Saturday, May 10, 2025

ಹರೆಯವೆಂಬ ಮಾಂತ್ರಿಕನ ಮಾಟ


ಹಿಂದಿನ ಒಂದು ಸಂಚಿಕೆಯಲ್ಲಿ "ಅನ್ನದ ಹಾಹಾಕಾರ" ಎನ್ನುವ ಶೀರ್ಷಿಕೆಯಡಿ 1965 ಮತ್ತು 1971 ಇಸವಿಗಳಲ್ಲಿ ನಡೆದ ಭಾರತ-ಪಾಕಿಸ್ತಾನದ ಯುದ್ಧಗಳ ಪ್ರಸ್ತಾಪ, ಆ ಕಾಲದ ಹಸಿದವರ "ಅನ್ನದ ಹಾಹಾಕಾರ", ಮತ್ತು "ಸಮಬಗೆಯ ಸಮ ಸುಖದ ಸಮ ದುಃಖದ, ಸಾಮರಸ್ಯದ ಸಾಮಗಾನ ಲಹರಿಯ ಮೇಲೆ ತೇಲಿ ಬರಲಿರುವ ಹೊಸ ನಾಡಿನ ಕಟ್ಟುವಿಕೆ" ಬಗ್ಗೆ ಖ್ಯಾತ ನವ್ಯ ಕವಿ ಪ್ರೊ. ಎಂ. ಗೋಪಾಲಕೃಷ್ಣ ಅಡಿಗರ "ಕಟ್ಟುವೆವು ನಾವು ಹೊಸ ನಾಡೊಂದನು" ಏನುವ ಕವನದ ಬಗ್ಗೆ ಸ್ವಲ್ಪ ವಿಚಾರ ಮಾಡಿದ್ದೆವು. ಇದನ್ನು ಮೆಲಕು ಹಾಕಿ ಓದಲು ಇಲ್ಲಿ ಕ್ಲಿಕ್ ಮಾಡಿ, 

ಎಲ್ಲಾ ಚೆನ್ನಾಗಿ ನಡೆಯುತ್ತಿರುವಾಗ ಯಾರಾದರೂ ಒಂದು ವಿಷಯ ಪ್ರಸ್ತಾಪ ಮಾಡಿ, ಸ್ವಲ್ಪ ಸಮಯದಲ್ಲಿಯೇ ಅದು ಎಡವಟ್ಟಾದರೆ "ನೀನು ಹೇಳಿದೆಯಪ್ಪಾ. ನೋಡು, ಹೇಗಾಯಿತು!" ಎಂದು ಉದ್ಗರಿಸುವುದು ವಾಡಿಕೆ. ಅದರಂತೆ ಅಂದೇ (22 ಏಪ್ರಿಲ್ 2025) ಕಾಶ್ಮೀರದ ಪಹಲ್ಗಮ್ ದುರಂತ ಉದ್ಭವಿಸಿ ಎರಡು ದೇಶಗಳ ನಡುವೆ ಮತ್ತೊಮ್ಮೆ ಕದನ ನಡೆದು, ಇಂದು "ಕದನವಿರಾಮ" ಘೋಷಣೆ ಆಗಿದೆ. ಘೋಷಣೆ ಆದರೂ ಅದು ಸ್ಥಿರವಾಗಿ ನಿಲ್ಲುವ ಲಕ್ಷಣಗಳು ಕಂಡುಬರುತ್ತಿಲ್ಲ. ಒಂದು ಶಾಶ್ವತ ಪರಿಹಾರ ಸಿಕ್ಕಿ ಶಾಂತಿಯುತ ಬಾಳ್ವೆಗೆ ಅವಕಾಶವಾಗಲಿ ಎಂದು ಪ್ರಾರ್ಥಿಸೋಣ. 

ಆರೋಗ್ಯವಂತ ಸಮಾಜ ನಿರ್ಮಾಣ ಎಲ್ಲರಿಗೂ ಬೇಕಾಗಿರುವ ಸ್ಥಿತಿ. ಅಡಿಗರ ಕವನದ ಸಾಲುಗಳನ್ನು ಮತ್ತೆ ನೆನಪು ಮಾಡಿಕೊಳ್ಳೋಣ. 

ಹೊಸ ನೆತ್ತರುಕ್ಕುಕ್ಕಿ ಆರಿ ಹೋಗುವ ಮುನ್ನ 
ಹರೆಯದೀ ಮಾಂತ್ರಿಕನ  ಮಾಟ ಮಸಳುವ ಮುನ್ನ 
ಉತ್ಸಾಹ ಸಾಗರದ ಉತ್ತುಂಗ ವೀಚಿಗಳ 
ಈ ಕ್ಷುಬ್ಧ ಸಾಗರವು ಬತ್ತಿಹೋಗುವ ಮುನ್ನ 

ಕಟ್ಟುವೆವು ನಾವು ಹೊಸ ನಾಡೊಂದನು 
ರಸದ ಬೀಡೊಂದನು; ಸುಖದ ಬೀಡೊಂದನು

ಇಲ್ಲಿ ಬರುವ "ಹರೆಯದ ಮಾಂತ್ರಿಕನ ಮಾಟ" ಎನ್ನುವುದರ ಬಗ್ಗೆ ಸ್ವಲ್ಪ ವಿಚಾರ ಮಾಡೋಣ. 

*****

ಸುಮಾರು ಎರಡು ದಶಕಗಳಿಗೂ ಹಿಂದಿನ ಮಾತು. ಜೊತೆಯಲ್ಲಿ ಉದ್ಯೋಗದಲ್ಲಿದ್ದ ಮಿತ್ರರೊಬ್ಬರ ಮನೆಗೆ ಯಾವುದೋ ಕಾರ್ಯ ನಿಮಿತ್ತ ಹೋಗಬೇಕಾಯಿತು. ಅನೇಕ ವರ್ಷಗಳ ಪರಿಚಯದಿಂದ ಬಂದಿದ್ದ ಸಲುಗೆ. ಅವರ ಮನೆ ಮಂದಿಯೆಲ್ಲಾ ಚೆನ್ನಾಗಿ ಗೊತ್ತು. ಅವರ ಮನೆಯ ಗೇಟ್ ಬಳಿ ಹೋಗುತ್ತಿದ್ದಾಗಲೇ ಮನೆಯ ಒಳಗಡೆ ನಡೆಯುತ್ತಿದ್ದ ವಾಗ್ವಾದ ಕೇಳಿಸುತ್ತಿತ್ತು. ಅವರ ಕುಟುಂಬದ ಎಲ್ಲರಿಗೂ ಗಂಟಲು ಸ್ವಲ್ಪ ದೊಡ್ಡದೇ. ಪ್ರೀತಿಯಿಂದ ಮಾತಾಡುತ್ತಿದ್ದರೂ ಜಗಳದಂತೆಯೇ ಇರುತ್ತಿತ್ತು. "ನಮ್ಮ ಮನೆಯಲ್ಲಿ ಗುಟ್ಟು ಅನ್ನುವುದೇ ಇಲ್ಲ ಸ್ವಾಮಿ. ನಮ್ಮ ಕುಟುಂಬದವರ ಮಾತೇ ಹಾಗೆ. ಏನು ಮಾತಾಡಿದರೂ ಬೀದಿಯವರಿಗೆಲ್ಲಾ ಗೊತ್ತು." ಎಂದು ಅವರೇ ತಮಾಷೆಗೆ ಹೇಳುತ್ತಿದ್ದರು.

ಅವರಿಗೆ ಒಬ್ಬ ಮಗ ಮತ್ತು ಒಬ್ಬ ಮಗಳು. ಇಬ್ಬರೂ ಮದುವೆಯ ವಯಸ್ಸಿಗೆ ಬಂದಿದ್ದರು. ಅವರಿಗೋ ಇನ್ನೆರಡು ವರ್ಷದಲ್ಲಿ ಉದ್ಯೋಗದಿಂದ ನಿವೃತ್ತಿ ಆಗುವುದಿತ್ತು. ಅದರೊಳಗೆ ಇಬ್ಬರಿಗೂ ಮದುವೆ ಮಾಡಿ ಜವಾಬ್ದಾರಿ ಕಳೆದುಕೊಳ್ಳಬೇಕು ಎಂದು ಅವರ ಆಸೆ. (ಮಕ್ಕಳಿಗೆ ಮದುವೆ ಮಾಡಿದರೆ ಒಂದು ಜವಾಬದ್ದಾರಿ ಕಳೆಯಿತು ಅನ್ನುವುದು ಒಂದು ಭ್ರಾಂತಿ. ಅನೇಕ ಸಲ ಅದು ಇನ್ನೂ ಹೆಚ್ಚಿನ ಜವಾಬ್ದಾರಿಗಳಿಗೆ ಹೆದ್ದಾರಿ ಆಗುವುದೂ ಉಂಟು. ಎಲ್ಲೊ ಕೆಲವರಿಗೆ ಸ್ವಲ್ಪ ನಿರಾಳ ಆಗಿರಬಹುದು). ಮಗಳು ಯಾವ ವರ ಬಂದರೂ ಒಂದಲ್ಲ ಒಂದು ಕಾರಣ ಹೇಳಿ ನಿರಾಕರಿಸುತ್ತಿದ್ದಳು. ಮಗನು ಯಾವ ಹುಡುಗಿ ಬಂದರೂ "ಸರಿ, ಒಪ್ಪಿದೆ." ಎನ್ನುತ್ತಿದ್ದ.  ಮನೆಯಲ್ಲಿ ನಡೆಯುತ್ತಿದ್ದ ಮಾತು-ಕತೆಯ ಹಿನ್ನೆಲೆ ಹೀಗಿತ್ತು. 

ಮನೆಯೊಳಗೆ ಹೋದ ಕೂಡಲೇ ವಿಷಯ ಗೊತ್ತಾಯಿತು. ಹಿಂದಿನ ದಿನ ಮಗನಿಗೆ ನೋಡಿದ್ದ ಹುಡುಗಿ ವಿಷಯ ಮಾತಾಡುತ್ತಿದ್ದರು. ಅಪ್ಪ-ಅಮ್ಮ-ತಂಗಿ ಮೂವರಿಗೂ ಹುಡುಗಿ ಇಷ್ಟವಿಲ್ಲ. ಮಗ ಮಾತ್ರ ಎಂದಿನಂತೆ ಈಗಲೂ ಒಪ್ಪಿದ್ದ. ನನ್ನನ್ನು ಹೊರಗಿನವನು ಎಂದು ಭಾವಿಸದೆ ಅವರ ಚರ್ಚೆ ಮುಂದುವರೆಯಿತು. "ಇವನು ಯಾವ ಹುಡುಗಿ ಬಂದರೂ ಒಪ್ಪಿದ್ದೇನೆ ಆನ್ನುತ್ತಾನೆ. ವಯಸ್ಸಿಗೆ ಬಂದರೆ ಕತ್ತೆಯೂ ಚನ್ನಾಗಿ ಕಾಣುತ್ತದೆ" ಎಂದರು ಅಪ್ಪ. ಮಗನಿಗೆ ನ್ಯಾಯವಾಗಿಯೇ ಕೋಪ ಬಂತು. ಘರ್ಷಣೆ ಆಗುವ ಹಂತಕ್ಕೆ ಮಾತು ಬೆಳೆಯುವ ಸೂಚನೆ ಕಂಡಿತು. ವಾತಾವರಣ ತಿಳಿಗೊಳಿಸಲು ನಾನು ಮಿತ್ರರನ್ನು ಕೇಳಿದೆ: "ನೀವು ಹೇಳಿದ್ದು ಅರ್ಥವಾಗಲಿಲ್ಲ. ವಯಸ್ಸಿಗೆ ಬಂದರೆ ಕತ್ತೆಯೂ ಚೆನ್ನಾಗಿ ಕಾಣುತ್ತದೆ ಎಂದಿರಿ. ಅಂದರೆ ಏನು ಅರ್ಥ? ಹುಡುಗ ಅಥವಾ ಹುಡುಗಿಗೆ ವಯಸ್ಸು ಬಂದರೆ ಕತ್ತೆ ಚೆನ್ನಾಗಿ ಕಾಣುತ್ತದೆ ಎಂದೋ, ಅಥವಾ ಕತ್ತೆಗೆ ವಯಸ್ಸು ಬಂದಾಗ ಅದು ಅದನ್ನು ನೋಡುವವರಿಗೆಲ್ಲಾ ಚೆನ್ನಾಗಿ ಕಾಣುತ್ತದೆ ಎಂದೋ? ನನಗೆ ತಿಳಿದಂತೆ ಕತ್ತೆಯ ಮರಿ ನೋಡಲು ಚೆನ್ನಾಗಿರುತ್ತದೆ" ಎಂದೆ. 

ವಾತಾವರಣ ತಿಳಿ ಆಯಿತು. "ನೀವು ಬಿಡಿ ಮಾರಾಯರೆ. ಎಲ್ಲದರಲ್ಲೂ ಹಾಸ್ಯ ಹುಡುಕುತ್ತೀರಿ" ಅಂದರು ಹುಡುಗನ ತಾಯಿ. ಕಾಫಿ ಮತ್ತು ಕೋಡುಬಳೆ ಹಿಡಿದು ಬಂದಿದ್ದರು. ಎಲ್ಲರ ಗಮನ ಅವುಗಳ ಕಡೆ ಹೋಯಿತು. ಕದನವಿರಾಮ ಬಂದಂತಾಯಿತು. ನನ್ನ ಕೆಲಸ ಮುಗಿಸಿ ಹೊರಟು ಬಂದೆ. ನಾನು ಹೊರಬಂದ ನಂತರ ಮಾತಿನ ಗುದ್ದಾಟ ಮುಂದುವರೆದಿರಬಹುದು. ಏನಾಯಿತು ಎಂದು ನಾನು ಅಕ್ಕ-ಪಕ್ಕದ ಮನೆಯವರನ್ನು ಕೇಳಲಿಲ್ಲ. 

*****

ಹರೆಯವೆಂಬ ಮಾಂತ್ರಿಕನ ಮಾಯಾಜಾಲ ಅಂತಹುದು. ಅದು ನಿಜಕ್ಕೂ ಮಾಟವೇ ಹೌದು. ಹಿಂದೆಲ್ಲ ಕೆಲವರು ಮಾಟ-ಮಂತ್ರಗಳನ್ನು ಬಹಳವಾಗಿ ನಂಬಿದ್ದರು. ಅಮಾವಾಸ್ಯೆಯ ಮಾರನೆಯ ದಿನ ಬೆಳಿಗ್ಗೆ ರಸ್ತೆಯಲ್ಲಿ ನಡೆದು ಹೋದರೆ ನಾಲ್ಕು ರಸ್ತೆಗಳು ಸೇರುವ ಕಡೆ ಕೆಂಪು ಹೆಚ್ಚಿದ ನಿಂಬೆಹಣ್ಣು ಹೋಳುಗಳು ಕಾಣುತ್ತಿದ್ದವು. ಓಡಾಡುವವರು ಕಷ್ಟಪಟ್ಟು ರಸ್ತೆಯ ಕೊನೆಯಲ್ಲಿ ಹಾದು ಅವುಗಳ ಮಧ್ಯೆ ಹೋಗುವುದನ್ನು ತಪ್ಪಿಸಿಕೊಳ್ಳುತ್ತಿದ್ದರು. ಊರಿನಲ್ಲಿ ಕೆಲವರು ಮದ್ದು ಹಾಕುವುದರಲ್ಲಿ ನಿಸ್ಸೀಮರು ಎಂದು ಪಿಸುಮಾತು ಕೇಳಿಬರುತ್ತಿತ್ತು. "ಅವರ ಮನೆಯಲ್ಲಿ ಏನನ್ನಾದರೂ ತಿಂದೀಯೆ, ಜೋಕೆ. ಮೊಸರನ್ನವನ್ನಂತೂ ನೋಡಲೂಬೇಡ" ಎಂದು ಮಕ್ಕಳಿಗೆ ತಾಯಂದಿರು ಎಚ್ಚರಿಸುತ್ತಿದ್ದರು. ಮದ್ದು ಹಾಕುವವವರಂತೆ ಊರಿನಲ್ಲಿ ಅದನ್ನು ತೆಗೆಯುವ ಪ್ರವೀಣರೂ ಇರುತ್ತಿದ್ದರು. 

ಮಾಂತ್ರಿಕನ ಮಾಟ ಮಕ್ಕಳಾಗಿದ್ದಾಗ ನಮಗೆ ನಿಜದಲ್ಲಿ ಕಂಡುಬರುತ್ತಿದ್ದುದು "ಮ್ಯಾಜಿಕ್ ಶೋ" ನಡೆದಾಗ. ಯಾರದೋ ಉಂಗುರ ಮಾಂತ್ರಿಕನ ಕೈಯಲ್ಲಿ ಕಂಡಾಗ, ಪಾತ್ರೆಯಲ್ಲಿ  ತೆಗೆದುಕೊಂಡು ಹಾಕಿದ ನೀರು ಪಾರಿವಾಳವಾಗಿ ಹಾರಿಹೋದಾಗ, ಬುಟ್ಟಿಯಲ್ಲಿ ಹಾಕಿದ ಒಂದು ಬಿಳಿಯ ಕರ್ಚೀಪು ಅನೇಕ ಬಣ್ಣಬಣ್ಣದ ಬಟ್ಟೆಗಳಾದಾಗ, ಮುಂತಾದ ಸಂದರ್ಭಗಳಲ್ಲಿ. ನಾವೂ ಮ್ಯಾಜಿಕ್ ಮಾಡುವುದು ಕಲಿಯಬೇಕು ಅನ್ನಿಸುವುದು ಆಗ. ಅವನು ಬಹಳ ಸುಲಭವಾಗಿ ಗಾಳಿಯಲ್ಲಿ ರೂಪಾಯಿ ನೋಟು ತೆಗೆದಾಗಲಂತೂ ಮ್ಯಾಜಿಕ್ ಕಲಿತರೆ ಎಷ್ಟು ಬೇಕಾದರೂ ದುಡ್ಡು ಮಾಡಬಹುದು ಎಂದು ಕನಸು. ಇಂತಹ ಮಾಂತ್ರಿಕ ಹೀಗೆ ಷೋಗಳನ್ನು ಮಾಡಿ ಯಾಕೆ ಜೀವಹ ಹೊರೆಯುತ್ತಾನೆ ಎಂದು ಯೋಚಿಸುವಷ್ಟು ಪ್ರಬುದ್ಧತೆ ಇರಲಿಲ್ಲ ಆ ದಿನಗಳಲ್ಲಿ. 

ಸ್ವಲ್ಪ ದೊಡ್ಡವರಾದ ಮೇಲೆ, ಹರೆಯ ಬಂದಾಗ, ಹೊಸ ನೆತ್ತರು ಉಕ್ಕಿದಾಗ, ಅನೇಕ ಸಾಧನೆಗಳನ್ನು ಮಾಡುವ ಕನಸುಗಳು ಹರಡಿದಾಗ, ಇವೆಲ್ಲದರ ಸಮಾಗಮ. ಏನನ್ನಾದರೂ ಸಾಧಿಸುತ್ತೇನೆ ಅನ್ನುವ ವಿಶ್ವಾಸ, ಛಲ, ಹಂಬಲ. ಅಡಿಗರು ಇವು ಮೂರನ್ನೂ ಸೇರಿಸುತ್ತಾರೆ. ಅನೇಕ ಕನಸುಗಳು ಕಾಮಧೇನುವಿನ ಹಾಲು ಹನಿಗಳಾಗಿ, ಹೊಸ ರಕ್ತ ಉಕ್ಕುತ್ತಿದ್ದಾಗ, ಇಂತಹ ಹರೆಯದ ಮಾಂತ್ರಿಕನ ಮಾಟ ಪೂರ್ತಿ ಆವರಿಸಿದಾಗ, ಆದರ್ಶಗಳ ಸೆಳೆತ ಕೈಬೀಸಿ ಕರೆದಾಗ, ಹೊಸ ಸಮಾಜ ಸೃಷ್ಟಿಸುವ ಹುಮ್ಮಸ್ಸು ತಾನೇತಾನಾಗಿ ಆವರಿಸುತ್ತದೆ. ಉತ್ಸಾಹ, ಸಾಹಸಗಳ ತರಂಗಗಳ ಮೇಲೆ ಇಂತಹ ಹೊಸ ನಾಡನ್ನು ಕಟ್ಟುವ ಹುರುಪು ಆಗ. ಇವೆಲ್ಲ ಆರುವಮುನ್ನ ಆ ಕೆಲಸ ಆಗಬೇಕು. ತಡಮಾಡುವಂತಿಲ್ಲ. 

*****

ಆಗ ಆಗಲಿಲ್ಲ. ಮುಂದೆ ಏನಾಗುತ್ತದೆ? ಹಿಂದೆಲ್ಲ ಆಯುರ್ವೇದ ಪಂಡಿತರು ಕಣ್ಣು, ಉಗುರು ನೋಡಿ "ರಕ್ತಪುಷ್ಠಿ ಕಡಿಮೆ ಆಗಿದೆ" ಅನ್ನುತ್ತಿದ್ದರು. ಈಗ ಅದನ್ನೇ ಹೆಚ್ಚು ದುಡ್ಡು ತೆಗೆದುಕೊಂಡು, ರಕ್ತ ಹೀರುವ ಕೊಳವೆಯಿಂದ ತೆಗೆದು, ಲ್ಯಾಬೊರೇಟರಿಗಳಲ್ಲಿ ಅಳೆದು-ಸುರಿದು, ಹಿಮೋಗ್ಲಾಬಿನ್ ಕಡಿಮೆ ಆಗಿದೆ ಅನ್ನುತ್ತಾರೆ. ಹೊಸ ನೆತ್ತರು ಉಕ್ಕಿದ್ದು ಈಗ  ಆರುತ್ತಿದೆ. "ಒಂದೆ ನೆಗೆತಕೆ ನೆಗೆವೆವೋ ಕಂದಕವನು, ಕುಟ್ಟಿ ಪುಡಿ ಮಾಡುವೆವು ಕೋಟೆಗಳನು" ಎನ್ನುತ್ತಿದ್ದವ ಈಗ ದವಡೆಯಲ್ಲಿ "ಪುಳ್ಳಂಗಾಯಿ ಉಂಡೆ" ಕೂಡ ಪುಡಿ ಮಾಡಲಾರ. ಹರೆಯದ ಮಾಂತ್ರಿಕನ ಮಾಟ ಎಲ್ಲೂ ಕಾಣದೆ, ಮಧ್ಯ ವಯಸ್ಸಿನ ಸುತ್ತಲಿನ ಪ್ರಪಂಚದ ವಾಸ್ತವದ ಅರಿವು ಹೆಚ್ಚಾದಂತೆ ಕನಸುಗಳು ಬತ್ತುತ್ತವೆ. ಹೊಸ ಸಮಾಜ ಕಟ್ಟುವುದರ ಬದಲಾಗಿ ಇರುವ ಅವ್ಯವಸ್ಥೆಗೇ ಹೊಂದಿಕೊಂಡು ಬಾಳುವುದೇ ಉತ್ತಮ ಎಂಬ ಸಿದ್ಧಾಂತ ಗುದ್ದಲು ಬರುತ್ತದೆ. 

ಮತ್ತೂ ಸ್ವಲ್ಪ ವಯಸ್ಸಿನಲ್ಲಿ ಮುಂದೆ ಹೋದಾಗ, "ಇನ್ನೊಬ್ಬರ ಉಸಾಬರಿ ನಮಗೇಕೆ? ನಮ್ಮದು ನಮಗೆ ಸಾಕು. ತಲೆತಲಾಂತರದಿಂದ ಬಂದಿದ್ದು ನಾವು ಬದಲಿಸುವುದು ಸಾಧ್ಯವೇ?" ಎನ್ನುವ ಅನುಮಾನ ಕಾಡುತ್ತದೆ. ಹೊಸ ಸಮಾಜ ಕಟ್ಟುವುದು ಇರಲಿ; ಇರುವ ಸಮಾಜದಲ್ಲಿ ಬದುಕುವುದೂ ಒಂದು ಹೋರಾಟವೇ ಆಗುತ್ತದೆ. ಜೀವನದ ವಾಸ್ತವ ಇದೇ ಅನ್ನುವ ಕಡೆ ಮನಸ್ಸು ವಾಲತೊಡಗುತ್ತದೆ. 

*****

ಹಾಗಿದ್ದರೆ ಹೊಸ ಸಮಾಜ ಕಟ್ಟುವುದೇ ಬೇಡವೇ? ಕಾಲಕಾಲಕ್ಕೆ ಸಮಾಜ ಬದಲಾಗಿದೆಯಲ್ಲ. ಅದನ್ನು ಯಾರಾದರೂ ಕಟ್ಟಿರಲೇಬೇಕಲ್ಲ? ಅನೇಕ ರೀತಿಗಳಲ್ಲಿ ಬದಲಾವಣೆಗಳು ಸರಿ ದಾರಿಯಲ್ಲಿಯೇ ಆಗಿವೆಯಲ್ಲ? ಹೌದು. ಇವೆಲ್ಲಾ ಆಗಲೇಬೇಕು. ನಿಲ್ಲಬಾರದು. ಕನಸುಗಳು ಕಾಣಲೇಬೇಕು. ತಿರುವುಗಳು ದಾಟಲೇಬೇಕು. ಅದು ಹೇಗೆ? ಅದು ಸಾಧ್ಯವೇ? ಅವನ್ನು ಮಾಡುವವರು ಯಾರು?

ಪುಣ್ಯಕ್ಕೆ ಯಾವ ಕಾಲಮಾನ ಘಟ್ಟದಲ್ಲೂ ಕೇವಲ ಯುವಕರೇ ಇರಲಿಲ್ಲ; ಇರುವುದಿಲ್ಲ. ಎಲ್ಲ ವಯೋಮಾನದವರೂ ಒಂದೇ ಕಾಲದಲ್ಲಿ ಇರುತ್ತಾರೆ.  ಕವಿವಾಣಿ ಹೇಳುವಂತೆ "ಹೊಸ ಚಿಗುರು - ಹಳೆ ಬೇರು ಕೂಡಿರಲು ಮರ ಸೊಗಸು".  ಹರೆಯದವರ ಉತ್ಸಾಹ-ಹುಮ್ಮಸ್ಸುಗಳು ಮತ್ತು  ಹಿರಿಯರ ಅನುಭವ-ಸಮತೋಲನ ಒಂದೆಡೆ ಸೇರಿದರೆ ಹೊಸ ಸಮಾಜದ ನಿರ್ಮಾಣ ಇಂದಿಗೂ ಸಂಭವವೇ. ಹಿಂದೆಲ್ಲಾ ಸಮಾಜಗಳು ಬದಲಾದದ್ದು ಹೀಗೆಯೇ. ಈಗಲೂ ಅದು ಸಾಧ್ಯವೇ. 

ಹಿರಿಯರಿಗೆ ಕಿರಿಯರಲ್ಲಿ ಭರವಸೆ, ಕಿರಿಯರಿಗೆ ಹಿರಿಯರಲ್ಲಿ ನಂಬಿಕೆ. ಹೀಗೆ ಇರುವ ತಂಡಗಳು ಒಟ್ಟಿಗೆ. ಪರಸ್ಪರ ಗಾಢವಾದ ಸಹಬಾಳ್ವೆ. ಆಗ ಹರೆಯದ ಮಾಂತ್ರಿಕನ ಮಾಟ ಮಸಳದೆ, ಸರಿದಾರಿಯಲ್ಲಿ ಸಮಾಜದಲ್ಲಿ ಮುಂದುವರೆಯಬಹುದು. 

4 comments:

  1. Very educative blog which the present generation has to read and digest. Hats off to you Keshava Murthyji.

    ReplyDelete
  2. ರಾಘವೇಂದ್ರMay 11, 2025 at 9:18 PM

    👆ನಿಜಕ್ಕೂ ಗಂಭೀರವಾದ ಲೇಖನ. ನೀಡಿರುವ ಒಂದೊಂದು ಉದಾಹರಣೆ, ಸರ್ವಕಾಲಕ್ಕೂ ಅನ್ವಯ ವಾಗುತ್ತದೆ.

    ReplyDelete
  3. Poet Adiga’s poem is so meaningful. Very nicely written article to know how a family can lead a harmonious life together. UR……

    ReplyDelete