ಎತ್ತಣ ಮಾಮರ ಎತ್ತಣ ಕೋಗಿಲೆ ಎತ್ತಣಿಂದೆತ್ತಣ ಸಂಬಂಧವಯ್ಯ?
ಬೆಟ್ಟದ ನೆಲ್ಲಿಕಾಯಿ ಸಮುಂದ್ರದೊಳಗಣ ಉಪ್ಪು ಎತ್ತಣಿಂದೆತ್ತಣ ಸಂಬಂಧವಯ್ಯ?
ಗುಹೇಶ್ವರ ಲಿಂಗಕ್ಕೆಯೂ ಎನಗೆಯೂ ಎತ್ತಣಿಂದೆತ್ತಣ ಸಂಬಂಧವಯ್ಯ?
ಅನೇಕ ಸಂದರ್ಭಗಳಲ್ಲಿ ಯಾರೋ ಇಬ್ಬರ ನಡುವೆ ಇರುವ ಅನ್ಯೋನ್ಯತೆ, ಆತ್ಮೀಯತೆಗಳು ಬೇರೆಯರಿಗೆ ಅರ್ಥವಾಗುವುದು ಒತ್ತಟ್ಟಿಗಿರಲಿ; ಅದು ಅತ್ಯಂತ ಅಪಾರ್ಥವೂ ಆಗುವುದು ಕಂಡುಬರುವುದು. ಸಾಮಾನ್ಯ ಜನರ ನಡುವಣ ಸಂಬಂಧವೇ ಹೀಗಿರಬೇಕಾದರೆ ಭಕ್ತ-ಭಗವಂತ ಸಂಬಂಧಗಳು ಪ್ರಾಪಂಚಿಕ ದೃಷ್ಟಿಯಿಂದ ಬಲು ವಿಚಿತ್ರವಾಗಿರುವುದು ಏನು ವಿಶೇಷ?
ಅನೇಕ ಭಕ್ತರು ಪರಮಾತ್ಮನನ್ನು ಉದ್ದೇಶಿಸಿ ತಪಸ್ಸು, ಸಾಧನೆಗಳನ್ನು ಮಾಡುತ್ತಾರೆ. ಅವನ ಸಾಕ್ಷಾತ್ಕಾರ ಆದಾಗ ತಮಗೆ ಏನು ಬೇಕು ಎಂದು ಈ ತಪಸ್ಸುಗಳನ್ನು ಮಾಡಿದರೋ ಅವನ್ನು ಬೇಡುತ್ತಾರೆ. "ನಿನ್ನೊಡನೆ ಯುದ್ಧದಲ್ಲಿ ಹೋರಾಡಿ ಸಾಯಬೇಕು" ಎಂದು ವೃಷಭಾಸುರನು ಕೇಳಿದ್ದನ್ನೂ, ಆ ಹೋರಾಟ ನಡೆದ ನೆನಪಿನಲ್ಲಿ ತಿರುಪತಿಯ ಬೆಟ್ಟಕ್ಕೆ "ವೃಷಭಾಚಲ" ಎಂದು ಹೆಸರು ಬಂದಿರುವುದನ್ನೂ "ಪದ್ಮ ಪುರಾಣ" ಹೇಳುತ್ತದೆ. "ಶ್ರೀನಿವಾಸ ಕಲ್ಯಾಣ" ಕಥೆ ಕೇಳಿದವರು ಇದನ್ನು ಬಲ್ಲರು. ಮುಚುಕುಂದ ಚಕ್ರವರ್ತಿಯು ತಡೆಯಿಲ್ಲದ ಬಹುಕಾಲದ ನಿದ್ರೆ ಕೇಳಿದನಂತೆ. ಅಪ್ಪನ ತೊಡೆಯ ಮೇಲೆ ಕುಳಿತುಕೊಳ್ಳುವ ಸಲುವಾಗಿ ತಪಸ್ಸು ಮಾಡಿದ ಧ್ರುವನು ವಾಸುದೇವನನ್ನು ಕಂಡ ತಕ್ಷಣ "ನನಗೆ ಏನೂ ಬೇಡ. ನಿನ್ನ ಜೊತೆ ಕರೆದುಕೊಂಡು ಹೋಗು" ಎಂದನಂತೆ. ನಿನ್ನಂತಹ ಮಗ ಬೇಕು ಎಂದು ಕೇಳಿದವರು ಅನೇಕರು. ಹೀಗುಂಟು.
ಅಗ್ನಿಗೆ ಒಮ್ಮೆ ಹದಿನಾರು ಸಾವಿರ ಮಕ್ಕಳು ಒಟ್ಟಾಗಿ ಜನಿಸಿದರಂತೆ. ಅವರೆಲ್ಲರೂ ಶ್ರೀಹರಿಯನ್ನು ಉದ್ದೇಶಿಸಿ ಬಹಳ ದೀರ್ಘವಾದ, ಘೋರವಾದ ತಪಸ್ಸನ್ನು ಮಾಡಿದರು. ಶ್ರೀಹರಿಯು ಪ್ರತ್ಯಕ್ಷನಾದಾಗ ಅವನನ್ನು ಕಂಡು ಮೈಮರೆತರು. ಏನು ಬೇಕೆಂದು ಕೇಳಿದಾಗ "ನೀನು ನಮ್ಮನ್ನು ಮದುವೆ ಆಗು" ಎಂದು ಬೇಡಿದರು. ಅಗ್ನಿ ಪುತ್ರರಾದ ಈ ಋಷಿಗಳ ಕೋರಿಕೆ ಮನ್ನಿಸಲೇಬೇಕಾಯಿತು. ಶ್ರೀಹರಿಯು ನಸುನಗುತ್ತಾ "ಆಯಿತು. ನಿಮ್ಮ ಇಷ್ಟದಂತೆಯೇ ಆಗಲಿ. ಆದರೆ ಅದಕ್ಕೆ ತಕ್ಕ ಕಾಲ ಬರಬೇಕು. ಮುಂದೆ ಶ್ರೀಕೃಷ್ಣಾವತಾರ ಆದಾಗ ನೀವೆಲ್ಲರೂ ರಾಜಕುಮಾರಿಯರಾಗಿ ಹುಟ್ಟುವಿರಿ. ಆಗ ನಿಮ್ಮನ್ನು ಮದುವೆ ಆಗುತ್ತೇನೆ" ಎಂದು ವರ ಕೊಟ್ಟನು. ಈ ಋಷಿಗಳೇ ದ್ವಾಪರದಲ್ಲಿ ರಾಜಕುಮಾರಿಯರಾಗಿ ಹುಟ್ಟಿ ನರಕಾಸುರನ ಸೆರೆಮನೆ ಸೇರಿದರು. ನರಕಾಸುರನ ವಧೆ ಆದ ನಂತರ ಶ್ರೀಕೃಷ್ಣನು ಅವರನ್ನು ವಿವಾಹವಾಗಿ ದ್ವಾರಕೆಗೆ ಕರೆತಂದನು.
ಭಕ್ತರ ಕೋರಿಕೆಗಳನ್ನು ಪರಮಾತ್ಮನು ಒಮ್ಮೊಮ್ಮೆ ತನಿ-ತನಿಯಾಗಿ (ತನಿ ಅನ್ನುವುದು ಕನ್ನಡ ಪದ. ನಾವು ಮರ್ತೆ ಬಿಟ್ಟಿದ್ದೇವೆ. ಬಿಡಿ ಬಿಡಿಯಾಗಿ ಎಂದು ಅದರ ಅರ್ಥ) ನೆರವೇರಿಸುತ್ತಾನೆ. ಕೆಲವೊಮ್ಮೆ ಅನೇಕ ಜನರ ಕೋರಿಕೆಗಳನ್ನು ಒಟ್ಟಾಗಿ ತೀರಿಸುತ್ತಾನೆ. ನಮ್ಮ ಸುಪ್ರೀಂ ಕೋರ್ಟ್ "ಅನೇಕ ರಿಟ್ ಅರ್ಜಿಗಳನ್ನು ಒಟ್ಟಾಗಿ ವಿಲೇವಾರಿ ಮಾಡಿತು" ಎನ್ನುವಂತೆ. ಇದರ ಬಗ್ಗೆ ಹೆಚ್ಚು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ ಓದಿ. ಇಷ್ಟು ಜನ ಋಷಿಗಳ ಕೋರಿಕೆಯನ್ನು ಒಟ್ಟಾಗಿ ತೀರಿಸಿದುದು, ಮತ್ತು ಇನ್ನೂ ಅನೇಕರ ಕೋರಿಕೆಗಳ ಕಾರಣ ಮದುವೆಗಳು ಆದದ್ದು ಸೇರಿ ಶ್ರೀಕೃಷ್ಣನಿಗೆ ಒಟ್ಟು ಹದಿನಾರು ಸಾವಿರದ ನೂರಾ ಎಂಟು ಹೆಂಡಿರಾದರು.
*****
ಶ್ರೀಪುರಂದರದಾಸರು ಈ ಸಂದರ್ಭವನ್ನು ತಿಳಿಸಲು "ಜಾಣೆಯರರಸ" ಎಂದು ಪ್ರಯೋಗಿಸಿದರು. ಶ್ರೀ ಕನಕದಾಸರು ಇದನ್ನೇ "ಸುಗುಣೆಯರು" ಎಂದರು. ಶ್ರೀಕೃಷ್ಣನು "ಸುಗುಣಿಯರರಸ" ಎಂದು ಪಾಠಾ೦ತರವಾಯಿತು.
ಮಗನಕೊಂದವನಾಳುವಂತಾಸುಗುಣೆಯರು ಹದಿನಾರುಸಾವಿರಸೊಗಸುಗಾತಿಯರವರ ಮೋಹದ ಬಲೆಗೆ ವಿಟನಾಗಿಬಗೆಬಗೆಯ ರತಿಕಲೆಗಳಲಿಕೂರುಗವ ನಾಟಿಸಿ ಮೆರೆದು ನೀ ನೀಜಗಕೆ ಪಾವನನಾದೆ ರಕ್ಷಿಸು ನಮ್ಮನನವರತ
ಕುಬ್ಜೆ ಎಂಬುವವಳು ನೋಡಲು ವಿಕಾರವಾಗಿದ್ದಳು. ಅವಳು ಶಾಪದ ಫಲವಾಗಿ ಈ ರೀತಿ ಹುಟ್ಟಿದ ಅಪ್ಸರೆ. ಕಂಸನಿಗೆ ಪ್ರತಿದಿನ ಗಂಧ ತೇಯ್ದು ಅಲಂಕಾರಕ್ಕಾಗಿ ಒಪ್ಪಿಸುವುದು ಅವಳ ಕೆಲಸ. ಎಂಟು ವರ್ಷದ ಕೃಷ್ಣ ಸೋದರಮಾವ ಕಂಸನ ಆಹ್ವಾನದ ಮೇರೆಗೆ "ಬಿಲ್ಲುಹಬ್ಬ" ನೆಪದಲ್ಲಿ ಮಥುರೆಗೆ ಹೋದ. ಅಲ್ಲಿ ಅವಳನ್ನು ಕಂಡು ಅವಳ ಡೊಂಕನ್ನು ಸರಿಮಾಡಿ ನೆಟ್ಟಗೆ ಮಾಡಿದ. ಅವಳು ಭಕ್ತಿಯಿಂದ ಶ್ರೀಕೃಷ್ಣನಿಗೆ ಗಂಧವನ್ನು ಅರ್ಪಿಸಿದಳು. ಮುಂದೆ ಕೃಷ್ಣನು ಅವಳನ್ನು ವಿವಾಹವಾದ. ಅವರಿಗೆ "ವಿಶೋಕ" ಎನ್ನುವ ಮಗ ಹುಟ್ಟಿದ. ಮಹಾಭಾರತ ಯುದ್ಧ ಆದಾಗ ಈ ವಿಶೋಕ ಭೀಮಸೇನನ ರಥದ ಸಾರಥಿಯಾಗಿ ಕೆಲಸ ಮಾಡಿದ ಎಂದು ಮಹಾಭಾರತದಿಂದ ತಿಳಿದು ಬರುತ್ತದೆ.
*****
ಭಾಗವತದಲ್ಲಿ ಈ ಪ್ರಸಂಗಗಳೆಲ್ಲ ವಿವರವಾಗಿ ವರ್ಣಿತವಾಗಿವೆ.
ನನಗೆತಿಳಿಯದ ಅನೇಕ ಸಂಗತಿಗಳು ಬಹು ಕುತೂಹಲಕಾರಿ ನಿರೂಪಣೆ ಧನ್ಯವಾದಗಳು
ReplyDeleteಅದ್ಭುತ
ReplyDeleteಅದ್ಭುತ ವಾದ ಸಂಗತಿಗಳು.
ReplyDeleteಧನ್ಯವಾದಗಳು... 🙏🏻
ಈ ಹದಿನಾರು ಸಾವಿರ ಹೆಂಡಿರ ವಿಚಾರ ಕೇಳಿ ಕೇಳಿ ಒಗಟಾಗಿತ್ತು, ಈಗ ಅದರ ಅರ್ಥ ವಿವರಣೆ ಸಿಕ್ಕಿತು.ಧನ್ಯವಾದಗಳು
ReplyDeleteಕನಕದಾಸರ ಹರಿಭಕ್ತಿಸಾರ ನಾನು ಓದಿಲ್ಲ ನಿಮ್ಮ ಲೇಖನವನ್ನು ನೋಡಿದ ಮೇಲೆ ಒಂದು ಬಾರಿ ಅದನ್ನು ಓದಬೇಕೆಂದು ಅನಿಸುತ್ತಿದೆ.
ReplyDeleteತ್ರಿಮೂರ್ತಿಗಳು ತಪಸ್ಸಿಗೆ ಮೆಚ್ಚಿ ಹಿಂದೆ ಮುಂದೆ ನೋಡದೆ ಭಕ್ತರಿಗೆ ವರವನ್ನು ಕೊಟ್ಟು ಪೇಚಿಗೆ ಸಿಲುಕುವುದು, ದೇವತೆಗಳ ಕಷ್ಟ ನಿವಾರಣೆಗಾಗಿ ಸಾಮಾನ್ಯವಾಗಿ ವಿಷ್ಣುವೆ ಸಹಾಯ ಮಾಡುವುದು. ವರಗಳನ್ನು ನೀಡುವುದರಲ್ಲಿ ಶಿವನೇ ಮೊದಲು. ಅದಕ್ಕೇಅವನಿಗೆ ಬೋಳೇಶಂಕರ ಎಂಬ ಹೆಸರು ಬಂತು ಏನೋ.