆ ಮನಸ್ಸು ಕೆಡುತ್ತದೆ. ಅದೇ ಒಳ್ಳೆಯವರ ಜೊತೆ ಸಿಕ್ಕರೆ ಮನಸ್ಸು ಒಳ್ಳೆಯ ನಡತೆ ತೋರಿಸುತ್ತದೆ. ಹೀಗೆ ಸಜ್ಜನರ ಜೊತೆ ಸಿಗುವಂತೆ ಮಾಡುವವರು ಮಹಾದೇವರು. ಈ ಹಿನ್ನೆಲಿಯಲ್ಲಿ "ಪಾಪ-ಪುಣ್ಯಕ್ಕೆಲ್ಲ ಮನಸು ಕಾರಣವಲ್ಲ. ನಿನ್ನ ಪ್ರೇರಣೆ ಮುಖ್ಯ. ನನ್ನನ್ನು ಸತ್ಕಾರ್ಯಗಳಲ್ಲಿ ಪ್ರೇರೇಪಿಸು. ಈ ಮನಸ್ಸು ರಸ್ತೆಯ ಅಕ್ಕ-ಪಕ್ಕದ ಹಳ್ಳ-ಕೊಳ್ಳಗಳೊಳಗೆ ಬೀಳದಂತೆ ತಡೆ. ಯಾವಾಗಲೂ ನನ್ನನ್ನು ರಕ್ಷಿಸು" ಎಂದು ಹೇಳುವುದು ಮೇಲಿನ ಪ್ರಾರ್ಥನೆಯ ತಿರುಳು. 

*****

ಪರಶಿವನ ಆರಾಧನೆ ಮಾಡುವಾಗ ಅವನ ಅನೇಕ ಹೆಸರುಗಳನ್ನೂ, ವಿಶೇಷಣಗಳನ್ನೂ  ಉಪಯೋಗಿಸುತ್ತೇವೆ. ಹೀಗೆ ಅವನ ಅನೇಕ ಹೆಸರುಗಳನ್ನು ಹೇಳುವಾಗ "ಕೃತ್ತಿವಾಸ" "ಚರ್ಮಾ೦ಬರ" "ಚರ್ಮಾ೦ಬರಧರ" 'ಗಜಚರ್ಮಾ೦ಬರಧರ" ಮುಂತಾಗಿ ಹೇಳುತ್ತೇವೆ. ಏಕೆ? "ದನುಜ ಗಜ ಮದಹಾರಿ" ಎಂದು ಏಕೆ ಹೇಳಿದರು? 

ಅನೇಕ ಜನ ರಕ್ಕಸರು ಸಜ್ಜನರ ಹಿಂಸಕರಾಗಿ ಅವರ ಜೀವನಗಳಿಗೆ ಉಪದ್ರವ ಕೊಡುವುದೇ ವೃತ್ತಿ ಮಾಡಿಕೊಂಡಿದ್ದರು. ಈಗಲೂ ಇದ್ದಾರೆ. ಇಂತಹ ದನುಜರ ಉಪಟಳದಿಂದ ತಮ್ಮನ್ನು ರಕ್ಷಿಸಲು ಸುಜೀವರು ರುದ್ರದೇವರನ್ನು ಪ್ರಾರ್ಥಿಸುತ್ತಾರೆ. ಶಂಭುವು ಸುರಗುರುವು. ಹಿಂದೆ ಒಬ್ಬ ರಾಕ್ಷಸನು ಸಜ್ಜನರಿಗೆ ಬಹಳ ತೊಂದರೆಯನ್ನು ಕೊಡುತ್ತಿದ್ದ. ಆಗಾಗ ಆನೆಯ ರೂಪವನ್ನು ಧರಿಸಿ ಮದಿಸಿದ ಆನೆ ಮನಸ್ಸು ಬಂದಂತೆ ಎಲ್ಲ ಕಡೆ ಧಾಂಧಲೆ ಮಾಡುವಂತೆ ನಡೆದುಕೊಳ್ಳುತ್ತಿದ್ದ. ಆರ್ತ ಭಕ್ತರ ಮನವಿಗೆ ಸ್ಪಂದಿಸಿ ಮಹಾದೇವನು ಆ ಗಜಾಸುರನನ್ನು ಕೊಂದನು. ಅವನ ಚರ್ಮವನ್ನು ಸುಲಿದು ಅದನ್ನೇ ವಸ್ತ್ರದಂತೆ ಧರಿಸಿ "ಒಳ್ಳೆಯ ಜೀವಿಗಳಿಗೆ ಕಷ್ಟ ಕೊಡುವ ದುರುಳರಿಗೆ ಇದೇ ಗತಿ" ಎಂದು ಮಾದರಿ ಮಾಡಿ ತೋರಿಸಿದನು. ಮದಿಸಿದ ಆನೆಯ ರೂಪದ ಗಜಾಸುರನ ಸೊಕ್ಕನ್ನು ಅಡಗಿಸಿ ಕೊಂದುದರಿಂದ "ದನುಜ ಗಜ ಮದ ಹಾರಿ" ಆದನು. ಚರ್ಮವನ್ನು ಹೊದ್ದುದರಿಂದ "ಚರ್ಮಧಾರಿ" ಆದನು. ಆನೆಯ ಚರ್ಮವಾದುದರಿಂದ "ಗಜಚರ್ಮಾ೦ಬರಧರ" ಎಂದು ಹೆಸರಾಯಿತು. 

"ವಲುವೂರು" ಎನ್ನುವ ಹೆಸರಿನ ಸ್ಥಳ ತಮಿಳುನಾಡಿನ "ಮಯಿಲಾಡುತುರೈ" (ಹಿಂದಿನ "ಮಾಯಾವರಂ") ಜಿಲ್ಲೆಯ ಒಂದು ಊರು. ಜಿಲ್ಲಾಕೇಂದ್ರದಿಂದ ಆರು ಮೈಲಿ ದೂರದ ಸಣ್ಣ ಪಟ್ಟಣ. ಇಲ್ಲರುವ ದೇವಾಲಯದಲ್ಲಿ ಎಂಟು ಕೈಗಳುಳ್ಳ "ಗಜಾಸುರಸಂಹಾರಿ" ಈಶ್ವರನ ಕಂಚಿನ ಪ್ರತಿಮೆಯನ್ನು ಆರಾಧಿಸುತ್ತಾರೆ. ಕರ್ನಾಟಕದ ಹೆಸರಾಂತ ಹಳೇಬೀಡಿನ "ಶಾಂತಲೇಶ್ವರ" ದೇವಾಲಯದಲ್ಲಿ ಗಜಾಸುರಸಂಹಾರಿ ಪ್ರತಿಮೆಯ ಕೆತ್ತನೆಯಿದೆ. ಪಕ್ಕದ ಚಿತ್ರದಲ್ಲಿ ಅದನ್ನು ನೋಡಬಹುದು. 

ಮಹೇಶ್ವರನು ಕೇವಲ ದುಷ್ಟರ ಶಿಕ್ಷೆಗೆ ಮಾತ್ರವಲ್ಲದೆ ಒಳ್ಳೆಯವರಿಗೆ  ಬಹುಪ್ರೀತಿ ತೋರಿಸುವ ಕರುಣಾಳು. ಉಮಾಪತಿಗೆ ಕೆಟ್ಟವರನ್ನು ಕಂಡರೆ ಎಷ್ಟು ಕೋಪವೋ, ಒಳ್ಳೆಯವರನ್ನು ಕಂಡರೆ ಅಷ್ಟೇ ಪ್ರೀತಿ. "ಖಳಜನ ಕೃತರೋಷ:". ಹಾಗೆಯೇ "ಭಕ್ತಜನಾಶ್ರ್ರಯ ವರದ". ಪೊಲೀಸು ಅಧಿಕಾರಿಗೆ ಕಳ್ಲರು ಹೆದರುವಂತೆ ದುಷ್ಟರು ಅವರನ್ನು ಕಂಡರೆ ಹೆದರುತ್ತಾರೆ. ಸಜ್ಜನರು ರಕ್ಷಣೆಗೆ ಅವರ ಮೊರೆ ಹೋಗುತ್ತಾರೆ. 

*****

ದೇವೇಂದ್ರನು ಎಲ್ಲ ದೇವತೆಗಳಿಗೆ ಅಧಿಪತಿಯು. ಸಕಲ ಮಂತ್ರಪೂತ ಅಸ್ತ್ರಗಳೂ ಅವನ  ಬಳಿ ಇವೆ. ಯಾವ ಅಸ್ತ್ರ ಬೇಕಾದರೂ ಅವನನ್ನೇ ಕೇಳಬೇಕು. ಮಹಾಭಾರತದ ಕುರುಕ್ಷೇತ್ರ ಯುದ್ಧಕ್ಕೆ ತಯಾರಾಗಲು ಅರ್ಜುನನು ವನವಾಸ ಕಾಲದಲ್ಲಿ ಅಸ್ತ್ರಗಳ ಶೇಖರಣೆಗೆ ಹೊರಡುತ್ತಾನೆ. ತಪಸ್ಸಿನಿಂದ ದೇವೇಂದ್ರನನ್ನು ಮೆಚ್ಚಿಸುತ್ತಾನೆ. ಅಸ್ತ್ರಗಳನ್ನು ಕೇಳುತ್ತಾನೆ. ದೇವೇಂದ್ರನು ಅರ್ಜುನನು ತನ್ನ ಮಗನಾದರೂ ಅವನಿಗೆ ಕೊಡುವುದಿಲ್ಲ. "ಎಲ್ಲ ಅಸ್ತ್ರಗಳೂ ನನ್ನ ಬಳಿ ಇವೆ.  ಆದರೆ ನಾನು ಅವುಗಳ ನ್ಯಾಸಾಧಿಕಾರಿ (ಟ್ರಸ್ಟಿ) ಇರುವಂತೆ. ಮಹಾದೇವರು ಅವುಗಳ ಒಡೆಯರು. ಅವರ ಅಪ್ಪಣೆ ಇಲ್ಲದೆ ನಾನು ಕೊಡುವುದಿಲ್ಲ. ಮೊದಲು ಅವರನ್ನು ಮೆಚ್ಚಿಸಿ ಅವರ ಪ್ರೀತಿ ಸಂಪಾದಿಸು. ಅವರಿಂದ "ಪಾಶುಪತ" ಅನ್ನುವ ಅಸ್ತ್ರವನ್ನು ಪಡೆದುಕೋ. ನಂತರ ಅವರ ಅಪ್ಪಣೆಯಾಗುವುದರಿಂದ ನಾನು ಬೇರೆ ಎಲ್ಲ ಅಸ್ತ್ರಗಳನ್ನೂ ಕೊಡುತ್ತೇನೆ" ಅನ್ನುತ್ತಾನೆ. 

ಅಂತಹ ದೇವೆತೆಗಳ ಅಧಿಪತಿಗೂ ದಳಪತಿಗಳಾದವರು ಮಹಾರುದ್ರದೇವರು. 

Sunday, June 29, 2025

ಮನವ ಕಬ್ಬಿಣ ಮಾಡು, ಹೇ ಮೃಡನೇ!


"ದೇವರಲ್ಲಿ ಬೇಡುವುದು ಸರಿಯೇ?" ಎಂಬ ಹಿಂದಿನ ಸಂಚಿಕೆಯಲ್ಲಿ ನಾವು ನಂಬಿದ, ಆರಾಧಿಸುವ  ದೇವರು-ದೇವತೆಗಳಲ್ಲಿ ಅನೇಕ ವಿಧವಾಗಿ ವರಗಳನ್ನು ಕೇಳಿಕೊಳ್ಳುವ ರೀತಿ, ಮತ್ತು ಅದರ ಸರಿ-ತಪ್ಪು ಎನ್ನುವ ವಿಚಾರವಾಗಿ ಚರ್ಚೆ ಮಾಡಿದೆವು. ಈ ಸಂಚಿಕೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

ನಾವು ದಿನಂಪ್ರತಿ ಉಪಯೋಗಿಸುವ ಅನೇಕ ಸ್ತೋತ್ರ-ಮಂತ್ರಗಳಲ್ಲಿ ಈ ರೀತಿಯ ಬೇಡುವಿಕೆ ವಿಶಾಲವಾಗಿ ಹರಡಿದೆ. ಅನೇಕರು ಬಹಳ ಭಕ್ತಿ-ಶ್ರದ್ಧೆಗಳಿಂದ ಅನುಷ್ಠಾನ ಮಾಡುವ ಇಂತಹ ಒಂದು ಆಚರಣೆ ರುದ್ರ-ಚಮಕಗಳ ಪಾರಾಯಣಾದಿಗಳು. ಅದರ ತಿರುಳು ಕೆಲವರಿಗೆ ಅರ್ಥವಾಗುತ್ತದೆ. ಅನೇಕರಿಗೆ ಗೊತ್ತಾಗುವುದಿಲ್ಲ. ಆದರೆ ನುರಿತವರು ಅದನ್ನು ಹೇಳುವಾಗ ಕೇಳುಗರೆಲ್ಲರಿಗೂ ಒಂದು ವಿಶೇಷ ಅನುಭವ ಆಗುವುದು ಅಲ್ಲಿ ಕುಳಿತು ಕೇಳಿದವರಿಗೆ ಗೊತ್ತು. ಇಲ್ಲಿಯೂ ಅನೇಕ ಬೇಡಿಕೆಗಳನ್ನು ರುದ್ರದೇವರ ಮುಂದೆ ಇಡುವುದು ಉಂಟು. ಇದರ ಬಗ್ಗೆ ತಿಳಿದವರು ಚೆನ್ನಾಗಿ ವಿವರಿಸಬಲ್ಲರು. ಆದರೂ ನಮ್ಮ ಯೋಗ್ಯತೆ ಇರುವಷ್ಟು ನೋಡುವುದರಲ್ಲಿ ತಪ್ಪೇನೂ ಇಲ್ಲ. 

*****

ಇದೊಂದು ನಮಗೆ ಬೇಕೇ ಬೇಕಾದ ಅತಿ ಹತ್ತಿರದ ಕುಟುಂಬ. ಒಬ್ಬ ಮಗನಾದ ಗಣೇಶನು ವಿಘ್ನಗಳನ್ನು ದೂರಮಾಡಿ ಎಲ್ಲವನ್ನೂ ಸುಗಮ ಮಾಡುವ "ಸುಮುಖ". ಇನ್ನೊಬ್ಬ ಮಗ ದೇವಸೇನಾಪತಿಯಾದ "ಕುಮಾರ". ತಾಯಿಯು ಬುದ್ಧಿ ಶಕ್ತಿಯ ಅಭಿಮಾನಿ ದೇವತೆಯಾದ "ಉಮಾದೇವಿ". ಮತಿ ಪ್ರೇರಕಳು. ತಂದೆಯಾದರೋ ಮನೋಭಿಮಾನಿ "ಮಹರುದ್ರದೇವರು". ಎಲ್ಲ ಸಾಧನೆಗಳ ದಾರಿಯಲ್ಲಿ ಬರುವ ತೊಂದರೆಗಳನ್ನು ನಿವಾರಿಸಲು ವಿಘ್ನೇಶ. ಸಾಧನೆಗಳಿಗೆ ಅಡ್ಡಿ ಪಡಿಸುವ ಆಸುರೀಶಕ್ತಿಗಳನ್ನು ಹತ್ತಿಕ್ಕಲು ದೇವತೆಗಳ ಸೇನಾಧಿಪತಿಯಾದ ಷಣ್ಮುಖ. ಕಪಿಯಂತೆ ದಿಕ್ಕಾಪಾಲಾಗಿ ಓಡುವ ಮನಸ್ಸು ನಿಯಂತ್ರಿಸಿ ಏಕಾಗ್ರತೆ ಸಾಧಿಸಲು ಶಂಭುವಿನ ಕರುಣೆ. ಸಾಧನೆಗೆ ಬುದ್ಧಿಯನ್ನು ಕೇಂದ್ರೀಕರಿಸಲು ಗಿರಿಜೆಯ ಅನುಗ್ರಹ. ಈ ಕುಟುಂಬವನ್ನು ಬಿಟ್ಟು ಸಾಧಕನಿಗೆ ಬೇರೆ ಗತಿಯಿಲ್ಲ. 

ಶ್ರೀ ಪುರಂದರದಾಸರು ತಮ್ಮ ಒಂದು ಉಗಾಭೋಗದಲ್ಲಿ ಇದನ್ನು ಹೀಗೆ ಒಟ್ಟುಗೂಡಿಸಿ ಹೇಳುತ್ತಾರೆ:

ಸತತ ಗಣನಾಥ ಸಿದ್ಧಿಯನೀವ ಕಾರ್ಯದಲಿ 
ಮತಿಪ್ರೇರಿಸುವಳು ಪಾರ್ವತಿದೇವಿ 
ಮುಕುತಿಪಥಕೆ ಮನವೀವ ಮಹರುದ್ರದೇವರು

ರುದ್ರದೇವರು ಸ್ವತಃ ವೈರಾಗ್ಯ ಮೂರ್ತಿಗಳು. ಅವರಿಗಾಗಿ ಏನನ್ನೂ ಇಟ್ಟುಕೊಂಡವರಲ್ಲ. ಆದರೆ ಭಕ್ತರಿಗಾಗಿ ಎಲ್ಲವನ್ನೂ ಕೊಡಬಲ್ಲವರು!
***** 

ನಮ್ಮ ಕುಟುಂಬದಲ್ಲಿ ಒಂದು ಸೊಗಸು. ನಮ್ಮ ಅಪ್ಪನ ತಂದೆಯ ಕಡೆ (ಪಿತಾಮಹ ವಂಶ) ಮಹಾವಿಷ್ಣುವಿನ ಆರಾಧಕರು. ನಮ್ಮ ಅಪ್ಪನ ತಾಯಿಯ ಕಡೆ (ಮಾತಾಮಹ ವಂಶ) ರುದ್ರದೇವರ ಆರಾಧಕರು. ಇವರ ಮನೆಯಲ್ಲಿ ಎಲ್ಲ ಆಚರಣೆಗಳೂ ಈ ರೀತಿ. ಅವರ ಮನೆಯಲ್ಲಿ ಎಲ್ಲ ಆಚರಣೆಗಳೂ ಆ ರೀತಿ. ಇದು ಹಿಂದಿನ ಮೂರು ತಲೆಮಾರುಗಳಿಂದ ನಡೆದುಬಂದಿತ್ತು. ಉಭಯ ಕುಟುಂಬಗಳಲ್ಲೂ ಒಳ್ಳೆಯ ಸಾಮರಸ್ಯ ನಡೆದಿತ್ತು. ಈ ವಿಷಯವಾಗಿ ಎಂದೂ ಭಿನ್ನಾಭಿಪ್ರಾಯ ಬಂದಿರಲಿಲ್ಲ. ಅವರವರ ನಂಬಿಕೆ, ಆಚರಣೆಗಳು ಅವರವರಿಗೆ. ಅವರ ಹಬ್ಬ-ಉತ್ಸವಗಳಿಗೆ ಇವರು ಹೋಗುವರು. ಇವರ ಹಬ್ಬ-ಆಚರಣೆಗಳಿಗೆ ಅವರು ಬರುವರು. ಒಂದು ಕುಟುಂಬದ ಉಪಸ್ಥಿತಿಯಿಲ್ಲದೆ ಇನ್ನೊಂದು ಕುಟುಂಬದ ಯಾವ ಸಮಾರಂಭವೂ ನಡೆಯದು.  ಹೀಗೆ ನಡೆದುಬಂದಿತ್ತು. 

ನಮ್ಮ ತಂದೆಯವರಿಗೆ ಇಬ್ಬರು ಸೋದರಮಾವಂದಿರು. ಅವರಿಬ್ಬರೂ ವಯಸ್ಸಿನಲ್ಲಿ ನಮ್ಮ ಅಜ್ಜಿಗಿಂತ (ಅವರ ಅಕ್ಕ) ಚಿಕ್ಕವರು. ದೊಡ್ಡ ಸೋದರಮಾವ ತಂದೆಯವರಿಗಿಂತ ಮೂರು ವರುಷ ದೊಡ್ಡವರು. ಚಿಕ್ಕ ಸೋದರಮಾವ ತಂದೆಯವರಿಗಿಂತ ಕೆಲವು ತಿಂಗಳು ದೊಡ್ಡವರು. ಹೀಗಾಗಿ ಇವರು ಮೂವರೂ ಒಂದೇ ಓರಗೆಯವರು. ಜೊತೆಯಲ್ಲಿ ಬೆಳೆದವರು. ಮಾವಂದಿರು - ಸೋದರಳಿಯ ನೆಂಟತನಕ್ಕಿಂತ ಹೆಚ್ಚಾಗಿ ಸ್ನೇಹಿತರು. ಮೂವರೂ ಸೇರಿದಾಗ ವಿನೋದ ಪ್ರಧಾನವಾಗಿ ಕಾಲ ಕಳೆಯುತ್ತಿತ್ತು. 

ನಾನು ಶಾಲೆಗಳಲ್ಲಿ ಓದುತ್ತಿದ್ದಾಗ ತಂದೆಯವರ ಜೊತೆ ಅವರಿರುವಲ್ಲಿಗೆ ಹೋಗುತ್ತಿದ್ದೆ. ಅವರುಗಳ ಮಾತಿನ ವಿಷಯ ಕೆಲವು ವೇಳೆ ಅರ್ಥವಾಗುತ್ತಿತ್ತು. ಕೆಲವು ವೇಳೆ ಇಲ್ಲ. ಆಗ ಕೇಳಿದ ಕೆಲವು ವಿಷಯಗಳು ಮುಂದೆ ಎಂದೋ ನೆನಪಿಗೆ ಬಂದು, ನಮ್ಮ ಜೀವನಾನುಭವದ ಹಿನ್ನೆಲೆಯಲ್ಲಿ  ಅರ್ಥವಾಗಿವೆ. ಇದು ನನ್ನೊಬ್ಬನ ವಿಶೇಷ ಎಂದು ಮಾತ್ರವಲ್ಲ. ಅನೇಕರಿಗೆ ಅವರವರ ಜೀವನಗಳಲ್ಲಿ ಇದೇ ರೀತಿ ಅನುಭವಗಳು ಆಗಿರುತ್ತವೆ. 
*****

ನಮ್ಮ ಬಾಲ್ಯದಲ್ಲಿ ಪ್ರತಿ ಊರಿನಲ್ಲೂ ಪ್ರತಿವರುಷ ಊರಹಬ್ಬ ಆಚರಿಸುತ್ತಿದ್ದರು. ಈಗಲೂ ಅನೇಕ ಕಡೆ ನಡೆಯುತ್ತವೆ. ಊರಹಬ್ಬಕ್ಕೆ ಬಹಳ ಪ್ರಾಮುಖ್ಯತೆ ಇತ್ತು. ಹೊರಗಡೆ ಪ್ರದೇಶಗಳಲ್ಲಿ ಓದು, ಕೆಲಸ, ವ್ಯವಹಾರ ಮುಂತಾದ ಕಾರಣಗಳಿಂದ ವಾಸಿಸುತ್ತಿದ್ದ ಜನರು ಊರಹಬ್ಬಕ್ಕೆ ಬಂದು ಸೇರುತ್ತಿದ್ದರು. ಬಂಧು-ಬಾಂಧವರನ್ನು ಮತ್ತು ಸ್ನೇಹಿತರನ್ನು ವರುಷಕ್ಕೊಮ್ಮೆ ನೋಡಲು ಇದು ಒಂದು ಒಳ್ಳೆಯ ಅವಕಾಶವಾಗಿತ್ತು. ಬೆಂಗಳೂರಿನಲ್ಲಿ ಪ್ರತಿ ವರುಷ ಚಿತ್ರಾಪೂರ್ಣಿಮೆ (ಉಗಾದಿಯನಂತರ ಬರುವ ಹುಣ್ಣಿಮೆ) ಊರಹಬ್ಬ ನಡೆಯುತ್ತದೆ. ಅದು "ಬೆಂಗಳೂರು ಕರಗ" ಎಂದು ಪ್ರಸಿದ್ಧಿ. "ಕೆಂಪೇಗೌಡ ದಿನಾಚರಣೆ" ಎಂದೂ ಕರೆಯುತ್ತಾರೆ. ಈಗಲೂ ಬಹಳ ವಿಜೃಂಭಣೆಯಿಂದ  ನಡೆಯುತ್ತದೆ. ಹತ್ತಾರು ದೇವಾಲಯಗಳು ತಮ್ಮ ಉತ್ಸವ ಮೂರ್ತಿಗಳನ್ನು ಕರೆತಂದು ಸಿಟಿ ಮಾರ್ಕೆಟ್ ಬಳಿ ಸೇರುತ್ತಾರೆ. ಬೇರೆ ಊರುಗಳಲ್ಲಿಯೂ ಹೀಗೆಯೇ ಉಂಟು. 

ಒಮ್ಮೆ ತಂದೆಯವರ ಜೊತೆಗೆ ಅವರ ತೌರುಮನೆಗೆ (ತನ್ನ ತಾಯಿಯ ಹುಟ್ಟಿದ ಮನೆಯನ್ನು ಅವರು ಕರೆಯುತ್ತಿದ್ದುದು ಹೀಗೆಯೇ. ತೌರುಮನೆ ಅಂದರೆ "ತಾಯಿಯ ಮನೆ". ಅದು ಗಂಡಸರಿಗೆ ಏಕೆ ಇರಬಾರದು? ಎಂದು ಕೇಳುತ್ತಿದ್ದರು!) ಹೋಗಿದ್ದೆ. ಆಗ ಕೆಂಗೇರಿ ಬೇರೆಯ ಊರಾಗಿತ್ತು. ಈಗಿನಂತೆ ಬೆಂಗಳೂರಿನ ಹೊಟ್ಟೆಯೊಳಗೆ ಸೇರಿಕೊಂಡಿರಲಿಲ್ಲ. ಮಧ್ಯಾನ್ಹದ ಊಟದ ನಂತರ ಮೂವರು ಜೊತೆಗಾರರು ಮನೆಯ ಜಗುಲಿಯ ಮೇಲೆ ಕುಳಿತು ಮಾತಾಡುತ್ತಿದ್ದರು. ನಾನು ಸ್ವಲ್ಪದೂರ ಕುಳಿತು ನೋಡುತ್ತಿದ್ದೆ. 

"ಮುಂದಿನ ತಿಂಗಳು ಊರ ಹಬ್ಬ. ತಪ್ಪದೆ ಬಾ. ಹೋದ ವರುಷದಂತೆ ಚಕ್ಕರ್ ಹಾಕಬೇಡ"
"ನೋಡೋಣ. ಶಾಲೆಗೆ ರಜೆ ಇದ್ದರೆ ಬರುತ್ತೇನೆ"
"ಅದೆಲ್ಲ ಆಗದು. ರಜೆ ಇಲ್ಲದಿದ್ದರೆ ರಜೆ ಹಾಕಿ ಬಾ"
"ಓದುತ್ತಿದ್ದಾಗ ಅವಾಗವಾಗ ಚಕ್ಕರ್ ಹೊಡೆಯುತ್ತಿದ್ದೆ. ಈಗ ಏನು ಕಷ್ಟ?"
ಮೂವರೂ ನಕ್ಕರು. 

ಅಷ್ಟರಲ್ಲಿ ಎದುರು ಮನೆ ಗೃಹಿಣಿ ತನ್ನ ಮಕ್ಕಳು ಕಾಣಲಿಲ್ಲವೆಂದು ಮನೆಯ ಹೊರಗಡೆ ಬಂದು ನೋಡಿದಳು. ಇಬ್ಬರು ಮಕ್ಕಳು ಚೆನ್ನಾಗಿ ಮಣ್ಣಿನಲ್ಲಿ ಆಟ ಆಡುತ್ತಿದ್ದರು. ಮೈಯೆಲ್ಲ ಧೂಳಿನಿಂದ ಮುಚ್ಚಿತ್ತು. ನೋಡಿದ ಅವಳಿಗೆ ಕೋಪ ಬಂತು. "ಆಡಿ, ಆಡಿ; ಚೆನ್ನಾಗಿ ಆಡಿ. ಆಮೇಲೆ ಮನೆಗೆ ಬನ್ನಿ. ನಿಮಗೆ ಹಬ್ಬ ಮಾಡುತ್ತೇನೆ" ಅಂದು ಹೇಳಿ ಒಳಗೆ ಹೋದಳು. 

"ಏನಪ್ಪಾ, ನಿಮ್ಮಣ್ಣ ನನ್ನ ಊರಹಬ್ಬಕ್ಕೆ ಕರೀತಿದಾನೆ. ಅವಳು ನೋಡಿದರೆ ಮಕ್ಕಳಿಗೆ "ಹಬ್ಬ ಮಾಡುತ್ತೇನೆ" ಎಂದು ಹೇಳುತ್ತಿದ್ದಾಳೆ"
"ಅಣ್ಣ ನಿನಗೂ ಅಂತದೇ ಹಬ್ಬ ಮಾಡಬಹುದು. ಹುಷಾರಾಗಿರು"
"ಅಯ್ಯೋ, ಹುಚ್ಚಪ್ಪಗಳಾ. ಸಂದರ್ಭ ನೋಡಿ ಮಾತಿಗೆ ಅರ್ಥ ಮಾಡಬೇಕು. ಒಂದು ಮಾತಿಗೆ ಎಲ್ಲ ಕಡೆಯೂ ಒಂದೇ ಅರ್ಥ ಇರುವುದಿಲ್ಲ. ಇದು ಚೆನ್ನಾಗಿ ಗೊತ್ತಿದ್ದೂ ನನ್ನ ಹಾಸ್ಯ ಮಾಡುತ್ತಿದ್ದೀರಾ?"
ಮೂವರು ಮತ್ತೊಮ್ಮೆ ನಕ್ಕರು. 
*****

ನಂತರ ಕೆಲವು ವರುಷಗಳು ಕಳೆದ ಮೇಲೆ ಹಿರಿಯ ಸೋದರಮಾವ ತಿರುಮಕೂಡಲು ನರಸೀಪುರದಲ್ಲಿ (ಟಿ. ನರಸೀಪುರ) ವಾಸವಾಗಿದ್ದರು. ಒಮ್ಮೆ ಅವರ ಹುಟ್ಟಿದ ಹಬ್ಬ ಬಂದಿತು. ಪ್ರಾಯಶಃ "ಭೀಮರಥಿ ಶಾಂತಿ" ಇರಬಹುದು. (70ನೆಯ ವರುಷದ ಹುಟ್ಟಿದ ಹಬ್ಬವನ್ನು ಭೀಮರಥಿ ಶಾಂತಿ ಎಂಬುದಾಗಿ ಆಚರಿಸುತ್ತಾರೆ). ತಿರುಮಕೂಡಲು ಕಪಿಲ-ಕಾವೇರಿ ನದಿಗಳ ಸಂಗಮ ಕ್ಷೇತ್ರ. ಉತ್ತರ ಭಾರತದಲ್ಲಿ ಗಂಗಾ-ಯಮುನಾ-ಸರಸ್ವತಿ ನದಿಗಳ ಸಂಗಮ ಪ್ರಯಾಗದಲ್ಲಿ ಇರುವಂತೆ ಇಲ್ಲಿ ಕಪಿಲಾ-ಕಾವೇರಿ-ಸ್ಫಟಿಕ ಸರೋವರ ನದಿಗಳ ತ್ರಿವೇಣಿ ಸಂಗಮವೆಂದು ಪ್ರತೀತಿ. ಇಲ್ಲಿನ "ಗುಂಜಾ ನರಸಿಂಹಸ್ವಾಮಿ" ಮತ್ತು "ಅಗಸ್ತ್ಯೇಶ್ವರ" ದೇವಾಲಯಗಳು ಇತಿಹಾಸ ಪ್ರಸಿದ್ಧ. 

"ಗರ್ಗೇಶ್ವರಿ" ಅನ್ನುವುದು ತಿರುಮಕೂಡಲಿನಿಂದ ಮೂರು ಮೈಲು ದೂರದ ಒಂದು ಕ್ಷೇತ್ರ. ಇಲ್ಲಿನ ದೊಡ್ಡ ಶಿವಲಿಂಗ "ಅರ್ಧನಾರೀಶ್ವರ" ಅನ್ನುತ್ತಾರೆ. ಈಗ ಈ ಊರೂ ನರಸೀಪುರದಲ್ಲಿಯೇ ಸೇರಿಹೋಗಿದೆ. ಈ ಗರ್ಗೇಶ್ವರಿ ದೇವಸ್ಥಾನದಲ್ಲಿ ಹುಟ್ಟು ಹಬ್ಬದ ಸಮಾರಂಭದ ಪ್ರಯುಕ್ತ "ಏಕಾದಶವಾರ ರುದ್ರಾಭಿಷೇಕ" ಏರ್ಪಡಿಸಿದ್ದರು. ಜ್ಞಾನವೃದ್ಧರೂ, ವಯೋವೃದ್ಧರೂ ಆದ ಘನಪಾಠಿ ಗುರುಗಳು ಶಿಷ್ಯರ ಸಮೇತ ಆಗಮಿಸಿ ರುದ್ರ-ಚಮಕಗಳ ಅದ್ಭುತ ಪಾರಾಯಣ-ಅಭಿಷೇಕಾದಿಗಳನ್ನು ನಡೆಸಿದರು. 

ಕಾರ್ಯಕ್ರಮ ಮುಗಿದ ನಂತರ ಊಟಕ್ಕೆ ತಯಾರಾಗುವ ವೇಳೆಯಲ್ಲಿ ಈ ಮೂವರೂ ಆ ಗುರುಗಳ ಬಳಿ ಕೆಲವು ವಿಷಯಗಳನ್ನು ಪ್ರಸ್ತಾಪಿಸಿದರು. 

"ಗುರುಗಳೇ. ರುದ್ರದೇವರು ಅಖಂಡ ವೈರಾಗ್ಯ ಮೂರ್ತಿಗಳು. ಅವರ ಬಳಿ ನಾವು ಈ ಪ್ರಾರ್ಥನೆಗಳನ್ನು ಮಾಡಿ ಅನೇಕ ವರಗಳನ್ನು ಕೇಳುತ್ತೇವೆ. ಇವುಗಳಲ್ಲಿ ಅನೇಕ ಕೋರಿಕೆಗಳು ಭೌತಿಕ ವಸ್ತುಗಳು. ಈ ನಮ್ಮ ಜೀವನ ಸುಖವಾಗಿರಲು ಕೇಳಿಕೊಳ್ಳುವುವು. ಹೆಚ್ಚೂ-ಕಡಿಮೆ ಪ್ರತಿಯೊಂದು ವಸ್ತುವನ್ನೂ ಕೇಳುತ್ತೇವೆ. ಇದು ಸರಿಯೇ?"
"ಏಕೆ? ಕೇಳಬಾರದೆಂದು ನಿಮ್ಮ ಅಭಿಪ್ರಾಯವೇ?"
"ವೈರಾಗ್ಯ ಮೂರ್ತಿಯ ಬಳಿ ವೈರಾಗ್ಯ ಹುಟ್ಟುವ ರೀತಿಯ ಬೇಡಿಕೆ ಇಡಬೇಕಲ್ಲದೆ ಈ ರೀತಿ ಸುಖ-ಸಾಧನಗಳನ್ನು ಕೇಳುವುದು ನ್ಯಾಯವೇ?"
"ಎಲ್ಲರಿಗೂ ಸುಲಭವಾಗಿ ವೈರಾಗ್ಯ ಬರುವುದಿಲ್ಲವಲ್ಲ?"
"ಅಂದಮಾತ್ರಕ್ಕೆ ವೈರಾಗ್ಯ ಕೇಳದೆ ಈ ಸುಖ ಸಾಧನಗಳನ್ನು ಕೇಳಬಹುದೇ?"

"ಈ ಭೂಮಿಯಲ್ಲಿ ಜೀವನ ಮಾಡುವಾಗ ಇಹ-ಪರ ಎರಡರ ಕುರಿತೂ ಯೋಚಿಸಬೇಕು. ಬಹಳ ಕಡಿಮೆ ಮಂದಿಗೆ ಚಿಕ್ಕ ವಯಸ್ಸಿನಲ್ಲಿ ವೈರಾಗ್ಯ ಬರುತ್ತದೆ. ಸಾಮಾನ್ಯವಾಗಿ ಹೆಚ್ಚಿನ ಮಂದಿಗೆ ಕಾಲಕ್ರಮದಲ್ಲಿ ವೈರಾಗ್ಯ ಬರುವುದು. ಕೆಲವರಿಗಂತೂ ಅದು ಬರುವುದೇಯಿಲ್ಲ. ಸಾಧನೆಗೆ ಅನೇಕ ಪರಿಕರಗಳು ಬೇಕಲ್ಲ. ಇಲ್ಲಿನ ಜೀವನವೂ ಚೆನ್ನಾಗಿ ನಡೆಯಬೇಕು. ನಾವು ವೈಯುಕ್ತಿಕವಾಗಿ ಏನನ್ನೂ ಬೇಡ ಅನ್ನಬಹುದು. ಆದರೆ ಗೃಹಸ್ಥರಾದ ನಮ್ಮನ್ನು ನಂಬಿ ನಮ್ಮ ಜೊತೆ ಬಾಳುವ ಕುಟುಂಬದವರ ವಿಷಯವೇನು? ಸನ್ಯಾಸಿಯಾಗಿ ಗುರುಕುಲ ನಡೆಸುವವನಾದರೂ ಅವನ ಚಿಕ್ಕ ವಯಸ್ಸಿನ ಶಿಷ್ಯವೃಂದದ ಕಥೆ ಏನು? ಒಂಟಿಯಾಗಿ ಸಾಧನೆ ಮಾಡುವವನಿಗೂ, ಅನೇಕ ಮಂದಿಯ ಜೊತೆಯಲ್ಲಿದ್ದು ಸಾಧನೆ ಮಾಡುವವನಿಗೂ ವ್ಯತ್ಯಾಸವಿಲ್ಲವೇ? ಇಲ್ಲಿಯೂ ಚೆನ್ನಾಗಿ ಬಾಳುವೆ ನಡೆಸಬೇಕು. ಮುಂದಿನ ದಾರಿಯೂ ಸರಿಯಾಗಿ ಗೊತ್ತಾಗಬೇಕು. ಈ ಪ್ರಾರ್ಥನೆಗಳು ಎರಡನ್ನೂ ಸರಿತೂಗಿಸಿ ಜೀವನ ನಡೆಸಲು ಬೇಕಾದುವನ್ನು ಕೇಳುತ್ತವೆ. ಇದರಲ್ಲಿ ತಪ್ಪೇನೂ ಕಾಣುವುದಿಲ್ಲ. ಆದರೆ, ಈ ಪರಿಕರಗಳಿಂದ ಸುಖಿಸುವುದರಲ್ಲಿ ಮುಳುಗಿ ಸಾಧನೆಯನ್ನು ಬಿಡಬಾರದು. ಆ ಎಚ್ಚರ ವಹಿಸಬೇಕು. ಆ ರುದ್ರರೇ ಇದನ್ನು ನಡೆಸಿಕೊಡುತ್ತಾರೆ ಎನ್ನುವುದು ಧೃಡವಾದ ನಂಬಿಕೆಯಾಗಿ ಇರಬೇಕು"

"ಒಂದು ಕಡೆ "ಲೋಹವನ್ನು ಕೊಡು ಎಂದು ಕೇಳುತ್ತೇವಲ್ಲ? ಬದುಕು ಹಸನಾಗಲು, ಸುಖಮಯವಾಗಲು ಬೆಳ್ಳಿ-ಬಂಗಾರ ಮುಂತಾದುವನ್ನು ಕೇಳುವ ಬದಲು ಕಬ್ಬಿಣವನ್ನು ಕೇಳುವುದೇ?"

"ಲೋಹ ಎಂದರೆ ಕೇವಲ ಕಬ್ಬಿಣ ಎಂದು ಅರ್ಥ ಮಾಡಬಾರದು. ಬೆಳ್ಳಿ-ಬಂಗಾರಗಳೂ ಲೋಹಗಳೇ ತಾನೇ? ಲೋಹ (ಮೆಟಲ್) ಆನ್ನುವುದು ವಿಜ್ಞಾದಲ್ಲಿಯೂ ಒಂದು ಧಾತುಗಳ ಕುಟುಂಬ. ಇದಲ್ಲದೆ ಅನೇಕ ವ್ಯವಹಾರಗಳಲ್ಲಿ ಮನುಷ್ಯನ ಮನಸ್ಸು ಬೇರೆ ಬೇರೆ ರೀತಿ ಪ್ರಕಟವಾಗುತ್ತದೆ. ಒಮ್ಮೆ "ಅವರದು ಹೂವಿನಂತಹ ಮನಸ್ಸು" ಎನ್ನುತ್ತೇವೆ. ಮತ್ತೊಮ್ಮೆ "ಅವನದು ಕಲ್ಲಿನ ಮನಸ್ಸು" ಅನ್ನುತ್ತೇವೆ. ಏಕೆ ಹೀಗೆ?"

"ವ್ಯವಹರಿಸುವಲ್ಲಿ ಮನಸ್ಸಿನ ಮೃದುತ್ವ ಅಥವಾ ಕಾಠಿಣ್ಯವನ್ನು ಗುರುತಿಸಲು ಹೀಗೆ ಹೇಳುತ್ತೇವೆ"
"ಕಲ್ಲನ್ನು ಭೇದಿಸಲು ಏನು ಬಳಸುತ್ತಾರೆ?"
"ಉಳಿ ಮತ್ತು ಸುತ್ತಿಗೆ"
"ಉಳಿ ಮತ್ತು ಸುತ್ತಿಗೆಯನ್ನು ಬಂಗಾರದಿಂದ ಮಾಡಬಹುದೋ?"
"ಅರ್ಥವಾಗಲಿಲ್ಲ"

"ಕಲ್ಲಿಗಿಂತಲೂ ಕಠಿಣವಾದುದು ಕಬ್ಬಿಣ. ಇಲ್ಲಿ ಲೋಹವನ್ನು ಕೊಡು ಅಂದರೆ ಕಬ್ಬಿಣದ ಉಂಡೆಯನ್ನು ಕೊಡು ಎಂದು ಅರ್ಥವಲ್ಲ. "ಸಾಧನೆಯ ದಾರಿಯಲ್ಲಿ ನಮ್ಮ ಮನಸ್ಸನ್ನು ಕಬ್ಬಿಣದಂತೆ ಗಟ್ಟಿ ಮಾದು" ಎಂದು ಕೇಳುವ ಭಾವ. ಯಾವುದೇ ಪ್ರಲೋಭನೆಗಳಿಗೆ ಮನಸ್ಸು ಮೆದುವಾಗಿ ಸಾಧನೆಯ ದಾರಿಯಿಂದ ವಿಮುಖವಾಗಬಾರದು. ಬೇರೆ ರೀತಿಯ ಸಂಪತ್ತನ್ನು ಕೇಳಿಯಾಗಿದೆ. ಇಲ್ಲಿ ನಮ್ಮ ಮನಸ್ಸನ್ನು ಕಬ್ಬಿಣದಂತೆ ಗಟ್ಟಿ ಮಾಡು ಎಂದು ಕೇಳುವ ಪ್ರಾರ್ಥನೆ. ಸಂದರ್ಭ ನೋಡಿ ಪದಗಳಿಗೆ ಅರ್ಥ ಮಾಡಬೇಕಲ್ಲವೇ?"

ಇನ್ನು ಕೆಲವು ಪ್ರಶ್ನೆಗಳಾದ ಮೇಲೆ ಊಟದ ಕರೆ ಬಂತು.  

*****

ರುದ್ರದೇವರ ಕರುಣೆಯಿಲ್ಲದೆ ಮನಸ್ಸು ಗಟ್ಟಿಯಾಗದು. ಶ್ರೀವಿಜಯದಾಸರು ಶಂಭುವಿನ ಕುರಿತಾದ ಅವರ ಒಂದು ದೇವರನಾಮದಲ್ಲಿ ಹೀಗೆ ಹೇಳುತ್ತಾರೆ:

ಕೈಲಾಸವಾಸ ಗೌರೀಶ ಈಶ 
ತೈಲಧಾರೆಯಂತೆ ಮನಸು ಕೊಡು ಹರಿಯಲ್ಲಿ ಶಂಭೋ 
ಕೈಲಾಸವಾಸ ಗೌರೀಶ ಈಶ  
 
ಮನಸು ಕಾರಣವಲ್ಲ ಪಾವ ಪುಣ್ಯಕ್ಕೆಲ್ಲ  
ಅನಲಾಕ್ಷ ನಿನ್ನ ಪ್ರೇರಣೆಯಿಲ್ಲದೆ 
ದನುಜಗಜ ಮದಹಾರಿ ದಂಡಪ್ರಣಾಮ ಮಾಳ್ಪೆ 
ಮಣಿಸೋ ಈ ಶಿರವನ್ನು ಸಜ್ಜನರ ಚರಣದಲಿ 

ಒಂದು ಪಾತ್ರೆಯಿಂದ ನೀರನ್ನು ಸುರಿಸಿದರೆ ಅದು ಬೀಳುವ ರೀತಿಯನ್ನೂ, ಮತ್ತೊಂದು ಪಾತ್ರೆಯಿಂದ ಎಣ್ಣೆಯನ್ನು ಸುರಿದರೆ ಅದು ಬೀಳುವ ರೀತಿಯನ್ನೂ ಒಟ್ಟಾಗಿ ನೋಡಿದರೆ ವ್ಯತ್ಯಾಸ ಸ್ಪಷ್ಟವಾಗಿ ಕಾಣುತ್ತದೆ. (ಇವನ್ನು ನಾವು ಪ್ರತಿದಿನ ನೋಡುತ್ತಿರುತ್ತೇವೆ. ಗಮನಿಸಿರುವುದಿಲ್ಲ) ಮನಸ್ಸು ಅಲ್ಲಿ-ಇಲ್ಲಿ ಹೋಗದಂತೆ ಒಂದೇ ಧಾರೆಯಾಗಿ ಕೇಂದ್ರೀಕರಿಸಲು ಆ ಶಂಭುವಿನ ಕರುಣೆ ಬೇಕು. 

ಪಂಡಿತ ಭೀಮಸೇನ ಜೋಶಿಯವರು ಹಾಡಿರುವ ಈ ಹಾಡನ್ನು ಇಲ್ಲಿ ಕೇಳಬಹುದು:

https://www.youtube.com/watch?v=KO772laPz3I


******

ಮೇಲಿನ ಹಾಡಿನಲ್ಲಿ "ಮನಸು ಕಾರಣವಲ್ಲ" ಮತ್ತು "ದನುಜ ಗಜ ಮದಹಾರಿ" ಎನ್ನುವ ಪದಗಳ ವಿಶೇಷಾರ್ಥಗಳನ್ನು ಮುಂದೊಮ್ಮೆ ನೋಡೋಣ. 

Saturday, May 10, 2025

ಹರೆಯವೆಂಬ ಮಾಂತ್ರಿಕನ ಮಾಟ


ಹಿಂದಿನ ಒಂದು ಸಂಚಿಕೆಯಲ್ಲಿ "ಅನ್ನದ ಹಾಹಾಕಾರ" ಎನ್ನುವ ಶೀರ್ಷಿಕೆಯಡಿ 1965 ಮತ್ತು 1971 ಇಸವಿಗಳಲ್ಲಿ ನಡೆದ ಭಾರತ-ಪಾಕಿಸ್ತಾನದ ಯುದ್ಧಗಳ ಪ್ರಸ್ತಾಪ, ಆ ಕಾಲದ ಹಸಿದವರ "ಅನ್ನದ ಹಾಹಾಕಾರ", ಮತ್ತು "ಸಮಬಗೆಯ ಸಮ ಸುಖದ ಸಮ ದುಃಖದ, ಸಾಮರಸ್ಯದ ಸಾಮಗಾನ ಲಹರಿಯ ಮೇಲೆ ತೇಲಿ ಬರಲಿರುವ ಹೊಸ ನಾಡಿನ ಕಟ್ಟುವಿಕೆ" ಬಗ್ಗೆ ಖ್ಯಾತ ನವ್ಯ ಕವಿ ಪ್ರೊ. ಎಂ. ಗೋಪಾಲಕೃಷ್ಣ ಅಡಿಗರ "ಕಟ್ಟುವೆವು ನಾವು ಹೊಸ ನಾಡೊಂದನು" ಏನುವ ಕವನದ ಬಗ್ಗೆ ಸ್ವಲ್ಪ ವಿಚಾರ ಮಾಡಿದ್ದೆವು. ಇದನ್ನು ಮೆಲಕು ಹಾಕಿ ಓದಲು ಇಲ್ಲಿ ಕ್ಲಿಕ್ ಮಾಡಿ, 

ಎಲ್ಲಾ ಚೆನ್ನಾಗಿ ನಡೆಯುತ್ತಿರುವಾಗ ಯಾರಾದರೂ ಒಂದು ವಿಷಯ ಪ್ರಸ್ತಾಪ ಮಾಡಿ, ಸ್ವಲ್ಪ ಸಮಯದಲ್ಲಿಯೇ ಅದು ಎಡವಟ್ಟಾದರೆ "ನೀನು ಹೇಳಿದೆಯಪ್ಪಾ. ನೋಡು, ಹೇಗಾಯಿತು!" ಎಂದು ಉದ್ಗರಿಸುವುದು ವಾಡಿಕೆ. ಅದರಂತೆ ಅಂದೇ (22 ಏಪ್ರಿಲ್ 2025) ಕಾಶ್ಮೀರದ ಪಹಲ್ಗಮ್ ದುರಂತ ಉದ್ಭವಿಸಿ ಎರಡು ದೇಶಗಳ ನಡುವೆ ಮತ್ತೊಮ್ಮೆ ಕದನ ನಡೆದು, ಇಂದು "ಕದನವಿರಾಮ" ಘೋಷಣೆ ಆಗಿದೆ. ಘೋಷಣೆ ಆದರೂ ಅದು ಸ್ಥಿರವಾಗಿ ನಿಲ್ಲುವ ಲಕ್ಷಣಗಳು ಕಂಡುಬರುತ್ತಿಲ್ಲ. ಒಂದು ಶಾಶ್ವತ ಪರಿಹಾರ ಸಿಕ್ಕಿ ಶಾಂತಿಯುತ ಬಾಳ್ವೆಗೆ ಅವಕಾಶವಾಗಲಿ ಎಂದು ಪ್ರಾರ್ಥಿಸೋಣ. 

ಆರೋಗ್ಯವಂತ ಸಮಾಜ ನಿರ್ಮಾಣ ಎಲ್ಲರಿಗೂ ಬೇಕಾಗಿರುವ ಸ್ಥಿತಿ. ಅಡಿಗರ ಕವನದ ಸಾಲುಗಳನ್ನು ಮತ್ತೆ ನೆನಪು ಮಾಡಿಕೊಳ್ಳೋಣ. 

ಹೊಸ ನೆತ್ತರುಕ್ಕುಕ್ಕಿ ಆರಿ ಹೋಗುವ ಮುನ್ನ 
ಹರೆಯದೀ ಮಾಂತ್ರಿಕನ  ಮಾಟ ಮಸಳುವ ಮುನ್ನ 
ಉತ್ಸಾಹ ಸಾಗರದ ಉತ್ತುಂಗ ವೀಚಿಗಳ 
ಈ ಕ್ಷುಬ್ಧ ಸಾಗರವು ಬತ್ತಿಹೋಗುವ ಮುನ್ನ 

ಕಟ್ಟುವೆವು ನಾವು ಹೊಸ ನಾಡೊಂದನು 
ರಸದ ಬೀಡೊಂದನು; ಸುಖದ ಬೀಡೊಂದನು

ಇಲ್ಲಿ ಬರುವ "ಹರೆಯದ ಮಾಂತ್ರಿಕನ ಮಾಟ" ಎನ್ನುವುದರ ಬಗ್ಗೆ ಸ್ವಲ್ಪ ವಿಚಾರ ಮಾಡೋಣ. 

*****

ಸುಮಾರು ಎರಡು ದಶಕಗಳಿಗೂ ಹಿಂದಿನ ಮಾತು. ಜೊತೆಯಲ್ಲಿ ಉದ್ಯೋಗದಲ್ಲಿದ್ದ ಮಿತ್ರರೊಬ್ಬರ ಮನೆಗೆ ಯಾವುದೋ ಕಾರ್ಯ ನಿಮಿತ್ತ ಹೋಗಬೇಕಾಯಿತು. ಅನೇಕ ವರ್ಷಗಳ ಪರಿಚಯದಿಂದ ಬಂದಿದ್ದ ಸಲುಗೆ. ಅವರ ಮನೆ ಮಂದಿಯೆಲ್ಲಾ ಚೆನ್ನಾಗಿ ಗೊತ್ತು. ಅವರ ಮನೆಯ ಗೇಟ್ ಬಳಿ ಹೋಗುತ್ತಿದ್ದಾಗಲೇ ಮನೆಯ ಒಳಗಡೆ ನಡೆಯುತ್ತಿದ್ದ ವಾಗ್ವಾದ ಕೇಳಿಸುತ್ತಿತ್ತು. ಅವರ ಕುಟುಂಬದ ಎಲ್ಲರಿಗೂ ಗಂಟಲು ಸ್ವಲ್ಪ ದೊಡ್ಡದೇ. ಪ್ರೀತಿಯಿಂದ ಮಾತಾಡುತ್ತಿದ್ದರೂ ಜಗಳದಂತೆಯೇ ಇರುತ್ತಿತ್ತು. "ನಮ್ಮ ಮನೆಯಲ್ಲಿ ಗುಟ್ಟು ಅನ್ನುವುದೇ ಇಲ್ಲ ಸ್ವಾಮಿ. ನಮ್ಮ ಕುಟುಂಬದವರ ಮಾತೇ ಹಾಗೆ. ಏನು ಮಾತಾಡಿದರೂ ಬೀದಿಯವರಿಗೆಲ್ಲಾ ಗೊತ್ತು." ಎಂದು ಅವರೇ ತಮಾಷೆಗೆ ಹೇಳುತ್ತಿದ್ದರು.

ಅವರಿಗೆ ಒಬ್ಬ ಮಗ ಮತ್ತು ಒಬ್ಬ ಮಗಳು. ಇಬ್ಬರೂ ಮದುವೆಯ ವಯಸ್ಸಿಗೆ ಬಂದಿದ್ದರು. ಅವರಿಗೋ ಇನ್ನೆರಡು ವರ್ಷದಲ್ಲಿ ಉದ್ಯೋಗದಿಂದ ನಿವೃತ್ತಿ ಆಗುವುದಿತ್ತು. ಅದರೊಳಗೆ ಇಬ್ಬರಿಗೂ ಮದುವೆ ಮಾಡಿ ಜವಾಬ್ದಾರಿ ಕಳೆದುಕೊಳ್ಳಬೇಕು ಎಂದು ಅವರ ಆಸೆ. (ಮಕ್ಕಳಿಗೆ ಮದುವೆ ಮಾಡಿದರೆ ಒಂದು ಜವಾಬದ್ದಾರಿ ಕಳೆಯಿತು ಅನ್ನುವುದು ಒಂದು ಭ್ರಾಂತಿ. ಅನೇಕ ಸಲ ಅದು ಇನ್ನೂ ಹೆಚ್ಚಿನ ಜವಾಬ್ದಾರಿಗಳಿಗೆ ಹೆದ್ದಾರಿ ಆಗುವುದೂ ಉಂಟು. ಎಲ್ಲೊ ಕೆಲವರಿಗೆ ಸ್ವಲ್ಪ ನಿರಾಳ ಆಗಿರಬಹುದು). ಮಗಳು ಯಾವ ವರ ಬಂದರೂ ಒಂದಲ್ಲ ಒಂದು ಕಾರಣ ಹೇಳಿ ನಿರಾಕರಿಸುತ್ತಿದ್ದಳು. ಮಗನು ಯಾವ ಹುಡುಗಿ ಬಂದರೂ "ಸರಿ, ಒಪ್ಪಿದೆ." ಎನ್ನುತ್ತಿದ್ದ.  ಮನೆಯಲ್ಲಿ ನಡೆಯುತ್ತಿದ್ದ ಮಾತು-ಕತೆಯ ಹಿನ್ನೆಲೆ ಹೀಗಿತ್ತು. 

ಮನೆಯೊಳಗೆ ಹೋದ ಕೂಡಲೇ ವಿಷಯ ಗೊತ್ತಾಯಿತು. ಹಿಂದಿನ ದಿನ ಮಗನಿಗೆ ನೋಡಿದ್ದ ಹುಡುಗಿ ವಿಷಯ ಮಾತಾಡುತ್ತಿದ್ದರು. ಅಪ್ಪ-ಅಮ್ಮ-ತಂಗಿ ಮೂವರಿಗೂ ಹುಡುಗಿ ಇಷ್ಟವಿಲ್ಲ. ಮಗ ಮಾತ್ರ ಎಂದಿನಂತೆ ಈಗಲೂ ಒಪ್ಪಿದ್ದ. ನನ್ನನ್ನು ಹೊರಗಿನವನು ಎಂದು ಭಾವಿಸದೆ ಅವರ ಚರ್ಚೆ ಮುಂದುವರೆಯಿತು. "ಇವನು ಯಾವ ಹುಡುಗಿ ಬಂದರೂ ಒಪ್ಪಿದ್ದೇನೆ ಆನ್ನುತ್ತಾನೆ. ವಯಸ್ಸಿಗೆ ಬಂದರೆ ಕತ್ತೆಯೂ ಚನ್ನಾಗಿ ಕಾಣುತ್ತದೆ" ಎಂದರು ಅಪ್ಪ. ಮಗನಿಗೆ ನ್ಯಾಯವಾಗಿಯೇ ಕೋಪ ಬಂತು. ಘರ್ಷಣೆ ಆಗುವ ಹಂತಕ್ಕೆ ಮಾತು ಬೆಳೆಯುವ ಸೂಚನೆ ಕಂಡಿತು. ವಾತಾವರಣ ತಿಳಿಗೊಳಿಸಲು ನಾನು ಮಿತ್ರರನ್ನು ಕೇಳಿದೆ: "ನೀವು ಹೇಳಿದ್ದು ಅರ್ಥವಾಗಲಿಲ್ಲ. ವಯಸ್ಸಿಗೆ ಬಂದರೆ ಕತ್ತೆಯೂ ಚೆನ್ನಾಗಿ ಕಾಣುತ್ತದೆ ಎಂದಿರಿ. ಅಂದರೆ ಏನು ಅರ್ಥ? ಹುಡುಗ ಅಥವಾ ಹುಡುಗಿಗೆ ವಯಸ್ಸು ಬಂದರೆ ಕತ್ತೆ ಚೆನ್ನಾಗಿ ಕಾಣುತ್ತದೆ ಎಂದೋ, ಅಥವಾ ಕತ್ತೆಗೆ ವಯಸ್ಸು ಬಂದಾಗ ಅದು ಅದನ್ನು ನೋಡುವವರಿಗೆಲ್ಲಾ ಚೆನ್ನಾಗಿ ಕಾಣುತ್ತದೆ ಎಂದೋ? ನನಗೆ ತಿಳಿದಂತೆ ಕತ್ತೆಯ ಮರಿ ನೋಡಲು ಚೆನ್ನಾಗಿರುತ್ತದೆ" ಎಂದೆ. 

ವಾತಾವರಣ ತಿಳಿ ಆಯಿತು. "ನೀವು ಬಿಡಿ ಮಾರಾಯರೆ. ಎಲ್ಲದರಲ್ಲೂ ಹಾಸ್ಯ ಹುಡುಕುತ್ತೀರಿ" ಅಂದರು ಹುಡುಗನ ತಾಯಿ. ಕಾಫಿ ಮತ್ತು ಕೋಡುಬಳೆ ಹಿಡಿದು ಬಂದಿದ್ದರು. ಎಲ್ಲರ ಗಮನ ಅವುಗಳ ಕಡೆ ಹೋಯಿತು. ಕದನವಿರಾಮ ಬಂದಂತಾಯಿತು. ನನ್ನ ಕೆಲಸ ಮುಗಿಸಿ ಹೊರಟು ಬಂದೆ. ನಾನು ಹೊರಬಂದ ನಂತರ ಮಾತಿನ ಗುದ್ದಾಟ ಮುಂದುವರೆದಿರಬಹುದು. ಏನಾಯಿತು ಎಂದು ನಾನು ಅಕ್ಕ-ಪಕ್ಕದ ಮನೆಯವರನ್ನು ಕೇಳಲಿಲ್ಲ. 

*****

ಹರೆಯವೆಂಬ ಮಾಂತ್ರಿಕನ ಮಾಯಾಜಾಲ ಅಂತಹುದು. ಅದು ನಿಜಕ್ಕೂ ಮಾಟವೇ ಹೌದು. ಹಿಂದೆಲ್ಲ ಕೆಲವರು ಮಾಟ-ಮಂತ್ರಗಳನ್ನು ಬಹಳವಾಗಿ ನಂಬಿದ್ದರು. ಅಮಾವಾಸ್ಯೆಯ ಮಾರನೆಯ ದಿನ ಬೆಳಿಗ್ಗೆ ರಸ್ತೆಯಲ್ಲಿ ನಡೆದು ಹೋದರೆ ನಾಲ್ಕು ರಸ್ತೆಗಳು ಸೇರುವ ಕಡೆ ಕೆಂಪು ಹೆಚ್ಚಿದ ನಿಂಬೆಹಣ್ಣು ಹೋಳುಗಳು ಕಾಣುತ್ತಿದ್ದವು. ಓಡಾಡುವವರು ಕಷ್ಟಪಟ್ಟು ರಸ್ತೆಯ ಕೊನೆಯಲ್ಲಿ ಹಾದು ಅವುಗಳ ಮಧ್ಯೆ ಹೋಗುವುದನ್ನು ತಪ್ಪಿಸಿಕೊಳ್ಳುತ್ತಿದ್ದರು. ಊರಿನಲ್ಲಿ ಕೆಲವರು ಮದ್ದು ಹಾಕುವುದರಲ್ಲಿ ನಿಸ್ಸೀಮರು ಎಂದು ಪಿಸುಮಾತು ಕೇಳಿಬರುತ್ತಿತ್ತು. "ಅವರ ಮನೆಯಲ್ಲಿ ಏನನ್ನಾದರೂ ತಿಂದೀಯೆ, ಜೋಕೆ. ಮೊಸರನ್ನವನ್ನಂತೂ ನೋಡಲೂಬೇಡ" ಎಂದು ಮಕ್ಕಳಿಗೆ ತಾಯಂದಿರು ಎಚ್ಚರಿಸುತ್ತಿದ್ದರು. ಮದ್ದು ಹಾಕುವವವರಂತೆ ಊರಿನಲ್ಲಿ ಅದನ್ನು ತೆಗೆಯುವ ಪ್ರವೀಣರೂ ಇರುತ್ತಿದ್ದರು. 

ಮಾಂತ್ರಿಕನ ಮಾಟ ಮಕ್ಕಳಾಗಿದ್ದಾಗ ನಮಗೆ ನಿಜದಲ್ಲಿ ಕಂಡುಬರುತ್ತಿದ್ದುದು "ಮ್ಯಾಜಿಕ್ ಶೋ" ನಡೆದಾಗ. ಯಾರದೋ ಉಂಗುರ ಮಾಂತ್ರಿಕನ ಕೈಯಲ್ಲಿ ಕಂಡಾಗ, ಪಾತ್ರೆಯಲ್ಲಿ  ತೆಗೆದುಕೊಂಡು ಹಾಕಿದ ನೀರು ಪಾರಿವಾಳವಾಗಿ ಹಾರಿಹೋದಾಗ, ಬುಟ್ಟಿಯಲ್ಲಿ ಹಾಕಿದ ಒಂದು ಬಿಳಿಯ ಕರ್ಚೀಪು ಅನೇಕ ಬಣ್ಣಬಣ್ಣದ ಬಟ್ಟೆಗಳಾದಾಗ, ಮುಂತಾದ ಸಂದರ್ಭಗಳಲ್ಲಿ. ನಾವೂ ಮ್ಯಾಜಿಕ್ ಮಾಡುವುದು ಕಲಿಯಬೇಕು ಅನ್ನಿಸುವುದು ಆಗ. ಅವನು ಬಹಳ ಸುಲಭವಾಗಿ ಗಾಳಿಯಲ್ಲಿ ರೂಪಾಯಿ ನೋಟು ತೆಗೆದಾಗಲಂತೂ ಮ್ಯಾಜಿಕ್ ಕಲಿತರೆ ಎಷ್ಟು ಬೇಕಾದರೂ ದುಡ್ಡು ಮಾಡಬಹುದು ಎಂದು ಕನಸು. ಇಂತಹ ಮಾಂತ್ರಿಕ ಹೀಗೆ ಷೋಗಳನ್ನು ಮಾಡಿ ಯಾಕೆ ಜೀವಹ ಹೊರೆಯುತ್ತಾನೆ ಎಂದು ಯೋಚಿಸುವಷ್ಟು ಪ್ರಬುದ್ಧತೆ ಇರಲಿಲ್ಲ ಆ ದಿನಗಳಲ್ಲಿ. 

ಸ್ವಲ್ಪ ದೊಡ್ಡವರಾದ ಮೇಲೆ, ಹರೆಯ ಬಂದಾಗ, ಹೊಸ ನೆತ್ತರು ಉಕ್ಕಿದಾಗ, ಅನೇಕ ಸಾಧನೆಗಳನ್ನು ಮಾಡುವ ಕನಸುಗಳು ಹರಡಿದಾಗ, ಇವೆಲ್ಲದರ ಸಮಾಗಮ. ಏನನ್ನಾದರೂ ಸಾಧಿಸುತ್ತೇನೆ ಅನ್ನುವ ವಿಶ್ವಾಸ, ಛಲ, ಹಂಬಲ. ಅಡಿಗರು ಇವು ಮೂರನ್ನೂ ಸೇರಿಸುತ್ತಾರೆ. ಅನೇಕ ಕನಸುಗಳು ಕಾಮಧೇನುವಿನ ಹಾಲು ಹನಿಗಳಾಗಿ, ಹೊಸ ರಕ್ತ ಉಕ್ಕುತ್ತಿದ್ದಾಗ, ಇಂತಹ ಹರೆಯದ ಮಾಂತ್ರಿಕನ ಮಾಟ ಪೂರ್ತಿ ಆವರಿಸಿದಾಗ, ಆದರ್ಶಗಳ ಸೆಳೆತ ಕೈಬೀಸಿ ಕರೆದಾಗ, ಹೊಸ ಸಮಾಜ ಸೃಷ್ಟಿಸುವ ಹುಮ್ಮಸ್ಸು ತಾನೇತಾನಾಗಿ ಆವರಿಸುತ್ತದೆ. ಉತ್ಸಾಹ, ಸಾಹಸಗಳ ತರಂಗಗಳ ಮೇಲೆ ಇಂತಹ ಹೊಸ ನಾಡನ್ನು ಕಟ್ಟುವ ಹುರುಪು ಆಗ. ಇವೆಲ್ಲ ಆರುವಮುನ್ನ ಆ ಕೆಲಸ ಆಗಬೇಕು. ತಡಮಾಡುವಂತಿಲ್ಲ. 

*****

ಆಗ ಆಗಲಿಲ್ಲ. ಮುಂದೆ ಏನಾಗುತ್ತದೆ? ಹಿಂದೆಲ್ಲ ಆಯುರ್ವೇದ ಪಂಡಿತರು ಕಣ್ಣು, ಉಗುರು ನೋಡಿ "ರಕ್ತಪುಷ್ಠಿ ಕಡಿಮೆ ಆಗಿದೆ" ಅನ್ನುತ್ತಿದ್ದರು. ಈಗ ಅದನ್ನೇ ಹೆಚ್ಚು ದುಡ್ಡು ತೆಗೆದುಕೊಂಡು, ರಕ್ತ ಹೀರುವ ಕೊಳವೆಯಿಂದ ತೆಗೆದು, ಲ್ಯಾಬೊರೇಟರಿಗಳಲ್ಲಿ ಅಳೆದು-ಸುರಿದು, ಹಿಮೋಗ್ಲಾಬಿನ್ ಕಡಿಮೆ ಆಗಿದೆ ಅನ್ನುತ್ತಾರೆ. ಹೊಸ ನೆತ್ತರು ಉಕ್ಕಿದ್ದು ಈಗ  ಆರುತ್ತಿದೆ. "ಒಂದೆ ನೆಗೆತಕೆ ನೆಗೆವೆವೋ ಕಂದಕವನು, ಕುಟ್ಟಿ ಪುಡಿ ಮಾಡುವೆವು ಕೋಟೆಗಳನು" ಎನ್ನುತ್ತಿದ್ದವ ಈಗ ದವಡೆಯಲ್ಲಿ "ಪುಳ್ಳಂಗಾಯಿ ಉಂಡೆ" ಕೂಡ ಪುಡಿ ಮಾಡಲಾರ. ಹರೆಯದ ಮಾಂತ್ರಿಕನ ಮಾಟ ಎಲ್ಲೂ ಕಾಣದೆ, ಮಧ್ಯ ವಯಸ್ಸಿನ ಸುತ್ತಲಿನ ಪ್ರಪಂಚದ ವಾಸ್ತವದ ಅರಿವು ಹೆಚ್ಚಾದಂತೆ ಕನಸುಗಳು ಬತ್ತುತ್ತವೆ. ಹೊಸ ಸಮಾಜ ಕಟ್ಟುವುದರ ಬದಲಾಗಿ ಇರುವ ಅವ್ಯವಸ್ಥೆಗೇ ಹೊಂದಿಕೊಂಡು ಬಾಳುವುದೇ ಉತ್ತಮ ಎಂಬ ಸಿದ್ಧಾಂತ ಗುದ್ದಲು ಬರುತ್ತದೆ. 

ಮತ್ತೂ ಸ್ವಲ್ಪ ವಯಸ್ಸಿನಲ್ಲಿ ಮುಂದೆ ಹೋದಾಗ, "ಇನ್ನೊಬ್ಬರ ಉಸಾಬರಿ ನಮಗೇಕೆ? ನಮ್ಮದು ನಮಗೆ ಸಾಕು. ತಲೆತಲಾಂತರದಿಂದ ಬಂದಿದ್ದು ನಾವು ಬದಲಿಸುವುದು ಸಾಧ್ಯವೇ?" ಎನ್ನುವ ಅನುಮಾನ ಕಾಡುತ್ತದೆ. ಹೊಸ ಸಮಾಜ ಕಟ್ಟುವುದು ಇರಲಿ; ಇರುವ ಸಮಾಜದಲ್ಲಿ ಬದುಕುವುದೂ ಒಂದು ಹೋರಾಟವೇ ಆಗುತ್ತದೆ. ಜೀವನದ ವಾಸ್ತವ ಇದೇ ಅನ್ನುವ ಕಡೆ ಮನಸ್ಸು ವಾಲತೊಡಗುತ್ತದೆ. 

*****

ಹಾಗಿದ್ದರೆ ಹೊಸ ಸಮಾಜ ಕಟ್ಟುವುದೇ ಬೇಡವೇ? ಕಾಲಕಾಲಕ್ಕೆ ಸಮಾಜ ಬದಲಾಗಿದೆಯಲ್ಲ. ಅದನ್ನು ಯಾರಾದರೂ ಕಟ್ಟಿರಲೇಬೇಕಲ್ಲ? ಅನೇಕ ರೀತಿಗಳಲ್ಲಿ ಬದಲಾವಣೆಗಳು ಸರಿ ದಾರಿಯಲ್ಲಿಯೇ ಆಗಿವೆಯಲ್ಲ? ಹೌದು. ಇವೆಲ್ಲಾ ಆಗಲೇಬೇಕು. ನಿಲ್ಲಬಾರದು. ಕನಸುಗಳು ಕಾಣಲೇಬೇಕು. ತಿರುವುಗಳು ದಾಟಲೇಬೇಕು. ಅದು ಹೇಗೆ? ಅದು ಸಾಧ್ಯವೇ? ಅವನ್ನು ಮಾಡುವವರು ಯಾರು?

ಪುಣ್ಯಕ್ಕೆ ಯಾವ ಕಾಲಮಾನ ಘಟ್ಟದಲ್ಲೂ ಕೇವಲ ಯುವಕರೇ ಇರಲಿಲ್ಲ; ಇರುವುದಿಲ್ಲ. ಎಲ್ಲ ವಯೋಮಾನದವರೂ ಒಂದೇ ಕಾಲದಲ್ಲಿ ಇರುತ್ತಾರೆ.  ಕವಿವಾಣಿ ಹೇಳುವಂತೆ "ಹೊಸ ಚಿಗುರು - ಹಳೆ ಬೇರು ಕೂಡಿರಲು ಮರ ಸೊಗಸು".  ಹರೆಯದವರ ಉತ್ಸಾಹ-ಹುಮ್ಮಸ್ಸುಗಳು ಮತ್ತು  ಹಿರಿಯರ ಅನುಭವ-ಸಮತೋಲನ ಒಂದೆಡೆ ಸೇರಿದರೆ ಹೊಸ ಸಮಾಜದ ನಿರ್ಮಾಣ ಇಂದಿಗೂ ಸಂಭವವೇ. ಹಿಂದೆಲ್ಲಾ ಸಮಾಜಗಳು ಬದಲಾದದ್ದು ಹೀಗೆಯೇ. ಈಗಲೂ ಅದು ಸಾಧ್ಯವೇ. 

ಹಿರಿಯರಿಗೆ ಕಿರಿಯರಲ್ಲಿ ಭರವಸೆ, ಕಿರಿಯರಿಗೆ ಹಿರಿಯರಲ್ಲಿ ನಂಬಿಕೆ. ಹೀಗೆ ಇರುವ ತಂಡಗಳು ಒಟ್ಟಿಗೆ. ಪರಸ್ಪರ ಗಾಢವಾದ ಸಹಬಾಳ್ವೆ. ಆಗ ಹರೆಯದ ಮಾಂತ್ರಿಕನ ಮಾಟ ಮಸಳದೆ, ಸರಿದಾರಿಯಲ್ಲಿ ಸಮಾಜದಲ್ಲಿ ಮುಂದುವರೆಯಬಹುದು.