ಪ್ರತಿಯೊಂದಕ್ಕೂ ಒಂದೊಂದು ಕಾಲ ಇರುತ್ತೆ. ಆ ಕಾಲ ಬರುತ್ತೆ. ಹೌದು. ಆದರೆ ಕೆಲವಕ್ಕೆ ಎಲ್ಲ ಕಾಲವೂ ಸರಿಹೊಂದಿ ನಡೆಯುತ್ತೆ. ಇದೂ ಹೌದು!
ಇದು ಮಾವಿನ ಹಣ್ಣಿನ ಕಾಲ. ಎಲ್ಲೆಲ್ಲಿ ನೋಡಿದರೂ ಮಾವಿನ ಹಣ್ಣು. ಮುಂದೆ ಸೇಬಿನ ಕಾಲ ಬರುತ್ತೆ. ನಂತರ ಇನ್ನೊಂದು ಹಣ್ಣಿನ ಕಾಲ. ಹೀಗೆ ಕೆಲವು ಹಣ್ಣಿಗೆ ಒಂದೊಂದು ಕಾಲ. (ಈಗ ಕೋಲ್ಡ್ ಸ್ಟೋರೇಜುಗಳ ಕಾಲವಾದ್ದರಿಂದ ಎಲ್ಲ ಕಾಲದಲ್ಲೂ ಸ್ವಲ್ಪಮಟ್ಟಿಗೆ ಸಿಗಬಹುದು). ಹಿಂದೆ ಕಲ್ಲಂಗಡಿ, ಕರಬೂಜಕ್ಕೆ ಬೇಸಿಗೆ ಕಾಲವಿತ್ತು. ಈಗ ಹಾಗೆ ಹೇಳುವಂತಿಲ್ಲ. ಆದರೆ ಬಾಳೆ ಹಣ್ಣಿಗೆ ಎಲ್ಲ ಕಾಲವೂ ಸಕಾಲ. ವರುಷದ ಹನ್ನೆರಡು ತಿಂಗಳೂ ಅದರ ಕಾಲವೇ.
ಕನ್ನಡ ಚಲನಚಿತ್ರ ರಂಗವನ್ನೇ ನೋಡೋಣ. ಪ್ರಾರಂಭದಲ್ಲಿ ಪೌರಾಣಿಕ ಚಿತ್ರಗಳ ಕಾಲ. ನಂತರ ಜಾನಪದ ಚಿತ್ರಗಳ ಕಾಲ. ಅದರನಂತರ ಸಾಮಾಜಿಕ ಚಿತ್ರಗಳ ಕಾಲ. ಅದರಲ್ಲಿಯೂ ಕಾದಂಬರಿ ಆಧಾರಿತ ಚಿತ್ರಗಳ ಸಮಯ. ಅದಾದ ಮೇಲೆ ಹೊಸ ಅಲೆಯ ಚಿತ್ರಗಳ ಕಾಲ. ತದನಂತರ ಸಾಹಸಮಯ, ಜೇಮ್ಸ್ ಬಾಂಡ್ ರೀತಿಯ ಚಿತ್ರಗಳ ಕಾಲ. ಇವಾದಮೇಲೆ ಹಿಂಸಾಪ್ರಧಾನ (ಕೊಲೆ-ರಕ್ತಪಾತ) ಚಿತ್ರಗಳ ಕಾಲ. ಒಂದು ಚಿತ್ರದಲ್ಲಿ ಎಷ್ಟು ಹೆಣಗಳು ಬಿದ್ದವು ಅಥವಾ ಎಷ್ಟು ಲೀಟರು ರಕ್ತ ಸುರಿಯಿತು ಎನ್ನುವುದರ ಮೇಲೆ ಚಿತ್ರ ಯಶಸ್ವಿಯೋ ಅಲ್ಲವೋ ಎಂದು ತೀರ್ಮಾನಿಸುವ ಕಾಲ. ಮತ್ತೆ ಈಗಂತೂ ಇವು ಕನ್ನಡ ಚಿತ್ರಗಳೇ ಎಂದು ಅನುಮಾನಿಸುವ ಕಾಲ! ಈ ಚಿತ್ರಗಳಲ್ಲಿ "ಕನ್ನಡ ಎಲ್ಲಿದೆ?" ಎಂದು ಹುಡುಕುವ ಕಾಲ. ಎಲ್ಲಕ್ಕೂ ಒಂದೊಂದು ಕಾಲ!
ರವಿಕೆಗಳಿಗೂ ಹೀಗೆಯೇ ಇತ್ತು. ಯಾರೋ ಒಬ್ಬರು ದರ್ಜಿಯೊಬ್ಬನಿಗೆ ರವಿಕೆ ಹೊಲೆಯಲು ಕೊಟ್ಟ ಬಟ್ಟೆ ಸ್ವಲ್ಪ ಹೆಚ್ಚಾಗಿತ್ತು. ಎರಡು ರವಿಕೆ ಹೊಲೆಯಲು ಕಡಿಮೆ. ಒಂದಕ್ಕೆ ಜಾಸ್ತಿ. ಸರಿ, ಏನು ಮಾಡುವುದು? ಮುಂಗೈಗೆ ಹತ್ತಿರ ಬರುವಷ್ಟು ಉದ್ದ ತೋಳಿಟ್ಟು ರವಿಕೆ ಹೊಲೆದ. ಒಂದು ತಿಂಗಳಿನಲ್ಲಿ ಎಲ್ಲರ ರವಿಕೆಯೂ ಹಾಗೆಯೇ ಆಯಿತು. ಬರಬರುತ್ತ ತೋಳು (ರವಿಕೆಯದು) ಮೇಲೆ ಹೋಗಲು ಶುರುವಾಯಿತು. ಕಡೆಗೆ ರವಿಕೈ "ರವಿ" ಆಯಿತು. {ತೋಳೇ ಇಲ್ಲದ, ಕೈ ಇಲ್ಲದ, ಸ್ಲೀವ್ ಲೆಸ್ ರವಿಕೆ). ಈಗ ಡ್ರೆಸ್ಸುಗಳು ಬಂದು ಇದು ಸ್ವಲ್ಪ ಕಡಿಮೆ ಆಗಿರಬಹುದು. ಆದರೆ ನಿರಾಸೆ ಪಡಬೇಕಿಲ್ಲ. ಡ್ರೆಸ್ಸುಗಳ ತೋಳೂ ಹೀಗೆಯೇ ಹುಣ್ಣಿಮೆ-ಅಮಾವಾಸ್ಯೆ ಕಾಣುತ್ತಿವೆ.
ಪ್ಯಾಂಟುಗಳ ಸ್ಥಿತಿಯೂ ಹಾಗೆಯೇ. ಹಿಂದೆಲ್ಲ ಪ್ಯಾಂಟಿನ ಕೆಳಗಡೆ ಮಡಿಕೆ ಇರುತ್ತಿತ್ತು. ನಂತರ ಆನೆ ಬುಡದ (ಎಲಿಫೆಂಟ್ ಬಾಟಮ್) ಮಡಿಕೆಯ ಪ್ಯಾಂಟುಗಳು ಬಂದವು. ಟೈಟ್ ಪ್ಯಾಂಟಿಗೂ ಒಂದು ಕಾಲ ಇತ್ತು. ಅವನನ್ನು ನಿಲ್ಲಿಸಿ ಹೊಲೆದುದೋ ಎನ್ನುವಷ್ಟು ಟೈಟು. ಚರ್ಮಕ್ಕೂ ಬಟ್ಟೆಗೂ ಮಧ್ಯೆ ನಿರ್ವಾತ ಪ್ರದೇಶ. ಈಗಂತೂ ಹರಕು ಬಟ್ಟೆಯ ಹೊಸ ಪ್ಯಾಂಟುಗಳು. ಹೊಸ ಪ್ಯಾಂಟು ಹರಿಯಲಿ ಎಂದು ಕಾಯಲೇಬೇಕಿಲ್ಲ. "ನಾವು ಹರಕು ಜನ" ಎಂದು ಬಾಯಲ್ಲಿ ಹೇಳದೇ ಬೇರೆಯವರಿಗೆ ಗೊತ್ತಾಗುವುದು. ಹೀಗೆ ಕಾಲದಿಂದ ಕಾಲಕ್ಕೆ ಬದಲಾವಣೆ.
*****
ಹೀಗೆ ಕಾಲದಿಂದ ಕಾಲಕ್ಕೆ ಚಾಲ್ತಿಯಲ್ಲಿರುವುದು ಬದಲಾಗುವ ಪದ್ದತಿಗೆ ಹಾಡುಗಳೂ ಹೊರತಲ್ಲ. ಯಾರೋ ಒಬ್ಬರು ಪ್ರಭಾವಿಗಳು ಅಥವಾ ಪ್ರಸಿದ್ಧರು ಹಾಡಿದರೆ ಸಾಕು. ಕೆಲವುಕಾಲ ಆ ಹಾಡಿಗೆ ಶುಕ್ರ ದೆಸೆ. ಮತ್ತೊಂದು ಅದರ ಜಾಗ ಆಕ್ರಮಿಸುವವರೆಗೆ. ಯೂಟ್ಯೂಬ್ ಮತ್ತು ವಾಟ್ಸಾಪ್ ಬಂದಮೇಲಂತೂ ಕೇಳುವುದೇ ಬೇಡ. ಕೆಲವು ಕಾಲ "ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ" ನಡೆಯಿತು. ಅದು ಮುಗಿದನಂತರ "ರಘುವೀರ ಗದ್ಯ" ಸ್ವಲ್ಪ ದಿನ. ಅದಾದಮೇಲೆ "ಎಂಥ ಶ್ರೀಮಂತನಂತಾನೋ" ಓಡಿತು. ನಂತರ "ಯಾರೂ ಸಂಗಡ ಬಹೋರಿಲ್ಲ". ಈಗ "ಮರಳು ಮಾಡಿಕೊಂಡೆಯಲ್ಲೇ ಮಾಯಾದೇವಿಯೇ" ನಡೆಯುತ್ತಿದೆ. ಮುಂದೆ ಇನ್ನೊಂದು ಕಾಯುತ್ತಿರುತ್ತದೆ. ಹೀಗೆ.
ಈ ಮಾಯಾದೇವಿ ಯಾರು? ಆ ಹೆಸರು ಹೇಗೆ ಬಂತು? ಅದರ ವಿಶೇಷವೇನು? ಹೀಗೆಂದು ಮಿತ್ರರೊಬ್ಬರು ಕೇಳಿದ್ದಾರೆ. "ಪ್ರಳಯ ಕಾಲದಲ್ಲಿ ಅಲದೆಲೆಯ ಮೇಲೆ ಮಲಗಿದಾಗ ಹಲವು ಆಭರಣಗಳು, ಜಲವು ಆಗಿ ಜಾಣತನದಿ" ಅನ್ನುವುದು ನೇರವಾಗಿ ಮಹಾಲಕ್ಷ್ಮಿ ದೇವಿಯನ್ನೇ ಸೂಚಿಸುತ್ತದೆ. "ಎಡಕೆ ಭೂಮಿ, ಬಲಕೆ ಶ್ರೀಯು, ಎದುರಿನಲ್ಲಿ ದುರ್ಗಾದೇವಿ" ಎನ್ನುವುದು ಅವಳದೇ ಆದ ಶ್ರೀ, ಭೂ, ಮತ್ತು ದುರ್ಗಾ ರೂಪಗಳನ್ನು ಹೇಳುತ್ತವೆ. "ಛತ್ರ, ಚಾಮರ, ವ್ಯಜನ, ಪರ್ಯಂಕ, ಪಾತ್ರರೂಪದಲ್ಲಿ ಹರಿಯ ನಿತ್ಯ ಸೇವೆ ಮಾಡುವಂಥ" ಎಂದು ವರ್ಣಿಸುವ "ಏನು ಧನ್ಯಳೋ, ಲಕುಮಿ ಎಂಥ ಮಾನ್ಯಳೋ" ಎನ್ನುವುದನ್ನು ಇನ್ನೊಂದು ರೀತಿ ಹೇಳುವುದು ಇದು. ಆದರೆ "ಮಾಯಾದೇವಿ" ಎಂದು ಏಕೆ ಸಂಬೋಧಿಸಿದರು ದಾಸರು? ಪರಮ ಮಾಯಾವಿಗೇ ಮಾಯ-ಮಾಟ ಮಾಡಿದ್ದಾಳೆ ಎಂದೇ?
*****
ಮನೆಯಲ್ಲಿ ಒಂದು ಮಗು ಬರುತ್ತದೆ ಎಂದ ತಕ್ಷಣ ಭಾವಿ ತಾಯಿ-ತಂದೆಯರಿಗೆ ಚಿಂತೆಗಳ ಸರಮಾಲೆ ಶುರು. ಬೇರೆ ಅನೇಕ ಚಿಂತೆಗಳಿಗಿಂತ ಹೆಚ್ಚಾಗಿ ಕಾಡುವುದು "ಏನು ಹೆಸರಿಡಬೇಕು?" ಎನ್ನುವುದು. ಹಿಂದೆಲ್ಲಾ ಇದು ಅಂತಹ ಯೋಚಿಸುವ ವಿಷಯವಾಗಿರಲಿಲ್ಲ. ಯಾವುದೋ ಒಂದು ದೇವರ ಹೆಸರು ಇಡುತ್ತಿದ್ದರು. ಇಲ್ಲವೇ ಮನೆಯ ಹಿರಿಯರು ಯಾರಾದರೂ ಸ್ವಲ್ಪ ದಿನದ ಹಿಂದೆ ನಿಧನರಾಗಿದ್ದಾರೆ ಅವರ ಹೆಸರು. ಇಲ್ಲವಾದರೆ ಮನೆದೇವರ ಅನೇಕ ಹೆಸರುಗಳಲ್ಲಿ ಯಾವುದಾದರೂ ಒಂದು. ಈಗ ಹಾಗಿಲ್ಲ. ಯಾರೂ ಇಡದ ಅಪರೂಪದ ಹೆಸರು ಬೇಕು ಎನ್ನುವ ತವಕ. ಅದರ ಅರ್ಥ ಏನು ಎಂದು ಯಾರಿಗೂ ಗೊತ್ತಾಗದಿದ್ದರೂ ಪರವಾಗಿಲ್ಲ. ಯಾರಿಗೂ ಅದು ಅರ್ಥವಾಗದಿದ್ದರೆ ಇನ್ನೂ ಒಳ್ಳೆಯದು. ಇಂಗ್ಲಿಷಿನಲ್ಲಿ "ಏ" ಇಂದ ಪ್ರಾರಂಭವಾಗುವ ಹೆಸರಾದರೆ ಬಹಳ ಒಳ್ಳೆಯದು. ಏಕೆಂದರೆ ಶಾಲೆಯ ಹಾಜರಿ ರಿಜಿಸ್ಟರಿನಲ್ಲಿ ಮೊದಲನೆಯ ಹೆಸರಾಗುತ್ತದೆ. ಈ ರೀತಿ.
ಸಮಾರಂಭದಲ್ಲಿ ಒಂದು ಮುದ್ದಾದ ಮಗು ಕಂಡಿತು. "ಮಗು ಬಹಳ ಮುದ್ದಾಗಿದೆ" ಅಂದರು ನೋಡಿದವರೊಬ್ಬರು. ತಾಯಿಗೆ ನ್ಯಾಯವಾಗಿಯೇ ಬಲು ಸಂತೋಷವಾಯಿತು. ಮುಖ ಅಗಲಿಸಿದಳು. "ಏನು ಹೆಸರು?" ಎಂದು ಕೇಳಿದರು. ಸ್ವಲ್ಪ ಒದ್ದಾಡಿದರೂ ಕಡೆಗೆ ಸತ್ಯ ಹೇಳಿದಳು. "ಅಪರೂಪದ ಹೆಸರು ಇಟ್ಟಿದ್ದೇವೆ. ತಕ್ಷಣ ನೆನಪಿಗೆ ಬರುತ್ತಿಲ್ಲ. ಮರೆತುಹೋಗಿದೆ. ಕ್ಷಮಿಸಿ" ಅಂದಳು. ಇದು ಕಟ್ಟು ಕಥೆಯಲ್ಲ. ನಿಜವಾಗಿ ನಡೆದದ್ದು.
ಹೆಣ್ಣುಮಕ್ಕಳಿಗೆ ಗಂಗಾ, ಯಮುನಾ, ಗೋದಾವರಿ, ನರ್ಮದಾ, ಕಾವೇರಿ, ಹೀಗೆ ನದಿಗಳ ಹೆಸರು ಇಡುತ್ತಿದ್ದರು. ಇಲ್ಲವೇ ಹಿಂದಿ ಸಿನಿಮಾಗಳಲ್ಲಿ ಬರುವಂತೆ ಚಂಪಾ, ಚಮೇಲಿ, ಗುಲಾಬಿ, ಮಾಲಾ, ಸುರಭಿ ಇತ್ಯಾದಿ. ಈ ರೀತಿಯ ಜನಪ್ರಿಯ ಹೆಸರುಗಳಲ್ಲಿ ಜಯ, ಮಾಯಾ ಮತ್ತು ಶಾಂತಿ ಸಹ ಸೇರಿವೆ. ಜಯಾ ಅಂತೂ ಅನೇಕ ರೂಪಗಳಲ್ಲಿ ಉಂಟು. ಜಯ, ವಿಜಯ, ಜಯಶ್ರೀ, ವಿಜಯಶ್ರೀ, ಜಯಮಾಲಾ, ಜಯಲಲಿತಾ, ವಿಜಯಲಲಿತಾ, ಜಯಗೌರಿ, ಹೀಗೆ ಅನೇಕ ಪ್ರಭೇದಗಳು. ಮಾಯಾ ಎಂದೂ ಹೆಸರಿಡುವುದು ಉಂಟು. ಶಾಂತಿ ಅನ್ನುವುದು ಒಂದು ಕಾಲದಲ್ಲಿ ಹೆಚ್ಚಾಗಿಯೇ ಇತ್ತು. ಗಂಡ-ಹೆಂಡಿರು ಜಗಳಕಾದರೆ ಅತ್ತೆ-ಮಾವ ಅಥವಾ ತಾಯಿ-ತಂದೆ ಕದನವಿರಾಮಕ್ಕೆ "ಶಾಂತೀ" ಎಂದು ಮೊಮ್ಮಗಳನ್ನು ಕರೆಯಬಹುದಿತ್ತು. ಕೃತಿ ಎಂದು ಸಾಮಾನ್ಯವಾಗಿ ಹೆಸರಿಡುತ್ತಿರಲಿಲ್ಲ. "ಪ್ರಕೃತಿ" ಅನ್ನುವುದು ಐವತ್ತು ವರುಷಗಳ ಹಿಂದೆ ಒಂದು ಹೊಸ ಮಾದರಿ ಹೆಸರಾಗಿತ್ತು.
ಈ ಜಯಾ, ಮಾಯಾ, ಶಾಂತಿ, ಇವರಿಗಿರುವ ಸಂಬಂಧವೇನು? ಇವರ ಜೊತೆ ಕೃತಿ ಏಕೆ ಸೇರಿದಳು? ಇದನ್ನು ಸ್ವಲ್ಪ ವಿಚಾರ ಮಾಡೋಣ.
*****
ಕಂಪನಿ ನಾಟಕಗಳು ಜನಪ್ರಿಯವಾಗಿದ್ದ ಕಾಲ ಒಂದಿತ್ತು. ಆ ನಾಟಕಗಳಲ್ಲಿ ಸಾಹಿತ್ಯ, ಸಂಗೀತ, ನಟನ ಕಲೆಗಳ ಮಿಶ್ರಣವಿರುತ್ತಿತ್ತು. ಅನೇಕ ನಟ-ನಟಿಯರು, ಮೇಕಪ್ ಕಲಾವಿದರು, ವಾದ್ಯಗಾರರು ಮುಂತಾದವರು ಒಟ್ಟಿಗೆ ಇರುತ್ತಿದ್ದರು. ತಂಡ ಊರಿಂದ ಊರಿಗೆ ಪ್ರಯಾಣಿಸಿ ನಾಟಕಗಳನ್ನು ಆಡುತ್ತಿದ್ದವು. ಮುಖ್ಯ ಪಾತ್ರ ಮಾಡುವ ಗಂಡು ಮತ್ತು ಹೆಣ್ಣು ಕಲಾವಿದರಿರುತ್ತಿದ್ದರು. (ಹೆಣ್ಣು ಪಾತ್ರಗಳನ್ನೂ ಗಂಡಸರೇ ಮಾಡುತ್ತಿದ್ದ ಕಾಲ ಕಳೆದ ಮೇಲೆ). ಮುಖ್ಯ ಪುರುಷ ಪಾತ್ರ ಮಾಡುವವನನ್ನು "ರಾಜಾ ಪಾರ್ಟ್" ಎಂದೂ, ಹೆಣ್ಣು ಪಾತ್ರ ಮಾಡುವವರನ್ನು "ರಾಣಿ ಪಾರ್ಟ್" ಎಂದೂ ಕರೆಯುತ್ತಿದ್ದರು. ಇವನು ರಾಜ ಆದರೆ ಅವಳು ರಾಣಿ. ಇವನು ರಾಮನಾದರೆ ಅವಳು ಸೀತೆ. ಇವನು ರೋಮಿಯೋ ಆದರೆ ಅವಳು ಜ್ಯುಲಿಯೆಟ್. ಕನ್ನಡದಲ್ಲಿ ಅದೇ ನಾಟಕವಾದರೆ ರಾಮವರ್ಮ-ಲೀಲಾವತಿ. ಇವನು ಶಿವ ಆದರೆ ಅವಳು ಪಾರ್ವತಿ. ಇವನು ಹರಿಶ್ಚಂದ್ರ ಆದರೆ ಅವಳು ಚಂದ್ರಮತಿ. ಹೀಗೆ ಜೋಡಿ.
"ಅಮ್ಮ" ಎಂಬ ಹೆಸರಿನ "ಪದ್ಮಿನಿ ಪಿಕ್ಚರ್ಸ್" ಸಂಸ್ಥೆಯ ಕನ್ನಡ ಚಲನಚಿತ್ರ ಬಹಳ ಚೆನ್ನಾಗಿ ಓಡಿತು. ಅದರ ನಿರ್ಮಾಪಕ-ನಿರ್ದೇಶಕ ಬಿ. ಆರ್. ಪಂತುಲು "ಹುಲ್ಲಳ್ಳಿ ರಾಮರಾಯ" ರಾಜಾ ಪಾರ್ಟುಗಳು. ಫಂಡರಿಬಾಯಿ "ಕಮಲಮ್ಮ" ರಾಣಿ ಪಾರ್ಟುಗಳು. ದುಷ್ಯಂತ-ಶಕುಂತಲೆಯಿಂದ ಚಿತ್ರ ಪ್ರಾರಂಭ. "ನಾಗವೇಣಿ, ನಗರಿಗೆ ನಾ ಪೋಗಿ ಬರುವೆನೇ" ಎಂಬ ಕಂದ ಪದ್ಯದಿಂದ ಚಿತ್ರ ಪ್ರಾರಂಭ. ತಂದೆಯ ಮೇಲೆ ವಿರಸಗೊಂಡ ಮೇಲೆ ರಾಜಕುಮಾರ್ ರಾಜಾ ಪಾರ್ಟ್ ಆದರೆ ಭಾರತಿ ರಾಣಿ ಪಾರ್ಟ್. ಹೀಗೆ ಚಿತ್ರ ಮುಂದುವರೆಯುತ್ತದೆ. ರಾಜಾ-ರಾಣಿ ಪಾತ್ರಗಳಿಗೆ ಇದು ಒಂದು ಉದಾಹರಣೆ. ಅಷ್ಟೇ. ಚಿತ್ರ ಯಟ್ಯೂಬಿನಲ್ಲಿ ಲಭ್ಯವಿದೆ. ಬೇಕಿದ್ದವರು ನೋಡಬಹುದು.
*****
ನಾಟಕ ಮತ್ತು ಸಿನಿಮಾಗಳಲ್ಲೇ ಹೀಗಾದರೆ ಜಗತ್ತು ಸೃಷ್ಟಿಸಿದವರ ಕಥೆ ಹೇಗೆ? ಅದನ್ನೇ ತಾನೇ ನಾವು ಕಾಪಿ ಮಾಡುವುದು. ಶ್ರೀಹರಿಯ ಪ್ರತಿಯೊಂದು ರೂಪಗಳಿಗೂ ಅದಕ್ಕೆ ಹೊಂದುವ ಒಂದು ಮಹಾಲಕ್ಷಿಯ ರೂಪವುಂಟು. ಅವನನ್ನು ಬಿಟ್ಟು ಅವಳಿಲ್ಲ. ಅವಳನ್ನು ಬಿಟ್ಟು ಅವನಿಲ್ಲ. ಎದೆಯ ಗೂಡಿನಲ್ಲಿಯೇ ಒಂದು ಅಂತಃಪುರ ಮಾಡಿ ಕೂಡಿಸಿಕೊಂಡಿದ್ದಾನೆ. ಸನ್ಯಾಸಿಯಾದಾಗಲೂ ಬಿಟ್ಟಿಲ್ಲ. (ಈಗಲೂ ಕೆಲವು ಸನ್ಯಾಸಿಗಳು ಸಾಂಸಾರಿಕರಾಗಿದ್ದರೆ ಅವರನ್ನು ಇದೇ ಕಾರಣಕ್ಕೆ ಅಕ್ಷೆಸುಪಿಸುವಂತಿಲ್ಲ).
ಶ್ರೀಹರಿಯ ಪ್ರಸಿದ್ಧವಾದ "ಪಂಚ ರೂಪಗಳು" ಮತ್ತು ಅವಕ್ಕೆ ಜೊತೆಯಾದ (ರಾಜ-ರಾಣಿ ಪಾರ್ಟುಗಳಂತೆ ) ಮಹಾಲಕ್ಷ್ಮಿ ರೂಪಗಳು ಹೀಗಿವೆ:
ಸಂಕರ್ಷಣ - ಜಯಾ
ವಾಸುದೇವ - ಮಾಯಾ
ಪ್ರದ್ಯುಮ್ನ - ಕೃತಿಅನಿರುದ್ಧ - ಶಾಂತಿನಾರಾಯಣ - ಲಕ್ಷ್ಮಿ
ಲಕ್ಸ್ಮಿ-ನಾರಾಯಣ ಎನ್ನುವುದು ಎಲ್ಲರಿಗೂ ಚಿರಪರಿಚಿತ. ಮಿಕ್ಕವು ಅಷ್ಟಾಗಿ ಪರಿಚಿತವಲ್ಲ. ಮಾಯಾ ಅನ್ನುವುದು ವಾಸುದೇವ ರೂಪಿ ಶ್ರೀಹರಿಯ ಜೊತೆಯಿರುವ ಮಹಾಲಕ್ಷ್ಮಿ. ಒಂದಲ್ಲಾ ಒಂದು ಕಾರಣದಿಂದ ಯಾವಾಗಲೂ ಮಾತ್ರವಲ್ಲ, ಶ್ರೀಹರಿಯು ಯಾವ ರೂಪ ತಳೆದರೂ ಅದಕ್ಕೆ ಜೊತೆಯಾಗಿ ರೂಪ ತಳೆವ ಲಕ್ಶ್ಮಿಯನ್ನು, ಅರೆ-ಹಾಸ್ಯ ಮಿಶ್ರಿತ ಸಂಬೋಧನೆಯಲ್ಲಿ, ಮಾಯಗಾರನಿಗೇ ಮಾಯಮಾಡಿರುವವಳು ಎಂದು ಸೂಚಿಸಲು "ಮಾಯಾದೇವಿ" ಎಂದು ದಾಸರು ಉಪಯೋಗಿಸಿದ್ದಾರೆ. ಮಗನು ಅಮ್ಮನಿಗೆ ಸಲುಗೆಯಿಂದ "ನೀನೇನೂ ಸಾಮಾನ್ಯಳಲ್ಲ. ಎಲ್ಲರಿಗೂ ಟೋಪಿ ಹಾಕುವ ನಮ್ಮ ಅಪ್ಪನಿಗೇ ಟೋಪಿ ಹಾಕಿದವಳು!" ಎಂದು ಹೇಳುವಂತೆ.
ಜಯಾ, ಮಾಯಾ, ಮತ್ತು ಶಾಂತಿ ಎನ್ನುವ ಹೆಸರು ಹೆಣ್ಣು ಮಕ್ಕಳಿಗೆ ಇಡುವ ಮೂಲ ಕಾರಣ ಇದು. ಇವೆಲ್ಲವೂ ಮಹಾಲಕ್ಷ್ಮಿಯ ರೂಪಗಳ ಹೆಸರುಗಳೇ.
*****
ಈ ಪಂಚ ರೂಪಗಳಿಗೂ ನಾವು ನೀರು, ಆಹಾರ ಸೇವಿಸುವುದು, ಅರಗಿಸುವುದು, ಅದರ ರಸಗಳು ದೇಹದ ಎಲ್ಲ ಅಂಗಾಂಗಗಳಿಗೆ ತಲುಪುವುದು, ಇವೆಲ್ಲಕ್ಕೂ ನೇರವಾದ ಸಂಬಂಧವಿದೆ. ತೈತ್ತರೀಯ ಉಪನಿಷತ್ತಿನಲ್ಲಿ ಈ ಪಂಚರೂಪಗಳ ವಿಸ್ತಾರವಾದ ವಿವರಣೆಯಿದೆ. ಅದನ್ನು ಇನ್ನೊಮ್ಮೆ ನೋಡೋಣ.
Intresting topic and humorous, thanks
ReplyDeleteಮಾಯಾ ಹೆಸರಿನ ಹಿನ್ನೆಲೆ ಲಘು ಹಾಸ್ಯ ದ ಶೈಲಿಯಲ್ಲಿ ಸರಾಗವಾಗಿ ಓದಿಸಿಕೊಂಡು ಹೋಯಿತು. ಗೂಗಲ್ ಹುಡುಕಾಟ ನಡೆಸಿ ಈಗಿನವರು ಇಡುವ ಹೆಸರುಗಳು ಎಷ್ಟೊ ವೇಳೆ ಉಚ್ಚರಿಸಲು ಕಷ್ಟವಾಗಿರುತ್ತವೆ.ಅರ್ಥವೂ ಗೂಗಲ್ ಗೆ ಮಾತ್ರವೇ ಗೊತ್ತಿರುತ್ತದೆ!
ReplyDelete