Sunday, April 27, 2025

ಅಚ್ಯುತ - ಅನಂತ - ಗೋವಿಂದ


"ವಿರಾಟ್ ಸೃಷ್ಟಿಯಲ್ಲಿ ಕೇಳಿಸುವ ಎಲ್ಲ ಶಬ್ದಗಳೂ ಪರಮಪುರುಷನನ್ನು ಕುರಿತಾಗಿವೆ ಮತ್ತು ಅವನ ಗುಣಗಳನ್ನೇ ಹೇಳುತ್ತವೆ" ಎನ್ನುವುದು ಶಾಸ್ತ್ರಾಧ್ಯಯನದಲ್ಲಿ ಕಲಿಯುವ ಒಂದು ಪ್ರಮೇಯ. ಹಾಗೆಯೇ ಪರಮಾತ್ಮನ ಸೃಷ್ಟಿಯಲ್ಲಿ ಇರುವ ಎಲ್ಲ ಶಬ್ದಗಳನ್ನೂ ಎರಡು ರೀತಿಯವು ಎಂದು ಜ್ಞಾನಿಗಳು ವಿಭಾಗ ಮಾಡಿದ್ದಾರೆ. "ವರ್ಣಾತ್ಮ್ಯಕ" ಮತ್ತು "ಧ್ವನ್ಯಾತ್ಮಕ" ಎಂಬುದಾಗಿ ಈ ಎರಡು ಪ್ರಭೇದಗಳು.


ನಾವು ಎಲ್ಲ ಬಗೆಯ ಶಬ್ದಗಳನ್ನೂ ಕೇಳಿ ತಿಳಿಯುವುದು ಶ್ರವಣೇಂದ್ರಿಯದಿಂದ. ನಮ್ಮ ಕಿವಿಗಳ ಸಹಾಯದಿಂದ. ಧ್ವನಿ ತರಂಗಗಳನ್ನು ಕಿವಿಗಳಿಂದ ಸ್ವೀಕರಿಸಿದ ನಂತರ ನಮ್ಮ ಮಿದುಳು ಅದನ್ನು ನಮಗೆ ಅರ್ಥ ಮಾಡಿಸುತ್ತದೆ. ವಿಜ್ಞಾನವೂ ಇದನ್ನೇ ಹೇಳುತ್ತದೆ. ನಾವು ಕೇಳುವ ಕೆಲವು ಶಬ್ದಗಳನ್ನು ವರ್ಣಮಾಲೆಯಲ್ಲಿರುವ ಅಕ್ಷರಗಳಿಂದ ಬರೆಯಬಹುದು. ಇವುಗಳನ್ನು "ವರ್ಣಾತ್ಮ್ಯಕ" ಶಬ್ದಗಳು ಎನ್ನುತ್ತಾರೆ. ನಾವು ಕೇಳುವ ಮತ್ತೆ ಕೆಲವು ಶಬ್ದಗಳನ್ನು ಅಕ್ಷರಗಳಲ್ಲಿ ಬರೆಯಲಾಗುವುದಿಲ್ಲ. ಉದಾಹರಣೆಗೆ ಘಂಟೆ, ಜಾಗಟೆ, ಸಿಡಿಲು ಮುಂತಾದುವುಗಳ ಶಬ್ದಗಳು. ಪ್ರಾಣಿ-ಪಕ್ಷಿಗಳು ಕೂಗುವ ಶಬ್ದಗಳು. ನದಿ-ಸಮುದ್ರಗಳು ಮಾಡುವ ಶಬ್ದಗಳು. ಘಂಟೆ "ಢಣ್" ಎಂದಿತು ಎಂದು ಹೇಳಿದರೂ ಎಲ್ಲ ಘಂಟೆಗಳೂ ಒಂದೇ ರೀತಿ ಶಬ್ದ ಮಾಡುವುದಿಲ್ಲ. ಒಂದು ಘಂಟೆ ಮಾಡಿದ ಶಬ್ದದಂತೆ ಮತ್ತೊಂದಿಲ್ಲ. ಹತ್ತು ಘಂಟೆಗಳು ಮಾಡುವ ಶಬ್ದ ವೈವಿಧ್ಯವನ್ನು ನಮ್ಮ ಇಂದ್ರಿಯಗಳು ಗುರುತಿಸಬಲ್ಲವು. ನದಿ ಜುಳು ಜುಳು ಎಂದು ಹರಿಯುತ್ತದೆ ಎಂದರೂ, ಒಮ್ಮೆ ಇದ್ದಂತೆ ಮತ್ತೊಮ್ಮೆ ಇಲ್ಲ. ನೀರು ಹರಿವು ಹೆಚ್ಚಿದ್ದಾಗಿನಂತೆ ನೀರು ಹರಿವು ಕಡಿಮೆ ಇದ್ದಾಗ ಇಲ್ಲ. ಇಂತಹ ಶಬ್ದಗಳನ್ನು "ಧ್ವನ್ಯಾತ್ಮಕ" ಶಬ್ದಗಳು ಎಂದು ಹೇಳುತ್ತಾರೆ. 

ನಮ್ಮ ಇಂದ್ರಿಯಗಳು ಒಂದು ನಿಗದಿತ ಪ್ರಮಾಣದ ಅಂತರದ ಆವರ್ತನ (ಫ್ರೀಕ್ವೆನ್ಸಿ) ಶಬ್ದಗಳನ್ನು ಮಾತ್ರ ಗ್ರಹಿಸಬಲ್ಲವು. ಆದರೆ ಸೃಷ್ಟಿಯಲ್ಲಿ ಇದನ್ನು ಮೀರಿದ ಶಬ್ದಗಳೂ ಇವೆ. ಇವನ್ನು ಇನ್ಫ್ರಾಸೌಂಡ್ ಮತ್ತು ಅಲ್ಟ್ರಾಸೌಂಡ್ ತರಂಗಗಳು ಅನ್ನುತ್ತಾರೆ. ಅನೇಕ ವೈದ್ಯಕೀಯ ಮತ್ತು ತಾಂತ್ರಿಕ ಬೆಳವಣಿಗಳಲ್ಲಿ ಈ ಶಬ್ದಗಳ ಉಪಯೋಗವನ್ನೂ ಮಾಡುತ್ತಾರೆ. 

*****

ನಮ್ಮ ಸಂಪ್ರದಾಯದಂತೆ ಮತ್ತು ನಡವಳಿಕೆಯಲ್ಲಿ ಬಂದಿರುವ ಅಭ್ಯಾಸದಂತೆ ಯಾರನ್ನಾದರೂ ನೋಡಲು ಹೋಗುವಾಗ ಬರಿಗೈಲಿ ಹೋಗುವುದಿಲ್ಲ. ನಮ್ಮ ಮನೆಗೆ ಯಾರಾದರೂ ಬಂದಾಗಲೂ ಅವರನ್ನು ಬರಿಗೈಲಿ ಕಳಿಸುವುದಿಲ್ಲ. ಸಮಾರಂಭಗಳಿಗೆ ಹೋದಾಗಲೂ ಅಷ್ಟೇ. "ಬರಿಗೈಲಿ ಹೇಗೆ ಹೋಗುವುದು?" ಎಂದು ಚಿಂತಿಸುತ್ತೇವೆ. ನಮ್ಮ ಸಮಾರಂಭಗಳಿಗೆ ಬೇರೆಯ ಅತಿಥಿ-ಅಭ್ಯಾಗತರು ಬಂದಾಗಲೂ ಅಷ್ಟೇ. "ಬಂದವರನ್ನು ಹಾಗೆಯೇ ಕಳಿಸಿದೆವಲ್ಲ" ಎಂದು ಬೇಸರಿಸುತ್ತೇವೆ. ಈ ರೀತಿ ಏನಾದರೂ ಕೊಡುವ ನಡಾವಳಿ ಹಾಸು-ಹೊಕ್ಕಾಗಿ ಬಂದಿದೆ. ವಿದೇಶಗಳಲ್ಲೂ ಅಷ್ಟೇ. ಒಂದು ಚಾಕೊಲೇಟ್ ಅಥವಾ ಒಂದು ವೈನ್ ಬಾಟಲು ಅಥವಾ ಹೂಗುಚ್ಛ ಇತ್ಯಾದಿ ತರುತ್ತಾರೆ. ಅವರವರ ದೇಶ-ಕಾಲಗಳ ಅನುಗುಣವಾಗಿ ಈ ವ್ಯವಸ್ಥೆ ನಡೆಯುತ್ತಾ ಬಂದಿದೆ. 

ನಾವು ಯಾರಿಗಾದರೂ ಏನನ್ನಾದರೂ ಕೊಡುವಾಗ ಅದರ ಬಗ್ಗೆ  ಸ್ವಲ್ಪ ಯೋಚಿಸುವುದು ಸಹಜ. ಯಾವುದಾರೂ ಪದಾರ್ಥ ಕೊಡುವ ಮುಂಚೆ ಮುಖ್ಯವಾಗಿ ಮೂರು ಅಂಶಗಳನ್ನು ಗಮನಿಸುತ್ತೇವೆ:
  • ಕೊಡುವ ಪದಾರ್ಥವು ಒಳ್ಳೆಯ ಗುಣಮಟ್ಟದ್ದು ಮತ್ತು ಚೆನ್ನಾಗಿ ಇರಬೇಕು. ಅದರಲ್ಲಿ ಯಾವುದೇ ನ್ಯೂನತೆ ಅಥವಾ ಕಡಿಮೆ ಇರಬಾರದು.  ಹಣ್ಣು ಕೊಟ್ಟರೆ ಅದು ನೋಡಲು ಚೆನ್ನಾಗಿರಬೇಕು. ಸಿಹಿಯಾಗಿದೆ ಎಂದು ಗೊತ್ತಾದರೆ ಇನ್ನೂ ಒಳ್ಳೆಯದು. ತಿಂಡಿ ಕೊಟ್ಟರೆ ಅದು ಶುಚಿ-ರುಚಿಯಾಗಿರಬೇಕು. ಬಟ್ಟೆ ಕೊಟ್ಟರೆ ಅದು ನೋಡಲು ಚೆನ್ನಾಗಿದ್ದು ಕೊಳೆ-ಕಲೆ ಇರಬಾರದು. ಹೀಗೆ ಪ್ರತಿ ವಸ್ತುವೂ ಕೆಲವು ಗುಣಗಳನ್ನು ಹೊಂದಿರಬೇಕು ಮತ್ತು ಅವುಗಳಲ್ಲಿ ಏನೂ ಕಳಪೆ ಅಥವಾ ಚ್ಯುತಿ ಇರಬಾರದು. 
  • ಕೊಡುವ ಪದಾರ್ಥವು ಹೆಚ್ಚಿದ್ದಷ್ಟೂ ಒಳ್ಳೆಯದು. ಕೆಲವು ಗಾತ್ರದಲ್ಲಿ ದೊಡ್ಡದಿರಬೇಕು. ಮತ್ತೆ ಕೆಲವು ಮೌಲ್ಯ ಅಥವಾ ಬೆಲೆಯಲ್ಲಿ ಹೆಚ್ಚಿರಬೇಕು. ಬಟ್ಟೆ ಕೊಟ್ಟರೆ ಅಳತೆ ಸರಿಯಾಗಿರಬೇಕು. ದೂರ ಪ್ರಯಾಣ ಮಾಡುವವರಿಗೆ ಕೊಟ್ಟರೆ ಪ್ಯಾಕಿಂಗ್ ಚೆನ್ನಾಗಿರಬೇಕು. ಮತ್ತೆ ಕೆಲವು ತೆಗೆದು ಕೊಳ್ಳುವವರ ಯೋಗ್ಯತೆಗೆ ಅನುಗುಣವಾಗಿರಬೇಕು. ಹೀಗೆಯೇ ಯೋಚಿಸಿ ಹುಡುಕಿ ಆರಿಸುವುದು, 
  • ಕೊಡುವ ಪದಾರ್ಥ ಸರಿಯಾದವರಿಗೆ ಸೇರಬೇಕು. ನಾವು ಕೊಡಬೇಕು ಎಂದು ಉದ್ದೇಶಿಸಿದ್ದು ಒಬ್ಬರಿಗೆ; ಅದು ತಲುಪಿದುದು ಇನ್ನೊಬ್ಬರಿಗೆ. ಹೀಗಾಗಬಾರದು. ಅನೇಕ ಸಮಾರಂಭಗಳಲ್ಲಿ ಯಾರಿಗೆ ಕೊಡಬೇಕು ಎಂದು ತೀರ್ಮಾನಿಸಿ, ಅದನ್ನು ಒಂದು ಪ್ಯಾಕೆಟ್ನಲ್ಲಿ ಹಾಕಿ ಹೆಸರೂ ಕೂಡ ಬರೆದಿಡುವುದಿದೆ. ಹೀಗಿದ್ದೂ ಹೆಚ್ಚು-ಕಡಿಮೆ ಆಗಿ ಗೈರುವಿಲೆ ಆಗಿರುವುದೂ ನಮ್ಮ ಅನುಭವದ ಮಾತೇ. ಆದ್ದರಿಂದ ಸರಿಯಾದವರಿಗೆ ಪದಾರ್ಥ ತಲುಪಿತು ಎಂದು ಖಚಿತವಾಗಬೇಕು. 
ಹೀಗೆ ಕೊಟ್ಟ ಪದಾರ್ಥದ ಗುಣಮಟ್ಟ, ಅದರ ಪ್ರಮಾಣ ಮತ್ತು ತಲುಪಬೇಕಾದವರ ವಿಳಾಸ, ಈ ಮೂರು ಅಂಶಗಳು ಬಹಳ ಮುಖ್ಯವಾಗುತ್ತವೆ. 

*****

ಲೋಕಾರೂಢಿಯಲ್ಲಿ ಕೊಡುವ ಪದಾರ್ಥಗಳ ವಿಷಯದಲ್ಲೇ ಇಷ್ಟು ಅಳೆದು-ಸುರಿದು ಕೊಡುವುದಾದರೆ ನಾವು ನಂಬಿದ ದೈವಕ್ಕೆ, ಆ ಪರಮಪುರುಷನಿಗೆ ಕೊಡುವಾಗ ಈ ಎಚ್ಚರ ಇರಲೇಬೇಕಲ್ಲವೇ?  ಆದ್ದರಿಂದ ನಾವು ಮಾಡುವ ಪೂಜೆ-ಪುನಸ್ಕಾರಗಳ ವಿಷಯದಲ್ಲೂ ಆದಷ್ಟೂ ಎಚ್ಚರ ವಹಿಸುತ್ತೇವೆ. ಪ್ರತಿಯೊಂದು ಪದಾರ್ಥ ಆರಿಸುವುದರಲ್ಲೂ ಹೆಚ್ಚಿನ ಗಮನ ಕೊಡುತ್ತೇವೆ. ಶ್ರದ್ದೆ ಇದ್ದಷ್ಟೂ ಒಳ್ಳೆಯದು ಎನ್ನುತ್ತೇವೆ. ಆ ಪರಮಾತ್ಮನಿಗೆ ನಾವು ಏನು ಕೊಟ್ಟೆವು? ಎಲ್ಲವೂ ಅವನು ಸೃಷ್ಟಿಸಿ ಕೊಟ್ಟಿರುವುದೇ. ಅವನು ಕೊಟ್ಟಿದ್ದು ಅವನ ಮುಂದೆ ಇಟ್ಟು ಕೈ ಮುಗಿಯುವುದೇ ಅಲ್ಲವೇ?

ಮೊದಲು ಗುಣಮಟ್ಟದ ವಿಷಯ ನೋಡೋಣ. ನಾವು ಎಷ್ಟು ಜಾಗರೂಕರಾಗಿದ್ದರೂ ವ್ಯತ್ಯಾಸ ಆಗೇ ಆಗುತ್ತದೆ. ಮೊದಲಿಗೆ ನಮ್ಮಲ್ಲೇ ಏನಾದರೂ ನ್ಯೂನತೆ ಇರಬಹುದು. ಕಾರ್ಯ ಮಾಡುವ ಸ್ಥಳ ಎಷ್ಟೇ ಶುಚಿ ಮಾಡಿದ್ದರೂ ಅದು ಪೂರ್ತಿ ಶುದ್ದವಾಗಿದೆ ಎಂದು ಎದೆ ತಟ್ಟಿ ಹೇಳುವಂತಿಲ್ಲ. ಪಾತ್ರೆ-ಪಡಗ ಎಷ್ಟು ತೊಳೆದಿದ್ದರೂ ಎಲ್ಲೋ ಒಂದು ಮೂಲೆಯಲ್ಲಿ ಸ್ವಲ್ಪ ಕಂಡೂಕಾಣದಂತೆ ಕೊಳೆ ಇರಬಹುದು. ನೈವೇದ್ಯಕ್ಕೆ ಮಾಡಿದ ಅಡಿಗೆಯಲ್ಲಿ ವ್ಯತ್ಯಾಸ ಇರಬಹುದು. ಬೆಂದಿರುವುದು ಕಡಿಮೆ ಇರಬಹುದು. ಸ್ವಲ್ಪ ತಳ ಹತ್ತಿರಬಹುದು. ಉಪ್ಪು-ಖಾರ ಹೆಚ್ಚು-ಕಡಿಮೆ ಇರಬಹುದು. ಇಡೇ ರೀತಿ ಪ್ರತಿ ಸಾಮಾನು-ಸಲಕರಣೆಯಲ್ಲಿ ಹೆಚ್ಚು-ಕಡಿಮೆ ಇರಬಹುದು. ಈ ಕಾರಣಕ್ಕಾಗಿಯೇ ಶ್ರಾದಾದಿಗಳಲ್ಲಿ ಎಲ್ಲ ತಯಾರಿ ಮಾಡಿಕೊಂಡು ಮುಖ್ಯ ಕೆಲಸ ಪ್ರಾರಂಭ ಮಾಡುವ ಮುನ್ನ ಈ ರೀತಿ ಹೇಳುತ್ತೇವೆ:

"ಆದೌ ಆತ್ಮ, ಸ್ಥಳ, ಭಾಂಡ,  ಭಾಜನ, ಕರ್ತೃ, ಭೋಕ್ಟ್ರು, ಹವಿದ್ರವ್ಯ ಶುಧ್ಯರ್ಥಂ 
ಕಾಲಾತೀತ ದೋಷ ಪ್ರಾಯಶ್ಚಿತ್ತಾರ್ಥಮ್ ವೈಶ್ವದೇವ ಸೂಕ್ತ ಮಂತ್ರ ಪಠನಂ ಕರಿಷ್ಯೇ" 

ಬೇರೆ ಕಾರ್ಯಗಳಲ್ಲೂ ಹೀಗೆ ಅವಕ್ಕೆ ಸರಿಯಾದ ಪ್ರಾರ್ಥನೆ ಮಾಡಿ ನಂತರ ಕೆಲಸ ಪ್ರಾರಂಭಿಸುತ್ತೇವೆ. ಇಷ್ಟಿದ್ದರೂ ಎಲ್ಲಾ ಸರಿಯಿದೆ ಎಂದು ಹೇಳಲು ಬರುವುದಿಲ್ಲ. ಇದನ್ನು ಸರಿಮಾಡುವುದು ಹೇಗೆ?

ಎರಡನೆಯದು ಪದಾರ್ಥ ಅಥವಾ ಮಾಡಿದ ಕೆಲಸದ ಮೌಲ್ಯ. ಇಡೀ ವಿಶ್ವವನ್ನೇ ತನ್ನ ಹೊಟ್ಟೆಯ ಒಂದು ಮೂಲೆಯಲ್ಲಿ ಧರಿಸಿರುವ ಪರಮಾತ್ಮನ ಯೋಗ್ಯತೆಗೆ ತಕ್ಕಂತೆ ನಾವು ಕೊಡುವುದನ್ನು ಯೋಚಿಸಲೂ ಸಾಧ್ಯವಿಲ್ಲ. "ಅಂಧಕಾಸುರನ ಹೊಟ್ಟೆಗೆ ಅರಕಾಸು ಮಜ್ಜಿಗೆ" ಎಂದೊಂದು ಗಾದೆ. ನಮ್ಮ ಪರಮಾತ್ಮನಿಗೆ ಮಾಡುವ ಸಮರ್ಪಣೆಗಳು ಇದಕ್ಕಿಂತ ಎಷ್ಟೂ ಪಾಲು ಕಡಿಮೆಯೇ. ನಾವು ಕೊಡುವ ಈ ಚಿಕ್ಕದ್ದನ್ನು ದೊಡ್ಡದು ಮಾಡುವುದು ಹೇಗೆ? 

ಗುಣಮಟ್ಟ ಮತ್ತು ಮೌಲ್ಯದ ವಿಷಯ ಹೀಗೆ. ತಲುಪಿಸುವ ವಿಳಾಸದ ಕಥೆ ಏನು? ಎಲ್ಲ ಶಬ್ದಗಳು, ಧ್ವನ್ಯಾತ್ಮಕವಿರಲಿ ಅಥವಾ ವರ್ಣಾತ್ಮ್ಯಕವಿರಲಿ, ಅವನನ್ನೇ ಕುರಿತು ಹೇಳುತ್ತವೆ ಅಂದ ಮೇಲೆ ಅವನ ಅನಂತ ನಾಮಗಳಲ್ಲಿ ಯಾವುದನ್ನು ವಿಳಾಸವಾಗಿ ಉಪಯೋಗಿಸಬೇಕು? 

ಈಗ ಮೂರು ಪ್ರಶ್ನೆಗಳು ನಮ್ಮ ಮುಂದೆ ನಿಂತವು. ಮೊದಲು ಹೇಗಾದರೂ ಮಾಡಿ ಸಮರ್ಪಣ ಮಾಡುವ ಪದಾರ್ಥ-ಕೆಲಸಗಳು ಎಲ್ಲ ನ್ಯೂನತೆಗಳಿಂದ ಹೊರಬರಬೇಕು. ಎರಡನೆಯದು ಅವುಗಳ ಮೌಲ್ಯ ಹೆಚ್ಚಾಗಿ ಪರಮಾತ್ಮನ ಯೋಗ್ಯತೆಗೆ ಸರಿಹೊಂದಬೇಕು. ಕಡೆಯದಾಗಿ ಅವೆಲ್ಲಾ ಅವನಿಗೇ ತಲುಪಬೇಕು. ಇದು ಹೇಗೆ ಸಾಧ್ಯ? 

*****

ಪರಮಾತ್ಮನ ಅನಂತ ಹೆಸರುಗಳಲ್ಲಿ "ಅಚ್ಯುತ" ಅನ್ನುವುದೂ ಒಂದು. ಏನಿದರ ಅರ್ಥ? ಏನೂ ಕುಂದು-ಕೊರತೆಗಳಿಲ್ಲದವನು, ಓರೆ-ಕೋರೆಗಳಿಲ್ಲದವನು, ಪರಿಪೂರ್ಣನು, ಚ್ಯುತಿ ಇಲ್ಲದವನು ಅಚ್ಯುತನು. ನಾವು ಅರ್ಪಿಸುವುದರಲ್ಲಿ ಇರುವ ಕೊರತೆಗಳನ್ನು, ಚ್ಯುತಿಗಳನ್ನು ತೆಗೆದು ಅದನ್ನು ಸರಿಮಾಡುವ ಶಕ್ತಿ ಅವನೊಬ್ಬನಿಗೆ ಇದೆ. ಆದ್ದರಿಂದ ಆ ಅಚ್ಯುತನನ್ನೇ "ಇವನ್ನು ಸರಿಮಾಡಪ್ಪಾ" ಎಂದು ಕೇಳಿಕೊಳ್ಳಬೇಕು!

ಕೊಟ್ಟ ಪದಾರ್ಥ ಅಥವಾ ಸಾಧನೆ ಅತ್ಯಲ್ಪ. ಇದನ್ನು ಅವನಿಗೆ ಯೋಗ್ಯ ಮಾಡುವುವು ಹೇಗೆ? ಅವನು ಅನಂತನು. ಅನಂತನಿಗೆ ತಕ್ಕುದಾದದ್ದು ಅನಂತವೇ. ಆದ್ದರಿಂದ "ಈ ಅಲ್ಪವನ್ನು ಅನಂತ ಮಾಡಪ್ಪಾ" ಎಂದು ಆ ಅನಂತನನ್ನೇ ಕೇಳುವುದು! 

ಇನ್ನು ವಿಳಾಸದ ವಿಚಾರ. ಎಲ್ಲೆಲ್ಲೂ ವ್ಯಾಪಿಸಿರುವವನು ಅವನು. ಇಡೀ ವಿಶ್ವವನ್ನು ಸೃಷ್ಟಿಸಿ ಅದರೊಳಗೆ ಪ್ರವೇಶ ಮಾಡಿದವನು ಅವನು. ಅಷ್ಟು ಮಾತ್ರವಲ್ಲ. ಅದರ ಒಳಗೆ ಪ್ರವೇಶ ಮಾಡಿದರೂ ಅದರ ಹೊರಗೂ ಇದ್ದಾನೆ. ಅದಕ್ಕೆ ಅವನನ್ನು "ಗೋವಿಂದ" ಎನ್ನುವುದು. (ಇದರ ಬಗ್ಗೆ ಹೆಚ್ಚು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ). ಆದ ಕಾರಣ ಇದನ್ನು ಆ ಗೋವಿಂದನ ವಿಳಾಸಕ್ಕೆ ಕಳಿಸುವುದು!

ಮೂರು ಸಮಾಸ್ಯೆಗಳಿಗೂ ಪರಿಹಾರ ಒದಗಿದಂತೆ ಆಯಿತಲ್ಲ!

******

ಈ ಕಾರಣಕ್ಕಾಗಿಯೇ ಎಲ್ಲ ರೀತಿಯ ಅಲ್ಪ ಸಾಧನೆಗಳನ್ನು ಅವನಿಗೆ ಅರ್ಪಿಸುವಾಗ ಅವನ ಲೆಕ್ಕವಿಲ್ಲದಷ್ಟು ಹೆಸರುಗಳಲ್ಲಿ ಈ ಮೂರನ್ನು ಆರಿಸಿ, ಎಲ್ಲಾ ರೀತಿಯ ಲೋಪ-ದೋಷಗಳನ್ನು ನಿವಾರಿಸಿ ಈ ಕಾರ್ಯವನ್ನು ಸಾರ್ಥಕ ಮಾಡು ಎಂದು ಬೇಡುತ್ತಾ ಹೀಗೆ ಹೇಳುವುದು:

ಅಚ್ಯುತಾಯ ನಮಃ 
ಅನಂತಾಯ ನಮಃ 
ಗೋವಿಂದಾಯ ನಮಃ 
ಅಚ್ಯುತ-ಅನಂತ-ಗೋವಿಂದೇಭ್ಯೋ ನಮಃ 

ಇದನ್ನೇ ಮೂರು ಸಾರಿ ಹೇಳುವ ಪದ್ಧತಿ ಉಂಟು. ಮೂರು ಸಾರಿ ಏಕೆ? ವಾಸ್ತವವಾಗಿ ಒಂದೇ ಸಲ ಸಾಕು. ಆದರೆ ನಮ್ಮ ಕೋತಿ ಮನಸ್ಸು ಅಲ್ಲಿ ಇಲ್ಲಿ ಹರಿದಾಡುತ್ತಿರುತ್ತಡೆ. ಆದ್ದರಿಂದ ಮೂರು ಸಲ ಹೇಳಿದರೆ ಒಂದು ಸಲವಾದರೂ ಈ ಅನುಸಂಧಾನ ಬರಬಹುದು ಅನ್ನುವ ಉದ್ದೇಶದಿಂದ ಹಾಗೆ ಮಾಡುವುದು. 

6 comments:

  1. 👆ವರ್ಣಾತ್ಮ್ಯಕ ಹಾಗೂ ಧ್ವನ್ಯಾತ್ಮಕ ಇದರ ಅರ್ಥ ಬಹಳ ಸೂಕ್ಷ್ಮವಾಗಿ ವಿವರಿಸಿದ್ದೀರಿ.
    ಈ ಲೇಖನವನ್ನು ಓದಿದ ನಂತರ ನಮ್ಮ ದಡ್ಡತನ ಅರಿವಾಯಿತು. ಸುಮ್ಮನೆ ದೇವಸ್ಥಾನಕ್ಕೆ ಹೋಗಿ ಘಂಟೆ ಸದ್ದು ಮಾಡಿ ಬಂದಿರವುದೆ ಹೊರತು, ನಾದದ ವ್ಯತ್ಯಾಸ ಗಮನಿಸಲ್ಲಿಲ್ಲ.
    ಉತ್ತಮವಾದ ಉದಾಹರಣೆ.

    ಹಾಗೆ ಅಚ್ಚುತ, ಅನಂತ ಗೋವಿಂದ ಇದರ ವಿವರಣೆಯಂತು ವರ್ಣಿಸಲು ಪದಗಳೇ ಇಲ್ಲ. ನನ್ನ ಪ್ರಕಾರ ಈಗಿನ ಕಾಲದ ಪುರೋಹಿತರಿಗಂತು ಖಂಡಿತ ಗೂತ್ತಿರುವುದಿಲ್ಲ.

    ನಿಮ್ಮ ಅಪಾರವಾದ ಜ್ಞಾನ ಪ್ರಶಂಸನೀಯ.

    ಏನಾದರೂ ಕೂಡ ಬೇಕಾದರೆ, ಗಮನದಲ್ಲಿಟ್ಟುಕೊಳ್ಳ ಬೇಕಾದ ಅಂಶಗಳು, ಕೆಲವುಬಾರಿ ಆಗುವ ಆಭಾಸಗಳ ವಿವರಣೆ ಸೂಗಸಾಗಿದೆ.

    ದೈನಂದಿನ ಜೀವನದಲ್ಲಿ ತಿಳಿದು ಅಳವಡಿಸಿವ ವಿಷಯ ತಿಳಿಸಿದ್ದೀರಿ.

    ಧನ್ಯವಾದಗಳು

    ReplyDelete
  2. Furthermore, understanding the subject is one aspect and making others understand is another. Both the qualities are found in your article.

    ReplyDelete
  3. Very nice explanation thank you🙏

    ReplyDelete
  4. Enjoyed reading the very essence of our existence…Give your best in everything you do and then surrender to the supreme being. Thanks Keshav.

    ReplyDelete
  5. I enjoy reading your articles, this is superb, came to know and understand many unknown facts, thank you

    ReplyDelete
  6. ಸರ್, ತುಂಬಾ ಚೆನ್ನಾಗಿ ಮೂಡಿಬಂದಿದೆ. ಮೊದಲು ಓದಿರಲಿಲ್ಲ. ಇಂದು ಫ್ರ್ಯಾಂಕಫಟ್೯ ನಲ್ಲಿ ಮುಂದಿನ ವಿಮಾನಕ್ಕೆ ಕಾಯುತ್ತಿರುವಾಗ ಓದಿದೆ.

    ReplyDelete