"ಎಂಜಲು ಮತ್ತು ಪ್ರಸಾದ" ಹೆಸರಿನ ಶೀರ್ಷಿಕೆಯ ಹಿಂದಿನ ಒಂದು ಸಂಚಿಕೆಯಲ್ಲಿ, "ಊಟಮಾಡಿ ಮುಗಿದ ಮೇಲೆ ಎಲೆಗಳಲ್ಲಿ ಅಥವಾ ತಟ್ಟೆಗಳಲ್ಲಿ ಬಿಟ್ಟಿರುವ ಪದಾರ್ಥಗಳನ್ನು "ಎಂಜಲು" ಎನ್ನುತ್ತಾರೆ. ಇದನ್ನು ಯಾರೂ ತಿನ್ನುವುದಿಲ್ಲ. ಇದೆಲ್ಲಾ ಒಟ್ಟುಗೂಡಿಸಿ ಹೊರಗೆ ಬಿಸಾಡುತ್ತಾರೆ. ಅಲ್ಲಿ ಪ್ರಾಣಿಗಳು ತಿನ್ನಬಹುದು ಇಲ್ಲವೇ ಕಡೆಗೆ ಗೊಬ್ಬರ ಆಗಬಹುದು" ಎಂದು ಹೇಳಿತ್ತು. ಇದು ಇಂದಿನ ದಿನದ ಸತ್ಯ. ಆದರೆ ಐವತ್ತು ಅರವತ್ತು ವರುಷಗಳ ಹಿಂದಿನ ಸತ್ಯ ಬೇರೆಯೇ ಇತ್ತು. ಆಗ ಕಂಡ ದೃಶ್ಯಗಳು ಹೃದಯ ಕದಡಿ ಮನಸ್ಸು ನೀರಾಗುವಂತೆ ಇರುತ್ತಿದ್ದವು. ವಾಸ್ತವವಾಗಿ ಅದನ್ನು ಚರ್ಚಿಸಲು ಮನಸ್ಸು ಬರುವುದಿಲ್ಲ. ಆದರೆ ಜೀವನದ ಸತ್ಯಗಳು ಯಾವಾಗಲೂ ಮಧುರವಾಗಿಯೇ ಇರುವುದಿಲ್ಲ. ಇಂದಿನ ಪ್ರಪಂಚದಲ್ಲಿ "ಅನ್ನದ ಹಾಹಾಕಾರ" ಇದ್ದರೂ ಅಂದಿನಷ್ದು ಭೀಕರವಾಗಿಲ್ಲ. ಪರಿಸ್ಥಿತಿ ಎಷ್ಟೋ ಸುಧಾರಿಸಿದೆ.
1962, 1965 ಮತ್ತು 1971 ಇಸವಿಗಳಲ್ಲಿ ನಮ್ಮ ದೇಶ ಯುದ್ಧದ ಬೇಗೆಯಲ್ಲಿ ಬೇಯುತ್ತಿತ್ತು. ಮೊದಲು ಚೀನಾದ ಕಡೆ, ಮತ್ತೆರಡು ಬಾರಿ ಪಾಕಿಸ್ತಾನದ ಗಡಿಗಳಲ್ಲಿ. ಆಗಿನ ಪರಿಸ್ಥಿತಿಯಲ್ಲಿ ಜನರಿಗೆ ಉದ್ಯೋಗದ ಅವಕಾಶಗಳು ಮೂಲತಃ ನಾಲ್ಕು ದಾರಿಗಳಲ್ಲಿದ್ದವು. ಮೊದಲನೆಯದು ಕೃಷಿ ಮತ್ತು ಪಶುಪಾಲನೆ. ಎರಡನೆಯದು ತಿಂಗಳ ಸಂಬಳ ಸಿಗುವ ಸರಕಾರಿ ನೌಕರಿ. ಮೂರನೆಯದು ಕುಂಬಾರ, ಬಡಗಿ, ಕಮ್ಮಾರ, ನೇಕಾರ ಮೊದಲಾದ ಗೃಹ ಕೈಗಾರಿಕೆ ಅಥವಾ ಕಸಬುಗಳು. ನಾಲ್ಕನೆಯದು ಸಣ್ಣ ವ್ಯವಹಾರ, ಅಂಗಡಿಗಳು ಮುಂತಾದವು. ಈಗಿನಂತೆ "ಸರ್ವಿಸ್ ಸೆಕ್ಟರ್" ಅನ್ನುವ ಕಲ್ಪನೆಯೇ ಇರಲಿಲ್ಲ. ಹಸಿವಿನ ದಾವಾಗ್ನಿ ಜ್ವಾಲೆಗಳು ಅನೇಕರನ್ನು ಕಿತ್ತು ತಿನ್ನುತ್ತಿದ್ದವು. ಎಲ್ಲಾದರೂ ಸಮಾರಂಭಗಳಾಗಿ ಊಟದ ಎಲೆ ಎಸೆಯುವ ಕಡೆ ಕೆಲವರು ಕಾದು ಕುಳಿತಿರುತ್ತಿದ್ದರು. ಅಲ್ಲಿ ಸೇರಿದ್ದ ಪ್ರಾಣಿಗಳ ಜೊತೆ ಹೊಡೆದಾಡಿ ಹೊಟ್ಟೆ ತುಂಬಿಸಿಕೊಳ್ಳಬೇಕಾದ ಪರಿಸ್ಥಿತಿ ಅವರದ್ದು. ಭಿಕ್ಷೆ ಬೇಡಿ ಜೀವನ ಮಾಡುವುದೂ ಒಂದು ವೃತ್ತಿಯೇ ಆಗಿತ್ತು. ಇಷ್ಟು ಹೇಳಿ ಮುಂದಿನದನ್ನು ಇಲ್ಲಿಗೇ ಬಿಡೋಣ. ಆ ಕಾಲಮಾನದಲ್ಲಿ ಇಂತಹ ದೃಶ್ಯಗಳನ್ನು ಕಣ್ಣಾರೆ ಕಂಡವರಿಗೆ ಆ ನೋವು ಬೇಗ ಅರ್ಥವಾಗುತ್ತದೆ.
*****
ಇಂತಹ ಅತಿ ಕಷ್ಟದ ಸಮಯ ಕೇವಲ ಮೂರ್ನಾಕು ವರುಷಗಳ ಹಿಂದೆ ಮತ್ತೆ ಕದ ತಟ್ಟಿತ್ತು. ಕರೋನ ಮಹಾಮಾರಿಯ ಕಾರಣ ಜನತೆ ಎರಡು ಕಡೆಗಳಲ್ಲಿ ಹಿಂಸೆ ಅನುಭವಿಸಿದರು. ಒಂದೆಡೆ ಜೀವಭಯ. ಏನನ್ನು ನೋಡಿದರೂ, ಏನನ್ನು ಮುಟ್ಟಿದರೂ ದಿಗಿಲು. ಕೈಗಳನ್ನೂ, ಎಲ್ಲ ಪದಾರ್ಥಗಳನ್ನೂ ತೊಳೆದದ್ದೇ ತೊಳೆದದ್ದು. ಇನ್ನೊಂದೆಡೆ ಅನೇಕರಿಗೆ ದೈನಂದಿನ ಜೀವನೋಪಾಯಕ್ಕೆ ದಾರಿಯಿಲ್ಲದೆ ಮನೆಯಲ್ಲಿ ಕುಳಿತುಕೊಳ್ಳಬೇಕಾದ ಸಂದರ್ಭ. ಎಲ್ಲಾ ಚಟುವಟಿಕೆ ನಿಲ್ಲಿಸಿದರೂ ಹೊಟ್ಟೆ ಮಾತ್ರ ಸುಮ್ಮನಿರದಲ್ಲ. ಕೋಟಿ ಕೋಟಿ ಮಂದಿ ಉಪವಾಸ ಬೀಳುವ ಸಂದರ್ಭ ಅದು.
ಈಗ ಇಡೀ ಪ್ರಪಂಚದ ಜನಸಂಖ್ಯೆ ಸುಮಾರು 800 ಕೋಟಿ. ಭಾರತದಲ್ಲಿ 140 ಕೋಟಿ. ಇದರಲ್ಲಿ 80 ಕೋಟಿ ಜನಕ್ಕೆ ಸರಿಯಾದ ಸಂಪಾದನೆ ಇಲ್ಲದೆ ಅನ್ನದ ಹಾಹಾಕಾರ ಬಡಿಯುವ ಸಂದರ್ಭ. 80 ಕೋಟಿ ಅಂದರೆ ಅದೇನು ಸಾಮಾನ್ಯವಲ್ಲ. ಇಡೀ ಯುರೋಪ್ ಖಂಡದ ಜನಸಂಖ್ಯೆಗಿಂತ ಸ್ವಲ್ಪ ಹೆಚ್ಚು. ಉತ್ತರ ಅಮೇರಿಕ ಮತ್ತು ದಕ್ಷಿಣ ಅಮೆರಿಕಗಳ ಒಟ್ಟು ಜನಸಂಖ್ಯೆಯಷ್ಟು. ಇಷ್ಟು ಮಂದಿ ಉಪವಾಸ ಬೀಳುವುದನ್ನು ಉಚಿತವಾಗಿ ಆಹಾರ ಧಾನ್ಯ ವಿತರಿಸುವುದರ ಮೂಲಕ ಸರ್ಕಾರ ತಪ್ಪಿಸಿತು. ಆಗ ಪ್ರಾರಂಭವಾದ ಈ ಯೋಜನೆ ಇಂದೂ ನಡೆಯುತ್ತಿದೆ. ಒಂದೆಡೆ ಕರೋನಾ ಲಸಿಕೆ ಹಾಕುವ ಭರಾಟೆ. ಮತ್ತೊಂದೆಡೆ ಈ ಆಹಾರ ಧಾನ್ಯ ವಿತರಣೆ ಯೋಜನೆ. ಇವೆರಡು ಎಷ್ಟೋ ಜನರನ್ನು ಆ ಕಂಟಕದಿಂದ ಪಾರುಮಾಡಿತು.
ಜಿ. ಎಸ. ಟಿ. ತೆರಿಗೆ ಪದ್ದತಿಯನ್ನು ಅನೇಕ ರೀತಿಯಿಂದ ಮೂದಲಿಸುವವರಿದ್ದಾರೆ. ಅದನ್ನು ತೆರುವಾಗ ನಾವೂ ಅನೇಕ ಬಾರಿ ಬೇಸರಿಸುತ್ತೇವೆ. ಆದರೆ ಇದರಿಂದ ಪ್ರತಿ ತಿಂಗಳೂ ಸರಕಾರಕ್ಕೆ ಬರುತ್ತಿರುವ ಆದಾಯ ಇಂತಹ ಕಾರ್ಯಕ್ರಮಗಳ ಭಾರವನ್ನು ಭರಿಸಲು ಸರ್ಕಾರಕ್ಕೆ ಆಸರೆ ಒದಗಿಸಿದೆ. ತೆರಿಗೆ ಕಳ್ಳರಿಂದ ಸೋರುತ್ತಿದ್ದ ಹಣ ಸರ್ಕಾರದ ಖಜಾನೆಗೆ ಸೇರುವುದರಿಂದ ಇದು ಸಾಧ್ಯವಾಯಿತು. ಬೇರೆ ಸಂಪನ್ಮೂಲಗಳೂ ಇವೆ ಎಂದರೂ ಈ ದಾರಿಯ ಆದಾಯ ಬಹಳ ಮುಖ್ಯವಾಆದದ್ದೇ ಆಗಿದೆ.
*****
ಅನ್ನದ ಹಾಹಾಕಾರ ಮುಗಿಲು ಮುಟ್ಟಿದ್ದ ಹಿಂದಿನ ಶತಮಾನದ ಐವತ್ತು-ಅರವತ್ತರ ದಶಕದಲ್ಲಿ ಸಮಾಜದ ಮೇಲೆ ಸಮತಾವಾದದ ಬಹಳ ಪ್ರಭಾವ ಇತ್ತು. ವರ್ಗ ಸಂಘರ್ಷ ಎಲ್ಲೆಡೆ ವಿಜೃಂಭಿಸುತ್ತಿದ್ದ ಕಾಲವದು. ಕನ್ನಡ ಸಾಹಿತ್ಯದ ಸಂದರ್ಭದಲ್ಲಿ ಅದು "ಕನ್ನಡ ನವೋದಯ" ಕಾಲಘಟ್ಟವನ್ನು ದಾಟಿ "ನವ್ಯ" ಅನ್ನುವ ಘಟ್ಟಕ್ಕೆ ಜಾರುತ್ತಿದ್ದ ಸಮಯ. ನವ್ಯ ಸಾಹಿತ್ಯದ ಹರಿಕಾರರಲ್ಲಿ ಒಬ್ಬರಾದ ಕೀರ್ತಿಶೇಷ ಎಂ. ಗೋಪಾಲಕೃಷ್ಣ ಅಡಿಗರ (1918-1992) ಜನಪ್ರಿಯ ಕವನವೊಂದು ಅದೇ ಸಮಯದಲ್ಲಿ, ಇದೇ ಅನ್ನದ ಹಾಹಾಕಾರ ಕುರಿತು ರಚಿತವಾದದ್ದು.
ಅಡಿಗರು ಒಮ್ಮೆ (1971) ಬೆಂಗಳೂರು ಲೋಕಸಭೆ ಕ್ಷೇತ್ರದಿಂದ (ಆಗ ಬೆಂಗಳೂರು ದಕ್ಷಿಣ ಕ್ಷೇತ್ರ ಇರಲಿಲ್ಲ) ಮಾಜಿ ಮುಖ್ಯಮಂತ್ರಿಗಳಾಗಿದ್ದ ಕೆಂಗಲ್ ಹನುಮಂತಯ್ಯನವರ ವಿರುದ್ಧ ಸ್ಪರ್ಧಿಸಿದ್ದರು. ಅವರ ಚುನಾವಣಾ ಪ್ರಚಾರ ಸಭೆಗಳ ಪ್ರಾರಂಭದಲ್ಲಿ ಈ ಗೀತೆಯನ್ನು ಖ್ಯಾತ ಗಮಕಿಗಳು ಮತ್ತು ಸುಗಮ ಸಂಗೀತ ಗಾಯಕರಾಗಿದ್ದ ಶ್ರೀ ಚಂದ್ರಶೇಖರ ಕೆದಿಲಾಯ ಅವರು ಹಾಡುತ್ತಿದ್ದರು. ಆ ನಂತರ ಅಡಿಗರು ಚುನಾವಣಾ ಭಾಷಣ ಮಾಡುತ್ತಿದ್ದರು. ಒಂದು ರೀತಿಯಲ್ಲಿ ಅದು ಅವರ ಚುನಾವಣಾ ಪ್ರಣಾಳಿಕೆಯಂತೆ ಇತ್ತು. ಚುನಾವಣೆಯಲ್ಲಿ ಅಡಿಗರು ಸೋತರು. ಆದರೆ ಈ ಕವನ ಬಹಳ ಪ್ರಸಿದ್ಧವಾಯಿತು. ನಂತರ ಅಡಿಗರು "ನ್ಯಾಷನಲ್ ಬುಕ್ ಟ್ರಸ್ಟ್" ಅಧ್ಯಕ್ಷರಾದರು. ಇನ್ನೂ ಅನೇಕ ರೀತಿಯಲ್ಲಿ ಸಾಹಿತ್ಯಕ್ಕೆ ಸೇವೆ ಸಲ್ಲಿಸಿದರು.
ಅನ್ನದ ಹಾಹಾಕಾರದ ಚರ್ಚೆಯ ಸಮಯದಲ್ಲಿ ಆ ಕವನ ನೆನಪಿಸಿಕೊಳ್ಳುವುದು ಒಳ್ಳೆಯದು.
*****
ಹೊಸ ನೆತ್ತರುಕ್ಕುಕ್ಕಿ ಆರಿಹೋಗುವ ಮುನ್ನ
ಹರೆಯದೀ ಮಾಂತ್ರಿಕನ ಮಾಟ ಮಸಳುವ ಮುನ್ನ
ಉತ್ಸಾಹ ಸಾಹಸದ ಉತ್ತುಂಗ ವೀಚಿಗಳ
ಈ ಕ್ಷುಭ್ದ ಸಾಗರವು ಬತ್ತಿಹೋಗುವ ಮುನ್ನ
ಕಟ್ಟುವೆವು ನಾವು ಹೊಸ ನಾಡೊಂದನು
ರಸದ ಬೀಡೊಂದನು
ನಮ್ಮೆದೆಯ ಕನಸುಗಳೆ ಕಾಮಧೇನು
ಆದಾವು ಕರೆದಾವು ವಾಂಛಿತವನು
ಕರೆವಕೈಗಳಿಗಿಹುದಿದೋ ಕನಸುಗಳ ಹರಕೆ
ಗುರಿತಪ್ಪದೊಮ್ಮುಖದ ಬಯಕೆ ಬೆಂಬಲಕೆ
ಕಟ್ಟುವೆವು ನಾವು ಹೊಸ ನಾಡೊಂದನು
ರಸದ ಬೀಡೊಂದನು
ನಾವು ಹಿಂದೆಗೆವೆವೇ ವೀರ ತರುಣರು ನಾವು
ಒಂದೆ ನೆಗೆತಕೆ ನೆಗೆವೆವೋ ಕಂದಕವನು
ಕುಟ್ಟಿ ಪುಡಿ ಮಾಡುವೆವು ಕೋಟೆಗಳನು
ಎದೆಮೆಟ್ಟಿ ಮುರಿಯುವೆವು ಅಸುರ ರಟ್ಟೆಗಳನು
ಕಟ್ಟುವೆವು ನಾವು ಹೊಸ ನಾಡೊಂದನು
ರಸದ ಬೀಡೊಂದನು
.........
.........
.........
ಇಂದು ಬಾಳಿದು ಕೂಳ ಕಾಳಗವು
ಹೊಟ್ಟೆಯೇ ಕೇಂದ್ರವಾಗಿದೆ ನರನ ಜೀವಿತಕ್ಕೆ
ಅನ್ನದನ್ಯಾಯ ದಾವಾಗ್ನಿಯಲಿ ದಹಿಸುತಿದೆ
ನರತೆ ಸಂಸ್ಕೃತಿ ಪ್ರೀತಿ ದಿವದ ಬಯಕೆ
ಕಟ್ಟುವೆವು ನಾವು ಹೊಸ ನಾಡೊಂದನು
ರಸದ ಬೀಡೊಂದನು
ಇರುವೆಲ್ಲವನು ಎಲ್ಲ ಜನಕೆ ತೆರವಾಗಿಸುವ
ಸಮಬಗೆಯ ಸಮಸುಖದ ಸಮದುಃಖದ
ಸಾಮರಸ್ಯದ ಸಾಮಗಾನ ಲಹರಿಯ ಮೇಲೆ
ತೇಲಿಬರಲಿದೆ ನೋಡು ನಮ್ಮ ನಾಡು
ಕಟ್ಟುವೆವು ನಾವು ಹೊಸ ನಾಡೊಂದನು
ರಸದ ಬೀಡೊಂದನು ಸುಖದ ಬೀಡೊಂದನು
*****
ಈ ಕವಿತೆಗೆ ಈಗ ಸುಮಾರು ಐವತ್ತೈದು ವರುಷ. ಕಳೆದ ದಶಕಗಳಲ್ಲಿ ಬಹಳ ಬದಲಾವಣೆಗಳಾಗಿವೆ. ಪಡಿತರ ಪದ್ದತಿಯಲ್ಲಿ, ವ್ಯವಸ್ಥೆಯಲ್ಲಿ ಎಷ್ಟೋ ಸುಧಾರಣೆ ಆಗಿದೆ. ಅಂದು ರೇಷನ್ ಅಂಗಡಿ ಎಂದು ತೆಗೆಯುತ್ತದೋ, ಯಾವಾಗ ಏನು ಕೊಡುತ್ತಾರೋ ಗೊತ್ತಿರಲಿಲ್ಲ. ಇಂದು 80 ಕೋತಟಿ ಜನ ಪಡಿತರ ಪ್ರತಿ ತಿಂಗಳೂ ಪಡೆಯುತ್ತಿದ್ದಾರೆ. ತಿಂಗಳು ತಿಂಗಳೂ ಏನು ಪದಾರ್ಥ ಕೊಡುತ್ತಾರೆ ಅನ್ನುವುದು ಎಲ್ಲರಿಗೂ ಗೊತ್ತು. ನಮಗೆ ಪಡಿತರ ಸಿಕ್ಕಿಲ್ಲ ಎನ್ನುವ ದೂರುಗಳು ಅಷ್ಟಾಗಿ ಕೇಳಿಬರುತ್ತಿಲ್ಲ. ಇದರ ಜೊತೆಗೆ ಸರ್ಕಾರಗಳು DBT ಮೂಲಕ ಅನೇಕ ಯೋಜನೆಗಳಿಂದ ಅನೇಕರ ಖಾತೆಗಳಿಗೆ ಹಣವನ್ನೂ ಹಾಕುತ್ತಿದ್ದಾರೆ. ಇಂತಹ ಯೋಜನೆಗಳಿಂದ ಜನ ಸೋಮಾರಿಗಳಾಗುತ್ತಿದ್ದರೆ ಎನ್ನುವ ಚರ್ಚೆಯೂ ಬಲವಾಗಿ ನಡೆದಿದೆ.
"ಸಾಮರಸ್ಯದ ಸಾಮಗಾನ ಲಹರಿಯ ಮೇಲೆ ಕನಸಿನ ನಾಡು" ಪೂರ್ಣವಾಗಿ ತೇಲಿ ಬಂದಿಲ್ಲ. ಅನೇಕ ಪದರಗಳಲ್ಲಿ ಸಾಮರಸ್ಯ ಇನ್ನೂ ಹದಗೆಡುವ ಲಕ್ಷಣಗಳು ನಿಚ್ಚಳವಾಗಿ ಕಂಡುಬರುತ್ತಿವೆ. ಸಮಾಜವಾದ ಮತ್ತು ಸಮತಾವಾದ ಪ್ರತಿಧ್ವನಿಸಿದ ಈ ಕವನ ಇಂದು ಅಷ್ಟಾಗಿ ಕೇಳಿಬರುತ್ತಿಲ್ಲ. ಸಮತಾವಾದದ ಬಿರುಸು ಬಹಳ ಕಡಿಮೆಯಾಗಿದೆ. ಸಮತಾವಾದದ ಹೆಸರಿನಲ್ಲಿ ಮುಂದೆ ಬಂಡ ನಾಯಕರುಗಳು ತಮ್ಮ ಹಿಂದಿದ್ದ ಜನತೆಯನ್ನು ಹಿಂದೆ ಬಿಟ್ಟು ಎಷ್ಟೋ ಮುಂದೆಬಂದಿದ್ದಾರೆ!
ಅನ್ನದ ಹಾಹಾಕಾರ ಎಷ್ಟೋ ಕಡಿಮೆಯಾಗಿದೆ. ಆದರೂ ಪೂರ್ಣವಾಗಿ ಹೋಗಿದೆ ಎನ್ನುವಂತಿಲ್ಲ. ಮನಸ್ಸಿದ್ದವರಿಗೆ ದುಡಿಯುವ ದಾರಿ ಮೊದಲಿಗಿಂತ ಎಷ್ಟೋ ಉತ್ತಮವಾಗಿದೆ. ಆದರೂ ನಿರುದ್ಯೋಗ ಪೂರ್ಣವಾಗಿ ನೀಗಿಲ್ಲ. ಪರಿಸ್ಥಿತಿ ಇನ್ನೂ ಉತ್ತಮವಾಗುವುದೆಂದು ಆಶಿಸೋಣ.
*****
ಚಂದ್ರಶೇಖರ ಕೆದಿಲಾಯರು ಹಾಡಿರುವ ಈ ಕವನ ಯೂಟ್ಯೂಬಿನಲ್ಲಿ ಲಭ್ಯವಿದೆ. ಈ ಕೆಳಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ ಕೇಳಬಹುದು:
I have read about late Sri Gopalaktishna adigaru on Wikipedia. Your article gives about his love for Kannada Nadu. I can understand the meaning of this poem along with the content of your article. Thanks for the YouTube video. Very nice singing. Recognizing the talents of our Sahitigalu and others is a great gift given to us. Thanks Keshav. UR…..
ReplyDeleteExcellent article, reminds me of the ordeal we faced when we were young. We being dependent on agriculture, severe famine for three consecutive years had hit us so hard.
ReplyDeleteI am listening to this popular song of those days ‘ಕಟ್ಟುವೆವು ನಾವು ಹೊಸ ನಾಡೊಂದನು’ after a long time and is absorbing.
Thanks Murthigale
Very nice information tha Sree Gokhale contested along with Hanumantaish whi must have because of money power
ReplyDeleteI. Those days all public may not be the promulgation but they played card of jati etc
ತುಂಬಾ ಚೆನ್ನಾಗಿ ಬರೆದಿದ್ದೀರಿ, ನೀವು ಎಷ್ಟು ವಿಚಾರಗಳು ವಿಷಯಗಳನ್ನು ತಿಳಿದಿದ್ದೀರಿ, ಅದನ್ನು ಉದಾಹರಣೆ ಯ ಜೊತೆ ಬರೆಯುತ್ತೀರಿ, ನಮಗೆ ಇದರಿಂದ ತುಂಬಾ ಜ್ನಾನ , ಲಾಭ, ಧನ್ಯವಾದಗಳು.
ReplyDeleteನಿಮ್ಮ ಲೇಖನ ಶಾಲೆಗಳಲ್ಲಿ ನೀಡುತ್ತಿದ್ದ ಅಮೆರಿಕದ ಗೋಧಿ ನುಚ್ಚಿನ ಉಪ್ಪಿಟ್ಟನ್ನು ನೆನಪಿಸಿತು. ಹಾಗೇ ಶಾಸ್ತ್ರಿಯವರು ಯುದ್ಧಕಾಲದಲ್ಲಿ ಕರೆ ನೀಡಿದ್ದರಿಂದ ವಾರದಲ್ಲಿ ಮಾಡುತ್ತಿದ್ದ ಒಂದು ಹೊತ್ತಿನ ಉಪವಾಸವೂ ನೆನಪಾಯಿತು. ಬೆಳೆದ ಕೃಷಿಕನಿಗೆ ಅದರ ಬೆಲೆ ಗೊತ್ತು ಹಾಗಾಗಿ ಒಂದೊಂದು ಕಾಳನ್ನು ಆರಿಸಿ ಆರಿಸಿ ಎತ್ತಿಟ್ಟು ಕಾಪಾಡುತ್ತಾನೆ ಈಗ ಪೋಲಾಗುವ ಆಹಾರ ನೆನೆಸಿಕೊಂಡರೆ ಬೇಜಾರಾಗುತ್ತದೆ.
ReplyDeleteಗೋಪಾಲಕೃಷ್ಣ ಅಡಿಗರ ನೆನಪು ಮಾಡಿದ್ದಕ್ಕೆ ಧನ್ಯವಾದಗಳು .