Wednesday, April 9, 2025

ಸಿಕ್ಕಿದ್ದು - ದಕ್ಕಿದ್ದು


ಜರ್ಮನಿ ದೇಶದ ಬರ್ಲಿನ್ ನಗರದಲ್ಲಿ ನಡೆದ 1936ನೆಯ  ಇಸವಿಯ ಒಲಿಂಪಿಕ್ಸ್  ಪಂದ್ಯಾವಳಿಗಳು ಅನೇಕ ಕಾರಣಗಳಿಂದ ಬಹಳ ಮಹತ್ವದ್ದಾಗಿತ್ತು. ಮೊದಲ ಮಹಾಯುದ್ಧದ ನಂತರ ಅಡಾಲ್ಫ್ ಹಿಟ್ಲರ್ ನಾಯಕತ್ವದಲ್ಲಿ ಜೆರ್ಮನಿ ಒಂದು ದೊಡ್ಡ ಶಕ್ತಿಯಾಗಿ ಹೊರಹೊಮ್ಮಿತ್ತು. ಮುಂದೆ ಎರಡು ವರುಷಗಳ ನಂತರ ನಡೆಯಲಿದ್ದ ಎರಡನೇ ಮಹಾಯುದ್ಧದ ಮೂಲ ಕಾರಣ ಮತ್ತು ದೊಡ್ಡ ಪಾತ್ರಧಾರಿ ಅಗಲಿದ್ದ ದೇಶದ ರಾಜಧಾನಿ ಬರ್ಲಿನ್ ನಾಲ್ಕು ವರುಷಗಳಿಗೆ ಒಮ್ಮೆ ನಡೆಯುವ ಒಲಿಂಪಿಕ್ಸ್ ಪಂದ್ಯಾವಳಿಗಳಿಗೆ ಆತಿಥೇಯ ನಗರ. ಪ್ರಪಂಚದ ಎಲ್ಲ ಹೆಸರಾಂತ ಕ್ರೀಡಾಪಟುಗಳು ಅಲ್ಲಿ ನೆರೆದಿದ್ದರು. 


ಒಬ್ಬ ಭಾರತೀಯ ಆಟಗಾರ ಆ ಬರ್ಲಿನ್ ಒಲಿಂಪಿಕ್ಸ್  ಕ್ರೀಡೆಗಳಲ್ಲಿ ಬಹಳ ದೊಡ್ಡ ಹೆಸರು ಮಡಿದರು. "ಹಾಕಿ ಮಾಂತ್ರಿಕ" ಎಂದೇ ಹೆಸರಾದ ಮೇಜರ್ ಧ್ಯಾನ್ ಚಂದ್ ಭಾರತ-ಜರ್ಮನಿ ನಡುವಿನ ಫೈನಲ್ ಹಾಕಿ ಪಂದ್ಯದಲ್ಲಿ ಮೂರು ಗೋಲು ಗಳಿಸಿ (ಕೆಲವು ವರದಿ ನಾಲ್ಕು ಎಂದು ಹೇಳುತ್ತವೆ) ಭಾರತ 8 - 1 ಗೋಲುಗಳ ಅಂತರದಿಂದ ಚಿನ್ನದ ಪದಕ ಪಡೆಯಲು ಕಾರಣರಾದರು. ಧ್ಯಾನ್ ಚಂದ್ ಆಟವನ್ನು ನೋಡಿದ ಹಿಟ್ಲರ್ ಮುಕ್ತ ಕಂಠದಿಂದ ಹಾಡಿ ಹೊಗಳಿದನೆಂದು ವರದಿಗಳು ಹೇಳುತ್ತವೆ, 


ಇದೇ ಒಲಿಂಪಿಕ್ಸ್ ಪಂದ್ಯಗಳಲ್ಲಿ ಟ್ರ್ಯಾಕ್ ಅಂಡ್ ಫೀಲ್ಡ್  ಕ್ಷೇತ್ರದಲ್ಲಿ ಅಸಾಧಾರಣ ಸಾಧನೆ ಮಾಡಿದ ಅಥ್ಲೆಟ್ ಅಮೇರಿಕ ಸಂಯುಕ್ತ ಸಂಸ್ಥಾನಗಳ ಜೆಸ್ಸಿ ಒವೆನ್ಸ್. ಕೇವಲ ಒಂದು ಗಂಟೆಯ ಸಮಯದಲ್ಲಿ ನಡೆದ ನಾಲ್ಕು ಪಂದ್ಯಗಳಲ್ಲಿ ಮೂರು ವರ್ಲ್ಡ್ ರೆಕಾರ್ಡ್ ಸ್ಥಾಪಿಸಿ, ನಾಲ್ಕನೆಯದನ್ನು ಸಮವಾಗಿಸಿ ಒಟ್ಟು ನಾಲ್ಕು ಚಿನ್ನದ ಮೆಡಲ್ಲುಗಳನ್ನು ಗೆದ್ದ ಧೀರ. 100 ಮೀಟರ್ ಮತ್ತು  200 ಮೀಟರ್ ಓಟ, ಲಾಂಗ್ ಜಂಪ್ ಮತ್ತು 4x100 ರಿಲೇ ಓಟಗಳಲ್ಲಿ ಚಿನ್ನದ ಪದಕ ಸಾಧಿಸಿದ ಮಹಾನ್ ಕ್ರೀಡಾಪಟು. ಅನೇಕ ದಶಕಗಳವರೆಗೆ ಪ್ರಪಂಚದ ಅತ್ಯಂತ ಶ್ರೇಷ್ಠ ಕ್ರೀಡಾಪಟು ಎನ್ನುವ ಗದ್ದುಗೆಯಲ್ಲಿ ಒಬ್ಬನೇ ಕುಳಿತಿದ್ದ ಸಾರ್ವಭೌಮ. 


ಇಂತಹ ಜೆಸ್ಸಿ ಒವೆನ್ಸ್  ಸ್ಥಾಪಿಸಿದ ನಾಲ್ಕು ಅಥ್ಲೆಟಿಕ್ಸ್ ಚಿನ್ನದ ಪದಕಗಳ ಶ್ರೇಯಸ್ಸು ಮತ್ತೊಮ್ಮೆ ನೋಡಲು ಪ್ರಪಂಚ ಸುಮಾರು ಐವತ್ತು ವರುಷ ಕಾಯಬೇಕಾಯಿತು. 1984ರಲ್ಲಿ ಲಾಸ್ ಏಂಜಲೀಸ್ ಒಲಿಂಪಿಕ್ಸ್  ಕ್ರೀಡಾಕೂಟದಲ್ಲಿ ಅಮೆರಿಕಾದವರೇ ಆದ ಕಾರ್ಲ್ ಲೂಯಿಸ್ ಮತ್ತೆ ಇವೇ ನಾಲ್ಕು ಸ್ಪರ್ಧೆಗಳಲ್ಲಿ ಚಿನ್ನದ ಪದಕ ಗಳಿಸಿ ಜೆಸ್ಸಿ ಒವೆನ್ಸ್  ಸಾಧನೆ ಸರಿಸಮಗಟ್ಟಿದರು. "ಪ್ರಪಂಚದ ಶತಮಾನದ ಶ್ರೇಷ್ಠ ಅಥ್ಲೆಟ್" ಎನ್ನುವ ಹೆಸರು ಸಂಪಾದಿಸಿದರು. ಸುಮಾರು ಹತ್ತು ವರುಷಗಳ ಕಾಲ ಅನೇಕ ಕ್ರೀಡಾಕೂಟಗಳಲ್ಲಿ ಪದಕಗಳ ಸುರಿಮಳೆಯನ್ನೇ ಸುರಿಸಿದರು. 


ಲಾಸ್ ಏಂಜಲೀಸ್ ಒಲಿಂಪಿಕ್ಸ್ ನಡೆದ ಕೆಲವು ದಿವಸಗಳ ನಂತರ ಕಾರ್ಲ್ ಲೂಯಿಸ್ ತಂದೆ ತೀರಿಕೊಂಡಾಗ ಅವರ ಶವಪೆಟ್ಟಿಗೆಯಲ್ಲಿ ಲೂಯಿಸ್ ತಮ್ಮ ಲಾಸ್ ಏಂಜಲೀಸ್ನಲ್ಲಿ ಗೆದ್ದಿದ್ದ ನೂರು ಮೀಟರ್ ಓಟದ ಚಿನ್ನದ ಪದಕ ಇಟ್ಟು ಬೀಳ್ಕೊಟ್ಟರು.  ತಮ್ಮ ಸಾಧನೆಗಳಿಗೆ ತಂದೆ ಪಟ್ಟ ಶ್ರಮಕ್ಕೆ ಕೃತಜ್ಞತೆ ಸೂಚಿಸುವ ಸಲುವಾಗಿ ಅವರು ಹೀಗೆ ಮಾಡಿದರಂತೆ. ಪಕ್ಕದಲ್ಲಿದ್ದ ತನ್ನ ತಾಯಿಗೆ "ಚಿಂತಿಸಬೇಡ. ನಾನು ಇನ್ನೊಂದು ನೂರು ಮೀಟರ್ ಓಟದ ಒಲಿಂಪಿಕ್ಸ್ ಚಿನ್ನದ ಪದಕ ಗೆದ್ದೇಗೆಲ್ಲುತ್ತೇನೆ" ಎಂದು ಹೇಳಿದರಂತೆ. ಅದರಂತೆ ತಯಾರಿ ಮಾಡಿದರು ಸಹ. 


ಮುಂದಿನ ಒಲಿಂಪಿಕ್ಸ್ ಪಂದ್ಯಗಳು ನಡೆದಿದ್ದು ದಕ್ಷಿಣ ಕೊರಿಯಾ ದೇಶದ ಸಿಯೋಲ್ ನಗರದಲ್ಲಿ. 1988 ಸಿಯೋಲ್ ಒಲಿಂಪಿಕ್ಸ್  ಕ್ರೀಡಾಕೂಟದಲ್ಲಿ ಕೆನಡಾ ದೇಶದ ಬೆನ್ ಜಾನ್ಸನ್ ಕಾರ್ಲ್ ಲೂಯಿಸ್ ಎದುರಿಸಿದ ಪ್ರಬಲ ಪ್ರತಿಸ್ಪರ್ಧಿ. 1984 ಲಾಸ್ ಏಂಜಲೀಸ್ ಕೂಟದಲ್ಲಿ ಕಂಚಿನ ಪದಕ ಗೆದ್ದಿದ್ದ ಬೆನ್ ಜಾನ್ಸನ್ ಸಿಯೋಲ್ ನಗರದ ಒಲಿಂಪಿಕ್ಸ್ ಕೂಟದಲ್ಲಿ  ಚಿನ್ನದ ಪದಕ ಗೆದ್ದರು. ಕಾರ್ಲ್ ಲೂಯಿಸ್ ಬೆಳ್ಳಿ ಪದಕ ಪಡೆದರು. ಆದರೆ ಮೂರು ದಿನಗಳ ನಂತರ ಬಂದ ಮಾದಕ ದ್ರವ್ಯ ಸೇವನೆಯ ವರದಿಯಲ್ಲಿ ಬೆನ್ ಜಾನ್ಸನ್ ದೋಷಿ ಎಂದು ಹೊರಬಿತ್ತು. ಮೂರು ದಿನದ ನಂತರ ಜಾನ್ಸನ್ ಪದಕ ಕಿತ್ತು, ಕಾರ್ಲ್ ಲೂಯಿಸ್ ಚಿನ್ನದ ಪದಕ ವಿಜೇತ ಎಂದು ಘೋಷಿಸಿದರು. ತಾಯಿಗೆ ಹೇಳಿದ ಮಾತಿನಂತೆ ಕಾರ್ಲ್ ಲೂಯಿಸ್ ಮತ್ತೊಂದು 100 ಮೀಟರ್ ಓಟದ ಒಲಿಂಪಿಕ್ಸ್ ಚಿನ್ನದ ಪದಕ ಗಳಿಸಿದಂತಾಯಿತು. 


ಒಲಿಂಪಿಕ್ಸ್ ಕ್ರೀಡೆಗಳ ಇತಿಹಾಸದಲ್ಲಿ ಇದೊಂದು ಬಹಳ ಚರ್ಚಿತವಾದ ಅಧ್ಯಾಯ. ತಿಂಗಳುಗಟ್ಟಲೆ ಪತ್ರಿಕೆಗಳು ನೂರಾರು ಪುಟಗಳು ಈ ವಿಷಯದ ಪರ-ವಿರೋಧ ಪ್ರಕಟಣೆ ಮಾಡಿದವು. ಆ ವಿಷಯ ಹಾಗಿರಲಿ. "ಸಿಕ್ಕಿದ್ದು - ದಕ್ಕಿದ್ದು" ಎನ್ನುವ ಶೀರ್ಷಿಕೆಯ ಚರ್ಚೆಯ ಹಿನ್ನೆಲೆಯಲ್ಲಿ ಹೇಳುವುದಾದರೆ ಬೆನ್ ಜಾನ್ಸನ್ ಅವರಿಗೆ ಚಿನ್ನದ ಪದಕ ಸಿಕ್ಕಿತು. ಆದರೆ ದಕ್ಕಲಿಲ್ಲ. ಕಾರ್ಲ್ ಲೂಯಿಸ್ ಅವರಿಗೆ ಸ್ವಲ್ಪ ತಡವಾದರೂ ಚಿನ್ನದ ಪದಕ ಸಿಕ್ಕಿತು ಮತ್ತು ದಕ್ಕಿತು. 


***** 

"ಯೋಗಕ್ಷೇಮ" ಅನ್ನುವ ಪದವನ್ನು ಕೆಲವು ದಶಕಗಳ ಹಿಂದೆ ಮಾತಾಡುವಾಗ ಮತ್ತು ಬರವಣಿಗೆಯಲ್ಲಿ ಮತ್ತೆ ಮತ್ತೆ ಉಪಯೋಗಿಸುತ್ತಿದ್ದರು. ನಾವು ಮಾಧ್ಯಮಿಕ ಶಾಲೆಗಳಲ್ಲಿ ಓದುತ್ತಿದ್ದಾಗ "ಪತ್ರಲೇಖನ" ಅಥವಾ "ಕಾಗದ ಬರೆಯುವುದು" ಹೇಗೆ ಎಂದು ಹೇಳಿಕೊಡುತ್ತಿದ್ದರು. ಪತ್ರ ಪ್ರಾರಂಭಮಾಡುವಾಗ ಮೇಲುಗಡೆ ಎಡ ಮೂಲೆಯಲ್ಲಿ "ಕ್ಷೇಮ" ಎಂದೂ, ಬಲಗಡೆಯಲ್ಲಿ ಪತ್ರ ಬರೆಯುವ ಸ್ಥಳ ಮತ್ತು ದಿನಾಂಕ ಬರೆಯಬೇಕೆಂದು ಹೇಳುತ್ತಿದ್ದರು. ಆಗ ಇನ್ನೂ "ಎಸ್ಸೆಮೆಸ್" ಭಾಷೆ ಬಂದಿರಲಿಲ್ಲ. ಪತ್ರದ ಮೊದಲ ಪ್ಯಾರಾದಲ್ಲಿ "ಇಲ್ಲಿ ನಾವೆಲ್ಲರೂ ಕ್ಷೇಮ. ಅಲ್ಲಿ ನಿಮ್ಮೆಲ್ಲರ ಯೋಗಕ್ಷೇಮಕ್ಕೆ ಕಾಗದ ಬರೆಯುವುದು" ಎನ್ನುವ ಒಕ್ಕಣೆ ಇರುತ್ತಿತ್ತು. ಈ "ಯೋಗಕ್ಷೇಮ" ಅಂದರೆ ಏನು? 


ಕೆಲವು ದಶಕಗಳ ಹಿಂದೆ ಹಳ್ಳಿಗಳಲ್ಲಿ ಮತ್ತು ದೊಡ್ಡ ಊರುಗಳಲ್ಲಿ ಕೂಡ ಆಸ್ಪತ್ರೆಗಳಿರಲಿಲ್ಲ. ದೂರದ ಊರುಗಳ ಆಸ್ಪತ್ರೆಗಳಿಗೆ ಹೋಗಲು ಜನರ ಬಳಿ ದುಡ್ಡಿರಲಿಲ್ಲ. ಆಸ್ಪತ್ರೆಗಳಲ್ಲಿ ಸಹ ಇಂದಿನಂತೆ ಹೆಚ್ಚಿನ ಸೌಲಭ್ಯಗಳು ಇರಲಿಲ್ಲ. ಸಾಮಾನ್ಯವಾಗಿ ಹತ್ತಿರದ "ನಾಟಿ ವೈದ್ಯ" ಕೊಡುವ ಮದ್ದಿನಿಂದ ಖಾಯಿಲೆ-ಕಸಾಲೆಗಳಿಗೆ ಚಿಕಿತ್ಸೆ ಮಾಡುತ್ತಿದ್ದರು. ಸ್ವಲ್ಪ ವಿದ್ಯಾವಂತರ ಮನೆಯಲ್ಲಿ ಒಂದು ಚಿಕಿತ್ಸೆ ಡಬ್ಬಿ ಮಾಡಿ ಅದರಲ್ಲಿ ಕೆಲವು ಮಾತ್ರೆಗಳ ಸರಕನ್ನು ಇಟ್ಟಿರುತ್ತಿದ್ದರು. ಚಿಕಿತ್ಸೆ ಇದರಿಂದಲೇ ನಡೆಯುತ್ತಿತ್ತು. ಜಾಕಾಯಿ, ಅಳಲೆಕಾಯಿ, ಶುಂಠಿ, ಅರಿಸಿನ, ಔಷಧಿ ಗುಣವಿರುವ ಸೊಪ್ಪುಗಳು, ಇವುಗಳಿಂದ ರೋಗಿಗಳ ಶುಶ್ರೂಷೆ ನಡೆಯುತ್ತಿತ್ತು. ಆಯುರ್ವೇದ ಪಂಡಿತರು ಬಾಣಂತಿಯರಿಗಾಗಿ "ಮಹಾ ಸೌಭಾಗ್ಯ ಶುಂಠಿ ಲೇಹ್ಯ" ಮಾಡಿಕೊಡುತ್ತಿದ್ದರು. ನಂಜನಗೂಡು ಬಿ. ವಿ. ಪಂಡಿತರ "ಸದ್ವೈದ್ಯಶಾಲಾ" ತಯಾರಿತ ಜ್ವರಕೇಸರಿ, ಸುಖಭೇದಿ ಮತ್ತು ಕಸ್ತೂರಿ ಮಾತ್ರೆ ಮುಂತಾದವು ಇಂತಹ ಡಬ್ಬಿಯಲ್ಲಿ ಇರುತ್ತಿದ್ದವು. 


ಮನೆಯಲ್ಲಿ ಯಾರಿಗಾದರೂ ಜ್ವರ ಬಂದರೆ "ಜ್ವರಕೇಸರಿ" ಮಾತ್ರೆ ಕೊಡುತ್ತಿದ್ದರು. ಮಾತ್ರೆ ನುಂಗಲಾರದ ಚಿಕ್ಕ ಮಕ್ಕಳಿಗೆ ಅದನ್ನು ಜೇನುತುಪ್ಪದಲ್ಲಿ ಕಲೆಸಿ ಒಂದು ವೀಳೆಯದೆಲೆ ಮೇಲೆ ಇಟ್ಟು ನೆಕ್ಕಿಸುತ್ತಿದ್ದರು. ಶಿಶುಗಳಿಗೆ ಒಂದು ಒಳಲೆಯಲ್ಲಿ ಅದನ್ನು ಹಾಲಿನಲ್ಲಿ ಪುಡಿ ಮಾಡಿ ಬೆರೆಸಿ ಕುಡಿಸುತ್ತಿದ್ದರು. ಅನೇಕವೇಳೆ ಒಳಲೆಯ ಔಷಧದ ಹಾಲು ಪೂರ್ತಿ ಶಿಶುವಿನ ಹೊಟ್ಟೆಗೆ ಸೇರುತ್ತಿರಲಿಲ್ಲ. ಅರ್ಧ ಹೋಗಿ ಅರ್ಧ ಶಿಶು ಉಗುಳಿ ಹೊರಹಾಕುತ್ತಿತ್ತು. "ಔಷದಿ ಪೂರ್ತಿ ದಕ್ಕಲಿಲ್ಲ" ಎನ್ನುತ್ತಿದ್ದರು. ಔಷದಿ ಸಿಕ್ಕಿತು. ಆದರೆ ದಕ್ಕಲಿಲ್ಲ. 


ಒಬ್ಬರು ಬಹಳ ಕಷ್ಟ ಪಟ್ಟು ಸಾಲ-ಸೋಲ ಮಾಡಿ ಮನೆ ಕಟ್ಟಿದ್ದಾಯಿತು. ಆದರೆ ಮನೆ ಕಟ್ಟಿ ಮುಗಿಯುವ ಹೊತ್ತಿಗೆ ಕೆಲಸದಲ್ಲಿ ದೂರದ ಊರಿಗೆ ವರ್ಗಾವಣೆ ಆಯಿತು. ಕಟ್ಟಿದ ಮನೆಯಲ್ಲಿ ವಾಸ ಮಾಡುವಂತಿಲ್ಲ. ಮನೆ ಕಟ್ಟುವ ಭಾಗ್ಯ ಸಿಕ್ಕಿತು. ಸ್ವಂತ ಮನೆ ಆಯಿತು. ಆದರೆ ಅದರಲ್ಲಿ ಇರುವ ಸಂತಸ ಸಿಗಲಿಲ್ಲ. ಇಂತಹ ಅನೇಕ ಉದಾಹರಣೆಗಳನ್ನು ಕೊಡಬಹುದು. "ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ" ಅನ್ನುವ ಗಾದೆ ಇಂತಹ ಸಂದರ್ಭಗಳಿಂದಲೇ ಹುಟ್ಟಿರಬೇಕು. 


*****

ಈ ಸಿಕ್ಕಿತು-ದಕ್ಕಿತು ಮತ್ತು ಯೋಗ-ಕ್ಷೇಮ ಎರಡೂ ಒಂದೇ. ಜೀವನದಲ್ಲಿ ಅನೇಕ ಪದಾರ್ಥಗಳು ಸಿಕ್ಕುತ್ತವೆ. ಆದರೆ ದಕ್ಕುವುದಿಲ್ಲ. ಯೋಗ ಎಂದರೆ ಯಾವುದೋ ಒಂದು ಸುಖ, ಸಂಪತ್ತು, ಪದವಿ, ಭಾಗ್ಯ ಸಿಕ್ಕುವ ಅವಕಾಶ. ಕ್ಷೇಮ ಅಂದರೆ ಅಂತಹ ಸಿಕ್ಕಿದ ಸುಖ, ಪದವಿ ಅಥವಾ ಭಾಗ್ಯ ದಕ್ಕುವುದು. ಸಿಕ್ಕಿದಾಗ ಅನುಭವ ಇಲ್ಲ. ಸಿಕ್ಕಿದ್ದು ದಕ್ಕಿದಾಗಲೇ ಅದರ ಅನುಭವ. ತುತ್ತು ಕೈಗೇನೋ ಬಂತು.  ಆದರೆ ಬಾಯಿಗೆ ಬೀಳುವ ಮುನ್ನ ಮಣ್ಣಲ್ಲಿ ಬಿದ್ದುಹೋಯಿತು!  ಸಿಕ್ಕದಿದ್ದರೆ ನಿರಾಸೆಯೇನೋ ಆಗುತ್ತಿತ್ತು. ಆದರೆ ಸಿಕ್ಕಮೇಲೆ ದಕ್ಕದಿದ್ದಾಗ ಎರಡರಷ್ಟು ನಿರಾಸೆ. ಬಹಳ ಪ್ರಯತ್ನಪಟ್ಟಮೇಲೆ ಹೀಗಾದರೆ ಹೇಳಲಾರದಷ್ಟು ನಿರಾಸೆ ಮತ್ತು ಹಿಂಸೆ. 


ಜ್ಯೋತಿಷ್ಯದಲ್ಲಿ ಜನ್ಮ ಕುಂಡಲಿ ನೋಡಿ ಕೆಲವರಿಗೆ "ಗಜಕೇಸರಿ ಯೋಗ" ಇದೆ ಅನ್ನುತ್ತಾರೆ. ಮತ್ತೆ ಕೆಲವರಿಗೆ "ರಾಜಯೋಗ". ಇದೇ ರೀತಿ ಅನೇಕ ಯೋಗಗಳು. ಅನೇಕರಿಗೆ ಈ ರೀತಿಯ ಯೋಗಗಳು ಇರುತ್ತವೆ. ಒಂದೇ ಸಮಯದಲ್ಲಿ ಹುಟ್ಟಿದ ಅನೇಕರಿಗೆ ಒಂದೇ ಕುಂಡಲಿ ಇರುತ್ತದೆ. ಆದರೆ ಎಲ್ಲರಿಗೂ ಅದೇ ಯೋಗ ಇದ್ದರೂ ಫಲ ಬೇರೆ ಬೇರೆ. ಅದರ ಫಲ ಎಲ್ಲರಿಗೂ ಒಂದೇ ಸಮನಾಗಿ ಸಿಗುವುದಿಲ್ಲ. ಯೋಗ ಇದ್ದರೆ ಮಾತ್ರ ಸಾಲದು. ಅದರ ಜೊತೆ ಸಿಕ್ಕಿದ್ದು ಕ್ಷೇಮವಾಗಿ ಬರಬೇಕು. ಇಲ್ಲದಿದ್ದರೆ ಸಿಕ್ಕುತ್ತದೆ. ಆದರೆ ದಕ್ಕುವುದಿಲ್ಲ. 


*****


ಮುಖ್ಯಪ್ರಾಣರು ಎಲ್ಲ ಜೀವರಲ್ಲೂ ಉಸಿರಾಡಿಸುತ್ತಾರೆ. ಪ್ರತಿ ಉಸಿರಿನಲ್ಲೂ ಹಂಸ ಮಂತ್ರ ಜಪ ಮಾಡಿ ಅದರ ಪುಣ್ಯ ಅವರವರ ಖಾತೆಗೆ ಹಾಕುತ್ತಾರೆ. ಈ ರೀತಿಯ ಹಂಸ ಮಂತ್ರ ಜಪದ ಫಲದ ಯೋಗ ಎಲ್ಲರಿಗೂ ಇದೆ. ಆದರೆ ಅದನ್ನು ತಿಳಿದು ಅವರಿಗೆ ಕೃತಜ್ಞತೆ ಸಲ್ಲಿಸಿದಾಗ ಮಾತ್ರ ನಮಗೆ ಅದರ ಪುಣ್ಯದ ಭಾಗ. ಆಗ ಯೋಗ-ಕ್ಷೇಮ ಆಯಿತು. ಇಲ್ಲದಿದ್ದರೆ ಸಿಕ್ಕಿದರೂ ದಕ್ಕಲಿಲ್ಲ ಎಂದಾಯಿತು. ನಮ್ಮ ಖಾತೆಗೆ ಹಣ ಬಂದು ಬಿದ್ದಿದೆ. ನಾವು ಖಾತೆಯನ್ನೇ ನೋಡಲಿಲ್ಲ. ಹಣ ತೆಗೆದು ಉಪಯೋಗಿಸದೆ ನಮ್ಮ ಜೀವನ ಬಡತನದಲ್ಲೇ ಮುಗಿದಂತೆ. ಬಂದ ಯೋಗ ಲ್ಯಾಪ್ಸ್ ಆಯಿತು. ನಾವು ನಿರ್ಭಗ್ಯರಾಗಿ ಉಳಿದೆವು. ಅಷ್ಟೇ. 

3 comments:

  1. ತುಂಬಾ ಚೆನ್ನಾಗಿದೆ ಧನ್ಯವಾದಗಳು

    ReplyDelete
  2. Good information

    ReplyDelete
  3. Very true. UR…..

    ReplyDelete