Monday, November 3, 2025
ಅಣ್ಣನು ಹಾವು ತಿಂದನು
Saturday, November 1, 2025
ನನಗೇ ಏಕೆ ಹೀಗಾಗುತ್ತದೆ?
ಜನನವೇ ಪಾಂಚಾಲ ರಾಯನರಮನೆ ಮನೋವಲ್ಲಭರದಾರೆನೆಮನುಜಗಿನುಜರು ಗಣ್ಯವೇ ಗೀರ್ವಾಣರಿಂ ಮಿಗಿಲುಎನಗೆ ಬಂದೆಡರೀ ವಿರಾಟನವನಿತೆಯರ ಮುಡಿಯ ಕಟ್ಟುವತನುವ ತಿರುಗುವ ಕಾಲನೊತ್ತುವ ಕೆಲಸದುತ್ಸಾಹ
Thursday, October 30, 2025
ಪರಸ್ಪರ ಗುರು-ಶಿಷ್ಯರು
ದೊಡ್ಡ ಹೊಟ್ಟೆಯ ಗೂನು ಬೆನ್ನಿನಅಡ್ಡ ಮೋರೆಯ ಗಂಟು ಮೂಗಿನದೊಡ್ಡ ಕೈಕಾಲುಗಳ ಉದುರಿದ ರೋಮ ಮೀಸೆಗಳಜಡ್ಡು ದೇಹದ ಗುಜ್ಜುಗೊರಲಿನಗಿಡ್ಡ ರೂಪಿನ ಹರಕುಗಡ್ಡದಹೆಡ್ಡನಾದ ಕುರೂಪಿತನದಲಿ ನೃಪತಿ ವಿಷದಿಂದ
ಹೀಗೆ ಬದಲಾದ ನಳನು ಬಾಹುಕ ಎನ್ನುವ ಹೆಸರಿನಿಂದ ಅಯೋಧ್ಯೆಯ ರಾಜನಾದ ಋತುಪರ್ಣನ ಬಳಿ ಸಾರಥಿಯ ಕೆಲಸಕ್ಕೆ ಸೇರಿಕೊಳ್ಳುತ್ತಾನೆ. ಗಂಡನನ್ನು ಹುಡುಕಿಸಿ ಮತ್ತೆ ಅವನನ್ನು ಸೇರಲು ದಮಯಂತಿಯು ತನಗೆ ಇನ್ನೊಂದು ಸ್ವಯಂವರ ನಡೆಯುತ್ತಿದೆ ಎನ್ನುವ ಸುದ್ದಿ ಹಬ್ಬಿಸಿ ಅದು ಋತುಪರ್ಣ ಮಹಾರಾಜನಿಗೆ ತಲುಪುವಂತೆ ಮಾಡುತ್ತಾಳೆ.
*****
ದಮಯಂತಿಯ ಮತ್ತೊಂದು ಸ್ವಯಂವರದ ಸುದ್ದಿ ಕೇಳಿದ ಋತುಪರ್ಣನು ಸಮಯಕ್ಕೆ ಸರಿಯಾಗಿ ವಿದರ್ಭ ನಗರ ತಲುಪಲು ರಥವನ್ನು ತಯಾರು ಮಾಡಲು ಸಾರಥಿ ಬಾಹುಕನಿಗೆ ಹೇಳುತ್ತಾನೆ. ಇಂತಹ ಸುದ್ದಿ ಕೇಳಿದ ದುಃಖದಲ್ಲೂ ಬಾಹುಕನ ರೂಪದ ನಳನು ರಥವನ್ನು ಸಿದ್ಧಪಡಿಸುತ್ತಾನೆ. ಪ್ರಯಾಣದ ಕಾಲದಲ್ಲಿ ಗಾಳಿಯಿಂದ ಋತುಪರ್ಣನ ಮೇಲುಹೊದಿಕೆ ಹಾರಿಹೋಗುತ್ತದೆ. ರಥ ನಿಲ್ಲಿಸಿ ಉತ್ತರೀಯವನ್ನು ತರುವಂತೆ ಋತುಪರ್ಣ ಬಾಹುಕನಿಗೆ ಹೇಳುತ್ತಾನೆ. ಬಾಹುಕನು "ಮಹಾರಾಜ, ಈ ಕುದುರೆಗಳು ಸಾಮಾನ್ಯವಲ್ಲ. ನಾಗಾಲೋಟದಲ್ಲಿ ಓಡುತ್ತಿವೆ. ನಿಮ್ಮ ಉತ್ತರೀಯ ಬಿದ್ದ ಕಡೆಯಿಂದ ಎಷ್ಟೋ ಯೋಜನ ದಾಟಿ ಬಂದಿದ್ದೇವೆ. ಅದನ್ನು ಮರೆತುಬಿಡಿ" ಅನ್ನುತ್ತಾನೆ. ಋತುಪರ್ಣನಿಗೆ ಆಶ್ಚರ್ಯ.
ಮುಂದೊಂದು ಕಡೆ ವಿಶ್ರಾಂತಿಗೆ ನಿಲ್ಲಿಸಿದಾಗ ಅಲ್ಲಿ ಕಂಡ ತಾರೆಯ ಮರದಲ್ಲಿರುವ ಎಲೆಗಳು ಮತ್ತು ಹಣ್ಣುಗಳ ನಿಖರವಾದ ಸಂಖ್ಯೆಯನ್ನು ಋತುಪರ್ಣ ಬಾಹುಕನಿಗೆ ಹೇಳುತ್ತಾನೆ. ಈಗ ಬಾಹುಕನಿಗೆ ಆಶ್ಚರ್ಯ. ಮರದ ಬಳಿ ಹೋಗಿ ಎಣಿಸಿದರೆ ಋತುಪರ್ಣನು ಹೇಳಿದ ಸಂಖ್ಯೆ ಸರಿಯಾಗಿದೆ. "ಈ ವಿದ್ಯೆ ತನಗೆ ಗೊತ್ತಾದರೆ ತಮ್ಮ ಪುಷ್ಕರನನ್ನು ಮತ್ತೆ ಜೂಜಿನಲ್ಲಿ ಸೋಲಿಸಿ ರಾಜ್ಯ ಹಿಂದೆ ಪಡೆಯಬಹುದು" ಎಂದು ನಳನು ಚಿಂತಿಸುತ್ತಾನೆ.
ಋತುಪರ್ಣನಿಗೆ ಕುದುರೆಗಳ ಬಗ್ಗೆ ತಿಳಿಯುವ ಹಂಬಲ. ಆ ವಿದ್ಯೆಗೆ "ಅಶ್ವ ಹೃದಯ" ಎಂದು ಹೆಸರು. ನಳನಿಗೆ ಋತುಪರ್ಣನ "ಅಕ್ಷ ಹೃದಯ" ವಿದ್ಯೆ ಕಲಿಯುವ ಆಸೆ. ಇಬ್ಬರೂ ಪರಸ್ಪರ ಒಪ್ಪಿಕೊಂಡು ಒಂದು ವಿದ್ಯೆ ಕಲಿಯಲು ಇನ್ನೊಬ್ಬನ ಶಿಷ್ಯರಾಗುತ್ತಾರೆ. ಕಲಿಸಿಕೊಡಲು ಗುರುವಾಗುತ್ತಾರೆ. ಹೀಗೆ ಪರಸ್ಪರ ಗುರು-ಶಿಷ್ಯ ಆಗಿ ವಿದ್ಯೆಗಳ ವಿನಿಮಯ ಮಾಡಿಕೊಳ್ಳುತ್ತಾರೆ.
ಮುಂದೆ ಕಲಿಯು ನಳನನ್ನು ಕಾಡುವುದನ್ನು ನಿಲ್ಲಿಸಿ, ಜಗನ್ಮೋಹನ ಪಕ್ಷಿಗಳು ನಳನ ಅಪಹರಿಸಿದ ಬಟ್ಟೆಯನ್ನು ತಂದುಕೊಡುತ್ತವೆ. ಅದನ್ನು ಉಟ್ಟ ನಂತರ ಬಾಹುಕನಿಗೆ ಕಾರ್ಕೋಟಕನು ಹೇಳಿದ್ದಂತೆ ಕುರೂಪ ಹೋಗಿ ಮತ್ತೆ ನಳನ ಸುರಸುಂದರ ರೂಪ ಬರುತ್ತದೆ. ನಳ-ದಮಯಂತಿ ಒಂದಾಗುತ್ತಾರೆ. ಅಕ್ಷಹೃದಯದ ಬಲದಿಂದ ನಳನು ಪುಷ್ಕರನನ್ನು ಸೋಲಿಸಿ ರಾಜ್ಯ-ಕೋಶಗಳನ್ನು ಹಿಂದೆ ಪಡೆಯುತ್ತಾನೆ. ನಳಚರಿತ್ರೆ ಹೀಗೆ ಮುಕ್ತಾಯವಾಗುತ್ತದೆ.
*****
ಅಶ್ವಹೃದಯದ ಪರಿಣಾಮವಾಗಿ ಕುದುರೆಗಳು ಹೇಗೆ ಓಡಿದುವೆಂದು ಶ್ರೀ ಕನಕದಾಸರು ಹೇಳುವ ರೀತಿ:
ಕರದ ವಾಘೆಯ ಸಡಿಲ ಬಿಡೆ ಮುಂ
ಬರಿದು ಚಿಮ್ಮಿದವಡಿಗಡಿಗೆ ರಥ
ತುರಗ ಹಾಯ್ದುದು ತೇರು ಮುಂದಕೆ ಪವನ ವೇಗದಲಿ
ಇಳಿದು ರಥವನು ಬಂದು ವೃಕ್ಷದಬಳಿಗೆ ನಿಂದಾ ಶಾಖೆಗಳಲಿಹಫಲವದರ ಪರ್ಣಂಗಳೆಣಿಸಿದ ಪದ್ಮಸಂಖ್ಯೆಯಲಿ
ದಮಯಂತಿಯ ರೂಪ-ಲಾವಣ್ಯ, ದೇವತೆಗಳ ಪರೀಕ್ಷೆಗಳು, ನಳ-ಕಾರ್ಕೋಟಕ ಮತ್ತು ನಳ-ಕಲಿ ಇವರ ಸಂವಾದ, ನಳ ಮತ್ತು ದಮಯಂತಿಯರ ಪರಿತಾಪ ಇನ್ನೂ ಮುಂತಾದ ಅನೇಕ ರಸಘಟ್ಟಗಳನ್ನು "ನಳಚರಿತ್ರೆ" ಓದಿ ಸವಿಯಬಹುದು.
*****
ನಳ ಮಹಾರಾಜ ಮತ್ತು ಋತುಪರ್ಣ ಮಹಾರಾಜರು ಗುರು-ಶಿಷ್ಯ ಭಾವದಲ್ಲಿ ಒಬ್ಬರಿಗೊಬ್ಬರು ಕಲಿಸಿ-ಕಲಿತದ್ದು ತಮ್ಮ ತಮ್ಮ ಜ್ಞಾನದ ಮತ್ತು ಸಾಧನೆಯ ಕಾರಣ ಸಮಾಜದಲ್ಲಿ ಉನ್ನತ ಸ್ಥಾನ ಹೊಂದಿರುವವರೂ ಹೇಗೆ ಪರಸ್ಪರ ಗುರು-ಶಿಷ್ಯರಾಗಬಹುದು ಎನ್ನುವುದಕ್ಕೆ ಸೊಗಸಾದ ಉದಾಹರಣೆ. ಅಲ್ಲವೇ?
Sunday, October 26, 2025
ಒಂದೇ ಬಳೆಯ ಹುಡುಗಿ
Friday, October 24, 2025
One Less Than Yesterday
Monday, October 20, 2025
ನಾಲ್ಕು ಮಾತುಗಳು
ಚಂದ್ರವಂಶದವರ ವಿವರಗಳು ಮಹಾಭಾರತ, ಶ್ರೀಮದ್ಭಾಗವತ, ಹರಿವಂಶ ಮತ್ತು ಇತರ ಕಡೆಗಳಲ್ಲಿ ವಿಪುಲವಾಗಿ ದೊರೆಯುತ್ತವೆ. ಚಕ್ರವರ್ತಿ ಯಯಾತಿಯ ಮಗಳಾದ ಮಾಧವಿಯ ವೃತ್ತಾಂತ ಮುಖ್ಯವಾಗಿ ಮಹಾಭಾರತದ ಉದ್ಯೋಗ ಪರ್ವದಲ್ಲಿ ಏಳೆಂಟು ಶ್ಲೋಕಗಳಲ್ಲಿ ಸಿಗುತ್ತದೆ. ಮಾಧವಿಯ ಮಕ್ಕಳ ಚರಿತ್ರೆಗಳು ಶ್ರೀಮದ್ಭಾಗವತದಲ್ಲಿ ವಿವರವಾಗಿ ಸಿಗುತ್ತವೆ.
ದುರ್ಯೋಧನನು ಯಾವ ಹಿತೈಷಿಗಳ ಮಾತನ್ನೂ ಕೇಳದೆ, ಪಾಂಡವರಿಗೆ ರಾಜ್ಯಭಾಗ ಕೊಡದೇ ಉದ್ಧಟನಾಗಿ ವರ್ತಿಸುವಾಗ ದೇವರ್ಷಿ ನಾರದರು ಅವನಿಗೆ ಬುದ್ಧಿವಾದ ಹೇಳಿ “ಹಠಮಾರಿತನ ಒಳ್ಳೆಯದಲ್ಲ” ಎಂದು ತಿಳಿಸುವ ಸಲುವಾಗಿ ಗಾಲವನ ವೃತ್ತಾಂತ (ಗಾಲವೋಪಾಖ್ಯಾನ) ಹೇಳುತ್ತಾರೆ. ಶಿಷ್ಯ ಗಾಲವನ ಹಠಮಾರಿತನದಿಂದ ಕುಪಿತರಾದ ಅವನ ಗುರುಗಳು ವಿಶ್ವಾಮಿತ್ರರು ಎಂಟುನೂರು “ಶ್ಯಾಮಲಕರ್ಣ” ಕುದುರೆಗಳನ್ನು ಗುರುದಕ್ಷಿಣೆಯಾಗಿ ಕೇಳುತ್ತಾರೆ. ಆ ಸಮಯದಲ್ಲಿ ಭೂಮಿಯ ಮೇಲೆ ಅಂತಹ ಕುದುರೆಗಳು ಕೇವಲ ಆರುನೂರು ಮಾತ್ರ ಇದ್ದುವಂತೆ. ವಿಶ್ವಾಮಿತ್ರರು ಅವನಿಗೆ ಪಾಠ ಕಲಿಸುವ ಸಲುವಾಗಿ ಎಂಟುನೂರು ಶ್ಯಾಮಲಕರ್ಣ ಕುದುರೆಗಳನ್ನು ಕೇಳಿದರಂತೆ. ಹೀಗೆ ನಡೆಯುವ ಕಥೆಯಲ್ಲಿ ಮಾಧವಿಯ ಮೂಲಕ ಆ ಕುದುರೆಗಳ ಸಂಪಾದನೆಯ ಕಥೆ ಬೆಳೆಯುತ್ತದೆ.
ಮಾಧವಿಯ ಕಥೆಯಂತೆಯೇ ಇರುವ ಇನ್ನೊಂದು ಕಥೆ “ಮೂರುವರೆ ವಜ್ರಗಳು” ಅನ್ನುವುದು. ಇದೂ ಕುದುರೆಯ ಕಥೆಯೇ. ಇದರಲ್ಲಿ ಶಾಪಗ್ರಸ್ತ ಸ್ತ್ರೀ ಒಬ್ಬಳಿಗೆ ಮೂರುವರೆ ವಜ್ರ ತಾಕಿದಾಗ ಶಾಪವಿಮೋಚನೆ ಎಂದು ಹೇಳುವ ಸಮಾಚಾರ. ಇದು ನಡೆದದ್ದು ಶ್ರೀಕೃಷ್ಣ, ಭೀಮಸೇನ, ದುರ್ಯೋಧನರ ಕಾಲದಲ್ಲಿ. ಶ್ರೀಕೃಷ್ಣ ಒಂದು ವಜ್ರ, ಬಲರಾಮ (ಅಥವಾ ಸುದರ್ಶನ) ಒಂದು ವಜ್ರ, ಭೀಮಸೇನ ಒಂದು ವಜ್ರ ಮತ್ತು ದುರ್ಯೋಧನ ಅರ್ಧ ವಜ್ರ. ನಾಲ್ವರು ಸೇರಿ ಮೂರುವರೆ ವಜ್ರ. ವಜ್ರ ಅಂದರೆ ವಜ್ರದೇಹಿಗಳು ಎಂದು. “ಮೂರುವರೆ ವಜ್ರಗಳು” ಹರಿಕಥೆಗಳ ಮುಖಾಂತರ ಹೆಚ್ಚು ಪ್ರಚಲಿತವಾಯಿತು. ಚಲನಚಿತ್ರವಾಗಿ ಜನರಿಗೆ ಇನ್ನಷ್ಟು ಪರಿಚಿತವಾಯಿತು. ಮಾಧವಿಯ ಕಥೆಗೆ ಈ ಭಾಗ್ಯ ಸಿಕ್ಕಲಿಲ್ಲ.
ಮಾಧವಿಯ ಕಥೆ ಬಹಳ ಕುತೂಹಲಕಾರಿಯೂ, ರೋಮಾಂಚಕವೂ ಆಗಿದೆ. ಇದು ಅನೇಕ ಲೇಖಕರ, ಸಾಹಿತಿಗಳ ಗಮನ ಸೆಳೆದು ಪುಸ್ತಕಗಳು ಪ್ರಕಟವಾಗಿವೆ. ಕನ್ನಡದಲ್ಲಿ ಡಾ. ಅನುಪಮಾ ನಿರಂಜನ ಅವರ “ಮಾಧವಿ” ಬಹಳ ಹಿಂದೆ ಪ್ರಕಟವಾಗಿದೆ. ಪತ್ರಿಕೆಗಳಲ್ಲಿ ಧಾರಾವಾಹಿಯಾಗಿಯೂ ಪ್ರಕಟವಾಗಿವೆ. ಹಿಂದಿ ಭಾಷೆಯಲ್ಲಿಯೂ ಉಂಟು. ಬೇರೆ ಭಾಷೆಗಳಲ್ಲಿಯೂ ಇರಬಹುದು. ಬಹುತೇಕ, ಇವು ಪುರುಷಪ್ರಧಾನ ಸಮಾಜ ಒಬ್ಬ ಸ್ತ್ರೀಯ ಶೋಷಣೆ ಮಾಡಿದ ದೃಷ್ಟಿಯಿಂದ ವಿಶ್ಲೇಷಿಸಿ ಬರೆದವು.
ನಹುಷ, ಯಯಾತಿ ಮುಂತಾದುವರ ಪ್ರಸಂಗಗಳು ಅನೇಕ ಸಾಹಿತ್ಯ ಕೃತಿಗಳ ರಚನೆಗೆ ಕಾರಣವಾಗಿವೆ. ನನ್ನ roundtheclockstories.blogspot.in ಬ್ಲಾಗ್-ಗಳಲ್ಲಿ “ಯಯಾತಿಯ ಮೊಮ್ಮಕ್ಕಳು” ಮತ್ತು “ಮಾಧವಿಯ ಮಕ್ಕಳು” ಎಂದು ಎರಡು ಸಂಚಿಕೆಗಳು ಒಂದು ತಿಂಗಳ ಹಿಂದೆ (ಸೆಪ್ಟೆಂಬರ್ 2025) ಪ್ರಕಟವಾಗಿದ್ದವು. ಅವುಗಳ ಬಗ್ಗೆ ಬಂದ ಪ್ರತಿಕ್ರಿಯೆಗಳಲ್ಲಿ ಹೆಚ್ಚಿನವು ದೊಡ್ಡವರ ಗುಣ ಮತ್ತು ದೋಷಗಳು, ಅವುಗಳನ್ನು ನೋಡುವ ರೀತಿ, ಇವುಗಳ ಬಗ್ಗೆ ಕೇಂದ್ರೀಕೃತವಾಗಿದ್ದವು. ಅವುಗಳನ್ನು ಓದಿದವರು ಮತ್ತು ಮಿತ್ರರು ಇದನ್ನು ಸ್ವಲ್ಪ ವಿವರವಾಗಿ ಒಂದು ನಾಟಕ ರೂಪವಾಗಿ ಬರೆಯುವಂತೆ ಪ್ರೋತ್ಸಾಹಿಸಿದರು. ಬ್ಲಾಗ್ ಸಂಚಿಕೆಗಳು ಹೊರಬಂದ ನಂತರ ಹೃದಯದ ಶಸ್ತ್ರ ಚಿಕಿತ್ಸೆಯ ಪರಿಣಾಮವಾಗಿ ಆಸ್ಪತ್ರೆಯ ಹಾಸಿಗೆಯಲ್ಲಿ ಮಲಗಿದ್ದಾಗ ಅದರ ನೋವನ್ನು ಮರೆಸಿದುದು ಈ ಯಯಾತಿಯ ಮೊಮ್ಮಕ್ಕಳ, ಮಾಧವಿಯ ಮಕ್ಕಳ ಉದಾತ್ತತೆಯ ಬಗ್ಗೆ ಮನಸ್ಸಿನಲ್ಲಿ ನಡೆದ ಮಂಥನ. ಅದರ ಫಲವಾಗಿ ಈ ನಾಟಕರೂಪ ಹೊರಬಂದಿದೆ. ನಾನು ಲೇಖಕನೂ ಅಲ್ಲ; ಸಾಹಿತಿಯೂ ಅಲ್ಲ. ಸ್ನೇಹಿತರ ಪ್ರೀತಿಯ ಒತ್ತಾಯದ ಕಾರಣವಾಗಿ ಅಲ್ಲಿ ನಡೆದ ಮಂಥನ ಈ ನಾಟಕವಾಗಿ ರೂಪುಗೊಂಡಿದೆ. ಅಷ್ಟೇ.
ಯಯಾತಿಯ ವ್ಯಕ್ತಿತ್ವದಲ್ಲಿ ಎರಡು ಗಂಟಿನ ಘಟ್ಟಗಳು. ಒಂದು ಮಗ ಪುರುವಿನ ಯೌವನ ತೆಗೆದುಕೊಂಡದ್ದು. ಇನ್ನೊಂದು ಮಗಳು ಮಾಧವಿಯನ್ನು ಗಾಲವರ ಅಶ್ವಗಳ ಅವಶ್ಯಕತೆಯ ಕಾರಣ ಕಳಿಸಿಕೊಟ್ಟದ್ದು. ಒಬ್ಬ ತಂದೆಯಾಗಿ ಅವನು ಅನುಭವಿಸಿರಬಹುದಾದ ವೇದನೆಗಳು, ತಂದೆಯ ಆಜ್ಞಾಧಾರಕಿಯಾಗಿ ಮಾಧವಿಯು ಅನುಭವಿಸಿದ ಹಿಂಸೆ, ಇವು ಇಲ್ಲಿನ ಮುಖ್ಯ ಬಿಂದುಗಳು. ಎರಡು ಕಪ್ಪು ಚುಕ್ಕೆಗಳಿಂದ ಯಯಾತಿಯ ವ್ಯಕ್ತಿತ್ವವನ್ನು ಅಳೆಯಬಾರದು ಎಂದು ನಾಟಕದ ಆಶಯ. ನಂಬುವವರು ಇದು ದೇವತೆಗಳ ಆಟ ಎಂದು ತಿಳಿದರಂತೂ ಅದರ ಸಮಾಧಾನವೇ ಬೇರೆ ರೀತಿಯದು.
ಹಿಂದಿನ ತಲೆಮಾರಿನಲ್ಲಿ ಶ್ರಾದ್ಧಗಳ ಸಮಯದಲ್ಲಿ ದೌಹಿತ್ರರಿಗೆ (ಹೆಣ್ಣುಮಕ್ಕಳ ಮಕ್ಕಳು) ವಿಶೇಷ ಸ್ಥಾನವಿತ್ತು. ಗಂಡುಮಕ್ಕಳು ಶ್ರಾದ್ಧ ಮಾಡಿದರೂ, ಅವರ ಅಕ್ಕ-ತಂಗಿಯರು ಮತ್ತು ಅವರ ಮಕ್ಕಳು ಆ ಸಂದರ್ಭದಲ್ಲಿ ಬಂದು ಭಾಗವಹಿಸಲಿ ಎನ್ನುವುದು ಅದರ ಮೂಲ ಕಾರಣ. ಪ್ರತಿ ಮನೆಯಲ್ಲೂ ಅನೇಕ ಮಕ್ಕಳಿರುತ್ತಿದುದರಿಂದ ದೌಹಿತ್ರರು ಬರುವುದು ಅಷ್ಟೇನೂ ಕಷ್ಟವಿರಲಿಲ್ಲ. ಒಬ್ಬನೂ ದೌಹಿತ್ರ ಅಂದು ಬರಲಿಲ್ಲ ಅಂದರೆ ಶ್ರಾದ್ದ ಮಾಡುವವರು ಪೇಚಾಡಿಕೊಳ್ಳುತ್ತಿದ್ದರು. ಈಗ ಈ ಪದ್ಧತಿ ಮರೆತೇಹೋಗಿದೆ. ಎಷ್ಟೋ ಜನರಿಗೆ ಅಕ್ಕ-ತಂಗಿಯರೇ ಇಲ್ಲ. ಅವರ ಮಕ್ಕಳು ಎಲ್ಲಿಂದ ಬರಬೇಕು? ಈ ದೌಹಿತ್ರರ ಪ್ರಾಮುಖ್ಯತೆ ಬಂದಿದ್ದು ಯಯಾತಿಯ ಮೊಮ್ಮಕ್ಕಳು, ಅಂದರೆ ಮಾಧವಿಯ ಮಕ್ಕಳು, ಅಜ್ಜನಿಗೆ (ಮಾತಾಮಹ) ಪುಣ್ಯ ಭಾಗ ಕೊಟ್ಟಿದ್ದರಿಂದ. ಇದು ಎಷ್ಟೋ ಜನರಿಗೆ ಗೊತ್ತಿಲ್ಲ. ಗೊತ್ತಿದ್ದವರಿಗೆ ಮರೆತುಹೋಗಿದೆ. ಈ ನಾಟಕದಲ್ಲಿ ಅದನ್ನು ನೆನಪು ಮಾಡಿಸುವ ಪ್ರಯತ್ನವೂ ಇದೆ.
ನಮ್ಮಲ್ಲಿ ಅಣ್ಣ-ತಮ್ಮಂದಿರನ್ನು “ಸಹೋದರರು” ಎಂದು ಹೇಳುವುದು ಸ್ವಾಭಾವಿಕವೆನ್ನುವಂತೆ ಆಗಿದೆ. ಸಹೋದರರೆಂದರೆ ಒಂದೇ ಉದರದಲ್ಲಿ (ಹೊಟ್ಟೆಯಲ್ಲಿ, ಅಥವಾ ಇನ್ನೂ ಖಚಿತವಾಗಿ ಹೇಳಿದರೆ ಗರ್ಭದಲ್ಲಿ) ಹುಟ್ಟಿದವರು. ಒಂದೇ ತಂದೆಯ ಮಕ್ಕಳಾದರೂ ತಾಯಿ ಬೇರೆ ಬೇರೆಯವರಾಗಿರಬಹುದು. ಹಾಗೆಯೇ, ಒಂದೇ ತಾಯಿಯ ಮಕ್ಕಳಾದರೂ ತಂದೆ ಬೇರೆಯವರಾಗಿರಬಹುದು. ಹೀಗೆ ತಿಳಿದಾಗ ವ್ಯತ್ಯಾಸ ಗೊತ್ತಾಗುತ್ತದೆ. ಈ ರೀತಿ ನೋಡಿದಾಗ ಐವರು ಪಾಂಡವರು ಅಣ್ಣ-ತಮ್ಮಂದಿರು. ಧರ್ಮಜ-ಭೀಮ-ಅರ್ಜುನ ಸಹೋದರರು. ಹಾಗೆಯೇ ನಕುಲ-ಸಹದೇವರು ಸಹೋದರರು. ಈ ಕಾರಣದಿಂದ ಮಾಧವಿಯ ನಾಲ್ಕು ಮಕ್ಕಳು (ತಂದೆಯರು ಬೇರೆ ಬೇರೆ ಆದರೂ) ಸಹೋದರರು.
ಮಾಧವಿಯ ಪ್ರಸಂಗದಲ್ಲಿ ಕಾಣಿಸುವ ವಿಶ್ವಾಮಿತ್ರರು ಯಾರು? ಕೆಲವರು “ವಿಶ್ವಾಮಿತ್ರರು ಅನ್ನುವ ಹೆಸರಿನ ಅನೇಕರಿದ್ದರು. ಅವರಲ್ಲಿ ಒಬ್ಬರು ಇವರು. ವಸಿಷ್ಠ-ವಿಶ್ವಾಮಿತ್ರರ ಸಂಬಂಧದ ವಿಶ್ವಾಮಿತ್ರರಲ್ಲ” ಎಂದು ಅಭಿಪ್ರಾಯ ಪಡುತ್ತಾರೆ. ಮಾಧವಿ-ವಿಶ್ವಾಮಿತ್ರರ ಮಗನ ಹೆಸರು ಅಷ್ಟಕ. ಕೆಲವರ ಕೌಶಿಕ ಗೋತ್ರಗಳ ಪ್ರವರದಲ್ಲಿಯೂ ಅಷ್ಟಕ ಎನ್ನುವ ಹೆಸರಿದೆ. ಆದ್ದರಿಂದ ಅವರು ಬ್ರಹ್ಮರ್ಷಿ ವಿಶ್ವಾಮಿತ್ರರು ಎಂದು ಬಲವಾದ ಅಭಿಪ್ರಾಯ. ಇಲ್ಲಿ ಹಾಗೆಯೇ ಸೂಚಿಸಿದೆ. ಎಲ್ಲ ಕಡೆ ಮಹರ್ಷಿ ಎಂದು ಹೇಳಿ, ಕಡೆಯ ದೃಶ್ಯದಲ್ಲಿ ಮಾತ್ರ ಬ್ರಹ್ಮರ್ಷಿ ಎಂದು ಸಂಬೋಧಿಸಿದೆ. ಅವರು ಯಾವಾಗ ಬ್ರಹ್ಮರ್ಷಿ ಆದರು ಅನ್ನುವ ಚರ್ಚೆ ಈ ನಾಟಕದ ಸಂದರ್ಭದಲ್ಲಿ ಬೇಡ. ಅದು ಎಲ್ಲರಿಗೂ ಗೊತ್ತಿರುವ ವಿಚಾರವೇ.
ನಾಲ್ಕು ಜನ ಸಹೋದರರು ನೈಮಿಷಾರಣ್ಯದಲ್ಲಿ ಸತ್ರ ನಡೆಸಿದ್ದು, ಅಲ್ಲಿಗೆ ಯಯಾತಿಯು ಸ್ವರ್ಗದಿಂದ ತಳ್ಳಿದಾಗ ಬಿದ್ದದ್ದು, ಅಲ್ಲಿಗೆ ಮಾಧವಿಯು ಬಂದದ್ದು, ಅವಳೂ ತನ್ನ ಪುಣ್ಯದಲ್ಲಿ ಭಾಗ ಕೊಟ್ಟಿದ್ದು, ಇವೆಲ್ಲವೂ ಮೂಲಗಳಲ್ಲಿ ಇರುವ ಸತ್ಯ ಸಂಗತಿಗಳೇ. ಅಲ್ಲಿಗೆ (ನೈಮಿಷಾರಣ್ಯಕ್ಕೆ) ಬ್ರಹ್ಮರ್ಷಿ ವಿಶ್ವಾಮಿತ್ರರು ಬಂದಿದ್ದು ಮಾತ್ರ ಕಲ್ಪನೆ. ನಾಟಕದ ಕೊನೆಯಲ್ಲಿ, ಖಚಿತವಾಗಿ ಹೇಳಿದ ಕಡೆಯ ಮಾತನ್ನು ಎಲ್ಲರೂ ಒಪ್ಪಬೇಕಾದ ಸಂದರ್ಭದಲ್ಲಿ, ಅಧಿಕಾರಯುತವಾಗಿ ಮಾತನಾಡಿ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕೊಡಲಿ ಎನ್ನುವ ದೃಷ್ಟಿಯಿಂದ ಮಾಡಿರುವ ಮಾರ್ಪಾಡು ಇದು. ಅಷ್ಟೇ.
ಗಾಲವರಿಗೆ ಅಶ್ವಗಳ ಸಂಪಾದನೆಯ ಸಂದರ್ಭದಲ್ಲಿ ಗರುಡನ ಸಹಾಯ ಸಿಕ್ಕಿತು ಎಂದು ಕೆಲವು ಕಡೆ ಸೂಚ್ಯವಾಗಿದೆ. ಈ ನಾಟಕದಲ್ಲಿ ಗರುಡನ ಬದಲು “ವೈನತೇಯ” ಎನ್ನುವ ಗಾಲವನ ಬಾಲ್ಯ ಸ್ನೇಹಿತ ಎಂದು ತೋರಿಸಿದೆ. ರಂಗದ ಮೇಲೆ ಪ್ರಯೋಗ ಮಾಡುವ ಕಾಲದಲ್ಲಿ (ಅದು ಆಗುತ್ತದೆಯೋ, ಇಲ್ಲವೋ ಅನ್ನುವುದು ಬೇರೆ ವಿಷಯ!) ಬಹಳ ಕಾಲ ಜೊತೆಯಲ್ಲಿ ಇರುವ ಎರಡು ಪಾತ್ರಗಳ ಆತ್ಮೀಯತೆ, ಸ್ವಲ್ಪ ಹಾಸ್ಯ, ಇವು ತರಲು ಮಾಡಿಕೊಂಡಿರುವ ಬದಲಾವಣೆ ಇದು.
ಮಾಧವಿಯ ತಂದೆ ಯಯಾತಿ ಎಂದು ಎಲ್ಲ ಕಡೆ ಹೇಳಿದ್ದರೂ, ತಾಯಿ ಯಾರು ಎಂದು ಸ್ಪಷ್ಟವಿಲ್ಲ. ದೇವಯಾನಿ ಮತ್ತು ಶರ್ಮಿಷ್ಠೆ, ಇಬ್ಬರೂ ಅವಳ ಹೆತ್ತತಾಯಿಯರಲ್ಲ ಅನ್ನುವುದು ಮೊದಲ ನೋಟಕ್ಕೆ ಗೊತ್ತಾಗುತ್ತದೆ. ಆದ್ದರಿಂದ ಅವಳು ಯಯಾತಿಯ ಮತ್ತೊಬ್ಬ ಹೆಂಡತಿಯ ಮಗಳಾಗಿರಬೇಕು. ದೇವಯಾನಿಯ ವಿವಾಹವಾಗುವ ಮೊದಲೇ ಯಯಾತಿಗೆ ಮದುವೆಯಾಗಿರಬಹುದು. ರಾಜರಿಗೆ ಅನೇಕ ಹೆಂಡಿರಿರುತ್ತಿದ್ದರು ಅನ್ನುವುದು ಆಗ ಸಾಮಾನ್ಯವಾಗಿತ್ತು. (ಈಗಿನ ಕಾಲದ ರಾಜ ಸಮಾನರಾದವರಿಗೆ ಹೀಗೆ ಇದ್ದರೂ ಗೊತ್ತಾಗುವುದಿಲ್ಲ). ಇಲ್ಲಿ ಮಾಧವಿ ತಾಯಿ ಇಲ್ಲದ ತಬ್ಬಲಿ ಎಂದು ತೋರಿಸಲಾಗಿದೆ. ತಂದೆಯ ಮನಸ್ಸಿನ ದುಗುಡದ ತೀವ್ರತೆ ಪರಿಣಾಮಕಾರಿಯಾಗಿರಲೂ ಇದು ಸಹಾಯಕ.
ಹೆಣ್ಣುಮಕ್ಕಳಿಗೆ, ಅವರು ರಾಜಕುಮಾರಿಯರಾದರೆ ಏನಂತೆ, ಸ್ವತಂತ್ರವಾಗಿ ಬದುಕು ರೂಪಿಸಿಕೊಳ್ಳುವ ಪೂರ್ಣ ಸ್ವಾತಂತ್ರ್ಯ ಪ್ರಾಯಶಃ ಯಾವ ಕಾಲದಲ್ಲೂ ಇರಲಿಲ್ಲ. ಸ್ವಯಂವರ ಪದ್ಧತಿಯಲ್ಲಿಯೂ ಪೂರ್ಣ ಸ್ವಾತಂತ್ರ್ಯ ಇರಲಿಲ್ಲ. ಬಹಳ ಸಂದರ್ಭಗಳಲ್ಲಿ ಅವರು ಯೋಚನೆ ಮಾಡುವಷ್ಟು ಪ್ರಬುದ್ಧತೆ ಬರುವ ವಯಸ್ಸಿನ ಮೊದಲೇ ವಿವಾಹವಾಗಿರುತ್ತಿತ್ತು. ಎರಡನೆಯ ಪತ್ನಿಯಾಗುವ, ಅಥವಾ ಎಷ್ಟನೆಯದು ಎಂದು ಗೊತ್ತಿಲ್ಲದ, ವಿವಾಹಗಳೂ ನಡೆಯುತ್ತಿದ್ದವು. ಇವುಗಳ ಸೂಚ್ಯವಾದ ನೋಟ ಕೊಡುವ ಪ್ರಯತ್ನ ಇಲ್ಲುಂಟು.
ಕೆಲವು ಸಂಗತಿಗಳು (ಮಾಧವಿಯ ವರದ ವಿವರಗಳು, ಕುದುರೆಗಳ ವಿಚಾರ, ವಿವಾಹದ ನಿಬಂಧನೆಗಳು ಮುಂತಾದುವು) ಮತ್ತೆ ಮತ್ತೆ ಬಂದವಲ್ಲಾ ಅನಿಸಬಹುದು. ವಿಧಿಯಿಲ್ಲ. ಕೆಲವು ಕಡೆ ಊಟದಲ್ಲಿ ಅನ್ನ ನಾಲ್ಕು ಸಲ ಬರುತ್ತದೆ. “ಕೂಟಿಗೂ ಅನ್ನ ಬಂತು, ಸಾರಿಗೂ ಅನ್ನ ಬಂತು, ಚಿತ್ರಾನ್ನದಲ್ಲೂ ಅನ್ನ ಇತ್ತು, ಈಗ ಮಜ್ಜಿಗೆಗೂ ಅನ್ನ ಬಂತಲ್ಲ?” ಎಂದು ಯಾರೂ ಬೇಸರಿಸುವುದಿಲ್ಲ. ಇದೂ ಹಾಗೆಯೇ ಎಂದು ನಕ್ಕು ಸುಮ್ಮನಾಗಬೇಕಷ್ಟೆ! ಒಬ್ಬ ಅಧ್ಯಾಪಕನು ಒಂದೇ ಪಾಠವನ್ನು ನಾಲ್ಕು ತರಗತಿಗಳಿಗೆ (ಸೆಕ್ಷನ್) ಪಾಠ ಹೇಳುವಾಗ ಅದು ಅವನಿಗೆ ನಾಲ್ಕು ಸಾರಿ ಆಗುತ್ತದೆ. ಆದರೆ ವಿದ್ಯಾರ್ಥಿಗಳಿಗೆ ಒಂದೇ ಸಲ. ಅಲ್ಲವೇ? ಹೇಳುವವರಿಗೆ ನಾಲ್ಕು ಸಲ. ಕೇಳುವವರಿಗೆ ಒಂದೇ ಸಲ. ಇಲ್ಲಿಯೂ ಹಾಗೆಯೇ ಎಂದು ತಿಳಿಯಬೇಕು!
ನಾಟಕದ ಒಟ್ಟು ಗಾತ್ರದ ಬಗ್ಗೆ ಟೀಕೆಗಳು ಬರಬಹುದು. ಈಗ ಸಾಮಾನ್ಯವಾಗಿ ಹೆಚ್ಚೆಂದರೆ ಎರಡು ಗಂಟೆಗಳ ಒಳಗಾಗಿ ನಡೆಯುವ ರಂಗಪ್ರಯೋಗಗಳ ಕಾಲ. ರಾತ್ರಿಯೆಲ್ಲ ನಡೆಯುವ ನಾಟಕಗಳು ಕಡಿಮೆಯೇ. ನಾಲ್ಕೈದು ಗಂಟೆಗಳ ನಾಟಕಗಳು ಪ್ರಯೋಗ ಕಂಡರೂ ಅವು ಬಹಳ ಪ್ರಸಿದ್ಧರಾದವರ ರಚನೆಗಳು ಮಾತ್ರ. ಇದೊಂದು ಏಳು ಅಂಕಗಳ ನಾಟಕ. ಏನು ಮಾಡುವುದು? ಇದು ಮೂರು ತಲೆಮಾರುಗಳ ಕಥೆ. ಮಾಧವಿಗೆ ನಾಲ್ಕು ಮದುವೆಗಳು! ಅವಳ ಬದುಕೇ ಆರು ಅಂಕಗಳದ್ದು. ತಂದೆಯ ಮನೆಯಲ್ಲಿ ಮೊದಲಂಕ. ನಂತರ ಮದುವೆಗಳ ನಾಲ್ಕಂಕ. ಕಡೆಯಲ್ಲಿ ಇನ್ನೊಂದಂಕ. ಇನ್ನೂ ಚಿಕ್ಕದು ಮಾಡುವುದು ಕಷ್ಟ. ಯಾರಾದರೂ ರಂಗದ ಮೇಲೆ ತರುವ ಸಾಹಸ ಮಾಡಿದರೆ ಆಗ ಇನ್ನೂ ಸ್ವಲ್ಪ ಚಿಕ್ಕದು ಮಾಡಲು ಅವಕಾಶವಿದೆ. ಸಂದರ್ಭ ಬಂದರೆ (?) ನೋಡೋಣ.
ರಂಗಪ್ರಯೋಗಕ್ಕೆ ಕೆಲವು ಬಾಧಕಗಳು ಇರಬಹುದು. ಏನೂ ಪರಿಕರಗಳಿಲ್ಲದೇ ಗಾಳಿಯಲ್ಲಿ ಕೈಕಾಲು ಆಡಿಸಿ ಪರಿಕರದ ಭ್ರಮೆ ಹುಟ್ಟಿಸುವ ಪ್ರಯೋಗಗಳಿರುವ ಕಾಲದಲ್ಲಿ ಇದೇನೂ ದೊಡ್ಡದಲ್ಲ. ನುರಿತ ನಿರ್ದೇಶಕರು ಅವಕ್ಕೆ ಸಮಾಧಾನಗಳನ್ನು ಸುಲಭವಾಗಿ ಕಂಡುಕೊಳ್ಳಬಲ್ಲರು.
ವರಗಳು-ಶಾಪಗಳು, ಗುರುದಕ್ಷಿಣೆ, ಸ್ವರ್ಗ-ಸಾಕ್ಷಾತ್ಕಾರ, ಇವೆಲ್ಲಾ ಈ ಕಾಲದಲ್ಲಿ ಯಾರಿಗೆ ಬೇಕು ಅನ್ನುವ ಪ್ರಶ್ನೆ ಬರಬಹುದು. ನಿಜ. ಕಡಿಮೆಯಿದ್ದರೂ, ಇವನ್ನು ರಸಾನುಭವಕ್ಕಾಗಿ ಅಥವಾ ನಂಬಿಕೆಗಾಗಿ ಓದುವ, ನೋಡುವ ಜನರು ಕೆಲವರಾದರೂ ಈಗಲೂ ಇದ್ದಾರೆ. ಅಲ್ಲವೇ?
ನಾಲ್ಕು ವಿವಾಹದ ಕತೆಗೆ ನಾಲ್ಕು ಮಾತುಗಳು ಅಂದದ್ದು ಕಡೆಗೆ ಎಂಟು ಮಾತಾಯಿತು!
"ಮಾಧವಿ" ನಾಟಕವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Wednesday, October 8, 2025
ಚರ್ಮಾ೦ಬರ
ಶರಣಸಂಗವ್ಯಸನ ಭುಜಗಾಭರಣನಮರ ಕಿರೀಟಮಂಡಿತಚರಣ ಚಾರುಚರಿತ್ರ ನಿರುಪಮ ಭಾಳಶಿಖಿನೇತ್ರಕರಣರ್ನಿರ್ಮಲ ಭಜಕರಘ ಸಂಹರಣ ದಂತಿ ಚಮೂರು ಚರ್ಮಾ೦ಬರನೆ ಸಲಹುಗೆ ಭಕುತ ಜನರನು ಪಾರ್ವತೀರಮಣ
ಶಂಭುವೋ ಎಲ್ಲರಿಗೂ ಪ್ರಿಯನು. "ಚರ್ಮಾ೦ಬರ" ಎನ್ನುವುದರ ಬಗ್ಗೆ ಒಬ್ಬರು ಪ್ರಶ್ನೆ ಎತ್ತಿದರು. ಅದರ ಹಿಂದೆ ಇರುವ "ದಂತಿ" ಮತ್ತು "ಚಮೂರು" ಪದಗಳ ಚರ್ಚೆಯಾಯಿತು. ದಂತಿ ಎಂದರೆ ಸಂಸ್ಕೃತದಲ್ಲಿ ಆನೆ ಎಂದು. ದಂತವುಳ್ಳದ್ದು ದಂತಿ. ಆನೆಯ ದಂತಗಳು ಎಲ್ಲರಿಗೆ ಗೊತ್ತು. ಗಜಾಸುರ ಎನ್ನುವ ರಾಕ್ಷಸ ಆನೆಯ ರೂಪದಲ್ಲಿ ಸಜ್ಜನರಿಗೆ ತೊಂದರೆ ಕೊಡುತ್ತಿದ್ದ. ಶಂಕರನು ಅವನನ್ನು ಕೊಂದು ಅವನ ಚರ್ಮವನ್ನು ಸುಲಿದು ಮೈಗೆ ಸುತ್ತಿಕೊಂಡ ಎಂದು ಕಥೆ. ಚಮೂರು ಅನ್ನುವುದು ಹಿಮಾಲಯದಂತಹ ಪ್ರದೇಶಗಳಲ್ಲಿ ಕಂಡುಬರುವ ಜಿಂಕೆಯ ರೀತಿಯ ಒಂದು ಮೃಗ. "ಚಮರೀ ಮೃಗ" ಅನ್ನುತ್ತಾರೆ ("ಯಾಕ್" ಮೃಗ). ಅದರ ಚರ್ಮವೂ ಅವನಿಗೆ ಆಗಬಹುದು. ಪಟ್ಟೆ-ಪೀತಾಂಬರಗಳ ಹವ್ಯಾಸವಿಲ್ಲ. ಶ್ರೀಹರಿಯಂತೆ 'ಸಪೀತವಸ್ತ್ರ" ಅಥವಾ "ಕನಕಾಂಬರಧಾರಿ" ಅಲ್ಲ. ಹೀಗೆ ಅರ್ಥವ್ಯಾಪ್ತಿ. ಸದಾಶಿವನು ವೈರಾಗ್ಯ ಮೂರ್ತಿ. ಬೂದಿಯೇ ಆಭರಣ. ಉಡುಗೆ-ತೊಡುಗೆಗಳಲ್ಲಿ ಆಸಕ್ತಿ ಇಲ್ಲ. ಹೀಗೆ ಚರ್ಚೆ ನಡೆಯಿತು.
ಮೊದಲ ಎರಡು ಪದ್ಯಗಳ ವಾಚನ-ಚರ್ಚೆಯಲ್ಲಿ ಅಂದಿನ ಕಾರ್ಯಕ್ರಮ ಮುಗಿಯಿತು.
*****
ಮಾರನೆಯ ದಿನ ಸೋಮವಾರ. ಬೆಳಿಗ್ಗೆ ಎದ್ದಾಗ ಅಪರೂಪಕ್ಕೆ ಚಿಕ್ಕವರು (ತಮ್ಮ) ಸಿಕ್ಕರು. ಸೋಮವಾರ ಪರಶಿವನ ದಿನ. ಅವಧೂತರೊಬ್ಬರು ಪಕ್ಕದ ಗುಡ್ಡದ ಮೇಲೆ ಒಂದು ಆಶ್ರಮ ಕಟ್ಟಿಕೊಂಡು ವಾಸಿಸುತ್ತಿದ್ದರು. ಅವರದು ಸೋಮವಾರ ವಿಶೇಷ ಪೂಜೆ. ಇವರು ಹೊರಟಿದ್ದರು. ನನ್ನನ್ನು ಕಂಡು ನಿಂತರು.
"ಈದಿನ ಬೆಳಿಗ್ಗೆ ಏನು ನಿನ್ನ ಕಾರ್ಯಕ್ರಮ?'
"ಏನಿಲ್ಲ. ಸುಮ್ಮನೆ ಕಾಲ ಕಳೆಯುವುದು. ಸಂಜೆಯ ವಾಚನದವರೆಗೆ"
"ಗುಡ್ಡದ ಅವಧೂತರ ಕಾರ್ಯಕ್ರಮಕ್ಕೆ ಬರಬಹುದಲ್ಲ?"
"ಬರಬಹುದಾದರೆ ಬರುತ್ತೇನೆ"
"ಬೇಗ ತಯಾರಾಗಿ ಬಾ"
ಅಲಂಕಾರ ಮಾಡಿಕೊಳ್ಳುವ ಅವಶ್ಯಕತೆಯಿರಲಿಲ್ಲ. ತಕ್ಷಣ ಹೊರಟೆ. ಅವರೊಡನೆ ಮಾತಾಡುತ್ತಿದು ಬಹಳ ಕಡಿಮೆ. ದೊಡ್ಡವರಂತೆ ಸಲಿಗೆ ಇರಲಿಲ್ಲ. ಸ್ವಲ್ಪ ಸಂಕೋಚವೇ. ಗುಡ್ಡಕ್ಕೆ ಸುಮಾರು ಇಪ್ಪತ್ತು ನಿಮಿಷಗಳ ನಡಿಗೆ. ಹೆಜ್ಜೆ ಹಾಕಿದೆವು.
"ನಿನ್ನಿನ ವಾಚನದಲ್ಲಿ ಏನು ವಿಶೇಷ?"
"ಮುಖ್ಯವಾಗಿ "ಚರ್ಮಾ೦ಬರ" ಎನ್ನುವುದರ ಬಗ್ಗೆ ಚರ್ಚೆ ನಡೆಯಿತು"
"ಚರ್ಮಾ೦ಬರ" ಎನ್ನುವುದರಲ್ಲಿ ಇನ್ನೂ ಏನಾದರೂ ವಿಶೇಷವಿದೆಯೋ?"
"ಅಂದರೆ ಅರ್ಥವಾಗಲಿಲ್ಲ"
"ಮನಸ್ಸು, ಬುದ್ಧಿ, ಅಹಂಕಾರ, ಚಿತ್ತ, ಚೇತನ ಎಂದು ಕೇಳಿದ್ದೆಯಲ್ಲ?"
"ಕೇಳಿದ್ದೇನೆ"
"ಬುದ್ಧಿ ಇರುವುದು ಎಲ್ಲಿ?"
"ತಲೆಯಲ್ಲಿ. ಮೆದುಳಿನಲ್ಲಿ"
"ಮನಸ್ಸು ಇರುವುದು ಎಲ್ಲಿ?"
ಉತ್ತರ ಗೊತ್ತಿರಲಿಲ್ಲ. ಸುಮ್ಮನಾದೆ.
"ನನ್ನ ಮನಸ್ಸು ಅನ್ನುತ್ತೇವೆ. ಅದು ನಮ್ಮ ಬಳಿಯೇ ಇರಬೇಕಲ್ಲ?"
"ಹೌದು"
"ಹಾಗಿದ್ದರೆ, ಅದಕ್ಕೆ ನಮ್ಮ ದೇಹದಲ್ಲಿ ಎಲ್ಲಿ ಜಾಗ? ಹೃದಯ ಎದೆ ಗೂಡಿನ ಎಡದಲ್ಲಿದೆ ಅನ್ನುತ್ತೇವೆ. ಮಾತು ನಾಲಗೆಯಲ್ಲಿ ಅನ್ನಬಹುದು. ಬುದ್ಧಿ ಮೆದುಳಿನಲ್ಲಿದೆ. ಅದು ತಲೆಯಲ್ಲಿದೆ ಅನ್ನುತ್ತೇವೆ. ಮನಸ್ಸಿಗೆ ಎಲ್ಲಿ ಜಾಗ?"
"ಅದೂ ತಲೆಯಲ್ಲಿಲ್ಲವೇ?'
"ಮನಸ್ಸು ಒಂದು ಕಡೆ ಸುಮ್ಮನೆ ಕೂಡುವುದಲ್ಲ. ಮನಸ್ಸು ಸರ್ವವ್ಯಾಪಿ. ಅದು ದೇಹದಲ್ಲೆಲ್ಲಾ ಆವರಿಸಿದೆ"
"ಸರಿ ಅನ್ನಿಸುತ್ತದೆ"
"ಮಹಾರುದ್ರದೇವರು ಮನೋಭಿಮಾನಿ. ಮನಸ್ಸನ್ನು ನಿಯಂತ್ರಿಸುವವರು. ಆದ್ದರಿಂದ ಅವರು ಮನಸ್ಸು ಇರುವ ಎಲ್ಲೆಡೆ, ಅಂದರೆ ನಮ್ಮ ದೇಹದ ಎಲ್ಲ ಕಡೆಗಳಲ್ಲಿಯೂ ವ್ಯಾಪಿಸಿದ್ದಾರೆ"
"............... "
"ದೇಹದ ಎಲ್ಲೆಡೆ ಅವರು ವ್ಯಾಪಿಸಿರುವುದರಿಂದ ಅವರ ಹೊರಗಡೆ ಇರುವುದು ಏನು?"
"ನಮ್ಮ ದೇಹದ ಹೊರಗಡೆ, ಎಲ್ಲಕಡೆ ನಮ್ಮ ಚರ್ಮವಿದೆ"
"ಅಂದರೆ ಅವರು ಧರಿಸಿರುವುದು ನಮ್ಮ ಚರ್ಮವೇ ಅನ್ನಬಹುದೇ?"
"ಹಾಗೆ ಹೇಳಬಹುದು"
"ಆದ್ದರಿಂದ ಮನೋಭಿಮಾನಿ ರುದ್ರ ದೇವರು "ಚರ್ಮಾ೦ಬರ" ಅಲ್ಲವೇ?"
"ಹೌದು. ಇದು ನನಗೆ ಹೊಳದೇ ಇರಲಿಲ್ಲ"
"ಸಾಮಾನ್ಯವಾಗಿ ಹೊಳೆಯುವುದಿಲ್ಲ. ಒಮ್ಮೆ ಅವಧೂತರು ನನಗೆ ಹೀಗೆ ಹೇಳಿದರು"
"ಹಾಗಿದ್ದರೆ ನಿನ್ನೆ ಮಾಡಿದ ಚರ್ಚೆ ಅರ್ಥ ತಪ್ಪೇ?"
"ಖಂಡಿತವಾಗಿಯೂ ತಪ್ಪಲ್ಲ. ಆದರೆ, ಅದು ಹೊರಗಿನ, ಅಂದರೆ ಬ್ರಹ್ಮಾಂಡದ ದೃಷ್ಟಿಯ ಅರ್ಥ. ಇದು ಒಳಗಿನ, ಅಂದರೆ ಪಿಂಡಾಂಡದ ದೃಷ್ಟಿಯ ಅರ್ಥ"
"ಬಲು ಚಮತ್ಕಾರಿಕವಾಗಿದೆ"
"ಮೊದಲು ಹಾಗೆನ್ನಿಸುವುದು. ತಿಳಿದವರ ಜೊತೆ ಸಂಗ ಮಾಡಿದಾಗ ಅನೇಕ ಒಳ ಅರ್ಥಗಳು ತೆರೆದುಕೊಳ್ಳುತ್ತವೆ"
ಅವಧೂತರ ಆಶ್ರಮ ಬಂದಿತು. ಒಳಗೆ ಹೋದೆವು.
*****
ಯಾರಾದರೂ "ಕುಮಾರವ್ಯಾಸ ಭಾರತ ಓದಿದ್ದೀರಾ?" ಎಂದು ಕೇಳಿದರೆ "ಒಹೋ, ನಾಲ್ಕು ಬಾರಿ ಓದಿದ್ದೇನೆ" ಎನ್ನುತ್ತೇವೆ. ಓದಿರಬಹುದು. ನಿಜ. ಎಷ್ಟು ಅರ್ಥವಾಯಿತು? ಒಂದು ಪದ್ಯದ ಒಂದು ಪದಕ್ಕೆ ಇಷ್ಟು ವ್ಯಾಖ್ಯಾನ ತಿಳಿದವರು ಮಾಡುತ್ತಾರೆ. ನಿಜವಾಗಿ ನಮಗೇನು ಗೊತ್ತು? ಎಷ್ಟು ಗೊತ್ತು?
Saturday, October 4, 2025
ಹತ್ತು ರೀತಿಯ ಮಾತಿನ ದೋಷಗಳು
- ಅಜ್ಞಾನ (ತಿಳಿಯದಿರುವುದು): ಏನು ಮಾತನಾಡಬೇಕೆಂದು ತಿಳಿಯದೇ ಮೂಕರಾಗುವುದು. "ಏನು ಹೇಳಬೇಕೆಂದು ಗೊತ್ತಾಗಲಿಲ್ಲ" ಎಂದು ನಂತರ ಅನ್ನಬಹುದು. ಹೀಗೆ ಮಾತನಾಡಿದರೆ ಸರಿಯೋ, ತಪ್ಪೋ ಎನ್ನುವ ಭೀತಿ ಇರಬಹುದು. ಹೇಗೆ ಪ್ರಾರಂಭಿಸಬೇಕು ಎಂದು ಗೊತ್ತಾಗದಿರಬಹುದು. ವಿಷಯದ ಪರಿಚಯ ಇಲ್ಲದಿರುವುದರಿಂದ ಆಗಬಹುದು.
- ವಿಸ್ಮೃತಿ (ಮರೆವು): ಮೊದಲು ವಿಷಯ ಚೆನ್ನಾಗಿ ತಿಳಿದಿದ್ದರೂ ಮಾತನಾಡಬೇಕಾದಾಗ ನೆನಪು ಕೈಕೊಡುವುದು. ಬಹಳ ತಯಾರಿ ನಡೆಸಿದ್ದರೂ ಬೇಕಿದ್ದಾಗ ಅದು ಹೊಳೆಯಲಿಲ್ಲ. ಒಂದೇ ವಿಷಯವನ್ನು ಹತ್ತಾರು ಬಾರಿ ಪಾಠ ಹೇಳಿದ್ದರೂ ಕೆಲವರಿಗೆ ಈ ಕಾರಣದಿಂದ ತೊಂದರೆ ಆಗುವುದು. ಪಾಠ ಮುಗಿಸಿ ಹೊರಬಂದ ನಂತರ ಅದೇ ವಿಷಯ ಮತ್ತೆ ನೆನಪಿಗೆ ಬರುವುದುಂಟು.
- ಭ್ರಾಂತಿ (ಭ್ರಮೆ): ಕೆಲವು ಲಕ್ಷಣಗಳಿಂದ ಒಂದನ್ನು ಇನ್ನೊಂದಾಗಿ ತಿಳಿಯುವುದು. ಬೆಳ್ಳಗಿರುವುದರಿಂದ ಸುಣ್ಣದ ನೀರನ್ನು ಹಾಲೆಂದು ತಿಳಿಯುವುದು. ಹಗ್ಗವನ್ನು ಹಾವೆಂದು ಭ್ರಮಿಸುವುದು. ಈ ಕಾರಣದಿಂದ ಮಾತಿನಲ್ಲಿ ವ್ಯತ್ಯಾಸ.
- ಸಂಶಯ (ಅನುಮಾನ): ಮಾತಾಡುತ್ತಿರುವ ವಿಷಯದಲ್ಲಿ ಅನೇಕ ಅನುಮಾನಗಳ ಕಾರಣ ಮಾತು ಸರಿಯಾಗಿ ಹೊರಡದಿರುವುದು. ತಲೆಯಲ್ಲಿ ವಿಷಯ ಕಲಸು-ಮೇಲೋಗರ. ಹೀಗೆ ಹೇಳಿದರೆ ಹೇಗೋ? ಹಾಗೆ ಹೇಳಿದರೆ ಹೇಗೋ? ಈ ರೀತಿಯ ಅಭಿವ್ಯಕ್ತಿಯಲ್ಲಿ ಅನುಮಾನ.
- ಅಪಸ್ಮ್ರುತಿ (ತಪ್ಪು ತಿಳಿವಳಿಕೆ): ಭ್ರಾಂತಿಯ ಇನ್ನೊಂದು ರೂಪ. ಸ್ವಲ್ಪವೇ ವ್ಯತ್ಯಾಸ. ರಾಮಣ್ಣನವರ ವಿಷಯ ಗೊತ್ತು. ಭೀಮಣ್ಣನವರ ವಿಷಯವೂ ಗೊತ್ತು. ಆದರೆ ಮಾತಾಡುವಾಗ ಒಬ್ಬರ ಬದಲು ಇನ್ನೊಬರ ವಿಷಯ ಮಾತಾಡುತ್ತಾ ಹೋಗುವುದು.
- ಕ್ಷಯ (ಕಡಿಮೆಯಾಗುವುದು): ಮೊದಲು ಮಾತು ಚೆನ್ನಾಗಿದ್ದರೂ ಮುಂದೆ ಅನೇಕ ಕಾರಣಗಳಿಂದ ಕ್ರಮೇಣ ಮಾತಿನ ಆಳ ಕಡಿಮೆ ಆಗುವುದು. ಶಬ್ದ ಸರಿಯಾಗಿ ಹೊರಡದಿರುವುದು. ಮಾತಾಡುವ ವಿಷಯಗಳು ಕಡಿಮೆಯಾಗುವುದು. ಹೇಳಿದ್ದೇ ಹೇಳುತ್ತಿರುವುದು. ಮುಂತಾದುವು.
- ತಂದ್ರಾ (ಆಲಸ್ಯ): ತಂದ್ರಾ ಪದಕ್ಕೆ ತೂಕಡಿಕೆ ಎಂದು ಒಂದು ಅರ್ಥ. ಮಾತಿನಲ್ಲಿ ತೂಕಡಿಕೆ ಅಂದರೇನು? ಮಾತಿನ ಮಧ್ಯೆ ನಿಂತು ಹೋಗುವುದು. ಮಾತು ಆಡುತ್ತಿದ್ದಂತೆ ಸುಸ್ತಾಗುವುದು. ನಿದ್ದೆಯಲ್ಲಿ ಮಾತಾಡುತ್ತಿರುವಂತೆ ಅಸಂಗತವಾದ ಮಾತುಗಳು. ಹೀಗೆ.
- ಕಂಪವಚ (ತೊದಲು ಮಾತು): ಉಗ್ಗುವುದು ಅನ್ನುತ್ತಾರೆ. ತೊದಲು ಮಾತು. ಮಾತಿನಲ್ಲಿ ಧೃಡತೆ ಇಲ್ಲ. ನಡುಗುವ ಧ್ವನಿ. ಕೇಳುವವರಿಗೆ ಹಿತವಿಲ್ಲ. ಕಂಪನದಿಂದ ಮಾತು ಹುಟ್ಟುವುದಾದರೂ ಇಲ್ಲಿ ಬೇಡವಾದ ಕಂಪನ. ಸಂಗೀತಗಾರರು ಹಾಡುವಾಗ ಬೇಕೆಂದು ಕಂಪಿಸುವ ಧ್ವನಿಯ ರೀತಿಯಲ್ಲ. ಅನವಶ್ಯಕ ಧ್ವನಿಯ ಅಲ್ಲಾಟ.
- ಕೌ೦ಠ್ಯ (ಅಲ್ಲಲ್ಲಿ ನಿಂತುಹೋಗುವುದು): ನಿರರ್ಗಳ ಮಾತಿಲ್ಲ. ಮಾತಾಡುತ್ತಿದ್ದಾಗ ಅಲ್ಲಲ್ಲಿ ಬೇಡದ ಕಡೆ ಏನು ಹೇಳಬೇಕೆಂದು ತೋಚದಿರುವುದರಿಂದ ಮಾತು ನಿಂತುಹೋಗುವುದರಿಂದ ವಿಚಾರ ಸರಿಯಾಗಿ ಪ್ರಸ್ತುತವಾಗದು. ಕೇಳುಗರಿಗೆ ಹಿತದ ಅನುಭವವಿಲ್ಲ. ಪೂರ್ತಿ ಅರ್ಥವಾಗದೆ ಕೊರತೆಯ ಅನುಭವ.
- ಇಂದ್ರಿಯೋದ್ಭವ (ಪಂಚೇಂದ್ರಿಯಗಳಿಂದ ಹುಟ್ಟಿದುದು): ಕಣ್ಣು, ಕಿವಿ, ನಾಲಿಗೆಗಳು ತಾಳ-ಮೇಳದಲ್ಲಿ ಕೆಲಸ ಮಾಡಬೇಕು. ಹೀಗಾಗದೆ ಏರುಪೇರಾದರೆ ಮಾತಿನಲ್ಲಿ ವ್ಯತ್ಯಾಸ ಉಂಟಾಗುವುದು. ಇನ್ನೊಬ್ಬರು ಹೇಳಿದುದು ಕಿವಿಗೆ ಸರಿಯಾಗಿ ಕೇಳದಿದ್ದರೆ ಅವರು ಕೇಳಿದುದೊಂದು, ಇವರು ಹೇಳಿದುದೊಂದು. ನೋಡಿದುದು ಒಂದು. ಮಾತಾಡುತ್ತಿರುವುದು ಇನ್ನೊಂದರ ಬಗ್ಗೆ. ಹೀಗೆ.
ಅಜ್ಞಾನವಿಸ್ಮೃತಿಭ್ರಾಂತಿ ಸಂಶಯಾಪಸ್ಮೃತಿಕ್ಷಯಾತಂದ್ರಾಕಂಪವಚ: ಕೌ೦ಠ್ಯಮುಖಾಯೇ ಚೇಂದ್ರಿಯೋದ್ಭವಾ:ದೋಷಾಸ್ತೇ ನಾಶಮಾಯಾಂತಿ ರಾಘವೇಂದ್ರ ಪ್ರಸಾದತಃ
ಅನೇಕ ನುರಿತ ವೈದ್ಯರಿಂದ ನಿವಾರಣೆ ಸಾಧ್ಯವಾಗದ ಮಾತಿನ ದೋಷಗಳು ಗುರುರಾಯರ ಕರುಣೆಯಿಂದ ಪರಿಹಾರವಾಗಿವೆ ಎಂದು ಹೇಳುತ್ತಾರೆ. ಇದನ್ನು ನಂಬಬೇಕೇ ಅಥವಾ ಬೇಡವೇ ಅನ್ನುವುದು ಅವರವರಿಗೆ ಬಿಟ್ಟ ವಿಚಾರ.