Showing posts with label goodartha. Show all posts
Showing posts with label goodartha. Show all posts

Saturday, March 29, 2025

ಅನುಭವದ ಆಳ-ಅಗಲಗಳು


ಹಿಂದಿನ ಸಂಚಿಕೆಯಲ್ಲಿ "ಅನುಭವದಿಂದ ಬಂದ ಅರ್ಥ" ಎನ್ನುವ ಶೀರ್ಷಿಕೆಯಡಿ "ಒಬ್ಬಟ್ಟು ಮತ್ತು ಹೋಳಿಗೆ" ಉದಾಹರಣೆಯೊಂದಿಗೆ ಕೃತಿಗಳ ಅಭ್ಯಾಸದಲ್ಲಿ ಹೊರಗಿನ ಅರ್ಥ, ಒಳಗಿನ ಅರ್ಥ, ಗುಹ್ಯಾರ್ಥ ಮತ್ತು ಅನುಭವದಿಂದ ತಿಳಿದು ಬರುವ ಅರ್ಥ ವಿಶೇಷಗಳನ್ನು ನೋಡಿದೆವು. (ಈ ಸಂಚಿಕೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ). 

"ಬಾಹ್ಯರ್ಥ - ಅಂತರಾರ್ಥ - ಗೂಡಾರ್ಥ" ಅನ್ನುವ ಮೂಲ ಸಂಚಿಕೆಯಲ್ಲಿ ಕೇವಲ ಓದುವುದರಿಂದ ತಿಳಿಯುವ ಹೊರ ಅರ್ಥ, ಗಮನವಿಟ್ಟು ಓದುವುದರಿಂದ ಹೊಳೆಯುವ ಅಂತರಾರ್ಥ ಮತ್ತು ತಿಳಿದವರಿಂದ ಹೆಚ್ಚಿನ ಶ್ರಮವಹಿಸಿ ತಿಳಿಯಬಹುದಾದ ಗೂಡಾರ್ಥಗಳ ಬಗ್ಗೆ ಸ್ವಲ್ಪ ಯೋಚಿಸಿದ್ದೆವು. (ಇದನ್ನು ಓದಲು ಇಲ್ಲಿ ಕ್ಲಿಕ್ ಮಾಡಿ). 

ಈ ಮೂರೂ ಅರ್ಥಗಳನ್ನು ದಾಟಿದ ಮತ್ತು ಪಡೆದ ಅರ್ಥಗಳು ಕೇವಲ ಪುಸ್ತಕದ ಬದನೇಕಾಯಿ ಆಗದೆ ನಮ್ಮ ಜೀವನದಲ್ಲಿ ಮತ್ತು ಸಾಧನೆಯ ದಾರಿಯಲ್ಲಿ ಉಪಯೋಗಕ್ಕೆ ಬರುವ ದಾರಿಗಂಟಾಗಿ (ಪಾಥೇಯ ಅಥವಾ ಪ್ರಯಾಣದ ಕಾಲದಲ್ಲಿ ಸೇವಿಸಲು ಕೊಂಡೊಯ್ಯುವ ಆಹಾರ-ಪಾನೀಯಗಳು) ಉಳಿಯಲು ಅನುಭವದ ಅವಶ್ಯಕತೆ ಅತಿ ಮುಖ್ಯವಾಗುತ್ತದೆ. ಅಂತಹ ಅನುಭವ ಕಲಿಸುವ ಪಾಠಗಳ ಸ್ವಲ್ಪಮಟ್ಟಿನ ನೋಟಕ್ಕೆ ಇಲ್ಲಿ ಪ್ರಯತ್ನ ಮಾಡೋಣ.
*****

ಒಬ್ಬ ಪೆದ್ದ,, ಒಬ್ಬ ಸಾಮಾನ್ಯ ಮನುಷ್ಯ ಮತ್ತು ಒಬ್ಬ ಜಾಣ, ಇವರು ಮೂರು ಮಂದಿಯ ಗುಣ-ಲಕ್ಷಣಗಳೇನು? ಸುಲಭವಾಗಿ "ಅವನೊಬ್ಬ ಪೆದ್ದ" ಎನ್ನುತ್ತೇವೆ. ಹೇಗೆ ಪೆದ್ದ? ಯಾಕೆ ಪೆದ್ದ? ಲೋಕಾರೂಢಿಯಲ್ಲಿ ಸಾಮಾನ್ಯವಾದ ವಿಷಯಗಳನ್ನು ಅರ್ಥಮಾಡಿಕೊಳ್ಳಲಾಗದ ಮತ್ತು ಸಾಮಾನ್ಯ ಕೆಲಸಗಳನ್ನೂ ಸರಿಯಾಗಿ ಮಾಡದವನು ಪೆದ್ದ ಎಂದು ವ್ಯವಹಾರ. ಶಾಲೆಗಳಲ್ಲಿ, ತರಗತಿಗಳಲ್ಲಿ ನಪಾಸಾದವರನ್ನು (ಫೇಲ್) ಪೆದ್ದ ಅನ್ನುತ್ತಿದ್ದರು. ಕೆಲವು ವರ್ಷಗಳ ನಂತರ ಅದೇ ಪೆದ್ದರು ಅವರ ಜೊತೆ ಓದಿ ಜಾಣರೆನ್ನಿಸಿಕೊಂಡವರಿಗಿಂತ ಜೀವನದಲ್ಲಿ ಎಷ್ಟೋ ಮುಂದೆ ಹೋಗಿರುವುದನ್ನು ನಾವು ಕಂಡಿದ್ದೇವೆ. ಕೆಲವು ವೇಳೆ ಹೆಚ್ಚಿನ ಜ್ಞಾಪಕಶಕ್ತಿ ಇರುವವರನ್ನು ಮತ್ತು ಅದರಿಂದಾಗಿ ಹೆಚ್ಚು ಅಂಕಗಳನ್ನು ಪರೀಕ್ಷೆಯಲ್ಲಿ ಪಡೆಯುವವರನ್ನು ಜಾಣರೆಂದು ತಪ್ಪಾಗಿ ತಿಳಿಯುವುದೂ ಉಂಟು. ಕಠಿಣ ಪ್ರಸಂಗಗಳನ್ನು ಸುಲಭವಾಗಿ ನಿಭಾಯಿಸುವವರನ್ನು ಜಾಣ ಎನ್ನುವುದೂ ಕೇಳಿದ್ದೇವೆ. ಓದು ಮತ್ತು ವಿದ್ಯಾರ್ಹತೆ ಇಲ್ಲದೆ ಪೆದ್ದ ಎನ್ನಿಸಿಕೊಂಡವರು ವ್ಯವಹಾರ ಚತುರರಾಗಿ ಡಿಗ್ರಿಗಳುಳ್ಳ ಸಹಪಾಠಿಗಳನ್ನು ಕೆಲಸಕ್ಕೆ ಇಟ್ಟುಕೊಂಡಿರುವುದೂ ಕಾಣಬಹುದು. 

ಈ ಮೂರು ವರ್ಗವನ್ನು ಹೀಗೂ ಗುರುತಿಸಬಹುದು:
  • ತನ್ನ ತಪ್ಪುಗಳಿಂದ ಆದ ಅನುಭವಗಳಿಂದಲೂ ಪಾಠ ಕಲಿಯದೆ ಅದೇ ತಪ್ಪುಗಳನ್ನು ಮತ್ತೆ ಮತ್ತೆ ಮಾಡುತ್ತಾ ತೊಂದರೆ ಅನುಭವಿಸುವನು ಪೆದ್ದ. 
  • ತನ್ನ ತಪ್ಪುಗಳಿಂದ ಆದ ಅನುಭವಗಳಿಂದ ಪಾಠ ಕಲಿತು ಅದೇ ತಪ್ಪುಗಳನ್ನು ಮತ್ತೆ ಮಾಡದೆ ಸುಧಾರಿಸಿಕೊಳ್ಳುವವನು ಸಾಮಾನ್ಯ ಮನುಶ್ಯ. 
  • ಇನ್ನೊಬ್ಬರ ತಪ್ಪುಗಳಿಂದ ಅವರು ಅನುಭವಿಸುವ ತೊಂದರೆಗಳನ್ನು ಕಂಡು, ಅಂತಹ ತಪ್ಪುಗಳನ್ನು ಮಾಡದೇ ಮುಂದುವರೆದು, ಪರರ ಅನುಭವಗಳಿಂದ ಪಾಠ ಕಲಿಯುವವನು ಜಾಣ. 
ಈ ಕಾರಣದಿಂದ ಅನುಭವದಿಂದ ಕಲಿಯುವ ಪಾಠ ಬಹಳ ದೊಡ್ಡದು. ಆದರೆ, ಅನೇಕ ವೇಳೆ, ಇಂತಹ ಅನುಭವದ ಪಾಠಕ್ಕೆ ತೆರಬೇಕಾದ ಶುಲ್ಕವೂ (ಫೀಸು) ಬಹಳ ದುಬಾರಿ!

*****

ಜೀವನದಲ್ಲಿ ಎಲ್ಲರಿಗೂ ಎಲ್ಲ ರೀತಿಯ ಅನುಭವಗಳು ಆಗುವುದಿಲ್ಲ. ಹುಟ್ಟಿ-ಬೆಳೆದ ಕುಟುಂಬ, ಸುತ್ತಲಿನ ವಾತಾವರಣ, ಆರ್ಥಿಕ ಸ್ಥಿತಿ-ಗತಿ, ಸಾಂಸ್ಕೃತಿಕ ಮತ್ತು ಸಾಮಾಜಿಕ ಸ್ಥಾನ-ಮಾನ, ಮುಂತಾದುವುಗಳು ಒಬ್ಬ ಮನುಷ್ಯ ಪಡೆಯಬಹುದಾದ ಅನುಭವಗಳನ್ನು ಬಹುತೇಕ ನಿರ್ಧರಿಸುತ್ತವೆ. ವ್ಯಕ್ತಿ ಬದುಕುವ ಕಾಲಮಾನವೂ ಇದರಲ್ಲಿ ಮುಖ್ಯವಾಗುತ್ತದೆ. ಇವೆಲ್ಲ ಒಂದೇ ಸಮ ಇದ್ದರೂ ಸಿಗುವ ಅವಕಾಶಗಳು, ಕೈ ಹಿಡಿದು ನಡೆಸುವ ಜನ, ಮತ್ತು ವ್ಯಕ್ತಿಯ ಪರಿಶ್ರಮ ಇವೆಲ್ಲವೂ ಅನುಭವಗಳ ಆಳ-ಅಗಲಗಳನ್ನು ನಿರ್ಧರಿಸುತ್ತವೆ. ಎರಡನೇ ಮಹಾಯುದ್ಧದ ಸಮಯದಲ್ಲಿ ಹುಟ್ಟಿದವರ ಅನುಭವಗಳಿಗೂ ಇಪ್ಪತ್ತೊಂದನೆಯ ಶತಮಾನದಲ್ಲಿ ಹುಟ್ಟಿದವರ ಅನುಭವಗಳಿಗೂ ಅರ್ಥಾತ್ ಸಂಬಂಧ ಇರದು. 

ಕೆಲವು ರೀತಿಯ ಅನುಭವಗಳು ಕೆಲವು ವರ್ಗಗಳಿಗೆ ಮೀಸಲು. ಉದ್ಯೋಗದಲ್ಲಿ ಜೀವನ ಸವೆಸಿದವರ ಅನುಭವ ವ್ಯಾಪಾರದಲ್ಲಿರುವವರಿಗೆ ಬರದು. ಹಾಗೆಯೇ ಒಂದೇ ಸ್ಥಳದಲ್ಲಿ ಜೀವನ ನಡೆಸುವವರಿಗೆ ಆಗುವ ಅನುಭವಗಳಿಗೂ ಸದಾ ಸಂಚಾರದಲ್ಲಿರುವವರಿಗೂ ಆಗುವ ಅನುಭವಗಳು ಬೇರೆ ಬೇರೆ. ಗಂಡಸರ ಅನುಭವ ಮತ್ತು ಹೆಂಗಸರ ಅನುಭವ ಒಂದೇ ಆಗಲು ಸಾಧ್ಯವೇ ಇಲ್ಲ. ಈ ಕಾರಣದಿಂದ ಎಲ್ಲವನ್ನೂ ನಮ್ಮ ಅನುಭವದಿಂದಲೇ ಕಲಿಯುತ್ತೇವೆ ಅನ್ನುವುದು ಹುಚ್ಚುತನ. ಎಲ್ಲವೂ ನಮ್ಮ ಅನುಭವ ಅಥವಾ "ಸ್ವಾನುಭವ" ಆಗಲಾರದು. ಮತ್ತೊಬ್ಬರ ಅನುಭವ ಅಥವಾ "ಪರಾನುಭವ" ಈ ಕಾರಣದಿಂದ ಮುಖ್ಯ ಆಗುತ್ತದೆ. ಅನೇಕ ಸಾಧಕರು ಶತ ಶತಮಾನಗಳಿಂದ ಕೂಡಿಟ್ಟಿರುವ ಅಮೂಲ್ಯ ಅನುಭವಗಳ ಗುಡಾಣವೇ ನಮ್ಮ ಬಳಿ ಇದೆ. ಇವುಗಳನ್ನು ಕೊಟ್ಟವರಿಗೆ ಯಾವುದೇ ಸ್ವಾರ್ಥ ಇರಲಿಲ್ಲ. ಇವುಗಳ ಸರಿಯಾದ ಉಪಯೋಗ ಬಹುಮೂಲ್ಯ ಸರಕನ್ನು ಶುಲ್ಕವಿಲ್ಲದೆ ಮತ್ತು ಸುಲಭವಾಗಿ ಪಡೆಯಲು ನೆರವಾಗುವುದು. 

ಅನುಭವದ ಆಳ-ಅಗಲಗಳು ಎನ್ನುವ ಶೀರ್ಷಿಕೆಯ ಅಡಿಯಲ್ಲಿ ಚರ್ಚಿಸುವಾಗ ಎಲ್ಲರಿಗೂ ಸಮಾನವಾಗಿ ಆಗುವ, ಎಲ್ಲ ದೇಶ-ಕಾಲಗಳಿಗೂ ಅನ್ವಯ ಆಗುವ ಅನುಭವದ ಉದಾಹರಣೆಯನ್ನು ಹಿಡಿಯುವುದು ಆಗದ ಮಾತು. ಜೀವನದಲ್ಲಿ ಎಲ್ಲಾ ಮನುಷ್ಯರಿಗೂ ಆಗಿಯೇ ಆಗುತ್ತದೆ ಅನ್ನುವ ಅನುಭವಗಳು ಕೇವಲ ಎರಡು. ಹುಟ್ಟು ಮತ್ತು ಸಾವು. ಎಲ್ಲರೂ ಹುಟ್ಟಲೇಬೇಕು. ಹುಟ್ಟಿದವರೆಲ್ಲರೂ ಸಾಯಲೇಬೇಕು. ತಮಾಷೆಯ ವಿಷಯವೆಂದರೆ ನಾವೆಲ್ಲರೂ ಹುಟ್ಟಿದ್ದರೂ ನಮಗೆ ಅದರ ಅನುಭವವಿಲ್ಲ! ಯಾರಿಗಾದರೂ ತಮ್ಮ ಜೀವನದ ಅನುಭವ ಇದ್ದರೆ ಅದು ಸುಮಾರು ನಾಲ್ಕೈದು ವರ್ಷಗಳ ಬಾಲ್ಯದ ನಂತರ. ಎಲ್ಲರೂ ಒಂದು ದಿನ ಕಂತೆ ಒಗೆಯಬೇಕಾದ್ದೇ ಆದರೂ ಸಾವು ಆದ ಮೇಲೆ ಹಿಂದೆ ಬಂದು ಬೇರೆಯವರಿಗೆ ಹೇಳಲು ಆಗುವುದಿಲ್ಲ. ಆದ ಕಾರಣ ಈ ಅನುಭವಗಳನ್ನು ಪರಾನುಭವದಿಂದಲೇ ನಮ್ಮ ಜೀವಿತ ಕಾಲದಲ್ಲಿ ತಿಳಿಯಬೇಕಾದ್ದು ಒಂದು ವಿಪರ್ಯಾಸ. 

*****

ಎಲ್ಲರಿಗೂ ಅನುಭವವಾಗುವ ಮತ್ತು ತಮ್ಮ ಜೀವಿತಕಾಲದಲ್ಲಿ ನಡೆದ ಘಟನೆ ಅಂದರೆ ಹುಟ್ಟು ಎಂದಾಯಿತು. ತಮ್ಮ ಹುಟ್ಟಿನ ಅನುಭವ ಗೊತ್ತಿಲ್ಲದಿದ್ದರೂ (ನೆನಪಿಲ್ಲದಿದ್ದರೂ) ತಮ್ಮ ಜೀವಿತ ಕಾಲದಲ್ಲಿ ಪ್ರತಿಯೊಬ್ಬರೂ ಬೇರೆ ಮಕ್ಕಳು ಹುಟ್ಟುವುದನ್ನು ನೋಡುತ್ತಾರೆ. ಬಹಳ ಚಿಕ್ಕ ವಯಸ್ಸಿನಲ್ಲಿ ಈ ಘಟನೆಗಳು ಹೆಚ್ಚು ಅರ್ಥವಾಗದಿದ್ದರೂ ವಯಸ್ಸಾದಂತೆ ಅರ್ಥವಾಗುತ್ತಾ ಹೋಗುತ್ತದೆ. ಕಾಲಕ್ರಮದಲ್ಲಿ ತಮ್ಮ ಮನೆಯಲ್ಲೇ ಶಿಶು ಜನನಗಳನ್ನು ನೋಡುತ್ತಾರೆ. ಆದ್ದರಿಂದ ನಮ್ಮ ಚರ್ಚೆಗೆ ಈ ಸಂದರ್ಭವನ್ನೇ ಬಳಸುವುದು ಸೂಕ್ತ. 

ಬೇಕಾದ ಉದಾಹರಣೆ ಬಾಹ್ಯರ್ಥ, ಅಂತರಾರ್ಥ ಮತ್ತು ಗುಹ್ಯಾರ್ಥ ಒಳಗೊಂಡಿರಬೇಕು. ಅನುಭವದ ಪಾಠವೂ ಅದಕ್ಕೆ ಸೇರಬೇಕು. ಆದ್ದರಿಂದ ಶ್ರೀಮದ್ ಭಾಗವತದ ಏಳನೆಯ ಸ್ಕಂದ, ಎರಡನೇ ಅಧ್ಯಾಯದ ಪ್ರಸಿದ್ಧ "ಸ ರಕ್ಷಿತಾ ರಕ್ಷತಿ ಯೋ ಹಿ ಗರ್ಭೇ" (ಭಾಗವತ 7.2.38) ಅನ್ನುವ ಉದಾಹರಣೆಯನ್ನೇ ನೋಡೋಣ. ಒಂದು ಸಾವು ಆಗಿರುವಾಗ ಆ ಸತ್ತ ದೇಹದ ಸುತ್ತ ಕುಳಿತು ದುಃಖಿಸುತ್ತಿರುವ ಪರಿವಾರದವರನ್ನು ಕುರಿತು ಯಮಧರ್ಮನು "ನಾವು ತಾಯಿಯ ಗರ್ಭದಲ್ಲಿ ಇರುವಾಗ ಕಾಪಾಡಿದವನೇ ನಮ್ಮನ್ನು ಮುಂದೆಯೂ ಕಾಪಾಡುತ್ತಾನೆ" ಎಂದು ಹೇಳುವ ಸಂದರ್ಭ. ಇದು ಮುಂದೆ ಬರುವ ಪ್ರಹ್ಲಾದ ಮತ್ತು ಹಿರಣ್ಯಕಶಿಪು ವೃತ್ತಾಂತಕ್ಕೆ ಪೀಠಿಕೆಯಂತೆ ಇದೆ. 

ನಂಬುವವರು "ಶಿಶು ತಾಯಿಯ ಗರ್ಭದಲ್ಲಿ ಇರುವಾಗ ಪರಮಪುರುಷನು ಕಾಪಾಡುತ್ತಾನೆ, ಜನನ ಆಗುವವಗಳೂ ರಕ್ಷಿಸುತ್ತಾನೆ ಮತ್ತು ಮುಂದೆಯೂ ಪೊರೆಯುತ್ತಾನೆ" ಎಂದು ನಂಬುತ್ತಾರೆ. ಭಾಗವತದ ಈ ಭಾಗಗಳನ್ನು ಓದಿದರೆ ಬಾಹ್ಯರ್ಥ, ಅಂತರಾರ್ಥ ಮತ್ತು ಗೂಡಾರ್ಥಗಳ ಹರವು ಗೊತ್ತಾಗುತ್ತದೆ. ಈಗ ಅನುಭವದ ಲೇಪನ ಹೇಗೆ ಈ ನಂಬಿಕೆಯನ್ನು ಗಟ್ಟಿ ಮಾಡುತ್ತದೆ ಎಂದು ನೋಡೋಣ. 

ಮುಂದೆ ಹೋಗುವ ಮೊದಲು ಒಂದು ಮಾತು. ಶಿಶು ಜನನದ ನಿಜವಾದ ನೋವು ಮತ್ತು ಅನುಭವ ಹೆತ್ತ ತಾಯಿಗೆ ಮಾತ್ರ ಗೊತ್ತು. ಇದರಲ್ಲೂ ವ್ಯತ್ಯಾಸಗಳಿವೆ. ಕೆಲವು ಬಹು ಸುಲಭದ ಹೆರಿಗೆ (ನೋಡುವ ಬೇರೆಯವರಿಗೆ) ಇರಬಹುದು. ಮತ್ತೆ ಕೆಲವು ಬಹು ಪ್ರಯಾಸದ ಹೆರಿಗೆ ಇರಬಹುದು. ನೂರು ಹೆರಿಗೆ ಮಾಡಿಸಿರುವ ಪುರುಷ ವೈದ್ಯನಿಗೆ ಹೆರಿಗೆ ಮಾಡಿಸುವುದು ಸ್ವಾನುಭವವಾದರೂ ಹೆರುವುದು ಪರಾನುಭವವೇ ಅಲ್ಲವೇ? ನಾವೆಲ್ಲರೂ, ಸ್ತ್ರೀ ಪುರುಷ ಎಂಬ ಭೇದವಿಲ್ಲದೆ, ಈ ರೀತಿ ಹುಟ್ಟಿದವರೇ! 

***** 

ಸುಮಾರು ಐವತ್ತು ವರುಷಗಳ ಹಿಂದಿನ ಮಾತು. ಆಗ ಇನ್ನೂ ಉಗಿಬಂಡಿಗಳ ಕಾಲ. ಅಂದರೆ ಟ್ರೇನುಗಳು ಸ್ಟೀಮ್ ಎಂಜಿನ್ನುಗಳ ಬಲದಿಂದ ಓಡುತ್ತಿದ್ದವು. ಸುಮಾರು ಹದಿನೆಂಟು ಅಡಿಗಳ ಹಳಿಗಳು ಸೇರಿಸಿ ಮಾಡಿದ ರೈಲು ಮಾರ್ಗಗಳು. ಈಗಿನಂತೆ ಮಧ್ಯೆ ಮಧ್ಯೆ ಹಳಿಗಳನ್ನು ಎರಕ ಹೊಯ್ದು ಕೂಡಿಸುವ ವ್ಯವಸ್ಥೆ ಇನ್ನೂ ಬಂದಿರಲಿಲ್ಲ. ಬೋಲ್ಟು ಮತ್ತು ನಟ್ಟುಗಳು ಉಪಯೋಗಿಸಿ ಸೇರಿಸುವುದು ಬಹಳ ಹತ್ತಿರವಿದ್ದುದರಿಂದ ಶಬ್ದವೂ ಹಿಂದು-ಮುಂದಿನ ಜೋಲಿ ಹೊಡೆಯುವುದೂ ಬಹಳ ಹೆಚ್ಚಿತ್ತು, ಮೂರನೆಯ ದರ್ಜೆ ಇನ್ನೂ ಹೋಗಿರಲಿಲ್ಲ. (ಅದು ಹೋಗಿದ್ದು ಸುಮಾರು 1978 ರಲ್ಲಿ. ಮಧು ದಂಡವಟಿ ಅವರು ರೈಲು ಮಂತ್ರಿ ಆಗಿದ್ದಾಗ). ಕಾಯ್ದಿರಿಸದ ಬೋಗಿಗಳು (ಆನ್ ರಿಸರ್ವ್ಡ್ ಕಂಪಾರ್ಟ್ಮೆಂಟ್) ಇರುತ್ತಿದ್ದುದು ಎಂಜಿನ್ ಹಿಂದುಗಡೆ. ನಂತರ ಇತರ ಬೋಗಿಗಳು. ಆಂಧ್ರ ಪ್ರದೇಶದ ಈಲೂರು ಮತ್ತು ರಾಜಮಂಡ್ರಿ ನಡುವಿನ ಟ್ರೇನು. ಕಿಕ್ಕಿರಿದು ತುಂಬಿದ್ದ ಜನ. ತುಂಬು ಗರ್ಭಿಣಿಯೊಬ್ಬಳು ಕುಟುಂಬದವರ ಜೊತೆ ಹತ್ತಿ ಕುಳಿತಳು. ಯಾರೋ ಸ್ವಲ್ಪ ಸರಿದು ಕೂಡಲು ಜಾಗ ಕೊಟ್ಟರು. ಪ್ರಯಾಣ ಸಾಗಿತು. 

ಸ್ವಲ್ಪ ಸಮಯದ ನಂತರ ಆಕೆಗೆ ಶೌಚಾಗಾರಕ್ಕೆ ಹೋಗಬೇಕಾಯಿತು. ಹೋದವಳು ಹೆಚ್ಚು ಹೊತ್ತಾದರೂ ಹೊರಗೆ ಬರಲಿಲ್ಲ. ಜೊತೆಯಲ್ಲಿದ್ದವರು ಹೋಗಿ ನೋಡಿದರೆ ಉಗಿಬಂಡಿಯ ಓಲಾಟದಲ್ಲಿ ಕೆಳಗೆ ಬಿದ್ದು ಪ್ರಜ್ಞೆ ತಪ್ಪಿದ್ದಾಳೆ. ಶೈತ್ಯೋಪಚಾರದ ನಂತರ ಎಚ್ಚರವಾಯಿತು. ಇಷ್ಟರಲ್ಲಿ ಪ್ರಸವ ಆಗಿಹೋಗಿದೆ. ಮಗುವು ಶೌಚಾಗಾರದ ದೊಡ್ಡ ಪೈಪಿನಲ್ಲಿ ಕೆಳಗೆ ಬಿದ್ದುಹೋಗಿದೆ. ಅಷ್ಟರಲ್ಲಿ ಟ್ರೇನು ಕೆಲವು ಮೈಲಿ ಮುಂದೆ ಬಂದಿದೆ. ಹತ್ತಾರು ಬೋಗಿಗಳು ಮಗು ಬಿದ್ದ ಸ್ಥಳವನ್ನು ದಾಟಿವೆ. ಬೋಗಿಯಲ್ಲಿದ್ದ ಅಲಾರಾಂ ಚೈನನ್ನು ಎಳೆದು ಟ್ರೈನನ್ನು ನಿಲ್ಲಿಸಿ ಹಳಿಯಗುಂಟ ಮಗುವನ್ನು ಹುಡುಕಿಕೊಂಡು ಹೊರಟರು. 

ಹೀಗೆ ಬರುತ್ತಿರುವಾಗ ಎದುರಿನಿಂದ ಕೆಲವರು ಬರುತ್ತಿರುವುದು ಕಾಣಿಸಿತು. ಮಗುವೊಂದನ್ನು ಒಬ್ಬರು ಕೈಲಿ ಹಿಡಿದು "ಇದು ಯಾರ ಮಗು? ಟ್ರೇನಿಂದ ಬಿದ್ದಿರಬಹುದು. ನಾವು ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಅಳುವುದು ಕೇಳಿಸಿತು" ಎಂದರು. ವೇಗವಾಗಿ ಚಲಿಸುತ್ತಿದ್ದ ರೈಲಿನಿಂದ ಬಿದ್ದಿದ್ದರೂ, ಕೆಳಗಡೆ ನುರುಜುಗಲ್ಲು ರಾಶಿಯೇ ಇದ್ದರೂ ಕೆಲ ತರಚು ಗಾಯದ ಹೊರತಾಗಿ ಮಗು ಕ್ಷೇಮವಾಗಿತ್ತು! ತಾಯಿಗೆ ಮಗು ಸಿಕ್ಕಿತು. ಮಗುವಿಗೆ ತಾಯಿ ಸಿಕ್ಕಿದಳು. 

ಚಾಗಂಟಿ ಕೋಟೇಶ್ವರ ರಾವ್ ಆಂಧ್ರ ಪ್ರದೇಶದ ವಿಖ್ಯಾತ ವಿದ್ವಾಂಸರು. ತೆಲುಗು ಭಾಷೆಯ ಪ್ರವಚನಗಳಲ್ಲಿ ಬಹಳ ಹೆಸರು ಮಾಡಿದವರು. "ಪ್ರವಚನ ಚಕ್ರವರ್ತಿ", "ಶಾರದಾ ಜ್ಞಾನ ಪುತ್ರ" ಮೊದಲಾದ ಅನೇಕ ಬಿರುದುಗಳಿಂದ ಸನ್ಮಾನಿತರು. "ಸ ರಕ್ಷಿತಾ ರಕ್ಷತಿ ಯೋ ಹಿ ಗರ್ಭೆ" ಅನ್ನುವುದರ ವಿವರಣೆ ಕೊಡುವಾಗ "ನೇನು ನಾ ಕಣ್ಣಿಂಚಿ ಚೂಸಿನ್ನಾನು" ಎಂದು ಹೇಳುತ್ತಿದ್ದರಂತೆ. ಇಂತಹ ಪ್ರವಚನ ಕೇಳಿದ್ದ ಹಿರಿಯ ಮಿತ್ರರೊಬ್ಬರು ಇದೇ ಪ್ರಸಂಗವನ್ನು ಚರ್ಚಿಸುವಾಗ ನೆನಪು ಮಾಡಿಕೊಳ್ಳುತ್ತಿದ್ದರು. 

*****

ಎಲ್ಲಾ ಸಂದರ್ಭಗಳಲ್ಲೂ ಇದೇ ರೀತಿ ಸುಖಾಂತ್ಯವಾಗುತ್ತದೆ ಎಂದೇನೂ ಇಲ್ಲ. ಎಲ್ಲಾ ಸರಿಯಾಗಿದ್ದೂ, ಸುಸಜ್ಜಿತ ಆಸ್ಪತ್ರೆಯಲ್ಲಿದ್ದೂ, ನುರಿತ ವೈದ್ಯರ ನಿರ್ಲಕ್ಶ್ಯದಿಂದಲೋ ಅಥವಾ ಬೇರಾವುದೋ ಕಾರಣದಿಂದಲೋ, ಇಲ್ಲವೇ ಯಾವುದೂ ಕಾರಣವಿಲ್ಲದೇನೆಯೇ ಪರಿಸ್ಥಿತಿ ವಿಷಮಿಸಿ ದುಃಖಾಂತ್ಯ ಆಗಬಹುದು. ಅಂತಹ ಉದಾಹರಣೆಗಳೂ ಇವೆ. 

ಬಾಹ್ಯಾರ್ಥ, ಅಂತರಾರ್ಥ ಮತ್ತು ಗೂಡಾರ್ಥಗಳ ಜೊತೆ ಅನುಭವವೂ ಬೆರೆತಾಗ ಸರಿಯಾದ ತಳಹದಿ ನಿರ್ಮಾಣವಾಗಿ ವಿಷಯದ ಎಲ್ಲ ಆಯಾಮಗಳೂ ತಿಳಿಯುತ್ತವೆ ಎಂದು ಹೇಳುವುದಷ್ಟೇ ಇಲ್ಲಿನ ಗುರಿ. ಒಂದೇ ರೀತಿಯ ಅನುಭವದಿಂದ ಇಬ್ಬರು ಬೇರೆ ಬೇರೆ ಅರ್ಥ ತಿಳಿದು ಬೇರೆ ಬೇರೆ ದಿಕ್ಕಿನಲ್ಲಿ ಕಾರ್ಯೋನ್ಮುಖರಾಗುವುದೂ ಜೀವನದಲ್ಲಿ ನೋಡಿದ್ದು ಇದೆ. ಅವರವರ ನಂಬಿಕೆ, ಹಿನ್ನೆಲೆಗಳು ಮತ್ತು ಭವಿಷ್ಯವನ್ನು ನೋಡುವ ದೃಷ್ಟಿ ಕೂಡ ಅವುಗಳ ಕೆಲಸ ಮಾಡುತ್ತವೆ. 

ಸತ್ವಯುತವಾದ ಕೃತಿಗಳನ್ನು ಮತ್ತೆ ಮತ್ತೆ ಮೆಲಕುಹಾಕುವಾಗ, ಅದರ ಜೊತೆ ಅನುಭವ ಪಕ್ವವಾಗುತ್ತ ಹೋದಾಗ, ಜೀವನ ಯಾತ್ರೆಯ ಮತ್ತು ಸಾಧನೆಯ ಗುರಿಗಳು ಹೆಚ್ಚು ಸ್ಪಷ್ಟ ಆಗುತ್ತಾ ಹೋಗುತ್ತವೆ. ಯಾವ ರೀತಿಯ ಅನುಭವವನ್ನು ಆಯಾಯಾ ಸಂದರ್ಭಗಳಿಗೆ ತಳಕು ಹಾಕಬೇಕೆನ್ನುವ ವಿವೇಚನೆಯೂ ಮೂಡುತ್ತದೆ. 

Saturday, December 7, 2024

ಬಾಹ್ಯಾರ್ಥ - ಅಂತರಾರ್ಥ - ಗೂಡಾರ್ಥ


ಒಂದು ಕೃತಿಯನ್ನು ಓದಿದಾಗ, ಅದು ಸಾಹಿತ್ಯ ಕೃತಿ ಇರಬಹುದು, ವೈದಿಕ ಗ್ರಂಥವಿರಬಹುದು, ಅಥವಾ ಒಂದು ಸಾಮಾನ್ಯ ಪತ್ರವೇ ಇರಬಹುದು, ಓದುಗನಿಗೆ ಅದರ ಅರ್ಥ ಹೊಳೆಯುವುದು ಆ ಕೃತಿಯಲ್ಲಿರುವ ಪದಪುಂಜಗಳ ಜೊತೆಗೆ ಅವನ ವೈಯುಕ್ತಿಕ ಸಿದ್ಧತೆ, ಸಾಧನೆಗಳನ್ನೂ ಅವಲಂಬಿಸುತ್ತದೆ. ಒಂದು ಉದಾಹರಣೆ ತೆಗೆದುಕೊಳ್ಳಬಹುದು. ಆದಿಕವಿ ವಾಲ್ಮೀಕಿಗಳ ರಾಮಾಯಣವನ್ನೇ ತೆಗೆದುಕೊಳ್ಳೋಣ. ಒಂದು ಶಾಲೆಯಲ್ಲಿ ಕಲಿಯುವ ಕಿರಿಯ ವಿದ್ಯಾರ್ಥಿಯು ಆ ರಾಮಾಯಣವನ್ನು ಓದುತ್ತಾನೆ. ವಿಶ್ವವಿದ್ಯಾಲಯದಲ್ಲಿ ಪದವಿ ಪಡೆಯಲು ಅಭ್ಯಸಿಸುವ ಯುವಕ ಹಿರಿಯ ವಿದ್ಯಾರ್ಥಿಯೂ ಅದನ್ನೇ ಓದುತ್ತಾನೆ. ಅದೇ ವಿಶ್ವವಿದ್ಯಾಲಯದಲ್ಲಿ ಅಂತಹ ಅನೇಕ ಯುವಕರಿಗೆ ಕೆಲ ವರ್ಷಗಳು ಪಾಠ  ಹೇಳಿದ ಪ್ರಾಧ್ಯಾಪಕನೂ ಅದೇ ಕೃತಿಯನ್ನು ಓದುತ್ತಾನೆ. ಜಗತ್ತಿನ ಅನೇಕ ಭಾಷೆಗಳ ಜ್ಞಾನ ಸಂಪತ್ತನ್ನು ಓದಿ, ತಾನೇ ಸ್ವತಃ ಕೃತಿ ರಚನೆ ಮಾಡಿ, ಪ್ರವಚನಾದಿಗಳನ್ನು ಮಾಡುವ ಉದ್ದಾಮ ಪಂಡಿತನೂ ಓದುವುದು ಅದನ್ನೇ. ಈ ನಾಲ್ವರಿಗೂ ಆ ಕೃತಿಯಲ್ಲಿ ಕಂಡುಬರುವ ಸೊಗಸು, ಅರ್ಥ, ಸಂದೇಶ ಒಂದೇ ಆಗುತ್ತದೆಯೇ? ಹಾಗಿರುವುದಿಲ್ಲ. ಮೊದಲಿನವನಿಗೆ ಕಥೆ ಅರ್ಥವಾದರೆ ದೊಡ್ಡದು. ಎರಡನೆಯವನಿಗೆ ಮತ್ತಷ್ಟು ಆಳವಾಗಿ ತಿಳಿಯುತ್ತದೆ. ಮೂರನೆಯವನು ತನ್ನ ಇತರ ಕೃತಿಗಳ ಅಧ್ಯಯನದ ಜ್ಞಾನದಿಂದ ಇನ್ನೂ ಆಳವಾದ, ವಿಶಾಲವಾದ ಅರ್ಥಗಳನ್ನು ಅದೇ ಕೃತಿಯಲ್ಲಿ ಕಾಣುತ್ತಾನೆ. ಕಡೆಯವನು ತನ್ನ ಅಪಾರ ಜ್ಞಾನದಿಂದ ಮತ್ತು ಅನೇಕ ಕೃತಿಗಳ ಓದುವಿಕೆಯಿಂದ ಬಂದಿರುವ ತಿಳುವಳಿಕೆಯಿಂದ ಒಂದು ರೀತಿಯ ತೌಲನಿಕ ಅಧ್ಯಯನದಿಂದ ವಿಮರ್ಶಾತ್ಮಕ ಕೃತಿಯನ್ನೇ ಬರೆಯಬಹುದು. ಇವೆಲ್ಲದರ ಜೊತೆಗೆ ಬಹಳ ಸತ್ವಯುತವಾದ ಗ್ರಂಥಗಳಲ್ಲಿ ಅಂತಹ ವ್ಯಕ್ತಿ ಪ್ರತಿ ಸಲ ಓದಿದಾಗ ಹೊಸ ಹೊಸ ಅರ್ಥಗಳನ್ನು ಕಾಣುತ್ತಾನೆ. ಇಂತಹ ಹೆಚ್ಚು ತಿಳಿದವರು ಕೆಲವರು ಒಂದು ಕಡೆ ಸೇರಿ ವಿಚಾರ ವಿಮರ್ಶೆ ಮಾಡಿದಾಗ ಅವರೆಂದೂ ತನಿಯಾಗಿ ಕಾಣದ ಹೊಳಹು ಸ್ಫುಟವಾಗಿ ಕಾಣುತ್ತದೆ!

ಒಬ್ಬ ಶಾಲಾ ಮಾಸ್ತರನಿದ್ದನಂತೆ. ಅವನಿಗೆ ಸರಿಯಾಗಿ ಇಂಗ್ಲಿಷ್ ಭಾಷೆ ಬರದು. ಎಲ್ಲಿಂದಲೋ ಒಂದು ಇಂಗ್ಲಿಷ್-ಕನ್ನಡ ನಿಘಂಟು ಸಂಪಾದಿಸಿದ್ದ. ಗೊತ್ತಿಲ್ಲದಿದ್ದ ಪದಗಳಿಗೆ ಅದರಲ್ಲಿ ಅರ್ಥ ಹುಡುಕಿಕೊಂಡು ತಿಳಿಯುವ ಪ್ರಯತ್ನ ಮಾಡುತ್ತಿದ್ದ. ಆಗ ತಾನೇ ಬ್ರಿಟಿಷರ ಆಡಳಿತದಿಂದ ಸ್ವಾತಂತ್ರ್ಯ ಸಿಕ್ಕ ಸಮಯ. ಮೇಲಧಿಕಾರಿಗಳಿಂದ ಬರುವ ಪತ್ರಗಳು ಇಂಗ್ಲೀಷಿನಲ್ಲಿರುತ್ತಿದ್ದವು. ಒಮ್ಮೆ ಅವನು ಶಾಲೆಯನ್ನು ಸರಿಯಾಗಿ ನಡೆಸುತ್ತಿಲ್ಲ ಎಂಬುದಾಗಿ ಊರಿನ ಮುಖಂಡರು ಮೇಲಧಿಕಾರಿಗಳಿಗೆ ದೂರು ಕೊಟ್ಟರಂತೆ. ಮೇಲಧಿಕಾರಿಗಳು ಶಾಲೆಯನ್ನು ಸರಿಯಾಗಿ ನಡೆಸುವಂತೆಯೂ, ಈ ರೀತಿ ದೂರು ಬರಲು ಅವಕಾಶ ಕೊಡದಂತೆಯೂ ಸಲಹೆ ನೀಡಿ ಪತ್ರ ಕಳಿಸಿದರು. ಪತ್ರದ ಕಡೆಯ ಸಾಲಿನಲ್ಲಿ "Don't give room for such complaints" ಎಂದು ಎಚ್ಚರಿಕೆ ಇತ್ತು. ಮಾಸ್ತರನಿಗೆ ಈ ವಾಕ್ಯ ಸರಿಯಾಗಿ ಅರ್ಥ ಆಗಲಿಲ್ಲ. ನಿಘಂಟು ತೆಗೆದು room ಪದಕ್ಕೆ ಅರ್ಥ ನೋಡಿದ. ಆ ಪದಕ್ಕೆ ಕೋಣೆ ಎಂದು ಅರ್ಥ ಇತ್ತು. "ನಮ್ಮ ಶಾಲೆಯ ಕಟ್ಟಡದಲ್ಲಿ ಕೇವಲ ಮೂರು ಕೋಣೆಗಳು ಮಾತ್ರ ಇವೆ. ಎರಡರಲ್ಲಿ ತರಗತಿಗಳನ್ನು ನಡೆಸುತ್ತೇವೆ. ಮೂರನೆಯದು ಶಾಲೆಯ ಕಚೇರಿಯಾಗಿದೆ. "ನಾವು ಯಾರಿಗೂ room ಕೊಟ್ಟಿಲ್ಲ; ಕೊಡುವುದೂ ಇಲ್ಲ" ಎಂದು ಉತ್ತರ ಬರೆದ. ಅನೇಕ ವೇಳೆ ಈ ರೀತಿ ಪದಕ್ಕೆ ಪದ ಸೇರಿಸಿ ಅರ್ಥ ಮಾಡಿಕೊಂಡು ಫಜೀತಿ ಆಗುವುದೂ ಉಂಟು. 

*****

ಒಂದು ಸರೋವರ ಎಲ್ಲರ ಮುಂದಿದೆ. ಅದರಲ್ಲಿರುವ ಜಲರಾಶಿ ಅದನ್ನು ನೋಡಿದ ಎಲ್ಲರಿಗೂ ಕಾಣುತ್ತದೆ. ಹೊರಗಡೆಯಿಂದ ನೋಡಿದಾಗ ಸಿಗುವುದು ಇಷ್ಟೇ. ಈಜು ಬರುವ, ಮುಳುಗು ಹಾಕುವ ವ್ಯಕ್ತಿಗೆ ಆ ಸರೋವರದ ನೀರಿನ ಪರಿಚಯ ಆಗುತ್ತದೆ. ನೀರಿನ ಉಷ್ಣತೆ, ಸುಮಾರು ಆಳ ಮತ್ತು ಇತರ ಭೌತಿಕ ಗುಣಗಳು, ಹೆಚ್ಚು ವಿವರಗಳು ಗೊತ್ತಾಗುತ್ತವೆ. ನುರಿತ ಈಜುಗಾರನು ಮತ್ತು ಬಹಳ ಹೊತ್ತು ಸರೋವರದ ನೀರಿನಲ್ಲಿ ಮುಳುಗಿ ವಿಹರಿಸಬಲ್ಲ ವ್ಯಕ್ತಿಗೆ ಅದರಲ್ಲಿರುವ ಅನೇಕ ವಸ್ತುಗಳು, ವರ್ಣಗಳು, ಅವುಗಳ ಸೊಗಸೂ ತಿಳಿಯುತ್ತದೆ. ಸರೋವರ ಒಂದೇ. ಆದರೆ ಏಕೆ ಈ ರೀತಿಯ ವ್ಯತ್ಯಾಸ? ಇವಕ್ಕೆ ಮೂಲ ಕಾರಣ ಅವರ ಸಿದ್ಧತೆ, ಯೋಗ್ಯತೆ ಮತ್ತು ಅವರವರ ಜ್ಞಾನದಾಹದ ನಿರೀಕ್ಷೆ. 

ಬಹುಶ್ರುತ ವಿದ್ವಾಂಸರು ಪ್ರತಿ ಕೃತಿಯಲ್ಲೂ, ಅದರ ಪದರ ಪದರಗಳಲ್ಲೂ ಮೂರು ರೀತಿಯ ಅರ್ಥಗಳು ಇವೆ ಎಂದು ಹೇಳುತ್ತಾರೆ. ಮೊದಲನೆಯದು ಎಲ್ಲರಿಗೂ ಕಾಣುವ ಮೇಲ್ನೋಟದ ಅರ್ಥ. ಇದರಲ್ಲಿ ಓದುಗನಿಗೆ ಇರುವುದು ಸಾಮಾನ್ಯ ಭಾಷಾ ಜ್ಞಾನ. ಇದನ್ನು ಬಾಹ್ಯಾರ್ಥ (ಹೊರಗಡೆಯ ಅರ್ಥ) ಎನ್ನುತ್ತಾರೆ. ಹೆಚ್ಚಿನ ಸಿದ್ಧತೆ, ಸಾಧನೆಗಳನ್ನು ಮಾಡಿರುವ ಓದುಗನಿಗೆ ಇನ್ನೂ ಹೆಚ್ಚಿನ ಅರ್ಥಗಳು ಕಾಣುತ್ತವೆ. ಇದನ್ನು ಅಂತರಾರ್ಥ (ಒಳಗಡೆಯ ಅರ್ಥ) ಎನ್ನುತ್ತಾರೆ. ಬಹಳ ಸಿದ್ಧತೆಗಳಿಂದ ಮತ್ತು ಜ್ಞಾನದಾಹದಿಂದ ಕೃತಿಯನ್ನು ಅಭ್ಯಸಿಸುವ ವ್ಯಕ್ತಿಗೆ ಆಗುವ ಅರ್ಥಗಳೇ ಬೇರೆ. ಇಂತಹ ಓದುಗ ಕೃತಿಯ ಸತ್ವವನ್ನು ತಿಳಿದು ಅದರ ಪದರಗಳನ್ನು ಮತ್ತೆ ಮತ್ತೆ ವೀಕ್ಷಿಸುತ್ತಾನೆ. ತನಗಿಂತ ಹೆಚ್ಚು ತಿಳಿದವರ ಜೊತೆ ಜಿಜ್ಞಾಸೆ ಮಾಡುತ್ತಾನೆ. ಹೆಚ್ಚು ಹೆಚ್ಚಿನ ತಿಳುವಳಿಕೆಗೆ ಹಾತೊರೆಯುತ್ತಾನೆ. ಇಂತಹ ವಿಷಯ ಸಂಪಾದನೆಗೆ ದುಡಿಯುತ್ತಾನೆ. ಅವನಿಗೆ ಕೃತಿಯ ಗುಹ್ಯಾರ್ಥ (ಒಳಗಿನ ವಿಶೇಷವಾದ ಅರ್ಥ) ತೆರೆದುಕೊಳ್ಳುತ್ತದೆ. 

ಎಲ್ಲ ಕೃತಿಗಳಲ್ಲೂ ಈ ರೀತಿಯ ಮೂರೂ ಅರ್ಥಗಳೂ ಇರಲೇಬೇಕು ಎಂಬ ನಿಯಮವೇನೂ ಇಲ್ಲ. ಕೆಲವು ಕೇವಲ ಮೊದಲನೆಯ ಅರ್ಥದಲ್ಲಿಯೇ ಮುಗಿಯಬಹುದು. ಅವು ರಸವೇ ಇಲ್ಲದ ಕಬ್ಬಿನ ಜಲ್ಲೆಯಂತೆ. ಮತ್ತೆ ಕೆಲವು ಸ್ವಲ್ಪ ರಸ ಸೇರಿರುವ, ಆದರೆ ಇನ್ನೂ ಪೂರ್ಣವಾಗಿ ರಸ ತುಂಬದ ಕಬ್ಬಿನ ಜಲ್ಲೆಯಂತೆ. ತಿನ್ನುವನ ಅಥವಾ ಹೀರುವವನ ನಾಲಿಗೆಗೆ ಅಷ್ಟೋ ಇಷ್ಟೋ ಸಿಹಿ ಸಿಗುತ್ತದೆ. ತುಂಬಾ ರಸ ತುಂಬಿದ ರಸದಾಳೆ ಕಬ್ಬನ ಜಲ್ಲೆಯಲ್ಲಿ ಹೀರಿದಷ್ಟೂ ಸ್ವಾದ ಸಿಗುತ್ತದೆ. ಕೃತಿಯಲ್ಲಿ ಅಂತರಾರ್ಥ, ಗುಹ್ಯಾರ್ಥಗಳು ತುಂಬಿರುವಾಗ ಈ ರೀತಿಯ ರಸದಾಳೆ ಕಬ್ಬಿನ ನಿಜವಾದ ರುಚಿ ಹತ್ತುತ್ತದೆ. ಅಂತಹ ಕಬ್ಬಿನಲ್ಲಿ ಬೆಲ್ಲವೋ, ಸಕ್ಕರೆಯೋ ಮಾಡಿಟ್ಟುಕೊಂಡರೆ ಬಹಳ ಕಾಲ ಕೃತಿಯ ಆನಂದ ಅನುಭವಿಸಬಹುದು! ಇಂತಹ ಬೆಲ್ಲ, ಸಕ್ಕರೆ ಮಾಡಬಹುದಾದ ಕೃತಿಗಳು ತಮ್ಮ ಸತ್ವಗಳ ಪ್ರಭಾವದಿಂದ ಬಹಳ ಕಾಲ ನಿಲ್ಲುತ್ತವೆ. ಸಾರ್ವಕಾಲಿಕ ಶ್ರೇಷ್ಠ ಕೃತಿಗಳು ಎಂದು ಗುರುತಿಸಲ್ಪಡುತ್ತವೆ. ಶತಶತಮಾನಗಳ ಕಾಲ ಕಳೆದರೂ ಅವನ್ನು ಅಭ್ಯಸಿಸುಸುವ ಪರಂಪರೆ ನಿರ್ಮಾಣವಾಗುತ್ತದೆ. 

ಈ ರೀತಿ ಶ್ರೇಷ್ಠ ಕೃತಿಗಳನ್ನು ಅಭ್ಯಸಿಸಿ ಬೆಲ್ಲವನ್ನೋ ಸಕ್ಕರೆಯನ್ನೋ ನಮ್ಮ ಮನಸ್ಸಿನಲ್ಲಿ ಮಾಡಿಟ್ಟುಕೊಳ್ಳುತ್ತಿದ್ದರೆ ನಮ್ಮ ವೈಯುಕ್ತಿಕ ಭಂಡಾರ ಬೆಳೆಯುತ್ತ ಹೋಗುತ್ತದೆ. ಮತ್ತೆ ಎಂದೋ ಇನ್ನೊಂದು ಗಟ್ಟಿ ಕೃತಿ ಓದುವಾಗ ಮತ್ತು ಮೆಲಕು ಹಾಕುವಾಗ ಈ ಸಕ್ಕರೆ ಆ ಹೋಳಿಗೆಗೆ ಸೇರಿಸಿಕೊಂಡು ಮತ್ತೂ ಹೆಚ್ಚಿನ ರುಚಿ ಪಡೆಯಲು ನೆರವಾಗುತ್ತದೆ!

*****

"ಹೂವು - ಹುಲ್ಲು ಮತ್ತು ಶ್ರೀಕೃಷ್ಣ" ಎಂಬ ಶೀರ್ಷಿಕೆಯ ಹಿಂದಿನ ಸಂಚಿಕೆಯಲ್ಲಿ (ಇದನ್ನು ಓದಲು ಇಲ್ಲಿ ಕ್ಲಿಕ್ ಮಾಡಿ) ಶ್ರೀ ಪುರಂದರ ದಾಸರ "ಹೂವ ತರುವರ ಮನೆಗೆ ಹುಲ್ಲ ತರುವ" ಕೃತಿಯಲ್ಲಿರುವ ಅನೇಕ ವಿಶೇಷಾರ್ಥ ಮತ್ತು ಗೂಡಾರ್ಥಗಳನ್ನು ನೋಡುವ ಪ್ರಯತ್ನ ಮಾಡೋಣ ಎಂದಿದ್ದೆವು. ಮೇಲಿನ ಬಾಹ್ಯಾರ್ಥ, ಅಂತರಾರ್ಥ, ಗೂಡಾರ್ಥಗಳ ಹಿನ್ನೆಲಿಯಲ್ಲಿ ಈ ಕೃತಿಯಲ್ಲಿರುವ ಕೆಲವು ವಿಶೇಷ ಅರ್ಥಗಳುಳ್ಳ ಪದಗಳನ್ನು ಗಮನಿಸುವ ಪ್ರಯತ್ನವನ್ನು ಯಥಾಶಕ್ತಿ ಮಾಡೋಣ. 


ಒಂದು ದಳ ಶ್ರೀತುಳಸಿ, ಬಿಂದು ಗಂಗೋದಕ, ಒಂದೇ ಮನದಲಿ, ಇಂದಿರಾರಮಣ, ಮಂದಿರದ ಒಳಗೆ, ಪರಿಪರಿಯ ಪುಷ್ಪಗಳ, ಪರಿಪೂರ್ಣ, ಸಕಲ ಸ್ವಾತಂತ್ರ್ಯ, ಅರಮನೆಯ ಒಳಗೆ ಸರಿಭಾಗ, ತೊಂಡರಿಗೆ ತೊಂಡನಾಗಿ ಎನ್ನುವ ಪದಗಳಲ್ಲಿ ವಿಶೇಷ ಮತ್ತು ಗೂಡಾರ್ಥಗಳಿವೆ. 

ಮುಂದಿನ ಸಂಚಿಕೆಗಳಲ್ಲಿ ಇವನ್ನು ಒಂದೊಂದಾಗಿ ನೋಡುವ ಪ್ರಯತ್ನ ಮಾಡೋಣ.