Showing posts with label Shankaracharya. Show all posts
Showing posts with label Shankaracharya. Show all posts

Tuesday, November 25, 2025

ಗುರುದ್ರೋಹ?


"ವರ್ಣಮಾತ್ರಂ ಕಲಿಸಿದಾತಂ ಗುರು" ಅನ್ನುವ ಶೀರ್ಷಿಕೆಯ ಹಿಂದಿನ ಸಂಚಿಕೆಯನ್ನು ಓದಿದ ಕೆಲವು ಓದುಗ ಮಿತ್ರರು ಶ್ರೀ ಶಂಕರಾಚಾರ್ಯರು ಮತ್ತು ಶ್ರೀ ಮಂಡನ ಮಿಶ್ರ ಪಂಡಿತರ ನಡುವೆ ನಡೆದ ಸಂಭಾಷಣೆ ಸಂದರ್ಭದಲ್ಲಿ ಬಂದ ಶ್ರೀ ಕುಮಾರಿಲ ಭಟ್ಟರು ತುಷಾಗ್ನಿಗೆ ಪ್ರವೇಶಿಸಿದ ಸಂಗತಿ ವಿವರಗಳನ್ನು ಕೇಳಿದ್ದಾರೆ. (ಈ ಸಂಚಿಕೆಯನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು). 

ಈ ಸಂದರ್ಭದ ಹಿನ್ನೆಲೆ ಮತ್ತು ವಿವರಗಳನ್ನು ಈಗ ನೋಡೋಣ. 

*****

ಕ್ರಿಕೆಟ್ ಒಂದು ಜನಪ್ರಿಯ ಕ್ರೀಡೆ. ಪ್ರಪಂಚದ ಅನೇಕ ಪ್ರದೇಶಗಳಲ್ಲಿ ಆಡುವ ಆಟ. (ಅದಕ್ಕಿಂತ ಜನಪ್ರಿಯ ಆಟಗಳೂ ಅನೇಕವಿವೆ. ಇಲ್ಲಿ ಉದಾಹರಣೆಗಾಗಿ ಅದೊಂದನ್ನು ತೆಗೆದುಕೊಂಡಿದೆ. ಇದರ ಬದಲು ಬೇರೆ ಕ್ರೀಡೆಯನ್ನು ತೆಗೆದುಕೊಂಡರೂ ಹೇಳುವುದರ ತಿರುಳಲ್ಲಿ ಏನೂ ವ್ಯತ್ಯಾಸ ಆಗುವುದಿಲ್ಲ). ಅದನ್ನು ಆಡಲು ಮುಖ್ಯವಾಗಿ ಕೆಲವು ವಸ್ತುಗಳು ಬೇಕು. ಒಂದು ದಾಂಡು ಅಥವಾ ಬ್ಯಾಟು. ಒಂದು ಚೆಂಡು ಅಥವಾ ಬಾಲು. ಮೂರೋ ಅಥವಾ ಆರೋ ಸ್ಟಂಪ್ ಅಥವಾ ಗೂಟಗಳು. ಗೂಟವಿಲ್ಲದಿದ್ದರೆ ಗೋಡೆಯ ಮೇಲೆ ಮೂರು ದಪ್ಪ ಗೆರೆಗಳು. ಇಷ್ಟಂತೂ ಬೇಕೇ ಬೇಕು. ಹೆಚ್ಚಿದ್ದರೆ ಇನ್ನೂ ಒಳ್ಳೆಯದು. ಆಡಲು ಆಟಗಾರರು. ತೀರ್ಪುಗಾರರಿದ್ದರೆ ಒಳ್ಳೆಯದು. ಎರಡು ತಂಡ ಇದ್ದರೆ ದ್ವಿಪಕ್ಷೀಯ ಸರಣಿ. ಹೆಚ್ಚಿನ ತಂಡಗಳಿದ್ದರೆ ಅದೊಂದು ದೊಡ್ಡ ಪಂದ್ಯಾವಳಿ. ಪ್ರಪಂಚದ ಎಲ್ಲ ಕ್ರಿಕೆಟ್ ಆಡುವ ದೇಶಗಳ ತಂಡಗಳು ಬಂದರೆ "ವಿಶ್ವ ಕಪ್" ಪಂದ್ಯಾವಳಿ. ಹೀಗೆ ನಡೆಯುತ್ತದೆ. 

ಇರುವ ಒಂದೇ ರೀತಿಯ ಬ್ಯಾಟಿನಲ್ಲಿ ಬೇರೆ ಬೇರೆ ದಾಂಡಿಗರು (ಬ್ಯಾಟ್ಸಮನ್) ತಮ್ಮ ಕೈಚಳಕ ತೋರಿಸುತ್ತಾರೆ. ಒಬ್ಬನಂತೆ ಇನ್ನೊಬ್ಬ ಇಲ್ಲ. ಏನೋ ಒಂದು ವ್ಯತ್ಯಾಸ. ಹಾಗೆಯೇ, ಹಿಡಿದ ಒಂದೇ ಚೆಂಡಿನಲ್ಲಿ ಬೌಲರುಗಳೂ ತಮ್ಮ ಕೌಶಲ್ಯ ತೋರಿಸುತ್ತಾರೆ. ಮೂಲ ಪರಿಕರ ಒಂದೇ ಆದರೂ ಅವರವರ ಶಕ್ತಿ, ಅನುಭವ, ತಯಾರಿ, ಕೌಶಲ್ಯ, ಪ್ರತಿಭೆ, ಸಮಯಪ್ರಜ್ಞೆ, ಪಂದ್ಯದಲ್ಲಿ ಉಳಿಯುವ ಶಕ್ತಿ, ಆ ತಕ್ಷಣದಲ್ಲಿ ಮಾಡುವ ಬದಲಾವಣೆಗಳು, ನಿಂತ ನಿಲುವಿನಲ್ಲಿ ಯೋಚಿಸಿ ಹೂಡುವ ಕಾರ್ಯತಂತ್ರ, ಹೀಗೆ ಅನೇಕ ತೆರನಾದ ವೈವಿಧ್ಯಗಳಿಂದ ಏನೋ ಹೊಸತನ್ನು, ನಿರೀಕ್ಷಿಸದ ತಿರುವನ್ನು ತಂದುಕೊಡುತ್ತಾರೆ. 

ಒಂದೇ ಚೆಂಡಿನಲ್ಲಿ ವೇಗದ ಬೌಲಿಂಗ್ ಮಾಡುವವನು ಒಬ್ಬ. ಅದರಲ್ಲಿಯೂ ಸೀಮ್ ಮತ್ತು ಸ್ವಿಂಗ್ ಎಂದು ಉಂಟು. ಅದೇ ಚೆಂಡಿನಲ್ಲಿ ಸ್ಪಿನ್ ಮಾಡುವವನು ಇನ್ನೊಬ್ಬ. ಬಲಗಡೆಯಿಂದ ಎಡಗಡೆಗೆ ಚೆಂಡು ತಿರುಗುವಂತೆ (ಆಫ್ ಸ್ಪಿನ್), ಎಡಗಡೆಯಿಂದ ಬಲಗಡೆ ತಿರುಗುವಂತೆ (ಲೆಗ್ ಸ್ಪಿನ್), ಗಾಳಿಯಲ್ಲಿ ಮೇಲೆ-ಕೆಳಗೆ ಹಾರುವಂತೆ (ಫ್ಲೈಟ್) ಮಾಡುವವರು ಉಂಟು. ಹೀಗೆ ತೋರಿಸಿ, ಹಾಗೆ ಹಾಕಿ ಎದುರಾಳಿಗೆ ಮಂಕುಬೂದಿ ಎರಚುವ ಪ್ರಯತ್ನಗಳೂ ನಡೆಯುತ್ತವೆ (ಗೂಗ್ಲಿ, ಚೈನಮನ್, ದೂಸ್ರಾ, ರಿವರ್ಸ್ ಸ್ವಿಂಗ್ ಇನ್ನೂ ಮುಂತಾದುವು) ಕೆಲವು ವಿಶೇಷ ಪ್ರತಿಭಾಶಾಲಿಗಳು ಇವುಗಳಲ್ಲಿ ಒಂದಕ್ಕಿಂತ ಹೆಚ್ಚನ್ನು, ಅಪರೂಪದ ಕೆಲವರು ಇವೆಲ್ಲವನ್ನೂ ಮಾಡುವವರು. ಕಾಲಕಾಲಕ್ಕೆ ಏನೋ ಒಂದು ಹೊಸದು ಬರುವುದು. ಆಟದಲ್ಲಿ ಒಂದು ಹೊಸ ತಿರುವು. ಹೊಸ ಉಲ್ಲಾಸ. ಹೀಗೆ ನಡೆಯುತ್ತಿರುವುದು. 

*****

ಕ್ರಿಕೆಟ್ ಆಟ ಪ್ರಾರಂಭವಾದಾಗ ಎರಡು ದೇಶದ ತಂಡಗಳ ಮಧ್ಯೆ ನಡೆವ ಯಾವುದೇ ಒಂದು ಸರಣಿ ಸೋಲು-ಗೆಲುವು ತೀರ್ಮಾನವಾಗದೆ ಇದ್ದರೆ, ಸರಣಿಯ ಕಡೆಯ ಪಂದ್ಯ ಯಾವುದಾದರೂ ಒಂದು ತಂಡ ಗೆಲ್ಲುವವರೆಗೂ ಆಡುತ್ತಿದ್ದರಂತೆ! ಮೊದಲ ಪಂದ್ಯಗಳು ಐದು ದಿನದ ಆಟದ ನಂತರ ತೀರ್ಮಾನವಾಗದೆ ಡ್ರಾ ಆದರೆ ಕಡೆಯ ಪಂದ್ಯಕ್ಕೆ ಸಮಯದ ನಿರ್ಬಂಧವಿರಲಿಲ್ಲ. 1939ರಲ್ಲಿ ಇಂಗ್ಲೆಂಡ್ ತಂಡ ದಕ್ಷಿಣ ಆಫ್ರಿಕಾ ಪ್ರವಾಸ ಹೊರಟಿತು. ಕಡೆಯ ಪಂದ್ಯ ಹೆಚ್ಚು ದಿನ ನಡೆಯಬಹುದು ಎಂದು ಗೊತ್ತಿತ್ತು. ಆಗ ಆಟಗಾರರು ಹಡಗಿನಲ್ಲಿ ಪ್ರಯಾಣ ಮಾಡಬೇಕಾಗಿತ್ತು. ಆದ್ದರಿಂದ ಕಡೆಯ ಪಂದ್ಯ ಪ್ರಾರಂಭವಾಗುವ ದಿನದಿಂದ ಹದಿಮೂರನೆಯ ದಿನ ದಕ್ಷಿಣ ಆಫ್ರಿಕಾದಿಂದ ಹೊರಡುವ ಹಡಗಿನಲ್ಲಿ ಅವರಿಗೆ ಇಂಗ್ಲೆಂಡ್ ಮರಳುವ ಪ್ರಯಾಣದ ವ್ಯವಸ್ಥೆ ಮಾಡಿದರು. 

ಡರ್ಬನ್ ನಗರದಲ್ಲಿ ನಡೆದ ಆ ಪಂದ್ಯ 12 ದಿನ ನಡೆದರೂ ತೀರ್ಮಾನವಾಗಲಿಲ್ಲ. ಹತ್ತು ದಿನ ಪಂದ್ಯ ನಡೆದು (ಮಧ್ಯೆ ಎರಡು ದಿನ ವಿರಾಮದ ದಿನಗಳು - ರೆಸ್ಟ್ ಡೇಸ್) 1981 ರನ್ನುಗಳ ಸಂಗ್ರಹವಾದರೂ ಪಂದ್ಯ ನಡೆಯುತ್ತಲೇ ಇತ್ತು! ಕಡೆಗೆ ಹಡಗು ಹೊರಡುವ ದಿನ ಬಂದಿದ್ದರಿಂದ, ಪ್ರಯಾಣ ಮುಂದೂಡಲು ಬೇರೆ ಹಡಗುಗಳ ಅಲಭ್ಯ ಕಾರಣದಿಂದ, ಪಂದ್ಯ ಡ್ರಾ ಎಂದು ಘೋಷಿಸಿ ಮುಕ್ತಾಯ ಮಾಡಿದರು!

ಹೀಗೆ ಪ್ರಾರಂಭವಾದ ಕ್ರೀಡೆ ಇಂದು ಅನೇಕ ಬದಲಾವಣೆಗಳನ್ನು ಕಂಡಿದೆ. ಐದು ದಿನದ ಟೆಸ್ಟ್ ಪಂದ್ಯಗಳ ಜೊತೆ, ಏಕದಿನ ಪಂದ್ಯಗಳು (ಒನ್ ಡೇ), 20 ಓವರುಗಳ ಪಂದ್ಯಗಳು, ಹೀಗೆ. ಸಮಯದ ಜೊತೆ ಪಂದ್ಯಗಳು ನಡೆಯುವ ನಿಯಮಗಳೂ ಬದಲಾಗುತ್ತಿವೆ. 

ಕ್ರಿಕೆಟ್ ಇಂಗ್ಲೆಂಡ್ ದೇಶದಲ್ಲಿ ಪ್ರಾರಂಭವಾಗಿ ಕೆಲಕಾಲ ಆ ದೇಶದ ತಂಡ ಮೇಲುಗೈ ಪಡೆದಿತ್ತು. ನಂತರ ಸ್ವಲ್ಪಕಾಲ ವೆಸ್ಟಿಂಡೀಸ್ ತಂಡ ಮೆರೆಯಿತು. ಆಮೇಲೆ ಆಸ್ಟ್ರೇಲಿಯಾ. ಭಾರತ ಮತ್ತು ಪಾಕಿಸ್ತಾನಗಳೂ ಕೆಲ ಕಾಲ ಮೆಲಗೈ ಪಡೆದುವು. "ವಿಶ್ವ ಕಪ್" ಆಡುವುದು ಬಂದಮೇಲಂತೂ ಪ್ರತಿ ನಾಲ್ಕು ವರುಷಗಳಿಗೊಮ್ಮೆ ಒಂದು ತಂಡ "ಚಾಂಪಿಯನ್" ಆಗುವುದು. ಆ ಸಮಯದಲ್ಲಿ ಯಾರ ಕೈ ಮೇಲೋ ಅವರು ಗೆದ್ದು ಬೀಗುವರು. 
*****

ಕ್ರೀಡೆಯಂತೆ ಆಟಗಾರರ ನಡವಳಿಕೆಗಳಲ್ಲೂ ವ್ಯತ್ಯಾಸಗಳು ಉಂಟು. ಕೆಲವರು ಎದುರಾಳಿ ಆಟಗಾರರನ್ನು ಬದ್ಧ ದ್ವೇಷಿಗಳು ಎಂದು ತಿಳಿಯುವರು. ಮತ್ತೆ ಕೆಲವರು ಎದುರಾಳಿಗಳ ಒಳ್ಳೆಯ ಗುಣಗಳನ್ನು ಗುರುತಿಸಿ ಅವರನ್ನು ಮೆಚ್ಚುವರು. ಮತ್ತ್ತೆ ಕೆಲವರು ಇವೆರಡೂ ಇಲ್ಲದ ತಟಸ್ಥ ಮನಃಸ್ಥಿತಿ ಹೊಂದಿದವರು. ಕೆಲವರಂತೂ ಎದುರಾಳಿಗೂ ಕೆಲವು ವಿಷಯಗಳನ್ನು ತಿಳಿಸಿಹೇಳಿ ಹೃದಯ ವೈಶಾಲ್ಯ ಮೆರೆಯುವವರು. ಹೀಗೆ ಎಲ್ಲ ರೀತಿಯ ಆಟಗಾರರೂ ಉಂಟು. 

ಇಂಗ್ಲೆಂಡ್ ದೇಶದ ಹವಾಮಾನ, ಆಟದ ಮೈದಾನ, ಪಿಚ್ ಸ್ಥಿತಿ-ಗತಿ ಬೇರೆ ರೀತಿಯದು. ಅವರನ್ನು ತವರು ನೆಲದಲ್ಲಿ ಸೋಲಿಸುವುದು ಬಲು ಕಷ್ಟ. ಹೀಗೆಯೇ ಭಾರತದಲ್ಲಿ. ಭಾರತದವರು ಇಂಗ್ಲೆಂಡ್ ತಂಡವನ್ನು ಅಲ್ಲಿಯೇ ಹೋಗಿ ಮಣಿಸಬೇಕಾದರೆ ಏನು ಮಾಡಬೇಕು? ಯಾರಾದರೂ ಆಟಗಾರನನ್ನು (ಸಾಧ್ಯವಾದರೆ ಆಟಗಾರರನ್ನು) ಅಲ್ಲಿಯ ಕೌಂಟಿ ಪಂದ್ಯಗಲ್ಲಿ ಆಡಲು ಕಳಿಸಬೇಕು. ಅಲ್ಲಿ ಹೋಗಿ, ಅವರೊಡನೆ ಸೇರಿ, ಅವರಂತೆ ಆಡಿ, ಅವರ ರಹಸ್ಯಗಳನ್ನು ತಿಳಿದು, ನಂತರ ಅವರನ್ನು ಭೇದಿಸಬೇಕು. ಇದು ಒಂದು ದಾರಿ. 

ಈಗಂತೂ ಬೇರೆ ದೇಶದವರ ಮಾಜಿ ಆಟಗಾರರನ್ನು ಹೆಚ್ಚು ಹಣ ಕೊಟ್ಟು "ಕೋಚ್" ಎಂದು ನೇಮಕ ಮಾಡಿಕೊಳ್ಳುವುದು ಬಂದಿದೆ. ಏನೇ ಆದರೂ, ಅವರ ರಹಸ್ಯ ಅರಿಯಲು ಅಲ್ಲಯೇ ಹೋಗಿ, ಅವರಂತೆ ಇದ್ದು, ಕಲಿತು ಬರುವುದು ಒಂದು ಅತ್ಯುತ್ತಮ ತಂತ್ರ. 

*****

ಇದೇನು? "ಗುರುದ್ರೋಹ" ಎಂದು ಶೀರ್ಷಿಕೆ ಕೊಟ್ಟು ಕ್ರಿಕೆಟ್ ಕಥೆ ನಡೆಯುತ್ತಿದೆಯಲ್ಲ? ಹೀಗೆ ಅನ್ನಿಸಬಹುದು. ಕ್ರಿಕೆಟ್ ಆಟದ ಮೇಲಿನ ಎಲ್ಲ ವಿವರಗಳೂ ತತ್ವಶಾಸ್ತ್ರಕ್ಕೂ ಅನ್ವಯಿಸುತ್ತವೆ. ಇಲ್ಲಿಯೂ ಅದೇ ರೀತಿ. ಅಲ್ಲಿ ಚೆಂಡು-ದಾಂಡು. ಇಲ್ಲಿ ವೇದ-ಬ್ರಹ್ಮಸೂತ್ರಗಳು ಮುಂತಾದ ಗ್ರಂಥಗಳು. ಅಲ್ಲಿ ನಾಯಕರು-ಆಟಗಾರರು. ಇಲ್ಲಿ ಭಾಷ್ಯಕಾರರು-ವ್ಯಾಖ್ಯಾನಕಾರರು. ಅಲ್ಲಿ ಸರಣಿ ಪಂದ್ಯಗಳು - ಪಂದ್ಯಾವಳಿಗಳು. ಇಲ್ಲಿ ವಾದ-ವಿವಾದಗಳು. ಅಲ್ಲೊಂದು ತೆರನಾದ ನಿಯಮಗಳು. ಇಲ್ಲೊಂದು ತೆರನಾದ ನಿಯಮಗಳು. 

ಅಲ್ಲಿನ ಆಟಗಾರರಂತೆ ಇಲ್ಲಿಯೂ ಉಂಟು. ಕೆಲವರು ಪ್ರತಿಪಕ್ಷದವರನ್ನು ದ್ವೇಷಿಸುವವರು. ಕೆಲವರು ಎದುರಾಳಿಯ ಯೋಗ್ಯತೆಯನ್ನು ಗೌರವಿಸುವವರು. ಮತ್ತೆ ಕೆಲವರು "ನಿಮ್ಮ ಮಾತು ಒಪ್ಪುವುದಿಲ್ಲ. ಆದರೆ ನೀವು ಹೇಳುವುದರಲ್ಲಿ ಕೆಲವು ಸತ್ಯಗಳಿವೆ" ಎನ್ನುವ ವಿಶಾಲ ಹೃದಯಿಗಳು. 

ಒಂದೇ ವಾಂಗ್ಮಯದ ಗ್ರಂಥಗಳಿಗೆ ಅವುಗಳಲ್ಲಿರುವ ಪದಸಂಪತ್ತಿನ ಬೇರೆ ಬೇರೆ ಅರ್ಥಗಳ ಸಹಾಯದಿಂದ ಬೇರೆ ಬೇರೆ ಭಾಷ್ಯಗಳು. ಒಂದೇ ಪದಕ್ಕೆ ಅನೇಕ ಅರ್ಥಗಳುಳ್ಳ ಭಾಷೆಯ ಸಂಪತ್ತು. ಅದರಿಂದ ಹೊರಟ ವಿವಿಧ ಅರ್ಥಗಳು. ಆ ಕಾರಣದಿಂದ ಬೇರೆ ಬೇರೆ ಸಿದ್ಧಾಂತಗಳು.

ದೇವರಿದ್ದಾನೆ ಎನ್ನುವವರು ಕೆಲವರು. ದೇವರಿಲ್ಲ ಎನ್ನುವವರು ಮತ್ತೆ ಕೆಲವರು. ಅವನು ಹೀಗಿದ್ದಾನೆ ಅನ್ನುವವರು ಸ್ವಲ್ಪ ಜನ. ಅವನು ಹೀಗಿಲ್ಲ; ಹಾಗಿದ್ದಾನೆ ಅನ್ನುವವರು ಮತ್ತೆ ಬೇರೆ ಜನ. ಮನುಷ್ಯ ಸತ್ತ ಮೇಲೆ ಮುಗಿಯಿತು. ಮುಂದಿನ ಲೋಕವಿಲ್ಲ ಎನ್ನುವವರು ಕೆಲವರು. ಕರ್ಮವೇ ಪ್ರಧಾನ ಎಂದು ಹಲವರು. ಜೀವನು ಪರಮಾತ್ಮನ ಭಾಗ. ಎರಡೂ ಒಂದೇ ಅನ್ನುವರು ಕೆಲವರು. ಇಲ್ಲ, ಇಲ್ಲ, ಎರಡೂ ಬೇರೆ ಅನ್ನುವವರು ಇನ್ನು ಕೆಲವರು. ಎರಡೂ ಒಂದೇ, ಆದರೆ ಸ್ವಲ್ಪ ವ್ಯತ್ಯಾಸ ಎಂದು ಇನ್ನೂ ಕೆಲವರು. ಈ ಭೇದಗಳಿಂದ ಹುಟ್ಟಿದ ಅನೇಕ ಸಿದ್ಧಾಂತಗಳು. 

"ಈ ಗ್ರಂಥಗಳು ಪ್ರಮಾಣ. ಅದರಿಂದ ಇದೇ ಸರಿ" ಎಂದು ಕೆಲವರೆಂದರೆ "ನಾವು ನಿಮ್ಮ ಗ್ರಂಥಗಳನ್ನೇ ಒಪ್ಪುವುದಿಲ್ಲ" ಎನ್ನುವವರು ಮತ್ತೆ ಕೆಲವರು. "ಈ ಗ್ರಂಥಗಳಿಗೆ ಹೀಗೆ ಅರ್ಥ" ಎಂದು ಒಬ್ಬರು ಹೇಳಿದರೆ, "ಇಲ್ಲ. ಅದರ ಅರ್ಥ ಹಾಗೆ" ಎಂದು ಇನ್ನೊಬ್ಬರು. ಕಣ್ಣಿಗೆ ಕಾಣುವುದೇ ಸತ್ಯ ಎಂದು ಒಂದು ಬಣ. ಕಾಣದ ಸತ್ಯವೂ ಇದೆ ಎಂದು ಇನ್ನೊಂದು ಬಣ. ನಿಯಮಗಳು ಬದಲಾದಾಗ ಪಂದ್ಯದ ಫಲಿತಾಂಶವೂ ಬೇರೆ ಆಗುವುದು ವಿಶೇಷವೇನಲ್ಲ. ಹೀಗೆ. 

ಈ ರೀತಿಯ ವಾದ-ವಿವಾದಗಳಲ್ಲಿ ಒಂದು ಕಾಲಘಟ್ಟದಲ್ಲಿ ಯಾರ ತಂಡವು ಬಲಶಾಲಿಯೋ ಆ ತಂಡದ ಸಿದ್ಧಾಂತ ಮೇಲುಗೈ ಪಡೆಯಿತು. ವಿಶ್ವ ಕಪ್ ಗೆದ್ದಂತೆ. "ನಿರೀಶ್ವರವಾದ", "ಏಕವಾದ", "ಅದ್ವೈತ", "ವಿಶಿಷ್ಟಾದ್ವೈತ", "ದ್ವೈತ" ಇನ್ನೂ ಮುಂತಾದುವು. ಇವೆಲ್ಲವೂ ಎಲ್ಲ ಕಾಲದಲ್ಲಿಯೂ ಇದ್ದವು. ಈಗಲೂ ಇವೆ. ಒಂದು ಸಿದ್ಧಾಂತ ಸ್ವಲ್ಪ ಮಾಸುವಂತಾದಾಗ ಪ್ರತಿಭಾಶಾಲಿ ಒಬ್ಬರು ಬಂದು ಅದನ್ನು ಮತ್ತೆ ಸ್ಥಾಪಿಸುವರು. ಹೀಗೆ ಹಗ್ಗ-ಜಗ್ಗಾಟ ನಡೆದೇ ಇರುವುದು. 

******

ಶ್ರೀ ಕುಮಾರಿಲ ಭಟ್ಟರು ಏಳನೆಯ ಶತಮಾನದಲ್ಲಿ ಜೀವಿಸಿದ್ದ ಮಹಾನ್ ವಿದ್ವಾಂಸರು. "ಭಟ್ಟಪಾದರು" ಎಂದು ಕೀರ್ತಿ ಸಂಪಾದಿಸಿದವರು. ಪೂರ್ವ ಮೀಮಾಂಸಾ ಮತ್ತು ಕರ್ಮ ಸಿದ್ಧಾಂತದಲ್ಲಿ ಪ್ರಚಂಡರು. ಶ್ರೀ ಶಂಕರಾಚಾರ್ಯರಿಗಿಂತ ವಯಸ್ಸಿನಲ್ಲಿ ಹಿರಿಯರು. ಆಚಾರ್ಯ ಶಂಕರರು ಅವರನ್ನು ಕಂಡಾಗ ಆಚಾರ್ಯರಿಗೆ ಹದಿನೇಳು-ಹದಿನೆಂಟು ವಯಸ್ಸು. ಕುಮಾರಿಲ ಭಟ್ಟರು ಆ ವೇಳೆಗೆ ವೃದ್ಧರು. 

ಕಾಲಚಕ್ರದಲ್ಲಿ ವೈದಿಕ ಸಿದ್ಧಾಂತಕ್ಕೆ ವಿರುದ್ಧವಾದ ಬೌದ್ಧ ಮತ ಪ್ರಬಲವಾಯಿತು. ಬೌದ್ಧ ಪಂಡಿತರು ವೈದಿಕರನ್ನು ವಾದಗಳಲ್ಲಿ ಸೋಲಿಸಿ ಮೇಲೆ ಬಂದರು. ಕುಮಾರಿಲ ಭಟ್ಟರು ಅವರನ್ನು ಖಂಡಿಸಿ ವಾದಿಸಿದರು. ಬೌದ್ಧರ ಸಿದ್ಧಾಂತದ ಸೂಕ್ಷ್ಮಗಳನ್ನು ತಿಳಿದಹೊರತು ಅವರನ್ನು ವಾದಗಳಲ್ಲಿ ಸೋಲಿಸಲು ಅಸಾಧ್ಯ ಎಂದು ಅವರಿಗೆ ಅನಿಸಿತು. ಏನು ಮಾಡುವುದು? ಅವರ ಗುಟ್ಟನ್ನು ಅವರು ಬಿಡುವುದಿಲ್ಲ. ಮಾರುವೇಷದಿಂದ ಬೌದ್ಧ ವಿದ್ಯಾಲಕ್ಕೆ ಹೋಗಿ ವಿದ್ಯಾರ್ಥಿಯಾಗಿ ಸೇರಿಕೊಂಡರು. ಅವರ ಎಲ್ಲ ಸೂಕ್ಷ್ಮಗಳನ್ನೂ ತಿಳಿದುಕೊಂಡರು. (ಇಂಗ್ಲೆಂಡ್ ದೇಶಕ್ಕೆ ಹೋಗಿ, ಕೌಂಟಿ ಕ್ರಿಕೆಟ್ ಆಡಿ ಅಲ್ಲಿನ ಪರಿಸ್ಥಿತಿ ತಿಳಿದಂತೆ). 

ಅವರು ಅಲ್ಲಿ ವಿದ್ಯಾಭ್ಯಾಸ ಮುಗಿಸಿ ಹೊರಬರುವ ದಿನಗಳು. ಬೌದ್ಧರಿಗೆ ವೇದಗಳಲ್ಲಿ ನಂಬಿಕೆಯಿಲ್ಲ. ಪಾಠ ಮಾಡುತ್ತಿದ್ದ ಗುರುಗಳು ವೇದಗಳನ್ನು ನಿಂದಿಸಿದರು. ವೇದಗಳಲ್ಲಿ ಪೂರ್ಣ ನಂಬಿಕೆಯುಳ್ಳ ಕುಮಾರಿಲ ಭಟ್ಟರಿಗೆ ದುಃಖವಾಗಿ ಕಣ್ಣಲ್ಲಿ ನೀರು ಬಂದಿತು. (ಇನ್ನೊಬ್ಬರ ಮನೆಗೆ ಹೋದಾಗ ಅವರ ಮನೆಯವರು ನಮ್ಮ ಹಿರಿಯರನ್ನು ನಿಂದಿಸಿದರೆ ನೋವಾಗುವ ರೀತಿ). ಗುಟ್ಟು ರಟ್ಟಾಯಿತು. "ಒಹೋ, ಇವನು ನಮ್ಮ ಗುಟ್ಟುಗಳನ್ನು ತಿಳಿಯಲು ಬಂದಿರುವ ಪತ್ತೇದಾರ" ಎಂದು ಸಹಪಾಠಿಗಳಿಗೆ ತಿಳಿದುಹೋಯಿತು. 

ಜೊತೆಯ ವಿದ್ಯಾರ್ಥಿಗಳು ಕುಮಾರಿಲ ಭಟ್ಟರನ್ನು ಮಾಳಿಗೆಯ ಮೇಲೆ ಕರೆದುಕೊಂಡು ಹೋಗಿ ಅಲ್ಲಿಂದ ಕೆಳಗೆ ತಳ್ಳಿದರು. ಕೆಳಗೆ ಬೀಳುವಾಗ ಭಟ್ಟರು "ವೇದಗಳು ಪ್ರಮಾಣೀಭೂತವಾಗಿದ್ದರೆ ನನಗೆ ಏನೂ ಆಗದಿರಲಿ" ಎಂದು ಕೇಳಿಕೊಂಡರು. ಕೆಳಗೆ ಬಿದ್ದಾಗ ಅವರಿಗೆ ಪ್ರಾಣಾಪಾಯ ಆಗಲಿಲ್ಲ. "ವೇದಗಳು ಪ್ರಮಾಣ. ಅದರಿಂದ ನನಗೆ ಏನೂ ಆಗದಿರಲಿ" ಅನ್ನಲಿಲ್ಲ. "ಪ್ರಮಾಣೀಭೂತವಾಗಿದ್ದರೆ" ಅಂದುದರಿಂದ ಸ್ವಲ್ಪ ಅನುಮಾನ ತೋರಿಸಿದಂತೆ ಆಯಿತು. ಅವರಿಗೆ ಒಂದು ಕಣ್ಣು ಹೊಯಿತು. ಆದರೆ ಬದುಕುಳಿದರು. 

*****

ವಿದ್ಯಾಲಯದಿಂದ ಹೊರಬಂದು, ಅಲ್ಲಿ ಕಲಿತ ತಿಳುವಳಿಕೆಯಿಂದ ಬೌದ್ಧ ಗ್ರಂಥಗಳನ್ನೆಲ್ಲ ಖಂಡಿಸಿ ಜಯಶಾಲಿಗಳಾದರು. ಕರ್ಮ ಸಿದ್ಧಾಂತವನ್ನು ಮತ್ತೆ ಬಲಶಾಲಿ ಮಾಡಿದರು. ತಮ್ಮ ಈ ಕೆಲಸವೆಲ್ಲಾ ಮುಗಿದ ಮೇಲೆ ಅವರಿಗೆ ಬೇಸರವಾಯಿತು. ಬೌದ್ಧ ಸಿದ್ಧಾಂತ ಖಂಡಿಸಲು ಹೋಗಿ ಅಲ್ಲಿ ವಿದ್ಯಾರ್ಥಿಯಾಗಿ ಕಲಿತರೂ, ಕಡೆಗೆ ಅಲ್ಲಿನ ಗುರುಗಳಿಗೆ ದ್ರೋಹ ಮಾಡಿದೆ ಅನಿಸಿತು. "ವರ್ಣ ಮಾತ್ರಂ ಕಲಿಸಿದಾತಂ ಗುರು" ಅನ್ನುವಾಗ ತಾನು ಬೌದ್ಧ ಗುರುವಿಗೆ ಮಾಡಿದ್ದು ದೊಡ್ಡ ಅನ್ಯಾಯ ಎಂದು ತೋರಿತು. ಇದು ಗುರುದ್ರೋಹ ಎಂದು ತೀರ್ಮಾನಿಸಿದರು. 

ಕೆಲವೊಮ್ಮೆ ವಾದಗಳಲ್ಲಿ "ವೇದಗಳು ಪ್ರಮಾಣ" ಎಂದು ಹೇಳುವಾಗ "ಈಶ್ವರನು ಹೇಳಿದ್ದರಿಂದ ಅವು ಪ್ರಮಾಣ" ಎಂದು ಒಪ್ಪಿದರೆ "ಅವು ಸ್ವತಃ ಪ್ರಮಾಣ" ಎನ್ನುವುದು ನಿರಾಕರಿಸಿದಂತೆ ಅನ್ನುವ ಕಾರಣಕ್ಕೆ "ಈಶ್ವರನೇ ಇಲ್ಲ" ಎಂದು ವಾದಿಸಿದ್ದರು. (ಇಲ್ಲಿ ಈಶ್ವರ ಅಂದರೆ ಸರ್ವಶಕ್ತನಾದ ಪರಮಾತ್ಮ ಎಂದು). ಇದು "ಈಶ್ವರ ದ್ರೋಹ" ಆಯಿತು. 

ಕರ್ಮಠರಾದದ್ದರಿಂದ ಈ ಗುರುದ್ರೋಹ ಮತ್ತು ಈಶ್ವರ ದ್ರೋಹ ಎರಡಕ್ಕೂ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕಾಯಿತು. ಇದಕ್ಕೆ ಪ್ರಾಯಶ್ಚಿತ್ತ ಅಂದರೆ "ತುಷಾಗ್ನಿ" ಮಾಡಿ ಅದರಲ್ಲಿ ಬೆಂದುಹೋಗುವುದು. ಒಂದೆಡೆ ಕುಳಿತುಕೊಂಡು ತನ್ನ ಸುತ್ತ ಭತ್ತದ ಹೊಟ್ಟಿನ ಗುಡ್ಡೆ ಮಾಡಿ, ಅದಕ್ಕೆ ಬೆಂಕಿ ಹೊತ್ತಿಸಿಕೊಂಡು ನಿಧಾನವಾಗಿ ಅದು ಸುಡುವಾಗ ಬೆಂದು ಸಾಯುವ ಭೀಕರ ಶಿಕ್ಷೆ. ಅನೇಕರು ಅದು ಬೇಡ ಎಂದು ಬೇರೆ ಬೇರೆ ರೀತಿಯಲ್ಲಿ ವಾದಿಸಿದರೂ ಅವರು ಒಪ್ಪದೇ ತುಷಾಗ್ನಿ ಪ್ರವೇಶಿಸಿದರು. 

*****

ಶ್ರೀ ಶಂಕರಾಚಾರ್ಯರಿಗೆ ತಮ್ಮ ಭಾಷ್ಯಗಳಿಗೆ ಕುಮಾರಿಲ ಭಟ್ಟರಿಂದ ವಾರ್ತಿಕಗಳನ್ನು (ವಿವರಣೆಗಳು ಅಥವಾ ಕಾಮೆಂಟರಿ) ಬರೆಸಬೇಕೆಂದು ಇಚ್ಛೆ. ಅದಕ್ಕಾಗಿ ಭಟ್ಟರನ್ನು ಕಾಣಲು ಅವರು ವಾಸವಿದ್ದ ಪ್ರಯಾಗಕ್ಕೆ ಬಂದರು. ಅವರು ಪ್ರಯಾಗಕ್ಕೆ ಬಂದು ತ್ರಿವೇಣಿ ಸಂಗಮದಲ್ಲಿ ಮಿಂದು ವಿಶ್ರಮಿಸುತಿದ್ದಾಗ ಜನಗಳು "ಅಯ್ಯೋ, ಕುಮಾರಿಲ ಭಟ್ಟರು ತುಷಾಗ್ನಿ ಪ್ರವೇಶಿಸಿಬಿಟ್ಟರಲ್ಲ" ಎಂದು ಕೂಗುತ್ತಿದ್ದುದು ಕೇಳಿಸಿತು. ತಕ್ಷಣ ಆ ಸ್ಥಳಕ್ಕೆ ಹೋದರು. ತುಷಾಗ್ನಿ ನಿದಾನವಾಗಿ ಉರಿಯುತ್ತಿತ್ತು. ಹೊಗೆಯಿಂದ ಭಟ್ಟರ ಕಣ್ಣುಗಲ್ಲಿ ನೀರು ಸುರಿಯುತ್ತಿತ್ತು. ಆದರೂ ಅವರು ಶಾಂತರಾಗಿದ್ದರು. ಕೂಗಾಟ-ಚೀರಾಟ ಇಲ್ಲ. (ಶ್ರೀ ಶಂಕರ ದಿಗ್ವಿಜಯ ಗ್ರಂಥದಲ್ಲಿ ಅವರು ಉರಿಯುತ್ತಿರುವ ಬೆಂಕಿಯ ಮಧ್ಯೆ ಪ್ರಜ್ವಲಿಸುವ ಮತ್ತೊಂದು ಬೆಂಕಿಯಂತೆ ಕಂಡರು ಎಂದು ಹೇಳುತ್ತಾರೆ). 

ಆಚಾರ್ಯರನ್ನು ಕಂಡ ಭಟ್ಟರು ಅವರನ್ನು ಸ್ವಾಗತಿಸಿ ಶಿಷ್ಯರ ಮೂಲಕ ಉಪಚರಿಸಿದರು. ಆಚಾರ್ಯರ ಜೊತೆ ಭಟ್ಟರು ಬೆಂಕಿಯಲ್ಲಿ ಕುಳಿತಿದ್ದಾಗಲೇ ಮಾತುಕತೆ ನಡೆಯಿತು. ಆಚಾರ್ಯರ ಭಾಷ್ಯದ ತಾತ್ಪರ್ಯ ಕೇಳಿ ಸ್ವತಃ ಭೇದವಾದಿಯಾಗಿದ್ದರೂ ಸಂತೋಷಪಟ್ಟರು. "ನನಗೆ ನಿಮ್ಮ ಭಾಷ್ಯಗಳಿಗೆ ವಾರ್ತಿಕ ಬರೆಯುವ ಅವಕಾಶ ಇಲ್ಲ. ಮಾಹಿಷ್ಮತಿ ನಗರದಲ್ಲಿ ನನ್ನ ಪ್ರಿಯ ಶಿಷ್ಯನಾದ ಮಂಡನ ಮಿಶ್ರ ಪಂಡಿತನಿದ್ದಾನೆ. ಅವನನ್ನು ವಾದದಲ್ಲಿ ಜಯಿಸಿ ನಿಮ್ಮ ಶಿಷ್ಯನನ್ನಾಗಿ ಮಾಡಿಕೊಳ್ಳಿ. ಅವನು ವಾರ್ತಿಕ ಬರೆದರೆ ನಾನು ಬರೆದಂತೆಯೇ. ನನ್ನ ಕಾಲ ಮುಗಿಯಿತು. ಅಪ್ಪಣೆ ಕೊಡಿ" ಎಂದು ಹೇಳಿ ಜೀವನ ಯಾತ್ರೆ ಮುಗಿಸಿದರು. 

ಆಚಾರ್ಯರು ಮಂಡನ ಮಿಶ್ರರ ಮನೆ ತಲುಪಿದ ನಂತರ ನಡೆದ ಘಟನೆಯ ವಿವರಗಳನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು. 
*****

ಈ ಸಂಚಿಕೆಯ ಮೇಲುಗಡೆ ಕೊಟ್ಟಿರುವ ಚಿತ್ರದಲ್ಲಿ ಶ್ರೀ ಕುಮಾರಿಲಭಟ್ಟರು ತುಷಾಗ್ನಿಯಲ್ಲಿ ಕುಳಿತಿರುವಾಗ ಶ್ರೀ ಶಂಕರಾಚಾರ್ಯರೊಡನೆ ಮಾತನಾಡುತ್ತಿರುವಂತೆ ಚಿತ್ರಿಸಲಾಗಿದೆ. ಚಿತ್ರದ ಮೇಲೆ ಒಂದು ಶ್ಲೋಕವನ್ನೂ ಬರೆದಿದ್ದಾರೆ. ಇದು ಮುಂಬೈ ನಗರದ ಮಾತುಂಗ ಬಡಾವಣೆಯ ಶ್ರೀ ಶಂಕರ ಮಠದ ಗೋಡೆಗಳ ಮೇಲಿನ ಚಿತ್ರ. ಅಲ್ಲಿ "ಶ್ರೀಶಂಕರ ದಿಗ್ವಿಜಯ" ಕೃತಿಯ ಕೆಲವು ದೃಶ್ಯಗಳನ್ನು ಚಿತ್ರಗಳ ಮೂಲಕ ವಿವರಿಸಿದ್ದಾರೆ. 

ಈ ಚಿತ್ರದಲ್ಲಿ ಕೊಟ್ಟಿರುವ ಶ್ಲೋಕ ಏಳನೆಯ ಸರ್ಗದ 104ನೇ ಶ್ಲೋಕ. ಅದು ಈ ರೀತಿ ಇದೆ:

ಜಾನೇ ಭವಂತಮಹಮಾರ್ಯಜನಾರ್ಥಜಾತಂ
ಅದ್ವೈತರಕ್ಷಣಕೃತೇ ವಿಹಿತಾವತಾರಮ್ 
ಪ್ರಾಗೇವ ಚೇನ್ನಯನವರ್ತ್ರು ಕೃತಾರ್ಥಯೇಥಾ:
ಪಾಪಕ್ಷಯಾಯ ನ ತದೇದೃಶಮಾಚರಿಷ್ಯಮ್ 

"ವೈದಿಕ ಜನರ ಹಿತಕ್ಕಾಗಿ ಅದ್ವೈತ ಸಿದ್ಧಾಂತವನ್ನು ರಕ್ಷಿಸಲು ತಾವು ಅವತಾರ ಮಾಡಿದ್ದೀರೆಂದು ನನಗೆ ಗೊತ್ತಿದೆ. ನನಗೆ ಈ ಮೊದಲೇ ನಿಮ್ಮ ಸಂಪರ್ಕ ಬಂದಿದ್ದರೆ  ನಾನು ಪಾಪ ಕಳೆದುಕೊಳ್ಳಲು ಈ ಕೆಲಸ ಮಾಡುತ್ತಿರಲಿಲ್ಲ. (ನಿಮ್ಮ ಭಾಷ್ಯಗಳಿಗೆ ವಾರ್ತಿಕಗಳನ್ನು ಬರೆದು ಪಾಪ ಕಳೆದುಕೊಳ್ಳುತ್ತಿದ್ದೆ. ಹೀಗೆ ತುಷಾಗ್ನಿಗೆ ಆಹುತಿಯಾಗಬೇಕಿರಲಿಲ್ಲ ಎಂದು ಸೂಚನೆ). 

ಆಸಕ್ತಿ ಇದ್ದವರು ಮುಂಬೈ ನಗರಕ್ಕೆ ಹೋದಾಗ ನೋಡಬಹುದು. 

Monday, November 17, 2025

ದೇವರ ಎಲೆ


ಹಿಂದಿನ ಒಂದು ಸಂಚಿಕೆಯಲ್ಲಿ "ಪಂಡಿತರ ಮನೆ ಎಲ್ಲಿದೆ?" ಎನ್ನುವ ಶೀರ್ಷಿಕೆಯ ಅಡಿಯಲ್ಲಿ ಶ್ರೀ ಶಂಕರಾಚಾರ್ಯರು ಮಾಹಿಷ್ಮತಿ ನಗರಕ್ಕೆ ಬಂದು ಮಂಡನ ಮಿಶ್ರ ಪಂಡಿತರ ಮನೆ ಹುಡುಕುವಾಗ ನೀರು ತರಲು ಹೊರಟಿದ್ದ ಹೆಣ್ಣು ಮಕ್ಕಳನ್ನು ಆ ಬಗ್ಗೆ ವಿಚಾರಿಸಿದ್ದು ಮತ್ತು ಅವರು ಕೊಟ್ಟ ಉತ್ತರವನ್ನು ನೋಡಿದ್ದೆವು. (ಈ ಸಂಚಿಕೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ). ಆಚಾರ್ಯರು ಅದೇ ಜಾಡಿನಲ್ಲಿ ನಡೆದು ಮಂಡನ ಮಿಶ್ರ ಪಂಡಿತರ ಮನೆ ತಲುಪಿದರು. "ಶ್ರೀ ಶಂಕರ ದಿಗ್ವಿಜಯ" ಕೃತಿಯಲ್ಲಿ ಮಿಶ್ರರ ಮನೆ ವಿಶಾಲವಾಗಿ ಒಂದು ಅರಮನೆಯಂತೆ ಇತ್ತು ಎಂದು ವರ್ಣಿತವಾಗಿದೆ. ಆಚಾರ್ಯರು ಆ ಮನೆಯ ಮುಂದೆ ಬಂದು ನಿಂತಾಗ ಮುಂಬಾಗಿಲು ಮುಚ್ಚಿತ್ತು. ಅಲ್ಲಿ ಕಂಡ ಲಕ್ಷಣಗಳಿಂದ ಅಂದು ಆ ಮನೆಯಲ್ಲಿ ಶ್ರಾದ್ಧ (ಪಿತೃಕಾರ್ಯ) ನಡೆಯುತ್ತಿರುವುದಾಗಿ ಆಚಾರ್ಯರು ತಿಳಿದರು. 

ಶ್ರಾದ್ಧ ನಡೆಯುವ ದಿನ ಬೆಳಗ್ಗೆ ಪ್ರತಿದಿನದಂತೆ ಆ ಮನೆಯ ಮುಂದೆ ರಂಗೋಲಿ ಹಾಕುವುದಿಲ್ಲ. ಅಂದು ಬಂದ ಅಭ್ಯಾಗತರನ್ನು ಸ್ವಾಗತಿಸಿ, ಮನೆಯ ಹೆಬ್ಬಾಗಿಲ ಮುಂದೆ ಕಾಲು ತೊಳೆದು, ನಂತರ ಮನೆಯ ಒಳಗೆ ಕರೆದುಕೊಂಡು ಹೋಗಿರುವ ಲಕ್ಷಣಗಳು ಕಾಣಿಸುತ್ತವೆ. ಇವನ್ನು ಕಂಡ ಅತಿಥಿಗಳು ಮನೆಯನ್ನು ಪ್ರವೇಶಿಸುವುದಿಲ್ಲ. ಗೃಹಸ್ಥರಿಂದ ಆಹ್ವಾನ ಪಡೆದು ಬಂದವರಿಗೆ "ಅಭ್ಯಾಗತರು" ಎಂದೂ, ಆಹ್ವಾನವಿಲ್ಲದೆ ಬಂದವರನ್ನು "ಅತಿಥಿಗಳು" ಎಂದೂ ನಿರ್ದೇಶಿಸುವುದು ಕ್ರಮ. (ಇದರ ಬಗ್ಗೆ ಹೆಚ್ಚು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ ಓದಿ). ಶ್ರಾದ್ಧ ಕಾರ್ಯ ಮುಗಿದ ನಂತರ ಮನೆಯ ಮುಂದೆ ರಂಗೋಲಿ ಹಾಕುತ್ತಾರೆ. ಅದಾದ ನಂತರ ಬೇರೆಯವರು ಆ ಮನೆಯೊಳಗೆ ಪ್ರವೇಶ ಮಾಡಲು ಅಭ್ಯಂತರವಿಲ್ಲ. 

ಆಚಾರ್ಯರು ತಾವು ಬಂದ ಕೆಲಸವನ್ನು ಮುಂದೆ ಹಾಕಲು ಇಷ್ಟಪಡಲಿಲ್ಲ. ವಾಯುಮಾರ್ಗದಿಂದ ಮನೆಯನ್ನು ಪ್ರವೇಶಿಸಿದರು. (ಆ ಮನೆ ವಿಶಾಲವಾಗಿದ್ದು ತೊಟ್ಟಿಯ ಮನೆಯಾಗಿತ್ತು. ಮನೆಯ ಹೊರಗಡೆ ಇದ್ದ ದೊಡ್ಡ ಮರವೊಂದನ್ನು ಹತ್ತಿ ಮನೆಯ ಕಡೆಗೆ ಬಾಗಿರುವ ಕೊಂಬೆಯ ಮೂಲಕ ಒಳಗಡೆ ಇಳಿದರು ಎಂದು ಕೆಲವರು ಹೇಳುತ್ತಾರೆ. ಯೋಗಶಕ್ತಿಯಿಂದ ಅಲ್ಲಿ ತಲುಪಿದರು ಎಂದೂ ಅಭಿಪ್ರಾಯವಿದೆ). ಅಂಗಳದಲ್ಲಿ ಇಳಿದು ಅಭ್ಯಾಗತರಾದ ಜೈಮಿನಿ-ವ್ಯಾಸರನ್ನು ಸತ್ಕರಿಸುತ್ತಿದ್ದ ಮಂಡನ ಮಿಶ್ರರ ಎದುರು ನಿಂತರು!
*****

ತಾವು ಶ್ರದ್ದೆಯಿಂದ ಮಾಡುತ್ತಿದ್ದ ಪಿರ್ತುಕಾರ್ಯದ ಮಧ್ಯೆ ಏಕಾಏಕಿಯಾಗಿ ಬಂದು ನಿಂತ ಯತಿಯೊಬ್ಬರನ್ನು ಕಂಡು ಮಂಡನ ಮಿಶ್ರರಿಗೆ ಆಶ್ಚರ್ಯವೂ, ಕೋಪವೂ ಒಟ್ಟಿಗೆ ಆದವು. ಶ್ರಾದ್ಧದ ದಿನ ಕೋಪ ಮಾಡಿಕೊಳ್ಳಬಾರದು ಎಂದು ನಿಯಮ. (ಬೇರೆ ದಿನ ಕೋಪ ಮಾಡಿಕೊಳ್ಳಬಹುದು ಎಂದು ಅರ್ಥವಲ್ಲ. ಎಂದೂ ಕೋಪ ಮಾಡಿಕೊಳ್ಳಬಾರದು. ಶ್ರಾದ್ಧದ ದಿನವಂತೂ ಸರ್ವಥಾ ಕೂಡದು ಎಂದು ತಾತ್ಪರ್ಯ). ಆಚಾರ್ಯರು, ಜೈಮಿನಿ-ವ್ಯಾಸರು ಪರಸ್ಪರ ವಂದಿಸಿದರು. ಆಚಾರ್ಯರನ್ನು ಉದ್ದೇಶಿಸಿ ಮಂಡನ ಮಿಶ್ರರು ಕೆಲವು ಪ್ರಶ್ನೆಗಳನ್ನು ಕೇಳಿದರು. ಆಚಾರ್ಯರು ಉತ್ತರಿಸಿದರು. ಪರಸ್ಪರ ದೀರ್ಘ ಸಂವಾದವೇ ನಡೆಯಿತು. 

ವಾದದ ಸಮಯದಲ್ಲಿ ವಾದಿ-ಪ್ರತಿವಾದಿಗಳು ಒಬ್ಬರು ಇನ್ನೊಬ್ಬರ ಮಾನಸಿಕ ಮತ್ತು ಬೌದ್ಧಿಕ ಸಮತೋಲನವನ್ನು ತಪ್ಪಿಸಿ ಇಕ್ಕಟ್ಟಿಗೆ ಸಿಲುಕಿಸುವುದು ಒಂದು ರೀತಿಯ ತಂತ್ರ. ಆಗ ಎದುರಾಳಿ ತಪ್ಪು ಮಾಡುವ ಸಾಧ್ಯತೆ ಹೆಚ್ಚು. (ಅನೇಕ ಕ್ರೀಡೆಗಳಲ್ಲೂ ಕೆಲವು ಆಟಗಾರರು ಈ ತಂತ್ರ ಉಪಯೋಗಿಸುವುದನ್ನು ನಾವು ನೋಡಿದ್ದೇವೆ). ಆಚಾರ್ಯರು ಇದೇ ರೀತಿಯ ತಂತ್ರವನ್ನು ಉಪಯೋಗಿಸಿದರು. ಮಿಶ್ರರ ಪ್ರತಿ ಪ್ರಶ್ನೆಗೂ ಇನ್ನೊಂದು ಅರ್ಥ ತೆಗೆದು, ಅದಕ್ಕೆ ಚಮತ್ಕಾರಿಕವಾದ ಉತ್ತರ ಕೊಟ್ಟು ಅವರ ಸಮತೋಲನವನ್ನು ಕೆದಕುತ್ತಾ ಹೋದರು. ಇದರಿಂದ ಇನ್ನಷ್ಟು ಕೋಪಗೊಂಡ ಮಿಶ್ರರು ಕೆಲವು ಅಪಶಬ್ದಗಳ ಪ್ರಯೋಗ ಮಾಡಬೇಕಾಯಿತು. 

ಈ ಸಂದರ್ಭದಲ್ಲಿ ಮಿಶ್ರರು ಮತ್ತು ಆಚಾರ್ಯರ ನಡುವೆ ನಡೆದ ಸಂವಾದ ಬಹಳ ಸೊಗಸಾಗಿದೆ. ತರ್ಕ ಮತ್ತು ಸಂಸ್ಕೃತ ಕಲಿಯುತ್ತಿರುವ ವಿದ್ಯಾರ್ಥಿಗಳು ಇದನ್ನು ಅವಶ್ಯ ಗಮನಿಸಬೇಕು. ಪ್ರತಿ ಪದಕ್ಕೂ, ಪ್ರತಿ ಪ್ರಶ್ನೆಗೂ ಬೇರೆ ಅರ್ಥ ಅನುಸಂಧಾನ ಮಾಡಿ ಆಚಾರ್ಯರು ಉತ್ತರಿಸುತ್ತಾ ಹೋದರು. ಕಡೆಗೆ ಇಬ್ಬರ ನಡುವಿನ ಮಾತುಗಳು ದಿಕ್ಕು ತಪ್ಪಿ ಎಲ್ಲೆಲ್ಲಿಗೋ ಹೋಯಿತು. 

*****
ಈ ಸಂದರ್ಭದ "ಶ್ರೀ ಶಂಕರ ದಿಗ್ವಿಜಯ" ಕೃತಿಯ ಒಂದು ಶ್ಲೋಕವನ್ನು ನೋಡಬಹುದು. ಅದು ಹೀಗಿದೆ:

ಕುತೋ ಮುಂಡೀ ಗಲಾನ್ಮುಂಡೀ 
ಪಂಥಾಸ್ತೇ ಪೃಚ್ಛತಾ ಮಯಾ 
ಕಿಮಾಹ ಪಂಥಾ ತ್ವನ್ಮಾತಾ 
ಮುಂಡೇತ್ಯಾಹ ತಥೈವಹಿ 

ಮಿಶ್ರರು "ಕುತೋಮುಂಡೀ?" ಎಂದು ಕೇಳಿದರು. "ತಲೆ ಬೋಳಿಸಿಕೊಂಡಿರುವ ಯತಿಯೇ, ಎಲ್ಲಿಂದ ಬಂದೆ?" ಎಂದು ಪ್ರಶ್ನೆ. ಇದಕ್ಕೆ ಆಚಾರ್ಯರು "ಎಲ್ಲಿಂದ ಬೋಳಿಸಿದೆ?" ಎಂದು ಅರ್ಥಮಾಡಿ "ಗಲಾನ್ಮುಂಡೀ", ಅಂದರೆ "ಕುತ್ತಿಗೆಯಿಂದ ಮೇಲೆ ಬೋಳಿಸಿದೆ", ಎಂದು ಉತ್ತರ ಕೊಟ್ಟರು. 

ಇದರಿಂದ ಕೆರಳಿದ ಮಿಶ್ರರು "ಪಂಥಾಸ್ತೇ ಪೃಚ್ಛತಾ ಮಯಾ" ಎಂದರು. "ನಾನು ಕೇಳಿದ್ದು ದಾರಿಯನ್ನು" ಎಂದು ಪ್ರಶ್ನೆ. ಇದಕ್ಕೆ ಆಚಾರ್ಯರು "ದಾರಿಯನ್ನು ಕೇಳಿದೆ" ಎಂದು ಅರ್ಥಮಾಡಿ "ಕಿಮಾಹ ಪಂಥಾ?", "ದಾರಿಯನ್ನು ಕೇಳಿದೆಯಲ್ಲಾ, ಅದು ಏನು ಹೇಳಿತು?", ಎಂದು ಪುನಃಪ್ರಶ್ನೆ ಮಾಡಿದರು. 

ಮಿಶ್ರರು ಮತ್ತಷ್ಟು ಕೋಪಗೊಂಡರು. "ತ್ವನ್ಮಾತಾ ಮುಂಡೇತ್ಯಾಹ", ಅಂದರೆ "ನಿನ್ನ ತಾಯಿ ವಿಧವೆ ಎಂದಿತು" ಎಂದು ಹೇಳಿದರು. ಆಚಾರ್ಯರು "ತಥೈವಹಿ", ಅಂದರೆ "ಹಾಗಿದ್ದರೆ ಸರಿ" ಅಂದರು. ("ದಾರಿಯನ್ನು ಪ್ರಶ್ನೆ ಕೇಳಿದ್ದು ನೀನು. ಅದು ಕೊಟ್ಟ ಉತ್ತರವೂ ನಿನಗೇ ಸೇರಿದ್ದು. ಅಂದರೆ ಅದಕ್ಕೂ ನನಗೂ ಸಂಬಂಧವಿಲ್ಲ" ಎಂದು ಅರ್ಥ).  

ಪ್ರಶ್ನೋತ್ತರ ಎಲ್ಲಿಂದ ಎಲ್ಲಿಗೋ ಹೋಯಿತು ಎಂದು ಮತ್ತೆ ಹೇಳಬೇಕಾಗಿಲ್ಲ. ಹೀಗೇ ಸಂಭಾಷಣೆ ಮುಂದುವರೆಯಿತು. 

*****

ಇದೆಲ್ಲವನ್ನೂ ಜೈಮಿನಿ-ವ್ಯಾಸರು ನೋಡುತ್ತಿದ್ದರು. ಈಗ ವ್ಯಾಸರು ಮಧ್ಯೆ ಪ್ರವೇಶಿಸಿದರು. 

"ಮಿಶ್ರರೇ, ಬಂದಿರುವವರು ಯತಿಗಳು. ಬಂದಿರುವುದು ಶ್ರಾದ್ಧಕಾಲ. ಹೀಗಿರುವಾಗ ಅವರೊಡನೆ ಹೀಗೆ ಸಂವಾದ ಸಲ್ಲದು. ಬಂದಿರುವುದು "ಶ್ರಾದ್ಧ ಸಂರಕ್ಷಕನಾದ ಶ್ರೀ ಮಹಾವಿಷ್ಣು" ಎಂದು ತಿಳಿದು ಅವರನ್ನು ಸತ್ಕರಿಸಿರಿ" ಎಂದರು. 

ಮಿಶ್ರರಿಗೆ ತಮ್ಮ ತಪ್ಪಿನ ಅರಿವಾಯಿತು. ತಕ್ಷಣ ಆಚಾರ್ಯರನ್ನು "ಭಿಕ್ಷಾ ಸ್ವೀಕಾರ" ಮಾಡಬೇಕೆಂದು ಕೋರಿದರು. ಆಚಾರ್ಯರು "ನನಗೆ ವಾದಭಿಕ್ಷೆ ಬೇಕು. ಅನ್ನದ ಭಿಕ್ಷೆ ಅಲ್ಲ" ಅಂದರು. ಮಿಶ್ರರು "ತಮ್ಮೊಡನೆ ವಾದ ಮಾಡುವುದು ಒಂದು ಭಾಗ್ಯವೇ. ಆದರೆ ಇಂದು ಶ್ರಾದ್ಧ ಕಾಲ. ಇಂದು ಈ ಭಿಕ್ಷಾ ಸ್ವೀಕರಿಸಿ. ವಾದ ನಾಳೆ ನಡೆಯಬಹುದು" ಎಂದರು. ಆಚಾರ್ಯರು ಒಪ್ಪಿದರು. 

ಆಚಾರ್ಯರಿಗೆ ಮತ್ತೊಂದು ಎಲೆಯಲ್ಲಿ ಬಡಿಸಿ ಭಿಕ್ಷಾಸ್ವೀಕಾರ ಆಯಿತು. ಜೈಮಿನಿ-ವ್ಯಾಸರನ್ನು ಕೂಡಿಸಿಕೊಂಡು ಶ್ರಾದ್ಧ ಕರ್ಮವೂ ನಡೆಯಿತು. ಹೀಗೆ ಮಿಶ್ರರು "ಯತಿಭಿಕ್ಷಾ" ಮತ್ತು "ಶ್ರಾದ್ಹಕಾರ್ಯ" ಎರಡನ್ನೂ ನಡೆಸಿದರು. 

ಮಾರನೆಯ ದಿನದಿಂದ ನಡೆದ ಐತಿಹಾಸಿಕ ವಾದದ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಎಂಟು ದಿನಗಳ ಅಖಂಡ ವಾದದಲ್ಲಿ ಸೋತ ಮಂಡನ ಮಿಶ್ರರು ಆಚಾರ್ಯರಿಂದ ಸನ್ಯಾಸ ಸ್ವೀಕರಿಸಿ "ಶ್ರೀ ಸುರೇಶ್ವರಾಚಾರ್ಯ" ಎಂದು ಪ್ರಸಿದ್ಧರಾದರು. 

*****

ಕಾಶ್ಮೀರದ ರಾಜಧಾನಿ ಶ್ರೀನಗರ ಪಟ್ಟಣದ ಹೊರಭಾಗದಲ್ಲಿ "ಶಂಕರಾಚಾರ್ಯ ದೇವಾಲಯ" ಎಂದು ಹೆಸರಿನ ಸಣ್ಣ ಬೆಟ್ಟ ಇದೆ. ಅಲ್ಲಿ ಒಂದು ಶಿವನ ದೇವಾಲಯವಿದೆ. ಅದರ ಗರ್ಭಗುಡಿಯ ಕೆಳಭಾಗದಲ್ಲಿ ಒಂದು ಗುಹೆಯಿದೆ. ಶ್ರೀ ಶಂಕರಾಚಾರ್ಯರು ಈ ಗುಹೆಯಲ್ಲಿ ವಾಸಿಸಿ ತಪಸ್ಸು ಮಾಡಿದರೆಂದು ಹೇಳುತ್ತಾರೆ. (ಹೆಚ್ಚಿನ ವಿವರಗಳಿಗೆ ಇಲ್ಲಿ ಕ್ಲಿಕ್ಈ ಮಾಡಿ ಓದಬಹುದು). ಬೆಟ್ಟದ ದೇವಾಲಯದಿಂದ ನೋಡಿದರೆ ಒಂದು ಕಡೆ "ದಾಲ್ ಲೇಕ್" ಸರೋವರ ಕಾಣುತ್ತದೆ. ಅದರ ಬಳಿ "ಸುರೇಶ್ವರಿ" ಎನ್ನುವ ಹೆಸರಿನ ದೇವಿಯ ದೇವಾಲಯವೊಂದು ಇತ್ತಂತೆ. ಈಗ ಇಲ್ಲ. "ಕಾಶ್ಮೀರಪುರವಾಸಿನಿ" ಶಾರದೆಯನ್ನು ನಮ್ಮ ಕರ್ನಾಟಕಕ್ಕೆ ಕರೆತಂದು ಶೃಂಗೇರಿಯಲ್ಲಿ ನೆಲೆಯಾಗುವಂತೆ ಮಾಡಿದ ಮಹಾನುಭಾವರು ಶ್ರೀ ಶಂಕರಾಚಾರ್ಯರು. ಹಾಗೆಯೇ ಶ್ರೀ ಸುರೇಶ್ವರಾಚಾರ್ಯರನ್ನು ಶೃಂಗೇರಿ ಪೀಠದ ಮೊದಲ ಮಠಾಧೀಶರಾಗಿ ನೇಮಿಸಿದರು. 

ಮಂಡನ ಮಿಶ್ರರ ಮನೆಯಲ್ಲಿ ನಡೆದ ಈ ಘಟನೆ ನಂತರ ಶ್ರಾದ್ಧಗಳಲ್ಲಿ "ಶ್ರಾದ್ಧ ಸಂರಕ್ಷಕ ಶ್ರೀ ಮಹಾವಿಷ್ಣು" ಬಂದಿದ್ದಾನೆ ಎಂದು ಭಾವಿಸಿ "ದೇವರ ಎಲೆ" ಹಾಕುವ ಸಂಪ್ರದಾಯ ನಡೆದು ಬಂದಿದೆ. (ದ್ವೈತಿಗಳಲ್ಲಿ ಈ ಸಂಪ್ರದಾಯ ಇಲ್ಲ). ಜ್ಞಾನವೃದ್ಧರು ಮತ್ತು ವಯೋವೃದ್ಧರೊಬ್ಬರನ್ನು ಕರೆದು ಈ ಎಲೆಯಲ್ಲಿ ಭೋಜನಕ್ಕೆ ಕೂಡಿಸುತ್ತಿದ್ದರು. ಅಥವಾ ಆ ಸಮಯದಲ್ಲಿ ಅನಿರೀಕ್ಷಿತವಾಗಿ ಬಂದ ಅತಿಥಿಗೆ ಅಲ್ಲಿ ಅವಕಾಶ ಇತ್ತು. ಯಾರೂ ಬಾರದಿದ್ದರೆ ನಂತರ ಮನೆಯ ಹಿರಿಯರು ಅಥವಾ ಶ್ರಾದ್ಧ ಮಾಡುವ ಕರ್ತೃಗಳಲ್ಲಿ ಒಬ್ಬರು ಅಲ್ಲಿ ಭೋಜನ ಮಾಡುತ್ತಿದ್ದರು. 

"ನಾಲ್ಕು ಮಾತುಗಳು" ಅನ್ನುವ ಸಂಚಿಕೆಯಲ್ಲಿ ಶ್ರಾದ್ಧ ಕರ್ಮಗಳಲ್ಲಿ ದೌಹಿತ್ರರ ಆಹ್ವಾನದ ವಿಷಯ ಬಂದಿದೆ. (ವಿವರಗಳನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು). ಮಿತ್ರರೊಬ್ಬರು ದೌಹಿತ್ರರು ಹೆಣ್ಣಾಗಿದ್ದರೆ ಈ ಎಲೆಯಲ್ಲಿ ಭೋಜನ ಮಾಡಲು ಕೂಡಿಸುತ್ತಾರೆ ಎಂದು ತಿಳಿಸಿದ್ದಾರೆ. ಅವರವರ ಮನೆಯ ಸಂಪ್ರದಾಯದಂತೆ ಇದು ನಡೆಯುತ್ತದೆ. 

ಹೀಗೆ ನಡೆದುಬಂದಿರುವ "ದೇವರ ಎಲೆ" ಒಂದು ಐತಿಹಾಸಿಕ ಮತ್ತು ಧಾರ್ಮಿಕ ಹಿನ್ನೆಲೆ ಇರುವ, ಬಹಳ ಗೌರವದಿಂದ ಕೂಡಿರುವ ಆಚರಣೆ. 

Sunday, November 16, 2025

ಪಂಡಿತರ ಮನೆ ಎಲ್ಲಿದೆ?


ಪ್ರಯಾಗ ನಗರದಿಂದ ಹೊರಟ ಆಚಾರ್ಯರು ಆಗ ತಾನೇ ಮಾಹಿಷ್ಮತಿ ನಗರಕ್ಕೆ ಬಂದು ತಲುಪಿದ್ದರು. ವ್ಯರ್ಥವಾಗಿ ಕಾಲ ಹರಣ ಮಾಡುವ ಪ್ರವೃತ್ತಿ ಅವರದ್ದಲ್ಲ. ಅವರಿಗೆ ಆಗ ಸುಮಾರು ಹದಿನೇಳು-ಹದಿನೆಂಟನೆಯ ವಯಸ್ಸು. ಆ ವಯಸ್ಸಿನ ಬಹುತೇಕ ಯುವಕರಿಗೆ ವಿದ್ಯಾಭ್ಯಾಸವೂ ಮುಗಿದಿರುವುದಿಲ್ಲ. ಜೀವನದಲ್ಲಿ ತಮ್ಮ ಗುರಿ ಏನು ಎನ್ನುವುದೇ ಗೊತ್ತಿರುವುದಿಲ್ಲ. ಆದ ಕಾರಣ ಗುರಿ ಸಾಧನೆಯ ವಿಷಯವಂತೂ ಬಲು ಬಲು ದೂರವೇ. ಆಚಾರ್ಯರಾದರೋ ತಮ್ಮ ಎಂಟನೆಯ ವಯಸ್ಸಿನಲ್ಲಿಯೇ ನಾಲ್ಕು ವೇದಗಳನ್ನು ಕಲಿತು ವಿದ್ವಾಂಸರೆಂದು ಹೆಸರು ಪಡೆದಿದ್ದರಂತೆ. ಹದಿನಾರನೆಯ ವಯಸ್ಸಿಗೇ ಭಾಷ್ಯಗಳನ್ನೂ, ಸ್ತೋತ್ರ ಕಾವ್ಯಗಳನ್ನೂ ರಚಿಸಿದ್ದ ಹಿರಿಮೆ ಅವರದ್ದು. 

ಹುಟ್ಟಿದ್ದು ದಕ್ಷಿಣ ದೇಶದ ಒಂದು ಸಣ್ಣ ಊರಿನಲ್ಲಿ. ಈ ವೇಳೆಗಾಗಲೇ ಅನೇಕ ಘನ ವಿದ್ವಾಂಸರನ್ನು ವಾದಗಳಲ್ಲಿ ಜಯಿಸಿ, ದೇಶವೆಲ್ಲ ಸುತ್ತಿ, ಕಾಶಿಯವರೆಗೂ ಬಂದು ತಮ್ಮ ವಿದ್ವತ್ತಿನ, ಸಾಧನೆಯ ಪರಿಚಯ ಮಾಡಿಕೊಟ್ಟಿದ್ದವರು. ಅನೇಕ ಮಂದಿ ಶಿಷ್ಯರನ್ನು ಸಂಪಾದಿಸಿದ್ದವರು. ತಮ್ಮ ಗುರಿ ಸಾಧನೆಯ ಮುಂದಿನ ಹೆಜ್ಜೆಯಾಗಿ ಈಗ ತಕ್ಷಣ ಮಾಹಿಷ್ಮತಿಯ ಪ್ರಸಿದ್ಧ ಪಂಡಿತರೂ, ಕರ್ಮಠರೂ ಆದ ಮಂಡನ ಮಿಶ್ರರನ್ನು ಕಂಡು ಅವರನ್ನು ವಾದಕ್ಕೆ ಆಹ್ವಾನಿಸಲು ಹೊರಟಿದ್ದರು. 

ಅದು ವೈದಿಕ ಧರ್ಮ ಅನುಸರಿಸುವವರಿಗೆ ಬಹಳ ಕಠಿಣ ಪರಿಸ್ಥಿತಿಯ ಕಾಲ. ಬೌದ್ಧ ಧರ್ಮ ಎಲ್ಲೆಲ್ಲೂ ಹರಡಿ ವಿಜೃಂಭಿಸುತ್ತಿದ್ದ ಸಮಯ. ಪ್ರಯಾಗದ ಖ್ಯಾತ ಪಂಡಿತರಾದ ಕುಮಾರಿಲ ಭಟ್ಟರು ಬೌದ್ಧ ಧರ್ಮದ ಸೂಕ್ಷ್ಮಗಳನ್ನು ತಿಳಿದುಕೊಳ್ಳದ ಹೊರತು ಬೌದ್ಧ ಪಂಡಿತರನ್ನು ವಾದಗಳಲ್ಲಿ ಸೋಲಿಸುವುದು ಸುಲಭ ಸಾಧ್ಯವಲ್ಲ ಎಂದು ಮನಗಂಡು, ಮಾರುವೇಷದಲ್ಲಿ ಅವರ ವಿದ್ಯಾಲಯವನ್ನೇ ಸೇರಿ ಎಲ್ಲಾ ಸೂಕ್ಷ್ಮಗಳನ್ನೂ ತಿಳಿದರು. ನಂತರ ಅದನ್ನು ಖಂಡನೆಮಾಡಿ ಕಡೆಗೆ ತುಷಾಗ್ನಿ (ಭತ್ತದ ಹೊಟ್ಟು ಉರಿಯುವ ಬೆಂಕಿ) ಪ್ರವೇಶಿಸಿದರು. ಆಚಾರ್ಯರು ಅವರನ್ನು ಕಾಣಲು ಹೋಗುವ ವೇಳೆಗೆ ಅವರಾಗಲೇ ಬೆಂಕಿಯಲ್ಲಿ ಬೇಯುತ್ತಿದ್ದರು. 

ಕುಮಾರಿಲ ಭಟ್ಟರು ಆಚಾರ್ಯರನ್ನು ಮಂಡನ ಮಿಶ್ರರನ್ನು ವಾದಕ್ಕೆ ಆಹ್ವಾನಿಸುವಂತೆ ತಿಳಿಸಿ ತಮ್ಮ ಜೀವನ ಮುಗಿಸಿದರು. ಆಚಾರ್ಯರು ಮಂಡನ ಮಿಶ್ರ ಪಂಡಿತರು ಆಗ ವಾಸವಿದ್ದ ಮಾಹಿಷ್ಮತಿ ನಗರಕ್ಕೆ ಈ ಕಾರಣದಿಂದ ಬಂದಿದ್ದರು. ಅವರಿಗೆ ಮಂಡನ ಪಂಡಿತರ ಮನೆ ಸೇರಬೇಕಾಗಿತ್ತು. ಅದಕ್ಕಾಗಿ ಮಂಡನ ಪಂಡಿತರ ಮನೆ ಎಲ್ಲಿದೆ ಎಂದು ಯಾರನ್ನಾದರೂ ಕೇಳಲು ನೋಡುತ್ತಿದ್ದರು. ಆಗ ಮಧ್ಯಾನ್ಹದ ಸಮಯ.  

ಆಚಾರ್ಯರು ತಮ್ಮ ದಾರಿಯಲ್ಲಿ ಎದುರಿನಿಂದ ನೀರು ತರಲು ಬರುತ್ತಿದ್ದ ಕೆಲವು ಹೆಣ್ಣು ಮಕ್ಕಳನ್ನು ಕಂಡರು. ಅವರನ್ನು "ಮಂಡನ ಪಂಡಿತರ ಮನೆ ಎಲ್ಲಿದೆ?" ಎಂದು ಕೇಳಿದರು. 

*****

ಅನೇಕ ಪ್ರಾಚೀನ ನಗರಗಳು ಈಗಲೂ ಜೀವತುಂಬಿ ಧಾರ್ಮಿಕ, ಸಾಂಸ್ಕೃತಿಕ ಮತ್ತು ವಿದ್ಯಾ ಕೇಂದ್ರಗಳಾಗಿ ಕಾಣಸಿಗುತ್ತವೆ. ಕಾಶಿ, ಪ್ರಯಾಗ (ಅಲಹಾಬಾದ್), ಅಯೋಧ್ಯಾ, ದ್ವಾರಕಾ, ಉಜ್ಜಯನಿ ಮುಂತಾದುವು ಕೆಲವು ಉದಾಹರಣೆಗಳು. ಮಾಹಿಷ್ಮತಿಯೂ ಹಿಂದೆ ಇಂತಹ ಒಂದು ನಗರವಾಗಿತ್ತು. ನರ್ಮದಾ ನದಿಯ ದ್ವೀಪವೊಂದರಲ್ಲಿ ಈ ಪಟ್ಟಣ ಇತ್ತಂತೆ. ಕಾವೇರಿ ನದಿಯು ಎರಡು ಭಾಗವಾಗಿ ಶ್ರೀರಂಗಪಟ್ಟಣ ದ್ವೀಪ ಇರುವಂತೆ. 

ಸುಪ್ರಸಿದ್ಧನಾದ ಮಾಂಧಾತ ಚಕ್ರವರ್ತಿಯ ಮಗ ಮುಚುಕುಂದ ಮಹಾರಾಜನು ಈ ನಗರದ ಕಾರಣ ಕರ್ತನಂತೆ. ಬಹಳ ಕಾಲ "ಹೈಹಯ" ಎಂಬ ಹೆಸರಿನ ರಾಜವಂಶದವರ ರಾಜಧಾನಿಯಾಗಿತ್ತು. ಕಾರ್ತಿವೀರ್ಯಾರ್ಜುನನು ಈ ಮಾಹಿಷ್ಮತಿಯ ರಾಜನಾಗಿದ್ದು ಶ್ರೀ ಪರಶುರಾಮರಿಂದ ಹತನಾದನು ಎಂದು ತಿಳಿದುಬರುತ್ತದೆ. ಈಗ ಈ ನಗರವಿಲ್ಲ. ಅನೇಕ ಭೌತಿಕ ಕಾರಣಗಳಿಂದ ಕಣ್ಮರೆಯಾದ ನಗರಗಳಲ್ಲಿ ಮಾಹಿಷ್ಮತಿಯೂ ಒಂದು. (ಈಚಿನ ಪ್ರಸಿದ್ಧ ಚಲನಚಿತ್ರ "ಬಾಹುಬಲಿ" ಮಾಹಿಷ್ಮತಿ ಎನ್ನುವ ನಗರದ ಕಥೆ ಎಂದು ಈ ಚಿತ್ರ ನೋಡಿರುವವರು ನೆನಪಿಸಿಕೊಳ್ಳಬಹುದು). 

ನರ್ಮದೆಯು ನಾವು ಪ್ರತಿದಿನ ನೆನೆಸಿಕೊಳ್ಳುವ ಒಂದು ಜೀವನದಿ. "ಗಂಗೇಚ ಯಮುನೇಚೈವ ಗೋದಾವರಿ ಸರಸ್ವತಿ, ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂಕುರು" ಎಂದು ಕಲಶ ಸ್ಥಾಪನೆ ಸಂದರ್ಭಗಳಲ್ಲಿ ಆಹ್ವಾನಿಸುತ್ತೇವೆ. ನಮ್ಮ ದೇಶದಲ್ಲಿ ಪೂರ್ವದಿಂದ ಹರಿದು ಪಶ್ಚಿಮ ಸಮುದ್ರ ಸೇರುವ ಅತ್ಯಂತ ದೊಡ್ಡ ನದಿ ಇದು. ಮಧ್ಯ ಪ್ರದೇಶ ಮತ್ತು ಗುಜರಾತು ರಾಜ್ಯಗಳ ಅನೇಕ ಎಕರೆ ಪ್ರದೇಶಗಳಿಗೆ ನೀರಾವರಿ ಮತ್ತು ಕುಡಿಯುವ ನೀರಿನ ಸ್ರೋತ ಈ ನದಿ. ಈಚಿನ "ಸರ್ದಾರ್ ಸರೋವರ್ ಡ್ಯಾಮ್" ಗುಜರಾತಿನ ಬಹುತೇಕ ಮರುಭೂಮಿಗೂ ಜೀವ ಕೊಟ್ಟಿರುವ ಸಂಗತಿ ಎಲ್ಲರಿಗೂ ಗೊತ್ತು. 

ಆಚಾರ್ಯ ಶಂಕರರಿಗೂ ನರ್ಮದೆಗೂ ಒಂದು ವಿಶೇಷ ನಂಟು. ದಕ್ಷಿಣದ ಕೇರಳದಲ್ಲಿ ಹುಟ್ಟಿದ ಅವರು ಸನ್ಯಾಸ ಸ್ವೀಕರಿಸಲು ಗುರುವನ್ನು ಹುಡುಕಿಕೊಂಡು ಹೊರಟಾಗ ಅವರಿಗೆ ಗುರುಗಳಾದ ಶ್ರೀ ಗೋವಿಂದ ಭಗವತ್ಪಾದರು ಸಿಕ್ಕಿದುದು ಈ ನರ್ಮದೆಯ ತೀರದಲ್ಲೇ. ಶ್ರೀ ಗೌಡಪಾದಾಚಾರ್ಯರ ಶಿಷ್ಯರಾದ ಶ್ರೀ ಗೋವಿಂದ ಭಗವತ್ಪಾದರು ತಮ್ಮನ್ನು ಹುಡುಕಿಕೊಂಡು ಬಂದ ಈ ಶಿಷ್ಯನಿಗೆ ಸನ್ಯಾಸ ಕೊಟ್ಟು ಶ್ರೀ ಶಂಕರಾಚಾರ್ಯ ಎಂದು ಹೆಸರು ಕೊಟ್ಟರು. ಅಲ್ಲಿಂದ ಪ್ರಾರಂಭವಾದ ಆಚಾರ್ಯರ ದೇಶ ಪರ್ಯಟನೆ ಈಗ ಮತ್ತೆ ಅವರನ್ನು ನರ್ಮದೆಯ ತೀರಕ್ಕೆ ತಂದಿತ್ತು. 

*****

"ಕುತ್ರಾಲಯೋ ಮಂಡನ ಪಂಡಿತಸ್ಯ?" ("ಮಂಡನ ಪಂಡಿತರ ಮನೆ ಎಲ್ಲಿದೆ?") ಎಂದು ಆಚಾರ್ಯರು ಕೇಳಿದ ನೀರು ತರಲು ಹೊರಟಿದ್ದ ಹೆಣ್ಣು ಮಕ್ಕಳು ಬೇರೆ ಯಾರೋ ಆಗಿರದೆ ಮಂಡನ ಮಿಶ್ರರ ಮನೆಯ ಕೆಲಸದವರೇ ಆಗಿದ್ದರು. ತಮ್ಮನ್ನು ಕೇಳುತ್ತಿರುವ ಸನ್ಯಾಸಿ ಯುವಕನನ್ನು ಅವರು ನೋಡಿದರು. ಕಂಡ ಕೂಡಲೇ ಗೌರವ ಹುಟ್ಟುವ ಆಕರ್ಷಕ ವ್ಯಕ್ತಿತ್ವ. ತೇಜಸ್ವಿ ಸನ್ಯಾಸಿ. ಮಿಶ್ರರ ಮನೆಯ ದಾರಿ ಬೇರೆ ಯಾರಿಗೋ ಹೇಳಿದಂತೆ ಸುಮ್ಮನೆ ಹೇಳಿದರೆ ಹೇಗೆ? ಅವರು ಎರಡು ಶ್ಲೋಕಗಳಲ್ಲಿ ಮಂಡನ ಮಿಶ್ರ ಪಂಡಿತರ ಮನೆಯ ಗುರುತು ಹೇಳಿದರು:

ಸ್ವತಃ ಪ್ರಮಾಣಂ ಪರತಃ ಪ್ರಮಾಣಂ 
ಕೀರಾಂಗನಾ ಯತ್ರ ಗಿರಂ ಗಿರಂತಿ 
ದ್ವಾರಸ್ಥ ನೀಡಾಂತರ ಸಂನಿರುದ್ಧಾ 
ಜಾನೀಹಿ ತಂ ಮಂಡನಮಿಶ್ರ ಗೇಹಂ 

ಫಲಪ್ರದಂ ಕರ್ಮ ಫಲಪ್ರದೋಜ:
ಕೀರಂಗನಾ ಯತ್ರ ಗಿರಂ ಗಿರಂತಿ 
ದ್ವಾರಸ್ಥ ನೀಡಾಂತರ ಸಂನಿರುದ್ಧಾ 
ಜಾನೀಹಿ ತಂ ಮಂಡನ ಪಂಡಿತೌಕಃ  

"ಹೀಗೇ ಸ್ವಲ್ಪ ಮುಂದೆ ಹೋಗಿ. ಒಂದು ಮನೆಯ ಮುಂದೆ ಪಂಜರಗಳನ್ನು ತೂಗುಹಾಕಿದ್ದಾರೆ. ಅದರಲ್ಲಿರುವ ಗಿಳಿಗಳು "ಸ್ವತಃ ಪ್ರಮಾಣಂ ಪರತಃ ಪ್ರಮಾಣಂ" ಎಂದು ಕೂಗುತ್ತಿರುತ್ತವೆ. ಮತ್ತೆ ಕೆಲವು ಪಂಜರದ ಗಿಣಿಗಳು "ಫಲವನ್ನು ಕೊಡತಕ್ಕದ್ದು ಕರ್ಮ; ಫಲವನ್ನು ಕೊಡುವವನು ಈಶ್ವರ" ಎಂದು ಹೇಳುತ್ತಿರುತ್ತವೆ. ಅದೇ ಮಂಡನ ಮಿಶ್ರ ಪಂಡಿತರ ಮನೆ ಎಂದು ತಿಳಿಯಿರಿ!"

ಒಂದು ಸಾಮಾನ್ಯ ಪ್ರಶ್ನೆಗೆ ಎಂತಹ ಸುಂದರ ಉತ್ತರ! "ಮಂಡನ ಮಿಶ್ರರ ಮನೆಗೆ ಬರುವ ಅನೇಕ ಮೀಮಾಂಸಕರು, ತಾರ್ಕಿಕರು ಮತ್ತು ವಿದ್ವಾಂಸರು ನಡೆಸುವ ವಿದ್ವತ್ಸಭೆಗಳಲ್ಲಿ ನಡೆಯುವ ಚರ್ಚೆಗಳನ್ನು ಕೇಳಿಸಿಕೊಂಡಿರುವ ಗಿಣಿಗಳೂ ಸಹ ತಮ್ಮತಮ್ಮಲ್ಲಿ (ಬೇರೆ ವಿಷಯಗಳನ್ನು ಮಾತಾಡುವುದು ಬಿಟ್ಟು) ವೇದ-ಶಾಸ್ತ್ರ ಸಂಬಂಧಿ ವಿಷಯಗಳ ವಾಕ್ಯಾರ್ಥ ಮಾಡುತ್ತಿರುತ್ತವೆ. ಅದೇ ಪಂಡಿತರ ಮನೆ" ಎಂದು ಭಾವಾರ್ಥ. 

ಮಂಡನ ಮಿಶ್ರರ ಮನೆಯ ಕೆಲಸದ ಹೆಣ್ಣು ಮಕ್ಕಳೇ ಈ ರೀತಿ ಹೇಳುವವರಾದರೆ ಮಂಡನ ಮಿಶ್ರರು ಸ್ವತಃ ಎಂತಹ ದೊಡ್ಡ ವಿದ್ವಾಂಸರಾಗಿರಬೇಕು!

*****

ಮೇಲೆ ಹೇಳಿದ ಪ್ರಸಂಗ ಶ್ರೀ ವಿದ್ಯಾರಣ್ಯರು ರಚಿಸಿದ್ದು ಎನ್ನಲಾದ (ಅವರು ಸನ್ಯಾಸ ತೆಗೆದುಕೊಳ್ಳುವ ಮೊದಲಿನ "ಮಾಧವ" ಎನ್ನುವ ಹೆಸರಿನಲ್ಲಿ ರಚಿಸಿದ್ದು) "ಶ್ರೀ ಶಂಕರ ದಿಗ್ವಿಜಯ" ಕಾವ್ಯದ ಎಂಟನೆಯ ಸರ್ಗದಲ್ಲಿ ಕಂಡುಬರುತ್ತದೆ. ಈ ಕಾವ್ಯವು 16 ಸರ್ಗಗಳಲ್ಲಿ 1,800 ಶ್ಲೋಕಗಳ ಸುಂದರ ಕೃತಿ. ಒಂದು ಕಾವ್ಯ ಎಂದು ಓದಿ ರಸಾಸ್ವಾದನೆ ಮಾಡಬಹುದು. ಶ್ರೀ ಶಂಕರ ಭಗವತ್ಪಾದರ ಜೀವನ ಚರಿತ್ರೆ ಎಂದಾದರೂ ಓದಬಹುದು. 

ಶ್ರೀ ವಿದ್ಯಾರಣ್ಯರು ಕನ್ನಡಿಗರಿಗೆ ಪ್ರಾತಃ ಸ್ಮರಣೀಯರು. ವಿಜಯನಗರ ಸ್ಥಾಪನೆಗೆ ಮೂಲ ಕಾರಣರು. ಹದಿನಾಲ್ಕನೇ ಶತಮಾನದಲ್ಲಿ ನಮ್ಮ ಕರ್ನಾಟಕದಲ್ಲಿ ಸಮಾಜಕ್ಕೆ ಅವಿಸ್ಮರಣೀಯ ಸೇವೆ ಸಲ್ಲಿಸಿದವರು. ಇದರ ಬಗ್ಗೆ ಹೆಚ್ಚಿನ ವಿವರಗಳನ್ನು ಮುಂದೆ ಒಂದು ದಿನ ನೋಡೋಣ. 

Thursday, May 14, 2015

32 is a big number

A beautiful view of Srinagar city, the valley and Dal Lake can be had from Zabarwan mountain hill top, about 10 Kilometers from Srinagar city.  A good road connects the hill with the city. The hill is called "Sulaiman Hill" and well-known for the "Shankaracharya Temple".  This hill is considered as sacred by many; Buddhists call it Pas-Pahar, Persians and Jews call it as "Bagh-i-Sulaiman" and "Garden of King Solomon" respectively.  In order to reach the top of the hill, one has to climb 243 steps from the parking lot.  Well constructed steps provide support and even elderly people can be seen climbing the hill enthusiastically. The temple is at an elevation of about 1100 feet above Srinagar city and thus gives a beautiful view of the surroundings in all directions (360').


The entire hill area with the temple complex is under the guard of the security forces. Cameras and mobiles are not allowed to be taken to the top of the hill. Hence one has to be satisfied with the photos available on the net. The visitors are put through security check before they start their climb of the 243 steps to the base of the temple and another two dozen steps to the sanctum sanctorum. This temple is considered as the oldest temple in the Kashmir area.  It is an important tourist spot as well and thronged by hundreds of tourists that come to visit Srinagar every day.  A small bowl of excellent "Kheer" prasadam awaits all those who visit the temple and come down the stairs.

One stream of opinion believes that Emperor Ashoka's son Jaluka originally constructed the temple around 200 BC. King Gopaditya who ruled over the area is said to have carried out extensive work at the present temple site. The temple is dedicated to Lord Shiva by name "Jyeshteswara".  This Jyeshteswara temple has got the popular name "Shankaracharya Temple" as Sri Adi Shankaracharya or Acharya Sri Shankara Bhagavatpada is said to have come here in the early 8th century and stayed for sometime.  There is a small cave by the side of the temple where the seer is believed to have sat in penance during his stay.  A large photo of the Acharya is kept in the cave. The cave itself is about 50 square feet in area.  


The hill was known as 'Gopadri" as mentioned by the well-known Kashmiri poet Kalhana in his "Rajatarangini".  Another King Lalitaditya is said to have enlarged the temple by making additions. The present "Shivalingam" is believed to have been placed there in the 19th century, during the period of Sikh rulers.  The Shivalinga is indeed beautiful and about two feet tall. Unlike in South India, devotees are permitted to touch the Shivalinga as is the practice in many North Indian temples. After the darshan of the Jyeshteswara, visitors go round viewer's gallery around the main temple to have a breath taking view of the Srinagar city and its surroundings, including the snow clad mountains of the "Pir Panjal" range of the Himalayas.  The view is so beautiful that the visitors have to be reminded by the accompanying guides about the further journey to force them to proceed to their vehicles.     


Acharya Adi Shankara is believed to have been born in the village Kaladi in Kerala. We are shown a house on the banks of river Purna when we visit that place, as the house of the Acharya during his childhood days. He took sanyas and traveled all over the country on foot for several years. During his period (788 AD to 820 AD), Kashmir was a great center of learning like Kashi, and this took him to Srinagar.  He is believed to have stayed in the cave near the Jyeshteswara temple for some time while propagating his "Advaita" philosophy.  The picture alongside gives the view of the photo of Acharya kept in the cave. 

One of India's finest poet philosophers, Bhartruhari has made a delightful calculation of the span of human life.  If the life of a human being is considered as 100 years, half of it is lost in sleep in the night.  Of the remaining 50 years, another half is lost in childhood and old age. Childhood when one does not know what to do and old age when one cannot do what he wants to do. Of the remaining 25 years, lot of time is consumed by illness, thinking of the loved ones who are separated for various reasons and serving others for earning livelihood. Where is the time for a human being to be happy and achieve something, he asks.  Sri Shankara Bhagavatpada is said to have lived for only 32 years and renounced the physical body in Kedarnath at that young age.  In this short span of 32 years, being born in Kalady in Kerala, he traveled allover the country by foot when there were no transport facilities.  He made invaluable contributions to Indian Philosophy.  His literary works and principles he enunciated in the "Advaita" school have stood the test of time for over twelve centuries. Many other schools of thinking have later come up and spread the vastness of Indian Philosophy manifold.  He has indeed shown that a life span of 32 years is not all that small. Yes, 32 is truly a big number.

It took me nearly twice that number of years to go to the cave (not by walk, but by aeroplanes and cars!). The least one of the present generation could do is to visit the Jyeshteswara Temple and the Shankaracharya Cave and pay our respects to the memory of the great teacher.  Narrow consideration of religion or any other bias need not cloud our thinking and judgement while doing so.