ನಾವು ಪ್ರೈಮರಿ ಶಾಲೆಯಲ್ಲಿ ಓದುತ್ತಿದ್ದಾಗ ನಮಗೆ ವ್ಯವಹಾರ ಜ್ಞಾನ ಬರಲಿ ಎಂಬ ದೃಷ್ಟಿಯಿಂದ ನಮ್ಮ ಮನೆಯ ಹಿರಿಯರು ನಮ್ಮನ್ನು ದಿನಬಳಕೆಗೆ ಬೇಕಾದ ಪದಾರ್ಥಗಳನ್ನು ತರಲು ಅಂಗಡಿಗಳಿಗೆ ಕಳಿಸುತ್ತಿದ್ದರು. ಆಗ ಈಗಿನಂತೆ ಮನೆ ಬಾಗಿಲಿಗೆ ಸಾಮಾನು-ಸರಂಜಾಮು ತಂದು ಕೊಡುವ ವ್ಯವಸ್ಥೆ ಇರಲಿಲ್ಲ. ರೆಫ್ರಿಜಿರೇಟರ್ಗಳು ಇನ್ನೂ ಬಂದಿರಲಿಲ್ಲ. ಪ್ರತಿದಿನ ತರಕಾರಿ ಕೊಂಡು ತರಬೇಕಾಗಿತ್ತು. ಮನೆಯ ಹಿತ್ತಿಲಿನಲ್ಲಿ ಕೆಲವನ್ನು ಬೆಳೆದರೂ ಪೇಟೆಯಿಂದ ಮತ್ತೆ ಕೆಲವು ಕೊಂಡು ತರಬೇಕಾಗಿತ್ತು. ಯಾವ ತರಕಾರಿ ಎಳೆಯದಿರಬೇಕು, ಯಾವುದು ಬಲಿತಿರಬೇಕು, ಕೊಡುವ ಹಣದ ಲೆಕ್ಕ ಮತ್ತು ತರುವ ಪದಾರ್ಥಗಳ ಲೆಕ್ಕ ಮುಂತಾದುವನ್ನು ಹೀಗೆ ಕಲಿಯುತ್ತಿದ್ದೆವು.
ಪೇಟೆಯಲ್ಲಿ ಕೆಲವು ತರಕಾರಿ ಅಂಗಡಿಗಳಿದ್ದವು. ಸುತ್ತ-ಮುತ್ತಲಿನ ಹಳ್ಳಿಗಳ ಜನರು ತಾವು ಬೆಳೆದ ತರಕಾರಿ, ಸೊಪ್ಪು, ಹಣ್ಣುಗಳು ಮುಂತಾದುವನ್ನು ಬೆಳಿಗ್ಗೆ ಬೇಗನೆ ತಲೆಯ ಮೇಲೆ ಹೊತ್ತುಕೊಂಡು ಹತ್ತಿರದ ಪಟ್ಟಣಗಳಿಗೆ ಬರುತ್ತಿದ್ದರು. ರಸ್ತೆಯ ಪಕ್ಕದಲ್ಲಿ ಗೋಣಿಚೀಲ ಅಥವಾ ಚಾಪೆ ಹಾಸಿಕೊಂಡು ತಂದ ಸರಕನ್ನು ಇಟ್ಟು ಮಾರುತ್ತಿದ್ದರು. ಎಂಟು-ಒಂಬತ್ತು ಗಂಟೆಗಲ್ಲಾ ಅವನ್ನು ಮಾರಿ ಮುಗಿಸಿ ತಮಗೆ ಬೇಕಾದ ಪದಾರ್ಥಗಳನ್ನು ಕೊಂಡುಕೊಂಡು ಹಳ್ಳಿಗಳಿಗೆ ಹಿಂತಿರುಗುತ್ತಿದ್ದರು. ಅವರು ವರ್ತಕರಲ್ಲದುದರಿಂದ ಅವರ ಬಳಿ ತಕ್ಕಡಿಗಳು ಇರುತ್ತಿರಲಿಲ್ಲ. ತರಕಾರಿಗಳನ್ನು ಸಣ್ಣ ಸಣ್ಣ ಗುಡ್ಡೆಗಳಾಗಿ ಇಟ್ಟು ಮಾರುತ್ತಿದ್ದರು. ಈಗಿನಂತೆ ಆಗ ಅಂಗಡಿಗಳ ಒಳಗೆ ಹೋಗಿ ಬೇಕಾದ ತರಕಾರಿ ಆರಿಸುವಂತಿರಲಿಲ್ಲ. ಅಂಗಡಿಯವರು ಕೊಟ್ಟಿದ್ದನ್ನು ತರಬೇಕಿತ್ತು. ಅಂಗಡಿಯವರು ಕೆಲವರು ಮಕ್ಕಳು ಕೊಳ್ಳಲು ಹೋದಾಗ ತೂಕದಲ್ಲಿ ವ್ಯತ್ಯಾಸ ಸಹ ಮಾಡುತ್ತಿದ್ದರು. ಗುಡ್ಡೆಗಳಲ್ಲಿ ಹೆಚ್ಚು ತರಕಾರಿ ಇರುವ ಗುಡ್ಡೆ ಆರಿಸಿ ತರುವುದರಲ್ಲಿ ಒಂದು ಆನಂದವಿರುತ್ತಿತ್ತು. ಈ ಕಾರಣಗಳಿಗೆ ನಾವು ರಸ್ತೆ ಬದಿಯ ಗುಡ್ಡೆ ತರಕಾರಿಗಳನ್ನು ಕೊಳ್ಳಲು ಇಷ್ಟ ಪಡುತ್ತಿದ್ದೆವು.
ಆಗ ರೆಸ್ಟೋರಂಟುಗಳು ಬಹಳ ಕಡಿಮೆ. ಹೈಸ್ಕೂಲು ಮತ್ತು ಕಾಲೇಜು ಓದು ತಲುಪುವವರೆಗೂ ಹೋಟೆಲು ತಿಂಡಿ ಅಪರೂಪವೇ. ಇಬ್ಬರು ಸ್ನೇಹಿತರು ಜೊತೆಯಾಗಿ ಹೋಗಿ ಜೇಬಿನಲ್ಲಿದ್ದ ಹಣವನ್ನು ಕೂಡಿಸಿ ಅವಾಗೊಮ್ಮೆ, ಇವಾಗೊಮ್ಮೆ ತಿಂಡಿ ತಿನ್ನುವುದು ಒಂದು ಸಾಧನೆಯಂತೆ. ಕಾಫಿ ಅಥವಾ ಟೀ ಕುಡಿಯುತ್ತಿರಲಿಲ್ಲ. ಕುಡಿದರೂ ಒಂದನ್ನು ಇಬ್ಬರು ಹಂಚಿಕೊಂಡು ಕುಡಿಯುವುದು. ಮಾಣಿಗೆ "ಒನ್-ಬೈ-ಟು" ಕಾಫಿ ಎಂದು ಹೇಳುವುದರಲ್ಲಿ ಒಂದು ಖುಷಿ. ಮೂವರು ಹೋದರೆ "ಟು-ಬೈ-ತ್ರೀ" ಆಗುತ್ತಿತ್ತು. ಮಾಣಿ ಸಾಮಾನ್ಯವಾಗಿ ಎರಡು ಕಾಫಿ ಮತ್ತು ಒಂದು ಖಾಲಿ ಲೋಟ ತರುತ್ತಿದ್ದ. ನಾವೇ ಹಂಚಿಕೊಳ್ಳುವುದು. ಅದು ಎಲ್ಲರಿಗೂ ಸಮವಾಗಿ ಬರುವಂತೆ ಹಂಚಿಕೊಳ್ಳುವುದು ಒಂದು ಉತ್ಸಾಹದ ಆಟ ಆಗಿರುತ್ತಿತ್ತು.
ಬೆಂಗಳೂರಿನಲ್ಲಿ, ಅದಕ್ಕಿಂತ ಹೆಚ್ಚಾಗಿ ಮೈಸೂರಿನಲ್ಲಿ, ಹೊಟೇಲುಗಳಲ್ಲಿ ಸೆಟ್ ಮಸಾಲೆ ದೋಸೆ ಸಿಗುತ್ತಿತ್ತು. (ಸೆಟ್ ದೋಸೆ ಈಗಲೂ ಎಲ್ಲ ಕಡೆ ಸಿಗುತ್ತದೆ). ಸೆಟ್ ಮಾಸಾಲೆಯಲ್ಲಿ ಎರಡು ಮಸಾಲೆ ದೋಸೆಗಳು ಇರುತ್ತಿದ್ದವು. ಮಾಮೂಲಿ ಮಸಾಲೆ ದೋಸೆಗಿಂತ ಸ್ವಲ್ಪ ಸಣ್ಣವಾದರೂ ಎರಡು ಸೇರಿದರೆ ಒಂದು ಮಾಮೂಲಿ ಮಸಾಲೆ ದೋಸೆಗಿಂತ ಹೆಚ್ಚಾಗುತ್ತಿತ್ತು. ಆದ್ದರಿಂದ ಅದು "ಟೂ-ಬೈ-ಒನ್" ಎಂದು ಒಬ್ಬರಿಗೊಬ್ಬರು ತಮಾಷೆ ಮಾಡಿಕೊಳ್ಳುತ್ತಿದ್ದೆವು. ಇಂತಹ ಕೆಲವು ರೆಸ್ಟೋರಂಟುಗಳಲ್ಲಿ "ನೋ ಒನ್-ಬೈ-ಟೂ ಸರ್ವಿಸ್" ಎಂದು ಬೋರ್ಡ್ ಕೂಡ ಹಾಕಿರುತ್ತಿದ್ದರು. ಕೆಲವು ಕಡೆ "ಸ್ಪೆಷಲ್ ರೂಮ್" ಇರುತ್ತಿತ್ತು. (ಎಸಿ ರೂಮುಗಳು ಇನ್ನೂ ಬಂದಿರಲಿಲ್ಲ). ಅಲ್ಲಿ ಒಬ್ಬರಿಗೆ ಐದು ಪೈಸೆ ಹೆಚ್ಚು ಕೊಡಬೇಕಿತ್ತು. ಹೀಗೆಂದು ಬೋರ್ಡ್ ಬರೆದಿರುತ್ತಿದ್ದರು. ಆ ರೂಮಿನಲ್ಲಿ ಕಪ್ಪು-ಸಾಸರಿನಲ್ಲಿ ಕಾಫಿ ಕೊಡುತ್ತಿದ್ದರು. ಅದರ ಹೊರಗಡೆ ಗಾಜಿನ ಲೋಟದಲ್ಲಿ. ಸ್ಪೆಷಲ್ ರೂಮಿನಲ್ಲಿ ತಿಂಡಿ ತಿಂದರೆ ಅಲ್ಲೇ ಬಿಲ್ ಪಾವತಿಸಬಹುದಿತ್ತು. ಹೊರಗಡೆ ತಿಂದರೆ ಬಿಲ್ ತೆಗೆದುಕೊಂಡು ಹೋಗಿ ಕ್ಯಾಷಿಯರ್ ಬಳಿ ಪಾವತಿ ಮಾಡಬೇಕಿತ್ತು.
ಈ "ಒನ್-ಬೈ-ಟು" ಆಥವಾ "ಟೂ-ಬೈ-ತ್ರೀ" ಎಂದು ಹೇಳುವುದು ಇಂಗ್ಲಿಷ್ ಕಲಿತಮೇಲೆ ಬಂದದ್ದು. ಆದರೆ ಒಂದನ್ನು ಎರಡು, ಎರಡನ್ನು ಮೂರು, ಅಥವಾ ಎರಡನ್ನು ಒಂದು ಮಾಡುವುದು ಹೊಸದೇನೂ ಅಲ್ಲ. ಅದು ತಲೆತಲಾಂತರದಿಂದ ಬಂದದ್ದೇ. ರಾಮಾಯಣ, ಮಹಾಭಾರತ ಕಾಲಗಳಿಂದಲೂ ಇವು ಇದ್ದೇ ಇವೆ. ಅದು ಹೇಗೆ? ಸ್ವಲ್ಪ ಮುಂದೆ ನೋಡೋಣ. ಹಿಂದಿನ "ರಾಹುಕಾಲ ಮತ್ತು ಬಲಿ ಪಾಡ್ಯಮಿ" ಎಂಬ ಸಂಚಿಕೆಯಲ್ಲಿ ರಾಹುಕಾಲ ಹೇಗೆ "ಸೆವೆನ್-ಬೈ-ಯೈಟ್" ಆಯಿತು ಅನ್ನುವುದನ್ನು ನೋಡಿದ್ದೆವಲ್ಲ! ಅದನ್ನು ಓದಬೇಕಾದರೆ ಇಲ್ಲಿ ಕ್ಲಿಕ್ ಮಾಡಿ.
*****
ಕೌರವರು ಮತ್ತು ಪಾಂಡವರು ಇನ್ನೂ ಹುಟ್ಟುವುದರ ಮುಂಚಿನ ಸಮಾಚಾರ ಇದು. ಮಗಧದ ರಾಜನಾಗಿದ್ದ ಬೃಹದ್ರಥ ರಾಜ್ಯಭಾರ ಮಾಡುತ್ತಿದ್ದ ಕಾಲ. ಅವನು ಕಾಶೀರಾಜನ ಅವಳಿ ಹೆಣ್ಣುಮಕ್ಕಳನ್ನು ವಿವಾಹವಾಗಿದ್ದನು. ಸಂತಾನವಿಲ್ಲದೆ ಚಿಂತಿತನಾಗಿದ್ದನು. ಒಮ್ಮೆ ಮಹಾತಪಸ್ವಿ ಒಬ್ಬರು ಅವನ ಆಸ್ಥಾನಕ್ಕೆ ಬಂದು ಅವನಿಗೆ ಅನುಗ್ರಹಿಸಿ ಒಂದು ಹಣ್ಣನ್ನು ಕೊಟ್ಟರು. ಇದನ್ನು ನಿನ್ನ ಪತ್ನಿ ಸೇವಿಸಿದರೆ ಸಂತಾನ ಆಗುವುದು ಎಂದು ಹೇಳಿದರು. ಬೃಹದ್ರಥನಿಗೆ ಒಬ್ಬಳಿಗೆ ಹಣ್ಣು ಕೊಟ್ಟು ಮತ್ತೊಬ್ಬಳ ಜೊತೆ ಮನಸ್ತಾಪ ಆಗುವುದು ಇಷ್ಟವಿರಲಿಲ್ಲ. ಅವರು ಹೋದ ನಂತರ ಬೃಹದ್ರಥನು ಆ ಹಣ್ಣನ್ನು ಒನ್-ಬೈ-ಟು ಮಾಡಿ ತನ್ನ ಇಬ್ಬರು ಹೆಂಡತಿಯರಿಗೂ ಕೊಟ್ಟನು. ಕಾಲಕ್ರಮದಲ್ಲಿ ಅವರಿಬ್ಬರೂ ಗರ್ಭವತಿಯರಾದರು. ಸಮಯ ಕಳೆದ ಮೇಲೆ ಅವರಿಬ್ಬರೂ ಒಂದೇ ದಿನ ಅರ್ಧ ಅರ್ಧ ಶಿಶುವನ್ನು ಹಡೆದರು. ನೋಡಲು ಭೀಕರವಾಗಿದ್ದ ಆ ಎರಡು ಶಿಶು ಹೋಳುಗಳನ್ನು ನಗರದ ಹೊರಗಡೆ ಬಿಸಾಡುವಂತೆ ರಾಜನು ತನ್ನ ನೌಕರರಿಗೆ ಆಜ್ಞಾಪಿಸಿದನು. ಅದರಂತೆ ಅವರು ತಮ್ಮ ಕೆಲಸ ಮಾಡಿದರು.
ಸ್ವಲ್ಪ ಸಮಯದ ನಂತರ ಜರೆ ಎಂಬ ಹೆಸರಿನ ರಕ್ಕಸಿಯೊಬ್ಬಳು ಹಸಿವಿನಿಂದ ಬಳಲುತ್ತಾ ಆಹಾರ ಹುಡುಕುತ್ತ ಅಲ್ಲಿ ಬಂದಳು. ಕಂಡ ಎರಡು ಶಿಶು ಹೋಳುಗಳನ್ನು ಎರಡು ಕೈಗಳಲ್ಲಿ ತೆಗೆದುಕೊಂಡು ತಿನ್ನಲು ನೋಡಿದಳು. ಆಗ ಎರಡು ಹೋಳುಗಳೂ ವಿಧಿವಶಾತ್ ಒಂದಾದವು. ಎರಡು ಭಾಗಗಳು ಸೇರಿಕೊಂಡ ತಕ್ಷಣ ಆ ಶಿಶುವಿಗೆ ಜೀವ ಬಂದು ಉಸಿರಾಡುತ್ತಾ ಬಹಳ ಜೋರಾದ ಶಬ್ದದಿಂದ ಅಳಲು ಪ್ರಾರಂಭಿಸಿತು. ಆ ಮಗುವನ್ನು ತಿನ್ನಲು ಮನಸ್ಸು ಬರದೆ ಜರೆಯು ಮಗುವನ್ನು ರಾಜನಿಗೆ ತಂದು ಕೊಟ್ಟಳು. ರಾಜನು ಸಂತೋಷ ಪಟ್ಟು ಆ ಮಗುವಿಗೆ "ಜರಾಸಂಧ" ಎಂದು ಅವಳ ಹೆಸರು ನೆನಪಿರುವಂತೆ ನಾಮಕರಣ ಮಾಡಿದನು. ಬೃಹದ್ರಥನ ನಂತರ ಜರಾಸಂಧನು ಮಗಧದ ರಾಜ ಆದನು.
ಜರಾಸಂಧನಿಗೆ ಅಸ್ತಿ ಮತ್ತು ಪ್ರಾಪ್ತಿ ಎಂದು ಎರಡು ಹೆಣ್ಣು ಮಕ್ಕಳಿದ್ದರು. ಮಥುರೆಯ ಉಗ್ರಸೇನ ರಾಜನ ಮಗ ಕಂಸನು ತಂದೆಯನ್ನು ಸಿಂಹಾಸನದಿಂದ ಕೆಳಗಿಳಿಸಿ ತಾನು ರಾಜನಾದನು. ಜರಾಸಂಧನು ತನ್ನ ಎರಡೂ ಹೆಣ್ಣು ಮಕ್ಕಳನ್ನು ಅವನಿಗೆ ಕೊಟ್ಟು ಮಡುವೆ ಮಾಡಿ ಟೂ-ಇನ್-ಒನ್ ಸಿಸ್ಟಮ್ಮಿನಲ್ಲಿ ಅಳಿಯನನ್ನಾಗಿ ಮಾಡಿಕೊಂಡನು. ಮುಂದೆ ಕಂಸನ ತಂಗಿ ದೇವಕಿಯನ್ನು ವಸುದೇವನು ಮದುವೆಯಾದದ್ದು, ಬಲರಾಮ-ಕೃಷ್ಣರು ಜನಿಸಿದ್ದು, ಕೃಷ್ಣನು ಕಂಸನನ್ನು ಕೊಂಡಿದ್ದು, ಜರಾಸಂಧ-ಕೃಷ್ಣರ ಅನೇಕ ಯುದ್ಧಗಳು, ಜರಾಸಂಧನ ಉಪಟಳ ತಾಳಲಾರದೆ ಕೃಷ್ಣನು ಯಾದವರನ್ನು ಮಥುರೆಯಿಂದ ದ್ವಾರಕೆಗೆ ಸ್ಥಳಾಂತರಿಸಿದ್ದು ಇವೆಲ್ಲ ನಡೆದುವು. ರಾಜಸೂಯ ಯಾಗಕ್ಕೆ ಮುಂಚೆ ಕೃಷ್ಣನು ಭೀಮಾರ್ಜುನರ ಜೊತೆ ಮಗಧಕ್ಕೆ ಹೋಗಿ ಜರಾಸಂಧನನ್ನು ಭೀಮನಿಂದ ಕುಸ್ತಿ ಕಾಳಗದಲ್ಲಿ ಸಿಕ್ಕಿಸಿದನು. ಕೃಷ್ಣನ ಸೂಚನೆಯಂತೆ ಭೀಮಸೇನನು ಜರಾಸಂಧನನ್ನು ಮತ್ತೆ ಒನ್-ಬೈ-ಟೂ ಮಾಡಿ ಕೊಂದನು.
*****
ಮಹಾಭಾರತದ ಕಾಲಕ್ಕಿಂತ ಹಿಂದೆ ಹೋಗೋಣ. ದಶರಥನು ರಾಜ್ಯಭಾರ ಮಾಡುತ್ತಾ ಅಯೋಧ್ಯೆಯನ್ನು ಆಳುತ್ತಿದ್ದ ಕಾಲ. ಕೌಸಲ್ಯೆ, ಸುಮಿತ್ರೆ, ಕೈಕೇಯಿ ಎಂಬ ಮೂರು ರಾಣಿಯರಿದ್ದರೂ ದಶರಥನಿಗೆ ಮಕ್ಕಳಿರಲಿಲ್ಲ. ದಶರಥನು ಬಹಳ ಚಿಂತಿತನಾಗಿದ್ದನು. ಒಮ್ಮೆ ಬೇಟೆಗೆಂದು ಕಾಡಿಗೆ ಹೋಗಿದ್ದಾಗ ಪ್ರಮಾದವಶಾತ್ ಶ್ರವಣ ಕುಮಾರನನ್ನು ಆನೆಯೆಂದು ತಿಳಿದು ಶಬ್ದವೇಧಿ ಬಾಣ ಪ್ರಯೋಗಿಸಿ ಕೊಂದನು. "ನಿನ್ನ ಕೊನೆಯ ಕಾಲದಲ್ಲಿ ನಿನಗೂ ಪುತ್ರ ವಿಯೋಗವಾಗಲಿ" ಎಂದು ಶಪಿಸಿ ಶ್ರವಣನ ತಂದೆ-ತಾಯಿಯರು ದೇಹ ತ್ಯಾಗ ಮಾಡಿದರು. ರಾಜಧಾನಿಗೆ ಬಂದ ದಶರಥನು ವಿಷಾದದಿಂದ ರಾಜಗುರು ವಸಿಷ್ಠರಿಗೆ ವಿಷಯ ತಿಳಿಸಿದನು. "ಚಿಂತಿಸಬೇಡ. ಮೊದಲು ಮಕ್ಕಳಾಗಲಿ" ಎಂದು ವಸಿಷ್ಠರು ಸಮಾಧಾನ ಮಾಡಿದರು.
ವಸಿಷ್ಟರು ದಶರಥನಿಂದ ಪುತ್ರಕಾಮೇಷ್ಟಿ ಯಾಗವನ್ನು ಮಾಡಿಸಿದರು. ಯಜ್ಞಪುರುಷನು ಹೋಮಕುಂಡದಿಂದ ಹೊರಬಂದು ಒಂದು ದಿವ್ಯವಾದ ಪಾತ್ರೆಯಲ್ಲಿ ಸಂತಾನ ಕಾರಕ ಪಾಯಸವನ್ನು ಕೊಟ್ಟನು. ಕೌಸಲ್ಯೆಯು ಪಟ್ಟದರಾಣಿ. ಕೈಕೇಯಿ ಇಷ್ಟದ ರಾಣಿ. ಸುಮಿತ್ರೆ ಯಾವಾಗಲೂ ಇವರ ಹಿಂದಿರುವವಳು. ಅವಳಿಗೆ ಅದೇ ಅಭ್ಯಾಸ. ದಶರಥನು ಪಾಯಸವನ್ನು ಒನ್-ಬೈ-ಟೂ ಸಿಸ್ಟಮ್ಮಿನಲ್ಲಿ ಎರಡು ಭಾಗ ಮಾಡಿ ಕೌಸಲ್ಯೆ ಮತ್ತು ಕೈಕೆಯರಿಗೆ ಕೊಟ್ಟನು. ನಂತರ ಹಿಂದೆ ನೋಡಿದರೆ ಸುಮಿತ್ರೆ ನಿಂತಿದ್ದಾಳೆ. ಈಗೇನು ಮಾಡುವುದು? ಆಗ ಸವತಿಯರಲ್ಲಿ ತುಂಬಾ ವಿಸ್ವಾಸವಿತ್ತು. ಇನ್ನೂ ಮಂಥರೆಯ ಉಪದೇಶಗಳು ಪ್ರಭಾವ ಬೀರಿರಲಿಲ್ಲ. ಕೌಸಲ್ಯೆಯು ತನ್ನ ಪಾಲಿನ ಪಾಯಸದಲ್ಲಿ ಅರ್ಧವನ್ನು ಸುಮಿತ್ರೆಗೆ ಕೊಟ್ಟಳು. ಕೈಕೇಯಿಯೂ ಹಾಗೆಯೇ ಮಾಡಿದಳು. ಈಗ ಮೊದಲು ಒನ್-ಬೈ-ಟೂ ಇದ್ದದ್ದು ಟೂ-ಬೈ-ಫೋರ್ ಆಯಿತು. ಎರಡು ಪಾಲು ಸಿಕ್ಕಿದ್ದರಿಂದ ಸುಮಿತ್ರೆಗೆ ಇಬ್ಬರು ಮಕ್ಕಳು ಜನಿಸಿದರು. ಕೌಸಲ್ಯೆ ಮತ್ತು ಕೈಕೇಯಿಗೆ ಒಬ್ಬೊಬ್ಬ ಮಗ. ಒಟ್ಟಿನಲ್ಲಿ ನಾಲ್ಕು. ಹೀಗೆ ನಡೆಯಿತು.
ಲಕ್ಷ್ಮಣ-ಶತ್ರುಘ್ನರು ಒಂದೇ ತಾಯಿಯ ಮಕ್ಕಳಾದರೂ ಅಷ್ಟಾಗಿ ಜೊತೆಯಲ್ಲಿ ಇರಲಿಲ್ಲ. ಲಕ್ಷ್ಮಣನು ಎಂದೂ ರಾಮನ ಜೊತೆ. ಶತ್ರುಘ್ನನು ಯಾವಾಗಲೂ ಭರತನ ಜೊತೆ. ಏಕೆ ಹೀಗೆ? ತಿಳಿದವರು ಇದು ಪಾಯಸದ ನಂಟು ಅಂದರು. ಕೌಸಲ್ಯೆ ಕೊಟ್ಟ ಪಾಯಸದ ಕೂಸು ಲಕ್ಷ್ಮಣ ಅವಳ ಮಗ ರಾಮನ ಜೊತೆ. ಕೈಕೇಯಿ ಕೊಟ್ಟ ಪಾಯಸದ ಕೂಸು ಶತ್ರುಘ್ನ ಅವಳ ಕೂಸು ಭರತನ ಜೊತೆ. ಹೀಗಂತೆ.
ಒಟ್ಟಿನಲ್ಲಿ ಇಲ್ಲಿ ಒನ್-ಬ್ಯೆ-ಟೂ, ಟೂ-ಬ್ಯೆ-ತ್ರೀ, ಟೂ-ಬ್ಯೆ-ಫೋರ್ ಎಲ್ಲವೂ ಆದವು. ಮುಂದೆ ರಾಮಾಯಣ ನಡೆಯಿತು. ಅದು ಎಲ್ಲರಿಗೂ ಗೊತ್ತಿದ್ದದ್ದೇ.
*****
ಕೆಲವರಿಗೆ ಈಗ ಒಂದು ಸಮಸ್ಯೆ ಬರಬಹುದು. ರಾಮಾಯಣದ ಕಾಲದಲ್ಲಿ ನಡೆದಿದ್ದಕ್ಕೂ ಮಹಾಭಾರತದ ಕಾಲದಲ್ಲಿ ನಡೆದಿದ್ದಕ್ಕೂ ಏಕೆ ವ್ಯತ್ಯಾಸ? ಅಲ್ಲಿ ನಾಲ್ಕು ಪೂರ್ಣ ಶಿಶುಗಳು. ಇಲ್ಲಿ ಎರಡು ಅರ್ಧ ಶಿಶುಗಳು. ಇದೇಕೆ ಈ ಗೋಜಲು?
ಇದಕ್ಕೆ ಉತ್ತರ ಪಾಯಸದಲ್ಲಿ ಮತ್ತು ಹಣ್ಣಿನಲ್ಲಿ ಅಡಗಿದೆ. ಪಾಯಸ ಭಾಗವಾದರೂ ಪಾಯಸವೇ. ಹಣ್ಣು ಭಾಗವಾದರೆ ಹಣ್ಣಾಗಿ ಉಳಿಯುವುದಿಲ್ಲ. ಹಣ್ಣಿನ ಹೋಳಾಗುತ್ತದೆ. ಅಷ್ಟೇ.
ಒಂದು ಕೆಲಸ ಮಾಡಿ. ಹತ್ತು ಲೀಟರು ಸೊಗಸಾದ ಪಾಯಸ ತಯಾರಿಸಿ. ಎರಡು ಭಾಗ ಮಾಡಿ. ಐದು ಲೀಟರು ಪಾಯಸ ಬಲಗಡೆ ಮನೆಯವರಿಗೆ ಕೊಡಿ. ಇನ್ನೈದು ಲೀಟರು ಪಾಯಸ ಎಡಗಡೆ ಮನೆಯವರಿಗೆ ಕೊಡಿ. ಅವರಿಬ್ಬರೂ ಮತ್ತೆ ಎರಡು ಭಾಗ ಮಾಡಿ, ಒಂದನ್ನು ಅವರೇ ಇಟ್ಟುಕೊಂಡು ಮತ್ತೆ ಒಂದು ಭಾಗವನ್ನು ಅವರ ಪಕ್ಕದ ಮನೆಯವರಿಗೆ ಕೊಡಲಿ. ಈಗ ಎಲ್ಲರೂ ನಮಗೆ ಪಾಯಸ ಸಿಕ್ಕಿತು ಅನ್ನುತ್ತಾರೆ. ಪಾಯಸದ ಹೋಳು ಅನ್ನುವುದಿಲ್ಲ.
ಇದೇ ಪ್ರಯೋಗ ಒಂದು ಹಣ್ಣಿನಲ್ಲಿ ಮಾಡಿ. ನಮಗೆ ಒಂದು ಹಣ್ಣು ಕೊಟ್ಟರು ಎಂದು ಯಾರೂ ಹೇಳುವುದಿಲ್ಲ. ಹಣ್ಣಿನ ಹೋಳು ಸಿಕ್ಕಿತು ಎಂದೇ ಹೇಳುತ್ತಾರೆ.
*****
ಮುಂದೆ ಯಾರಾದರೂ ತಪಸ್ವಿಗಳು ನಿಮಗೆ ಸಂತಾನಕ್ಕಾಗಿ ಪಾಯಸವನ್ನೋ ಅಥವಾ ಹಣ್ಣನ್ನೋ ಕೊಟ್ಟರೆ ಈ ಎರಡು ಪ್ರಸಂಗಗಳನ್ನು ನೆನಪಿಟ್ಟುಕೊಳ್ಳಿ. ಇಲ್ಲದಿದ್ದರೆ ಏನಾಗುತ್ತದೆ ಎಂದು ನಿಮಗೇ ಗೊತ್ತು!
ಬಾಲ್ಯದಲ್ಲಿ ಅಣ್ಣಂದಿರು ಅವರ NCC ಕ್ಲಾಸ್ ನಲ್ಲಿ ಸಿಗುತ್ತಿದ್ದ ಕೂಪನ್ಗಳನ್ನು ಶೇಖರಿಸಿ ತಿಂಗಳಿಗೊಮ್ಮೆ ಹೋಟೆಲಿನಿಂದ ಮಸಾಲೆದೋಸೆ ತಂದು ಮನೆ ಮಕ್ಕಳೆಲ್ಲಾ ಫೋರ್ ಬೈ ನೈನ್, ಫೈವ್ ಬೈ ನೈನ್ ಇತ್ಯಾದಿ ಹಂಚಿಕೊಂಡು ತಿನ್ನುತ್ತಿದ್ದ ದಿನಗಳು ನೆನಪಾದವು ಸರ್.
ReplyDeleteವಾರಕ್ಕೊಮ್ಮೆ ನಡೆಯುವ ಸಂತೆಗೋಸ್ಕರ ವಾರವಿಡೀ ಕಾಯುತ್ತಿದ್ದ ದಿನಗಳು ಅವು.
ರಾಮಾಯಣದ ನಾಲ್ಕು ಪೂರ್ಣ ಶಿಶುಗಳು ಮತ್ತು ಮಹಾಭಾರತದ ಎರಡು ಅರ್ಧ ಶಿಶುಗಳ ಬಗ್ಗೆ ಪಾಯಸ ಹಾಗೂ ಹಣ್ಣಿನ ಉದಾಹರಣೆ ಕೊಟ್ಟು ಸರಳವಾಗಿ ಅರ್ಥ ಮಾಡಿಸಿದ್ದೀರಿ 🙏
ಕೊನೆಯ ಪ್ಯಾರಾ ಓದಿ ನಗು ತಡೆಯಲಾಗಲಿಲ್ಲ 😂😂
ಗೊತ್ತಿರುವ ಕಥೆ ಆದರೂ ಲಘು ಹಾಸ್ಯ ಲೇಪನದ ನಿರೂಪಣೆ ಇಂದ ರಸವತ್ತಾಗಿತ್ತು. ರಸ ಹಣ್ಣಿನಲ್ಲೂ ಇದೆ ಪಾಯಸದಲ್ಲೂ ಇದೆ ತಾನೇ!
ReplyDeleteVery humorous as well as reminding us our way of simple life when we were young as we have experienced it. Comparing this to the stories of Ramayana and Mahabharata is great.
ReplyDeleteOne Title and three stories 😀
ReplyDeleteWhat an amazing writing. Every word evokes interest. Even the stories we knew earlier gets a new look. Thanks so much for gathering the essence and weaving it into a work of art
👆ಬಹಳ ಗಂಭೀರವಾದ ಲೇಖನಗಳನ್ನು ಓದಿದ ನಂತರ, ಈ ಲೇಖನದಲ್ಲಿ, ಹಾಸ್ಯದ ರಸದೌತಣ ವಾಗಿದೆ. ಪಾಯಸ, ಭಾಗ ಆದಮೇಲೂ ಪಾಯಸವಾಗಿ ಉಳಿಯುತ್ತದೆ, ಆದರೆ ಹಣ್ಣು ಭಾಗವಾದನಂತರ ಅದರ ನಿಜ ಸ್ವರೂಪ ಕಳೆದು ಕೂಳ್ಳುವ ವಿವರಣೆ ಸೂಗಸಾಗಿದೆ.
ReplyDeleteಆಗಿನ ಕಾಲದಲ್ಲಿ ಸವತಿಯರಿಗೆ ಭಾಗ ದೂರೆಯುತ್ತಿತು, ಈಗ ಸವತಿಯಿದ್ದರೇ, ಆಗುವುದು ನಮ್ಮ ತಿಥಿ.
ಮಾರುಕಟ್ಟೆಗೆ ಹೋಗಿ, ದಿನಸಿ ತರಕಾರಿ ತರುತ್ತಿದ್ದ, ಕಾಲದಲ್ಲಿ, ವ್ಯವಹಾರ ಹಾಗೂ ಪ್ರಪಂಚದ ಜ್ಞಾನ ಕಲಿಯುವ ಅವಕಾಶವಿತ್ತು.
ಬೈಟು system, ಬಾಲ್ಯದ ದಿನಗಳನ್ನು, ಮೆಲುಕು ಹಾಕಿದಂತೆ ಆಯಿತು.
ಈಗ ಪಾಯಸ ನೀಡುವುದಕ್ಕೆ, ತಪಸ್ವಿ ಗಳನ್ನು ಹುಡುಕಬೇಕಾದ ಕಾಲ.
ಬಾಲ್ಯದಲ್ಲಿ ಹಣ್ಣನ್ನು ಬಟ್ಟೆಯಲ್ಲಿ ಸುತ್ತಿ ಹಲ್ಲಿನಲ್ಲಿ ಕಚ್ಚಿ ಬೈ ಟೂ ಬೈ ತ್ರೀ ಇತ್ಯಾದಿ ಮಾಡುತ್ತಿದ್ದೆವು.ಇದನ್ನು ಕಾಗೆ ಎಂಜಲು ಎಂದು ಕರೆಯುತ್ತಿದ್ದೆವು.ಯಾಕೆ ಎಂದು ಗೊತ್ತಿಲ್ಲ.
ReplyDeleteಬಳಪ ಸಹ ಮುರಿದೂ ಮುರಿದು ಕೈಯಲ್ಲಿ ಹಿಡಿಯಲಾಗದಷ್ಟು ಚಿಕ್ಕದಾದಾಗ ಸುಮ್ಮನಾಗುತ್ತಿದ್ದೆವು!
ಲೇಖನ ತಿಳುವಳಿಕೆಯ ಜೊತೆಗೆ ಹಳೆಯ ನೆನಪುಗಳನ್ನು ತಂದಿದೆ.
Very nicely correlated ises after thousands ofyears
ReplyDeleteMade me to recollect my college days when we classmates used to share the food. Good blog and good comparison.
ReplyDelete