Showing posts with label anna. Show all posts
Showing posts with label anna. Show all posts

Sunday, October 26, 2025

ಒಂದೇ ಬಳೆಯ ಹುಡುಗಿ


ಅದೊಂದು ಸಣ್ಣ ಊರು. ಆ ಊರಿನಲ್ಲಿ ಕೆಲವೇ ಕೆಲವು ಮನೆಗಳು. ದುಡಿದು ಜೀವಿಸುವವರ ಮನೆಗಳು. ಅಷ್ಟು ಮನೆಗಳ ಮಧ್ಯೆ ಅದೊಂದು ಪುಟ್ಟ ಮನೆ. ಬಡವರ ಮನೆ. ಬಡವರ ಮನೆಯೆಂದು ಬಾಯಿಬಿಟ್ಟು ಹೇಳಬೇಕಾದ ಅವಶ್ಯಕತೆ ಇಲ್ಲ. ನೋಡಿದರೆ ಗೊತ್ತಾಗುವುದು. ಸಿರಿವಂತಿಕೆಯ ಪೀಠೋಪಕರಣಗಳಿಲ್ಲ. ಕಣ್ಣಿಗೆ ಕುಕ್ಕುವ ಅಲಂಕಾರ ವಸ್ತುಗಳಿಲ್ಲ. ಅಂದಿನ ದಿನದ ಸಂಪಾದನೆಯಿಂದ ಆ ದಿನದ ಕಾಲಹರಣ. ಹಾಗೆಂದು ಆ ಮನೆಯಲ್ಲಿರುವವರಿಗೆ ದುಃಖವಿಲ್ಲ. ಚಳಿ-ಮಳೆ-ಗಾಳಿಯಿಂದ ರಕ್ಷಣೆ ಕೊಡುವ ಒಂದು ಮನೆ ಇದೆ. ಅದೇ ದೊಡ್ಡದು. ಸಂಜೆ ಆದಮೇಲೆ ಬೆಳಗಿನವರೆಗೆ ಇರಲೊಂದು ಸೂರು ಉಂಟು. ಅದರಲ್ಲಿ ವಾಸ ಇರುವವರಿಗೆ ಅದೇ ಒಂದು ತೃಪ್ತಿ. 

ಒಂದು ದಿನ ಆ ಮನೆಯ ಸದಸ್ಯರೆಲ್ಲಾ ಹೊರಗಡೆ ಹೋಗಿದ್ದಾರೆ. ಕುಟುಂಬದ ಒಬ್ಬಳು ಹುಡುಗಿ ಮಾತ್ರ ಅಂದು ಮನೆಯಲ್ಲಿ ಉಳಿದಿದ್ದಾಳೆ. "ಕುಮಾರಿ" ಎಂದು ಅವಳ ಹೆಸರು. ಅವಳ ಪೂರ್ತಿ ಹೆಸರು ಗೊತ್ತಿಲ್ಲ. ಅಥವಾ "ಕುಮಾರಿ" ಎನ್ನುವುದೇ ಅವಳ ಪೂರ್ತಿ ಹೆಸರಿರಬಹುದು. ಕುಮಾರಿ ಮನೆಯ ಒಳಗಡೆ ಏನೋ ಕೆಲಸ ಮಾಡುತ್ತಿದ್ದಾಳೆ. 

ಹೊರಗಡೆ ಯಾರೋ ಬಂದ ಶಬ್ದವಾಯಿತು. ಆಚೆ ಬಂದು ನೋಡಿದಳು. ಪರಿಚಯದ ನೆಂಟನೊಬ್ಬ ಬಂದಿದ್ದಾನೆ. ಬಡವರ ಮನೆಯಾದರೂ ಪ್ರೀತಿ-ವಿಶ್ವಾಸಗಳಿಗೆ ಬಡತನವಿಲ್ಲ. ನೆಂಟ ಬಂದ ಈ ಸಮಯದಲ್ಲಿ ಕುಟುಂಬದ ಹಿರಿಯರೊಬ್ಬರೂ ಮನೆಯಲ್ಲಿಲ್ಲ. ಕುಮಾರಿಯೇ ಸ್ವಾಗತಿಸಿದಳು. ನೆಂಟ ಮನೆಯೊಳಗೆ ಬಂದ. ಕೈ-ಕಾಲು ತೊಳೆಯಲು ನೀರು ಕೊಟ್ಟಳು. ಕೈ-ಕಾಲು ತೊಳೆದುಕೊಂಡ. ಚಾಪೆ ಹಾಸಿತ್ತು. ಅದರ ಮೇಲೆ ಕುಳಿತುಕೊಂಡ. ಮಡಕೆಯಲ್ಲಿದ್ದ ತಣ್ಣಗಿನ ನೀರು ಕುಡಿಯಲು ಕೊಟ್ಟಳು. ಕುಡಿದು ದಣಿವಾರಿಸಿಕೊಂಡ. ಕುಶಲೋಪರಿ ಮಾತನಾಡಿಸಿದಳು. ಹೆಚ್ಚು ಮಾತನಾಡಲು ಕುಮಾರಿಗೆ ಗೊತ್ತಿಲ್ಲ. ನೆಂಟನಿಗೂ ಮುಂದೇನು ಎಂದು ತೋಚಲಿಲ್ಲ. "ಸರಿ. ಬಂದಿದ್ದೆ ಎಂದು ಹೇಳಿ. ಮತ್ತೊಮ್ಮೆ ಬರುತ್ತೇನೆ" ಎಂದು ಹೇಳಿ ಹೊರಡಲು ಅನುವಾದ. 

ಅವರ ಮನೆಯಲ್ಲಿ ಎಷ್ಟೇ ಬಡತನವಿದ್ದರೂ ಬಂದವರಿಗೆ ಆದರದ ಉಪಚಾರ ಇರುತ್ತಿತ್ತು. ಇದ್ದಿದ್ದರಲ್ಲೇ ಬಂದಿದ್ದವರಿಗೆ ಒಂದು ಪಾಲು ಅನ್ನ-ಆಹಾರ ಕೊಡುವ ಪರಿಪಾಠ. ಕುಮಾರಿಗೆ ಇದು ನೋಡಿ ಗೊತ್ತು. ನೆಂಟ ಮಧ್ಯಾನ್ಹದ ವೇಳೆಗೆ ಬಂದಿದ್ದಾನೆ. ದೂರದಿಂದ ಬಂದಂತೆ ತೋರುತ್ತಿದೆ. ಹಸಿದಿರುವ ಮುಖಭಾವ ಕಾಣುತ್ತಿದೆ. ಬರೀ ನೀರು ಕುಡಿದಿದ್ದಾನೆ. ಹೊರಟು ನಿಂತಿದ್ದಾನೆ. ಕುಮಾರಿಗೆ ಪಿಚ್ಚೆನ್ನಿಸಿತು. 

"ಊಟ ಮಾಡಿಕೊಂಡು ಹೋಗುವಿರಂತೆ. ಸ್ವಲ್ಪ ಇರಿ. ಬೇಗ ಅಡಿಗೆ ಮಾಡಿಬಿಡುತ್ತೇನೆ" ಅಂದಳು ಕುಮಾರಿ. 

ಅವನಿಗೂ ಪ್ರಾಯಶಃ ಅದೇ ಬೇಕಾಗಿತ್ತು. "ಆಗಲಿ. ಕುಳಿತಿರುತ್ತೇನೆ" ಅಂದ. ಚಾಪೆಯ ಮೇಲೆ ಕಾಲುನೀಡಿಕೊಂಡು ಆರಾಮವಾಗಿ ಕುಳಿತ. 

***** 

ಎಷ್ಟೋ ವೇಳೆ ಮನೆಗೆ ಬಂದವರಿಗೆ "ಇರಿ. ಊಟ ಮಾಡಿಕೊಂಡು ಹೋಗಿ" ಅನ್ನುವುದು ಅಭ್ಯಾಸ. ಹಾಗೆ ಹೇಳುವುದು ಮನೆಯವರ ಪದ್ಧತಿ. ತೊಂಭತ್ತು ಭಾಗ ಬಂದವರು "ಇಲ್ಲ. ಸ್ವಲ್ಪ ಕೆಲಸವಿದೆ. ಅವಸರವಿತ್ತು. ಇನ್ನೊಮ್ಮೆ ಬರುತ್ತೇನೆ" ಎಂದು ಹೇಳಿ ಹೋಗುತ್ತಾರೆ. ಇನ್ನು ಕೆಲವರು "ಬರುವಾಗಲೇ ಊಟಮಾಡಿಕೊಂಡು ಹೊರಟಿದ್ದೆ. ಏನೂ ಬೇಡ" ಎಂದು ಹೋಗಬಹುದು. ಮತ್ತೆ ಕೆಲವರು "ಸ್ನೇಹಿತರ ಮನೆಗೆ ಊಟಕ್ಕೆ ಹೇಳಿದ್ದಾರೆ. ಅಲ್ಲಿಗೆ ಹೊರಟಿದ್ದೆ. ಹಾಗೇ ಸುಮ್ಮನೆ ನಿಮ್ಮನ್ನು ನೋಡಿ ಹೋಗುವ ಎಂದು ಬಂದೆ. ಅವರು ಕಾಯುತ್ತಿರುತ್ತಾರೆ. ಇನ್ನೊಮ್ಮೆ ಬಂದಾಗ ಊಟ ಮಾಡಿಕೊಂಡೇ ಹೋಗುತ್ತೇನೆ. ನನಗೆ ನಿಮ್ಮ ಮನೆಯಲ್ಲಿ ಏನು ಸಂಕೋಚ!" ಎಂದು ಹೇಳಿ ಬಹಳ ಸಂಕೊಚದಿಂದ ಹೋಗಿಬಿಡಬಹುದು.

ಹಾಗೆ ಹೋಗುತ್ತಾರೆ ಅನ್ನುವ ಧೈರ್ಯದಿಂದಲೇ "ಇರಿ, ಊಟ ಮಾಡಿಕೊಂಡು ಹೋಗಿ" ಎಂದು ಕೆಲವರು ಹೇಳಬಹುದು. ಬಂದವರಿಗೂ ಸಾಮಾನ್ಯ ಗೊತ್ತಿರುತ್ತದೆ. ಹೇಳುವವರ ಮನಸ್ಸಿನಲ್ಲಿ ಏನಿರಬಹುದು ಅಂತ. ಇವರು ಹೇಳಿದ ಹಾಗೆ ಮಾಡಿದರು. ಅವರು ಕೇಳಿದಹಾಗೆ ಮಾಡಿದರು. ಇವರು ಊಟ ಹಾಕಲಿಲ್ಲ. ಅವರು ಮಾಡಲಿಲ್ಲ. ಆದರೂ ಕೇಳಿದ ಸಮಾಧಾನ ಇವರಿಗೆ. ಸಿಕ್ಕಿಹಾಕಿಕೊಂಡು ತೊಂದರೆ ಕೊಡಲಿಲ್ಲ ಅನ್ನುವ ಸಮಾಧಾನ ಅವರಿಗೆ. 

ಅದೆಲ್ಲ ಹಿಂದಿನ ಸಮಾಚಾರ. ಈಗ ಚಿಂತೆಯಿಲ್ಲ. ಸ್ವಿಗ್ಗಿ, ಜ್ಜೊಮಾಟೊ ಇವೆ. ಅವರಿಗೂ, ನಮಗೂ ಸೇರಿಸಿ ಊಟ-ತಿಂಡಿ ತರಿಸಿಬಿಡಬಹುದು. "ನಿಮಗೆ ಏನು ಬೇಕು?" ಎಂದು ಕೇಳಿ, ಅವರಿಗೆ ಬೇಕಾದದ್ದು ಅವರಿಗೆ, ನಮಗೆ ಬೇಕಾದದ್ದು ನಮಗೆ, ಅರ್ಧ ಘಂಟೆಯಲ್ಲಿ ಹಾಜರುಪಡಿಸಬಹುದು. ಅವರೂ ಸಂಕೋಚ ಪಡಬೇಕಾಗಿಲ್ಲ. ನಾವೂ ಕಷ್ಟ ಪಡುವಂತಿಲ್ಲ. ಜೇಬಲ್ಲಿ ದುಡ್ಡೂ ಇರಬೇಕೆಂದಿಲ್ಲ. ಕ್ರೆಡಿಟ್ ಕಾರ್ಡ್ ಉಂಟು. ತಿಂಗಳ ಬಿಲ್ ಬಂದಾಗ ನೋಡೋಣ. ಆಗ ಹಣ ಇಲ್ಲದಿದ್ದರೆ ಇನ್ನೊಂದು ಕಾರ್ಡಿಂದ ತೆಗೆದು ಕೊಟ್ಟರಾಯಿತು. 

ಕುಮಾರಿಗೆ ಈ ಅನುಕೂಲ ಇರಲಿಲ್ಲ. ಹಾಗೆ ಸುಮ್ಮನೆ ಹೇಳುವ ಮನಸ್ಸೂ, ಅಭ್ಯಾಸವೂ ಅವಳದಲ್ಲ. ಜೊತೆಗೆ ನೆಂಟನೂ ಊಟಕ್ಕೆ ಕಾದು ಕುಳಿತೇಬಿಟ್ಟನಲ್ಲ!

***** 

ಕುಮಾರಿ ಅಡಿಗೆ ಮನೆಯ ಒಳಗೆ ಬಂದಳು. ಅಕ್ಕಿಯ ಡಬ್ಬ ಬರಿದು. ಅಕ್ಕಿಯೇ ಇಲ್ಲದೆ ಏನು ಅಡಿಗೆ ಮಾಡುವುದು? ಅಡಿಗೆ ಮಾಡುತ್ತೇನೆ ಎಂದು ಹೇಳಿಯಾಯಿತು. ನೆಂಟ ಕಾದು ಕುಳಿತಿದ್ದಾನೆ. "ಸರ್ವಸ್ಯ ಗಾತ್ರಸ್ಯ ಶಿರಃ ಪ್ರಧಾನಂ" (ಇಡೀ ದೇಹಕ್ಕೆ ತಲೆಯೇ ಮುಖ್ಯ) ಅನ್ನುವಂತೆ ಊಟಕ್ಕೆ ಅನ್ನವೇ ಮುಖ್ಯ. ಅನ್ನವಿಲ್ಲದೇ ಏನು ಊಟ ಬಡಿಸುವುದು? ಕುಮಾರಿ ಅಡಿಗೆ ಮನೆಯೆಲ್ಲ ಹುಡುಕಿದಳು. ಸ್ವಲ್ಪ ಭತ್ತ ಸಿಕ್ಕಿತು. ಪರವಾಗಿಲ್ಲ. ಕುಟ್ಟಿದರೆ ಒಬ್ಬರ ಊಟಕ್ಕೆ ಸಾಕಾಗುವಷ್ಟು ಅನ್ನ ಮಾಡಬಹುದು. ಮರ್ಯಾದೆ ಉಳಿಯಿತು ಅಂದುಕೊಂಡಳು. ಆದರೆ ಭತ್ತ ಕುಟ್ಟಿ, ಜರಡಿ ಹಿಡಿದು, ನುಚ್ಚು ತೆಗೆದು, ಅಕ್ಕಿ ಬೇರ್ಪಡಿಸಿ, ಅನ್ನ ಮಾಡಬೇಕು. ಉಳಿದದ್ದು ಬೇಗ ತಯಾರು ಮಾಡಿ ಊಟ ಬಡಿಸಬೇಕು. ಕುಮಾರಿ ಚುರುಕು ಹುಡುಗಿ. ಒರಳಿನಲ್ಲಿ ಭತ್ತ ಹುಯ್ದು ಒನಕೆಯಿಂದ ಕುಟ್ಟತೊಡಗಿದಳು. 

ಕುಮಾರಿಗೆ ಬಳೆ ಅಂದರೆ ಬಹಳ ಇಷ್ಟ. ಚಿನ್ನದ ಬಳೆಗಳು ಹಾಕಿಕೊಳ್ಳುವ ಸ್ಥಿತಿಯಿಲ್ಲ. ಗಾಜಿನ ಬಳೆಗಳು. ಹಿಂದಿನ ವಾರ ಬಳೆಗಾರ ಬಂದಿದ್ದ. ಎರಡು ಕೈಗೂ ತುಂಬು ಬಳೆಗಳು ಹಾಕಿಸಿಕೊಂಡಾಗಿತ್ತು. ಕುಟ್ಟಲು ಹೋದರೆ ಮೊದಲ ಏಟಿಗೆ ಬಳೆಗಳು ಶಬ್ದಮಾಡಿದವು. ಶಬ್ದವಾದರೆ ಹೊರಗಡೆ ಕುಳಿತಿರುವ ನೆಂಟನಿಗೆ ಭತ್ತ ಕುಟ್ಟುವುದು ಗೊತ್ತಾಗುವುದು. ಸಂಕೋಚ ಮಾಡಿಕೊಂಡಾನು. ಅವನಿಗೆ ಗೊತ್ತಾಗದಂತೆ, ಶಬ್ದವಾಗದಂತೆ ಭತ್ತ ಕುಟ್ಟಬೇಕು. ಸರಿ, ಕೆಲವು ಬಳೆಗಳನ್ನು ತೆಗೆದಳು. ಎರಡನೇ ಏಟಿಗೆ ಶಬ್ದ ಕಡಿಮೆಯಾದರೂ ಶಬ್ದವೇ. ಎರಡನ್ನು ಬಿಟ್ಟು ಮತ್ತೆಲ್ಲ ಬಳೆ ತೆಗೆದಿಟ್ಟಳು. ಹಾಗಾದರೂ ಸ್ವಲ್ಪ ಶಬ್ದವಾಯಿತು. ಇದೂ ಸರಿಯಿಲ್ಲ ಎಂದು ಮತ್ತೊಂದು ಬಳೆ ತೆಗೆದಳು. ಈಗ ಎರಡೂ ಕೈಯಲ್ಲಿ ಒಂದೊಂದೇ ಬಳೆ. ಆದರೆ ಕುಟ್ಟುವಾಗ ಸದ್ಯ ಶಬ್ದವಿಲ್ಲ. 

ಬೇಗ ಬೇಗ ಭತ್ತ ಕುಟ್ಟಿ, ಅಕ್ಕಿ ತೆಗೆದು, ಅನ್ನ ಬೇಯಿಸಿ, ಅಡಿಗೆ ಮುಗಿಸಿ ನೆಂಟನಿಗೆ ಊಟ ಬಡಿಸಿದಳು. ನೆಂಟನಿಗೆ ಭತ್ತ ಕುಟ್ಟಿ ಅಕ್ಕಿ ಮಾಡಿದ್ದು ಗೊತ್ತಾಗಲಿಲ್ಲ. ಒಂದೇ ಬಳೆಯ ಹುಡುಗಿ ನೆಂಟನಿಗೆ ಊಟ ಬಡಿಸಿ, ಸತ್ಕರಿಸಿ ಕಳಿಸಿದಳು!

*****

ಅವಧೂತನೊಬ್ಬ ಎದುರು ಮನೆಯ ಜಗುಲಿಯಲ್ಲಿ ಕುಳಿತಿದ್ದ. ಕುಮಾರಿಯ ಈ ಜಾಣತನದ ಪ್ರಸಂಗ ನೋಡಿದ. ಅವನು ಇದರಿಂದ ಒಂದು ಪಾಠ ಕಲಿತ!

ಕೈತುಂಬಾ ಬಳೆ ಇದ್ದಾಗ ಬಹಳ ಶಬ್ದ. ಎರಡಿದ್ದಾಗ ಅವೆರಡರ ನಡುವೆ ಕಿಣಿ-ಕಿಣಿ ಶಬ್ದ. ಒಂದೇ ಬಳೆ ಇದ್ದಾಗ ಶಬ್ದವಿಲ್ಲ. ಬೇಕಿದ್ದ ಕೆಲಸ ಮಾಡಬಹುದು. 

ತುಂಬಾ ಜನವಿದ್ದರೆ ಅದೊಂದು ದೊಂಬಿಯ ಪರಿಸರ. ಘರ್ಷಣೆಗಳಿಗೆ ಅವಕಾಶ. ಪರಸ್ಪರ ವಿರೋಧಕ್ಕೆ ದಾರಿ. ಉದ್ದೇಶಿಸಿದ ಕೆಲಸವಾಗುವುದಿಲ್ಲ. 

ಇಬ್ಬರೇ ಇದ್ದರೆ ದೊಂಬಿಯಿಲ್ಲದಿದ್ದರೂ ಕಾಡುಹರಟೆಗೆ ನಾಂದಿ. ಸಮಯ ಹಾಳು. ಪ್ರಯೋಜನವಿಲ್ಲ. 

ಒಬ್ಬನೇ ಇದ್ದಾಗ ಅದು ಏಕಾಂತ. ಏಕಾಗ್ರತೆ ಸಾಧಿಸಬಹುದು. ಏಕಾಂತದ ಸಮ ಮತ್ತೊಂದಿಲ್ಲ. ಸಾಧನೆಗೆ ಇದು ಅತ್ಯವಶ್ಯಕ!

ಇದೇ ಅವಧೂತ ಕುಮಾರಿಯಿಂದ ಕಲಿತ ಪಾಠ!

ಕುಮಾರಿಯೇನು ಪಾಠ ಹೇಳಲಿಲ್ಲ. ಆದರೆ ಅವಳ ಕೆಲಸವನ್ನು ನೋಡಿದ ಅವಧೂತ ಏಕಾಂತದ ಪಾಠ ಕಲಿತುಕೊಂಡ. 

*****

ಶ್ರೀಮದ್ಭಾಗವತದ ಹನ್ನೊಂದನೆಯ ಸ್ಕಂಧದಲ್ಲಿ "ಅವಧೂತ ಗೀತೆ" ಎನ್ನುವ ಪ್ರಸಂಗ ಬರುತ್ತದೆ. ಅದರಲ್ಲಿ ಯದು ಮಾಹಾರಾಜನಿಗೆ ಸಿಕ್ಕ ಅವಧೂತನೊಬ್ಬ "ನನಗೆ ಇಪ್ಪತ್ನಾಲ್ಕು ಗುರುಗಳು. ಅವರೊಬ್ಬಬ್ಬರಿಂದ ಒಂದೊಂದು ಪಾಠ ಕಲಿತೆ" ಎಂದು ಹೇಳುತ್ತಾನೆ. ಹಾಗೆ ಹೇಳಿದ ಇಪ್ಪತ್ನಾಲ್ಕು ಪಾಠಗಳಲ್ಲಿ "ಒಂದೇ ಬಳೆಯ ಹುಡುಗಿ" ಕುಮಾರಿಯಿಂದ ಕಲಿತ ಈ ಪಾಠವೂ ಒಂದು. 

ಅದರ ವಿವರಗಳನ್ನು ಇನ್ನೊಮ್ಮೆ ಅವಕಾಶವಾದಾಗ ನೋಡೋಣ.  

Saturday, June 21, 2025

ಅಷ್ಟ ಭೋಗಗಳು


ಹಿಂದಿನ ಸಂಚಿಕೆಯಲ್ಲಿ "ಕುಳಿತುಕೊಳ್ಳುವ ಆಸನಗಳು" ಎನ್ನುವ ಶೀರ್ಷಿಕೆಯಡಿ ಧ್ಯಾನ-ಜಪ ಮುಂತಾದುವುಗಳ ಅನುಷ್ಠಾನಕ್ಕೆ ಕುಳಿತುಕೊಳ್ಳುವಾಗ ಉಪಯೋಗಿಸುವ ಪೀಠಗಳು (ಆಸನಗಳು) ಮತ್ತು ಅವುಗಳಿಂದ ಬರಬಹುದಾದ ಶುಭ-ಅಶುಭ ಫಲಗಳನ್ನು ನೋಡಿದೆವು. (ಈ ಸಂಚಿಕೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ). 

ನಮ್ಮ ಆಚರಣೆಗಳಲ್ಲಿ ದೇವರು-ದೇವತೆಗಳನ್ನು ಪ್ರಾರ್ಥಿಸುವಾಗ  "ಸಕಲ ಭೋಗ-ಭಾಗ್ಯ ಸಿಧ್ಯರ್ಥಂ" ಎಂದು ಸಂಕಲ್ಪಿಸಿ ಬೇಡುವುದು ನಡೆದುಬಂದ ವಾಡಿಕೆ. ಗುರು-ಹಿರಿಯರ ಆಶೀರ್ವಾದ ಪಡೆಯುವಾಗ "ಸಕಲ ಭೋಗ-ಭಾಗ್ಯ ಸಿದ್ಧಿರಸ್ತು" ಎಂದು ಅವರು ಆಶೀರ್ವದಿಸುವೂ ಉಂಟು. 

ಈ ಭೋಗಗಳು ಮತ್ತು ಭಾಗ್ಯಗಳು ಯಾವುವು? ಸಾಮಾನ್ಯವಾಗಿ "ಅಷ್ಟಭೋಗಗಳು" ಮತ್ತು "ಅಷ್ಟ ಭಾಗ್ಯಗಳು" ಎಂದು ಹೇಳುತ್ತಾರೆ. ಇವುಗಳ ವಿವರವೇನು ಎಂದು ಸ್ನೇಹಿತರೊಬ್ಬರು ಕೇಳಿದ್ದಾರೆ. 

ಈ ಅಷ್ಟ ಭಾಗ್ಯಗಳು ಯಾವವು ಎನ್ನುವುದನ್ನು ಈಗ ನೋಡೋಣ. 

*****

ಮನುಷ್ಯನು ಸುಖಜೀವನ ನಡೆಸುವುದಕ್ಕೆ ಕೆಲವು ರೀತಿಯ ಅನುಕೂಲಗಳು ಬೇಕೇ ಬೇಕು. ಸಮಾಜವನ್ನು ತೊರೆದು ಕಾಡು-ಮೇಡುಗಳಲ್ಲಿ ಸನ್ಯಾಸಿಯ ಜೀವನ ನಡೆಸುವುದು ಒಂದು ರೀತಿ. ಅಲ್ಲಿ ಯಾವುದೇ ಭೋಗಕ್ಕೆ ಸ್ಥಾನವಿಲ್ಲ. ಆದರೆ ಸಮಾಜದಲ್ಲಿ ಗೃಹಸ್ಥನಾಗಿ ಬದುಕುವ ವ್ಯಕ್ತಿಗೆ ಈ ರೀತಿಯ ಸನ್ಯಾಸಿ ಜೀವನ ಅಷ್ಟು ಹೊಂದುವುದಿಲ್ಲ. ಭೋಗ-ಭಾಗ್ಯಗಳ ಹಿಂದೆ ಬಿದ್ದು ಸಾಧನೆಯನ್ನು ಗೌಣವಾಗಿ ಕಾಣುವುದು ಮನುಷ್ಯ ಜೀವನದ ಉದ್ದೇಶವಲ್ಲ. ಆದರೆ, ಈ ಕಾರಣಕ್ಕಾಗಿ ಗೃಹಸ್ಥನು ಎಲ್ಲವನ್ನೂ ತ್ಯಜಿಸುವುದು ಸಾಧ್ಯವಿಲ್ಲ. ತನ್ನ ಸ್ವಂತ ಉಪಯೋಗಕ್ಕೆ, ಮತ್ತು ಅದಕ್ಕಿಂತ ಹೆಚ್ಚಾಗಿ ತನ್ನನ್ನು ನಂಬಿ ಜೊತೆಯಲ್ಲಿ ಬಾಳುವ ಕುಟುಂಬದ ಸದಸ್ಯರಿಗೆ ಸುಖ ಜೀವನ ನಡೆಸಲು ಈ ಭೋಗ-ಭಾಗ್ಯಗಳು ಬೇಕು. ಇವೆರಡಿಕ್ಕಿಂತ ಹೆಚ್ಚಾಗಿ ತನ್ನ ಮನೆಗೆ ಬಂದ ಅತಿಥಿ-ಅಭ್ಯಾಗತರ ಸೇವೆಗೆ ಈ ಭೋಗ ವಸ್ತುಗಳು ಬೇಕಾಗುತ್ತವೆ. 

ಕಾಳಿದಾಸ ಮಹಾಕವಿಯ "ರಘುವಂಶ" ಮಹಾಕಾವ್ಯದಲ್ಲಿ ವರತಂತು ಮಹರ್ಷಿಗಳ ಶಿಷ್ಯನಾದ ಕೌತ್ಸ ಎಂಬ ಋಷಿಯು ಗುರುಕುಲದಲ್ಲಿ ವಿದ್ಯಾಭ್ಯಾಸ ಮುಗಿಸಿ ತನ್ನ ಗುರುಗಳಾದ ವರತಂತುಗಳಿಗೆ ಗುರುದಕ್ಷಿಣೆ ಕೊಡಲು ರಘು ಮಹಾರಾಜನ ಬಳಿ ಸಹಾಯಕ್ಕಾಗಿ ಬರುವ ಪ್ರಸಂಗವಿದೆ. ಅಲ್ಲಿ ತನ್ನನ್ನು ಎದುರುಗೊಂಡು, ಸ್ವಾಗತಿಸಿ ಕುಶಲ ಪ್ರಶ್ನೆಗಳನ್ನು ಮಾಡಿದ ಮಹಾರಾಜನಿಗೆ ಕೌತ್ಸನು ಉತ್ತರ ಕೊಡುವಾಗ "ಸರ್ವೋಪಕಾರಕ್ಷಮಮಾಶ್ರಮಂ ತೇ" ಎಂದು ಹೇಳುತ್ತಾನೆ. ನಾಲ್ಕು ವರ್ಣಾಶ್ರಮಗಳಲ್ಲಿ ಗೃಹಸ್ಥಾಶ್ರಮ ಬಹಳ ಮುಖ್ಯವಾದವನು. ಉಳಿದ ಮೂರು ಆಶ್ರಮ ಜೀವಿಗಳಾದ ಬ್ರಹ್ಮಚಾರಿ, ಸನ್ಯಾಸಿ ಮತ್ತು ವಾನಪ್ರಸ್ಥರು ಗೃಹಸ್ಥರನ್ನೇ ಅನೇಕ ವಿಷಯಗಳಿಗೆ ಆಶ್ರಯಿಸಬೇಕಾಗುತ್ತದೆ. ಬ್ರಹ್ಮಚಾರಿಗಳ ಮತ್ತು ಸನ್ಯಾಸಿಗಳ ಜೀವನಕ್ಕೆ ಗೃಹಸ್ಥರೇ ಆಧಾರ. 

ಸ್ವಂತ ಸಂಪಾದನೆಯಲ್ಲದ ವಿದ್ಯಾರ್ಥಿಗಳು ಮತ್ತು ಸಂಪಾದನೆ ಮಾಡಬಾರದ ಸನ್ಯಾಸಿಗಳ ಜೀವನ ಸಮಾಜದಲ್ಲಿರುವ ಗೃಹಸ್ಥರ ಸಹಾಯದಿಂದಲೇ ನಡೆಯುತ್ತದೆ. ಹೀಗಿರುವಾಗ ಗೃಹಸ್ಥರು ಈ ಭೋಗ-ಭಾಗ್ಯಗಳ ವಿಷಯದಲ್ಲಿ ಅತಿಯಾದ ಆಸಕ್ತಿ ತಾಳದಿದ್ದರೂ ಪೂರ್ಣವಾಗಿ ನಿರಾಸಕ್ತರಾಗಲು ಸಾಧ್ಯವಿಲ್ಲ. 
*****  

  1. "ಅಷ್ಟ ಭಾಗ್ಯಗಳು" ಎಂದು ಪರಿಗಣಿತವಾದ ಎಂಟರಲ್ಲಿ ಮೊದಲನೆಯದು "ಅನ್ನ". ಯಾವ ಪ್ರಾಣಿಯ ಜೀವನ ನಡೆಯಬೇಕಾದರೂ ಮೊದಲನೆಯ ಅವಶ್ಯಕತೆ ಆಹಾರ. ಇಲ್ಲಿ ಅನ್ನ ಎಂದರೆ, ಹಿಂದೊಮ್ಮೆ ಬೇರೆ ಸಂಚಿಕೆಯಲ್ಲಿ ಚರ್ಚಿಸಿದಂತೆ, ಅಕ್ಕಿಯನ್ನು ಬೇಯಿಸಿ ಮಾಡಿದ ಪದಾರ್ಥ ಮಾತ್ರವಲ್ಲ. ದೇಹದ ಬೆಳವಣಿಗೆ ಮತ್ತು ಬೆಳೆದ ದೇಹವನ್ನು ಸುಸ್ಥಿತಿಯಲ್ಲಿ ಕಾಪಾಡಲು ಬೇಕಾಗುವ ಎಲ್ಲ ಖಾದ್ಯಗಳಿಗೂ "ಅನ್ನ" ಎಂದು ನಿರ್ದೇಶಿಸಿ "ಬೃಹದಾರಣ್ಯಕ ಉಪನಿಷತ್" ಹೇಳುವ "ಸಪ್ತಾನ್ನ ಪ್ರಕರಣ" ತಿಳಿಸಿಕೊಡುತ್ತದೆ. ಅನ್ನವಿಲ್ಲದೇ ಜೀವನವಿಲ್ಲ. ಆದ್ದರಿಂದ ಎಂಟು ಭಾಗ್ಯಗಳಲ್ಲಿ ಮೊದಲೆನೆಯದು ಅನ್ನ. 
  2. ಎರಡನೆಯ ಭಾಗ್ಯ "ಉದಕ". ನೀರಿಲ್ಲದೆ ಬದುಕುವುದು ಸಾಧ್ಯವಿಲ್ಲ. ಉಸಿರಾಡುವ ಎಲ್ಲಾ ಪ್ರಾಣಿಗಳಿಗೂ ಗಾಳಿಯ ನಂತರ ನೀರು ಅತಿ ಮುಖ್ಯ. ವಾಸ್ತವಾಗಿ ಅನ್ನಕ್ಕಿಂತ ಮೊದಲು ನೀರು ಬೇಕು. ಆದರೆ ಕುಡಿಯುವ ನೀರು ಸೃಷ್ಟಿಯಲ್ಲಿ ಸುಲಭವಾಗಿ ಸಿಗುವುದು. ಆದ್ದರಿಂದ ಇಲ್ಲಿ ಅನ್ನ  ಎರಡನೆಯದು ಎಂದು ಗಣಿತವಾಗಿದೆ. (ಮುಂದಿನ ಸಂಚಿಕೆಯಲ್ಲಿ ಚರ್ಚಿಸುವ "ಅಷ್ಟ ಭಾಗ್ಯಗಳು" ಎಂದು ನಿರ್ದೇಶಿಸುವ ಎಂಟು ಭಾಗ್ಯಗಳಲ್ಲಿ ನೀರೇ ಮೊದಲನೆಯದು. ಅದರಲ್ಲಿ ಅನ್ನ ಎಂಟರ ಲೆಕ್ಕದಲ್ಲಿ ಸೇರುವುದಿಲ್ಲ. ಮನುಷ್ಯನ ಅನ್ಯಾಯ ಜೀವನ ಕ್ರಮಗಳಿಂದ ಈಚಿನ ದಿನಗಳಲ್ಲಿ ನೀರು ಸಿಗುವುದು ಕಷ್ಟವಾಗಿದೆ).
  3. ಮೂರನೆಯ ಭಾಗ್ಯ "ತಾಂಬೂಲ". ತಾಂಬೂಲ ಎಂದರೆ ಕೇವಲ ಎಲೆ-ಅಡಿಕೆ-ಸುಣ್ಣ ಮಾತ್ರವಲ್ಲ. ತಾಂಬೂಲ ಸೇವನೆ ಊಟದ ಕೊನೆಯ ಅಧ್ಯಾಯ. ಅವುಗಳಲ್ಲಿ ಅವರವರ ಅಂತಸ್ತಿಗೆ ತಕ್ಕಂತೆ ಅಂತರವೂ ಉಂಟು. ಅದು ಕೇವಲ ಗೋಟು ಅಡಿಕೆ ಇರಬಹುದು ಅಥವಾ ಬಣ್ಣ ಕಟ್ಟಿದ, ಕಾಚು, ಸಕ್ಕರೆ, ಸುಗಂಧ ಮಿಶ್ರಿತವಾದ ಪುಡಿಯಡಕೆ ಇರಬಹುದು. ತಾಂಬೂಲ ಸೇವನೆ ಇದೆ ಅಂದರೆ ಊಟದ ನಂತರ ಸ್ವಲ್ಪ ವಿಶ್ರಾಂತಿಗೂ ಅವಕಾಶ ಇದೆ ಎಂದು ಅರ್ಥ. ಜೀವನದ ಇತರ ಚಟುವಟಿಕೆಗಳಿಗೆ ತಕ್ಷಣ ಓಡಬೇಕಾಗಿಲ್ಲ. ಕುಟುಂಬದ ಇತರ  ಸದಸ್ಯರ, ಬಂಧು-ಬಾಂಧವರ, ಸ್ನೇಹಿತರ ಕೂಡ ಸ್ವಲ್ಪ ವಿನೋದದ ಕ್ಷಣಗಳನ್ನೂ ಕಳೆಯುವ ಅವಕಾಶವೂ ಒಂದು ಭೋಗವೇ. 
  4. ನಾಲ್ಕನೆಯದು "ಪುಷ್ಪ". ಈಗ ಗಂಡಸರು ಹೂವಿನ ಹಾರಗಳನ್ನು ಧರಿಸುವುದು ತಪ್ಪಿಹೋಗಿದೆ. ಸ್ತ್ರೀಯರು ಕೂಡ  ಮರೆತಿದ್ದಾರೆ. ಸುಗಂಧಭರಿತ ಹೂವುಗಳು ಮತ್ತು ಹೂವಿನ ಹಾರಗಳನ್ನು ಉಪಯೋಗಿಸುವುದು ಒಂದು ಭೋಗದ ರೀತಿ. ಅನೇಕ ಬಣ್ಣದ, ಸುವಾಸನೆಯ, ಗಾತ್ರದ ಹೂವುಗಳು ಸೊಗಸನ್ನು ಹೆಚ್ಚಿಸುವುದರ ಜೊತೆಗೆ ವಾತಾವರಣವನ್ನೂ ರಂಗೇರಿಸಬಲ್ಲುದು. 
  5. ಐದನೆಯದು "ಚಂದನ". ಗಂಧದ ಮರಗಳು ಹೇರಳವಾಗಿ ಇದ್ದಾಗಿನ ಮಾತು. ಗಂಧ ತಂದು ತೇಯ್ದು ಸುಗಂಧ ಪೂಸಿಕೊಳ್ಳುತ್ತಿದ್ದ ಕಾಲದ ಮಾತು ಇದು. ಪುಟ್ಟಕೃಷ್ಣನ ದಾಸರು ವರ್ಣಿಸುವುದು "ಪೂಸಿದ ಶ್ರೀಗಂಧ ಮಯ್ಯೊಳಗಮ್ಮ" ಎಂದು. (ಈಗ ಅದು ಕೇವಲ ರಾಸಾಯನಿಕ ಗಂಧ ಸಿಂಪಡಣೆಗೆ ಸೀಮಿತವಾಗಿದೆ. ಕೆಲವುಕಡೆಯಂತೂ ದೊಡ್ಡ ಫ್ಯಾನುಗಳು ಈ ಕೆಲವನ್ನು ಬೇಜಾರಿಲ್ಲದೆ ಮಾಡುತ್ತವೆ). 
  6. ಆರನೆಯ ಭೋಗ "ವಸನ". ಮಾನ ಮುಚ್ಚಲು ಬಟ್ಟೆ ಅನ್ನ-ನೀರಿನ ನಂತರದ ಸ್ಥಾನ ಪಡೆಯುತ್ತದೆ. ಅದು ಭೋಗದ ವಸ್ತುವೂ ಆಗಬಹುದು. ಬರಿಯ ಶುಭ್ರ ಬಟ್ಟೆಯಿಂದ ಜರತಾರಿ ಸೀರೆ-ಪಂಚೆ-ದಿರಿಸು, ಮುಂಡಾಸು, ಮೇಲು ಹೊದಿಕೆ, ಮುಂತಾದ ಅನೇಕ ರೀತಿಯಲ್ಲಿ ಜೀವನಕ್ಕೆ ಸೊಗಸನ್ನು ತಂದುಕೊಡುವ ಭೋಗ ಈ ವಸನದ್ದು. 
  7. ಭೋಗಗಳಲ್ಲಿ ಏಳನೆಯದು "ಶಯ್ಯಾ". ಊಟವಾಗಿ ಹೊಟ್ಟೆ ತುಂಬಿತು. ಬಟ್ಟೆ ಸಿಕ್ಕಿತು. ನಂತರದ ಸ್ಥಾನ ದಣಿದ ದೇಹಕ್ಕೆ ನಿದ್ರೆ ಕೊಡುವುದು. ನೆಲದ ಮೇಲೆ ತೋಳನ್ನೇ ತಲೆದಿಂಬಾಗಿ ಇಟ್ಟುಕೊಂಡು ಮಲಗಬಹುದು. ಅದನ್ನು ಯಾರೂ ಭೋಗ ಅನ್ನುವುದಿಲ್ಲ. ಅದೇ ಸೊಗಸಾದ ಮೆತ್ತನೆಯ ಹಾಸಿಗೆಯ ಮೇಲೆ ಆಗಬಹುದು. ಸುಪ್ಪತ್ತಿಗೆಯೂ ಆಗಬಹುದು. ಇವು ನೆಲದ ಬದಲು ಸುಂದರ ಮಂಚದ ಮೇಲೂ ಇರಬಹುದು. ಸೊಳ್ಳೆಪರದೆ ಸೇರಿರಬಹುದು. ಹೊದೆಯಲು ಒಳ್ಳೆಯ ಪದರಗಳ ಹೊದಿಕೆ ಇರಬಹುದು. ಚಳಿಗಾಲದಲ್ಲಿ ಉಣ್ಣೆಯದು ಇರಬಹುದು. ಹೀಗೆ ಭೋಗದ ವಿವಿಧ ಮಜಲುಗಳು. ಜೊತೆಗೆ ತನ್ನದೇ ಮನೆಯಲ್ಲಿಯೂ ಇರಬಹುದು. 
  8. ಎಂಟನೆಯ ಭೋಗವೆಂದರೆ "ಅಲಂಕಾರ". ಬರೀ ಬಟ್ಟೆ ಉಟ್ಟರೆ ಸಾಕೆ? ಆಭರಣಗಳು ಬೇಡವೇ? ಚಿನ್ನ, ವಜ್ರ ಮುಂತಾದವು. ಕುಂಕುಮ ಮುಂತಾದ ಬಣ್ಣ-ಬಣ್ಣದ ದ್ರವ್ಯಗಳು. ಸುಂದರವಾದ ಕೈಚೀಲ. ಕೈಗೆ ಕಸೂತಿ ಹಾಕಿದ ಕರ್ಚೀಫು. ಸ್ವಲ್ಪ ವಯಸ್ಸಾದ ಮೇಲೆ ಕೈಗೊಂಡು ಕೊರೆದ ಬೆತ್ತದ ಕೋಲು. ಹೀಗೆ. ಅವರವರ ಯೋಗ್ಯತೆ-ಅಭಿರುಚಿಗಳಿಗೆ ತಕ್ಕಂತೆ ಇವುಗಳ ಪಟ್ಟಿಯನ್ನು ಪಸರಿಸಬಹುದು. 
ಇಲ್ಲಿಗೆ ಎಂಟು ರೀತಿಯ "ಅಷ್ಟ ಭೋಗ" ವಿಷಯದ ವಿವರಣೆ ಸಾಕು. ಮುಂದೆ ಇವನ್ನು ವಿಸ್ತರಿಸುವುದು ಅವರವರ ಮನಸ್ಸಿಗೆ ಬಿಡುವುದು ಒಳ್ಳೆಯದು. 

*****

ಅಷ್ಟ ಭೋಗಗಳ ವಿಷಯಗಳನ್ನು ಇಬ್ಬರು ಬಲ್ಲರು. ಇವು ಇಲ್ಲದವರು. ಇವು ಚೆನ್ನಾಗಿ ಇದ್ದು ಅನುಭವಿಸುವವರು. ಎಲ್ಲ ಭೋಗಗಳ ಸವಲತ್ತಿದ್ದರೂ ಅನುಭವಿಸಲು ಸಾಧ್ಯವಿಲ್ಲದವರ ವಿಷಯ ಚಿಂತಿಸುವುದು ಬೇಡ. 

"ಅಷ್ಟ ಭಾಗ್ಯಗಳು" ಎನ್ನುವುದನ್ನು ಮುಂದಿನ ಸಂಚಿಕೆಯಲ್ಲಿ ನೋಡೋಣ. 

Tuesday, April 22, 2025

ಅನ್ನದ ಹಾಹಾಕಾರ


"ಎಂಜಲು ಮತ್ತು ಪ್ರಸಾದ" ಹೆಸರಿನ ಶೀರ್ಷಿಕೆಯ ಹಿಂದಿನ ಒಂದು ಸಂಚಿಕೆಯಲ್ಲಿ, "ಊಟಮಾಡಿ ಮುಗಿದ ಮೇಲೆ ಎಲೆಗಳಲ್ಲಿ ಅಥವಾ ತಟ್ಟೆಗಳಲ್ಲಿ  ಬಿಟ್ಟಿರುವ ಪದಾರ್ಥಗಳನ್ನು "ಎಂಜಲು" ಎನ್ನುತ್ತಾರೆ. ಇದನ್ನು ಯಾರೂ ತಿನ್ನುವುದಿಲ್ಲ. ಇದೆಲ್ಲಾ ಒಟ್ಟುಗೂಡಿಸಿ ಹೊರಗೆ ಬಿಸಾಡುತ್ತಾರೆ. ಅಲ್ಲಿ ಪ್ರಾಣಿಗಳು ತಿನ್ನಬಹುದು ಇಲ್ಲವೇ ಕಡೆಗೆ ಗೊಬ್ಬರ ಆಗಬಹುದು" ಎಂದು ಹೇಳಿತ್ತು. ಇದು ಇಂದಿನ ದಿನದ ಸತ್ಯ. ಆದರೆ ಐವತ್ತು ಅರವತ್ತು ವರುಷಗಳ ಹಿಂದಿನ ಸತ್ಯ ಬೇರೆಯೇ ಇತ್ತು. ಆಗ ಕಂಡ ದೃಶ್ಯಗಳು ಹೃದಯ ಕದಡಿ ಮನಸ್ಸು ನೀರಾಗುವಂತೆ ಇರುತ್ತಿದ್ದವು. ವಾಸ್ತವವಾಗಿ ಅದನ್ನು ಚರ್ಚಿಸಲು ಮನಸ್ಸು ಬರುವುದಿಲ್ಲ. ಆದರೆ ಜೀವನದ ಸತ್ಯಗಳು ಯಾವಾಗಲೂ ಮಧುರವಾಗಿಯೇ ಇರುವುದಿಲ್ಲ. ಇಂದಿನ ಪ್ರಪಂಚದಲ್ಲಿ "ಅನ್ನದ ಹಾಹಾಕಾರ" ಇದ್ದರೂ ಅಂದಿನಷ್ದು ಭೀಕರವಾಗಿಲ್ಲ. ಪರಿಸ್ಥಿತಿ ಎಷ್ಟೋ ಸುಧಾರಿಸಿದೆ. 

1962, 1965 ಮತ್ತು 1971 ಇಸವಿಗಳಲ್ಲಿ ನಮ್ಮ ದೇಶ ಯುದ್ಧದ ಬೇಗೆಯಲ್ಲಿ ಬೇಯುತ್ತಿತ್ತು. ಮೊದಲು ಚೀನಾದ ಕಡೆ, ಮತ್ತೆರಡು ಬಾರಿ ಪಾಕಿಸ್ತಾನದ ಗಡಿಗಳಲ್ಲಿ.  ಆಗಿನ ಪರಿಸ್ಥಿತಿಯಲ್ಲಿ ಜನರಿಗೆ ಉದ್ಯೋಗದ ಅವಕಾಶಗಳು ಮೂಲತಃ ನಾಲ್ಕು ದಾರಿಗಳಲ್ಲಿದ್ದವು. ಮೊದಲನೆಯದು ಕೃಷಿ ಮತ್ತು ಪಶುಪಾಲನೆ. ಎರಡನೆಯದು ತಿಂಗಳ ಸಂಬಳ ಸಿಗುವ ಸರಕಾರಿ ನೌಕರಿ. ಮೂರನೆಯದು ಕುಂಬಾರ, ಬಡಗಿ, ಕಮ್ಮಾರ, ನೇಕಾರ ಮೊದಲಾದ ಗೃಹ ಕೈಗಾರಿಕೆ ಅಥವಾ ಕಸಬುಗಳು. ನಾಲ್ಕನೆಯದು ಸಣ್ಣ ವ್ಯವಹಾರ, ಅಂಗಡಿಗಳು ಮುಂತಾದವು. ಈಗಿನಂತೆ "ಸರ್ವಿಸ್ ಸೆಕ್ಟರ್" ಅನ್ನುವ ಕಲ್ಪನೆಯೇ ಇರಲಿಲ್ಲ. ಹಸಿವಿನ ದಾವಾಗ್ನಿ ಜ್ವಾಲೆಗಳು ಅನೇಕರನ್ನು ಕಿತ್ತು ತಿನ್ನುತ್ತಿದ್ದವು. ಎಲ್ಲಾದರೂ ಸಮಾರಂಭಗಳಾಗಿ ಊಟದ ಎಲೆ ಎಸೆಯುವ ಕಡೆ ಕೆಲವರು ಕಾದು ಕುಳಿತಿರುತ್ತಿದ್ದರು. ಅಲ್ಲಿ ಸೇರಿದ್ದ ಪ್ರಾಣಿಗಳ ಜೊತೆ ಹೊಡೆದಾಡಿ ಹೊಟ್ಟೆ ತುಂಬಿಸಿಕೊಳ್ಳಬೇಕಾದ ಪರಿಸ್ಥಿತಿ ಅವರದ್ದು. ಭಿಕ್ಷೆ ಬೇಡಿ ಜೀವನ ಮಾಡುವುದೂ ಒಂದು ವೃತ್ತಿಯೇ ಆಗಿತ್ತು. ಇಷ್ಟು ಹೇಳಿ ಮುಂದಿನದನ್ನು ಇಲ್ಲಿಗೇ ಬಿಡೋಣ. ಆ ಕಾಲಮಾನದಲ್ಲಿ ಇಂತಹ ದೃಶ್ಯಗಳನ್ನು ಕಣ್ಣಾರೆ ಕಂಡವರಿಗೆ ಆ ನೋವು ಬೇಗ ಅರ್ಥವಾಗುತ್ತದೆ. 
*****  

ಇಂತಹ ಅತಿ ಕಷ್ಟದ ಸಮಯ ಕೇವಲ ಮೂರ್ನಾಕು ವರುಷಗಳ ಹಿಂದೆ ಮತ್ತೆ ಕದ ತಟ್ಟಿತ್ತು. ಕರೋನ ಮಹಾಮಾರಿಯ ಕಾರಣ ಜನತೆ ಎರಡು ಕಡೆಗಳಲ್ಲಿ ಹಿಂಸೆ ಅನುಭವಿಸಿದರು. ಒಂದೆಡೆ ಜೀವಭಯ. ಏನನ್ನು ನೋಡಿದರೂ, ಏನನ್ನು ಮುಟ್ಟಿದರೂ ದಿಗಿಲು. ಕೈಗಳನ್ನೂ, ಎಲ್ಲ ಪದಾರ್ಥಗಳನ್ನೂ ತೊಳೆದದ್ದೇ ತೊಳೆದದ್ದು. ಇನ್ನೊಂದೆಡೆ ಅನೇಕರಿಗೆ ದೈನಂದಿನ ಜೀವನೋಪಾಯಕ್ಕೆ ದಾರಿಯಿಲ್ಲದೆ ಮನೆಯಲ್ಲಿ ಕುಳಿತುಕೊಳ್ಳಬೇಕಾದ ಸಂದರ್ಭ. ಎಲ್ಲಾ ಚಟುವಟಿಕೆ ನಿಲ್ಲಿಸಿದರೂ ಹೊಟ್ಟೆ ಮಾತ್ರ ಸುಮ್ಮನಿರದಲ್ಲ. ಕೋಟಿ ಕೋಟಿ ಮಂದಿ ಉಪವಾಸ ಬೀಳುವ ಸಂದರ್ಭ ಅದು. 

ಈಗ ಇಡೀ ಪ್ರಪಂಚದ ಜನಸಂಖ್ಯೆ ಸುಮಾರು 800 ಕೋಟಿ. ಭಾರತದಲ್ಲಿ 140 ಕೋಟಿ. ಇದರಲ್ಲಿ 80 ಕೋಟಿ ಜನಕ್ಕೆ ಸರಿಯಾದ ಸಂಪಾದನೆ ಇಲ್ಲದೆ ಅನ್ನದ ಹಾಹಾಕಾರ ಬಡಿಯುವ ಸಂದರ್ಭ. 80 ಕೋಟಿ ಅಂದರೆ ಅದೇನು ಸಾಮಾನ್ಯವಲ್ಲ. ಇಡೀ ಯುರೋಪ್ ಖಂಡದ ಜನಸಂಖ್ಯೆಗಿಂತ ಸ್ವಲ್ಪ ಹೆಚ್ಚು. ಉತ್ತರ ಅಮೇರಿಕ ಮತ್ತು ದಕ್ಷಿಣ ಅಮೆರಿಕಗಳ ಒಟ್ಟು ಜನಸಂಖ್ಯೆಯಷ್ಟು. ಇಷ್ಟು ಮಂದಿ ಉಪವಾಸ ಬೀಳುವುದನ್ನು ಉಚಿತವಾಗಿ ಆಹಾರ ಧಾನ್ಯ ವಿತರಿಸುವುದರ ಮೂಲಕ ಸರ್ಕಾರ ತಪ್ಪಿಸಿತು. ಆಗ ಪ್ರಾರಂಭವಾದ ಈ ಯೋಜನೆ ಇಂದೂ ನಡೆಯುತ್ತಿದೆ. ಒಂದೆಡೆ ಕರೋನಾ ಲಸಿಕೆ ಹಾಕುವ ಭರಾಟೆ. ಮತ್ತೊಂದೆಡೆ ಈ ಆಹಾರ ಧಾನ್ಯ ವಿತರಣೆ ಯೋಜನೆ. ಇವೆರಡು ಎಷ್ಟೋ ಜನರನ್ನು ಆ ಕಂಟಕದಿಂದ ಪಾರುಮಾಡಿತು. 

ಜಿ. ಎಸ. ಟಿ. ತೆರಿಗೆ ಪದ್ದತಿಯನ್ನು ಅನೇಕ ರೀತಿಯಿಂದ ಮೂದಲಿಸುವವರಿದ್ದಾರೆ. ಅದನ್ನು ತೆರುವಾಗ ನಾವೂ ಅನೇಕ ಬಾರಿ ಬೇಸರಿಸುತ್ತೇವೆ. ಆದರೆ ಇದರಿಂದ ಪ್ರತಿ ತಿಂಗಳೂ ಸರಕಾರಕ್ಕೆ ಬರುತ್ತಿರುವ ಆದಾಯ ಇಂತಹ ಕಾರ್ಯಕ್ರಮಗಳ ಭಾರವನ್ನು ಭರಿಸಲು ಸರ್ಕಾರಕ್ಕೆ ಆಸರೆ ಒದಗಿಸಿದೆ. ತೆರಿಗೆ ಕಳ್ಳರಿಂದ ಸೋರುತ್ತಿದ್ದ ಹಣ ಸರ್ಕಾರದ ಖಜಾನೆಗೆ ಸೇರುವುದರಿಂದ ಇದು ಸಾಧ್ಯವಾಯಿತು. ಬೇರೆ ಸಂಪನ್ಮೂಲಗಳೂ ಇವೆ ಎಂದರೂ ಈ ದಾರಿಯ ಆದಾಯ ಬಹಳ ಮುಖ್ಯವಾಆದದ್ದೇ ಆಗಿದೆ. 

*****

ಅನ್ನದ ಹಾಹಾಕಾರ ಮುಗಿಲು ಮುಟ್ಟಿದ್ದ ಹಿಂದಿನ ಶತಮಾನದ ಐವತ್ತು-ಅರವತ್ತರ ದಶಕದಲ್ಲಿ ಸಮಾಜದ ಮೇಲೆ ಸಮತಾವಾದದ ಬಹಳ ಪ್ರಭಾವ ಇತ್ತು. ವರ್ಗ ಸಂಘರ್ಷ ಎಲ್ಲೆಡೆ ವಿಜೃಂಭಿಸುತ್ತಿದ್ದ ಕಾಲವದು. ಕನ್ನಡ ಸಾಹಿತ್ಯದ ಸಂದರ್ಭದಲ್ಲಿ ಅದು "ಕನ್ನಡ ನವೋದಯ" ಕಾಲಘಟ್ಟವನ್ನು ದಾಟಿ "ನವ್ಯ" ಅನ್ನುವ ಘಟ್ಟಕ್ಕೆ ಜಾರುತ್ತಿದ್ದ ಸಮಯ. ನವ್ಯ ಸಾಹಿತ್ಯದ ಹರಿಕಾರರಲ್ಲಿ ಒಬ್ಬರಾದ ಕೀರ್ತಿಶೇಷ ಎಂ. ಗೋಪಾಲಕೃಷ್ಣ ಅಡಿಗರ (1918-1992) ಜನಪ್ರಿಯ ಕವನವೊಂದು ಅದೇ ಸಮಯದಲ್ಲಿ, ಇದೇ ಅನ್ನದ ಹಾಹಾಕಾರ ಕುರಿತು ರಚಿತವಾದದ್ದು. 

ಅಡಿಗರು ಒಮ್ಮೆ (1971) ಬೆಂಗಳೂರು ಲೋಕಸಭೆ ಕ್ಷೇತ್ರದಿಂದ (ಆಗ ಬೆಂಗಳೂರು ದಕ್ಷಿಣ ಕ್ಷೇತ್ರ ಇರಲಿಲ್ಲ) ಮಾಜಿ ಮುಖ್ಯಮಂತ್ರಿಗಳಾಗಿದ್ದ ಕೆಂಗಲ್ ಹನುಮಂತಯ್ಯನವರ ವಿರುದ್ಧ ಸ್ಪರ್ಧಿಸಿದ್ದರು. ಅವರ ಚುನಾವಣಾ ಪ್ರಚಾರ ಸಭೆಗಳ ಪ್ರಾರಂಭದಲ್ಲಿ ಈ ಗೀತೆಯನ್ನು ಖ್ಯಾತ ಗಮಕಿಗಳು ಮತ್ತು ಸುಗಮ ಸಂಗೀತ ಗಾಯಕರಾಗಿದ್ದ ಶ್ರೀ ಚಂದ್ರಶೇಖರ ಕೆದಿಲಾಯ ಅವರು ಹಾಡುತ್ತಿದ್ದರು. ಆ ನಂತರ ಅಡಿಗರು ಚುನಾವಣಾ ಭಾಷಣ ಮಾಡುತ್ತಿದ್ದರು. ಒಂದು ರೀತಿಯಲ್ಲಿ ಅದು ಅವರ ಚುನಾವಣಾ ಪ್ರಣಾಳಿಕೆಯಂತೆ ಇತ್ತು. ಚುನಾವಣೆಯಲ್ಲಿ ಅಡಿಗರು ಸೋತರು. ಆದರೆ ಈ ಕವನ ಬಹಳ ಪ್ರಸಿದ್ಧವಾಯಿತು. ನಂತರ ಅಡಿಗರು "ನ್ಯಾಷನಲ್ ಬುಕ್ ಟ್ರಸ್ಟ್" ಅಧ್ಯಕ್ಷರಾದರು. ಇನ್ನೂ ಅನೇಕ ರೀತಿಯಲ್ಲಿ ಸಾಹಿತ್ಯಕ್ಕೆ ಸೇವೆ ಸಲ್ಲಿಸಿದರು. 

ಅನ್ನದ ಹಾಹಾಕಾರದ ಚರ್ಚೆಯ ಸಮಯದಲ್ಲಿ ಆ ಕವನ ನೆನಪಿಸಿಕೊಳ್ಳುವುದು ಒಳ್ಳೆಯದು. 

*****

ಹೊಸ ನೆತ್ತರುಕ್ಕುಕ್ಕಿ ಆರಿಹೋಗುವ ಮುನ್ನ 
ಹರೆಯದೀ ಮಾಂತ್ರಿಕನ ಮಾಟ  ಮಸಳುವ  ಮುನ್ನ 
ಉತ್ಸಾಹ ಸಾಹಸದ ಉತ್ತುಂಗ ವೀಚಿಗಳ 
ಈ ಕ್ಷುಭ್ದ ಸಾಗರವು ಬತ್ತಿಹೋಗುವ ಮುನ್ನ 
     ಕಟ್ಟುವೆವು ನಾವು ಹೊಸ ನಾಡೊಂದನು 
     ರಸದ ಬೀಡೊಂದನು   

ನಮ್ಮೆದೆಯ ಕನಸುಗಳೆ ಕಾಮಧೇನು 

ಆದಾವು ಕರೆದಾವು ವಾಂಛಿತವನು 

ಕರೆವಕೈಗಳಿಗಿಹುದಿದೋ ಕನಸುಗಳ ಹರಕೆ

ಗುರಿತಪ್ಪದೊಮ್ಮುಖದ ಬಯಕೆ ಬೆಂಬಲಕೆ

ಕಟ್ಟುವೆವು ನಾವು ಹೊಸ ನಾಡೊಂದನು 

ರಸದ ಬೀಡೊಂದನು 

ನಾವು ಹಿಂದೆಗೆವೆವೇ ವೀರ ತರುಣರು ನಾವು 

ಒಂದೆ ನೆಗೆತಕೆ ನೆಗೆವೆವೋ ಕಂದಕವನು 

ಕುಟ್ಟಿ ಪುಡಿ ಮಾಡುವೆವು ಕೋಟೆಗಳನು 

ಎದೆಮೆಟ್ಟಿ ಮುರಿಯುವೆವು ಅಸುರ ರಟ್ಟೆಗಳನು 

        ಕಟ್ಟುವೆವು ನಾವು ಹೊಸ ನಾಡೊಂದನು 

        ರಸದ ಬೀಡೊಂದನು 

                 ......... 

                 ......... 

                 ......... 

ಇಂದು ಬಾಳಿದು ಕೂಳ ಕಾಳಗವು 

ಹೊಟ್ಟೆಯೇ ಕೇಂದ್ರವಾಗಿದೆ ನರನ ಜೀವಿತಕ್ಕೆ 

ಅನ್ನದನ್ಯಾಯ ದಾವಾಗ್ನಿಯಲಿ ದಹಿಸುತಿದೆ 

ನರತೆ ಸಂಸ್ಕೃತಿ ಪ್ರೀತಿ ದಿವದ ಬಯಕೆ 

       ಕಟ್ಟುವೆವು ನಾವು ಹೊಸ ನಾಡೊಂದನು 

       ರಸದ ಬೀಡೊಂದನು  

ಇರುವೆಲ್ಲವನು ಎಲ್ಲ ಜನಕೆ ತೆರವಾಗಿಸುವ 

ಸಮಬಗೆಯ ಸಮಸುಖದ ಸಮದುಃಖದ 

ಸಾಮರಸ್ಯದ ಸಾಮಗಾನ ಲಹರಿಯ ಮೇಲೆ 

ತೇಲಿಬರಲಿದೆ ನೋಡು ನಮ್ಮ ನಾಡು  

        ಕಟ್ಟುವೆವು ನಾವು ಹೊಸ ನಾಡೊಂದನು 

        ರಸದ ಬೀಡೊಂದನು ಸುಖದ ಬೀಡೊಂದನು  

*****

ಈ ಕವಿತೆಗೆ ಈಗ ಸುಮಾರು ಐವತ್ತೈದು ವರುಷ. ಕಳೆದ  ದಶಕಗಳಲ್ಲಿ ಬಹಳ ಬದಲಾವಣೆಗಳಾಗಿವೆ. ಪಡಿತರ ಪದ್ದತಿಯಲ್ಲಿ, ವ್ಯವಸ್ಥೆಯಲ್ಲಿ ಎಷ್ಟೋ ಸುಧಾರಣೆ ಆಗಿದೆ. ಅಂದು ರೇಷನ್ ಅಂಗಡಿ ಎಂದು ತೆಗೆಯುತ್ತದೋ, ಯಾವಾಗ ಏನು ಕೊಡುತ್ತಾರೋ ಗೊತ್ತಿರಲಿಲ್ಲ. ಇಂದು 80 ಕೋತಟಿ  ಜನ ಪಡಿತರ ಪ್ರತಿ ತಿಂಗಳೂ ಪಡೆಯುತ್ತಿದ್ದಾರೆ. ತಿಂಗಳು ತಿಂಗಳೂ ಏನು ಪದಾರ್ಥ ಕೊಡುತ್ತಾರೆ ಅನ್ನುವುದು ಎಲ್ಲರಿಗೂ ಗೊತ್ತು. ನಮಗೆ ಪಡಿತರ ಸಿಕ್ಕಿಲ್ಲ ಎನ್ನುವ ದೂರುಗಳು ಅಷ್ಟಾಗಿ ಕೇಳಿಬರುತ್ತಿಲ್ಲ. ಇದರ ಜೊತೆಗೆ ಸರ್ಕಾರಗಳು DBT ಮೂಲಕ ಅನೇಕ ಯೋಜನೆಗಳಿಂದ ಅನೇಕರ ಖಾತೆಗಳಿಗೆ ಹಣವನ್ನೂ ಹಾಕುತ್ತಿದ್ದಾರೆ. ಇಂತಹ ಯೋಜನೆಗಳಿಂದ ಜನ ಸೋಮಾರಿಗಳಾಗುತ್ತಿದ್ದರೆ ಎನ್ನುವ ಚರ್ಚೆಯೂ ಬಲವಾಗಿ ನಡೆದಿದೆ. 

"ಸಾಮರಸ್ಯದ ಸಾಮಗಾನ ಲಹರಿಯ ಮೇಲೆ ಕನಸಿನ ನಾಡು" ಪೂರ್ಣವಾಗಿ ತೇಲಿ ಬಂದಿಲ್ಲ. ಅನೇಕ ಪದರಗಳಲ್ಲಿ ಸಾಮರಸ್ಯ ಇನ್ನೂ ಹದಗೆಡುವ ಲಕ್ಷಣಗಳು ನಿಚ್ಚಳವಾಗಿ ಕಂಡುಬರುತ್ತಿವೆ. ಸಮಾಜವಾದ ಮತ್ತು ಸಮತಾವಾದ ಪ್ರತಿಧ್ವನಿಸಿದ ಈ ಕವನ ಇಂದು ಅಷ್ಟಾಗಿ ಕೇಳಿಬರುತ್ತಿಲ್ಲ. ಸಮತಾವಾದದ ಬಿರುಸು ಬಹಳ ಕಡಿಮೆಯಾಗಿದೆ. ಸಮತಾವಾದದ ಹೆಸರಿನಲ್ಲಿ ಮುಂದೆ ಬಂಡ ನಾಯಕರುಗಳು ತಮ್ಮ ಹಿಂದಿದ್ದ ಜನತೆಯನ್ನು ಹಿಂದೆ ಬಿಟ್ಟು ಎಷ್ಟೋ ಮುಂದೆಬಂದಿದ್ದಾರೆ!

ಅನ್ನದ ಹಾಹಾಕಾರ ಎಷ್ಟೋ ಕಡಿಮೆಯಾಗಿದೆ. ಆದರೂ ಪೂರ್ಣವಾಗಿ ಹೋಗಿದೆ ಎನ್ನುವಂತಿಲ್ಲ.  ಮನಸ್ಸಿದ್ದವರಿಗೆ  ದುಡಿಯುವ ದಾರಿ ಮೊದಲಿಗಿಂತ ಎಷ್ಟೋ ಉತ್ತಮವಾಗಿದೆ. ಆದರೂ ನಿರುದ್ಯೋಗ ಪೂರ್ಣವಾಗಿ ನೀಗಿಲ್ಲ. ಪರಿಸ್ಥಿತಿ ಇನ್ನೂ ಉತ್ತಮವಾಗುವುದೆಂದು ಆಶಿಸೋಣ. 


*****
ಚಂದ್ರಶೇಖರ ಕೆದಿಲಾಯರು ಹಾಡಿರುವ ಈ ಕವನ ಯೂಟ್ಯೂಬಿನಲ್ಲಿ ಲಭ್ಯವಿದೆ. ಈ ಕೆಳಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ ಕೇಳಬಹುದು:  


Wednesday, September 14, 2011

They also fought corruption, in their own way!

Top news in India nowadays is the support Anna Hazare is receiving from the general public for his crusade against corruption. The campaign is going from strength to strength.

Was there any corruption long time ago? When did corruption actually start? Was there any fight against corruption in olden days? Can it ever be eradicated?

Answer to the last question appears to be an emphetic NO. It may be at the best made to lie low for sometime. But it will rear its head again, the multi headed serpet of corruption.

I recall two stories on fight on corruption. The stories were told to me by my father when I was a child. The first one may be well known. The second one may not be that well known.

The first one is about a wise man who was living in severe poverty. Even though every one in his village recognised his wisdom and respected him, he was not known outside his village. He would not use his wisdom to earn money for the maintainance of his family. But his wife one day firmly told him to go to the King, please him with his wisdom and come back with some money. Or else he would not be allowed entry in to the house. Naturally. The Homemaker who runs the home knows the real difficulties of making both ends meet.

The wise man had no alternative. To maintain domestic peace he went to the King's palace.

The Dwarapaalakas (Guards at the door) would not allow him inside the palace. After much pleading they agreed to let him in if he shared his prize with them when he came back. He promised the two guards that the prize he received will be shared equally with the two guards and he himself would not take anything home.

Once inside the palace, he met the King and pleased him by his wisdom by answering the difficult questions asked in the King's court. The king was about announce a prize to the wise man. The wise man requested the King to give a prize of his choice. Though surprised, the King agreed.

The wise man asked to be given an award of twenty lashes. Everyone including the King were surprised. But as agreed the King called the Lashing-man. At this moment, the wise man requested the king to call the two Dwarapaalas. When they arrived he told the King about the commitment he had made to share the Prize with them and requested the king to reward them with ten lashes each.

No need to say that the corrupt Door-men were punished and the wise man was rewarded by being appointed as the Chief Vigilance Commissioner in the King's court.


This story is attributed by some to Tenali Rama. some to Birbal. and some others to some one else. I would like to simply keep it as The Wise Man.


The other story is for another day.