Showing posts with label Shaapa. Show all posts
Showing posts with label Shaapa. Show all posts

Monday, August 11, 2025

ದೊಡ್ಡವರ ಶಾಪಗಳೆಂಬ ವರಗಳು


ಹಿಂದಿನ ಸಂಚಿಕೆಯಲ್ಲಿ "ಸೋರಿಹೋಗುವ ನೀರಿನಂತೆ" ಎನ್ನುವ ಶೀರ್ಷಿಕೆಯಡಿ ಶಾಪಗಳ ಕಾರಣಗಳನ್ನೂ ಮತ್ತು ಅವುಗಳ ಪರಿಣಾಮಗಳನ್ನೂ ಸ್ವಲ್ಪ ನೋಡಿದೆವು. (ಇಲ್ಲಿ ಕ್ಲಿಕ್ ಮಾಡಿ ಆ ಸಂಚಿಕೆಯನ್ನು ಓದಬಹುದು). ಅನೇಕ ವೇಳೆ ಶಾಪಗಳು ದೊಡ್ಡ ರೀತಿಯ ವರಗಳೇ ಆಗಿ ರೂಪಾಂತರವಾಗುವ ಕಥೆಗಳನ್ನು ಕೇಳಿದ್ದೇವೆ. ಶ್ರೀ ರಾಘವೇಂದ್ರ ಸ್ವಾಮಿಗಳ 354 ವರ್ಷದ ಆರಾಧನೆಯ ಸಂದರ್ಭದಲ್ಲಿ ಅವರ ಅವತಾರದ ಬಗ್ಗೆ ಇರುವ ಶಾಪದ ಸಂಗತಿ ನೆನೆಸಿಕೊಳ್ಳುವುದು ಯೋಗ್ಯವೇ. ಆ ಶಾಪವು ಹೇಗೆ ಅನೇಕರಿಗೆ ವರವಾಗಿ ಪರಿಣಮಿಸಿತು ಎನ್ನುವುದನ್ನು ಸ್ವಲ್ಪ ಮಟ್ಟಿಗೆ ನೋಡೋಣ. 

"ಕ್ರೋಧೋಪಿ ದೇವಸ್ಯ ವರೇಣ ತುಲ್ಯ:" ಎಂದು ಒಂದು ಸಂಸ್ಕೃತದ ಹೇಳಿಕೆಯಿದೆ. ಕನ್ನಡದ ಗಾದೆಯಂತೆ. ಮಹಾಭಾರತದ ಶಾಂತಿ ಪರ್ವದ ಸಂದರ್ಭದಲ್ಲಿ ಇದರ ವಿಸ್ತಾರ ಸಿಗುತ್ತದೆ. ಇದರ ಸಂಕ್ಷಿಪ್ತ ಅರ್ಥ "ದೊಡ್ಡವರ ಕೋಪವೂ ವರಕ್ಕೆ ಸಮವು. ಅವರ ಕೋಪವೂ ಮಾನ್ಯವೇ!" ಎಂದು. ಒಬ್ಬರು ಇನ್ನೊಬ್ಬರನ್ನು  ಕಂಡಾಗ ಮೂರು ರೀತಿಗಳಲ್ಲಿ ಪ್ರತಿಕ್ರಯಿಸಬಹುದು. ಮೊದಲನೆಯದು ಉದಾಸೀನತೆ. ನೋಡಿಯೂ ನೋಡದಂತೆ ವ್ಯವಹರಿಸುವುದು. ಇದರಿಂದ ಏನೂ ಪ್ರಯೋಜನವಿಲ್ಲ. ಅದು ನೋವಿನ ಸಂಗತಿಯೇ. ಎರಡನೆಯದು ಸಂತೋಷದಿಂದ ನೋಡುವುದು. ಇದು ಬೇಕಾದದ್ದು. ಮೂರನೆಯದು ಕೋಪದಿಂದ ಗದರಿಸುವುದು ಇತ್ಯಾದಿ. ಇದರಲ್ಲಿ ಪ್ರೀತಿಯಿಲ್ಲದಿದ್ದರೂ ಉದಾಸೀನತೆ ಇಲ್ಲ. ನೋಡಿಯೂ ನೋಡದಿರುವಂತೆ ಇರುವುದಕ್ಕಿಂತ ಇದು ವಾಸಿ! ದೊಡ್ಡವರು ಹುಸಿ ಕೋಪದಿಂದ ಗದರಿಸಿದಂತೆ ಮಾಡಿದರೂ ಅವರು ನಮ್ಮನ್ನು ಗಮನಿದರಲ್ಲಾ, ಅಷ್ಟು ಸಾಕು ಎನ್ನುವ ಸಮಾಧಾನ. ಅದೇ ನಮ್ಮ ಭಾಗ್ಯೋದಯಕ್ಕೆ ದಾರಿ ಮಾಡುತ್ತದೆ ಎನ್ನುವ ಬಲವಾದ ನಂಬಿಕೆ. 

ಗುರುರಾಯ ಶ್ರೀ ರಾಘವೇಂದ್ರ ಸ್ವಾಮಿಗಳ ಅವತಾರವೂ ಈ ರೀತಿಯ ದೊಡ್ಡವರ ಒಂದು ಕೋಪದಿಂದಾದ ಶಾಪರೂಪಿ ವರದ ಪ್ರಭಾವ ಎಂದು ಅವರನ್ನು ನಂಬಿದ ಜನ ತಿಳಿಯುತ್ತಾರೆ.  

*****

ಚತುರ್ಮುಖ ಬ್ರಹ್ಮದೇವರೂ ಪ್ರತಿದಿನ ದೇವತಾರ್ಚನೆ ಮಾಡುತ್ತಾರಂತೆ. ಅದು ಮಾಡುವುದು ಒಂದು ತಪ್ಪಿಸಬಾರದ ಕರ್ತವ್ಯವೆಂದು ಎಲ್ಲರಿಗೆ ತೋರಿಸುವ ಸಲುವಾಗಿ. ಅವರು ಪ್ರತಿಕ್ಷಣ ಮಾಡುವುದೂ ಅದನ್ನೇ ಎನ್ನುವುದು ಬೇರೆ ಮಾತು. ಆದರೆ ದಿನಚರಿಯಲ್ಲಿ ಅದೂ ಒಂದು ಕಟ್ಟಲೆ. ಅವರ ಅಪ್ಪ-ಅಮ್ಮನಾದ ಲಕ್ಷ್ಮೀ-ನಾರಾಯಣರ ಅತಿ ದಿವ್ಯವಾದ ಪೂಜೆ-ಪುನಸ್ಕಾರಗಳು. ಅವರ ದೇವರಪೂಜೆ ಅಂದರೆ ಸಾಮಾನ್ಯವಲ್ಲ. ನಮ್ಮಂತೆ ಮನಸ್ಸು ಒಂದು ಕಡೆ, ಮಾತು ಇನ್ನೊಂದರ ಕುರಿತು, ದೇಹ ಮಾತ್ರ ಪೂಜೆಯಲ್ಲಿ. ಹೀಗಲ್ಲ. ಆದ್ದರಿಂದ ಅವರ ಪೂಜೆಯಲ್ಲಿ ಇನ್ನಿಲ್ಲದ ಸೊಗಸು. ಅವರು "ಕೇಶವಾಯ ನಮಃ" ಎಂದರೆ ಕೇಶವರೂಪಿ ಪರಮಾತ್ಮನು ಎದುರು ನಿಂತು ನಗೆಮೊಗದಿಂದ ಸ್ವೀಕರಿಸುತ್ತಾನಂತೆ. ಮತ್ತೆ "ನಾರಾಯಣಾಯ ನಮಃ" ಎಂದರೆ ನಾರಾಯಣ ರೂಪದಲ್ಲಿ ಬಂದು ನಿಲ್ಲುವನು. "ಮತ್ಸ್ಯಾಯ ನಮಃ" ಅಂದರೆ ಮತ್ಸ್ಯರೂಪಿ ಪರಮಾತ್ಮ ಹಾಜರು. "ಕೂರ್ಮಾಯ ನಮಃ" ಎಂದರೆ ಕೂರ್ಮರೂಪದಲ್ಲಿ.  ಹೀಗೆ ಉದ್ದಕ್ಕೂ.  ಅದನ್ನು ನೆನೆಸಿಕೊಂಡರೇ ಅದೊಂದು ದಿವ್ಯವಾದ ಅನುಭವ. 

ಶ್ರೀಮಠಗಳ ಆಸ್ಥಾನ ಪೂಜೆ ವ್ಯವಸ್ಥೆ ಅವನ್ನು ನೋಡಿದವರಿಗೆ ಗೊತ್ತು. ಮಠದ ಶ್ರೀಗಳು ಪೂಜಾದಿಗಳನ್ನು ಮಾಡುವಾಗ ಅವರ ಸಹಾಯಕರಾಗಿ ಶಿಷ್ಯರಿರುತ್ತಾರೆ. ಕಾಲಕಾಲಕ್ಕೆ ತಕ್ಕಂತೆ ಪೂಜಾಸಾಮಗ್ರಿಗಳನ್ನು ಒದಗಿಸಿ ಕೊಡುವುದು ಅವರ ಕೆಲಸ. ಹೂವುಗಳು, ಹಣ್ಣುಗಳು, ಧೂಪ, ದೀಪ ಇತ್ಯಾದಿಗಳು ಅವರು ಕೈ ನೀಡಿದಾಗ ಸಮಯಕ್ಕೆ ಅನುಗುಣವಾಗಿ ಸಿಗಬೇಕು. ಮಂಗಳಾರತಿಯೇ ಒಂದು ಹದಿನೈದು-ಇಪ್ಪತ್ತು ರೀತಿಯವು. ಸಣ್ಣ ತಟ್ಟೆಯಲ್ಲಿ, ದೊಡ್ಡ ತಟ್ಟೆಯಲ್ಲಿ, ಹಲಗಾರತಿ, ಕುಂಭಾರತಿ, ಏಕಾರತಿ, ಅನೇಕಾರತಿ, ಹೀಗೆ ವೈವಿಧ್ಯಪೂರ್ಣ ಮಾದರಿಗಳು. ಎಲ್ಲವೂ ಸರಿಯಾಗಿ ತಯಾರಿರಬೇಕು. ಪೂಜೆ ಎಲ್ಲೂ ಮಧ್ಯೆ ತಡವರಿಸದಂತೆ ಸಾಂಗವಾಗಿ ನಡೆಯಬೇಕು. ಇದು ಒಂದು ಕಟ್ಟುನಿಟ್ಟಾದ ಕ್ರಮ. 

ಚತುರ್ಮುಖ ಬಹ್ಮದೇವರಿಗೆ ಹೀಗೆ ಪೂಜಾಸಮಯದಲ್ಲಿ ಸಹಾಯಕನಾಗಿರುವುದು "ಶಂಖುಕರ್ಣ" ಎಂಬ ಒಬ್ಬ ಕರ್ಮಜದೇವತೆಯ ಕೆಲಸ. ಕಾಲಕಾಲಕ್ಕೆ ಹೂವು ತುಂಬಿದ ತಟ್ಟೆಗಳನ್ನು ಕೈಗೆ ಕೊಡುವುದು ಅದರಲ್ಲಿ ಒಂದು. ಒಂದು ಹರಿವಾಣ ಅರ್ಪಿಸಿ ಬರಿದಾದಂತೆ ಅದನ್ನು ಹಿಂತೆಗೆದುಕೊಂಡು ಹೂವು ತುಂಬಿದ ಮತ್ತೊಂದನ್ನು ತಕ್ಷಣ ಕೊಡಬೇಕು. ಗಮನವೆಲ್ಲ ಇದರ ಮೇಲೆಯೇ ಇರಬೇಕು. ಒಂದು ಕ್ಷಣವೂ ತಪ್ಪಬಾರದು. ಹೀಗೆಯೇ ನಡೆಯಬೇಕು. 

ಒಂದು ದಿನ ಹೀಗೆ ಪೂಜಾಸಮಯದಲ್ಲಿ ಮತ್ಸ್ಯ, ಕೂರ್ಮರ ನಂತರ ವರಾಹರೂಪಿ ಪರಮಾತ್ಮನ ಸ್ಮರಣೆ ಬಂತು. ಅಚ್ಚ ಬಿಳಿಯ ಬಣ್ಣದ "ಶ್ವೇತ ವರಾಹಮೂರ್ತಿ" ಮೈದೋರಿದ. ಆ ಮೂರ್ತಿಯ ದಿವ್ಯ ಸುಂದರ ರೂಪ ನೋಡುತ್ತಾ ಶಂಖುಕರ್ಣ ಮೈಮರೆತ. ಬ್ರಹ್ಮದೇವರು ಕೈ ನೀಡಿದಾಗ ಹೂವು ತುಂಬಿದ ತಟ್ಟೆಯ ಬದಲು ಪಕ್ಕದಲ್ಲಿದ್ದ ಖಾಲಿ ತಟ್ಟೆ ಸಿಕ್ಕಿತು. ಬ್ರಹ್ಮದೇವರು ನೋಡಿದರೆ ಕೈಯಲ್ಲಿ ಖಾಲಿ ತಟ್ಟೆ! ದೊಡ್ಡ ಅಪಚಾರ. ಥಟ್ಟೆ೦ದು ಶಂಖುಕರ್ಣನನ್ನು ನೋಡಿ "ನೀನು ಭೂಲೋಕದಲ್ಲಿ ಅನೇಕ ಜನ್ಮಗಳನ್ನು ತಾಳು" ಎಂದು ಶಪಿಸಿಬಿಟ್ಟರು. 
*****

ಶಪಿಸುವ ಕ್ರಿಯೆಯೆನೋ ನಡೆದುಹೋಯಿತು. ಪಕ್ಕದಲ್ಲಿ ಸಂಗೀತ, ನೃತ್ಯಸೇವೆಗಳಿಗೆ ತಯಾರಾಗಿ ನಿಂತಿದ್ದ ತಾಯಿ ಶಾರದೆ ಇದನ್ನು ಕಂಡಳು. 

"ಇದೇನು! ಹೀಗೆ ಶಪಿಸಿಬಿಟ್ಟಿರಿ?"
"ಅಪಚಾರ ಆಗಲಿಲ್ಲವೇ? ಪರಿಣಾಮ ಅನುಭವಿಸಲೇಬೇಕಲ್ಲ"
"ಪರಮಾತ್ಮನ ದಿವ್ಯ ಮಂಗಳ ಮೂರ್ತಿಯನ್ನು ಕಣ್ಣಾರೆ ಕಂಡು ಮೈ ಮರೆಯದವರು ಯಾರುಂಟು? ಅದಕ್ಕೆ ಹೀಗೆ ಶಾಪ ಕೊಡುವುದೇ?"
"ಕೊಟ್ಟವನು ನಾನಲ್ಲ. ಕೊಡಿಸಿದವನು ಅವನೇ. ಎಲ್ಲರಿಗೂ ಅಪ್ಪನಾದ ನಮ್ಮಪ್ಪ"
"ಶಂಕುಕರ್ಣನ ಮುಂದಿನ ಹಾದಿ?"
"ಅವನಿಗೆ ಈ ಶಾಪವೇ ವರವಾಗುತ್ತದೆ. ಮುಂದೆ ಹಾಗೆ ಜನ್ಮ ತಾಳಿದಾಗ ನರಸಿಂಹ-ರಾಮ-ಕೃಷ್ಣರ ಅಖಂಡ ದರ್ಶನ ಆಗುತ್ತದೆ. ಇನ್ನಿಲ್ಲದಷ್ಟು ಪುಣ್ಯ ಸಂಪಾದನೆಗೆ ಇದೊಂದು ದಾರಿಯಾಗುತ್ತದೆ"
"ಆಮೇಲೆ?"
"ಅಷ್ಟೇ ಅಲ್ಲ. ಅವನ ಅನುಯಾಯಿಗಳಿಗೂ ಬಹುಪರಿಯ ಅನುಗ್ರಹಗಳಾಗುತ್ತವೆ. ನಿನ್ನ ಅನುಗ್ರಹವಂತೂ ಈಗಲೇ ಆಗಿದೆಯಲ್ಲ!"

ಈ ಶಾಪದ ಪರಿಣಾಮವಾಗಿ ಮುಂದೆ ಶಂಖುಕರ್ಣನು ಹಿರಣ್ಯಕಶಿಪು-ಕಯಾದು ದಂಪತಿಗಳ ಮಗನಾದ ಪ್ರಹ್ಲಾದನಾಗಿ ಹುಟ್ಟುತ್ತಾನೆ. ನಂತರ ಕನ್ನಡ ರಾಜ್ಯರಮಾರಮಣ ಶ್ರೀ ಕೃಷ್ಣದೇವರಾಯನ ರಾಜುಗುರು "ವ್ಯಾಸತೀರ್ಥ", ನಂತರ ಗುರು "ರಾಘವೇಂದ್ರ ತೀರ್ಥ" ಆಗಿ ಬರುತ್ತಾರೆ. ಹೀಗೆ ಅವರನ್ನು ನಂಬಿದವರು ಆರಾಧಿಸುತ್ತಾರೆ. ಕ್ರಮವಾಗಿ ನರಸಿಂಹ-ಶ್ರೀಕೃಷ್ಣ-ಮೂಲರಾಮರ ಆರಾಧಕರಾಗಿ, ನಂಬಿದವರ ನೆರವಿಗೆ ನಿಲ್ಲುತ್ತಾರೆ. 
*****

ವೀಣಾ ವೆಂಕಟನಾಥ ಭಟ್ಟರು ಗುರುಗಳಾದ ಶ್ರೀ ಸುದೀಂಧ್ರ ತೀರ್ಥರಿಂದ ಸನ್ಯಾಸ ತೆಗೆದುಕೊಂಡು "ಶ್ರೀ ರಾಘವೇಂದ್ರ ತೀರ್ಥ" ಹೆಸರಿನಿಂದ ಪ್ರಖ್ಯಾತರಾದರು. ಒಂದು ಸಂದರ್ಭದಲ್ಲಿ ವಿದ್ಯೆಯ ಅವಕಾಶವೇ ಇಲ್ಲದ ವೆಂಕಣ್ಣನೆಂಬ ಯುವಕನೊಬ್ಬನಿಗೆ ಅವರ ಅನುಗ್ರಹವಾಗಿ, ಆದವಾನಿ ನವಾಬ ಸಿದ್ದಿ ಮಸೂದ್ ಖಾನ್ ಆಪ್ತನಾಗಿ ಸಂಸ್ಥಾನದ ದಿವಾನನಾದನು. ನವಾಬನು ಒಮ್ಮೆ ಗುರುಗಳನ್ನು ಪರೀಕ್ಷಿಸಲು ಹೋಗಿ ಪಶ್ಚಾತಾಪ ಪಟ್ಟನು. ಅವರಿಗೆ ಏನಾದರೂ ಕೊಡಬೇಕು, ಆ ಮೂಲಕ ತಪ್ಪು ಸರಿಮಾಡಿಕೊಳ್ಳಬೇಕೆಂದು ಆಸೆಪಟ್ಟನು. ರಾಯರು ತಮಗೆ ಏನೂ ಬೇಡವೆಂದರು. ಕಡೆಗೆ ನವಾಬನ ಅನೇಕ ಮನವಿಗಳ ನಂತರ "ಮಂಚಾಲೆ" ಎನ್ನುವ ಗ್ರಾಮವನ್ನು ಕೊಡಲು ಹೇಳಿದರು. ನವಾಬನು "ಅದೊಂದು ಕುಗ್ರಾಮ. ಅದರ ಬದಲು ಬೇರೆ ಕೇಳಿ" ಎಂದನು. ಗುರುಗಳು "ಕೊಡುವುದಿದ್ದರೆ ಅದು ಕೊಡಿ. ಇಲ್ಲದಿದ್ದರೆ ಬೇರೆ ಏನೂ ಬೇಡ" ಎಂದುಬಿಟ್ಟರು. 

ಕಡೆಗೆ ಮಂಚಾಲೆ ಗ್ರಾಮ ಸಿಕ್ಕಿತು. ರಾಯರು ವೆಂಕಣ್ಣನನ್ನು ಅಲ್ಲಿಗೆ ಕರೆದುಕೊಂಡು ಹೋಗಿ ತುಂಗಾನದಿ ತೀರದ ಸ್ಥಳವೊಂದನ್ನು ತೋರಿಸಿ ಅಲ್ಲಿ ಅಗೆಸಲು ಹೇಳಿದರು. ಹಾಗೆ ಅಗೆದಾಗ ಅಲ್ಲಿನ ಭೂಮಿಯಲ್ಲಿ ಬಹಳ ಹಿಂದಿನ ಹೋಮಕುಂಡಗಳ ಅವಶೇಷಗಳು ಸಿಕ್ಕಿದವು. "ಇವು ಹಿಂದೆ ಪ್ರಹ್ಲಾದರಾಜರು ಯಾಗಗಳನ್ನು ಮಾಡಿದ ಸ್ಥಳ. ನಾವು ಇಲ್ಲಿಯೇ ವೃಂದಾವನ ಪ್ರವೇಶ ಮಾಡುತ್ತೇವೆ" ಎಂದರು. 

ಒಲ್ಲದ ಮನಸ್ಸಿನಿಂದ ವೆಂಕಣ್ಣನು ಒಂದು ಸುಂದರವಾದ ವೃಂದಾವನವನ್ನು ಮಾಡಿಸಿ ಗುರುಗಳಿಗೆ ತೋರಿಸಿದನು. ರಾಯರು ನಕ್ಕು, ವೆಂಕಣ್ಣನನ್ನು ಮಾದಾವರ ಎಂಬ ಗ್ರಾಮಕ್ಕೆ ಕರೆದುಕೊಂಡು ಹೋದರು. (ಈಗಲೂ ಮಂತ್ರಾಲಯಂ ರೋಡ್ ರೈಲು ನಿಲ್ದಾಣದಿಂದ ಮಂತ್ರಾಲಯಕ್ಕೆ ಹೋಗುವ ದಾರಿಯಲ್ಲಿ ಈ ಗ್ರಾಮವಿದೆ). ಅಲ್ಲಿ ಕೆರೆಯ ದಂಡೆಯ ಶಿಲೆಯೊಂದನ್ನು ತೋರಿಸಿದರು. "ಶ್ರೀರಾಮಚಂದ್ರ ದೇವರು ಕಿಷ್ಕಿಂಧೆಯ ಕಡೆ ಬಂದಿದ್ದಾಗ ಇಲ್ಲಿ ಬಂದು ಈ ಶಿಲೆಯ ಮೇಲೆ ಸ್ವಲ್ಪ ಕಾಲ ಕುಳಿತಿದ್ದರು. ಈ ಶಿಲೆಯಲ್ಲಿ ಒಂದು ಮಾರುತಿಯ ವಿಗ್ರಹ ಮಾಡಿಸಿ. ಮಿಕ್ಕಿದ ಶಿಲೆಯಲ್ಲಿಯೇ ನಮ್ಮ ವೃಂದಾವನ ಆಗಬೇಕು" ಎಂದು ಆದೇಶಿಸಿದರು. (ಮಾರುತಿಯ ವಿಗ್ರಹವನ್ನು ಶ್ರೀ ರಾಯರ ಬೃಂದಾವನದ ಮುಂದೆ ಈಗಲೂ ಕಾಣಬಹುದು). 

ವೆಂಕಣ್ಣನಿಗೆ ಸಂಕೋಚವಾಯಿತು. ಈಗ ಮಾಡಿಸಿರುವ ವೃಂದಾವನ ಏನು ಮಾಡುವುದು ಎಂಬ ಯೋಚನೆ. "ಚಿಂತಿಸಬೇಡಿ. ಮುಂದೆ ನಮ್ಮ ಪೀಠದಲ್ಲಿ ಬರುವವರೊಬ್ಬರು ಅದನ್ನು ಉಪಯೋಗಿಸುತ್ತಾರೆ" ಎಂದರು. (ಶ್ರೀ ರಾಘವೇಂದ್ರ ಸ್ವಾಮಿಗಳ ವೃಂದಾವನದ ಪಕ್ಕದಲ್ಲೇ, ಅದೇ ರೀತಿ ಇರುವ ಭವ್ಯ ಶ್ರೀ ವಾದೀಂದ್ರ ತೀರ್ಥರ ವೃನ್ದಾವನವೇ ಅದು). ತಮ್ಮ ತೀರ್ಮಾನದಂತೆ ಶ್ರಾವಣ ಬಹುಳ ಬಿದಿಗೆಯಂದು ಶ್ರೀ ರಾಯರು ಸಶರೀರವಾಗಿ ವೃಂದಾವನ ಪ್ರವೇಶ ಮಾಡಿದರು. ಅದಾಗಿದ್ದು ಇಂದಿಗೆ 354 ವರುಷಗಳ ಹಿಂದೆ. ಬದುಕಿರುವಾಗಲೇ ವೃಂದಾವನ ಪ್ರವೇಶ ಮಾಡಿದ ಕೆಲವೇ ಮಹನೀಯರಲ್ಲಿ ಶ್ರೀ ರಾಘವೇಂದ್ರ ತೀರ್ಥರೂ ಒಬ್ಬರು. 

ಅವರ ಬೃಂದಾವನದಲ್ಲಿ 732 ಸಾಲಿಗ್ರಾಮಗಳೂ, ಅನೇಕ ದೇವತಾ ಮೂರ್ತಿಗಳೂ ಇವೆ. ಆ ಬೃಂದಾವನಕ್ಕೆ ಒಂದು ಪ್ರದಕ್ಷಿಣೆ ಬಂದರೆ ಒಂದು ಸಾವಿರ ಪ್ರದಕ್ಷಿಣೆಯ ಫಲ ಉಂಟು ಎನ್ನುವುದು ಸುಮ್ಮನೆ  ಹೇಳುವ ಮಾತಲ್ಲ. 

*****

ಸನ್ಯಾಸ ಪಡೆಯುವುದಕ್ಕೆ ಮೊದಲು, ಗೃಹಸ್ಥರಾಗಿದ್ದಾಗ ವೆಂಕಟನಾಥರು ಅತ್ಯಂತ ಬಡತನದಿಂದ ಬಳಲಿದರು. ವಾರಕ್ಕೆ ಮೂರು-ನಾಲ್ಕು ಏಕಾದಶಿ ಮಾಡುತ್ತಿದ್ದಾರೆಂದು ಹೇಳುತ್ತಾರೆ. ಆದರೂ ಒಬ್ಬರಲ್ಲಿ ಒಂದು ಹಿಡಿ ಧಾನ್ಯವನ್ನೂ ಬೇಡಲಿಲ್ಲ. ತಾವಾಗಿ ಕೊಡಲು ಬಂದ ದಾನಿಗಳನ್ನೂ, ದತ್ತಿಗಳನ್ನೂ ನಿರಾಕರಿಸಿದರು. ಅವರು ಅದ್ವಿತೀಯ ವೀಣಾವಾದಕರಾಗಿದ್ದರು. ವಿಜಯನಗರ ಸಾಮ್ರಾಜ್ಯದ ಆಸ್ಥಾನ ವಿದ್ವಾಂಸರಾಗಿದ್ದ ಕನಕಾಚಲ ಭಟ್ಟರ ಮೊಮ್ಮಗ. ಸಾಮ್ರಾಟರಿಗೆ ವೀಣಾ ಗುರುಗಳಾಗಿದ್ದ ತಿಮ್ಮಣ್ಣ ಭಟ್ಟರ ಮಗ. ಅದೊಂದು ವಿದ್ಯೆಯಿಂದಲೇ ಸಿರಿವಂತರಾಗಿ ಮೆರೆಯಬಹುದಿತ್ತು. ವೈರಾಗ್ಯ ಮೂರ್ತಿಗಳಾಗಿ ಸಾಧನೆ, ವಿದ್ಯೆ, ಪಾಠ-ಪ್ರವಚನಗಳಿಗೆ ಜೀವನ ಮೀಸಲಿಟ್ಟರು. ಅನೇಕ ಅಮೂಲ್ಯ ಗ್ರಂಥಗಳನ್ನು ರಚಿಸಿದರು. 

ಈಗ ಪ್ರತಿದಿನ ಅವರ ವೃಂದಾವನಗಳಿರುವ ಸ್ಥಳಗಳಲ್ಲಿ ಲಕ್ಷ ಲಕ್ಷ ಮಂದಿ ಪ್ರಸಾದ ಪಡೆಯುತ್ತಾರೆ. ಅವರ ಆರಾಧನೆಯ ದಿನಗಳಲ್ಲಿ ಲಕ್ಷೋಪಲಕ್ಷ ಮಂದಿ ಮೃಷ್ಟಾನ್ನ ಸೇವಿಸುತ್ತಾರೆ. ವಿದೇಶಗಳಲ್ಲೂ ಆರಾಧನೆ ಉತ್ಸವಗಳು ವೈಭವದಿಂದ ನಡೆಯುತ್ತವೆ. ಸಾಲುಗಳಲ್ಲಿ ನಿಂತು ಜನರು ಸೇವೆಗೆ ಹಣನೀಡಲು ಹಾತೊರೆಯುತ್ತಾರೆ. ಅಮೆರಿಕಾದಂತಹ ದೇಶಗಳಲ್ಲಿ ಆರಾಧನೆಯ ದಿನದ ಊಟದ ಸರತಿಯ ಸಾಲು ನೋಡಿದರೆ ಇದು ಮನದಟ್ಟಾಗುತ್ತದೆ. 

ಅವರಿಗೆ ಆದ ತಾಯಿ ಶಾರದೆಯ ಅನುಗ್ರಹದ ವಿಚಾರವನ್ನು ಮತ್ತೊಂದು ದಿನ ನೋಡೋಣ. 

Saturday, August 9, 2025

ಸೋರಿಹೋಗುವ ನೀರಿನಂತೆ


"ವಿದುರ, ಯುಧಿಷ್ಠಿರ ಮತ್ತು ವೀರಬಾಹು" ಎನ್ನುವ ಶೀರ್ಷಿಕೆಯ ಹಿಂದಿನ ಒಂದು ಸಂಚಿಕೆಯಲ್ಲಿ ದೂರ್ವಾಸ ಮಹರ್ಷಿಗಳು ಧರ್ಮ ದೇವತೆಯನ್ನು ಕುರಿತು ತಪಸ್ಸು ಮಾಡಿದ್ದು, ಧರ್ಮ ದೇವತೆ ಪ್ರತ್ಯಕ್ಷವಾಗಲು ತಡಮಾಡಿದ್ದು, ಮತ್ತು ಅದರಿಂದ ಕುಪಿತರಾದ ದೂರ್ವಾಸ ಮಹರ್ಷಿಗಳು ಧರ್ಮ ದೇವತೆಗೆ ಮೂರು ಶಾಪಗಳನ್ನು ಕೊಟ್ಟಿದ್ದು, ಇವುಗಳ ಬಗ್ಗೆ ಸ್ವಲ್ಪಮಟ್ಟಿಗೆ ನೋಡಿದ್ದೆವು. ಈ ಸಂಚಿಕೆಯ ವಿವರಗಳನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು. 

ಸಂಚಿಕೆಯ ಕೊನೆಯಲ್ಲಿ ಕೆಲವು ಪ್ರಶ್ನೆಗಳನ್ನು ಹಾಕಿಕೊಂಡಿದ್ದೆವು. "ದೂರ್ವಾಸರು ಧರ್ಮ ದೇವತೆಗೆ ಶಾಪ ಕೊಟ್ಟಿದ್ದು ಸರಿಯೇ? ಧರ್ಮ ದೇವತೆ ಅದನ್ನು ಯಾಕೆ ಒಪ್ಪಿಕೊಂಡನು? ಧರ್ಮ ದೇವತೆಗೆ ಅದನ್ನು ತಪ್ಪಿಸಲು ಆಗಲಿಲ್ಲವೇ?" ಎಂಬುವು ಆ ಪ್ರಶ್ನೆಗಳು. ನಮ್ಮ ಪುರಾಣ-ಪುಣ್ಯ ಕಥೆಗಳಲ್ಲಿ ಈ ರೀತಿ ಅನೇಕ ಶಾಪ ಕೊಡುವ ಪ್ರಸಂಗಗಳನ್ನು ಕಾಣಬಹುದು. ಅನೇಕ ಬಾರಿ ಶಾಪ ಕೊಡುವವರು ಅದಕ್ಕೆ ಗುರಿಯಾಗುವವರಿಗಿಂತ ಯೋಗ್ಯತೆಯಲ್ಲಿ ಚಿಕ್ಕವರು. ಮನಸ್ಸು ಮಾಡಿದರೆ ಶಾಪಗ್ರಸ್ತ ದೊಡ್ಡವರು ಆ ಶಾಪಗಳನ್ನು ಧಿಕ್ಕರಿಸಿ ಅವುಗಳಿಂದ ಆಗುವ ಕೆಟ್ಟ ಪರಿಣಾಮಗಳನ್ನು ಮೆಟ್ಟಿ ನಿಲ್ಲಬಹುದು. ಹೀಗಿದ್ದರೂ ಯೋಗ್ಯತೆಯಲ್ಲಿ ದೊಡ್ಡವರಾದ ದೇವತೆಗಳು, ದೇವರ್ಷಿಗಳು ಮುಂತಾದವರು ಈ ಶಾಪಗಳನ್ನು ಮನ್ನಿಸಿ ಅವುಗಳ ಪರಿತಾಪಗಳನ್ನು ಅನುಭವಿಸುವುದನ್ನು ನೋಡಬಹುದು. 

ಉದಾಹರಣೆಗೆ, "ನೀನು ಭೂಮಿಯಲ್ಲಿ ಮನುಷ್ಯನಾಗಿ ಜನಿಸು. ನಿನಗೆ ಆಗ ಪತ್ನಿವಿಯೋಗ ಬಂದೊದಗಲಿ. ನೀನು ನಿನ್ನ ಹೆಂಡತಿಯನ್ನು ಕಳೆದುಕೊಂಡು ಕಾಡು-ಮೇಡುಗಳಲ್ಲಿ ಅಲೆಯುವಂತೆ ಆಗಲಿ!" ಎಂದು ಶ್ರೀ ಮಹಾವಿಷ್ಣುವಿಗೆ ಬಂದ ಶಾಪಗಳು. ಅದರ ಪರಿಣಾಮವಾಗಿ ಶ್ರೀಮನ್ನಾರಾಯಣನು ಶ್ರೀರಾಮನಾಗಿ ತ್ರೇತಾಯುಗದಲ್ಲಿ ಹುಟ್ಟಿ ಸೀತಾವಿಯೋಗದಿಂದ ಪರಿತಪಿಸಿದ್ದು. ಇದು ಎಲ್ಲರಿಗೂ ಗೊತ್ತಿರುವ ವಿಷಯ. ಈ ಶಾಪಗಳನ್ನು ಕೊಟ್ಟವರೆಲ್ಲರೂ ಮಹಾವಿಷ್ಣುವಿಗಿಂತ ಯೋಗ್ಯತೆಯಲ್ಲಿ ಕಡಿಮೆಯವರೇ. ಹೀಗಿರುವಾಗ ಮಹಾವಿಷ್ಣುವು ಇವುಗಳನ್ನು ಏಕೆ ಮಾನ್ಯ ಮಾಡಿದನು? ಅವುಗಳನ್ನು ಲೆಕ್ಕಿಸದಿದ್ದರೆ ಏನಾಗುತ್ತಿತ್ತು? ಏಕೆ ಅವುಗಳಿಗೆ ತಲೆ ಬಾಗಬೇಕಾಯಿತು? ಈ ರೀತಿ ಶಾಪ ಕೊಡುವವರು ಕೆಲವು ವೇಳೆ ತಮ್ಮ ಯೋಗ್ಯತೆಯ ಮಿತಿಗಳನ್ನು ತಿಳಿದಿದ್ದರೂ ಏಕೆ ಶಾಪ ಕೊಡುತ್ತಾರೆ? ಇವೆಲ್ಲವೂ ಸಾಧುವಾದ ಪ್ರಶ್ನೆಗಳೇ. 

ಇವಕ್ಕೆ  ಸಾಧ್ಯವಾದ ಮಟ್ಟಿಗೆ ಉತ್ತರಗಳನ್ನು ಈಗ ಹುಡುಕೋಣ.

*****

ಬೆಂಗಳೂರಿನ ಬಸವನಗುಡಿ ಬಡಾವಣೆಯ ಪರಿಚಯ ಇರುವವರಿಗೆಲ್ಲಾ ಎಂ. ಏನ್. ಕೃಷ್ಣರಾವ್ ಪಾರ್ಕ್ ಬಗ್ಗೆ ಗೊತ್ತು. ರಾಜಕಾರ್ಯಪ್ರಸಕ್ತ ದಿವಾನ್ ಬಹದ್ದೂರ್ ಸರ್ ಎಂ. ಏನ್. ಕೃಷ್ಣ ರಾವ್ ಅವರು ಮೈಸೂರು ಸಂಸ್ಥಾನದ ದಿವಾನರಾಗಿದ್ದವರು. ಅವರೇ "ಕೃಷ್ಣರಾವ್ ಪಾರ್ಕ್" ಕಾರಣಕರ್ತರು. ಉದ್ಯಾನ ವನದ ರಕ್ಷಣೆ ಮತ್ತು ಸುಪರ್ದಿಗಾಗಿ ಒಬ್ಬ ಕಾವಲುಗಾರನಿದ್ದನು. ಪಾರ್ಕಿನ ಉತ್ತರದ ಕಡೆ ರಾಯರ ಮನೆ. (ಸುಮಾರು ನೂರಾ ಇಪ್ಪತ್ತು ವರ್ಷಗಳ ಕಾಲದ ಹಿಂದಿನ ಮನೆ ಈಗಲೂ ಅಲ್ಲಿದೆ. ಅವರ ವಂಶೀಕರು ವಾಸಿಸುತ್ತಿದ್ದಾರೆ. ಆಸಕ್ತರು ಗಮನಿಸಬಹುದು). ಉದ್ಯಾನವನದ ದಕ್ಷಿಣದ ಕಡೆ ಅವರ ಇಬ್ಬರು ಹೆಣ್ಣು ಮಕ್ಕಳ ಮನೆಗಳು. ಆಗಾಗ ರಾಯರು ಎಲ್ಲರಂತೆ ಮಕ್ಕಳ ಮನೆಗೆ ಹೋಗುತ್ತಿದ್ದರು. ಪಾರ್ಕಿನ ಒಳಗಡೆಯಿಂದ ಹೋದರೆ ಅವರ ಮನೆಗಳಿಗೆ ಹತ್ತಿರದ ದಾರಿ. ಇಲ್ಲದಿದ್ದರೆ ಪಾರ್ಕಿನ ಸುತ್ತ ನಡೆದು ಹೋಗಬೇಕು. ಅದು ಸ್ವಲ್ಪ ದೂರದ ಹಾದಿ. 

ಒಂದು ದಿನ ಸ್ವಲ್ಪ ತಡವಾದ ವೇಳೆಯಲ್ಲಿ  ಅವರು ದಕ್ಷಿಣದ ಕಡೆಯಿಂದ ಬಂದು ಪಾರ್ಕಿನ ಒಳಗಡೆಯಿಂದ ಹಾದು ಉತ್ತರದಲ್ಲಿದ್ದ ಅವರ ಮನೆಯ ಕಡೆ ಹೊರಟಿದ್ದರು. ಅದನ್ನು ಕಂಡ ಕಾವಲುಗಾರ ಅಡ್ಡಗಟ್ಟಿದ. "ಇದು ಸಾರ್ವಜನಿಕರು ಓಡಾಡುವ ರಸ್ತೆ ಅಲ್ಲ, ಸ್ವಾಮಿ. ನೀವು ಆ ಕಡೆ ಹೋಗಬೇಕಾದರೆ ಪಕ್ಕದ ರಸ್ತೆಯಲ್ಲಿ ಹೋಗಬೇಕು. ಪಾರ್ಕ್ ಒಳಗಡೆಯಿಂದ ಅಲ್ಲ", ಎಂದ. ರಾಯರು "ಸರಿ" ಎಂದು ಹೊರಗಡೆ ಬಂದು ಪಕ್ಕದ ರಸ್ತೆಯಲ್ಲಿ ಮನೆಗೆ ಹೋದರು. ಮಾರನೆಯ ದಿನ ಕಾವಲುಗಾರನನ್ನು ಕರೆಸಿದರು. ತನ್ನ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದುದಕ್ಕೆ ಅವನನ್ನು ಅಭಿನಂದಿಸಿ ಭಕ್ಷೀಸು ಕೊಟ್ಟು ಕಳಿಸಿದರು. 

ಕಾವಲುಗಾರ ಅಡ್ಡಗಟ್ಟಿದಾಗ ರಾಯರು ತನ್ನ ಪರಿಚಯ ಹೇಳಿದ್ದರೆ ಕಾವಲುಗಾರ ಅವರಿಗೆ ಪ್ರಾಯಶ: ಸಲ್ಯೂಟ್ ಹೊಡೆದು ಮನೆಯವರೆಗೆ ಜೊತೆಯಲ್ಲಿ ಹೋಗಿ ಬಿಟ್ಟು ಬರುತ್ತಿದ್ದ. ಬೇಕಿದ್ದರೆ ಅವರು ಕಾವಲುಗಾರನನ್ನೇ ಬದಲಿಸಬಹುದಿತ್ತು. ಆದರೆ ಅವರಿಗೆ "ನಿಯಮ ಎಲ್ಲರಿಗೂ ಒಂದೇ. ಅದನ್ನು ಪಾಲಿಸಬೇಕಾದದ್ದು ಎಲ್ಲರ ಕರ್ತವ್ಯ" ಎನ್ನುವುದನ್ನು ಮಾದರಿಯಾಗಿ ತೋರಿಸಬೇಕಿತ್ತು . "ಸಂವಿಧಾನ" ಎಂದು ಒಂದು ಕಟ್ಟಳೆಗೆ ಒಪ್ಪಿಕೊಂಡರೆ ಅದರ ಕರ್ತೃಗಳೂ ಸಹ ಅದಕ್ಕೆ ಬದ್ಧರು. "ತನ್ನ ಕೃತಿಗೆ ಮಹಾಕವಿ ತಾ ಮಣಿಯುವಂತೆ" ಎಂದು ಹೇಳುತ್ತಾರೆ. ಕೃತಿರಚನೆ ಆದಮೇಲೆ ತಾನೇ ರಚಿಸಿದ ಕೃತಿ "ಮಹಾಕಾವ್ಯ" ಎಂದು ಎಲ್ಲರೂ ಗುರುತಿಸಿದಾಗ ಅದನ್ನು ರಚಿಸಿದ ಕವಿಯೂ ಅದನ್ನು ಗೌರವಿಸುತ್ತಾನೆ. ಶಿಲ್ಪಿ ಕಲ್ಲಿನಲ್ಲಿ ದೇವರ ಮೂರ್ತಿ ಕಡೆದಿದ್ದಾನೆ. ನಿಜ. ಆದರೆ ಈಗ ಅದು ದೇವಾಲಯದ ಮೂರ್ತಿ. ಅದಕ್ಕೆ ಅದನ್ನು ಕಡೆದ ಶಿಲ್ಪಿಯೂ ತಲೆ ಬಾಗುತ್ತಾನೆ. 

ಪರಮಾತ್ಮನ ಸೃಷ್ಟಿಯಲ್ಲಿ "ಅಷ್ಟ ಕರ್ತೃತ್ವ" ಎನ್ನುವ ಎಂಟು ಕ್ರಿಯೆಗಳಲ್ಲಿ "ನಿಯಮನ" ಎನ್ನುವ ನಾಲ್ಕನೆಯದೂ ಒಂದು. ಎಲ್ಲರೂ ಅದಕ್ಕೆ ತಕ್ಕಂತೆ ನಡೆಯಬೇಕು. ಅದನ್ನು ಪಕ್ಕಕ್ಕಿಡುವುದು ಕೂಡದು. ಹಾಗೆ ಮಾಡಿದರೆ ಇಡೀ ವ್ಯವಸ್ಥೆಯೇ ಕುಸಿದು ಬೀಳುತ್ತದೆ. 

ಇಡೀ ಸೃಷ್ಟಿಯ ಕರ್ತೃವಾದರೂ ಶ್ರೀಮಹಾವಿಷ್ಣುವೂ ನಿಯಮಗಳನ್ನು ಪಾಲಿಸುತ್ತಾನೆ. ಶಾಪ ಕೊಡುವವರು ಪಡೆದುಕೊಳ್ಳುವವರಿಗಿಂತ ಚಿಕ್ಕವರೇ ಇರಬಹುದು. ಆದರೆ ಶಾಪ ಕೊಡುವವರಿಗೆ ಅದನ್ನು ನೀಡುವ ಅಧಿಕಾರವಿದ್ದರೆ ಎಲ್ಲರೂ ಅದನ್ನು ಸ್ವೀಕರಿಸಲೇಬೇಕು. ಒಬ್ಬರು ಅದನ್ನು ಧಿಕ್ಕರಿಸಿದರೆ ಎಲ್ಲರೂ ಅದನ್ನು ಮುಂದುವರೆಸಿ ಇಡೀ ಸೃಷ್ಟಿಯ ನಿಯಮಗಳೇ ಪ್ರಯೋಜನವಿಲ್ಲವಾಗುತ್ತವೆ. ಸರ್ವಕರ್ತನೇ ಅವನ್ನು ಪಾಲಿಸಿದಾಗ ಇನ್ನೆಲ್ಲರೂ ಅದನ್ನು ಅನುಸರಿಸಲೇಬೇಕಷ್ಟೆ! 

ಉತ್ತಮರಾದ ದೇವತೆಗಳೂ ಅವರಿಗಿಂತ ಯೋಗ್ಯತೆಯಲ್ಲಿ ಕೆಳಗಿನವರು ಶಾಪಗಳನ್ನು ಕೊಟ್ಟರೂ ಇದೇ ಕಾರಣಕ್ಕೆ ಸ್ವೀಕರಿಸುತ್ತಾರೆ. ಪರಮಾತ್ಮನು ಮತ್ತು ದೇವತೆಗಳಿಗೆ ಅನೇಕ ರೂಪಗಳ ಧಾರಣ ಶಕ್ತಿ ಉಂಟು. ಒಂದು ರೂಪದಿಂದ ಆ ಶಾಪಗಳನ್ನು ಅನುಭವಿಸುತ್ತಾರೆ. ಈ ರೀತಿಯ ಶಾಪಗಳನ್ನು ತಮ್ಮದೇ ಆದ ರೀತಿಯಿಂದ ಲೋಕಕಲ್ಯಾಣ ಕಾರ್ಯಗಳಿಗೆ ಉಪಯೋಗಿಸಿಕೊಳ್ಳುತ್ತಾರೆ!

ಮಹಾವಿಷ್ಣುವೂ ಶ್ರೀರಾಮನಾದ. ಶಾಪಗಳಿಗೆ ಸಿಕ್ಕಿಬಿದ್ದ ಮನುಷ್ಯರಂತೆ ವ್ಯವಹರಿಸಿದ. ಅನೇಕ ಸಾಧನೆಗಳನ್ನು ಮಾಡಿದ್ದ ಭಕ್ತರಿಗೆ ತನ್ನನ್ನು ನೋಡುವ ಅವಕಾಶ ಕೊಟ್ಟ. ಅಹಲ್ಯೆ, ಗುಹ, ಜಟಾಯು, ಶಬರಿ, ಮುಂತಾದ ಅನೇಕ ಶತ ಶತಮಾನಗಳು ಕಾದಿದ್ದವರಿಗೆ ಈ ನೆಪದಿಂದ ದರ್ಶನವಾಯಿತು. ರಾವಣಾದಿ ಲೋಕಕಂಟಕರ ಸಂಹಾರವಾಯಿತು. ಶಾಪಗ್ರಸ್ತನಾದಂತೆ, ಅವುಗಳಿಂದ ನರಳಿದವನಂತೆ ತೋರಿಸಿ ಅನೇಕ ಲೋಕಕಲ್ಯಾಣ ಕೆಲಸಗಳನ್ನು ಮಾಡಿದ.

*****

"ಕನ್ನಂಬಾಡಿ ಕಟ್ಟೆ" ಎಂದು ಜನಪ್ರಿಯವಾಗಿರುವ "ಕೃಷ್ಣ ರಾಜ ಸಾಗರ ಜಲಾಶಯ" ಅಥವಾ ಕೆ. ಆರ್. ಎಸ. ಡ್ಯಾಮ್ ಕಟ್ಟಿಸಿದವರು ಯಾರು ಎನ್ನುವ ಅನವಶ್ಯಕ ಚರ್ಚೆಯೊಂದು ಕೆಲವು ದಿನಗಳಿಂದ ನಡೆದು ಬಂದಿದೆ. ಈ ಜಲಾಶಯದ ಅಣೆಕಟ್ಟಿನ ಎತ್ತರ 131 ಅಡಿಗಳು. ಭರ್ತಿಯಾದಾಗ 124.8 ಅಡಿಗಳಷ್ಟು ಎತ್ತರ, 49.45  ಟಿ. ಎಂ. ಸಿ. ಗಾತ್ರದಷ್ಟು ನೀರು ನಿಲ್ಲುತ್ತದೆ. ಲಕ್ಷಾ೦ತರ ಎಕರೆ ಭೂಮಿಯನ್ನು ಸಮೃದ್ಧ ಮಾಡಿ ಭತ್ತ, ಕಬ್ಬು ಮುಂತಾದ ಅನೇಕ ಬೆಳೆ ಕೃಷಿಗೆ ಇಂಬು ಕೊಡುತ್ತದೆ. 

ಜಲಾಶಯ ಎಷ್ಟೇ ದೊಡ್ಡದಿದ್ದರೂ ಅದರ ನೀರು ಹಿಡಿದಿಡುವ ಶಕ್ತಿಗೆ ಒಂದು ಮಿತಿ ಇದ್ದೇ ಇದೆ. ಆ ಮಿತಿಗಿಂತ ಹೆಚ್ಚಿನ ನೀರನ್ನು ಅದು ಸಂಗ್ರಹಿಸಿ ಇಟ್ಟುಕೊಳ್ಳಲಾರದು. ಹೆಚ್ಚಿನ ನೀರು ಸೋರಿ ಹೊರಗೆ ಹೋಗಲೇಬೇಕು. ಹಾಗೆ ಸೋರಿ ಹೋಗದಿದ್ದರೆ ಜಲಾಶಯಕ್ಕೇ ಅಪಾಯ. ಅಷ್ಟೇ ಅಲ್ಲ; ಜಲಾಶಯದ ಕೆಳಗಿನ ಭಾಗಗಳಿಗೆ ನೀರೇ ಸಿಗುವುದಿಲ್ಲ. ಹೆಚ್ಚಿನ ನೀರು ಕಡೆಗೆ ಸಮುದ್ರಕ್ಕೆ ಹರಿದು ಆವಿಯಾಗಬೇಕು. ಅವುಗಳಿಂದ ಮೋಡವಾಗಿ ಮಳೆ ಬರಬೇಕು. ಇದೇ ಸೃಷ್ಟಿ ಚಕ್ರ. ಇದಕ್ಕೆ ಅಡ್ಡ ಬಂದರೆ ಮೇಲೆ ಹೇಳಿದ "ನಿಯಮನ" ಮೀರಿದಂತೆ. ಅದು ಕೂಡದು. ಜಲಾಶಯಗಳಿಗೆ ಕ್ರೆಸ್ಟ್ ಗೇಟುಗಳು ಎಂದು ಬಾಗಿಲುಗಳು ಉಂಟು. ಹೆಚ್ಚಿನ ನೀರನ್ನು ಇವುಗಳ ಮೂಲಕ ಹೊರಬಿಡುವ ವ್ಯವಸ್ಥೆ ಇದೆ. ಇದು ಜಲಾಶಯಗಳಿಗೂ, ಇತರರಿಗೂ ಅತ್ಯಂತ ಅವಶ್ಯಕ. 

ಇದೆ ರೀತಿ ಎಲ್ಲ ಜೀವಿಗಳಿಗೂ, ತಪಸ್ವಿಗಳಿಗೂ ಅವರು ಮಾಡುವ ಸಾಧನೆಗಳಿಗೆ, ಅವುಗಳಿಂದ ಸಂಪಾದಿಸುವ ಪುಣ್ಯಗಳಿಗೆ ಅವರವ ಯೋಗ್ಯತೆಗೆ ತಕ್ಕಂತೆ ಒಂದು ಮಿತಿ ಇದೆ. ಅದಕ್ಕಿಂತ ಹೆಚ್ಚಿದ್ದರೆ ಅದು ಸರಿಯಲ್ಲ. ಆಣೆಕಟ್ಟೆಯಲ್ಲಿ ಅದರ ಯೋಗ್ಯತೆಗಿಂತ ಹೆಚ್ಚಿನ ನೀರು ನಿಲ್ಲದಂತೆ ತಪಸ್ವಿಗಳಿಗೂ ಅವರ ಯೋಗ್ಯತೆಗಿಂತ ಹೆಚ್ಚಿನ ತಪಃಶಕ್ತಿ ಇಟ್ಟುಕೊಳ್ಳುವಂತಿಲ್ಲ. ಅದು ಹ್ರಾಸವಾಗಬೇಕಾದರೆ ಒಂದು ನಿಮಿತ್ತ ಬೇಕು. ತಮಗಿಂತ ಉತ್ತಮರಿಗೆ ಶಾಪ ಕೊಟ್ಟಾಗ ಹೀಗೆ ಅವರ ತಪ:ಶಕ್ತಿ ಹ್ರಾಸವಾಗುತ್ತದೆ. ಈ ಕಾರಣಕ್ಕೆ ಅವರಿಗೆ ಶಾಪ ಕೊಡುವ ಮನಸ್ಸಾಗುತ್ತದೆ. ನಿಯಮನದ ಪಾಲನೆ ಆಗುತ್ತದೆ. ಹಣ ಹೆಚ್ಚಿದ್ದವರಿಗೆ ತೆರಿಗೆ ಮೂಲಕ ಸರ್ಕಾರ ವಸೂಲಿ ಮಾಡುವಂತೆ, ತಪಸ್ವಿಗಳಿಗೆ ಹೀಗೆ ಯೋಗ್ಯತೆಗೆ ಮೀರಿದ ತಪಸ್ಸು ಸೋರಿಹೋಗುತ್ತದೆ!

ಇದು ತಪಸ್ವಿಗಳಿಗೆ ಅನ್ಯಾಯವಲ್ಲವೇ?  ಇದೂ ಒಂದು ಒಳ್ಳೆಯ ಪ್ರಶ್ನೆಯೇ. ತೆರಿಗೆ ಹಾಕದಿದ್ದರೆ ವ್ಯವಸ್ಥೆ ನಡೆಯುವುದು ಹೇಗೆ? ದುಡ್ಡಿದ್ದವಿರಿಗೆ ತೆರಿಗೆ ಹಾಕದೇ ಇಲ್ಲದವರಿಗೆ ಹಾಕುವುದು ಸಾಧ್ಯವೇ? ಅನೇಕ ನಿಯಮಗಳು ಮೊದಲ ನೋಟಕ್ಕೆ ಸರಿಯಿಲ್ಲ ಎಣಿಸಬಹುದು. ಆದರೆ, ಒಟ್ಟಾರೆ ವ್ಯವಸ್ಥೆಯಲ್ಲಿ ಇವುಗಳಿಗೆ ಅವುಗಳದೇ ಆದ ಅವಶ್ಯಕತೆ ಮತ್ತು ಮಹತ್ವ ಇವೆ. ಅನೇಕ ಶಾಪಗಳಿಂದ ಮುಂದೆ ಲೋಕಕಲ್ಯಾಣದ ಹಾದಿ ತೆರೆಯುವುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. 

*****

ದೂರ್ವಾಸರು ಧರ್ಮದೇವತೆಗೆ ಶಾಪ ಕೊಟ್ಟಿದ್ದು ಈ ರೀತಿ ತಪಸ್ಸು ಹ್ರಾಸವಾಗಲು ಒಂದು ಕಾರಣವಾಗಿ. ಹಾಗೆ ಶಪಿಸಲು ಅವರಿಗೆ ಪ್ರೇರಣೆ ಆಯಿತು. ಧರ್ಮದೇವತೆ ಇದೇ ಕಾರಣಕ್ಕೆ ಆ ಶಾಪ ಪ್ರಭಾವವನ್ನು ಒಪ್ಪಿಕೊಂಡದ್ದು. ಅದನ್ನು ಮುಂದೆ ನಡೆಯಬೇಕಾದ ಪ್ರಸಂಗಗಳಿಗೆ ಭೂಮಿಕೆಯಾಗಿ ಉಪಯೋಗವಾಯಿತು. ಹಿಂದಿನ ಸಂಚಿಕೆಯನ್ನು ಗಮನಿಸಿದರೆ ಈ ಶಾಪಗಳನ್ನು ಕೊಡು ಎಂದು ಪರೋಕ್ಷವಾಗಿ ಧರ್ಮದೇವತೆಯೇ ಕೇಳಿದ್ದು. ಧರ್ಮದೇವತೆ ಅದೇ ಕಾರಣಕ್ಕೆ ಅದನ್ನು ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಲಿಲ್ಲ. 

ನಾವು ಹಾಕಿಕೊಂಡಿದ್ದ ಪ್ರಶ್ನೆಗಳಿಗೆ ಸುಮಾರಾಗಿ ಉತ್ತರ ಹುಡುಕಿಕೊಂಡಂತೆ ಆಯಿತು. 

ಮೇಲಿನ ಚರ್ಚೆಯಲ್ಲಿ "ಅಷ್ಟ ಕರ್ತೃತ್ವ" ಎನ್ನುವ ವಿಷಯ ಬಂದಿದೆ. ಅದರ ಬಗ್ಗೆ ಮತ್ತೊಂದು ದಿನ ನೋಡೋಣ. 

Sunday, August 3, 2025

ವಿದುರ, ಯುಧಿಷ್ಠಿರ ಮತ್ತು ವೀರಬಾಹು


ಸೂರ್ಯ ವಂಶದ ಮಹಾರಾಜ ಸತ್ಯವ್ರತ ಸಶರೀರವಾಗಿ ಸ್ವರ್ಗಕ್ಕೆ ಹೋಗಲು ಆಸೆಪಟ್ಟ. ಸ್ವರ್ಗಕ್ಕೆ ಹೋಗುವ ಯೋಗ್ಯತೆ ಪಡೆದ ಜೀವಿಗಳಿಗೆ ದೇವತೆಗಳು ಒಂದು ದಿವ್ಯ ಶರೀರವನ್ನು ಕೊಟ್ಟು ಅಲ್ಲಿಗೆ ಬರಮಾಡಿಕೊಳ್ಳುತ್ತಾರೆ. ಭೂಲೋಕದಲ್ಲಿ "ಪಾರ್ಥಿವ ಶರೀರ" ಹೊಂದಿರುವ ಮನುಷ್ಯರು ಅದೇ ಶರೀರದಲ್ಲಿ ಸ್ವರ್ಗಕ್ಕೆ ಹೋಗಲಾರರು. ಇದು ಒಂದು ನಿಯಮ. ಸತ್ಯವ್ರತನಿಗೆ ಅದೇನೋ ಪಾರ್ಥಿವ ಶರೀರದ ಮೇಲೆ ಮೋಹ. (ಪಾರ್ಥಿವ ಶರೀರದ ಬಗ್ಗೆ ಹೆಚ್ಚು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ ಓದಬಹುದು). ಈ ನಿಯಮವನ್ನು ಮೀರಿ ಅಲ್ಲಿಗೆ ಹೋಗಬೇಕೆಂಬ ಅಭಿಲಾಷೆ. ಕುಲಗುರುಗಳಾದ ವಸಿಷ್ಠರು ಈ ಮನವಿಗೆ ಒಪ್ಪಲಿಲ್ಲದ ಕಾರಣ ಅವರ ಎದುರಾಳಿ ಎಂದು ತಿಳಿದು ಮಹರ್ಷಿ ವಿಶ್ವಾಮಿತ್ರರನ್ನು ಈ ಕೆಲಸಕ್ಕೆ ಆಶ್ರಯಿಸಿದ. 

ಅವನಿಂದ ಒಂದು ಹೊಸ ರೀತಿಯ ಯಾಗ ಮಾಡಿಸಿ, ಅದರ ಫಲದ ಬಲದಿಂದ ಮಹರ್ಷಿ ವಿಶ್ವಾಮಿತ್ರರು ಅವನನ್ನು ಸ್ವರ್ಗಕ್ಕೆ ಕಳಿಸಿದರು. ದೇವೇಂದ್ರನು ಅದನ್ನು ಒಪ್ಪದೇ ಸತ್ಯವ್ರತನನ್ನು ಸ್ವರ್ಗದಿಂದ ಹೊರಕ್ಕೆ ತಳ್ಳಿಸಿದ. ಕೆಳಗೆ ಬೀಳುತ್ತಿರುವ ರಾಜನು ಮಹರ್ಷಿ ವಿಶ್ವಾಮಿತ್ರರನ್ನು ಕೂಗಿ ಕರೆದ. ಅವರು ತಮ್ಮ ತಪ:ಶಕ್ತಿಯಿಂದ ತಲೆ ಕೆಳಗಾಗಿ ಬೀಳುತ್ತಿದ್ದ ಅವನನ್ನು ಅಲ್ಲೇ ನಿಲ್ಲಿಸಿ ಅವನಿಗೆ ಹೊಸದೊಂದು ಸ್ವರ್ಗವನ್ನೇ ಸೃಷ್ಟಿಸಿದರು. ಹೀಗಾಗಿ ಅವನು ಸ್ವರ್ಗಕ್ಕೂ, ಭೂಲೋಕಕ್ಕೂ ಮಧ್ಯೆ ನಿಂತ. ಈ ಕಾರಣದಿಂದ ಅವನು "ತ್ರಿಶಂಕು" ಎಂದು ಹೆಸರು ಪಡೆದ. ಹೀಗೂ ಇಲ್ಲ, ಹಾಗೂ ಇಲ್ಲ ಎನ್ನುವಂತಾಗಿ ಮಧ್ಯದಲ್ಲಿ ಸಿಕ್ಕಿ ನೇತಾಡುವ ಸ್ಥಿತಿಗೆ ಅಂದಿನಿಂದ "ತ್ರಿಶಂಕು ಸ್ವರ್ಗ" ಅಥವಾ "ತ್ರಿಶಂಕು ಪರಿಸ್ಥಿತಿ" ಎಂದು ಹೇಳುವುದು ಬಂದಿತು. (ಇಂದಿನ ಕಾಲದ ಚುನಾವಣೆಗಳ ನಂತರ ಯಾವುದೇ ಒಂದು ಪಕ್ಷಕ್ಕೆ ಅಥವಾ ಗುಂಪಿಗೆ ಬಹುಮತ ಬರದೇ ಇದ್ದಾಗ ಈ ಪದ ಬಹಳ ಜನಪ್ರಿಯ).  

ಈ ತ್ರಿಶಂಕು ಮಹಾರಾಜನ ಮಗನೇ ರಾಜಾ ಹರಿಶ್ಚಂದ್ರ. ಸತ್ಯಕ್ಕೆ ಇನ್ನೊಂದು ಹೆಸರಾದ ಈ ಹರಿಶ್ಚಂದ್ರ ಕಾರಣಾಂತರಗಳಿಂದ ವಿಶ್ವಾಮಿತ್ರರ ಪರೀಕ್ಷೆಗೆ ಗುರಿಯಾಗಬೇಕಾಯಿತು. ತನ್ನ ಮಾತನ್ನು ಉಳಿಸಿಕೊಳ್ಳುವ ಕಾರಣ ರಾಜ್ಯ-ಕೋಶಗಳನ್ನು ಕಳೆದುಕೊಂಡು, ಹೆಂಡತಿ-ಮಗನನ್ನು ಮಾರಿಕೊಂಡ. (ಮೇಲೆ ಕೊಟ್ಟಿರುವ ಚಿತ್ರ ಹೀಗೆ ಅವನು ಹೆಂಡತಿ-ಮಗನನ್ನು ಮಾರಿಕೊಳ್ಳುತ್ತಿರುವ ಪ್ರಸಂಗವನ್ನು ರಾಜ ರವಿವರ್ಮ ಚಿತ್ರಿಸಿರುವುದು). ಕಡೆಗೆ ತನ್ನನ್ನೇ ಮಾರಿಕೊಂಡು ವಿಶ್ವಾಮಿತ್ರರಿಗೆ ಕೊಡಬೇಕಾದ ಹಣ ಸಂದಾಯಮಾಡಿ ಸತ್ಯನಿಷ್ಠ ಎನಿಸಿದ. ಹೀಗೆ ಅವನು ಮಾರಾಟಕ್ಕೆಂದು ಕಾಶಿ ಕ್ಷೇತ್ರದಲ್ಲಿ ನಿಂತಾಗ ಅವನನ್ನು ಹರಾಜಿನಲ್ಲಿ ಕೊಂಡುಕೊಂಡವನೇ ವೀರಬಾಹು ಎನ್ನುವ ಸ್ಮಶಾನದ ಒಡೆಯ. ಈಗಿನ ಕಾಲದ ಸ್ಮಶಾನದ ಉಸ್ತುವಾರಿ ಪಡೆದ ಕಂಟ್ರಾಕ್ಟರ್ ಇದ್ದಂತೆ ಎನ್ನಬಹುದು. 

ಈ ವೀರಬಾಹು ಯಾರು? ಅವನದೂ ಒಂದು ದೊಡ್ಡ ಕಥೆಯೇ! ಹಿಂದೆ ಕೆಲವು ಸಂಚಿಕೆಗಳಲ್ಲಿ ಸೋಮಶರ್ಮ ಮತ್ತು ಅವನ ಹೆಂಡತಿಯಾದ ಸುಮನಾ ಎಂಬ ಚ್ಯವನ ಋಷಿಗಳ ಮಗಳ ನಡುವೆ ನಡೆದ ಸಂವಾದದ ಸಂಚಿಕೆಗಳನ್ನು ನೋಡಿದ್ದೆವು. ಈ ವೀರಬಾಹುವಿನ ವೃತ್ತಾಂತ ಅದರಲ್ಲಿಯೇ ಒಂದು ಕಡೆ ಬರುತ್ತದೆ. ಸೋಮಶರ್ಮನು ಸುಮನಾ ಧರ್ಮಪುರುಷನ ಬಗ್ಗೆ ಕೊಡುವ ವಿವರಣೆ ಕೇಳಿ ಆಶ್ಚರ್ಯ ಪಟ್ಟು ಮುಂದೆ ಧರ್ಮಪುರುಷನ ಸ್ವರೂಪದ ಬಗ್ಗೆ ಕೇಳುತ್ತಾನೆ. ಆಗ ಸುಮನಾ ಕೊಡುವ ವಿಷಯಗಳ ನಿರೂಪಣೆಯಿಂದ ಈ ವೀರಬಾಹುವಿನ ಸುಳುಹು ಸಿಗುತ್ತದೆ. ಅದನ್ನಿಷ್ಟು ಈಗ ನೋಡೋಣ. 
*****

"ಸಪ್ತರ್ಷಿಗಳು" ಎಂದು ಹೆಸರಾದ ಏಳು ಜನ ಮಹಾತಪಸ್ವಿಗಳಲ್ಲಿ ಅತ್ರಿ ಮಹರ್ಷಿಗಳೂ ಒಬ್ಬರು. ಇವರು ಚತುರ್ಮುಖ ಬ್ರಹ್ಮನ ಮಾನಸ ಪುತ್ರರು. ಕರ್ದಮ ಮಹರ್ಷಿ ಮತ್ತು ದೇವಹೂತಿ ದಂಪತಿಗಳ ಮಗಳಾದ ಅನಸೂಯ ಇವರ ಪತ್ನಿ. ತ್ರಿಮೂರ್ತಿಗಳ ವರದಿಂದ ಇವರಿಗೆ ಮೂರು ಮಕ್ಕಳಾಗುತ್ತಾರೆ. ಬ್ರಹ್ಮನ ವರದಿಂದ ಚಂದ್ರನೂ, ವಿಷ್ಣುವಿನ ವರದಿಂದ ದತ್ತಾತ್ರೇಯನೂ ಮತ್ತು ಪರಶಿವನ ವರದಿಂದ ದೂರ್ವಾಸರೂ ಜನಿಸುತ್ತಾರೆ. (ಮೂವರ ವರದ ಕಾರಣ ಸಂಯುಕ್ತವಾಗಿ ಮೂರು ತಲೆಯ "ದತ್ತಾತ್ರೇಯ" ಜನಿಸಿದ್ದು ಎಂದು ಒಂದು ನಂಬಿಕೆ. ಇದು ಚಲನಚಿತ್ರಗಳ ಮೂಲಕ ಮತ್ತು ಹರಿಕಥಾ ಕಾಲಕ್ಷೇಪಗಳ ಮೂಲಕ ಹೆಚ್ಚು ಪ್ರಚಾರದಲ್ಲಿದೆ).  

ಧರ್ಮದೇವತೆಯನ್ನು ಪೂರ್ಣವಾಗಿ ಕಂಡವರು ಬಹಳ ಕಡಿಮೆ ಜನ. ಧರ್ಮದೇವತೆಗೆ ಎರಡು ರೂಪಗಳು. ಒಂದು ಯಮ ರೂಪ. ಪಾಪಿಗಳಿಗೆ ಕೇವಲ ಯಮದೂತರ ದರ್ಶನ ಆಗುತ್ತದೆ. ಕೆಲವರಿಗೆ ಯಮ ರೂಪದ ದರ್ಶನ ಆಗುತ್ತದೆ. ಆದರೆ ಪುಣ್ಯಾತ್ಮರಿಗೆ ಧರ್ಮದೇವತೆಯ ಎರಡನೆಯ ರೂಪವಾದ ಧರ್ಮನ ಸ್ವಲ್ಪ ದರ್ಶನ ಆಗುತ್ತದೆ. ಹೀಗೆ ಧರ್ಮದೇವತೆಯ ಪೂರ್ಣ ಸ್ವರೂಪವನ್ನು ನೋಡಬೇಕೆಂದು ತಪಸ್ಸು ಮಾಡಿ ಮುಖತಃ ಕಂಡವರು ಅತ್ರಿ-ಅನಸೂಯರ ಮಕ್ಕಳಾದ ದತ್ತಾತ್ರೇಯ ಮತ್ತು ದೂರ್ವಾಸರು ಎಂದು ಪದ್ಮ ಪುರಾಣ ಹೇಳುತ್ತದೆ. 

ದೂರ್ವಾಸರು ಒಂದು ಲಕ್ಷ ವರ್ಷ ಧರ್ಮದೇವತೆಯನ್ನು ನೋಡುವುದಕ್ಕೆ ಘನಘೋರ ತಪಸ್ಸು ಮಾಡಿದರು. ತಪಸ್ಸಿನ ಕಾಲ ಏರುತ್ತಿದ್ದಂತೆ ಅವರಿಗೆ ಕೋಪವೂ ಏರಿತು. ಅದು ಎಷ್ಟರ ಮಟ್ಟಿಗೆ  ಹಿಗ್ಗಿತು ಎಂದರೆ ಯಾವ ದೇವತೆಯನ್ನು ಕುರಿತು ತಪಸ್ಸು ಮಾಡಿದರೋ ಆ ದೇವತೆಯ ಮೇಲೆ ಕೋಪ ಬರಲು ಕಾರಣವಾಯಿತು. ಕಡೆಗೆ ಧರ್ಮದೇವತೆ ತನ್ನ ಪರಿವಾರದ ಸಮೇತ ಪ್ರತ್ಯಕ್ಷನಾದನು. ಧರ್ಮದೇವತೆಯ ಪಕ್ಕದಲ್ಲಿ ಐದು ಜನ ಮಹಾತೇಜಸ್ವಿಗಳಾದ ಪುರುಷರೂ ಮತ್ತು ಒಂಭತ್ತು ಮಂದಿ ಪರಮ ಸುಂದರಿಯರಾದ ಸ್ತ್ರೀಯರೂ, ಒಬ್ಬ ತೇಜೋಮಯಿಯಾದ ವೃದ್ಧ ತಪಸ್ವಿನಿಯೂ ನಿಂತಿದ್ದರು. 

"ಮಹರ್ಷಿ, ನೋಡು. ನಾನು ಬಂದಿದ್ದೇನೆ."
"ಯಾರು ನೀನು? ಈ ತೇಜಸ್ವಿ ಪುರುಷರು ಯಾರು? ಈ ದಿವ್ಯ ಸುಂದರಿಯರು ಯಾರು?"

"ಈ ತೇಜಸ್ವಿ ಪುರುಷರು ಕ್ರಮವಾಗಿ ಬ್ರಹ್ಮಚರ್ಯ, ತಪಸ್ಸು, ದಮ, ನಿಯಮ ಮತ್ತು ಶೌಚ ಎಂಬುವುವು. ಈ ಸುಂದರ ಸ್ತ್ರೀಯರು ಕ್ರಮವಾಗಿ ಕ್ಷಮೆ, ಶಾಂತಿ, ಅಹಿಂಸೆ, ಶುಶ್ರೂಷೆ,  ಕಲ್ಪನೆ, ಬುದ್ಧಿ, ಪ್ರಜ್ಞೆ, ಶ್ರದ್ದೆ ಮತ್ತು ಮೇಧೆ. ಹತ್ತನೆಯವಳಾದ ವೃದ್ಧ ತಪಸ್ವಿನಿ ನನ್ನ ತಾಯಿಯಾದ ದಯೆ. ನಾನು ನೀನು ನೋಡಲು ಅಪೇಕ್ಷಿಸಿದ ಧರ್ಮಪುರುಷ."

"ನೀನೇಕೆ ಇಷ್ಟು ತಡ ಮಾಡಿದೆ? ನೋಡು, ಒಂದು ಲಕ್ಷ ವರುಷ ತಪಸ್ಸು ಮಾಡಿ ಹೇಗೆ ಸೊರಗಿದ್ದೇನೆ. ನಿನ್ನ ವಿಳಂಬ ನೀತಿಯಿಂದ ನನಗೆ ಬಹಳ ಕೋಪ ಬಂದಿದೆ."
"ನೀನು ಮಹಾ ತಪಸ್ವಿ. ನಿನ್ನಂತಹವರಿಗೆ ಕೋಪವು ಒಳ್ಳೆಯದಲ್ಲ. ಶಾಂತನಾಗು."
"ಶಾಂತನಾಗುವುದು ಸುಲಭವಲ್ಲ. ನಿನಗೆ ಶಾಪ ಕೊಡುತ್ತೇನೆ."
"ಕೋಪವು ನಿನಗೆ ಶೋಭಿಸದು. ಶಾಪವನ್ನು ಕೊಟ್ಟಾದರೂ ಶಾಂತನಾಗು. ನನ್ನನು ದಾಸೀಪುತ್ರನನ್ನಾಗಿ ಮಾಡು. ರಾಜನನ್ನಾಗಿ ಮಾಡು. ಇಲ್ಲವೇ. ಚಂಡಾಲನನ್ನಾಗಿ ಮಾಡು. ಆದರೆ ನೀನು ಶಾಂತನಾಗು."

"ನೀನು ದಾಸೀಪುತ್ರನಾಗಿ ಜನ್ಮ ತಾಳು. ಭರತ ವಂಶದಲ್ಲಿ ರಾಜನಾಗಿ ಜನಿಸು. ಚಂಡಾಲನಾಗಿಯೂ ಹುಟ್ಟು"

ದೂರ್ವಾಸರ ಕೋಪ ಅಂತಹುದು. ಧರ್ಮದೇವತೆಯನ್ನು ನೋಡಲು ತಪಸ್ಸು ಮಾಡಿದರು. ಕಡೆಗೆ ದರ್ಶನ ಕೊಡಲು ಬಂದ ಧರ್ಮದೇವತೆಗೇ ಮೂರು ಶಾಪ ಕೊಟ್ಟು ಹೊರತು ಹೋದರು. 

ಹೀಗೆ ಮೂರು ಶಾಪ ಪಡೆದ ಧರ್ಮದೇವತೆ ದಾಸೀಪುತ್ರನಾಗಲು ವಿದುರ ಆಗಿ ಹುಟ್ಟಿದ. ಭರತ ವಂಶದ ಚಕ್ರವರ್ತಿ ಯುಧಿಷ್ಠಿರ ಆಗಿ ಜನಿಸಿದ. 

ಮೂರನೆಯ ಶಾಪವನ್ನು ಉಪಯೋಗಿಸಿಕೊಂಡು ತ್ರಿಶಂಕುವಿನ ಮಗ ಹರಿಶ್ಚಂದ್ರ ಕಾಶಿಯಲ್ಲಿ ಮಾರಾಟಕ್ಕೆ ಬರುವ ವೇಳೆಯಲ್ಲಿ "ವೀರಬಾಹು" ಎನ್ನುವ ಹೆಸರಿನಿಂದ ಹುಟ್ಟಿ, ಸ್ಮಶಾನದ ಮಾಲೀಕನಾಗಿ ಹರಿಶ್ಚಂದ್ರನನ್ನು ಕೊಂಡುಕೊಂಡು ಕೆಲಸಕ್ಕೆ ಇಟ್ಟುಕೊಂಡ. 

*****

"ಸತ್ಯ ಹರಿಶ್ಚಂದ್ರ" ಹೆಸರಿನ ಅನೇಕ ಚಲನಚಿತ್ರಗಳು ಬೇರೆ ಬೇರೆ ಭಾಷೆಗಳಲ್ಲಿ ಬಂದಿವೆ. ಕನ್ನಡದ "ಸತ್ಯ ಹರಿಶ್ಚಂದ್ರ" ಚಲನಚಿತ್ರ ಜನಪ್ರಿಯ ನಾಯಕ ನಟ ರಾಜಕುಮಾರ್ ಅವರಿಗೆ ಅಪಾರ ಹೆಸರು ತಂದಿತು. ಇಂದಿಗೂ ಈ ಚಿತ್ರ ಪ್ರದರ್ಶನವಾದ ಕಡೆ ನೂಕುನುಗ್ಗಲು, ಜನಸಂದಣಿ ಇರುತ್ತದೆ. ಎಂ. ಪಿ. ಶಂಕರ್ ಅವರ ವೀರಬಾಹು ಪಾತ್ರ ಮತ್ತು ಅದರ "ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ, ಮತದಲ್ಲಿ ಮೇಲ್ಯಾವುದೋ" ಹಾಡು ಅತ್ಯಂತ ಜನಪ್ರಿಯ. ಈ ಹಾಡಿನಲ್ಲಿ ಅನೇಕ ತತ್ವಗಳೂ ಅಡಗಿವೆ. 

ಚಿತ್ರದ ಕಡೆಯಲ್ಲಿ ವಸಿಷ್ಠ-ವಿಶ್ವಾಮಿತ್ರರೂ, ದೇವೇಂದ್ರನೂ ಮೊದಲಾದವರು ಹರಿಶ್ಚಂದ್ರನಿಗೆ ಮತ್ತೆ ರಾಜ್ಯಭಾರವನ್ನು ವಹಿಸಿಕೊಳ್ಳಲು ಹೇಳುತ್ತಾರೆ. ಆಗ ಅವನು "ನಾನು ಸ್ಮಶಾನ ಕಾಯುವ ಕೆಲಸ ಮಾಡಿದವನು. ಈಗ ಅದಕ್ಕೆ ಯೋಗ್ಯನಲ್ಲ. ಕ್ಷಮಿಸಿ" ಅನ್ನುತ್ತಾನೆ. ಆಗ ಅವರು "ನೀನು ಕಾದದ್ದು ಸ್ಮಶಾನವಲ್ಲ. ಅಲ್ಲಿ ನೋಡು. ನಿನ್ನನ್ನು ಕೊಂಡುಕೊಂಡವನು ಧರ್ಮರಾಜನು. ನೀನು ಕಾಯುತ್ತಿದ್ದುದು ಅನೇಕ ಋಷಿಗಳ ಹೋಮಕುಂಡಗಳು" ಎಂದು ತೋರಿಸುತ್ತಾರೆ. ಚಿತ್ರದ ಕೊನೆಯ ಕೆಲವು ಸೆಕೆಂಡುಗಳ ಈ ಭಾಗವನ್ನು ಯಾರೂ ಹೆಚ್ಚಾಗಿ ಗಮನಿಸುವುದಿಲ್ಲ. ಮತ್ತೊಮ್ಮೆ ನೋಡಿದರೆ ಗೊತ್ತಾಗುವುದು. ಚಿತ್ರ ಯೂಟ್ಯೂಬಿನಲ್ಲಿ ಲಭ್ಯವಿದೆ. 

"ದಯೆಯೇ ಧರ್ಮದ ಮೂಲವಯ್ಯ" ಎನ್ನುವ ಶರಣಶ್ರೇಷ್ಠರ ವಚನಗಳಿಗೂ, ಧರ್ಮಪುರುಷನು "ದಯೆ ನನ್ನ ತಾಯಿ" ಎಂದು "ಪದ್ಮ ಪುರಾಣ"  ಸಂದರ್ಭದ ಸಂಭಾಷಣೆಯಲ್ಲಿ ಹೇಳುವುದಕ್ಕೂ ಸಾಮ್ಯವನ್ನು ಕಾಣಬಹುದು. 

*****

ದೂರ್ವಾಸರು ಧರ್ಮದೇವತೆಗೆ ಶಾಪ ಕೊಟ್ಟದ್ದು ಸರಿಯೇ? ಧರ್ಮದೇವತೆ ಅದನ್ನು ಯಾಕೆ ಒಪ್ಪಿಕೊಂಡನು? ಧರ್ಮದೇವತೆಗೆ ಅದನ್ನು ತಪ್ಪಿಸಿಕೊಳ್ಳಲು ಆಗಲಿಲ್ಲವೇ? ಇವೇ ಮುಂತಾದ ಪ್ರಶ್ನೆಗಳಿಗೆ ಮುಂದಿನ ಸಂಚಿಕೆಯಲ್ಲಿ ಉತ್ತರ ಹುಡುಕೋಣ.