Showing posts with label Ashta. Show all posts
Showing posts with label Ashta. Show all posts

Sunday, June 22, 2025

ಅಷ್ಟ ಭಾಗ್ಯಗಳು


ನಮ್ಮ ಆಚರಣೆಗಳಲ್ಲಿ ದೇವರು-ದೇವತೆಗಳನ್ನು ಪ್ರಾರ್ಥಿಸುವಾಗ "ಸಕಲ ಭೋಗ-ಭಾಗ್ಯ ಸಿಧ್ಯರ್ಥಂ" ಎಂದು ಸಂಕಲ್ಪಿಸಿ ಬೇಡುವುದು ಬಹಳ ಹಿಂದಿನಿಂದ ಬಂದ ಒಂದು ಕ್ರಮ. ಅನೇಕ ವೇಳೆ ಅಭಿವಾದನ ಮಾಡಿದ ಕಿರಿಯರಿಗೆ ಗುರು-ಹಿರಿಯರು ಆಶೀರ್ವಾದ ನೀಡುವಾಗ "ಸಕಲ ಭೋಗ-ಭಾಗ್ಯ ಸಿದ್ಧಿರಸ್ತು" ಎಂದು ಹೇಳುವುದೂ ಹೀಗೆಯೇ ನಡೆದು ಬಂದಿದೆ. 

ಸಾಮಾನ್ಯವಾಗಿ "ಅಷ್ಟ ಭೋಗಗಳು" ಮತ್ತು "ಅಷ್ಟ ಭಾಗ್ಯಗಳು" ಎಂಬುದಾಗಿ ವ್ಯವಹರಿಸುವುದು ವಾಡಿಕೆ. ಈ ಭೋಗಗಳು ಮತ್ತು ಭಾಗ್ಯಗಳು ಯಾವುವು? ಹೀಗೆಂದು ಮಿತ್ರರೊಬ್ಬರು ಕೇಳಿದ್ದರು. 

ಹಿಂದಿನ "ಅಷ್ಟ ಭೋಗಗಳು" ಎಂಬ ಶೀರ್ಷಿಕೆಯ ಸಂಚಿಕೆಯಲ್ಲಿ  ಭೋಗಗಳ ಬಗ್ಗೆ ಚರ್ಚೆ ಮಾಡಿದ್ದೆವು. (ಈ ಸಂಚಿಕೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ). 

ಈ ಸಂಚಿಕೆಯಲ್ಲಿ ಎಂಟು ಭಾಗ್ಯಗಳ ಬಗ್ಗೆ ಚರ್ಚೆ ಮಾಡೋಣ. 

*****

ಈಗ್ಗೆ ಸುಮಾರು ಅರವತ್ತು ವರುಷಗಳ ಹಿಂದಿನ ಸಮಯ. ಆಗ ನಾನು ಹೈಸ್ಕೂಲ್ ಸೇರಿ ಹತ್ತನೆಯ ತರಗತಿಯಲ್ಲಿ ಓದುತ್ತಿದ್ದೆ. ನಮ್ಮ ಊರಿನಲ್ಲಿ ಸುಬ್ಬರಾಯರು ಎಂಬ ಹೆಸರಿನ ನಿವೃತ್ತ ಉಪಾಧ್ಯಾಯರು ವಾಸವಾಗಿದ್ದರು. ನಮ್ಮ ಮನೆಯ ಬೀದಿಯಲ್ಲಿಯೇ ಅವರ ಮನೆ. ಅವರ ಕುಟುಂಬದ ಸದಸ್ಯರೆಲ್ಲ ಮೈಸೂರಿನಲ್ಲಿದ್ದರು. ಇವರಿಗೂ ಅಲ್ಲಿಗೆ ಬಂದಿರಲು ಮನೆಮಂದಿಯ ಒತ್ತಡವಿತ್ತು. ಆದರೆ ಅವರಿಗೆ ನಮ್ಮ ಊರಿನಲ್ಲಿ ಸ್ವಂತ ಮನೆ, ಮನೆಯ ಸುತ್ತ ದೊಡ್ಡ ತೋಟ, ಮತ್ತು ಸ್ವಲ್ಪ ಜಮೀನು ಇದ್ದವು. ಇವುಗಳನ್ನು ಬಿಟ್ಟು ಹೋಗಲು ಅವರಿಗೆ ಮನಸ್ಸಿಲ್ಲ, ಆದ್ದರಿಂದ ಒಬ್ಬರೇ ಇಲ್ಲಿ ವಾಸವಾಗಿದ್ದರು. ಬಹಳ ಚಟುವಟಿಕೆಯ ವ್ಯಕ್ತಿ. ಬಾಯಿತುಂಬಾ ಮಾತು. ವಿನೋದದ ಸ್ವಭಾವ. ಜನಪ್ರಿಯರು. 

ಊರು ದೊಡ್ಡದಾಗಿ ಬೆಳೆಯುತ್ತಿದ್ದಂತೆ ಅವರು ಮನೆಯ ಸುತ್ತವಿದ್ದ ತೋಟವನ್ನು ಮನೆ ಕಟ್ಟುವ ನಿವೇಶನಗಳಾಗಿ ಪರಿವರ್ತಿಸಿ, ಒಂದೊಂದಾಗಿ ಮಾರಲು ತೊಡಗಿದ್ದರು. ಎಲ್ಲಾ ಮಾರಿ ಮುಗಿದಮೇಲೆ ಮೈಸೂರಿಗೆ ಹೋಗಿ ಕುಟುಂಬದವರ ಜೊತೆ ಇರಬೇಕೆಂಬುದು ಅವರ ಇರಾದೆ. ಈ ಕೆಲಸಕ್ಕೆ ನಮ್ಮ ತಂದೆಯವರ ಸಹಾಯ ಪಡೆಯುತ್ತಿದ್ದರು. ಮೊದಲಿಗೆ ಜಮೀನು ಅಳತೆ ಮಾಡಿ ಸೈಟುಗಳು ಮಾಡಿದರು. ನಂತರ ಒಂದೊಂದಾಗಿ ಸುತ್ತಮುತ್ತಲಿದ್ದವರಿಗೆ ಮಾರಾಟದ ವ್ಯವಹಾರ. ಮಾರಾಟಕ್ಕೆ ಕ್ರಯಪತ್ರಗಳನ್ನು ಬರೆದು ಕೊಡಲು ನಮ್ಮ ತಂದೆಯವರ ಬಳಿ ಬರುತ್ತಿದ್ದರು. 

ಈಗ ಎಲ್ಲವೂ ಕಂಪ್ಯೂಟರ್ ಮಯವಾಗಿದೆ. ಆಗ ಕ್ರಯಪತ್ರ, ಭೋಗ್ಯಪತ್ರ ಮುಂತಾದುವನ್ನು ಛಾಪಾಕಾಗದದ ಮೇಲೆ (ಸ್ಟ್ಯಾಂಪ್ ಪೇಪರ್) ಕೈಬರಹದಲ್ಲಿ ಬರೆದು, ಕೊಳ್ಳುವವರು ಮತ್ತು ಮಾರುವವರು ಸಾಕ್ಷಿಗಳ ಸಮ್ಮುಖ ಸಹಿ ಮಾಡಿ, ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಹೋಗಿ ರಿಜಿಸ್ಟರ್ ಮಾಡಿ ಕೊಡುತ್ತಿದ್ದರು. ಈ ರೀತಿ ಪತ್ರಗಳನ್ನು ಬರೆದು ಕೊಡುವವರಿಗೆ "ಬಿಕ್ಕಲಂ" ಎನ್ನುತ್ತಿದ್ದರು. ಪತ್ರದ ಕೊನೆಯಲ್ಲಿ "ಬಿಕ್ಕಲಂ" ಎಂದು ಬರೆದವರ ಹೆಸರು ನಮೂದಿಸಿ ಸಹಿ ಮಾಡುತ್ತಿದ್ದರು. ಇಂತಹವರು ಕಚೇರಿಗಳ ಮುಂದೆ ಒಂದು ಹಳೆಯ ಮೇಜು, ಕುರ್ಚಿಗಳನ್ನು ಇಟ್ಟುಕೊಂಡು ಕುಳಿತಿರುತ್ತಿದ್ದರು. ಪ್ರತಿ ಪತ್ರಕ್ಕೂ ಬರೆದವರಿಗೆ ಸ್ವಲ್ಪ ಸಂಭಾವನೆ ಸಿಗುತ್ತಿತ್ತು. ಹೀಗೆ ಬಂದ ಹಣದಿಂದ ಅವರು ಜೀವನ ನಡೆಸುತ್ತಿದ್ದರು. ಸುಬ್ಬರಾಯರಿಗೆ ಅವರ ಬಳಿ ಹೋಗಿ ಕಾಯಲು ಇಷ್ಟವಿರಲಿಲ್ಲ. ಆದ್ದರಿಂದ ನಮ್ಮ ತಂದೆಯವರ ಬಳಿ ಬಂದು ಪತ್ರಗಳನ್ನು ಬರೆಸುತ್ತಿದ್ದರು. 

*****

ಒಂದು ಭಾನುವಾರ ಬೆಳಿಗ್ಗೆ ಸುಬ್ಬರಾಯರು ನಮ್ಮ ಮನೆಗೆ ಬಂದರು. ಬಾಗಿಲಬಳಿ ನನ್ನನ್ನು ಕಂಡರು. 

"ಅಪ್ಪನನ್ನು ಕರಿ. ಸ್ವಲ್ಪ ಕೆಲಸ ಇತ್ತು"
"ಅಪ್ಪ ಊರಲ್ಲಿಲ್ಲ. ಬೆಂಗಳೂರಿಗೆ ಹೋಗಿದ್ದಾರೆ"
"ಯಾವಾಗ ಬರುವುದು?"
"ಮೂರು ನಾಲ್ಕು ದಿನಗಳಾಗಬಹುದು"

ಸುಬ್ಬರಾಯರು ಹಿಂದಿರುಗಿ ಹೊರಟರು. ಹತ್ತು ಹೆಜ್ಜೆ ಹೋಗಿದ್ದವರು ಮತ್ತೆ ಹಿಂದಿರುಗಿ ಬಂದರು. 

"ನಿನಗೆ ಚೆನ್ನಾಗಿ ಕನ್ನಡ ಬರೆಯಲು ಬರುತ್ತದಲ್ಲವೇ?"
"ಸುಮಾರಾಗಿ ಬರೆಯುತ್ತೇನೆ"
"ನನಗೆ ಗೊತ್ತು. ನಿನ್ನ ಬರವಣಿಗೆಯೂ ನಿಮ್ಮಪ್ಪನ ಬರಹದಂತೆ ಚೆನ್ನಾಗಿದೆ"
"......." 
"ಒಂದು ಕ್ರಯಪತ್ರ ಬರೆಯಬೇಕಿತ್ತು. ನೀನೇ ಬರೆದುಕೊಡು"
"ನನಗೆ ಅಷ್ಟೆಲ್ಲಾ ಬರುವುದಿಲ್ಲ. ತಪ್ಪಾದರೆ ಛಾಪಾಕಾಗದ ಹಾಳಾಗುತ್ತೆ. ತಂದೆಯವರಿಗೂ ಕೋಪ ಬರುತ್ತೆ"
"ಪರವಾಗಿಲ್ಲ. ನಾನು ನಿಧಾನವಾಗಿ ಹೇಳುತ್ತೇನೆ. ನೀನು ಬರೆಯುತ್ತಾ ಹೋಗು"
"..........."
"ಅಪ್ಪನಿಗೆ ನಾನು ಹೇಳುತ್ತೇನೆ. ನನ್ನ ಜವಾಬ್ದಾರಿ. ತಪ್ಪಾದರೆ ಕಾಟು ಹೊಡೆದು ಬರೆಯಬಹುದು.  ಒಂದು ಮಾದರಿ ಪತ್ರ ತಂದಿರುತ್ತೇನೆ. ನೋಡಿಕೊಂಡು ಬರಿ. ಆ ಸೀನಪ್ಪನ ಹತ್ತಿರ ಕಾದು ಕುಳಿತುಕೊಳ್ಳಬೇಕು. ಅದು ನನಗೆ ಆಗದು. ನೀನೇ ಬರೆದುಕೊಡು"

ಸ್ವಲ್ಪ ಸಮಯದ ನಂತರ ಮತ್ತೆ ಬಂದು ಬಲವಂತವಾಗಿ ಕೂಡಿಸಿಕೊಂಡು ಬರೆಸಿದರು. ಉತ್ಸಾಹದಲ್ಲಿ ನಾನೂ ಕ್ರಯ ಪತ್ರ ಬರೆದೆ. 
*****

ಪತ್ರ ಬರೆದ ದಿನಾಂಕ, ಸ್ವತ್ತು ಕೊಳ್ಳುವವರು ಮತ್ತು ಮಾರುವವರ ವಿವರಗಳನ್ನು ಬರೆದ ನಂತರ ಸ್ವತ್ತಿನ ಸ್ವಲ್ಪ ವಿವರ ಬರೆದು (ಪೂರ್ತಿ ವಿವರ ಚಕ್ಕುಬಂದಿ (ಬೌಂಡರಿ) ಸಮೇತ ಷೆಡ್ಯೂಲಿನಲ್ಲಿ ಬರೆದಿರುತ್ತೆ) ನಂತರದ ಒಕ್ಕಣೆ ಹೀಗಿತ್ತು:

"......... ಈ ಸ್ವತ್ತನ್ನು ಈ ದಿನ ಗವರ್ನಮೆಂಟು ಹತ್ತು ಸಾವಿರ ರೂಪಾಯಿಗಳಿಗೆ ಶುದ್ಧ ಕ್ರಯ ಮಾಡಿಕೊಟ್ಟಿರುತ್ತೇನೆ. ಈ ಸ್ವತ್ತಿಗೆ ಯಾವುದೇ ಕ್ರಯ, ಭೋಗ್ಯ, ಆಧಾರ, ಜೀವನಾಂಶ, ಭಾಗಾಂಶ, ಲಾಭಾಂಶ, ಮೈನರು ಹಕ್ಕುಗಳು ಮುಂತಾದ ಬಾಧ್ಯತೆಗಳಿರುವುದಿಲ್ಲ. ಮುಂದೆ ಎಂದಾದರೂ ಈ ರೀತಿ ತೊಂದರೆಗಳು ಕಂಡುಬಂದರೆ ನನ್ನ ಸ್ವಂತ ಖರ್ಚಿನಿಂದ ಪರಿಹರಿಸಿಕೊಡುವುದು ನನ್ನ ಜವಾಬ್ದಾರಿ. 

ಈ ಸ್ವತ್ತನ್ನು ಇಂದೇ ನಿಮ್ಮ ಸುಪರ್ದಿಗೆ ಬಿಟ್ಟುಕೊಟ್ಟಿರುತ್ತೇನೆ. ಇಂದಿನಿಂದ ಈ ಸ್ವತ್ತನ್ನು ಮತ್ತು ಅದರಲ್ಲಿ ಇರುವ ಮತ್ತು ಕಂಡುಬರುವ ಜಲ, ತರು, ಅಕ್ಷೀಣ, ಪಾಷಾಣ, ನಿಧಿ, ನಿಕ್ಷೇಪ, ಮುಂತಾದ ಅಷ್ಟ ಭಾಗ್ಯಗಳಿಗೂ ನೀವೇ ವಾರಸುದಾರರಾಗಿ ನಿಮ್ಮ ವಂಶ ಪಾರಂಪರ್ಯವಾಗಿ ಸುಖದಿಂದ ಅನುಭವಿಸಿಕೊಂಡು ಬರತಕ್ಕದ್ದು. ........."

ತಪ್ಪಿಲ್ಲದೆ, ಬಹಳ ಜಾಗರೂಕನಾಗಿ, ಮೈಯೆಲ್ಲಾ ಕಣ್ಣಾಗಿ ಪತ್ರ ಬರೆಯುವುದು ಮುಗಿಯಿತು. 

*****

ಪತ್ರ ಪೂರ್ತಿ ಬರೆದನಂತರ "ಮೇಷ್ಟ್ರೇ, ಈ ಅಷ್ಟಭಾಗ್ಯಗಳು ಅಂದರೇನು?' ಎಂದು ಕೇಳಿದೆ. ಸುಬ್ಬರಾಯ ಮೇಷ್ಟ್ರು ವಿವರಿಸಿದರು. 
 
ಜಲ, ತರು, ಅಕ್ಷೀಣ, ಪಾಷಾಣ, ನಿಧಿ, ನಿಕ್ಷೇಪ, ಸಂಚಿತ ಮತ್ತು ಆಗಮಿ ಎನ್ನುವ ಎಂಟು ರೀತಿಯ ಸಂಪತ್ತುಗಳು ಸ್ಥಿರ ಸ್ವತ್ತುಗಳಲ್ಲಿ (ಇಮ್ಮೂವಬಲ್ ಪ್ರಾಪರ್ಟಿ) ಸೇರಿರುತ್ತವೆ.
  1. "ಜಲ" ಅಂದರೆ ನೀರು ಮತ್ತು ಅದರ ಮೂಲಗಳಾದ ಬಾವಿ, ಕುಂಟೆ (ಸಣ್ಣ ಕೆರೆ), ಕೆರೆ, ಸರೋವರ ಮುಂತಾದುವುಗಳು. ಕೆಲವು ದೊಡ್ಡ ಸ್ವತ್ತುಗಳಲ್ಲಿ (ನೂರಾರು ಎಕರೆ ಹರಡಿರುವ  ಪ್ರದೇಶಗಳು) ಸಣ್ಣ ತೊರೆ ಅಥವಾ ನದಿಗಳೂ ಇರಬಹುದು. ಇದರಲ್ಲಿ ನೆಲದ ಮೇಲೆ ಕಾಣಿಸದಿದ್ದು ಬೋರ್ವೆಲ್ ಮುಂತಾದುವು ಕೊರೆದಾಗ ಸಿಗುವ ಅಂತರ್ಜಲವೂ ಸೇರುತ್ತದೆ. ಜಲದ ಜೊತೆಯಲ್ಲಿ  ಇವುಗಳಲ್ಲಿರುವ ಜಲಚರಗಳೂ (ಮೀನು ಮುಂತಾದುವು) ಕೂಡಿರುತ್ತವೆ. 
  2. "ತರು" ಅಂದರೆ ಮರ ಅಥವಾ ಮರ-ಗಿಡಗಳು. ಮರಗಳಲ್ಲಿ ಪ್ರತಿವರುಷ ಬಿಡುವ ಹೂವು-ಹಣ್ಣುಗಳು, ಎಲೆ ಮುಂತಾದುವು ಸೇರಿದವು. ಮರಗಳನ್ನು ಕತ್ತರಿಸಿದರೆ ಅದರಲ್ಲಿ ಬರುವ ಮರದ ದಿಮ್ಮಿಗಳು, ಸೌದೆ ಮುಂತಾದುವು ಕೂಡ ಒಳಗೊಂಡಿರುತ್ತವೆ. ಮರದಲ್ಲಿ ಜೇನುಗೂಡಿದ್ದರೆ ಅದೂ ಸಹ. 
  3. "ಅಕ್ಷೀಣ" ಅಂದರೆ ಕೊನೆಯಿಲ್ಲದ ಪದಾರ್ಥಗಳು. ಇಂಗ್ಲಿಷಿನಲ್ಲಿ ಪರ್ಮನೆಂಟ್ ಅಥವಾ ಎವೆರ್ಲಾಸ್ಟಿಂಗ್ ಅನ್ನುತ್ತಾರೆ. ತೆಗೆದರೆ ಅಥವಾ ಕತ್ತರಿಸಿದರೆ ಮತ್ತೆ ಬರುವ ಪದಾರ್ಥಗಳು ಇರಬಹುದು. (ಕೆಲವರು ಅಕ್ಷೀಣ ಅನ್ನುವ ಕಡೆ "ತೃಣ" ಎಂದು ಹೇಳುತ್ತಾರೆ. ತೃಣ ಅಂದರೆ ಹುಲ್ಲು ಮತ್ತು ಅದರಂತಹವು). 
  4. "ಪಾಷಾಣ" ಅಂದರೆ ಕಲ್ಲು. ಈಗಂತೂ ಕಲ್ಲಿನ ಗಣಿಗಳಿಗಾಗಿಯೇ ಭೂಮಿ ಕೊಳ್ಳುತ್ತಾರೆ. ಪಾಷಾಣ ಕ್ಷೀಣವಾಗುವ ಭಾಗ್ಯ. ಅಂದರೆ ಒಮ್ಮೆ ತೆಗೆದರೆ ಹೋಯಿತು. ಅಷ್ಟು ಕಮ್ಮಿ ಆಯಿತು. ಮೇಲೆ ಹೇಳಿದ ಅಕ್ಷೀಣ ಹಾಗಲ್ಲ. 
  5. "ನಿಧಿ" ಅಂದರೆ ಭೂಮಿಯಲ್ಲಿ ಹೂತಿಟ್ಟ ಹಣ. ಇಂಗ್ಲಿಷಿನಲ್ಲಿ "ಟ್ರೆಷರ್" ಅನ್ನುತ್ತಾರೆ. ಹಿಂದೆ ಭೂಮಿಯಲ್ಲಿ ಪಾತ್ರೆಗಳಲ್ಲಿ, ಕೊಪ್ಪರಿಗೆಗಳಲ್ಲಿ ಹಣ ಹೂತಿಡುತ್ತಿದ್ದರು. ಅಂತಹ ನಾಣ್ಯಗಳು ಅಥವಾ ಬೆಳ್ಳಿ-ಬಂಗಾರದ ಒಡವೆಗಳು ಸಿಕ್ಕರೆ ಅದು ನಿಧಿ.
  6. "ನಿಕ್ಷೇಪ" ಅನ್ನುವುದು ಭೂಮಿಯಲ್ಲಿ ಹುದುಗಿರುವ ಲೋಹದ ಅದಿರುಗಳು ಮುಂತಾದುವನ್ನು ಸೂಚಿಸುತ್ತದೆ. ಇಂಗ್ಲಿಷಿನಲ್ಲಿ "ಮೈನಿಂಗ್" ಮಾಡುವ ಪದಾರ್ಥಗಳು.  
  7. "ಸಂಚಿತ" ಅಂದರೆ ಹಿಂದಿನಿಂದ ಕೂಡಿಕೊಂಡು ಬಂದಿರುವ ಪದಾರ್ಥಗಳು. ಭೂಮಿಯಲ್ಲದೆ ಬೇರೆ ಪದಾರ್ಥ ಭೂಮಿಗೆ ಹೊಂದಿಕೊಂಡು ಬಂದಿರುವುದು. 
  8. "ಆಗಮಿ" ಅಂದರೆ ಮುಂದೆ ಬರುವ ಪದಾರ್ಥಗಳು. ಇದು ಈಗ ಇಲ್ಲ. ಮುಂದೆಂದೋ ಆ ಭೂಮಿಯಲ್ಲಿ ಉಂಟಾಗಬಹುದು. ಕೆಲವುಕಡೆ ಭೂಮಿಯ ಆಂತರಿಕ ಪರಿಣಾಮಗಳ, ಮಳೆ ಮುಂತಾದ ಕಾರಣ ಆಗುವ ಬದಲಾವಣೆಗಳು. ಭೂಗರ್ಭದಲ್ಲಿ ಆಗುವ ಒತ್ತಡಗಳಿಂದ ಚಿಮ್ಮಿ ಬರಬಹುದಾದ ಸಂಪತ್ತು. 
ಕೆಲವರು ಸಂಚಿತ ಮತ್ತು ಆಗಮಿ ಪದಗಳ ಬದಲು "ತೇಜ" ಮತ್ತು "ಸೌಮ್ಯ" ಎಂದು ಪ್ರಯೋಗಿಸುತ್ತಾರೆ. ಆಗ ಅಷ್ಟ ಭಾಗ್ಯಗಳು "ಜಲ, ತರು, ಅಕ್ಷೀಣ, ಪಾಷಾಣ, ನಿಧಿ, ನಿಕ್ಷೇಪ, ತೇಜ, ಸೌಮ್ಯ" ಎಂದಾಗುತ್ತದೆ.

ಒಟ್ಟಿನಲ್ಲಿ "ನಿಮಗೆ ಇದನ್ನು ಕೊಟ್ಟಿದ್ದೇನೆ. ಇದರಲ್ಲಿ ಇರಬಹುದಾದ, ಬೆಳೆಯಬಹುದಾದ, ಹುದುಗಿರಬಹುದಾದ, ಹಿಂದಿನಿಂದ ಬಂದಿರಬಹುದಾದ, ಮುಂದೆ ಬರಬಹುದಾದ, ಎಲ್ಲ ರೀತಿಯ ಸಂಪತ್ತುಗಳೂ ನಿಮಗೆ ಸೇರಿದ್ದು. ಮುಂದೆ ಕಂಡು ಬಂತು ಅಂದು ಅದರಮೇಲೆ ನಾನು ಹಕ್ಕು ಸ್ಥಾಪಿಸುವುದಿಲ್ಲ" ಎಂದು ಹೇಳುವ ರೀತಿ ಈ ಒಕ್ಕಣೆಗಳು.  

*****

ಮೂರು ದಿನಗಳ ನಂತರ ತಂದೆಯವರು ಊರಿಗೆ ಬಂದಿದ್ದರು. ಸುಬ್ಬರಾಯರು ಅವರನ್ನು ಕಾಣಲು ಬಂದರು. ನಾನೂ ಮನೆಯಲ್ಲಿದ್ದೆ. ಸಂಭಾಷಣೆ ಹೀಗಿತ್ತು:

"ಏನು, ನೀವು ಹೇಳದೇ ಕೇಳದೇ ಪರಊರಿಗೆ ಹೋಗುವುದು? ಇದರಿಂದ ನಿಮಗೇ ನಷ್ಟ. ಸೀನಪ್ಪ, ನೀವು ಇಬ್ಬರನ್ನೂ ಬಿಟ್ಟು ಇಲ್ಲಿ ಮೂರನೆಯವನೊಬ್ಬ ಬಿಕ್ಕಲಂ ಹುಟ್ಟಿಕೊಂಡಿದ್ದಾನೆ. ಇನ್ನು ಮುಂದೆ ಅವನಿಗೇ ಚೆನ್ನಾಗಿ ಸಂಪಾದನೆ ಆಗುತ್ತದೆ"
"ಯಾರು ಸ್ವಾಮಿ, ಅವನು?"
"ಇವನೇ, ನಿಮ್ಮ ಕುಮಾರ ಕಂಠೀರವ. ಬಹಳ ತುರ್ತಿತ್ತು. ಒಂದು ಕ್ರಯ ಪತ್ರ ಬರೆಸಿದೆ. ಚೆನ್ನಾಗಿ ಬರೆದಿದ್ದಾನೆ. ಆದರೆ ತುಂಬಾ ಪ್ರಶ್ನೆ ಕೇಳುತ್ತಾನೆ"

ಇಬ್ಬರೂ ನಕ್ಕರು. ಅವರ ಬೇರೆ ವಿಷಯದ ಸಂಭಾಷಣೆ ಮುಂದುವರೆಯಿತು. ನಾನು ಶಾಲೆಗೆ ಹೊರಟೆ. 

Saturday, June 21, 2025

ಅಷ್ಟ ಭೋಗಗಳು


ಹಿಂದಿನ ಸಂಚಿಕೆಯಲ್ಲಿ "ಕುಳಿತುಕೊಳ್ಳುವ ಆಸನಗಳು" ಎನ್ನುವ ಶೀರ್ಷಿಕೆಯಡಿ ಧ್ಯಾನ-ಜಪ ಮುಂತಾದುವುಗಳ ಅನುಷ್ಠಾನಕ್ಕೆ ಕುಳಿತುಕೊಳ್ಳುವಾಗ ಉಪಯೋಗಿಸುವ ಪೀಠಗಳು (ಆಸನಗಳು) ಮತ್ತು ಅವುಗಳಿಂದ ಬರಬಹುದಾದ ಶುಭ-ಅಶುಭ ಫಲಗಳನ್ನು ನೋಡಿದೆವು. (ಈ ಸಂಚಿಕೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ). 

ನಮ್ಮ ಆಚರಣೆಗಳಲ್ಲಿ ದೇವರು-ದೇವತೆಗಳನ್ನು ಪ್ರಾರ್ಥಿಸುವಾಗ  "ಸಕಲ ಭೋಗ-ಭಾಗ್ಯ ಸಿಧ್ಯರ್ಥಂ" ಎಂದು ಸಂಕಲ್ಪಿಸಿ ಬೇಡುವುದು ನಡೆದುಬಂದ ವಾಡಿಕೆ. ಗುರು-ಹಿರಿಯರ ಆಶೀರ್ವಾದ ಪಡೆಯುವಾಗ "ಸಕಲ ಭೋಗ-ಭಾಗ್ಯ ಸಿದ್ಧಿರಸ್ತು" ಎಂದು ಅವರು ಆಶೀರ್ವದಿಸುವೂ ಉಂಟು. 

ಈ ಭೋಗಗಳು ಮತ್ತು ಭಾಗ್ಯಗಳು ಯಾವುವು? ಸಾಮಾನ್ಯವಾಗಿ "ಅಷ್ಟಭೋಗಗಳು" ಮತ್ತು "ಅಷ್ಟ ಭಾಗ್ಯಗಳು" ಎಂದು ಹೇಳುತ್ತಾರೆ. ಇವುಗಳ ವಿವರವೇನು ಎಂದು ಸ್ನೇಹಿತರೊಬ್ಬರು ಕೇಳಿದ್ದಾರೆ. 

ಈ ಅಷ್ಟ ಭಾಗ್ಯಗಳು ಯಾವವು ಎನ್ನುವುದನ್ನು ಈಗ ನೋಡೋಣ. 

*****

ಮನುಷ್ಯನು ಸುಖಜೀವನ ನಡೆಸುವುದಕ್ಕೆ ಕೆಲವು ರೀತಿಯ ಅನುಕೂಲಗಳು ಬೇಕೇ ಬೇಕು. ಸಮಾಜವನ್ನು ತೊರೆದು ಕಾಡು-ಮೇಡುಗಳಲ್ಲಿ ಸನ್ಯಾಸಿಯ ಜೀವನ ನಡೆಸುವುದು ಒಂದು ರೀತಿ. ಅಲ್ಲಿ ಯಾವುದೇ ಭೋಗಕ್ಕೆ ಸ್ಥಾನವಿಲ್ಲ. ಆದರೆ ಸಮಾಜದಲ್ಲಿ ಗೃಹಸ್ಥನಾಗಿ ಬದುಕುವ ವ್ಯಕ್ತಿಗೆ ಈ ರೀತಿಯ ಸನ್ಯಾಸಿ ಜೀವನ ಅಷ್ಟು ಹೊಂದುವುದಿಲ್ಲ. ಭೋಗ-ಭಾಗ್ಯಗಳ ಹಿಂದೆ ಬಿದ್ದು ಸಾಧನೆಯನ್ನು ಗೌಣವಾಗಿ ಕಾಣುವುದು ಮನುಷ್ಯ ಜೀವನದ ಉದ್ದೇಶವಲ್ಲ. ಆದರೆ, ಈ ಕಾರಣಕ್ಕಾಗಿ ಗೃಹಸ್ಥನು ಎಲ್ಲವನ್ನೂ ತ್ಯಜಿಸುವುದು ಸಾಧ್ಯವಿಲ್ಲ. ತನ್ನ ಸ್ವಂತ ಉಪಯೋಗಕ್ಕೆ, ಮತ್ತು ಅದಕ್ಕಿಂತ ಹೆಚ್ಚಾಗಿ ತನ್ನನ್ನು ನಂಬಿ ಜೊತೆಯಲ್ಲಿ ಬಾಳುವ ಕುಟುಂಬದ ಸದಸ್ಯರಿಗೆ ಸುಖ ಜೀವನ ನಡೆಸಲು ಈ ಭೋಗ-ಭಾಗ್ಯಗಳು ಬೇಕು. ಇವೆರಡಿಕ್ಕಿಂತ ಹೆಚ್ಚಾಗಿ ತನ್ನ ಮನೆಗೆ ಬಂದ ಅತಿಥಿ-ಅಭ್ಯಾಗತರ ಸೇವೆಗೆ ಈ ಭೋಗ ವಸ್ತುಗಳು ಬೇಕಾಗುತ್ತವೆ. 

ಕಾಳಿದಾಸ ಮಹಾಕವಿಯ "ರಘುವಂಶ" ಮಹಾಕಾವ್ಯದಲ್ಲಿ ವರತಂತು ಮಹರ್ಷಿಗಳ ಶಿಷ್ಯನಾದ ಕೌತ್ಸ ಎಂಬ ಋಷಿಯು ಗುರುಕುಲದಲ್ಲಿ ವಿದ್ಯಾಭ್ಯಾಸ ಮುಗಿಸಿ ತನ್ನ ಗುರುಗಳಾದ ವರತಂತುಗಳಿಗೆ ಗುರುದಕ್ಷಿಣೆ ಕೊಡಲು ರಘು ಮಹಾರಾಜನ ಬಳಿ ಸಹಾಯಕ್ಕಾಗಿ ಬರುವ ಪ್ರಸಂಗವಿದೆ. ಅಲ್ಲಿ ತನ್ನನ್ನು ಎದುರುಗೊಂಡು, ಸ್ವಾಗತಿಸಿ ಕುಶಲ ಪ್ರಶ್ನೆಗಳನ್ನು ಮಾಡಿದ ಮಹಾರಾಜನಿಗೆ ಕೌತ್ಸನು ಉತ್ತರ ಕೊಡುವಾಗ "ಸರ್ವೋಪಕಾರಕ್ಷಮಮಾಶ್ರಮಂ ತೇ" ಎಂದು ಹೇಳುತ್ತಾನೆ. ನಾಲ್ಕು ವರ್ಣಾಶ್ರಮಗಳಲ್ಲಿ ಗೃಹಸ್ಥಾಶ್ರಮ ಬಹಳ ಮುಖ್ಯವಾದವನು. ಉಳಿದ ಮೂರು ಆಶ್ರಮ ಜೀವಿಗಳಾದ ಬ್ರಹ್ಮಚಾರಿ, ಸನ್ಯಾಸಿ ಮತ್ತು ವಾನಪ್ರಸ್ಥರು ಗೃಹಸ್ಥರನ್ನೇ ಅನೇಕ ವಿಷಯಗಳಿಗೆ ಆಶ್ರಯಿಸಬೇಕಾಗುತ್ತದೆ. ಬ್ರಹ್ಮಚಾರಿಗಳ ಮತ್ತು ಸನ್ಯಾಸಿಗಳ ಜೀವನಕ್ಕೆ ಗೃಹಸ್ಥರೇ ಆಧಾರ. 

ಸ್ವಂತ ಸಂಪಾದನೆಯಲ್ಲದ ವಿದ್ಯಾರ್ಥಿಗಳು ಮತ್ತು ಸಂಪಾದನೆ ಮಾಡಬಾರದ ಸನ್ಯಾಸಿಗಳ ಜೀವನ ಸಮಾಜದಲ್ಲಿರುವ ಗೃಹಸ್ಥರ ಸಹಾಯದಿಂದಲೇ ನಡೆಯುತ್ತದೆ. ಹೀಗಿರುವಾಗ ಗೃಹಸ್ಥರು ಈ ಭೋಗ-ಭಾಗ್ಯಗಳ ವಿಷಯದಲ್ಲಿ ಅತಿಯಾದ ಆಸಕ್ತಿ ತಾಳದಿದ್ದರೂ ಪೂರ್ಣವಾಗಿ ನಿರಾಸಕ್ತರಾಗಲು ಸಾಧ್ಯವಿಲ್ಲ. 
*****  

  1. "ಅಷ್ಟ ಭಾಗ್ಯಗಳು" ಎಂದು ಪರಿಗಣಿತವಾದ ಎಂಟರಲ್ಲಿ ಮೊದಲನೆಯದು "ಅನ್ನ". ಯಾವ ಪ್ರಾಣಿಯ ಜೀವನ ನಡೆಯಬೇಕಾದರೂ ಮೊದಲನೆಯ ಅವಶ್ಯಕತೆ ಆಹಾರ. ಇಲ್ಲಿ ಅನ್ನ ಎಂದರೆ, ಹಿಂದೊಮ್ಮೆ ಬೇರೆ ಸಂಚಿಕೆಯಲ್ಲಿ ಚರ್ಚಿಸಿದಂತೆ, ಅಕ್ಕಿಯನ್ನು ಬೇಯಿಸಿ ಮಾಡಿದ ಪದಾರ್ಥ ಮಾತ್ರವಲ್ಲ. ದೇಹದ ಬೆಳವಣಿಗೆ ಮತ್ತು ಬೆಳೆದ ದೇಹವನ್ನು ಸುಸ್ಥಿತಿಯಲ್ಲಿ ಕಾಪಾಡಲು ಬೇಕಾಗುವ ಎಲ್ಲ ಖಾದ್ಯಗಳಿಗೂ "ಅನ್ನ" ಎಂದು ನಿರ್ದೇಶಿಸಿ "ಬೃಹದಾರಣ್ಯಕ ಉಪನಿಷತ್" ಹೇಳುವ "ಸಪ್ತಾನ್ನ ಪ್ರಕರಣ" ತಿಳಿಸಿಕೊಡುತ್ತದೆ. ಅನ್ನವಿಲ್ಲದೇ ಜೀವನವಿಲ್ಲ. ಆದ್ದರಿಂದ ಎಂಟು ಭಾಗ್ಯಗಳಲ್ಲಿ ಮೊದಲೆನೆಯದು ಅನ್ನ. 
  2. ಎರಡನೆಯ ಭಾಗ್ಯ "ಉದಕ". ನೀರಿಲ್ಲದೆ ಬದುಕುವುದು ಸಾಧ್ಯವಿಲ್ಲ. ಉಸಿರಾಡುವ ಎಲ್ಲಾ ಪ್ರಾಣಿಗಳಿಗೂ ಗಾಳಿಯ ನಂತರ ನೀರು ಅತಿ ಮುಖ್ಯ. ವಾಸ್ತವಾಗಿ ಅನ್ನಕ್ಕಿಂತ ಮೊದಲು ನೀರು ಬೇಕು. ಆದರೆ ಕುಡಿಯುವ ನೀರು ಸೃಷ್ಟಿಯಲ್ಲಿ ಸುಲಭವಾಗಿ ಸಿಗುವುದು. ಆದ್ದರಿಂದ ಇಲ್ಲಿ ಅನ್ನ  ಎರಡನೆಯದು ಎಂದು ಗಣಿತವಾಗಿದೆ. (ಮುಂದಿನ ಸಂಚಿಕೆಯಲ್ಲಿ ಚರ್ಚಿಸುವ "ಅಷ್ಟ ಭಾಗ್ಯಗಳು" ಎಂದು ನಿರ್ದೇಶಿಸುವ ಎಂಟು ಭಾಗ್ಯಗಳಲ್ಲಿ ನೀರೇ ಮೊದಲನೆಯದು. ಅದರಲ್ಲಿ ಅನ್ನ ಎಂಟರ ಲೆಕ್ಕದಲ್ಲಿ ಸೇರುವುದಿಲ್ಲ. ಮನುಷ್ಯನ ಅನ್ಯಾಯ ಜೀವನ ಕ್ರಮಗಳಿಂದ ಈಚಿನ ದಿನಗಳಲ್ಲಿ ನೀರು ಸಿಗುವುದು ಕಷ್ಟವಾಗಿದೆ).
  3. ಮೂರನೆಯ ಭಾಗ್ಯ "ತಾಂಬೂಲ". ತಾಂಬೂಲ ಎಂದರೆ ಕೇವಲ ಎಲೆ-ಅಡಿಕೆ-ಸುಣ್ಣ ಮಾತ್ರವಲ್ಲ. ತಾಂಬೂಲ ಸೇವನೆ ಊಟದ ಕೊನೆಯ ಅಧ್ಯಾಯ. ಅವುಗಳಲ್ಲಿ ಅವರವರ ಅಂತಸ್ತಿಗೆ ತಕ್ಕಂತೆ ಅಂತರವೂ ಉಂಟು. ಅದು ಕೇವಲ ಗೋಟು ಅಡಿಕೆ ಇರಬಹುದು ಅಥವಾ ಬಣ್ಣ ಕಟ್ಟಿದ, ಕಾಚು, ಸಕ್ಕರೆ, ಸುಗಂಧ ಮಿಶ್ರಿತವಾದ ಪುಡಿಯಡಕೆ ಇರಬಹುದು. ತಾಂಬೂಲ ಸೇವನೆ ಇದೆ ಅಂದರೆ ಊಟದ ನಂತರ ಸ್ವಲ್ಪ ವಿಶ್ರಾಂತಿಗೂ ಅವಕಾಶ ಇದೆ ಎಂದು ಅರ್ಥ. ಜೀವನದ ಇತರ ಚಟುವಟಿಕೆಗಳಿಗೆ ತಕ್ಷಣ ಓಡಬೇಕಾಗಿಲ್ಲ. ಕುಟುಂಬದ ಇತರ  ಸದಸ್ಯರ, ಬಂಧು-ಬಾಂಧವರ, ಸ್ನೇಹಿತರ ಕೂಡ ಸ್ವಲ್ಪ ವಿನೋದದ ಕ್ಷಣಗಳನ್ನೂ ಕಳೆಯುವ ಅವಕಾಶವೂ ಒಂದು ಭೋಗವೇ. 
  4. ನಾಲ್ಕನೆಯದು "ಪುಷ್ಪ". ಈಗ ಗಂಡಸರು ಹೂವಿನ ಹಾರಗಳನ್ನು ಧರಿಸುವುದು ತಪ್ಪಿಹೋಗಿದೆ. ಸ್ತ್ರೀಯರು ಕೂಡ  ಮರೆತಿದ್ದಾರೆ. ಸುಗಂಧಭರಿತ ಹೂವುಗಳು ಮತ್ತು ಹೂವಿನ ಹಾರಗಳನ್ನು ಉಪಯೋಗಿಸುವುದು ಒಂದು ಭೋಗದ ರೀತಿ. ಅನೇಕ ಬಣ್ಣದ, ಸುವಾಸನೆಯ, ಗಾತ್ರದ ಹೂವುಗಳು ಸೊಗಸನ್ನು ಹೆಚ್ಚಿಸುವುದರ ಜೊತೆಗೆ ವಾತಾವರಣವನ್ನೂ ರಂಗೇರಿಸಬಲ್ಲುದು. 
  5. ಐದನೆಯದು "ಚಂದನ". ಗಂಧದ ಮರಗಳು ಹೇರಳವಾಗಿ ಇದ್ದಾಗಿನ ಮಾತು. ಗಂಧ ತಂದು ತೇಯ್ದು ಸುಗಂಧ ಪೂಸಿಕೊಳ್ಳುತ್ತಿದ್ದ ಕಾಲದ ಮಾತು ಇದು. ಪುಟ್ಟಕೃಷ್ಣನ ದಾಸರು ವರ್ಣಿಸುವುದು "ಪೂಸಿದ ಶ್ರೀಗಂಧ ಮಯ್ಯೊಳಗಮ್ಮ" ಎಂದು. (ಈಗ ಅದು ಕೇವಲ ರಾಸಾಯನಿಕ ಗಂಧ ಸಿಂಪಡಣೆಗೆ ಸೀಮಿತವಾಗಿದೆ. ಕೆಲವುಕಡೆಯಂತೂ ದೊಡ್ಡ ಫ್ಯಾನುಗಳು ಈ ಕೆಲವನ್ನು ಬೇಜಾರಿಲ್ಲದೆ ಮಾಡುತ್ತವೆ). 
  6. ಆರನೆಯ ಭೋಗ "ವಸನ". ಮಾನ ಮುಚ್ಚಲು ಬಟ್ಟೆ ಅನ್ನ-ನೀರಿನ ನಂತರದ ಸ್ಥಾನ ಪಡೆಯುತ್ತದೆ. ಅದು ಭೋಗದ ವಸ್ತುವೂ ಆಗಬಹುದು. ಬರಿಯ ಶುಭ್ರ ಬಟ್ಟೆಯಿಂದ ಜರತಾರಿ ಸೀರೆ-ಪಂಚೆ-ದಿರಿಸು, ಮುಂಡಾಸು, ಮೇಲು ಹೊದಿಕೆ, ಮುಂತಾದ ಅನೇಕ ರೀತಿಯಲ್ಲಿ ಜೀವನಕ್ಕೆ ಸೊಗಸನ್ನು ತಂದುಕೊಡುವ ಭೋಗ ಈ ವಸನದ್ದು. 
  7. ಭೋಗಗಳಲ್ಲಿ ಏಳನೆಯದು "ಶಯ್ಯಾ". ಊಟವಾಗಿ ಹೊಟ್ಟೆ ತುಂಬಿತು. ಬಟ್ಟೆ ಸಿಕ್ಕಿತು. ನಂತರದ ಸ್ಥಾನ ದಣಿದ ದೇಹಕ್ಕೆ ನಿದ್ರೆ ಕೊಡುವುದು. ನೆಲದ ಮೇಲೆ ತೋಳನ್ನೇ ತಲೆದಿಂಬಾಗಿ ಇಟ್ಟುಕೊಂಡು ಮಲಗಬಹುದು. ಅದನ್ನು ಯಾರೂ ಭೋಗ ಅನ್ನುವುದಿಲ್ಲ. ಅದೇ ಸೊಗಸಾದ ಮೆತ್ತನೆಯ ಹಾಸಿಗೆಯ ಮೇಲೆ ಆಗಬಹುದು. ಸುಪ್ಪತ್ತಿಗೆಯೂ ಆಗಬಹುದು. ಇವು ನೆಲದ ಬದಲು ಸುಂದರ ಮಂಚದ ಮೇಲೂ ಇರಬಹುದು. ಸೊಳ್ಳೆಪರದೆ ಸೇರಿರಬಹುದು. ಹೊದೆಯಲು ಒಳ್ಳೆಯ ಪದರಗಳ ಹೊದಿಕೆ ಇರಬಹುದು. ಚಳಿಗಾಲದಲ್ಲಿ ಉಣ್ಣೆಯದು ಇರಬಹುದು. ಹೀಗೆ ಭೋಗದ ವಿವಿಧ ಮಜಲುಗಳು. ಜೊತೆಗೆ ತನ್ನದೇ ಮನೆಯಲ್ಲಿಯೂ ಇರಬಹುದು. 
  8. ಎಂಟನೆಯ ಭೋಗವೆಂದರೆ "ಅಲಂಕಾರ". ಬರೀ ಬಟ್ಟೆ ಉಟ್ಟರೆ ಸಾಕೆ? ಆಭರಣಗಳು ಬೇಡವೇ? ಚಿನ್ನ, ವಜ್ರ ಮುಂತಾದವು. ಕುಂಕುಮ ಮುಂತಾದ ಬಣ್ಣ-ಬಣ್ಣದ ದ್ರವ್ಯಗಳು. ಸುಂದರವಾದ ಕೈಚೀಲ. ಕೈಗೆ ಕಸೂತಿ ಹಾಕಿದ ಕರ್ಚೀಫು. ಸ್ವಲ್ಪ ವಯಸ್ಸಾದ ಮೇಲೆ ಕೈಗೊಂಡು ಕೊರೆದ ಬೆತ್ತದ ಕೋಲು. ಹೀಗೆ. ಅವರವರ ಯೋಗ್ಯತೆ-ಅಭಿರುಚಿಗಳಿಗೆ ತಕ್ಕಂತೆ ಇವುಗಳ ಪಟ್ಟಿಯನ್ನು ಪಸರಿಸಬಹುದು. 
ಇಲ್ಲಿಗೆ ಎಂಟು ರೀತಿಯ "ಅಷ್ಟ ಭೋಗ" ವಿಷಯದ ವಿವರಣೆ ಸಾಕು. ಮುಂದೆ ಇವನ್ನು ವಿಸ್ತರಿಸುವುದು ಅವರವರ ಮನಸ್ಸಿಗೆ ಬಿಡುವುದು ಒಳ್ಳೆಯದು. 

*****

ಅಷ್ಟ ಭೋಗಗಳ ವಿಷಯಗಳನ್ನು ಇಬ್ಬರು ಬಲ್ಲರು. ಇವು ಇಲ್ಲದವರು. ಇವು ಚೆನ್ನಾಗಿ ಇದ್ದು ಅನುಭವಿಸುವವರು. ಎಲ್ಲ ಭೋಗಗಳ ಸವಲತ್ತಿದ್ದರೂ ಅನುಭವಿಸಲು ಸಾಧ್ಯವಿಲ್ಲದವರ ವಿಷಯ ಚಿಂತಿಸುವುದು ಬೇಡ. 

"ಅಷ್ಟ ಭಾಗ್ಯಗಳು" ಎನ್ನುವುದನ್ನು ಮುಂದಿನ ಸಂಚಿಕೆಯಲ್ಲಿ ನೋಡೋಣ.