ಮಕ್ಕಳಿಗೆ ತಾಯಿ-ತಂದೆಯರು ಎರಡು ಕಣ್ಣುಗಳಿದ್ದಂತೆ. ತಮ್ಮ ತಮ್ಮ ಜೀವನದಲ್ಲಿ ತಾಯಿ-ತಂದೆಯರ ಪಾತ್ರದ ಪ್ರಾಮುಖ್ಯತೆ ಅವರ ನೆರಳಿನಲ್ಲಿ ಬೆಳೆದವರನ್ನು ಕೇಳಿದರೆ ಸರಿಯಾಗಿ ಗೊತ್ತಾಗುವುದಿಲ್ಲ. ಇವರಿಬ್ಬರಲ್ಲಿ ಯಾರೋ ಒಬ್ಬರಿಲ್ಲದೆ ಕೇವಲ ಒಬ್ಬರ (ತಾಯಿ ಅಥವಾ ತಂದೆ) ಆಶ್ರಯದಲ್ಲಿ ಬೆಳೆದವರಿಗೆ ಅರ್ಧದಷ್ಟು ಗೊತ್ತಿದ್ದೀತು. ಇಬ್ಬರನ್ನೂ ಕಳೆದುಕೊಂಡು ಮತ್ಯಾರೋ ಬೇರೊಬ್ಬರ ಸಹಾಯದಿಂದ ಅಥವಾ ನಿರಾಶ್ರಿತರಾಗಿ ಬೆಳೆದವರಿಗೆ ಪ್ರಾಯಶಃ ಇದರ ಪೂರ್ತಿ ಸತ್ಯ ಗೊತ್ತಿರಬಹುದು. ಜೀವನದಲ್ಲಿ ಮೊದಲಿನಿಂದಲೂ ಇರುವ ಪದಾರ್ಥಗಳಿಗೆ ಅಥವಾ ಸುಲಭವಾಗಿ ಸಿಕ್ಕಿದ ವಸ್ತುಗಳಿಗೆ ನಾವು ಹೆಚ್ಚು ಬೆಲೆ ಕೊಡುವುದಿಲ್ಲ. ಬಹಳ ಕಷ್ಟ ಪಟ್ಟು ಸಂಪಾದಿಸಿದ ಪದಾರ್ಥಗಳಿಗೆ ನೀಡುವ ಗಮನವನ್ನು ಅದಾಗಿಯೇ ಬಂದಿದ್ದ ಸಂಪತ್ತುಗಳಿಗೆ ಕೊಡದಿರುವುದು ಒಂದು ಮಾನವ ಸಹಜ ವಿಪರ್ಯಾಸ.
ಮಕ್ಕಳ ಜೀವನದಲ್ಲಿ ತಾಯಿ ಹೆಚ್ಚೋ ಅಥವಾ ತಂದೆ ಹೆಚ್ಚೋ ಎಂದು ಚರ್ಚಿಸುವುದು ನ್ಯಾಯವೇ? ಸೃಷ್ಟಿಯಲ್ಲಿ ಇಬ್ಬರಿಗೂ ಅವರದೇ ಆದ ಪಾತ್ರಗಳಿವೆ. ಇದು ಹಿಂದಿದ್ದಂತೆ ಇಂದೂ ಇದೆ. ಸಮಾಜದ ದೃಷ್ಟಿಯಲ್ಲಿ ಅವರು ನಿರ್ವಹಿಸುತ್ತಿದ್ದ ಹೊಣೆಗಾರಿಕೆ ಕಾಲಕ್ರಮದಲ್ಲಿ ಬದಲಾಗಿದೆ. ಗಂಡಸು ಹೊರಗೆ ದುಡಿದು ಸಂಪಾದಿಸುವುದು, ಹೆಂಗಸು ಮನೆ-ಮಕ್ಕಳನ್ನು ಸಂಭಾಳಿಸುವುದು, ಹೀಗೆ ಇದ್ದ ವ್ಯವಸ್ಥೆ ಬಹಳ ಬದಲಾಗಿದೆ. ಈಗ ಹೆಣ್ಣುಮಕ್ಕಳು ಸಮ-ಸಮವಾಗಿ ಹೊರಗೆ ದುಡಿದು ಸಂಪಾಡಿಸುವುದು ಎಲ್ಲೆಲ್ಲೂ ಕಂಡುಬರುವ ವಿಷಯ. ಗಂಡಸರೂ ಮನೆವಾರ್ತೆಯಲ್ಲಿ ಭಾಗವಹಿಸುವುದೂ ಕಂಡು ಬರುತ್ತದೆ. ಒಟ್ಟಿನಲ್ಲಿ ಕುಟುಂಬದಲ್ಲಿ ಒಂದು ಸಮತೋಲನದ ಅವಶ್ಯಕತೆ ಉಂಟು. ಅದಿದ್ದರೆ ಎಲ್ಲವೂ ಸುಸೂತ್ರ.
ಸಮಾಜ ಬದಲಾಗಿದ್ದರೂ, ತಂದೆ-ತಾಯಿಗಳು ನಿರ್ವಹಿಸುತ್ತಿದ್ದ ಪಾತ್ರಗಳ ಲಯದಲ್ಲಿ ಬದಲಾವಣೆ ಕಂಡುಬಂದರೂ, ಗಂಡಸರು ಮಕ್ಕಳನ್ನು ಹೆರುವ ಕಾಲ ಇನ್ನೂ ಬಂದಿಲ್ಲ. ವಿಜ್ಞಾನದಲ್ಲಿ ಎಷ್ಟು ಪ್ರಗತಿ ಸಾಧಿಸಿದರೂ, ಪ್ರನಾಳ ಶಿಶು ಎಂದು ಹೇಳಿದರೂ, ಕೇವಲ ಪ್ರನಾಳದಲ್ಲಿ ಪೂರ್ಣ ಪ್ರಮಾಣದ ಮಗು ಬೆಳೆದು ಹುಟ್ಟಿರುವುದು ಇನ್ನೂ ಕಾಣದು. ಮಹಾವಿಷ್ಣುವಿನ ನಾಭೀಕಮಲದ ಶಿಶು ಚತುರ್ಮುಖ ಬ್ರಹ್ಮನಂತೆ ಹುಟ್ಟಿದವರನ್ನು ನಾವು ಕಣ್ಣಾರೆ ಕಾಣೆವು. ಈ ಕಾರಣದಿಂದ ಮಕ್ಕಳಿಗೆ ಮತ್ತು ತಾಯಿಗೆ ಒಂದು ವಿಶೇಷ ಸಂಬಂಧವುಂಟು. ನಾಲ್ಕೈದು ವರುಷ ಆಗುವವರೆಗಾದರೂ ಮಕ್ಕಳು ತಾಯಿಗೆ ಅಂಟಿಕೊಂಡೇ ಇರುತ್ತಾರೆ. ಅಮ್ಮನ ಬಳಿ ಇರುವ ಸದರ-ಸಲುಗೆಗಳು ಅಪ್ಪನ ಬಳಿ ಇರುವುದಿಲ್ಲ. ಅದು ಕರುಳ ಸಂಬಂಧ. ಪದಗಳಲ್ಲಿ ವಿವರಿಸಲಾಗದು.
*****
ತನ್ನ ಮಕ್ಕಳು ಯೋಗ್ಯರಾಗಿ ಬೆಳೆಯಲಿ, ಚೆನ್ನಾಗಿ ಬಾಳಲಿ ಎಂದು ತಾಯಿಯು ಅನೇಕ ವೇಳೆ ಮಕ್ಕಳ ವಿಷಯದಲ್ಲಿ ಗಡುಸಾಗಿ ವರ್ತಿಸುವುದೂ ಉಂಟು. ಆದರೆ ಸಾಮಾನ್ಯವಾಗಿ ಅದು ತೋರಿಕೆಯ ಗಡಸುತನ. ಮಕ್ಕಳ ವಿಷಯದಲ್ಲಿ ಹೀಗೆ ಗಟ್ಟಿಯಾಗಿ ಕಾಣಿಸುವಾಗ, ಕೆಲವೊಮ್ಮೆ ಶಿಕ್ಷಿಸುವಾಗ, ಅವಳು ನಿರ್ದಯಿ ಎನಿಸಿದರೂ ವಾಸ್ತವವಾಗಿ ಅವಳು ದಯಾಮಯಿಯೇ. ಈ ಕಾರಣಕ್ಕಾಗಿ "ತಾಯಿ ಕರುಳು" ಎನ್ನುವ ಪದಪ್ರಯೋಗ ಅಲ್ಲಲ್ಲಿ ಕಾಣಿಸುವುದು. ತಂದೆಯು ತನ್ನ ಮಕ್ಕಳ ಬಳಿ ಗಡುಸಾಗಿ ವರ್ತಿಸುವುದು ನಿರೀಕ್ಷಿತವಾದರೂ, ತಾಯಿಯಂತೆಯೇ ಕರುಣಿಯಾಗಿರುವುದೂ ಅಪರೂಪವೇನಲ್ಲ. ಕೆಲವು ತಂದೆಯರಂತೂ ತಾಯಿಗಿಂತಲೂ ಮೆತುವಾಗಿ ಮಕ್ಕಳ ಬಳಿ ವ್ಯವಹರಿಸುವುದನ್ನೂ ಅಲ್ಲಲ್ಲಿ ಕಾಣಬಹುದು. ಈ ಕಾರಣಕ್ಕಾಗಿ "ಅವನದು ಹೆಂಗರುಳು" ಎನ್ನುವ ಪದಪ್ರಯೋಗ ಒಮ್ಮೊಮ್ಮೆ ಕಾಣಬರುವುದು.
ಭಕ್ತ-ಭಗವಂತನ ವ್ಯವಹಾರವೂ ಹೀಗೆಯೇ. ಭಕ್ತನು ಎಷ್ಟು ಗಟ್ಟಿಯಾಗಿ ನಿಲ್ಲುತ್ತಾನೆ ಎನ್ನುವುದನ್ನು ಪರೀಕ್ಷಿಸಲು ಅನೇಕ ಕಷ್ಟ-ಕಾರ್ಪಣ್ಯಗಳನ್ನು ತಂದೊಡ್ಡಿದರೂ ಪರಮಾತ್ಮನು ವಾಸ್ತವವಾಗಿ ಅತ್ಯಂತ ಕರುಣಾಶಾಲಿಯೇ. ಇಲ್ಲದಿದ್ದರೆ ನಾವು ಪ್ರತಿನಿತ್ಯ ಮಾಡುವ ಅಸಂಖ್ಯ ತಪ್ಪುಗಳಿಗೆ ಅವನು ಶಿಕ್ಷಿಸುತ್ತಾ ಹೋದರೆ ಅದಕ್ಕೆ ಕೊನೆಯೆಲ್ಲಿ? ಅವನ ಅನೇಕ ರೂಪಗಳಲ್ಲಿ ಭಕ್ತನು ತನಗೆ ಬೇಕಾದುದನ್ನು ಆರಿಸಿಕೊಂಡು ಆರಾಧಿಸುತ್ತಾನೆ. ಎಲ್ಲಿ ಬೇಡಿದರೆ ತನಗೆ ಬೇಕಾದುದು ಸುಲಭವಾಗಿ ಸಿಗಬಹುದು ಎಂದು ಲೆಕ್ಕ ಹಾಕುತ್ತಾನೆ. "ನನಗೆ ಎಂದೂ ಏನೂ ಬೇಡ. ಅವನು ಪ್ರೀತನಾದರೆ ಸಾಕು" ಎನ್ನುವ ನಿಶ್ಚಲ, ನಿಷ್ಕಾಮರಾದ ಹನುಮಂತನಂತಹ ಭಕ್ತರು ಅಪರೂಪವೇ.
ಹೀಗೆ ಆರಾಧಿಸಿ ವರಗಳನ್ನು ಬೇಡುವ ಭಕ್ತರು ಯಾರನ್ನು ಆಶ್ರಯಿಸುತ್ತಾರೆ? ಯಾರ ಬಳಿ ಬೇಡುತ್ತಾರೆ? ನಮ್ಮ ಪುರಾಣ-ಪುಣ್ಯಕಥೆಗಳನ್ನು ಗಮನಿಸಿದರೆ ಇದರ ಉತ್ತರ ಬಹು ಸುಲಭ. ವರ ಪಡೆದು ಶಕ್ತಿಶಾಲಿಗಳಾಗಬೇಕು, ಜಗತ್ತನ್ನೇ ತಮ್ಮ ಕಾಲಬುಡದಲ್ಲಿ ಬೀಳಿಸಿಕೊಂಡು ಮೆರೆಯಬೇಕು ಎಂದು ಆಶಿಸುವ ಮಂದಿ ಬಹು ಕಠಿಣ ತಪಸ್ಸುಗಳನ್ನು ಮಾಡುವುದು ಚತುರ್ಮುಖ ಬ್ರಹ್ಮನನ್ನೋ ಅಥವಾ ಶಿವನನ್ನೋ ಕುರಿತೇ. ಅನೇಕ ಉದಾಹರಣೆಗಳಲ್ಲಿ ನಾವು ಕಾಣುವುದು ಇದನ್ನೇ. ಪರಶಿವನದಂತೂ ಭಕ್ತರ ವಿಷಯದಲ್ಲಿ ಅತ್ಯಂತ ಹೆಂಗರುಳು. ಅವನನ್ನು ಆರಾಧಿಸಿ ಮೆಚ್ಚಿಸಿದರೆ ಕೇಳಿದ್ದು ಸಿಗುವುದು ಖಚಿತವೇ. ಬ್ರಹ್ಮನೂ ಹಾಗೆಯೇ. ಇವರಿಬ್ಬರು ಕೇಳಿದ ವರವನ್ನು ಕೊಡುವುದರಲ್ಲಿ ಎತ್ತಿದ ಕೈ. "ಕೊಡುವವರು ಇಬ್ಬರು" ಎಂದರೆ ಈ ಇಬ್ಬರು ಹಿಂದೆ-ಮುಂದೆ ನೋಡದೆ, ಅನುಮಾನಿಸದೇ "ತಥಾಸ್ತು" ಅನ್ನುವವರು.
*****
ಈ ರೀತಿ ಕೇಳಿದ ವರಗಳನ್ನು ಕೊಡುವ ಹೆಂಗರುಳು ಇರುವುದು ಒಳ್ಳೆಯದೇ. ಆದರೆ ಮನಸ್ಸಿನಲ್ಲಿ ದುರಾಸೆ ಇಟ್ಟುಕೊಂಡು, ಕಠಿಣ ಸಾಧನೆಗಳನ್ನು ಮಾಡಿ, ಮೆಚ್ಚಿಸಿ, ವರಪಡೆದು, ನಂತರ ಆ ಭಕ್ತರು ಲೋಕಕಂಟಕರಾದರೆ ಹೇಗೆ? ಇಂತಹ ಅನೇಕ ಉದಾಹರಣೆಗಳು ನಮ್ಮ ಮುಂದೆ ಇವೆ. ಭಸ್ಮಾಸುರ, ಹಿರಣ್ಯಾಕ್ಷ, ಹಿರಣ್ಯ ಕಷಿಪು, ರಾವಣ, ಮುಂತಾದವರ ದೊಡ್ಡ ಪಟ್ಟಿಯೇ ಉಂಟು. ತನ್ನ ಪರಮ ಭಕ್ತನಾದ ರಾವಣನು ತಪಸ್ಸು ಮಾಡಿ ಮೆಚ್ಚಿಸಿದಾಗ, ಪಾರ್ವತಿ-ಪರಮೇಶ್ವರರು ಎದುರು ಬಂದು ನಿಂತಾಗ, ಪಾರ್ವತಿಯನ್ನು ಕಂಡ ರಾವಣನು ತಪಸ್ಸು ಮಾಡಿದ ಮೂಲ ಕಾರಣವನ್ನೇ ಮರೆತು ಜಗದ೦ಬೆಯನ್ನೇ ಬೇಡಿದಾಗ ಪರಶಿವನು ಕೊಟ್ಟೇಬಿಟ್ಟಿದ್ದನ್ನು "ಭೂ ಕೈಲಾಸ" ಪ್ರಸಂಗದಲ್ಲಿ ನೋಡಿದ್ದೇವೆ. ಹಿರಣ್ಯನು ಬ್ರಹ್ಮನ ಮುಂದೆ ಏನೆಲ್ಲಾ ನಿಬಂಧನೆಗಳನ್ನು ಹಾಕಿದ! ಅದಾಗಬಾರದು, ಇದಾಗಬಾರದು ಎಂದು ನೂರೆಂಟು ಕೇಳುವುದರ ಜೊತೆಗೇ "ನಿನ್ನ ಸೃಷ್ಟಿಯಲ್ಲಿನ ಯಾರಿಂದಲೂ, ಯಾವುದರಿಂದಲೂ ಸಾವು ಬರಬಾರದು" ಎಂದು ಕೇಳಿದರೂ ಬ್ರಹ್ಮನು "ತಥಾಸ್ತು" ಅಂದೇ ಬಿಟ್ಟ!
ಒಳ್ಳೆಯವರ ಕೈಯ್ಯಲ್ಲಿ ಇಂತಹ ವರಗಳು ಸಿಕ್ಕಿದರೆ ಲೋಕಕಲ್ಯಾಣ. ದುರುಳರ ಕೈಯ್ಯಲ್ಲಿ ಅದೇ ವರಗಳು ಲೋಕಕಂಟಕ. ಮೂರು ಲೋಕಗಳ ಸಮಸ್ತ ಜೀವರಾಶಿಯೂ "ತ್ರಾಹಿ, ತ್ರಾಹಿ!" ಎಂದು ಅಂಗಲಾಚುವ ಪರಿಸ್ಥಿತಿ. ಕಡೆಗೆ ಕೆಲವರು ವರ ಕೊಟ್ಟವರನ್ನೇ ಅಪಹಾಸ್ಯ ಮಾಡಿದ್ದೂ ಇದೆ. ವರದ ಯೋಗ್ಯತೆಯನ್ನು ಅವರ ಮೇಲೆಯೇ ಪರೀಕ್ಷಿಸಲು ಹೋದದ್ದೂ ಉಂಟು. ಆಗ ಎ೦ತಹ ಪೇಚಿನ ಪ್ರಸಂಗಗಳು ಬಂದವು! ಅಂತಹ ವಿಪರೀತ ಸಂದರ್ಭಗಳಲ್ಲಿ ಆರ್ತರು ಮಹಾವಿಷ್ಣುವಿನ ಮೊರೆಹೊಕ್ಕು ಅವನಿಂದ ಈ ದುರುರುಳರ ಕೊನೆಯಾಗಿ ಜಗತ್ತು ನಿಟ್ಟುಸಿರು ಬಿಡುವಂತೆ ನಡೆದಿರುವುದೂ ಉಂಟು. ಆದ್ದರಿಂದ ಅವನು "ತೆಗೆಯುವವನೊಬ್ಬ".
*****
ಮಹಾತ್ಮರಾದ ಭಕ್ತಶ್ರೇಷ್ಠ ಕನಕದಾಸರು ಈ ಮೇಲಿನ ಚರ್ಚೆಯನ್ನೆಲ್ಲ ಭಟ್ಟಿ ಇಳಿಸಿ ತಮ್ಮ "ಹರಿಭಕ್ತಿಸಾರ" ಕೃತಿಯ 28ನೆಯ ಪದ್ಯದಲ್ಲಿ ಹೀಗೆ ಹೇಳಿದ್ದಾರೆ:
ಹಗೆಯರಿಗೆ ವರವೀವರಿಬ್ಬರುತೆಗೆಯಲರಿಯರು ಕೊಟ್ಟವರಗಳತೆಗೆದುಕೊಡುವ ಸಮರ್ಥರಾರೀ ಜಗಕೆ ನಿನ್ನಂತೆಸುಗುಣರಿನ್ನಾರುಂಟು ಕದನವಬಗೆದು ನಿನ್ನೊಳು ಜಯಸುವವರೀಜಗದೊಳು೦ಟೀ ದೇವ ರಕ್ಷಿಸು ನಮ್ಮನನವರತ
ವರವ ಪಡೆದಾಗ ಅವರು ಭಕ್ತರೇ. ಆದರೆ ಕೇಳಿದ್ದು ಸಿಕ್ಕ ತಕ್ಷಣ ಅವರ ಆಸುರೀಶಕ್ತಿ ಜಾಗೃತವಾಯಿತು. ಮೂಲ ಗುಣ ಹೊರಗೆ ಬಂತು. ಆದರೆ ಕಾಲ ಮಿಂಚಿತ್ತು. ಶ್ರೀಹರಿಯು ಮಧ್ಯೆ ಪ್ರವೇಶಿಸಿ ಇಂತಹ ಕಗ್ಗಂಟು ಪರಿಸ್ಥಿತಿಗಳಿಂದ ಬಿಡಿಸಿ ಪಾರುಮಾಡಿದನು ಎನ್ನುವುದನ್ನು ಶ್ರೀ ಕನಕದಾಸರು ಸೊಗಸಾಗಿ ವಿವರಿಸಿದ್ದಾರೆ.
*****
ಶ್ರೀ ಕನಕದಾಸರ ಕೃತಿಗಳಲ್ಲಿ ಅನೇಕ ಕಾವ್ಯ ಗುಣಗಳೂ, ರಸಘಟ್ಟಗಳೂ ತುಂಬಿವೆ. ಅವರ ಕೃತಿಗಳ ಅಧ್ಯಯನದಿಂದ ನಮ್ಮ ಜ್ಞಾನದ ಹರವು ವಿಸ್ತಾರವಾಗುವ ಜೊತೆಗೆ ಕಾವ್ಯ ರಸಾಸ್ವಾದನೆಯೂ ಆಗುತ್ತದೆ.
👌ಈ ಲೇಖನದ ಮೊದಲನೇ ಸಾಲು ಓದಿದಾಗ , ಹಳೆಯ ಸಿನಿಮಾ ಹಾಡು ನೆನಪಾಯಿತು.
ReplyDelete"ಧರಣಿಗೆ ಗಿರಿ ಭಾರವೇ, .... ಹೆತ್ತ ತಾಯಿಗೆ ಮಗುವು ಭಾರವೇ.
ತಂದೆ ತಾಯಿ ಹೋದ ನಂತರ, ಅವರ ಬೆಲೆ ತಿಳಿಯುತ್ತದೆ. ಆದರೆ ಪ್ರಯೋಜನ ವೇನು.
ಇಲ್ಲಿ ಹೇಳಿರುವ ಹಾಗೆ, ಮಕ್ಕಳ ಭವಿಷ್ಯಕ್ಕೆ ತಂದೆ-ತಾಯಿ ಪಾತ್ರ ಬಹಳ ಮುಖ್ಯ. ಆದರೆ ಕೂನೆಗಾಲ್ಲದಲ್ಲಿ, ವೃದ್ದಾಶ್ರಮವೇ ಗತಿ.
AN UMBRELLA WILL BECOME BURDEN ONCE RAIN STOPS. LOYALTY DECLINES, ONCE THE BENEFITS STOPS.
ಮಕ್ಕಳನ್ನು ಬೈದರು ಸಹ, ತಂದೆ ತಾಯೊಂದಿರು, ಎಂದು ಕೆಟ್ಟದ್ದನ್ನು ಬಯಸುವುದಿಲ್ಲ. ಅದಕ್ಕೆ ಹೆತ್ತವರು ಅನ್ನುವುದು.
ಗಂಡಸರು ಮಕ್ಕಳನ್ನು ಹೆರುವ ಕಾಲ ಬಂದರೆ, ಹೆಂಗಸರನ್ನು Answers ಅಸಾಧ್ಯ.
ಅರ್ಥ ಪೂರ್ಣ ಲೇಖನ.
ಧನ್ಯವಾದಗಳು.
ಲೇಖನ ಸರಳವಾಗಿ ಆಪ್ತವಾಗಿದೆ.ಸಾಮಾನ್ಯವಾಗಿ ವಾರ ಪಡಕೊಂಡು ದುಷ್ಟರಾದವರನ್ನು ಶಿಕ್ಷಿಸುವುದು ವಿಷ್ಣು. ಆದರೆ ಬ್ರಹ್ಮ ತ್ರಿಪುರಾಸುರನಿಗೆ ವರಕೊಟ್ಟು ಪೇಚಿಗೆ ಸಿಲುಕಿದಾಗ ತ್ರಿಪುರ ಸಂಹಾರ ಮಾಡುವುದು ಶಿವ. ಬ್ರಹ್ಮ ಶಿವನೇ ರಥಕ್ಕೆ ಸಾರಥಿ ಆಗುತ್ತಾನೆ.ಕರ್ಣನಿಗೆ ಸಾರಥಿ ಆಗಲು ಶೌರ್ಯವನ್ನು ಆರಿಸುವಾಗ ದುರ್ಯೋಧನ ಶಲ್ಯನಿಗೆ ಈ ಕಥೆ ಹೇಳುತ್ತಾನೆ.ದುರ್ಯೋಧನನ ನಯಗಾರಿಕೆ ಕುಮಾರವ್ಯಾಸ ಬಹಳ ಚೆನ್ನಾಗಿ ವರ್ಣಿಸಿದ್ದಾನೆ
ReplyDeleteThe last paragraph very beautifully sums up the inherent human nature.
ReplyDeleteThere is always something new and interesting to read and learn from your work.
Thanks so much much Sir for all the efforts you make to take it to another level. 👍🏻
Meera Bapat
ಮನುಷ್ಯನಿಗೆ ಜೀವನದಲ್ಲಿ ಯಾವುದೇ ವಸ್ತುವಿನ ಕೊರತೆ ಇದ್ದರೆ ಮಾತ್ರ ಅದರ ಪ್ರಾಮುಖ್ಯತೆ ಅರ್ಥವಾಗುತ್ತದೆ. ದುರದೃಷ್ಟವಶಾತ್ ಇದು ತಾಯ್ತಂದೆಯರ ವಿಷಯದಲ್ಲಿ ಕೂಡಾ ಸತ್ಯ.
ReplyDeleteದುಷ್ಟರು ಇಡೀ ಜಗತ್ತನ್ನೇ ವಶಪಡಿಸಿಕೊಳ್ಳುವ ದುರುದ್ದೇಶದಿಂದ ಹೆಂಗರುಳಿನ ಬ್ರಹ್ಮ ದೇವರು ಅಥವಾ ಅಶುತೋಷನೆಂದೇ ಪ್ರಸಿದ್ಧರಾದ ಶಿವನನ್ನು ಒಲಿಸಲು ತಪಸ್ಸು ಮಾಡಿ ವರವನ್ನು ಪಡೆದು ಅವರನ್ನೇ ಪೇಚಿಗೆ ಸಿಲುಕಿಸುವುದು ಮತ್ತು ಇದರಿಂದ ಉಪಾಯವಾಗಿ ಬಿಡಿಸಲು ಶ್ರೀ ವಿಷ್ಣುವೇ ಬರುವುದರ ಬಗ್ಗೆ ಬರೆದ ಸಂತ ಕನಕದಾಸರ ಕೃತಿಯನ್ನು ಬಹಳ ಸುಂದರವಾಗಿ ವರ್ಣಿಸಿದ್ದೀರಿ ಸರ್. ಧನ್ಯವಾದಗಳು 🙏