Monday, June 16, 2025

ಚಂದ್ರ, ಸೂರ್ಯ ಮತ್ತು ಬೆಲ್ಲದ ಪಾಯಸ


ಹೊಲದಲ್ಲಿ ಕಬ್ಬು ಬೆಳೆಯುವ ರೈತ ಆ ಕಬ್ಬನ್ನು  ಮೂರು ರೀತಿಯಲ್ಲಿ ಮಾರಿ ಹಣ ಗಳಿಸಬಹುದು. ಮೊದಲನೆಯದಾಗಿ, ಬೆಳೆ ಕಟಾವು ಮಾಡಿದ ಕೂಡಲೇ ಆ ಕಬ್ಬಿನ ಜಲ್ಲೆಗಳನ್ನು ಕಬ್ಬಿನ ರಸ ತೆಗೆದು ಮಾರುವ ಅಂಗಡಿಗಳಿಗೆ ಕೊಟ್ಟು ಹಣ ಪಡೆಯಬಹುದು. ಎರಡನೆಯದು, ಆ ಕಬ್ಬನ ರಾಶಿಯನ್ನು ಗಾಡಿ ಅಥವಾ ಟ್ರ್ಯಾಕ್ಟರುಗಳಲ್ಲಿ, ಇಲ್ಲವೇ ಲಾರಿಗಳಲ್ಲಿ ಸಾಗಿಸಿ ಹತ್ತಿರದ ಸಕ್ಕರೆ ಕಾರ್ಖಾನೆಗೆ ಮಾರಬಹುದು. ಮೂರನೆಯದಾಗಿ, ತನ್ನ ಹೊಲದಲ್ಲೇ ಆಲೆಮನೆ ಹಾಕಿ, ಬೆಲ್ಲ ಮಾಡಿ, ಆ ಬೆಲ್ಲವನ್ನು ಮಾರಬಹುದು. ಈ ರೀತಿ ಬೆಲ್ಲ ಮಾಡುವ ಕಡೆ ಅದರ ಸುಗಂಧ ಸ್ವಲ್ಪ ದೂರದವರೆಗೂ ಹರಡುತ್ತದೆ. ದೊಡ್ಡ ದೊಡ್ಡ ಕಡಾಯಿಗಳಲ್ಲಿ ಕಬ್ಬಿನ ಹಾಲನ್ನು ಕಾಯಿಸಿ ಮರದ ಅಚ್ಚುಗಳಲ್ಲಿ ಸುರಿದು ಗಟ್ಟಿಯಾದ ಮೇಲೆ ಆ ಅಚ್ಚುಗಳನ್ನು ಪಿಂಡಿಗಳೆಂಬ ಸಣ್ಣ ಸಣ್ಣ ಗಂಟುಗಳಾಗಿ ಮಾಡಿ ಮಾರುತ್ತಾರೆ. ಕೆಲವೆಡೆ ಉಂಡೆ ಬೆಲ್ಲ ಮಾಡುವುದೂ ಉಂಟು. 

ಹೀಗೆ ಹಾಕಿದ್ದ ಒಂದು ಬೆಲ್ಲ ಮಾಡುವ ಆಲೆಮನೆಗೆ ಇಬ್ಬರು ಬಂದು ಹೊಸ ಬೆಲ್ಲದ ಅಚ್ಚುಗಳನ್ನು ಕೊಂಡು ಅವರವರ ಮನೆಗೆ ತೆಗೆದುಕೊಂಡುಹೋದರು. ಮೊದಲನೆಯ ಮನೆಯಲ್ಲಿ ಆ ಬೆಲ್ಲವನ್ನು ಉಪಯೋಗಿಸಿ ಸೊಗಸಾದ ಗಸಗಸೆ ಪಾಯಸ ಮಾಡಿದರು. ಎರಡನೆಯ ಮನೆಯಲ್ಲಿ ಅದೇ ಆಲೆಮನೆಯಿಂದ ಬಂದ ಬೆಲ್ಲವನ್ನು ಬಳಸಿಕೊಂಡು ಆಕ್ಕಿ-ಕಡಲೆಬೇಳೆ ಪಾಯಸ ಮಾಡಿದರು. ಎರಡು ಮನೆಯವರೂ ಪಾಯಸ ಸೇವಿಸಿದರು. ಬೆಲ್ಲದಲ್ಲಿದ್ದ ಪೋಷಕಾಂಶಗಳ ಲಾಭ ಎರಡು ಮನೆಯವರಿಗೂ ಸಿಕ್ಕಿತು. ಎರಡೂ ಸಿಹಿಯಾಗಿತ್ತು. ಆದರೆ ತಯಾರಿಸಿದ ರೀತಿ ಬೇರೆ ಆಗಿತ್ತು. ರುಚಿಯೂ ಸ್ವಲ್ಪ ಭಿನ್ನ. ಕೊನೆಯ ಪ್ರಯೋಜನ ಮಾತ್ರ ಹೆಚ್ಚು-ಕಡಿಮೆ ಒಂದೇ ಎನ್ನಬಹುದು. 

*****

ಒಬ್ಬ ಬಹಳ ದೊಡ್ಡ ಸಾಹುಕಾರ ಇದ್ದಾನೆ. ಅವನಿಗೆ ಅನೇಕ ಪಟ್ಟಣಗಳಲ್ಲಿ, ಅನೇಕ ದೇಶಗಳಲ್ಲಿ, ಕೆಲವಾರು ಮನೆಗಳಿವೆ. ಈ ಪ್ರತಿಯೊಂದು ಮನೆಯೂ ಸುಸಜ್ಜಿತವಾಗಿವೆ. ಅವನಲ್ಲಿ ಅನೇಕ ವಾಹನಗಳಿವೆ. ಅವುಗಳಲ್ಲಿ ನಮ್ಮ ಊರಿನಲ್ಲಿರುವ ಕಾರೂ ಒಂದು. ಈ ಕಾರು ನಮ್ಮ ಮುಂದೆಯೇ ಒಡಾಡುತ್ತಿದೆ. ಇದನ್ನು ನಾವು ಪ್ರತಿ ದಿನವೂ ನೋಡುತ್ತೇವೆ. ಕೆಲವೊಮ್ಮೆ ತುಂಬಾ ಹತ್ತಿರದಲ್ಲಿ, ಚೆನ್ನಾಗಿ ಕಾಣುತ್ತದೆ. ಮತ್ತೆ ಕೆಲವು ವೇಳೆ ಎಲ್ಲೋ ದೂರದಲ್ಲಿ ಚಿಕ್ಕದ್ದಾಗಿ ಕಾಣುತ್ತದೆ. ಎಂದೋ ಒಂದು ದಿನ ಕಾಣಿಸದಿರುವಂತೆಯೂ ಉಂಟು. ಆದರೆ ಅದು ಇದ್ದೇ ಇದೆ. 

ಅವನ ಬೇರೆ ಪಟ್ಟಣಗಳಲ್ಲಿ, ಬೇರೆ ದೇಶಗಳಲ್ಲಿ ಇರುವ ಮನೆಗಳನ್ನೂ, ಕಾರುಗಳನ್ನೂ ನಾವು ನೋಡಿಲ್ಲ. ಆದರೆ ಅವು ಇವೆ ಎಂದು ಕೇಳಿದ್ದೇವೆ. ಅವನಬಳಿ ಇಷ್ಟೆಲ್ಲಾ ಇದ್ದರೂ ಅವನು ಎಲ್ಲಿಯೋ ದೂರದಲ್ಲಿರುವ ಮನೆಯಲ್ಲಿ ವಾಸವಾಗಿದ್ದನಂತೆ. ಆದರೆ ಇಷ್ಟೆಲ್ಲಾ ಮನೆಗಳೂ ವಾಹನಗಳೂ ಅವನ ಅಧೀನವಂತೆ. ಅವನು ಹೇಳಿದಂತೆ ಕೇಳುತ್ತವಂತೆ. ಅವನ್ನು ಎಲ್ಲವನ್ನೂ ಒಟ್ಟಿಗೆ ಅಥವಾ ಕ್ರಮವಾಗಿ ನೋಡುವ ಶಕ್ತಿ ನಮಗಿಲ್ಲ. ಆದರೆ ಅವೆಲ್ಲಾ ಇದ್ದೇ ಇವೆಯಂತೆ. ಹೀಗೆ ತಿಳಿದವರು ಹೇಳುವುದನ್ನು ಕೇಳಿದ್ದೇವೆ. 

ಇಷ್ಟೆಲ್ಲಾ ಇರುವ ಈ ಸಾಹುಕಾರನು ಅವನಿಗಿಂತ ದೊಡ್ಡ ಯಜಮಾನನ ಸೇವಕನಂತೆ. ಇವನ ಮಟ್ಟಿಗೆ ಅವನು ಸ್ವತಂತ್ರನಾದರೂ, ಆ ದೊಡ್ಡ ಯಜಮಾನ ಇವನ ನಿಯಾಮಕ. ಆ ನಿಯಾಮಕನ ನಿಯಮಗಳಂತೆ ಈ ಸಾಹುಕಾರನ ಇರವು ಮತ್ತು ಕೆಲಸ. ತನ್ನ ಪರಿಧಿಯಲ್ಲಿ ಇವನು ಸ್ವತಂತ್ರ. ಆದರೆ ಈ ದೊಡ್ಡ ಯಜಮಾನನ ಅಂಕೆಯಲ್ಲಿಯೇ ಇರಬೇಕು. ಆ ದೊಡ್ಡ ಯಜಮಾನನಿಗೆ ಮಾತ್ರ ಇನ್ನೊಬ್ಬ ಯಜಮಾನ ಅನ್ನುವವನು ಇಲ್ಲ. ಅವನು ಸರ್ವತಂತ್ರ ಸ್ವತಂತ್ರ. 

*****

ನಾವು ಪ್ರತಿದಿನವೂ ನೋಡುವ ಚಂದ್ರ ಎನ್ನುವ ವಸ್ತು ಒಂದು ಜಡ ಪದಾರ್ಥ. ಅದರ ಕರ್ತ ಒಬ್ಬ ಇದ್ದಾನೆ. ಹಿಂದಿನ ಒಂದು ಸಂಚಿಕೆಯಲ್ಲಿ ಲೇಖನಿ ಮತ್ತು ಅದನ್ನು ಹಿಡಿದ ಲೇಖಕನ ಬಗ್ಗೆ ಚರ್ಚಿಸಿದ್ದೇವೆ. ಲೇಖನಿ ಮೇಜಿನ ಮೇಲೆ ಬಿದ್ದಿರುತ್ತದೆ. ತಾನೇ ಸ್ವತಃ ಅದು ಏನನ್ನೂ ಬರೆಯಲಾಗದು. ಅದರ ಯಜಮಾನನಾದ ಲೇಖಕ ಉಪಯೋಗಿಸಿದಂತೆ ಅದರ ಕೆಲಸ. ಯಜಮಾನನ ಬಳಿ ಅನೇಕ ಲೇಖನಿಗಳು ಇವೆ. ಅವನು ಚೇತನ. ಇದು ಜಡ. ಲೇಖನ ಓದಿದ ನಾವು ಬರೆದವನು ಯಾರು ಎನ್ನುವುದನ್ನು ಅರಿಯುತ್ತೇವೆ. ನಾವು ಪ್ರತಿದಿನ ನೋಡುವ ಚಂದ್ರನೆಂಬ ಜಡ ವಸ್ತುವಿಗೆ ಒಬ್ಬ ಅಭಿಮಾನಿ ದೇವತೆ ಇದ್ದಾನೆ, ಅವನು ನಿಜವಾದ ಚಂದ್ರ. ಚಂದ್ರದೇವನು ನಮ್ಮ ಕಿವಿಗಳಲ್ಲಿಯೂ ಅಭಿಮಾನಿ ದೇವತೆಯಾಗಿದ್ದಾನೆ. ಅವನ ಕೆಲಸದಿಂದಲೇ ನಮಗೆ ಶಬ್ದಗಳು ಕೇಳಿಸುವುದು. ಅವನು ಕೆಲಸಮಾಡದಿದ್ದರೆ ನಾವು ಕಿವುಡು. ದೇವತೆಗಳು ಅನೇಕ ರೂಪಗಳಲ್ಲಿ, ಅನೇಕ ಸ್ಥಾನಗಳಲ್ಲಿ , ಒಂದೇ ಕಾಲದಲ್ಲಿ ಅನೇಕ ಕೆಲಸಗಳನ್ನು ನಿರ್ವಹಿಸಲು ಶಕ್ತರು. 

ಈ ಚಂದ್ರನೆಂಬುವ ದೇವತೆ ಇರುವುದು ಎಲ್ಲಿಯೋ ದೂರದಲ್ಲಿರುವ "ಚಂದ್ರಮಂಡಲ" ಎಂಬಲ್ಲಿ. ಆ ಚಂದ್ರಮಂಡಲದಲ್ಲಿರುವ ಚಂದ್ರನ ಅಧೀನದಲ್ಲಿ ನಾವು ನೋಡುವ ಚಂದ್ರ ಎನ್ನುವ ಪದಾರ್ಥ ಇದೆ. ಇದೇ ರೀತಿ ಅನಂತ ವಿಶ್ವದಲ್ಲಿ ಅನೇಕ ಚಂದ್ರನೆಂಬ ಪದಾರ್ಥಗಳಿವೆ. ಅವುಗಳೆಲ್ಲಕ್ಕೂ ಚಂದ್ರನೆಂಬ ದೇವತೆ ಅಭಿಮಾನಿಯಾಗಿ ಕಾರ್ಯ ನಿರ್ವಹಿಸುತ್ತಾನೆ. ಈ ಚಂದ್ರಮಂಡಲದಲ್ಲಿರುವ ಚಂದ್ರದೇವನ ಅಂತರ್ಯಾಮಿಯಾಗಿ ಆ ಪರಮಪುರುಷನು ಕುಳಿತಿದ್ದಾನೆ. ಪುರುಷ ಸೂಕ್ತ ಹೇಳುವಂತೆ ಈ ಚಂದ್ರ ಪರಮಪುರುಷನ ಮನಸ್ಸಿನಿಂದ ಹುಟ್ಟಿದವನು. ಅದಕ್ಕೇ "ಚಂದ್ರಮಾ ಮನಸೋ ಜಾತಃ" ಎನ್ನುವುದು. ಚಂದ್ರನ ಹುಣ್ಣಿಮೆ ಅಮಾವಾಸ್ಯೆಗಳು ನಮ್ಮ ಮನಸ್ಸಿನ ಮೇಲೆ ನೇರ ಪರಿಣಾಮ ಬೀರುತ್ತವೆ ಎಂದು ಮನಶಾಸ್ತ್ರ ಹೇಳುತ್ತದೆ. ಚಂದ್ರಮಂಡಲದಲ್ಲಿರುವ ಆ "ಪುರುಷಸೂಕ್ತ" ಪ್ರತಿಪಾದ್ಯ ಪರಮಪುರುಷನಿಗೆ "ಧನ್ವಂತರಿ" ಎಂದು ಹೆಸರು.  ನಾವು ಚಂದ್ರನನ್ನು ಆರಾಅಧಿಸುವಾಗ ಆ ಚಂದ್ರಮಂಡಲದಲ್ಲಿರುವ ಚಂದ್ರನನ್ನೂ, ಅವನ ಅಂತರ್ಯಾಮಿಯಾದ ಧನ್ವಂತರಿಯನ್ನು  ಪೂಜಿಸುತ್ತೇವೆ. 

ಈ ಧನ್ವಂತರಿಯು ಸಮುದ್ರ ಮಥನ ಕಾಲದಲ್ಲಿ ಅಮೃತ ಕಲಶವನ್ನು ಹಿಡಿದು ಬಂದು ದೇವತೆಗಳಿಗೆ ಅಮೃತ ಕೊಟ್ಟವನು. ಅವನಿಂದ ಸದಾಕಾಲವೂ ಅಮೃತ ಕಿರಣಗಳು ಹೊರಬರುತ್ತಿವೆ. ಆಯುರ್ವೇದ ಎನ್ನುವ ಆರೋಗ್ಯಶಾಸ್ತ್ರ ಅವನಿಂದ ಹುಟ್ಟಿತು. 

*****

ಇದೆ ರೀತಿ ನಾವು ಪ್ರತಿದಿನ ನೋಡುವ ಸೂರ್ಯ ಎನ್ನುವ ಜಡ ವಸ್ತು ಉಂಟು. ಅದು ನಮಗೆ ಪ್ರತಿದಿನ ಕಾಣುತ್ತದೆ. (ಭೂಮಿಯ ಕೆಲವು ಭಾಗಗಳಲ್ಲಿ, (ಉತ್ತರ ಮತ್ತು ದಕ್ಷಿಣ ಧ್ರುವ ಪ್ರದೇಶಗಳಲ್ಲಿ) ಕೆಲವು ದಿನಗಳು ಕಾಣುವುದಿಲ್ಲವಂತೆ). ಇಂತಹ ಅನೇಕ ಸೂರ್ಯರು ವಿಶಾಲ ವಿಶ್ವದಲ್ಲಿ ಇದ್ದಾರೆ. ಅವರೆಲ್ಲರ ಅಭಿಮಾನಿ ದೇವತೆಯಾಗಿ, ನಿಯಾಮಕನಾಗಿ, ಸೂರ್ಯದೇವ ಇದ್ದಾನೆ. ಅವನು ಇರುವುದು ಸೂರ್ಯಮಂಡಲದಲ್ಲಿ. ಸೂರ್ಯಮಂಡಲದಲ್ಲಿನ ಸೂರ್ಯದೇವನ ಅಂತರ್ಯಾಮಿಯಾಗಿ ಪರಮಪುರುಷನಾದ "ಸೂರ್ಯನಾರಾಯಣ" ಇದ್ದಾನೆ. ಈ ಸೂರ್ಯನು ಪುರುಷ ಸೂಕ್ತ ಹೇಳುವಂತೆ ಆ ಪರಮಪುರುಷನ ಕಣ್ಣಿನಿಂದ ಹುಟ್ಟಿದವನು. ಆದ್ದರಿಂದಲೇ "ಚಕ್ಷೋ: ಸೂರ್ಯೋ ಅಜಾಯತ". ಸೂರ್ಯನನ್ನು ಆರಾಧಿಸುವಾಗ ನಾವು ಈ ಸೂರ್ಯದೇವನನ್ನೂ, ಅವನ ಅಂತರ್ಗತನಾದ ಸೂರ್ಯನಾರಾಯಣನನ್ನೂ ಆರಾಧಿಸುತ್ತೇವೆ. 

ಈ ಸೂರ್ಯನಾರಾಯಣನು ನಮ್ಮ ಬುದ್ಧಿಯನ್ನು ಪ್ರಚೋದಿಸುವವನು. ಆದ್ದರಿಂದ ಅವನನ್ನು ಗಾಯತ್ರಿ ಮಂತ್ರ ಜಪದ ಮೂಲಕವಾಗಿ ವಿಶೇಷವಾಗಿ ಆರಾಧಿಸುತ್ತೇವೆ. 

*****

ಪುರುಷಸೂಕ್ತವು ನಿರ್ದೇಶಿಸುವ ಆ ಪರಮಪುರುಷನು ಎಲ್ಲ ಕಡೆಯೂ ವ್ಯಾಪಿಸಿದ್ದಾನೆ. ಅವನು ಇಡೀ ವಿಶ್ವವನ್ನು ಸೃಷ್ಟಿಸಿ ಅದರ ಒಳಗಡೆ ಪ್ರವೇಶಿಸಿದನು. ಒಳಗಡೆ ಪ್ರವೇಶಿಸುವುದರ ಜೊತೆ ಹೊರಗಡೆಯೂ ಉಳಿದನು. ಇದು ನಾವು ಮಾಡಬಹುದಾದ ಕೆಲಸವಲ್ಲ. ನಾವು ಒಳಗಿದ್ದರೆ ಹೊರಗಿಲ್ಲ. ಹೊರಗಿದ್ದರೆ ಒಳಗಿಲ್ಲ. ಸ್ವಲ್ಪ ಕಾಲಾನಂತರ ನಾವು ಎಲ್ಲೂ ಇಲ್ಲ. ಇನ್ನೂ ಸ್ವಲ್ಪ ಕಾಲಾನಂತರ ನಾವು ಇದ್ದೆವು ಅನ್ನುವ ನೆನಪೂ ಇರುವುದಿಲ್ಲ. ಅವನು ಹಾಗಲ್ಲ. ಅವನ ಲಕ್ಷಣ ಏನು? "ಅಂತರ್ಬಹಿಶ್ಚ ತತ್ಸರ್ವಂ ವ್ಯಾಪ್ಯ ನಾರಾಯಣಃ ಸ್ಥಿತಃ". ಆದ್ದರಿಂದ ಅವನಿಗೆ ಗೋವಿಂದ ಎಂದು ಹೆಸರು. 

ಅವನು ಎಲ್ಲ ಕಡೆಯೂ ಇದ್ದರೂ ನಾವು ದೇವಸ್ಥಾನಗಳಿಗೆ ಹೋಗುತ್ತೇವೆ. ಅಲ್ಲಿ ಅವನ ಅಭಿವ್ಯಕ್ತಿ ಹೆಚ್ಚಿನ ಮಟ್ಟದ್ದು. ಎಲ್ಲ ವಿದ್ಯುತ್ ತಂತಿಗಳಲ್ಲಿ ವಿದ್ಯುತ್ ಹರಿದರೂ ಹೈ ಟೆನ್ಶನ್ ವೈರಿನಲ್ಲಿ ಹೆಚ್ಚು ಪ್ರಖರ. ಆ ರೀತಿ. ಭಗವದ್ಗೀತೆಯಲ್ಲಿ ಹತ್ತನೆಯ ಅಧ್ಯಾಯದಲ್ಲಿ ಶ್ರೀಕೃಷ್ಣನು ತನ್ನ ವಿಭೂತಿರೂಪಗಳನ್ನು ಹೇಳುತ್ತಾನೆ. ಎಲ್ಲ ಕಡೆಯೂ ತಾನಿದ್ದರೂ ಕೆಲವು ಕಡೆಗಳಲ್ಲಿ ಅವನ ವಿಶೇಷ ಅಭಿವ್ಯಕ್ತಿ ಇದೆ. ಅವೇ ವಿಭೂತಿ ರೂಪಗಳು. 

"ಆದಿತ್ಯಾನಾಮ್ ಅಹಂ ವಿಷ್ಣು:" ಅನ್ನುವುದಕ್ಕೆ "ಸೂರ್ಯರಲ್ಲಿ ನಾನು ವಿಷ್ಣು" ಎಂದು ಅರ್ಥಮಾಡುತ್ತಾರೆ. "ದ್ವಾದಶ ಆದಿತ್ಯರು" ಅಂದರೆ ಹನ್ನೆರಡು ಸೂರ್ಯರು ಎಂದು ಅರ್ಥ ಮಾಡಿ ಅವರಲ್ಲಿ ವಿಷ್ಣು ಎಂಬುವವನು ಎಂದು ಅರ್ಥ ಮಾಡುತ್ತಾರೆ. ಇರುವುದು ಒಬ್ಬನೇ ಸೂರ್ಯ. ಅವನು ಅನಂತ ವಿಶ್ವದ ಅನೇಕ ಸೂರ್ಯರಿಗೆ ಅಭಿಮಾನಿ ದೇವತೆ. ಆದಿತ್ಯರು ಎನ್ನುವ ಹನ್ನೆರಡು ಅದಿತಿಯ ಮಕ್ಕಳು "ದ್ವಾದಶ ಆದಿತ್ಯರು". ಈ ಹನ್ನೆರಡು ಜನರಿಗೆ ಸೃಷ್ಟಿಯಲ್ಲಿ ಅವರದೇ ಆದ ವಿಶೇಷ ಕಾರ್ಯಗಳು೦ಟು. ಈ ಹನ್ನೆರಡು ಜನರಲ್ಲಿ ಒಬ್ಬನ ಹೆಸರು ವಿಷ್ಣು. "ಅವರಲ್ಲಿ (ಆದಿತ್ಯರಲ್ಲಿ) ನಾನು ವಿಷ್ಣು "ಎಂದು ಶ್ರೀಕೃಷ್ಣನು ಹೇಳುವುದು ಈ ವಿಷ್ಣುವನ್ನು . 

"ನಕ್ಷತ್ರಾಣಂ ಅಹಂ ಶಶಿ" ಅನ್ನುವುದೂ ಹೀಗೆಯೇ. ಅಲ್ಲಿ ಚಂದ್ರ ಅಂದರೆ ನಾವು ಕಾಣುವ ಜಡ ವಸ್ತು ಚಂದ್ರನಲ್ಲ. ಚಂದ್ರಮಂಡಲದಲ್ಲಿರುವ ಚಂದ್ರ. "ನಾವು ಕಾಣುವ ಚಂದ್ರ ನಕ್ಷತ್ರವಲ್ಲ. ಅವನು ಗ್ರಹವಲ್ಲ. ಉಪಗ್ರಹ", ಹೀಗೆನ್ನುವ ಇಂದಿನ ವಿಜ್ನ್ಯಾನದ ಅರ್ಥ ವಿಭೂತಿಯೋಗದ ಅರ್ಥವಲ್ಲ. 

*****

ಎಲ್ಲ ಮಂತ್ರ ಜಪಗಳ ಮೊದಲು ಒಳ್ಳೆಯ ಆಸನದ ಮೇಲೆ ಕುಳಿತು, ಮನಸ್ಸನ್ನು ಗಟ್ಟಿಮಾಡಿ ನಿಲ್ಲಿ,ಸಿ, ಅಂಗನ್ಯಾಸ, ಕರನ್ಯಾಸಗಳನ್ನು ಮಾಡಿ ಒಂದು "ಧ್ಯಾನ ಶ್ಲೋಕ" ಹೇಳಿಕೊಳ್ಳುತ್ತಾರೆ. ಧ್ಯಾನಶ್ಲೋಕದಲ್ಲಿ ತಾವು ಯಾವ ಮಂತ್ರ ಜಪಿಸುತ್ತಾರೋ ಆ ಆರಾಧ್ಯ ಮೂರ್ತಿಯನ್ನು ವರ್ಣಿಸುವ ಶ್ಲೋಕದ ಮೂಲಕ ಆ ಮೂರ್ತಿಯನ್ನು ತಮ್ಮ ಮನಸ್ಸಿನಲ್ಲಿ ಚಿಂತಿಸುತ್ತ, ಆ ದೇವರ/ದೇವತೆಯ ಮಂತ್ರವನ್ನು ಜಪಿಸುತ್ತಾರೆ. 

ಗಾಯತ್ರಿ ಮಂತ್ರ ಜಪಿಸುವ ವೇಳೆ ಕೆಲವರು ಆ ಪರಮಪುರುಷನ ಐದು ತಲೆಗಳುಳ್ಳ (ಮುಕ್ತಾ, ವಿದ್ರುಮ, ಹೇಮ, ನೀಲ, ಧವಳ) ಸ್ತ್ರೀರೂಪವನ್ನು ನೆನೆಸಿಕೊಂಡು ಜಪಿಸುತ್ತಾರೆ. (ಪಂಡಿತೋತ್ತಮರಾದ ದೇವುಡು ನರಸಿಂಹ ಶಾಸ್ತ್ರಿಗಳು ತಮ್ಮ "ಮಹಾ ಬ್ರಾಹ್ಮಣ" ಎನ್ನುವ ಕಾದಂಬರಿಯಲ್ಲಿ ಇದರ ವಿವರಗಳನ್ನು ಕೊಟ್ಟಿದ್ದಾರೆ). ಇವಳೇ ಗಾಯತ್ರಿ ಮಾತೆ. ಮತ್ತೆ ಕೆಲವರು ಕೇಯೂರ, ಮಕರ ಕುಂಡಲ, ಕಿರೀಟಗಳನ್ನು ಧರಿಸಿದ ಪರಮಪುರುಷನ ಪುರುಷ ರೂಪವನ್ನು ನೆನೆದು (ಧ್ಯಾಯೇತ್ ಸದಾ ಸವಿತೃ ಮಂಡಲ ಮಧ್ಯವರ್ತೀ ನಾರಾಯಣಃ) ಎಂದು ಅದೇ ಪರಮಪುರುಷನ ಪುರುಷ ರೂಪವನ್ನು ಆರಾಧಿಸುತ್ತಾರೆ.  ಇವನೇ "ಸೂರ್ಯನಾರಾಯಣ".  ಒಂದೇ ಆಲದ ಮನೆಯ ಬೆಲ್ಲದ ಎರಡು ಪಾಯಸ ಎರಡು ಮನೆಯವರಿಗೆ ಸಿಕ್ಕಿದಂತೆ. ಬೆಲ್ಲ ಒಂದೇ. ಮಾಡಿದ ಕ್ರಮ ಬೇರೆ ಆದ್ದರಿಂದ ಪಾಯಸ ಬೇರೆ ಬೇರೆ. 

ಪರಮಪುರುಷನು ನಮ್ಮ ದೇಹಗಳಲ್ಲಿ ಅನೇಕ ರೂಪಗಳಿಂದ ಇರುತ್ತಾನೆ. ಪ್ರತಿ ಮನುಷ್ಯ ದೇಹದಲ್ಲಿ (ಗಂಡು ದೇಹ, ಹೆಣ್ಣು ದೇಹ ಎನ್ನುವ ಭೇದವಿಲ್ಲದೆ) 72,000 ನಾಡಿಗಳಿವೆಯಂತೆ. ಬಲಗಡೆ 36,000 ಪುರುಷ ನಾಡಿ. ಎಡಗಡೆ 36,000 ಸ್ತ್ರೀ ನಾಡಿ. ಹೀಗೆಯೇ ಅವನ ಪ್ರತಿ ಪುರುಷ ರೂಪಕ್ಕೂ ಹೊಂದುವ ಸ್ತ್ರೀ ರೂಪಗಳಿವೆ ಎಂದು ಹೇಳುತ್ತಾರೆ. ಹೀಗೆ ಇರುವುದರಿಂದ ಪ್ರಾಯಶಃ ಪರಮಪುರುಷನನ್ನು ಹೇಗೆ ಗಾಯತ್ರಿ ಮಂತ್ರದಿಂದ ಸ್ತ್ರೀ ಮತ್ತು ಪುರುಷ ರೂಪಗಳೆರಡರಲ್ಲೂ ಆರಾಧಿಸುವುದು ಬಂದಿರಬಹುದು. "ಬೃಹತೀಸಹಸ್ರ" ಉಪಾಸನೆಯಲ್ಲಿ ಹೀಗೆ ಹೇಳುತ್ತಾರೆ. 

ಗಾಯತ್ರಿ ಅನ್ನುವುದು ಇಪ್ಪತ್ತನಾಲ್ಕು ಅಕ್ಷರಗಳ ಒಂದು ಛಂದಸ್ಸು. ಗಾಯತ್ರಿ ಮಂತ್ರ ಜಪಿಸುವಾಗ ಆ ಮಂತ್ರಕ್ಕೆ "ಗಾಯತ್ರಿ ಛಂದಃ" ಎಂದೇ ಹೇಳುವುದು. ಬೃಹತೀ ಅನ್ನುವುದು ಹೀಗೆಯೇ ಮೂವತ್ತಾರು ಅಕ್ಷರಗಳ ಛಂದಸ್ಸು. ಒಂಭತ್ತು ಅಕ್ಷರಗಳ ಒಂದು ಪಾದ. ಹೀಗೆ ನಾಲ್ಕು ಪಾದಗಳಾದರೆ ಮೂವತ್ತಾರು ಅಕ್ಷರಗಳು. ಇವು ಒಂದು ಸಾವಿರವಾದರೆ ಒಂದು ಬೃಹತೀ ಸಹಸ್ರ. ಹೀಗೆ ಲೆಕ್ಕ. ಸಂಖ್ಯಾಶಾಸ್ತ್ರದ ಪ್ರಕಾರ ಹೀಗೆ ವಿವರಣೆ. 

*****

ನಮ್ಮ ವೈದಿಕ ವಾಙ್ಮಯದಲ್ಲಿ ಅನೇಕ ಸಮನ್ವಯಗಳು ಮಾಡಬೇಕಾಗುತ್ತವೆ. "ಏಕಂ ಸತ್. ವಿಪ್ರಾ: ಬಹುಧಾ ವದಂತಿ" ಅನ್ನುವ ನಾಣ್ನುಡಿಯಂತೆ ಅನೇಕ ಮಂದಿ ತಿಳಿದವರು ಅನೇಕ ರೀತಿಯ ವಿವರಣೆಗಳನ್ನು ಕೊಡುತ್ತಾರೆ. ನಮ್ಮ ಪುರಾತನ ಕಲಿಕೆಯ ಮೂಲ ಮಂತ್ರ "ಎಲ್ಲವನ್ನೂ ತಿಳಿ. ಕಡೆಗೆ ನಿನಗೆ ನಿನ್ನ ಅನುಭವದಲ್ಲಿ ಸರಿ ಎಂದದ್ದು ಅನುಸರಿಸು" ಎಂದು. ಯಾವುದನ್ನು ಒಪ್ಪಬೇಕು, ಯಾವುದನ್ನು ಆಚರಿಸಬೇಕು ಅನ್ನುವುದು ಅವರವರ ಆಯ್ಕೆಗೆ ಬಿಟ್ಟದ್ದು. 

ಅಧ್ಯಯನ ಕಾಲದಲ್ಲಿ ಜಿಜ್ಞಾಸುವಿಗೆ ಅನೇಕ ಸಂದೇಹಗಳು ಬರುವುದು ಸಹಜ. ಯಾವುದೋ ಪ್ರಶ್ನೆಯ ಬೀಗಕ್ಕೆ ಮತ್ತೆಲ್ಲೋ ಕೀಲಿಕೈ ಇರುತ್ತದೆ. ಇವೆರಡನ್ನೂ ಸಮನ್ವಯ ಮಾಡಿದಾಗ ಆ ಸಂದೇಹ ಪರಿಹಾರವಾಗುತ್ತದೆ. ಅಧ್ಯಯನ ಮುಂದುವರೆದಂತೆ ಸಂದೇಹಗಳು  ಪರಿಹಾರವಾಗುತ್ತ, ಹೊಸ ಹೊಸ ಬೆಳಕು ಕಾಣುತ್ತದೆ. 

Saturday, June 14, 2025

ಸುಖ ಮರಣ, ಅಕಾಲ ಮರಣ ಮತ್ತು ಅಪಮೃತ್ಯು


ಪರಮಾತ್ಮನ ಸೃಷ್ಟಿಯಲ್ಲಿ ಅನೇಕ ಮರ-ಗಿಡಗಳಿವೆ. ಈ ಅನಂತ ವಿಶ್ವದ ಲೆಕ್ಕವಿಲ್ಲದ ವಿಸ್ಮಯಗಳಲ್ಲಿ ಸಸ್ಯಲೋಕದ ಅನೇಕ ವಿಚಿತ್ರಗಳೂ ಸೇರಿವೆ. ಕೆಲವನ್ನು ನಾವು ಪ್ರತಿದಿನ ಗಮನಿಸುತ್ತೇವೆ. ಕೆಲವನ್ನು ಆಗೊಮ್ಮೆ-ಈಗೊಮ್ಮೆ ಗುರುತಿಸುತ್ತೇವೆ. ಮತ್ತನೇಕ ವಿಷಯಗಳು ನಮ್ಮ ನೋಟಕ್ಕೆ ಸಿಲುಕುವುದೇ ಇಲ್ಲ. ಈ ಸಸ್ಯಲೋಕವಿಲ್ಲದೇ ನಮ್ಮ ಜೀವನವಿಲ್ಲ. ನಮ್ಮ ಉಸಿರಾಟದ ಮೂಲಾಧಾರವಾದ ಪ್ರಾಣವಾಯು (ಆಕ್ಸಿಜನ್) ವಾತಾವರಣಕ್ಕೆ ಬಿಡುಗಡೆಯಾಗುವುದರಲ್ಲಿ ಮರ-ಗಿಡಗಳ ಪಾತ್ರ ಬಲು ದೊಡ್ಡದು ಎಂದು ವಿಜ್ಞಾನದ ತರಗತಿಗಳಲ್ಲಿ ಓದಿದ್ದೇವೆ. ಆದರೂ ನಮ್ಮ ಸುಖ ಜೀವನಕ್ಕೆ ಬೇಕಾದ ಪೀಠೋಪಕರಣ, ಗೃಹ ನಿರ್ಮಾಣ, ಇತ್ಯಾಗಳನ್ನು ಮಾಡಲು ಮತ್ತು ವಾಸಯೋಗ್ಯ ಸ್ಥಳ ಪಡೆದುಕೊಳ್ಳಲು ಸಸ್ಯರಾಶಿಯ ನಿರ್ಮೂಲನಕ್ಕೆ ಯಥಾಶಕ್ತಿ ಪ್ರತಿದಿನ ದುಡಿಯುತ್ತಲೇ ಇದ್ದೇವೆ!  

ಈ ಸಸ್ಯರಾಶಿಯಲ್ಲಿ ನಮ್ಮ ಜೀವನ ಯಾತ್ರೆಗೆ ಇಂಬು ಕೊಡುವ ಅನೇಕ ದವಸ-ಧಾನ್ಯ ಬೆಳೆದುಕೊಡುವ ಗಿಡಗಳೂ, ಹಣ್ಣು-ಹಂಪಲು ಕೊಡುವ ಸಸ್ಯಗಳೂ ಉಂಟು. ಕೆಲವು ಹಣ್ಣು ಕೊಡುವ ಮರಗಳು ಪ್ರಕೃತಿಯಲ್ಲಿ ತಾವೇತಾವಾಗಿ ಬೆಳೆಯುತ್ತವೆ. ಹುಣಿಸೆ, ಬೇಲದ ಮತ್ತು ನೇರಿಳೆ ಮರಗಳನ್ನು ಯಾರೂ ಕೃಷಿ ಮಾಡಿ ಬೆಳೆಸುತ್ತಿರಲಿಲ್ಲ. ಕೆಲವು ಹಣ್ಣು ಕೊಡುವ ಮರಗಳನ್ನು ಬೇಸಾಯದಲ್ಲಿ ಬೆಳೆಸಿ ಫಸಲು ಕಟಾವು ಮಾಡುತ್ತಾರೆ. ಈ ರೀತಿ ಬೆಳೆಸುವ ಒಂದು ಹಣ್ಣಿನ ಮರವನ್ನು ತೆಗೆದುಕೊಳ್ಳೋಣ. ಮಾವಿನ ಮರ ಎನ್ನಿ. ವರುಷಕ್ಕೊಮ್ಮೆ ಮಾವಿನ ಫಸಲು ಬರುತ್ತದೆ. ಮನುಷ್ಯ ಸಮಯ ಕಾದು, ಹಣ್ಣಾಗಲು ತಯಾರಿರುವ ಕಾಯಿಗಳನ್ನು ಕಿತ್ತು, ಹಣ್ಣು ಮಾಡಿ ಉಪಯೋಗಿಸುತ್ತಾನೆ. ಕೆಲವೊಂದು ಮಾವಿನಕಾಯಿಗಳನ್ನು ಉಪ್ಪಿನಕಾಯಿ ಮಾಡಲು, ಇಲ್ಲವೇ ಚಿತ್ರಾನ್ನ ಮಾಡಿಕೊಂಡು ಬಾಯಿ ಚಪ್ಪರಿಸಲು, ಹಣ್ಣಾಗುವ ಸಮಯ ಬರುವುದರ ಮೊದಲೇ, ಬೇರೆ ಬೇರೆ ಕಾಲದಲ್ಲಿ, ಕೇಳುತ್ತಾನೆ. ತೀರಾ ಎಳೆಯ ಮಿಡಿಯೂ ಬೇಕು ಅವನಿಗೆ. ಬಲಿತ ಕಾಯಿಗಳೂ ಹೀಗೆ ಉಪ್ಪಿನಕಾಯಿಗೆ, ಚಿತ್ರಾನ್ನಕ್ಕೆ ಬೇಕು. ಹಣ್ಣಾದರಂತೂ ಕೇಳುವುದೇ ಬೇಡ. 

ಎಲ್ಲೋ ಒಂದು ಮರದಲ್ಲಿ, ಎಲೆಗಳ ಹಿಂದೆ ಒಂದು ಕಾಯಿ ಅವಿತು ಕುಳಿತಿದೆ. ಮನುಷ್ಯನ ಕಣ್ಣಿಗೆ ಬೀಳಲಿಲ್ಲ. ಸ್ವಾಭಾವಿಕವಾಗಿ ಮರದಲ್ಲೇ ಹಣ್ಣಾಯಿತು. ಆಗ ಮರ ಅದನ್ನು ತನ್ನ ಬಳಿ ಇಟ್ಟುಕೊಳ್ಳುವುದಿಲ್ಲ. ಒಂದು ದಿನ "ಇನ್ನು ನೀನು ಹೋಗು" ಎನ್ನುವಂತೆ ಆ ಹಣ್ಣನ್ನು ತಳ್ಳುತ್ತದೆ. ಹಣ್ಣೂ ಸಹ "ಇನ್ನು ನಾನು ಹೋಗಬೇಕು" ಎನ್ನುವಂತೆ ಮರದಿಂದ ಬೇರ್ಪಟ್ಟು ಕೆಳಗೆ ಬೀಳುತ್ತದೆ. ಹೀಗೆ ಬಿದ್ದಾಗ ಮರದಲ್ಲಿ ಹಣ್ಣು ಹುಟ್ಟಿದ ತೊಟ್ಟಿನ ಜಾಗದಲ್ಲಿ ಏನೂ ಗುರುತಿರುವುದಿಲ್ಲ. ಒದ್ದೆ ಇರುವುದಿಲ್ಲ. ರಸ ಸೋರುವುದಿಲ್ಲ. ಹಣ್ಣಿನ ತೊಟ್ಟಿನಲ್ಲೂ ದ್ರವ ಇಲ್ಲ. ಒಣಗಿದ ತೊಟ್ಟು. ಮರಕ್ಕೂ, ಹಣ್ಣಿಗೂ, ಎರಡಕ್ಕೂ ಒಂದು ನಿರ್ವಿಕಾರ ಭಾವ ಇದ್ದಂತೆ! ಬೇರೆ ಆಗುವ ಕಾಲ ಬಂದಿತು. ಬೇರೆಯಾದವು. ಒಂದು ದಿನ ಹಣ್ಣು ಬೀಳಲೇಬೇಕು. ಇಲ್ಲದಿದ್ದರೆ ಮುಂದಿನ ವರುಷ ಹೊಸ ಹಣ್ಣಿನ ಆಗಮನಕ್ಕೆ ದಾರಿಯೆಲ್ಲಿ?

ಅದೇ ಮಿಡಿ ಅಥವಾ ಕಾಯಿ ಕಿತ್ತ ಜಾಗ ನೋಡಿ. ಮರದಲ್ಲಿಯೂ ಹಸಿ ಹಸಿ; ಒಂದು ರೀತಿಯ ಸ್ರಾವ. ಮಿಡಿಯಲ್ಲಿಯೂ ಅಥವಾ ಕಾಯಿಯಲ್ಲಿಯೂ ಅದೇ ರೀತಿಯ ಅಂಟು ಸುರಿಯುತ್ತಿದೆ. ಎರಡಕ್ಕೂ ತಾಯಿ-ಮಗುವನ್ನು ಬಲವಂತದಿಂದ ಬೇರ್ಪಡಿಸಿದ ದುಃಖ. ಇದೊಂದು ಅಕಾಲ ವಿರಹ. ಇದು ಮನುಷ್ಯನಿಗೆ ಬೇಕಾದರೂ ಮರಕ್ಕೆ-ಕಾಯಿಗೆ ಬೇಡವಾದದ್ದು. 

ಭೂಮಿಯ ಮೇಲೆ ಮನುಷ್ಯನಿಗೂ ಪ್ರಕೃತಿಗೂ ಪ್ರಾಯಶಃ ಇದೆ ರೀತಿಯ ಸಂಬಂಧ. ಪೂರ್ತಿ ಜೀವನ ನಡೆಸಿ ಯಾರಾದರೂ ಸತ್ತರೆ ಸಮಾಜವೂ ಅದನ್ನು ಸಹಜವಾಗಿ ಸ್ವೀಕರಿಸುತ್ತದೆ. "ಪೂರ್ಣ ಜೀವನ ನಡೆಸಿದರು. ಬಿಡುಗಡೆ ಆಯಿತು. ಬದುಕಿಕೊಂಡರು" ಅನ್ನುತ್ತಾರೆ ಸುತ್ತಮುತ್ತಲು ಇರುವ ಜನ. ಅರೇ, ಇದೇನಿದು! ಸತ್ತವರನ್ನು ಬದುಕಿಕೊಂಡರು ಅನ್ನುತ್ತಾರಲ್ಲ. ಅದೇ ಪ್ರಪಂಚ. ಆದರೆ ಯಾರಾದರೂ ಅಕಾಲದಲ್ಲಿ ಸತ್ತರೆ ಅದರ ವ್ಯವಹಾರ ಬೇರೆ ರೀತಿಯದು. 

*****

ನಮ್ಮ ಬಾಲ್ಯಕಾಲದಲ್ಲಿ ನಮ್ಮ ಹಿರಿಯರು ಸಂಜೆಯ ಹೊತ್ತು  ಅವರಿಗೆ ತಿಳಿದ ಸ್ತೋತ್ರಗಳನ್ನೋ, ಹಾಡುಗಳನ್ನೋ ಹೇಳಿಕೊಂಡು, ಕೊನೆಯಲ್ಲಿ ಈ ರೀತಿ ಒಂದು ಶ್ಲೋಕ ಹೇಳುತ್ತಿದ್ದರು: 

ಅನಾಯೇಸೇನ ಮರಣಂ ವಿನಾ ದೈನ್ಯೇನ ಜೀವನ೦
ದೇಹಿ ಮೇ ಕೃಪಯಾ ಶಂಭೋ ತ್ವಯಿ ಭಕ್ತಿ೦ ಅಚಂಚಲಂ 

ಈ ಶ್ಲೋಕದಲ್ಲಿ ಅನೇಕ ಪಾಠಾ೦ತರಗಳೂ ಇದ್ದವು. ಕೆಲವರು "ಶಂಭೋ" ಎನ್ನುವ ಬದಲು "ಗೋವಿಂದ" ಎನ್ನುತ್ತಿದ್ದರು. "ವಿನಾ ದೈನ್ಯೇನ ಜೀವನಮ್" ಅನ್ನುವ ಕಡೆ ಅಥವಾ ಮತ್ತೊಂದು ಸಾಲಿನಲ್ಲಿ "ಮಾತೃ ಹಸ್ತೇನ ಭೋಜನಂ" ಎಂದೂ, "ವಿಪ್ರ ಹಸ್ತೇನ ಅಕ್ಷತಾ೦" ಎಂದೂ ಆನ್ನುವವರಿದ್ದರು. ಕೆಲವರು "ಸದಾ ರಾಜಿತ ಗೋವಿಂದಂ" ಅನ್ನುತ್ತಿದ್ದರು. ಒಟ್ಟಿನಲ್ಲಿ "ಇವನ್ನು ಕೊಡು" ಎಂದು ಕೇಳುವ ಒಂದು ಪ್ರಾರ್ಥನೆ. ಇನ್ನೊಬ್ಬರ ಬಳಿ ಯಾಚಿಸುವ, ದೈನ್ಯದ, ಭಿಕಾರಿಭಾವದ ಜೀವನ ಬೇಡ. ತಾಯಿಯ ಕೈಯ ಊಟ ಇರಲಿ. ತಿಳಿದವರ ಸಂಗವಿರಲಿ. ನಿನ್ನಲ್ಲಿ ಧೃಢವಾದ ಭಕ್ತಿ ಇರಲಿ. ಹೀಗೆ ಕೇಳುವುದು. 

ಎಲ್ಲಿಯವರೆಗೆ ತಾಯಿಯ ಕೈಯ ಅನ್ನ ಸಾಧ್ಯ? ತಾಯಿಯೂ ಒಂದು ದಿನ ಹೋಗಲೇಬೇಕಲ್ಲವೇ? ಹಾಗಿದ್ದರೆ ಅವಳ ಸ್ಥಾನದಲ್ಲಿ ತಾಯಿಯಂತಿರುವ ಇನ್ಯಾರೋ ಇರಬಹುದು. ಸಪ್ತಪದಿಯಲ್ಲಿ ಹೇಳುವಂತೆ "ಹತ್ತು ಮಕ್ಕಳನ್ನು ಹೆತ್ತು, ಗಂಡನನ್ನು ಹನ್ನೊಂದನೆಯವನೆಂದು ತಿಳಿ" ಎನ್ನುವಂತೆ ಕಾಪಾಡುವ ಹೆಂಡತಿಯಿರಬಹುದು. ತನ್ನ ಮಕ್ಕಳ ಜೊತೆ ಇನ್ನೊಂದು ಮಗು ಎಂದು ರಕ್ಷಿಸುವ ಮಗಳೋ, ಸೊಸೆಯೋ, ಸೋದರಿಯೋ ಇರಬಹುದು.  ಮಿಕ್ಕ ಭಾಗಗಳು, ಮನವಿಗಳು ಏನಾದರೂ ಇರಲಿ. ಎಲ್ಲಕ್ಕೂ ಮೊದಲಿಗೆ ಬೇಡುವುದು ಅನಾಯಾಸವಾದ ಮರಣ. ಅಂದರೆ ಒದ್ದಾಡಿ, ಹಿಂಸೆ ಅನುಭವಿಸಿ, ಇನ್ನೊಬ್ಬರಿಗೆ ಕಷ್ಟ ಕೊಟ್ಟು, ತಾವೂ ದುಃಖ ಅನುಭವಿಸುವಂತಹ ಸಾವು ಬೇಡ. ಫಟ್ಟಂತ ಪ್ರಾಣ ಹೋಗಲಿ ಎಂದು ಕೋರಿಕೆ. 

ಯಾರಾದರೂ ದೀರ್ಘ ಆಯುಸ್ಸು ಕೇಳುವುದು ಸಹಜ. ಆದರೆ ಸಾವು ಕೇಳಿಕೊಳ್ಳುತ್ತಾರೆಯೇ? ಅದು ಬಂದೇ ಬರುವುದು ಮತ್ತು ಅನಿವಾರ್ಯ ಎಂದಾಗ ಆದಷ್ಟೂ ಕಡಿಮೆ ಕಷ್ಟ ಇರಲಿ ಎಂಬ ಇಚ್ಛೆ. ಎದುರಿನವನು ಹೊಡೆದೇ ಹೊಡೆಯುತ್ತಾನೆ ಅಂದಾಗ ಮೆತ್ತಗೆ ಹೊಡೆಯಲಿ ಎಂದು ಆಶಿಸುವಂತೆ. ಮನುಷ್ಯನ ದೇಹದಿಂದ ಪ್ರಾಣ ಹೊರಗೆ ಹೋಗುವಾಗ ಒಮ್ಮೆಲೇ ಸಾವಿರ ಚೇಳುಗಳು ಕಡಿದಾಗ ಆಗುವಷ್ಟು ನೋವು ಉಂಟಾಗುತ್ತದೆ ಎಂದು "ಗರುಡ ಪುರಾಣ" ಹೇಳುತ್ತದೆ. ಅಂಥದರಲ್ಲಿ ಹೆಚ್ಚು ಕಾಲ ಅದರ ಪ್ರಕ್ರಿಯೆಯಲ್ಲೇ ಕಷ್ಟ ಪಟ್ಟರೆ ಹೇಗೆ? ಅಂತಹ ಹಿಂಸೆ ಉದ್ದವಾಗುವುದು ಬೇಡ ಎಂದು ಈ ರೀತಿ ಕೇಳಿಕೊಳ್ಳುವುದು. 

*****

ಈಗ್ಗೆ ಕೆಲವು ದಿನಗಳಲ್ಲಿ ಎರಡು ವಿಡಿಯೋಗಳು ಎಲ್ಲ ಕಡೆ ಸುತ್ತುತ್ತಿವೆ. ಒಂದರಲ್ಲಿ ಗುಜರಾತಿನ ಒಂದು ಅಂಗಡಿಯಲ್ಲಿ ಕುರ್ಚಿಯಲ್ಲಿ ಕುಳಿತು ಜೊತೆಯವರೊಂದಿಗೆ ಮಾತನಾಡುತ್ತಾ ಕುಳಿತಿರುವಾಗ ನೀರಿನ ಬಾಟಲ್ ತೆಗೆದುಕೊಳ್ಳಲು ಕೈ ಚಾಚಿದ ಯುವಕನೊಬ್ಬ ಬಾಟಲ್ ಕೈ ಜಾರಿ ಕುಳಿತಲ್ಲಿಯೇ ಅಸು ನೀಗುವುದು ಸಿ ಸಿ ಟಿವಿಯಲ್ಲಿ ಕಾಣುವುದು. ಮತ್ತೊಂದು, ಹೃದಯ ವಿದ್ರಾವಕವಾದ ವಿಮಾನ ದುರ್ಘಟನೆಯಲ್ಲಿ 11A ಸೀಟಿನಲ್ಲಿ ಕುಳಿತಿದ್ದ ವಿಶ್ವಾಸ್ ಕುಮಾರ್ ದುರ್ಘಟನೆಯಲ್ಲಿ ಬದುಕುಳಿದ ಏಕಮಾತ್ರ ವ್ಯಕ್ತಿಯಾಗಿ ನಡೆದು ಬಂದು ಆಂಬುಲೆನ್ಸ್ ಏರುತ್ತಿರುವುದು. ಒಂದು ಸಾವು. ಇನ್ನೊಂದು ಸಾವಿನ ದವಡೆಯಿಂದ ಅಧ್ಭುತವಾಗಿ ತಪ್ಪಿಸಿಕೊಂಡು ಬಂದ ಸನ್ನಿವೇಶ. 

ಸುಖ ಮರಣ, ಅಕಾಲ ಮರಣ, ದುರ್ಮರಣ, ಅಪಮೃತ್ಯು, ವೀರಮರಣ, ಇಚ್ಚಾಮರಣ, ಸ್ವಾಭಾವಿಕ ಮರಣ ಅನಾಯಾಸ ಮರಣ ಎನ್ನುವ ಪದಗಳನ್ನು ಮತ್ತೆ ಮತ್ತೆ ಉಪಯೋಗಿಸುತ್ತೇವೆ. ಯಾವುದು ಸರಿ? ಯಾವುದು ತಪ್ಪು? ಮನುಷ್ಯನೇ ಹೋದಮೇಲೆ ಯಾವ ಪದ ಪ್ರಯೋಗಿಸಿದರೆ ಏನು? ಅದಕ್ಯಾಕೆ ಚಿಂತಿಸಬೇಕು? ಹೀಗೆ ಹೇಳಬಹುದು. ಆದರೆ, ಸಾಧ್ಯವಾದಷ್ಟೂ ನಾವು ಸರಿಯಾದ ಪದ ಉಪಯೋಗಿಸಬೇಕಲ್ಲವೇ?

  • ಮೇಲೆ ಚರ್ಚಿಸಿದ ಮಾವಿನ ಮರದಿಂದ ಬಿದ್ದ ಹಣ್ಣಿನಂತೆ ಬಂದ ಮರಣ ಸ್ವಾಭಾವಿಕ ಮರಣ. ಇದು ಆಗಲೇಬೇಕಾಗಿತ್ತು. ಆಯಿತು. ಎಲ್ಲರಿಗೂ ಗೊತ್ತಿತ್ತು. ಹೆಚ್ಚಿನ ವಿಷಾದವಿಲ್ಲ. 
  • ಆಕಸ್ಮಿಕವಾದ ದುರ್ಘಟನೆಯಲ್ಲಿ  ಸಾವು ಬಂದರೆ ದುರ್ಮರಣ. ಅತ್ಯಂತ ಅನಿರೀಕ್ಷಿತ. 
  • ಎಲ್ಲರಂತೆ ರಾತ್ರಿ ಮಲಗಿದರು. ಬೆಳಗ್ಗೆ ಏಳಲಿಲ್ಲ. ತುಂಬು ಜೀವನ ನಡೆಸಿದ ಸಜ್ಜನ. ಇದು ಸ್ವಾಭಾವಿಕವಾದ ಅನಾಯಾಸ ಮರಣ. 
  • ಚೆನ್ನಾಗಿಯೇ ಇದ್ದರು. ಒಂದೇ ಕ್ಷಣದಲ್ಲಿ ಹೋದರು. ಗೊತ್ತೇ ಆಗಲಿಲ್ಲ. ಖಾಯಿಲೆ-ಕಸಾಲೆ ಇಲ್ಲ. ಪೂರ್ತಿ ಜೀವನ ನಡೆಸಿದರು. ಹಿಂಸೆ ಅನುಭವಿಸಲಿಲ್ಲ. ಇದು ಸುಖ ಮರಣ. 
  • ದೇಶಕ್ಕಾಗಿ, ಸಮಾಜಕ್ಕಾಗಿ ಹೋರಾಡುತ್ತ ಜೀವ ತೆತ್ತರು. ಇನ್ನೊಬ್ಬರ ರಕ್ಷಣೆಗಾಗಿ ಪ್ರಾಣ ಪಣವಾಗಿಟ್ಟವರು. ಇದು ವೀರಮರಣ. "ಹುತಾತ್ಮ" ಎಂದು ಹೇಳಲು ಯೋಗ್ಯವಾದದ್ದು. 
  • ಇನ್ನೂ ಬದುಕಿ ಬಾಳಬೇಕಾದ ವಯಸ್ಸು. ಸಾವು ಬಂದಿತು. ಹೆಚ್ಚಿನ ನೋವಿನ ಸಂಗತಿ. ಇದು ಅಕಾಲಿಕ ಮರಣ. 
  • ಎಲ್ಲ ದೃಷ್ಟಿಯಿಂದ ನೋಡಿದರೂ ಈ ಸಾವು ಬರಬಾರದಿತ್ತು. ಬಂದುಬಿಟ್ಟಿತು. ಇದು ಅಪಮೃತ್ಯು. ಅಕಾಲ ಮರಣ. 
  • ತಾವು ಹುಟ್ಟಿ ಬಂದು ಸಾಧಿಸಬೇಕಾದ ಕೆಲಸವಾಯಿತು. ಇನ್ನು ಬದುಕು ಸಾಕು. ಹೀಗೆಂದು ಸಾವನ್ನಪ್ಪಿದವರು ಇಚ್ಚಾಮರಣಿಗಳು. ಯಾವಾಗ ದೇಹ ಬಿಡಬೇಕೆಂದು ಅವರೇ ನಿರ್ಧರಿಸುವ ಮಹಾನುಭಾವರು. 
ಇನ್ಯಾವುದಾದರೂ ಸಾವಿನವರ್ಗವಿದ್ದರೆ ಸೇರಿಸಿಕೊಳ್ಳಬಹುದು. 

*****

ಒಬ್ಬ ದೊಡ್ಡ ರಾಜಕೀಯ ನಾಯಕರು. ಬಹುಕಾಲ ಅಧಿಕಾರದಲ್ಲಿದ್ದವರು. ಆ ಸಮಯದಲ್ಲಿ ಲೂಟಿ ಹೊಡೆದು ಏಳು ತಲೆಮಾರಿಗೆ ಸಾಕಾಗುವಷ್ಟು ಆಸ್ತಿ ಮಾಡಿದರು. ಎಲ್ಲರನ್ನೂ ಗೋಳು ಹೊಯ್ದುಕೊಂಡು ದರ್ಪದಿಂದ ಮೆರೆದವರು. ಮೂರು ವರುಷ ಹಾಸಿಗೆ ಹಿಡಿದಿದ್ದರು. ಕಡೆಗೆ ಸತ್ತರು. ಪುಣ್ಯಕ್ಕೆ ಇನ್ನು ಮುಂದೆ ಯಾರಿಗೂ ತೊಂದರೆ ಮಾಡಲಾಗದು. 

ಸುದ್ದಿ ಕೇಳಿದ ಕೂಡಲೇ ಇತರ ರಾಜಕೀಯ ನಾಯಕರು, ಅವರ ಭಟ್ಟಂಗಿಗಳು ತಮ್ಮ ತಮ್ಮ ಹೇಳಿಕೆ ಕೊಟ್ಟರು. "ತುಂಬಲಾರದ ನಷ್ಟ" ಅಂದರು ಒಬ್ಬರು. "ಸಮಾಜ ಬಡವಾಯಿತು" ಅಂದರು ಇನ್ನೊಬ್ಬರು. "ನಾವು ಪರದೇಶಿಗಳಾದೆವು" ಎಂದು ಹೇಳಿದರು ಮಗದೊಬ್ಬರು. ಹೀಗೆ ಸಂತಾಪ ಸೂಚಕ ಸಂದೇಶಗಳ ಸುರಿಮಳೆ. 

ಇದು ಯಾವ ರೀತಿಯ ಮರಣ? ಯಾವ ರೀತಿಯದು ಎಂದು ಹೇಳದಿರುವುದೇ ಒಳ್ಳೆಯದು. ಆದರೆ ಮನಸ್ಸಿನಲ್ಲಿಯೇ ಸಂತಾಪ ಸೂಚಕ ಸಂದೇಶಗಳ ಹಿನ್ನೆಲೆಯಲ್ಲಿ "ವಿಚಿತ್ರ ಮರಣ" ಎಂದುಕೊಳ್ಳಬಹುದು.  

Wednesday, June 11, 2025

ದೊಡ್ಡವರ ಅನುಗ್ರಹ


ಇಂದಿಗೆ ಸರಿಯಾಗಿ ನಲವತ್ತು ವರುಷಗಳ ಹಿಂದಿನ ಮಾತು. ಆಗ ಇಸವಿ 1985, ಜೂನ್ ತಿಂಗಳ ಮೊದಲ ಭಾಗ. 

ಕನ್ನಡದ ಖ್ಯಾತ ಸಾಹಿತಿ ಶ್ರೀ ಸಿ. ಕೆ. ನಾಗರಾಜ ರಾವ್ ಅವರ ಪ್ರಸಿದ್ಧ ಬೃಹತ್ ಚಾರಿತ್ರಿಕ ಕಾದಂಬರಿ (2,200 ಪುಟಗಳ ವಿಸ್ತಾರ) "ಪಟ್ಟಮಹಾದೇವಿ ಶಾಂತಲದೇವಿ" ಕೃತಿಗೆ "ಭಾರತೀಯ ಜ್ಞಾನಪೀಠ" ಹೊಸದಾಗಿ ಸ್ಥಾಪಿಸಿದ್ದ "ಮೂರ್ತಿದೇವಿ ಸಾಹಿತ್ಯ ಪ್ರಶಸ್ತಿ" ಲಭಿಸಿತ್ತು. 1983ರಲ್ಲಿ ಪ್ರಾರಂಭಿಸಿದ ಈ ಪ್ರಶಸ್ತಿಯ ಮೊದಲ ಕೊಡುಗೆ ಕನ್ನಡಕ್ಕೆ ಸಂದಿತ್ತು. ಪ್ರಶಸ್ತಿ 1983ನೆಯ ವರುಷದ್ದಾದರೂ, ಅದನ್ನು ಘೋಷಿಸಿ, ನಂತರ ಸಮಾರಂಭ ನಡೆಸಿ, ಪ್ರಶಸ್ತಿ ಪ್ರದಾನ ನಡೆದುದು ಮೇ 12, 1985 ರಂದು, ನವದೆಹಲಿಯಲ್ಲಿ. ಅಂದಿನ ಭಾರತ ಕೇಂದ್ರ ಸರ್ಕಾರದ "ವಾರ್ತಾ ಮಾತು ಪ್ರಸಾರ" ಖಾತೆಯ ಮಂತ್ರಿಗಳಾಗಿದ್ದ ಶ್ರೀ ವಿ.ಏನ್. ಗಾಡ್ಗಿಲ್ ಅವರು ಆ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿದ್ದರು. ನಂತರದ ದಿನಗಳಲ್ಲಿ ಖ್ಯಾತ ಸಾಹಿತಿ ಮತ್ತು ಪ್ರಾಧ್ಯಾಪಕರಾಗಿದ್ದ ಪ್ರೊ. ಎಲ್. ಎಸ. ಶೇಷಗಿರಿ ರಾವ್ ಅವರು ಕನ್ನಡ ಪತ್ರಿಕೆಯೊಂದರಲ್ಲಿ "ಮೂರ್ತಿದೇವಿಯ ಪ್ರಥಮಾನುಗ್ರಹ" ಎನ್ನುವ ಶೀರ್ಷಿಕೆಯಲ್ಲಿ ಲೇಖನವೊಂದನ್ನು ಬರೆದಿದ್ದರು. 

ಭಾತತೀಯ ಉದ್ಯಮ ಕ್ಷೇತ್ರದಲ್ಲಿ ಮತ್ತು ಸಾಂಸ್ಕೃತಿಕ-ಸಾಮಾಜಿಕ ದತ್ತಿ-ಪುದುವಟ್ಟುಗಳಲ್ಲಿ "ಸಾಹು ಜೈನ ಕುಟುಂಬ" ಒಂದು ದೊಡ್ಡ ಹೆಸರು. ಸಾಹು ಶ್ರೇಯಾಂಸ್ ಪ್ರಸಾದ್ ಜೈನ್ ಮತ್ತು ಸಾಹು ಶಾಂತಿ ಪ್ರಸಾದ್ ಜೈನ್ ಅಣ್ಣ-ತಮ್ಮಂದಿರು. ಶ್ರೇಯಾಂಸ್ ಪ್ರಸಾದ್ ಜೈನ್ ರಾಜ್ಯಸಭಾ ಸದಸ್ಯರಾಗಿದ್ದರು (1952-58) ಮತ್ತು ಕೆಲವು ಕಾಲ ಪಂಜಾಬ್ ನ್ಯಾಷನಲ್ ಬ್ಯಾಂಕ್ ಅಧ್ಯಕ್ಷರಾಗಿಯೂ ಇದ್ದರು (1953-54). ಶಾಂತಿ ಪ್ರಸಾದ್ ಜೈನ್ ಅವರೂ ಪಂಜಾಬ್ ನ್ಯಾಷನಲ್ ಬ್ಯಾಂಕ್ ಅಧ್ಯಕ್ಷರಾಗಿದ್ದರು (1954-59). "ಟೈಮ್ಸ್  ಆಫ್ ಇಂಡಿಯಾ" ಸಮೂಹಕ್ಕೆ ಶಾಂತಿ ಪ್ರಸಾದ್ ಜೈನ್ ಒಡೆಯರಾಗಿದ್ದರು. ಇವರಿಬ್ಬರ ತಾಯಿಯವರ ಹೆಸರು "ಮೂರ್ತಿ ದೇವಿ" ಎಂದು. ತಮ್ಮ ತಾಯಿಯ ನೆನಪಾಗಿ ಶಾಂತಿ ಪ್ರಸಾದ್ ಜೈನ್ ಅವರು ತಮ್ಮ ಭಾರತೀಯ ಜ್ಞಾನಪೀಠ ಸಂಸ್ಥೆಯ ಮೂಲಕ "ಮೂರ್ತಿ ದೇವಿ ಸಾಹಿತ್ಯ ಪ್ರಶಸ್ತಿ" ಪ್ರಾರಂಭಿಸಿದರು. "ಮೂರ್ತಿ ದೇವಿ" ಅಂದರೆ ಜೈನ ಸಂಪ್ರದಾಯದಲ್ಲಿ ವಿಶೇಷವಾಗಿ ಆರಾಧಿಸುವ ಸರಸ್ವತಿ. ("ಮೂರ್ತಿ ದೇವಿ ಗ್ರಂಥಮಾಲಾ" ಎನ್ನುವ ಹೆಸರಿನಲ್ಲಿ ಅನೇಕ ಪುಸ್ತಕಗಳ ಪ್ರಕಟಣೆ ಕೂಡ ಉಂಟು). ಈ ಸರಸ್ವತಿಯ ಮೊದಲ ಅನುಗ್ರಹ ಸಿ. ಕೆ. ನಾಗರಾಜ ರಾಯರಿಗೆ ದೊರಕಿತು. 

ಮೇಲೆ ಕೊಟ್ಟಿರುವ ಚಿತ್ರ ನಾಗರಾಜ ರಾಯರಿಗೆ ಆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನೀಡಿದ "ಪ್ರಶಸ್ತಿ ಮೂರ್ತಿ" ಛಾಯಾಚಿತ್ರ.  ಇದರೊಂದಿಗೆ ಪಂಚಲೋಹದ "ಉಲ್ಲೇಖ" (Citation) ಸಹ ಇತ್ತು. 

*****

ಅಂದು, ನಲವತ್ತು ವರುಷಗಳ ಹಿಂದೆ, ನಾಗರಾಜ ರಾಯರ ಬನಶಂಕರಿ ಮೂರನೆಯ ಹಂತದ ಮನೆಗೆ ಹೋದಾಗ ಅವರು ತಮ್ಮ ಮನೆಯ ಗ್ಯಾರೇಜ್ ಪುಸ್ತಕಾಲಯದ ಮೂಲೆಯಲ್ಲಿ ಗೌರಿ-ಗಣೇಶ ಮೂರ್ತಿಗಳನ್ನು ಮಾಡುತ್ತಿದ್ದರು. ತಮ್ಮ ಬಾಲ್ಯದಿಂದಲೂ ಅವರು ಪ್ರತಿ ವರುಷ ಹೀಗೆ ತಾವೇ ಮಣ್ಣಿನ ಮೂರ್ತಿಗಳನ್ನು ಮಾಡಿ ಪೂಜಿಸುತ್ತಿದ್ದುದು ಅವರ ಮನೆಯಲ್ಲಿ ನಡೆದು ಬಂದ ಸಂಪ್ರದಾಯ. ಕೆಲವು ದಿನಗಳ ಹಿಂದೆ ಕಗ್ಗಲೀಪುರದ ಕೆರೆಯ ಅಂಗಳದಿಂದ ಮೂರ್ತಿಗಳ ತಯಾರಿಕೆಗಾಗಿ ಬೇಕಾದ ಮಣ್ಣು ತಂದಿದ್ದೆವು. ಸರಿಯಾದ ಮಣ್ಣಿನ ಮೂರ್ತಿಗಳನ್ನು ಮಾಡುವುದು ಕಡಬು-ಒಬ್ಬಟ್ಟು ಮಾಡುವುದಕ್ಕಿಂತ ಪ್ರಯಾಸದ ಕೆಲಸ! ಮೊದಲು ಮಣ್ಣು ಕುಟ್ಟಿ, ಹದಮಾಡಿ, ಜರಡಿ ಹಿಡಿದು ಸೋಸಬೇಕು. ನಂತರ ಹಿತಪ್ರಮಾಣದಲ್ಲಿ ನೀರು ಮತ್ತು ಹತ್ತಿ ಸೇರಿಸಿ ಸಂಸ್ಕರಿಸಬೇಕು. ಪೀಠ ಹುಡುಕಿ ಕ್ರಮೇಣ ಅದರ ಮೇಲೆ ಮಣ್ಣಿನ ಉಂಡೆಗಳಿಂದ ತಿದ್ದಿ ತಿದ್ದಿ ಆಕಾರ ಕೊಡಬೇಕು. ಒಮ್ಮೆಲೇ ಮಾಡಿ ಮುಗಿಸುವ ಹಾಗಿಲ್ಲ. ಹಾಗೆ ಮಾಡಿದರೆ ಬಿರುಕುಗಳು ಬಂದುಬಿಡುತ್ತವೆ. ನೆರಳಿನಲ್ಲಿ ಇಟ್ಟು ನಿಧಾನವಾಗಿ ಒಣಗಿಸುತ್ತಾ ಮುಂದುವರೆಸಬೇಕು. ಮುಂದೆ ಸೂಕ್ತವಾದ ಬಣ್ಣಗಳನ್ನು ಹಚ್ಚಬೇಕು. ಆಮೇಲೆ ಬಣ್ಣ-ಬಣ್ಣದ ವರ್ತಿ, ಲಕ್ಕಿ ಮುಂತಾದುವುಗಳಿಂದ ಅಲಂಕರಿಸಬೇಕು. ಹೀಗೆ, ಹಂತ ಹಂತವಾಗಿ ಮಾಡಬೇಕು. 

ಗೌರಿಯ ಮೂರ್ತಿ ಮಾಡುವುದು ಹೆಚ್ಚು-ಕಡಿಮೆ ಮುಗಿದಿತ್ತು. ಕಿರೀಟ, ಒಲೆಗಳು, ಮೂಗುತಿ, ಮಾಂಗಲ್ಯ, ಸರಗಳು, ಬಳೆಗಳು, ತುರುಬಿನ ಕೂದಲ ಶೃಂಗಾರ, ಸೀರೆ, ರವಿಕೆ ಇವುಗಳ ಆಕಾರ ಮುಗಿದಿತ್ತು. ಮುಂದೆ ಕ್ರಮವಾಗಿ ಸೂಕ್ತವಾದ ಬಣ್ಣಗಳನ್ನು ಹಚ್ಚಿ ಸಿಂಗರಿಸುವುದು ಬಾಕಿ. ಗಣೇಶನ ಮೂರ್ತಿ ಇನ್ನೂ ಪ್ರಾರಂಭದ ಹಂತದಲ್ಲಿತ್ತು. 

"ಗೌರಮ್ಮ ಚೆನ್ನಾಗಿದ್ದಾಳೆ. ಎದ್ದು ಬರುವಂತಿದ್ದಾಳೆ" ಎಂದೆ. 
"ಹೌದು. ಈ ಸಲ ಹೊಸ ಫ್ಯಾಷನ್ನಿನ ಜರಿ ಸೀರೆ ಉಟ್ಟಿದ್ದಾಳೆ. ಬಣ್ಣ ಹಾಕಿದ ಮೇಲೆ ಗೊತ್ತಾಗುತ್ತದೆ" ಅಂದರು. ಮಾತು ಮುಂದುವರೆಯಿತು. 

"ಮೂರ್ತಿದೇವಿಯ ಪ್ರಥಮಾನುಗ್ರಹ ಲೇಖನ ಓದಿದೆ. ಚೆನ್ನಾಗಿ ಬರೆದಿದ್ದಾರೆ" 
"ಶೇಷಗಿರಿ ರಾಯರಿಗೆ ನನ್ನ ಕಾದಂಬರಿ ರಚನೆಯ ವಿವರಗಳೆಲ್ಲ ಗೊತ್ತು. ಅದರ ರಚನೆಯ ಹಿಂದಿನ ಶ್ರಮ ತಿಳಿದವರು ಅವರು. ಸಹೃದಯರು. ಪುಸ್ತಕದ ಮೇಲಿನ ವಿಚಾರ ಸಂಕಿರಣ ಸಮಾರಂಭಗಳಲ್ಲಿ ಭಾಷಣ ಮಾಡಿರುವವರು. ಅಭಿಮಾನದಿಂದ ಬರೆದಿದ್ದಾರೆ"
"ಅನುಗ್ರಹ" ಅನ್ನುವ ಪದದ ಬಳಕೆ, ಈ ಹಿನ್ನೆಲೆಯಲ್ಲಿ ಸರಸ್ವತಿಯ ಅನುಗ್ರಹದ ಸಂಕೇತವೋ?"
"ಹಾಗೆ ಅಂದುಕೊಳ್ಳಬಹುದು. ಸರಸ್ವತಿ ಅನುಗ್ರಹ ಸಿಕ್ಕಿತು. ಹಿಂದೊಮ್ಮೆ ತಾಯಿ ಶಾರದೆಯ ಅನುಗ್ರಹ ಸ್ವಲ್ಪದರಲ್ಲಿ ತಪ್ಪಿತ್ತು. ಈಗ ಸರಸ್ವತಿಯ ರೂಪದಲ್ಲಿ ಬಂದಿದೆ ಅನ್ನಬಹುದು"
"ಹಿಂದೆ ಹೇಗೆ ತಪ್ಪಿತು? ಅದರ ವಿವರವೇನು?'

ನಾಗರಾಜರಾಯರು ತಮ್ಮ ಜೀವನದ (ಅಂದಿಗೆ) ಮೂವತ್ತು ವರುಷಗಳ ಹಿಂದಿನ ಪ್ರಸಂಗವನ್ನು ವಿವರಿಸಿದರು. ಅವರದೇ ಮಾತಿನಲ್ಲಿ ವಿವರಣೆ ಹೀಗಿತ್ತು. 

***** 

"ನನಗೂ ಬೇಲೂರು-ಹಳೇಬೀಡಿಗೂ ಒಂದು ವಿಶೇಷ ಸಂಬಂಧ. ಬೇಲೂರು-ಹಳೇಬೀಡು ದೇವಾಲಯಗಳನ್ನು ಹಿಂದೆ ನೋಡಿದ್ದರೂ ಹೆಚ್ಚಿನ ಗಮನ ಹರಿಸಿದ್ದು ಮಾನ್ಯ ಡಿ. ವಿ. ಗುಂಡಪ್ಪ ಅವರ "ಅಂತಃಪುರ ಗೀತೆಗಳು" ಪ್ರಕಟಣೆಯ ಸಂದರ್ಭದಲ್ಲಿ. ಆ ಪುಸ್ತಕ ಅಚ್ಚಾಗುವಾಗ ಅದರಲ್ಲಿ ಸಂಬಂಧಿಸಿದ ಶಿಲಾಬಾಲಿಕೆಯರ ಪಡಿಯಚ್ಚು (ಫೋಟೋ) ಹಾಕಬೇಕಿತ್ತು. ಫೋಟೋಗ್ರಫಿಯಲ್ಲಿ ನನಗೆ ಹೆಚ್ಚಿನ ಆಸಕ್ತಿ ಇದ್ದ ವಿಷಯ ತಿಳಿದಿದ್ದ ಗುಂಡಪ್ಪನವರು ನನಗೆ ಆ ಕೆಲಸ ವಹಿಸಿದರು. ಆಗ ಎರಡು ಮೂರು ದಿನ ಬೇಲೂರಿನಲ್ಲೇ ವಾಸ್ತವ್ಯ ಹೂಡಿ ಚಿತ್ರಗಳನ್ನು ಬೇರೆ ಬೇರೆ ಕೋಣಗಳಿಂದ ತೆಗೆಯಬೇಕಾಯಿತು. ನಂತರ ನನಗೆ "ಕನ್ನಡ ಸಾಹಿತ್ಯ ಪರಿಷತ್ತು" ಗೌರವ ಕಾರ್ಯದರ್ಶಿ ಆಗಿ ಕೆಲಸ ಮಾಡುವ ಸುಯೋಗ ಕೊಟ್ಟಿತು. ಹಾಸನ-ಚಿಕ್ಕಮಗಳೂರುಗಳಲ್ಲಿ "ಕರ್ನಾಟಕ ಸಂಘ" ಅಷ್ಟು ಕಾರ್ಯಶೀಲವಾಗಿರಲಿಲ್ಲ. ಈ ಕೆಲಸ ನಿಮಿತ್ತವಾಗಿ ಅನೇಕ ಸಲ ಬೇಲೂರು ಸುತ್ತಮುತ್ತ ಓಡಾಡಬೇಕಾಯಿತು. ನಾನು ಗೌರವ ಕಾರ್ಯದರ್ಶಿಯಾದ ಎರಡು-ಮೂರು ವರ್ಷಗಳಲ್ಲಿ, 1952 ಇಸವಿಯಲ್ಲಿ "ಕನ್ನಡ ಸಾಹಿತ್ಯ ಸಮ್ಮೇಳನ" ಬೇಲೂರಿನಲ್ಲಿ ನಡೆಯಿತು. ಆಗಂತೂ ಕೆಲವು ದಿನ ಬೇಲೂರಿನಲ್ಲೇ ಇದ್ದು ಕೆಲಸ ಮಾಡಬೇಕಾಗಿತ್ತು."

"ಶೃಂಗೇರಿ ನಮ್ಮ ನಾಡಿನ ಹೆಮ್ಮೆಯ ಧಾರ್ಮಿಕ-ಶೈಕ್ಷಣಿಕ-ಸಾಂಸ್ಕೃತಿಕ ಕೇಂದ್ರ. ಆಗ ಶ್ರೀ ಶ್ರೀ ಚಂದ್ರಶೇಖರ ಭಾರತೀ ಸ್ವಾಮಿಗಳು ಪೀಠಾಧಿಪತಿಗಳು. ಅವರು ಮಹಾತಪಸ್ವಿಗಳು ಮತ್ತು ಶಿಷ್ಯವತ್ಸಲರು ಎಂದು ಗುರುತಿಸಲ್ಪಟ್ಟವರು. ಹೀಗೆ ಬೇಲೂರು-ಚಿಕ್ಕಮಗಳೂರು ಸುತ್ತಮುತ್ತ ಓಡಾಡುವಾಗ ಸಾಧ್ಯವಾದಾಗಲೆಲ್ಲ ಅವರ ಸಂದರ್ಶನ ಪಡೆಯುವ ಅವಕಾಶವಿತ್ತು. 1912ರಲ್ಲಿ ಪೀಠಾರೋಹಣ ಮಾಡಿದ ಅವರು ಮುಂದಿನ 42 ವರ್ಷಕಾಲ ಪೀಠವನ್ನು ನಡೆಸಿದವರು."

"1954ನೆಯ ಇಸವಿ ಆಗಸ್ಟ್ ತಿಂಗಳ ಕೊನೆಯ ದಿನ ಹೀಗೆ ಶೃಂಗೇರಿ ತಲುಪಿದಾಗ ರಾತ್ರಿಯಾಗಿತ್ತು. ಜೊತೆಯಲ್ಲಿ ಸ್ನೇಹಿತರಿದ್ದರು. ಮಾರನೆಯ ಬೆಳಿಗ್ಗೆ ಬೇಗ ಶಾರದಾ-ಚಂದ್ರಮೌಳೇಶ್ವರರ ದರ್ಶನ ಮಾಡಿದ ನಂತರ ಶ್ರೀಗಳ ಸಂದರ್ಶನ ಸಿಕ್ಕಿತು. ಹೊರಡಲು ಅನುಮತಿ ಬೇಡಿದಾಗ "ಏನು ಆತುರ? ಮಧ್ಯಾನ್ಹದವರೆಗೆ ಇದ್ದು ಪೂಜೆಯ ನಂತರ ಪ್ರಸಾದ ಸ್ವೀಕರಿಸಿ ಹೊರಡಬಹುದಲ್ಲ" ಅಂದರು. "ಇಲ್ಲ. ಬೆಳಗಾದರೆ ಗೌರಿ-ಗಣೇಶ ಹಬ್ಬಗಳು. ಮನೆಗೆ ಹೊರಊರುಗಳಿಂದ ಅತಿಥಿಗಳು ಬರುವವರಿದ್ದಾರೆ. ಸಂಜೆಯೊಳಗೆ ಬೆಂಗಳೂರು ಸೇರಬೇಕು. ನವರಾತ್ರಿ ಉತ್ಸವ ಸಂದರ್ಭದಲ್ಲಿ ಮತ್ತೆ ದರ್ಶನ ಪಡೆಯುತ್ತೇವೆ" ಎಂದೆವು. "ನವರಾತ್ರಿ ಉತ್ಸವಕ್ಕೆ ಬರುವುದೇನೋ ಒಳ್ಳೆಯದೇ. ಅಮಾವಾಸ್ಯೆಗೆ ಮುಂಚೆ ಬರುತ್ತೀರೋ ಅಥವಾ ಆಚೆಗೂ?' ಅಂದರು. "ಆದಷ್ಟೂ ಬೇಗ ತಮ್ಮ ದರ್ಶನ ಪಡೆಯುತ್ತೇವೆ" ಎಂದೆವು. ನಸುನಕ್ಕು ಫಲಗಳನ್ನು ಕೊಟ್ಟು ಆಶೀರ್ವದಿಸಿದರು."

"ಸೆಪ್ಟೆಂಬರ್ 25ನೆಯ ತಾರೀಖು ಭಾನುವಾರ. ತುಂಗೆಯು ತುಂಬಿ ಹರಿಯುತ್ತಿದ್ದಳು. ಶ್ರೀಗಳು ಶಿಷ್ಯನ ಜೊತೆ ಬೆಳಿಗ್ಗೆ ನದಿಸ್ನಾನಕ್ಕೆ ಹೊರಟರಂತೆ. ನದಿಯ ಮಧ್ಯೆ ನಡೆದ ಶ್ರೀಗಳು ಒಮ್ಮೆ ಮುಳುಗು ಹಾಕಿ ಮತ್ತೊಮ್ಮೆ ನೀರಿನಲ್ಲಿ ಹೋದವರು ಮೇಲೆ ಬರಲಿಲ್ಲ. ಶಿಷ್ಯನೂ ಅವರನ್ನು ಹುಡುಕುತ್ತ ಮುಳುಗು ಹಾಕಿದನು. ಇದನ್ನು ನೋಡಿದ ಮತ್ಯಾರೋ ನದಿಗೆ ಧುಮಿಕಿದರು. ಸ್ವಲ್ಪ ಕೆಳಗೆ ಶ್ರೀಗಳ ದೇಹ ಸಿಕ್ಕಿತು. ಪದ್ಮಾಸನ ಹಾಕಿ ಧ್ಯಾನಮುದ್ರೆಯಲ್ಲಿದ್ದ ಶರೀರ. ನೀರಲ್ಲಿ ಮುಳುಗಿದಂತೆ, ನೀರು ಕುಡಿದು ದೇಹತ್ಯಾಗವಾಗಿರಲಿಲ್ಲ. ನೀರಿಂದ ಹೊರಬರಲು ಪ್ರಯಾಸ  ಇರಲಿಲ್ಲ. ಯಾವ ಹೊಡೆದಾಟವೂ ಇಲ್ಲ. ಧ್ಯಾನಮಗ್ನರಾಗಿ ಸ್ವಇಚ್ಛೆಯಿಂದ ಜೀವನ್ಮುಕ್ತಿ ಪಡೆದಂತೆ ಇತ್ತಂತೆ."

"ಅಮಾವಾಸ್ಯೆಗೆ ಮೊದಲು ಶೃಂಗೇರಿಗೆ ಹೋಗಿದ್ದರೆ ಅವರ ಸಾನ್ನಿಧ್ಯದಲ್ಲಿ ಶಾರದೆಯ ಅನುಗ್ರಹ ಸಿಗುತ್ತಿತ್ತು. ಸ್ವಲ್ಪದರಲ್ಲಿ ತಪ್ಪಿಹೋಯಿತು."

"ಶ್ರೀಗಳವರಿಗೆ ಭಾನುವಾರ ಬಹಳ ವಿಶೇಷವಂತೆ. ಭಾನುವಾರ ಜನನ. ಭಾನುವಾರ ಉಪನಯನ. ಭಾನುವಾರ ಸನ್ಯಾಸ ಸ್ವೀಕಾರ. ಮಹಾಲಯ ಅಮಾವಾಸ್ಯೆಯಂದು (ನವರಾತ್ರಿ ಉತ್ಸವ ಪ್ರರಂಭದ ಹಿಂದಿನ ದಿನ) ಭಾನುವಾರವೇ ಜೀವನ್ಮುಕ್ತಿ."

*****

"ದೊಡ್ಡವರು ಕೆಲವೊಂದು ವಿಚಾರಗಳನ್ನು ಸೂಕ್ಷ್ಮವಾಗಿ ಹೇಳುತ್ತಾರೆ. ನಾವು ಅದನ್ನು ತಿಳಿದುಕೊಂಡು ವ್ಯವಹರಿಸಬೇಕು." ಎಂದು ಅಂದು ನಾಗರಾಜರಾಯರು ಹೇಳಿದ ಮಾತು ಅನೇಕ ವೇಳೆ ನಮ್ಮಗಳ ಜೀವನದ ಅನುಭವದಲ್ಲಿ ಬಂದಿರುತ್ತದೆ. ಆದರೆ ಬಹಳ ಬೇಗ ಅದರ ಪ್ರಾಮುಖ್ಯತೆ ಮರೆತೂ ಹೋಗುತ್ತದೆ!

Sunday, June 8, 2025

ತುಪ್ಪದ ಬಿಂದಿಗೆ


ಈ ಹಿಂದಿನ ಸಂಚಿಕೆಯಲ್ಲಿ, "ಮಾಡು ಸಿಕ್ಕದಲ್ಲಾ, ಮಾಡಿನ ಗೂಡು ಸಿಕ್ಕದಲ್ಲಾ" ಎನ್ನುವ ಶೀರ್ಷಿಕೆಯಡಿ, ಶ್ರೀ ಪುರಂದರದಾಸರ ಇದೇ ಸಾಲಿನಿಂದ ಪ್ರಾರಂಭವಾಗುವ ಹಾಡಿನ ಬಗ್ಗೆ ವಿಚಾರ ಮಾಡಿದ್ದೆವು. ಚರ್ಚೆ ಸ್ವಲ್ಪ ದೀರ್ಘವಾಯಿತೇನೋ ಎನ್ನುವ ಅನುಮಾನವಿತ್ತು, ಕೆಲವು ವೇಳೆ ವಿಷಯಗಳ ವಿವರಣೆ ಕೊಡುವ ಕಾಲದಲ್ಲಿ, ಓದುಗರಿಗೆ ಅಥವಾ ಎದುರು ಕುಳಿತಿರುವವರಿಗೆ ಹೇಳುತ್ತಿರುವ ವಿಷಯ ಅರ್ಥವಾಗಿದ್ದರೂ ಅದನ್ನೇ ಇನ್ನಷ್ಟು ಮುಂದುವರೆಸುವುದು ಲೇಖಕರ ಅಥವಾ ಹೇಳುವವರ ದೋಷಗಳಲ್ಲಿ ಒಂದು ಎಂದು ಗುರುತಿಸುತ್ತಾರೆ. ಅನೇಕ ಓದುಗರ ಪ್ರತಿಕ್ರಿಯೆಯಿಂದ ಅಲ್ಲಿನ ವಿವರಣೆ ದೀರ್ಘವೇನೂ ಆಲ್ಲವೆಂದು ಸಾಂತ್ವನ ದೊರೆತಿದೆ. ಇದಲ್ಲದೆ, "ತುಪ್ಪದ ಬಿಂದಿಗೆ" ಮತ್ತು  "ಆಗ ನೆನೆಯಲಿಲ್ಲ" ಎನ್ನುವ ಎರಡು ಉಕ್ತಿಗಳ ಬಗ್ಗೆ ಇನ್ನೂ ಸ್ವಲ್ಪ ವಿವರ ಬೇಕೆಂದು ಮಿತ್ರರೊಬ್ಬರು ಕೇಳಿದ್ದಾರೆ. ("ಮಾಡು ಸಿಕ್ಕದಲ್ಲಾ, ಮಾಡಿಗೆ ಗೂಡು ಸಿಕ್ಕದಲ್ಲಾ" ಎನ್ನುವ ಸಂಚಿಕೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.) ಅದು ತುಪ್ಪದ ಬಿಂದಿಗೆ ಏಕಾಯಿತು? ಅಕ್ಕಿಯ ಮೂಟೆ ಏಕಾಗಲಿಲ್ಲ? "ಆಗ ನೆನೆಯಲಿಲ್ಲ" ಎಂದು ಈಗ ಹೇಳುವುದಾದರೂ ಏಕೆ? 

ದಾಸರು "ತುಪ್ಪದ ಬಿಂದಿಗೆ" ಮತ್ತು "ಆಗ ನೆನೆಯಲಿಲ್ಲ" ಎನ್ನುವ ಎರಡೂ ಉಕ್ತಿಗಳನ್ನು ಸಾಂಕೇತಿಕವಾಗಿ ಉಪಯೋಗಿಸಿದ್ದಾರೆ. "ತುಪ್ಪದ ಬಿಂದಿಗೆ" ಅನ್ನುವುದು ಈ ಮನುಷ್ಯ ಜನ್ಮ ಮತ್ತು ಶರೀರವನ್ನು ನಿರ್ದೇಶಿಸಿ ಹೇಳಿರುವುದು. "ಆಗ ನೆನೆಯಲಿಲ್ಲ" ಎನ್ನುವುದು ಈ ಜನ್ಮದ ಕಾಲಮಾನದ ದೃಷ್ಟಿಯಿಂದ ಹೇಳಿರುವಂಥದು. ಈ ಕೃತಿ ರಚನೆ ಮಾಡುವಾಗ ದಾಸರು ಜೀವನದ ಬಹುಕಾಲ ಕಳೆದುಹೋಗಿದ್ದರೂ ಸಹ ಇನ್ನೂ ಲೌಕಿಕದ ತೊಳಲಾಟದಲ್ಲಿ ಮುಳುಗಿರುವವರನ್ನು ನೋಡಿ ರಚಿಸಿದ್ದಾರೆಂದು ಊಹಿಸುವುದು ಸಾಧುವಾದುದು. ಇವೆರಡರ ಪ್ರಯೋಗದ ಔಚಿತ್ಯದ ಬಗ್ಗೆ ಸ್ವಲ್ಪ ವಿವರವಾಗಿ ನೋಡುವುದು ಯೋಗ್ಯವೇ. 
*****

ಅಡಿಗೆ ಮನೆಯಲ್ಲಿ ಅಥವಾ ಅದಕ್ಕೆ ಹೊಂದಿಕೊಂಡಂತೆ ಇರುವ ಉಗ್ರಾಣ ಕೋಣೆಯಲ್ಲಿ ಅನೇಕ ವಸ್ತುಗಳಿವೆ. ಬಗೆಬಗೆಯ ಗಾತ್ರ, ಆಕಾರ, ಬಣ್ಣ, ಗುಣಗಳುಳ್ಳ ಪಾತ್ರೆಗಳಿವೆ. ಪ್ರತಿಯೊಂದಕ್ಕೂ ಅದರದರ ಉಪಯೋಗ ಉಂಟು. ಅವುಗಳಲ್ಲಿ ಯಾವುದೋ ಒಂದು ಇಲ್ಲದಿದ್ದರೆ, ಅಥವಾ ಇದ್ದೂ ಕೈಗೆ ಸಿಗದಿದ್ದರೆ, ಅಡಿಗೆ ಮಾಡುವವರಿಗೆ ಕೈ ಮುರಿದಂತೆ ಭಾಸವಾಗುತ್ತದೆ. ಬೇಕಾಗುವ ಎಲ್ಲವೂ ಅಲ್ಲಿ ಇದ್ದರೆ  ಸುಸೂತ್ರ. ಇಲ್ಲದಿದ್ದರೆ ಮತ್ತೊಬ್ಬರಿಂದ ಎರವಲು ತಂದಾದರೂ ಕೆಲಸ ತೂಗಿಸಬೇಕು. ಅದೇ ರೀತಿ ಅನೇಕ ಪದಾರ್ಥಗಳೂ ಇವೆ. ಹೆಚ್ಚಾಗಿ ಉಪಯೋಗಿಸುವ ಅಕ್ಕಿ, ಬೇಳೆ ಮುಂತಾದುವುಗಳಿಂದ ಹಿಡಿದು ಕೇವಲ ಚಿಟಿಕೆಯಷ್ಟು ಅಥವಾ ಅದಕ್ಕಿಂತ ಕಡಿಮೆ ಉಪಯೋಗಿಸುವ ಕೇಸರಿಯವರೆಗೆ. ಅದರಲ್ಲಿ ಯಾವುದಾದರೂ ಒಂದು ಇಲ್ಲದಿದ್ದರೆ, ಅಥವಾ ಮುಗಿದು  ಹೋಗಿದ್ದರೆ, ಅಂದುಕೊಂಡ ಪದಾರ್ಥ ತಯಾರಿಸಲಾಗದು. 

ಇಂತಹ ಅನೇಕ ಪದಾರ್ಥಗಳಲ್ಲಿ ತುಪ್ಪವೂ ಒಂದು. ಪ್ರತಿ ಪದಾರ್ಥಕ್ಕೂ ಒಂದು ಬೆಲೆ ಉಂಟು. ಹಾಗೆಯೇ, ಅದರದರ ಪ್ರಾಮುಖ್ಯತೆಯೂ ಉಂಟು. ಕಡಿಮೆ ಬೆಲೆಯ ಉಪ್ಪು ಇಲ್ಲದಿದ್ದರೆ ಅನೇಕ ವ್ಯಂಜನಗಳನ್ನು ಮಾಡಲಾಗುವುದಿಲ್ಲ. ಹೆಚ್ಚು ಬೆಲೆಯ ಗೋಡಂಬಿ, ಬಾದಾಮಿಗಳೂ ಉಂಟು. ಆದರೆ ಅವುಗಳಿಂದಲೇ ಅಡಿಗೆ ಆಗುವುದಿಲ್ಲ. ಒಂದು ಸಮರ್ಪಕವಾದ ಅಡಿಗೆ ಆಗಬೇಕಾದರೆ ಇವೆಲ್ಲವೂ ಬೇಕು. ಆದರೆ ತುಪ್ಪವು ನಮ್ಮ ಅಡಿಗೆ, ಆಚಾರ ವಿಚಾರಗಳ ಸಂದರ್ಭದಲ್ಲಿ ಬಹಳ ಮುಖ್ಯ. ಅದೇನು ತುಪ್ಪಕ್ಕೆ ಅಂತಹ ಪ್ರಾಮುಖ್ಯತೆ? "ದೇವರಿಗೆ ತುಪ್ಪದ ದೀಪ ಹೆಚ್ಚು" ಅನ್ನುತ್ತಾರೆ. ಏಕೆ? ಎಣ್ಣೆಯಯಿಂದಲೂ ದೀಪ ಉರಿಯುತ್ತದಲ್ಲ. ಎರಡು ದೀಪಗಳೂ ಬೆಳಕು ಕೊಟ್ಟರೂ ತುಪ್ಪದ ದೀಪಕ್ಕೆ ಹೆಚ್ಚಿನ ಗೌರವ. ತುಪ್ಪದ ದೀಪದಿಂದ ಅನೇಕ ಲಾಭಗಳಿವೆ ಎನ್ನುತ್ತಾರೆ. ಕೆಲವು ಪದಾರ್ಥಗಳು ಅಡಿಗೆಗೆ ಬೇಕು. ಮತ್ತೆ ಕೆಲವು ಸಮಾರಂಭದ ಕಾರ್ಯಗಳಿಗೆ ಬೇಕು. ಈ ತುಪ್ಪವಾದರೋ ಎರಡಕ್ಕೂ ಬೇಕೇ ಬೇಕು. 

ಹವನ-ಹೋಮಾದಿಗಳಿಗೆ ಮೊದಲು ಬೇಕಾದದ್ದು ತುಪ್ಪ. ಎಲ್ಲಾ ಇದ್ದೂ ತುಪ್ಪ ಇಲ್ಲ ಅಂದರೆ ಹೋಮ ಇಲ್ಲ. ಏನೋ ಒಂದು ಬೇಯಿಸಿಕೊಂಡು ಹೊಟ್ಟೆ ತುಂಬಿಸಿಕೊಳ್ಳಲು ತುಪ್ಪ ಬೇಕಿಲ್ಲ. ಆದರೆ ನಮ್ಮ ಪ್ರಾಚೀನ ಪದ್ಧತಿಯಂತೆ ಕ್ರಮವಾಗಿ ಮಾಡಿದ ಅಡಿಗೆ ಬಡಿಸಬೇಕಾದರೂ ಪ್ರಾರಂಭ ತುಪ್ಪದಿಂದಲೇ. ಶುದ್ಧವಾದ ಬಾಳೆ ಎಲೆ ಹಾಕಿ ಮೊದಲು ಅದರ ಮೇಲೆ ಸ್ವಲ್ಪ ತುಪ್ಪ ಸಿಂಪಡಿಸಿ ನಂತರ ಬಡಿಸುವುದು ಪ್ರಾರಂಭ. (ಇದಕ್ಕೆ "ಪಾತ್ರಾಭಿಗಾರ" ಎನ್ನುತ್ತಾರೆ. ಇಲ್ಲಿ ತಿನ್ನುವ ಪಾತ್ರೆ ಎಂದು. ಅದು ಬಾಳೆ ಎಲೆ ಆದರೂ, ಅಥವಾ ದೇವಾಲಯ ಮತ್ತು ಮಠಾದಿಗಳಲ್ಲಿ ಉಪಯೋಗಿಸುವ ಚಿನ್ನದ  ಇಲ್ಲವೇ ಬೆಳ್ಳಿಯ ಹರಿವಾಣವಾದರೂ, ಈ ಸಂಕೇತಕ್ಕೆ ಪಾತ್ರೆ ಎಂದು ಸಂಬೋಧನೆ). ಎಲ್ಲ ಬಡಿಸಿದ ಮೇಲೆ ಕೊನೆಗೆ ಮತ್ತೊಮ್ಮೆ ತುಪ್ಪ ಬರುತ್ತದೆ. ಬಡಿಸಿದ ಎಲ್ಲ ಪದಾರ್ಥಗಳೂ ತುಪ್ಪ ಬಿದ್ದಮೇಲೇ "ಗೋವಿಂದ" ಬಂದು  ಸೇವಿಸಲು ಅನುಮತಿ ಸಿಗುತ್ತದೆ.  

ಕೇವಲ ಬಡಿಸುವ ಮೊದಲು ಮತ್ತು  ಭೋಜನದ ಪ್ರಾರಂಭದಲ್ಲಿ ಮಾತ್ರವಲ್ಲ; ತುಪ್ಪವು ಮುಂದೆಯೂ ಬೇಕು. ಖಾರದ ಪದಾರ್ಥದ ಖಾರ ಕಡಿಮೆಮಾಡಲು ಅದು ಬೇಕು. ಸಿಹಿಯ ಪದಾರ್ಥದ ಸಿಹಿ ಹೆಚ್ಚಿಸಲೂ, ರುಚಿ ಹೆಚ್ಚಿಸಲೂ ಅದು ಬೇಕು. ಒಟ್ಟಿನಲ್ಲಿ ಮೊದಲಿಂದ ಕಡೆಯವರೆಗೆ ಅದು ಇರಬೇಕು. ಅದರ ಮಹತ್ವ ಅಷ್ಟು. 

ಈ ತುಪ್ಪ ಹೇಗೆ ಬಂತು? ಅದೇನೂ ಸುಲಭವಾಗಿ ಬಂದದ್ದಲ್ಲ. ಮೊದಲು ಹಸುವಿನ ಹಾಲು ಬೇಕು. ನಂತರ ಅದನ್ನು ಉಕ್ಕುವಂತೆ ಕಾಯಿಸಿ, ಕಾದಮೇಲೆ ಆರಿಸಿ, ಆಮೇಲೆ ಹೆಪ್ಪು ಹಾಕಬೇಕು. ಮೊಸರಾದಮೇಲೆ ಅದು ಹಾಳಾಗುವಮುನ್ನ ಅದನ್ನು ಹದವಾಗಿ ಕಡೆಯಬೇಕು. ಕಡೆದಾಗ ಬಂದ ಬೆಣ್ಣೆಯನ್ನು ತೆಗೆದು ಇಟ್ಟುಕೊಳ್ಳಬೇಕು. ನಂತರ ಆ ಬೆಣ್ಣೆಯನ್ನು ಕೆಡುವ ಮುಂಚೆ ಹದವಾಗಿ, ಸೀದುಹೋಗದಂತೆ ಕಾಯಿಸಬೇಕು. ಈಗ ಬಂದ ತುಪ್ಪವನ್ನು ಜಾಗ್ರತೆಯಾಗಿ ತೆಗೆದಿಡಬೇಕು. ಇಲಿ-ಬೆಕ್ಕುಗಳಿಗೆ ಸಿಗಬಾರದು. ಒಂದು ತೊಟ್ಟು ತುಪ್ಪ ಪಾತ್ರೆಯಮೇಲೆ ಬಿದ್ದಿದ್ದರೂ ಹಿಡಿದಾಗ ಕೈಜಾರಿ ಬೀಳುತ್ತದೆ. ಎಚ್ಚರದಿಂದ ಬಳಸಬೇಕು. 

*****

ಈ ಮನುಷ್ಯ ಜೀವನ ಹೇಗೆ ಬಂತು? ಅದೂ ಸುಲಭವಾಗಿ ಬಂದದ್ದಲ್ಲ. ಒಟ್ಟಿನಲ್ಲಿ ಸೃಷ್ಟಿಯಲ್ಲಿ ಎಂಭತ್ತನಾಲ್ಕು ಲಕ್ಷ ಕೋಟಿ ವಿಧದ ಜೀವರಾಶಿಗಳಿವೆಯಂತೆ. ಪ್ರತಿಜೀವಿಗೆ ಹೀಗೆ ಯಾವುದೋ ಒಂದು ಪ್ರಾಣಿಯಾಗಿ ಜನ್ಮ ಬರುತ್ತದೆ. (ಜನ್ಮ ಕ್ರಮವಾಗಿ ಬರಬೇಕೆಂದೇನೂ ಇಲ್ಲ. ಜೀವಿಯ ಕರ್ಮಗಳಿಗನುಸಾರ ಬರುತ್ತದೆ ಎಂದು ನಂಬಿಕೆ). ದಾಸರು ಇನ್ನೊಂದು ಹಾಡಿನಲ್ಲಿ "ಏಸು ಕಾಯಂಗಳ ಕಳೆದು ಎಂಭತ್ತನಾಲ್ಕೂ ಲಕ್ಷ ಜೀವರಾಶಿಯನ್ನು ದಾಟಿ ಬಂದ ಈ ಶರೀರ; ಈ ದೇಹ ತಾನಲ್ಲ, ತನ್ನದಲ್ಲ. ಆಸೆ ತರವಲ್ಲ" ಎಂದು ದೇಹ ನಮ್ಮದೂ ಅಲ್ಲ, ಅದರ ಮೇಲೆ ಹೆಚ್ಚಿನ ಮೋಹ ಸರಿಯೂ ಅಲ್ಲ ಎಂದು ಹೇಳುತ್ತಾರೆ. ಅದಕ್ಕೇ ಇನ್ನೊಂದು ಕಡೆ "ಮಾನವ ಜನ್ಮ ದೊಡ್ಡದು; ಇದನು ಹಾನಿ ಮಾಡಿಕೊಳ್ಳಲಿಬೇಡಿ ಹುಚ್ಚಪ್ಪಗಳಿರಾ!" ಎಂದೂ ಎಚ್ಚರಿಸಿದ್ದಾರೆ. ತಿರುಪತಿಯಲ್ಲಿ ಗಂಟೆಗಟ್ಟಲೆ, ಕೆಲವೊಮ್ಮೆ ದಿನಗಟ್ಟಲೆ, ಕಾದಿದ್ದು ಗರ್ಭಗುಡಿ ತಲುಪಿ ಶ್ರೀನಿವಾಸನ ಎದುರು ನಿಂತಿದ್ದಾಗ ಕಣ್ಣುಮುಚ್ಚಿಕೊಂಡಂತೆ ಈ ಮನುಷ್ಯ ಜನ್ಮ ಹಾಳುಮಾಡಿಕೊಂಡರೆ. (ಕೆಲವರು ಗರ್ಭಗುಡಿಯಲ್ಲಿ ಮೂರ್ತಿಯನ್ನು ನೋಡಿದ ತಕ್ಷಣ ಕಣ್ಣು ಮುಚ್ಚಿಕೊಂಡು ಕೆನ್ನೆ ಬಡಿದುಕೊಳ್ಳುತ್ತಾರೆ. ಸಾಧ್ಯವಿದ್ದಷ್ಟೂ "ಜರಗಂಡಿ" ಎಂದು ತಳ್ಳಿಸಿಕೊಳ್ಳುವ ಮುಂಚೆ ಕಣ್ಣರಳಿಸಿ ನೋಡಿ, ಹೊರಗೆ ಬಂದ ಮೇಲೆ ಕಣ್ಣು ಮುಚ್ಚಿದರೆ ಆ ಮೂರ್ತಿ ಮನಸ್ಸಿನಲ್ಲಿ ನಿಲ್ಲುವಂತೆ ಮಾಡಬೇಕಲ್ಲವೇ?)

ಅನೇಕ ಪದಾರ್ಥಗಲ್ಲಿ ತುಪ್ಪಕ್ಕೆ ವಿಶೇಷ ಬೆಲೆ. ಸಿಕ್ಕ ಜನುಮಗಳಲ್ಲಿ ಮನುಷ್ಯ ಜನ್ಮಕ್ಕೆ ವಿಶೇಷ ಬೆಲೆ. ಸಾಧನೆಗೆ ದಾರಿ ಆಗಲೇ. ತುಪ್ಪದಂತೆ ಮಾನವ ದೇಹಕ್ಕೆ ಅನೇಕ ಉಪಯೋಗಗಳು. ಅನೇಕ ಹಂತಗಳು ಪರಿಷ್ಕರಿಸಿದ ಮೇಲೆ ಬಂದ ತುಪ್ಪದಂತೆ ಮನುಷ್ಯ ಜನ್ಮವೂ ಕಷ್ಟದಲ್ಲಿ ಪಡೆದದ್ದು. ಇದು ಒಂದು ಸಣ್ಣ ಮಿಳ್ಳೆ, ಥಾಲಿ ಅಥವಾ ತಂಬಿಗೆಯಲ್ಲಿರುವುದಲ್ಲ. ಬಿಂದಿಗೆಯಷ್ಟು. ತುಪ್ಪದ ಬಿಂದಿಗೆಯಂತೆ ಈ ಜನ್ಮವನ್ನೂ ಅಷ್ಟೇ ಜತನದಿಂದ ಕಾಪಾಡಿಕೊಳ್ಳಬೇಕು. ವ್ಯರ್ಥವಾಗಬಾರದು. 

ತಿಪ್ಪೆಯ ಮೇಲೆ ಬಿದ್ದದ್ದು ಎನ್ನುವುದನ್ನು ಹಿಂದಿನ ಸಂಚಿಕೆಯಲ್ಲಿ ನೋಡಿದ್ದೇವೆ. ದೇಹ ಹಾಸಿಗೆಯಲ್ಲಿ ಪ್ರತಿದಿನ ನಮ್ಮ ಪ್ರಯತ್ನದಿಂದ ವಿಶ್ರಾಂತಿ ಪಡೆಯುತ್ತದೆ. ಆಗ ಅದು ಹಾಸಿಗೆ. ದೇಹ ನಮ್ಮ ನಿಯಂತ್ರಣ ತಪ್ಪಿ ಮತ್ತೊಬ್ಬರು ತಂದು ಅದರಮೇಲೆ ಹಾಕಿದಾಗ ಅದು ತಿಪ್ಪೆಯ ಮೇಲೆ ಬಿದ್ದಂತೆ. ವ್ಯಕ್ತಿಯ ನಿಯಂತ್ರಣ ಇಲ್ಲದ ಪರಾವಲಂಬಿ ದೇಹ ಆ ಹಾಸಿಗೆಯನ್ನೇ ತಿಪ್ಪೆ ಮಾಡುತ್ತದೆ. ಇದು ನಮಗೆ ಪರಾನುಭವದಿಂದ ತಿಳಿದುಬಂದಿರುವ ಸತ್ಯ. 

ಈ ಎಲ್ಲ ಕಾರಣಗಳಿಂದ "ತುಪ್ಪದ ಬಿಂದಿಗೆ ತಿಪ್ಪೆಯ ಮೇಲೆ ಧೊಪ್ಪನೆ ಬಿತ್ತಲ್ಲಾ" ಎನ್ನುವುದು ಅತ್ಯಂತ ಔಚಿತ್ಯಪೂರ್ಣವಾಗಿದೆ. 
*****

ಕೆಲವು ದಿನಗಳಲ್ಲಿ "ವಿಂಬಲ್ಡನ್" ಟೆನಿಸ್ ಟೂರ್ನಮೆಂಟ್ ಬರುತ್ತದೆ. ಅಲ್ಲಿ ಗೆದ್ದು ಹೊಳೆಯುವ ಕಪ್ ಪಡೆಯಬೇಕಾದರೆ ಒಂದೇಸಮನೆ ಏಳು ಪಂದ್ಯಗಳನ್ನು ಗೆಲ್ಲಬೇಕು. ಪ್ರತಿಯೊಂದೂ ಕನಿಷ್ಠ ಆರು ಗೇಮುಗಳುಳ್ಳ ಐದು ಸೆಟ್ಟುಗಳದು. ಮೂರು ಸೆಟ್ಟು ಒಂದೇಸಮನೆ ಗೆದ್ದರೆ ಆ ಪಂದ್ಯ ಗೆದ್ದಂತೆ. ನಂತರ ಮುಂದಿನದು. ಹೀಗೆ. ಆದರೆ ಮೂರು ಸೆಟ್ಟು ಒಂದೇ ಸಮನೆ ಗೆಲ್ಲುವುದು ಅಷ್ಟು ಸುಲಭವಲ್ಲ. ಸುಮಾರು ಶೇಕಡಾ ಎಪ್ಪತ್ತು ಭಾಗ ಪಂದ್ಯಗಳನ್ನು ಮೂರು ಸೆಟ್ಟುಗಳು ಗೆದ್ದು ಮುಗಿಸುತ್ತಾರೆ. ಮತ್ತೆ ಶೇಕಡಾ ಇಪ್ಪತ್ತು ಭಾಗ ಪಂದ್ಯಗಳು ನಾಲ್ಕನೇ ಸೆಟ್ಟಿನವರೆಗೆ ಹೋಗುತ್ತವೆ. ಕೇವಲ ಶೇಕಡಾ ಹತ್ತು ಭಾಗ ಪಂದ್ಯಗಳು ಐದನೆಯ ಸೆಟ್ಟಿನವರೆಗೆ ಹೋಗುತ್ತವೆ. 

ಒಬ್ಬ ಆಟಗಾರನನ್ನು ತೆಗೆದುಕೊಳ್ಳೋಣ. ಸ್ವಲ್ಪ ಉಡಾಫೆಯವನು ಅವನು. ಹೇಗೂ ಐದರಲ್ಲಿ ಮೂರು ಸೆಟ್ಟು ಗೆಲ್ಲಬೇಕು ತಾನೇ. ಮೂರು, ನಾಲ್ಕು ಮತ್ತು ಐದನೆಯದನ್ನು ಗೆಲ್ಲುತ್ತೇನೆ ಎಂದು ಆಡುತ್ತಾನೆ. ಮೊದಲೆರಡು ಲೆಕ್ಕವಿಲ್ಲ ಅವನಿಗೆ. ನಾವು ಅನೇಕ ಪಂದ್ಯಗಳನ್ನು ನೋಡಿದ್ದೇವೆ. ಕೆಲವು ವೇಳೆ ಆಟಗಾರನೊಬ್ಬ ಏನಾಗುತ್ತಿದೆ ಎಂದು ತಿಳಿಯುವ ವೇಳೆ ಎದುರಾಳಿ ಒಂದು ಸೆಟ್ಟು ಗೆದ್ದೇಬಿಟ್ಟಿರುತ್ತಾನೆ. ಎರಡನೆಯ ಸೆಟ್ಟಿನಲ್ಲಿ ಸ್ವಲ್ಪ ಉಡಾಫೆ ಮಾಡಿದರೆ ಮುಗಿಯಿತು. ಎದುರಾಳಿ ನಾಲ್ಕು, ಐದಕ್ಕೆ ಅವಕಾಶವನ್ನೇ ಕೊಡನು. ಮುಗಿದೇಹೋಯಿತು ಪಂದ್ಯ. 

ನಮ್ಮ ಜೀವನದಲ್ಲಿ ಹೀಗೆ ಇಪ್ಪತ್ತು ವರುಷಗಳ ಐದು ಸೆಟ್ಟುಗಳು. ಮೊದಲು ಬಾಲ್ಯ ಮತ್ತು ವಿದ್ಯಾಭ್ಯಾಸ. ನಂತರ ನೌಕರಿ ಅಥವಾ ವ್ಯವಹಾರ, ವಿವಾಹ, ಮನೆಕಟ್ಟುವುದು, ಮಕ್ಕಳು ಮುಂತಾದುವು. ಮೂರನೆಯದು ಜವಾಬ್ದಾರಿ ಕಳೆದುಕೊಳ್ಳುವುದು ಮತ್ತು ಸಾಲ ತೀರಿಸುವುದು. ಉಳಿತಾಯ ಮಾಡಿ ಮುಂದಿನ ಜೀವನ ಹಸನು ಮಾಡಿಕೊಳ್ಳುವುದು. ಏಕೆ ಹುಟ್ಟಿದೆವು, ಏನು ಸಾಧನೆ ಮಾಡಬೇಕು ಎಂದು ಯೋಚಿಸುವುದು ಅರುವತ್ತು ದಾಟಿದ  ಮೇಲೆ. ನಿವೃತ್ತಿಯಾದ ನಂತರ ಚೆನ್ನಾಗಿ ಸಾಧನೆ ಮಾಡುವುದು. ಆಗ ಬೇರೆ ಏನೂ ಚಿಂತೆ ಇಲ್ಲವಲ್ಲ. ಹೀಗೆ ಲೆಕ್ಕಾಚಾರ. 

ಆದರೆ ನಾವು ಆಡುತ್ತಿರುವುದು ನೆಟ್ಟಿನ ಆ ಕಡೆ ನಿಂತಿರುವ "ಕಾಲರಾಯ" ಎನ್ನುವ ಆಟಗಾರನ ವಿರುದ್ಧ. ಆಡಾಡುತ್ತಿರುವಂತೆಯೇ ಮೊದಲ ಇಪ್ಪತ್ತು ವರುಷ ಅವನು ತಿಂದುಹಾಕಿ ಮೊದಲ ಸೆಟ್ಟು ಮುಗಿಸಿದ್ದಾನೆ. ಎರಡು, ಮೂರು ಪರರ ಸೇವೆಯಲ್ಲಿ ಕಳೆಯಿತು. ಕಾಲರಾಯ ಅನೇಕ ವೇಳೆ ಅಷ್ಟರಲ್ಲೇ ಪಂದ್ಯ ಮುಗಿಸಿಬಿಟ್ಟಿರುತ್ತಾನೆ. ಏನೋ ಪುಣ್ಯವಶಾತ್, ನಾಲ್ಕನೆಯ ಸೆಟ್ಟಿಗೆ ತಲುಪಿದೆವು ಅನ್ನೋಣ. ಉದ್ಯೋಗ-ವ್ಯವಹಾರದಲ್ಲಿ ಇದ್ದಾಗ ನಮ್ಮನ್ನು ಹಿಂಡಿ ಹಿಪ್ಪೆ ಮಾಡಿ ಬಿಟ್ಟಿದ್ದಾರೆ. ಶಕ್ತಿ ಕುಂದಿದೆ. ಕಣ್ಣು-ಕಿವಿ ಕಾಣಿಸದು-ಕೇಳಿಸದು. ಅದಕ್ಕೇ ಅವರು ನಿವೃತ್ತಿ ಕೊಟ್ಟಿದ್ದಾರೆ. ಕೆಲವರಿಗೆ ಆಗ ಇನ್ನೊಂದು ಕೆಲಸ ಹುಡುಕುವ ಹುಮ್ಮಸ್ಸು. ಅದು ಸಿಕ್ಕಿದರಂತೂ ಹಿಗ್ಗೋ ಹಿಗ್ಗು. ಎದುರಿನ ಕಾಲರಾಯ ನಗುತ್ತಿದ್ದಾನೆ. ಅವನು ಕೆಲವರನ್ನು ಆಟದ ಮಧ್ಯದಲ್ಲೇ ರಿಟೈರ್ ಮಾಡಿಸುವ ಧೀರ. ಹಾಗೂ ಮಾಡಿಯಾನು. ಅವನಿಗೆ ಆಟ ಸಾಕು ಎನ್ನಿಸಿದಾಗ. "ಕಸ್ತೂರಿ ನಿವಾಸ" ಚಿತ್ರದ "ಆಡಿಸುವಾತ ಬೇಸರವಾಗಿ ಆಟ ಮುಗಿಸಿದ" ಎನ್ನುವಂತೆ. 

ಮೊದಲ ಮೂರು ಸೆಟ್ಟುಗಳಲ್ಲಿ ಸಾಧನೆ ಮಾಡಲಿಲ್ಲ. ಈಗ ಮಾಡಬೇಕೆಂದರೂ ಆಗುತ್ತಿಲ್ಲ. ಇದಕ್ಕಿಂತ ಹೆಚ್ಚಾಗಿ ಯಾವಾಗ ಪಂದ್ಯ ಮುಗಿಸಿ ಕಾಲರಾಯ ಆಟದ ಅಂಗಳದಿಂದ ಹೊರ ತಳ್ಳುತ್ತಾನೋ, ಗೊತ್ತಿಲ್ಲ. 

ಪಂದ್ಯ ಇನ್ನೇನು ಸೋಲಬೇಕು ಎನ್ನುವಾಗ "ಅಯ್ಯೋ, ಮೊದಲಿಂದ ಗಮನವಿಟ್ಟು ಆಡಬೇಕಿತ್ತು" ಎಂದು ಪರಿತಪಿಸುವ ಆಟಗಾರನಂತೆ ಜೇವನ. ಇದನ್ನೇ ದಾಸರು "ಆಗ ನೆನೆಯಲಿಲ್ಲ" ಎಂದು ಹೇಳಿದ್ದು. 
***** 

"ಅಯ್ಯೋ, ಇದನ್ನೆಲ್ಲಾ ಯಾರು ನಂಬುವವರು? ಇರುವಷ್ಟು ದಿನ ಸುಖಪಡೋಣ. ಇನ್ನೊಂದು ಜನ್ಮ ಇದೆ ಎಂದು ಯಾರೂ ಬಂದು ಹೇಳಿಲ್ಲ. ಇದ್ದರೆ, ಅದು ಬಂದಾಗ ನೋಡೋಣ" ಅನ್ನಬಹುದು. ಅದೂ ತಪ್ಪಲ್ಲ. ಆದರೆ ಅದೊಂದು ಅಂತ ಇದ್ದರೆ, ಆಗ? 

ಇದೆಲ್ಲಾ ಅವರವರ ತೀರ್ಮಾನಕ್ಕೆ ಬಿಟ್ಟ ವಿಷಯ. ಜೀವನದಲ್ಲಿ ನೆಮ್ಮದಿ ಹೇಗೆ ಹುಡುಕಬೇಕು ಎಂದು ಯಾರೂ ಬಲವಂತ ಮಾಡುವಹಾಗಿಲ್ಲವಲ್ಲ. 

Wednesday, June 4, 2025

ಮಾಡು ಸಿಕ್ಕದಲ್ಲಾ, ಮಾಡಿನ ಗೂಡು ಸಿಕ್ಕದಲ್ಲಾ


ಸಾಮಾನ್ಯವಾಗಿ ಕುಟುಂಬಗಳಲ್ಲಿ ಸಂಜೆಯ ಹೊತ್ತು ಮನೆಮಂದಿಯೆಲ್ಲ ಒಟ್ಟಾಗಿ ಸೇರಿ, ಒಂದೆಡೆ ಕುಳಿತು ಸುಖ-ದುಃಖಗಳನ್ನು ಹಂಚಿಕೊಳ್ಳುವುದು, ಅಂದಿನ ಆಗು-ಹೋಗುಗಳನ್ನು ಚರ್ಚಿಸುವುದು ನಡೆಯುತ್ತದೆ. ಕೆಲಸ-ಕಾರ್ಯಗಳಲ್ಲಿ ನಿರತರಾದ ಕುಟುಂಬದ ಸದಸ್ಯರು ಪರಸ್ಪರ ಸಿಗುವುದು ಸಂಜೆಯ ವೇಳೆಯಲ್ಲಿಯೇ ಎನ್ನುವ ಕಾಲವೊಂದಿತ್ತು. ಈಗ ಖಚಿತವಾಗಿ ಹಾಗೆ ಹೇಳಲು ಬರುವುದಿಲ್ಲ. ಟೆಲಿವಿಶನ್ ಸೆಟ್ಟುಗಳು ಮನೆಯ ದಿವಾನಖಾನೆಯನ್ನು ಅಲಂಕರಿಸಲು ಪ್ರಾರಂಭಿಸಿದಾಗಿನಿಂದ ಜನಸಾಮಾನ್ಯರ ದೈನಂದಿನ ಜೀವನದಲ್ಲಿ ಅನೇಕ ಬದಲಾವಣೆಗಳಾಗಿವೆ. ನೆಲದಮೇಲೆ ಚಾಪೆ ಅಥವಾ ಜಮುಖಾನ ಹಾಸಿ ಕುಳಿತುಕೊಳ್ಳುವುದು ಮರೆತೇಹೋಗಿದೆ. ಎಲ್ಲರೂ ಒಟ್ಟಿಗೆ ಕುಳಿತು ಊಟ ಮಾಡುವುದು ಕಡಿಮೆಯಾಗಿದೆ. ಟೆಲಿವಿಶನ್ ಜೊತೆಯಲ್ಲಿ ಬಂದಿರುವ ಸೋಫಾಗಳ ಮೇಲೆ ಕುಳಿತು ಕೈನಲ್ಲಿ ತಟ್ಟೆ ಹಿಡಿದು ತಿನ್ನುವುದು ಅಭ್ಯಾಸವಾಗಿದೆ. ಅನೇಕ ವೇಳೆ ಏನು ತಿನ್ನುತ್ತಿದ್ದೇವೆ ಅನ್ನುವುದು ಗೊತ್ತೂ ಆಗದಂತೆ ವಾತಾವರಣ ಇರುತ್ತದೆ. ಅಡುಗೆ ಮಾಡುವವರಿಗೆ ಇದು ಬಹಳ ಒಳ್ಳೆಯದು.  ಉಪ್ಪು-ಖಾರ  ಹೆಚ್ಚು-ಕಡಿಮೆ ಆದರೂ ಯಾರ ಗಮನಕ್ಕೂ ಬರುವುದಿಲ್ಲ. 

ಮೊದಲು ಒಂದು ಮನೆಗೆ ಒಂದು ಟೆಲಿವಿಶನ್ ಸೆಟ್ ಇರುತ್ತಿತ್ತು. ಈಗ ಕೋಣೆಗೊಂದರಂತೆ ಅವು ಬಂದು ಕೂತಿವೆ. ಆದರೂ ಮನೆಮಂದಿ ಎಲ್ಲರೂ ಒಟ್ಟಾಗಿ ನೋಡುವ ಕೆಲವು ಧಾರಾವಾಹಿಗಳು ಇರುತ್ತವೆ. ಕನ್ನಡದಲ್ಲಿಯೂ ಹಾಗೆ ಉಂಟು. ಶ್ರೀ ಟಿ. ಏನ್. ಸೀತಾರಾಮ್ ಅವರ ಧಾರಾವಾಹಿಗಳು ಅಂತಹವು. ಈಚೆಗೆ "ಮಾಡು ಸಿಕ್ಕದಲ್ಲ" ಎನ್ನುವ ಧಾರಾವಾಹಿ ಪ್ರಸಾರವಾಗುತ್ತಿದೆಯಂತೆ. ಸೀತಾರಾಮ್ ಅವರ ಬೇರೆ ಧಾರಾವಾಹಿಗಳಂತೆ ಇದೂ ಜನಪ್ರಿಯವಾಗುವುದರಲ್ಲಿ ಅನುಮಾನವಿಲ್ಲ. 

ಇಂದಿನ ಯುವ ಜನಾಂಗಕ್ಕೆ ಅನೇಕ ಕನ್ನಡ ಪದಗಳು ಅಪರಿಚಿತವಾಗುತ್ತಿವೆ. ಪಟ್ಟಣಗಳಲ್ಲಿ ಹುಟ್ಟಿ ಬೆಳೆದವರಿಗಂತೂ ಈ ಸಮಸ್ಯೆ (ಇದೊಂದು ಸಮಸ್ಯೆ ಎಂದು ತಿಳಿದರೆ) ಇನ್ನೂ ಹೆಚ್ಚು. "ಮಾಡು" ಅನ್ನುವುದು ಒಂದು ಕ್ರಿಯಾಪದವಾಗಿ, ಇಂಗ್ಲೀಷಿನಲ್ಲಿ "ಡು" ಎನ್ನುವುದಕ್ಕೆ ಸಮಾನವಾಗಿ, ಅವರಿಗೆ ಗೊತ್ತು. "ಗೂಡು" ಅನ್ನುವುದರದು ಇನ್ನೂ ಕಡಿಮೆ ಪರಿಚಯ. ಆ ಪದಕ್ಕೆ "ಮನೆ" ಎಂದು ಕೆಲವರಿಗೆ ಅರ್ಥ ಆಗುತ್ತದೆ. ಅದೂ ಒಂದು ಅರ್ಥವೇ. "ಹಕ್ಕಿಗಳ ಗೂಡು" ಎನ್ನುವಂತೆ ಮನುಷ್ಯರ ಗೂಡು ಅಂದರೆ ಮನೆ. ಅದು ಸರಿಯೇ. 

ಯುವ ಮಿತ್ರರೊಬ್ಬರು ಇದರ ಬಗ್ಗೆ ವಿವರಣೆ ಕೇಳಿದ್ದಾರೆ. ಇದು ಒಂದು ಹಾಡಿನ ಮೊದಲ ಸಾಲು ಎಂದು ಕೆಲವರಿಗೆ ಗೊತ್ತು. ಆದರೆ ಪೂರ್ತಿ ಹಾಡು ಅನೇಕರಿಗೆ ಗೊತ್ತಿಲ್ಲ. ಹಾಡು ಗೊತ್ತಿದ್ದವರಿಗೆ ಅದರ ಅರ್ಥ ಗೊತ್ತಿಲ್ಲ. "ಬಾಹ್ಯಾರ್ಥ - ಗೂಡಾರ್ಥ - ಅಂತರಾರ್ಥ" ಎನ್ನುವ ಹಿಂದಿನ ಒಂದು ಸಂಚಿಕೆಯಲ್ಲಿ ಈ ಮೂರು ಅರ್ಥಗಳ ಬಗ್ಗೆ ಸ್ವಲ್ಪ ಚರ್ಚೆ ಮಾಡಿದ್ದೆವು. (ಇದನ್ನು ಓದಲು ಇಲ್ಲಿ ಕ್ಲಿಕ್ ಮಾಡಿ)  "ಮಾಡು ಸಿಕ್ಕದಲ್ಲಾ, ಮಾಡಿನ ಗೂಡು ಸಿಕ್ಕದಲ್ಲಾ" ಎನ್ನುವುದು ಶ್ರೀ ಪುರಂದರದಾಸರ ಒಂದು ಕೃತಿ. ಅದನ್ನು ಓದಿದರೆ ಅಥವಾ ಕೇಳಿದರೆ ಅರ್ಥವೇನೋ ಆಗುತ್ತದೆ. ಆದರೆ ಈ ಕೀರ್ತನೆ ಅನೇಕ ಗಹನವಾದ ಪ್ರಮೇಯಗಳನ್ನು ಒಳಗೊಂಡ ಕೃತಿ. ಪ್ರತಿಯೊಂದು ಪದದ ಹಿನ್ನೆಲೆ ಮತ್ತು ಅಂತರಾರ್ಥ ಗೊತ್ತಿಲ್ಲದಿದ್ದರೆ ಅದೊಂದು ಒಗಟಿನಂತೆ ಆಗುತ್ತದೆ. ಇದರ ಸ್ವಲ್ಪ ವಿವರಣೆ ಈಗ ನೋಡೋಣ. 

*****

"ಮಾಡು ಸಿಕ್ಕದಲ್ಲಾ, ಮಾಡಿನ ಗೂಡು ಸಿಕ್ಕದಲ್ಲಾ" ಎನ್ನುವ ಹಾಡು ಮೂರು ನುಡಿಗಳನ್ನು ಒಳಗೊಂಡಿದೆ. ಎರಡು ಸಾಲುಗಳ ಒಂದು ನುಡಿ, ಇಂತಹ ಮೂರು ನುಡಿಗಳುಳ್ಳ ಒಂದು ಹಾಡು. ಅವುಗಳ ಮೊದಲಿಗೆ ಎರಡು ಸಾಲುಗಳ ಮುಖ್ಯ ಪ್ರಮೇಯ. ನಂತರದ ಮೂರು ನುಡಿಗಳು ಆ ಪ್ರಮೇಯವನ್ನು ವಿಸ್ತರಿಸುವ ವಿವರಣೆ. 

ಮೊದಲಿಗೆ ಈ ಹಾಡಿನ ಪೂರ್ತಿ ಪಾಠವನ್ನು ತಿಳಿಯೋಣ. ಅದು ಹೀಗಿದೆ:

ಮಾಡು ಸಿಕ್ಕದಲ್ಲಾ, ಮಾಡಿನ ಗೂಡು ಸಿಕ್ಕದಲ್ಲಾ 
ಜೋಡಿ ಹೆಂಡಿರಿಗಂಜಿ ಓಡಿಹೋಗುವಾಗ, ಗೋಡೆ ಬಿದ್ದು ಬಯಲಾಯಿತಲ್ಲಾ 

ಎಚ್ಚರಗೊಳಲಿಲ್ಲ, ಮನವೇ  ಹುಚ್ಚನಾದೆನಲ್ಲಾ 
ಅಚ್ಚಿನೊಳಗೆ ಮೆಚ್ಚು, ಮೆಚ್ಚಿನೊಳಗೆ ಅಚ್ಚು, ಕಿಚ್ಚೆದ್ದು ಹೋಯಿತಲ್ಲಾ 

ಮುಪ್ಪು ಬಂದಿತಲ್ಲಾ, ಪಾಯಸ ತಪ್ಪದೆ ಉಣಲಿಲ್ಲಾ 
ತುಪ್ಪದ ಬಿಂದಿಗೆ ತಿಪ್ಪೆಯಮೇಲೆ ಧೊಪ್ಪನೆ ಬಿತ್ತಲ್ಲಾ 

ಯೋಗವು ಬಂತಲ್ಲಾ, ಬದುಕು ವಿಭಾಗವಾಯಿತಲ್ಲಾ 
ಭೋಗಿಶಯನ ಶ್ರೀ ಪುರಂದರವಿಠಲನ ಆಗ ನೆನೆಯಲಿಲ್ಲಾ  

ಎಲ್ಲ ಕಡೆಯೂ "ಲ್ಲಾ" ಅನ್ನುವುದು ದೀರ್ಘವೇ. "ಎಚ್ಚರಗೊಳಲಿಲ್ಲ" ಎನ್ನುವುದನ್ನು ಬಿಟ್ಟು.  ಏನಾದರೂ ಕಳೆದು ಹೋದರೆ "ಹೋಯಿತಲ್ಲ" ಎನ್ನುತ್ತೇವೆ. ತುಂಬಾ ಪ್ರಿಯವಾದದ್ದು ಕಳೆದು ಹೋದರೆ ಹಲಬುತ್ತೇವೆ. ಆಗ "ಹೋಯಿತಲ್ಲ" ಅನ್ನುವುದಿಲ್ಲ. "ಹೋಯಿತಲ್ಲಾ" ಎಂದು ಕೂಗುತ್ತೇವೆ. ದಾಸರೂ ಹೀಗೆ ಆರ್ತರಾಗಿ ಹೇಳುವಾಗ ಹೋಯಿತಲ್ಲಾ, ಸಿಕ್ಕದಲ್ಲಾ, ಮುಂತಾಗಿ ಹೇಳುತ್ತಾರೆ. ಇದನ್ನು ಗಮನಿಸಬೇಕು. ಧಾರಾವಾಹಿಯಲ್ಲಿ ತೋರಿಸುವಂತೆ ಅದು "ಮಾಡು ಸಿಕ್ಕದಲ್ಲ"  ಎಂದಲ್ಲ. ವಾಸ್ತವವಾಗಿ "ಮಾಡು ಸಿಕ್ಕದಲ್ಲಾ" ಎಂದು. 

*****

ಆರ್. ಸಿ. ಸಿ. ಮನೆಗಳು ಇಲ್ಲದಿದ್ದ ಕಾಲ. ಮಣ್ಣಿನ ಹೆಂಚು ಛಾವಣಿಗೆ ಹೊದ್ದಿಸಿದ ಮನೆಗಳೇ ಇದ್ದ ಕಾಲ. ಬಯಲು ಸೀಮೆಯಲ್ಲಿ ನಾಡಹೆಂಚುಗಳ ಮನೆಗಳು. ಕೆಲವೆಡೆ "ಮಂಗಳೂರು ಹೆಂಚು" ಹೊದಿಸಿದ ಮನೆಗಳು. ಮೇಲೆ ಕೊಟ್ಟಿರುವ ಚಿತ್ರ ನೋಡಿ. ಛಾವಣಿಗೆ ^ ಆಕಾರ ಇರುತ್ತಿತ್ತು. ಮಳೆಯ ನೀರು ಸುಲಭವಾಗಿ ಹರಿದು ಹೋಗಲು ಈ ವ್ಯವಸ್ಥೆ. ಚಾವಣಿಯ ಮೇಲಿನ ಭಾಗ ದಿನನಿತ್ಯದ ವಾಸಕ್ಕೆ ಅಷ್ಟು ಯೋಗ್ಯವಲ್ಲ. ಆದುದರಿಂದ ಅಲ್ಲಿ "ಮಾಡು" ಎಂದು ಕರೆಯುವ ಜಾಗದ ವ್ಯವಸ್ಥೆ ಮಾಡುತ್ತಿದ್ದರು. ಅದನ್ನು "ಅಟ್ಟ" ಎಂತಲೂ ಕರೆಯುತ್ತಿದ್ದರು. ಇಂಗ್ಲೀಷಿನಲ್ಲಿ Attic ಅನ್ನುತ್ತಾರೆ. ಮನೆಗಳಲ್ಲಿ ಹೆಚ್ಚಿನ ಪೀಠೋಪಕರಣಗಳು, ಕಪಾಟು ಮುಂತಾದುವುಗಳು ಇರುತ್ತಿರಲಿಲ್ಲ. ದಿನನಿತ್ಯ ಉಪಯೋಗಿಸುವ ಪದಾರ್ಥಗಳು ಕೆಳಗೆ ನೆಲದ ಮೇಲೆ ಇರುತ್ತಿದ್ದವು. ಆಗೊಮ್ಮೆ-ಈಗೊಮ್ಮೆ ಉಪಯೋಗಿಸುವ ಪದಾರ್ಥಗಳನ್ನು ಅಟ್ಟದ ಮೇಲೆ ಇಡುತ್ತಿದ್ದರು. ಈ ಕಾರಣಕ್ಕಾಗಿ ಕೆಲವು ಗೂಡುಗಳನ್ನು ಮಾಡಿರುತ್ತಿದ್ದರು. ಇಂತಹ ಗೂಡುಗಲ್ಲಿ ಇಟ್ಟ ಪದಾರ್ಥಗಳನ್ನು ಬೇಕಾದಾಗ ಹೊರತೆಗೆದು ಉಪಯೋಗಿಸಲು ಅಟ್ಟ ಹತ್ತಿ, ಅಲ್ಲಿನ ಗೂಡಿನಿಂದ  ಹೊರತೆಗೆಯಬೇಕಾಗುತ್ತಿತ್ತು. ಇದಕ್ಕೆ ಹೆಚ್ಚಿನ ಪ್ರಯತ್ನ ಬೇಕಿತ್ತು. "ಮಾಡು" ಮತ್ತು  "ಗೂಡು" ಅನ್ನುವ ಪದಗಳಿಗೆ ಈ ಹಿನ್ನೆಲೆ. 

ಮೇಲಿನದು ಹೊರ ಅರ್ಥ. ಶ್ರೀ ಪುರಂದರದಾಸರು ವೈಷ್ಣವ ಸಿದ್ಧಾಂತದ ಪ್ರತಿಪಾದಕರು. ನಾವು ಈಗ ಬದುಕಿರುವುದು ಭೂಲೋಕ. ಅದು ಕೆಳಗಿದೆ ಎಂದು ನಂಬಿಕೆ. ಶ್ರೀವೈಕುಂಠ ಇದರ ಮೇಲಿನ ಲೋಕ. ಆದ್ದರಿಂದ ಅದು ನಮಗೆ ಮಾಡು. ಅದರಲ್ಲಿನ ಗೂಡು ಎಂದರೆ ಆ ವೈಕುಂಠದಲ್ಲಿ ನಾವು ಪಡೆಯಬಹುದಾದ ಸ್ಥಾನ. ಒಟ್ಟಿನಲ್ಲಿ ಈ ಜೀವನ-ಮರಣ ಚಕ್ರದಿಂದ ಹೊರಬಂದು ದುಃಖವಿಲ್ಲದ, ಒಂದು ಶಾಶ್ವತವಾದ ಸ್ಥಾನ ಹೊಂದುವುದು. "ಮಾಡು ಸಿಕ್ಕದಲ್ಲಾ, ಮಾಡಿನ ಗೂಡು ಸಿಕ್ಕದಲ್ಲಾ" ಎಂದರೆ ಸರಿಯಾಗಿ ಪ್ರಯತ್ನ ಮಾಡದೇ ಇರುವುದರಿಂದ "ಆ ವೈಕುಂಠ ಸಿಗಲಿಲ್ಲ. ಅಲ್ಲಿ ನನ್ನ ವಾಸದ ಜಾಗ ಸಿಗಲಿಲ್ಲ " ಎಂದು ಪ್ರಲಾಪಿಸುವುದು. ಇದು ಅಂತರಾರ್ಥ. 

ಈ ಹೇಳಿಕೆಯಲ್ಲಿ ಒಂದು ಗೂಡಾರ್ಥವೂ ಇದೆ. ನಮ್ಮ ಶರೀರವೇ ಒಂದು ಮನೆ. ಸರಿಯಾಗಿ ನೋಡಿದರೆ ಕಾಲು, ಸೊಂಟ, ಹೊಟ್ಟೆ ಮುಂತಾದುವು ಮನೆಯ ಕೆಳಭಾಗಗಳು. ಹೊಟ್ಟೆಯ ಮೇಲಿನ ಭಾಗ ಈ ದೇಹವೆಂಬ ಮನೆಯ ಮಾಡು. ಹೃದಯ ಈ ದೇಹವೆಂಬ ಮನೆಯ ಮಾಡಿನ ಭಾಗದಲ್ಲಿರುವ ಒಂದು ಗೂಡು. ಈ ಮನೆಯ ಮೇಲ್ಭಾಗದ ಮಾಡಿನ ಹೃದಯವೆಂಬ ಗೂಡಿನಲ್ಲಿ ಪರಮಾತ್ಮನೆಂಬ ದಿವ್ಯ ವಸ್ತು ಇದೆ. ಅವನು ಅಲ್ಲಿ ನೆಲೆಸಿದ್ದಾನೆ. ಮಾಡು ಹತ್ತಿ ಆ ಗೂಡಿನಲ್ಲಿರುವ ವಸ್ತುವನ್ನು ನಾವು ಪಡೆಯಲು ಪ್ರಯತ್ನಿಸಲೇ ಇಲ್ಲ. ಮನೆಯ ಕೆಳಗಿರುವ ಹೊಟ್ಟೆ ಹೊರೆಯುವ ಪ್ರಯತ್ನದಲ್ಲೇ ಜೀವನವೆಲ್ಲ ಕಳೆಯಿತು! ಯಾವುದು ಸುಖವೇ ಅಲ್ಲವೋ ಅದರ ಹಿಂದೆ ಬಿದ್ದು ನಿಜವಾದ ಸುಖ ಪಡೆಯುವ ಪ್ರಯತ್ನವನ್ನೇ ಮಾಡಲಿಲ್ಲ. ಈಗ, ಜೀವನದ ಕೊನೆಯಲ್ಲಿ, ಮಾಡಿನ ಗೂಡಿನಲ್ಲಿರುವ ಆ ಮುಖ್ಯ ವಸ್ತು ಸಿಗಲಿಲ್ಲ ಎನ್ನುವ ಕೊರಗು. 

ಪರಮಾತ್ಮನೆಂಬ ದಿವ್ಯ ವಸ್ತುವನ್ನು ನಾವು ದಿನಬಳಕೆಗಾಗಿಯೇ ಇಟ್ಟುಕೊಳ್ಳಬೇಕಿತ್ತು. ಆದರೆ ಬೇರೆ ವಸ್ತುಗಳ ಮೋಹದಿಂದ ಇಂತಹ ಮುಖ್ಯ ವಸ್ತುವನ್ನು ಮಾಡಿನ ಮೇಲಿನ ಗೂಡಿನಲ್ಲಿ ಭದ್ರವಾಗಿಟ್ಟೆವು. ಮುಂದೆ ಎಂದೋ, ವೃದ್ಧಾಪ್ಯದಲ್ಲಿ, ಉಪಯೋಗಿಸುವ ಎನ್ನುವ ಅಭಿಲಾಷೆ. ಆದರೆ ಮುದಿತನದಲ್ಲಿ ಮೇಲೆ ಹತ್ತಿ ಆ ಪದಾರ್ಥವನ್ನು ಪಡೆಯುವ ಶಕ್ತಿ ಕುಂದಿದೆ. 

*****

"ಜೋಡಿ ಹೆಂಡಿರಿಗಂಜಿ ಓಡಿಹೋಗುವಾಗ" ಎನ್ನುವುದು ಈ ಹಾಡಿನ ಜೀವಾಳ. (ನಮ್ಮ ಉಗುರು ಮತ್ತು ಬೆಟ್ಟುಗಳ ಚರ್ಮದ ಮಧ್ಯೆ ಇರುವ ದಾರದಂತಹ ವಸ್ತುವಿಗೆ "ಜೀವಾಳ" ಎನ್ನುತ್ತಾರೆ. ಈ ಜೀವಾಳ ಉಗುರನ್ನು ದೇಹಕ್ಕೆ ಬಂಧಿಸಿಟ್ಟಿದೆ. ಅದು ಇಲ್ಲದಿದ್ದರೆ ಉಗುರೂ ಸಹ ಹಲ್ಲಿನಂತೆ ಬಿದ್ದುಹೋಗಬಹುದು. ಒಮ್ಮೊಮ್ಮೆ ಉಗುರು ಕತ್ತರಿಸುವಾಗ ಈ ಜೀವಾಳದ ಸ್ವಲ್ಪ ಭಾಗ ಕತ್ತರಿಸುವುದೂ ಉಂಟು. ಆಗ ಬಹಳ ನೋವಾಗುತ್ತದೆ. ಅದನ್ನು ಅನುಭವಿಸಿದವರಿಗೆ ಗೊತ್ತು). ಈ ಜೋಡಿ ಹೆಂಡಿರು ಯಾರು? ಅವರು ಗಂಡಸರಿಗೆ ಮಾತ್ರವೇ ಸಂಬಂಧಿಸಿದವರೇ? ಹಾಗಿದ್ದರೆ ಈ ಹಾಡಿಗೂ ಸ್ತ್ರೀಯರಿಗೂ ಏನೂ ಸಂಬಂಧವಿಲ್ಲವೇ? ಒಬ್ಬಳೇ ಹೆಂಡತಿ ಇರುವ ಗಂಡಸಿಗೂ ಇದು ಬೇಕಾಗಿಲ್ಲ, ಅಲ್ಲವೇ? ಇವೆಲ್ಲವೂ ಸಾಧುವಾದ ಪ್ರಶ್ನೆಗಳೇ. 

ಈ ಪ್ರಶ್ನೆಗಳಿಗೆ ಉತ್ತರ ಸಿಗಬೇಕಾದರೆ ಶ್ರೀಮದ್ ಭಾಗವತದ "ಪುರಂಜನೋಪಾಖ್ಯಾನ" ನೋಡಬೇಕು. ಅದರ ವಿವರಗಳನ್ನು ಮತ್ತೊಮ್ಮೆ ವಿವರವಾಗಿ ನೋಡೋಣ. ಈಗ ಸೂಕ್ಷ್ಮವಾಗಿ ಇಷ್ಟು ಹೇಳಿದರೆ ಸಾಕು. "ಪುರ" ಅಂದರೆ ಈ ದೇಹ ಅನ್ನುವ ಪಟ್ಟಣ. ಈ ದೇಹವೆಂಬ ಮನೆಯಲ್ಲಿ ಯಜಮಾನನಾಗಿ ವಾಸಿಸುವವನೇ "ಪುರುಷ" ಎಂಬ ಪರಮಾತ್ಮ. ಆ ಮನೆಯಲ್ಲಿ ಬಾಡಿಗೆದಾರನಾಗಿ ವಾಸಿಸುವವನೇ ಜೀವ. ಈ ಜೀವ ಗಂಡು ದೇಹದಲ್ಲಾದರೂ ಇರಬಹುದು; ಹೆಣ್ಣು ದೇಹದಲ್ಲಾದರೂ ಇರಬಹುದು. ಆದ್ದರಿಂದ ಇಲ್ಲಿ ಹೇಳಿದ ಎರಡು ಹೆಂಡಿರು ಸ್ತ್ರೀಯರಿಗೂ ಮತ್ತು ಪುರುಷರಿಗೂ ಸಮಾನವಾಗಿ ಅನ್ವಯ ಆಗುತ್ತದೆ. ಇಲ್ಲಿ ಹೆಂಡಿರು ಅಂದರೆ ನಮ್ಮ ವ್ಯಾವಹಾರಿಕ ಜೀವನದಲ್ಲಿ ನಿರ್ದೇಶಿಸುವ ಹೊಂಡತಿ ಅಲ್ಲ. ಆದ್ದರಿಂದ ಇದು ಎಲ್ಲರಿಗೂ ಸಮಾನವಾಗಿ ಅನ್ವಯ. 

ಪುರಂಜನೋಪಾಖ್ಯಾನದಲ್ಲಿ "ಬುದ್ಧೀತು ಪ್ರಮದಾಮ್ ವಿದ್ಧಿ" ಎಂದು ಹೇಳಿದ್ದಾರೆ. ಅಂದರೆ "ಬುದ್ಧಿ ಅನ್ನುವುದು ಒಂದು ಸ್ತ್ರೀಯಂತೆ. ಅದನ್ನು ಜೀವನು ಹೆಂಡತಿ ಎನ್ನುವಂತೆ ತಿಳಿಯಬೇಕು" ಎಂದು ಅರ್ಥ. ಹೆಂಡತಿ (ಅಥವಾ ಗಂಡ) ಸಾಂಸಾರಿಕ ಜೀವನದಲ್ಲಿ ಬಹಳ ಮುಖ್ಯ. ಸುಖಜೀವನಕ್ಕೆ ಹೇಗೆ ಹೆಂಡತಿ (ಅಥವಾ ಗಂಡ) ಸಹಕಾರಿಯಾಗಬಹುದೋ ಹಾಗೆಯೇ ಜೀವನ ದುರ್ಭರ ಆಗಲೂ ಕಾರಣ ಆಗಬಹುದು. ಬುದ್ಧಿ ಒಂದು ಹೆಂಡತಿ ಆದರೆ ಎರಡನೆಯ ಹೆಂಡತಿ ಯಾರು? ಅದು "ಮನಸ್ಸು". ಬುದ್ಧಿ ಮತ್ತು ಮನಸ್ಸು ಪ್ರತಿಯೊಬ್ಬರಿಗೂ (ಹೆಣ್ಣು ಗಂಡು ಎಂಬ ಭೇದವಿಲ್ಲದೆ} ಇರುವ ಇಬ್ಬರು ಹೆಂಡತಿಯರು. 

ಈ ಇಬ್ಬರು ಹೆಂಡತಿಯರು ನಮಗೆ ಸಹಕಾರಿಯಾಗಿರುವಂತೆ ನೋಡಿಕೊಳ್ಳಲಾಗದೆ ಅವರ ಭಯಕ್ಕೆ ಶರಣಾಗುವುದು "ಜೋಡಿ ಹೆಂಡರಿಗಂಜಿ ಓಡಿಹೋಗುವುದು". "ಏನು ಮಾಡಲಿ? ನನ್ನ ಮನಸ್ಸು ನನ್ನ ಮಾತು ಕೇಳುವುದಿಲ್ಲ. ಬುದ್ಧಿ ನನ್ನ ಸ್ಥಿಮಿತದಲ್ಲಿಲ್ಲ" ಎಂದು ಕೈಚೆಲ್ಲುವುದೇ ಈ ಇಬ್ಬರು ಹೆಂಡಿರಿಗಂಜಿ ಓಡಿಹೋಗುವುದು. ಪ್ರಯತ್ನಪೂರ್ವಕವಾಗಿ ಇವೆರಡನ್ನೂ ನಮ್ಮ ಗುರಿ ಸಾಧನೆಗೆ ಅನುಕೂಲ ಮಾಡಿಕೊಳ್ಳುವುದೇ ಅವರ ಜೊತೆ ಹೊಡೆದಾಡಿ ಗೆಲ್ಲುವುದು. ಹೀಗೆ ಗೆದ್ದರೆ ಓಡಿಹೋಗಬೇಕಾಗಿಲ್ಲ. ಹೀಗೆ ಹೋರಾಡಿ ಗೆಲ್ಲದೇ ಹೆದರಿ ಓಡಿಹೋಗುವಾಗ "ಗೋಡೆ ಬಿದ್ದು ಬಯಲಾಯಿತು". ಬಯಲಾಯಿತಲ್ಲ ಎಂದರೆ ಹೊಡೆದಾಟದಲ್ಲಿ ಕಾಲಚಕ್ರ ಓಡಿ ವೃದ್ಧಾಪ್ಯ ಬರುವುದು. ಮುಪ್ಪಿನಲ್ಲಿ ಕೈ-ಕಾಲುಗಳ, ದೇಹದ, ಶಕ್ತಿ ಕುಂದಿ ಗೋಡೆ ಬಿದ್ದ ಮನೆಯಂತೆ ಆಗುತ್ತದೆ. ಗೋಡೆ ಬಿದ್ದರೆ ಮನೆ ಇದ್ದೂ ಇಲ್ಲ. ಶಕ್ತಿ ಕುಂದಿದಮೇಲೆ ಬದುಕಿದ್ದೂ ಸಾಧನೆ ಮಾಡಲಾಗದು. ಪಾಳು ಬಿದ್ದ ಮನೆ ಅನ್ಯರ ಪಾಲು. ಜೂಜು ಆಡುವವರು, ಕುಡುಕರು ಇಂತಹವರ ಬೀಡು ಆ ಮನೆ. ದೇಹದಲ್ಲಾದರೋ, ರೋಗ-ರುಜಿನಗಳಿಗೆ ಹೇರಳವಾದ ಅವಕಾಶ. ಅಂತಹ ದೇಹದಿಂದ ಏನೂ ಪ್ರಯೋಜನವಿಲ್ಲ. ಇದು ಗೂಡಾರ್ಥ. 

*****

ಸಮಯ ಚೆನ್ನಾಗಿದ್ದಾಗ ಎಚ್ಚರದಿಂದ ಸಾಧನೆ ಮಾಡಲಿಲ್ಲ. ಆಗ ಮತ್ತನಾಗಿ ನಿಡ್ರೆ ಮಾಡಿದಂತೆ ಜೀವನ ನಡೆಸಿದ್ದಾಯಿತು. ಬುದ್ಧಿ ಸ್ಥಿಮಿತದಲ್ಲಿ ಇಟ್ಟುಕೊಳ್ಳದೆ ಬುದ್ಧಿಭ್ರಮಣೆ ಆದ ಹುಚ್ಚನಂತೆ ಜೀವನ ಕಳೆಯಿತು. ಹಣ ಸಂಪಾದಿಸುವುದೇ ಜೀವನದ ಗುರಿಯಾಯಿತು. ಸಂಸಾರದ ಸಿಹಿ ಅನ್ನುವ ಬೆಲ್ಲದ ಅಥವಾ ಸಕ್ಕರೆಯ ಅಚ್ಚಿನಲ್ಲಿ ಮನಸ್ಸು ಮುಳುಗಿತು. ಅಚ್ಚು ಅನ್ನುವ ಪದಕ್ಕೆ "ಠಸ್ಸೆ" ಅಥವಾ "ಸೀಲ್" ಎಂದೂ ಅರ್ಥವುಂಟು. ಈ ಸಂಸಾರವೆಂಬ ಅಚ್ಚಿನ ರುಚಿಯಲ್ಲಿ ಜೀವನದ ಉದ್ದೇಶ ಸೀಲ್ ಆಯಿತು. ಆದ್ದರಿಂದ "ಅಚ್ಚಿನೊಳಗೆ ಮೆಚ್ಚು; ಮೆಚ್ಚಿನೊಳಗೆ ಅಚ್ಚು". ಬೆಂಕಿ ಬಿದ್ದಾಗ ಬೆಲ್ಲದ ಅಥವಾ ಸಕ್ಕರೆ ಅಚ್ಚು ಕರಗಿ ಹೋಗುತ್ತದೆ. ಮುಪ್ಪಿನ ಬೆಂಕಿ ಬಿದ್ದಾಗ ಜೀವನವೆಂಬ ಪ್ರೀತಿಯಿಂದ ಕಾಯ್ದುಕೊಂಡಿದ್ದ ಅಚ್ಚು ಕರಗಿಹೋಯಿತು ಎಂದು ಈಗ ಪ್ರಲಾಪ. 

ಕೆಲವರಿಗೆ ಪಾಯಸ ಅಂದರೆ ಅಷ್ಟಕ್ಕಷ್ಟೇ. ಅದನ್ನು ತಿನ್ನುವುದೇ ಇಲ್ಲ. ತಿಂದರೂ ಆಗೊಮ್ಮೆ-ಈಗೊಮ್ಮೆ ಬಹಳ ಸ್ವಲ್ಪ ಪ್ರಮಾಣದಲ್ಲಿ. ಚಿಕ್ಕ ವಯಸ್ಸಿನಲ್ಲಿ ಪಾಯಸ ತಿನ್ನಲಿಲ್ಲ. ಈಗ ಮುಪ್ಪಿನಲ್ಲಿ ಪಾಯಸ  ತಿನ್ನುವಹಾಗಿಲ್ಲ! ಇಲ್ಲಿ ಪಾಯಸ ಅಂದರೆ "ರಾಮನಾಮ" ಮುಂತಾದ ಪಾಯಸ. "ರಾಮನಾಮ ಪಾಯಸಕೆ ಕೃಷ್ಣನಾಮ ಸಕ್ಕರೆ., ವಿಠಲನಾಮ ತುಪ್ಪವ ಬೆರೆಸಿ ಬಾಯಿ ಚಪ್ಪರಿಸಿರೋ"ಎನ್ನುವ ಹಾಡಿನಲ್ಲಿ ಪಾಯಸ ಎಂದರೆ ಏನು ಎನ್ನುವುದನ್ನು ದಾಸರು ಹೇಳಿದ್ದಾರೆ. "ತುಪ್ಪದ ಬಿಂದಿಗೆ ತಿಪ್ಪೆಯ ಮೇಲೆ ಧೊಪ್ಪನೆ ಬಿತ್ತಲ್ಲ" ಅನ್ನುವುದು ಮುಪ್ಪಿನಲ್ಲಿ ದೇಹ ಹಾಸಿಗೆ ಹಿಡಿದದ್ದನ್ನು ತೋರಿಸುತ್ತದೆ. ತುಪ್ಪದ ಪಾತ್ರೆ ಕೈಜಾರಿ ತುಪ್ಪ ಕೆಳಗೆ ಬಿದ್ದರೆ, ಆ ಜಾಗ ಶುದ್ಧವಾಗಿದ್ದರೆ ಬಾಚಿಕೊಳ್ಳಬಹುದು. ಆದರೆ ಅದು ತಿಪ್ಪೆಯ ಮೇಲೆ ಬಿದ್ದರೆ?  ಪೂರ್ತಿ ಹಾಳು. ಮತ್ತೆ ಮೇಲೆ ಏಳದಂತೆ ಹಾಸಿಗೆ ಹಿಡಿದಂತೆ ಜೀವನ ಆಯಿತು ಎನ್ನುವಂತೆ. 

"ಯೋಗವು ಬಂತಲ್ಲಾ, ಬದುಕು ವಿಭಾಗವಾಯಿತಲ್ಲಾ" ಎನ್ನುವುದು ಬಂದ ಅವಕಾಶ ಕಳೆದುಕೊಂಡು ಜೀವನ ಅಲ್ಲಿ-ಇಲ್ಲಿ ಹರಿದು ಹಂಚಿ ಹೋದಂತೆ ಆಯಿತು ಎನ್ನುವುದನ್ನು ಸೂಚಿಸುತ್ತದೆ. ಭೋಗೀಶಯನನಾದ, ಆದಿಶೇಷನ ಮೇಲೆ ಮಲಗಿರುವ ಶ್ರೀಹರಿಯನ್ನು ಆಗ (ಚಿಕ್ಕವಯಸ್ಸಿನಲ್ಲಿ, ಶಕ್ತಿ, ಆರೋಗ್ಯಗಳು ಇದ್ದಾಗ} ನೆನೆಯಲಿಲ್ಲ. ಈಗ ನೆನೆಯಬೇಕೆಂದರೆ ಆಗುವುದಿಲ್ಲ. ಸಾಧನೆ ಸಾಧ್ಯವಿದ್ದಾಗ ಮಾಡದೇ, ಈಗ ಸಾಧ್ಯವಿಲ್ಲದಿದ್ದಾಗ ಗೋಳಾಡುವಂತೆ ಆಯಿತಲ್ಲ ಎಂದು ವ್ಯಥೆ. 

ಮೊದಲ ಎರಡು ಸಾಲುಗಳ ಪ್ರಮೇಯವನ್ನು ಹೀಗೆ ಮುಂದಿನ ಮೂರು ನುಡಿಗಳಲ್ಲಿ ವಿಸ್ತರಿಸಿ ದಾಸರು ಹೇಳಿದ್ದಾರೆ. ಇದನ್ನು ಅವರು ತಮಗೇ ಹೇಳಿಕೊಂಡಿದ್ದಾರೆ ಎಂದು ತಪ್ಪಾಗಿ ತಿಳಿಯಬಾರದು. "ನವಕೋಟಿ  ನಾರಾಯಣ" ಎನ್ನುವ ಬಿರುದು ಹೊಂದಿದ್ದು, ಎಲ್ಲವನ್ನೂ ಬಿಟ್ಟು ಬಂದು "ಹೆಂಡತಿ ಸಂತತಿ ಸಾವಿರವಾಗಲಿ, ದಂಡಿಗೆ ಬೆತ್ತ ಹಿಡಿಸಿದಳಯ್ಯಾ" ಎಂದವರು ಅವರು. ಸಾಮಾನ್ಯರಾದ ನಮ್ಮಂತಹವರ ಸ್ಥಿತಿಯನ್ನು ಹೇಳುವ ಹಾಡು ಇದು. 

*****

ಕಳೆದ ಶತಮಾನದ ಐವತ್ತು-ಅರವತ್ತರ ದಶಕದಲ್ಲಿ ಕನ್ನಡದ ಭಾವಗೀತೆಗಳ ಮೊದಲ ಗಾಯಕ ಹರಿಕಾರರಲ್ಲೊಬ್ಬರಾದ ಮಾನ್ಯ ಪಿ. ಕಾಳಿಂಗರಾಯರು ತಮ್ಮ ಗೋಷ್ಠಿಗಳಲ್ಲಿ ಈ ಹಾಡನ್ನು ಸೊಗಸಾಗಿ ಹಾಡುತ್ತಿದ್ದರು. ಆರ್ತರಾಗಿ ಕೂಗುವಂತಹುದು ಅವರ ಹಾಡಿನಲ್ಲಿ ಚೆನ್ನಾಗಿ ಧ್ವನಿತವಾಗಿದೆ. ಪುಣ್ಯಕ್ಕೆ ಅದರ ಧ್ವನಿಮುದ್ರಿಕೆ ಯೂಟ್ಯೂಬಿನಲ್ಲಿ ಸುಲಭವಾಗಿ ಲಭ್ಯವಿದೆ. ಅದರ ಲಿಂಕ್ ಕೆಳಗೆ ಕೊಟ್ಟಿದೆ. ಆಸಕ್ತರು ಕೇಳಬಹುದು:


https://www.youtube.com/watch?v=e-yowKKUL1k

*****

ವಿವರಣೆ ಸ್ವಲ್ಪ ದೀರ್ಘವಾಯಿತು ಎನ್ನಿಸಬಹುದು. ಆದರೆ ವಿಧಿಯಿಲ್ಲ. ಹಾಡಿನ ಮೇಲುನೋಟದ  ಅರ್ಥಕ್ಕೂ, ಅಂತರಾರ್ಥ, ಗೂಡಾರ್ಥಗಳಿಗೂ ಬಹಳ ಅಂತರ ಉಂಟು. ಆಳವಾಗಿ ಯೋಚಿಸಿದಷ್ಟೂ, ಅಧ್ಯಯನ ಮಾಡಿದಷ್ಟೂ ವಿಶೇಷ ಅರ್ಥಗಳು  ಹೊಳೆಯುತ್ತವೆ,

"ಬುದ್ಧಿ ಮತ್ತು ಮನಸ್ಸು" ಮತ್ತು "ಪುರಂಜನೋಪಾಖ್ಯಾನ" ಇವುಗಳ ಬಗ್ಗೆ ಹೆಚ್ಚಿನ ವಿವರಣೆಯನ್ನು  ಮತ್ತೆ ಎಂದಾದರೂ ಅವಕಾಶ ಆದಾಗ ನೋಡೋಣ!

Monday, June 2, 2025

ಒಳ್ಳೆಯ ಸಮಯ


ಮನುಷ್ಯ ಮತ್ತು ಪ್ರಾಣಿಗಲ್ಲಿರುವ ಅನೇಕ ವ್ಯತ್ಯಾಸಗಳಲ್ಲಿ ಸಮಯದ ಬಗ್ಗೆ ಇರುವ ಜ್ಞಾನವೂ ಒಂದು ಮುಖ್ಯವಾದ ಭೇದ. ಪ್ರಾಣಿಗಳಿಗೆ ಸಮಯದ ಜ್ಞಾನ ಕೇವಲ ಸೂರ್ಯೋದಯ, ಸೂರ್ಯಾಸ್ತಗಳಿಂದ ಉಂಟಾಗುವ ಹಗಲು ಮತ್ತು ರಾತ್ರಿಗಳಿಂದ ತಿಳಿಯುತ್ತದೆ. ಇದೇ ಕಾರಣಕ್ಕೆ ಇಡೀ ದಿನದ ವಾತಾವರಣ ಮೋಡ ಕವಿದಂತೆ ಇರುವಂದು ಮತ್ತು ಪೂರ್ಣ ಸೂರ್ಯ ಗ್ರಹಣ ಇರುವ ದಿನ ಅವುಗಳಿಗೆ ಜೀವನದಲ್ಲಿ ವ್ಯತ್ಯಾಸ ಆಗುತ್ತದೆ. ಹಗಲಿನಲ್ಲಿ ಪೂರ್ಣ ಸೂರ್ಯಗ್ರಹಣ ಉಂಟಾದಾಗ ಹಕ್ಕಿಪಕ್ಷಿಗಳು ತಮ್ಮ ಗೂಡುಗಳಿಗೆ ಹಿಂದಿರುಗಿ, ಗ್ರಹಣ ಬಿಟ್ಟ ತಕ್ಷಣ ಮತ್ತೆ ಹಗಲು ಬಂಡ ಭ್ರಮೆಯಲ್ಲಿ ಗಲಿಬಿಲಿಗೊಳ್ಳುತ್ತವೆ. ಮನುಷ್ಯನಾದರೋ ಗಡಿಯಾರಗಳ ಸಹಾಯದಿಂದ ದಿನವನ್ನು ಘಂಟೆ, ನಿಮಿಷಗಳಾಗಿ ವಿಭಜಿಸಿ, ಒಂದು ಸುರಂಗದಲ್ಲಿ ಸಿಕ್ಕಿಬಿದ್ದಿದ್ದರೂ ಸರಿಯಾದ ಸಮಯವನ್ನು ತಿಳಿಯಬಲ್ಲ. "ರಾಬಿನ್ ಸನ್ ಕ್ರೂಸೋ" ಕಥೆಯಲ್ಲಿ ಹಡಗು ಸಮುದ್ರದಲ್ಲಿ ಮುಳುಗಿದ ಕಾರಣ ಒಂದು ದ್ವೀಪದಲ್ಲಿ ಸಿಕ್ಕಿ ಬಿದ್ದ ಅವನು ಹೇಗೆ ತನ್ನದೇ ರೀತಿಯಲ್ಲಿ  ದಿನಗಳ ಲೆಕ್ಕ ಮಾಡಿಕೊಂಡ ಎಂದು ನೋಡಿದ್ದೇವೆ. 

ಪ್ರಾಣಿಗಳ ಜೀವನ ಪ್ರಕೃತಿಯ ಜೊತೆಗೆ ಬೆಸೆದುಕೊಂಡು ಅದರ ಆಗು-ಹೋಗುಗಳ ಮೇಲೆ ಪೂರ್ಣವಾಗಿ ಅವಲಂಬಿತವಾಗುತ್ತದೆ. ಮನುಷ್ಯನೂ ಪ್ರಕೃತಿಯ ಕೂಸೇ ಆದರೂ ತನ್ನ ಬುದ್ಧಿಶಕ್ತಿಯಿಂದ ಸಾಧ್ಯವಾದಷ್ಟೂ ಆಗು-ಹೋಗುಗಳನ್ನು ತನ್ನ ಅನುಕೂಲಕ್ಕೆ ತಿರುಗಿಸಿಕೊಳ್ಳಲು ನೋಡುತ್ತಾನೆ. ಮನುಷ್ಯನು ಅನೇಕ ಕೆಲಸಗಳನ್ನು ಪ್ರತಿದಿನ ಪ್ರಯತ್ನಪೂರ್ವಕವಾಗಿ ಮಾಡುತ್ತಾನೆ. ಹೀಗೇಕೆ?  ಅವನ ಎಲ್ಲ ಕೆಲಸಗಳಿಗೂ ಎರಡು ಕಾರಣಗಳು. ಮೊದಲನೆಯದು ಯಾವುದೋ ಒಂದು ದುಃಖದಿಂದ ಬಿಡುಗಡೆ. ಇಲ್ಲದಿದ್ದರೆ ಯಾವುದೋ ಒಂದು ಸುಖದ ಪಡೆಯುವಿಕೆಗೆ. ಹಸಿವು ಕಾಡುತ್ತಿದೆ. ಅದರ ಬಿಡುಗಡೆಗೆ ಏನಾದರೂ ತಿನ್ನಬೇಕು. ಇದೊಂದು ದಾರಿ. ಹಸಿವಿಲ್ಲ. ಆದರೂ ಏನಾದರೂ ರುಚಿಯಾದದ್ದನ್ನು ತಿಂದು ಸುಖಪಡಬೇಕು. ಅದಕ್ಕೆ ಪ್ರಯತ್ನ. ಹೀಗೆ ಉದಾಹರಣೆಗಳು ಕೊಡುತ್ತಾ ಹೋಗಬಹುದು. 

ದೈನಂದಿನ ಕೆಲಸಗಳನ್ನು ಮನುಷ್ಯ ಸಾಮಾನ್ಯವಾಗಿ ಯಾಂತ್ರಿಕವಾಗಿ ಮಾಡುತ್ತಾನೆ. ಆದರೆ ಯಾವುದಾದರೂ ಅವನು ಮುಖ್ಯವೆಂದು ತಿಳಿದ, ಅಥವಾ ಹೊಸದಾಗಿ ಪ್ರಾರಂಭಿಸುವ ವಿಶೇಷ ಕಾರ್ಯಗಳನ್ನು "ಸರಿಯಾದ ಸಮಯದಲ್ಲಿ ಮೊದಲುಮಾಡಬೇಕು" ಎಂದು ಆಶಿಸುತ್ತಾನೆ. ತನಗೆ ತಿಳಿದ ಎಲ್ಲ ಲೆಕ್ಕಾಚಾರಗಳನ್ನೂ ಹಾಕಿ ಒಂದು "ಒಳ್ಳೆಯ ಸಮಯ" ನಿರ್ಧರಿಸುತ್ತಾನೆ. ಕೆಲವು ಅತ್ಯಂತ ಮುಖ್ಯ ಕೆಲಸಗಳಿಗಂತೂ ತನ್ನದೇ ಆದ ತೀರ್ಮಾನಕ್ಕೆ ಸೀಮಿತಗೊಳಿಸದೇ ತಾನು ನಂಬಿದ ಮತ್ಯಾರೋ ವಿಶೇಷಜ್ಞರನ್ನು ಕೇಳುತ್ತಾನೆ. ಅವರು ಹಿರಿಯರಿರಬಹುದು, ಸ್ನೇಹಿತರಿರಬಹುದು, ಜ್ಯೋತಿಷಿಗಳಿರಬಹುದು ಅಥವಾ ಯಾರಾದರೂ ಅಧಿಕಾರದಲ್ಲಿ ಇರುವವರು ಇರಬಹುದು. ಒಟ್ಟಿನಲ್ಲಿ 'ಒಳ್ಳೆಯ ಸಮಯ" ಹುಡುಕಿ ಕೆಲಸ ಪ್ರಾರಂಭ ಮಾಡಬೇಕು. ಅದರಿಂದ ಒಳ್ಳೆಯದಾಗಿ ಹಿಡಿದ ಕೆಲಸ ಫಲಪ್ರದ ಆಗುತ್ತದೆ. ಹೀಗೆ ನಂಬಿಕೆ. ಹಾಗೊಂದು  ಆಸೆ ಕೂಡ. 

"ರಾಹುಕಾಲ ಮತ್ತು ಬಲಿಪಾಡ್ಯಮಿ" ಎನ್ನುವ ಹಿಂದಿನ ಒಂದು ಸಂಚಿಕೆಯಲ್ಲಿ ಮತ್ತು ಅದರ ಹಿಂದಿನ "ಹಿಂದು-ಮುಂದಾದ ಅಕ್ಷಯ ತೃತೀಯ" ಎನ್ನುವ ಸಂಚಿಕೆಯಲ್ಲಿ ಒಳ್ಳೆಯ ಸಮಯದ ಬಗ್ಗೆ ಸ್ವಲ್ಪ ವಿಚಾರ ಮಾಡಿದ್ದೆವು. (ಇದನ್ನು ಓದಲು ಇಲ್ಲಿ ಕ್ಲಿಕ್ ಮಾಡಿ).  ಒಳ್ಳೆಯ ಸಮಯ ನೋಡುವುದೇನೋ ಸರಿಯೇ. ಆದರೆ ಅದು ಎಂತಹ ಕೆಲಸಗಳಿಗೆ? ಒಳ್ಳೆಯ ಕೆಲಸಗಳಿಗೆ ಎನ್ನುವುದು ಒಂದು ಉತ್ತರ. ಹಾಗಾದರೆ ಯಾವುದು ಒಳ್ಳೆಯ ಕೆಲಸ? ಕಳ್ಳನಿಗೆ ಕಳ್ಳತನ ಮಾಡುವುದು ಒಂದು ವೃತ್ತಿ. ಅದು ಬೇರೆಯವರ, ಸಮಾಜದ ದೃಷ್ಟಿಯಲ್ಲಿ ಕೆಟ್ಟದಿರಬಹುದು. ಆದರೆ ಅವನಿಗೆ ಅದು ಒಂದು ಕೆಲಸ. ಅವನೂ ಆ ಕೆಲಸ ಮಾಡಲು ಒಂದು "ಒಳ್ಳೆಯ ಸಮಯ" ಹುಡುಕುತ್ತಾನೆ!

*****

"ಗುಬ್ಬಿ ವೀರಣ್ಣ" ಕನ್ನಡ ರಂಗಭೂಮಿ ಮತ್ತು ಚಲನಚಿತ್ರ ಇತಿಹಾಸದಲ್ಲಿ ಒಂದು ಬಲು ದೊಡ್ಡ ಹೆಸರು. ಅವರ "ಗುಬ್ಬಿ ಶ್ರೀ ಚನ್ನಬಸವೇಶ್ವರಸ್ವಾಮಿ ನಾಟಕ ಮಂಡಳಿ" ಇತಿಹಾಸ ಕನ್ನಡ ರಂಗಭೂಮಿಯ ಇತಿಹಾಸದ ಹೊನ್ನಿನ ಭಾಗ. ರಂಗ ಕಲಾವಿದರಾಗಿ, ಕಲಾವಿದರ ಪೋಷಕರಾಗಿ, ಅನೇಕ ಜನ ಕಲಾವಿದರ ಜೀವನಾಧಾರರಾಗಿ, ಕಂಠೀರವ ಸ್ಟುಡಿಯೋ ನಿರ್ಮಾತೃಗಳಲ್ಲೊಬ್ಬರಾಗಿ, ಗುಬ್ಬಿ ವೀರಣ್ಣನವರು ಮಾಡಿರುವ ಕಲಾಸೇವೆ - ಕನ್ನಡ ಸೇವೆ ಅನುಪಮ. ಅವರು, ಅವರ ಶ್ರೀಮತಿಯವರು, ಮಕ್ಕಳು, ಮೊಮ್ಮಕ್ಕಳು, ಹೀಗೆ ಇಡೀ ಕುಟುಂಬವೇ ಮೂರು ತಲೆಮಾರುಗಳಿಂದ ಈ ಕಾಯಕ ಮುಂದುವರೆಸಿಕೊಂಡು ಬಂದಿವೆ.

ರಂಗಭೂಮಿಯ ಪ್ರೇಕ್ಷಕರಿಗೆ ಹೊಸ ಹೊಸ ಪ್ರಯೋಗಗಳು ಬೇಕು. ಅದು ರೇಡಿಯೋ ಹೆಚ್ಚು ಜನಜನಿತವಾಗದ ಕಾಲ. ಟೆಲಿವಿಷನ್ ಕೇಳರಿಯದ ಕಾಲ. ಕಂಪನಿ ಆಡುವ ಎಲ್ಲ ನಾಟಕಗಳನ್ನು ನೋಡಿದ ಪ್ರೇಕ್ಷಕರು ರಂಗಮಂದಿರಕ್ಕೆ ಬರಲು ಕಡಿಮೆಯಾದ ಕಾಲದಲ್ಲಿ ಕಂಪನಿಯ ಮಾಲೀಕರಾದ ವೀರಣ್ಣನವರಿಗೆ ಹೊಸ ಪ್ರಯೋಗಗಳು ಬೇಕಾಯಿತಂತೆ. ಆಗ ಅವರ ಕೋರಿಕೆಯ ಮೇರೆಗೆ ಬೆಳ್ಳಾವೆ ನರಹರಿ ಶಾಸ್ತ್ರಿಗಳು ಎರಡು ಹೊಸ ನಾಟಕಗಳನ್ನು ಬರೆದು ಕೊಟ್ಟರಂತೆ. ಅವೇ "ಶ್ರೀ ಕೃಷ್ಣ ಗಾರುಡಿ" ಮತ್ತು "ಸದಾರಮೆ" ಎಂಬ ಹೆಸರಿನ ನಾಟಕಗಳು. ಈ ನಾಟಕಗಳು ಬಹಳ ಯಶಸ್ವಿಯಾದವು. ಮುಂದೆ ಈ ನಾಟಕಗಳನ್ನು ಬೇರೆ ಬೇರೆ ತಂಡಗಳು ಕೆಲವು ಬದಲಾವಣೆಗಳನ್ನು ಮಾಡಿಕೊಂಡು ಪ್ರದರ್ಶಿಸಿದವು. ಕಾಲಕ್ರಮದಲ್ಲಿ (1935) ಅದು ವೀರಣ್ಣನವರ ನೇತೃತ್ವದಲ್ಲೇ ಚಲನಚಿತ್ರ ಕೂಡ ಆಯಿತು. 

ಗುಬ್ಬಿ ವೀರಣ್ಣನವರೇ "ಸದಾರಮೆ" ನಾಟಕದಲ್ಲಿ "ಆದಿಮೂರ್ತಿ" ಮತ್ತು "ಪಕ್ಕಾ ಕಳ್ಳ" ಅನ್ನುವ ಪಾತ್ರಗಳನ್ನು ಮಾಡುತ್ತಿದ್ದರಂತೆ. ಮುಂದೆ ಕೆಲಕಾಲಾನಂತರ ಆದಿಮೂರ್ತಿ ಪಾತ್ರವನ್ನು ಬೇರೆ ಕಲಾವಿದರಿಗೆ ಮುಂದೆಬರಲು ಅನುವು ಮಾಡಿ ಬಿಟ್ಟುಕೊಟ್ಟರಂತೆ. ಕಳ್ಳನ ಪಾತ್ರವನ್ನು ಅವರೇ ಬಹಳ ಕಾಲ ಮಾಡುತ್ತಿದ್ದರಂತೆ. ಹೀಗೆಂದು ನಮ್ಮ ಹಿರಿಯರು ಹೇಳುತ್ತಿದ್ದರು. ನಾವು ರಂಗ ನಾಟಕಗಳನ್ನು ನೋಡುವ ವೇಳೆಗೆ ವೀರಣ್ಣನವರು ಪಾತ್ರಗಳನ್ನು ಮಾಡುವುದು ನಿಲ್ಲಿಸಿದ್ದುದು ನಮ್ಮ ದುರ್ದೈವ. ವೀರಣ್ಣನವರು ಕಳ್ಳನ ಪಾತ್ರ ಮಾಡುತ್ತಾರೆ ಎಂದು ಗೊತ್ತಾದರೆ ಅಂದಿನ ಕಲೆಕ್ಷನ್ ಮೂರು-ನಾಲ್ಕು ಪಟ್ಟು ಹೆಚ್ಚಾಗುತ್ತಿತ್ತಂತೆ. ಅದನ್ನು ಹತ್ತು-ಇಪ್ಪತ್ತು-ಮೂವತ್ತು ಬಾರಿ ನೋಡಿದವರೂ ಇದ್ದರು ಎಂದು ನಮ್ಮ ಹಿರಿಯರು ಹೇಳಿದ್ದು ಕೇಳಿದ್ದೇನೆ. 

*****

ಕಳ್ಳತನ ಮಾಡಲಿಕ್ಕೂ "ಒಳ್ಳೆಯ ಸಮಯ" ಬೇಕು! ಸದಾರಮೆ ನಾಟಕದ "ಪಕ್ಕಾ ಕಳ್ಳ" ರಂಗದಮೇಲೆ ಹಾಡುತ್ತಿದ್ದ ಹಾಡು ಹೀಗಿದೆ:

ಒಳ್ಳೆಯ ಸಮಯ, ಒಳ್ಳೆ ಸಮಯ, ಒಳ್ಳೆಯ ಸಮಯವು
ಕಳ್ಳತನ ಮಾಡಲೆನಗೆ ಒಳ್ಳೆಯ ಸಮಯವು! 

ದೊಡ್ಡ ಬಂಗ್ಲೆ ಒಳಗೆ ಬಂದ ನನ್ನ ಪುಣ್ಯವೋ 
ಹೆಡ್ಡರಂತೆ ಗೊರಕೆ ಹೊಡೆವರಿವರ ಪಾಪವೋ  

ಹೂತಿಟ್ಟ ದುಡ್ಡಿಗೆಲ್ಲ ನಾವೇ ಬಾಧ್ಯರು 
ಬಚ್ಚಿಟ್ಟ  ದುಡ್ಡಿಗೆಲ್ಲ ನಾವೇ ಬಾಧ್ಯರು  

ಅನ್ಯಾಯದ ದುಡ್ಡಿಗೆಲ್ಲ ನಾವೇ ವಾರಸುದಾರರು  
ದಿಕ್ಕುಗೆಟ್ಟ ಮನೆಗಳಿಗೆಲ್ಲ ನಾವೇ ಜವಾಬ್ದಾರರು  

ನಾವು ಹಳ್ಳಿಗಳನ್ನು ಕೊಳ್ಳೆ ಹೊಡೆವ ಹೊಸಾ ಕಳ್ಳರು 
ನಾವು ಡೊಳ್ಳು ಹೊಟ್ಟೆ ಪೊಲೀಸ್ನವರ ಕಣ್ಗೆ ಬೀಳೆವು 

ಕಣ್ಣುಮುಚ್ಚಿ ಬಿಡುವುದರಲಿ ಕನ್ನ ಹಾಕುವೆ 
ಚಿನ್ನ-ಬೆಳ್ಳಿ ಒಡವೆಗಳನ್ನು ಕೊಂಡು ಹೋಗುವೆ  

ನಮ್ಮ ಬಾಲ್ಯದಲ್ಲಿ ಶಾಲಾ ವಾರ್ಷಿಕೋತ್ಸವಕ್ಕಾಗಿ ನಡೆಯುತ್ತಿದ್ದ "ಏಕಪಾತ್ರಾಭಿನಯ" ಸ್ಪರ್ಧೆಗಳಲ್ಲಿ ಒಬ್ಬ ವಿದ್ಯಾರ್ಥಿಯಾದರೂ ಈ ವೇಷ ಹಾಕಿರುತ್ತಿದ್ದ. ಬಹುಮಾನಗಳನ್ನೂ ಹೊಡೆಯುತ್ತಿದ್ದ. ಈ ಹಾಡು ಎಲ್ಲ ಶಾಲಾಮಕ್ಕಳಿಗೂ ಬಾಯಿಪಾಠವಾದಂತಿತ್ತು!

*****

ಕಳ್ಳತನ ಮಾಡಲಿಕ್ಕೇ ಒಳ್ಳೆಯ ಸಮಯ ಬೇಕು ಎಂದಮೇಲೆ ಮದುವೆ, ಮುಂಜಿ, ನಾಮಕರಣ, ಗೃಹ ಪ್ರವೇಶ ಮುಂತಾದ ಶುಭ ಕಾರ್ಯಗಳಿಗೆ ಒಳ್ಳೆಯ ಸಮಯ ಬೇಕೇ ಬೇಕು. ಅಲ್ಲವೇ? ಆದ್ದರಿಂದ ತಿಳಿದ ಜೋಯೀಸರೋ, ಪುರೋಹಿತರೋ, ಐನೂರೋ, ಬುದ್ಯೋರೋ, ಅವರ ಬಳಿಗೆ ಹೋಗಿ ಒಳ್ಳೆಯ ದಿನವನ್ನು ಗೊತ್ತು ಮಾಡುವುದು ನಡೆದೇ ಇದೆ. ಬರೀ ಒಳ್ಳೆ ದಿನ ಮಾತ್ರವಲ್ಲ; ಆ ದಿನದಲ್ಲೂ ಒಂದು ಒಳ್ಳೆಯ ಮುಹೂರ್ತ ತೆಗೆಯುತ್ತಾರೆ. ಅಲ್ಲಿ ಕೊಟ್ಟ ಅರ್ಧ ಅಥವಾ ಮುಕ್ಕಾಲು ಗಂಟೆಯಲ್ಲಿಯೇ ಮುಖ್ಯವಾದ ಮಂಗಳ ಕಾರ್ಯ ನಡೆಯಬೇಕು. ಅದು ಮದುವೆಯಲ್ಲಿ ಧಾರೆ-ಮಾಂಗಲ್ಯಧಾರಣೆ ಇರಬಹುದು. ಮುಂಜಿಯಲ್ಲಿ ಮಂತ್ರೋಪದೇಶ ಇರಬಹುದು. ಗೃಹ ಪ್ರವೇಶದಲ್ಲಿ ಗೋಪ್ರವೇಶ ಇರಬಹುದು. ಹೀಗೆ. ಈ ಸಮಯವನ್ನು ಆಹ್ವಾನ ಪತ್ರಿಕೆಗಳಲ್ಲೂ ಹಾಕುತ್ತಾರೆ. ಬಹಳ ಜನ ಆ ಸಮಯಕ್ಕಾಗಿ ಬರುತ್ತಾರೆ. ಎಲ್ಲರ ಗಮನವೂ (ಊಟದ ಮನೆ ಕಡೆ ನೋಡುವವರನ್ನು ಬಿಟ್ಟು) ಲಗ್ನಸಾಧನೆ, ಅಂದರೆ ಆ ಸಮಯದಲ್ಲಿ ಮುಖ್ಯ ಕೆಲಸ ಆಗುವುದರ ಕಡೆ. (ಹೀಗೆಂದು ನಂಬಿಕೆ). 

ಆದರೆ ಚೆನ್ನಾಗಿ ಗಮನಿಸಿ ನೋಡಿದರೆ ಇನ್ನೊಂದು ವಿಶೇಷ ಕಾಣುತ್ತದೆ. ಆ ಸಮಯ ಬಂಡ ನಂತರ ಮಂಗಳ ಕಾರ್ಯ ತಕ್ಷಣ ನಡೆಯುವುದಿಲ್ಲ. "ಮಂಗಳಾಷ್ಟಕ" ಎನ್ನುವ ಎಂಟು (ಶ್ಲೋಕ) ಪದ್ಯಗಳೋ ಅಥವಾ ಕೆಲವು ಪದ್ಯಗಳನ್ನಾದರೂ ಹೇಳುತ್ತಾ "ಸುಲಗ್ನ ಸಾವಧಾನ! ಸುಮುಹೂರ್ತ ಸಾವಧಾನ!" ಎಂದು ಹೇಳುತ್ತಿರುತ್ತಾರೆ. ಕೆಲವು ಪದ್ಯಗಳನ್ನು ಹೀಗೆ  ಹೇಳಿದನಂತರ ಕೊನೆಯಲ್ಲಿ:

ತದೇವ ಲಗ್ನ೦ ಸುದಿನ೦ ತದೇವ, ತಾರಾಬಲ೦ ಚಂದ್ರಬಲ೦ ತದೇವ 
ವಿದ್ಯಾಬಲ೦ ದೈವಬಲ೦ ತದೇವ, ಲಕ್ಷ್ಮೀಪತೇ ತೇ ಅಂಘರಿಯುಗ೦ ಸ್ಮರಾಮಿ 

ಎಂದು ಹೇಳುತ್ತಾ ಮುಖ್ಯ ಕೆಲಸವನ್ನು ನಡೆಸುತ್ತಾರೆ!

"ಹೇ ಸರ್ವಶಕ್ತನಾದ ಪರಮಾತ್ಮನೇ, ನಿನ್ನನ್ನು (ನಿನ್ನ ಪಾದಪದ್ಮಗಳನ್ನು) ನೆನೆಯುವ ಸಮಯವೇ ಒಳ್ಳೆಯ ಸಮಯ. ಅದೇ ಒಳ್ಳೆಯ ಲಗ್ನ. ಅದೇ ಒಳ್ಳೆಯ ದಿನ. ತಾರಾಬಲ, ಚಂದ್ರಬಲಾದಿ ಸಕಲ ಗ್ರಹ ಬಲಗಳೂ ನಿನ್ನನ್ನು ನೆನೆಯುವ ಕಾಲದಲ್ಲಿ ಬಂದು ಒದಗುತ್ತವೆ. ವಿದ್ಯಾಬಲ, ದೈವಬಲ, ಮುಂತಾದ ಎಲ್ಲ ಬಲ ಕೊಡುವ ಕಾರಣಗಳೂ ಆಗ ಬಂದುಬಿಡುತ್ತವೆ. ಈಗ ನಿನ್ನನ್ನು ನೆನೆಯುತ್ತಿದ್ದೇನೆ. ಆದ ಕಾರಣ ಈ ಕ್ಷಣದಲ್ಲಿ ಈ ಮಂಗಳ ಕಾರ್ಯವನ್ನು ಮಾಡುತ್ತಿದ್ದೇನೆ; ಮಾಡುತ್ತಿದ್ದೇವೆ. ಇದು ಸಾರ್ಥಕವಾಗಲಿ!" ಎಂದು ಹೇಳುತ್ತಾ ಮುಖ್ಯ ಕೆಲಸ ನಡೆಯುತ್ತದೆ. 

*****

ಹೀಗೆ ಮೇಲೆ ಹೇಳಿದುದು ಅರ್ಥವಾದರೆ "ಒಳ್ಳೆಯ ಸಮಯ" ಯಾವುದು ಎಂದು ನಂಬಿದವರಿಗೆ ಗೊತ್ತಾಗುವುದು. ಪರಮಾತ್ಮನ ಸ್ಮರಣೆ ಇರುವ ಎಲ್ಲ ಕಾಲವೂ ಒಳ್ಳೆಯ ಕಾಲ. ಸ್ಮರಣೆಯಿಲ್ಲದಿರುವ ಎಲ್ಲ ಕಾಲವೂ, ಅದು ಎಷ್ಟೇ ಶುಭಕರ ಎಂದು ಲೆಕ್ಕ  ಹಾಕಿದ್ದರೂ, ಅಷ್ಟಕ್ಕಷ್ಟೇ!

Saturday, May 31, 2025

From BTM To BSNL


First of June is an important date in India. It is the day on which monsoon is expected to break in and bring the most important rains for the agriculture sector. The South-West monsoon rains spur the farming activity and herald the advent of Kharif season. It decides the quantum of agriculture production for the year. It is also important for other reasons as well; providing drinking water for people and animals, augmenting ground water level, bringing relief from the sweltering summer heat and so on. In vast rain dependant dry cropping areas, the level of monsoon rains decides yield on certain crops. 

Present generation has not seen the real struggle in life due to famines. Failure of monsoon for two or three years successively was a common feature some six or seven decades ago. (Please click here to read a blog post titled "Knock on the Door" about famines). Improvements in water management by construction of dams across all rivers and thereby increasing storage capacities in the dams has somewhat reduced the full force of a monsoon failure. Even then, there would be serious concerns of water shortage if monsoon rains fail. 

What is the quantum of food grains produced in the country? For the year 2024-25, total food grain production in the Khariff season was about 165 million metric tonnes. Compare this with total annual production of food grains in the country at 51 million metric tonnes in 1950. Total food grain production since independence has increased five-fold, crossing 300 million tonnes last year. This is only of food grains and excluding other food components production. 

Such tremendous increase in food production has made India self-sufficient in food as well as a food grains exporting country. Since the advent of Covid, government has been providing free food grains to 80 crore people in the country! Meteorological department predicts the breakout of monsoon and the extent of rain coverage every year. There are instances of delay in onset of monsoon in some years. But this year (2025) it has arrived more than a week in advance. The meteorological forecast is for 106 percent rains, meaning it will be meeting full expectations. There are usually some showers in some areas of the country, especially the southern states, some two weeks before June, known as pre-monsoon showers. This years pre-monsoon showers have been quite strong. In fact, the gap between pre-monsoon showers and regular monsoon rains appears to have vanished. 

*****  
Monsoon rains bring cheer to the farming sector, but often a cause of worry for people inhabited in low lying areas. Man's greed has resulted in gross urbanisation and skyrocketing of real estate prices. Hundreds of lakes have been encroached upon and high rise buildings have come up there. This is even more striking in cities like Bangalore. Bangalore City is situate at about 3,000 feet above sea level and comprises valleys and uneven landscape. It was housing more than 1,000 lakes, big and small. Most of them have since vanished and made way for new residential areas with high rise flats culture. 

Like in earlier years, this years rains have also brought in its share of woes to the residents of low lying areas in Bangalore. Not just cases of water gushing into houses and flats, but also flooding of roads and water-logging in important traffic junctions. There are many such pain points all over the city. Silk Board junction in BTM layout is much in discussion. Of course, there are even more dangerous spots in the city. People not able to swim should not venture to go out. Cars are floating and valuable furniture and gadgets are all soaked in water. Drinking water is difficult to procure. There is a big danger of breakout of epidemics. Added to the worries are reports of Covid resurfacing. Recent reports suggest that the count has crossed 3,000 though all concerned authorities are reassuring that the situation is not alarming.

Flooding is not just on roads and houses. WhatsApp groups are flooded with photos and cartoons. The real situation photos like people wading through waist-deep rain water, cars floating, people being rescued on boats are galore. There are memes of entrepreneurs coming up with services of strong people carrying other people to cross slush and floods, on their back for a fee. There are headlines of "A river for every house", "Water Bhagya Project" and "Own your stream scheme" and so on.

The real tragedy is of the fact that the politicians responsible for encroachment of lakes for housing projects are now the ones tasked with rescuing people from the floating city. Endless blame game is going on. Sadly, everything will be forgotten as soon as the rains subside and it would be life as usual. The entire drama will be reenacted next year. 

*****

Amidst all these drowning news items and memes, one news of a government entity, that was considered drowned for ever, trying to float has got drowned indeed. BSNL (Bharat Sanchar Nigam Limited) was considered as drowned for ever. Questions were asked about as to how long the government will continue to pour taxpayers  money into this white elephant. There were serious complaints that the successive governments neglected providing for capital expenditure to BSNL to favour private operators. 

The recent publication of audited financial results of BSNL for the year 2024-25 has shown back-to-back quarterly profits during Q3 and Q4 of the financial year. A profit of Rs. 261 crores during Q3 has moved up to Rs.280 crores during Q4. Loss during the year 2024-25 stood at Rs. 2,247 crores, down from Rs. 5,370 crores during the previous year. This 58% reduction in loss is no mean achievement considering that the finances of BSNL were in total mess. Addition of capital assets in the form of equipments and towers was to a remarkable extent of Rs. 26,022 crores. 

This position is equivalent to a drowning man showing some signs of fighting back, though actual fight for full recovery is quite far far away. Even with back-to-back quarterly profits, annual loss was at a staggering level. However, there are indications that the problem is being attacked. One can only hope that this fight continues and BSNL will continue its efforts to float back to safety. 

*****

BTM layout and its cousins are drowning. BSNL makes a struggle to keep afloat. May be a reflection of the times we live in! 

Tuesday, May 27, 2025

ಪಿತ್ರಾರ್ಜಿತ ಆಸ್ತಿ ತಗಾದೆಗಳು


ಅಂದು ತಿಮ್ಮಪ್ಪಯ್ಯನವರ ಹೆಂಡತಿಯ ಎರಡನೇ ವರುಷದ ಕಾಲ ಶ್ರಾದ್ಧ. (ಕಾಲಶ್ರಾದ್ಧ ಅಂದರೆ ಪ್ರತಿ ವರುಷ ಮಾಡುವ ಒಂದು ದಿನದ ಶ್ರಾದ್ಧ). ಮೊದಲನೇ ಮಹಾಯುದ್ಧದ ಕಾಲದಲ್ಲಿ ಹುಟ್ಟಿದ ತಿಮ್ಮಪ್ಪಯ್ಯನವರ ಮದುವೆ ಸಂಬಂಧಿಯೊಬ್ಬರ ಮಗಳು ಕಮಲಮ್ಮನೊಡನೆ ಎರಡನೇ ಮಹಾಯುದ್ಧದ ಕಾಲದಲ್ಲಿ ಆಯಿತು. ಎರಡು ಮಹಾಯುದ್ಧಗಳ ಸಂಬಂಧ ಹುಟ್ಟು ಮತ್ತು ಮದುವೆಗಳಿಗೆ ಇದ್ದರೂ, ಐವತ್ತಮೂರು ವರುಷಗಳ ದಾಂಪತ್ಯ ಹೆಚ್ಚಿನ ಕದನಗಳಿಲ್ಲದೇ ಅನ್ಯೋನ್ಯವಾಗಿಯೇ ಕಳೆದಿತ್ತು. ಮೊದಲ ಮಗು ಗಂಡು. ನಂತರ ಎರಡು ಹೆಣ್ಣು. ಆಮೇಲೆ ಮತ್ತೆರಡು ಗಂಡು. ಈಗ ಎಲ್ಲರೂ ದೊಡ್ಡವರಾಗಿ, ವಿವಾಹವಾಗಿ ಅವರವರ ಪಾಡಿಗೆ ಜೀವನ ನಡೆಸಿಕೊಂಡಿದ್ದಾರೆ. ಎಷ್ಟಿದ್ದರೂ ತಿಮ್ಮಪ್ಪಯ್ಯ ಈಗ ಒಂಟಿ. ಇಂದು ಕಮಲಮ್ಮನವರ ಶ್ರಾದ್ಧವಾದದ್ದರಿಂದ ಕುಟುಂಬದ ಎಲ್ಲರೂ ಒಂದೆಡೆ ಸೇರುವ ಅವಕಾಶ.

ತುಮಕೂರಿನಿಂದ ಹನ್ನೆರಡು ಮೈಲುಗಳ ದೂರದ ಪುಟ್ಟ ಗ್ರಾಮದವರು ತಿಮ್ಮಪ್ಪಯ್ಯ. ಎಲ್ಲರಿಗೂ ಅನುಕೂಲವಾಗಲೆಂದು ಬೆಂಗಳೂರಿನ ತಮ್ಮ ಬಹುಕಾಲದ ಸ್ನೇಹಿತರೊಬ್ಬರ ಮನೆಯಲ್ಲಿ ಶ್ರಾದ್ಧದ ವ್ಯವಸ್ಥೆ ಮಾಡಿದ್ದರು. ಸ್ನೇಹಿತರು ಈ ಕೆಲಸ ನಡೆಸಲು ತಮ್ಮ ಮನೆಯ ಮಹಡಿಯ ಭಾಗವನ್ನೇ ಮೀಸಲಿಟ್ಟಿದ್ದರು. ಉಪಾಧ್ಯಾಯರಾಗಿ ನಿವೃತ್ತರಾದ ಮೇಲೆ ಅವರಿಗೆ ಇದು ಸಂಪಾದನೆಯ ದಾರಿಯೂ ಆಗಿತ್ತು. ಶ್ರಾದ್ಧಗಳನ್ನು ಮಾಡುವವರಿಗೆ ಇದು ಬಹಳ ಸಲೀಸು. ಎಲ್ಲಾ ಜವಾಬ್ದಾರಿ ರಾಮಾಜೋಯಿಸರದು. ಫೋನ್ ಮಾಡಿ ದಿನ ಹೇಳಿ ಗೊತ್ತುಮಾಡಿದ್ದರೆ ಆಯಿತು. ಎಲ್ಲಾ ಸಿದ್ಧ ಮಾಡಿಟ್ಟು ಕೆಲಸ ನಡೆಸಿಕೊಡುತ್ತಾರೆ. 

ತಿಮ್ಮಪ್ಪಯ್ಯನವರ ಎರಡನೇ ಮಗ ಮತ್ತು ಮೂರನೇ ಮಗ ಮನೆಯವರ ಜೊತೆ ಬೆಳಿಗ್ಗೆ ಸರಿಯಾದ ಸಮಯಕ್ಕೆ ಬಂದಿದ್ದರು. ದೊಡ್ಡವನು ಇನ್ನೂ ಬಂದಿರಲಿಲ್ಲ. ಒಂದು ಕಾಲು ಗಂಟೆ ಕಾದು ನೋಡಿ ಇಬ್ಬರೂ ಕೆಲಸ ಪ್ರಾರಂಭಿಸಿದರು. ಅದಾದ ಮೇಲೆ ಒಂದು ಘಂಟೆಯ ನಂತರ ದೊಡ್ಡವನು ಬಂದ. ತಡವಾಗಿ ಬಂದಿದ್ದೇನೆ ಎಂದು ಅವನಿಗೂ ಗೊತ್ತು. ಕೆಲಸದ ಮಧ್ಯೆ ಬಂದಿದ್ದರಿಂದ ಮಾಡಿಸುತ್ತಿದ್ದ ರಾಮಾಜೋಯಿಸರಿಗೆ ಕೋಪ ಬಂತು. ಸ್ನೇಹಿತರ ಮಕ್ಕಳನ್ನು ಚಿಕ್ಕಂದಿನಿಂದ ನೋಡಿದ್ದ ಸಲಿಗೆ ಅವರಿಗೆ. 

"ಇದೇನು ಬರುವ ಸಮಯವೇ? ನಿನಗಾಗಿ ಎಷ್ಟು ಹೊತ್ತು ಕಾಯಬೇಕು?" ಎಂದು ಥಟ್ಟನೆ ಅಂದುಬಿಟ್ಟರು. 

ಬಂದವನಿಗೆ ಮುಖ ಪೆಚ್ಚಾಯಿತು. ಕುಳಿತಿದ್ದವರಲ್ಲಿ ಕೆಲವರು ಘೊಳ್ಳೆಂದು ನಕ್ಕರು. ಇನ್ನಷ್ಟು ಅವಮಾನವಾಯಿತು. ಏನೂ ಹೇಳಲಾರದೇ ಸುಮ್ಮನೆ ನಿಂತ. 

"ಆಯಿತು ಬಿಡು. ಬೇಗ ಸ್ನಾನ ಮಾಡಿ ಬಂದು ಸೇರಿಕೋ, ಪರವಾಗಿಲ್ಲ" ಎಂದರು ತಿಮ್ಮಪ್ಪಯ್ಯ. 

ತಂದೆಯ ಮಾತಿನಿಂದ ಸ್ವಲ್ಪ ಸಮಾಧಾನವಾಯಿತು. ಬೇಗ ಬಂದು ತಮ್ಮಂದಿರ ಜೊತೆ ಸೇರಿಕೊಂಡ. ಮುಂದಿನ ಕೆಲಸ ನಡೆಯಿತು. ಎಲ್ಲರ ಊಟಗಳಾದ ಮೇಲೆ ಅವರವರ ದಾರಿ ಹಿಡಿದರು. 

*****

ಈಚಿನ ದಿನಗಳಲ್ಲಿ ತಿಮ್ಮಪ್ಪಯ್ಯನವರು ಹೆಚ್ಚು ಕಾಲ ಎರಡನೇ ಮಗನ ಕುಟುಂಬದ ಜೊತೆ ಬೆಂಗಳೂರಿನಲ್ಲಿ ಇರುತ್ತಿದ್ದರು. ಮಧ್ಯೆ ಮಧ್ಯೆ ಹಳ್ಳಿಗೆ ಹೋಗಿ-ಬಂದು ಮಾಡುತ್ತಿದ್ದರು. ಇಂದು ಎರಡನೆಯ ಮಗನಿಗೆ ತಾವು ಸ್ವಲ್ಪ ತಡವಾಗಿ ಬರುವುದಾಗಿ ಹೇಳಿ ಜೋಯಿಸರ ಮನೆಯಲ್ಲಿಯೇ ಉಳಿದರು. ಊಟದ ನಂತರ ವಿಶ್ರಾಂತಿಯಾಯಿತು. ಕಾಫಿ ಬಂದಿತು. ಸ್ನೇಹಿತರಿಬ್ಬರೂ ಕಾಫಿ ಲೋಟಗಳನ್ನು ಹಿಡಿದು ಮಾತಾಡತೊಡಗಿದರು. 

"ಜೋಯಿಸರೇ, ನಿಮಗೆ ನಮ್ಮ ಕುಟುಂಬದ ಬಗ್ಗೆ ಚೆನ್ನಾಗಿ ಗೊತ್ತು. ಆದರೂ ಕೆಲವು ವಿಷಯಗಳನ್ನು ಇವತ್ತು ನಾನು ಇಂದು ನಿಮಗೆ ಹೇಳಬೇಕು. ಅದಕ್ಕೇ ಹಿಂದೆ ಉಳಿದುಕೊಂಡೆ"

"ಹೇಳಿ ತಿಮ್ಮಪ್ಪಯ್ಯನವರೇ. ಏನು ವಿಷಯ?"
"ನಮ್ಮ ದೊಡ್ಡವನು ತಡವಾಗಿ ಬಂದ ಎಂದು ನೀವು ಕೋಪಿಸಿಕೊಂಡಿರಿ. ಅದು ಸಹಜವೇ ಹೌದು. ಆದರೆ ಅದು ಅವನ ತಪ್ಪಲ್ಲ"
"ಹೇಗೆ? ನನಗೆ ಅರ್ಥವಾಗಲಿಲ್ಲ"
"ನೋಡಿ ಜೋಯಿಸರೇ, ನಿಮಗೆ ಗೊತ್ತಿರುವಂತೆ ಐದು ಬೆರಳೂ ಒಂದೇ ಸಮವಿರುವುದಿಲ್ಲ"
"ಅದು ಸರಿ ಆದರೆ ಅದಕ್ಕೂ ಇದಕ್ಕೂ ಏನು ಸಂಬಂಧ?"

"ದೊಡ್ಡವನು ಹುಟ್ಟಿದಾಗ ನಾವು ಹಳ್ಳಿಯ ಹಿರೀಕರು ಕಟ್ಟಿಸಿದ್ದ ಮನೆಯಲ್ಲಿದ್ದವರು. ಆಗಿನ್ನೂ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದಿರಲಿಲ್ಲ. ಓದು-ವಿದ್ಯೆಗೆ ಅನುಕೂಲಗಳಿರಲಿಲ್ಲ. ಮೂರು ಮೈಲು ದೂರದ ದೊಡ್ಡ ಹಳ್ಳಿಯಲ್ಲಿ ಪ್ರೈಮರಿ ಶಾಲೆ. ಮಾಧ್ಯಮಿಕ, ಪ್ರೌಢ ಶಾಲೆಗಳಿಗೆ ತುಮಕೂರಿಗೆ ಹೋಗಬೇಕಿತ್ತು. ಮಳೆ-ಗಾಳಿಯಲ್ಲಿ ನಡೆದೇ ಹೋಗಬೇಕಿತ್ತು. ಹಾಗೂ-ಹೀಗೂ ಹೈಸ್ಕೂಲ್ ತನಕ ಓದಿದ. ನಂತರ ಓದು ನಿಲ್ಲಿಸಿ ನನ್ನ ಜೊತೆ ಹೊಲ-ಗದ್ದೆ ನೋಡಿಕೊಂಡು ರೈತನಾದ. ಈಗಲೂ ಹೆಂಡತಿ-ಮಕ್ಕಳ ಜೊತೆ ಅಲ್ಲೇ ಇದ್ದಾನೆ"
"ನರಿ. ಗೊತ್ತಾಯಿತು"
"ಎರಡನೆಯವನು ಆಮೇಲೆ ಇಬ್ಬರು ಹೆಣ್ಣು ಮಕ್ಕಳು ಹುಟ್ಟಿದ ನಂತರ ಬಂದ ಸಂತಾನ. ಅವನು ಶಾಲೆಗೆ ಹೋಗಲು ಪ್ರಾರಂಭಿಸಿದಾಗ ಪರಿಸ್ಥಿತಿ ಸ್ವಲ್ಪ ಉತ್ತಮವಾಗಿತ್ತು. ಸ್ವತಂತ್ರ ಭಾರತ. ಹತ್ತಿರದ ಹಳ್ಳಿಯಲ್ಲಿಯೇ ಮಾಧ್ಯಮಿಕ ಶಾಲೆಯೂ ಆಯಿತು. ನನಗೂ ಸ್ವಲ್ಪ ಆರ್ಥಿಕವಾಗಿ ಶಕ್ತಿ ಕೂಡಿಕೊಂಡಿತ್ತು. ಹಿರಿಯರು ಬಿಟ್ಟು ಹೋಗಿದ್ದ ಜಮೀನಿನ ಜೊತೆ ಇನ್ನೂ ಸ್ವಲ್ಪ ಕೊಂಡುಕೊಂಡೆ. ಎರಡನೆಯವನು ಕಾಲೇಜು ವಿದ್ಯಾಭ್ಯಾಸ ಮುಗಿಸಿ ಸರ್ಕಾರಿ ನೌಕರಿ ಹಿಡಿದ. ಅವನು ಬೆಂಗಳೂರಿನಲ್ಲಿ ಎಂ.ಏ. ಓದುತ್ತಿದ್ದಾಗ ಇಲ್ಲಿ ಒಂದು ಸಣ್ಣ ಮನೆ ಕಟ್ಟಿದೆ. ಈಗ ಅವನ ಕುಟುಂಬ ಅದನ್ನೇ ದೊಡ್ಡದು ಮಾಡಿಕೊಂಡು ಇಲ್ಲೇ ವಾಸವಾಗಿದ್ದಾರೆ. ನಾನೂ ಹೆಚ್ಚಿನ ಸಮಯ ಇಲ್ಲೇ ಕಳೆಯುತ್ತಿದ್ದೇನೆ. ಡಾಕ್ಟರು-ಆಸ್ಪತ್ರೆಗಳಿಗೆ ಹತ್ತಿರ "
"ಅದು ಸರಿಯೇ"

"ಮೂರನೆಯವನು ವಿದ್ಯಾಭ್ಯಾಸಕ್ಕೆ ಬರುವ ವೇಳೆಗೆ ಬೆಂಗಳೂರಿನ ಮನೆಯಿತ್ತು. ಓದಿನ ಖರ್ಚು ಕೊಡಲು ನನಗೂ ಶಕ್ತಿ ಬಂದಿತ್ತು. ಎಂ.ಬಿ.ಬಿ.ಎಸ. ಓಡಿಸಿದೆ. ಅವನ ಜೊತೆಯಲ್ಲಿ ಓದುತ್ತಿದ್ದ ಹುಡುಗಿಯ ತಂದೆ ಮದುವೆಯ ಪ್ರಸ್ತಾಪ ಇಟ್ಟರು. ಅವರು ಮುಂಬಯಿನವರು. ಮದುವೆಯಾಗಿ ಮುಂಬಯಿಗೆ ಹೋದ. ಮುಂದೆ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಅವರೇ ನೋಡಿಕೊಂಡರು. ಈಗ ಅವನು ಮುಂಬಯಿಯಲ್ಲಿ ಹೆಸರಾದ ಡಾಕ್ಟರು. ಗಂಡ-ಹೆಂಡತಿ ಪ್ರಾಕ್ಟಿಸು ಚೆನ್ನಾಗಿಯೇ ನಡೆಯುತ್ತಿದೆ.  ಹೆಂಡತಿ-ಮಕ್ಕಳ ಜೊತೆ ಅಲ್ಲೇ ಇದ್ದಾನೆ"
"ಈಗ ಎಲ್ಲವೂ  ಅರ್ಥವಾಗುತ್ತಿದೆ" 
"ಎರಡನೆಯವನು ಇಲ್ಲಿಂದಲೇ ಇಂದಿನ ಕೆಲಸಕ್ಕೆ ಬಂದ. ಕಡೆಯವನು ನಿನ್ನೆಯೇ ಮುಂಬಯಿಯಿಂದ ವಿಮಾನದಲ್ಲಿ ಬಂದ. ಹೊತ್ತಿಗೆ ಸರಿಯಾಗಿ ಬಂದರು. ಮೊದಲನೆಯವನು ಹಳ್ಳಿಯಿಂದ ಬರಬೇಕು. ವ್ಯವಸಾಯದ ಕೆಲಸ. ಬಿಟ್ಟು ಬಂದರೆ ಆಳುಗಳು ಕೆಲಸ ಕೆಡಿಸುತ್ತಾರೆ. ಬೆಳಿಗ್ಗೆ ಬೇಗ ಹೊರಟು ತುಮಕೂರಿಗೆ ಬಂದು ಮತ್ತೊಂದು ಬಸ್ಸು ಹಿಡಿದು ಇಲ್ಲಿ ಬರಬೇಕು. ಹಳ್ಳಿಯಲ್ಲಿ ಬೆಳಗಿನ ಬಸ್ಸು ಒಂದೊಂದು ದಿನ ಬರುವುದೇಇಲ್ಲ. ಹೀಗಾಗಿ ತಡವಾಗಿದೆ. ಎಲ್ಲರಿಗಿಂತ ಮೊದಲು ಹೊರಟಿರಬೇಕು ಅವನು. ಇಲ್ಲಿ ಬರುವುದರಲ್ಲಿ ತಡವಾಗಿದೆ"
"ನಾನು ರೇಗಿದ್ದು ತಪ್ಪಾಗಿರಬೇಕು. ಈ ಸೂಕ್ಷ್ಮಗಳು ನನಗೆ ಗೊತ್ತಿಲ್ಲ" 

"ಈಗ ನನ್ನ ಕಾಲವೂ ಮುಗಿಯುವಂತೆ ಕಾಣುತ್ತದೆ. ಆರೋಗ್ಯ ಅಷ್ಟು ಚೆನ್ನಾಗಿಲ್ಲ. ಕಮಲ ಹೋದ ಮೇಲೆ ಹೆಚ್ಚು ದಿನ ಬದುಕುವ ಉತ್ಸಾಹವೂ ಇಲ್ಲ. ಹಳ್ಳಿಯ ಹೊಲ-ಮನೆ ಹಿರಿಯ ಮಗನಿಗೆ ಕೊಡುತ್ತೇನೆ. ಬೆಂಗಳೂರಿನ ಮನೆ ಎರಡನೇಯವನಿಗೆ. ಕಮಲಳ ಒಡವೆಗಳು, ಇರುವ ಸ್ವಲ್ಪ ನಗದು ಮತ್ತು ಬ್ಯಾಂಕಿನ ಹಣ ಕಡೆಯವನಿಗೆ. ಹೆಣ್ಣು ಮಕ್ಕಳಿಗೆ ಕಾಲಕಾಲಕ್ಕೆ ಚೆನ್ನಾಗಿಯೇ ಕೊಟ್ಟಿದ್ದೇನೆ. ಅವರುಗಳೂ ಅನುಕೂಲವಾಗಿದ್ದಾರೆ. ಈ ರೀತಿ ಭಾಗ ಮಾಡುವುದು ಅವರೆಲ್ಲರಿಗೂ ಒಳ್ಳೆಯದು. ಇವರಿಬ್ಬರೂ ಹಳ್ಳಿಗೆ ಹೋಗುವವರಲ್ಲ. ಅವರಮಟ್ಟಿಗೆ ಚೆನ್ನಾಗಿಯೇ ಇದ್ದಾರೆ. ಹೀಗೆಂದು ಪತ್ರ ಬರೆದಿಟ್ಟಿದ್ದೇನೆ. ನಾನು ಮುಂಚೆ ಹೋದರೆ ನೀವು ಮುಂದೆ ನಿಂತು ಇದನ್ನು ವಿತರಣೆ ಮಾಡಿ"

ಇಷ್ಟು ಹೇಳುವ ಹೊತ್ತಿಗೆ ತಿಮ್ಮಪಯ್ಯನವರ ಕಣ್ಣು ಮಂಜಾಯಿತು. ಜೋಯಿಸರ ಕೈ ಹಿಡಿದುಕೊಂಡರು. 

ಜೋಯಿಸರು, "ಛೇ ಛೇ. ಹಾಗೆ ಹೇಳಬೇಡಿ. ದೇವರು ದೊಡ್ಡವನು. ಯಾವುದಕ್ಕೂ ಒಬ್ಬ ಲಾಯರು ಕಂಡು ವಿಲ್ ಮಾಡುವುದು ಒಳ್ಳೆಯದಲ್ಲವೇ?" ಅಂದರು. 

"ನಾನು ಮತ್ತೆ ಮುಂದಿನ ವಾರ ಬರುತ್ತೇನೆ. ಹಾಗೆಯೇ ಮಾಡೋಣ. ಈಗಂತೂ ಪತ್ರ ಬರೆದಿಟ್ಟಿದ್ದೇನೆ. ಮಕ್ಕಳು ಒಳ್ಳೆಯವರು. ಏನೂ ಸಮಸ್ಯೆ ಆಗಲಾರದು"

ತಿಮ್ಮಪ್ಪಯ್ಯ ಎರಡನೇ ಮಗನ ಮನೆಗೆ ಹೊರಟರು. 

ತಿಮ್ಮಪ್ಪಯ್ಯ ಮತ್ತೆ ರಾಮಾಜೋಯಿಸರ ಮನೆಗೆ ಬರಲಿಲ್ಲ. 

ಅವರ ಕಾರ್ಯಗಳು ಮುಗಿದಮೇಲೆ ಅವರು ಬರೆದಿಟ್ಟಿದ್ದ ಪತ್ರದಂತೆ ಆಸ್ತಿ ಹಂಚಿಕೆಯಾಗಲಿಲ್ಲ. ಮಕ್ಕಳು ಒಪ್ಪಿದರೂ ಅವರ ಮನೆಯವರು ಒಪ್ಪುವಂತಿರಲಿಲ್ಲ. ಎಲ್ಲ ಮಕ್ಕಳೂ ಸಮಾನರು. ಎಲ್ಲವೂ ಸರಿ ಭಾಗ ಆಗಬೇಕೆಂದು ಗುದ್ದಾಟ ಪ್ರಾರಂಭವಾಗಿ ವ್ಯಾಜ್ಯ ಕೋರ್ಟಿನ ಮೆಟ್ಟಲೇರಿತು. 

*****

ಕೆಲವು ತಿಂಗಳ ಹಿಂದೆ ಕರ್ನಾಟಕ ಉಚ್ಛ ನ್ಯಾಯಾಲಯದ ಮುಂದೆ (ಹೈಕೋರ್ಟ್) ಒಂದು ಅಣ್ಣ-ತಮ್ಮಂದಿರ ಆಸ್ತಿ ವಿವಾದದ ಮೊಕದ್ದಮೆ ವಿಚಾರಣೆಗೆ ಬಂದಿತು. ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರ ಮುಂದೆ ಕೇಸು ವಿಚಾರಣೆಗೆ ನಡೆಯಿತು. (ಆಗ ಅವರು ಹೇಳಿದ ವಿಷಯಗಳ ತುಣುಕುಗಳ ಮೇಲೆ ಮೇಲಿನ ವಿವರಣೆ ಹೆಣೆದಿದೆ). "ಆಸ್ತಿ ವಿಚಾರದಲ್ಲಿ ಸರಿಯಾದ ತಿಳುವಳಿಕೆ ಬೇಕು. ಕಾನೂನಿನ ಪರಿಹಾರ ಕೇಳುವ ಮೊದಲು ತಂದೆ-ತಾಯಿಯರು ಮಾಡಿರುವ ವ್ಯವಸ್ಥೆ ಬಗ್ಗೆ ಸ್ವಲ್ಪ ಯೋಚಿಸುವುದು ಒಳ್ಳೆಯದು" ಎಂದು ಅವರು ಬುದ್ಧಿ ಮಾತು ಹೇಳಿದರು. ಮುಂದಿನ ವಿಚಾರಣೆ ಏನಾಯಿತೋ ಗೊತ್ತಿಲ್ಲ. 

ಬೇರೆ ಕುಟುಂಬಗಳಲ್ಲಿನ ಅನೇಕ ಸೂಕ್ಷ್ಮಗಳು ನಮಗೆ ಗೊತ್ತಿರುವುದಿಲ್ಲ. ಎಲ್ಲವನ್ನೂ, ಎಲ್ಲರನ್ನೂ, ಒಂದೇ ಅಳತೆಗೋಲಿನಿಂದ ಲೆಕ್ಕ ಹಾಕುವುದು ಸರಿಯಲ್ಲ. ಅಂತಹ ಸಂದರ್ಭಗಳಲ್ಲಿ ನಾವುಗಳು ಯಾವುದೇ ತೀರ್ಮಾನಗಳಿಗೆ ಬಂದು ಮಾತನಾಡುವ ಮೊದಲು ಸ್ವಲ್ಪ ಯೋಚಿಸಬೇಕಲ್ಲವೇ?