Monday, November 3, 2025

ಅಣ್ಣನು ಹಾವು ತಿಂದನು


ಅಂದು ಸಂಜೆ ಕಾರ್ಯಾಲಯದಿಂದ ಹಿಂದಿರುಗಿದ ತಂದೆಗೆ ಪ್ರತಿದಿನ ತನ್ನ ಬರವನ್ನು ನಿರೀಕ್ಷಿಸುತ್ತಾ ಕಾಯುತ್ತಿದ್ದ ಮಕ್ಕಳು ಮನೆಯಲ್ಲಿ ಕಾಣಿಸಲಿಲ್ಲ. ಮಕ್ಕಳು ಇಲ್ಲದಿದ್ದರೂ ಅವರು ಅಲ್ಲಿಯೇ ಸುತ್ತ-ಮುತ್ತ ಇದ್ದ ಕುರುಹುಗಳು ಕಾಣುತ್ತಿದ್ದವು. ಶಾಲೆಯ ಚೀಲಗಳು, ಪುಸ್ತಕಗಳು ಅಲ್ಲಲ್ಲಿ ಹರಡಿದ್ದವು. ತೆರೆದಿದ್ದ ಪುಸ್ತಕದಲ್ಲಿ ಅರ್ಧ ವಾಕ್ಯ ಬರೆದು, ಅದನ್ನು ಪೂರ್ತಿ ಮಾಡುವ ಮೊದಲೇ ಎಲ್ಲೋ ಓಡಿಹೋಗಿದ್ದುದು ಕಾಣುತ್ತಿತ್ತು. ಮಕ್ಕಳಿಗೆ ಆಟದ ಸೆಳೆತ ಅಂತಹುದು. ಎಲ್ಲ ಎತ್ತಿಟ್ಟು ಒಪ್ಪ-ಓರಣ ಮಾಡಿ ಹೋದರೆ ಅವರನ್ನು ಮಕ್ಕಳು ಎಂದೇಕೆ ಕರೆಯಬೇಕು? ಹಿರಿಯರಿಗೇ ಇಲ್ಲದ ಶಿಸ್ತನ್ನು ಮಕ್ಕಳ ಮೇಲೆ ಏಕೆ ಹೇರಬೇಕು? 

ಮಗಳು ಈಗ ತಾನೇ ಕನ್ನಡ ಕಲಿಯಲು ಪ್ರಾರಂಭಿಸಿದ್ದಾಳೆ. ಏನೋ ಬರೆಯುತ್ತಿದ್ದಾಳೆ. ಏನೆಂದು ನೋಡೋಣ ಅನ್ನಿಸಿತು. ನೋಟ್ ಪುಸ್ತಕವನ್ನು ಹಿಡಿದು ಅಲ್ಲೇ ಕುರ್ಚಿಯ ಮೇಲೆ ಕುಳಿತ. ಒಂದು ವಾಕ್ಯ ಪೂರ್ತಿಯಾಗಿದೆ. ಎರಡನೆಯದು ಪ್ರಾರಂಭವಾಗಿದೆ. ಓದಿದ. 

"ಅಣ್ಣನು ಹಾವು ತಿಂದನು. ಅದನ್ನು" ಅಷ್ಟು ಬರೆಯುವಲ್ಲಿ ಆಟದ ಮೇಲೆ ಗಮನ ತಿರುಗಿರಬೇಕು. ಅರ್ಧಕ್ಕೇ ಬಿಟ್ಟು ಓಡಿಹೋಗಿದ್ದಾಳೆ. 

ಇದೇನು, ಹೀಗಿದೆ? ಮೊನ್ನೆ ಗೋಕುಲಾಷ್ಟಮಿಗೆ ಅಜ್ಜಿ ಮಾಡಿಟ್ಟಿದ್ದ ಚಕ್ಕುಲಿ, ಕೋಡುಬಳೆ, ತೇಂಗೊಳಲು, ಸಿಹಿ ಉಂಡೆ, ಇವನ್ನು ಕೊಟ್ಟರೂ ತಿನ್ನುವುದಿಲ್ಲ. ಹಾವನ್ನು ತಿಂದನೇ? ಅನುಮಾನವಾಯಿತು. ಅದೂ ಎಂಥ ಹಾವೋ, ಏನೋ. 

ಒಹೋ, ಇದು ಅವಳ ಅಣ್ಣನ ಸಮಾಚಾರವಲ್ಲ. ಶಾಲೆಯ ಪಾಠದ ಪುಸ್ತಕದ ಸಾಲು. ನಗು ಬಂತು. ಅಷ್ಟರಲ್ಲಿ ಆಟ ಮುಗಿಸಿ ಮಗಳು ಓಡಿ ಬಂದಳು. 

"ಇದೇನು, ಹೀಗೆ ಬರೆದಿದ್ದಿ? ನಿಮಗೆ ಚೀನಾ ದೇಶದ ಕತೆಯ ಪಾಠ ಇದೆಯೇ?"
"ಇಲ್ಲಪ್ಪ"
"ಮತ್ತೆ ಅಣ್ಣ ಹಾವು ತಿಂದಿದ್ದಾನೆ ಅಂತ ಬರೆದಿದ್ದೀಯೆ. ಎಲ್ಲಿ, ಪಾಠ ತೋರಿಸು"

ಮಗಳು ಪುಸ್ತಕದಲ್ಲಿದ್ದ ಪಾಠ ತೋರಿಸಿದಳು. 

"ಅಣ್ಣನು ಹೂವು ತಂದನು. ಅದನ್ನು ಅಮ್ಮನಿಗೆ ಕೊಟ್ಟನು" ಎಂದಿತ್ತು ಪುಸ್ತಕದಲ್ಲಿ. ಮಗು ಕಾಗುಣಿತ ಕಲಿಯುವ ಕಷ್ಟದಲ್ಲಿ ಹೂವು ಹಾವಾಗಿತ್ತು. ತಂದದ್ದು ತಿಂದಾಗಿತ್ತು. 

*****

ಕನ್ನಡ ರಾಜ್ಯೋತ್ಸವ ಬಂದಿದೆ. ಈ ಸಂದರ್ಭದಲ್ಲಿ ಎಲ್ಲೆಡೆಯೂ ಒಂದು ಸಂಭ್ರಮದ ವಾತಾವರಣ. ವಾಟ್ಸಪ್ಪನಲ್ಲಂತೂ ಶುಭಾಶಯಗಳ ಮಹಾಪೂರ. 

ಸ್ವಾತಂತ್ರ್ಯಾನಂತರ ಭಾಷಾವಾರು ಪ್ರಾಂತಗಳ ರಚನೆಗೆ ಬಹಳ ಬೇಡಿಕೆ ಇದ್ದ ಕಾಲ. "ಕರ್ನಾಟಕ ಕುಲ ಪುರೋಹಿತ" ಎಂದೇ ಖ್ಯಾತರಾದ ಆಲೂರು ವೆಂಕಟ ರಾಯರು, ಹುಯಿಲುಗೋಳ ನಾರಾಯಣ ರಾಯರು, ಅ. ನ. ಕೃಷ್ಣ ರಾಯರು ಇನ್ನೂ ಮುಂತಾದ ಅನೇಕ ಮಹನೀಯರು "ಕರ್ನಾಟಕ ಏಕೀಕರಣ" ಆಗಬೇಕೆಂದು ಹೋರಾಡುತ್ತಿದ್ದ ಕಾಲ. ಇದೇ ರೀತಿ ಎಲ್ಲ ತೆಲುಗು ಮಾತನಾಡುವ ಪ್ರದೇಶವು "ವಿಶಾಲಾಂಧ್ರ" ಎಂದು ಒಂದಾಗಬೇಕೆಂದು ತೆಲುಗರೂ ಹೊಡೆದಾಡುತ್ತಿದ್ದರು. "ಪೊಟ್ಟಿ ಶ್ರೀರಾಮುಲು" ಅನ್ನುವವರು ಆಮರಣಾಂತ ಉಪವಾಸ ಸತ್ಯಾಗ್ರಹ ಇದಕ್ಕಾಗಿ ಮಾಡಿದರು. (ಇದರ ವಿವರಗಳನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು) 56 ದಿನಗಳ ಅಖಂಡ ಉಪವಾಸದ ನಂತರ ಶ್ರೀರಾಮುಲು ಅಮರರಾದರು. ತದನಂತರ ಭಾಷಾವಾರು ಪ್ರಾಂತಗಳ ರಚನೆಗೆ ಇನ್ನೂ ಹೆಚ್ಚಿನ ಬಲ ಬಂದು ಕಡೆಗೆ ಆ ಕೆಲಸವಾಯಿತು. 1956ನೆಯ ಇಸವಿ ನವೆಂಬರ್ ಒಂದರಂದು "ವಿಶಾಲ ಮೈಸೂರು ರಾಜ್ಯ" ರೂಪುಗೊಂಡಿತು. ಅದರ ನೆನಪಿನಲ್ಲಿ "ಕನ್ನಡ ರಾಜ್ಯೋತ್ಸವ" ಆಚರಿಸುತ್ತ ಬಂದಿದ್ದೇವೆ. ಐವತ್ತು ವರುಷಗಳ ಕನ್ನಡಿಗರ ಕನಸು ಅಂದು ನನಸಾಯಿತು. ಹೀಗೆಯೇ ವಿಶಾಲಾಂಧ್ರ ಸಹ ಅಸ್ತಿತ್ವಕ್ಕೆ ಬಂದಿತು. ನವೆಂಬರ್ ಮೊದಲ ದಿನ ಎರಡು ರಾಜ್ಯಗಳಲ್ಲೂ ಸರ್ಕಾರೀ ರಜಾದಿನವಾಗಿ ಸಮಾರಂಭಗಳು ನಡೆಯುವ ಸಂಪ್ರದಾಯ ಪ್ರಾರಂಭವಾಯಿತು. 

ನಂತರ ರಾಜ್ಯಕ್ಕೆ ಹೆಸರು ಬದಲಾವಣೆ ಮಾಡುವ ಬೇಡಿಕೆ ಬಂದಿತು. "ಕನ್ನಡನಾಡು", "ಕರ್ಣಾಟಕ" ಅಥವಾ "ಕರ್ನಾಟಕ" ಎಂದು ಪರ-ವಿರೋಧ ಚರ್ಚೆ ನಡೆದು ಕಡೆಗೆ 1973, ನವೆಂಬರ್ ಒಂದರಂದು "ಕರ್ನಾಟಕ" ಎಂದು ಮರುನಾಮಕರಣ ಆಯಿತು. ಹುಯಿಲುಗೋಳ ನಾರಾಯಣ ರಾಯರ "ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು" ಬದಲಾಯಿಸಿ "ಉದಯವಾಯಿತು ನಮ್ಮ ಚೆಲುವ ಕನ್ನಡ ನಾಡು" ಎಂದು ಕೆಲವರು ಹಾಡಿದ್ದೂ ಉಂಟು. 

*****


ಮೈಸೂರು ರಾಜ್ಯ "ವಿಶಾಲ ಮೈಸೂರು ರಾಜ್ಯ" ಎಂದಾಗಿ ನಂತರ "ಕರ್ನಾಟಕ" ಕೂಡ ಆಗಿದೆ. ವಿಶಾಲಾಂಧ್ರ ಈಗ ಎರಡಾಗಿ "ತೆಲಂಗಾಣ" ಮತ್ತು "ಸೀಮಾಂಧ್ರ" (ಆಂಧ್ರ ಪ್ರದೇಶ ಎಂದು ಕರೆಯುವುದು) ಆಗಿವೆ. ಕರ್ನಾಟಕದಲ್ಲೂ ಆಗಾಗ್ಗೆ "ಕಲ್ಯಾಣ ಕರ್ನಾಟಕ" ಬೇರೆ ಆಗಬೇಕೆಂಬ ಕೂಗು ಕೇಳಿ ಬರುತ್ತದೆ. "ಹೆಸರಾಯಿತು ಕರ್ನಾಟಕ; ಉಸಿರಾಗಲಿ ಕನ್ನಡ" ಎನ್ನುವುದು ಒಂದು ಆಶಯವಾಗಿಯೇ ಉಳಿದಿದೆ. 

ಅನೇಕ ರಾಜಕೀಯ ಕಾರಣಗಳಿಂದ ಏಕೀಕೃತ ಕರ್ನಾಟಕದ ವಿಭಜನೆಯ ಕೂಗು ಆಗಾಗ ಕೇಳಿಬರುತ್ತಿದ್ದರೂ ಆಂಧ್ರದ ರೀತಿ ವಿಭಜನೆಯ ಲಕ್ಷಣಗಳು ವಿಪರೀತವಾಗಿ ಕಾಣಿಸುತ್ತಿಲ್ಲ. ಎಲ್ಲ ಬೆಳವಣಿಗೆ ಕೆಲಸಗಳೂ ಬೆಂಗಳೂರಿನಲ್ಲಿ ಆಗುತ್ತಿವೆ ಎನ್ನುವುದು ಒಂದು ಉತ್ತರ ಕರ್ನಾಟಕದ ಕೂಗಾಗಿದೆ. ಸಮಾಧಾನ ಪಡಿಸಲು ಬೆಳಗಾವಿಯಲ್ಲಿ ಒಂದು ವಿಧಾನ ಸೌಧ ರಚನೆಯಾಗಿ ಆಗಾಗ ಅಲ್ಲಿ ಅಧಿವೇಶನಗಳೂ ನಡೆಯುತ್ತಿವೆ. ಆದರೆ ಎಲ್ಲ ಸರಿಯಾಗಿದೆ ಎಂದು ಹೇಳುವ ಸ್ಥಿತಿ ಇದೆ ಅನ್ನುವಂತಿಲ್ಲ. 

ಕೇಂದ್ರ ಸರಕಾರ ಯಾರೇ ನಡೆಸಲಿ, ಯಾವುದೇ ಪಕ್ಷ ಅಧಿಕಾರದಲ್ಲಿರಲಿ, ಹಿಂದಿ ಭಾಷೆಯ ಹೇರಿಕೆ ಅವ್ಯಾಹತವಾಗಿ ನಡೆದಿದೆ. ತಮಿಳುನಾಡಿನಂತೆ ಅರವತ್ತರ ದಶಕದಲ್ಲಿ ಕನ್ನಡ ಭಾಷಿಕರು ಬಲವಾಗಿ ನಿಲ್ಲದಿದ್ದುದಕ್ಕೆ ತೆರುತ್ತಿರುವ ಬೆಲೆ ಇದು. 

*****

ಕರ್ನಾಟಕದ ರಾಜಧಾನಿಯಾದ ಬೆಂಗಳೂರಿನ ಕಥೆ ಒಂದು ದೊಡ್ಡ ವ್ಯಥೆಯೇ ಆಗಿದೆ. ಹೊರರಾಜ್ಯಗಳಿಂದ ಬಂದವರು ತಾವಾಗಿ ಕನ್ನಡ ಕಲಿಯುವುದಿಲ್ಲ. ದಶಕಗಳೇ ಕಳೆದರೂ ಬೇರೆಯೇ ಆಗಿ ಉಳಿಯುತ್ತಾರೆ. ಕಲಿಸುವ ಪ್ರಯತ್ನ ಕನ್ನಡಿಗರು ಮಾಡುವುದಿಲ್ಲ. "ಕನ್ನಡ ಕಲಿಯಿರಿ" ಎಂದು ಹೇಳುವುದು ಒಂದು ರೀತಿಯ ಗೂಂಡಾಗಿರಿ ಎನ್ನುವಂತೆ ಮೀಡಿಯಾದಲ್ಲಿ ಪ್ರತಿಬಿಂಬಿತ ಆಗುತ್ತಿದೆ. ಈಗ ಬೆಂಗಳೂರಿನ ಒಟ್ಟಾರೆ ಜನಸಂಖ್ಯೆಯಲ್ಲಿ ಶೇಕಡಾ ಕೇವಲ ಮೂವತ್ತೈದರಷ್ಟು ಕನ್ನಡಿಗರು ಉಳಿದಿದ್ದಾರೆ. "ಒಂದು ಸಂಸ್ಕೃತಿ ನಾಶ ಮಾಡಬೇಕಾದರೆ ಅತ್ಯಂತ ಸುಲಭ ಉಪಾಯ ಅಲ್ಲಿನ ಭಾಷೆ ಹಾಳುಮಾಡುವುದು" ಎಂದು ಒಂದು ಹೇಳಿಕೆಯಿದೆ. ಇದರ ಪ್ರಯೋಗಶಾಲೆ ಕರ್ನಾಟಕವೇ ಆಗಿರುವುದು ನಮ್ಮ ದೌರ್ಭಾಗ್ಯ. 

ಈಗಿನ ತಲೆಮಾರಿನ ಅನೇಕ ಕನ್ನಡಿಗರಿಗೆ ಕನ್ನಡ ಮಾತನಾಡುವುದು ಗೊತ್ತು. ಓದಲು ಕಷ್ಟ. ಬರೆಯಲು ಬರದು. ಅಕಸ್ಮಾತ್ ಬರೆದರೂ "ಹೂವು" ಹಾವು" ಆಗಬಹುದು. "ತಂದು" ಅನ್ನುವುದು "ತಿಂದು" ಆಗಬಹುದು. ಅಂದು ಆ ಮನೆಯಲ್ಲಿ ಆಗಿದ್ದು ಕಲಿಯುವ ಮಗುವಿನ ತಪ್ಪು. ಇಂದು ಎಲ್ಲೆಡೆ ಆಗುತ್ತಿರುವುದು ನಮ್ಮ ಉದಾಸೀನದಿಂದ ಆಗುತ್ತಿರುವ ಪ್ರಮಾದ. 

ಕನ್ನಡದ ಕೆಲಸಕ್ಕೆ ಎಂದು ಸ್ಥಾಪಿತವಾದ ಸಂಸ್ಥೆ "ಕನ್ನಡ ಸಾಹಿತ್ಯ ಪರಿಷತ್ತು". ಆ ಸಂಸ್ಥೆಯ ಮುಖ್ಯ ಕಚೇರಿ "ಪರಿಷನ್ಮಂದಿರ" ಇರುವ ರಸ್ತೆಗೆ ಕನ್ನಡದ "ಆದಿಕವಿ" ಪಂಪನ ನೆನಪಾಗಿ "ಪಂಪ ಮಹಾಕವಿ ರಸ್ತೆ" ಎಂದು ಹೆಸರಿದೆ. ಇದನ್ನೂ ಬದಲಾಯಿಸುವ ಪ್ರಯತ್ನ ನಡೆಯುತ್ತಿದೆ ಎಂದು ಸುದ್ದಿ. ಪಂಪನ ಕೃತಿಗಳನ್ನು ಓದುವುದು ಅತ್ತ ಇರಲಿ. ಅವನ ಹೆಸರೂ ನಮಗೆ ಬೇಡವಾಗಿದೆ.  

ಹಳಗನ್ನಡ ಎಂದೋ ಮರೆತುಹೋಯಿತು. ನಡುಗನ್ನಡ ನಡುವಿನಲ್ಲಿ ಬಿಟ್ಟುಹೋಯಿತು. ನವೋದಯ ಕನ್ನಡ ರಾಜ್ಯೋತ್ಸವದ ಕಾಲದಲ್ಲಿ ಮಾತ್ರ ನೆನಪಿಗೆ ಬರುತ್ತಿದೆ. "ನೀವು ಇಂಗ್ಲೀಷಿನಲ್ಲಿ ಬರೆದರೆ ತಕ್ಷಣ ಓದುತ್ತೇವೆ. ಕನ್ನಡ ಆದರೆ ಕಷ್ಟ" ಎಂದು ಐವತ್ತು ದಾಟಿದವರೇ ಹೇಳುತ್ತಾರೆ. ಅವರಿಗಿಂತ ಚಿಕ್ಕವರಿಗೆ ಇದು ಕನ್ನಡ ಎನ್ನುವುದು ಗೊತ್ತಾಗುವುದೂ ಶ್ರಮವೇ. 

ಐವತ್ತು-ಅರವತ್ತರ ದಶಕದಲ್ಲಿ ಕನ್ನಡ ಚಲನಚಿತ್ರಗಳು ಕನ್ನಡ ಭಾಷೆಯ ರಾಯಭಾರಿಗಳಾಗಿ ಕೆಲಸ ಮಾಡುತ್ತಿದ್ದವು. ಏಕೀಕರಣದ ಕಾಲದಲ್ಲಿ ಚಿತ್ರರಂಗ ದೊಡ್ಡ ಕಾಣಿಕೆ ನೀಡಿತು. ಇಂದು ಅನೇಕ ಕನ್ನಡ ಚಲನಚಿತ್ರಗಳಲ್ಲಿ ಕನ್ನಡ ಎಲ್ಲಿದೆ ಎಂದು ಹುಡುಕಬೇಕಾಗಿದೆ. 

*****

ದೈನಂದಿನ ಕಾರ್ಯಕ್ರಮದಲ್ಲಿ ಒಂದು ಪುಟವೋ, ಅರ್ಧ ಪುಟವೋ ಕನ್ನಡ ಬರೆಯುವುದು, ಬರೆದಿರುವುದನ್ನು ಓದುವುದು, ನಮ್ಮ-ನಮ್ಮಲ್ಲಿ ಕನ್ನಡ ಮಾತನಾಡುವುದು, ಅಕ್ಕ-ಪಕ್ಕದವರಿಗೆ ಕನ್ನಡ ಕಲಿಸುವುದು, ಕನ್ನಡದ ವಿಷಯದಲ್ಲಿ ರಾಜಕೀಯವಾಗಿ ಗಟ್ಟಿ ನಿಲುವುಗಳನ್ನು ಪಕ್ಷಭೇದ ಇಲ್ಲದೆ ತೆಗೆದುಕೊಳ್ಳುವುದು, ಕನ್ನಡಿಗರು ಒಟ್ಟಾಗಿ ಒಗ್ಗಟ್ಟಿನಿಂದ ಇರುವುದು ಈಗ ರಾಜ್ಯೋತ್ಸವ ಆಚರಿಸುವ ಮುಖ್ಯ ಅಂಗವಾಗಬೇಕು. 

ಇಲ್ಲದಿದ್ದರೆ "ಹೂವು ಹಾವಾಗುವುದು" ಮತ್ತು "ತರುವುದು ತಿನ್ನುವುದು" ಆಗುವುದು ಮಕ್ಕಳ ಕಾಗುಣಿತದ ತಪ್ಪಿನಿಂದಲ್ಲ; ನಮ್ಮ ಪ್ರಮಾದದಿಂದಲೇ ನಡೆದು ನಮ್ಮ ಎದುರೇ ಭೂತಾಕಾರವಾಗಿ ಬಂದು ನಿಲ್ಲುತ್ತದೆ. 

Saturday, November 1, 2025

ನನಗೇ ಏಕೆ ಹೀಗಾಗುತ್ತದೆ?


ಈಗಿನ ದಿನಗಳಲ್ಲಿ "ಕರೆಂಟ್ ಹೋಯಿತು" ಅಥವಾ "ಪವರ್ ಫೇಲ್ಯೂರ್" ಆಯಿತು ಅನ್ನುವ ಮಾತುಗಳು ಕೇಳಿಬರುವುದು ಬಹಳ ಕಡಿಮೆ. ಅನೇಕರ ಮನೆಗಳಲ್ಲಿ "UPS" ಸೌಲಭ್ಯ ಇರುತ್ತದೆ. ಕಣ್ಣ ರೆಪ್ಪೆ ಅಲುಗಾಡುವ ಸಮಯದಲ್ಲಿ ಅದು ಕೆಲಸ ಮಾಡಲು ಪ್ರಾರಂಭಿಸುತ್ತದೆ. ಸ್ವಲ್ಪ ಮುಂದುವರಿದ ರೀತಿಯ ವ್ಯವಸ್ಥೆ ಇದ್ದರಂತೂ ವ್ಯತ್ಯಾಸ ಗೊತ್ತೇ ಆಗದಂತೆ ವಿದ್ಯುತ್ ಸರಬರಾಜು ಹಸ್ತಾಂತರವಾಗುತ್ತದೆ. ಇಂತಹ ಸೌಲಭ್ಯ ದುಬಾರಿ ಅನ್ನುವ ಸ್ಥಿತಿಯ ಮನೆಗಳಲ್ಲಿ ಈಗಲೂ "ಕರೆಂಟ್ ಹೋಯಿತು" ಅನ್ನುವುದು ಕೇಳಿ ಬರುತ್ತದೆ. ಅನೇಕ ದಿನಚರಿಯ ಕೆಲಸ-ಕಾರ್ಯಗಳು ಅಲ್ಲಲ್ಲೇ ನಿಲ್ಲುತ್ತವೆ. ಬಾವಿಯಲ್ಲಿ ಅಥವಾ ನೆಲದಡಿಯ ಸಂಪಿನಲ್ಲಿ ನೀರುಂಟು. ಆದರೆ ಸ್ನಾನವಿಲ್ಲ. ಅಡಿಗೆಗೆ ಬೇಕಾದ ಪದಾರ್ಥ ರುಬ್ಬುವಂತಿಲ್ಲ. ಹೊಲಗಳ ಪಂಪುಸೆಟ್ಟುಗಳು ಹಗಲೆಲ್ಲಾ ನಿದ್ರೆ ಮಾಡುತ್ತವೆ. ಹೀಗೆ ನಡೆಯುತ್ತದೆ. 

ಒಮ್ಮೆ ಒಬ್ಬ ಸ್ನೇಹಿತರ ಮನೆಯಲ್ಲಿ ಕುಳಿತಿದ್ದಾಗ ಹೀಗೇ ವಿದ್ಯುತ್ ನಿಲುಗಡೆ ಆಯಿತು. ದೂರದರ್ಶನದಲ್ಲಿ ಬಹಳ ಮುಖ್ಯವಾದ ಕ್ರಿಕೆಟ್ ಪಂದ್ಯ ನೋಡುತ್ತಿದ್ದ ಮಗನಿಗೆ ಬಹಳ ಕೋಪ ಬಂತು. "ಹಾಳಾದ್ದು, ಯಾವಾಗಲೂ ನಮ್ಮ ರಸ್ತೆಯಲ್ಲಿಯೇ ಹೀಗಾಗುತ್ತೆ. ಹಿಂದಿನ ರಸ್ತೆಯಲ್ಲಿ ಯಾವಾಗಲೂ ವಿದ್ಯುತ್ ಇರುತ್ತೆ" ಎಂದು ಕೂಗಾಡಿದ. ಅಲ್ಲಿಯೇ ಇದ್ದ ತಂದೆ "ಹೌದೇ? ಅದು ಹೇಗೆ ಗೊತ್ತು?" ಎಂದು ಕೇಳಿದರು. "ನಮ್ಮ ಮನೆಯಲ್ಲಿ ಹೀಗಾದಾಗ ಹೊರಗೆ ಹೋಗಿ ನೋಡಿದರೆ ಹಿಂದಿನ ರಸ್ತೆಯಲ್ಲಿ ಯಾವಾಗಲೂ ವಿದ್ಯುತ್ ಇರುತ್ತೆ" ಅಂದ ಮಗ. "ಒಂದು ಕೆಲಸ ಮಾಡು. ನಮ್ಮ ಮನೆಯಲ್ಲಿ ವಿದ್ಯುತ್ ಇದ್ದಾಗ ಆಗಾಗ ಹೊರಗೆ ಹೋಗಿ ನೋಡು. ಆಗ ಗೊತ್ತಾಗುತ್ತೆ" ಅಂದರು ತಂದೆ.

ನಮ್ಮ ಕಷ್ಟಗಳು ನಮಗೆ ಗೊತ್ತಾಗುತ್ತವೆ. ಅಂತೆಯೇ ಬೇರೆಯವರ ಕಷ್ಟಗಳು ಅವರಿಗೆ ಗೊತ್ತಾಗುತ್ತವೆ. ಎದುರುಗಡೆಯವನಿಗೆ ಹೊಟ್ಟೆನೋವು. ನಮ್ಮ ಕಣ್ಣಿಗೆ ಅವನು ಸರಿಯಾಗಿಯೇ ಇದ್ದಾನೆ. ನಮಗೂ ಒಮ್ಮೊಮ್ಮೆ ಹೊಟ್ಟೆ ನೋವು ಬರುತ್ತದೆ. ಆಗ ಎದುರುಗಡೆಯವರಿಗೆ ನಾವೂ ಸರಿಯಾಗಿಯೇ ಕಾಣುತ್ತೇವೆ. ಇಷ್ಟು ಸಾಮಾನ್ಯ ಜ್ಞಾನ ಇದ್ದರೂ, "ನೋಡು, ಯಾವಾಗಲೂ ನನಗೇ ಹೀಗಾಗುತ್ತದೆ!" ಎಂದು ಪರಿತಪಿಸುವುದು ಮನುಷ್ಯನ ಅಭ್ಯಾಸ. 

*****

ಹಿಂದಿನ ಸಂಚಿಕೆಯಲ್ಲಿ "ಪರಸ್ಪರ ಗುರು-ಶಿಷ್ಯರು" ಅನ್ನುವ ಶೀರ್ಷಿಕೆಯ ಅಡಿಯಲ್ಲಿ ಬೃಹದಶ್ವ ಮುನಿ ಪಾಂಡವಾಗ್ರಜ ಧರ್ಮರಾಯನಿಗೆ ನಳ ಮಹಾರಾಜನ ವೃತ್ತಾಂತ ಹೇಳಿದುದನ್ನು ನೋಡಿದೆವು. (ಇದನ್ನು ಓದಲು ಇಲ್ಲಿ ಕ್ಲಿಕ್ ಮಾಡಿ). ಯುಧಿಷ್ಠಿರನೂ ಹೀಗೆಯೇ "ನನಗೇ ಏಕೆ ಹೀಗಾಯಿತು?" ಅಂದುಕೊಂಡಿರಬೇಕು! 

ನಳಮಹಾರಾಜನ ಕಥೆಯಲ್ಲಿ ಧರ್ಮಜನಿಗಾದದ್ದು ಎಲ್ಲವೂ ನಳನಿಗೂ ಆಗಿತ್ತು. ಅವನೂ ತಮ್ಮನಿಗೆ ಜೂಜಿನಲ್ಲಿ ಎಲ್ಲವನ್ನೂ ಸೋತನು. ಕಾಡು ಪಾಲಾದನು. ಧರ್ಮಜನಿಗೆ ಹೆಂಡತಿ ದೂರವಾಗಲಿಲ್ಲ. ನಳನು ಹೆಂಡತಿಯನ್ನೂ ಬಿಟ್ಟು ಹೋಗಬೇಕಾಯಿತು. ಧರ್ಮಜನು ಕಂಕಭಟ್ಟನಾಗಿ ವಿರಾಟ ಮಹಾರಾಜನ ಸೇವೆ ಮಾಡಿದನು. ನಳನೋ ಕಾರ್ಕೋಟಕನ ಕೈಲಿ ಕಚ್ಚಿಸಿಕೊಂಡು ವಿರೂಪ ಪಡೆದು, ಬಾಹುಕನಾಗಿ ಋತುಪರ್ಣ ಮಹಾರಾಜನ  ಸಾರಥಿಯಾಗಿ ದುಡಿದನು. ಹೀಗೆ ಕೆಲವು ಸಂಗತಿಗಳಲ್ಲಿ ಅವನು ಧರ್ಮರಾಯನಿಗಿಂತ ಹೆಚ್ಚಿನ ದುಃಖ ಪಟ್ಟನು. 

ಧರ್ಮರಾಯನ ಕಷ್ಟ ದೊಡ್ಡದೋ ಅಥವಾ ನಳ ಮಹಾರಾಜನ ಕಷ್ಟ ದೊಡ್ಡದೋ ಎಂದು ಚರ್ಚೆ ಮಾಡಬಹುದು. ಕೆಲವರು ಅದು ದೊಡ್ಡದು ಎನ್ನಬಹುದು. ಮತ್ತೆ ಕೆಲವರು ಇದು ದೊಡ್ಡದು ಅನ್ನಬಹುದು. ಬೃಹದಶ್ವ ಮುನಿ ಬಂದು ನಳನ ವಿಷಯ ಹೇಳುವವರೆಗೆ ಧರ್ಮರಾಯನಿಗೆ ತನ್ನ ವ್ಯಥೆಯೇ ದೊಡ್ಡದಾಗಿತ್ತು. ಇವರಿಬ್ಬರೂ ತಾವು ಸ್ವತಃ ಜೂಜಾಡಿ ರಾಜ್ಯ ಕಳೆದುಕೊಂಡವರು. ಶ್ರೀರಾಮಚಂದ್ರನು ಯಾವ ತಪ್ಪನ್ನೂ ಮಾಡದೆ, ತನಗೆ ನ್ಯಾಯವಾಗಿ ಬರಬೇಕಾಗಿದ್ದ ರಾಜ್ಯ ತಪ್ಪಿ, ಕಾಡುಪಾಲಾಗಿ, ಹೆಂಡತಿಯನ್ನು ಕಳೆದುಕೊಂಡು, ಏನೆಲ್ಲಾ ಕಷ್ಟಗಳನ್ನು ಅನುಭವಿಸಿದನು! ಯಾವ ರೀತಿಯಲ್ಲಿ ಕಂಡರೂ ಶ್ರೀರಾಮನ ಕಷ್ಟಗಳು ಇನ್ನೂ ದೊಡ್ಡವಲ್ಲವೇ?

ದ್ರೌಪದಿಗೆ ಬಂದ ಕಷ್ಟಗಳೇನು ಕಡಿಮೆಯೇ? ತುಂಬಿದ ಸಭೆಯಲ್ಲಿ ಚಕ್ರವರ್ತಿಯ ಧರ್ಮಪತ್ನಿ ಮಹಾರಾಣಿಯಾದವಳಿಗೆ ವಸ್ತ್ರಹರಣದ ಪ್ರಯತ್ನವಾಯಿತು. ಅದಕ್ಕಿಂತ ಕಷ್ಟ ಬೇರೆ ಇದೆಯೇ? ಕುಮಾರವ್ಯಾಸ ಹೇಳುವುದಿದು:

ಜನನವೇ ಪಾಂಚಾಲ ರಾಯನ
ರಮನೆ ಮನೋವಲ್ಲಭರದಾರೆನೆ  
ಮನುಜಗಿನುಜರು ಗಣ್ಯವೇ ಗೀರ್ವಾಣರಿಂ ಮಿಗಿಲು 
ಎನಗೆ ಬಂದೆಡರೀ ವಿರಾಟನ 
ವನಿತೆಯರ ಮುಡಿಯ ಕಟ್ಟುವ 
ತನುವ ತಿರುಗುವ ಕಾಲನೊತ್ತುವ ಕೆಲಸದುತ್ಸಾಹ 

ಮಹಾರಾಜ ದ್ರುಪದನ ಪ್ರೀತಿಯ ಮಗಳು. ಬೆಂಕಿಯಲ್ಲಿ ಹುಟ್ಟಿದವಳು. ಅವಳ ಕಾಲದ ಅಪ್ರತಿಮ ಸುಂದರಿ. ದೇವತೆಗಳನ್ನು ಮೀರಿಸಿದ ಐವರು ಗಂಡಂದಿರು. ರಾಜಸೂಯ ಯಾಗದಲ್ಲಿ ಧರ್ಮರಾಯನ ಜೊತೆಗೆ ಕುಳಿತಾಗ ಬಾಗಿ ವಂದಿಸಿದ ರಾಜಕುಲಸ್ತೋಮ. ಹುಟ್ಟಿದಂದಿನಿಂದ ಕೈಗೊಂದು, ಕಾಲ್ಗೊಂದು ಸೇವಕರು. "ಯಾರಲ್ಲಿ?" ಎಂದರೆ ನಾಲ್ಕು ಜನ ಓಡಿ ಬರುತ್ತಿದ್ದರು. ಈಗ ವಿರಾಟ ಮಹಾರಾಜನ ಅಂತಃಪುರದಲ್ಲಿ ಯಾವ ಹೆಂಗಸು ಕರೆದರೂ ಓಡೋಡಿ ಹೋಗಬೇಕು. ಅವರ ತಲೆ ಬಾಚಿ ಹೆರಳು ಕಟ್ಟಬೇಕು. ಅವರ ಹಿಂದೆ ತಿರುಗಬೇಕು. ಅವರು ಕಾಲು ನೀಡಿದರೆ ಕಾಲೊತ್ತಬೇಕು! ಹುಟ್ಟಿದಂದಿನಿಂದ ಬಡತನವಿತ್ತಪ್ಪ. ಇದೇ ಜೀವನದ ಕೆಲಸ ಅಂದರೆ ಅದೊಂದು ತರಹ. ಇಲ್ಲಿ ಹಾಗಲ್ಲ. ಅವಳ ಕಷ್ಟವೇನು ಎಂದು ಅವಳೇ ಹೇಳಿಕೊಳ್ಳಬೇಕಾದ ಪರಿಸ್ಥಿತಿ! ಇದು ತನ್ನ ತಪ್ಪಿನಿಂದ ಬಂದದ್ದಲ್ಲ. ಈ ಕಷ್ಟಗಳು ಎದುರು ಬಂದು ನಿಲ್ಲುವವರೆಗೂ ಹೀಗಾಗಿದೆ ಅಥವಾ ಹೀಗಾಗಬಹುದು ಎಂದು ಗೊತ್ತೂ ಇಲ್ಲ. 

ಅದೆಲ್ಲಾ ಹೋಗಲಿ ಎಂದು ಬಿಟ್ಟರೂ, ಸಭೆಯಲ್ಲಿ ದುಃಶಾಸನನ ಕೋಟಲೆ. ದುರ್ಯೋಧನ, ಕರ್ಣ, ಶಕುನಿಯರ ಚುಚ್ಚುಮಾತು. ಕಾಡಿನಲ್ಲೂ ನೆಮ್ಮದಿಯಿಲ್ಲ. ಅಲ್ಲಿಗೂ ಬಂದ ಮೈದುನನಾದ ಸೈ೦ಧವ. ಮತ್ತೆ ವಿರಾಟನ ಮನೆಯಲ್ಲಿ ಕೀಚಕ. ದಿನವೆಲ್ಲ ಮೈಮುರಿದು ದುಡಿದೆ ಎಂದರೂ ನೆಮ್ಮದಿಯ ಬದುಕಿಲ್ಲ. 
*****

ಮಹಾರಾಣಿಯಾಗಿದ್ದವಳು ಸೈರಂಧ್ರಿ ಆದದ್ದು ದ್ರೌಪದಿ ಒಬ್ಬಳೇ ಏನು? ಹಿಂದೆ ಹೀಗಾಗಿದ್ದು ಉಂಟೋ? ಅವಳಂತೆ, ಅವಳಷ್ಟು ಕಷ್ಟ ಪಟ್ಟವರು ಮತ್ಯಾರಾದರೂ ಇದ್ದಾರೋ?

ದಮಯಂತಿಯೂ ದ್ರೌಪದಿಯಂತೆ ರಾಜಪುತ್ರಿ. ವಿದರ್ಭ ರಾಜನ ಮಗಳು. ಮಕ್ಕಳಿಲ್ಲದ ಭೀಮರಾಜ ದಮ ಎಂಬ ಋಷಿಯನ್ನು ಆಶ್ರಯಿಸಿ, ಅವರ ಸಲಹೆಯಂತೆ ಪುತ್ರಕಾಮೇಷ್ಟಿ ಯಾಗಮಾಡಿ ಪಡೆದ ಮಗಳಿಗೆ ದಮಯಂತಿ ಎಂದು ಹೆಸರಿಟ್ಟ. ಅವಳೂ ದ್ರೌಪದಿಯಂತೆ ವರ ಪ್ರಸಾದವೇ. ಅವಳೂ ಅವಳ ಕಾಲದ ಅಪ್ರತಿಮ ಸುಂದರಿ. ಗುಣದಲ್ಲಿ, ನಯ-ವಿನಯದಲ್ಲಿ ಎಲ್ಲ ಕಾಲದ ಶ್ರೇಷ್ಠರ ಸಾಲಿನಲ್ಲಿ ಎದ್ದು ಕಾಣುವವಳು. ದೇವತೆಗಳೂ ಅವಳನ್ನು ವಿವಾಹವಾಗಲು ಬಯಸಿ ಸ್ವಯಂವರಕ್ಕೆ ಬಂದಿದ್ದರು. ದ್ರೌಪದಿಯಂತೆಯೇ ಅವಳ ಬಾಲ್ಯ ಕಳೆದಿತ್ತು. ಗಂಡನಾದವನು ನಳ ಚಕ್ರವರ್ತಿ. ದ್ರೌಪದಿಯಂತೆಯೇ ಸುತ್ತ ಮುತ್ತ ನೌಕರ-ಚಾಕರರು. ಜೂಜಿನಲ್ಲಿ ರಾಜ್ಯ ಕಳೆದುಕೊಂಡ ಗಂಡನ ಜೊತೆ ಕಾಡು ಸೇರಿದಳು. ಹಕ್ಕಿಗಳನ್ನು ಹಿಡಿಯಲು ಗಂಡ ತನ್ನ ಬಟ್ಟೆಯನ್ನೇ ಬಲೆಯಾಗಿ ಎಸೆದ. ಆ ಹಕ್ಕಿಗಳೋ ಆ ಬಟ್ಟೆಯನ್ನೇ ಎತ್ತಿಕೊಂಡು ಹಾರಿಹೋದವು. ತಾನು ಉಟ್ಟ ಸೀರೆಯನ್ನು ಹರಿದು ಅರ್ಧ ಗಂಡನಿಗೆ ಕೊಟ್ಟಳು. (ದ್ರೌಪದಿಯಂತೆ ಮತ್ತೊಬ್ಬ ವಸ್ತ್ರಹರಣ ಮಾಡಲಿಲ್ಲ ಅನ್ನುವುದು ಮಾತ್ರ ವ್ಯತ್ಯಾಸ.) ಗಂಡ ಮಧ್ಯರಾತ್ರಿಯಲ್ಲಿ ಅವಳನ್ನು ಬಿಟ್ಟು ಹೊರಟುಹೋದ. (ದ್ರೌಪದಿಗೆ ಈ ಕಷ್ಟ ಇರಲಿಲ್ಲ). 

ಕಾಡಿನಲ್ಲಿ ಒಂದು ಹೆಬ್ಬಾವು ಅವಳನ್ನು ನುಂಗಲು ಪ್ರಾರಂಭಿಸಿತು. ಅವಳ ಕೂಗು ಕೇಳಿ ಬಂದ ಬೇಡನೊಬ್ಬ ಅವಳನ್ನು ಉಳಿಸಿದ. ಆದರೆ ಅವಳನ್ನು ಕಾಡಲು ತಯಾರಾದ. ಧೈರ್ಯದಿಂದ ಅವನನ್ನು ಹೆದರಿಸಿ ಓಡಿಸಿದಳು. ಯಾರೋ ವ್ಯಾಪಾರಿಗಳ ಗುಂಪಿನ ಜೊತೆ ಪ್ರಯಾಣ ಮುಂದುವರೆಸಿದಳು. ಕಾಡಾನೆಗಳು ಬಂದು ಅವರನ್ನೆಲ್ಲಾ ಮುತ್ತಿದ್ದವು. ಹೇಗೋ ಪಾರಾಗಿ ಚೈದ್ಯ ರಾಜನ ಅರಮನೆ ತಲುಪಿದಳು. ಅಲ್ಲಿಯಾದರೋ,  ತನ್ನ ತಾಯಿಯ ತಂಗಿಯ ಮನೆ ಎಂದು ಗೊತ್ತಿಲ್ಲ. ಆ ಚಿಕ್ಕಮ್ಮನು ದಮಯಂತಿಯನ್ನು ತನ್ನ ಮಗಳ ಸೈರ೦ಧ್ರಿಯನ್ನಾಗಿ ನೇಮಿಸಿದಳು. ಮುಂದೆ ಅನೇಕ ಬೆಳವಣಿಗೆಗಳು ನಡೆದು, ತಂದೆಯ ಮನೆ ಸೇರಿ, ಇನ್ನೊಂದು ಸ್ವಯಂವರದ ನೆಪ ಹೂಡಿ, ಕಡೆಗೆ ಗಂಡನ ಜೊತೆ ಸೇರಿದಳು. ನಳನು ಪುಷ್ಕರನೊಡನೆ ಮತ್ತೆ ಜೂಜಿಗೆ ಕುಳಿತಾಗ ಪುಷ್ಕರನು ಕೇಳಿದ್ದೇನು? ನಳನು ಗೆದ್ದರೆ ರಾಜ್ಯ ನಳನಿಗೆ. ಪುಷ್ಕರನು ಗೆದ್ದರೆ? ನಳನ ಬಳಿ ಪಂಥವಿಡಲು ರಾಜ್ಯವಿಲ್ಲ. ದಮಯಂತಿಯನ್ನು ನಳ ಪುಷ್ಕರನಿಗೆ ಒಪ್ಪಿಸಬೇಕು! ನಳನು ಪುಣ್ಯಕ್ಕೆ ಗೆದ್ದ. ನಳನು ಮತ್ತೆ ರಾಜ್ಯ-ಕೋಶಗಳನ್ನು ಪಡೆದ ನಂತರ ದಮಯಂತಿ ಮತ್ತೆ ರಾಣಿಯಾಗಿ ಬದುಕಿದಳು. 

ದ್ರೌಪದಿಗಿಂತ ಎಷ್ಟೋ ಮುಂಚೆ, ಅವಳಂತೆ ಕಷ್ಟಪಟ್ಟು, ಕಾಡುಪಾಲಾಗಿ, ಸೈರ೦ಧ್ರಿಯಾಗಿ, ಅದೇ ರೀತಿ ಪಾಡುಪಟ್ಟವಳು ದಮಯಂತಿ. 
*****

ಕರ್ಣನು ಒಮ್ಮೆ ತನ್ನ ಹೆತ್ತ ತಾಯಿ ಆಗತಾನೇ ಹುಟ್ಟಿದ ತನ್ನನ್ನು ನದಿಯಲ್ಲಿ ತೇಲಿಬಿಟ್ಟು, ತಾನು ಸೂತಪುತ್ರನೆಂದು ಬದುಕಬೇಕಾಯಿತು ಎಂದು ಕೃಷ್ಣನ ಬಳಿ ಹೇಳಿಕೊಂಡು ಕೊರಗುತ್ತಾನೆ. ಕೃಷ್ಣ ಹೇಳುತ್ತಾನೆ: "ನಿನ್ನದು ಅಷ್ಟೇ ಕಥೆ. ನನ್ನನ್ನು ನೋಡು. ನಾನು ಹುಟ್ಟಿದ್ದೇ ಸೆರೆಮನೆಯಲ್ಲಿ. ಹುಟ್ಟುವ ಮೊದಲೇ ನನ್ನನ್ನು ಕೊಲ್ಲಲು ಸೋದರಮಾವನೇ ಹೊರಗಡೆ ಕಾದಿದ್ದ. ಹುಟ್ಟಿದ ತಕ್ಷಣ ನನ್ನ ತಂದೆಯೇ ನನ್ನನ್ನು ಬೇರೆಲ್ಲೋ ಕೊಂಡೊಯ್ದ. ಮಹಾರಾಜ ಉಗ್ರಸೇನನ ಮೊಮ್ಮಗನಾದ ನಾನು ಹಸುಕಾಯುವ ಗೊಲ್ಲನಾಗಿ ಬೆಳೆದೆ. ಹಾಲು ಕುಡಿಯುವ ಕಂದನಿಗೆ ಹಾಲಿನಲ್ಲೇ ವಿಷವುಣಿಸಲು ಒಬ್ಬಳು ರಕ್ಕಸಿ ಬಂದಳು. ಮಗುವಾಗಿದ್ದಾಗ ನನ್ನನ್ನು ಮುಗಿಸಲು ಸರತಿಯಮೇಲೆ ರಕ್ಕಸರ ಗುಂಪೇ ಬಂತು. ನಂತರ ಜರಾಸಂಧನ ಕಾಟ. ಯುದ್ಧಗಳ ಮೇಲೆ ಯುದ್ಧ. ಗೋಕುಲದಿಂದ ಮಧುರೆಗೆ. ಮಧುರೆಯಿಂದ ದ್ವಾರಕೆಗೆ. ನಿನಗಾದರೆ ಒಬ್ಬರು ಸಾಕುವ ದಂಪತಿಗಳು ಸಿಕ್ಕಿದರು. ನಂತರ ಅಂಗರಾಜನಾದೆ. ಈಗ ಹೇಳು. ನಿನ್ನ ಕಷ್ಟ ಹೆಚ್ಚೋ, ನನ್ನ ಕಷ್ಟ ಹೆಚ್ಚೋ?". 

ಕರ್ಣ ಏನು ಹೇಳಬೇಕು?
*****

ಒಳ್ಳೆಯ ಆರೋಗ್ಯದಲ್ಲಿದ್ದ ಸ್ನೇಹಿತರೊಬ್ಬರು ಕರೋನ ಸಮಯದಲ್ಲಿ ವಿಚಿತ್ರ ಖಾಯಿಲೆಗೆ ತುತ್ತಾದರು. ಎರಡು ತಿಂಗಳು ಆಸ್ಪತ್ರೆ ವಾಸದ ನಂತರ ಇಪ್ಪತ್ತೈದು ಕೆಜಿ ತೂಕ ಕಳೆದುಕೊಂಡು ಕುಂಬಳಕಾಯಿಯಂತೆ ಇದ್ದವರು ನುಗ್ಗೆಕಾಯಿಯಂತೆ ಆದರು. ನಡೆದಾಡಲೂ ಆಗದು. ಭೋಕ್ತಾಪುರುಷ ಆಗಿದ್ದವರಿಗೆ ಎರಡು ಚಮಚ ಆಹಾರ ತಿನ್ನಲೂ ಕಷ್ಟ. ಆಸ್ಪತ್ರೆಯಿಂದ ವೈದ್ಯರು ಅವರನ್ನು ಪುನರ್ವಸತಿ ಕೇಂದ್ರಕ್ಕೆ (ರಿಹ್ಯಾಬಿಲಿಟೇಷನ್ ಸೆಂಟರ್) ಕಳಿಸಿದರು. 

ಇನ್ನೊಬ್ಬ ಸ್ನೇಹಿತರು ಅವರನ್ನು ನೋಡಲು ಪುನರ್ವಸತಿ ಕೇಂದ್ರಕ್ಕೆ ಹೋದರು. ಅವರ ಪರಿಸ್ಥಿತಿ ನೋಡಿ ಇವರಿಗೆ ಕಣ್ಣೀರು. "ಇದೇನು? ಹೀಗಾಯಿತು!" ಎಂದರು. ಅವರು ಹೇಳಿದರು: "ಆಂಬ್ಯುಲೆನ್ಸ್ ವಾಹನದಲ್ಲಿ ಮಲಗಿ ಆಸ್ಪತ್ರೆಯಿಂದ ಇಲ್ಲಿಗೆ ಬರುವ ದಾರಿಯಲ್ಲಿ ನಾನೂ ಹಾಗೆ ಯೋಚಿಸುತ್ತಿದ್ದೆ. ನನಗೇ ಏಕೆ ಹೀಗಾಯಿತು? ಎಂದು. ಇಲ್ಲಿ ಬಂದ ಮೇಲೆ, ಇಲ್ಲಿರುವ ಇತರರನ್ನು ನೋಡಿದ ಮೇಲೆ, ನಾನೇ ಭಾಗ್ಯವಂತ ಅನ್ನಿಸುತ್ತಿದೆ. ಸುತ್ತ ನೋಡಿ. ಮಧುಮೇಹದಿಂದ ಕಾಲು ಕತ್ತರಿಸಿ ಕಳೆದುಕೊಂಡಿರುವವರು ಕೆಲವರು. ಅಪಘಾತದಲ್ಲಿ ಕೈ ಹೋದವರು ಕೆಲವರು. ಬೆನ್ನು ಮೂಳೆ ಮುರಿದಿರುವವರು ಇಲ್ಲುಂಟು. ಹೀಗೆ ನಾನಾ ರೀತಿ ಕಷ್ಟಪಡುತ್ತಿರುವವರು ಅನೇಕರು. ನಾನಾದರೋ, ಕಷ್ಟವಾದರೂ ನಿಧಾನವಾಗಿ ಓಡಾಡಬಲ್ಲೆ. ಸ್ವಲ್ಪವಾದರೂ ಮೊದಲಿನಂತೆ ಆಗಬಲ್ಲೆ ಅನ್ನುವ ಅವಕಾಶ ಇದೆ. ಇಲ್ಲಿರುವ ಕೆಲವರಿಗೆ ಅದೂ ಕಷ್ಟ ಅನಿಸುವುದಿಲ್ಲವೇ?"

ಇವರು ಸುತ್ತ ಕಣ್ಣಾಡಿಸಿದರು.  ಅವರು ಹೇಳಿದುದರಲ್ಲಿ ಸ್ವಲ್ಪವೂ ಉತ್ಪ್ರೇಕ್ಷೆ ಇರಲಿಲ್ಲ. 

***** 

ಕೇವಲ ನಮ್ಮ ಕಷ್ಟಗಳನ್ನೇ ನೋಡಿಕೊಳ್ಳುತ್ತಾ, ನಮ್ಮ ಹಣೆಬರಹ ಎಂದು ಪರಿತಪಿಸುತ್ತಾ, "ನನಗೇ ಏಕೆ ಹೀಗಾಗುತ್ತದೆ?" ಎಂದು ಹೇಳಿಕೊಳ್ಳುತ್ತಾ ಇದ್ದರೆ ಕಷ್ಟಗಳ ತೀವ್ರತೆ ಇನ್ನೂ ಹೆಚ್ಚಾಗುವುದು. (ಅದು ಹೇಗೆ ಸಾಧ್ಯ ಎಂದು ಕೇಳಬಹುದು. ಕಷ್ಟಗಳು ಹೆಚ್ಚಾಗುವುದಿಲ್ಲ. ಇರುವ ಕಷ್ಟಗಳ ಅನುಭವ ಮಾನಸಿಕವಾಗಿ ಮತ್ತಷ್ಟು ಹೆಚ್ಚಾಗುತ್ತದೆ.) ನಮಗಿಂತಲೂ ಹೆಚ್ಚು ಕಷ್ಟ ಪಟ್ಟವರು, ಪಡುತ್ತಿರುವವರು ಅನೇಕರಿದ್ದಾರೆ. ಇದು ಕೇವಲ ನಮ್ಮ ಕಥೆಗಳಲ್ಲ. ಅಥವಾ ಕೇವಲ ಇಂದಿನ ಕಥೆಯಲ್ಲ!

Thursday, October 30, 2025

ಪರಸ್ಪರ ಗುರು-ಶಿಷ್ಯರು


"ಗುರು-ಶಿಷ್ಯರ ಸಂಬಂಧ" ಅನ್ನುವ ಶೀರ್ಷಿಕೆಯ ಹಿಂದಿನ ಒಂದು ಸಂಚಿಕೆಯಲ್ಲಿ (ಆಗಸ್ಟ್ 22, 2025) ಗುರು-ಶಿಷ್ಯ ಸಂಬಂಧದ ಅನೇಕ ರೂಪಗಳಲ್ಲಿ ಕೆಲವು ಪದರಗಳನ್ನು ನೋಡುವ ಪ್ರಯತ್ನ ಮಾಡಿದ್ದೆವು. "ಅದೊಂದು ವ್ಯವಹಾರದಂತಲ್ಲದ ಕೊಡು-ಕೊಳ್ಳುವ ವಿನಿಮಯ. ಇದರಲ್ಲಿ ಒಬ್ಬರು ಇನ್ನೊಬ್ಬರಿಂದ ಕಲಿಯುತ್ತಾರೆ. ದೊಡ್ಡವನು-ಚಿಕ್ಕವನು ಎನ್ನುವ ಭೇದವಿಲ್ಲ. ಜ್ಞಾನದ ವಿಕಾಸ ಹೇಗಾದರೂ ಅದು ಸೋಲಲ್ಲ. ಆದ್ದರಿಂದ ಗುರು-ಶಿಷ್ಯ ಇಬ್ಬರೂ ಬೆಳೆಯಬಹುದು. ಇದು ಒಮ್ಮುಖದ ಕಲಿಕೆ ಅಲ್ಲ" ಮುಂತಾಗಿ ಚರ್ಚಿಸಿದ್ದೆವು. ಈ ಸಂಚಿಕೆಯನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು. 

ಜ್ಞಾನಾರ್ಜನೆಗಾಗಿ ಗುರುವಿನ ಬಳಿ ಬಂದ ಶಿಷ್ಯ, ಮತ್ತು ಅವರ ಗುರು-ಶಿಷ್ಯ ಸಂಬಂಧದಲ್ಲಿ ಕೂಡ ಇಬ್ಬರೂ ಕಲಿಯುವ ಅವಕಾಶಗಳು ಹೇರಳವಾಗಿರುತ್ತವೆ. ವಿಶಾಲ ಮನಸ್ಸಿನ ಹಿರಿಯ ಗುರುಗಳೂ ಸಹ ಕೆಲವು ಸಂದರ್ಭಗಳಲ್ಲಿ ಅನೇಕ ವರುಷಗಳ ಅಧ್ಯಯನದಲ್ಲಿ ತಮಗೆ ಹೊಳೆಯದಿದ್ದ ಸೂಕ್ಷ್ಮಗಳನ್ನು ತಮ್ಮ ಶಿಷ್ಯರು ಮೊದಲ ನೋಟದಲ್ಲೇ ಕಂಡುದು, ಮತ್ತು ಅದರಿಂದ ತಾವು ಕಲಿತ ಘಟ್ಟಗಳನ್ನು ನೆನಪು ಮಾಡಿಕೊಳ್ಳುವುದನ್ನು ನಾವು ಕಂಡಿದ್ದೇವೆ. ಹೀಗೆ ಒಪ್ಪಿಕೊಳ್ಳುವ ಮನೋಧರ್ಮ ಅನೇಕ ಗುರುಗಳಿಗೆ ಇರುವುದಿಲ್ಲ. ಅಂತಿದ್ದರೂ ಹತ್ತಾರು ಜನ ಸೇರಿರುವ ಸಂದರ್ಭಗಳಲ್ಲಿಯೂ ಯಾವುದೇ ಸಂಕೋಚವಿಲ್ಲದೆ ಹೀಗೆ ಗುರುತಿಸಿ ಕೃತಜ್ಞತೆ ವ್ಯಕ್ತಪಡಿಸುವ ಗುರುಗಳೂ ಅಲ್ಲಲ್ಲಿ ಕಾಣಸಿಗುತ್ತಾರೆ. 

ಜೀವನದ ಕೆಲವು ಘಟ್ಟಗಳಲ್ಲಿ ಹೀಗೆ ಒಬ್ಬನು ಗುರು ಮತ್ತು ಮತ್ತ್ತೊಬ್ಬ ಶಿಷ್ಯ ಅಲ್ಲದಿದ್ದರೂ, ಇಬ್ಬರೂ ಸಮಾಜದಲ್ಲಿ ತಮ್ಮ ಜ್ಞಾನಾರ್ಜನೆಯಿಂದ ತಮ್ಮದೇ ಆದ ಸ್ಥಾನ ಗಳಿಸಿಕೊಂಡಿದ್ದರೂ, ಪರಸ್ಪರರಿಂದ ಕಲಿಯುವುದೂ ಉಂಟು. ಇಂತಹ ಪ್ರಸಂಗಕ್ಕೆ ಒಂದು ಶ್ರೇಷ್ಠ ಉದಾಹರಣೆ ನಳಚರಿತ್ರೆಯಲ್ಲಿ ಕಾಣಬಹುದು. ಕನ್ನಡದ ದಾಸಶ್ರೇಷ್ಠರೂ, ಕವಿವರೇಣ್ಯರೂ ಆದ ಭಕ್ತ ಕನಕದಾಸರ "ನಳ ಚರಿತ್ರೆ" ಕೃತಿಯಲ್ಲಿ ಬರುವ ಬಾಹುಕನ ರೂಪದ ನಳ ಮಹಾರಾಜ ಮತ್ತು ಋತುಪರ್ಣ ಮಹಾರಾಜ ಪರಸ್ಪರ ಅಶ್ವಹೃದಯ ಮತ್ತು ಅಕ್ಷಹೃದಯ ವಿದ್ಯೆಗಳನ್ನು ಹೀಗೆ ಒಬ್ಬರಿಂದ ಇನ್ನೊಬ್ಬರು ಕಲಿತದ್ದು ಚೆನ್ನಾಗಿ ನಿರೂಪಿತವಾಗಿದೆ. 
*****

ದುರ್ಯೋಧನನ ಸಂಗಡ ಶಕುನಿಯ ಮೂಲಕವಾಗಿ ಕಪಟ ದ್ಯೂತದಲ್ಲಿ ರಾಜ್ಯ-ಕೋಶಾದಿಗಳನ್ನು ಕಳೆದುಕೊಂಡು ಧರ್ಮರಾಯನು ದ್ರೌಪದಿ ಮತ್ತು ತಮ್ಮಂದಿರೊಡನೆ ಕಾಡಿನಲ್ಲಿ ವಾಸವಾಗಿರುತ್ತಾನೆ. ಅರ್ಜುನನು ದಿವ್ಯಾಸ್ತ್ರಗಳ ಸಂಪಾದನೆಗಾಗಿ ಹೋಗಿರುವಾಗ ಧರ್ಮಜನು ಬಹಳ ಬೇಸರದಿಂದಿರುತ್ತಾನೆ. ಆಗ ಬೃಹದಶ್ವ ಎಂಬ ಒಬ್ಬ ಮುನಿ ಅಲ್ಲಿಗೆ ಬಂದು ಧರ್ಮರಾಯನಿಗೆ ಸಮಾಧಾನ ಮಾಡುವ ಸಲುವಾಗಿ ನಳ ಮಹಾರಾಜನ ಕಥೆ ಹೇಳುತ್ತಾನೆ. "ಕಪಟ ಜೂಜಿನ ಕಾರಣ ರಾಜ್ಯ-ಕೋಶಗಳನ್ನು ಕಳೆದುಕೊಂಡವನು ನೀನು ಮಾತ್ರ ಅಲ್ಲ. ನಳ ಮಹಾರಾಜನೂ ಹೀಗೆ ರಾಜ್ಯ ಕಳೆದುಕೊಂಡು, ಹೆಂಡತಿಯನ್ನೂ ಕಳೆದುಕೊಂಡು, ಬಹಳ ವ್ಯಥೆಪಟ್ಟು ಕಡೆಗೆ ಎಲ್ಲವನ್ನೂ ಮತ್ತೆ ಸಂಪಾದಿಸಿದನು. ನೀನೂ ಕೂಡ ಹೀಗೆ ಎಲ್ಲವನ್ನೂ ಮತ್ತೆ ಪಡಯುತ್ತೀಯೆ. ವ್ಯಥೆ ಪಡಬೇಡ" ಎಂದು ನಳನ ಕಥೆ ಹೇಳುತ್ತಾರೆ. 

ಮಹಾಭಾರತದ ಅರಣ್ಯಪರ್ವದಲ್ಲಿ ಇಪ್ಪತ್ತೆಂಟು ಅಧ್ಯಾಯಗಳಲ್ಲಿ ವಿಸ್ತಾರವಾಗಿ ಹೇಳಿರುವ ನಳನ ವೃತ್ತಾಂತವನ್ನು ಶ್ರೀ ಕನಕದಾಸರು ತಮ್ಮ "ನಳಚರಿತ್ರೆ" ಗ್ರಂಥದಲ್ಲಿ ಭಾಮಿನೀ ಷಟ್ಪದಿಯಲ್ಲಿ ಸೊಗಸಾದ ಕನ್ನಡದಲ್ಲಿ ನಮಗೆ ಕೊಟ್ಟಿದ್ದಾರೆ. ಮಹಾಭಾರತದಲ್ಲಿನ ಮೂಲ ಕಥೆಗೆ ಕೆಲವು ಸಣ್ಣ-ಪುಟ್ಟ ಮಾರ್ಪಾಡುಗಳನ್ನು ಮಾಡಿಕೊಂಡು ಒಟ್ಟಿನ ಹಂದರವನ್ನು ಇನ್ನೂ ಆಕರ್ಷಕವಾಗಿ ಮಾಡಿದ್ದಾರೆ. 

ನಳಮಹಾರಾಜನ ಕಥೆ ಎಲ್ಲರಿಗೂ ಸಾಮಾನ್ಯವಾಗಿ ಗೊತ್ತಿರುವುದೇ ಆಗಿದೆ. ನಿಷಧ ನಗರದ ರಾಜ ಶೂರಸೇನನ ಮಗ ನಳ ಚಕ್ರವರ್ತಿ. ವಿದರ್ಭದ ಅರಸು ಭೀಮರಾಜನ ಮಗಳು ದಮಯಂತಿ. ದಮಯಂತಿಯ ರೂಪ-ಗುಣಗಳನ್ನು ಕೇಳಿದ ನಳನೂ, ನಳನ ರೂಪ-ಗುಣಗಳನ್ನು ತಿಳಿದ ದಮಯಂತಿಯೂ ಪರಸ್ಪರ ಅನುರಕ್ತರಾಗುತ್ತಾರೆ. ಹಂಸ ಪಕ್ಷಿಯ ಮೂಲಕ ಸಂಪರ್ಕ ಏರ್ಪಟ್ಟು, ದೇವತೆಗಳ ಅನೇಕ ಪರೀಕ್ಷೆಗಳ ಮಧ್ಯೆಯೂ ನಳ-ದಮಯಂತಿ ವಿವಾಹ ಆಗುತ್ತಾರೆ. ಕಲಿಯ ಕಾರಣ ನಳನು ತಮ್ಮ ಪುಷ್ಕರನೊಡನೆ ಜೂಜಿನಲ್ಲಿ ಎಲ್ಲವನ್ನೂ ಕಳೆದುಕೊಂಡು ಹೆಂಡತಿಯ ಜೊತೆ ಕಾಡುಪಾಲಾಗುತ್ತಾನೆ. ಕಾಡಿನಲ್ಲಿ ನಳನ ಬಟ್ಟೆಗಳನ್ನು ಜಗನ್ಮೋಹನ ಪಕ್ಷಿಗಳು ಅಪಹರಿಸುತ್ತವೆ. ದಮಯಂತಿ ತನ್ನ ಸೀರೆಯನ್ನು ಹರಿದು ಅರ್ಧವನ್ನು ನಳನಿಗೆ ಉಡಲು ಕೊಡುತ್ತಾಳೆ. ಮಧ್ಯರಾತ್ರಿ ಅವಳು ಮಲಗಿರುವಾಗ ನಳನು ಅವಳನ್ನು ತೊರೆದು ಬೇರೆ ಹೋಗುತ್ತಾನೆ. 

ಅನೇಕ ತೊಂದರೆಗಳ ಮೂಲಕ ಹಾದು ದಮಯಂತಿ ಕಡೆಗೆ ಚಿಕ್ಕಪ್ಪ ಚೈದ್ಯರಾಜ ಸುಬಾಹುವಿನ ಅರಮನೆ ಸೇರುತ್ತಾಳೆ. ಸುಬಾಹುವಿನ ಹೆಂಡತಿ ಮಹಾರಾಣಿ ಸುಮತಿ ದಮಯಂತಿಯ ತಾಯಿಯ ತಂಗಿ. ಇದು ಗೊತ್ತಿಲ್ಲದೇ ಕಾಲ ಕಳೆಯುತ್ತದೆ. ಈ ಸಂಗತಿ ತಿಳಿದ ಮೇಲೆ ಮಹಾರಾಣಿ ಸುಮತಿ ಮತ್ತು ಸುಬಾಹು ದಮಯಂತಿಯನ್ನು ತಮ್ಮ "ಮಗಳು ಸುನಂದೆಗೆ ನೀನು ಸಮ ಮಗಳೇ. ಎಷ್ಟು ಕಷಪಟ್ಟೆ ನೀನು" ಎಂದು ಪ್ರೀತಿ ತುಂಬಿದ ಕರುಣೆಯಿಂದ ಸಂಬೋಧಿಸುತ್ತಾರೆ. ಅಲ್ಲಿಂದ ದಮಯಂತಿ ಅಪ್ಪನ ಮನೆ ತಲುಪುತ್ತಾಳೆ. ನಳನು ಕಾಡಿನಲ್ಲಿ ಅಲೆಯುವಾಗ ಕಾಳ್ಗಿಚ್ಚಿನಲ್ಲಿ ಸಿಕ್ಕಿಕೊಂಡಿದ್ದ ಕಾರ್ಕೋಟಕ ಎಂಬ ನಾಗರಾಜನನ್ನು ಕಾಪಾಡುತ್ತಾನೆ. ಕಾರ್ಕೋಟಕನೋ ನಳನನ್ನು ಕಚ್ಚಿಬಿಡುತ್ತಾನೆ. ಸುರಸುಂದರನಾದ ನಳನು ಆ ವಿಷದ ಪರಿಣಾಮವಾಗಿ ವಿಕಾರ ರೂಪ ಪಡೆದುಬಿಡುತ್ತಾನೆ. ಕನಕದಾಸರು ನಳನ ಕುರೂಪವನ್ನು ಹೀಗೆ ವರ್ಣಿಸುತ್ತಾರೆ:

ದೊಡ್ಡ ಹೊಟ್ಟೆಯ ಗೂನು ಬೆನ್ನಿನ 
ಅಡ್ಡ ಮೋರೆಯ ಗಂಟು ಮೂಗಿನ 
ದೊಡ್ಡ ಕೈಕಾಲುಗಳ ಉದುರಿದ ರೋಮ ಮೀಸೆಗಳ 

ಜಡ್ಡು ದೇಹದ ಗುಜ್ಜುಗೊರಲಿನ 
ಗಿಡ್ಡ ರೂಪಿನ ಹರಕುಗಡ್ಡದ 
ಹೆಡ್ಡನಾದ ಕುರೂಪಿತನದಲಿ ನೃಪತಿ ವಿಷದಿಂದ 

ಹೀಗೆ ಬದಲಾದ ನಳನು ಬಾಹುಕ ಎನ್ನುವ ಹೆಸರಿನಿಂದ ಅಯೋಧ್ಯೆಯ ರಾಜನಾದ ಋತುಪರ್ಣನ ಬಳಿ ಸಾರಥಿಯ ಕೆಲಸಕ್ಕೆ ಸೇರಿಕೊಳ್ಳುತ್ತಾನೆ. ಗಂಡನನ್ನು ಹುಡುಕಿಸಿ ಮತ್ತೆ ಅವನನ್ನು ಸೇರಲು ದಮಯಂತಿಯು ತನಗೆ ಇನ್ನೊಂದು ಸ್ವಯಂವರ ನಡೆಯುತ್ತಿದೆ ಎನ್ನುವ ಸುದ್ದಿ ಹಬ್ಬಿಸಿ ಅದು ಋತುಪರ್ಣ ಮಹಾರಾಜನಿಗೆ ತಲುಪುವಂತೆ ಮಾಡುತ್ತಾಳೆ. 

*****

ದಮಯಂತಿಯ ಮತ್ತೊಂದು ಸ್ವಯಂವರದ ಸುದ್ದಿ ಕೇಳಿದ ಋತುಪರ್ಣನು ಸಮಯಕ್ಕೆ ಸರಿಯಾಗಿ ವಿದರ್ಭ ನಗರ ತಲುಪಲು ರಥವನ್ನು ತಯಾರು ಮಾಡಲು ಸಾರಥಿ ಬಾಹುಕನಿಗೆ ಹೇಳುತ್ತಾನೆ. ಇಂತಹ ಸುದ್ದಿ ಕೇಳಿದ ದುಃಖದಲ್ಲೂ ಬಾಹುಕನ ರೂಪದ ನಳನು ರಥವನ್ನು ಸಿದ್ಧಪಡಿಸುತ್ತಾನೆ. ಪ್ರಯಾಣದ ಕಾಲದಲ್ಲಿ ಗಾಳಿಯಿಂದ ಋತುಪರ್ಣನ ಮೇಲುಹೊದಿಕೆ ಹಾರಿಹೋಗುತ್ತದೆ. ರಥ ನಿಲ್ಲಿಸಿ ಉತ್ತರೀಯವನ್ನು ತರುವಂತೆ ಋತುಪರ್ಣ ಬಾಹುಕನಿಗೆ ಹೇಳುತ್ತಾನೆ. ಬಾಹುಕನು "ಮಹಾರಾಜ, ಈ ಕುದುರೆಗಳು ಸಾಮಾನ್ಯವಲ್ಲ. ನಾಗಾಲೋಟದಲ್ಲಿ ಓಡುತ್ತಿವೆ. ನಿಮ್ಮ ಉತ್ತರೀಯ ಬಿದ್ದ ಕಡೆಯಿಂದ ಎಷ್ಟೋ ಯೋಜನ ದಾಟಿ ಬಂದಿದ್ದೇವೆ. ಅದನ್ನು ಮರೆತುಬಿಡಿ" ಅನ್ನುತ್ತಾನೆ. ಋತುಪರ್ಣನಿಗೆ ಆಶ್ಚರ್ಯ. 

ಮುಂದೊಂದು ಕಡೆ ವಿಶ್ರಾಂತಿಗೆ ನಿಲ್ಲಿಸಿದಾಗ ಅಲ್ಲಿ ಕಂಡ ತಾರೆಯ ಮರದಲ್ಲಿರುವ ಎಲೆಗಳು ಮತ್ತು ಹಣ್ಣುಗಳ ನಿಖರವಾದ ಸಂಖ್ಯೆಯನ್ನು ಋತುಪರ್ಣ ಬಾಹುಕನಿಗೆ ಹೇಳುತ್ತಾನೆ. ಈಗ ಬಾಹುಕನಿಗೆ ಆಶ್ಚರ್ಯ. ಮರದ ಬಳಿ ಹೋಗಿ ಎಣಿಸಿದರೆ ಋತುಪರ್ಣನು ಹೇಳಿದ ಸಂಖ್ಯೆ ಸರಿಯಾಗಿದೆ. "ಈ ವಿದ್ಯೆ ತನಗೆ ಗೊತ್ತಾದರೆ ತಮ್ಮ ಪುಷ್ಕರನನ್ನು ಮತ್ತೆ ಜೂಜಿನಲ್ಲಿ ಸೋಲಿಸಿ ರಾಜ್ಯ ಹಿಂದೆ ಪಡೆಯಬಹುದು" ಎಂದು ನಳನು ಚಿಂತಿಸುತ್ತಾನೆ.

ಋತುಪರ್ಣನಿಗೆ ಕುದುರೆಗಳ ಬಗ್ಗೆ ತಿಳಿಯುವ ಹಂಬಲ. ಆ ವಿದ್ಯೆಗೆ "ಅಶ್ವ ಹೃದಯ" ಎಂದು ಹೆಸರು. ನಳನಿಗೆ ಋತುಪರ್ಣನ "ಅಕ್ಷ ಹೃದಯ" ವಿದ್ಯೆ ಕಲಿಯುವ ಆಸೆ. ಇಬ್ಬರೂ ಪರಸ್ಪರ ಒಪ್ಪಿಕೊಂಡು ಒಂದು ವಿದ್ಯೆ ಕಲಿಯಲು ಇನ್ನೊಬ್ಬನ ಶಿಷ್ಯರಾಗುತ್ತಾರೆ. ಕಲಿಸಿಕೊಡಲು ಗುರುವಾಗುತ್ತಾರೆ. ಹೀಗೆ ಪರಸ್ಪರ ಗುರು-ಶಿಷ್ಯ ಆಗಿ ವಿದ್ಯೆಗಳ ವಿನಿಮಯ ಮಾಡಿಕೊಳ್ಳುತ್ತಾರೆ. 

ಮುಂದೆ ಕಲಿಯು ನಳನನ್ನು ಕಾಡುವುದನ್ನು ನಿಲ್ಲಿಸಿ, ಜಗನ್ಮೋಹನ ಪಕ್ಷಿಗಳು ನಳನ ಅಪಹರಿಸಿದ ಬಟ್ಟೆಯನ್ನು ತಂದುಕೊಡುತ್ತವೆ. ಅದನ್ನು ಉಟ್ಟ ನಂತರ ಬಾಹುಕನಿಗೆ ಕಾರ್ಕೋಟಕನು ಹೇಳಿದ್ದಂತೆ ಕುರೂಪ ಹೋಗಿ ಮತ್ತೆ ನಳನ ಸುರಸುಂದರ ರೂಪ ಬರುತ್ತದೆ. ನಳ-ದಮಯಂತಿ ಒಂದಾಗುತ್ತಾರೆ. ಅಕ್ಷಹೃದಯದ ಬಲದಿಂದ ನಳನು ಪುಷ್ಕರನನ್ನು ಸೋಲಿಸಿ ರಾಜ್ಯ-ಕೋಶಗಳನ್ನು ಹಿಂದೆ ಪಡೆಯುತ್ತಾನೆ. ನಳಚರಿತ್ರೆ ಹೀಗೆ ಮುಕ್ತಾಯವಾಗುತ್ತದೆ. 

*****

ಅಶ್ವಹೃದಯದ ಪರಿಣಾಮವಾಗಿ ಕುದುರೆಗಳು ಹೇಗೆ ಓಡಿದುವೆಂದು ಶ್ರೀ ಕನಕದಾಸರು ಹೇಳುವ ರೀತಿ:

ಕರದ ವಾಘೆಯ ಸಡಿಲ ಬಿಡೆ ಮುಂ
ಬರಿದು ಚಿಮ್ಮಿದವಡಿಗಡಿಗೆ ರಥ
ತುರಗ ಹಾಯ್ದುದು ತೇರು ಮುಂದಕೆ ಪವನ ವೇಗದಲಿ 


ಅಕ್ಷಹೃದಯದ ಕಾರಣ ತಾರೆಯ ಮರದ ಎಲೆ-ಹಣ್ಣುಗಳ ಲೆಕ್ಕ ತೋರಿದ ರೀತಿ:

ಇಳಿದು ರಥವನು ಬಂದು ವೃಕ್ಷದ 
ಬಳಿಗೆ ನಿಂದಾ ಶಾಖೆಗಳಲಿಹ 
ಫಲವದರ ಪರ್ಣಂಗಳೆಣಿಸಿದ ಪದ್ಮಸಂಖ್ಯೆಯಲಿ

ದಮಯಂತಿಯ ರೂಪ-ಲಾವಣ್ಯ, ದೇವತೆಗಳ ಪರೀಕ್ಷೆಗಳು, ನಳ-ಕಾರ್ಕೋಟಕ ಮತ್ತು ನಳ-ಕಲಿ ಇವರ ಸಂವಾದ, ನಳ ಮತ್ತು ದಮಯಂತಿಯರ ಪರಿತಾಪ ಇನ್ನೂ ಮುಂತಾದ ಅನೇಕ ರಸಘಟ್ಟಗಳನ್ನು "ನಳಚರಿತ್ರೆ" ಓದಿ ಸವಿಯಬಹುದು.

*****

ನಳ ಮಹಾರಾಜ ಮತ್ತು ಋತುಪರ್ಣ ಮಹಾರಾಜರು ಗುರು-ಶಿಷ್ಯ ಭಾವದಲ್ಲಿ ಒಬ್ಬರಿಗೊಬ್ಬರು ಕಲಿಸಿ-ಕಲಿತದ್ದು ತಮ್ಮ ತಮ್ಮ ಜ್ಞಾನದ ಮತ್ತು ಸಾಧನೆಯ ಕಾರಣ ಸಮಾಜದಲ್ಲಿ ಉನ್ನತ ಸ್ಥಾನ ಹೊಂದಿರುವವರೂ ಹೇಗೆ ಪರಸ್ಪರ ಗುರು-ಶಿಷ್ಯರಾಗಬಹುದು ಎನ್ನುವುದಕ್ಕೆ ಸೊಗಸಾದ ಉದಾಹರಣೆ. ಅಲ್ಲವೇ?

Sunday, October 26, 2025

ಒಂದೇ ಬಳೆಯ ಹುಡುಗಿ


ಅದೊಂದು ಸಣ್ಣ ಊರು. ಆ ಊರಿನಲ್ಲಿ ಕೆಲವೇ ಕೆಲವು ಮನೆಗಳು. ದುಡಿದು ಜೀವಿಸುವವರ ಮನೆಗಳು. ಅಷ್ಟು ಮನೆಗಳ ಮಧ್ಯೆ ಅದೊಂದು ಪುಟ್ಟ ಮನೆ. ಬಡವರ ಮನೆ. ಬಡವರ ಮನೆಯೆಂದು ಬಾಯಿಬಿಟ್ಟು ಹೇಳಬೇಕಾದ ಅವಶ್ಯಕತೆ ಇಲ್ಲ. ನೋಡಿದರೆ ಗೊತ್ತಾಗುವುದು. ಸಿರಿವಂತಿಕೆಯ ಪೀಠೋಪಕರಣಗಳಿಲ್ಲ. ಕಣ್ಣಿಗೆ ಕುಕ್ಕುವ ಅಲಂಕಾರ ವಸ್ತುಗಳಿಲ್ಲ. ಅಂದಿನ ದಿನದ ಸಂಪಾದನೆಯಿಂದ ಆ ದಿನದ ಕಾಲಹರಣ. ಹಾಗೆಂದು ಆ ಮನೆಯಲ್ಲಿರುವವರಿಗೆ ದುಃಖವಿಲ್ಲ. ಚಳಿ-ಮಳೆ-ಗಾಳಿಯಿಂದ ರಕ್ಷಣೆ ಕೊಡುವ ಒಂದು ಮನೆ ಇದೆ. ಅದೇ ದೊಡ್ಡದು. ಸಂಜೆ ಆದಮೇಲೆ ಬೆಳಗಿನವರೆಗೆ ಇರಲೊಂದು ಸೂರು ಉಂಟು. ಅದರಲ್ಲಿ ವಾಸ ಇರುವವರಿಗೆ ಅದೇ ಒಂದು ತೃಪ್ತಿ. 

ಒಂದು ದಿನ ಆ ಮನೆಯ ಸದಸ್ಯರೆಲ್ಲಾ ಹೊರಗಡೆ ಹೋಗಿದ್ದಾರೆ. ಕುಟುಂಬದ ಒಬ್ಬಳು ಹುಡುಗಿ ಮಾತ್ರ ಅಂದು ಮನೆಯಲ್ಲಿ ಉಳಿದಿದ್ದಾಳೆ. "ಕುಮಾರಿ" ಎಂದು ಅವಳ ಹೆಸರು. ಅವಳ ಪೂರ್ತಿ ಹೆಸರು ಗೊತ್ತಿಲ್ಲ. ಅಥವಾ "ಕುಮಾರಿ" ಎನ್ನುವುದೇ ಅವಳ ಪೂರ್ತಿ ಹೆಸರಿರಬಹುದು. ಕುಮಾರಿ ಮನೆಯ ಒಳಗಡೆ ಏನೋ ಕೆಲಸ ಮಾಡುತ್ತಿದ್ದಾಳೆ. 

ಹೊರಗಡೆ ಯಾರೋ ಬಂದ ಶಬ್ದವಾಯಿತು. ಆಚೆ ಬಂದು ನೋಡಿದಳು. ಪರಿಚಯದ ನೆಂಟನೊಬ್ಬ ಬಂದಿದ್ದಾನೆ. ಬಡವರ ಮನೆಯಾದರೂ ಪ್ರೀತಿ-ವಿಶ್ವಾಸಗಳಿಗೆ ಬಡತನವಿಲ್ಲ. ನೆಂಟ ಬಂದ ಈ ಸಮಯದಲ್ಲಿ ಕುಟುಂಬದ ಹಿರಿಯರೊಬ್ಬರೂ ಮನೆಯಲ್ಲಿಲ್ಲ. ಕುಮಾರಿಯೇ ಸ್ವಾಗತಿಸಿದಳು. ನೆಂಟ ಮನೆಯೊಳಗೆ ಬಂದ. ಕೈ-ಕಾಲು ತೊಳೆಯಲು ನೀರು ಕೊಟ್ಟಳು. ಕೈ-ಕಾಲು ತೊಳೆದುಕೊಂಡ. ಚಾಪೆ ಹಾಸಿತ್ತು. ಅದರ ಮೇಲೆ ಕುಳಿತುಕೊಂಡ. ಮಡಕೆಯಲ್ಲಿದ್ದ ತಣ್ಣಗಿನ ನೀರು ಕುಡಿಯಲು ಕೊಟ್ಟಳು. ಕುಡಿದು ದಣಿವಾರಿಸಿಕೊಂಡ. ಕುಶಲೋಪರಿ ಮಾತನಾಡಿಸಿದಳು. ಹೆಚ್ಚು ಮಾತನಾಡಲು ಕುಮಾರಿಗೆ ಗೊತ್ತಿಲ್ಲ. ನೆಂಟನಿಗೂ ಮುಂದೇನು ಎಂದು ತೋಚಲಿಲ್ಲ. "ಸರಿ. ಬಂದಿದ್ದೆ ಎಂದು ಹೇಳಿ. ಮತ್ತೊಮ್ಮೆ ಬರುತ್ತೇನೆ" ಎಂದು ಹೇಳಿ ಹೊರಡಲು ಅನುವಾದ. 

ಅವರ ಮನೆಯಲ್ಲಿ ಎಷ್ಟೇ ಬಡತನವಿದ್ದರೂ ಬಂದವರಿಗೆ ಆದರದ ಉಪಚಾರ ಇರುತ್ತಿತ್ತು. ಇದ್ದಿದ್ದರಲ್ಲೇ ಬಂದಿದ್ದವರಿಗೆ ಒಂದು ಪಾಲು ಅನ್ನ-ಆಹಾರ ಕೊಡುವ ಪರಿಪಾಠ. ಕುಮಾರಿಗೆ ಇದು ನೋಡಿ ಗೊತ್ತು. ನೆಂಟ ಮಧ್ಯಾನ್ಹದ ವೇಳೆಗೆ ಬಂದಿದ್ದಾನೆ. ದೂರದಿಂದ ಬಂದಂತೆ ತೋರುತ್ತಿದೆ. ಹಸಿದಿರುವ ಮುಖಭಾವ ಕಾಣುತ್ತಿದೆ. ಬರೀ ನೀರು ಕುಡಿದಿದ್ದಾನೆ. ಹೊರಟು ನಿಂತಿದ್ದಾನೆ. ಕುಮಾರಿಗೆ ಪಿಚ್ಚೆನ್ನಿಸಿತು. 

"ಊಟ ಮಾಡಿಕೊಂಡು ಹೋಗುವಿರಂತೆ. ಸ್ವಲ್ಪ ಇರಿ. ಬೇಗ ಅಡಿಗೆ ಮಾಡಿಬಿಡುತ್ತೇನೆ" ಅಂದಳು ಕುಮಾರಿ. 

ಅವನಿಗೂ ಪ್ರಾಯಶಃ ಅದೇ ಬೇಕಾಗಿತ್ತು. "ಆಗಲಿ. ಕುಳಿತಿರುತ್ತೇನೆ" ಅಂದ. ಚಾಪೆಯ ಮೇಲೆ ಕಾಲುನೀಡಿಕೊಂಡು ಆರಾಮವಾಗಿ ಕುಳಿತ. 

***** 

ಎಷ್ಟೋ ವೇಳೆ ಮನೆಗೆ ಬಂದವರಿಗೆ "ಇರಿ. ಊಟ ಮಾಡಿಕೊಂಡು ಹೋಗಿ" ಅನ್ನುವುದು ಅಭ್ಯಾಸ. ಹಾಗೆ ಹೇಳುವುದು ಮನೆಯವರ ಪದ್ಧತಿ. ತೊಂಭತ್ತು ಭಾಗ ಬಂದವರು "ಇಲ್ಲ. ಸ್ವಲ್ಪ ಕೆಲಸವಿದೆ. ಅವಸರವಿತ್ತು. ಇನ್ನೊಮ್ಮೆ ಬರುತ್ತೇನೆ" ಎಂದು ಹೇಳಿ ಹೋಗುತ್ತಾರೆ. ಇನ್ನು ಕೆಲವರು "ಬರುವಾಗಲೇ ಊಟಮಾಡಿಕೊಂಡು ಹೊರಟಿದ್ದೆ. ಏನೂ ಬೇಡ" ಎಂದು ಹೋಗಬಹುದು. ಮತ್ತೆ ಕೆಲವರು "ಸ್ನೇಹಿತರ ಮನೆಗೆ ಊಟಕ್ಕೆ ಹೇಳಿದ್ದಾರೆ. ಅಲ್ಲಿಗೆ ಹೊರಟಿದ್ದೆ. ಹಾಗೇ ಸುಮ್ಮನೆ ನಿಮ್ಮನ್ನು ನೋಡಿ ಹೋಗುವ ಎಂದು ಬಂದೆ. ಅವರು ಕಾಯುತ್ತಿರುತ್ತಾರೆ. ಇನ್ನೊಮ್ಮೆ ಬಂದಾಗ ಊಟ ಮಾಡಿಕೊಂಡೇ ಹೋಗುತ್ತೇನೆ. ನನಗೆ ನಿಮ್ಮ ಮನೆಯಲ್ಲಿ ಏನು ಸಂಕೋಚ!" ಎಂದು ಹೇಳಿ ಬಹಳ ಸಂಕೊಚದಿಂದ ಹೋಗಿಬಿಡಬಹುದು.

ಹಾಗೆ ಹೋಗುತ್ತಾರೆ ಅನ್ನುವ ಧೈರ್ಯದಿಂದಲೇ "ಇರಿ, ಊಟ ಮಾಡಿಕೊಂಡು ಹೋಗಿ" ಎಂದು ಕೆಲವರು ಹೇಳಬಹುದು. ಬಂದವರಿಗೂ ಸಾಮಾನ್ಯ ಗೊತ್ತಿರುತ್ತದೆ. ಹೇಳುವವರ ಮನಸ್ಸಿನಲ್ಲಿ ಏನಿರಬಹುದು ಅಂತ. ಇವರು ಹೇಳಿದ ಹಾಗೆ ಮಾಡಿದರು. ಅವರು ಕೇಳಿದಹಾಗೆ ಮಾಡಿದರು. ಇವರು ಊಟ ಹಾಕಲಿಲ್ಲ. ಅವರು ಮಾಡಲಿಲ್ಲ. ಆದರೂ ಕೇಳಿದ ಸಮಾಧಾನ ಇವರಿಗೆ. ಸಿಕ್ಕಿಹಾಕಿಕೊಂಡು ತೊಂದರೆ ಕೊಡಲಿಲ್ಲ ಅನ್ನುವ ಸಮಾಧಾನ ಅವರಿಗೆ. 

ಅದೆಲ್ಲ ಹಿಂದಿನ ಸಮಾಚಾರ. ಈಗ ಚಿಂತೆಯಿಲ್ಲ. ಸ್ವಿಗ್ಗಿ, ಜ್ಜೊಮಾಟೊ ಇವೆ. ಅವರಿಗೂ, ನಮಗೂ ಸೇರಿಸಿ ಊಟ-ತಿಂಡಿ ತರಿಸಿಬಿಡಬಹುದು. "ನಿಮಗೆ ಏನು ಬೇಕು?" ಎಂದು ಕೇಳಿ, ಅವರಿಗೆ ಬೇಕಾದದ್ದು ಅವರಿಗೆ, ನಮಗೆ ಬೇಕಾದದ್ದು ನಮಗೆ, ಅರ್ಧ ಘಂಟೆಯಲ್ಲಿ ಹಾಜರುಪಡಿಸಬಹುದು. ಅವರೂ ಸಂಕೋಚ ಪಡಬೇಕಾಗಿಲ್ಲ. ನಾವೂ ಕಷ್ಟ ಪಡುವಂತಿಲ್ಲ. ಜೇಬಲ್ಲಿ ದುಡ್ಡೂ ಇರಬೇಕೆಂದಿಲ್ಲ. ಕ್ರೆಡಿಟ್ ಕಾರ್ಡ್ ಉಂಟು. ತಿಂಗಳ ಬಿಲ್ ಬಂದಾಗ ನೋಡೋಣ. ಆಗ ಹಣ ಇಲ್ಲದಿದ್ದರೆ ಇನ್ನೊಂದು ಕಾರ್ಡಿಂದ ತೆಗೆದು ಕೊಟ್ಟರಾಯಿತು. 

ಕುಮಾರಿಗೆ ಈ ಅನುಕೂಲ ಇರಲಿಲ್ಲ. ಹಾಗೆ ಸುಮ್ಮನೆ ಹೇಳುವ ಮನಸ್ಸೂ, ಅಭ್ಯಾಸವೂ ಅವಳದಲ್ಲ. ಜೊತೆಗೆ ನೆಂಟನೂ ಊಟಕ್ಕೆ ಕಾದು ಕುಳಿತೇಬಿಟ್ಟನಲ್ಲ!

***** 

ಕುಮಾರಿ ಅಡಿಗೆ ಮನೆಯ ಒಳಗೆ ಬಂದಳು. ಅಕ್ಕಿಯ ಡಬ್ಬ ಬರಿದು. ಅಕ್ಕಿಯೇ ಇಲ್ಲದೆ ಏನು ಅಡಿಗೆ ಮಾಡುವುದು? ಅಡಿಗೆ ಮಾಡುತ್ತೇನೆ ಎಂದು ಹೇಳಿಯಾಯಿತು. ನೆಂಟ ಕಾದು ಕುಳಿತಿದ್ದಾನೆ. "ಸರ್ವಸ್ಯ ಗಾತ್ರಸ್ಯ ಶಿರಃ ಪ್ರಧಾನಂ" (ಇಡೀ ದೇಹಕ್ಕೆ ತಲೆಯೇ ಮುಖ್ಯ) ಅನ್ನುವಂತೆ ಊಟಕ್ಕೆ ಅನ್ನವೇ ಮುಖ್ಯ. ಅನ್ನವಿಲ್ಲದೇ ಏನು ಊಟ ಬಡಿಸುವುದು? ಕುಮಾರಿ ಅಡಿಗೆ ಮನೆಯೆಲ್ಲ ಹುಡುಕಿದಳು. ಸ್ವಲ್ಪ ಭತ್ತ ಸಿಕ್ಕಿತು. ಪರವಾಗಿಲ್ಲ. ಕುಟ್ಟಿದರೆ ಒಬ್ಬರ ಊಟಕ್ಕೆ ಸಾಕಾಗುವಷ್ಟು ಅನ್ನ ಮಾಡಬಹುದು. ಮರ್ಯಾದೆ ಉಳಿಯಿತು ಅಂದುಕೊಂಡಳು. ಆದರೆ ಭತ್ತ ಕುಟ್ಟಿ, ಜರಡಿ ಹಿಡಿದು, ನುಚ್ಚು ತೆಗೆದು, ಅಕ್ಕಿ ಬೇರ್ಪಡಿಸಿ, ಅನ್ನ ಮಾಡಬೇಕು. ಉಳಿದದ್ದು ಬೇಗ ತಯಾರು ಮಾಡಿ ಊಟ ಬಡಿಸಬೇಕು. ಕುಮಾರಿ ಚುರುಕು ಹುಡುಗಿ. ಒರಳಿನಲ್ಲಿ ಭತ್ತ ಹುಯ್ದು ಒನಕೆಯಿಂದ ಕುಟ್ಟತೊಡಗಿದಳು. 

ಕುಮಾರಿಗೆ ಬಳೆ ಅಂದರೆ ಬಹಳ ಇಷ್ಟ. ಚಿನ್ನದ ಬಳೆಗಳು ಹಾಕಿಕೊಳ್ಳುವ ಸ್ಥಿತಿಯಿಲ್ಲ. ಗಾಜಿನ ಬಳೆಗಳು. ಹಿಂದಿನ ವಾರ ಬಳೆಗಾರ ಬಂದಿದ್ದ. ಎರಡು ಕೈಗೂ ತುಂಬು ಬಳೆಗಳು ಹಾಕಿಸಿಕೊಂಡಾಗಿತ್ತು. ಕುಟ್ಟಲು ಹೋದರೆ ಮೊದಲ ಏಟಿಗೆ ಬಳೆಗಳು ಶಬ್ದಮಾಡಿದವು. ಶಬ್ದವಾದರೆ ಹೊರಗಡೆ ಕುಳಿತಿರುವ ನೆಂಟನಿಗೆ ಭತ್ತ ಕುಟ್ಟುವುದು ಗೊತ್ತಾಗುವುದು. ಸಂಕೋಚ ಮಾಡಿಕೊಂಡಾನು. ಅವನಿಗೆ ಗೊತ್ತಾಗದಂತೆ, ಶಬ್ದವಾಗದಂತೆ ಭತ್ತ ಕುಟ್ಟಬೇಕು. ಸರಿ, ಕೆಲವು ಬಳೆಗಳನ್ನು ತೆಗೆದಳು. ಎರಡನೇ ಏಟಿಗೆ ಶಬ್ದ ಕಡಿಮೆಯಾದರೂ ಶಬ್ದವೇ. ಎರಡನ್ನು ಬಿಟ್ಟು ಮತ್ತೆಲ್ಲ ಬಳೆ ತೆಗೆದಿಟ್ಟಳು. ಹಾಗಾದರೂ ಸ್ವಲ್ಪ ಶಬ್ದವಾಯಿತು. ಇದೂ ಸರಿಯಿಲ್ಲ ಎಂದು ಮತ್ತೊಂದು ಬಳೆ ತೆಗೆದಳು. ಈಗ ಎರಡೂ ಕೈಯಲ್ಲಿ ಒಂದೊಂದೇ ಬಳೆ. ಆದರೆ ಕುಟ್ಟುವಾಗ ಸದ್ಯ ಶಬ್ದವಿಲ್ಲ. 

ಬೇಗ ಬೇಗ ಭತ್ತ ಕುಟ್ಟಿ, ಅಕ್ಕಿ ತೆಗೆದು, ಅನ್ನ ಬೇಯಿಸಿ, ಅಡಿಗೆ ಮುಗಿಸಿ ನೆಂಟನಿಗೆ ಊಟ ಬಡಿಸಿದಳು. ನೆಂಟನಿಗೆ ಭತ್ತ ಕುಟ್ಟಿ ಅಕ್ಕಿ ಮಾಡಿದ್ದು ಗೊತ್ತಾಗಲಿಲ್ಲ. ಒಂದೇ ಬಳೆಯ ಹುಡುಗಿ ನೆಂಟನಿಗೆ ಊಟ ಬಡಿಸಿ, ಸತ್ಕರಿಸಿ ಕಳಿಸಿದಳು!

*****

ಅವಧೂತನೊಬ್ಬ ಎದುರು ಮನೆಯ ಜಗುಲಿಯಲ್ಲಿ ಕುಳಿತಿದ್ದ. ಕುಮಾರಿಯ ಈ ಜಾಣತನದ ಪ್ರಸಂಗ ನೋಡಿದ. ಅವನು ಇದರಿಂದ ಒಂದು ಪಾಠ ಕಲಿತ!

ಕೈತುಂಬಾ ಬಳೆ ಇದ್ದಾಗ ಬಹಳ ಶಬ್ದ. ಎರಡಿದ್ದಾಗ ಅವೆರಡರ ನಡುವೆ ಕಿಣಿ-ಕಿಣಿ ಶಬ್ದ. ಒಂದೇ ಬಳೆ ಇದ್ದಾಗ ಶಬ್ದವಿಲ್ಲ. ಬೇಕಿದ್ದ ಕೆಲಸ ಮಾಡಬಹುದು. 

ತುಂಬಾ ಜನವಿದ್ದರೆ ಅದೊಂದು ದೊಂಬಿಯ ಪರಿಸರ. ಘರ್ಷಣೆಗಳಿಗೆ ಅವಕಾಶ. ಪರಸ್ಪರ ವಿರೋಧಕ್ಕೆ ದಾರಿ. ಉದ್ದೇಶಿಸಿದ ಕೆಲಸವಾಗುವುದಿಲ್ಲ. 

ಇಬ್ಬರೇ ಇದ್ದರೆ ದೊಂಬಿಯಿಲ್ಲದಿದ್ದರೂ ಕಾಡುಹರಟೆಗೆ ನಾಂದಿ. ಸಮಯ ಹಾಳು. ಪ್ರಯೋಜನವಿಲ್ಲ. 

ಒಬ್ಬನೇ ಇದ್ದಾಗ ಅದು ಏಕಾಂತ. ಏಕಾಗ್ರತೆ ಸಾಧಿಸಬಹುದು. ಏಕಾಂತದ ಸಮ ಮತ್ತೊಂದಿಲ್ಲ. ಸಾಧನೆಗೆ ಇದು ಅತ್ಯವಶ್ಯಕ!

ಇದೇ ಅವಧೂತ ಕುಮಾರಿಯಿಂದ ಕಲಿತ ಪಾಠ!

ಕುಮಾರಿಯೇನು ಪಾಠ ಹೇಳಲಿಲ್ಲ. ಆದರೆ ಅವಳ ಕೆಲಸವನ್ನು ನೋಡಿದ ಅವಧೂತ ಏಕಾಂತದ ಪಾಠ ಕಲಿತುಕೊಂಡ. 

*****

ಶ್ರೀಮದ್ಭಾಗವತದ ಹನ್ನೊಂದನೆಯ ಸ್ಕಂಧದಲ್ಲಿ "ಅವಧೂತ ಗೀತೆ" ಎನ್ನುವ ಪ್ರಸಂಗ ಬರುತ್ತದೆ. ಅದರಲ್ಲಿ ಯದು ಮಾಹಾರಾಜನಿಗೆ ಸಿಕ್ಕ ಅವಧೂತನೊಬ್ಬ "ನನಗೆ ಇಪ್ಪತ್ನಾಲ್ಕು ಗುರುಗಳು. ಅವರೊಬ್ಬಬ್ಬರಿಂದ ಒಂದೊಂದು ಪಾಠ ಕಲಿತೆ" ಎಂದು ಹೇಳುತ್ತಾನೆ. ಹಾಗೆ ಹೇಳಿದ ಇಪ್ಪತ್ನಾಲ್ಕು ಪಾಠಗಳಲ್ಲಿ "ಒಂದೇ ಬಳೆಯ ಹುಡುಗಿ" ಕುಮಾರಿಯಿಂದ ಕಲಿತ ಈ ಪಾಠವೂ ಒಂದು. 

ಅದರ ವಿವರಗಳನ್ನು ಇನ್ನೊಮ್ಮೆ ಅವಕಾಶವಾದಾಗ ನೋಡೋಣ.  

Friday, October 24, 2025

One Less Than Yesterday


Bankers are usually a worried species. They live to carry out three basic functions. First one is to raise resources or funds. They are hence first worried about mobilising deposits. Worries generally end when the required goal is accomplished. Not with bankers. Having mobilised funds from those who have surplus, bankers cannot keep the funds idle. They are required to pay interest to their depositors. Hence they have to deploy the funds and earn even more than what they pay their depositors. They have two main routes available for this. Lend the funds to those who need them or invest the funds somewhere. Great! What is the problem in this? There may be difficulty to find people with surplus funds to deposit. But there is no difficulty in finding people who need money! Why worry about it then? 

The real issue is the greed of the depositors. They are not content with merely receiving interest. They also want their original funds to be returned, may be after sometime. This is the source of all evil, as far as the bankers are concerned. In order to meet this requirement, of having to return the depositors money due to their greed, bankers have to carefully choose those who are willing to take money not only at higher interest rates, but also promptly return it as and when due. 

Anyone who has dealt with a child knows how difficult this is. You can easily give a toy to a child. But you cannot take it back from it. Sometimes you may be able to take the toy back, but it is usually by giving another toy which is more attractive. You can recover an old loan by giving a new bigger loan. But bankers cannot always do this for various reasons, though they also use this tactic sometimes, especially with big and influential borrowers. Thus, bankers are now worried for the second time. Worried about finding the right borrowers.

They often find the right borrowers. At least, that is what they believe. But misfortune is something that relentlessly chases these bankers. Someone who was considered as an excellent prospect before lending, starts playing truant the moment loan is disbursed. All difficulties in the world befall on them, as soon as they take the loan. This is at least what they tell the bankers. Very successful businesses start failing. The very healthy promoter falls sick suddenly. There is fire, flood or famine. If not, there is labour unrest or power disruptions.  Some reason or the other. Now the poor banker is worried for the third time. He is worried about recovering the money given away as loan. 

When a borrowing unit becomes sick, banker reaches a Catch-22 situation. What is a Catch-22 situation? The best way to explain this is with a suitable example, as it is with most of the things. There is a boy, considered to be at an age good for getting married. This is the age considered as good by others. (Even a very old man considers himself good for marriage. That is not acceptable to others). But he is behaving somewhat abnormally. Many consider him of unsound mind, but his family members do not agree. Wise men advise the near ones of the boy to get him married and then he would become alright. (This must be true because the converse is almost always true). They are indeed very wise men. They have a suitable girl in their own family, but are not foolish to be generous. Parents of the boy try hard to get the boy married. All girls say that they are prepared to marry him as soon as he becomes alright. (Let us escape for the time-being, is what they really mean). The boy never gets married. He will never become alright. It is Catch-22 situation indeed. 

Let us get back to the worried bankers. They have already given a loan. It is to be recovered. Sometimes it is possible to recover a bad loan by giving some more loans. Someone is drowning. He is given a long rope. Give him another rope or tie another rope to the end of existing one you are holding. He may be able to get out of water. Or, he may drown with both the ropes. So, you are going to lose a second rope. This is called "throwing good money after bad money". Bankers have given a fancy name to this type of loans. They are called "Nursing Loans" or "Rehabilitation Loans". Banks also have huge establishments for this purpose. They are called "Rehabilitation Division". Success rate for such loans is very good. One out of every ten such loans usually gets recovered. Of course, sometimes the tenth may also fail. One can never predict the future, you know. 

When should a banker decide to throw in the extra rope or let the first one go and treat the matter as closed? There is a scientific basis and method to decide this. Banker conducts what is called as a "Viability Study". "Can I recover the earlier loan as well as the new loan, in a given reasonable time?", he checks during a viability study. If the answer is "yes", he gives a fresh loan. If the answer is "No". he feels losing money in first loan is better. Of course, there are many variables. By changing some assumptions in the variables, "Yes" can become "No" and "No" can become "Yes".  It is a question of finding the desired answer by using appropriate assumptions. Yes, you guessed it right!

Now we come to the most crucial part of the story. Having given a fresh loan to "nurse the unit", what are the essentials of nursing? There are of course many conditions. But the most important condition is the one known as "One Less Than Yesterday". What that does it really mean? It simply means that the "total loan dues of the borrower today must be at least one Rupee (or Dollar or whatever currency it is) less than the dues at the end of the previous day". This will ensure the psychological satisfaction for the banker that he is not throwing good money after bad money. No, Not again. 

*****

We talked about "Nursing" above. When bankers can nurse, why not nurses bank upon the banker's idea? They indeed do this, and have been doing for a long long time. One doesn't know whether the Doctors told the Nurses or Nurses told the Doctors. But it is practiced and often mentioned by both. The rule of "One Less Than Yesterday". 

Most people fall sick sometime or other in their lives. The only exemption is those who are always sick. When they are sick, they are put on a "Nursing Plan". This is always true in case of patients who undergo a "Procedure or Surgery" or some such similar sounding thing. There are many conditions and stipulations. There are "Dos and Don'ts". There are medications. There are therapies, exercises, and so on. But the most important one is of "Reduction in Weight".  If you want a modern name, you can call it "Weight Management".

The most deceptive item for a patient is "Weight". This one item literally and physically weighs on the patient. He can hide pain and keep smiling broadly. He can hide discomfort and yet look most comfortable. He can lie unhesitatingly while answering questions asked of him. But he simply cannot hide weight. The rule told to him is the same as the one followed by the bankers as discussed above. "One less than yesterday". May be a ounce, or even a gram. But one less than yesterday. One KG or Pound less than yesterday is not possible unless patient conducts a surgery on himself and cuts off a part of his body. But at least one gram less than yesterday. That is the requirement. 

The manufacturers of weighing scales also play truant on the patients. The ones they buy for use at home always show the correct weight. But when they go to the hospital or clinic half an hour later, the weighing scale there shows three KG or ten Pounds more! It also looks like hospitals and clinics place their strictest staff to manage weighing scales. Once I saw a patient's encounter with such a staff member. She was quite lean among the many patients present there. At least, that is what she considered herself to be. She tried to remove her footwear and sweater before getting on the weighing scale. The supervising nurse admonished her. "Don't do it. You are supposed to show your normal weight that you carry around!".
*****

While bankers and patients struggle with the "One less than yesterday" rule, there is one and only one who is able to follow this rule very strictly. He does not miss the rule even once. Not even for one living thing. Person or animal, that is. 

That is the Supreme Lord.

He follows this rule very methodically and unfailingly. Each sunset makes it very clear. "It is always one day less than yesterday". The remaining life span, that is, for all of them. 

Monday, October 20, 2025

ನಾಲ್ಕು ಮಾತುಗಳು


ಚಂದ್ರವಂಶದವರ ವಿವರಗಳು ಮಹಾಭಾರತ, ಶ್ರೀಮದ್ಭಾಗವತ, ಹರಿವಂಶ ಮತ್ತು ಇತರ ಕಡೆಗಳಲ್ಲಿ ವಿಪುಲವಾಗಿ ದೊರೆಯುತ್ತವೆ. ಚಕ್ರವರ್ತಿ ಯಯಾತಿಯ ಮಗಳಾದ ಮಾಧವಿಯ ವೃತ್ತಾಂತ ಮುಖ್ಯವಾಗಿ ಮಹಾಭಾರತದ ಉದ್ಯೋಗ ಪರ್ವದಲ್ಲಿ ಏಳೆಂಟು ಶ್ಲೋಕಗಳಲ್ಲಿ ಸಿಗುತ್ತದೆ. ಮಾಧವಿಯ ಮಕ್ಕಳ ಚರಿತ್ರೆಗಳು ಶ್ರೀಮದ್ಭಾಗವತದಲ್ಲಿ ವಿವರವಾಗಿ ಸಿಗುತ್ತವೆ. 


ದುರ್ಯೋಧನನು ಯಾವ ಹಿತೈಷಿಗಳ ಮಾತನ್ನೂ ಕೇಳದೆ, ಪಾಂಡವರಿಗೆ ರಾಜ್ಯಭಾಗ ಕೊಡದೇ ಉದ್ಧಟನಾಗಿ ವರ್ತಿಸುವಾಗ ದೇವರ್ಷಿ ನಾರದರು ಅವನಿಗೆ ಬುದ್ಧಿವಾದ ಹೇಳಿ “ಹಠಮಾರಿತನ ಒಳ್ಳೆಯದಲ್ಲ” ಎಂದು ತಿಳಿಸುವ ಸಲುವಾಗಿ ಗಾಲವನ ವೃತ್ತಾಂತ (ಗಾಲವೋಪಾಖ್ಯಾನ) ಹೇಳುತ್ತಾರೆ. ಶಿಷ್ಯ ಗಾಲವನ ಹಠಮಾರಿತನದಿಂದ ಕುಪಿತರಾದ ಅವನ ಗುರುಗಳು ವಿಶ್ವಾಮಿತ್ರರು ಎಂಟುನೂರು “ಶ್ಯಾಮಲಕರ್ಣ” ಕುದುರೆಗಳನ್ನು ಗುರುದಕ್ಷಿಣೆಯಾಗಿ ಕೇಳುತ್ತಾರೆ. ಆ ಸಮಯದಲ್ಲಿ ಭೂಮಿಯ ಮೇಲೆ ಅಂತಹ ಕುದುರೆಗಳು ಕೇವಲ ಆರುನೂರು ಮಾತ್ರ ಇದ್ದುವಂತೆ. ವಿಶ್ವಾಮಿತ್ರರು ಅವನಿಗೆ ಪಾಠ ಕಲಿಸುವ ಸಲುವಾಗಿ ಎಂಟುನೂರು ಶ್ಯಾಮಲಕರ್ಣ ಕುದುರೆಗಳನ್ನು ಕೇಳಿದರಂತೆ. ಹೀಗೆ ನಡೆಯುವ ಕಥೆಯಲ್ಲಿ ಮಾಧವಿಯ ಮೂಲಕ ಆ ಕುದುರೆಗಳ ಸಂಪಾದನೆಯ ಕಥೆ ಬೆಳೆಯುತ್ತದೆ. 


ಮಾಧವಿಯ ಕಥೆಯಂತೆಯೇ ಇರುವ ಇನ್ನೊಂದು ಕಥೆ “ಮೂರುವರೆ ವಜ್ರಗಳು” ಅನ್ನುವುದು. ಇದೂ ಕುದುರೆಯ ಕಥೆಯೇ. ಇದರಲ್ಲಿ ಶಾಪಗ್ರಸ್ತ ಸ್ತ್ರೀ ಒಬ್ಬಳಿಗೆ ಮೂರುವರೆ ವಜ್ರ ತಾಕಿದಾಗ ಶಾಪವಿಮೋಚನೆ ಎಂದು ಹೇಳುವ ಸಮಾಚಾರ. ಇದು ನಡೆದದ್ದು ಶ್ರೀಕೃಷ್ಣ, ಭೀಮಸೇನ, ದುರ್ಯೋಧನರ ಕಾಲದಲ್ಲಿ. ಶ್ರೀಕೃಷ್ಣ ಒಂದು ವಜ್ರ, ಬಲರಾಮ (ಅಥವಾ ಸುದರ್ಶನ) ಒಂದು ವಜ್ರ, ಭೀಮಸೇನ ಒಂದು ವಜ್ರ ಮತ್ತು ದುರ್ಯೋಧನ ಅರ್ಧ ವಜ್ರ. ನಾಲ್ವರು ಸೇರಿ ಮೂರುವರೆ ವಜ್ರ. ವಜ್ರ ಅಂದರೆ ವಜ್ರದೇಹಿಗಳು ಎಂದು. “ಮೂರುವರೆ ವಜ್ರಗಳು” ಹರಿಕಥೆಗಳ ಮುಖಾಂತರ ಹೆಚ್ಚು ಪ್ರಚಲಿತವಾಯಿತು. ಚಲನಚಿತ್ರವಾಗಿ ಜನರಿಗೆ ಇನ್ನಷ್ಟು ಪರಿಚಿತವಾಯಿತು. ಮಾಧವಿಯ ಕಥೆಗೆ ಈ ಭಾಗ್ಯ ಸಿಕ್ಕಲಿಲ್ಲ. 


ಮಾಧವಿಯ ಕಥೆ ಬಹಳ ಕುತೂಹಲಕಾರಿಯೂ, ರೋಮಾಂಚಕವೂ ಆಗಿದೆ. ಇದು ಅನೇಕ ಲೇಖಕರ, ಸಾಹಿತಿಗಳ ಗಮನ ಸೆಳೆದು ಪುಸ್ತಕಗಳು ಪ್ರಕಟವಾಗಿವೆ. ಕನ್ನಡದಲ್ಲಿ ಡಾ. ಅನುಪಮಾ ನಿರಂಜನ ಅವರ “ಮಾಧವಿ” ಬಹಳ ಹಿಂದೆ ಪ್ರಕಟವಾಗಿದೆ. ಪತ್ರಿಕೆಗಳಲ್ಲಿ ಧಾರಾವಾಹಿಯಾಗಿಯೂ ಪ್ರಕಟವಾಗಿವೆ. ಹಿಂದಿ ಭಾಷೆಯಲ್ಲಿಯೂ ಉಂಟು. ಬೇರೆ ಭಾಷೆಗಳಲ್ಲಿಯೂ ಇರಬಹುದು. ಬಹುತೇಕ, ಇವು ಪುರುಷಪ್ರಧಾನ ಸಮಾಜ ಒಬ್ಬ ಸ್ತ್ರೀಯ ಶೋಷಣೆ ಮಾಡಿದ ದೃಷ್ಟಿಯಿಂದ ವಿಶ್ಲೇಷಿಸಿ ಬರೆದವು. 


ನಹುಷ, ಯಯಾತಿ ಮುಂತಾದುವರ ಪ್ರಸಂಗಗಳು ಅನೇಕ ಸಾಹಿತ್ಯ ಕೃತಿಗಳ ರಚನೆಗೆ ಕಾರಣವಾಗಿವೆ. ನನ್ನ roundtheclockstories.blogspot.in ಬ್ಲಾಗ್-ಗಳಲ್ಲಿ “ಯಯಾತಿಯ ಮೊಮ್ಮಕ್ಕಳು” ಮತ್ತು “ಮಾಧವಿಯ ಮಕ್ಕಳು” ಎಂದು ಎರಡು ಸಂಚಿಕೆಗಳು ಒಂದು ತಿಂಗಳ ಹಿಂದೆ (ಸೆಪ್ಟೆಂಬರ್ 2025) ಪ್ರಕಟವಾಗಿದ್ದವು. ಅವುಗಳ ಬಗ್ಗೆ ಬಂದ ಪ್ರತಿಕ್ರಿಯೆಗಳಲ್ಲಿ ಹೆಚ್ಚಿನವು ದೊಡ್ಡವರ ಗುಣ ಮತ್ತು ದೋಷಗಳು, ಅವುಗಳನ್ನು ನೋಡುವ ರೀತಿ, ಇವುಗಳ ಬಗ್ಗೆ ಕೇಂದ್ರೀಕೃತವಾಗಿದ್ದವು. ಅವುಗಳನ್ನು ಓದಿದವರು ಮತ್ತು ಮಿತ್ರರು ಇದನ್ನು ಸ್ವಲ್ಪ ವಿವರವಾಗಿ ಒಂದು ನಾಟಕ ರೂಪವಾಗಿ ಬರೆಯುವಂತೆ ಪ್ರೋತ್ಸಾಹಿಸಿದರು. ಬ್ಲಾಗ್ ಸಂಚಿಕೆಗಳು ಹೊರಬಂದ ನಂತರ ಹೃದಯದ ಶಸ್ತ್ರ ಚಿಕಿತ್ಸೆಯ ಪರಿಣಾಮವಾಗಿ ಆಸ್ಪತ್ರೆಯ ಹಾಸಿಗೆಯಲ್ಲಿ ಮಲಗಿದ್ದಾಗ ಅದರ ನೋವನ್ನು ಮರೆಸಿದುದು ಈ ಯಯಾತಿಯ ಮೊಮ್ಮಕ್ಕಳ, ಮಾಧವಿಯ ಮಕ್ಕಳ ಉದಾತ್ತತೆಯ ಬಗ್ಗೆ ಮನಸ್ಸಿನಲ್ಲಿ ನಡೆದ ಮಂಥನ. ಅದರ ಫಲವಾಗಿ ಈ ನಾಟಕರೂಪ ಹೊರಬಂದಿದೆ. ನಾನು ಲೇಖಕನೂ ಅಲ್ಲ; ಸಾಹಿತಿಯೂ ಅಲ್ಲ.  ಸ್ನೇಹಿತರ ಪ್ರೀತಿಯ ಒತ್ತಾಯದ ಕಾರಣವಾಗಿ ಅಲ್ಲಿ ನಡೆದ ಮಂಥನ ಈ ನಾಟಕವಾಗಿ ರೂಪುಗೊಂಡಿದೆ. ಅಷ್ಟೇ. 


ಯಯಾತಿಯ ವ್ಯಕ್ತಿತ್ವದಲ್ಲಿ ಎರಡು ಗಂಟಿನ ಘಟ್ಟಗಳು. ಒಂದು ಮಗ ಪುರುವಿನ ಯೌವನ ತೆಗೆದುಕೊಂಡದ್ದು. ಇನ್ನೊಂದು ಮಗಳು ಮಾಧವಿಯನ್ನು ಗಾಲವರ ಅಶ್ವಗಳ ಅವಶ್ಯಕತೆಯ ಕಾರಣ ಕಳಿಸಿಕೊಟ್ಟದ್ದು. ಒಬ್ಬ ತಂದೆಯಾಗಿ ಅವನು ಅನುಭವಿಸಿರಬಹುದಾದ ವೇದನೆಗಳು, ತಂದೆಯ ಆಜ್ಞಾಧಾರಕಿಯಾಗಿ ಮಾಧವಿಯು ಅನುಭವಿಸಿದ ಹಿಂಸೆ, ಇವು ಇಲ್ಲಿನ ಮುಖ್ಯ ಬಿಂದುಗಳು. ಎರಡು ಕಪ್ಪು ಚುಕ್ಕೆಗಳಿಂದ ಯಯಾತಿಯ ವ್ಯಕ್ತಿತ್ವವನ್ನು ಅಳೆಯಬಾರದು ಎಂದು ನಾಟಕದ ಆಶಯ. ನಂಬುವವರು ಇದು ದೇವತೆಗಳ ಆಟ ಎಂದು ತಿಳಿದರಂತೂ ಅದರ ಸಮಾಧಾನವೇ ಬೇರೆ ರೀತಿಯದು. 


ಹಿಂದಿನ ತಲೆಮಾರಿನಲ್ಲಿ ಶ್ರಾದ್ಧಗಳ ಸಮಯದಲ್ಲಿ ದೌಹಿತ್ರರಿಗೆ (ಹೆಣ್ಣುಮಕ್ಕಳ ಮಕ್ಕಳು) ವಿಶೇಷ ಸ್ಥಾನವಿತ್ತು. ಗಂಡುಮಕ್ಕಳು ಶ್ರಾದ್ಧ ಮಾಡಿದರೂ, ಅವರ ಅಕ್ಕ-ತಂಗಿಯರು ಮತ್ತು ಅವರ ಮಕ್ಕಳು ಆ ಸಂದರ್ಭದಲ್ಲಿ ಬಂದು ಭಾಗವಹಿಸಲಿ ಎನ್ನುವುದು ಅದರ ಮೂಲ ಕಾರಣ. ಪ್ರತಿ ಮನೆಯಲ್ಲೂ ಅನೇಕ ಮಕ್ಕಳಿರುತ್ತಿದುದರಿಂದ ದೌಹಿತ್ರರು ಬರುವುದು ಅಷ್ಟೇನೂ ಕಷ್ಟವಿರಲಿಲ್ಲ. ಒಬ್ಬನೂ ದೌಹಿತ್ರ ಅಂದು ಬರಲಿಲ್ಲ ಅಂದರೆ ಶ್ರಾದ್ದ ಮಾಡುವವರು ಪೇಚಾಡಿಕೊಳ್ಳುತ್ತಿದ್ದರು. ಈಗ ಈ ಪದ್ಧತಿ ಮರೆತೇಹೋಗಿದೆ. ಎಷ್ಟೋ ಜನರಿಗೆ ಅಕ್ಕ-ತಂಗಿಯರೇ ಇಲ್ಲ. ಅವರ ಮಕ್ಕಳು ಎಲ್ಲಿಂದ ಬರಬೇಕು? ಈ ದೌಹಿತ್ರರ ಪ್ರಾಮುಖ್ಯತೆ ಬಂದಿದ್ದು ಯಯಾತಿಯ ಮೊಮ್ಮಕ್ಕಳು, ಅಂದರೆ ಮಾಧವಿಯ ಮಕ್ಕಳು, ಅಜ್ಜನಿಗೆ (ಮಾತಾಮಹ) ಪುಣ್ಯ ಭಾಗ ಕೊಟ್ಟಿದ್ದರಿಂದ. ಇದು ಎಷ್ಟೋ ಜನರಿಗೆ ಗೊತ್ತಿಲ್ಲ. ಗೊತ್ತಿದ್ದವರಿಗೆ ಮರೆತುಹೋಗಿದೆ. ಈ ನಾಟಕದಲ್ಲಿ ಅದನ್ನು ನೆನಪು ಮಾಡಿಸುವ ಪ್ರಯತ್ನವೂ ಇದೆ. 


ನಮ್ಮಲ್ಲಿ ಅಣ್ಣ-ತಮ್ಮಂದಿರನ್ನು “ಸಹೋದರರು” ಎಂದು ಹೇಳುವುದು ಸ್ವಾಭಾವಿಕವೆನ್ನುವಂತೆ ಆಗಿದೆ. ಸಹೋದರರೆಂದರೆ ಒಂದೇ ಉದರದಲ್ಲಿ (ಹೊಟ್ಟೆಯಲ್ಲಿ, ಅಥವಾ ಇನ್ನೂ ಖಚಿತವಾಗಿ ಹೇಳಿದರೆ ಗರ್ಭದಲ್ಲಿ) ಹುಟ್ಟಿದವರು. ಒಂದೇ ತಂದೆಯ ಮಕ್ಕಳಾದರೂ ತಾಯಿ ಬೇರೆ ಬೇರೆಯವರಾಗಿರಬಹುದು. ಹಾಗೆಯೇ, ಒಂದೇ ತಾಯಿಯ ಮಕ್ಕಳಾದರೂ ತಂದೆ ಬೇರೆಯವರಾಗಿರಬಹುದು. ಹೀಗೆ ತಿಳಿದಾಗ ವ್ಯತ್ಯಾಸ ಗೊತ್ತಾಗುತ್ತದೆ. ಈ ರೀತಿ ನೋಡಿದಾಗ ಐವರು ಪಾಂಡವರು ಅಣ್ಣ-ತಮ್ಮಂದಿರು. ಧರ್ಮಜ-ಭೀಮ-ಅರ್ಜುನ ಸಹೋದರರು. ಹಾಗೆಯೇ ನಕುಲ-ಸಹದೇವರು ಸಹೋದರರು. ಈ ಕಾರಣದಿಂದ ಮಾಧವಿಯ ನಾಲ್ಕು ಮಕ್ಕಳು (ತಂದೆಯರು ಬೇರೆ ಬೇರೆ ಆದರೂ) ಸಹೋದರರು. 


ಮಾಧವಿಯ ಪ್ರಸಂಗದಲ್ಲಿ ಕಾಣಿಸುವ ವಿಶ್ವಾಮಿತ್ರರು ಯಾರು? ಕೆಲವರು “ವಿಶ್ವಾಮಿತ್ರರು ಅನ್ನುವ ಹೆಸರಿನ ಅನೇಕರಿದ್ದರು. ಅವರಲ್ಲಿ ಒಬ್ಬರು ಇವರು. ವಸಿಷ್ಠ-ವಿಶ್ವಾಮಿತ್ರರ ಸಂಬಂಧದ ವಿಶ್ವಾಮಿತ್ರರಲ್ಲ” ಎಂದು ಅಭಿಪ್ರಾಯ ಪಡುತ್ತಾರೆ. ಮಾಧವಿ-ವಿಶ್ವಾಮಿತ್ರರ ಮಗನ ಹೆಸರು ಅಷ್ಟಕ. ಕೆಲವರ ಕೌಶಿಕ ಗೋತ್ರಗಳ ಪ್ರವರದಲ್ಲಿಯೂ ಅಷ್ಟಕ ಎನ್ನುವ ಹೆಸರಿದೆ. ಆದ್ದರಿಂದ ಅವರು ಬ್ರಹ್ಮರ್ಷಿ ವಿಶ್ವಾಮಿತ್ರರು ಎಂದು ಬಲವಾದ ಅಭಿಪ್ರಾಯ. ಇಲ್ಲಿ ಹಾಗೆಯೇ ಸೂಚಿಸಿದೆ. ಎಲ್ಲ ಕಡೆ ಮಹರ್ಷಿ ಎಂದು ಹೇಳಿ, ಕಡೆಯ ದೃಶ್ಯದಲ್ಲಿ ಮಾತ್ರ ಬ್ರಹ್ಮರ್ಷಿ ಎಂದು ಸಂಬೋಧಿಸಿದೆ. ಅವರು ಯಾವಾಗ ಬ್ರಹ್ಮರ್ಷಿ ಆದರು ಅನ್ನುವ ಚರ್ಚೆ ಈ ನಾಟಕದ ಸಂದರ್ಭದಲ್ಲಿ ಬೇಡ. ಅದು ಎಲ್ಲರಿಗೂ ಗೊತ್ತಿರುವ ವಿಚಾರವೇ. 


ನಾಲ್ಕು ಜನ ಸಹೋದರರು ನೈಮಿಷಾರಣ್ಯದಲ್ಲಿ ಸತ್ರ ನಡೆಸಿದ್ದು, ಅಲ್ಲಿಗೆ ಯಯಾತಿಯು ಸ್ವರ್ಗದಿಂದ ತಳ್ಳಿದಾಗ ಬಿದ್ದದ್ದು, ಅಲ್ಲಿಗೆ ಮಾಧವಿಯು ಬಂದದ್ದು, ಅವಳೂ ತನ್ನ ಪುಣ್ಯದಲ್ಲಿ ಭಾಗ ಕೊಟ್ಟಿದ್ದು, ಇವೆಲ್ಲವೂ ಮೂಲಗಳಲ್ಲಿ ಇರುವ ಸತ್ಯ ಸಂಗತಿಗಳೇ. ಅಲ್ಲಿಗೆ (ನೈಮಿಷಾರಣ್ಯಕ್ಕೆ) ಬ್ರಹ್ಮರ್ಷಿ ವಿಶ್ವಾಮಿತ್ರರು ಬಂದಿದ್ದು ಮಾತ್ರ ಕಲ್ಪನೆ. ನಾಟಕದ ಕೊನೆಯಲ್ಲಿ, ಖಚಿತವಾಗಿ ಹೇಳಿದ ಕಡೆಯ ಮಾತನ್ನು ಎಲ್ಲರೂ ಒಪ್ಪಬೇಕಾದ ಸಂದರ್ಭದಲ್ಲಿ, ಅಧಿಕಾರಯುತವಾಗಿ ಮಾತನಾಡಿ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕೊಡಲಿ ಎನ್ನುವ ದೃಷ್ಟಿಯಿಂದ ಮಾಡಿರುವ ಮಾರ್ಪಾಡು ಇದು. ಅಷ್ಟೇ. 


ಗಾಲವರಿಗೆ ಅಶ್ವಗಳ ಸಂಪಾದನೆಯ ಸಂದರ್ಭದಲ್ಲಿ ಗರುಡನ ಸಹಾಯ ಸಿಕ್ಕಿತು ಎಂದು ಕೆಲವು ಕಡೆ ಸೂಚ್ಯವಾಗಿದೆ. ಈ ನಾಟಕದಲ್ಲಿ ಗರುಡನ ಬದಲು “ವೈನತೇಯ” ಎನ್ನುವ ಗಾಲವನ ಬಾಲ್ಯ ಸ್ನೇಹಿತ ಎಂದು ತೋರಿಸಿದೆ. ರಂಗದ ಮೇಲೆ ಪ್ರಯೋಗ ಮಾಡುವ ಕಾಲದಲ್ಲಿ (ಅದು ಆಗುತ್ತದೆಯೋ, ಇಲ್ಲವೋ ಅನ್ನುವುದು ಬೇರೆ  ವಿಷಯ!) ಬಹಳ ಕಾಲ ಜೊತೆಯಲ್ಲಿ ಇರುವ ಎರಡು ಪಾತ್ರಗಳ ಆತ್ಮೀಯತೆ, ಸ್ವಲ್ಪ ಹಾಸ್ಯ, ಇವು ತರಲು ಮಾಡಿಕೊಂಡಿರುವ ಬದಲಾವಣೆ ಇದು.


ಮಾಧವಿಯ ತಂದೆ ಯಯಾತಿ ಎಂದು ಎಲ್ಲ ಕಡೆ ಹೇಳಿದ್ದರೂ, ತಾಯಿ ಯಾರು ಎಂದು ಸ್ಪಷ್ಟವಿಲ್ಲ. ದೇವಯಾನಿ ಮತ್ತು ಶರ್ಮಿಷ್ಠೆ, ಇಬ್ಬರೂ ಅವಳ ಹೆತ್ತತಾಯಿಯರಲ್ಲ ಅನ್ನುವುದು ಮೊದಲ ನೋಟಕ್ಕೆ ಗೊತ್ತಾಗುತ್ತದೆ. ಆದ್ದರಿಂದ ಅವಳು ಯಯಾತಿಯ ಮತ್ತೊಬ್ಬ ಹೆಂಡತಿಯ ಮಗಳಾಗಿರಬೇಕು. ದೇವಯಾನಿಯ ವಿವಾಹವಾಗುವ ಮೊದಲೇ ಯಯಾತಿಗೆ ಮದುವೆಯಾಗಿರಬಹುದು. ರಾಜರಿಗೆ ಅನೇಕ ಹೆಂಡಿರಿರುತ್ತಿದ್ದರು ಅನ್ನುವುದು ಆಗ ಸಾಮಾನ್ಯವಾಗಿತ್ತು. (ಈಗಿನ ಕಾಲದ ರಾಜ ಸಮಾನರಾದವರಿಗೆ ಹೀಗೆ ಇದ್ದರೂ ಗೊತ್ತಾಗುವುದಿಲ್ಲ). ಇಲ್ಲಿ ಮಾಧವಿ ತಾಯಿ ಇಲ್ಲದ ತಬ್ಬಲಿ ಎಂದು ತೋರಿಸಲಾಗಿದೆ. ತಂದೆಯ ಮನಸ್ಸಿನ ದುಗುಡದ ತೀವ್ರತೆ ಪರಿಣಾಮಕಾರಿಯಾಗಿರಲೂ ಇದು ಸಹಾಯಕ. 


ಹೆಣ್ಣುಮಕ್ಕಳಿಗೆ, ಅವರು ರಾಜಕುಮಾರಿಯರಾದರೆ ಏನಂತೆ, ಸ್ವತಂತ್ರವಾಗಿ ಬದುಕು ರೂಪಿಸಿಕೊಳ್ಳುವ ಪೂರ್ಣ ಸ್ವಾತಂತ್ರ್ಯ ಪ್ರಾಯಶಃ ಯಾವ ಕಾಲದಲ್ಲೂ ಇರಲಿಲ್ಲ. ಸ್ವಯಂವರ ಪದ್ಧತಿಯಲ್ಲಿಯೂ ಪೂರ್ಣ ಸ್ವಾತಂತ್ರ್ಯ ಇರಲಿಲ್ಲ. ಬಹಳ ಸಂದರ್ಭಗಳಲ್ಲಿ ಅವರು ಯೋಚನೆ ಮಾಡುವಷ್ಟು ಪ್ರಬುದ್ಧತೆ ಬರುವ ವಯಸ್ಸಿನ ಮೊದಲೇ ವಿವಾಹವಾಗಿರುತ್ತಿತ್ತು. ಎರಡನೆಯ ಪತ್ನಿಯಾಗುವ, ಅಥವಾ ಎಷ್ಟನೆಯದು ಎಂದು ಗೊತ್ತಿಲ್ಲದ, ವಿವಾಹಗಳೂ ನಡೆಯುತ್ತಿದ್ದವು. ಇವುಗಳ ಸೂಚ್ಯವಾದ ನೋಟ ಕೊಡುವ ಪ್ರಯತ್ನ ಇಲ್ಲುಂಟು.


ಕೆಲವು ಸಂಗತಿಗಳು (ಮಾಧವಿಯ ವರದ ವಿವರಗಳು, ಕುದುರೆಗಳ ವಿಚಾರ, ವಿವಾಹದ ನಿಬಂಧನೆಗಳು ಮುಂತಾದುವು) ಮತ್ತೆ ಮತ್ತೆ ಬಂದವಲ್ಲಾ ಅನಿಸಬಹುದು. ವಿಧಿಯಿಲ್ಲ. ಕೆಲವು ಕಡೆ ಊಟದಲ್ಲಿ ಅನ್ನ ನಾಲ್ಕು ಸಲ ಬರುತ್ತದೆ. “ಕೂಟಿಗೂ ಅನ್ನ ಬಂತು, ಸಾರಿಗೂ ಅನ್ನ ಬಂತು, ಚಿತ್ರಾನ್ನದಲ್ಲೂ ಅನ್ನ ಇತ್ತು, ಈಗ ಮಜ್ಜಿಗೆಗೂ ಅನ್ನ ಬಂತಲ್ಲ?” ಎಂದು ಯಾರೂ ಬೇಸರಿಸುವುದಿಲ್ಲ. ಇದೂ ಹಾಗೆಯೇ ಎಂದು ನಕ್ಕು ಸುಮ್ಮನಾಗಬೇಕಷ್ಟೆ!  ಒಬ್ಬ ಅಧ್ಯಾಪಕನು ಒಂದೇ ಪಾಠವನ್ನು ನಾಲ್ಕು ತರಗತಿಗಳಿಗೆ (ಸೆಕ್ಷನ್) ಪಾಠ ಹೇಳುವಾಗ ಅದು ಅವನಿಗೆ ನಾಲ್ಕು ಸಾರಿ ಆಗುತ್ತದೆ. ಆದರೆ ವಿದ್ಯಾರ್ಥಿಗಳಿಗೆ ಒಂದೇ ಸಲ. ಅಲ್ಲವೇ? ಹೇಳುವವರಿಗೆ ನಾಲ್ಕು ಸಲ. ಕೇಳುವವರಿಗೆ ಒಂದೇ ಸಲ. ಇಲ್ಲಿಯೂ ಹಾಗೆಯೇ ಎಂದು ತಿಳಿಯಬೇಕು!


ನಾಟಕದ ಒಟ್ಟು ಗಾತ್ರದ ಬಗ್ಗೆ ಟೀಕೆಗಳು ಬರಬಹುದು. ಈಗ ಸಾಮಾನ್ಯವಾಗಿ ಹೆಚ್ಚೆಂದರೆ ಎರಡು ಗಂಟೆಗಳ ಒಳಗಾಗಿ ನಡೆಯುವ ರಂಗಪ್ರಯೋಗಗಳ ಕಾಲ. ರಾತ್ರಿಯೆಲ್ಲ ನಡೆಯುವ ನಾಟಕಗಳು ಕಡಿಮೆಯೇ. ನಾಲ್ಕೈದು ಗಂಟೆಗಳ ನಾಟಕಗಳು ಪ್ರಯೋಗ ಕಂಡರೂ ಅವು ಬಹಳ ಪ್ರಸಿದ್ಧರಾದವರ ರಚನೆಗಳು ಮಾತ್ರ. ಇದೊಂದು ಏಳು ಅಂಕಗಳ ನಾಟಕ. ಏನು ಮಾಡುವುದು? ಇದು ಮೂರು ತಲೆಮಾರುಗಳ ಕಥೆ. ಮಾಧವಿಗೆ ನಾಲ್ಕು ಮದುವೆಗಳು! ಅವಳ ಬದುಕೇ ಆರು ಅಂಕಗಳದ್ದು. ತಂದೆಯ ಮನೆಯಲ್ಲಿ ಮೊದಲಂಕ. ನಂತರ ಮದುವೆಗಳ ನಾಲ್ಕಂಕ. ಕಡೆಯಲ್ಲಿ ಇನ್ನೊಂದಂಕ. ಇನ್ನೂ ಚಿಕ್ಕದು ಮಾಡುವುದು ಕಷ್ಟ. ಯಾರಾದರೂ ರಂಗದ ಮೇಲೆ ತರುವ ಸಾಹಸ ಮಾಡಿದರೆ ಆಗ ಇನ್ನೂ ಸ್ವಲ್ಪ ಚಿಕ್ಕದು ಮಾಡಲು ಅವಕಾಶವಿದೆ. ಸಂದರ್ಭ ಬಂದರೆ (?) ನೋಡೋಣ. 


ರಂಗಪ್ರಯೋಗಕ್ಕೆ ಕೆಲವು ಬಾಧಕಗಳು ಇರಬಹುದು. ಏನೂ ಪರಿಕರಗಳಿಲ್ಲದೇ ಗಾಳಿಯಲ್ಲಿ ಕೈಕಾಲು ಆಡಿಸಿ ಪರಿಕರದ ಭ್ರಮೆ ಹುಟ್ಟಿಸುವ ಪ್ರಯೋಗಗಳಿರುವ ಕಾಲದಲ್ಲಿ ಇದೇನೂ ದೊಡ್ಡದಲ್ಲ. ನುರಿತ ನಿರ್ದೇಶಕರು ಅವಕ್ಕೆ ಸಮಾಧಾನಗಳನ್ನು ಸುಲಭವಾಗಿ ಕಂಡುಕೊಳ್ಳಬಲ್ಲರು. 


ವರಗಳು-ಶಾಪಗಳು, ಗುರುದಕ್ಷಿಣೆ, ಸ್ವರ್ಗ-ಸಾಕ್ಷಾತ್ಕಾರ, ಇವೆಲ್ಲಾ ಈ ಕಾಲದಲ್ಲಿ ಯಾರಿಗೆ ಬೇಕು ಅನ್ನುವ ಪ್ರಶ್ನೆ ಬರಬಹುದು. ನಿಜ. ಕಡಿಮೆಯಿದ್ದರೂ, ಇವನ್ನು ರಸಾನುಭವಕ್ಕಾಗಿ ಅಥವಾ ನಂಬಿಕೆಗಾಗಿ ಓದುವ, ನೋಡುವ ಜನರು ಕೆಲವರಾದರೂ ಈಗಲೂ ಇದ್ದಾರೆ. ಅಲ್ಲವೇ?


ನಾಲ್ಕು ವಿವಾಹದ ಕತೆಗೆ ನಾಲ್ಕು ಮಾತುಗಳು ಅಂದದ್ದು ಕಡೆಗೆ ಎಂಟು ಮಾತಾಯಿತು!


"ಮಾಧವಿ" ನಾಟಕವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.


 

Wednesday, October 8, 2025

ಚರ್ಮಾ೦ಬರ

Best 50+ Lord Shiva Images | God Shiva HD Pictures | Hindu ...

ಅರವತ್ತು  ವರುಷಗಳಿಗೂ ಹಿಂದಿನ ಮಾತು. 

ಅದೊಂದು ಅವಿಭಕ್ತ ಕುಟುಂಬ. ತುಂಬಿದ ಮನೆಗೆ ಒಂದು ಉತ್ತಮ ಉದಾಹರಣೆ. ಹಿರಿಯ ವಯಸ್ಸಿನ ತಾಯಿಯ ಜೊತೆಯಲ್ಲಿ ಅರವತ್ತು ವರುಷಗಳ ಆಸು-ಪಾಸಿನ ಅಣ್ಣ-ತಮ್ಮಂದಿರು. ಅವರ ಹೆಂಡತಿ-ಮಕ್ಕಳು-ಸೊಸೆಯರು-ಮೊಮ್ಮಕ್ಕಳು. ಎಲ್ಲರೂ ಒಟ್ಟಾಗಿ ಒಂದು ಸೂರಿನ ಕೆಳಗೆ ಜೀವನ ನಡೆಸುವ ಸುಯೋಗ. ಈಗ ಅಂತಹ ಸಂಸಾರಗಳು ಕಾಣುವುದು ಕಷ್ಟ. ಅವರ ಮನೆಗೆ ಬಂದು ಹೋಗುವ ನಮ್ಮಂತಹ ಮಕ್ಕಳಿಗೆ ಅದೊಂದು ಪೂರ್ತಿಯಾಗಿ ಅರ್ಥವಾಗದ ವ್ಯವಸ್ಥೆ. ಮೊದಮೊದಲಿಗೆ ಯಾರು ಯಾರ ಮಕ್ಕಳು ಅನ್ನುವುದೂ ಸರಿಯಾಗಿ ಗೊತ್ತಾಗದು. ಹೀಗೆ ಆಗಾಗ ಬಂದು ಹೋಗುವ ನಮ್ಮ ಮೇಲೆ ಆ ಕುಟುಂಬದ ಎಲ್ಲರ ಪ್ರೀತಿ ಒಂದೇ ಸಮ. ಮನೆಗೆ ಬಂದು ನಾಲ್ಕಾರು ದಿನವಿದ್ದರೂ ಹೊರಡುವ ದಿನ "ಈಗೇನು ಅವಸರ. ಇನ್ನೂ ಒಂದೆರಡು ದಿನ ಇದ್ದು ಹೋಗಬಹುದಲ್ಲ" ಎನ್ನುವ ಮಾತು. ಯಾವ ಸಮಯ, ಸಂದರ್ಭದಲ್ಲೂ ಮನಸ್ಸಿಗೆ ದುಗುಡ ಉಂಟುಮಾಡುವ ಪರಿಸ್ಥಿತಿ ಇಲ್ಲ. ಅಂತಹ ಸುಂದರ ವಾತಾವರಣ. 

ನಾವು ಬೆಳಿಗ್ಗೆ ಸರಿಯಾಗಿ ಕಣ್ಣು ಬಿಡುವ ಸಮಯಕ್ಕಾಗಲೇ ಕೆಲಸಕ್ಕೆ ಹೋಗಿರುವವರು ಕೆಲವರು. ತಯಾರಾಗಿ ಶಾಲೆಗಳಿಗೆ ಹೊರಟಿರುವ ಮಕ್ಕಳು. ಅಡಿಗೆ ಮನೆಯಲ್ಲಿ ಸದಾ ಉರಿಯುತ್ತಿರುವ ಒಲೆಗಳು. ಯಾರು ಯಾರ ಉಪಚಾರ, ಯಾಗಕ್ಷೇಮ ನೋಡುತ್ತಿದ್ದಾರೆ ಎನ್ನುವುದು ತಿಳಿಯದು. ಒಟ್ಟಿನಲ್ಲಿ ಎಲ್ಲರೂ ಹಂಚಿಕೊಂಡು ಕೆಲಸಗಳನ್ನು ತೂಗಿಸುವವರು. ಒಬ್ಬರ ಕಾರ್ಯಕ್ರಮ ಇನ್ನೊಬ್ಬರಿಗೆ ಗೊತ್ತು. ಸರತಿಯಂತೆ ಸ್ನಾನದ ಕೋಣೆಯ ಉಪಯೋಗ. ಯಾರೋ ಬಾವಿಯಿಂದ ನೀರು ಸೇದಿ ತುಂಬುವರು. ಮತ್ಯಾರೋ ಉರುವಲು ಕಟ್ಟಿಗೆ ಜೋಡಿಸಿಡುವವರು. ಬೇಯಿಸುವವರೊಬ್ಬರು. ತೋಡಿ ಬಡಿಸುವವರೊಬ್ಬರು. ತಾಟು ತೆಗೆದು ಸಾರಿಸುವವರೊಬ್ಬರು. ಹೀಗೆ ನಡೆಯುವುದು. ಪ್ರತಿದಿನ. 

*****

ಅಣ್ಣ ಆ ವೇಳೆಗಾಗಲೇ ಲೌಕಿಕದಿಂದ ಅರ್ಧ ನಿವೃತ್ತ. ಸರಕಾರೀ ಕೆಲಸವೆಂದಲ್ಲ. ಒಟ್ಟಿನಲ್ಲಿ ಲೌಕಿಕದಿಂದ ವಿಮುಖ. ಕೃಷಿ ಭೂಮಿಯಿಂದ ಬಂದ ಬೆಳೆ, ಆದಾಯದಿಂದ ಜೀವನ. ಮತ್ತೆ ಅಲ್ಲಲ್ಲಿ ಸ್ವಲ್ಪ ಆದಾಯ. ಮಕ್ಕಳು ವಿದ್ಯಾವಂತರಾಗಿ ಉದ್ಯೋಗ ಹಿಡಿದಮೇಲೆ ಒಂದಷ್ಟು ಒತ್ತಾಸೆ. ಹೀಗೆ ಜೀವನ ನಿರ್ವಹಣೆ. ಅರ್ಧ ವಿರಕ್ತರಾದ ಮೇಲೆ ಗಮನ ಮುಂದಿನ ಸಾಧನೆಯ ಕಡೆಗೆ. ಬೆಳಗಿನ ಅರ್ಧ ಭಾಗ ಪೂಜೆ-ಪುನಸ್ಕಾರಗಳಿಗೆ ಮೀಸಲು. ನಂತರದ ಸಮಯ ಸುತ್ತ-ಮುತ್ತಲಿನ ಅವಿದ್ಯಾವಂತ ರೈತಾಪಿ ಜನರ ಕೆಲಸ-ಕಾರ್ಯಗಳಲ್ಲಿ ಸಹಯೋಗ. ಸಂಜೆಯ ಸಮಯ ಕುಟುಂಬದ ಪರಂಪರೆಯಿಂದ ಬಂದ ಗ್ರಂಥಗಳ ವಾಚನ ಮತ್ತು ಅಧ್ಯಯನ. ರಾತ್ರಿ ಅಲ್ಪ ಉಪಹಾರಕ್ಕೆ ಮೊದಲು ಒಂದು ಸಣ್ಣ ಪೂಜೆ. ದೊಡ್ಡ ಪಾರಾಯಣ. ನಂತರ ರಾತ್ರಿಯ ವಿಶ್ರಾಂತಿ. ಹೀಗೆ ದಿನಚರಿ. 

ತೊರವೆಯ ರಾಮಾಯಣ, ಕುಮಾರವ್ಯಾಸ ಭಾರತ, ಜೈಮಿನಿ ಭಾರತ, ಶ್ರೀಮದ್ಭಾಗವತ ಮುಂತಾದ ಗ್ರಂಥಗಳ ಭಾಗಗಳ ವಾಚನ ಮತ್ತು ವ್ಯಾಖ್ಯಾನ ಸಂಜೆಯ ಹೊತ್ತು ನಡೆಯುವುದು. ಸುತ್ತ-ಮುತ್ತಲ ಹತ್ತಾರು ಜನರು ಆ ಸಮಯಕ್ಕೆ ತಪ್ಪದೇ ಬರುವರು. ಎಲ್ಲವೂ ಕ್ರಮವಾಗಿ ನಡೆಯಬೇಕು. ಪ್ರತಿಯೊಂದು ಗ್ರಂಥ ವಾಚನ ಪೂರ್ತಿಯಾದ ಮೇಲೆ ಅದಕ್ಕೊಂದು "ಮಂಗಳ" ಕಾರ್ಯಕ್ರಮ. ಸಮಾರಂಭ ಮತ್ತು ಸಂತರ್ಪಣೆ. ಕೆಲವೊಮ್ಮೆ ಅವುಗಳಲ್ಲಿ ಭಾಗವಹಿಸಲು ಬಾಲಕರಾದ ನಮಗೂ ಅವಕಾಶ. ಹಬ್ಬದ ವಾತಾವರಣ. ಅವುಗಳ ಪೂರ್ತಿ ಅರ್ಥವ್ಯಾಪ್ತಿ ನಮಗೆ ಗೊತ್ತಾಗದಿದ್ದರೂ ಏನೋ ಒಂದು ವಿಶಿಷ್ಟ ಅನುಭವ. 

ತಮ್ಮ ಇದಕ್ಕೆ ವಿರುದ್ಧ. ಲೌಕಿಕದಲ್ಲಿ ಮಗ್ನ. ಎಲ್ಲರೂ ವಿರಕ್ತರಾಗಿ ಕುಳಿತರೆ ಜೀವನ ನಡೆಯಬೇಕಲ್ಲ. ಕೃಷಿ ಚಟುವಟಿಕೆ ಮತ್ತು ಸುತ್ತಲಿನ ಜನರ ಕೆಲಸ-ಕಾರ್ಯಗಳಿಗೆ ಸಹಕಾರ. ಮನೆಯ ಇತರ ಕಾರ್ಯಕ್ರಮಗಳಿಗೆ ಪೂರ್ತಿ ಬೆಂಬಲವಿದ್ದರೂ ಹೆಚ್ಚಿನ ಸಮಯ ಹೊರಗಡೆ ವ್ಯವಹಾರಗಲ್ಲಿ ಕಳೆಯುವುದು. ಸ್ವತಃ ಅಧ್ಯಯನ-ವಾಚನಗಳಲ್ಲಿ ಹೆಚ್ಚು ಸಮಯ ಕಳೆಯದಿದ್ದರೂ ಅನೇಕ ಗಹನ ವಿಚಾರಗಳಲ್ಲಿ ಆಳವಾದ ಪಾಂಡಿತ್ಯ. ಅವುಗಳ ವಿಷಯದಲ್ಲಿ ಮಾತಿಗೆ ಸಿಕ್ಕರೆ ಅಪರೂಪದ ಸಂಗತಿಗಳನ್ನು ಹೊರತಂದು ಇತರರನ್ನು ಚಕಿತರನ್ನಾಗಿಸುವ ಚತುರತೆ. 

***** 

ದೊಡ್ಡವರಿಂದ ತೊರವೆ ರಾಮಾಯಣ ವಾಚನ-ವ್ಯಾಖ್ಯಾನ ಸರಣಿ ಪೂರ್ತಿಯಾದ ನಂತರ ಒಂದು "ಮಂಗಳ ಕಾರ್ಯಕ್ರಮ". ದಸರೆಯ ರಜೆಯ ನಿಮಿತ್ತ ನಮಗೂ ಶಾಲೆಯಿಂದ ಬಿಡುವಿನ ಕಾರಣ ಆ ಮಂಗಳ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ. ಮೂರು ದಿನದ ಬಿಡಾರ ಅವರ ಮನೆಯಲ್ಲಿ. ಮೊದಲನೆಯ ದಿನ ಭಾನುವಾರ. ಬೆಳಿಗ್ಗೆ ರಾಮಾಯಣದ ಕಡೆಯ ಭಾಗದ ವಾಚನದಿಂದ ಕಾರ್ಯಕ್ರಮ ಕೊನೆಯಾಯಿತು. ನಂತರ ಮಂಗಳದ ಪೂಜೆ ಮುಂತಾದುವಗಳ ನಂತರ ಸಂತರ್ಪಣೆ. ಸಂಜೆ ಏನೂ ಇಲ್ಲದೆ ಸುಮ್ಮನೆ ಇರುವಂತಿಲ್ಲ. ವೃಥಾ ಕಾಲಹರಣ ಸಲ್ಲದು. ಆದ್ದರಿಂದ "ಕುಮಾರವ್ಯಾಸ ಭಾರತ ಕಥಾಮಂಜರಿ" ವಾಚನ ಪ್ರಾರಂಭ!

ಅವರ ವಾಚನ ಕಾರ್ಯಕ್ರಮದಲ್ಲಿ ಒಂದು ವಿಶೇಷತೆ. ಪ್ರತಿ ಪದ್ಯದ ಓದುವಿಕೆಯ ನಂತರ ಅವರೇ ಕೆಲಕಾಲ ಅದರ ಅರ್ಥವ್ಯಾಪ್ತಿ ಮತ್ತು ಸಂಬಂಧಿಸಿದ ವಿಷಯಗಳ ವಿವರಣೆ ಮಾಡುವರು. ನಂತರ ಅಲ್ಲಿದ್ದ ಕೇಳುಗರಿಗೆ ಪ್ರಶ್ನೆ ಕೇಳುವ ಅವಕಾಶ. ಆಗ ಅವರೋ, ಅಲ್ಲಿರುವ ಬೇರೆ ಯಾರೋ ಉತ್ತರ ಹೇಳಬಹುದು. ಹೀಗಾಗಿ ಅನೇಕರ ತಿಳುವಳಿಕೆಯ ವಿನಿಮಯಕ್ಕೆ ಅವಕಾಶ. ಸ್ವತಃ ಕ್ರಮವಾಗಿ ವಿದ್ಯಾಭ್ಯಾಸ ಮಾಡದಿದ್ದರೂ ಸಭಾಸದರ ಮಾತುಗಳು ಅಚ್ಚರಿ ಮೂಡಿಸುವಂತೆ ಇರುವುವು. 'ಕವಿರಾಜಮಾರ್ಗ" ಕರ್ತೃವಿನ "ಕುರಿತೋದದೆಯುಂ ಕಾವ್ಯಪ್ರಯೋಗ ಪರಿಣತ ಮತಿಗಳ್" ಎನ್ನುವ ಉದ್ಗಾರದ ಪ್ರತ್ಯಕ್ಷ ಅನುಭವ. 

ಕುಮಾರವ್ಯಾಸ ಭಾರತ ವಾಚನದ ಮೊದಲ ದಿನ. ಆದಿ ಪರ್ವದ "ಪೀಠಿಕಾ ಸಂಧಿ" ವಾಚನ. ಎರಡನೆಯ ಪದ್ಯ ಪಾರ್ವತೀರಮಣನಾದ ಪರಶಿವನ ಸ್ತುತಿ. ಆ ಪದ್ಯ ಹೀಗುಂಟು:

ಶರಣಸಂಗವ್ಯಸನ ಭುಜಗಾ 
ಭರಣನಮರ ಕಿರೀಟಮಂಡಿತ 
ಚರಣ ಚಾರುಚರಿತ್ರ ನಿರುಪಮ ಭಾಳಶಿಖಿನೇತ್ರ 
ಕರಣರ್ನಿರ್ಮಲ ಭಜಕರಘ ಸಂ 
ಹರಣ ದಂತಿ ಚಮೂರು ಚರ್ಮಾ೦
ಬರನೆ ಸಲಹುಗೆ ಭಕುತ ಜನರನು ಪಾರ್ವತೀರಮಣ 

ಶಂಭುವೋ ಎಲ್ಲರಿಗೂ ಪ್ರಿಯನು. "ಚರ್ಮಾ೦ಬರ" ಎನ್ನುವುದರ ಬಗ್ಗೆ ಒಬ್ಬರು ಪ್ರಶ್ನೆ ಎತ್ತಿದರು. ಅದರ ಹಿಂದೆ ಇರುವ "ದಂತಿ" ಮತ್ತು "ಚಮೂರು" ಪದಗಳ ಚರ್ಚೆಯಾಯಿತು. ದಂತಿ ಎಂದರೆ ಸಂಸ್ಕೃತದಲ್ಲಿ ಆನೆ ಎಂದು. ದಂತವುಳ್ಳದ್ದು ದಂತಿ. ಆನೆಯ ದಂತಗಳು ಎಲ್ಲರಿಗೆ ಗೊತ್ತು. ಗಜಾಸುರ ಎನ್ನುವ ರಾಕ್ಷಸ ಆನೆಯ ರೂಪದಲ್ಲಿ ಸಜ್ಜನರಿಗೆ ತೊಂದರೆ ಕೊಡುತ್ತಿದ್ದ. ಶಂಕರನು ಅವನನ್ನು ಕೊಂದು ಅವನ ಚರ್ಮವನ್ನು ಸುಲಿದು ಮೈಗೆ ಸುತ್ತಿಕೊಂಡ ಎಂದು ಕಥೆ. ಚಮೂರು ಅನ್ನುವುದು ಹಿಮಾಲಯದಂತಹ ಪ್ರದೇಶಗಳಲ್ಲಿ ಕಂಡುಬರುವ ಜಿಂಕೆಯ ರೀತಿಯ ಒಂದು ಮೃಗ. "ಚಮರೀ ಮೃಗ" ಅನ್ನುತ್ತಾರೆ ("ಯಾಕ್" ಮೃಗ). ಅದರ ಚರ್ಮವೂ ಅವನಿಗೆ ಆಗಬಹುದು. ಪಟ್ಟೆ-ಪೀತಾಂಬರಗಳ ಹವ್ಯಾಸವಿಲ್ಲ. ಶ್ರೀಹರಿಯಂತೆ 'ಸಪೀತವಸ್ತ್ರ" ಅಥವಾ "ಕನಕಾಂಬರಧಾರಿ" ಅಲ್ಲ. ಹೀಗೆ ಅರ್ಥವ್ಯಾಪ್ತಿ. ಸದಾಶಿವನು ವೈರಾಗ್ಯ ಮೂರ್ತಿ. ಬೂದಿಯೇ ಆಭರಣ. ಉಡುಗೆ-ತೊಡುಗೆಗಳಲ್ಲಿ ಆಸಕ್ತಿ ಇಲ್ಲ. ಹೀಗೆ ಚರ್ಚೆ ನಡೆಯಿತು. 

ಮೊದಲ ಎರಡು ಪದ್ಯಗಳ ವಾಚನ-ಚರ್ಚೆಯಲ್ಲಿ ಅಂದಿನ ಕಾರ್ಯಕ್ರಮ ಮುಗಿಯಿತು. 

*****

ಮಾರನೆಯ ದಿನ ಸೋಮವಾರ. ಬೆಳಿಗ್ಗೆ ಎದ್ದಾಗ ಅಪರೂಪಕ್ಕೆ ಚಿಕ್ಕವರು (ತಮ್ಮ) ಸಿಕ್ಕರು.  ಸೋಮವಾರ ಪರಶಿವನ ದಿನ. ಅವಧೂತರೊಬ್ಬರು ಪಕ್ಕದ ಗುಡ್ಡದ ಮೇಲೆ ಒಂದು ಆಶ್ರಮ ಕಟ್ಟಿಕೊಂಡು ವಾಸಿಸುತ್ತಿದ್ದರು. ಅವರದು ಸೋಮವಾರ ವಿಶೇಷ ಪೂಜೆ. ಇವರು ಹೊರಟಿದ್ದರು. ನನ್ನನ್ನು ಕಂಡು ನಿಂತರು. 

"ಈದಿನ ಬೆಳಿಗ್ಗೆ ಏನು ನಿನ್ನ ಕಾರ್ಯಕ್ರಮ?'

"ಏನಿಲ್ಲ. ಸುಮ್ಮನೆ ಕಾಲ ಕಳೆಯುವುದು. ಸಂಜೆಯ ವಾಚನದವರೆಗೆ"

"ಗುಡ್ಡದ ಅವಧೂತರ ಕಾರ್ಯಕ್ರಮಕ್ಕೆ ಬರಬಹುದಲ್ಲ?"

"ಬರಬಹುದಾದರೆ ಬರುತ್ತೇನೆ"

"ಬೇಗ ತಯಾರಾಗಿ ಬಾ"

ಅಲಂಕಾರ ಮಾಡಿಕೊಳ್ಳುವ ಅವಶ್ಯಕತೆಯಿರಲಿಲ್ಲ. ತಕ್ಷಣ ಹೊರಟೆ. ಅವರೊಡನೆ ಮಾತಾಡುತ್ತಿದು ಬಹಳ ಕಡಿಮೆ. ದೊಡ್ಡವರಂತೆ ಸಲಿಗೆ ಇರಲಿಲ್ಲ. ಸ್ವಲ್ಪ ಸಂಕೋಚವೇ. ಗುಡ್ಡಕ್ಕೆ ಸುಮಾರು ಇಪ್ಪತ್ತು ನಿಮಿಷಗಳ ನಡಿಗೆ. ಹೆಜ್ಜೆ ಹಾಕಿದೆವು. 

"ನಿನ್ನಿನ ವಾಚನದಲ್ಲಿ ಏನು ವಿಶೇಷ?"

"ಮುಖ್ಯವಾಗಿ "ಚರ್ಮಾ೦ಬರ" ಎನ್ನುವುದರ ಬಗ್ಗೆ ಚರ್ಚೆ ನಡೆಯಿತು"

"ಚರ್ಮಾ೦ಬರ" ಎನ್ನುವುದರಲ್ಲಿ ಇನ್ನೂ ಏನಾದರೂ ವಿಶೇಷವಿದೆಯೋ?"

"ಅಂದರೆ ಅರ್ಥವಾಗಲಿಲ್ಲ"

"ಮನಸ್ಸು, ಬುದ್ಧಿ, ಅಹಂಕಾರ, ಚಿತ್ತ, ಚೇತನ ಎಂದು ಕೇಳಿದ್ದೆಯಲ್ಲ?"

"ಕೇಳಿದ್ದೇನೆ"

"ಬುದ್ಧಿ ಇರುವುದು ಎಲ್ಲಿ?"

"ತಲೆಯಲ್ಲಿ. ಮೆದುಳಿನಲ್ಲಿ"

"ಮನಸ್ಸು ಇರುವುದು ಎಲ್ಲಿ?"

ಉತ್ತರ ಗೊತ್ತಿರಲಿಲ್ಲ. ಸುಮ್ಮನಾದೆ. 

"ನನ್ನ ಮನಸ್ಸು ಅನ್ನುತ್ತೇವೆ. ಅದು ನಮ್ಮ ಬಳಿಯೇ ಇರಬೇಕಲ್ಲ?"

"ಹೌದು"

"ಹಾಗಿದ್ದರೆ, ಅದಕ್ಕೆ ನಮ್ಮ ದೇಹದಲ್ಲಿ ಎಲ್ಲಿ ಜಾಗ? ಹೃದಯ ಎದೆ ಗೂಡಿನ ಎಡದಲ್ಲಿದೆ ಅನ್ನುತ್ತೇವೆ. ಮಾತು ನಾಲಗೆಯಲ್ಲಿ ಅನ್ನಬಹುದು. ಬುದ್ಧಿ ಮೆದುಳಿನಲ್ಲಿದೆ. ಅದು ತಲೆಯಲ್ಲಿದೆ ಅನ್ನುತ್ತೇವೆ. ಮನಸ್ಸಿಗೆ ಎಲ್ಲಿ ಜಾಗ?"

"ಅದೂ ತಲೆಯಲ್ಲಿಲ್ಲವೇ?'

"ಮನಸ್ಸು ಒಂದು ಕಡೆ ಸುಮ್ಮನೆ ಕೂಡುವುದಲ್ಲ. ಮನಸ್ಸು ಸರ್ವವ್ಯಾಪಿ. ಅದು ದೇಹದಲ್ಲೆಲ್ಲಾ ಆವರಿಸಿದೆ"

"ಸರಿ ಅನ್ನಿಸುತ್ತದೆ"

"ಮಹಾರುದ್ರದೇವರು ಮನೋಭಿಮಾನಿ. ಮನಸ್ಸನ್ನು ನಿಯಂತ್ರಿಸುವವರು. ಆದ್ದರಿಂದ ಅವರು ಮನಸ್ಸು ಇರುವ ಎಲ್ಲೆಡೆ, ಅಂದರೆ ನಮ್ಮ ದೇಹದ ಎಲ್ಲ ಕಡೆಗಳಲ್ಲಿಯೂ ವ್ಯಾಪಿಸಿದ್ದಾರೆ"

"............... "

"ದೇಹದ ಎಲ್ಲೆಡೆ ಅವರು ವ್ಯಾಪಿಸಿರುವುದರಿಂದ ಅವರ ಹೊರಗಡೆ ಇರುವುದು ಏನು?"

"ನಮ್ಮ ದೇಹದ ಹೊರಗಡೆ, ಎಲ್ಲಕಡೆ ನಮ್ಮ ಚರ್ಮವಿದೆ"

"ಅಂದರೆ ಅವರು ಧರಿಸಿರುವುದು ನಮ್ಮ ಚರ್ಮವೇ ಅನ್ನಬಹುದೇ?"

"ಹಾಗೆ ಹೇಳಬಹುದು"

"ಆದ್ದರಿಂದ ಮನೋಭಿಮಾನಿ ರುದ್ರ ದೇವರು "ಚರ್ಮಾ೦ಬರ" ಅಲ್ಲವೇ?"

"ಹೌದು. ಇದು ನನಗೆ ಹೊಳದೇ ಇರಲಿಲ್ಲ"

"ಸಾಮಾನ್ಯವಾಗಿ ಹೊಳೆಯುವುದಿಲ್ಲ. ಒಮ್ಮೆ ಅವಧೂತರು ನನಗೆ ಹೀಗೆ ಹೇಳಿದರು"

"ಹಾಗಿದ್ದರೆ ನಿನ್ನೆ ಮಾಡಿದ ಚರ್ಚೆ ಅರ್ಥ ತಪ್ಪೇ?"

"ಖಂಡಿತವಾಗಿಯೂ ತಪ್ಪಲ್ಲ. ಆದರೆ, ಅದು ಹೊರಗಿನ, ಅಂದರೆ ಬ್ರಹ್ಮಾಂಡದ ದೃಷ್ಟಿಯ ಅರ್ಥ. ಇದು ಒಳಗಿನ, ಅಂದರೆ ಪಿಂಡಾಂಡದ ದೃಷ್ಟಿಯ ಅರ್ಥ"

"ಬಲು ಚಮತ್ಕಾರಿಕವಾಗಿದೆ"

"ಮೊದಲು ಹಾಗೆನ್ನಿಸುವುದು. ತಿಳಿದವರ ಜೊತೆ ಸಂಗ ಮಾಡಿದಾಗ ಅನೇಕ ಒಳ ಅರ್ಥಗಳು ತೆರೆದುಕೊಳ್ಳುತ್ತವೆ"

ಅವಧೂತರ ಆಶ್ರಮ ಬಂದಿತು. ಒಳಗೆ ಹೋದೆವು. 

*****

ಯಾರಾದರೂ "ಕುಮಾರವ್ಯಾಸ ಭಾರತ ಓದಿದ್ದೀರಾ?" ಎಂದು ಕೇಳಿದರೆ "ಒಹೋ, ನಾಲ್ಕು ಬಾರಿ ಓದಿದ್ದೇನೆ" ಎನ್ನುತ್ತೇವೆ. ಓದಿರಬಹುದು. ನಿಜ. ಎಷ್ಟು ಅರ್ಥವಾಯಿತು? ಒಂದು ಪದ್ಯದ ಒಂದು ಪದಕ್ಕೆ ಇಷ್ಟು ವ್ಯಾಖ್ಯಾನ ತಿಳಿದವರು ಮಾಡುತ್ತಾರೆ. ನಿಜವಾಗಿ ನಮಗೇನು ಗೊತ್ತು? ಎಷ್ಟು ಗೊತ್ತು? 

ಅಧ್ಯಯನ ಹೆಚ್ಚಿದಂತೆಲ್ಲಾ ಅರಿವು ಬೆಳೆದು ಅಹಂಕಾರ ಕ್ರಮೇಣ ಕರಗವುದು. ತಿಳಿದಿರುವುದು ಗುಲಗಂಜಿಯಷ್ಟು. ಎದುರಿಗಿರುವುದೋ ಹಿಮಾಲಯ!

Saturday, October 4, 2025

ಹತ್ತು ರೀತಿಯ ಮಾತಿನ ದೋಷಗಳು


ಕೆಲವರು ಮಾತನಾಡಿದರೆ ಚೆನ್ನ. ಇನ್ನಷ್ಟು ಕೇಳಬೇಕು ಅನಿಸುವುದು. ಮತ್ತೆ ಕೆಲವರು ಸುಮ್ಮನಿದ್ದರೆ ಚೆನ್ನ. ಮಾತನಾಡುವುದು ಯಾವಾಗ ನಿಲ್ಲಿಸುತ್ತಾರೋ ಎಂದು ಕಾಯಬೇಕಾಗುವುದು. ಎಷ್ಟು ಬೇಕೋ ಅಷ್ಟು ಮಾತ್ರ ಮಾತಾಡಿದರೆ ಬಲು ಚೆನ್ನ. ಅತಿಯಾಗಿ ಮಾತಾಡಿದರೆ ಕಷ್ಟ. "ಒಡಕು ಮಡಕೆಗೆ ಕಲ್ಲು ಹಾಕಿದಂತೆ" ಆಗಬಾರದು. ಏನು ಹೇಳಬೇಕೆಂದಿದ್ದಾರೋ ಅದನ್ನು ಸರಿಯಾಗಿ, ಪೂರ್ತಿಯಾಗಿ ಹೇಳದೆ ಕಡಿಮೆ ಮಾತಾಡಿದರೆ ಇನ್ನೂ ಕಷ್ಟ. "ಮಾತೇ ಆಡದಿದ್ದರೆ ಅರ್ಥವಾಗುವುದಾದರೂ ಹೇಗೆ?" ಎಂದು ಉದ್ಗರಿಸುವುದು ಆಗಾಗ ಅಲ್ಲಲ್ಲಿ ಕೇಳಿ ಬರುವುದು. 

"ಮಾತು ಬೆಳ್ಳಿ; ಮೌನ ಬಂಗಾರ" ಎಂದೊಂದು ಗಾದೆ. ಆದರೆ "ಮೌನದಿಂದಲೇ ಕೊಲ್ಲುತ್ತಾಳೆ" ಎಂದು ಹೇಳುವುದು ಕೇಳಿದ್ದೇವೆ. "ಹರಿತದ ಮಾತಿನಿಂದ ಇರಿಯುತ್ತಾನೆ" ಎಂದು ಕೆಲ ಸಂದರ್ಭಗಳಲ್ಲಿ ಹೇಳುವುದೂ ಉಂಟು. ಆಗ ಮಾತು ಕತ್ತಿಗಿಂತಲೂ ಹರಿತ. ವೈಶಂಪಾಯನ ಸರೋವರದಲ್ಲಿ ಜಲಸ್ತ೦ಭನ ಮಾಡಿ ವಿಶ್ರಾಂತಿ ಪಡೆಯುತ್ತಿದ್ದ ದುರ್ಯೋಧನನಿಗೆ ಭೀಮಸೇನನ ಬಿರುಸು ಗದೆಯ ಹೊಡೆತಕ್ಕಿಂತ ಮಾತಿನ ಇರಿತ ತಾಳದಾಯಿತು. ದೊಡ್ಡವರ ಸಾಂತ್ವನದ ನುಡಿಗಳು ಅದಕ್ಕೆ ತದ್ವಿರುದ್ಧ. "ಅವರ ಮಾತಿನಿಂದ ಎಷ್ಟೋ ಸಮಾಧಾನವಾಯಿತು" ಎಂದು ಕೆಲವೊಮ್ಮೆ ಅನಿಸುವುದು. "ಅವನೊಡನೆ ಮಾತಾಡಿದ್ದೇ ತಪ್ಪಾಯಿತಲ್ಲ. ಮನಸ್ಸು ಇನ್ನೂ ಉದ್ವಿಗ್ನವಾಯಿತು" ಅನ್ನುವ ಪರಿಸ್ಥಿತಿಗಳೂ ಉಂಟು. ಮಾತಿಗೆ ತೂಕ ಇರಬೇಕು. ತೂಕದ ಮಾತು ಬೇಕು. ಕೆಲವೊಮ್ಮೆ ಮಾತು ಬೇಕು. ಮತ್ತೆ ಕೆಲವೊಮ್ಮೆ ಮಾತೇ ಬೇಡ. 

ಮನುಷ್ಯರಿಗೂ ಪ್ರಾಣಿಗಳಿಗೂ ಇರುವ ಅನೇಕ ಭೇದಗಳಲ್ಲಿ ಈ ಮಾತನಾಡುವ ಶಕ್ತಿಯೂ ಒಂದು. ಒಂದು ಮಗು ಹುಟ್ಟಿದ ತಕ್ಷಣ ಸಂಭ್ರಮ ಆವರಿಸುತ್ತದೆ. ಆ ಮಗು ತೊದಲು ನುಡಿಗಳನ್ನು ಆಡಲು ಆರಂಭಿಸಿದಾಗ ಇನ್ನೂ ಸಂಭ್ರಮ. ಅರ್ಥವಾಗುವಂತೆ ಮಾತಾಡಿದರೆ ಮತ್ತಷ್ಟು ಸಂತಸ. ಆದರೆ ಜೀವನ ಪೂರ್ತಿ ತೊದಲುತ್ತಾ ಮಾತನಾಡುತ್ತಿದ್ದರೆ ಅದು ಹೇಗೆ? ಅದನ್ನು ಹೆತ್ತ ತಂದೆ-ತಾಯಿಯರಿಗೆ ಅದೊಂದು ಘೋರ ಕಷ್ಟ. ಮಗು ದೊಡ್ಡದಾದರೂ ಮಾತೇ ಬರದಿದ್ದರೆ ಹೇಳಲಾಗದ ವೇದನೆ. ಕಂಡ ಕಂಡ ವೈದ್ಯರಿಗೆಲ್ಲಾ ತೋರಿಸುವುದು ನಡೆಯುತ್ತದೆ. 

ಹೆಸರಾಂತ ನಟ, ನಿರ್ಮಾಪಕ, ನಿರ್ದೇಶಕ ಮನೋಜ ಕುಮಾರನ "ಶೋರ್" ಅನ್ನುವ ಹಿಂದಿ ಚಲನಚಿತ್ರದ ಕಥೆ ಅದೇ. ಅವನಿಗೆ ಹುಟ್ಟಿದ ತನ್ನ ಮಗ ಮಾತಾಡುವುದಿಲ್ಲ ಎಂದು ಆತಂಕ. ಪ್ರಪಂಚದ ಬೇರೆಲ್ಲಾ ಶಬ್ದಗಳೂ ಅವನನ್ನು ಹಿಂಸೆ ಮಾಡುತ್ತವೆ. ಅವನು ಕೇಳಬೇಕೆಂದಿರುವ ಒಂದೇ ಶಬ್ದವೆಂದರೆ ಮಗನ ಮಾತು. ಆದರೆ ಅವನು ಮಾತಾಡುವುದಿಲ್ಲ. ಕಡೆಗೊಂದು ದಿನ ಒಬ್ಬ ವೈದ್ಯರು ಮಗನಿಗೆ ಶಸ್ತ್ರ ಚಿಕಿತ್ಸೆ ಮಾಡಿ ಮಾತು ಬರಿಸುತ್ತಾರೆ. ಇನ್ನೇನು ಆಸ್ಪತ್ರೆಗೆ ಹೋಗಿ ಮಗನ ಮಾತು ಕೇಳಬೇಕು ಅನ್ನುವ ಸಮಯ. ಆಸ್ಪತ್ರೆಗೆ ಹೋಗುವ ದಾರಿಯಲ್ಲಿ ಅಪಘಾತ. ಅಪಘಾತದಲ್ಲಿ ತಂದೆಗೆ ಶ್ರವಣ ಶಕ್ತಿ ಹೋಗುತ್ತದೆ. ಅಪ್ಪ ಕಿವುಡನಾಗುತ್ತಾನೆ. ಈಗ ಮಗ ಮಾತಾಡುತ್ತಾನೆ. ಆದರೆ ತಂದೆ ಕೇಳಲಾರ. ಅದೊಂದು ವಿಪರ್ಯಾಸ. 

ಒಟ್ಟಿನಲ್ಲಿ ಮಾತು ಒಂದು ಪ್ರಶ್ನೆಯೇ!
*****

ಹುಟ್ಟಿದಂದಿನಿಂದ ಮಾತು ಹೊರಡದೇ ಇರುವುದು ಒಂದು ರೀತಿಯ ದೋಷ. ಅವರನ್ನು "ಮೂಕ' ಎನ್ನುತ್ತೇವೆ. ಕೆಲವರಿಗೆ ಕಿವಿ ಕೇಳದೆ, ಮಾತು ಬರೆದೇ ಇರುವುದು ಉಂಟು. ಇವರು "ಮೂಕ-ಬಧಿರರು" ಅಥವಾ "ಕಿವುಡು-ಮೂಗರು". ಇದೊಂದು ರೀತಿಯ ದೋಷ. ಹಾಗೆಯೇ ಮಾತನಾಡಬಲ್ಲ ಕೆಲವರಿಗೆ ಸರಿಯಾಗಿ ಮಾತನಾಡಲು ಆಗುವುದಿಲ್ಲ. ಕೆಲವರನ್ನು "ಮೂಗಿನಲ್ಲಿ ಮಾತಾಡುತ್ತಾನೆ" ಅನ್ನಬಹುದು. ಏನೋ ಒಂದು ವಿಕಾರ ಅಥವಾ ಕೊರತೆ. "ಎಲ್ಲರಂತೆ ನಾನಿಲ್ಲ" ಎಂದು ಅವರಿಗೆ ದುಃಖ. ಹೆತ್ತವರಿಗೆ "ಇದೇನು, ಹೀಗೆ ಆಯಿತಲ್ಲ?" ಎನ್ನುವ ಚಿಂತೆ. ಕೆಲವರಿಗೆ ಅವರನ್ನು ನೋಡಿ ಅಪಹಾಸ್ಯ ಮಾಡುವ ಗೀಳು. ಉಳಿದವರಿಗೆ ಅವರನ್ನು ಕಂಡಾಗ ಮರುಕ. ಒಟ್ಟಿನಲ್ಲಿ ಏನೋ ಒಂದು "ಸರಿಯಿಲ್ಲ" ಅನ್ನುವ ಸ್ಥಿತಿ. 

ಕೆಲವರಿಗೆ ಮಾತು ಬರದೇ ಪೂರ್ತಿ ಜೀವನ ಹಾಗೆಯೇ ನಡೆಯಬಹುದು. ಮತ್ತೆ  ಕೆಲವರಿಗೆ ಮೊದಲು ಮಾತು ಬರದಿದ್ದರೂ ಮುಂದೆಂದೋ, ಶಸ್ತ್ರ ಚಿಕಿತ್ಸೆಯಿಂದ ಅಥವಾ ಮತ್ತ್ಯಾವುದೋ ಕಾರಣದಿಂದ ಮಾತು ಬರಬಹುದು. ಚೆನ್ನಾಗಿ ಮಾತು ಬಂದು ಜೀವನ ನಡೆಸುತ್ತಿರುವವರಿಗೆ ಮುಂದೆಂದೋ ಮಾತಿನ ತೊಂದರೆ ಬರುವುದೂ ಇದೆ. ತೊದಲುವುದು, ಶಬ್ದ ಸರಿಯಾಗಿ ಹೊರಡದಿರುವುದು, ಆಗಾಗ ಮಾತು ನಿಲ್ಲುವುದು, ಮುಂತಾದುವು ಆಗುತ್ತವೆ. ಅನೇಕ ಕಾಯಿಲೆಗಳಿಂದ ಮಾತು ಹೆಚ್ಚು-ಕಡಿಮೆ ಆಗಬಹುದು. ಕೆಲವರಿಗೆ ಹಗಲೆಲ್ಲಾ ಮಾತು ಸರಿಯಿದ್ದು ಸಂಜೆ ಆಗುತ್ತಿದ್ದಂತೆ ಆಯಾಸದಿಂದ ಮಾತು ತೊದಲಬಹುದು. ಅಪಘಾತಗಳಿಂದ ಮಾತೇ ನಿಂತುಹೋಗಬಹುದು. ಹೀಗೆ ಹಲವು ರೀತಿ. ನಾವು ನಮ್ಮ ಸುತ್ತ-ಮುತ್ತ ಕಂಡಂತೆ. 

ಹೀಗೆ ಮಾತಿನಲ್ಲಿ ವ್ಯತ್ಯಾಸ ಆಗುವುದು ದೈಹಿಕ ಕಾರಣಗಳ ಜೊತೆ ಮಾನಸಿಕ ಮತ್ತು ಬೌದ್ಧಿಕ ಕಾರಣಗಳಿಂದಲೂ ಉಂಟು. ಕೆಲವು ಮಕ್ಕಳಿಗೆ ಹಿಂದೆ ತಮಗೆ ಹೊಡೆತ ಮೊದಲಾದ ಹಿಂಸೆ ಕೊಟ್ಟವರ ಮುಂದೆ ಮಾತು ಹೊರಡುವುದಿಲ್ಲ. ಚೆನ್ನಾಗಿ ತಯಾರಿ ಮಾಡಿಕೊಂಡು ಸಂದರ್ಶನಕ್ಕೆ (ಇಂಟರ್ವ್ಯೂ) ಹೋದವನಿಗೆ ಅಲ್ಲಿ ಕುಳಿತಾಗ ಆತಂಕದಿಂದ ಮಾತು ಹೊರಡದು. ಹೀಗೆ ಹಲವು ವಿಧ. 

*****
ತಿಳಿದವರು "ಹತ್ತು ರೀತಿಯ ಮಾತಿನ ತೊಂದರೆ" ಇವೆ ಎಂದು ಹೇಳುತ್ತಾರೆ. ಇವು ದೈಹಿಕ, ಬೌದ್ಧಿಕ ಮತ್ತು ಮಾನಸಿಕ ಕಾರಣಗಳು ಒಂದೊಂದರಿಂದ ಅಥವಾ ಎರಡು, ಮೂರು ಸೇರುವುದರಿಂದ ಆಗಬಹುದು. ಇವುಗಳಲ್ಲಿ ಕೆಲವಕ್ಕೆ ಇರುವ ವ್ಯತ್ಯಾಸ ಬಹಳ ತೆಳುವಾದದು. ಒಂದನ್ನು ಇನ್ನೊಂದಕ್ಕೆ ತಪ್ಪಾಗಿ ತಿಳಿಯಬಹುದು.ಈ ಹತ್ತು  ದೋಷಗಳು ಯಾವುವು ಎಂದು ನೋಡೋಣ. 
  1. ಅಜ್ಞಾನ (ತಿಳಿಯದಿರುವುದು): ಏನು ಮಾತನಾಡಬೇಕೆಂದು ತಿಳಿಯದೇ ಮೂಕರಾಗುವುದು. "ಏನು ಹೇಳಬೇಕೆಂದು ಗೊತ್ತಾಗಲಿಲ್ಲ" ಎಂದು ನಂತರ ಅನ್ನಬಹುದು. ಹೀಗೆ ಮಾತನಾಡಿದರೆ ಸರಿಯೋ, ತಪ್ಪೋ ಎನ್ನುವ ಭೀತಿ ಇರಬಹುದು. ಹೇಗೆ ಪ್ರಾರಂಭಿಸಬೇಕು ಎಂದು ಗೊತ್ತಾಗದಿರಬಹುದು.  ವಿಷಯದ ಪರಿಚಯ ಇಲ್ಲದಿರುವುದರಿಂದ ಆಗಬಹುದು. 
  2. ವಿಸ್ಮೃತಿ (ಮರೆವು): ಮೊದಲು ವಿಷಯ ಚೆನ್ನಾಗಿ ತಿಳಿದಿದ್ದರೂ ಮಾತನಾಡಬೇಕಾದಾಗ ನೆನಪು ಕೈಕೊಡುವುದು. ಬಹಳ ತಯಾರಿ ನಡೆಸಿದ್ದರೂ ಬೇಕಿದ್ದಾಗ ಅದು ಹೊಳೆಯಲಿಲ್ಲ. ಒಂದೇ ವಿಷಯವನ್ನು ಹತ್ತಾರು ಬಾರಿ ಪಾಠ ಹೇಳಿದ್ದರೂ ಕೆಲವರಿಗೆ ಈ ಕಾರಣದಿಂದ ತೊಂದರೆ ಆಗುವುದು. ಪಾಠ ಮುಗಿಸಿ ಹೊರಬಂದ ನಂತರ ಅದೇ ವಿಷಯ ಮತ್ತೆ ನೆನಪಿಗೆ ಬರುವುದುಂಟು. 
  3. ಭ್ರಾಂತಿ (ಭ್ರಮೆ): ಕೆಲವು ಲಕ್ಷಣಗಳಿಂದ ಒಂದನ್ನು ಇನ್ನೊಂದಾಗಿ ತಿಳಿಯುವುದು. ಬೆಳ್ಳಗಿರುವುದರಿಂದ ಸುಣ್ಣದ ನೀರನ್ನು ಹಾಲೆಂದು ತಿಳಿಯುವುದು. ಹಗ್ಗವನ್ನು ಹಾವೆಂದು ಭ್ರಮಿಸುವುದು. ಈ ಕಾರಣದಿಂದ ಮಾತಿನಲ್ಲಿ ವ್ಯತ್ಯಾಸ. 
  4. ಸಂಶಯ (ಅನುಮಾನ): ಮಾತಾಡುತ್ತಿರುವ ವಿಷಯದಲ್ಲಿ ಅನೇಕ ಅನುಮಾನಗಳ ಕಾರಣ ಮಾತು ಸರಿಯಾಗಿ ಹೊರಡದಿರುವುದು. ತಲೆಯಲ್ಲಿ ವಿಷಯ ಕಲಸು-ಮೇಲೋಗರ. ಹೀಗೆ ಹೇಳಿದರೆ ಹೇಗೋ? ಹಾಗೆ ಹೇಳಿದರೆ ಹೇಗೋ? ಈ ರೀತಿಯ ಅಭಿವ್ಯಕ್ತಿಯಲ್ಲಿ ಅನುಮಾನ. 
  5. ಅಪಸ್ಮ್ರುತಿ (ತಪ್ಪು ತಿಳಿವಳಿಕೆ): ಭ್ರಾಂತಿಯ ಇನ್ನೊಂದು ರೂಪ. ಸ್ವಲ್ಪವೇ ವ್ಯತ್ಯಾಸ. ರಾಮಣ್ಣನವರ ವಿಷಯ ಗೊತ್ತು. ಭೀಮಣ್ಣನವರ ವಿಷಯವೂ ಗೊತ್ತು. ಆದರೆ ಮಾತಾಡುವಾಗ ಒಬ್ಬರ ಬದಲು ಇನ್ನೊಬರ ವಿಷಯ ಮಾತಾಡುತ್ತಾ ಹೋಗುವುದು. 
  6. ಕ್ಷಯ (ಕಡಿಮೆಯಾಗುವುದು): ಮೊದಲು ಮಾತು ಚೆನ್ನಾಗಿದ್ದರೂ ಮುಂದೆ ಅನೇಕ ಕಾರಣಗಳಿಂದ ಕ್ರಮೇಣ ಮಾತಿನ ಆಳ ಕಡಿಮೆ ಆಗುವುದು. ಶಬ್ದ ಸರಿಯಾಗಿ ಹೊರಡದಿರುವುದು. ಮಾತಾಡುವ ವಿಷಯಗಳು ಕಡಿಮೆಯಾಗುವುದು. ಹೇಳಿದ್ದೇ ಹೇಳುತ್ತಿರುವುದು. ಮುಂತಾದುವು. 
  7. ತಂದ್ರಾ (ಆಲಸ್ಯ): ತಂದ್ರಾ ಪದಕ್ಕೆ ತೂಕಡಿಕೆ ಎಂದು ಒಂದು ಅರ್ಥ. ಮಾತಿನಲ್ಲಿ ತೂಕಡಿಕೆ ಅಂದರೇನು? ಮಾತಿನ ಮಧ್ಯೆ ನಿಂತು ಹೋಗುವುದು. ಮಾತು ಆಡುತ್ತಿದ್ದಂತೆ ಸುಸ್ತಾಗುವುದು. ನಿದ್ದೆಯಲ್ಲಿ ಮಾತಾಡುತ್ತಿರುವಂತೆ ಅಸಂಗತವಾದ ಮಾತುಗಳು. ಹೀಗೆ. 
  8. ಕಂಪವಚ (ತೊದಲು ಮಾತು): ಉಗ್ಗುವುದು ಅನ್ನುತ್ತಾರೆ. ತೊದಲು ಮಾತು. ಮಾತಿನಲ್ಲಿ ಧೃಡತೆ ಇಲ್ಲ. ನಡುಗುವ ಧ್ವನಿ. ಕೇಳುವವರಿಗೆ ಹಿತವಿಲ್ಲ. ಕಂಪನದಿಂದ ಮಾತು ಹುಟ್ಟುವುದಾದರೂ ಇಲ್ಲಿ ಬೇಡವಾದ ಕಂಪನ. ಸಂಗೀತಗಾರರು ಹಾಡುವಾಗ ಬೇಕೆಂದು ಕಂಪಿಸುವ ಧ್ವನಿಯ ರೀತಿಯಲ್ಲ. ಅನವಶ್ಯಕ ಧ್ವನಿಯ ಅಲ್ಲಾಟ. 
  9. ಕೌ೦ಠ್ಯ (ಅಲ್ಲಲ್ಲಿ ನಿಂತುಹೋಗುವುದು): ನಿರರ್ಗಳ ಮಾತಿಲ್ಲ. ಮಾತಾಡುತ್ತಿದ್ದಾಗ ಅಲ್ಲಲ್ಲಿ ಬೇಡದ ಕಡೆ ಏನು ಹೇಳಬೇಕೆಂದು ತೋಚದಿರುವುದರಿಂದ ಮಾತು ನಿಂತುಹೋಗುವುದರಿಂದ ವಿಚಾರ ಸರಿಯಾಗಿ ಪ್ರಸ್ತುತವಾಗದು. ಕೇಳುಗರಿಗೆ ಹಿತದ ಅನುಭವವಿಲ್ಲ. ಪೂರ್ತಿ ಅರ್ಥವಾಗದೆ ಕೊರತೆಯ ಅನುಭವ. 
  10. ಇಂದ್ರಿಯೋದ್ಭವ (ಪಂಚೇಂದ್ರಿಯಗಳಿಂದ ಹುಟ್ಟಿದುದು): ಕಣ್ಣು, ಕಿವಿ, ನಾಲಿಗೆಗಳು ತಾಳ-ಮೇಳದಲ್ಲಿ  ಕೆಲಸ ಮಾಡಬೇಕು. ಹೀಗಾಗದೆ ಏರುಪೇರಾದರೆ ಮಾತಿನಲ್ಲಿ ವ್ಯತ್ಯಾಸ ಉಂಟಾಗುವುದು. ಇನ್ನೊಬ್ಬರು ಹೇಳಿದುದು ಕಿವಿಗೆ ಸರಿಯಾಗಿ ಕೇಳದಿದ್ದರೆ ಅವರು ಕೇಳಿದುದೊಂದು, ಇವರು ಹೇಳಿದುದೊಂದು. ನೋಡಿದುದು ಒಂದು. ಮಾತಾಡುತ್ತಿರುವುದು ಇನ್ನೊಂದರ ಬಗ್ಗೆ. ಹೀಗೆ. 
ಹೀಗೆ ಮಾತಿನಲ್ಲಿ ಹತ್ತು ವಿಧದ ದೋಷಗಳು. ಕೆಲವರಿಗೆ ಒಂದೊಂದೇ ದೋಷ ಕಾಡಬಹುದು. ಮತ್ತೆ ಕೆಲವರಿಗೆ ಒಂದಕ್ಕಿಂತ ಹೆಚ್ಚು ತೊಂದರೆ ಕೊಡಬಹುದು. ಕೆಲವರಿಗಂತೂ ಮಾತೇ ಬಾರದ ಮೂಗತನ. 

*****

ಹಿಂದೊಂದು ಸಂಚಿಕೆಯಲ್ಲಿ, "ಸರಸ್ವತಿದೇವಿಯ ರಂಗಮಂದಿರ" ಅನ್ನುವ ಶೀರ್ಷಿಕೆಯಡಿ ಶ್ರೀ ರಾಘವೇಂದ್ರ ಸ್ವಾಮಿಗಳ ಮೇಲೆ ತಾಯಿ ಶಾರದೆಯ ಕೃಪೆಯಾಗಿ "ಪರಿಮಳ" ಗ್ರಂಥ ಬಂತೆಂದು ಹೇಳಲಾದ ಸಂದರ್ಭ ನೋಡಿದ್ದೆವು. ಇಲ್ಲಿ ಕ್ಲಿಕ್ ಮಾಡಿ ಆ ಸಂಚಿಕೆ ಓದಬಹುದು. 

ಶ್ರೀ ರಾಘವೇಂದ್ರ ಸ್ವಾಮಿಗಳ ಸಾಕ್ಷಾತ್ ಶಿಷ್ಯರಾದ ಶ್ರೀ ಅಪ್ಪಣ್ಣಾಚಾರ್ಯರು ಅವರ ಪ್ರೀತಿಯ ಗುರುಗಳಾದ ರಾಯರ ಬಗ್ಗೆ ರಚಿಸಿರುವ ಒಂದು ಸ್ತೋತ್ರದಲ್ಲಿ ಈ ಹತ್ತು ಮಾತಿನ ದೋಷಗಳ ಬಗ್ಗೆ ಸೂತ್ರ ರೂಪದಲ್ಲಿ ವಿವರಣೆ ಕೊಟ್ಟಿದ್ದಾರೆ. ಅಷ್ಟು ಮಾತ್ರವಲ್ಲ. ಶ್ರೀ ರಾಘವೇಂದ್ರ ರಾಯರ ಕರುಣೆಯಿಂದ ಈ ರೀತಿಯ ಹತ್ತೂ ವಿಧದ ಮಾತಿನ ದೋಷಗಳು ನಿವಾರಣೆ ಆಗುತ್ತವೆ ಎನ್ನುತ್ತಾರೆ. ಆ ಶ್ಲೋಕ ಹೀಗಿದೆ:

ಅಜ್ಞಾನವಿಸ್ಮೃತಿಭ್ರಾಂತಿ ಸಂಶಯಾಪಸ್ಮೃತಿಕ್ಷಯಾ 
ತಂದ್ರಾಕಂಪವಚ: ಕೌ೦ಠ್ಯಮುಖಾಯೇ ಚೇಂದ್ರಿಯೋದ್ಭವಾ:
ದೋಷಾಸ್ತೇ ನಾಶಮಾಯಾಂತಿ ರಾಘವೇಂದ್ರ ಪ್ರಸಾದತಃ 

ಅನೇಕ ನುರಿತ ವೈದ್ಯರಿಂದ ನಿವಾರಣೆ ಸಾಧ್ಯವಾಗದ ಮಾತಿನ ದೋಷಗಳು ಗುರುರಾಯರ ಕರುಣೆಯಿಂದ ಪರಿಹಾರವಾಗಿವೆ ಎಂದು ಹೇಳುತ್ತಾರೆ. ಇದನ್ನು ನಂಬಬೇಕೇ ಅಥವಾ ಬೇಡವೇ ಅನ್ನುವುದು ಅವರವರಿಗೆ ಬಿಟ್ಟ ವಿಚಾರ.