Wednesday, April 30, 2025

ಹಿಂದು-ಮುಂದಾದ "ಅಕ್ಷಯ ತೃತೀಯಾ"

ಕಾಮಧೇನು ಮತ್ತು ಕಲ್ಪವೃಕ್ಷಗಳು ದೇವರಾಜನಾದ ಇಂದ್ರನ ಅಧೀನದಲ್ಲಿ ಸ್ವರ್ಗದಲ್ಲಿರುತ್ತವೆ ಎಂದು ನಂಬಿಕೆ. ತಮ್ಮನ್ನು ಆರಾಧಿಸಿ ಬೇಡುವವರಿಗೆ ಕೇಳಿದ್ದನ್ನು ಕೊಡುತ್ತವೆ ಎಂದು ಪ್ರತೀತಿ. 

ಇವು ಎರಡರಲ್ಲಿ ಮುಖ್ಯ ವ್ಯತ್ಯಾಸ ಏನು? ನಾವು ಅವನ್ನು ಕಂಡವರಲ್ಲ. ಅಲ್ಲಿ ಇಲ್ಲಿ ಓದಿ-ಕೇಳಿ ತಿಳಿದದ್ದು. ಕಲ್ಪವೃಕ್ಷವು ಈಗ ನಮ್ಮ ಸುತ್ತ-ಮುತ್ತ ಇರುವ ಎಟಿಎಂ ಇದ್ದಂತೆ. ಅದು ಒಂದು ದಿವ್ಯವಾದ ಮರ. ಒಂದು ಕಡೆ ನೆಟ್ಟು ಬೆಳಿಸಿದಂತೆ. ನಮ್ಮ ಸುತ್ತಲಿನ ಎಟಿಎಂಗಳು ನಗದು ರೂಪದಲ್ಲಿ ಹಣ ಕೊಡುತ್ತವೆ. (ಈಗ ಇಡ್ಲಿ-ವಡೆ ಮುಂತಾದುವನ್ನು ಕೊಡುವ ಎಟಿಎಂಗಳು ಕೂಡ ಬಂದಿವೆಯಂತೆ. ಅವನ್ನು ಇಲ್ಲಿ ಸೇರಿಸುವುದು ಬೇಡ). ಆದರೆ ಅದು ಇರುವಲ್ಲಿಗೆ ಹೋಗಬೇಕು. ಕಾಮಧೇನು ಒಂದು ದಿವ್ಯವಾದ ಹಸು. ಅದು ಓಡಾಡಬಹುದು. ಆದ್ದರಿಂದ ಕಾಮಧೇನು ಒಂದು ಮೊಬೈಲ್ಎಟಿಎಂ ಇದ್ದಂತೆ. ಅದು ನಾವಿರುವಲ್ಲಿಗೇ ಬಂದು ಕೇಳಿದ್ದನ್ನು ಕೊಡುತ್ತದೆ. 

ಹೀಗೆ ಅಲ್ಲಿ ಇಲ್ಲಿ ಓಡಾಡುತ್ತಿದ್ದ ಕಾಮಧೇನು ನಮ್ಮ ಮನೆ ಬೀದಿಯಲ್ಲಿ ಬಂದಿದೆ. ಈಗ ನಮ್ಮ ಮನೆಯ ಮುಂದೆಯೇ ನಿಂತಿದೆ. ಏನು ಕೇಳಿದರೂ ಕೊಡುವ ಕಾಮಧೇನು. ಅದರ ಬಳಿ ಹೋಗಿ ಕೇಳಿಕೊಳ್ಳಬೇಕು. ಅಷ್ಟೇ. 

ಈ ದಿನ ಯಾಕೋ ಪ್ರತಿದಿನ ಬೆಳಿಗ್ಗೆ ನಮ್ಮ ಮನೆಗೆ ಹಾಲು ತಂದು ಕೊಡುವ  ಹುಡುಗ ಬಂದಿಲ್ಲ. ಬೆಳಗಾಗಿ ಎದ್ದು ಕಾಫಿ ಕುಡಿಯುವ ಅಭ್ಯಾಸ. ಕಾಫಿ ಸ್ವಲ್ಪ ತಡವಾದರೆ ಬುದ್ಧಿಯೇ ಓದುವುದಿಲ್ಲ. ಹೇಗೂ ಕಾಮಧೇನು ಮನೆಮುಂದೆ ಬಂದು ನಿಂತಿದೆ. ಹತ್ತಿರ ಹೋಗಿ "ಒಂದು ಅರ್ಧ ಲೀಟರ್ ಹಾಲು ಕೊಡು ತಾಯಿ" ಎಂದು ಕೇಳಿದೆವು. ಆಹಾ! ಕೊಟ್ಟಿತು! ಏನು ಸಂತೋಷ! ಎಂಥ ಉತ್ಸಾಹ!

*****

ಏನಾದರೂ ಒಳ್ಳೆಯ ಕೆಲಸ ಮಾಡಬೇಕಾದರೆ ಏನು ಮಾಡಬೇಕು? ಮಾಡಬೇಕು. ಅಷ್ಟೇ. "ಮಂತ್ರಿಸಿದರೆ ಮಾವಿನಕಾಯಿ ಬೀಳುವುದಿಲ್ಲ. ಅದು ಬೀಳಬೇಕಾದರೆ ಕಲ್ಲು ಹೊಡೆಯಬೇಕು. ಇಲ್ಲವೇ, ಮರ ಹತ್ತಿ ಕೀಳಬೇಕು". ಹೀಗೊಂದು ಪಾಠವಿತ್ತು, ನಾವು ಶಾಲೆಯಲ್ಲಿ ಓದುತ್ತಿದ್ದಾಗ. ಕೆಲಸ ಆಗಬೇಕಾದರೆ ಮೀನ-ಮೇಷ ಎಣಿಸುವುದಲ್ಲ. ಕೆಲಸ ಪ್ರಾರಂಭ ಮಾಡಬೇಕು. ಆದರೆ ನಮ್ಮಲ್ಲಿ ಒಂದು ಒಳ್ಳೆಯ ದಿನ, ಸರಿಯಾದ ಸಮಯ ನೋಡಿ ಪ್ರಾರಂಭ ಮಾಡಬೇಕು ಎನ್ನುವ ಒಂದು ಪದ್ಧತಿ. ಒಳ್ಳೆಯ ದಿನ ನೋಡಿದೆವು. ಸರಿಯಾದ ಸಮಯಕ್ಕೇ ಪ್ರಾರಂಭಿಸಿದೆವು. ಕೆಲಸವಾಗುತ್ತದೆಯೇ? ಸರಿಯಾಗಿ ಪರಿಶ್ರಮ ಪಟ್ಟು ಮಾಡಿದರೆ ಆಗುತ್ತದೆ. ಸುಮ್ಮನೆ ಒಳ್ಳೆಯ ದಿನ, ಸರಿಯಾದ ಸಮಯದಲ್ಲಿ ಪ್ರಾರಂಭ ಮಾಡಿದರೆ ಕೆಲಸ ಆಗುವುದಿಲ್ಲ. "ಪುರುಷ ಪ್ರಯತ್ನ" ಬೇಕೇ ಬೇಕು. "ದೈವದಿಂದ ಆಗುತ್ತದೆ" ಎನ್ನುವವರು ಕೆಲವರು. "ಪುರುಷ ಪ್ರಯತ್ನದಿಂದಲೇ ಆಗುವುದು" ಎನ್ನುವರು ಇನ್ನು ಕೆಲವರು. "ಪುರುಷ ಪ್ರಯತ್ನಕ್ಕೆ ದೈವ ಸಹಾಯವೂ ಸೇರಬೇಕು" ಎನ್ನುವುದು ಇನ್ನೊಂದು ಮಾರ್ಗ. 

ಒಳ್ಳೆಯ ದಿನ, ಸರಿಯಾದ ಸಮಯ ಅಂದರೆ ಏನು? ಅದು ಹೇಗೆ ಸಿಗುತ್ತದೆ? ಇದು ಒಂದು ಮುಖ್ಯ ಪ್ರಶ್ನೆ. ನಂಬಿಕೆ ಇದ್ದವರು ಜೋಯಿಸರ ಬಳಿ ಹೋಗಿ ಕೇಳಬಹುದು. ಈಗಿನ ಕಂಪ್ಯೂಟರ್ ಪರಿಣತರು ಯಾವುದೋ ಸಾಫ್ಟ್ ವೇರ್ ಸಹಾಯದಿಂದ ಅದನ್ನು ಹಿಡಿಯಬಹುದು. ಮೊಬೈಲ್ ಕೈಗೇ ಅಂಟಿಕೊಂಡಿರುವವರು ಅದಕ್ಕೊಂದು "ಅಪ್ಪ" ಹುಡುಕಿ ಅದರಲ್ಲಿ ತೆಗೆಯಬಹುದು. ಇದಕ್ಕೆ ಇಷ್ಟೆಲ್ಲಾ ಮಾಡದೆ ಏನಾದರೂ ಸುಲಭ ಉಪಾಯ ಇದೆಯೇ? 

"ಸಾಡೆತೀನ್ ಮುಹೂರ್ತ" ಎಂದು ಹಿರಿಯರು ಹೇಳುತ್ತಿದ್ದರು. ಮೂರು ದಿನಗಳು ಮತ್ತು ಅದರ ಮೇಲೆ ಅರ್ಧ ದಿನ. "ಈ ದಿನಗಳು ಸ್ವಯಂಸಿದ್ಧ ಮಹೂರ್ತಗಳು. ಈ ದಿನಗಳಲ್ಲಿ ಯಾವುದೇ ಕೆಲಸ ಪ್ರಾರಂಭ ಮಾಡಬಹುದು. ಈ ದಿನಗಳಲ್ಲಿ ಆದರೆ ಅದಕ್ಕೆ ಒಳ್ಳೆ ದಿನ, ಸರಿಯಾದ ಸಮಯ ನೋಡಬೇಕಿಲ್ಲ" ಎಂದು ಬಲವಾದ ನಂಬಿಕೆ.  ಯಾವುವು ಈ ದಿನಗಳು?

ಮೊದಲನೆಯದು ಉಗಾದಿ. ಎರಡನೆಯದು ಅಕ್ಷಯ ತೃತೀಯ. ಮೂರನೆಯದು ವಿಜಯದಶಮಿ. ಇವುಗಳ ಜೊತೆಗೆ ಬಲಿಪಾಡ್ಯಮಿಯಲ್ಲಿ ಮೊದಲ ಅರ್ಧ ದಿನ. ಮೂರೂವರೆ ದಿನ ಆಯಿತಲ್ಲ? 

*****

ಇದರಲ್ಲಿ "ಅಕ್ಷಯ ತೃತೀಯ" ವಿಶೇಷವೇನು? ಚತುರ್ಮುಖ ಬ್ರಹ್ಮದೇವರು ತಮ್ಮ ಸೃಷ್ಟಿಕಾರ್ಯ ಪ್ರಾರಂಭಿಸಿದ ದಿನ ಇದು. ಅವರ ಸೃಷ್ಟಿ ಕಾರ್ಯಕ್ಕಿಂತ ದೊಡ್ಡ ಕೆಲಸ ಮತ್ತೊಂದಿಲ್ಲ. ಅದು ಪ್ರಾರಂಭವಾದದ್ದು ಚೆನ್ನಾಗಿ ನಡೆದೇ ಇದೆ. ನಾವು ಏನೇ ಕೆಲಸ ಹೊಸದಾಗಿ ನಡೆಸಿದರೂ ಅದು ಸೃಷ್ಟಿಯ ಮಿತಿಯಲ್ಲಿ ತಾನೇ ಆಗುವುದು? ಆದ್ದರಿಂದ ಇದೊಂದು ಸ್ವಯಂಸಿದ್ಧ ಮಹೂರ್ತ. 

ಇದೇ ದಿನ "ಪರುಶುರಾಮ ಜಯಂತಿ". ಜೈನರ ಮೊದಲ ತೀರ್ಥಂಕರನಾದ ಋಷಭದೇವನು ತನ್ನ ಮರಿಮಗನಿಂದ ಆಹಾರ ಪಡೆದು ನಾಲ್ಕು ನೂರು ದಿನದ ಉಪವಾಸಡಾ ಕೊನೆ ಮಾಡಿದನೆಂದು ಇನ್ನೊಂದು ವಿಶೇಷ, ಹೀಗೆ ಮತ್ತೆ ಕೆಲವು.

ಇದರಲ್ಲಿ "ಅಕ್ಷಯ" ಅನ್ನುವುದರ ವಿಶೇಷ ಏನು? 

ಕಾಲವು ಎಂದೂ ನಿಲ್ಲದು. ಅದು ಚಲಿಸುತ್ತಲೇ ಇರುತ್ತದೆ. ಆದರೆ ಕೆಲವು ಪ್ರಕೃತಿ ವಿಶೇಷಗಳ ಕಾರಣ ಈ ಚಲಿಸುತ್ತಲೇ ಇರುವ ಸಮಯದಲ್ಲಿ ಕೆಲವು ಸಂಧಿಕಾಲಗಳು, ವಿಶೇಷ ಸಂದರ್ಭಗಳು ಒದಗುತ್ತವೆ. ಹುಣ್ಣಿಮೆ ಒಂದು ವಿಶೇಷ. ಅಂದು ಪೂರ್ಣ ಚಂದ್ರನಿದ್ದಾನೆ. ಅಮಾವಾಸ್ಯೆ ಒಂದು ವಿಶೇಷ. ಮಕರ ಸಂಕ್ರಾಂತಿ, ಕರ್ಕಾಟಕ ಸಂಕ್ರಾಂತಿ ವಿಶೇಷ ಕಾಲಗಳು. ಶ್ರಾದ್ಧಗಳ ದೃಷ್ಟಿಯಿಂದ "ಪಕ್ಷ ಮಾಸ' ಒಂದು ಪರ್ವ ಕಾಲ. ಇವೆಲ್ಲ ಸಾರ್ವತ್ರಿಕ ಪರ್ವ ಕಾಲಗಳು. 

ಇನ್ನು ಕೆಲವು ಪರ್ವ ಕಾಲಗಳು ವ್ಯಕ್ತಿಗತ. ನಾವು ಕಾಶಿಗೆ ಹೋದೆವು. ಬದರಿನಾಥಕ್ಕೆ ಹೋದೆವು. ರಾಮೇಶ್ವರಕ್ಕೆ ಹೋದೆವು. ಗಯಾದಲ್ಲಿ ಗದಾಧರನ ದರ್ಶನ ಮಾಡಲು ಹೋದೆವು. ಈ ರೀತಿ ಕ್ಷೇತ್ರಗಳ ದರ್ಶನಕ್ಕೆ ಹೋದದ್ದು. ಇದೇನು ನಾವು ಬೇಕೆಂದಾಗ್ಗೆ ಹೋಗುವಂಥದಲ್ಲ. ಆದ್ದರಿಂದ ನಮ್ಮ ಮಟ್ಟಿಗೆ ಇದು ಪರ್ವ ಕಾಲವೇ. ಆದ್ದರಿಂದ "ಕ್ಷೇತ್ರ ಶ್ರಾದ್ದ" ಎಂದು ಒಂದು ಪದ್ಧತಿ ಇದೆ. ಇಂತಹ ಕ್ಷೇತ್ರಗಳಿಗೆ ಹೋದಾಗ ಅಂದು ಪಿತೃ  ಶ್ರಾದ್ಧ ಮಾಡಬಹುದು. ಅದು ಯಾವ ದಿನವಾದರೂ ಪರವಾಗಿಲ್ಲ. ಹೀಗೆ.  

ಒಳ್ಳೆಯ ಕೆಲಸ ಯಾವಾಗ ಮಾಡಿದರೂ ಪುಣ್ಯ ಸಂಪಾದನೆಗೆ ದಾರಿ. ಪರ್ವ ಕಾಲಗಳಲ್ಲಿ ಮಾಡಿದರೆ ಅದಕ್ಕೆ ಅಧಿಕ ಪುಣ್ಯ.  ತಿಂಗಳಿಗೊಮ್ಮೆ ಬರುವ ಪರ್ವ ಕಾಲದಲ್ಲಿ ಹೆಚ್ಚು ಪುಣ್ಯ. ಆರು ತಿಂಗಳಿಗೊಮ್ಮೆ ಬರುವ ಪರ್ವಕಾಲದಲ್ಲಿ ಅದಕ್ಕಿಂತ ಹೆಚ್ಚು ಪುಣ್ಯ. ವರ್ಷಕ್ಕೊಮ್ಮೆ ಬರುವ ದಿನವಾದರೆ? ಗ್ರಹಣ-ಸಂಕ್ರಮಣಗಳಾದರೆ? ಇನ್ನೂ ಹೆಚ್ಚು ಪುಣ್ಯ.  ಹೀಗೆ ನಂಬಿಕೆ. 

ಚತುರ್ಮುಖ ಬ್ರಹ್ಮ ದೇವರು ಸೃಷ್ಟಿ ಕಾರ್ಯ ಪ್ರಾರಂಭ ಮಾಡಿದ ದಿನ ಒಂದು ದೊಡ್ಡ ವಿಶೇಷ. ಆದ್ದರಿಂದ ಅಂದು ಮಾಡಿದ ಪುಣ್ಯ ಕಾರ್ಯಗಳಿಗೆ, ದಾನ-ಧರ್ಮಗಳಿಗೆ, ಪರೋಪಕಾರಗಳಿಗೆ, ಅಶಕ್ತರು-ವೃದ್ಧರಿಗೆ ಮಾಡಿದ ಸಹಾಯ-ಒತ್ತಾಸೆಗೆ ಹೇಳಲಾಗದಷ್ಟು, ಅಕ್ಷಯ ಅನ್ನುವಷ್ಟು, ಕ್ಷಯವಾಗದಷ್ಟು, ಪುಣ್ಯ. ಆದ್ದರಿಂದ ಅಕ್ಷಯ ತೃತೀಯ ಬಹಳ ಶ್ರದ್ಧೆ-ಭಕ್ತಿಗಳಿಂದ ದಾನ ಮಾಡಬೇಕೆಂದು ವಿಶೇಷವಾಗಿ ಕಟ್ಟಲೆ. 

*****

"ನ ಕರ್ಮಣಾ, ನ ಪ್ರಜಾಯಾ, ನ ಧನೇನ, ತ್ಯಾಗೇನೈಕೇನ ಅಮೃತತ್ವಮಾನಶು:" ಎನ್ನುವುದು ಒಂದು ಶ್ರುತಿವಚನ. ಜೀವನ-ಮರಣ ಚಕ್ರದಿಂದ ಬಿಡುಗಡೆ ಸಿಗಬೇಕಾದರೆ ಕಾಮ್ಯಕರ್ಮಗಳಿಂದಲ್ಲ (ನಮಗೆ ಇವು ಬೇಕು ಎಂದು ಮಾಡುವ ಕೆಲಸಗಳು ಕಾಮ್ಯಕರ್ಮಗಳು), ಮಕ್ಕಳು ಮುಂತಾದ ಸಂತತಿಯಿಂದಲ್ಲ, ಧನ-ಕನಕಗಳಿಂದಲ್ಲ, ತ್ಯಾಗದಿಂದ ಮಾತ್ರ ಮುಕ್ತಿ ಸಿಗುತ್ತದೆ ಎಂದು ಇದರ ಅರ್ಥ. ನಮ್ಮ ಸಂಸ್ಕೃತಿಯಲ್ಲಿ ಪಡೆಯುವುದಕ್ಕಿಂತ ಕೊಡುವುದಕ್ಕೆ ಹೆಚ್ಚು ಬೆಲೆ. ದೊಡ್ಡ ಪುರಸ್ಕಾರ. "ಇದ್ದುದರಲ್ಲಿ ಜೀವನ ಮಾಡು. ಅಷ್ಟೇ ಅಲ್ಲ. ಇರುವುದರಲ್ಲಿಯೇ ಸ್ವಲ್ಪವನ್ನಾದರೂ ಬೇರೆಯವರಿಗೆ ಕೊಡು" ಅನ್ನುವುದು ಮೂಲಭೂತ ಸಿದ್ಧಾಂತ. 

ಅಕ್ಷಯ ತೃತೀಯ ಪರ್ವಕಾಲದಲ್ಲಿಯೂ ಅಷ್ಟೇ. ಕೊಡುವುದಕ್ಕೆ ಇದು ಅತ್ಯಂತ ಪ್ರಶಸ್ತವಾದ ಕಾಲ. ಇಂತಹ ಕಾಲ ಬರಲಿ ಎಂದು ಕಾತುರದಿಂದ ಕಾದುಕೊಂಡು ಕೊಡಬೇಕು. ಅದೇ ಅಕ್ಷಯ ತೃತೀಯದ ವೈಶಿಷ್ಟ್ಯ. 

*****

ಇದು "ಸೇಲ್ಸ್ ಮತ್ತು ಮಾರ್ಕೆಟಿಂಗ್" ಕಾಲ. ಪೀಟರ್ ಡ್ರಕರ್ ಎನ್ನುವ ಮ್ಯಾನೇಜ್ಮೆಂಟ್ ಗುರು ಹೇಳುತ್ತಾನೆ: "ಇನ್ನೋವೇಷನ್ ಮತ್ತು ಮಾರ್ಕೆಟಿಂಗ್" ಅನ್ನುವುದು ಯಾವುದೇ ವ್ಯವಹಾರ (ಬಿಸನೆಸ್ಸ್} ಸಫಲವಾಗಲು ಮೂಲ ಕಾರಣಗಳು ಎನ್ನುವ ಮಂತ್ರ. ಪ್ರತಿಯೊಂದಕ್ಕೂ ಒಂದು ಮಾರಾಟದ ತಂತ್ರ. ವರುಷದ ಪ್ರತಿ ದಿನವೂ ಒಂದೊಂದು ಆಚರಣೆ. ತಾಯಿಗೆ ಒಂದು ದಿನ. ತಂದೆಗೆ ಒಂದು ದಿನ. ಪ್ರೇಯಸಿಗೆ ಅಥವಾ ಪ್ರಿಯಕರನಿಗೆ ಒಂದು ದಿನ. ಕಂಡರೆ ಆಗದವರಿಗೆ ಒಂದು ದಿನ. (ಇದು ಇದೆ ಎಂದು ನಂಬಿಕೆ). ಹೀಗೆ. 

ಈಗಿನ ಮಾರಾಟಗಾರರು, ಅದರಲ್ಲೂ ಚಿನ್ನ-ವಜ್ರ ಮುಂತಾದುವುಗಳ ಮಾರಾಟಗಾರರು "ಅಕ್ಷಯ ತೃತೀಯ" ಪರ್ವಕಾಲವನ್ನು "ಹೈಜಾಕ್" ಮಾಡಿದ್ದಾರೆ. ಕೊಡುವುದರ ಬದಲು ಕೊಳ್ಳುವುದು ಮುಖ್ಯ ಮಾಡಿದ್ದಾರೆ. ಕೊಡುವುದು ಹಿಂದೆ ಉಳಿಯಿತು. ಈಗ ಕೊಳ್ಳುವುದು ಮುಖ್ಯ. ಅದರಲ್ಲೂ ಬೆಲೆ ಹೆಚ್ಚಿರುವ ಪದಾರ್ಥಗಳು. ಒಡವೆ-ಆಭರಣಗಳು. ಇತ್ಯಾದಿ. ಮೊದಲೇ ಹುಡುಕಿ, ಆರಿಸಿಟ್ಟು, ಬಿಲ್ ಮಾಡಿಸಿ, ದುಡ್ಡು ತೆತ್ತು ಈ ದಿನ ಮನೆಗೆ ತಂದರೆ ಅದು ಅಕ್ಷಯವಾಗುತ್ತದೆ ಅನ್ನುವ ಪ್ರಚಾರ. ತಂದ ಪದಾರ್ಥ ಮೈಮೇಲೆ ಧರಿಸುವಹಾಗಿಲ್ಲ. ಹಾಕಿಕೊಂಡರೆ ಜೀವಭಯ. ಪೆಟ್ಟಿಗೆಯಲ್ಲಿಟ್ಟರೆ ಕಳ್ಳ-ಕಾಕರ ಭಯ. ಅದಕ್ಕೆ ಬ್ಯಾಂಕಿನಲ್ಲಿ ಒಂದು ಲಾಕರ್. ಅದಕ್ಕೆ ವರ್ಷಕ್ಕೆ ಬಾಡಿಗೆ. ಅದರ ಬೀಗದಕೈ ಕೈಲಿ ಹಿಡಿದು ಸಂಭ್ರಮ! 

ಮಗುವಿನ ಜಾತಕ ಚೆನ್ನಾಗಿರಲಿ ಎಂದು ಗ್ರಹಗತಿ ಶೋಧಿಸಿ, ನೋಡಿಸಿ, ಮೊದಲೇ ಜನನದ ದಿನ, ಸಮಯ ನಿರ್ಧರಿಸಿ ಸಿಸೇರಿಯನ್ ಹೆರಿಗೆ ಮಾಡಿಸಿದಂತೆ. 

*****

ಕೊಡಬೇಕು ಅನ್ನುವ "ನ ಕರ್ಮಣಾ, ನ ಪ್ರಜಾಯಾ, ನ ಧನೇನ, ತ್ಯಾಗೇನೈಕೇನ ಅಮೃತತ್ವಮಾನಶು:" ಹಿಂದೆ ಹೋಯಿತು. ತರಬೇಕು ಅನ್ನುವ "ಇನ್ನೋವೇಷನ್ ಮತ್ತು ಮಾರ್ಕೆಟಿಂಗ್" ಮುಂದೆ ಬಂತು. 

ಭತ್ತ ಬೆಳೆಯುವವನಿಗೆ ಹುಲ್ಲು ತಾನಾಗಿಯೇ ಸಿಕ್ಕುತ್ತದೆ. ಕೇವಲ ಹುಲ್ಲು ಬೆಳೆಯುವವನಿಗೆ ಭತ್ತ ಸಿಗುವುದಿಲ್ಲ. ಮೋಕ್ಷ ಸಾಧಿಸುವವನಿಗೆ ಅರ್ಥ, ಕಾಮಗಳು ತಾವಾಗಿಯೇ ಸಿಗುತ್ತವೆ. ಈಗಿನ ಮಾರಾಟ ತಂತ್ರ ಇದನ್ನು ಪೂರ್ತಿ ಮರೆಸಿತು. 

ಮನೆಯಮುಂದೆ ಬಂದಿರುವ ಕಾಮಧೇನು ಬಳಿ ಅರ್ಧ ಲೀಟರ್ ಹಾಲು ಕೇಳಿದಂತಾಯಿತು. 

ಒಟ್ಟಿನಲ್ಲಿ "ಅಕ್ಷಯ ತೃತೀಯಾ"  ದಿನದ ವಿಶೇಷತೆ ಹಿಂದು-ಮುಂದಾಯಿತು. 

Sunday, April 27, 2025

ಅಚ್ಯುತ - ಅನಂತ - ಗೋವಿಂದ


"ವಿರಾಟ್ ಸೃಷ್ಟಿಯಲ್ಲಿ ಕೇಳಿಸುವ ಎಲ್ಲ ಶಬ್ದಗಳೂ ಪರಮಪುರುಷನನ್ನು ಕುರಿತಾಗಿವೆ ಮತ್ತು ಅವನ ಗುಣಗಳನ್ನೇ ಹೇಳುತ್ತವೆ" ಎನ್ನುವುದು ಶಾಸ್ತ್ರಾಧ್ಯಯನದಲ್ಲಿ ಕಲಿಯುವ ಒಂದು ಪ್ರಮೇಯ. ಹಾಗೆಯೇ ಪರಮಾತ್ಮನ ಸೃಷ್ಟಿಯಲ್ಲಿ ಇರುವ ಎಲ್ಲ ಶಬ್ದಗಳನ್ನೂ ಎರಡು ರೀತಿಯವು ಎಂದು ಜ್ಞಾನಿಗಳು ವಿಭಾಗ ಮಾಡಿದ್ದಾರೆ. "ವರ್ಣಾತ್ಮ್ಯಕ" ಮತ್ತು "ಧ್ವನ್ಯಾತ್ಮಕ" ಎಂಬುದಾಗಿ ಈ ಎರಡು ಪ್ರಭೇದಗಳು.


ನಾವು ಎಲ್ಲ ಬಗೆಯ ಶಬ್ದಗಳನ್ನೂ ಕೇಳಿ ತಿಳಿಯುವುದು ಶ್ರವಣೇಂದ್ರಿಯದಿಂದ. ನಮ್ಮ ಕಿವಿಗಳ ಸಹಾಯದಿಂದ. ಧ್ವನಿ ತರಂಗಗಳನ್ನು ಕಿವಿಗಳಿಂದ ಸ್ವೀಕರಿಸಿದ ನಂತರ ನಮ್ಮ ಮಿದುಳು ಅದನ್ನು ನಮಗೆ ಅರ್ಥ ಮಾಡಿಸುತ್ತದೆ. ವಿಜ್ಞಾನವೂ ಇದನ್ನೇ ಹೇಳುತ್ತದೆ. ನಾವು ಕೇಳುವ ಕೆಲವು ಶಬ್ದಗಳನ್ನು ವರ್ಣಮಾಲೆಯಲ್ಲಿರುವ ಅಕ್ಷರಗಳಿಂದ ಬರೆಯಬಹುದು. ಇವುಗಳನ್ನು "ವರ್ಣಾತ್ಮ್ಯಕ" ಶಬ್ದಗಳು ಎನ್ನುತ್ತಾರೆ. ನಾವು ಕೇಳುವ ಮತ್ತೆ ಕೆಲವು ಶಬ್ದಗಳನ್ನು ಅಕ್ಷರಗಳಲ್ಲಿ ಬರೆಯಲಾಗುವುದಿಲ್ಲ. ಉದಾಹರಣೆಗೆ ಘಂಟೆ, ಜಾಗಟೆ, ಸಿಡಿಲು ಮುಂತಾದುವುಗಳ ಶಬ್ದಗಳು. ಪ್ರಾಣಿ-ಪಕ್ಷಿಗಳು ಕೂಗುವ ಶಬ್ದಗಳು. ನದಿ-ಸಮುದ್ರಗಳು ಮಾಡುವ ಶಬ್ದಗಳು. ಘಂಟೆ "ಢಣ್" ಎಂದಿತು ಎಂದು ಹೇಳಿದರೂ ಎಲ್ಲ ಘಂಟೆಗಳೂ ಒಂದೇ ರೀತಿ ಶಬ್ದ ಮಾಡುವುದಿಲ್ಲ. ಒಂದು ಘಂಟೆ ಮಾಡಿದ ಶಬ್ದದಂತೆ ಮತ್ತೊಂದಿಲ್ಲ. ಹತ್ತು ಘಂಟೆಗಳು ಮಾಡುವ ಶಬ್ದ ವೈವಿಧ್ಯವನ್ನು ನಮ್ಮ ಇಂದ್ರಿಯಗಳು ಗುರುತಿಸಬಲ್ಲವು. ನದಿ ಜುಳು ಜುಳು ಎಂದು ಹರಿಯುತ್ತದೆ ಎಂದರೂ, ಒಮ್ಮೆ ಇದ್ದಂತೆ ಮತ್ತೊಮ್ಮೆ ಇಲ್ಲ. ನೀರು ಹರಿವು ಹೆಚ್ಚಿದ್ದಾಗಿನಂತೆ ನೀರು ಹರಿವು ಕಡಿಮೆ ಇದ್ದಾಗ ಇಲ್ಲ. ಇಂತಹ ಶಬ್ದಗಳನ್ನು "ಧ್ವನ್ಯಾತ್ಮಕ" ಶಬ್ದಗಳು ಎಂದು ಹೇಳುತ್ತಾರೆ. 

ನಮ್ಮ ಇಂದ್ರಿಯಗಳು ಒಂದು ನಿಗದಿತ ಪ್ರಮಾಣದ ಅಂತರದ ಆವರ್ತನ (ಫ್ರೀಕ್ವೆನ್ಸಿ) ಶಬ್ದಗಳನ್ನು ಮಾತ್ರ ಗ್ರಹಿಸಬಲ್ಲವು. ಆದರೆ ಸೃಷ್ಟಿಯಲ್ಲಿ ಇದನ್ನು ಮೀರಿದ ಶಬ್ದಗಳೂ ಇವೆ. ಇವನ್ನು ಇನ್ಫ್ರಾಸೌಂಡ್ ಮತ್ತು ಅಲ್ಟ್ರಾಸೌಂಡ್ ತರಂಗಗಳು ಅನ್ನುತ್ತಾರೆ. ಅನೇಕ ವೈದ್ಯಕೀಯ ಮತ್ತು ತಾಂತ್ರಿಕ ಬೆಳವಣಿಗಳಲ್ಲಿ ಈ ಶಬ್ದಗಳ ಉಪಯೋಗವನ್ನೂ ಮಾಡುತ್ತಾರೆ. 

*****

ನಮ್ಮ ಸಂಪ್ರದಾಯದಂತೆ ಮತ್ತು ನಡವಳಿಕೆಯಲ್ಲಿ ಬಂದಿರುವ ಅಭ್ಯಾಸದಂತೆ ಯಾರನ್ನಾದರೂ ನೋಡಲು ಹೋಗುವಾಗ ಬರಿಗೈಲಿ ಹೋಗುವುದಿಲ್ಲ. ನಮ್ಮ ಮನೆಗೆ ಯಾರಾದರೂ ಬಂದಾಗಲೂ ಅವರನ್ನು ಬರಿಗೈಲಿ ಕಳಿಸುವುದಿಲ್ಲ. ಸಮಾರಂಭಗಳಿಗೆ ಹೋದಾಗಲೂ ಅಷ್ಟೇ. "ಬರಿಗೈಲಿ ಹೇಗೆ ಹೋಗುವುದು?" ಎಂದು ಚಿಂತಿಸುತ್ತೇವೆ. ನಮ್ಮ ಸಮಾರಂಭಗಳಿಗೆ ಬೇರೆಯ ಅತಿಥಿ-ಅಭ್ಯಾಗತರು ಬಂದಾಗಲೂ ಅಷ್ಟೇ. "ಬಂದವರನ್ನು ಹಾಗೆಯೇ ಕಳಿಸಿದೆವಲ್ಲ" ಎಂದು ಬೇಸರಿಸುತ್ತೇವೆ. ಈ ರೀತಿ ಏನಾದರೂ ಕೊಡುವ ನಡಾವಳಿ ಹಾಸು-ಹೊಕ್ಕಾಗಿ ಬಂದಿದೆ. ವಿದೇಶಗಳಲ್ಲೂ ಅಷ್ಟೇ. ಒಂದು ಚಾಕೊಲೇಟ್ ಅಥವಾ ಒಂದು ವೈನ್ ಬಾಟಲು ಅಥವಾ ಹೂಗುಚ್ಛ ಇತ್ಯಾದಿ ತರುತ್ತಾರೆ. ಅವರವರ ದೇಶ-ಕಾಲಗಳ ಅನುಗುಣವಾಗಿ ಈ ವ್ಯವಸ್ಥೆ ನಡೆಯುತ್ತಾ ಬಂದಿದೆ. 

ನಾವು ಯಾರಿಗಾದರೂ ಏನನ್ನಾದರೂ ಕೊಡುವಾಗ ಅದರ ಬಗ್ಗೆ  ಸ್ವಲ್ಪ ಯೋಚಿಸುವುದು ಸಹಜ. ಯಾವುದಾರೂ ಪದಾರ್ಥ ಕೊಡುವ ಮುಂಚೆ ಮುಖ್ಯವಾಗಿ ಮೂರು ಅಂಶಗಳನ್ನು ಗಮನಿಸುತ್ತೇವೆ:
  • ಕೊಡುವ ಪದಾರ್ಥವು ಒಳ್ಳೆಯ ಗುಣಮಟ್ಟದ್ದು ಮತ್ತು ಚೆನ್ನಾಗಿ ಇರಬೇಕು. ಅದರಲ್ಲಿ ಯಾವುದೇ ನ್ಯೂನತೆ ಅಥವಾ ಕಡಿಮೆ ಇರಬಾರದು.  ಹಣ್ಣು ಕೊಟ್ಟರೆ ಅದು ನೋಡಲು ಚೆನ್ನಾಗಿರಬೇಕು. ಸಿಹಿಯಾಗಿದೆ ಎಂದು ಗೊತ್ತಾದರೆ ಇನ್ನೂ ಒಳ್ಳೆಯದು. ತಿಂಡಿ ಕೊಟ್ಟರೆ ಅದು ಶುಚಿ-ರುಚಿಯಾಗಿರಬೇಕು. ಬಟ್ಟೆ ಕೊಟ್ಟರೆ ಅದು ನೋಡಲು ಚೆನ್ನಾಗಿದ್ದು ಕೊಳೆ-ಕಲೆ ಇರಬಾರದು. ಹೀಗೆ ಪ್ರತಿ ವಸ್ತುವೂ ಕೆಲವು ಗುಣಗಳನ್ನು ಹೊಂದಿರಬೇಕು ಮತ್ತು ಅವುಗಳಲ್ಲಿ ಏನೂ ಕಳಪೆ ಅಥವಾ ಚ್ಯುತಿ ಇರಬಾರದು. 
  • ಕೊಡುವ ಪದಾರ್ಥವು ಹೆಚ್ಚಿದ್ದಷ್ಟೂ ಒಳ್ಳೆಯದು. ಕೆಲವು ಗಾತ್ರದಲ್ಲಿ ದೊಡ್ಡದಿರಬೇಕು. ಮತ್ತೆ ಕೆಲವು ಮೌಲ್ಯ ಅಥವಾ ಬೆಲೆಯಲ್ಲಿ ಹೆಚ್ಚಿರಬೇಕು. ಬಟ್ಟೆ ಕೊಟ್ಟರೆ ಅಳತೆ ಸರಿಯಾಗಿರಬೇಕು. ದೂರ ಪ್ರಯಾಣ ಮಾಡುವವರಿಗೆ ಕೊಟ್ಟರೆ ಪ್ಯಾಕಿಂಗ್ ಚೆನ್ನಾಗಿರಬೇಕು. ಮತ್ತೆ ಕೆಲವು ತೆಗೆದು ಕೊಳ್ಳುವವರ ಯೋಗ್ಯತೆಗೆ ಅನುಗುಣವಾಗಿರಬೇಕು. ಹೀಗೆಯೇ ಯೋಚಿಸಿ ಹುಡುಕಿ ಆರಿಸುವುದು, 
  • ಕೊಡುವ ಪದಾರ್ಥ ಸರಿಯಾದವರಿಗೆ ಸೇರಬೇಕು. ನಾವು ಕೊಡಬೇಕು ಎಂದು ಉದ್ದೇಶಿಸಿದ್ದು ಒಬ್ಬರಿಗೆ; ಅದು ತಲುಪಿದುದು ಇನ್ನೊಬ್ಬರಿಗೆ. ಹೀಗಾಗಬಾರದು. ಅನೇಕ ಸಮಾರಂಭಗಳಲ್ಲಿ ಯಾರಿಗೆ ಕೊಡಬೇಕು ಎಂದು ತೀರ್ಮಾನಿಸಿ, ಅದನ್ನು ಒಂದು ಪ್ಯಾಕೆಟ್ನಲ್ಲಿ ಹಾಕಿ ಹೆಸರೂ ಕೂಡ ಬರೆದಿಡುವುದಿದೆ. ಹೀಗಿದ್ದೂ ಹೆಚ್ಚು-ಕಡಿಮೆ ಆಗಿ ಗೈರುವಿಲೆ ಆಗಿರುವುದೂ ನಮ್ಮ ಅನುಭವದ ಮಾತೇ. ಆದ್ದರಿಂದ ಸರಿಯಾದವರಿಗೆ ಪದಾರ್ಥ ತಲುಪಿತು ಎಂದು ಖಚಿತವಾಗಬೇಕು. 
ಹೀಗೆ ಕೊಟ್ಟ ಪದಾರ್ಥದ ಗುಣಮಟ್ಟ, ಅದರ ಪ್ರಮಾಣ ಮತ್ತು ತಲುಪಬೇಕಾದವರ ವಿಳಾಸ, ಈ ಮೂರು ಅಂಶಗಳು ಬಹಳ ಮುಖ್ಯವಾಗುತ್ತವೆ. 

*****

ಲೋಕಾರೂಢಿಯಲ್ಲಿ ಕೊಡುವ ಪದಾರ್ಥಗಳ ವಿಷಯದಲ್ಲೇ ಇಷ್ಟು ಅಳೆದು-ಸುರಿದು ಕೊಡುವುದಾದರೆ ನಾವು ನಂಬಿದ ದೈವಕ್ಕೆ, ಆ ಪರಮಪುರುಷನಿಗೆ ಕೊಡುವಾಗ ಈ ಎಚ್ಚರ ಇರಲೇಬೇಕಲ್ಲವೇ?  ಆದ್ದರಿಂದ ನಾವು ಮಾಡುವ ಪೂಜೆ-ಪುನಸ್ಕಾರಗಳ ವಿಷಯದಲ್ಲೂ ಆದಷ್ಟೂ ಎಚ್ಚರ ವಹಿಸುತ್ತೇವೆ. ಪ್ರತಿಯೊಂದು ಪದಾರ್ಥ ಆರಿಸುವುದರಲ್ಲೂ ಹೆಚ್ಚಿನ ಗಮನ ಕೊಡುತ್ತೇವೆ. ಶ್ರದ್ದೆ ಇದ್ದಷ್ಟೂ ಒಳ್ಳೆಯದು ಎನ್ನುತ್ತೇವೆ. ಆ ಪರಮಾತ್ಮನಿಗೆ ನಾವು ಏನು ಕೊಟ್ಟೆವು? ಎಲ್ಲವೂ ಅವನು ಸೃಷ್ಟಿಸಿ ಕೊಟ್ಟಿರುವುದೇ. ಅವನು ಕೊಟ್ಟಿದ್ದು ಅವನ ಮುಂದೆ ಇಟ್ಟು ಕೈ ಮುಗಿಯುವುದೇ ಅಲ್ಲವೇ?

ಮೊದಲು ಗುಣಮಟ್ಟದ ವಿಷಯ ನೋಡೋಣ. ನಾವು ಎಷ್ಟು ಜಾಗರೂಕರಾಗಿದ್ದರೂ ವ್ಯತ್ಯಾಸ ಆಗೇ ಆಗುತ್ತದೆ. ಮೊದಲಿಗೆ ನಮ್ಮಲ್ಲೇ ಏನಾದರೂ ನ್ಯೂನತೆ ಇರಬಹುದು. ಕಾರ್ಯ ಮಾಡುವ ಸ್ಥಳ ಎಷ್ಟೇ ಶುಚಿ ಮಾಡಿದ್ದರೂ ಅದು ಪೂರ್ತಿ ಶುದ್ದವಾಗಿದೆ ಎಂದು ಎದೆ ತಟ್ಟಿ ಹೇಳುವಂತಿಲ್ಲ. ಪಾತ್ರೆ-ಪಡಗ ಎಷ್ಟು ತೊಳೆದಿದ್ದರೂ ಎಲ್ಲೋ ಒಂದು ಮೂಲೆಯಲ್ಲಿ ಸ್ವಲ್ಪ ಕಂಡೂಕಾಣದಂತೆ ಕೊಳೆ ಇರಬಹುದು. ನೈವೇದ್ಯಕ್ಕೆ ಮಾಡಿದ ಅಡಿಗೆಯಲ್ಲಿ ವ್ಯತ್ಯಾಸ ಇರಬಹುದು. ಬೆಂದಿರುವುದು ಕಡಿಮೆ ಇರಬಹುದು. ಸ್ವಲ್ಪ ತಳ ಹತ್ತಿರಬಹುದು. ಉಪ್ಪು-ಖಾರ ಹೆಚ್ಚು-ಕಡಿಮೆ ಇರಬಹುದು. ಇಡೇ ರೀತಿ ಪ್ರತಿ ಸಾಮಾನು-ಸಲಕರಣೆಯಲ್ಲಿ ಹೆಚ್ಚು-ಕಡಿಮೆ ಇರಬಹುದು. ಈ ಕಾರಣಕ್ಕಾಗಿಯೇ ಶ್ರಾದಾದಿಗಳಲ್ಲಿ ಎಲ್ಲ ತಯಾರಿ ಮಾಡಿಕೊಂಡು ಮುಖ್ಯ ಕೆಲಸ ಪ್ರಾರಂಭ ಮಾಡುವ ಮುನ್ನ ಈ ರೀತಿ ಹೇಳುತ್ತೇವೆ:

"ಆದೌ ಆತ್ಮ, ಸ್ಥಳ, ಭಾಂಡ,  ಭಾಜನ, ಕರ್ತೃ, ಭೋಕ್ಟ್ರು, ಹವಿದ್ರವ್ಯ ಶುಧ್ಯರ್ಥಂ 
ಕಾಲಾತೀತ ದೋಷ ಪ್ರಾಯಶ್ಚಿತ್ತಾರ್ಥಮ್ ವೈಶ್ವದೇವ ಸೂಕ್ತ ಮಂತ್ರ ಪಠನಂ ಕರಿಷ್ಯೇ" 

ಬೇರೆ ಕಾರ್ಯಗಳಲ್ಲೂ ಹೀಗೆ ಅವಕ್ಕೆ ಸರಿಯಾದ ಪ್ರಾರ್ಥನೆ ಮಾಡಿ ನಂತರ ಕೆಲಸ ಪ್ರಾರಂಭಿಸುತ್ತೇವೆ. ಇಷ್ಟಿದ್ದರೂ ಎಲ್ಲಾ ಸರಿಯಿದೆ ಎಂದು ಹೇಳಲು ಬರುವುದಿಲ್ಲ. ಇದನ್ನು ಸರಿಮಾಡುವುದು ಹೇಗೆ?

ಎರಡನೆಯದು ಪದಾರ್ಥ ಅಥವಾ ಮಾಡಿದ ಕೆಲಸದ ಮೌಲ್ಯ. ಇಡೀ ವಿಶ್ವವನ್ನೇ ತನ್ನ ಹೊಟ್ಟೆಯ ಒಂದು ಮೂಲೆಯಲ್ಲಿ ಧರಿಸಿರುವ ಪರಮಾತ್ಮನ ಯೋಗ್ಯತೆಗೆ ತಕ್ಕಂತೆ ನಾವು ಕೊಡುವುದನ್ನು ಯೋಚಿಸಲೂ ಸಾಧ್ಯವಿಲ್ಲ. "ಅಂಧಕಾಸುರನ ಹೊಟ್ಟೆಗೆ ಅರಕಾಸು ಮಜ್ಜಿಗೆ" ಎಂದೊಂದು ಗಾದೆ. ನಮ್ಮ ಪರಮಾತ್ಮನಿಗೆ ಮಾಡುವ ಸಮರ್ಪಣೆಗಳು ಇದಕ್ಕಿಂತ ಎಷ್ಟೂ ಪಾಲು ಕಡಿಮೆಯೇ. ನಾವು ಕೊಡುವ ಈ ಚಿಕ್ಕದ್ದನ್ನು ದೊಡ್ಡದು ಮಾಡುವುದು ಹೇಗೆ? 

ಗುಣಮಟ್ಟ ಮತ್ತು ಮೌಲ್ಯದ ವಿಷಯ ಹೀಗೆ. ತಲುಪಿಸುವ ವಿಳಾಸದ ಕಥೆ ಏನು? ಎಲ್ಲ ಶಬ್ದಗಳು, ಧ್ವನ್ಯಾತ್ಮಕವಿರಲಿ ಅಥವಾ ವರ್ಣಾತ್ಮ್ಯಕವಿರಲಿ, ಅವನನ್ನೇ ಕುರಿತು ಹೇಳುತ್ತವೆ ಅಂದ ಮೇಲೆ ಅವನ ಅನಂತ ನಾಮಗಳಲ್ಲಿ ಯಾವುದನ್ನು ವಿಳಾಸವಾಗಿ ಉಪಯೋಗಿಸಬೇಕು? 

ಈಗ ಮೂರು ಪ್ರಶ್ನೆಗಳು ನಮ್ಮ ಮುಂದೆ ನಿಂತವು. ಮೊದಲು ಹೇಗಾದರೂ ಮಾಡಿ ಸಮರ್ಪಣ ಮಾಡುವ ಪದಾರ್ಥ-ಕೆಲಸಗಳು ಎಲ್ಲ ನ್ಯೂನತೆಗಳಿಂದ ಹೊರಬರಬೇಕು. ಎರಡನೆಯದು ಅವುಗಳ ಮೌಲ್ಯ ಹೆಚ್ಚಾಗಿ ಪರಮಾತ್ಮನ ಯೋಗ್ಯತೆಗೆ ಸರಿಹೊಂದಬೇಕು. ಕಡೆಯದಾಗಿ ಅವೆಲ್ಲಾ ಅವನಿಗೇ ತಲುಪಬೇಕು. ಇದು ಹೇಗೆ ಸಾಧ್ಯ? 

*****

ಪರಮಾತ್ಮನ ಅನಂತ ಹೆಸರುಗಳಲ್ಲಿ "ಅಚ್ಯುತ" ಅನ್ನುವುದೂ ಒಂದು. ಏನಿದರ ಅರ್ಥ? ಏನೂ ಕುಂದು-ಕೊರತೆಗಳಿಲ್ಲದವನು, ಓರೆ-ಕೋರೆಗಳಿಲ್ಲದವನು, ಪರಿಪೂರ್ಣನು, ಚ್ಯುತಿ ಇಲ್ಲದವನು ಅಚ್ಯುತನು. ನಾವು ಅರ್ಪಿಸುವುದರಲ್ಲಿ ಇರುವ ಕೊರತೆಗಳನ್ನು, ಚ್ಯುತಿಗಳನ್ನು ತೆಗೆದು ಅದನ್ನು ಸರಿಮಾಡುವ ಶಕ್ತಿ ಅವನೊಬ್ಬನಿಗೆ ಇದೆ. ಆದ್ದರಿಂದ ಆ ಅಚ್ಯುತನನ್ನೇ "ಇವನ್ನು ಸರಿಮಾಡಪ್ಪಾ" ಎಂದು ಕೇಳಿಕೊಳ್ಳಬೇಕು!

ಕೊಟ್ಟ ಪದಾರ್ಥ ಅಥವಾ ಸಾಧನೆ ಅತ್ಯಲ್ಪ. ಇದನ್ನು ಅವನಿಗೆ ಯೋಗ್ಯ ಮಾಡುವುವು ಹೇಗೆ? ಅವನು ಅನಂತನು. ಅನಂತನಿಗೆ ತಕ್ಕುದಾದದ್ದು ಅನಂತವೇ. ಆದ್ದರಿಂದ "ಈ ಅಲ್ಪವನ್ನು ಅನಂತ ಮಾಡಪ್ಪಾ" ಎಂದು ಆ ಅನಂತನನ್ನೇ ಕೇಳುವುದು! 

ಇನ್ನು ವಿಳಾಸದ ವಿಚಾರ. ಎಲ್ಲೆಲ್ಲೂ ವ್ಯಾಪಿಸಿರುವವನು ಅವನು. ಇಡೀ ವಿಶ್ವವನ್ನು ಸೃಷ್ಟಿಸಿ ಅದರೊಳಗೆ ಪ್ರವೇಶ ಮಾಡಿದವನು ಅವನು. ಅಷ್ಟು ಮಾತ್ರವಲ್ಲ. ಅದರ ಒಳಗೆ ಪ್ರವೇಶ ಮಾಡಿದರೂ ಅದರ ಹೊರಗೂ ಇದ್ದಾನೆ. ಅದಕ್ಕೆ ಅವನನ್ನು "ಗೋವಿಂದ" ಎನ್ನುವುದು. (ಇದರ ಬಗ್ಗೆ ಹೆಚ್ಚು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ). ಆದ ಕಾರಣ ಇದನ್ನು ಆ ಗೋವಿಂದನ ವಿಳಾಸಕ್ಕೆ ಕಳಿಸುವುದು!

ಮೂರು ಸಮಾಸ್ಯೆಗಳಿಗೂ ಪರಿಹಾರ ಒದಗಿದಂತೆ ಆಯಿತಲ್ಲ!

******

ಈ ಕಾರಣಕ್ಕಾಗಿಯೇ ಎಲ್ಲ ರೀತಿಯ ಅಲ್ಪ ಸಾಧನೆಗಳನ್ನು ಅವನಿಗೆ ಅರ್ಪಿಸುವಾಗ ಅವನ ಲೆಕ್ಕವಿಲ್ಲದಷ್ಟು ಹೆಸರುಗಳಲ್ಲಿ ಈ ಮೂರನ್ನು ಆರಿಸಿ, ಎಲ್ಲಾ ರೀತಿಯ ಲೋಪ-ದೋಷಗಳನ್ನು ನಿವಾರಿಸಿ ಈ ಕಾರ್ಯವನ್ನು ಸಾರ್ಥಕ ಮಾಡು ಎಂದು ಬೇಡುತ್ತಾ ಹೀಗೆ ಹೇಳುವುದು:

ಅಚ್ಯುತಾಯ ನಮಃ 
ಅನಂತಾಯ ನಮಃ 
ಗೋವಿಂದಾಯ ನಮಃ 
ಅಚ್ಯುತ-ಅನಂತ-ಗೋವಿಂದೇಭ್ಯೋ ನಮಃ 

ಇದನ್ನೇ ಮೂರು ಸಾರಿ ಹೇಳುವ ಪದ್ಧತಿ ಉಂಟು. ಮೂರು ಸಾರಿ ಏಕೆ? ವಾಸ್ತವವಾಗಿ ಒಂದೇ ಸಲ ಸಾಕು. ಆದರೆ ನಮ್ಮ ಕೋತಿ ಮನಸ್ಸು ಅಲ್ಲಿ ಇಲ್ಲಿ ಹರಿದಾಡುತ್ತಿರುತ್ತಡೆ. ಆದ್ದರಿಂದ ಮೂರು ಸಲ ಹೇಳಿದರೆ ಒಂದು ಸಲವಾದರೂ ಈ ಅನುಸಂಧಾನ ಬರಬಹುದು ಅನ್ನುವ ಉದ್ದೇಶದಿಂದ ಹಾಗೆ ಮಾಡುವುದು. 

Friday, April 25, 2025

ಪಿಷ್ಟ ಪೇಷಣ ಮತ್ತು ತೌಡು ಕುಟ್ಟುವುದು

ಸ್ವಲ್ಪ ದಿನಗಳ ಹಿಂದೆ "ಚರ್ವಿತ ಚರ್ವಣ" ಎಂಬ ಶೀರ್ಷಿಕೆಯಲ್ಲಿ ಶ್ರೀಮದ್ ಭಾಗವತ ಪುರಾಣದ ಏಳನೆಯ ಸ್ಕಂಧದಲ್ಲಿ ವರ್ಣಿತವಾದ ಹಿರಣ್ಯ ಕಷಿಪು ಮತ್ತು ಬಾಲಕ ಪ್ರಹ್ಲಾದನ ನಡುವೆ ನಡೆದ ಸಂಭಾಷಣೆಯಲ್ಲಿ "ಚರ್ವಿತ ಚರ್ವಣ" ಎಂಬುದರ ಪ್ರಯೋಗ ಮತ್ತು ಈಗಿನ ಭಾಷೆಯಲ್ಲಿ ಅದನ್ನು ಹೇಗೆ ಉಪಯೋಗಿಸುತ್ತೇವೆ ಎಂದು ನೋಡಿದೆವು. ಇದರ ವಿವರಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ. 


ಚರ್ವಿತ ಚರ್ವಣ ಅನ್ನುವುದರ ಜೊತೆಯಲ್ಲಿ "ಪಿಷ್ಟ ಪೇಷಣ" ಅನ್ನುವ ಪ್ರಯೋಗವೂ ಉಂಟು. ಚರ್ವಿತ ಚರ್ವಣ ಆಗಲೇ ದೀರ್ಘವಾಗಿದ್ದರಿಂದ ಅದನ್ನು ಅಲ್ಲಿ ಸೇರಿಸಲಿಲ್ಲ. ಮಾನ್ಯ ಸ್ನೇಹಿತರೊಬ್ಬರು ಕನ್ನಡ ಆಡು ಭಾಷೆಯ "ತೌದು ಕುಟ್ಟುವುದು" ಅನ್ನುವುದನ್ನೂ ನೆನಪು ಮಾಡಿದರು. ಚರ್ವಿತ ಚರ್ವಣ ಅನ್ನುವುದರ ಜೊತೆ ಈ ಎರಡು ಪ್ರಯೋಗಗಳನ್ನೂ ಈಗಲೂ ಮಾಡುವುದು, ಮತ್ತು ಅದರಲ್ಲಿಯೂ ಬರವಣಿಗೆಯಲ್ಲಿ ಹೆಚ್ಚಾಗಿ, ಮಾಡುವುದು, ನಡೆದಿದೆ. 

ಇವೆರಡರ  ಅರ್ಥ ಮತ್ತು ಪ್ರಯೋಗವನ್ನು ಈ ಸಂಚಿಕೆಯಲ್ಲಿ ನೋಡೋಣ. 

***** 


ಈಗ್ಗೆ ಸುಮಾರು ಐವತ್ತು ವರುಷಗಳ ಹಿಂದಿನ ಸಮಯ. ಆಗ ಇನ್ನೂ ಮೊಬೈಲ್ ಫೋನ್ ಎನ್ನುವ ಕಲ್ಪನೆಯೂ ಇರಲಿಲ್ಲ. ಲ್ಯಾಂಡ್ ಲೈನ್ ದೂರವಾಣಿ ಇದ್ದವರೂ ಕಡಿಮೆಯೇ. ಯಾರದ್ದಾದರೂ ಫೋನ್ ನಂಬರ್ ಬೇಕಾಗಿದ್ದರೆ "ಟೆಲಿಫೋನ್ ಡೈರೆಕ್ಟರಿ" ತೆಗೆದು ಹುಡುಕಬೇಕಾಗಿತ್ತು. ದೊಡ್ಡ ಪಟ್ಟಣಗಳಲ್ಲಿ ಮೂರು ನಾಲ್ಕು ದೊಡ್ಡ ಪುಸ್ತಗಳ ಡೈರೆಕ್ಟರಿಗಳು. ಅದರಲ್ಲಿ "ಹಳದಿ ಹಾಳೆಗಳು" (ಯಲ್ಲೋ ಪೇಜಸ್) ಬೇರೆ. ವಾಣಿಜ್ಯ ಸಂಸ್ಥೆಗಳು ಈ ಹಳದಿ ಹಾಳೆಗಳ ಮೇಲೆ ತಮ್ಮ ನಂಬರುಗಳು ಬರುವ ಕಡೆ ತಮ್ಮ ತಮ್ಮ ಜಾಹೀರಾತು (ಅಡ್ವರ್ಟೈಸ್ಮೆಂಟ್) ಹಾಕುತ್ತಿದ್ದರು. ಒಂದೆಡೆಯಿಂದ ಇನ್ನೊಂದೆಡೆಗೆ ಸರಕು-ಸಾಮಾನು ಸಾಗಿಸುವ ಸಂಸ್ಥೆಯೊಂದು ಇಂತಹ ಒಂದು ಜಾಹೀರಾತು ಹಾಕಿತ್ತು. "ನಾವು ಪ್ರಪಂಚದ ಎರಡನೇ ಶ್ರೇಷ್ಠ ಸಾಮಾನು ಪ್ಯಾಕರ್ ಸಂಸ್ಥೆ" ಎಂದು ಅದರ ಜಾಹೀರಾತು!  ಅದನ್ನು ನೋಡಿದವನಿಗೆ ಮೊದಲನೆಯ ಶ್ರೇಷ್ಠ ಪ್ಯಾಕರ್ ಯಾರು ಎಂದು ಕುತೂಹಲ ಹುಟ್ಟಬೇಕು. ಜಾಹೀರಾತಿನ ಜೊತೆ ಒಂದು ಚಿತ್ರ. ಒಂದು ದಾಳಿಂಬೆ ಹಣ್ಣು ಅಥವಾ ಒಂದು ಹಲಸಿನ ಹಣ್ಣು ಇತ್ಯಾದಿ ಹಣ್ಣುಗಳನ್ನು ಮಧ್ಯೆ ಕತ್ತರಿಸಿರುವಂತೆ ಕಾಣುವಂತೆ ಇರುವ ಚಿತ್ರ. ಅವನ್ನು ಪ್ಯಾಕ್ ಮಾಡಿದವನು ಸೃಷ್ಟಿಕರ್ತ. ಅವನೇ ಮೊದಲನೆಯ ಶ್ರೇಷ್ಠ ಪ್ಯಾಕರ್. ಅವನಿಗಿಂತ ಉತ್ತಮನಾದ ಪ್ಯಾಕರ್ ಇನ್ನೊಬ್ಬನಿಲ್ಲ. ಅವನನ್ನು ಬಿಟ್ಟರೆ ನಾವೇ ಶ್ರೇಷ್ಠ ಪ್ಯಾಕರ್ ಅಂಡ್ ಮೂವರ್ಸ್ ಎಂದು ಅದರ ಅಂತರಾರ್ಥ! 

ತನ್ನ ಸೃಷ್ಟಿಯಲ್ಲಿ ಅನೇಕ ಧಾನ್ಯಗಳನ್ನು ಅವನು ನಮಗೆ ಕೊಟ್ಟಿದ್ದಾನೆ. ಅದರ ಪ್ಯಾಕಿಂಗ್ ಹೇಗೆ? ಸಸಿಯಲ್ಲಿ ಒಂದು ತೆನೆ. ಆ ತೆನೆಯಲ್ಲಿ ಹೊರಗಿನ ಹೊದ್ದಿಕೆಯ ಒಳಗೆ ಧಾನ್ಯ. ಭತ್ತ,  ಗೋಧಿ, ರಾಗಿ, ಜೋಳ ಇತ್ಯಾದಿ ಧಾನ್ಯಗಳನ್ನು ಹೊಲಗಳಲ್ಲಿ ನೋಡಿದವರಿಗೆ ಇದು ಗೊತ್ತು. ಮೊದಲು ತೆನೆ ಬೇರ್ಪಡಿಸಿ, ನಂತರ ಧಾನ್ಯ ಹೊರತೆಗೆದುಕೊಳ್ಳಬೇಕು. ಅದ್ಕಕೆ ಸಂಸ್ಕಾರಗಳಿವೆ. ಕತ್ತರಿಸು, ಬಡಿ, ಕೇರು, ತೂರು ಮುಂತಾದವು. ಭತ್ತವನ್ನೇ ತೆಗೆದುಕೊಳ್ಳೋಣ. ಹೀಗೆ ಮಾಡಿದಮೇಲೆ ಭತ್ತ ಸಿಕ್ಕಿತು. ಅದನ್ನೇ ತಿನ್ನುವಹಾಗಿಲ್ಲ. ಅದರ ಹೊರಗಿನ ಪದರ ಬೇರ್ಪಡಿಸಿದಮೇಲೆ ಅಕ್ಕಿ ಸಿಗುತ್ತದೆ. ಅದನ್ನು ನೀರಿನಲ್ಲಿ ನೆನೆಸಿ, ಬೇಯಿಸಿ ತಿನ್ನಬಹುದು. ನೀರಿನಲ್ಲಿ ಬೇಯಿಸಿದರೆ ಅನ್ನ ಆಯಿತು. "ಪರಮಾನ್ನ" ಎಂದೊಂದು ಪದವಿದೆ. ಏನದು ಪರಮಾನ್ನ? ಬಹಳ ಜನ "ಪಾಯಸ" ಅಂತ ಅರ್ಥ ಮಾಡುತ್ತಾರೆ.  ಪರಮಾನ್ನ ಅಂದರೆ ಹಾಲಿನಲ್ಲಿ ಬೇಯಿಸಿ ಮಾಡಿದ ಅನ್ನ. "ಪಂಚಭಕ್ಷ-ಪರಮಾನ್ನ" ಆನ್ನುವಾಗ ಹೇಳುವುದು ಹಾಲಿನಲ್ಲಿ ಬೇಯಿಸಿ ಮಾಡಿದ ಅನ್ನವನ್ನು. (ಎಸ. ಎಲ್. ಭೈರಪ್ಪನವರ "ಪರ್ವ" ಕಾದಂಬರಿಯಲ್ಲಿ ಈ ಪರಮಾನ್ನದ ಮಾತು ಅನೇಕ ಕಡೆ ಬಂದಿದೆ). ಅಕ್ಕಿ-ಕಡಲೆಬೇಳೆ ಪಾಯಸಕ್ಕೆ ಪರಮಾನ್ನ ಎಂದು ಕೆಲವರು ಹೇಳುವುದುಂಟು. 

ಭತ್ತದಿಂದ ಅಕ್ಕಿ ಬೇರ್ಪಡಿಸಬೇಕಾದರೆ ಭತ್ತ ಕುಟ್ಟುತ್ತಿದ್ದರು. ಭತ್ತವನ್ನು ಒರಳಲ್ಲಿ ಹಾಕಿ, ಇಬ್ಬರು ಒನಕೆ ಹಿಡಿದು ಸರದಿಯ ಮೇಲೆ ತಾಳ ಹಾಕಿದಂತೆ ಏಟುಗಳು ಹಾಕುತ್ತಿದ್ದರು. ಇದಕ್ಕಿಂತ ವ್ಯಾಯಾಮ ಬೇಕಿಲ್ಲ, (ಹೀಗೆ ಭತ್ತ ಕುಟ್ಟಿಯೇ ಚಿತ್ರದುರ್ಗದ ಒನಕೆ ಓಬವ್ವನ ರಟ್ಟೆಯಲ್ಲಿ ಹೈದರ್ ಅಲಿಯ ಸೈನಿಕರ ಹೆಣಗಳ ರಾಶಿ ಹಾಕುವ ಶಕ್ತಿ ಬಂದಿರಬೇಕು. ಒಂದು ಏಟಿಗೆ ಒಂದು ತಲೆ. ಹೀಗಿರಬೇಕು ಹೊಡೆತ). ಕುಟ್ಟಿದ ನಂತರ ಬಿದಿರಿನ ಮೊರಗಳಲ್ಲಿ ಕೇರಿ ಅಕ್ಕಿ ಮತ್ತು ತೌಡು (ಹೊಟ್ಟು) ಬೇರ್ಪಡಿಸುತ್ತಿದ್ದರು. ಅಕ್ಕಿ ಮನುಷ್ಯರ ಆಹಾರಕ್ಕೆ. ತೌಡು ದನಗಳ ಆಹಾರಕ್ಕೆ. ಹಿಂಡಿ-ಕಲಗಚ್ಚಿನ ಜೊತೆ. ಹಿಂದೆಲ್ಲ "ಕೊಟ್ಟಣ" ಎನ್ನುವ ಯಂತ್ರದಿಂದ ಕುಟ್ಟಿದ ಅಕ್ಕಿ ಸಿಗುತ್ತಿತ್ತು. ಅದರಲ್ಲಿ ಅನ್ನಸತ್ವಗಳು ಚೆನ್ನಾಗಿ ಇರುತ್ತಿದ್ದವು. ಆಮೇಲಾಮೇಲೆ "ಹಲ್ಲರ್" ಯಂತ್ರಗಳು ಬಂದವು. ಈಗಂತೂ ದೊಡ್ಡ ದೊಡ್ಡ ಯಂತ್ರಗಳ ಫ್ಯಾಕ್ಟರಿಗಳಿವೆ. ಅವುಗಳಿಂದ ಪಡೆದ ಅಕ್ಕಿ ಹೇರಳವಾಗಿ ಸಿಗುತ್ತದೆ, ಆದರೆ ಆದರಿಲ್ಲಿರುವ ಸತ್ವ ಕಡಿಮೆಯೇ. 

ಆಯಿತು. ಭತ್ತ ಕುಟ್ಟಿ ಅಕ್ಕಿ ಮತ್ತು ತೌಡು ಪಡೆದಿದ್ದಾಯಿತು. ಒಬ್ಬ ಬಹಳ ಬುದ್ಧಿವಂತನಿದ್ದ. ಒಂದಷ್ಟು ತೌದು ತೆಗೆದುಕೊಂಡು ಕುಟ್ಟಲು ಶುರುಮಾಡಿದ. ಕುಟ್ಟುತ್ತ ಹೋದ. ತೌಡು ಇನ್ನಷ್ಟು ಪುಡಿಯಾಯಿತೇ ವಿನಃ ಅಕ್ಕಿಯೇನೂ ಸಿಗಲಿಲ್ಲ. ರಸವೆಲ್ಲಾ ಹೀರಿ ಮಿಕ್ಕಿದ ಕಬ್ಬಿನ ಸಿಪ್ಪೆ ಜಗಿದಂತೆ. "ಚರ್ವಿತ ಚರ್ವಣ"ದಂತೆ. ಹೇಳಿದ್ದೇ ಮತ್ತೆ ಮತ್ತೆ ಹೇಳುವುದು. ಅಗಿದದ್ದೇ ಮತ್ತೆ ಮತ್ತೆ ಅಗಿದದ್ದು. ಕುಟ್ಟಿದ್ದನ್ನೇ ಮತ್ತೆ ಮತ್ತೆ ಕುಟ್ಟುವುದು. ಅದಕ್ಕೇ ಆಡು ಭಾಷೆಯಲ್ಲಿ "ತೌಡು ಕುಟ್ಟುವುದು" ಅನ್ನುತ್ತಾರೆ. ವ್ಯರ್ಥ ಪ್ರಯತ್ನಕ್ಕೆ ಒಳ್ಳೆಯ ದೃಷ್ಟಾಂತ. 
*****

ಅಕ್ಕಿಯಲ್ಲಾದರೆ ಅನ್ನ ಮಾಡಬಹುದು. ಜೋಳದಂತಹ ಧಾನ್ಯದಲ್ಲಿ ಹಾಗೆ ಮಾಡುವ ಪರಿಪಾಠವಿಲ್ಲ, ಮುಸುಕಿನ ಜೋಳಕ್ಕೂ ಹಾಗೆ. ಅವಕ್ಕೆ ಗಟ್ಟಿ  ಹೊರಕವಚ, ಭತ್ತ ಕುಟ್ಟಿ ಅಕ್ಕಿ ಮಾಡುವಾಗಲೂ ಕೆಲವು ಅಕ್ಕಿ ಕಾಳುಗಳು ಚೂರಾಗಿ "ನುಚ್ಚು" ಎಂದು ಕರೆಸಿಕೊಳ್ಳುತ್ತವೆ. ಸಾಮಾನ್ಯವಾಗಿ ಈ ನುಚ್ಚಿನಲ್ಲಿ ಅನ್ನ ಮಾಡುವುದಿಲ್ಲ. ಅಕ್ಕಿ ನುಚ್ಚು, ರಾಗಿ, ಗೋಧಿ, ಜೋಳ ಮೊದಲಾದ ಧಾನ್ಯಗಳನ್ನು ಬೀಸಿ ಪುಡಿ ಮಾಡಿ, ಆ ಹಿಟ್ಟಿನಿಂದ ರೊಟ್ಟಿಯನ್ನೋ, ಮುದ್ದೆಯನ್ನೋ, ಮತ್ತೇನಾದರೊ ತಿನ್ನುವ ಪದಾರ್ಥ ಮಾಡುತ್ತಾರೆ. 

ಈ ರೀತಿ ಮಾಡಿದ ಹಿಟ್ಟಿಗೆ ಸಂಸ್ಕೃತದಲ್ಲಿ "ಪಿಷ್ಟ" ಎನ್ನುತ್ತಾರೆ. ಧಾನ್ಯದ ಹಿಟ್ಟು ಎಂದು ಅರ್ಥ. ಈಗಿನ ವಿಜ್ಞಾನದ ತರಗತಿಗಳಲ್ಲಿ ಉಪಯೋಗಿಸುವ ಭಾಷೆಯಲ್ಲಿ ಪಿಷ್ಟ ಅಂದರೆ ಇಂಗ್ಲಿಷಿನ "ಸ್ಟಾರ್ಚ್" ಎಂಬುದರ ಸಮಾನ ಪದ. ಧಾನ್ಯವನ್ನು ಬೀಸುವಕಲ್ಲಿನಲ್ಲಿ ಬೀಸಿ ಹಿಟ್ಟು ಮಾಡುವ ಕ್ರಿಯೆಗೆ "ಪೇಶಣ" ಎನ್ನುತ್ತಾರೆ. 


ಬೀಸುವಕಲ್ಲಿನಲ್ಲಿ ಹಾಕಿ ಬೀಸಿ ಹಿಟ್ಟು ತೆಗೆಯುವುದು ಹಿಂದೆ ಹಳ್ಳಿಗಳಲ್ಲಿ ಸಾಮಾನ್ಯವಾಗಿತ್ತು. ಬೀಸುವ ಕೆಲಸ ಮಾಡುತ್ತಾ ಹೆಣ್ಣುಮಕ್ಕಳು ಹಾಡುತ್ತಿದ್ದ ಹಾಡುಗಳು ನಮ್ಮ ಜಾನಪದ ಸಾಹಿತ್ಯದ ಒಂದು ಬಂಗಾರದ ಅಧ್ಯಾಯ. ಮದುವೆ-ಮುಂಜಿಗಳಲ್ಲಿ "ಗೋಧಿಕಲ್ಲು ಶಾಸ್ತ್ರ" ಎಂದು ಮಾಡುತ್ತಿದ್ದರು. ಬೀಸುವ ಕಲ್ಲಿಗೆ (ಈಗಿನ ಪೀಳಿಗೆಯವರು ಮೇಲಿನ ಚಿತ್ರದಲ್ಲಿ ಬೀಸುವ ಕಲ್ಲನ್ನು ನೋಡಬಹುದು) ಅಲಂಕಾರ ಮಾಡಿ ಅರಿಸಿನ ಮತ್ತು ಗೋಧಿ ಬೀಸಿ, ಹಿಟ್ಟು ಮಾಡಿ ಶುಭ ಕಾರ್ಯಗಳಲ್ಲಿ ಉಪಯೋಗಿಸುತ್ತಿದ್ದರು. (ಸ್ನೇಹಿತರೊಬ್ಬರು ಕಳಿಸಿರುವ ಅವರ ೪೦ ವರುಷಗಳ ಹಿಂದಿನ ಅವರ ಮದುವೆಯ ಗೋಧಿಕಲ್ಲು ಶಾಸ್ತ್ರದ ಚಿತ್ರ ಮೇಲೆ ಕೊಟ್ಟಿದೆ), ಆಗ ಹೇಳುತ್ತಿದ್ದ ಹಾಡುಗಳು ಹೀಗಿರುತ್ತಿದ್ದವು:

ಅವಸರದಾ ಮುಹೂರ್ತವನ್ನು ಅವರಿಟ್ರು ಜೋಯಿಸರು 
ರಾಯ ಅಣ್ಣಯ್ಯ ಮನೆಗೆ ಬಂದು 
ರಾಯ ಅಣ್ಣಯ್ಯ ಮನೆಗೆ ಬಂದು 
ಅರಿಶಿಣಕೆ ಹಣವ ಕೊಡಿಸಿದ 

ಅವಸರದಾ ಮುಹೂರ್ತವನ್ನು ಅವರಿಟ್ರು ಜೋಯಿಸರು 
ರಾಯ ಮಾವಯ್ಯ ಮನೆಗೆ ಬಂದು
ರಾಯ ಮಾವಯ್ಯ ಮನೆಗೆ ಬಂದು 
ಗೋಧಿಗೆ ಹಣವ ಕೊಡಿಸಿದ 

ಮಗಳ ಮದುವೆ ಮಾಡಲು ಲಗ್ನ ಕಟ್ಟಿಸಲು ಹಳ್ಳಿಯ ಹೆಣ್ಣು ಮಗಳೊಬ್ಬಳು ತನ್ನ ಅಣ್ಣ ಮತ್ತು ಸೋದರಮಾವರ ಜೊತೆಯಲ್ಲಿ ಜೋಯಿಸರ ಮನೆಗೆ ಹೋದಳು. ಜೋಯಿಸರು ಪಂಚಾಂಗ ತೆಗೆದು ಬಹಳ ಸನಿಹದ (ಹತ್ತಿರದ) ಮುಹೂರ್ತ ಹೇಳಿದರು. ಈ ಹೆಣ್ಣು ಮಗಳ ಬಳಿ ಅಷ್ಟು ಶೀಘ್ರವಾಗಿ ಮದುವೆ ಮಾಡಲು ಹಣವಿಲ್ಲ. ದುಡ್ಡು ಹೊಂದಿಸಲು ಸಮಯ ಬೇಕು. ಮುಂದಿನ ಮುಹೂರ್ತ ಹೇಳಿ ಎಂದರೆ ಜೋಯಿಸರು ಇದನ್ನು ಬಿಟ್ಟರೆ ಕೆಲವು ತಿಂಗಳ ಕಾಲ ಮುಹೂರ್ತವೇ ಇಲ್ಲ ಅಂದುಬಿಟ್ಟರು. ಪೆಚ್ಚು ಮೊರೆ ಹಾಕಿ ಕುಳಿತಳು ಇವಳು. ಜೊತೆಯಲ್ಲಿ ಬಂದಿದ್ದ ಅಣ್ಣ ಮತ್ತು ಸೋದರಮಾವ ಧೈರ್ಯ ಹೇಳಿ ಹತ್ತಿರದ ಮುಹೂರ್ತವನ್ನೇ ಇಡಿಸಿದರು. ಮನೆಗೆ ಬಂದ ನಂತರ ಇಬ್ಬರೂ ಬೇಕಿದ್ದ ಹಣ ಕೊಟ್ಟು ಮುಂದಿನ ಕೆಲಸ ಮಾಡಲು ಸುಗಮ ಮಾಡಿದರು. ಆ ಹಣದಲ್ಲಿ ಮಂಗಳ ಪದಾರ್ಥಗಳನ್ನು ತಂದು ಕೆಲಸ ನಡೆಸುತ್ತಿದ್ದಾಳೆ. ಸಮಯದಲ್ಲಿ ಸಹಾಯ ಮಾಡಿದ ಅಣ್ಣ ಮತ್ತು ಮಾವನನ್ನು ಅವಳು ಈ ರೀತಿ ಹಾಡು ಹೇಳುತ್ತಾ ನೆನೆಸುತ್ತಿದ್ದಾಳೆ! 

*****

ಧಾನ್ಯವನ್ನು ಬೀಸಿದರೆ ಹಿಟ್ಟು ಬಂದೀತು. ಆದರೆ ಹಿಟ್ಟನ್ನೇ ಬೀಸಿದರೆ? ಹಿಟ್ಟೇ ಉಳಿದೀತು. ಅಷ್ಟೇ. ಅದೇನೂ ಹೆಚ್ಚುವುದಿಲ್ಲ. ಅಥವಾ ಹಿಟ್ಟು ಮತ್ತೇನೋ ಆಗುವುದಿಲ್ಲ. ಪಿಷ್ಟ ಪೇಷಣ ಮಾಡಿದರೆ ಪಿಷ್ಟವೇ ಉಳಿಯುವುದು. ಇದು ವ್ಯರ್ಥ ಪ್ರಯತ್ನಕ್ಕೆ ಇನ್ನೊಂದು ಉದಾಹರಣೆ. ಈ ಮಾತು ಮಾಡಿದ್ದನ್ನೇ ಮತ್ತೆ ಮತ್ತೆ ಮಾಡಿ ಪ್ರಯೋಜವಿಲ್ಲವಾಗುವುದು ತೋರಿಸಲು ದೃಷ್ಟಾಂತ. ಬೀಸಿದರೆ ಧಾನ್ಯ ಬೀಸಬೇಕು; ಹಿಟ್ಟನ್ನಲ್ಲ ಎಂದು ಹೇಳುವು ಇದರ ಗುರಿ. 

"ಪಿಷ್ಟ ಪೀಷಣ" ಮತ್ತು "ತೌಡು ಕುಟ್ಟುವುದು" ಇವೆರಡರಲ್ಲಿ ಯಾವುದು ಉತ್ತಮ? ಆಯ್ಕೆ ನಿಮಗೆ ಬಿಟ್ಟದ್ದು! 

Tuesday, April 22, 2025

ಅನ್ನದ ಹಾಹಾಕಾರ


"ಎಂಜಲು ಮತ್ತು ಪ್ರಸಾದ" ಹೆಸರಿನ ಶೀರ್ಷಿಕೆಯ ಹಿಂದಿನ ಒಂದು ಸಂಚಿಕೆಯಲ್ಲಿ, "ಊಟಮಾಡಿ ಮುಗಿದ ಮೇಲೆ ಎಲೆಗಳಲ್ಲಿ ಅಥವಾ ತಟ್ಟೆಗಳಲ್ಲಿ  ಬಿಟ್ಟಿರುವ ಪದಾರ್ಥಗಳನ್ನು "ಎಂಜಲು" ಎನ್ನುತ್ತಾರೆ. ಇದನ್ನು ಯಾರೂ ತಿನ್ನುವುದಿಲ್ಲ. ಇದೆಲ್ಲಾ ಒಟ್ಟುಗೂಡಿಸಿ ಹೊರಗೆ ಬಿಸಾಡುತ್ತಾರೆ. ಅಲ್ಲಿ ಪ್ರಾಣಿಗಳು ತಿನ್ನಬಹುದು ಇಲ್ಲವೇ ಕಡೆಗೆ ಗೊಬ್ಬರ ಆಗಬಹುದು" ಎಂದು ಹೇಳಿತ್ತು. ಇದು ಇಂದಿನ ದಿನದ ಸತ್ಯ. ಆದರೆ ಐವತ್ತು ಅರವತ್ತು ವರುಷಗಳ ಹಿಂದಿನ ಸತ್ಯ ಬೇರೆಯೇ ಇತ್ತು. ಆಗ ಕಂಡ ದೃಶ್ಯಗಳು ಹೃದಯ ಕದಡಿ ಮನಸ್ಸು ನೀರಾಗುವಂತೆ ಇರುತ್ತಿದ್ದವು. ವಾಸ್ತವವಾಗಿ ಅದನ್ನು ಚರ್ಚಿಸಲು ಮನಸ್ಸು ಬರುವುದಿಲ್ಲ. ಆದರೆ ಜೀವನದ ಸತ್ಯಗಳು ಯಾವಾಗಲೂ ಮಧುರವಾಗಿಯೇ ಇರುವುದಿಲ್ಲ. ಇಂದಿನ ಪ್ರಪಂಚದಲ್ಲಿ "ಅನ್ನದ ಹಾಹಾಕಾರ" ಇದ್ದರೂ ಅಂದಿನಷ್ದು ಭೀಕರವಾಗಿಲ್ಲ. ಪರಿಸ್ಥಿತಿ ಎಷ್ಟೋ ಸುಧಾರಿಸಿದೆ. 

1962, 1965 ಮತ್ತು 1971 ಇಸವಿಗಳಲ್ಲಿ ನಮ್ಮ ದೇಶ ಯುದ್ಧದ ಬೇಗೆಯಲ್ಲಿ ಬೇಯುತ್ತಿತ್ತು. ಮೊದಲು ಚೀನಾದ ಕಡೆ, ಮತ್ತೆರಡು ಬಾರಿ ಪಾಕಿಸ್ತಾನದ ಗಡಿಗಳಲ್ಲಿ.  ಆಗಿನ ಪರಿಸ್ಥಿತಿಯಲ್ಲಿ ಜನರಿಗೆ ಉದ್ಯೋಗದ ಅವಕಾಶಗಳು ಮೂಲತಃ ನಾಲ್ಕು ದಾರಿಗಳಲ್ಲಿದ್ದವು. ಮೊದಲನೆಯದು ಕೃಷಿ ಮತ್ತು ಪಶುಪಾಲನೆ. ಎರಡನೆಯದು ತಿಂಗಳ ಸಂಬಳ ಸಿಗುವ ಸರಕಾರಿ ನೌಕರಿ. ಮೂರನೆಯದು ಕುಂಬಾರ, ಬಡಗಿ, ಕಮ್ಮಾರ, ನೇಕಾರ ಮೊದಲಾದ ಗೃಹ ಕೈಗಾರಿಕೆ ಅಥವಾ ಕಸಬುಗಳು. ನಾಲ್ಕನೆಯದು ಸಣ್ಣ ವ್ಯವಹಾರ, ಅಂಗಡಿಗಳು ಮುಂತಾದವು. ಈಗಿನಂತೆ "ಸರ್ವಿಸ್ ಸೆಕ್ಟರ್" ಅನ್ನುವ ಕಲ್ಪನೆಯೇ ಇರಲಿಲ್ಲ. ಹಸಿವಿನ ದಾವಾಗ್ನಿ ಜ್ವಾಲೆಗಳು ಅನೇಕರನ್ನು ಕಿತ್ತು ತಿನ್ನುತ್ತಿದ್ದವು. ಎಲ್ಲಾದರೂ ಸಮಾರಂಭಗಳಾಗಿ ಊಟದ ಎಲೆ ಎಸೆಯುವ ಕಡೆ ಕೆಲವರು ಕಾದು ಕುಳಿತಿರುತ್ತಿದ್ದರು. ಅಲ್ಲಿ ಸೇರಿದ್ದ ಪ್ರಾಣಿಗಳ ಜೊತೆ ಹೊಡೆದಾಡಿ ಹೊಟ್ಟೆ ತುಂಬಿಸಿಕೊಳ್ಳಬೇಕಾದ ಪರಿಸ್ಥಿತಿ ಅವರದ್ದು. ಭಿಕ್ಷೆ ಬೇಡಿ ಜೀವನ ಮಾಡುವುದೂ ಒಂದು ವೃತ್ತಿಯೇ ಆಗಿತ್ತು. ಇಷ್ಟು ಹೇಳಿ ಮುಂದಿನದನ್ನು ಇಲ್ಲಿಗೇ ಬಿಡೋಣ. ಆ ಕಾಲಮಾನದಲ್ಲಿ ಇಂತಹ ದೃಶ್ಯಗಳನ್ನು ಕಣ್ಣಾರೆ ಕಂಡವರಿಗೆ ಆ ನೋವು ಬೇಗ ಅರ್ಥವಾಗುತ್ತದೆ. 
*****  

ಇಂತಹ ಅತಿ ಕಷ್ಟದ ಸಮಯ ಕೇವಲ ಮೂರ್ನಾಕು ವರುಷಗಳ ಹಿಂದೆ ಮತ್ತೆ ಕದ ತಟ್ಟಿತ್ತು. ಕರೋನ ಮಹಾಮಾರಿಯ ಕಾರಣ ಜನತೆ ಎರಡು ಕಡೆಗಳಲ್ಲಿ ಹಿಂಸೆ ಅನುಭವಿಸಿದರು. ಒಂದೆಡೆ ಜೀವಭಯ. ಏನನ್ನು ನೋಡಿದರೂ, ಏನನ್ನು ಮುಟ್ಟಿದರೂ ದಿಗಿಲು. ಕೈಗಳನ್ನೂ, ಎಲ್ಲ ಪದಾರ್ಥಗಳನ್ನೂ ತೊಳೆದದ್ದೇ ತೊಳೆದದ್ದು. ಇನ್ನೊಂದೆಡೆ ಅನೇಕರಿಗೆ ದೈನಂದಿನ ಜೀವನೋಪಾಯಕ್ಕೆ ದಾರಿಯಿಲ್ಲದೆ ಮನೆಯಲ್ಲಿ ಕುಳಿತುಕೊಳ್ಳಬೇಕಾದ ಸಂದರ್ಭ. ಎಲ್ಲಾ ಚಟುವಟಿಕೆ ನಿಲ್ಲಿಸಿದರೂ ಹೊಟ್ಟೆ ಮಾತ್ರ ಸುಮ್ಮನಿರದಲ್ಲ. ಕೋಟಿ ಕೋಟಿ ಮಂದಿ ಉಪವಾಸ ಬೀಳುವ ಸಂದರ್ಭ ಅದು. 

ಈಗ ಇಡೀ ಪ್ರಪಂಚದ ಜನಸಂಖ್ಯೆ ಸುಮಾರು 800 ಕೋಟಿ. ಭಾರತದಲ್ಲಿ 140 ಕೋಟಿ. ಇದರಲ್ಲಿ 80 ಕೋಟಿ ಜನಕ್ಕೆ ಸರಿಯಾದ ಸಂಪಾದನೆ ಇಲ್ಲದೆ ಅನ್ನದ ಹಾಹಾಕಾರ ಬಡಿಯುವ ಸಂದರ್ಭ. 80 ಕೋಟಿ ಅಂದರೆ ಅದೇನು ಸಾಮಾನ್ಯವಲ್ಲ. ಇಡೀ ಯುರೋಪ್ ಖಂಡದ ಜನಸಂಖ್ಯೆಗಿಂತ ಸ್ವಲ್ಪ ಹೆಚ್ಚು. ಉತ್ತರ ಅಮೇರಿಕ ಮತ್ತು ದಕ್ಷಿಣ ಅಮೆರಿಕಗಳ ಒಟ್ಟು ಜನಸಂಖ್ಯೆಯಷ್ಟು. ಇಷ್ಟು ಮಂದಿ ಉಪವಾಸ ಬೀಳುವುದನ್ನು ಉಚಿತವಾಗಿ ಆಹಾರ ಧಾನ್ಯ ವಿತರಿಸುವುದರ ಮೂಲಕ ಸರ್ಕಾರ ತಪ್ಪಿಸಿತು. ಆಗ ಪ್ರಾರಂಭವಾದ ಈ ಯೋಜನೆ ಇಂದೂ ನಡೆಯುತ್ತಿದೆ. ಒಂದೆಡೆ ಕರೋನಾ ಲಸಿಕೆ ಹಾಕುವ ಭರಾಟೆ. ಮತ್ತೊಂದೆಡೆ ಈ ಆಹಾರ ಧಾನ್ಯ ವಿತರಣೆ ಯೋಜನೆ. ಇವೆರಡು ಎಷ್ಟೋ ಜನರನ್ನು ಆ ಕಂಟಕದಿಂದ ಪಾರುಮಾಡಿತು. 

ಜಿ. ಎಸ. ಟಿ. ತೆರಿಗೆ ಪದ್ದತಿಯನ್ನು ಅನೇಕ ರೀತಿಯಿಂದ ಮೂದಲಿಸುವವರಿದ್ದಾರೆ. ಅದನ್ನು ತೆರುವಾಗ ನಾವೂ ಅನೇಕ ಬಾರಿ ಬೇಸರಿಸುತ್ತೇವೆ. ಆದರೆ ಇದರಿಂದ ಪ್ರತಿ ತಿಂಗಳೂ ಸರಕಾರಕ್ಕೆ ಬರುತ್ತಿರುವ ಆದಾಯ ಇಂತಹ ಕಾರ್ಯಕ್ರಮಗಳ ಭಾರವನ್ನು ಭರಿಸಲು ಸರ್ಕಾರಕ್ಕೆ ಆಸರೆ ಒದಗಿಸಿದೆ. ತೆರಿಗೆ ಕಳ್ಳರಿಂದ ಸೋರುತ್ತಿದ್ದ ಹಣ ಸರ್ಕಾರದ ಖಜಾನೆಗೆ ಸೇರುವುದರಿಂದ ಇದು ಸಾಧ್ಯವಾಯಿತು. ಬೇರೆ ಸಂಪನ್ಮೂಲಗಳೂ ಇವೆ ಎಂದರೂ ಈ ದಾರಿಯ ಆದಾಯ ಬಹಳ ಮುಖ್ಯವಾಆದದ್ದೇ ಆಗಿದೆ. 

*****

ಅನ್ನದ ಹಾಹಾಕಾರ ಮುಗಿಲು ಮುಟ್ಟಿದ್ದ ಹಿಂದಿನ ಶತಮಾನದ ಐವತ್ತು-ಅರವತ್ತರ ದಶಕದಲ್ಲಿ ಸಮಾಜದ ಮೇಲೆ ಸಮತಾವಾದದ ಬಹಳ ಪ್ರಭಾವ ಇತ್ತು. ವರ್ಗ ಸಂಘರ್ಷ ಎಲ್ಲೆಡೆ ವಿಜೃಂಭಿಸುತ್ತಿದ್ದ ಕಾಲವದು. ಕನ್ನಡ ಸಾಹಿತ್ಯದ ಸಂದರ್ಭದಲ್ಲಿ ಅದು "ಕನ್ನಡ ನವೋದಯ" ಕಾಲಘಟ್ಟವನ್ನು ದಾಟಿ "ನವ್ಯ" ಅನ್ನುವ ಘಟ್ಟಕ್ಕೆ ಜಾರುತ್ತಿದ್ದ ಸಮಯ. ನವ್ಯ ಸಾಹಿತ್ಯದ ಹರಿಕಾರರಲ್ಲಿ ಒಬ್ಬರಾದ ಕೀರ್ತಿಶೇಷ ಎಂ. ಗೋಪಾಲಕೃಷ್ಣ ಅಡಿಗರ (1918-1992) ಜನಪ್ರಿಯ ಕವನವೊಂದು ಅದೇ ಸಮಯದಲ್ಲಿ, ಇದೇ ಅನ್ನದ ಹಾಹಾಕಾರ ಕುರಿತು ರಚಿತವಾದದ್ದು. 

ಅಡಿಗರು ಒಮ್ಮೆ (1971) ಬೆಂಗಳೂರು ಲೋಕಸಭೆ ಕ್ಷೇತ್ರದಿಂದ (ಆಗ ಬೆಂಗಳೂರು ದಕ್ಷಿಣ ಕ್ಷೇತ್ರ ಇರಲಿಲ್ಲ) ಮಾಜಿ ಮುಖ್ಯಮಂತ್ರಿಗಳಾಗಿದ್ದ ಕೆಂಗಲ್ ಹನುಮಂತಯ್ಯನವರ ವಿರುದ್ಧ ಸ್ಪರ್ಧಿಸಿದ್ದರು. ಅವರ ಚುನಾವಣಾ ಪ್ರಚಾರ ಸಭೆಗಳ ಪ್ರಾರಂಭದಲ್ಲಿ ಈ ಗೀತೆಯನ್ನು ಖ್ಯಾತ ಗಮಕಿಗಳು ಮತ್ತು ಸುಗಮ ಸಂಗೀತ ಗಾಯಕರಾಗಿದ್ದ ಶ್ರೀ ಚಂದ್ರಶೇಖರ ಕೆದಿಲಾಯ ಅವರು ಹಾಡುತ್ತಿದ್ದರು. ಆ ನಂತರ ಅಡಿಗರು ಚುನಾವಣಾ ಭಾಷಣ ಮಾಡುತ್ತಿದ್ದರು. ಒಂದು ರೀತಿಯಲ್ಲಿ ಅದು ಅವರ ಚುನಾವಣಾ ಪ್ರಣಾಳಿಕೆಯಂತೆ ಇತ್ತು. ಚುನಾವಣೆಯಲ್ಲಿ ಅಡಿಗರು ಸೋತರು. ಆದರೆ ಈ ಕವನ ಬಹಳ ಪ್ರಸಿದ್ಧವಾಯಿತು. ನಂತರ ಅಡಿಗರು "ನ್ಯಾಷನಲ್ ಬುಕ್ ಟ್ರಸ್ಟ್" ಅಧ್ಯಕ್ಷರಾದರು. ಇನ್ನೂ ಅನೇಕ ರೀತಿಯಲ್ಲಿ ಸಾಹಿತ್ಯಕ್ಕೆ ಸೇವೆ ಸಲ್ಲಿಸಿದರು. 

ಅನ್ನದ ಹಾಹಾಕಾರದ ಚರ್ಚೆಯ ಸಮಯದಲ್ಲಿ ಆ ಕವನ ನೆನಪಿಸಿಕೊಳ್ಳುವುದು ಒಳ್ಳೆಯದು. 

*****

ಹೊಸ ನೆತ್ತರುಕ್ಕುಕ್ಕಿ ಆರಿಹೋಗುವ ಮುನ್ನ 
ಹರೆಯದೀ ಮಾಂತ್ರಿಕನ ಮಾಟ  ಮಸಳುವ  ಮುನ್ನ 
ಉತ್ಸಾಹ ಸಾಹಸದ ಉತ್ತುಂಗ ವೀಚಿಗಳ 
ಈ ಕ್ಷುಭ್ದ ಸಾಗರವು ಬತ್ತಿಹೋಗುವ ಮುನ್ನ 
     ಕಟ್ಟುವೆವು ನಾವು ಹೊಸ ನಾಡೊಂದನು 
     ರಸದ ಬೀಡೊಂದನು   

ನಮ್ಮೆದೆಯ ಕನಸುಗಳೆ ಕಾಮಧೇನು 

ಆದಾವು ಕರೆದಾವು ವಾಂಛಿತವನು 

ಕರೆವಕೈಗಳಿಗಿಹುದಿದೋ ಕನಸುಗಳ ಹರಕೆ

ಗುರಿತಪ್ಪದೊಮ್ಮುಖದ ಬಯಕೆ ಬೆಂಬಲಕೆ

ಕಟ್ಟುವೆವು ನಾವು ಹೊಸ ನಾಡೊಂದನು 

ರಸದ ಬೀಡೊಂದನು 

ನಾವು ಹಿಂದೆಗೆವೆವೇ ವೀರ ತರುಣರು ನಾವು 

ಒಂದೆ ನೆಗೆತಕೆ ನೆಗೆವೆವೋ ಕಂದಕವನು 

ಕುಟ್ಟಿ ಪುಡಿ ಮಾಡುವೆವು ಕೋಟೆಗಳನು 

ಎದೆಮೆಟ್ಟಿ ಮುರಿಯುವೆವು ಅಸುರ ರಟ್ಟೆಗಳನು 

        ಕಟ್ಟುವೆವು ನಾವು ಹೊಸ ನಾಡೊಂದನು 

        ರಸದ ಬೀಡೊಂದನು 

                 ......... 

                 ......... 

                 ......... 

ಇಂದು ಬಾಳಿದು ಕೂಳ ಕಾಳಗವು 

ಹೊಟ್ಟೆಯೇ ಕೇಂದ್ರವಾಗಿದೆ ನರನ ಜೀವಿತಕ್ಕೆ 

ಅನ್ನದನ್ಯಾಯ ದಾವಾಗ್ನಿಯಲಿ ದಹಿಸುತಿದೆ 

ನರತೆ ಸಂಸ್ಕೃತಿ ಪ್ರೀತಿ ದಿವದ ಬಯಕೆ 

       ಕಟ್ಟುವೆವು ನಾವು ಹೊಸ ನಾಡೊಂದನು 

       ರಸದ ಬೀಡೊಂದನು  

ಇರುವೆಲ್ಲವನು ಎಲ್ಲ ಜನಕೆ ತೆರವಾಗಿಸುವ 

ಸಮಬಗೆಯ ಸಮಸುಖದ ಸಮದುಃಖದ 

ಸಾಮರಸ್ಯದ ಸಾಮಗಾನ ಲಹರಿಯ ಮೇಲೆ 

ತೇಲಿಬರಲಿದೆ ನೋಡು ನಮ್ಮ ನಾಡು  

        ಕಟ್ಟುವೆವು ನಾವು ಹೊಸ ನಾಡೊಂದನು 

        ರಸದ ಬೀಡೊಂದನು ಸುಖದ ಬೀಡೊಂದನು  

*****

ಈ ಕವಿತೆಗೆ ಈಗ ಸುಮಾರು ಐವತ್ತೈದು ವರುಷ. ಕಳೆದ  ದಶಕಗಳಲ್ಲಿ ಬಹಳ ಬದಲಾವಣೆಗಳಾಗಿವೆ. ಪಡಿತರ ಪದ್ದತಿಯಲ್ಲಿ, ವ್ಯವಸ್ಥೆಯಲ್ಲಿ ಎಷ್ಟೋ ಸುಧಾರಣೆ ಆಗಿದೆ. ಅಂದು ರೇಷನ್ ಅಂಗಡಿ ಎಂದು ತೆಗೆಯುತ್ತದೋ, ಯಾವಾಗ ಏನು ಕೊಡುತ್ತಾರೋ ಗೊತ್ತಿರಲಿಲ್ಲ. ಇಂದು 80 ಕೋತಟಿ  ಜನ ಪಡಿತರ ಪ್ರತಿ ತಿಂಗಳೂ ಪಡೆಯುತ್ತಿದ್ದಾರೆ. ತಿಂಗಳು ತಿಂಗಳೂ ಏನು ಪದಾರ್ಥ ಕೊಡುತ್ತಾರೆ ಅನ್ನುವುದು ಎಲ್ಲರಿಗೂ ಗೊತ್ತು. ನಮಗೆ ಪಡಿತರ ಸಿಕ್ಕಿಲ್ಲ ಎನ್ನುವ ದೂರುಗಳು ಅಷ್ಟಾಗಿ ಕೇಳಿಬರುತ್ತಿಲ್ಲ. ಇದರ ಜೊತೆಗೆ ಸರ್ಕಾರಗಳು DBT ಮೂಲಕ ಅನೇಕ ಯೋಜನೆಗಳಿಂದ ಅನೇಕರ ಖಾತೆಗಳಿಗೆ ಹಣವನ್ನೂ ಹಾಕುತ್ತಿದ್ದಾರೆ. ಇಂತಹ ಯೋಜನೆಗಳಿಂದ ಜನ ಸೋಮಾರಿಗಳಾಗುತ್ತಿದ್ದರೆ ಎನ್ನುವ ಚರ್ಚೆಯೂ ಬಲವಾಗಿ ನಡೆದಿದೆ. 

"ಸಾಮರಸ್ಯದ ಸಾಮಗಾನ ಲಹರಿಯ ಮೇಲೆ ಕನಸಿನ ನಾಡು" ಪೂರ್ಣವಾಗಿ ತೇಲಿ ಬಂದಿಲ್ಲ. ಅನೇಕ ಪದರಗಳಲ್ಲಿ ಸಾಮರಸ್ಯ ಇನ್ನೂ ಹದಗೆಡುವ ಲಕ್ಷಣಗಳು ನಿಚ್ಚಳವಾಗಿ ಕಂಡುಬರುತ್ತಿವೆ. ಸಮಾಜವಾದ ಮತ್ತು ಸಮತಾವಾದ ಪ್ರತಿಧ್ವನಿಸಿದ ಈ ಕವನ ಇಂದು ಅಷ್ಟಾಗಿ ಕೇಳಿಬರುತ್ತಿಲ್ಲ. ಸಮತಾವಾದದ ಬಿರುಸು ಬಹಳ ಕಡಿಮೆಯಾಗಿದೆ. ಸಮತಾವಾದದ ಹೆಸರಿನಲ್ಲಿ ಮುಂದೆ ಬಂಡ ನಾಯಕರುಗಳು ತಮ್ಮ ಹಿಂದಿದ್ದ ಜನತೆಯನ್ನು ಹಿಂದೆ ಬಿಟ್ಟು ಎಷ್ಟೋ ಮುಂದೆಬಂದಿದ್ದಾರೆ!

ಅನ್ನದ ಹಾಹಾಕಾರ ಎಷ್ಟೋ ಕಡಿಮೆಯಾಗಿದೆ. ಆದರೂ ಪೂರ್ಣವಾಗಿ ಹೋಗಿದೆ ಎನ್ನುವಂತಿಲ್ಲ.  ಮನಸ್ಸಿದ್ದವರಿಗೆ  ದುಡಿಯುವ ದಾರಿ ಮೊದಲಿಗಿಂತ ಎಷ್ಟೋ ಉತ್ತಮವಾಗಿದೆ. ಆದರೂ ನಿರುದ್ಯೋಗ ಪೂರ್ಣವಾಗಿ ನೀಗಿಲ್ಲ. ಪರಿಸ್ಥಿತಿ ಇನ್ನೂ ಉತ್ತಮವಾಗುವುದೆಂದು ಆಶಿಸೋಣ. 


*****
ಚಂದ್ರಶೇಖರ ಕೆದಿಲಾಯರು ಹಾಡಿರುವ ಈ ಕವನ ಯೂಟ್ಯೂಬಿನಲ್ಲಿ ಲಭ್ಯವಿದೆ. ಈ ಕೆಳಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ ಕೇಳಬಹುದು:  


Sunday, April 20, 2025

ಹಾಲು ಕರುವಿನ ಎಂಜಲಲ್ಲವೇ?


ಹಿಂದಿನ "ಎಂಜಲು ಮತ್ತು ಪ್ರಸಾದ" ಎಂಬ ಶೀರ್ಷಿಕೆಯ ಸಂಚಿಕೆಯಲ್ಲಿ ಎಂಜಲು, ಶೇಷಾನ್ನ, ಪಿತೃಶೇಷ, ಮಾತೃ ಭೋಜನ ಮತ್ತು ಪ್ರಸಾದ ಇವುಗಳ ಬಗ್ಗೆ ಸ್ವಲ್ಪಮಟ್ಟಿಗೆ ಚರ್ಚೆ ಮಾಡಿದೆವು. ಈ ಸಂಚಿಕೆ ಬಗ್ಗೆ ಅನೇಕ ಪ್ರತಿಕ್ರಿಯೆಗಳು ಬಂದಿವೆ. ಕೆಲವರು ಹೆಚ್ಚಿನ ವಿವರಣೆಗಾಗಿ ಪ್ರಶ್ನೆಗಳನ್ನೂ ಕೇಳಿದ್ದಾರೆ. (ಈ ಸಂಚಿಕೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ). 

ಕನ್ನಡದ ಕವಿವರೇಣ್ಯರೂ, ನಮ್ಮ ನಾಡು ಕಂಡ ಹಿರಿಯ ಸಂತರೂ, ಸಮಾಜ ಸುಧಾರಕರೂ ಆದ ಶ್ರೀ ಕನಕದಾಸರು "ಭಕ್ತ ಕನಕದಾಸ" ಎಂದೇ ಹೆಸರಾದವರು. ತಮ್ಮ ಜೀವಮಾನವಿಡೀ ಮಡಿವಂತರ ತಾತ್ಸಾರಕ್ಕೆ ಗುರಿಯಾಗಿ ಅನೇಕ ಕಷ್ಟಗಳನ್ನು ಅನುಭವಿಸಿದರೂ, ಜೀವನದಲ್ಲಿ ಕಹಿಯನ್ನು ಆರೋಪಿಸಿಕೊಳ್ಳದೇ ಸಮಭಾವದಿಂದ ಸಮಾಜ ಸುಧಾರಣೆ ಮಾಡಿದ ಮಹಾನುಭಾವರವರು. ಈ "ಎಂಜಲು" ಎನ್ನುವುದರ ಬಗ್ಗೆ ಅವರು ಕೆಲವು ಮುತ್ತಿನಂತಹ ಮಾತುಗಳನ್ನು ತಮ್ಮ ಕೃತಿಗಳಲ್ಲಿ ಅಲ್ಲಲ್ಲಿ ಪೋಣಿಸಿದ್ದಾರೆ. ಅವರ ಒಂದು ಹಿರಿಮೆಯ ಕೃತಿಯಾದ "ಹರಿಹಾಕ್ತಿಸಾರ" ಈ ವಿಷಯದ ಬಗ್ಗೆ ಅವರ ಆಲೋಚನೆಯ ತಿರುಳನ್ನು ನಮಗೆ ನೀಡುತ್ತದೆ. ಅದನ್ನೂ ಮತ್ತು ಇದೇ ವಿಷಯಕ್ಕೆ ಸಂಬಂಧಿಸಿದ ಕೆಲವು ಇತರ ವಿವರಗಳನ್ನೂ ಈ ಸಂಚಿಕೆಯಲ್ಲಿ ನೋಡೋಣ. 

*****

ನಮ್ಮ ಕುಟುಂಬದ ಹಿತೈಷಿಗಳೂ, ಸಮಾಜದ ಹಿರಿಯರೂ ಮತ್ತು ಕುಟುಂಬದ ಸದಸ್ಯರೆಲ್ಲರ ಮನ್ನಣೆಗೆ ಪಾತ್ರರಾದವರೊಬ್ಬರು ಈ ದಿನ ನಮ್ಮ ಮನೆಗೆ ಬರುವವರಿದ್ದಾರೆ ಎನ್ನೋಣ. ಮಧ್ಯಾನ್ಹದ ಹೊತ್ತಿಗೆ ಬರುವವರಾದ್ದರಿಂದ ಈ ದಿನ ಅವರ ಭೋಜನ ನಮ್ಮಲ್ಲೇ ಆಗಬೇಕೆಂದು ಕೇಳಿದ್ದೇವೆ. ಅವರೂ ಒಪ್ಪಿದ್ದಾರೆ. ಅವರಿಗೆ ಬೇಕೋ ಬೇಡವೋ ಅದು ಮುಖ್ಯವಲ್ಲ. ನಮ್ಮ ಮನಸ್ಸು ಕೇಳುವಂತೆ ಅವರಿಗೆ ಒಳ್ಳೆಯ ಅಡಿಗೆ ಮಾಡಿ ಬಡಿಸಬೇಕೆಂದು ನಮ್ಮ ಅಪೇಕ್ಷೆ. ಊಟ ಷಡ್ರಸೋಪೇತವಾಗಿ ಇರಬೇಕೆಂದು ನಮ್ಮ ಇಚ್ಛೆ. ಕಟು, ಆಮ್ಲ, ಲವಣ, ತಿಕ್ತ, ಮಧುರ ಮತ್ತು ಕಷಾಯ ಎನ್ನುವ ಈ ಆರು ರಸಗಳಲ್ಲಿ ಕಹಿಯೂ ಸೇರಿದೆ. ಆದರೆ ಆ ಕಹಿ ನಾವು ಬೇಕೆಂದು ಹಾಕಿದ ಪದಾರ್ಥದಲ್ಲಿ ಇರಬೇಕು. ಹಾಗಲಕಾಯಿ ಕಹಿ ಆಗಬಹುದು. ಆದರೆ ನಮಗೆ ಬೇಡದಂತೆ ಎಲ್ಲಿಂದಲೋ ಬಂದು ಸೇರುವುದಲ್ಲ. 

ಹೆಸರುಬೇಳೆ ಕೋಸಂಬರಿಗೆ ಸೌತೆಕಾಯಿ ಹಾಕಿದರೆ ಚೆನ್ನಾಗಿರುತ್ತದೆ ಎಂದು ಅವರು ಯಾವುದೋ ಸಂದರ್ಭದಲ್ಲಿ ವಿನೋದಕ್ಕೆ ಹೇಳಿದ್ದು ನೆನಪು ಬಂತು. ಸೌತೆಕಾಯಿ ತಂದಾಗಿದೆ. ಆದರೆ ನೂರು ಸೌತೆಕಾಯಿಯಲ್ಲಿ ಯಾವುದೊ ಒಂದು ಕಹಿ ಇರುತ್ತದೆ. "ಕಹಿ ಸೌತೆ (ಸೋರೆ) ಕುಡಿಯಾದರೇನು? ಮಿಡಿಯಾದರೇನು?" ಎಂದು ಕವಿವಾಣಿಯೇ ಇದೆಯಲ್ಲ. ಎಲ್ಲ ಪದಾರ್ಥ ಚೆನ್ನಾಗಿ ಮಾಡಿ ಈ ಸೌತೆಕಾಯಿ ಕಹಿ ಆದರೆ ಏನು ಮಾಡುವುದು? ಊಟಕ್ಕೆ ಕುಳಿತಾಗ ಎಡವಟ್ಟಾಗುವುದಲ್ಲ! ಸೌತೆಕಾಯಿ ಹೆಚ್ಚುವಾಗ ಮೊದಲು ಒಂದು ಸಣ್ಣ ಚೂರು ತಿಂದು ಪರೀಕ್ಷೆ ಮಾಡುವುದು. ನಂತರ ಕೋಸಂಬರಿಗೆ ಹಾಕುವುದು. ಅಷ್ಟೇ. ಇದರಿಂದ ಏನೂ ತೊಂದರೆಯಿಲ್ಲ. 

ಹೀಗೆ ಮಾಡಿದರೆ, ಒಂದು ಸಣ್ಣ ತುಂಡು ಸೌತೆಕಾಯಿ ತಿಂದು ಪರೀಕ್ಷಿಸಿದರೆ, ಮಿಕ್ಕ ಸೌತೆಕಾಯಿ ಮತ್ತು ಆಮೇಲೆ ಅದನ್ನು ಹಾಕಿ ಮಾಡಿದ ಕೋಸಂಬರಿ ಎಂಜಲಾಯಿತೇ? ಅಂತಹ ಹಿರಿಯರಿಗೆ ಅದನ್ನು ಬಡಿಸಬಹುದೇ?
*****

ಊಟವಾದ ಮೇಲೆ ಹಣ್ಣು ತಿನ್ನುವುದು ಒಳ್ಳೆಯ ಅಭ್ಯಾಸ. ಹೊಟ್ಟೆಯಲ್ಲಿ ಜಾಗ ಇರುತ್ತದೆಯೋ ಇಲ್ಲವೋ, ಅವರು ತಿನ್ನುತ್ತಾರೋ ಇಲ್ಲವೋ, ಅದು ಆಮೇಲಿನ ವಿಷಯ. ಕೊಡುವುದು ನಮ್ಮ ರೀತಿ. ತೆಗೆದುಕೊಳ್ಳುವುದು ಅಥವಾ ಬಿಡುವುದು ಅವರಿಗೆ ಸೇರಿದ್ದು. ಒಂದು ಸಣ್ಣ ತುಂಡು ಅವರು ತೆಗೆದುಕೊಂಡರೂ ನಮಗೆ ಸಂತೋಷವೇ. ಅವರು ಬೇಡವೆಂದರೆ ಬಿಡೋಣ. ಅಷ್ಟು ಜನ ಸೇರಿರುವಾಗ ಯಾರಾದರೂ ತೆಗೆದುಕೊಂಡಾರು. ಅದೂ ಒಳ್ಳೆಯದೇ. 

ಅಂಗಡಿಯಲ್ಲಿ ಹೊಸ ದ್ರಾಕ್ಷಿ ರಾಶಿಯೇ ಇತ್ತು. ತಂದಿದ್ದಾಗಿದೆ. ಆದರೆ ಕೆಲವೊಮ್ಮೆ ನೋಡಲು ಚೆನ್ನ್ನಾಗಿರುವ ದ್ರಾಕ್ಷಿ ಹುಳಿ ಇರುವುದೂ ಉಂಟು. ಸೊಗಸಾದ ಊಟ ಮಾಡಿ ದ್ರಾಕ್ಷಿಗೆ ಕೈ ಹಾಕಿದರೆ, ಅದು ಹುಳಿ ಇದ್ದರೆ  ಏನು ಚೆನ್ನ? ಒಂದು ಕೆಲಸ ಮಾಡೋಣ. ಒಂದೊಂದು ಗೊಂಚಲಿನಿಂದ ಒಂದು ದ್ರಾಕ್ಷಿ ತೆಗೆದು ತಿಂದು ನೋಡುವುದು. ಸಿಹಿ ಇರುವ ಗೊಂಚಲಿನ ಹಣ್ಣುಗಳನ್ನು ಗುರುತಿಸಿ ತೆಗೆದಿಡುವುದು. ಹೇಗಿದೆ ಈ ಉಪಾಯ? 

ಒಂದು ಗೊಂಚಲಿನಲ್ಲಿ ಒಂದು ಹಣ್ಣು ತಿಂದು ಅತಿಥಿ-ಅಭ್ಯಾಗತರಿಗೆ ಒಳ್ಳೆಯದನ್ನು ಕೊಡುವುದು ಎಂಜಲು ಕೊಟ್ಟಂತೆಯೇ?  
*****

ಮತಂಗ ಋಷಿಗಳು ಮಹಾ ತಪಸ್ವಿಗಳು. ಶಬರಿ ಅವರ ಅನುಯಾಯಿ. ಆಶ್ರಮದ ಕೆಲಸ ಮತ್ತು ಅವರ ಸೇವೆಯಲ್ಲಿಯೇ ಜೀವನ ಸವೆಸಿದವಳು. ಕಾಲಚಕ್ರದಲ್ಲಿ ಇಬ್ಬರಿಗೂ ಮುಪ್ಪು ಬಂತು. ಮತಂಗರಿಗೆ ತಮ್ಮ ಜೀವಿತ ಕಾಲ ಮುಗಿಯುತ್ತಿರುವುದು ಗೊತ್ತಾಯಿತು. (ವೃದ್ಧಾಪ್ಯ ಬಂದಾಗ ನಮಗೂ ಗೊತ್ತಾಗುತ್ತದೆ. ಆದರೆ ನಾವು ಅದನ್ನು ಒಪ್ಪಿಕೊಳ್ಳಲು ಸಿದ್ಧವಿರುವುದಿಲ್ಲ!) ಶ್ರೀರಾಮಚಂದ್ರನು ಈ ದಾರಿಯಲ್ಲಿ ಬರುವುದು ಖಚಿತವಾದರೂ ಇನ್ನೂ ಸ್ವಲ್ಪ ಕಾಲ ಕಾಯಬೇಕು. "ಶ್ರೀರಾಮನು ಬಂದೇ ಬರುತ್ತಾನೆ. ಅವನನ್ನು ನೋಡುವ ಭಾಗ್ಯ ನಿನಗಿದೆ. ನೀನು ಆ ದಿನಕ್ಕಾಗಿ ಕಾಯುತ್ತಿರು" ಎಂದು ಅವಳಿಗೆ ಹೇಳಿ ದೇಹ ತ್ಯಾಗ ಮಾಡಿದರು. 

ಶಬರಿಯು ಪ್ರತಿದಿನ ಕಾಡಿನಲ್ಲಿ ಹುಡುಕಿ ಹುಡುಕಿ ಚೆನ್ನಾದ ಹಣ್ಣು ತಂದಿಡುವಳು. ಸಂಜೆಯಾದರೂ ರಾಮನು ಬರಲಿಲ್ಲ. ಹಣ್ಣುಗಳನ್ನು ಬಿಸಾಡುವಳು. ಮತ್ತೆ ಮಾರನೆಯ ದಿನ ಹೊಸ ಹಣ್ಣು, ಕಡೆಗೆ ಒಂದು ದಿನ ಅವನು ಬಂದೇ ಬಂದ. ಲಕ್ಷ್ಮಣನ ಜೊತೆ. ಅವನನ್ನು ನೋಡಿ, ಹಣ್ಣು ಕೊಟ್ಟು ಧನ್ಯಳಾದಳು. ಅನೇಕ ವರುಷ ಕಾದಿದ್ದು ಸಾರ್ಥಕವಾಯಿತು. 

ನಮ್ಮಲ್ಲಿಗೆ ಬಂದವರಿಗೆ ಮೊದಲು ನೀರು ಕೊಡುವುದು ವಾಡಿಕೆ. ಅದು ಸೌಜನ್ಯವೂ ಹೌದು; ಸತ್ಕಾರವೂ ಹೌದು. ಅಂತೆಯೇ ದೇವರಿಗೆ ನೈವೇದ್ಯಕ್ಕೆ ಎಷ್ಟೆಲ್ಲಾ ಪದಾರ್ಥಗಳನ್ನು ಮಾಡಿಟ್ಟರೂ ಒಂದು ಸ್ವಲ್ಪ ನೀರು ಇಡಲೇಬೇಕು. ಇಲ್ಲದಿದ್ದರೆ ನೈವೇದ್ಯ ಅಪೂರ್ಣವೇ. 

ಅವಳು "ಯ೦ಜಲ ಫಲ" ಕೊಟ್ಟಳು ಎಂದರು ಕೆಲವರು. ಅವಳು "ಎಂಜಲ ಹಣ್ಣು" ಕೊಟ್ಟಳು ಎಂದರು ಮತ್ತೆ ಕೆಲವರು. ಸಂಸ್ಕೃತದಲ್ಲಿ ಯಂ ಎಂದರೆ ಒಳ್ಳೆಯ ಅಥವಾ ಶ್ರೇಷ್ಠವಾದದ್ದು ಎಂದು ಅರ್ಥ. ಜಲ ಎಂದರೆ ನೀರು ಎಂದು ಗೊತ್ತೇ ಇದೆ. ಭಕ್ತಿಯಿಂದ ತುಂಬಿದ ಒಳ್ಳೆಯ ನೀರು ಮತ್ತು ಹಣ್ಣು ಕೊಟ್ಟಳು ಎಂದರು ಕೆಲವರು. ಮಾತಂಗ ಋಷಿಗಳ ಶಿಷ್ಯೆಯಾಗಿ ಅದು ಸರಿ ಅಂದರು ಅವರು. ಇಲ್ಲ, ಹಣ್ಣುಗಳನ್ನು ರುಚಿ ನೋಡಿ ಎಂಜಲ ಹಣ್ಣು ಕೊಟ್ಟಳು ಎಂದರು ಇನ್ನು ಕೆಲವರು. ಶ್ರೀರಾಮನು ಅವಳ ಭಕ್ತಿ ನೋಡಿ ಎಂಜಲ ಹಣ್ಣು ಎಂದು ಲೆಕ್ಕಿಸದೆ ಸ್ವೀಕರಿಸಿದ ಎಂದು ಅರ್ಥೈಸಿದರು ಆವರು. ವರ್ಗ ಸಂಘರ್ಷದ ಹಿನ್ನೆಲೆಯಲ್ಲಿ ಇದೇ ಚೆನ್ನ. ಸಿನಿಮಾದಲ್ಲಿ ತೋರಿಸುವುದಕ್ಕಂತೂ ಇನ್ನೂ ಚೆನ್ನ. 

ಎರಡರಲ್ಲಿ ಯಾವುದು ಸರಿ? ಹಣ್ಣು ಕೊಟ್ಟ ಶಬರಿಗೆ ಗೊತ್ತು. ಆ ಹಣ್ಣು ತಿಂದ ಶ್ರೀರಾಮನಿಗೆ ಗೊತ್ತು. ಇದನ್ನು ನೋಡಿದ ಲಕ್ಷ್ಮಣನಿಗೆ ಗೊತ್ತು.  ನಾಲ್ಕನೆಯವರಿಗೇನು ಗೊತ್ತು? 

*****

"ಅದು ಎಂಜಲು" ಎಂದು ಒಬ್ಬರು ಹೇಳುತ್ತಾರೆ. ಈ ಹೇಳುವ "ಎಂಜಲು' ಎನ್ನುವ ಪದ ಬಾಯಿಯಲ್ಲಿರುವ ನಾಲಿಗೆಯಿಂದಲೇ ಬರಬೇಕು. ನಾಲಿಗೆ ತಾಕಿದರೆ, ಬಾಯಲ್ಲಿ ಬಿದ್ದರೆ ಎಂಜಲು. ಆದ್ದರಿಂದ ಈ 'ಎಂಜಲು" ಎನ್ನುವ ಪದವೇ ಎಂಜಲಲ್ಲವೇ?

ನೀರಿಲ್ಲದೆ ಅಡಿಗೆ ಪದಾರ್ಥಗಳಿಲ್ಲ. ಉಪಯೋಗಿಸಿದ ಪದಾರ್ಥಗಳನ್ನು ತೊಳೆಯಲಾದರೂ ನೀರು ಬೇಕು. ಹಣ್ಣು-ಹಂಪಲಾದರೂ ತೊಳೆಯಲಿಕ್ಕೆ ನೀರು ಬೇಕೇ ಬೇಕು. ಯಾವುದೋ ಮಹಾನದಿಯ ಅಥವಾ ಜಲಾಶಯದ ನೀರು. ಅಥವಾ ಬಾವಿಯಿಂದ ಸೇದಿದ ನೀರು. ಈಗಿನ ಕಾಲದ ಮನೆಯ ನಲ್ಲಿಯ ನೀರಾದರೂ ಅಂತಹ ಕಡೆಯಿಂದಲೇ ಬರಬೇಕು. ನದಿಯಲ್ಲಿ, ಜಲಾಶಯದಲ್ಲಿ, ಬಾವಿಯಲ್ಲಿ ಅಸಂಖ್ಯ ಜಲಚರಗಳಿವೆ. ಮೀನುಂಟು. ಕಪ್ಪೆಯುಂಟು. ಆಮೆಗಳಿವೆ. ಮೊಸಳೆಗಳು ಉಂಟು. ಮತ್ತನೇಕ ನೀರಿನಲ್ಲಿ ಬದುಕುವ ಪ್ರಾಣಿಗಳು ಇವೆ. (ರನ್ನನ ಕೃತಿ ಆಧರಿಸಿದ ಬಿ. ಎಂ. ಶ್ರೀ. ಅವರ  ಗದಾಯುದ್ಧ೦ ನಾಟಕದಲ್ಲಿ, ವೈಶಂಪಾಯನ ಸರೋವರದಲ್ಲಿ ಜಲಸ್ತ೦ಭನ ಮಾಡಿ ವಿಶ್ರಾಂತಿ ತೆಗೆದುಕೊಳ್ಳುತ್ತಿರುವ ದುರ್ಯೋಧನನಿಗೆ ಭೀಮ ಹೇಳುವ ಮಾತಿದು - "ಮತ್ತೀನೀರೊಳಗೆ ಮೀನಿರ್ಕು೦, ಎಸಡಿರ್ಕು೦, ಕಪ್ಪೆಯಿರ್ಕು೦; ಇರ್ಪರೇ ಗಂಡರ್?"). ನೆಲದ ಮೇಲಿನ ಅನೇಕ ಪ್ರಾಣಿಗಳೂ ಮನುಷ್ಯರೂ ಅದರಲ್ಲಿ ನೀರು ಕುಡಿಯುತ್ತಾರೆ. ಎಲ್ಲ ನೀರೂ ಇದರಿಂದ ಎಂಜಲೇ ಅಲ್ಲವೇ?

ಎಲ್ಲ ಪೂಜಾದಿಗಳಿಗೆ ಹಾಲು ಬೇಕು. ಹಾಲಿಲ್ಲದೆ ಮೊಸರಿಲ್ಲ. ಮೊಸರಿಲ್ಲದೆ ಬೆಣ್ಣೆ ಇಲ್ಲ. ಬೆಣ್ಣೆ ಇಲ್ಲದೆ ತುಪ್ಪವಿಲ್ಲ. ಹಾಲು, ಮೊಸರು, ತುಪ್ಪವಿಲ್ಲದೆ ಪಂಚಾಮೃತವಿಲ್ಲ. ಶಿಶುಗಳಿಗೆ ಹಸುವಿನ ಹಾಲು ಬೇಕು. ದೊಡ್ಡವರಿಗೂ ಬೇಕು. ರುಚಿ-ರುಚಿಯಾದ ಅಡಿಗೆ ಮಾಡಲು, ಅನೇಕ ಸಿಹಿ ತಿಂಡಿ ಮಾಡಲು, ಮತ್ತನೇಕ ಸಿಹಿ ತಿಂಡಿ ಜೊತೆಯಾಗಿ ಹಾಲು ಬೇಕೇ ಬೇಕು. 

ದೇವತೆಗಳು ಅಮೃತ ಕುಡಿಯುತ್ತಾರಂತೆ. ಹೀಗೆ ಕೇಳಿ ಗೊತ್ತು. ನಾವು ನೋಡಿಲ್ಲ. ನಾವು ನೋಡಿರುವ, ಸೇವಿಸಿರುವ, ಜೀವನಾಧಾರವಾಗಿ ನಂಬಿರುವ ಅಮೃತವೆಂದರೆ ಹಾಲು. ಶುದ್ಧತೆಗೆ ಇನ್ನೊಂದು ಹೆಸರು ಹಾಲು. "ಅವನದು ಹಾಲಿನಂತಹ ಮನಸ್ಸು" ಎನ್ನುತ್ತೇವೆ. ಸುಖ ಸಂಸಾರ ಕೆಡಿಸುವವರನ್ನು "ಹಾಲಿಗೆ ಹುಳಿ ಹಿಂಡಿದರು" ಅನ್ನುತ್ತೇವೆ. ಇಂತಹ ಹಾಲು ಆ ಹಸುವಿನ ಕರು ಕುಡಿದ ಮೇಲೆ ತಾನೇ ಕರೆದರೆ ಚೆನ್ನಾಗಿ ಬರುವುದು. ಹಾಲುಕರೆಯುವ ಹಸುವಿನ ಕರು ಇಲ್ಲದಿದ್ದರೆ ಮತ್ಯಾವುದೋ ಕರುವನ್ನಾದರೂ ಕೆಚ್ಚಲಿನ ಬಳಿ ಸ್ವಲ್ಪ ಕುಡಿಯಲು ಬಿಟ್ಟು ನಂತರ ಹಾಲು ಕರೆದುಕೊಳ್ಳುತ್ತಾರೆ. ಆದ್ದರಿಂದ ಹಾಲೂ ಕರುವಿನ ಎಂಜಲು ತಾನೇ? 

ಶ್ರೀ ಕನಕದಾಸರು ತಮ್ಮ "ಹರಿಭಕ್ತಿಸಾರ" 101ನೆಯ ಪದ್ಯದಲ್ಲಿ ಹೀಗೆ ಹೇಳುತ್ತಾರೆ:

ಎಂಜಲೆಂಜಲು ಎಂಬರಾನುಡಿ 
ಎಂಜಲಿಲ್ಲವೆ ವಾರಿ ಜಲಚರ
ದೆಂಜಲಲ್ಲವೆ ಹಾಲು ಕರುವಿನ ಎಂಜಲೆನಿಸಿರದೆ 
ಎಂಜಲೆಲ್ಲಿಯದೆಲ್ಲಿಯು೦ ಪರ 
ರೆಂಜಲಲ್ಲದೆ ಬೇರೆ ಭಾವಿಸ  
ಲೆಂಜಲುಂಟೇ ದೇವ ರಕ್ಷಿಸು ನಮ್ಮನನವರತ 

ಇದನ್ನು ಅತಿರೇಕಕ್ಕೆ ತೆಗೆದುಕೊಂಡು ಹೋಗಬಾರದು ಎನ್ನುವುದು ಇದರ ಭಾವಾರ್ಥ. 

*****

ನೈವೇದ್ಯಾದಿಗಳಿಗೆ, ಹವನ-ಹೋಮಾದಿಗಳಿಗೆ, ಶ್ರಾದ್ಧಾದಿಗಳಿಗೆ, ಇಂತಹ ಸಂಬಂಧಿತ ಕಾರ್ಯಗಳಿಗೆ ಪದಾರ್ಥ ತಯಾರಿಸುವಾಗ ಯಾವುದೇ ಪದಾರ್ಥದ, ಅವಕ್ಕೆ ಉಪಯೋಗಿಸಿದ ಪರಿಕರಗಳ ರುಚಿ ನೋಡುವ ಪರಿಪಾಠವಿಲ್ಲ. ಬೇರೆ ಸಂದರ್ಭದಲ್ಲಿ ಉದ್ದೇಶಪೂರ್ವಕ ಎಂಜಲು ಮಾಡಬಾರದು ಮತ್ತು ಕೊಡಬಾರದು. ಅದು ಆರೋಗ್ಯ ಮತ್ತು ಶುಚಿತ್ವದ ಸೂಚಕವೂ ಅಲ್ಲ. ಆದರೆ ಎಂಜಲಿನ ಹೆಸರಿನಲ್ಲಿ ಜೀವನವನ್ನೇ ದುರ್ಭರ ಮಾಡಿಕೊಳ್ಳಬಾರದು ಅನ್ನುವುದು ಇಷ್ಟೆಲ್ಲಾ ಚರ್ಚೆಗಳ ತಾತ್ಪರ್ಯ. 

Friday, April 18, 2025

ಎಂಜಲು ಮತ್ತು ಪ್ರಸಾದ


ಹಿಂದಿನ ಸಂಚಿಕೆಯಲ್ಲಿ "ಚರ್ವಿತ ಚರ್ವಣ" ಅನ್ನುವ ಶೀರ್ಷಿಕೆಯಡಿ "ಈ ಪ್ರಪಂಚದಲ್ಲಿರುವ ಸಾಹಿತ್ಯವೆಲ್ಲ  ವ್ಯಾಸರು ಹೇಳಿ ಬಿಟ್ಟದ್ದು" ಎನ್ನುವ ನಾಣ್ಣುಡಿ ನೆನಪಿಸಿಕೊಂಡೆವು. "ವ್ಯಾಸೋಚ್ಛಿಷ್ಟಮ್ ಜಗತ್ ಸರ್ವಂ" ಎನ್ನುವ ಈ ಹೇಳಿಕೆಯ ಹಿನ್ನೆಲೆಯಲ್ಲಿ, ಉಚ್ಚಿಷ್ಟ ಪದಕ್ಕೆ ಸಾಮಾನ್ಯವಾಗಿ "ತಿಂದು ಬಿಟ್ಟದ್ದು" ಅಥವಾ "ಎಂಜಲು" ಎಂದು ಅರ್ಥವಿದ್ದರೂ ಅದರಲ್ಲಿ ಏನಾದರೂ ವಿಶೇಷ ಅರ್ಥ ಇದೆಯೇ ಎಂಬ ಬಗ್ಗೆ ಪ್ರಶ್ನೆ ಹಾಕಿಕೊಂಡಿದ್ದೆವು. ಅದರ ಬಗ್ಗೆ ಈಗ ಸ್ವಲ್ಪ ಯೋಚಿಸೋಣ. ಇದರ ಹಿನ್ನೆಲೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ. 

ಪರಮಾತ್ಮನ ಸೃಷ್ಟಿ ಕಾರ್ಯದಲ್ಲಿ, ಮೊದಲು ಅನ್ನವನ್ನು ಸೃಷ್ಟಿ ಮಾಡಿ ನಂತರ ಜೀವಿಗಳನ್ನು ಸೃಷ್ಟಿ ಮಾಡಲಾಯಿತು ಎನ್ನುವುದನ್ನು "ಬೃಹದಾರಣ್ಯಕೋಪನಿಷತ್" ಕೃತಿಯ "ಸಪ್ತಾನ್ನ ಪ್ರಕರಣ" ವಿಭಾಗದಲ್ಲಿ ಅತ್ಯಂತ ವಿವರವಾಗಿ ಚರ್ಚಿಸಲಾಗಿದೆ. ಸಾವಿರಾರು ವರುಷಗಳ ಹಿಂದೆ ಇಂಥದೊಂದು ವಿಸ್ತಾರವಾದ ಚರ್ಚೆ ನಮ್ಮಲ್ಲಿ ನಡೆದಿದೆ ಎನ್ನುವುದೇ ಒಂದು ವಿಸ್ಮಯದ ವಿಷಯ. ಇಲ್ಲಿ ಅನ್ನ ಅಂದರೆ ಭತ್ತದಿಂದ ತೆಗೆದ ಅಕ್ಕಿಯನ್ನು ಬೇಯಿಸಿ ಮಾಡಿದ ಪದಾರ್ಥ ಮಾತ್ರವಲ್ಲ. ಆಹಾರ ರೂಪದಲ್ಲಿ ಸಮಸ್ತ ಪ್ರಾಣಿಗಳೂ ಸೇವಿಸುವ ಪದಾರ್ಥಗಳನ್ನು ಒಟ್ಟಾಗಿ "ಅನ್ನ" ಎಂದು ಹೇಳಲಾಗಿದೆ. ಏಳು ರೀತಿಯ ಅನ್ನಗಳು, ಅವನ್ನು ಸೇವಿಸುವ ಗುಂಪುಗಳು ಮತ್ತು ಅವನ್ನು ನೀಡುವ ಪಾಲಕ (ಕಸ್ಟೋಡಿಯನ್) ಇವುಗಳನ್ನು ಒಂದು ಕೋಷ್ಠಕದ ರೀತಿ ವಿವರಿಸಲಾಗಿದೆ. ಇದರ ವಿವರ ನೋಡಲು ಇಲ್ಲಿ ಕ್ಲಿಕ್ ಮಾಡಿ. 

ಈ ಚರ್ಚೆಯ ಸಂದರ್ಭದಲ್ಲಿ ಎಂಜಲು, ಶೇಷಾನ್ನ, ಪಿತೃಶೇಷ, ಮಾತೃ ಭೋಜನ ಮತ್ತು ಪ್ರಸಾದ ಎನ್ನುವ ಬೇರೆ ಬೇರೆ ರೀತಿಯ ವರ್ಗೀಕರಣ ಮತ್ತು ಸಮಾಜದಲ್ಲಿ ನಡೆಯುವ ಪದ್ದತಿ ಹಾಗೂ ಸಂಪ್ರದಾಯಗಳನ್ನು ಕೂಡ ನೋಡಬಹುದು. 

*****

ಕೆಲವು ಪದಾರ್ಥಗಳನ್ನು ಒಬ್ಬ ವ್ಯಕ್ತಿಯೇ ತಿಂದು ಮುಗಿಸಬಹುದು. ಕೆಲವು ಪದಾರ್ಥಗಳು ಒಬ್ಬನೇ ವ್ಯಕ್ತಿಗೆ ಅನೇಕ ಸಂಖ್ಯೆಯಲ್ಲಿ ಬೇಕಾಗಬಹುದು. ಮತ್ತೆ ಕೆಲವು ಪದಾರ್ಥಗಳು ಒಬ್ಬರು ತಿಂದು ಮುಗಿಸುವುದಕ್ಕೆ ಅಸಾಧ್ಯವೇ. ಒಂದು ಬಾಳೆಯಹಣ್ಣು ಅಥವಾ ಒಂದು ಕಿತ್ತಳೆಯನ್ನು ಒಬ್ಬನೇ ತಿನ್ನಬಹುದು. ದ್ರಾಕ್ಷಿಯಾದರೆ ಒಬ್ಬನೇ ಹತ್ತಿಪ್ಪತ್ತು ತಿನ್ನಬಹುದು. ಒಂದು ದೊಡ್ಡ ಹಲಸಿನ ಹಣ್ಣಾದರೆ ಒಬ್ಬನೇ ತಿನ್ನಲು ಅಸಾಧ್ಯ. ಹಣ್ಣುಗಳದ್ದು ಒಂದು ಸರಳ ಉದಾಹರಣೆ. ಇದೇ ರೀತಿ ಹೆಚ್ಚಿನ ಪ್ರಮಾಣದಲ್ಲಿ ಮಾಡಿಟ್ಟ ಅನೇಕ ತಿನಿಸುಗಳಿಂದ ಕೂಡಿದ ಅಡಿಗೆ. ಇದನ್ನು ಅನೇಕರು ಒಟ್ಟಿಗೆ ಅಥವಾ ಬೇರೆ ಬೇರೆಯಾಗಿ ಸೇವಿಸಬಹುದು. 

ಇಂತಹ ಒಂದು ಅನೇಕ ವ್ಯಂಜನಗಳಿಂದ (ಪಲ್ಯ, ಗೊಜ್ಜು, ಕೂಟು, ಚಟ್ನಿ ಮುಂತಾದುವುಗಳಿಗೆ ವ್ಯಂಹಜನಗಳು ಎನ್ನುತ್ತಾರೆ) ಕೂಡಿದ ಹತ್ತಾರು ಜನ ಸೇವಿಸಬಹುದಾದ ಪ್ರಮಾಣದ ಅಡಿಗೆಯನ್ನು ತೆಗೆದುಕೊಳ್ಳೋಣ. ಇಪ್ಪತ್ತು ಜನರಿಗೆ ಎಂದು ಮಾಡಿದ ತಯಾರಿ ಅನ್ನೋಣ. ಹತ್ತು ಜನರು ಮೊದಲು ಊಟಕ್ಕೆ ಕುಳಿತರು. ಅಡಿಗೆ ಸೊಗಸಾಗಿತ್ತು. ಊಟದ ಮನೆಯ ವಾತಾವರಣ ಚೆನ್ನವಿತ್ತು. ಬಡಿಸುವವರು ನುರಿತವರು. ಊಟಕ್ಕೆ ಕುಳಿತವರೋ ಭೋಕ್ತಾಪುರುಷರು. (ಒಳ್ಳೆಯ ಪ್ರಮಾಣದಲ್ಲಿ ಪದಾರ್ಥಗಳನ್ನು ಚೆನ್ನಾಗಿ ಊಟ ಹೊಡೆಯುವವರನ್ನು ಭೋಕ್ತಾಪುರುಷರು ಎಂದು ಹೇಳುತ್ತಿದ್ದರು). ಬಹಳ ವಿನೋದ ಮತ್ತು ಸ್ವಲ್ಪ ಸಂಗೀತ ಇತ್ಯಾದಿಗಳ ನಡುವೆ ಊಟ ಚೆನ್ನಾಗಿ ಸಾಗಿತು. ಹತ್ತು ಜನರೂ ಊಟಮಾಡಿ ಎದ್ದಿದ್ದಾರೆ. 

ಮಾಡಿದ ಅಡಿಗೆಯಲ್ಲಿ ಅರ್ಧಕ್ಕಿಂತ ಸ್ವಲ್ಪ ಹೆಚ್ಚಾಗಿ ಖರ್ಚಾಗಿದೆ. ಅಂಕಿ-ಅಂಶಗಳ ಲೆಕ್ಕದಲ್ಲಿ ಹೇಳುವುದಾದರೆ ಶೇಕಡಾ ಅರವತ್ತರಷ್ಟು ಸೇವಿಸಿಯಾಗಿದೆ. ಮಿಕ್ಕ ನಲವತ್ತು ಭಾಗ ತಯಾರಿಸಿದ ಮತ್ತು ಬಡಿಸಿದ ಪಾತ್ರೆಗಳಲ್ಲಿ ಉಳಿದಿದೆ. ಹತ್ತು ಜನ ಊಟ ಮಾಡಿದವರ ಎಲೆಗಳಲ್ಲೂ ಸ್ವಲ್ಪ ಸ್ವಲ್ಪ ಪದಾರ್ಥಗಳು ಉಳಿದಿವೆ. ಈ ರೀತಿ ಊಟ ಮಾಡಿ ಬಿಟ್ಟ ಎಲೆಗಳಲ್ಲಿ ಅಥವಾ ತಟ್ಟೆಗಳಲ್ಲಿ ಬಿಟ್ಟಿರುವ ಪದಾರ್ಥಗಳನ್ನು "ಎಂಜಲು" ಎನ್ನುವುದು ವಾಡಿಕೆ. ಇದನ್ನು ಯಾರೂ ತಿನ್ನುವುದಿಲ್ಲ. ಅವೆಲ್ಲವನ್ನೂ ಒಟ್ಟುಗೂಡಿಸಿ ಹೊರಗಡೆ ಬಿಸಾಡುತ್ತಾರೆ. ಅಲ್ಲಿ ಪ್ರಾಣಿಗಳು ತಿನ್ನಬಹುದು ಇಲ್ಲವೇ ಕಡೆಗೆ ಗೊಬ್ಬರ ಆಗಬಹುದು. ಆದರೆ ತಯಾರಿಸಿದ ಮತ್ತು ಬಡಿಸುವ ಪಾತ್ರೆಗಳಲ್ಲಿ ಉಳಿದಿರುವ ಪದಾರ್ಥಗಳು ಎಂಜಲಲ್ಲ. ಅದನ್ನು ನಿರ್ದೇಶಿಸಲು ಬಳಸುವ ಪದ "ಮಿಕ್ಕಿದ್ದು" ಎಂದು. "ಶೇಷಾನ್ನ" ಎಂದು ಹಿಂದೆ ಹೇಳುತ್ತಿದ್ದರು. ಇದು ಎಂಜಲಲ್ಲ. ಬೇರೆಯವರು ಸೇವಿಸಲು ಯೋಗ್ಯವಾದದ್ದು. 

*****

ಶ್ರಾದ್ಧಾದಿ ಕರ್ಮಗಳನ್ನು (ತಿಥಿ ಎಂದು ಹೇಳುವುದು ವಾಡಿಕೆ) ಮಾಡುವ ದಿನ ಆ ಕೆಲಸಕ್ಕಾಗಿಯೇ ವಿಶೇಷ ಅಡಿಗೆ ಮಾಡಿರುತ್ತಾರೆ. ಆ ಕಾರ್ಯಕ್ರಮಕ್ಕೆ ಪಿತೃಗಳ ಪ್ರತಿನಿಧಿಗಳಾಗಿ ಕೆಲವರನ್ನು ಆಮಂತ್ರಿಸಿರುತ್ತಾರೆ. ಅವರನ್ನು ಊಟಕ್ಕೆ ಕೂಡಿಸಿ, ಅವರಲ್ಲಿ ಪಿತೃದೇವತೆಗಳನ್ನು ಆವಾಹಿಸಿ ಭೋಜನ ಮಾಡಿಸುತ್ತಾರೆ. ಅವರ ಊಟ ಮುಗಿದು, ಕೈ ತೊಳೆಯಲು ಏಳುವ ಮುಂಚೆ ಅಲ್ಲಿ ಮಾಡಿರುವ ಅನ್ನದಲ್ಲಿ "ಪಿಂಡದಾನ" ಮಾಡುತ್ತಾರೆ. (ಈ ಪಿಂಡಪ್ರದಾನ ಸಮಯದಲ್ಲೂ ಅಸ್ವಾಭಿಕ ಮರಣಹೊಂದಿದ ಪಿತೃಗಳಿಗೆ "ಉಚ್ಚಿಷ್ಟ ಪಿಂಡ" ಎಂದು ಬೇರೊಂದು ಪಿಂಡಪ್ರದಾನ ಮಾಡುತ್ತಾರೆ).  ಶ್ರಾದ್ಧ ಕರ್ಮಕ್ಕೆ ಬಂದವರ ಊಟ ಆಯಿತು. ಮಾಡಿದ ಅಡಿಗೆ ಇನ್ನೂ ಮಿಕ್ಕಿದೆ. ಇದು ಶೇಷಾನ್ನ. ಪಿತೃಕಾರ್ಯ ಮಾಡಿ ಉಳಿದ ಶೇಷಾನ್ನ ಆದುದರಿಂದ ಇದು "ಪಿತೃ ಶೇಷ" ಎಂದಾಯಿತು. 

ಕಾರ್ಯ ನಡೆಯುವಾಗ ಊಟ ಮಾಡಿದ ಹಿರಿಯರನ್ನು ಕಾರ್ಯ ಮಾಡಿದ ಯಜಮಾನ "ಮಿಕ್ಕ ಅಡಿಗೆಯನ್ನು ಏನು ಮಾಡೋಣ?" (ಶೇಷಾನ್ನ೦ ಕಿಂ ಕರಿಷ್ಯೇ?) ಎಂದು ಕೇಳುತ್ತಾನೆ. "ನಿನ್ನ ಬಂಧುಗಳೊಡನೆ ಸೇವಿಸಬಹುದು" (ಇಷ್ಟೆ:ಸಹ ಭುಂಜತಾಮ್) ಎಂದು ಅವರು ಹೇಳುತ್ತಾರೆ. (ಇದು ಸಂಸ್ಕೃತದಲ್ಲಿ ನಡೆಯುವ ಸಂಭಾಷಣೆಯಾದದ್ದರಿಂದ ಇದೂ ಒಂದು ಮಂತ್ರವೆಂದು ತಿಳಿಯುವುದೂ ಉಂಟು!). ಇದೇ ಪಿತೃಶೇಷ ಸೇವನೆ. ಶ್ರದ್ದಾಳು ಬಂಧುಗಳು "ಪಿತೃಗಳ ಪ್ರಸಾದವಿದು" ಎನ್ನುವ ಪೂಜ್ಯ ಭಾವನೆಯಿಂದ ಈ ವಿಶೇಷಕ್ಕಾಗಿ ದೂರ ದೂರದಿಂದ ಬರುತ್ತಾರೆ. ಬಂಧು-ಭಾಂಧವರಲ್ಲದವರು ಈ ಪದಾರ್ಥಗಳನ್ನು ಸೇವಿಸುವುದಿಲ್ಲ. 

*****

ತಾಯಿಗೂ ಮಕ್ಕಳಿಗೂ ಇನ್ನೆಲ್ಲಿಲ್ಲದ ವಿಶೇಷ ಸಂಬಂಧ. ಗರ್ಭದಲ್ಲಿದ್ದಾಗ ತಾಯಿ ಸೇವಿಸಿದ ಆಹಾರವನ್ನು ಹೊಕ್ಕುಳ ಬಳ್ಳಿಯ ಮೂಲಕ ಸೇವಿಸಿ, ಬೆಳೆದು ಹುಟ್ಟಿದ್ದಾಯಿತು. ಮನುಷ್ಯರಲ್ಲಿ ಹುಟ್ಟಿದ ಶಿಶು ದೊಡ್ಡದಾಗಲು ಕೆಲವು ವರುಷಗಳೇ ಆಗುತ್ತವೆ. ಮಗುವಿಗೆ ಎಲ್ಲ ಬೇಕು-ಬೇಡಗಳಿಗೂ ಅಮ್ಮನೇ ಬೇಕು. ಕಂಠದವರೆಗೂ ತಿಂದಿದ್ದರೂ ಅಮ್ಮ ಊಟಕ್ಕೆ ಕುಳಿತಾಗ ಅವಳ ತಟ್ಟೆಯಲ್ಲಿ ಅಥವಾ ಎಲೆಯಲ್ಲಿ ಇರುವ ಪದಾರ್ಥವೇ ಬೇಕು. ಇದು ಯಾವುದೂ ತರ್ಕಕ್ಕೆ ನಿಲುಕುವ ವಿಷಯವಲ್ಲ. ಅದನ್ನು ಅನುಭವವೇ ಅರ್ಥ ಮಾಡಿಸಬೇಕು. ತಾಯಿಯಿರುವ ಎಲ್ಲರೂ ಈ ರೀತಿ ಬೆಳೆದವರೇ. ಒಂದು ವಯಸ್ಸಿನವರೆಗೆ ಹೀಗೆಯೇ ನಡೆಯುತ್ತದೆ. 

"ಉಪನಯನ" ಅಥವಾ "ಮುಂಜಿ" ಎನ್ನುವ ಸಂಸ್ಕಾರ ಮಾಡುವ ಕುಟುಂಬಗಳಲ್ಲಿ ಮಂತ್ರೋಪದೇಶಕ್ಕೆ ಮೊದಲು "ಮಾತೃಭೋಜನ" ಎನ್ನುವ ಒಂದು ಕಾರ್ಯಕ್ರಮ ನಡೆಯುತ್ತದೆ. ಇಂದಿನಿಂದ ಮುಂದೆ ಉಪನಯನ ಆದವನು ಮತ್ತೊಬ್ಬರ ಎಲೆಯಲ್ಲಿ ಇರುವ ಪದಾರ್ಥ ತಿನ್ನುವಂತಿಲ್ಲ. ಅವನು ಪ್ರತಿದಿನ ಮಾಡುವ ಭೋಜನವೂ ತನ್ನಲ್ಲಿರುವ ಪ್ರಾಣಾಗ್ನಿಗೆ ಕೊಡುವ ಆಹುತಿ. ಇದಕ್ಕಾಗಿಯೇ ತಾಯಿ-ಮಗನನ್ನು ಅಂದು ಮಂತ್ರೋಪದೇಶದ ಮುಂಚೆ ಒಟ್ಟಿಗೆ ಕೂಡಿಸಿ ಒಂದೇ ಎಲೆಯಲ್ಲಿ ಆಹಾರ ಬಡಿಸುತ್ತಾರೆ. ಇದೊಂದು ಭಾವನೆಗಳ ಕೇಂದ್ರಿತ ಕಾರ್ಯಕ್ರಮ. ಹಿಂದೆಲ್ಲ ಇದೊಂದು ಸಣ್ಣ ಖಾಸಗಿ ವಿಷಯವಾಗಿ ನಡೆಯುತ್ತಿತ್ತು. ಈಗ ಈವೆಂಟ್ ಮ್ಯಾನೇಜ್ಮೆಂಟ್ ನೇತೃತ್ವದಲ್ಲಿ ಬಹಳ ವೈಭವೋಪೇತವಾಗಿ ನಡೆಯುತ್ತದೆ. 

***** 

ಎಂಜಲು, ಶೇಷಾನ್ನ, ಪಿತೃಶೇಷ ಮತ್ತು ಮಾತೃಭೋಜನದ ಬಗ್ಗೆ ನೋಡಿದ್ದಾಯಿತು. ಇನ್ನು ಪ್ರಸಾದದ ಬಗ್ಗೆ ನೋಡೋಣ. 

ನಾವು ನಂಬಿದ ದೈವಕ್ಕೆ ಕೃತಜ್ಞತೆ ತೋರಿಸುವ ಸಲುವಾಗಿ ಪೂಜೆ-ಪುನಸ್ಕಾರಗಳನ್ನು ಮಾಡುವುದು ಬಹಳ ಹಿಂದಿನಿಂದ ಬಂದಿರುವ ಒಂದು ಸಂಪ್ರದಾಯ. ಈ ರೀತಿ ಮಾಡುವಾಗ ಭಯ-ಭಕ್ತಿಗಳಿಂದ ಇಷ್ಟದೈವಕ್ಕೆ ಕೊಡಲು ತಿಂಡಿ-ತಿನಿಸು, ಅಡಿಗೆ, ಪಾನೀಯ ಇತ್ಯಾದಿ ಮಾಡುವುದು. ಹಣ್ಣು-ಹಂಪಲುಗಳನ್ನು ಸೇರಿಸುವುದು. ತಯಾರು ಮಾಡಿದ ಮತ್ತು ಸಂಪಾದಿಸಿದ ಇಂತಹ ಪದಾರ್ಥಗನ್ನು ಆವಾಹಿಸಿದ ದೇವರು-ದೇವತೆಗಳ ಮುಂದೆ ಇಟ್ಟು "ಷೋಡಶೋಪಚಾರ" (ಹದಿನಾರು ಹಂತದ ಪೂಜೆ) ಅಂಗವಾಗಿ "ನೈವೇದ್ಯ" ಮಾಡುತ್ತಾರೆ. ಹೀಗೆ ಮಾಡುವಾಗ ಪರಮಾತ್ಮನು ಅಲ್ಲಿ ಇಟ್ಟ ಪದಾರ್ಥಗಳಲ್ಲಿ ತನಗೆ ಯೋಗ್ಯವಾದ ಅಂಶಗಳನ್ನು ರಸರೂಪವಾಗಿ ನೋಟದಿಂದ ಸೇವಿಸುತ್ತಾನೆ ಎಂದು ನಂಬಿಕೆ. ಹೀಗೆ ನೈವೇದ್ಯ ಮಾಡಿದ ಮೇಲೆ ಅಲ್ಲಿ ಉಳಿದ ಪದಾರ್ಥ "ಪ್ರಸಾದ" ಆಯಿತು. ಅನುಗ್ರಹ ರೂಪವಾಗಿ ನಮಗೆ ಹಿಂದೆ ಬಂದಿದ್ದು "ಪ್ರಸಾದ" ಎಂದು ನಿರ್ದೇಶಿತವಾಯಿತು. 

ದೇವರು ಸ್ವೀಕರಿಸಿ (ತಿಂದು) ಬಿಟ್ಟ ಇದನ್ನು ಯಾರೂ ದೇವರ ಎಂಜಲು ಎನ್ನುವುದಿಲ್ಲ. ಬಹಳ ಗೌರವಪೂರ್ವಕ "ಪ್ರಸಾದ" ಎನ್ನುತ್ತಾರೆ. ಯಾರಾದರೂ ಕೊಟ್ಟರೆ ಎರಡೂ ಕೈಗಳಿಂದ ಸ್ವೀಕರಿಸುತ್ತಾರೆ. ಮೊದಲು ನೋಡಿದ ಎಂಜಲು ಮತ್ತು ಈಗ ನೋಡಿದ ಪ್ರಸಾದಕ್ಕೆ ಎಷ್ಟು ವ್ಯತ್ಯಾಸ! ಅದರ ಬೆಲೆ ನಂಬಿಕೆ ಮತ್ತು ಶ್ರದ್ದೆಯಲ್ಲಿ ಇದೆ. ಭೌತಿಕವಾಗಿ ನೋಡಿದರೆ ವ್ಯತ್ಯಾಸವಿಲ್ಲ. ಭಾವನಾತ್ಮಕವಾಗಿ ನೋಡಿದರೆ ಎಲ್ಲಿಲ್ಲದ ವ್ಯತ್ಯಾಸ. 

ದೊಡ್ಡ ಸಮಾರಂಭಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಡಿಗೆ ಮಾಡಿದಾಗ ಪಾಕಶಾಲೆಯಲ್ಲಿಯೇ ನೈವೇದ್ಯ ಮಾಡುತ್ತಾರೆ. ಸಾಮೂಹಿಕ ಭೋಜನಶಾಲೆಗಳಿರುವ ದೇವಾಲಯಗಳಲ್ಲಿ ಇದನ್ನು ನೋಡಬಹುದು. ಮನೆಗಳಲ್ಲಿ ನಡೆಯುವ ಸಮಾರಂಭಗಳಲ್ಲಿ ತಯಾರಿಸಿದ ಎಲ್ಲಾ ಪದಾರ್ಥಗಳನ್ನೂ ಒಂದು ಹರಿವಾಣದಲ್ಲಿ ಸ್ವಲ್ಪ ಸ್ವಲ್ಪ ಬಡಿಸಿ ನೈವೇದ್ಯ ಮಾಡುತ್ತಾರೆ. ನಂತರ ಅದನ್ನು ಅದೇ ಕ್ರಮದಲ್ಲಿ ಮಾಡಿರುವ ಹೆಚ್ಚಿನ ಅಡಿಗೆ ಪದಾರ್ಥಗಳಲ್ಲಿ ಸೇರಿಸುತ್ತಾರೆ. ಈಗ ಮಾಡಿದ ಅಡಿಗೆ ಎಲ್ಲ ಪ್ರಸಾದವಾಯಿತು!

ಅನೇಕ ದಶಕಗಳ ಹಿಂದೆ ಕಾಶಿ-ರಾಮೇಶ್ವರ ಯಾತ್ರೆ ಬಹಳ ಕಠಿಣದ್ದಾಗಿತ್ತು. ಹೀಗೆ ಯಾತ್ರೆ ಹೋದವರು ದಾರಿಯಲ್ಲಿ ಸಿಗುವ ಅನೇಕ ಕ್ಷೇತ್ರಗಳನ್ನು ಸಂದರ್ಶಿಸಿ ಅಲ್ಲಿಂದ ಪ್ರಸಾದ ತರುತ್ತಿದ್ದರು. ಸಾಮಾನ್ಯವಾಗಿ ಕಲ್ಲುಸಕ್ಕರೆ, ಒಣದ್ರಾಕ್ಷಿ, ಉತ್ತತ್ತಿ (ಖರ್ಜೂರ), ಪಂಚಕಜ್ಜಾಯ, ಕಲ್ಯಾಣಸೇವೆ ಮುಂತಾದ, ಬಹಳ ದಿನ ಕೆಡದೆ ಇರುವ ಪದಾರ್ಥಗಳ ಪ್ರಸಾದಗಳು. ತಿರುಪತಿಯಂತಹ ಕ್ಷೇತ್ರವಾದರೆ ಲಾಡುವೂ ಆಗಬಹುದು. ಯಾತ್ರೆ ಮುಗಿದು ಊರಿಗೆ ಬಂದ ನಂತರ ಒಂದು ದಿನ ಬಂಧು-ಮಿತ್ರರನ್ನೆಲ್ಲ ಕರೆದು ಸಮಾರಾಧನೆ ನಡೆಸುತ್ತಿದ್ದರು. "ಕಾಶಿ ಸಮಾರಾಧನೆ" ಅಥವಾ "ಗಂಗಾ ಸಮಾರಾಧನೆ" ಎಂದು ಅದಕ್ಕೆ ಹೆಸರು. ಇಷ್ಟದೇವತೆಯ ಜೊತೆಗೆ ಈ ಎಲ್ಲ ಕ್ಷೇತ್ರಗಳ ಪ್ರಸಾದಗಳನ್ನೂ ಪೂಜಿಸಿ ಬಂದವರಿಗೆ ವಿತರಿಸುತ್ತಿದ್ದರು. ಈಗ ಈ ಪದ್ಧತಿ ನಿಂತೇ ಹೋಗಿದೆ. 

*****

ಭಗವಾನ್ ವೇದವ್ಯಾಸರ ಕುರಿತಾದ ನಾಣ್ನುಡಿ ವಿಷಯದಲ್ಲಿ ಉಚ್ಚಿಷ್ಟ ಅನ್ನುವ ಪದಕ್ಕೆ ಎಂಜಲು ಎಂದು ಅರ್ಥ ಮಾಡುವುದು ಅಷ್ಟು ಸಮಂಜಸವಲ್ಲ. ಅವರ ಅನೇಕ ಸೃಷ್ಟಿಗಳಲ್ಲಿ ಒಂದಾದ ಮಹಾಭಾರತದ ವಿಷಯದಲ್ಲಿಯೇ "ಇಲ್ಲಿರುವುದೇ ಬೇರೆಲ್ಲ ಕಡೆ ಇರುವುದು. ಇಲ್ಲಿರದುದು ಬೇರೆಲ್ಲಿಯೂ ಇಲ್ಲ" ಎಂದು ಹೇಳುತ್ತಾರೆ. ಈ ಕೃತಿಯ ಒಂದು ಎಳೆ ಹಿಡಿದು ಕೃತಿ ರಚಿಸಿ ಅನೇಕರು ಮಹಾಕವಿಗಳಾದರು; ಪೂಜ್ಯರೆನಿಸಿದರು. ಕೆಲವು ಕೃತಿಗಳನ್ನು ಒಮ್ಮೆ ಓದಿದರೆ ಮುಗಿಯಿತು. ಆದರೆ ವೇದವ್ಯಾಸರ ಕೃತಿಗಳು ಮತ್ತೆ ಮತ್ತೆ ಓದಿದರೆ ಹೊಸ ಹೊಸ ಅರ್ಥಗಳು ಇಂದಿಗೂ ಹೊಳೆಯುತ್ತವೆ. 

ಈ ದೃಷ್ಟಿಯಿಂದ "ವ್ಯಾಸೋಚ್ಛಿಷ್ಟಮ್ ಜಗತ್ಸರ್ವಂ" ಎನ್ನುವುದಕ್ಕೆ "ವ್ಯಾಸರು ನಮಗೆ ಕೊಟ್ಟಿರುವ ಪ್ರಸಾದ" ಎನ್ನುವುದೇ ಸರಿ ಎನ್ನಬಹುದು. 

ಈ ಸಂಚಿಕೆ ಈಗಾಗಲೇ ದೀರ್ಘವಾಗಿರುವುದರಿಂದ, ಎಂಜಲು ಎನ್ನುವ ವಿಷಯದಲ್ಲಿ ಶ್ರೀಕನಕದಾಸರು ಹೇಳಿರುವ ವಿಶೇಷ ವಿಷಯವನ್ನು ಮುಂದೊಮ್ಮೆ ನೋಡೋಣ. 

Monday, April 14, 2025

ಚರ್ವಿತ ಚರ್ವಣ


ಕೆಲವು ದಶಕಗಳ ಹಿಂದೆ ಮಾವಿನ ಫಸಲು ಬರುವ ಕಾಲದಲ್ಲಿ (ಸುಮಾರು ಏಪ್ರಿಲ್, ಮೇ, ಜೂನ್ ತಿಂಗಳುಗಳು) ಮಾವು ಬೆಳೆವ ಹಳ್ಳಿಗಳಲ್ಲಿ ಮಾವಿನಹಣ್ಣು ಸಿಗುವುದು ಕಷ್ಟವೇನೂ ಇರಲಿಲ್ಲ. ಸಿಗುವುದು ಅಂದರೆ ಅಂಗಡಿಗಳಲ್ಲಿ ಅಲ್ಲ. ಅಲ್ಲಿ ಈಗಲೂ ಸಿಗುತ್ತವೆ. ಮಾವು ಬೆಳೆಯುವ ಪ್ರದೇಶಗಳಲ್ಲಿ ಅಲ್ಲಲ್ಲಿ ಮಾವಿನ ಮರಗಳಿದ್ದವು. ಅನೇಕರ ಮನೆಯ ಹಿತ್ತಿಲಲ್ಲಿ ಮಾವಿನ ಮರಗಳಿರುತ್ತಿದ್ದವು. ಈಗಿನಂತೆ ದೂರದ ಪ್ರದೇಶಗಳಿಗೆ ಶೀಘ್ರದಲ್ಲಿ ಹಣ್ಣುಗಳನ್ನು ಸರಬರಾಜು ಮಾಡುವ ವ್ಯವಸ್ಥೆ ಇರಲಿಲ್ಲ. ಹಣ್ಣು ಬೆಳೆದವರು ಇತರರೊಂದಿಗೆ ಹಂಚಿಕೊಂಡು ಬಾಳುತ್ತಿದ್ದರು. 

ಮಾವನ್ನು "ಫಲಗಳ ರಾಜ" ಅನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯವೇ. ವಸಂತದ ಮೊದಲ ಮಳೆ ಬರುವವರೆಗೆ ಮಾವಿನಹಣ್ಣು ತಿನ್ನಬಾರದು ಎಂಬ ಅಲಿಖಿತ ನಿಯಮ ಕೆಲವರು ಪಾಲಿಸುತ್ತಿದ್ದರು. ಮಳೆ ಬರುವ ಮುನ್ನ ಅದನ್ನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುವ ಅಭಿಪ್ರಾಯವಿತ್ತು. ಅದರಲ್ಲೂ ಮಕ್ಕಳು ಆರೋಗ್ಯದ ದೃಷ್ಟಿಯಿಂದ ಇದನ್ನು ಮಿತವಾಗಿ ಸೇವಿಸಬೇಕೆಂದೂ, ಇಲ್ಲದಿದ್ದರೆ ಉಷ್ಣದಿಂದ ಆರೋಗ್ಯದ ಮೇಲೆ ಪರಿಣಾಮ ಆಗುತ್ತದೆ ಎಂದೂ ಹೇಳುತ್ತಿದ್ದರು. ಮಾವಿನಹಣ್ಣು ಹೆಚ್ಚು ತಿಂದರೆ ಅದರ ಜೊತೆ ಹಾಲು ಕುಡಿಯಬೇಕೆಂಬ ಸಲಹೆಯೂ ಇತ್ತು. 

ಮಾವಿನಹಣ್ಣು ತಿನ್ನಬೇಕೆಂದು ಎಲ್ಲರಿಗೂ ಆಸೆಯೇ. ಅದರಲ್ಲೂ ಸಣ್ಣ ಮಕ್ಕಳಿಗೆ ಬಲು ಆಸೆ. ಏನು ಮಾಡುವುದು? ತಾಯಂದಿರು ಅದಕ್ಕೆ ಒಂದು ಸುಲಭ ಉಪಾಯ ಕಂಡಿದ್ದರು. ಒಂದು ದೊಡ್ಡ ಹಣ್ಣನ್ನು ಮೂರು ಭಾಗ ಮಾಡುವುದು. ಮಧ್ಯದ ಭಾಗದಲ್ಲಿ ಮಾವಿನ ಓಟೆ. ಅದರ ಪಕ್ಕದ ಎರಡು ಭಾಗ ಕೆನ್ನೆಗಳು. ಹೀಗೆ ವಿಭಾಗ. "ನಿನಗೆ ಕೆನ್ನೆ ಬೇಕೋ ಅಥವಾ ಓಟೆ ಬೇಕೋ?" ಎಂದು ಮಕ್ಕಳನ್ನು ಕೇಳುವುದು. ಅವರಿಗೆ ಒಂದು ಆಯ್ಕೆ ಅವಕಾಶ ಕೊಟ್ಟಂತೆಯೂ ಆಯಿತು. ಒಂದು ಹಣ್ಣು ಮೂರು ಮಕ್ಕಳಿಗೆ ಕೊಟ್ಟಂತೆಯೂ ಆಯಿತು!  ಕೇಳಿದ್ದು ಸಿಕ್ಕಿದಾಗ ಅದು ಎಷ್ಟೇ ಸಿಕ್ಕಿದರೂ ಮಕ್ಕಳಿಗೆ ಸಂತೋಷವೇ! 

ಕೆನ್ನೆಯಲ್ಲಿ ಹಣ್ಣು ಹೆಚ್ಚು ಇರುತ್ತದೆ ಎಂದು ಕೆಲವರಿಗೆ ಆಸೆ. ಆದರೆ ಓಟೆಯ ಮಜವೇ ಬೇರೆ. ಕೆನ್ನೆ ಭಾಗ ಪಡೆದವರು ತಿಂದು ಮುಗಿಸಿ ಕೈ ತೊಳೆದುಕೊಂಡು ಬಂದರೂ ಓಟೆ ಭಾಗದವನು ಇನ್ನೂ ತಿನ್ನುತ್ತಲೇ ಇರಬಹುದು. ಆದರೆ ಅದರಲ್ಲಿ ಇರುವ ರಸ ಎಷ್ಟೋ ಅಷ್ಟೇ. ಚೀಪಿದ ಓಟೆಯನ್ನೇ ಚೀಪುತ್ತಿರುವುದು. ಅಷ್ಟೇ.

*****

ಸಂಕ್ರಾಂತಿ ಸಮಯದಲ್ಲಿ ಎಳ್ಳು-ಬೆಲ್ಲಗಳ ಜೊತೆಯಲ್ಲಿ ಕಬ್ಬು-ಬಾಳೆಹಣ್ಣು ಕೊಡುವ ಸಂಪ್ರದಾಯ ಬಹಳ ಹಿಂದಿನಿಂದಲೂ ಬಂದಿದೆ. ಸಕ್ಕರೆ ಕಾರ್ಖಾನೆಗಳು ಇಲ್ಲದಿದ್ದ ಕಾಲದಲ್ಲಿ, ಮತ್ತು ಅವು ಬಂದಮೇಲೂ ಈಗಿನಷ್ಟು ಸಂಖ್ಯೆಯಲ್ಲಿ ಇಲ್ಲದಿದ್ದ ಕಾಲದಲ್ಲಿ, ಕಬ್ಬಿನಿಂದ ಬೆಲ್ಲ ಮಾಡುವುದು ಹಳ್ಳಿಗಳಲ್ಲಿ ಸಾಮಾನ್ಯವಾಗಿತ್ತು. ಈಗಲೂ ಅನೇಕ ಕಡೆಗಳಲ್ಲಿ ಬೆಲ್ಲ ಮಾಡುತ್ತಾರೆ. ಸಂಕ್ರಾಂತಿ ಸಮಯದಲ್ಲಿ ಕಬ್ಬಿನ ಜಲ್ಲೆಗಳನ್ನು ಸಣ್ಣ ತುಂಡುಗಳಾಗಿ ಮಾಡಿ ಬಾಗಿನದಲ್ಲಿ ಸೇರಿಸುತ್ತಾರೆ. ಬಿಳಿ ಎಳ್ಳು, ಹುರಿಗಡಲೆ, ಹುರಿದ ಕಡಲೆಕಾಯಿ ಬೀಜಗಳು, ಬೆಲ್ಲದ ಚೂರುಗಳು, ಕೊಬ್ಬರಿ ತುಂಡುಗಳು, ಇವುಗಳ ಮಿಶ್ರಣದ ಜೊತೆ ಸಕ್ಕರೆ ಅಚ್ಚಿನ ಬೊಂಬೆಗಳು, ಕಬ್ಬಿಣ ಜಲ್ಲೆಯ ತುಂಡು ಮತ್ತು ಬಾಳೆಯ ಹಣ್ಣು ಸೇರಿಸಿ ಬಂಧು-ಮಿತ್ರರಿಗೆ ಕೊಡುವುದು ಹಬ್ಬದ ಸಂಭ್ರಮದ ಒಂದು ಅವಿಭಾಜ್ಯ ಭಾಗ. "ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತಾಡು" ಎಂದು ಹೇಳುವುದೂ ಒಂದು ಪರಿಪಾಠ. 

ಎಳ್ಳು-ಬೆಲ್ಲ ಇತ್ಯಾದಿಗಳ ಮಿಶ್ರಣ ಕೆಲವು ದಿನ ಇಡಬಹುದು. ಬಾಳೆಹಣ್ಣು ಹಾಗಲ್ಲ. ಕೆಡುವುದರ ಮುಂಚೆ ತಿಂದು ಮುಗಿಸಬೇಕು. ಕಬ್ಬಿನ ವಿಷಯವೇನು? ಅದೂ ಅಷ್ಟೇ. ರಸ ಒಣಗಿ ಕಬ್ಬು ಕಟ್ಟಿಗೆ ಆಗುವುದರ ಒಳಗೆ ತಿನ್ನಬೇಕು. ದಿನದಿಂದ ದಿನಕ್ಕೆ ಅದು ಒಣಗುತ್ತ ಹೋಗಿ ರಸ ಕಡಿಮೆ ಆಗುತ್ತದೆ. ಕೆಲವರು ಮಚ್ಚಿನಿಂದ ಕಬ್ಬಿನ ಹೊರಗಿನ ಗಟ್ಟಿ ಹೊದಿಕೆ ಕತ್ತರಿಸಿ ಆಮೇಲೆ ತಿನ್ನುತ್ತಿದ್ದರು. ಹರೆಯದ ಮಕ್ಕಳು ತಮ್ಮ ಹಲ್ಲಿನಿಂದಲೇ ಅದನ್ನು ಸಿಗಿದು, ಕಬ್ಬು ಜಗಿದು ರಸ ಹೀರುತ್ತಿದ್ದರು. ಈಗ ಕಾಲ ಬದಲಾಗಿದೆ. ಹಾಗೆ ರಸ ಸೋರಿಸಿಕೊಂಡು ತಿನ್ನುವುದು ನಾಗರಿಕತೆ ಅಲ್ಲ ಅನ್ನುವ ಭಾವನೆಯ ಪ್ರಪಂಚ ಇದು. ಚಿಕ್ಕ ಚಿಕ್ಕ ತುಂಡು ಮಾಡಿ ಫೋರ್ಕಿನಲ್ಲಿ ಚುಚ್ಚಿ ತಿನ್ನುವ ಕಾಲ ಈಗ. 

ಇಂತಹ ಒಂದು ಸಣ್ಣ ಕಬ್ಬಿನ ತುಂಡನ್ನೇ ತೆಗೆದುಕೊಳ್ಳೋಣ. ಮೊದಲ ಸರಿ ಜಗಿದಾಗ ಸ್ವಲ್ಪ ರಸ ಬರಬಹುದು. ಎರಡನೆಯ ಸಲ ಚೆನ್ನಾಗಿ ರಸ ಬರುತ್ತದೆ. ಮೂರನೆಯ ಸಲ ಅದಕ್ಕಿಂತ ಸ್ವಲ್ಪ ಕಡಿಮೆ. ನಾಲ್ಕು ಐದನೆಯ ಸಲ ಮತ್ತೂ ಕಡಿಮೆ. ಅದರ ನಂತರ ಎಷ್ಟು ಜಗಿದರೂ ಏನೂ ರಸ ಸಿಗದು. ಜಗಿದು ಜಗಿದೂ ವಸಡು ನೋವು ಬಂದದ್ದಷ್ಟೇ ಲಾಭ. ಕಬ್ಬಿನ ರಸ ಹೋಗಿ ಎಷ್ಟೋ ಸಮಯವಾಯಿತು. ವ್ಯರ್ಥ ಪ್ರಯತ್ನ. ವೃಥಾ ಶ್ರಮ. ಏನೂ ಪ್ರಯೋಜನವಿಲ್ಲದ ಕೆಲಸ. 

*****

ಈ ವ್ಯರ್ಥ ಪ್ರಯತ್ನ ಕೇವಲ ಮಾವಿನ ಓಟೆ ಚೀಪುವುದು ಅಥವಾ ಕಬ್ಬಿನ ತುಂಡು ಜಗಿಯುವುದಕ್ಕೆ ಮಾತ್ರ ಸೀಮಿತವಲ್ಲ. ಇವೆರಡು ಕೆಲಸಕ್ಕೂ ಉಪಯೋಗಿಸುವ ಅದೇ ನಾಲಿಗೆ ಮಾತಾಡುವುದಕ್ಕೂ ಉಪಯೋಗವಾಗುತ್ತದೆ. ಆಡಿದ ಮಾತನ್ನೇ ಮತ್ತೆ ಮತ್ತೆ ಆಡುತ್ತಿದ್ದರೆ ಅದೂ ವ್ಯರ್ಥವೇ. ಕೆಲವರು ಮಾತನಾಡುವಾಗ ಕೇಳುಗರಿಗೆ ಒಂದು ಹಿತವಿರುತ್ತದೆ. ಇನ್ನಷ್ಟು ಕೇಳೋಣ ಎನಿಸುತ್ತದೆ. ಮತ್ತೆ ಕೆಲವರು ಮಾತಾಡುವಾಗ "ನಾವು ಕಿವುಡರಾಗಿದ್ದರೆ ಎಷ್ಟೋ ಚೆನ್ನವಿತ್ತಲ್ಲ!" ಅನ್ನುವ ಭಾವನೆ ಬರುತ್ತದೆ. ಹೇಳಿದ್ದನ್ನೇ ಹೇಳಿದರೆ ಜಗಿದದ್ದನ್ನೇ ಮತ್ತೆ ಮತ್ತೆ ರಸ ಬರದಿದ್ದರೂ ಜಗಿದಂತೆ ವೃಥಾ ಶ್ರಮವೇ. 

ಈ ಕಾರಣದಿಂದ "ಚರ್ವಿತ ಚರ್ವಣ" ಅನ್ನುವ ಪದಪುಂಜದ ಪ್ರಯೋಗ ಬಂದಿದೆ. ಚರ್ವಣ ಅಂದರೆ ಅಗಿಯುವುದು. ಚರ್ವಿತ ಅಂದರೆ ಈಗಾಗಲೇ ಚೆನ್ನಾಗಿ ಆಗಿದಿರುವ ವಸ್ತು. ಅಂತಹ ವಸ್ತುವನ್ನು ಮತ್ತೆ ಮತ್ತೆ ಅಗಿಯುವುದೇ ಚರ್ವಿತ ಚರ್ವಣ. ಸಂಸ್ಕೃತದ ಪ್ರಯೋಗವಾದರೆ "ಚರ್ವಿತ ಚರ್ವಣ". ಕನ್ನಡದಲ್ಲಿ ಹೇಳಿದರೆ "ಹಾಡಿದ್ದೇ ಹಾಡಿದ ಕಿಸುಬಾಯಿ ದಾಸ". ಅನೇಕ ವಿಷಯಗಳನ್ನು, ಕೆಲಬಗೆಯ ಹಾಡುಗಳನ್ನು, ಕೆಲವು ಗ್ರಂಥಗಳನ್ನು ಮತ್ತೆ ಮತ್ತೆ ಹೇಳಿದರೂ, ಹಾಡಿದರೂ, ಓದಿದರೂ ಬೇಜಾರಾಗುವುದಿಲ್ಲ. ಇನ್ನೊಮ್ಮೆ, ಮತ್ತೊಮ್ಮೆ ಕೇಳಿದಾಗ ಹೊಸ ಅನುಭವಾಗುತ್ತದೆ.  ಹೊಸ ಹೊಸ ಅರ್ಥಗಳ ಸ್ಫುರಣ ಆಗುತ್ತದೆ. ಆದರೆ ಕೆಲಸಕ್ಕೆ ಬಾರದ ವಿಷಯಗಳನ್ನು ಮತ್ತೆ ಮತ್ತೆ ಹೇಳಿದಾಗ ಅದು ಚರ್ವಿತ ಚರ್ವಣವೇ ಆಗುತ್ತದೆ. 

ಈ "ಚರ್ವಿತ ಚರ್ವಣ" ಸಾಹಿತ್ಯಪರ ಚರ್ಚೆಗಳಲ್ಲಿ, ಸಭೆ, ಸಮಾರಂಭಗಳಲ್ಲಿ ಮಾತಾಡುವಾಗ ಅವಾಗವಾಗ ಕೇಳಿಬರುವ ಪದಪುಂಜ. ಇದರ ಮೂಲ ಎಲ್ಲಿ? ಇದೊಂದು ಮೂಲಭೂತ ಪ್ರಶ್ನೆ. 

*****

ಹಿರಣ್ಯ ಕಷಿಪು ಮತ್ತು ಅವನ ಮಗ ಪ್ರಹ್ಲಾದನ ಕಥೆ ಅನೇಕ ಕಡೆಗಳಲ್ಲಿ ಹೇಳಲ್ಪಟ್ಟಿದೆ. ಶ್ರೀಮದ್ಭಾಗವತದ ಏಳನೆಯ ಸ್ಕಂಧದಲ್ಲಿ ಈ ವೃತ್ತಾಂತ ಬಹಳ ವಿವರವಾಗಿ ಚರ್ಚಿತವಾಗಿದೆ. ದೈತ್ಯ ಗುರು ಶ್ರೀ ಶುಕ್ರಾಚಾರ್ಯರ ಮಕ್ಕಳಾದ ಶಂಡ ಮತ್ತು ಅಮರ್ಕ (ಶಂಡಾಮರ್ಕರು ಎಂದು ಒಟ್ಟಿಗೆ ಹೇಳುವುದು ರೂಢಿ) ಆಚಾರ್ಯರ ಗುರುಕುಲದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಮಗನನ್ನು ಹಿರಣ್ಯ ಕಷಿಪು ಕರೆಸುತ್ತಾನೆ. ಅವನ ವಿದ್ಯಾಭ್ಯಾಸದ ಪ್ರಗತಿ ವಿಚಾರಿಸುವ ಸಲುವಾಗಿ. ಅಪ್ಪ ನಿರೀಕ್ಷಿಸಿದ್ದಕ್ಕೂ ಮಗ ಕಲಿತದ್ದನ್ನು ಒಪ್ಪಿಸುವುದಕ್ಕೂ ಏನೂ ಸಂಬಂಧವಿಲ್ಲ. ಈ ಸಂದರ್ಭದಲ್ಲಿ ಪ್ರಹ್ಲಾದ ಕೇವಲ ಐದಾರು ವರುಷದ ಬಾಲಕನಾಗಿದ್ದರೂ ಜೀವನ್ಮರಣ ಚಕ್ರದ ಬಗ್ಗೆ ಅದ್ಭುತ ಮಾತುಗಳನ್ನು ಹೇಳುತ್ತಾನೆ:

"ಜೀವಿಗಳು ಪಂಚೇಂದ್ರಿಯಗಳ ಸೆಳೆತಕ್ಕೆ ಸಿಕ್ಕಿ, ಅವನ್ನು ನಿಯಂತ್ರಿಸಲಾರದೆ ಐಹಿಕ (ಈ ಪ್ರಪಂಚದ) ಸುಖಗಳ ಹಿಂದೆ ಬೀಳುತ್ತಾರೆ. ಈ ಕಾರಣದಿಂದ ಮತ್ತೆ ಮತ್ತೆ ಅದೇ ಜನನ-ಮರಣ (ಹುಟ್ಟು-ಸಾವು) ಚಕ್ರದಲ್ಲಿ ಸಿಕ್ಕಿ ಒದ್ದಾಡುತ್ತಾರೆ. ಪ್ರಾಪಂಚಿಕ ಸುಖಗಳು ಅಗಿದ ಪದಾರ್ಥವನ್ನು ಮತ್ತೆ ಮತ್ತೆ ಅಗಿದಂತೆ, ಚರ್ವಿತ ಚರ್ವಣದಂತೆ, ಇದ್ದರೂ ಅದರಲ್ಲೇ ಮುಳುಗುತ್ತಾರೆ. ಇವುಗಳಲ್ಲಿ ರಸವಿಲ್ಲವೆಂದು ತಿಳಿಯದೆ ಅಗಿದು ಬಿಟ್ಟಿದ್ದನ್ನು ಮತ್ತೆ ಮತ್ತೆ ಅಗಿಯುತ್ತಾ ಸಂತೋಷ ಪಡುತ್ತಿದ್ದೇವೆ ಅನ್ನುವ ಭ್ರಮೆಯಲ್ಲಿ ಬದುಕುತ್ತಾರೆ. ಅವರಿಗೆ ಪರಮಾರ್ಥ ವಿಷಯಗಳಲ್ಲಿ ಆಸಕ್ತಿ ಬರುವುದೇ ಇಲ್ಲ. ತಮ್ಮ ಪ್ರಯತ್ನದಿಂದಲೂ ಇಲ್ಲ. ಇನ್ನೊಬ್ಬರ ಹೇಳಿಕೆಯ ಮೂಲಕವಾಗಿಯೂ ಇಲ್ಲ. ಅಥವಾ ಇವೆರಡೂ ಸ್ವಲ್ಪ ಸ್ವಲ್ಪ ಸೇರಿದ್ದರಿಂದಲೂ ಇಲ್ಲ. ಯಮನ ಪಾಶಕ್ಕೆ ಸಿಕ್ಕಿ ನರಕದ ದಾರಿ ಹಿಡಿದಾರೆಯೇ ಹೊರತು ಈ ಜನನ-ಮರಣ ಚಕ್ರದಿಂದ ಹೊರಗೆ ಬರುವುದೇ ಇಲ್ಲ" 

ಶ್ರೀಮದ್ಭಾಗವತ ಏಳನೆಯ ಸ್ಕಂಧ, ಐದನೆಯ ಅಧ್ಯಾಯ ಮೂವತ್ತನೆಯ (7.5.30) ಶ್ಲೋಕ ಹೀಗಿದೆ:
ಮತಿರ್ನ ಕೃಷ್ಣೇ ಪರತಃ ಸ್ವತೋ ವಾ 
ಮಿಥೋಭಿಪದ್ಯೇತ ಗೃಹವತಾನಾಂ 
ಆದಾಂತಕೋಭಿರ್ವಿಶತಾಂ ತಮಿಸ್ರ೦
ಪುನಃ ಪುನಃ ಚರ್ವಿತ ಚರ್ವಣಾನಾಂ 

ಚರ್ವಿತ ಚರ್ವಣ ಅನ್ನುವುದರ ಮೊದಲ ಪ್ರಯೋಗ ಆಗಿದ್ದು ಹೀಗೆ. ಜೀವಿಗಳು ಹೇಗೆ ಅದೇ ಸಂಸಾರ ಚಕ್ರದಲ್ಲಿ ಮತ್ತೆ ಮತ್ತೆ ಸುತ್ತುತ್ತಾರೆ ಅನ್ನುವುದನ್ನು ವಿವರಿಸುವ ಸಲುವಾಗಿ ಭಗವಾನ್ ವೇದವ್ಯಾಸರು ಹೇಳಿದ್ದು. 
*****

"ವ್ಯಾಸೋಚ್ಛಿಷ್ಟಮ್ ಜಗತ್ ಸರ್ವಂ" ಎಂದು ಒಂದು ಹೇಳಿಕೆ ಉಂಟು. "ಈ ಪ್ರಪಂಚದಲ್ಲಿರುವ ಸಾಹಿತ್ಯವೆಲ್ಲ ವ್ಯಾಸರು ಹೇಳಿಬಿಟ್ಟದ್ದು" ಎಂದು ಅದರ ಭಾವ. ಉಚ್ಚಿಷ್ಟ ಅನ್ನುವ ಪದಕ್ಕೆ ಸಾಮಾನ್ಯವಾಗಿ "ತಿಂದು ಬಿಟ್ಟದ್ದು" ಅಥವಾ "ಎಂಜಲು" ಎಂಬುದು ಸಾಮಾನ್ಯ ಅರ್ಥ. ಇದಕ್ಕೆ ಏನಾದರೂ ವಿಶೇಷ ಅರ್ಥ ಇದೆಯೇ ಎನ್ನುವುದನ್ನು ಮುಂದಿನ ಸಂಚಿಕೆಯಲ್ಲಿ ಚರ್ಚಿಸೋಣ. 

Wednesday, April 9, 2025

ಸಿಕ್ಕಿದ್ದು - ದಕ್ಕಿದ್ದು


ಜರ್ಮನಿ ದೇಶದ ಬರ್ಲಿನ್ ನಗರದಲ್ಲಿ ನಡೆದ 1936ನೆಯ  ಇಸವಿಯ ಒಲಿಂಪಿಕ್ಸ್  ಪಂದ್ಯಾವಳಿಗಳು ಅನೇಕ ಕಾರಣಗಳಿಂದ ಬಹಳ ಮಹತ್ವದ್ದಾಗಿತ್ತು. ಮೊದಲ ಮಹಾಯುದ್ಧದ ನಂತರ ಅಡಾಲ್ಫ್ ಹಿಟ್ಲರ್ ನಾಯಕತ್ವದಲ್ಲಿ ಜೆರ್ಮನಿ ಒಂದು ದೊಡ್ಡ ಶಕ್ತಿಯಾಗಿ ಹೊರಹೊಮ್ಮಿತ್ತು. ಮುಂದೆ ಎರಡು ವರುಷಗಳ ನಂತರ ನಡೆಯಲಿದ್ದ ಎರಡನೇ ಮಹಾಯುದ್ಧದ ಮೂಲ ಕಾರಣ ಮತ್ತು ದೊಡ್ಡ ಪಾತ್ರಧಾರಿ ಅಗಲಿದ್ದ ದೇಶದ ರಾಜಧಾನಿ ಬರ್ಲಿನ್ ನಾಲ್ಕು ವರುಷಗಳಿಗೆ ಒಮ್ಮೆ ನಡೆಯುವ ಒಲಿಂಪಿಕ್ಸ್ ಪಂದ್ಯಾವಳಿಗಳಿಗೆ ಆತಿಥೇಯ ನಗರ. ಪ್ರಪಂಚದ ಎಲ್ಲ ಹೆಸರಾಂತ ಕ್ರೀಡಾಪಟುಗಳು ಅಲ್ಲಿ ನೆರೆದಿದ್ದರು. 


ಒಬ್ಬ ಭಾರತೀಯ ಆಟಗಾರ ಆ ಬರ್ಲಿನ್ ಒಲಿಂಪಿಕ್ಸ್  ಕ್ರೀಡೆಗಳಲ್ಲಿ ಬಹಳ ದೊಡ್ಡ ಹೆಸರು ಮಡಿದರು. "ಹಾಕಿ ಮಾಂತ್ರಿಕ" ಎಂದೇ ಹೆಸರಾದ ಮೇಜರ್ ಧ್ಯಾನ್ ಚಂದ್ ಭಾರತ-ಜರ್ಮನಿ ನಡುವಿನ ಫೈನಲ್ ಹಾಕಿ ಪಂದ್ಯದಲ್ಲಿ ಮೂರು ಗೋಲು ಗಳಿಸಿ (ಕೆಲವು ವರದಿ ನಾಲ್ಕು ಎಂದು ಹೇಳುತ್ತವೆ) ಭಾರತ 8 - 1 ಗೋಲುಗಳ ಅಂತರದಿಂದ ಚಿನ್ನದ ಪದಕ ಪಡೆಯಲು ಕಾರಣರಾದರು. ಧ್ಯಾನ್ ಚಂದ್ ಆಟವನ್ನು ನೋಡಿದ ಹಿಟ್ಲರ್ ಮುಕ್ತ ಕಂಠದಿಂದ ಹಾಡಿ ಹೊಗಳಿದನೆಂದು ವರದಿಗಳು ಹೇಳುತ್ತವೆ, 


ಇದೇ ಒಲಿಂಪಿಕ್ಸ್ ಪಂದ್ಯಗಳಲ್ಲಿ ಟ್ರ್ಯಾಕ್ ಅಂಡ್ ಫೀಲ್ಡ್  ಕ್ಷೇತ್ರದಲ್ಲಿ ಅಸಾಧಾರಣ ಸಾಧನೆ ಮಾಡಿದ ಅಥ್ಲೆಟ್ ಅಮೇರಿಕ ಸಂಯುಕ್ತ ಸಂಸ್ಥಾನಗಳ ಜೆಸ್ಸಿ ಒವೆನ್ಸ್. ಕೇವಲ ಒಂದು ಗಂಟೆಯ ಸಮಯದಲ್ಲಿ ನಡೆದ ನಾಲ್ಕು ಪಂದ್ಯಗಳಲ್ಲಿ ಮೂರು ವರ್ಲ್ಡ್ ರೆಕಾರ್ಡ್ ಸ್ಥಾಪಿಸಿ, ನಾಲ್ಕನೆಯದನ್ನು ಸಮವಾಗಿಸಿ ಒಟ್ಟು ನಾಲ್ಕು ಚಿನ್ನದ ಮೆಡಲ್ಲುಗಳನ್ನು ಗೆದ್ದ ಧೀರ. 100 ಮೀಟರ್ ಮತ್ತು  200 ಮೀಟರ್ ಓಟ, ಲಾಂಗ್ ಜಂಪ್ ಮತ್ತು 4x100 ರಿಲೇ ಓಟಗಳಲ್ಲಿ ಚಿನ್ನದ ಪದಕ ಸಾಧಿಸಿದ ಮಹಾನ್ ಕ್ರೀಡಾಪಟು. ಅನೇಕ ದಶಕಗಳವರೆಗೆ ಪ್ರಪಂಚದ ಅತ್ಯಂತ ಶ್ರೇಷ್ಠ ಕ್ರೀಡಾಪಟು ಎನ್ನುವ ಗದ್ದುಗೆಯಲ್ಲಿ ಒಬ್ಬನೇ ಕುಳಿತಿದ್ದ ಸಾರ್ವಭೌಮ. 


ಇಂತಹ ಜೆಸ್ಸಿ ಒವೆನ್ಸ್  ಸ್ಥಾಪಿಸಿದ ನಾಲ್ಕು ಅಥ್ಲೆಟಿಕ್ಸ್ ಚಿನ್ನದ ಪದಕಗಳ ಶ್ರೇಯಸ್ಸು ಮತ್ತೊಮ್ಮೆ ನೋಡಲು ಪ್ರಪಂಚ ಸುಮಾರು ಐವತ್ತು ವರುಷ ಕಾಯಬೇಕಾಯಿತು. 1984ರಲ್ಲಿ ಲಾಸ್ ಏಂಜಲೀಸ್ ಒಲಿಂಪಿಕ್ಸ್  ಕ್ರೀಡಾಕೂಟದಲ್ಲಿ ಅಮೆರಿಕಾದವರೇ ಆದ ಕಾರ್ಲ್ ಲೂಯಿಸ್ ಮತ್ತೆ ಇವೇ ನಾಲ್ಕು ಸ್ಪರ್ಧೆಗಳಲ್ಲಿ ಚಿನ್ನದ ಪದಕ ಗಳಿಸಿ ಜೆಸ್ಸಿ ಒವೆನ್ಸ್  ಸಾಧನೆ ಸರಿಸಮಗಟ್ಟಿದರು. "ಪ್ರಪಂಚದ ಶತಮಾನದ ಶ್ರೇಷ್ಠ ಅಥ್ಲೆಟ್" ಎನ್ನುವ ಹೆಸರು ಸಂಪಾದಿಸಿದರು. ಸುಮಾರು ಹತ್ತು ವರುಷಗಳ ಕಾಲ ಅನೇಕ ಕ್ರೀಡಾಕೂಟಗಳಲ್ಲಿ ಪದಕಗಳ ಸುರಿಮಳೆಯನ್ನೇ ಸುರಿಸಿದರು. 


ಲಾಸ್ ಏಂಜಲೀಸ್ ಒಲಿಂಪಿಕ್ಸ್ ನಡೆದ ಕೆಲವು ದಿವಸಗಳ ನಂತರ ಕಾರ್ಲ್ ಲೂಯಿಸ್ ತಂದೆ ತೀರಿಕೊಂಡಾಗ ಅವರ ಶವಪೆಟ್ಟಿಗೆಯಲ್ಲಿ ಲೂಯಿಸ್ ತಮ್ಮ ಲಾಸ್ ಏಂಜಲೀಸ್ನಲ್ಲಿ ಗೆದ್ದಿದ್ದ ನೂರು ಮೀಟರ್ ಓಟದ ಚಿನ್ನದ ಪದಕ ಇಟ್ಟು ಬೀಳ್ಕೊಟ್ಟರು.  ತಮ್ಮ ಸಾಧನೆಗಳಿಗೆ ತಂದೆ ಪಟ್ಟ ಶ್ರಮಕ್ಕೆ ಕೃತಜ್ಞತೆ ಸೂಚಿಸುವ ಸಲುವಾಗಿ ಅವರು ಹೀಗೆ ಮಾಡಿದರಂತೆ. ಪಕ್ಕದಲ್ಲಿದ್ದ ತನ್ನ ತಾಯಿಗೆ "ಚಿಂತಿಸಬೇಡ. ನಾನು ಇನ್ನೊಂದು ನೂರು ಮೀಟರ್ ಓಟದ ಒಲಿಂಪಿಕ್ಸ್ ಚಿನ್ನದ ಪದಕ ಗೆದ್ದೇಗೆಲ್ಲುತ್ತೇನೆ" ಎಂದು ಹೇಳಿದರಂತೆ. ಅದರಂತೆ ತಯಾರಿ ಮಾಡಿದರು ಸಹ. 


ಮುಂದಿನ ಒಲಿಂಪಿಕ್ಸ್ ಪಂದ್ಯಗಳು ನಡೆದಿದ್ದು ದಕ್ಷಿಣ ಕೊರಿಯಾ ದೇಶದ ಸಿಯೋಲ್ ನಗರದಲ್ಲಿ. 1988 ಸಿಯೋಲ್ ಒಲಿಂಪಿಕ್ಸ್  ಕ್ರೀಡಾಕೂಟದಲ್ಲಿ ಕೆನಡಾ ದೇಶದ ಬೆನ್ ಜಾನ್ಸನ್ ಕಾರ್ಲ್ ಲೂಯಿಸ್ ಎದುರಿಸಿದ ಪ್ರಬಲ ಪ್ರತಿಸ್ಪರ್ಧಿ. 1984 ಲಾಸ್ ಏಂಜಲೀಸ್ ಕೂಟದಲ್ಲಿ ಕಂಚಿನ ಪದಕ ಗೆದ್ದಿದ್ದ ಬೆನ್ ಜಾನ್ಸನ್ ಸಿಯೋಲ್ ನಗರದ ಒಲಿಂಪಿಕ್ಸ್ ಕೂಟದಲ್ಲಿ  ಚಿನ್ನದ ಪದಕ ಗೆದ್ದರು. ಕಾರ್ಲ್ ಲೂಯಿಸ್ ಬೆಳ್ಳಿ ಪದಕ ಪಡೆದರು. ಆದರೆ ಮೂರು ದಿನಗಳ ನಂತರ ಬಂದ ಮಾದಕ ದ್ರವ್ಯ ಸೇವನೆಯ ವರದಿಯಲ್ಲಿ ಬೆನ್ ಜಾನ್ಸನ್ ದೋಷಿ ಎಂದು ಹೊರಬಿತ್ತು. ಮೂರು ದಿನದ ನಂತರ ಜಾನ್ಸನ್ ಪದಕ ಕಿತ್ತು, ಕಾರ್ಲ್ ಲೂಯಿಸ್ ಚಿನ್ನದ ಪದಕ ವಿಜೇತ ಎಂದು ಘೋಷಿಸಿದರು. ತಾಯಿಗೆ ಹೇಳಿದ ಮಾತಿನಂತೆ ಕಾರ್ಲ್ ಲೂಯಿಸ್ ಮತ್ತೊಂದು 100 ಮೀಟರ್ ಓಟದ ಒಲಿಂಪಿಕ್ಸ್ ಚಿನ್ನದ ಪದಕ ಗಳಿಸಿದಂತಾಯಿತು. 


ಒಲಿಂಪಿಕ್ಸ್ ಕ್ರೀಡೆಗಳ ಇತಿಹಾಸದಲ್ಲಿ ಇದೊಂದು ಬಹಳ ಚರ್ಚಿತವಾದ ಅಧ್ಯಾಯ. ತಿಂಗಳುಗಟ್ಟಲೆ ಪತ್ರಿಕೆಗಳು ನೂರಾರು ಪುಟಗಳು ಈ ವಿಷಯದ ಪರ-ವಿರೋಧ ಪ್ರಕಟಣೆ ಮಾಡಿದವು. ಆ ವಿಷಯ ಹಾಗಿರಲಿ. "ಸಿಕ್ಕಿದ್ದು - ದಕ್ಕಿದ್ದು" ಎನ್ನುವ ಶೀರ್ಷಿಕೆಯ ಚರ್ಚೆಯ ಹಿನ್ನೆಲೆಯಲ್ಲಿ ಹೇಳುವುದಾದರೆ ಬೆನ್ ಜಾನ್ಸನ್ ಅವರಿಗೆ ಚಿನ್ನದ ಪದಕ ಸಿಕ್ಕಿತು. ಆದರೆ ದಕ್ಕಲಿಲ್ಲ. ಕಾರ್ಲ್ ಲೂಯಿಸ್ ಅವರಿಗೆ ಸ್ವಲ್ಪ ತಡವಾದರೂ ಚಿನ್ನದ ಪದಕ ಸಿಕ್ಕಿತು ಮತ್ತು ದಕ್ಕಿತು. 


***** 

"ಯೋಗಕ್ಷೇಮ" ಅನ್ನುವ ಪದವನ್ನು ಕೆಲವು ದಶಕಗಳ ಹಿಂದೆ ಮಾತಾಡುವಾಗ ಮತ್ತು ಬರವಣಿಗೆಯಲ್ಲಿ ಮತ್ತೆ ಮತ್ತೆ ಉಪಯೋಗಿಸುತ್ತಿದ್ದರು. ನಾವು ಮಾಧ್ಯಮಿಕ ಶಾಲೆಗಳಲ್ಲಿ ಓದುತ್ತಿದ್ದಾಗ "ಪತ್ರಲೇಖನ" ಅಥವಾ "ಕಾಗದ ಬರೆಯುವುದು" ಹೇಗೆ ಎಂದು ಹೇಳಿಕೊಡುತ್ತಿದ್ದರು. ಪತ್ರ ಪ್ರಾರಂಭಮಾಡುವಾಗ ಮೇಲುಗಡೆ ಎಡ ಮೂಲೆಯಲ್ಲಿ "ಕ್ಷೇಮ" ಎಂದೂ, ಬಲಗಡೆಯಲ್ಲಿ ಪತ್ರ ಬರೆಯುವ ಸ್ಥಳ ಮತ್ತು ದಿನಾಂಕ ಬರೆಯಬೇಕೆಂದು ಹೇಳುತ್ತಿದ್ದರು. ಆಗ ಇನ್ನೂ "ಎಸ್ಸೆಮೆಸ್" ಭಾಷೆ ಬಂದಿರಲಿಲ್ಲ. ಪತ್ರದ ಮೊದಲ ಪ್ಯಾರಾದಲ್ಲಿ "ಇಲ್ಲಿ ನಾವೆಲ್ಲರೂ ಕ್ಷೇಮ. ಅಲ್ಲಿ ನಿಮ್ಮೆಲ್ಲರ ಯೋಗಕ್ಷೇಮಕ್ಕೆ ಕಾಗದ ಬರೆಯುವುದು" ಎನ್ನುವ ಒಕ್ಕಣೆ ಇರುತ್ತಿತ್ತು. ಈ "ಯೋಗಕ್ಷೇಮ" ಅಂದರೆ ಏನು? 


ಕೆಲವು ದಶಕಗಳ ಹಿಂದೆ ಹಳ್ಳಿಗಳಲ್ಲಿ ಮತ್ತು ದೊಡ್ಡ ಊರುಗಳಲ್ಲಿ ಕೂಡ ಆಸ್ಪತ್ರೆಗಳಿರಲಿಲ್ಲ. ದೂರದ ಊರುಗಳ ಆಸ್ಪತ್ರೆಗಳಿಗೆ ಹೋಗಲು ಜನರ ಬಳಿ ದುಡ್ಡಿರಲಿಲ್ಲ. ಆಸ್ಪತ್ರೆಗಳಲ್ಲಿ ಸಹ ಇಂದಿನಂತೆ ಹೆಚ್ಚಿನ ಸೌಲಭ್ಯಗಳು ಇರಲಿಲ್ಲ. ಸಾಮಾನ್ಯವಾಗಿ ಹತ್ತಿರದ "ನಾಟಿ ವೈದ್ಯ" ಕೊಡುವ ಮದ್ದಿನಿಂದ ಖಾಯಿಲೆ-ಕಸಾಲೆಗಳಿಗೆ ಚಿಕಿತ್ಸೆ ಮಾಡುತ್ತಿದ್ದರು. ಸ್ವಲ್ಪ ವಿದ್ಯಾವಂತರ ಮನೆಯಲ್ಲಿ ಒಂದು ಚಿಕಿತ್ಸೆ ಡಬ್ಬಿ ಮಾಡಿ ಅದರಲ್ಲಿ ಕೆಲವು ಮಾತ್ರೆಗಳ ಸರಕನ್ನು ಇಟ್ಟಿರುತ್ತಿದ್ದರು. ಚಿಕಿತ್ಸೆ ಇದರಿಂದಲೇ ನಡೆಯುತ್ತಿತ್ತು. ಜಾಕಾಯಿ, ಅಳಲೆಕಾಯಿ, ಶುಂಠಿ, ಅರಿಸಿನ, ಔಷಧಿ ಗುಣವಿರುವ ಸೊಪ್ಪುಗಳು, ಇವುಗಳಿಂದ ರೋಗಿಗಳ ಶುಶ್ರೂಷೆ ನಡೆಯುತ್ತಿತ್ತು. ಆಯುರ್ವೇದ ಪಂಡಿತರು ಬಾಣಂತಿಯರಿಗಾಗಿ "ಮಹಾ ಸೌಭಾಗ್ಯ ಶುಂಠಿ ಲೇಹ್ಯ" ಮಾಡಿಕೊಡುತ್ತಿದ್ದರು. ನಂಜನಗೂಡು ಬಿ. ವಿ. ಪಂಡಿತರ "ಸದ್ವೈದ್ಯಶಾಲಾ" ತಯಾರಿತ ಜ್ವರಕೇಸರಿ, ಸುಖಭೇದಿ ಮತ್ತು ಕಸ್ತೂರಿ ಮಾತ್ರೆ ಮುಂತಾದವು ಇಂತಹ ಡಬ್ಬಿಯಲ್ಲಿ ಇರುತ್ತಿದ್ದವು. 


ಮನೆಯಲ್ಲಿ ಯಾರಿಗಾದರೂ ಜ್ವರ ಬಂದರೆ "ಜ್ವರಕೇಸರಿ" ಮಾತ್ರೆ ಕೊಡುತ್ತಿದ್ದರು. ಮಾತ್ರೆ ನುಂಗಲಾರದ ಚಿಕ್ಕ ಮಕ್ಕಳಿಗೆ ಅದನ್ನು ಜೇನುತುಪ್ಪದಲ್ಲಿ ಕಲೆಸಿ ಒಂದು ವೀಳೆಯದೆಲೆ ಮೇಲೆ ಇಟ್ಟು ನೆಕ್ಕಿಸುತ್ತಿದ್ದರು. ಶಿಶುಗಳಿಗೆ ಒಂದು ಒಳಲೆಯಲ್ಲಿ ಅದನ್ನು ಹಾಲಿನಲ್ಲಿ ಪುಡಿ ಮಾಡಿ ಬೆರೆಸಿ ಕುಡಿಸುತ್ತಿದ್ದರು. ಅನೇಕವೇಳೆ ಒಳಲೆಯ ಔಷಧದ ಹಾಲು ಪೂರ್ತಿ ಶಿಶುವಿನ ಹೊಟ್ಟೆಗೆ ಸೇರುತ್ತಿರಲಿಲ್ಲ. ಅರ್ಧ ಹೋಗಿ ಅರ್ಧ ಶಿಶು ಉಗುಳಿ ಹೊರಹಾಕುತ್ತಿತ್ತು. "ಔಷದಿ ಪೂರ್ತಿ ದಕ್ಕಲಿಲ್ಲ" ಎನ್ನುತ್ತಿದ್ದರು. ಔಷದಿ ಸಿಕ್ಕಿತು. ಆದರೆ ದಕ್ಕಲಿಲ್ಲ. 


ಒಬ್ಬರು ಬಹಳ ಕಷ್ಟ ಪಟ್ಟು ಸಾಲ-ಸೋಲ ಮಾಡಿ ಮನೆ ಕಟ್ಟಿದ್ದಾಯಿತು. ಆದರೆ ಮನೆ ಕಟ್ಟಿ ಮುಗಿಯುವ ಹೊತ್ತಿಗೆ ಕೆಲಸದಲ್ಲಿ ದೂರದ ಊರಿಗೆ ವರ್ಗಾವಣೆ ಆಯಿತು. ಕಟ್ಟಿದ ಮನೆಯಲ್ಲಿ ವಾಸ ಮಾಡುವಂತಿಲ್ಲ. ಮನೆ ಕಟ್ಟುವ ಭಾಗ್ಯ ಸಿಕ್ಕಿತು. ಸ್ವಂತ ಮನೆ ಆಯಿತು. ಆದರೆ ಅದರಲ್ಲಿ ಇರುವ ಸಂತಸ ಸಿಗಲಿಲ್ಲ. ಇಂತಹ ಅನೇಕ ಉದಾಹರಣೆಗಳನ್ನು ಕೊಡಬಹುದು. "ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ" ಅನ್ನುವ ಗಾದೆ ಇಂತಹ ಸಂದರ್ಭಗಳಿಂದಲೇ ಹುಟ್ಟಿರಬೇಕು. 


*****

ಈ ಸಿಕ್ಕಿತು-ದಕ್ಕಿತು ಮತ್ತು ಯೋಗ-ಕ್ಷೇಮ ಎರಡೂ ಒಂದೇ. ಜೀವನದಲ್ಲಿ ಅನೇಕ ಪದಾರ್ಥಗಳು ಸಿಕ್ಕುತ್ತವೆ. ಆದರೆ ದಕ್ಕುವುದಿಲ್ಲ. ಯೋಗ ಎಂದರೆ ಯಾವುದೋ ಒಂದು ಸುಖ, ಸಂಪತ್ತು, ಪದವಿ, ಭಾಗ್ಯ ಸಿಕ್ಕುವ ಅವಕಾಶ. ಕ್ಷೇಮ ಅಂದರೆ ಅಂತಹ ಸಿಕ್ಕಿದ ಸುಖ, ಪದವಿ ಅಥವಾ ಭಾಗ್ಯ ದಕ್ಕುವುದು. ಸಿಕ್ಕಿದಾಗ ಅನುಭವ ಇಲ್ಲ. ಸಿಕ್ಕಿದ್ದು ದಕ್ಕಿದಾಗಲೇ ಅದರ ಅನುಭವ. ತುತ್ತು ಕೈಗೇನೋ ಬಂತು.  ಆದರೆ ಬಾಯಿಗೆ ಬೀಳುವ ಮುನ್ನ ಮಣ್ಣಲ್ಲಿ ಬಿದ್ದುಹೋಯಿತು!  ಸಿಕ್ಕದಿದ್ದರೆ ನಿರಾಸೆಯೇನೋ ಆಗುತ್ತಿತ್ತು. ಆದರೆ ಸಿಕ್ಕಮೇಲೆ ದಕ್ಕದಿದ್ದಾಗ ಎರಡರಷ್ಟು ನಿರಾಸೆ. ಬಹಳ ಪ್ರಯತ್ನಪಟ್ಟಮೇಲೆ ಹೀಗಾದರೆ ಹೇಳಲಾರದಷ್ಟು ನಿರಾಸೆ ಮತ್ತು ಹಿಂಸೆ. 


ಜ್ಯೋತಿಷ್ಯದಲ್ಲಿ ಜನ್ಮ ಕುಂಡಲಿ ನೋಡಿ ಕೆಲವರಿಗೆ "ಗಜಕೇಸರಿ ಯೋಗ" ಇದೆ ಅನ್ನುತ್ತಾರೆ. ಮತ್ತೆ ಕೆಲವರಿಗೆ "ರಾಜಯೋಗ". ಇದೇ ರೀತಿ ಅನೇಕ ಯೋಗಗಳು. ಅನೇಕರಿಗೆ ಈ ರೀತಿಯ ಯೋಗಗಳು ಇರುತ್ತವೆ. ಒಂದೇ ಸಮಯದಲ್ಲಿ ಹುಟ್ಟಿದ ಅನೇಕರಿಗೆ ಒಂದೇ ಕುಂಡಲಿ ಇರುತ್ತದೆ. ಆದರೆ ಎಲ್ಲರಿಗೂ ಅದೇ ಯೋಗ ಇದ್ದರೂ ಫಲ ಬೇರೆ ಬೇರೆ. ಅದರ ಫಲ ಎಲ್ಲರಿಗೂ ಒಂದೇ ಸಮನಾಗಿ ಸಿಗುವುದಿಲ್ಲ. ಯೋಗ ಇದ್ದರೆ ಮಾತ್ರ ಸಾಲದು. ಅದರ ಜೊತೆ ಸಿಕ್ಕಿದ್ದು ಕ್ಷೇಮವಾಗಿ ಬರಬೇಕು. ಇಲ್ಲದಿದ್ದರೆ ಸಿಕ್ಕುತ್ತದೆ. ಆದರೆ ದಕ್ಕುವುದಿಲ್ಲ. 


*****


ಮುಖ್ಯಪ್ರಾಣರು ಎಲ್ಲ ಜೀವರಲ್ಲೂ ಉಸಿರಾಡಿಸುತ್ತಾರೆ. ಪ್ರತಿ ಉಸಿರಿನಲ್ಲೂ ಹಂಸ ಮಂತ್ರ ಜಪ ಮಾಡಿ ಅದರ ಪುಣ್ಯ ಅವರವರ ಖಾತೆಗೆ ಹಾಕುತ್ತಾರೆ. ಈ ರೀತಿಯ ಹಂಸ ಮಂತ್ರ ಜಪದ ಫಲದ ಯೋಗ ಎಲ್ಲರಿಗೂ ಇದೆ. ಆದರೆ ಅದನ್ನು ತಿಳಿದು ಅವರಿಗೆ ಕೃತಜ್ಞತೆ ಸಲ್ಲಿಸಿದಾಗ ಮಾತ್ರ ನಮಗೆ ಅದರ ಪುಣ್ಯದ ಭಾಗ. ಆಗ ಯೋಗ-ಕ್ಷೇಮ ಆಯಿತು. ಇಲ್ಲದಿದ್ದರೆ ಸಿಕ್ಕಿದರೂ ದಕ್ಕಲಿಲ್ಲ ಎಂದಾಯಿತು. ನಮ್ಮ ಖಾತೆಗೆ ಹಣ ಬಂದು ಬಿದ್ದಿದೆ. ನಾವು ಖಾತೆಯನ್ನೇ ನೋಡಲಿಲ್ಲ. ಹಣ ತೆಗೆದು ಉಪಯೋಗಿಸದೆ ನಮ್ಮ ಜೀವನ ಬಡತನದಲ್ಲೇ ಮುಗಿದಂತೆ. ಬಂದ ಯೋಗ ಲ್ಯಾಪ್ಸ್ ಆಯಿತು. ನಾವು ನಿರ್ಭಗ್ಯರಾಗಿ ಉಳಿದೆವು. ಅಷ್ಟೇ.