Saturday, July 19, 2025

ಕೆಸರಿಂದ ಕೆಸರು ತೊಳೆದಂತೆ


ಮನುಷ್ಯನ ಅನೇಕ ಮತ್ತು ತೀರದ ಆಸೆಗಳಲ್ಲಿ ಜೀವನ ಸಂಪದ್ಭರಿತವಾಗಿರಬೇಕೆಂಬುದೂ ಒಂದು. ಸಕಲ ಸೌಭಾಗ್ಯಗಳೂ ಇರಬೇಕು. ಸರ್ವ ಸಂಪತ್ತುಗಳೂ ಸುತ್ತ-ಮುತ್ತ ತುಂಬಿರಬೇಕು. ಕುಟುಂಬದ ಸದಸ್ಯರೆಲ್ಲರೂ ಹೇಳಿದಂತೆ ಕೇಳುತ್ತಾ ಓಡಾಡಿಕೊಂಡಿರಬೇಕು. ದೊಡ್ಡ ಅಧಿಕಾರ ಇರಬೇಕು. ಸಮಾಜದಲ್ಲಿ ಮನ್ನಣೆ, ಗೌರವಗಳು ಸಿಗುತ್ತಿರಬೇಕು. ಹೀಗೆ ನಾನಾ ಬಗೆಯ ಅಸಂಖ್ಯ ಆಸೆಗಳು. 

ಅನೇಕ ಭಾಗ್ಯಗಳಲ್ಲಿ ಅಷ್ಟ ಐಶ್ವರ್ಯಗಳೂ ಸೇರಿದುವು. ಈ ಎಂಟರಲ್ಲಿ ಆಯುಸ್ಸು, ಅರೋಗ್ಯ ಮತ್ತು ಐಶ್ವರ್ಯಗಳು ಬೇಕಾದುವುಗಳ ಪಟ್ಟಿಯಲ್ಲಿ ಎಲ್ಲದರ ಮೇಲೆ ಕೂಡುತ್ತವೆ. ಆದರೆ ಆರೋಗ್ಯವಿದ್ದವರಿಗೆ ಕೆಲವೊಮ್ಮೆ ಆಯುಸ್ಸು ಇರುವುದಿಲ್ಲ. ಆಯುಸ್ಸು ಇದ್ದವರಿಗೆ ಬಹಳ ಅನಾರೋಗ್ಯ ಕಾಡುವುದು. ಆಯುಸ್ಸು ಮತ್ತು ಅರೋಗ್ಯ ಎರಡೂ ಇದ್ದವರಿಗೆ  ಬಡತನದ ಬವಣೆ. ಅಥವಾ ಇನ್ನೇನಾದರೂ ಒಂದಿಲ್ಲ ಎನ್ನುವ ಕೊರಗು. ಕೆಲವರಿಗೆ ಮಕ್ಕಳಿಲ್ಲ ಎನ್ನುವ ಚಿಂತೆ. ಮತ್ತೆ ಕೆಲವರಿಗೆ ಹೆತ್ತ ಮಕ್ಕಳು ಹತ್ತಿರ ಇಲ್ಲ ಅನ್ನುವ ವ್ಯಥೆ. ಮಕ್ಕಳು ಹತ್ತಿರ ಇರುವವರಿಗೆ ಅವರು ಯೋಗ್ಯರಲ್ಲ ಎನ್ನುವ ಯೋಚನೆಗಳು. ಹೀಗೆ ಏನಾದರೂ ಒಂದು ಕೊರತೆ.  

ಆಯುಸ್ಸು, ಅರೋಗ್ಯ ಮತ್ತು ಐಶ್ವರ್ಯಗಳು ಹಾಳಾಗಲು ಕಾರಣಗಳೇನು? ಈ ವಿಷಯವನ್ನು ಹಿಂದಿನ "ಸಂಪತ್ತು ಕಳೆಯುವ ಕಾರಣಗಳು" ಎನ್ನುವ ಶೀರ್ಷಿಕೆಯ ಅಡಿಯಲ್ಲಿ ನೋಡಿದ್ದೆವು. ಇದನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು.  ಶ್ರೀ ಗೋಪಾಲದಾಸರ "ಎನ್ನ ಬಿನ್ನಪ ಕೇಳು, ಧನ್ವಂತ್ರಿ ದಯ ಮಾಡು" ಎನ್ನುವ ದೇವರನಾಮದಲ್ಲಿ ಸೂಚಿತವಾದ ಈ ಕಾರಣಗಳ ಚರ್ಚೆ ನೋಡಿದ್ದೆವು. ಈ ಹಾಡಿನಲ್ಲಿ "ಕೆಸರಿನಿಂದ ಕೆಸರು ತೊಳೆದಂತೆ ಕರ್ಮದ ಪಥವು, ಅಸುನಾಥ ಹರಿಯೇ ಪೊರೆಯೊ" ಎನ್ನುವ ಅಭಿವ್ಯಕ್ತಿಯ ವಿಶೇಷ ವಿಷಯಗಳನ್ನು ಮುಂದೊಮ್ಮೆ ನೋಡೋಣ ಎಂದಿದ್ದೆವು. ಅದನ್ನು ಈಗ ಸ್ವಲ್ಪ ನೋಡೋಣ. 

*****

"ಕೆಸರಿನಿಂದ ಕೆಸರು ತೊಳೆದಂತೆ ಕರ್ಮದ ಪಥವು" ಅನ್ನುವುದರ ಅರ್ಥವೇನು? ಅದರ ಮೂಲ ಎಲ್ಲಿದೆ? ಯಾರಾದರೂ ಕೆಸರಿನಿಂದ ಕೊಳಕಾಗಿರುವ ವಸ್ತುವನ್ನು ಕೆಸರು ನೀರಿನಿಂದ ತೊಳೆಯುವ ತಪ್ಪು ಮಾಡುತ್ತಾರೆಯೇ? ಇವು ನಿಜವಾಗಿ ಕೇಳಲೇಬೇಕಾದ ಪ್ರಶ್ನೆಗಳು. 

ಯಾವುದೋ ಒಂದು ಕಾರಣಕ್ಕೆ ಬಟ್ಟೆ ಕೊಳಕಾಯಿತು ಅನ್ನೋಣ. ಬಿಳಿ ಬಟ್ಟೆ ಉಟ್ಟು ಹೊರಗಿನ ಕೆಲಸಕ್ಕೆ ಬಂದದ್ದಾಯಿತು. ಮಳೆ ಬಂತು. ಬಟ್ಟೆ ಕೊಳಕಾಯಿತು. ಯಾರೋ ಒಬ್ಬ ಸ್ಕೂಟರ್ ಸವಾರ ಮಳೆಯ ರಸ್ತೆಯಲ್ಲಿಯೇ ವೇಗವಾಗಿ ಹೋದ. ಅವನಿಗೆ ಅದೊಂದು ಆಟ. ನೀರು ಎರಚಿತು. ಬಟ್ಟೆ ಕೆಸರಿನಿಂದ ನೆನೆಯಿತು. ಈಗ ಮಾಡುವುದು? ಮನೆಗೆ ಹೋದಮೇಲೆ ಮೈ ಶುಚಿ ಮಾಡಿಕೊಂಡು, ಕೊಳೆಯ ಬಟ್ಟೆಯನ್ನು ತಿಳಿ ನೀರಿನಿಂದ ಒಗೆದು ಸ್ವಚ್ಛ ಮಾಡಬೇಕು. ಕೆಲವು ವೇಳೆ ಎಷ್ಟೇ ಸ್ವಚ್ಛ ಮಾಡಿದರೂ ಮೊದಲಿನಂತೆ ಬಟ್ಟೆ ಬಿಳಿ ಆಗುವುದಿಲ್ಲ. ಮೂರು-ನಾಲ್ಕು ಒಗೆತ ಆದಮೇಲೆ ಸರಿ ಹೋಗಬಹುದು. ಇಂತಹ ಸ್ಥಿತಿಯಲ್ಲಿ ಆ ಕೊಳೆಯ ಬಟ್ಟೆಯನ್ನು ಅದೇ ರಸ್ತೆಯ ಪಕ್ಕ ನಿಂತಿರುವ ಕೆಸರು ನೀರಿನಿಂದ ಒಗೆದರೆ ಹೇಗಾಗಬೇಡ? ಬಟ್ಟೆಗೆ ಮತ್ತಷ್ಟು ಕೆಸರು ಅಂಟಿಕೊಂಡು ಇನ್ನಷ್ಟು ರಾಡಿಯಾದೀತೇ ವಿನಃ ಸ್ವಚ್ಛವಂತೂ ಆಗುವುದಿಲ್ಲ. 

ಒಂದು ಗಾಜಿನ ಪಾತ್ರೆಯಲ್ಲಿ ಎಲ್ಲರಿಗೂ ಸುರೆ (ವೈನ್ ಅನ್ನೋಣ) ಹಂಚಿದ್ದಾರೆ. ಆ ಕಾರಣ ಅದಕ್ಕೆ ಸ್ವಲ್ಪ ಸುರೆ ಅಂಟಿಕೊಂಡಿದೆ. ಈಗ ಅದನ್ನು ಸ್ವಚ್ಛ ಮಾಡಬೇಕು. ಅದನ್ನು ಇನ್ನಷ್ಟು ಸುರೆ ಸುರಿದು ತೊಳೆದರೆ? ಅದು ಹೇಗೆ ಸ್ವಚ್ಛವಾದೀತು? ತಿಳಿಯಾದ ನೀರಿನಿಂದ ಮಾತ್ರ ಅದು ಶುದ್ಧವಾಗಬಲ್ಲದು. ಇಲ್ಲದಿದ್ದರೆ ಅದು ಇನ್ನಷ್ಟು ಸುರೆಯಲ್ಲಿ ಮುಳುಗೀತೇ ವಿನಃ ಶುದ್ಧವಾಗುವುದು ಸಾಧ್ಯವೇ ಇಲ್ಲ. 

ಇದು ಜೀವನದ ಒಂದು ಕಟು ಸತ್ಯ. 
*****

ಮಹಾಭಾರತದ ಪ್ರಸಂಗ. ಧರ್ಮಕ್ಷೇತ್ರ ಕುರುಕ್ಷೇತ್ರದ ಹದಿನೆಂಟು ದಿನಗಳ ಘನ ಘೋರ ಯುದ್ಧ ಮುಗಿದಿದೆ. ಹದಿನೆಂಟು ಅಕ್ಷೋಹಿಣಿ ಸೈನ್ಯ ನಾಶವಾಗಿದೆ. ಎಲ್ಲರ ಮನೆಯಲ್ಲೂ ಯಾರೋ ಒಬ್ಬರಾದರೂ ಯುದ್ಧದಲ್ಲಿ ಸತ್ತಿದ್ದಾರೆ. ಕೆಲವರ ಮನೆಯಲ್ಲಿ ಒಂದಕ್ಕಿಂತ ಹೆಚ್ಚು ಮಂದಿ ಯುದ್ಧದ ನಂತರ ಇಲ್ಲವಾಗಿದ್ದಾರೆ. ಎಲ್ಲೆಲ್ಲೂ ಸೂತಕದ ಛಾಯೆ. ದ್ರೋಣ, ಕರ್ಣ, ಅಭಿಮನ್ಯು, ನೂರು ಮಂದಿ ಕೌರವರು, ಶಲ್ಯ, ಶಕುನಿ, ಮತ್ತನೇಕ ವೀರರು ಸ್ವರ್ಗಸ್ಥರಾದರು. 

ಮುಂದಿನ ಜೀವನ ನಡೆಯಬೇಕಲ್ಲ. ಯುಧಿಷ್ಠಿರನಿಗೆ ಪಟ್ಟಾಭಿಷೇಕವಾಯಿತು. ಅಷ್ಟು ದುಃಖದಲ್ಲಿ ಒಂದಷ್ಟು ಸುಖ. ಜೀವನವೇ ಹೀಗೆ. ಸುಖ-ದುಃಖಗಳು ಜೊತೆ ಜೊತೆ. ಅದಕ್ಕೇ ಯುಗಾದಿಯಂದು ಬೇವು-ಬೆಲ್ಲ ತಿನ್ನುವುದು. ಪಟ್ಟಾಭಿಷೇಕದ ಸಂಭ್ರಮದಲ್ಲೂ ಧರ್ಮರಾಯನಿಗೆ ಸಂತೋಷವಿಲ್ಲ. ಇಷ್ಟೊಂದು ಮಂದಿ ಬಂಧು-ಬಾಂಧವರನ್ನು, ಅದೆಷ್ಟೋ ಅಣ್ಣ-ತಮ್ಮಂದಿರ ಜಗಳಕ್ಕೆ ಸಂಬಂಧಿಸದ ಅಮಾಯಕರನ್ನು ಸೇರಿಸಿ, ಕೊಂದು ಸಂಪಾದಿಸಿದ ಸಾಮ್ರಾಜ್ಯ. ಇಲ್ಲಿ ತಲೆಯ ಮೇಲೆ ಕಿರೀಟ ಬಂದು ಕೂತಿದೆ. ಅಲ್ಲಿ ತಾತ ಭೀಷ್ಮರು ಚೂಪು ಬಾಣಗಳ ಮಂಚದ ಮೇಲೆ ಮಲಗಿದ್ದಾರೆ. ಯಾವ ಸುಖಕ್ಕೆ ಈ ರಾಜ್ಯ-ಕೋಶಗಳು? ಅವನಿಗೆ ತಡೆಯಲಾಗದ ದುಗುಡ-ದುಮ್ಮಾನ. ಪಾರ್ಥನಿಗೆ ಯುದ್ಧಕ್ಕೆ ಮೊದಲು ಕ್ಲೈಬ್ಯ ಬಂದಿತು. ಧರ್ಮರಾಯನಿಗೆ ಯುದ್ಧದ ನಂತರ ಬಂದಿದೆ. 

ಶ್ರೀ ಕೃಷ್ಣನ ಮುಂದೆ ದುಃಖ ತೋಡಿಕೊಳ್ಳುತ್ತಾನೆ. ಶ್ರೀಕೃಷ್ಣ ಅವನನ್ನು ಸಮಾಧಾನ ಪಡಿಸುತ್ತಾನೆ. ಒಂದು ಚಿಕ್ಕ ಗೀತೋಪದೇಶ ಅವನಿಗೂ ಆಗುತ್ತದೆ. ಆದರೆ ಯುಧಿಷ್ಠಿರನಿಗೆ ಸಮಾಧಾನವಿಲ್ಲ. ಶ್ರೀಕೃಷ್ಣನು ಅವನಿಗೆ ಅಶ್ವಮೇಧ ಯಾಗ ಮಾಡಲು ಸೂಚಿಸುತ್ತಾನೆ. ಅದರಿಂದ ಅವನು ಯುದ್ಧದಿಂದ ಬಂದಿದೆ ಅಂದುಕೊಂಡ ಪಾಪಗಳು ತೊಳೆದುಹೋಗುತ್ತವೆ. ಹೀಗೆಂದು ಯಾಗ ಮಾಡಲು ಸೂಚನೆ. 

ಇದಕ್ಕೆ ಉತ್ತರವಾಗಿ ಧರ್ಮರಾಯನು ಹೇಳಿದ್ದನ್ನು ಶ್ರೀಮದ್ ಭಾಗವತದ (1.8.52) ಶ್ಲೋಕ ಹೀಗೆ ಹೇಳುತ್ತದೆ:

ಯಥಾ ಪಂಕೇನ ಪಂಕಾಂಭ: 
ಸುರಯಾ ವಾ ಸುರಾಕೃತಂ 
ಭೂತಹತ್ಯಂ ತಥೈವಕಂ
ನ್ ಯಜ್ನಯಿ ಮರ್ತುಮರ್ಹತಿ    
 
 
"ಹೇಗೆ ಕೆಸರನ್ನು ಕೆಸರಿನಿಂದ ತೊಳೆಯಲಾಗದೋ, ಮತ್ತು ಹೇಗೆ ಮದ್ಯಪಾತ್ರೆಯನ್ನು ಮದ್ಯದಿಂದ ಶುದ್ಧಿಮಾಡಲಾಗದೋ, ಹಾಗೆಯೇ ಮನುಷ್ಯರನ್ನು ಕೊಂದ ಪಾಪಗಳನ್ನು ಪ್ರಾಣಿಗಳನ್ನು ಬಲಿ ಕೊಟ್ಟು ಕಳೆದುಕೊಳ್ಳಲಾಗದು" 

ಧರ್ಮರಾಯನ ಈ ದುಃಖ ಶಮನವಾಗುವ ಮುನ್ನ ರಣರಂಗದಲ್ಲಿ ಶರಶಯ್ಯೆಯಲ್ಲಿ ಮಲಗಿರುವ ಭೀಷ್ಮರನ್ನು ನೋಡಲು ಎಲ್ಲರೂ ಹೋಗುತ್ತಾರೆ. ಅಲ್ಲಿ ಭೀಷ್ಮರು ಧರ್ಮರಾಯನಿಗೆ ಅನೇಕ ವಿಷಯಗಳ ಬಗ್ಗೆ ವಿವಿಧ ರೀತಿಯಲ್ಲಿ ತಿಳಿಸಿಕೊಡುತ್ತಾರೆ. ನಂತರ ಅವನು ಅಶ್ವಮೇಧ ಯಾಗ ಮಾಡುತ್ತಾನೆ. ಈ ವಿವರಗಳೆಲ್ಲ ಮಹಾಭಾರತದಲ್ಲಿ ಅಶ್ವಮೇಧ ಪರ್ವದಲ್ಲಿ ಸಿಗುತ್ತವೆ. 

 ***** 

ಹರಿದಾಸರ ಪದ, ಸುಳಾದಿ, ಉಗಾಭೋಗಗಳಲ್ಲಿ ಬರುವ ಪದಪುಂಜಗಳಲ್ಲಿ ವೈದಿಕ ವಾಂಗ್ಮಯದ ತಿರುಳಿನ ಸೂಚನೆಗಳು ಇರುತ್ತವೆ. ನೋಡುವುದಕ್ಕೆ, ಕೇಳುವುದಕ್ಕೆ ಆಡುಭಾಷೆಯ ಮಾತಾಗಿದ್ದರೂ ಅವುಗಳ ಹಿಂದೆ ಗಾಢವಾದ ಚಿಂತನೆ ಇರುವುದು. ಈ "ಕೆಸರಿನಿಂದ ಕೆಸರು ತೊಳೆದಂತೆ" ಅನ್ನುವುದು ಹೀಗೆಯೇ ಶ್ರೀಮದ್ ಭಾಗವತದ ಮೇಲೆ ಹೇಳಿದ ಶ್ಲೋಕದ ಸಾರಾಂಶವನ್ನು ಹೇಳುವ ರೀತಿ. ವಿಶಾಲ ವಾಂಗ್ಮಯದ ಆಳವಾದ ಪರಿಚಯ ಆಗುತ್ತಿದ್ದಂತೆ ಅವೇ ಪದ, ಸುಳಾದಿಗಳ ವಿಶೇಷಾರ್ಥಗಳು ತೆರೆದುಕೊಳ್ಳುತ್ತವೆ.  

ಪ್ರತಿ ಜೀವಿ ಹುಟ್ಟುವಾಗ ಅವನ (ದೇಹ ಗಂಡಾಗಿರಬಹುದು ಅಥವಾ ಹೆಣ್ಣಾಗಿರಬಹುದು) ಜೊತೆ ಪರಮಾತ್ಮನೂ ಮತ್ತು ಮುಖ್ಯ ಪ್ರಾಣನು ಜನಿಸುತ್ತಾರೆ. ಅವರಿಬ್ಬರೂ ಇರುವವರೆಗೆ ಜೀವನ ಈ ದೇಹದಲ್ಲಿಯ ಜೀವನಯಾತ್ರೆ. ಅವರು ದೇಹ ಬಿಟ್ಟು ಹೊರಟರೆ ವ್ಯಾಪಾರ ಮುಗಿಯಿತು. (ಸಾಮಾನ್ಯ ವ್ಯವಹಾರದಲ್ಲಿ ವ್ಯಾಪಾರ ಎಂದರೆ ಕೊಡು-ಕೊಳ್ಳುವಿಕೆಯ ರೀತಿ, ವ್ಯಾಪಾರಕ್ಕೆ ಇಲ್ಲಿ ಚಟುವಟಿಕೆ (ಆಕ್ಟಿವಿಟಿ) ಎಂದು ಅರ್ಥ).  ಪ್ರಾಣವಾಯು (ಅಸು) ಆಡುವುದು ನಿಂತರೆ "ಅಸು ನೀಗಿದರು" ಎನ್ನುತ್ತಾರೆ. ಆದ್ದರಿಂದ ಆ ಪರಮಾತ್ಮನಿಗೆ "ಅಸುನಾಥ"ಎಂದು ಹೇಳುವುದು. ಉಸಿರು ಎನ್ನುವ ಆಸುವಿಗೆ ಅಥವಾ ಪ್ರಾಣನಿಗೆ ಒಡೆಯ ಆದುದರಿಂದ ಅಸುನಾಥ, ಪ್ರಾಣನಾಥ ಅಥವಾ ಪ್ರಾಣೇಶ. 

*****

"ದುಷ್ಕರ್ಮ ಪರಿಹರಿಸೋ" ಅನ್ನುವುದನ್ನು ಮತ್ತು ಅಂಟಿಕೊಂಡ ಕೊಳೆಯನ್ನು ತೊಳೆಯಲು ಏನು ಮಾಡಬೇಕೆನ್ನುವುದನ್ನು ಮುಂದಿನ ಒಂದು ಸಂಚಿಕೆಯಲ್ಲಿ ನೋಡೋಣ.

Thursday, July 17, 2025

ಪಾರ್ಥಿವ ಶರೀರ


ಚಿತ್ರರಂಗದ ಹಿರಿಯ ನಟಿ, "ಚತುರ್ಭಾಷಾ ತಾರೆ" ಎಂದು ಹೆಸರಾದ ಶ್ರೀಮತಿ ಬಿ. ಸರೋಜಾ ದೇವಿ ಅವರ ನಿಧನ ಕಳೆದ ವಾರ ಸಂಭವಿಸಿ ಕಲಾಲೋಕವನ್ನು ಬಡವಾಗಿಸಿತು.  ಅನೇಕ ದಶಕಗಳ ಕಾಲ ವಿವಿಧ ರೀತಿಯ ಚಲನಚಿತ್ರಗಳ ವಿಶಿಷ್ಟ ಪಾತ್ರಗಳಲ್ಲಿ ಮನೋಜ್ಞ ಅಭಿನಯ ನೀಡಿ, ಕಲಾಸೇವೆ ಸಲ್ಲಿಸಿ, ಕೀರ್ತಿ ಸಂಪಾದಿಸಿದವರು ಅವರು. ಅವರ ಅಂತ್ಯ ಸಂಸ್ಕಾರಗಳು ತಮ್ಮ ಹುಟ್ಟೂರಾದ ರಾಮನಗರ ಜಿಲ್ಲೆ, ಚನ್ನಪಟ್ಟಣ ಬಳಿಯ ದಶಾವರ ಗ್ರಾಮದಲ್ಲಿ ಎರಡು ದಿನಗಳ ಹಿಂದೆ, ಮಂಗಳವಾರ ನಡೆಯಿತು. 

ಈ ಸಂದರ್ಭದಲ್ಲಿ ಕರ್ನಾಟಕ ಮುಖ್ಯ ಮಂತ್ರಿಗಳ ಕಚೇರಿ ನೀಡಿದ ಕನ್ನಡ ಪ್ರಕಟಣೆಯೊಂದು ಅದೇ ಕಚೇರಿಯಿಂದ ಇಂಗ್ಲಿಷಿನಲ್ಲಿ (ಪ್ರಾಯಶಃ ಗೂಗಲ್ ಮೂಲಕ) ತರ್ಜುಮೆಗೊಂಡು "ಮುಖ್ಯ ಮಂತ್ರಿಗಳು ಶ್ರೀಮತಿ ಸರೋಜಾ ದೇವಿಯವರ earthly body ದರ್ಶನ ಪಡೆದು ಅಂತಿಮ ನಮನ ಸಲ್ಲಿಸಿದರು" ಎಂದು ತಿಳಿಸಿತು. 

ಕನ್ನಡದಲ್ಲಿ "ಪಾರ್ಥಿವ ಶರೀರ" ಎಂದು ಹೇಳುವ ರೀತಿ ಇಂಗ್ಲೀಷಿನಲ್ಲಿ ಸಾಮಾನ್ಯವಾಗಿ "mortal remains" ಅನ್ನುತ್ತಾರೆ. ಇಂಗ್ಲಿಷಿಗೆ ಹೀಗೆ "earthly body" ಆಗಿ  ಭಾಷಾಂತರಗೊಂಡ ಸಂದರ್ಭದಲ್ಲಿ ಮಿತ್ರರೊಬ್ಬರು "ಹೀಗೆ ಪಾರ್ಥಿವ ಶರೀರ ಎಂದು ಏಕೆ ಹೇಳುತ್ತಾರೆ?" ಎಂದು ಪ್ರಶ್ನಿಸಿದ್ದಾರೆ. ಅದನ್ನಷ್ಟು ನೋಡೋಣ. 

ಪಾರ್ಥಿವ ಅನ್ನುವ ಪದದ ಮೂಲ "ಪೃಥ್ವಿಯಿಂದ ಆದದ್ದು" ಎನ್ನುವುದರಿಂದ ಬಂದದ್ದು. ಈ ಭೂಮಿಗೆ "ಪೃಥ್ವಿ" ಎಂದು ಹೆಸರು ಬಂದದ್ದು "ಪೃಥು ಚಕ್ರವರ್ತಿ" ಕಡೆಯಿಂದ. ಜೀವ ಕೊಟ್ಟವನು ತಂದೆ. ಹಾಗೆಯೇ ಜೀವ ಉಳಿಸಿದವನೂ ತಂದೆಯೇ. ಹಸುವಿನ ರೂಪದಲ್ಲಿ ತಪ್ಪಿಸಿಕೊಂಡು ಓಡುತ್ತಿದ್ದ ಭೂದೇವಿಯ ಸಂಹಾರ ಮಾಡಲು ಹೊರಟ ಪೃಥು, ಅವಳ  ಮನವಿಯ ಮೇರೆಗೆ ಜೀವದಾನ ಮಾಡಿದ. ಆದ್ದರಿಂದ ಭೂದೇವಿಯು ಪೃಥುವಿನ ಮಗಳಾಗಿ, "ಪೃಥ್ವಿ" ಎಂದು ಹೆಸರು ಪಡೆದಳು. ಈ ಪೃಥು ಚಕ್ರವರ್ತಿ ಯಾರು? ನಾವು ವಾಸಿಸುವ ಭೂಮಿಗೆ "ಪೃಥ್ವಿ" ಎಂದು ಹೆಸರು ಏಕೆ ಬಂದಿತು? ಈ ಪ್ರಶ್ನೆಗಳಿಗೆ ಉತ್ತರಕ್ಕೆ ಇಲ್ಲಿ ಕ್ಲಿಕ್ ಮಾಡಿ ಓದಿ ತಿಳಿಯಬಹುದು. 

*****

"ಮಣ್ಣಿಂದ ಕಾಯ ಮಣ್ಣಿಂದ" ಎನ್ನುವುದು ಶ್ರೀ ಪುರಂದರದಾಸರ ಒಂದು ದೇವರನಾಮ. ಅದರಲ್ಲಿ "ಸತ್ತವರನ್ನು ಹೂಳಿ ಸುಡುವುದೇ ಮಣ್ಣು" ಎಂದು ಹೇಳಿದ್ದಾರೆ. "ಪಂಚಭೂತಗಳಿಂದ ಆದ ದೇಹ ಪಂಚಭೂತಗಳಲ್ಲಿ ಲೀನವಾಯಿತು" ಎಂದು ಕಥೆ, ಕಾದಂಬರಿಗಳಲ್ಲಿ ಬರೆಯುತ್ತಾರೆ. "ನುಡಿನಮನ" ನೀಡುವಾಗಲೂ ಈ ರೀತಿ ಹೇಳುತ್ತಾರೆ. ಹಾಗಾದರೆ "ಪಾರ್ಥಿವ ಶರೀರ" ಎಂದರೆ ಏನು? ಇದೇ ರೀತಿ ಬೇರೆಯ ಶರೀರಗಳೂ ಇವೆಯೇ? ಇವೆಲ್ಲ ಕೇಳಬಹುದಾದ, ಕೇಳಬೇಕಾದ ಪ್ರಶ್ನೆಗಳೇ. 

ಸೃಷ್ಟಿಯು ಹೇಗಾಯಿತು? ಅದರ ಕ್ರಮವೇನು? ಈ ಮುಂತಾದ ಪ್ರಶ್ನೆಗಳಿಗೆ ನಮ್ಮ ವೈದಿಕ ವಾಂಗ್ಮಯದಲ್ಲಿ ಅನೇಕ ಕಡೆ ವಿವರಣೆಗಳನ್ನು ಕೊಟ್ಟಿದ್ದಾರೆ. ಉಪನಿಷತ್ತುಗಳು ಮತ್ತು ಪುರಾಣಗಳಲ್ಲಿ ಈ ವಿವರಗಳು ಲಭ್ಯವಿವೆ. ಪದ್ಮ ಪುರಾಣದ ಪ್ರಾರಂಭದಲ್ಲಿಯೇ ಸವಿಸ್ತಾರವಾಗಿ ಇದನ್ನು ನೋಡಬಹುದು. 

ಬ್ರಹ್ಮರ್ಷಿ ವಸಿಷ್ಠರ ಮಗ ಶಕ್ತಿ. ಶಕ್ತಿಯ ಮಗ ಪರಾಶರರು. ಪರಾಶರರ ಮಗ ವೇದವ್ಯಾಸರು. ವೇದವ್ಯಾಸರಿಂದ ಈ ಗ್ರಂಥಗಳೆಲ್ಲ ರಚನೆ ಆದವು. ಶುಕಾಚಾರ್ಯರು ವೇದವ್ಯಾಸರ ಮಗ. ಅವರ ಮೂಲಕ ಶ್ರೀಮದ್ ಭಾಗವತ ಪರೀಕ್ಷಿತ್ ಮಹಾರಾಜನಿಗೆ ಹೇಳಲ್ಪಟ್ಟಿರು. ರೋಮಹರ್ಷಣ ಋಷಿ ವೇದವ್ಯಾಸರ ಮತ್ತೊಬ್ಬ ಮಗ. ಉಗ್ರಶ್ರವಸ್ ರೋಮಹರ್ಷಣರ ಮಗ. ಈ ರೋಮಹರ್ಷಣ ಮತ್ತು ಉಗ್ರಶ್ರವಸ್ ಸಾಕ್ಷಾತ್ ವೇದವ್ಯಾಸರ ಬಳಿ ಅಧ್ಯಯನ ಮಾಡಿದ್ದರಿಂದ ಅವರ ಶಿಷ್ಯರೂ ಹೌದು. ಅನೇಕ ಪುರಾಣಗಳಲ್ಲಿ ಇವರ ಹೆಸರು ಬರುತ್ತದೆ. "ಸೂತಿ" ಅನ್ನುವ ತಾಯಿಯ ಮಗನಾದುದರಿಂದ ಉಗ್ರಶ್ರವಸ್ಸಿಗೆ "ಸೂತ" ಎಂದೂ ಹೆಸರಾಯಿತು. ಪುರಾಣಗಳನ್ನು ಪ್ರಚುರಪಡಿಸಿದ್ದರಿಂದ "ಪುರಾಣೀಕರು" ಎಂದು ವೃತ್ತಿನಾಮ (ಶಾಸ್ತ್ರವನ್ನು ತಿಳಿದು, ಅದನ್ನು ತಿಳಿಸಿ ಹೇಳುವರಿಗೆ ಶಾಸ್ತ್ರೀ ಎನ್ನುವಂತೆ) ಬಂದಿತು. "ಸೂತ ಪುರಾಣೀಕರು" ಎಂದು ಕಥೆಗಳಲ್ಲಿ ಬರುವ ಹೆಸರು ಇವರದೇ. 

"ನೈಮಿಷಾರಣ್ಯ" ಅನ್ನುವುದು ಈಗಿನ ಉತ್ತರ ಪ್ರದೇಶ ರಾಜ್ಯದ ಸೀತಾಪುರ ಜಿಲ್ಲೆಯಲ್ಲಿದೆ. ಗೋಮತಿ ನದಿಯ ತೀರದ ಕ್ಷೇತ್ರ. ಇದು ಹಿಂದೆ ಒಂದು ದಟ್ಟವಾದ ಕಾಡು ಪ್ರದೇಶ. ಇಲ್ಲಿ "ನಿಮಿಷ" ಅನ್ನುವ ಹಣ್ಣು ಕೊಡುವ ಮರಗಳಿದ್ದವಂತೆ. ಈ ಮರದ ಹಣ್ಣುಗಳು ತಪಸ್ವಿಗಳಿಗೆ ಆಧಾರವಾಗಿದ್ದುದರಿಂದ ಮತ್ತು ದಟ್ಟವಾಗಿ ಈ ಮರಗಳು ಆ ಕಾಡಿನಲ್ಲಿ ಬೆಳೆದಿದ್ದುದರಿಂದ ಅದಕ್ಕೆ "ನೈಮಿಷಾರಣ್ಯ" ಎನ್ನುವ ಹೆಸರು ಬಂದಿತು. "ನಿಮಿಷ" ಅನ್ನುವ ಪದಕ್ಕೆ ಬೇರೆ ಬೇರೆ ವಿವರಣೆಗಳೂ ಉಂಟು. ಅಲ್ಲಿ ಶೌನಕರು ಎನ್ನುವ ಹೆಸರಿನ ಋಷಿಗಳು ಒಂದು ಗುರುಕುಲವನ್ನು ನಡೆಸುತ್ತಿದ್ದರು. ಬಹಳ ತಿಳಿದವರೂ, ಜ್ಞಾನಿಗಳೂ ಆದುದರಿಂದ ಈ ಶೌನಕರನ್ನು ಕಾಣಲು ಮತ್ತು ಅವರಿಂದ ಜ್ಞಾನ ಸಂಪಾದಿಸಲು ಅನೇಕ ಋಷಿ-ಮುನಿಗಳು ದೇಶದ ಎಲ್ಲಕಡೆಗಳಿಂದ ನೈಮಿಷಾರಣ್ಯದಲ್ಲಿ ಬಂದು ಸೇರುತ್ತಿದ್ದರು.  ಆ ಪುಣ್ಯಕ್ಷೇತ್ರದಲ್ಲಿ ಅನೇಕ ಯಜ್ಞ-ಯಾಗಾಡಿಗಳೂ ನಡೆಯುತ್ತಿದ್ದುವು. 

ಇಂತಹ ಸಂದರ್ಭಗಳಲ್ಲಿ ಸೇರಿದ ಎಲ್ಲ ಋಷಿ-ಮುನಿಗಳು ಮತ್ತು ಜಿಜ್ಞಾಸು ಮಹನೀಯರು "ಜ್ಞಾನ ಸಭೆ" ನಡೆಸುತ್ತಿದ್ದರು. ಯಾರಿಗಾದರೂ ಅನುಮಾನ, ಪ್ರಶ್ನೆಗಳಿದ್ದರೆ ಆ ಸಭೆಯಲ್ಲಿ ಪ್ರಸ್ತಾಪ ಮಾಡಬಹುದಿತ್ತು. ಸೂಕ್ತ ಉತ್ತರ, ಸಮಾಧಾನ ತಿಳಿದ ಮತ್ತೊಬ್ಬರು ಅವಕ್ಕೆ ಉತ್ತರ ಕೊಡುತ್ತಿದ್ದರು. ಹೀಗೆ  ನಡೆಯುತ್ತಿದ್ದಾಗ ಅಲ್ಲಿಗೆ ಸೂತ ಪುರಾಣೀಕರು ಬಂದರು. ಅವರ ಜ್ಞಾನಪ್ರಭೆಯ ಬಗ್ಗೆ ತಿಳಿದಿದ್ದ ಎಲ್ಲಾ ಸಜ್ಜನರು ಅವರನ್ನು ಆದರದಿ೦ದ ಬರಮಾಡಿಕೊಂಡು ಸತ್ಕರಿಸಿದರು. ನಂತರ ಅವರ ಮುಂದೆ ತಮ್ಮ ತಮ್ಮ ಪ್ರಶ್ನೆ, ಅನುಮಾನಗಳನ್ನು ಇಡುತ್ತಾ ಪರಿಹಾರ ಕಂಡುಕೊಂಡರು. ಅನೇಕ ಪುರಾಣಗಳು ಮೊದಲ ಬಾರಿಗೆ ಅಲ್ಲಿ ಪ್ರವಚನಗೊಂಡವು. ಪ್ರಶ್ನೆ ಕೇಳುವವರು ಶೌನಕರೇ ಮುಂತಾದ ಜ್ಞಾನಿಗಳು. ಆದ್ದರಿಂದ "ಶೌನಕಾದಿಗಳು" ಎಂದು ಸಂಬೋಧನೆ. ಉತ್ತರ ಹೇಳುವವರು ಸೂತ ಪುರಾಣೀಕರು. ಆದ್ದರಿಂದ ಅನೇಕ ಕಥೆಗಳಲ್ಲಿ "ನೈಮಿಷಾರಣ್ಯವಾಸಿಗಳಾದ ಶೌನಕಾದಿ ಋಷಿಗಳಿಗೆ ಸೂತ ಪುರಾಣೀಕರು ಹೀಗೆ ಹೇಳಿದರು....." ಎಂಬ ವಾಕ್ಯದಿಂದ ಪ್ರಾರಂಭ! 

*****

ಐದರ ಐದು ಗುಂಪುಗಳು ಸೇರಿ ಇಪ್ಪತ್ತೈದು ತತ್ವಗಳಾದುವು. ಐದು ಜ್ಞಾನೇಂದ್ರಿಯಗಳು. ಐದು ಕರ್ಮೇಂದ್ರಿಯಗಳು. ಐದು ಪಂಚಭೂತಗಳು. ಐದು ಪಂಚತನ್ಮಾತ್ರಗಳು. ಮನಸ್ಸು-ಬುದ್ಧಿ-ಅಹಂಕಾರ-ಚಿತ್ತ-ಚೇತನ ಇವು ಮತ್ತೈದು. ಇವುಗಳ ವಿವರವನ್ನು ಮತ್ತೆಂದಾದರೂ ನೋಡೋಣ. 

ಪೃಥ್ವಿ-ಅಪ್ಪು-ತೇಜಸ್ಸು-ವಾಯು-ಆಕಾಶ ಇವು ಪಂಚಭೂತಗಳೆಂದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತು. ಇವನ್ನೇ ಕ್ರಮವಾಗಿ ಮಣ್ಣು-ನೀರು-ಬೆಂಕಿ-ಗಾಳಿ-ಆಕಾಶ ಎನ್ನುವುದು. ತೇಜಸ್ಸು ಅಥವಾ ಬೆಂಕಿ ಎಂದರೆ ಕೇವಲ ಉರಿಯುವ ಅಗ್ನಿಯಲ್ಲ. ಎಲ್ಲ ರೀತಿಯ ಶಕ್ತಿ ಸ್ರೋತಗಳೂ ಅಗ್ನಿಯ ರೂಪಗಳೇ. ಆಕಾಶವೆಂದರೆ ನಮ್ಮ ತಲೆಯ ಮೇಲೆ ಎಲ್ಲೋ ಮೇಲೆ ಇದೆ ಎಂದಲ್ಲ. ಆಕಾಶ ಎಂದರೆ ಚಲನೆಗೆ ಅವಕಾಶ. ಇಂಗ್ಲಿಷಿನಲ್ಲಿ ಸ್ಪೇಸ್ ಅನ್ನಬಹುದು. ಆಕಾಶ ಇಲ್ಲದಿದ್ದರೆ ನಮ್ಮ ಕೈ-ಕಾಲುಗಳು ಆಡಲೂ ಸಾಧ್ಯವಿಲ್ಲ. 

ಏನಾದರೂ ವಸ್ತು ತಯಾರು ಮಾಡಬೇಕಾದರೆ ಅದಕ್ಕೆ ಸೂಕ್ತವಾದ "ಪದಾರ್ಥ" ಬೇಕು. ಇದನ್ನು "ದ್ರವ್ಯ' ಅನ್ನುತ್ತಾರೆ. (ದ್ರವ್ಯ ಅಂದರೆ ಕೇವಲ ಹಣ-ಕಾಸು ಅಲ್ಲ). ಇಂಗ್ಲಿಷಿನಲ್ಲಿ ರಾ ಮಟೇರಿಯಲ್ ಅನ್ನಬಹುದು. ಈ  ದ್ರವ್ಯಗಳ ಮಿಶ್ರಣದಿಂದ ಪದಾರ್ಥಗಳು ತಯಾರಾಗುತ್ತದೆ. ಮಿಶ್ರಣದ ಪ್ರಮಾಣ ಮತ್ತು ಮಾಡುವ ವಿಧಾನ ಬದಲಾದಂತೆ ತಯಾರಾಗುವ ಪದಾರ್ಥವೂ ಬದಲಾಗುತ್ತದೆ. ಅಡಿಗೆ ಮಾಡುವವರಿಗೆ ಇದು ಚೆನ್ನಾಗಿ ಗೊತ್ತು. ಒಂದೇ ರೀತಿಯ ಅಡಿಗೆ ಸಾಮಾನುಗಳನ್ನು ಬಳಸಿ, ಬೇರೆ ಬೇರೆ ಪ್ರಮಾಣದಲ್ಲಿ ಸೇರಿಸಿ, ಮಾಡುವ ಕ್ರಮ, ಕಾಲ ಮತ್ತು ಉಷ್ಣಾ೦ಶ ಬದಲಿಸಿ ವಿವಿಧ ತಿಂಡಿ-ತಿನಿಸುಗಳನ್ನು ತಯಾರಿಸುವಂತೆ. 

*****

ಒಂದು ಮಡಿಕೆ ಮಾಡುವುದನ್ನೇ ನೋಡೋಣ. ಮಡಿಕೆ ಮಾಡಲು ಮೂಲ ದ್ರವ್ಯ ಮಣ್ಣು. ಕೇವಲ ಮಣ್ಣಿನಿಂದ ಮಡಿಕೆ ಮಾಡಲಾಗುವುದಿಲ್ಲ. ಮಣ್ಣು ಪುಡಿ ಪುಡಿಯಾದ ದ್ರವ್ಯ. ಕೈಯಲ್ಲಿ ಹಿಡಿದುಕೊಂಡು ಕೆಳಗೆ ಬಿಟ್ಟರೆ ಒಂದು ಗುಡ್ಡೆಯಾಗಿ ಬೀಳುತ್ತದೆ. ಅದಕ್ಕೆ ಒಂದು ಆಕಾರ ಕೊಡಬೇಕಾದರೆ ಅದಕ್ಕೆ ನೀರು ಸೇರಿಸಬೇಕು. ಮಣ್ಣನ್ನು ನೀರಿನಿಂದ ಕಲೆಸಿದರೆ ಆ ಮಿಶ್ರಣದಿಂದ ಮಡಿಕೆ ಮಾಡಬಹುದು. ಮಡಿಕೆಯನ್ನೇನೋ ಮಾಡಬಹುದು. ಆದರೆ ಅದು ಉಳಿಯುವುದಿಲ್ಲ. ಅದನ್ನು ಬಿಸಿಲಿನಲ್ಲಿ ಒಣಗಿಸಿದರೆ ಸ್ವಲ್ಪಮಟ್ಟಿಗೆ ಉಳಿಯುತ್ತದೆ. ಆದರೆ ಅದರಲ್ಲಿ ನೀರು ಶೇಖರಿಸಬೇಕಾದರೆ, ಅದು ಪ್ರಯೋಜನಕ್ಕೆ ಬರಬೇಕಾದರೆ, ಅದನ್ನು ಬೆಂಕಿಯಲ್ಲಿ ಕಾಯಿಸಬೇಕು. ಇಷ್ಟೆಲ್ಲಾ ಆದ ನಂತರ ಮಡಿಕೆ ಕೆಲವು ಕಾಲ ಇರಬಲ್ಲದು. 

ಮಡಿಕೆಯ ಖಾಲಿ ಇರುವ ಜಾಗದಲ್ಲಿ ಗಾಳಿ ತುಂಬಿಕೊಳ್ಳುತ್ತದೆ. ಅದು ಈಕಡೆ-ಆಕಡೆ ಚಲಿಸಲು ಅವಕಾಶ (ಆಕಾಶ) ಬೇಕು. ತಯಾರು ಮಾಡಲು ಮೂರು ದ್ರವ್ಯಗಳು. ಮತ್ತೆ ಉಪಯೋಗಕ್ಕೆ ಬರಲು ಇನ್ನೆರಡು ದ್ರವ್ಯಗಳು. 

ನಾಲ್ಕು ಭಾಗ ಮಣ್ಣು, ಮೂರು ಭಾಗ ನೀರು ಮತ್ತು ಒಂದು ಭಾಗ ಬೆಂಕಿಯಿಂದ ಆದ ದೇಹಕ್ಕೆ "ಪಾರ್ಥಿವ" ಎನ್ನುತ್ತಾರೆ. ನಮ್ಮಗಳ ದೇಹವೂ ಇದೇ ಪ್ರಮಾಣದ್ದು. ಮಣ್ಣು-ನೀರುಗಳ ಮಿಶ್ರಣವನ್ನು ಶಕ್ತಿ (ಎನರ್ಜಿ) ಹಿಡಿದಿಟ್ಟಿದೆ. ಅದು ಕೆಲಸಮಾಡಲು ವಾಯು ಮತ್ತು ಆಕಾಶಗಳೂ ಬೇಕು. ಮಣ್ಣಿನ (ಪೃಥ್ವಿ) ಪ್ರಮಾಣ ಎಲ್ಲಕ್ಕೂ ಹೆಚ್ಚು ಇರುವುದರಿಂದ ಅದು "ಪಾರ್ಥಿವ ಶರೀರ" ಎಂದಾಯಿತು. 

ನಾಲ್ಕು ಭಾಗ ನೀರು, ಮೂರು ಭಾಗ ಮಣ್ಣು ಮತ್ತು ಒಂದು ಭಾಗ ಬೆಂಕಿಯಿಂದ ಆದ ಶರೀರಕ್ಕೆ "ಜಲೀಯ" ಶರೀರ ಎಂದು ಹೆಸರು. ಹೆಚ್ಚಿನ ಜಲಚರಗಳು ಈ ಗುಂಪಿಗೆ ಸೇರಿದವು. ನೀರಿನ (ಜಲ) ಪ್ರಮಾಣ ಹೆಚ್ಚಿರುವುದರಿಂದ ಅದು "ಜಲೀಯ ಶರೀರ" ಎಂದಾಯಿತು. 

ನಾಲ್ಕು ಭಾಗ ಶಕ್ತಿ , ಮೂರು ಭಾಗ ನೀರು ಮತ್ತು ಒಂದು ಭಾಗ ಮಣ್ಣು, ಇವುಗಳಿಂದ ಆದ ಶರೀರಕ್ಕೆ "ತೈಜಸ" ಎಂದು ಕರೆಯುವರು. ತೇಜಸ್ಸು ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಅದು "ತೈಜಸ ಶರೀರ" ಆಯಿತು. ಅನೇಕ ದೇವತೆಗಳು ಈ ರೀತಿಯ ತೈಜಸ ರೂಪದಲ್ಲಿ ದರ್ಶನ ಕೊಡುತ್ತಾರಂತೆ. ಆಗ ಹೆಚ್ಚಿನ ಶಕ್ತಿಯ ಅನುಭವ ಆಗುತ್ತದಂತೆ. 

ಈ ಪಾರ್ಥಿವ ಶರೀರ, ಜಲೀಯ ಶರೀರ ಮತ್ತು ತೈಜಸ ಶರೀರ ಅಲ್ಲದೆ ಮತ್ತೊಂದು ಉಂಟು. ಅದು "ದಿವ್ಯ ಶರೀರ".  ಅದು ಪೂರ್ಣವಾಗಿ ಬೆಳಕಿನ ರೂಪ. ಆ ರೂಪದಲ್ಲಿ ಅಗಾಧವಾದ ಬೆಳಕು. ಅಂದರೆ ಸೂರ್ಯನಂತೆ ಪ್ರಖರತೆ. ಆದರೆ ಅಂತಹ ತಡೆಯಲಾರದ ಶಾಖವಿಲ್ಲ. ಚಂದ್ರನ ಬೆಳಕಿನಂತೆ ಹಿತಕರ. ಎರಡೂ ಗುಣವುಳ್ಳದ್ದು. ಸೂರ್ಯನ ಪ್ರಖರವಾದ ಕಾಂತಿ. ಆದರೆ ಚಂದ್ರನ ಬೆಳಕಿನ ಶಾಂತವಾದ ಅನುಭವ. ಪರಮಾತ್ಮನು ಮತ್ತು ಕೆಲವು ಹಿರಿಯ ದೇವತೆಗಳು ಹೀಗೆ ದರ್ಶನ ಕೊಡುತ್ತಾರಂತೆ. 

*****

ಪಾರ್ಥಿವ ಶರೀರದಿಂದ ಜೀವನು ನಿರ್ಗಮಿಸಿದ ಮೇಲೆ, ಮಡಿಕೆ ಒಡೆದು ಚೂರಾದಾಗ ಹೇಗೆ ಅದು ಮಣ್ಣು, ನೀರು ಮತ್ತು ವಿಶಾಲ ಶಕ್ತಿಯ ಸ್ರೋತದಲ್ಲಿ ಸೇರುತ್ತದೋ ಹಾಗೆ ಪಾರ್ಥಿವ ದೇಹವೂ ಮತ್ತೆ ಪಂಚಭೂತಗಳಲ್ಲಿ ಸೇರುತ್ತದೆ. ಸುಟ್ಟಾಗ ಬೂದಿ. ಅದೂ ಮಣ್ಣೇ. ಹೂಳಿದಾಗ ಮಣ್ಣಂತೂ ಸರಿಯೇ ಸರಿ. ಹೀಗೂ ಮಣ್ಣು. ಹಾಗೂ ಮಣ್ಣು.  ನೀರಿನ ಅಂಶ ಸುಟ್ಟಾಗ ಆವಿಯಾಗಿ ಗಾಳಿಗೆ ಹೋಯಿತು. ಹೂತಾಗ ಮಣ್ಣಿನಲ್ಲಿ ತೇವವಾಗಿ ಸೇರಿತು. ಹೀಗಾದಾಗ ವಾಯುವೂ ಇಲ್ಲ; ಆಕಾಶವೂ ಇಲ್ಲ. ಪಾರ್ಥಿವ ದೇಹ ಪಂಚ ಭೂತಗಳಲ್ಲಿ ಲೀನವಾಯಿತು ಎನ್ನುತ್ತೇವೆ. 

ಪಾರ್ಥಿವ ಶರೀರ ಮತ್ತು ಅದು ಪಂಚ ಭೂತಗಳಲ್ಲಿ ಹೇಗೆ ಲೀನವಾಗುತ್ತದೆ ಎಂದು ತಿಳಿದಂತಾಯಿತು. ಇಪ್ಪತ್ತೈದು ತತ್ವಗಳ ಬಗ್ಗೆ ಮತ್ತೆಂದಾದರೂ ಯೋಚಿಸೋಣ.  

Wednesday, July 16, 2025

Rip Van Winkle and Solo Date


He was residing in the city for the last three years after migrating there. He started from his residence one day and went out in the city. He went to the nearest metro station and took a ride to one of the popular areas in the city, known for good restaurants and relaxing atmosphere. He had some good food and then decided on go-karting from there. 

He took an autorikshaw from there and went to one of the prominent residential districts of the city, got into a cafe and settled down with a cup of coffee being entirely unaware that something important had gone missing. 

While he was enjoying his coffee, the auto driver who had given him a ride from the other location walked up to him in the cafe, and handed over to him a key bunch. The bunch had his car keys, house keys and locker keys. It was then that he realised that he had dropped it in the autorikshaw without realising so. The auto driver had driven back to the cafe as soon as he saw the key bunch, negotiating through the city's thick traffic and notorious long traffic jams. 

The man sipping and enjoying his coffee profusely thanked the auto driver for his kind gesture and offered him some money to compensate him for the drive back to the cafe and probably some part as a reward for the kind act. The auto driver politely refused the money offered and was on his way quickly. 

***** 

Rip Van Winkle was a Dutch-American villager who was a very likeable fellow, but avoided work and responsibilities. He was particularly keen to avoid his nagging wife. He lived in the Catskill Mountains in the south-eastern New York, along with many early Dutch settlers there, before the American Revolution. One day he left his house with his dog on a squirrel hunting trip. 

As the evening fell, he heard his name being called and found an old man in traditional dutch dress carrying a keg. He helped the old man carry his burden and then saw a group of similarly dressed men playing ninepins, similar to today's bowling game. Rip Van Winkle joined them in the game and drank heavily from the keg and fell asleep. 

He got up on a sunny morning and found that much has changed. He now had a foot long white beard, his dog was nowhere to be seen and surroundings had changed as well. He returned to his village which had now become much bigger, people were dressed in unfamiliar clothing and no one recognised him. Someone asked him about his voting in the recent elections and he answered that he was a loyal subject of George III, not knowing that American Revolutionary War was fought and many of his friends were killed in it. 

When Rip went to his house he found that there was a young man with his name and a young woman as well. The young woman said that they are the children of Rip Wan Winkle and their father is missing for twenty years. His wife had died in the meanwhile. The young woman, his daughter, had also named her infant son after her father. 

Rip learns from a village elder that the men he met in the mountains were said to be ghosts of the crew of a ship named Halve Maen, owned by the Dutch East India Company. His daughter takes him inside the house and Rip resumes his usual idle life and enjoys telling his story to every stranger he comes across. Some consider him as insane, but it matters little to him. Then the legend grows in the neighbourhood that whenever there is a thunder near the mountains, the men of the shipwrecked crew must be playing ninepins. 

*****

The first story, the one of the missing key bunch and friendly auto driver, has appeared in today's newspapers and is from Bangalore. The one about Rip Van Winkle is the summary of a short story by the same name written by American author Washington Irving, first published in the year 1819, some two hundred and six years ago. 

There are many events of late in various parts of the world in which there is a conflict between local people and immigrants from other parts of the same country, or from other countries as well. Sometimes it is about availing the benefit of local facilities and some other time it is about speaking local language. There are stories of immigrants being treated very harshly for not speaking local language. There are also instances of immigrants taking pride in not speaking the local language and not even making efforts to learn them. This has happened in many parts of the world. Some of them get very very wide publicity and are followed by the visual media day after day. 

The story of Rip Van Winkle is read every year in the area community even today. There are three statues of Rip Van Winkle around New York state. Four films were made on the basis of this story. There were several theatre adaptations and used for serials and cartoons. We studied this when we were students in High School. 

*****

What is the relation to the two stories, one a real life happening last week and another a story written over two hundred years ago? There are indeed similarities. 

The story of the "Missing Key Bunch" would not have attracted any attention as there have been several such happenings over the years. For every hostile treatment of an immigrant there is also a parallel anecdote wherein the community has embraced a stranger with all love and affection. For every cruel auto driver story, there are matching stories of good samaritans. Many auto drivers have handed over valuable jewellery and similar assets and documents to the police, which were later returned to their rightful owners. 

The story would not have caught attention except for two expressions used in the news report. The first one was about "OP". The second one was about "Solo Date". The story started thus: "The OP, who is not a Bangalore native, said he was out n a slo date......." 

It took some time and work to understand the meaning of "OP" and "Solo Date". We knew that OP was used for denoting "Opening Balance" in accounts. Some people used it to mean "Operation" in surgical interventions. But in today's language OP means "Original Poster" who makes a post in the social media platforms and creates a thread for others to hang around it!

The expression "Solo Date" is even more interesting. There was no dating in our parts of the world fifty years ago. The only date we knew was the date on the calendar on the wall. Dating system prevalent in some other parts of the world has entered even middle and high schools now. Those not familiar with this may as well see a recent Kannada Movie "Gantu Moote".

Dating concept originally probably meant to happen between two individuals, usually of opposite sex. It then graduated to dating between two people, maybe even two men or two women. There was the case of a person marrying herself (Please click here to read more about it) sometime back. Now here are the days of "Solo Dating" or "Self Dating". It is defined as a "deliberate activity done alone to prioritise self-care and connection, as a way to embrace life without external validation and enjoy activities or relaxation". It is said it helps self-discovery, stress management and personal growth. 

*****

We spent several days alone, especially on holidays during early working life, when family or friends were not around and we lived alone in strange towns as part of employment. Days were spent on similar activities like going out and having lunch in a restaurant, coffee in a small canteen and watching a movie in a theatre. We were not required to Solo-date because we did not feel lost, making self discovery unnecessary. Today's generation may say that life was not this stressful at all then which required stress management by solo-dating. Neither was a need for shutting out from external interventions for validation.

This is indeed one of the "Rip Van Winkle" moments for us, as if we have come back from a deep slumber of several years, and finding everything around us has changed! It often looks like that we used the wrong dictionary and grammar books. We were not lost in those days, but there is a need to rediscover ourselves in today's world!

Monday, July 14, 2025

ಸಂಪತ್ತು ಕಳೆಯುವ ಕಾರಣಗಳು


ಹಿಂದೊಂದು ಸಂಚಿಕೆಯಲ್ಲಿ "ದೇವರಲ್ಲಿ ಬೇಡುವ ಅಷ್ಟ ಐಶ್ವರ್ಯಗಳು" ಎನ್ನುವ ಶೀರ್ಷಿಕೆಯ ಅಡಿಯಲ್ಲಿ "ಅಷ್ಟ ಐಶ್ವರ್ಯಗಳು" ಮತ್ತು ಅವನ್ನು ಬೇಡುವ ಯುಕ್ತಾಯುಕ್ತತೆಯ ಬಗ್ಗೆ ಸ್ವಲ್ಪಮಟ್ಟಿಗೆ ಚರ್ಚಿಸಿದ್ದೆವು. (ಈ ಸಂಚಿಕೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ). ಈ ಎಂಟು ಐಶ್ವರ್ಯಗಳಲ್ಲಿ ಆಯುಸ್ಸು, ಆರೋಗ್ಯ ಮತ್ತು ಐಶ್ವರ್ಯಗಳು ಎಲ್ಲಕ್ಕಿಂತ ಮೊದಲು ಮತ್ತು ಅತಿ ಮುಖ್ಯವಾದವು ಎಂದು ನೋಡಿದ್ದೆವು. ಇವುಗಳನ್ನು ಒಟ್ಟಾಗಿ ಕೋರುವುದು ಸಂಪ್ರದಾಯವಾಗಿ ಬಂದಿದೆ. "ಆಯುರಾರೋಗ್ಯ ಐಶ್ವರ್ಯಾದಿಗಳು" ಎಂದು ಹೇಳುವ  ವಾಡಿಕೆ ಇದೆ. ಆಯುಸ್ಸು ಮತ್ತು ಆರೋಗ್ಯ ಅವಳಿ ಕೋರಿಕೆಗಳು. ಆರೋಗ್ಯವಿಲ್ಲದ ದೀರ್ಘ ಆಯುಸ್ಸು, ಮತ್ತು ಆಯುಷ್ಯ ಇಲ್ಲದ ಒಳ್ಳೆಯ ಆರೋಗ್ಯ ಎರಡೂ ಪ್ರಯೋಜನಕ್ಕೆ ಬಾರದವು. ಇವೆರಡು ಚೆನ್ನಾಗಿದ್ದು ಐಶ್ವರ್ಯ ಇಲ್ಲ ಎಂದರೂ ಪರವಾಗಿಲ್ಲ. ಹಾಗಾಗಬೇಕೆಂದು ಯಾರೂ  ಆಶಿಸುವುದಿಲ್ಲ ಎನ್ನುವುದು ನಿಜವಾದರೂ, ಈ ಮೂರರಲ್ಲಿ ಎರಡು ಮಾತ್ರ ಕೊಡುತ್ತೇವೆ ಎಂದರೆ ಆಯುಸ್ಸು ಮತ್ತು ಆರೋಗ್ಯವನ್ನೇ ಕೋರಿಕೊಳ್ಳುವುದು ಅಷ್ಟೇ ಸತ್ಯ.  

ಅನೇಕರಿಗೆ ಜೀವನದಲ್ಲಿ ಇವುಗಳು ಯುಕ್ತ ಪ್ರಮಾಣದಲ್ಲಿ ಸಿಗುವುದಿಲ್ಲ. ಕೆಲವರಿಗೆ ಅಕಾಲ ಮೃತ್ಯು ಬಂದು ಜೀವನ ಯಾತ್ರೆ ಚಿಕ್ಕ ವಯಸ್ಸಿನಲ್ಲೇ ಮುಗಿದುಹೋಗುತ್ತದೆ. ಮತ್ತೆ ಕೆಲವರಿಗೆ ಆಯುಸ್ಸು ಇದ್ದು ಸುಮಾರಾದ ಕಾಲ ಬದುಕಿದರೂ ಜೀವನ ಪೂರ್ತಿ ಅನಾರೋಗ್ಯದಿಂದ ನರಳುವುದೇ ಆಗುತ್ತದೆ. ಮೂರನೆಯ ಗುಂಪಿಗೆ ಆಯುಸ್ಸು ಮತ್ತು ಆರೋಗ್ಯ ಇದ್ದರೂ ಕಡು ಬಡತನ ಕಾಡುವುದರಿಂದ ಜೀವನ ಬಹಳ ಕಷ್ಟಕರವಾಗಿ ಸಾಗುತ್ತದೆ.  ಮೂರೂ ಚೆನ್ನಾಗಿ ಇರುವುದು ಒಂದು ಸೌಭಾಗ್ಯವೇ ಸರಿ. 

ಸಂಪತ್ತುಗಳಲ್ಲಿ ಅತಿ ಮುಖ್ಯವಾದ ಈ ಮೂರು ಏಕೆ ಎಲ್ಲರಿಗೂ ಸಿಗುವುದಿಲ್ಲ, ಮತ್ತು ಕೆಲವರಿಗೆ ಸಿಕ್ಕರೂ ಏಕೆ ಮಧ್ಯದಲ್ಲಿ ಹಾಳಾಗುತ್ತದೆ ಎನ್ನುವುದನ್ನು ಈಗ ಸ್ವಲ್ಪಮಟ್ಟಿಗೆ ನೋಡೋಣ. 

*****

ನಮ್ಮ ವೈದಿಕ ವಾಂಗ್ಮಯದಲ್ಲಿ ಇವುಗಳ (ಅಂದರೆ ಆಯುಸ್ಸು, ಅರೋಗ್ಯ ಮತ್ತು ಐಶ್ವರ್ಯ) ಹ್ರಾಸ ಆಗುವಿಕೆಗೆ ಕಾರಣಗಳನ್ನು ಕೊಟ್ಟಿದ್ದಾರೆ. (ಕಡಿಮೆ ಆಗುವುದು, ಮೊಟಕಾಗುವುದು ಅಥವಾ ಸೋರಿಕೆ ಆಗುವುದಕ್ಕೆ "ಹ್ರಾಸ" ಎನ್ನುತ್ತಾರೆ). ಇವನ್ನು ನಂಬುವುದೂ ಬಿಡುವುದೂ ಅವರವರಿಗೆ ಸೇರಿದ್ದು. ಕೆಲವರಿಗೆ ಪುನರ್ಜನ್ಮದಲ್ಲಿ ನಂಬಿಕೆ ಇರುವುದಿಲ್ಲ. ಆದರೂ ಈ ಸಂಪತ್ತುಗಳ ಹಾನಿ ಆಗುವ ಕಾರಣಗಳನ್ನು ತಿಳಿದು ಅವನ್ನು ಬಿಟ್ಟು ಬದುಕುವುದರಿಂದ ಈಗಿನ ಜೀವನವಾರರೂ ಹಸನಾಗುತ್ತದೆ ಅನ್ನುವುದು ಒಪ್ಪಬೇಕಾದ ವಿಷಯ. 

ಮನುಷ್ಯನಿಗೆ ಬರುವ ಕಷ್ಟ-ಕಾರ್ಪಣ್ಯಗಳಿಗೆ ಹಿಂದಿನ ಜನ್ಮಗಳಲ್ಲಿ ಮಾಡಿದ ಪಾಪಕರ್ಮಗಳೇ ಕಾರಣ ಎಂದು ನಂಬಿಕೆ. ಕೆಲವು ಪಾಪ ಕರ್ಮಗಳು ಮುಂದಿನ ಯಾವುದೋ ಜನ್ಮದಲ್ಲಿ ಕಾಡುವುದು ಎಂದರೂ, ಕೆಲವು ಪ್ರಬಲ ಕರ್ಮಗಳು ಇದೇ ಜನ್ಮದಲ್ಲಿ ಹಿಂಸಿಸುವುದೂ ಉಂಟು. ಇದೇ ರೀತಿ ಈ ಜನ್ಮದ ಪುಣ್ಯ ಕರ್ಮಗಳು ಮುಂದೆ ಫಲ ಕೊಡಬಲ್ಲವಾದರೂ ಕೆಲವು ಪ್ರಬಲ ಪುಣ್ಯ ಕರ್ಮಗಳೂ ಕೂಡ ಇದೇ ಜನ್ಮದಲ್ಲಿ ಫಲಪ್ರದವಾಗುವುದೂ ಉಂಟು. ಇದರಲ್ಲಿಯೂ, ದೊಡ್ಡವರ ಆಶೀರ್ವಾದ ಪೂರ್ವಕವಾಗಿ ಬರುವಂತಹ ಪುಣ್ಯ ಕಾರ್ಯಗಳ ಯೋಗಗಳು ಅತಿ ಶೀಘ್ರವಾಗಿ ಒಳ್ಳೆಯ ಪರಿಣಾಮಗಳನ್ನು ಮಾಡುವುದು ಅನೇಕ ಉದಾಹರಣೆಗಳ ಮೂಲಕ ನಮ್ಮ ಅನುಭವಗಳಲ್ಲೇ ಕಂಡು ಬಂದಿರುವುದೂ ಉಂಟು. ಅನೇಕ ವಿಷ ಪದಾರ್ಥಗಳು ಬಹಳ ನಿಧಾನವಾಗಿ ಪರಿಣಾಮ ಮಾಡುವಂತೆ (ಸೀಸ ಅಥವಾ ಲೆಡ್, ಪಾದರಸ ಅಥವಾ ಮರ್ಕ್ಯುರಿ ಮುಂತಾದ ವಿಷಕಾರಿಗಳಂತೆ), ಮತ್ತೆ ಕೆಲವು ವಿಷ ಪದಾರ್ಥಗಳು (ಸಯನೈಡ್ ಮುಂತಾದುವು)  ಕ್ಷಣಾರ್ಧದಲ್ಲಿ ಮಾರಕವಾಗುವಂತೆ ಇವುಗಳ ಪರಿಣಾಮ. 

ಆರೋಗ್ಯ ಹಾನಿಗೆ ವ್ಯಭಿಚಾರ, ಆಯುಷ್ಯ ಹ್ರಾಸಕ್ಕೆ ಪರನಿಂದೆ, ಐಶ್ವರ್ಯ ನಾಶಕ್ಕೆ ಪರವಿತ್ತಾಪಹಾರ ಕಾರಣಗಳೆಂದು ವಿವರಣೆಗಳಿವೆ. ಅನಾರೋಗ್ಯದ ನೇರ ಕಾರಣ ವ್ಯಭಿಚಾರ ಕ್ರಿಯೆಗಳು. ಅನವಶ್ಯಕ ಪರನಿಂದೆ ಆಯುಸ್ಸನ್ನು ಕೊಡಲಿಯ ಏಟು ಮರವನ್ನು ಕಡಿಯುವಂತೆ ತುಂಡಿರಿಸುವ ಕೆಲಸ ಮಾಡುತ್ತದೆ. ಇನ್ನೊಬ್ಬರ ಗಂಟು ಹೊಡೆದು ಸಂತೋಷಿಸುವುದು ಮುಂದೆ ನಮ್ಮ ಸಂಪತ್ತಿನ ನಾಶದ ದುಃಖದ ಮೂಲಕ ಸಮ ಮಾಡುತ್ತದೆ. 
***** 

"ಪೂರ್ವ ಜನ್ಮ ಕೃತಂ ಪಾಪಂ ವ್ಯಾಧಿ ರೂಪೇಣ ಪೀಡ್ಯತೇ" ಎಂದು ಅನೇಕ ಕಡೆಗಲ್ಲಿ, ವಿಶೇಷವಾಗಿ ಆಯುರ್ವೇದದ ಗ್ರಂಥಗಳ ಚರ್ಚೆಗಳಲ್ಲಿ ಹೇಳಿದೆ. ವ್ಯಭಿಚಾರ ಅನ್ನುವುದು ಸಮಾಜದಲ್ಲಿ ಮನುಷ್ಯನನ್ನು ಕೀಳಾಗಿ ಬದುಕುವಂತೆ ಮಾಡುತ್ತದೆ. ಕೆಲವು ವ್ಯಭಿಚಾರ ಪ್ರಸಂಗಗಳು ಯಾರಿಗೂ ಗೊತ್ತಾಗದಂತೆ ನಡೆಯುತ್ತವೆ. ಮತ್ತೆ ಕೆಲವು ಜಗಜ್ಜಾಹೀರಾಗುತ್ತವೆ. ಆರೋಗ್ಯದ ಮೇಲೆ ಇದರ ಪರಿಣಾಮ ಮಾತ್ರ ಒಂದೇ ರೀತಿ. ಅನೇಕ ವ್ಯಭಿಚಾರಗಳನ್ನು ಒಂದೇ ಜನ್ಮದಲ್ಲಿ ಮಾಡಿದವರು ಮುಂದೆ ಒಂದೇ ಜೀವಿತ ಕಾಲದಲ್ಲಿ ಅನೇಕ ರೋಗಗಳನ್ನು ಅನುಭವಿಸಬೇಕಾದ ಪ್ರಮೇಯವನ್ನು ತಂದೊಡ್ಡುತ್ತದೆ. 

ವ್ಯಭಿಚಾರದ ವಿಷಯದಲ್ಲಿ ಬಹಳ ಜನಗಳಿಗೆ ತಪ್ಪು ಅಭಿಪ್ರಾಯ ಇರುವುದು. ಇಡೀ ಪ್ರಪಂಚದಲ್ಲಿ ಕೇವಲ ಹದಿನೈದು-ಇಪ್ಪತ್ತು ಶೇಕಡಾ ಮಂದಿ ಹೀಗೆ ತೊಡಗುತ್ತಾರೆ ಎಂದು ಒಂದು ಅಂದಾಜು. ಆದರೆ ಪಾಪ ಕರ್ಮಗಳು ಕೇವಲ ದೈಹಿಕವಲ್ಲ. ಈ ಅಂದಾಜು ಕೇವಲ ದೈಹಿಕ ವ್ಯಭಿಚಾರಕ್ಕೆ ಸಂಬಂಧಿಸಿದ್ದು. ಅನೇಕರಿಗೆ ವಾಚಿಕ ವ್ಯಭಿಚಾರದ ದೊಡ್ಡ ಗೀಳು ಇರುತ್ತದೆ. ಮಾತು ಪ್ರಾರಂಭಿಸಿದರೆ ಈ ರೀತಿಯ ಕೆಟ್ಟ ಮಾತುಗಳಷ್ಟೇ ಬರುವುದು ಉಂಟು. ಇದೂ ವ್ಯಭಿಚಾರವೇ. ಮಾನಸಿಕ ವ್ಯಭಿಚಾರವಂತೂ ಅಳತೆಗೆ ಸಿಗದು. ಅದು ಅವರವರಿಗೇ ಗೊತ್ತಾಗಬೇಕು. ಈ ಕಾರಣದಿಂದಲೇ ಕಾಯೇನ, ವಾಚಾ ಮತ್ತು ಮನಸಾ ಎಂದು ತ್ರಿಕರಣ ಶುದ್ಧಿಯನ್ನು ಹೇಳುವುದು. 

ಅದು ದೈಹಿಕ ವ್ಯಭಿಚಾರ ಇರಬಹುದು, ವಾಚಿಕ ಅಥವಾ ಮಾನಸಿಕ ವ್ಯಭಿಚಾರ ಇರಬಹುದು, ಕುಕರ್ಮಗಳ ಸಾಲಿನಲ್ಲಿ ಸೇರುತ್ತವೆ. ಅರೋಗ್ಯ ಹ್ರಾಸವಾಗುವುದಕ್ಕೆ ಬೀಜ ರೂಪವಾಗಿ ಕಾಯುತ್ತ ಕುಳಿತುಕೊಳ್ಳುತ್ತವೆ. 
***** 

"ಪರನಿಂದೆ" ಎನ್ನುವ ಪಾಪವನ್ನು ಮಾಡದವರೇ ಪ್ರಾಯಶಃ ಕಾಣಸಿಗರು. ಅನೇಕ ವೇಳೆ ಕಂಡ ಅಥವಾ ಕೇಳಿದ ಪ್ರಸಂಗಗಳ ಸತ್ಯಾಸತ್ಯತೆ ತಿಳಿದುಕೊಳ್ಳುವ ಪ್ರಯತ್ನವನ್ನೇ ಮಾಡದೆ ಇನ್ನೊಬ್ಬರನ್ನು ಜರೆಯುವ ಕೆಲಸ ಮಾಡುತ್ತಿರುತ್ತೇವೆ. ಯಾರೋ ಹೇಳಿದ ಮಾತನ್ನು ನಂಬಿ ನಾವೂ ಪರನಿಂದೆಯಲ್ಲಿ ಭಾಗಿಯಾಗುವುದೂ ಉಂಟು. ಇನ್ನು ಕೆಲವು ಸಂದರ್ಭಗಳಲ್ಲಿ ನಮ್ಮ ವೈಯುಕ್ತಿಕ ಹಿತಾಸಕ್ತಿಗಳ ರಕ್ಷಣೆಗೆ ಅನವಶ್ಯಕ ಕಾರಣಗಳನ್ನು ಕಂಡುಹಿಡಿದು ಪರನಿಂದೆ ಮಾಡುವುದೂ ಉಂಟು. ಸಾಮೂಹಿಕ ಪರನಿಂದೆಯಂತೂ ಒಂದು ಸಾಂಕ್ರಾಮಿಕದಂತೆ. ಗುಂಪು ಸೇರಿದಾಗ ಇದು ಸಾಮಾನ್ಯವಾಗುತ್ತದೆ. 

ಪರನಿಂದೆಯ ಗುರಿ ಉತ್ತಮ ಜೀವಿಗಳಾದರೆ ಅದರ ಪರಿಣಾಮ ಇನ್ನೂ ಘೋರ. ನಮ್ಮ ಕ್ರಿಮಿನಲ್ ಕಾಯ್ದೆಗಳಲ್ಲಿ "ಪ್ರೇಮೆಡಿಟೇಟೆಡ್ ಕೋಲ್ಡ್ ಬ್ಲಡೆಡ್ ಮರ್ಡರ್" ಎನ್ನುವಂತೆ ಇದು. ಈ ಕಾನೂನುಗಳಂತೆ ಇದಕ್ಕೆ ಪರಿಣಾಮಕಾರಿಯಾದ ಹ್ರಾಸವೂ ಅತ್ಯಧಿಕ ಆಗುತ್ತದೆ. ಉತ್ತಮ ಜೀವಿಗಳು ನಮ್ಮ ನಿಂದೆಯಿಂದ ನೊಂದುಕೊಂಡರಂತೂ ಅದರ ಪರಿಣಾಮ ಬಹಳ ಬೇಗ ಆಗುತ್ತದೆ. 

ಪರನಿಂದೆಯ ಫಲ ಆಯುಷ್ಯ ಹಾನಿ. ಮನುಷ್ಯ ಜೀವಮಾನದ ಕಾಲದಲ್ಲಿ ಪರನಿಂದೆಗೆ ಮೀಸಲಿಟ್ಟಷ್ಟು ಕಾಲವೂ ನೇರವಾಗಿ ಆಯುಷ್ಯ ಪ್ರಮಾಣದಲ್ಲಿ ಕಳೆದಂತೆ. ಜೀವನದಲ್ಲಿ ಸಿಕ್ಕ ಕಾಲವನ್ನು ಪರನಿಂದೆಯಲ್ಲಿ ಅಪವ್ಯಯ ಮಾಡಿದ್ದು ಒಂದು ಕಡೆ. ನಮ್ಮ ಆಯುಸ್ಸಿನಲ್ಲಿ ಅಷ್ಟನ್ನು ಕಳೆದುಕೊಂಡದ್ದು ಇನ್ನೊಂದು ಕಡೆ. ದ್ವಿವಿಧ ಹೊಡೆತ ಈ ಪರನಿಂದೆಯ ಕಾರಣ. 

*****

ಇನ್ನೊಬ್ಬರ ಸ್ವತ್ತನ್ನು ಅಪಹರಿಸುವುದು "ಪರವಿತ್ತಾಪಹಾರ" ಆಗುತ್ತದೆ. ಇದು ಭೌತಿಕವಾಗಿ ಮತ್ತೊಬ್ಬರ ಆಸ್ತಿಯನ್ನು ಲಪಟಾಯಿಸುವುದು ಮಾತ್ರವಲ್ಲ. ಬೇರೆಯವರಿಗೆ ಬರಬೇಕಾದ ಆಸ್ತಿ, ಹೆಸರು, ಮನ್ನಣೆ ಮುಂತಾದುವನ್ನು ತಪ್ಪು ಕಾರಣಗಳನ್ನು ಕೊಟ್ಟು ಬರದಂತೆ ಮಾಡುವುದೂ ಪರವಿತ್ತಾಪಹಾರವೇ ಆಗುತ್ತದೆ. ಹೀಗೆ ಮಾಡಿ ಸುಖ ಅನುಭವಿಸುವುದು ಮತ್ತು ಆ ಕಾಲದಲ್ಲಿ ಇಲ್ಲದ ಹಿಗ್ಗನ್ನು ಆಸ್ವಾದಿಸುವುದು ಕ್ಷಣಿಕ. 

ಚಿಕ್ಕ ವಯಸ್ಸಿನಲ್ಲಿ ಅನೇಕ ಲೌಕಿಕ ಸುಖ ಪ್ರಾಪ್ತಿಗೆ ಎಲ್ಲರೂ ಅವರವರ ಮಟ್ಟದಲ್ಲಿ ಇಂತಹ ಕೆಲಸಗಳನ್ನು ಮಾಡಿರುತ್ತೇವೆ. ಯೌವನದ ಭರದಲ್ಲಿ ಇದು ಅನ್ಯಾಯ ಅನ್ನುವುದೂ ಹೊಳೆಯುವುದಿಲ್ಲ. ಸ್ವಲ್ಪ ವಯಸ್ಸಾದ ಮೇಲೆ, ನಿಧಾನವಾಗಿ ಕುಳಿತು ಯೋಚಿಸುವ ಕಾಲ ಬಂದಾಗ, ಹೀಗೆ ಮಾಡಿದುದಕ್ಕೆ ನಾವೇ ನಾಚಿಕೊಳ್ಳುತ್ತೇವೆ. ಆದರೆ ಆಗ ಕಾಲ ಮಿಂಚಿರುತ್ತದೆ. 

ಪರವಿತ್ತಾಪಹಾರದ ನೇರ ಫಲ ನಮ್ಮ ಸಂಪತ್ತುಗಳ ನಾಶ. ಈ ಸಂಪತ್ತು ಹಣಕಾಸು, ಮನೆ-ಮಠ, ಒಡವೆ-ವಸ್ತುವೇ ಆಗಬೇಕೆಂದಿಲ್ಲ. ಉದ್ಯೋಗದಲ್ಲಿ ಬಡ್ತಿ, ಸಮಾಜದಲ್ಲಿ ಮನ್ನಣೆ, ಸಿಗಬೇಕಾದ ಗೌರವಗಳು ಕೈ ತಪ್ಪುವುದು ಮುಂತಾದುವು ಸಹ ನಮ್ಮ ನಮ್ಮ ಸಂಪತ್ತು ನಾಶದ ರೂಪಗಳೇ ಅಲ್ಲವೇ?

*****

ನಮ್ಮ ವಾಂಗ್ಮಯದಲ್ಲಿ ಅಲ್ಲಲ್ಲಿ ಹೇಳಿರುವ ಈ ಎಲ್ಲ ಮೇಲಿನ ವಿಷಯಗಳನ್ನೂ ಶ್ರೀ ಗೋಪಾಲದಾಸರು ತಮ್ಮ "ಎನ್ನ ಬಿನ್ನಪ ಕೇಳೋ, ಧನ್ವಂತ್ರಿ ದಯಮಾಡೋ" ಎನ್ನುವ ದೇವರನಾಮದಲ್ಲಿ ಸಂಗ್ರಹಿಸಿದ್ದಾರೆ. ತಮ್ಮ ಗುರುಗಳಾದ ಶ್ರೀ ವಿಜಯದಾಸರ ವಿಷಯದಲ್ಲಿ ಶ್ರೀ ಶ್ರೀನಿವಾಸಾಚಾರ್ಯರು (ಮುಂದೆ ಶ್ರೀ ಜಗನ್ನಾಥದಾಸರು ಎಂದು ಹೆಸರಾದವರು) ಮಾಡಿದರೆನ್ನಲಾದ ಅಪಚಾರದ ಕಾರಣ ಅರೋಗ್ಯ ಮತ್ತು ಆಯಸ್ಸನ್ನು ಕಳೆದುಕೊಂಡ ಸಂದರ್ಭದಲ್ಲಿ, ಅದೇ ಗುರುಗಳ ಆಣತಿಯಂತೆ ಈ ದೇವರನಾಮದ ಮೂಲಕ ಧನ್ವಂತರಿಯನ್ನು ಒಲಿಸಿಕೊಂಡು ಅವರನ್ನು ಪಾರುಮಾಡಿದರೆಂದು ಪ್ರತೀತಿ. ಮುಂದೆ ತಮ್ಮ ಆಯುಷ್ಯದಲ್ಲಿ ನಲವತ್ತು ವರುಷಗಳನ್ನು ಶ್ರೀ ಜಗನ್ನಾಥದಾಸರಿಗೆ ಧಾರೆ ಎರೆದುಕೊಟ್ಟರೆಂದು ಹೇಳುತ್ತಾರೆ. 

ಈ ಹಾಡನ್ನು ಕೆಳಗೆ ಕ್ಲಿಕ್ ಮಾಡಿ ಕೇಳಬಹುದು:


ಈ ವಿಷಯಕ್ಕೆ ಸಂಬಂಧಿಸಿದ ಇನ್ನೂ ಕೆಲವು ವಿವರಣೆಗಳನ್ನು ಹಾಡಿನಲ್ಲಿ ಕಾಣಬಹುದು. 

*****

"ಕೆಸರಿನಿಂದ ಕೆಸರ ತೊಳೆದಂತೆ ಕರ್ಮದ ಪಥವು" ಮತ್ತು "ದುಷ್ಕರ್ಮ ಪರಿಹರಿಸೋ" ಎನ್ನುವ ವಿಷಯಗಳನ್ನು ಮುಂದೊಮ್ಮೆ ನೋಡೋಣ. 

Friday, July 11, 2025

ಚಿಂತೆ ಎಂಬ ವಿಶಾಲವಾದ ವೃಕ್ಷ

Large Tree Roots Images – Browse 120,707 Stock Photos, Vectors, and Video |  Adobe Stock

ಚ್ಯವನ ಮಹರ್ಷಿಗಳ ಮಗಳಾದ ಸುಮನಾ ಮತ್ತು ಅವಳ ಪತಿ ಸೋಮಶರ್ಮ ನಡುವೆ ನಡೆದ ಸಂವಾದ, ಮತ್ತು ಆ ಸಂದರ್ಭದಲ್ಲಿ ಸುಮನಾ "ಐದು ರೀತಿಯ ಮಕ್ಕಳು" ಮತ್ತು ಅವರ ಲಕ್ಷಣ, ಜನನದ ಕಾರಣಗಳನ್ನು ವಿವರಿಸುದುದನ್ನು ಹಿಂದಿನ ಅದೇ ಹೆಸರಿನ ಸಂಚಿಕೆಯಲ್ಲಿ ನೋಡಿದೆವು. ಹೇಗೆ ಹಿಂದಿನ ಜನ್ಮಗಳಲ್ಲಿ ಸಾಲಕೊಟ್ಟವರು, ಬೇರೆಯವರಿಂದ ಮೋಸ ಹೋಗಿ ಆಸ್ತಿ-ಪಾಸ್ತಿ ಕಳೆದುಕೊಂಡವರು, ಹಿಂದೆ ಪಡೆದ ಉಪಕಾರಗಳನ್ನು ತೀರಿಸುವವರು ಮತ್ತು ಯಾವುದೇ ಕಾರಣವಿಲ್ಲದೆ ಅವರ ಕರ್ಮಗಳ ಪರಿಪಾಕದಿಂದ ಹುಟ್ಟುವ ನಾಲ್ಕು ವಿಧದ ಮಕ್ಕಳ ಲಕ್ಷಣಗಳನ್ನು ನೋಡಿದೆವು. ಅದೇ ರೀತಿ ಸತ್ಕರ್ಮಗಳನ್ನು ಮಾಡಿದ ಪ್ರಯುಕ್ತ ಹುಟ್ಟುವ ಯೋಗ್ಯ ಮಕ್ಕಳನ್ನು ಪಡೆಯುವ ಸಾಧ್ಯತೆ ಬಗ್ಗೆಯೂ ನೋಡಿದ್ದೆವು. (ಈ "ಐದು ರೀತಿಯ ಮಕ್ಕಳು" ಎನ್ನುವ ಸಂಚಿಕೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ). 

ಸೋಮಶರ್ಮನಿಗೆ ಎರಡು ಚಿಂತೆಗಳು ಕಾಡುತ್ತಿದ್ದವು. ಮೊದಲನೆಯದು ದಾರಿದ್ರ್ಯ ಅನುಭವಿಸುತ್ತಿರುವುದು. ಎರಡನೆಯದು ಮಕ್ಕಳಿಲ್ಲ ಎಂಬ ಕೊರಗು. ಮಕ್ಕಳ ಸಂಬಂಧ ಸುಮನಾ ನೀಡಿದ ವಿವರಣೆಯನ್ನು ನೋಡಿದೆವು. ದರಿದ್ರತೆ ಮತ್ತು ಒಟ್ಟಿನಲ್ಲಿ ಚಿಂತೆಯ ಬಗೆಗೂ ಅವಳು ಬಹಳ ಸಮರ್ಥವಾದ ವಿವರಣೆಯನ್ನು ನೀಡಿರುವುದು ಪದ್ಮ ಪುರಾಣದಲ್ಲಿ ಕಂಡುಬರುತ್ತದೆ. ಅದರ ಸ್ವಲ್ಪ ತಿರುಳನ್ನು ಈಗ ನೋಡೋಣ.

***** 

"ಚಿತೆ" ಮತ್ತು "ಚಿಂತೆ" ಇವೆರಡಕ್ಕೂ ಒಂದು ಸೊನ್ನೆ ಮಾತ್ರ ವ್ಯತ್ಯಾಸ ಎನ್ನುವ ಮಾತು ಬಹಳ ಜನಜನಿತವಾದದ್ದು. ಇದು ಎಲ್ಲರಿಗೂ ಗೊತ್ತಿರುವ ಸಂಗತಿಯಾದರೂ ಈ ಚಿಂತೆ ಅನ್ನುವುದು ಯಾರನ್ನೂ ಬಿಡದು. ಜೀವನದಲ್ಲಿ ಕೆಲವು ವಿಷಯಗಳ ಬಗ್ಗೆ ಯೋಚಿಸಬಾರದೆಂದು ಎಷ್ಟು ಪ್ರಯತ್ನ ಪಟ್ಟರೂ ಚಿಂತೆ ಎನ್ನುವುದು ನಮ್ಮ ಬೆನ್ನು ಬಿಡುವುದಿಲ್ಲ. ಏನಾದರೂ ಕೆಲಸ ಕಾರ್ಯಗಳಲ್ಲಿ ತೊಡಗಿರುವಾಗ ಮತ್ತು ಬೇರೆಯವರ ಸಂಗವಿದ್ದಾಗ ಈ ಚಿಂತೆ ಎನ್ನುವ ಭೂತ ಸ್ವಲ್ಪ ಬಾಲ ಮುದುರಿಕೊಂಡು ಕುಳಿತಿರುತ್ತದೆ. ಒಂಟಿಯಾಗಿ ಸುಮ್ಮನೆ ಕೂತಾಗ ಅಥವಾ ರಾತ್ರಿ ನಿದ್ದೆ ಮಾಡಲು ಯತ್ನಿಸಿದಾಗ ಅದು ಹೆಡೆ, ಬಾಲಗಳನ್ನು ಬಿಚ್ಚಿ ವಿಜೃಂಭಿಸುತ್ತದೆ. ಎಂಥ ತಿಳಿದವರಿಗೂ, ಜ್ಞಾನಿಗಳಿಗೂ ಸಹ ಈ ರೀತಿಯ ಚಿಂತೆಗಳು ಬಾಧಿಸದೆ ಬಿಡುವುದಿಲ್ಲ. 

"ನಾಸ್ತಿ ಚಿಂತಾ ಸಮಂ ದುಃಖಂ ಕಾಯ ಶೋಷಣಮೇವಹಿ" ಎಂದು ಚಿಂತೆಯ ವಿಷಯದಲ್ಲಿ ಹೇಳುತ್ತಾರೆ. ಚಿಂತೆಯಂತಹ ದುಃಖ ಬೇರೆ ಇಲ್ಲ. ಅದರಿಂದ ತಿಂದ ಆಹಾರ ಮೈಗೆ ಹತ್ತುವುದಿಲ್ಲ. ಮನಸ್ಸು ಸರಿಯಾಗಿ ಕೆಲಸ ಮಾಡುವುದಿಲ್ಲ. ಇವುಗಳ ಪರಿಣಾಮದಿಂದ ದೇಹವು ದುರ್ಬಲವಾಗುತ್ತದೆ. ಬಡತನವಂತೂ ಮನುಷ್ಯನನ್ನು ಅಸಂತುಷ್ಟನನ್ನಾಗಿ ಮಾಡುತ್ತದೆ. ಅಂತಹ ವ್ಯಕ್ತಿ ಪ್ರಪಂಚದಲ್ಲಿ ಕಾಣುವ ಎಲ್ಲದರಲ್ಲಿಯೂ ತಪ್ಪನ್ನೇ ಹುಡುಕುತ್ತಾನೆ. ಚಿಂತಾಕ್ರಾಂತನಾದವನಿಗೆ ತನ್ನ ಹಿತೈಷಿಗಳು ಹೇಳುವ ಒಳ್ಳೆಯ ಮಾತುಗಳೂ ಕಹಿ ಎನಿಸುತ್ತವೆ. ಬೇರೆಯವರು ಮತ್ತೇನೋ ವಿಷಯ ಮಾತನಾಡಿಕೊಳ್ಳುತ್ತಿದ್ದರೂ ತನ್ನನ್ನೇ ಕುರಿತು ಅಪಹಾಸ್ಯ ಮಾಡುತ್ತಿರುವರು ಎಂದು ಅನುಮಾನಿಸುತ್ತಾನೆ. 

ಚಾಣಕ್ಯ ನೀತಿಯು "ವರಂ ವನಂ ವ್ಯಾಘ್ರ ಗಜೇಂದ್ರ ಸೇವಿತಂ, ನ ಬಂಧು ಮಧ್ಯೇ ಧನ ಹೀನ ಜೀವನಮ್" ಮುಂತಾಗಿ ಹೇಳುತ್ತದೆ. ಹುಲಿ, ಆನೆ ಮೊದಲಾದ ಪ್ರಾಣಿಗಳಿರುವ ಕಾಡಿನಲ್ಲಿದ್ದರೂ ಸರಿಯೇ; ನೆಂಟರಿಷ್ಟರ ಬಳಿಯಲ್ಲಿ ಬಡತನದ ಜೀವನ ಬೇಡಪ್ಪಾ ಬೇಡ" ಎಂದು ಅನ್ನಿಸುತ್ತದೆ.  "ಏನಾದರೂ ಮಾಡಿ ಹಣವನ್ನು ಕೂಡಿಹಾಕಬೇಕು. ಈ  ಬಂಧುಗಳ ನಡುವೆ ನೆಮ್ಮದಿಯಿಂದ ಬಾಳಬೇಕು" ಎಂದು ಮನುಷ್ಯ ಪರಿತಪಿಸುತ್ತಾನೆ. (ಈ ರೀತಿ ನೆಂಟರಿಷ್ಟರ ಮಧ್ಯೆ ಬಡತನದ ಜೀವನ ಮಾಡುವುದು ಪ್ರಾಯಶಃ ಈಗಿನ ತಲೆಮಾರು ಕಾಣದು. ಈಗ ಎಲ್ಲ ಕುಟುಂಬಗಳ ಆರ್ಥಿಕ ಪರಿಸ್ಥಿತಿ ಎಷ್ಟೋ ಸುಧಾರಿಸಿದೆ). ಸ್ವಲ್ಪ ಸ್ವಲ್ಪ ಹಣ ಸೇರುತ್ತಿದ್ದಂತೆ ಇನ್ನಷ್ಟು ಬೇಕೆಂಬ ಲೋಭ ಕಾಡಲು ತೊಡಗುತ್ತದೆ. 

*****

ಈ ಲೋಭವೆನ್ನುವುದು ಎಲ್ಲ ಮುಂದಿನ ತೊಂದರೆಗಳಿಗೂ ತಾಯಿಬೇರು. ಸಮಸ್ತ ಅನಿಷ್ಟ ಬೆಳವಣಿಗೆಗಳೂ ಅಲ್ಲಿಂದಲೇ ಪ್ರಾರಂಭ. ಸುಮನಾ ಈ ಮುಂದಿನ ಎಲ್ಲ ಬೆಳವಣಿಗೆಗಳನ್ನೂ ಒಂದು ಸೂತ್ರದ ರೂಪದಲ್ಲಿ  ಹೇಳುತ್ತಾಳೆ:

ಲೋಭ: ಪಾಪಶ್ಚ ಬೀಜಂಹಿ ಮೋಹೋ ಮೂಲ೦ಚ ತಸ್ಯಹಿ 
ಅಸತ್ಯಂ ತಸ್ಯವೈ ಸ್ಕಂಧಃ ಮಾಯಾ ಶಾಖಾ ಸುವಿಸ್ತರಃ 
ದಂಭ ಕೌಟಿಲ್ಯ ಪತ್ರಾಣಿ ಕುಬುಧ್ಯಾ ಪುಷ್ಪಿತಃ ಸದಾ 
ಅನೃತಂ ತಸ್ಯವೈ ಸೌಗಂಧ: ಫಲಾ ಅಜ್ನ್ಯಾನಮೇವ ಚ 

"ಪಾಪ" ಅನ್ನುವ ಹೆಮ್ಮರಕ್ಕೆ ಈ "ಲೋಭ" ಅನ್ನುವುದೇ ಬೀಜರೂಪವು.  ಈ ಲೋಭವು ಮನಸ್ಸು ಎಂಬ ಮಣ್ಣಿನಲ್ಲಿ ಬಿದ್ದ ತಕ್ಷಣ ಬೇರು ಬಿಡಲಾರಂಭಿಸುತ್ತದೆ. ಲೋಭವು ಹೆಚ್ಚಿದಷ್ಟೂ ಬೇರುಗಳು ಆಳ ಮತ್ತು ವಿಶಾಲ ಆಗುತ್ತವೆ. "ಮೋಹ" ಎನ್ನುವುದೇ ಅದರ ಬೇರು. ಈ ಮರಕ್ಕೆ "ಅಸತ್ಯ" ಎನ್ನುವ ಒಂದು ದೊಡ್ಡದಾದ ಕಾಂಡವಿದೆ. "ಕಪಟತನ" (ಮಾಯಾ) ಅನ್ನುವುದು ಈ ಅಸತ್ಯ ಎನ್ನುವ ಭಾರಿ ಕಾಂಡದಿಂದ ಹೊರಡುವ ಅನೇಕ ಕೊಂಬೆಗಳು. "ದಂಭ" ಮತ್ತು "ಕುಟಿಲತೆ" ಅನ್ನುವುವು ಈ ಅಸತ್ಯವೆಂಬ ಕೊಂಬೆಗಳಲ್ಲಿ ಬೆಳೆಯುವ ಅಸಂಖ್ಯಾತ ಎಲೆಗಳು. ಆ ಅನೇಕ ಕೊಂಬೆಗಳ ಮೇಲೆ, ಎಲೆಗಳ ನಡುವೆ, "ಕುಬುದ್ಧಿ" ಎನ್ನುವ ಹೂವು ಸದಾ ಬಿಡುತ್ತದೆ.  ಹೂವುಗಳಲ್ಲಿ ಸಾಮಾನ್ಯವಾಗಿ ಸುವಾಸನೆ ಇದ್ದರೆ ಈ ಕುಬುದ್ಧಿ ಅನ್ನುವ ಹೂವಿನಲ್ಲಿ "ಸುಳ್ಳು ಮಾತುಗಳು" ಎನ್ನುವ ಅನೇಕ ರೀತಿಯ ದುರ್ವಾಸನೆಗಳು ಹರಡಲು ತಯಾರು. ಒಂದು ಮರದಲ್ಲಿ ಇಷ್ಟೆಲ್ಲಾ ಇರುವಾಗ ಕಡೆಗೆ ಅದರಲ್ಲಿ ಹಣ್ಣುಗಳು ಬಲೇಬೇಕಲ್ಲ? ಈ ಪಾಪವೆಂಬ ಮರಕ್ಕೆ "ಅಜ್ಞಾನ" ಎನ್ನುವುದೇ ಹಣ್ಣುಗಳಾಗಿ ತೋರುತ್ತವೆ. ಇಂತಹ ಮರದಲ್ಲಿ ಈ ಅಜ್ಞಾನ ಅನ್ನುವ ಹಣ್ಣಿನ ಆಸೆಯಿಂದ ಕಪಟತನ, ಪಾಖಂಡತನ, ಕ್ರೌರ್ಯ, ಅಸೂಯೆ, ಮುಂತಾದ ಇತರ "ದುರ್ಗುಣ" ರೂಪಗಳ ಹಕ್ಕಿಗಳು ಬಂದು ಸೇರುತ್ತವೆ! 

ಮರಗಿಡಗಳಿಗೆ ಸಾಮಾನ್ಯವಾಗಿ ವರ್ಷದಲ್ಲಿ ಕೆಲವು ತಿಂಗಳುಗಳು ಹೂವು ಮತ್ತು ಹಣ್ಣು ಬಿಡುವ ಕಾಲ. ಆದರೆ ಈ ಪಾಪವೆಂಬ ಮರದಲ್ಲಿ ವರುಷಕ್ಕೆ ಹನ್ನೆರಡು ತಿಂಗಳೂ ಕುಬುದ್ಧಿ ಎನ್ನುವ ಹೂವು ಅರಳುತ್ತದೆ! ಸದಾಕಾಲವೂ ಅಜ್ಞಾನವೆಂಬ ಹಣ್ಣು ತುಂಬಿರುತ್ತದೆ. 

"ಜಂಭ" ಮತ್ತು "ದಂಭ" ಇವುಗಳಿಗೆ ವ್ಯತ್ಯಾಸವಿದೆ. ಇರುವುದನ್ನು ಹೆಚ್ಚಾಗಿ ಹೇಳಿಕೊಳ್ಳುವುದು ಜಂಭ. ಇಲ್ಲದೆ ಇರುವುದನ್ನು ಹೇಳಿಕೊಳ್ಳುವುದು ದಂಭ. ಉದಾಹರಣೆಗೆ: ಒಬ್ಬನ ಜೇಬಿನಲ್ಲಿ ಒಂದು ಸಾವಿರ ರೂಪಾಯಿ ಇದೆ. ಅವನು ಹತ್ತು ಸಾವಿರ ರೂಪಾಯಿ ಇದೆ ಎಂದು ಹೇಳಿದರೆ ಅದು ಜಂಭ ಕೊಚ್ಚಿಕೊಳ್ಳುವುದು. ಇನ್ನೊಬ್ಬನ ಜೇಬಿನಲ್ಲಿ ಒಂದು ರೂಪಾಯಿಯೂ ಇಲ್ಲ. ಅವನು ತನ್ನ ಜೇಬಿನಲ್ಲಿ ಒಂದು ಸಾವಿರ ರೂಪಾಯಿ ಇದೆ ಎಂದು ಹೇಳಿದರೆ ಅದು ದಂಭ. 

"ಕುಟಿಲ" ಅಂದರೆ "ನೆಟ್ಟಗಿಲ್ಲದ್ದು" ಎಂದು ಅರ್ಥ. ಸೊಟ್ಟಗಿದೆ ಎನ್ನಬಹುದು. ಶ್ರೀಕೃಷ್ಣನ ವರ್ಣನೆಯಲ್ಲಿ "ಕುಟಿಲ ಕುಂತಲಂ ಕುವಲಯ ದಳ ನೀಲಂ" ಎನ್ನುತ್ತೇವೆ. ಇಲ್ಲಿ ಕುಟಿಲ ಕುಂತಲಂ ಅಂದರೆ "ಗುಂಗುರು ಕೂದಲು" ಎಂದು ಅರ್ಥ. ಕೆಲವರಿಗೆ, ಅದರಲ್ಲೂ ಮಕ್ಕಳಿಗೆ, ಗುಂಗುರು ಕೂದಲು ಇದ್ದರೆ ಸುಂದರ. ಆದರೆ ನಡೆ-ನುಡಿ ನೇರವಾಗಿರಬೇಕು. ವಕ್ರವಾಗಿರಬಾರದು. ಹೇಳುವುದು, ತೋರಿಸುವುದು ಒಂದು ರೀತಿ. ಆದರೆ ಅದರ ಅರ್ಥ, ಆಚರಣೆ ಇನ್ನೊಂದು ರೀತಿ. ಹೀಗಿದ್ದರೆ ಇದನ್ನೇ "ಕುಟಿಲ ನೀತಿ" ಅನ್ನುವುದು. ಕುಟಿಲ ಸ್ವಭಾವ ಇರುವವರನ್ನು ನಂಬಬಾರದು. ಮಹಾಭಾರತದ ಶಕುನಿ ಇದಕ್ಕೆ ಅತ್ಯುತ್ತಮ ಉದಾಹರಣೆ. 

***** 

ಸುಮನಾ ಹೇಳಿರುವ ಮೇಲಿನ ಪಾಪ ಎಂಬ ಮರದ ವಿವರಗಳು ಬಹಳ ಅರ್ಥವತ್ತಾಗಿದ್ದು ಮೊದಲ ನೋಟದಲ್ಲಿ ಅಷ್ಟು ಸುಲಭವಾಗಿ ಗೊತ್ತಾಗುವುದಿಲ್ಲ. ಆದರೆ ನಿಧಾನವಾಗಿ ಓದಿ, ನಮ್ಮ ನಮ್ಮ ಅನುಭವದ ಹಿನ್ನೆಲಿಯಲ್ಲಿ ಮೆಲಕು ಹಾಕಿದಾಗ ಅದರ ಸತ್ಯವು ನಿಚ್ಚಳವಾಗಿ ಗೋಚರಿಸುತ್ತದೆ. 

"ಪದ್ಮ ಪುರಾಣ" ಸುಮಾರು ಐವತ್ತೈದು ಸಾವಿರ (55,000) ಶ್ಲೋಕಗಳಿರುವ ಒಂದು ಗ್ರಂಥ. ಏಳು (7) ಖಂಡಗಳ ಏಳು ನೂರ ಮೂರು (703) ಅಧ್ಯಾಯಗಳಲ್ಲಿ ಹರಡಿಕೊಂಡಿದೆ. ಶ್ರೀಮದ್ ಭಾಗವತಕ್ಕಿಂತ ಗಾತ್ರದಲ್ಲಿ ಮೂರುಪಟ್ಟು ದೊಡ್ಡದು. ಇಷ್ಟು ವಿಶಾಲ ಗ್ರಂಥದಲ್ಲಿರುವ ವಿಷಯಗಳ ಹರವನ್ನು ನೋಡಿದರೆ ವಿಸ್ಮಯವಾಗುತ್ತದೆ. 

ಭಗವಾನ್ ವೇದವ್ಯಾಸರು ನಮಗೆ ಕೊಟ್ಟಿರುವ ಗ್ರಂಥ ಲೋಕವನ್ನು ನಮ್ಮ ಜೀವನ ಕಾಲದಲ್ಲಿ ಒಮ್ಮೆ ಸರಿಯಾಗಿ ಓದಿ ಮನನ  ಮಾಡುವುದೂ ಒಂದು ದೊಡ್ಡ ಸಾಧನೆಯೇ ಆಗುತ್ತದೆ. ಅವುಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವುದಂತೂ ಇನ್ನೂ ದೂರದ ಮಾತು. ಆಚರಣೆಯಲ್ಲಿ ತರುವುದು ಒಂದು ತಪಸ್ಸೇ ಸರಿ. ಇಷ್ಟು ಕೃತಿರಚನೆ ಹೇಗಾಯಿತು ಎನ್ನುವುದು ನೋಡಿ ಕೇವಲ ಕೈ ಮುಗಿಯಬಹುದು. ಅಷ್ಟೇ. "ವ್ಯಾಸ ಪೂರ್ಣಿಮಾ" ಸಂದರ್ಭದಲ್ಲಿ ಇಂತಹ ಅನೇಕ ಗ್ರಂಥಗಳ ಕರ್ತೃವಾದ ಭಗವಾನ್ ವೇದ ವ್ಯಾಸರಿಗೆ ನಮ್ಮ ಅತ್ಯಂತ ಕೃತಜ್ಞತಾ ಪೂರ್ವಕವಾದ ಗೌರವಾದರ, ನಮನಗಳು ಸಲ್ಲಬೇಕು.  

Tuesday, July 8, 2025

ಮಲಗಿಲ್ಲದವನನ್ನು ಎಬ್ಬಿಸುವುದು!


ಈಗ ಎಲ್ಲೆಲ್ಲೂ ಶಯನೀ ಏಕಾದಶಿಯ ಆಚರಣೆ ವೈಭವ. ಆಷಾಢ ಶುದ್ಧ ಏಕಾದಶಿ "ಶಯನೀ ಏಕಾದಶಿ" ಎಂದು ಪ್ರಸಿದ್ಧಿ. ಅಂದು ದೇಶದ ಎಲ್ಲೆಡೆ ವೈಷ್ಣವ ದೇವಾಲಯಗಳಲ್ಲಿ ಭಕ್ತರ ದಂಡು. ಫಂಡರಾಪುರದ ವಿಠಲ ಮತ್ತು ಶ್ರೀರಂಗದ ರಂಗನಾಥರ ದರ್ಶನಕ್ಕೆ ಸಾಲು ಸಾಲು ಜನ ಸಮೂಹ. ತಿರುಪತಿಯಲ್ಲಂತೂ ಕೇಳುವುದೂ ಬೇಡ. ಎಲ್ಲೆಲ್ಲೂ "ಗೋವಿಂದ" ನಾಮ ಸಂಕೀರ್ತನೆ. 

ಮುಂದೆ, ನಾಲ್ಕು ತಿಂಗಳ ನಂತರ ಬರುವ ಕಾರ್ತೀಕ ಶುದ್ಧ ಏಕಾದಶಿ "ಪ್ರಬೋಧಿನಿ ಏಕಾದಶಿ" ಎಂದು ಪ್ರಸಿದ್ಧಿ. "ಶಯನೀ ಏಕಾದಶಿ"ಯಲ್ಲಿ ಕ್ಷೀರಸಾಗರದಲ್ಲಿ ಪವಡಿಸಿದ ಲಕ್ಷ್ಮೀನಾರಾಯಣನು "ಪ್ರಬೋಧಿನಿ ಏಕಾದಶಿ"ಯಂದು ಏಳುತ್ತಾನಂತೆ. ನಾಲ್ಕು ತಿಂಗಳ ಕಾಲದ ದೀರ್ಘ ನಿದ್ರೆ. ಮಲಗಲೂ ಅವನಿಗೆ ಹಾಲಿನ ಸಮುದ್ರವೇ ಬೇಕು. ಈ ಮಧ್ಯದ ನಾಲ್ಕು ತಿಂಗಳು "ಚಾತುರ್ಮಾಸ ವ್ರತ" ಎಂದು ಆಚರಣೆ. ಏಕಾದಶಿಯ ಆಚರಣೆ ಮತ್ತು ನಾಲ್ಕು ತಿಂಗಳುಗಲ್ಲಿ ಕ್ರಮವಾಗಿ ಶಾಕ (ತರಕಾರಿಗಳು), ದಧಿ (ಮೊಸರು), ಕ್ಷೀರ (ಹಾಲು), ಮತ್ತು ದ್ವಿದಳ (ಬೇಳೆ-ಕಾಳುಗಳು) ಸೇವಿಸುವುದು ಕೂಡದು. ಹಾಲಿನ ಕಡಲಲ್ಲಿ ಮಲಗಿದಂತೆ ನಟಿಸುವವನಿಗೆ ಮುದಕೊಡಲು ಹಾಲು ಮತ್ತು ಅದರಿಂದಾದ ಮೊಸರು ಬಿಡುವ ವ್ರತಗಳು! ಏಕಾದಶಿ ಆಚರಣೆ ಮತ್ತು ಇವುಗಳ ವಿವರವನ್ನು "ಏಕಾದಶಿಯ ದಿನ ಹಾಲು-ಹಣ್ಣು ಸೇವಿಸಿ" ಎನ್ನುವ ಹಿಂದಿನ ಒಂದು ಸಂಚಿಕೆಯಲ್ಲಿ ನೋಡಿದ್ದೆವು. (ಇದನ್ನು ಓದಲು ಇಲ್ಲಿ ಕ್ಲಿಕ್ ಮಾಡಿ). 

ಹಸಿವು, ನಿದ್ರೆ, ಬಾಯಾರಿಕೆ, ಬಸವಳಿಕೆ, ಜನನ, ಮರಣ, ಹಿಂದು, ಮುಂದು, ಮುಂತಾದುವು ಇಲ್ಲದ ಮಹಾಶಯನನಿಗೆ ದೀರ್ಘ ನಿದ್ರೆ ಬರಿಸಿ, ಆ ಕಾಲದಲ್ಲಿ ಈ ಪದಾರ್ಥಗಳಿಲ್ಲದ ಆಹಾರ ಸೇವಿಸಿ, ವ್ರತಾದಿಗಳನ್ನು ಮಾಡಿ ಅವನನ್ನು ಪ್ರೀತನನ್ನಾಗಿಸಿ, ನಂತರ ತಾನು ಕೇಳಿದ್ದು ಸಂಪಾದಿಸುವನು ಈ ಮನುಷ್ಯ. ನಿದ್ದೆ ಮಾಡದವನನ್ನು ಮೊದಲು ಮಲಗಿಸುವುದು. ನಂತರ ಮಲಗಿರದಿದ್ದವನ್ನು ಎಬ್ಬಿಸುವುದು. ಇದೊಂದು ಬಹಳ ವಿಚಿತ್ರದ ವಿನೋದ!

*****

ಒಬ್ಬ ದೊಡ್ಡ ಶ್ರೀಮಂತ. ಜೊತೆಗೆ ಅಷ್ಟೇ ದೊಡ್ಡ ಅಧಿಕಾರವುಂಟು. ನೂರಾರು ಜನರಿಗೆ ಅವನಿಂದ ಸಾವಿರಾರು ಕೆಲಸಗಳು ದಿನ ದಿನವೂ ಆಗಬೇಕು. ಅವನನ್ನು ನೋಡಲು ಕೆಲವರು ಪ್ರತಿದಿನ ಬರುತ್ತಾರೆ. ಬೇರೆ ಕೆಲವರು ಕೆಲಸವಿದ್ದಾಗ ಮಾತ್ರ ಬರುತ್ತಾರೆ. ಮತ್ತೆ ಕೆಲವರು ಅವರ ಕೆಲಸಗಳು ಆಗುವವರೆಗೂ ಬರುತ್ತಿರುತ್ತಾರೆ. ಹಲವರು ದಿನಂಪ್ರತಿ ಹೊಸ ಹೊಸ ಕೆಲಸಗಳನ್ನು ಹೂಡಿಕೊಂಡು ಅವನನ್ನು ನೋಡಲು ಬರುತ್ತಾರೆ. ಒಂದು ಗುಂಪಿನ ಜನರಿಗಂತೂ ಅವನನ್ನು ತಪ್ಪಷ್ಟೇ ದಿನವೂ ನೋಡುವುದೇ ಒಂದು ಉದ್ಯೋಗ. ಹೀಗೆ ಅವನ ಮನೆಯ ಮುಂದೆ ಬೆಳಗಿನಿಂದಲೇ ಜನಜಂಗುಳಿ. 

ಅವನು ಅನೇಕ ವಾಹನಗಳ ಧಣಿಯಾಗಿದ್ದರೂ ಒಂದು ವಿಶೇಷವಾದ ವಾಹನ ಅವನಿಗೇ ಮೀಸಲಾಗಿದೆ. ಅವನು ಅದನ್ನು ಉಪಯೋಗಿಸಲಿ, ಇಲ್ಲದಿರಲಿ, ಪ್ರತಿದಿನ ಅದರ ಚಾಲಕ  ಬೇಗನೆ ಬಂದು ಅದನ್ನು ತಯಾರಿ ಮಾಡುತ್ತಾನೆ. ಅದರ ಮರಮ್ಮತ್ತು ಮಾಡಿ, ತೊಳೆದು, ಒರಸಿ, ಅದರ ಪಕ್ಕದಲ್ಲಿ  ಕಾದು ನಿಂತಿರುತ್ತಾನೆ.  ಅವನಿಗೆ ಇಡೀ ದಿನ ಕೆಲಸವಿಲ್ಲದಿರಬಹುದು. ಯಜಮಾನನು ವಾಹನವನ್ನು ಉಪಯೋಗಿಸದೇ ಬಿಡಬಹುದು. ಆದರೂ ಚಾಲಕನು ಅವನ ಕೆಲಸವನ್ನು ಅವನು ಮಾಡುತ್ತಾನೆ! ಹಾಗೆಂದು, ಬಂದವನು ಯಜಮಾನನು ಮಲಗಿರುವಲ್ಲಿ ಹೋಗಿ ಕೂಗುವುದಿಲ್ಲ. ಬಾಗಿಲ ಹೊರಗೆ ನಿಂತಿರುತ್ತಾನೆ ಅಷ್ಟೇ. ಮನೆಯ ಮಂದಿ ಯಜಮಾನನಿಗೆ ಚಾಲಕ ಬಂದು ನಿಂದಿರುವುದು ಹೇಳಬೇಕು. ಇದೇ ವ್ಯವಸ್ಥೆ. 

ಬೆಳಗಿನ ವಾತಾವರಣ ಹೇಗಿರುತ್ತದೆ? ಹಕ್ಕಿ-ಪಕ್ಷಿಗಳು ಚಿಲ್ಲಿ-ಪಿಲಿಗುಟ್ಟುತ್ತಾ ಅಂದಿನ ಆಹಾರ ಅರಸುತ್ತಾ, ಆಗಸದಲ್ಲಿ ಹಾರಾಡುತ್ತವೆ. ಮೊದಲು ಬೆಟ್ಟಗಳ ಮೇಲೆ ಅರುಣೋದಯವಾಗುತ್ತದೆ. ಶುಭ್ರವಾದ ಆಕಾಶ ಬಣ್ಣಗಳಿಂದ ಬೆಳಗುತ್ತದೆ. ನಂತರ ಸೂರ್ಯದೇವನು ಕೆಂಪಗೆ, ಮೆಲ್ಲಗೆ ಬಂದು ತನ್ನ ಕಿರಣಗಳನ್ನು ಹರಡುತ್ತಾನೆ. ಮೈಮೇಲೆ ಪ್ರಜ್ಞೆ ಅನ್ನುವ ಜ್ಞಾನ ಇರುವ ಯಾವನೂ ಸೂರ್ಯನು ಉದಯಿಸುವ ನಂತರ ನಿದ್ರಿಸಬಾರದು ಎನ್ನುವುದು ಒಂದು ನಿಯಮ. ಪ್ರತಿದಿನ ದೊಡ್ಡವರನ್ನು ನೋಡುವ ಕ್ರಮ ಇಟ್ಟುಕೊಂಡವರು ಆ ಸಮಯಕ್ಕೆ ಬಂದು ನಿಂತು, ನೋಡುವ ಅವಕಾಶಕ್ಕೆ ಕಾದಿರುತ್ತಾರೆ. 

ಆಳುವ ಪ್ರಭುಗಳನ್ನು ಹೊಗಳಲು ವಂದಿ-ಮಾಗಧರು ಎನ್ನುವ ಗುಂಪುಗಳಿರುತ್ತಿದ್ದವು. ಅವರ ಕೆಲಸವೇ ಸುಸ್ವರವಾಗಿ, ರಾಗವಾಗಿ, ಗಟ್ಟಿಯಾಗಿ, ಎಲ್ಲರಿಗೂ ಕೇಳುವಂತೆ ಯಜಮಾನನ ಗುಣಗಳನ್ನು ಕೂಗುವುದು. ಅನೇಕರಿಗೆ ಬೆಳಗಿನ ಕೆಲಸಗಳನ್ನು ಮಾಡುತ್ತಿರುವಾಗ ತಮಗೆ ಪ್ರಿಯವಾದ ಹಾಡುಗಳನ್ನು ಹೇಳುತ್ತಾ ಕೆಲಸಗಳನ್ನು ಮಾಡುವುದು ಅಭ್ಯಾಸ. ಒಂದು ಕಡೆ ಹಾಡು ಹಾಡಿದ ಅನುಭವ. ಮತ್ತೊಂದು ಕಡೆ ಕೆಲಸಗಳೂ ಸಲೀಸಾಗಿ ನಡೆದುವು. ಉಭಯ ರೀತಿಯಲ್ಲಿಯೂ ಅನುಕೂಲ. ಎಲ್ಲೋ ದೂರದಲ್ಲಿರುವವರು ಬೆಳ್ಳಂಬೆಳಿಗ್ಗೆ ತಮ್ಮ ಪ್ರಿಯಜನರ ನೆನಪು ಮಾಡಿಕೊಳ್ಳುವುದೂ ಉಂಟು, 

ಪ್ರಪಂಚದ ಅತಿ ಕಷ್ಟದ ಕೆಲಸಗಳಲ್ಲಿ ಮಲಗಿರುವವರನ್ನು ಎಬ್ಬಿಸುವುದೂ ಒಂದು. ಎಚ್ಚರವಿದ್ದರೂ ಮಲಗಿದಂತೆ ಇರುವವರನ್ನು ಎಬ್ಬಿಸುವುದಂತೂ ಮತ್ತೂ ಕಷ್ಟದ ಕೆಲಸವೇ ಸರಿ. ಒಂದು, ಎರಡು, ಮೂರು ಬಾರಿ ತಾಳ್ಮೆಯಿಂದ ಎಬ್ಬಿಸುವುದು. ನಾಲ್ಕನೆಯ ಬಾರಿ ಧ್ವನಿ ಸ್ವಲ್ಪ ಗಡಸು ಆಗುವುದು ಸಾಮಾನ್ಯ. ಐದನೆಯ ಬಾರಿಯಂತೂ "ಇನ್ನು ಏಳಪ್ಪ! ಎಬ್ಬಿಸಿ, ಎಬ್ಬಿಸಿ, ಸಾಕಾಯಿತು" ಎಂದು ಜೋರಾಗಿ ಕೂಗುವುದು ಆಗಲೇಬೇಕು.  
*****

"ನವಕೋಟಿ ನಾರಾಯಣ" ಎನ್ನುವ ಬಿರುದು ಹೊಂದಿದ್ದ ಶ್ರೀನಿವಾಸ ನಾಯಕರು ಎಲ್ಲವನ್ನೂ ಬಿಟ್ಟು ಹರಿದಾಸರಾದ ಮೇಲೆ ದೇಶದ ಮೂಲೆ ಮೂಲೆ ತಿರುಗಿ ಅನೇಕ ಕ್ಷೇತ್ರಗಳನ್ನು ಸಂದರ್ಶಿಸಿದರು. ಹೀಗೆ ಕಂಡ ಒಂದೊಂದು ದಿವ್ಯ ಮೂರ್ತಿಯ ಮುಂದೆಯೂ ಮೈಮರೆತು ಹಾಡಿ ಕುಣಿದರು. ಈ ರೀತಿ ಸಂಚರಿಸುತ್ತಿದ್ದಾಗ ಒಮ್ಮೆ ಶ್ರೀರಂಗಕ್ಕೆ ಬಂದು ರಂಗನಾಥನನ್ನು ನೋಡಿದರು. ಮಲಗಿದಂತೆ ಇರುವ ಸ್ವಾಮಿಯನ್ನು ಮೇಲಿನ ಎಲ್ಲ ಅಂಶಗಳನ್ನೂ ಸೇರಿಸಿ, ಮಹಾಲಕ್ಷ್ಮಿ ದೇವಿಯು ಅವನನ್ನು ಎಬ್ಬಿಸುತ್ತಿರುವಂತೆ ಒಂದು ಕೃತಿ ರಚಿಸಿ ಹಾಡಿದರು. ಅದೇ "ರಂಗನಾಯಕ, ರಾಜೀವಲೋಚನ, ರಮಣನೇ ಬೆಳಗಾಯ್ತು , ಎಳೆನ್ನುತ" ಎಂಬ ಕೃತಿ. 

ಇದರ ಐದು ನುಡಿಗಳಲ್ಲಿ ಮೇಲೆ ನಾವು ಬೆಳಗಿನಲ್ಲಿ ಕಾಣುವ ಶ್ರೀಮಂತ, ಅಧಿಕಾರಿಯ ಮನೆಯ ಮುಂದಿನ ದೃಶ್ಯವನ್ನು ಕಾಣಬಹುದು. ಶ್ರೀರಂಗದಲ್ಲಿ ಮಲಗಿರುವವನು ಸಾಮಾನ್ಯ ಶ್ರೀಮಂತನಲ್ಲ. ಅವಂತಹ ಶ್ರೀಮಂತ ಇನ್ನೊಬ್ಬನಿಲ್ಲ. ಅವನು ಅಂತಿಂತಹ ಅಧಿಕಾರಿಯಲ್ಲ. ಅವನಿಗಿರುವ ಅಧಿಕಾರ ಬೇರೆ ಯಾರಿಗೂ ಇಲ್ಲ. ಎಬ್ಬಿಸುವವಳೂ ಜಗದಾಂಬೆಯಾದ ಮಹಾಲಕ್ಷ್ಮಿ ದೇವಿ. 

  1. ಮೊದಲನೆಯ ನುಡಿಯಲ್ಲಿ ವಾಹನನಾದ ಗರುಡನ ಬರವು, ದ್ವಾರದಲ್ಲಿ ಅವನ ನಿರೀಕ್ಷೆ, ಮತ್ತು ಹಕ್ಕಿ-ಪಕ್ಷಿಗಳ ಕಲರವ ರೂಪದ ಪ್ರಾರ್ಥನೆ. ಸೃಷ್ಟಿಯಲ್ಲಿಯ ಸಕಲ ಶಬ್ದಗಳೂ ಪರಮಾತ್ಮನ ಕುರಿತೇ ಹೇಳುತ್ತವೆ ಎನ್ನುವ ಪ್ರಮೇಯದ ನಿರೂಪಣೆ. 
  2. ಎರಡನೆಯ ನುಡಿಯಲ್ಲಿ ಅವನ ದರ್ಶನ ಮಾಡಲು ಪ್ರತಿ ದಿನ ಆಗಮಿಸುವ ಸನಕ, ಸನಂದನ, ಸನತ್ಸುಜಾತ, ಸನತ್ಕುಮಾರರ ಬರವು, ಪರಮಾತ್ಮನ ಕುರಿತು ವಿಶೇಷ ಕೃತಿ ರಚನೆ ಮಾಡಿದ ವ್ಯಾಸ-ವಾಲ್ಮೀಕಿಗಳು, ಮತ್ತು ಅವನ್ನು ಹಾಡಿ-ಹೇಳುತ್ತಾ ಪ್ರಚುರಪಡಿಸಿದ ಶುಕ-ಶೌನಕರ ನೆನಪು. 
  3. ಮೂರನೆಯ ನುಡಿಯಲ್ಲಿ ದೇವತೆಗಳು, ಕಿನ್ನರರು, ಕಿಂಪುರುಷರು, ಉರಗರು ಮೊದಲಾದ ಗುಂಪುಗಳ ಸದಸ್ಯರು ಅವನ ಗುಣಗಳನ್ನು ಹೊಗಳುವ ಪರಿ. ಅರುಣೋದಯ ಮತ್ತು ಬಾಲ ಸೂರ್ಯನ ಕಿರಣಗಳ ಪಸರಿಸುವ ವಿವರಣೆ. 
  4. ನಾಲ್ಕನೆಯ ನುಡಿಯಲ್ಲಿ ವೈಕುಂಠದವರೆಗೂ ಬರಲಾಗದ, ಆದರೆ ಅವರಿದ್ದ ಕಡೆಯೇ ಉದಯರಾಗ ಹಾಡುತ್ತ ತಮ್ಮ ಮನೆ ಕೆಲಸಗಳನ್ನು ಮಾಡುವ ಗೃಹಿಣಿಯರು. ಅವನನ್ನು ಕುರಿತು ಹಾಡುವಾಗ ಮೊಸರು ಕಡೆದರೆ, ಹಾಡು ಮುಗಿಯುವ ವೇಳೆಗೆ ಬೆಣ್ಣೆಯೂ ಬಂತು. 
  5. ಐದನೆಯ ನುಡಿಯಲ್ಲಿ ಪರಿಪರಿಯಿಂದ ಹಾಡುತ್ತಾ ದರ್ಶನ ಬೇಡುವ ಅಸಂಖ್ಯಾತ ಭಕ್ತರ ಆರ್ತನಾದ. ಲೌಕಿಕದಲ್ಲಿ ಮಲಗಿದವರನ್ನು ಎಬ್ಬಿಸುವವರ ತಾಳ್ಮೆ ಕಳೆದುಕೊಳ್ಳುವ ಸೂಚನೆ. "ಪುರಂದರ ವಿಠಲ, ನೀನೇಳೋ!" ಎನ್ನುವ ಗಡಸು ಧ್ವನಿ!
ಶ್ರೀಮತಿ ಸಾಧ್ವಿನಿ ಕೊಪ್ಪ ಅವರು ಹೆಚ್ಚಿನ ವಾದ್ಯಗಳ ಆಡಂಬರವಿಲ್ಲದೆ ಈ ಎಲ್ಲ ಅಂಶಗಳನ್ನು ಗಮನಿಸಬಹುದಾದ ರೀತಿಯಲ್ಲಿ ಹಾಡಿರುವ ಈ ಕೃತಿಯನ್ನು ಇಲ್ಲಿ ಕೇಳಬಹುದು:


ನಮ್ಮ ಹೆಮ್ಮೆಯ ಯಕ್ಷಗಾನ ಕಲಾವಿದರು ಈ ಕೃತಿಯನ್ನು (ರಾತ್ರಿಯೆಲ್ಲ ಯಕ್ಷಗಾನ ಪ್ರಸಂಗ ನಡೆದ ನಂತರ ಬೆಳಗಾಗುತ್ತಿದ್ದಂತೆ ಮುಗಿವ ಸಮಯದಲ್ಲಿ) ಮಂಗಳ ಪದ್ಯವಾಗಿ ಸೊಗಸಾಗಿ ಉಪಯೋಗಿಸುತ್ತಾರೆ. ಇದರಲ್ಲಿ ಅವರ ವಿಶಿಷ್ಟ ಸಂಗೀತ, ಅಭಿನಯ, ಎರಡನ್ನೂ ನೋಡಬಹುದು. ಹಾಡಿನ ಕೇವಲ ಒಂದೇ ಒಂದು ನುಡಿ ಉಪಯೋಗಿಸಿಕೊಂಡರೂ ಸೊಗಸಾದ ಅನುಭವ ಕೊಡುತ್ತದೆ:


ಈ ಹಾಡಿನ ಜೊತೆಗೆ ಅವರ ಕಾರ್ಯಕ್ರಮದ ಭರತವಾಕ್ಯ ಕೂಡ ಸೇರಿಸಿ ಮಂಗಳ ಹಾಡುತ್ತಾರೆ. ಸಾಹಿತ್ಯ, ಸಂಗೀತ, ಅಭಿನಯಗಳ ಅಪೂರ್ವ ರಸಾಯನ. 

*****

ಶ್ರೀ ಪುರಂದರದಾರ ಕೃತಿಗಳು ಕೇವಲ ಭಕ್ತಿ ಪ್ರಧಾನವಾಗಿರದೆ ತಮ್ಮ ಸುತ್ತ-ಮುತ್ತಲ ಪ್ರಾಪಂಚಿಕ ವಿವರಗಳನ್ನೂ ಹೇಗೆ ಒಳಗೊಂಡಿರುತ್ತವೆ ಎನ್ನುವುದಕ್ಕೆ ಇದೊಂದು ಸೊಗಸಾದ ಉದಾಹರಣೆ. 

Sunday, July 6, 2025

ಐದು ರೀತಿಯ ಮಕ್ಕಳು


ಹಿಂದಿನ ಸಂಚಿಕೆಗಳಲ್ಲಿ ಅಷ್ಟ ಭೋಗಗಳು, ಅಷ್ಟ ಭಾಗ್ಯಗಳು ಮತ್ತು ಅಷ್ಟ ಐಶ್ವರ್ಯಗಳು ಎಂಬ ವಿಷಯಗಳ ಬಗ್ಗೆ ಸ್ವಲ್ಪಮಟ್ಟಿಗೆ ನೋಡಿದ್ದೆವು. ಅಷ್ಟ ಐಶ್ವರ್ಯಗಳಲ್ಲಿ ಸಂತಾನವೂ ಒಂದು ಎಂದು ಚರ್ಚಿಸಿದ್ದೆವು. (ಈ ಕೊನೆಯ ಸಂಚಿಕೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ).  ಅನೇಕ ದಂಪತಿಗಳಿಗೆ ಎಲ್ಲ ಭೋಗ-ಭಾಗ್ಯ-ಐಶ್ವರ್ಯಗಳು ದೊರಕಿದ್ದರೂ ಸಂತಾನ ಇಲ್ಲ ಎನ್ನುವ ಒಂದು ಕೊರತೆ ಕಾಡುವುದು ಉಂಟು. ಅನೇಕ ಪುರಾಣದ ಕಥೆಗಳು ಪ್ರಾರಂಭವಾಗುವುದು ಈ ಕೊರತೆಯ ಕಾರಣದಿಂದಲೇ. ಮತ್ತೆ ಕೆಲವು ಕಥೆಗಳು ಪ್ರಾರಂಭವಾಗುವುದು ಈ ಸಂತಾನದ ಕಾರಣದಿಂದ ಉದ್ಭವವಾಗುವ ಸಮಸ್ಯೆಗಳಿಂದಲೂ ಹೌದು. ಹೀಗೆ, ಇದ್ದರೂ ಸಮಸ್ಯೆ, ಇಲ್ಲದಿದ್ದರೂ ಸಮಸ್ಯೆ ಸೃಷ್ಟಿಸುವುದು ಈ ಸಂತಾನವೆಂಬ ಒಂದು ಆಸ್ತಿಯ ವಿಶೇಷತೆ. ಕೆಲವೊಮ್ಮೆ ಈ ಆಸ್ತಿ ಭಾದ್ಯತೆ ಆಗುವುದೂ ಸಾಧ್ಯ. ಹೀಗೂ ಉಂಟು. ಹಾಗೂ ಉಂಟು! 

ನಮ್ಮ ಎರಡು ಮಹಾಕಾವ್ಯಗಳು ಮತ್ತು ವಾಂಗ್ಮಯದ ಎರಡು ಕಣ್ಣುಗಳಾದ ರಾಮಾಯಣ ಮತ್ತು ಮಹಾಭಾರತ ನಿಜವಾಗಿ ಪ್ರಾರಂಭವಾಗುವುದು ಈ ಸಮಸ್ಯೆಯಿಂದಲೇ. ರಾಮಾಯಣದ ತಿರುಳು ದಶರಥನ ಮಕ್ಕಳಿಲ್ಲವೆಂಬ ಕೊರಗು ಮತ್ತು ಪುತ್ರಕಾಮೇಷ್ಟಿಯಿಂದ ಹುಟ್ಟುತ್ತದೆ. ಮಹಾಭಾರತದ ಅಸಲಿ ಪ್ರಾರಂಭ ಧೃತರಾಷ್ಟ್ರನ ನೂರಾಒಂದು ಮಕ್ಕಳಿಂದ! 

***** 

ನಮ್ಮ ಬಾಲ್ಯದ ಕಾಲದಲ್ಲಿ ಹಿರಿಯರು ಸಂವಾದದಲ್ಲಿ ತೊಡಗಿದಾಗ ಮೊದಲನೇ ಪ್ರಶ್ನೆ "ಮಕ್ಕಳೆಷ್ಟು?" ಎನ್ನುವುದೇ ಆಗಿರುತ್ತಿತ್ತು. ಕೆಲವರಿಗೆ ಹೆಚ್ಚು ಮಕ್ಕಳು. ನಾಲ್ಕು, ಆರು, ಎಂಟು ಮಕ್ಕಳಿರುತ್ತಿದ್ದುದು ಸಾಮಾನ್ಯವಾಗಿರುತ್ತಿತ್ತು. ಹೆಚ್ಚು ಮಕ್ಕಳಿರುವವರಿಗೆ ಕಡಿಮೆಯಿರುವವರು ಸಮಾಧಾನ ಹೇಳುವಂತೆ "ಇರಲಿ ಬಿಡಿ. ಯಾರಾದರೂ ಕೇಳುವುದು 'ಎಷ್ಟು ಮಕ್ಕಳು?' ಎಂದಲ್ಲವೇ? 'ಎಷ್ಟು ಆಸ್ತಿ?' ಎಂದು ಯಾರೂ ಕೇಳುವುದಿಲ್ಲವಲ್ಲ?" ಎನ್ನುತ್ತಿದ್ದರು. ಯಾರಿಗಾದರೂ ಮಕ್ಕಳಿಲ್ಲದಿದ್ದರೆ ಇದ್ದವರು ಇದೇ ರೀತಿ "ಆಗುತ್ತವೆ ಬಿಡಿ. ದೇವರು ಕಣ್ಣು ಬಿಟ್ಟು ನೋಡಿದರೆ ಎಷ್ಟು ಹೊತ್ತು?" ಅನ್ನುತ್ತಿದ್ದರು. ಈಗ ಮಕ್ಕಳ ವಿಷಯ ಮಾತಾಡುವುದೇ ಒಂದು ಕಷ್ಟದ ಕೆಲಸ. ಅದರ ಪ್ರಸ್ತಾಪ ಮಾಡಬೇಕೋ ಮಾಡಬಾರದೋ ಗೊತ್ತಾಗುವುದಿಲ್ಲ. ರಾಜಕೀಯ ವಿಷಯಗಳು ಮತ್ತು ಹವಾಮಾನ ವಿವರದಿಂದ ಮಾತುಕತೆ ಪ್ರಾರಂಭಿಸುವುದು ಉಭಯತ್ರರಿಗೂ ಒಳ್ಳೆಯದು ಎಂದು ಎಲ್ಲರಿಗೂ ಗೊತ್ತು. 

ನಮ್ಮ ದೇಶ ಸ್ವಾತಂತ್ರ್ಯ ಪಡೆದಾಗಿನಿಂದ "ಅತಿಸಂತಾನ" ಒಂದು ದೊಡ್ಡ ಸಮಸ್ಯೆ ಎಂದು ಗುರುತಿಸಿದ ಸರ್ಕಾರ "ಮಿತಸಂತಾನ" ಎನ್ನುವ ಕಾರ್ಯಕ್ರಮ ರೂಪಿಸಿತು. ಅರವತ್ತರ ದಶಕದಲ್ಲಿ "ಒಂದು ಎರಡು ಬೇಕು; ಮೂರು ಸಾಕು" ಎನ್ನುವ ಘೋಷಣೆ ಚಾಲ್ತಿಯಲ್ಲಿತ್ತು. ಎಪ್ಪತ್ತರ ದಶಕದಲ್ಲಿ ಅದು "ಆರತಿಗೊಬ್ಬ ಮಗಳು; ಕೀರುತಿಗೊಬ್ಬ ಮಗ" ಎಂದು ಬದಲಾಯಿತು. ಎಲ್ಲಾ ಸರ್ಕಾರೀ ಕಟ್ಟಡಗಳ ಮೇಲೆ ಈ ಘೋಷವಾಕ್ಯಗಳು ರಾರಾಜಿಸಿದವು. "ಸ್ತ್ರೀ ಸ್ವಾತಂತ್ಯವಾದಿಗಳು" ಎರಡನೆಯ ಘೋಷಣೆಗೆ ನ್ಯಾಯವಾಗಿಯೇ ಆಕ್ಷೇಪಿಸಿದರು. "ಮಗಳಿಂದ ಕೀರ್ತಿ ಇಲ್ಲವೇ?" ಎಂದು ಪ್ರಬಲವಾಗಿ ಪ್ರತಿರೋಧ ಬಂತು. "ಆರೋಗ್ಯ ಮತ್ತು ಕುಟುಂಬ ಯೋಜನೆ" ಇಲಾಖೆ ತನ್ನ ಹೆಸರು ಬದಲಾಯಿಸಿಕೊಂಡು "ಆರೋಗ್ಯ ಮತ್ತು ಕುಟುಂಬ ಕಲ್ಯಾಣ" ಇಲಾಖೆ ಆಯಿತು. ಎಂಭತ್ತರ ದಶಕದಲ್ಲಿ ಸರ್ಕಾರ ಕಷ್ಟ ಪಡುವ ಕಾಲ ಕಳೆದು ಜನರೇ "ಒಂದು ಮಗು ಸಾಕು" ಎನ್ನತೊಡಗಿದರು. ತೊಂಬತ್ತರ ದಶಕದಲ್ಲಿ "ಇರುವುದಕ್ಕಿಂತ ಇಲ್ಲದಿರುವುದೇ ಒಳ್ಳೆಯದು" ಎಂದು ಬಾಯಲ್ಲಿ ಹೇಳದಿದ್ದರೂ ಆಚರಣೆಯಲ್ಲಿ ತಂದರು. 

ಹೊಸ ಶತಮಾನದಲ್ಲಿ ಇನ್ನೂ ಪ್ರಚಂಡ ಬದಲಾವಣೆಗಳಾದುವು. ಸಮಸ್ಯೆಯ ಮೂಲಕ್ಕೇ ಕೊಡಲಿ ಪೆಟ್ಟು ಬೀಳತೊಡಗಿತು. ಮದುವೆಯೆನ್ನುವುದು ಇದ್ದರೆ ತಾನೇ ಮಕ್ಕಳು ಎನ್ನುವ ಸಮಸ್ಯೆ? ಮದುವೆಯೇ ಬೇಡ. ಹಾಗೆಯೇ ಜೊತೆಯಲ್ಲಿ ಇರೋಣ. ಜೊತೆ ಬೇಡ ಎಂದಾಗ ಸುಮ್ಮನೆ ಬೇರೆ ಹೋದರಾಯಿತು. ಇದರಿಂದ ವಿವಾಹ ವಿಚ್ಚೇದನ ಮತ್ತು ಅದರಿಂದಾಗುವ ಸಮಸ್ಯೆಗಳೇ ರದ್ದು ಎಂದು ಯುವ ಜನಾಂಗ ತೀರ್ಮಾನಿಸಿತು. ಆದರೂ ಕೆಲವೆಡೆ ಅಪಘಾತಗಳಾಗಿ ಮದುವೆಯಿಲ್ಲದೇ ಮಕ್ಕಳಾಗತೊಡಗಿದವು. ಕಳೆದ ದಶಕದಲ್ಲಿ ಈ ಎಲ್ಲ ರೀತಿಯ ಮಕ್ಕಳ ಸಮಸ್ಯೆಗೆ ಅತಿ ದೊಡ್ಡ ಪರಿಹಾರ ಸಿಕ್ಕಿದೆ. ಗಂಡು-ಹೆಣ್ಣು ಮದುವೆಯಾದರೆ ಅಥವಾ ಜೊತೆಯಲ್ಲಿದ್ದರೆ ತಾನೇ ಮಕ್ಕಳ ಸಮಸ್ಯೆ? ಸಲಿಂಗ ವಿವಾಹದಿಂದ ಈ ತೊಂದರೆಯೇ ಇರುವುದಿಲ್ಲವಲ್ಲ. ಗಂಡು-ಗಂಡು ಮತ್ತು ಹೆಣ್ಣು-ಹೆಣ್ಣು ಮದುವೆಯಾದರೆ ಮಕ್ಕಳಾಗುವ ಸಂಭವವೇ ಇಲ್ಲವಲ್ಲ! ಈಗ ಇದರ ಕಾಲ ನಡೆಯುತ್ತಿದೆ. 

*****

ದಂಪತಿಗಳಿಗೆ ಮಕ್ಕಳು ಏಕೆ ಹುಟ್ಟುತ್ತಾರೆ? ಹುಟ್ಟುವ ಮಕ್ಕಳು ಯಾವ ರೀತಿಯವು? ಜನ್ಮ-ಜನ್ಮಗಳ ಸಂಬಂಧಗಳು ಉಂಟೋ? ಈ ರೀತಿಯ ಪ್ರಶ್ನೆಗಳಿಗೆ "ಪದ್ಮ ಪುರಾಣ" ತನ್ನ ಒಂದು ಪ್ರಸಂಗದಲ್ಲಿ ಉತ್ತರ ಕೊಡುತ್ತದೆ. 

ನರ್ಮದಾ ನದಿಯ ತೀರದ "ವಾಮನ ತೀರ್ಥ" ಎನ್ನುವ ಪ್ರದೇಶದಲ್ಲಿ ಸೋಮಶರ್ಮ ಎಂಬ ಒಬ್ಬ ಸಾತ್ವಿಕನು ವಾಸವಾಗಿರುತ್ತಾನೆ. ಅವನ ವಿವಾಹ ಚ್ಯವನ ಋಷಿಗಳ ಮಗಳಾದ ಸುಮನಾ ಎನ್ನುವ ಯುವತಿಯೊಡನೆ ಆಗುತ್ತದೆ. ("ಸತಿ ಸುಕನ್ಯ" ಚಲನಚಿತ್ರ ನೋಡಿದವರಿಗೆ ಸುಕನ್ಯಳ ಗಂಡ ಚ್ಯವನ ಋಷಿ ಎಂದು ನೆನಪಿಗೆ ಬರಬಹುದು. "ಚ್ಯವನಪ್ರಾಶ" ಅನ್ನುವುದನ್ನು ಅಶ್ವಿನಿ ದೇವತೆಗಳ ಕಡೆಯಿಂದ ಭೂಮಿಗೆ ತಂದ ತಪಸ್ವಿಗಳು ಅವರು. ಭೃಗು ಋಷಿಗಳ ವಂಶಜರು).  ತಂದೆಗೆ ತಕ್ಕ ಮಗಳಾದ ಸುಮನಾ ಬಹಳ ತಿಳುವಳಿಕೆಯುಳ್ಳ ಹೆಣ್ಣು ಮಗಳು. ಹೆಸರಿಗೆ ತಕ್ಕಂತೆ ಒಳ್ಳೆಯ ಮನಸ್ಸಿನವಳು. ಸೋಮಶರ್ಮನೂ ಜ್ಞಾನಿಯೇ. ಚೆನ್ನಾಗಿ ಸಂಸಾರ ಮಾಡುತ್ತಿದ್ದ ಈ ದಂಪತಿಗಳಿಗೆ ಮಕ್ಕಳಿರುವುದಿಲ್ಲ. ಸೋಮಶರ್ಮನಿಗೆ ಎರಡು ಚಿಂತೆಗಳು. ಮೊದಲನೆಯದು ದಾರಿದ್ರ್ಯ. ಎರಡನೆಯದು ಮಕ್ಕಳಿಲ್ಲ ಎನ್ನುವುದು. ಹೀಗೆ ಚಿಂತಾಕ್ರಾಂತನಾಗಿರುವ ಸೋಮಶರ್ಮನನ್ನು ಗಮನಿಸಿದ ಸುಮನಾ ಒಂದು ದಿನ ಅವನಿಗೆ ಸಮಾಧಾನ ಹೇಳುತ್ತಾಳೆ. ದಾರಿದ್ರ್ಯದ ವಿಷಯದಲ್ಲಿ ಹೇಳಿದ ಸಮಾಧಾನದ ವಿಷಯ ಮುಂದೊಮ್ಮೆ ನೋಡೋಣ. ಈಗ ಮಕ್ಕಳ ಸಮಸ್ಯೆ ಪ್ರಸ್ತಾಪ ಬಂದಿರುವುದರಿಂದ ಅದನ್ನು ಗಮನಿಸೋಣ. 

ಸುಮನಾ ಹೇಳುವ ಸೂತ್ರರೂಪವಾದ ಮಕ್ಕಳ ನಾಲ್ಕು ವಿಧಗಳ ವಿವರಣೆ ಹೀಗಿದೆ:

ಋಣಸಂಬಂಧಿನಃ ಕೇಚಿತ್ ಕೇಚಿತ್ ನ್ಯಾಸಾಪಹಾರಕಾ:
ಲಾಭಪ್ರದಾ ಭವಂತೇ ಕೇ ಉದಾಸೀನಾ ತಥಾಪರೇ  

  1. ಮೊದಲನೆಯ ವರ್ಗದ ಮಕ್ಕಳು "ಸಾಲ ವಸೂಲಿಗೆ ಬಂದವರು".  ಹಿಂದಿನ ಜನ್ಮಗಳಲ್ಲಿ ನಾವು ಯಾರಿಂದಲಾದರೂ ಹಣ-ಕಾಸು, ವಸ್ತುಗಳನ್ನು ಸಾಲ ಪಡೆದು ಹಿಂದಿರುಗಿಸದಿದ್ದರೆ ಹಾಗೆ ಸಾಲಕೊಟ್ಟವರು ಈ ಜನ್ಮದಲ್ಲಿ ನಮ್ಮ ಮಕ್ಕಳಾಗಿ ಹುಟ್ಟಿ ನಮ್ಮಿಂದ ಅದನ್ನು ಬಡ್ಡಿ ಸಹಿತ ವಸೂಲಿ ಮಾಡಲು ಹುಟ್ಟಿದ ಮಕ್ಕಳು ಇವರು. ಇವರಿಂದ ತಂದೆ-ತಾಯಿಗಳಿಗೆ ಯಾವುದೇ ಪ್ರಯೋಜನ ಇರುವುದಿಲ್ಲ. ತಮ್ಮ ಸಾಲ ವಸೂಲಾಗುವವರೆಗೂ ಜೊತೆಯಲ್ಲಿದ್ದು, ಅದು ಮುಗಿದ ಕೂಡಲೇ ಹೊರಟು ಹೋಗುತ್ತಾರೆ. ಇವರು "ಋಣಸಂಬಂಧಿ ಮಕ್ಕಳು". 
  2. ಎರಡನೆಯ ವರ್ಗದ ಮಕ್ಕಳು "ತಿಂದದ್ದು ಕಕ್ಕಿಸುವವರು". ಯಾವುದೋ ಜನ್ಮದಲ್ಲಿ ಇನ್ನೊಬ್ಬರ ಹಣವನ್ನು ಅಥವಾ ವಸ್ತು-ಆಸ್ತಿಗಳನ್ನು ಅನ್ಯಾಯವಾಗಿ ತಿಂದುಹಾಕಿದ್ದರೆ ಆ ರೀತಿ ಕಳೆದುಕೊಂಡವರು ಈ ಜನ್ಮದಲ್ಲಿ ಮಕ್ಕಳಾಗಿ ಬಂದು ಅದನ್ನು ಹಿಂಪಡೆಯುವವರು. ಮೊದಲನೆಯ ವರ್ಗದವರಿಗೂ ಇವರಿಗೂ ಏನು ವ್ಯತ್ಯಾಸ? ಮೊದಲನೆಯದು ನಾವು ಸಾಲ ಕೇಳಿ ಅವರು ಒಪ್ಪಿ ಕೊಟ್ಟವರು. ಎರಡನೆಯವರು ಅವರಿಂದ ನಾವು ಅನ್ಯಾಯವಾಗಿ ಕಿತ್ತುಕೊಂಡುದರಿಂದ ನಷ್ಟ ಅನುಭವಿಸಿದವರು. ಆದುದರಿಂದ  ಇವರ ವ್ಯವಹಾರ ಮೊದಲನೆಯ ವರ್ಗಕ್ಕಿಂತ ಹೆಚ್ಚು ಕಠಿಣವಾಗಿರುತ್ತದೆ. 
  3. ಮೂರನೆಯ ವರ್ಗದ ಮಕ್ಕಳು "ಲಾಭಪ್ರದರು". ಕಳೆದ ಜನ್ಮಗಳಲ್ಲಿ ನಾವು ಮತ್ತೊಬ್ಬರಿಗೆ ಉಪಕಾರ ಮಾಡಿದ್ದರೆ ಅದರ ಸ್ಮರಣೆಯಿಂದ ಈ ಜನ್ಮದಲ್ಲಿ ನಮಗೆ ಉಪಕಾರ ಮಾಡಲು ಹುಟ್ಟಿದವರು. ಇವರು ತಂದೆ-ತಾಯಿಯರಿಗೆ ಬಹಳ ಅನುಕೂಲ ಮಾಡಿಕೊಡುವ ಮಕ್ಕಳಾಗುತ್ತಾರೆ. ಕೆಲವೊಮ್ಮೆ ಮಕ್ಕಳು ತಾಯಿ ಮತ್ತು ತಂದೆ ಇಬ್ಬರಲ್ಲಿ ಒಬ್ಬರಿಗೆ ಮಾತ್ರ ಅನುಕೂಲರಾಗಿರಬಹುದು. ಇದು ಮಕ್ಕಳಾಗಿ ಹುಟ್ಟಿದವರು ಯಾರಿಂದ ಹಿಂದೆ ಉಪಕೃತರಾಗಿದ್ದರೋ ಅದರ ಮೇಲೆ ಅವಲಂಬಿಸುತ್ತದೆ. 
  4. ನಾಲ್ಕನೆಯ ವರ್ಗದ ಮಕ್ಕಳು "ಉದಾಸೀನ ಪುತ್ರರು". ಇವರು ಮೇಲಿನ ಮೂರೂ ಕಾರಣಗಳಿಲ್ಲದ ಮಕ್ಕಳು. ಇವರು ಅವರ ಹಿಂದಿನ ಜನ್ಮಗಳ ಫಲಗಳನ್ನು ಅನುಭವಿಸಲು ಹುಟ್ಟಿದವರು. ಜನ್ಮ ಪಡೆಯುವುದಕ್ಕಾಗಿ ಮಾತ್ರವೇ ತಾಯಿ-ತಂದೆಯರ ಆಶ್ರಯ ಪಡೆದವರು. ಇಂತಹವರು ತಮ್ಮ ಪಾಡು ತಾವು ನೋಡಿಕೊಂಡು ತಂದೆ-ತಾಯಿಯರ ವಿಷಯದಲ್ಲಿ ಉದಾಸೀನರಾಗಿರುತ್ತಾರೆ. 
ಹಾಗಿದ್ದರೆ ಐದನೆಯ ಗುಂಪಿನ ಮಕ್ಕಳು ಯಾರು? ಹಿಂದಿನ ಯಾವುದೂ ಸಂಬಂಧಗಳಿರದೆ ಈ ಜನ್ಮದಲ್ಲಿ ಮಾಡಿದ ಸತ್ಕರ್ಮಗಳಿಂದ ತಂದೆ-ತಾಯಿಯರ ಮಕ್ಕಳಾಗಿ ಹುಟ್ಟಿದವರು ಈ ಗುಂಪಿಗೆ ಸೇರಿದವರು. ಹಿಂದಿನ ಜನ್ಮಗಳ ಸತ್ಕರ್ಮಗಳ ಕಾರಣವಾಗಿ ವರರೂಪವಾಗಿ ಈಗ ಹುಟ್ಟಿದವರೂ ಆಗಬಹುದು. ವಿವಾಹ ಪೂರ್ವದಲ್ಲಿ ಮಾಡಿದ ಒಳ್ಳೆಯ ಕೆಲಸಗಳ ಕಾರಣ ವಿವಾಹದ ನಂತರ ಶೀಘ್ರದಲ್ಲಿ ಹುಟ್ಟಬಹುದು. ಇಲ್ಲವೇ, ಮಕ್ಕಳಿಲ್ಲವೆಂದು ಕೊರಗುವಾಗ ಮಾಡುವ ಒಳ್ಳೆಯ ಕಾರ್ಯಗಳ ಫಲಸ್ವರೂಪವಾಗಿ ತಡವಾಗಿ ಹುಟ್ಟಿದವರು ಇರಬಹುದು. ಇಂತಹ ಮಕ್ಕಳಿಂದ ಮಾತಾ-ಪಿತೃಗಳಿಗೆ ಅತ್ಯಂತ ಸುಖವೂ, ಕೀರ್ತಿಯೂ, ಸಮಾಜದಲ್ಲಿ ಮನ್ನಣೆಯೂ ದೊರೆಯುವುದು. 

*****

ನಾವು ನಮ್ಮ ತಂದೆ-ತಾಯಿಯರಿಗೆ ಎಂತಹ ಮಕ್ಕಳಾಗಿದ್ದೆವು? ನಮ್ಮ ಮಕ್ಕಳು ಮೇಲಿನ ಯಾವ ಗುಂಪಿಗೆ ಸೇರಿದವರು? ಈ ಪ್ರಶ್ನೆಗಳಿಗೆ ಉತ್ತರ ಅವರವರೇ ಕಂಡುಕೊಳ್ಳಬೇಕು. 

ಜನ್ಮ-ಜನ್ಮಾಂತರಗಳು, ಪುನರ್ಜನ್ಮ, ಪಾಪ-ಪುಣ್ಯಗಳು, ವರ ಪಡೆಯುವುದು ಮುಂತಾದುವನ್ನು ನಂಬುವವರೂ ಇದ್ದಾರೆ. ನಂಬದವರೂ ಇದ್ದಾರೆ. ನಂಬಿದವರು ಮೇಲಿನ ವರ್ಗೀಕರಣವನ್ನು ಒಪ್ಪಿಕೊಳ್ಳಬಹುದು. ನಂಬದವರು ಅಪಹಾಸ್ಯ ಮಾಡಬಹುದು. ಆದರೆ, ಮೇಲಿನ ವರ್ಗೀಕರಣ ಒಂದು ಬಲವಾದ ತರ್ಕದ ತಳಹದಿಯ ಮೇಲೆ ನಿಂತಿದೆ ಎನ್ನುವುದನ್ನು ಖಂಡಿತವಾಗಿ ಒಪ್ಪಬಹುದು. 

Saturday, July 5, 2025

ಮನಸ್ಸು ಮತ್ತು ಗಜಚರ್ಮಾ೦ಬರಧರ


ಹಿಂದಿನ ಒಂದು ಸಂಚಿಕೆಯಲ್ಲಿ "ಮನವ ಕಬ್ಬಿಣ ಮಾಡು, ಹೇ ಮೃಡನೇ" ಎನ್ನುವ ಶೀರ್ಕಿಕೆಯಡಿ, ಜನಪ್ರಿಯ ರುದ್ರ-ಚಮಕಗಳ ಮೂಲಕ ಮಾಡುವ ಆರಾಧನೆಯಲ್ಲಿ ಶ್ರೀಶಂಭುವಿನ ಬಳಿ ಅನೇಕ ಲೌಕಿಕ ಸಂಪತ್ತುಗಳನ್ನು ಕೇಳುವುದರ ಔಚಿತ್ಯವನ್ನು ಪ್ರಶ್ನಿಸಿಕೊಂಡು ಅದಕ್ಕೆ ಉತ್ತರ ಹುಡುಕುವ ಪ್ರಯತ್ನ ಮಾಡಿದ್ದೆವು. (ಈ ಸಂಚಿಕೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ). ಅದರ ಕೊನೆಯಲ್ಲಿ "ಮನಸು ಕಾರಣವಲ್ಲ" ಮತ್ತು "ದನುಜ ಗಜ ಮದಹಾರಿ" ಎಂಬ ಎರಡು ಅಭಿವ್ಯಕಿಗಳಿಗೆ  ವಿಶೇಷಾರ್ಥಗಳನ್ನು ನೋಡುವ ಪ್ರಯತ್ನ ಮಾಡಬೇಕಿತ್ತು. ಈಗ ಅದನ್ನಿಷ್ಟು ನೋಡೋಣ. 

*****

ರುದ್ರದೇವರು ಮನೋಭಿಮಾನಿಗಳು. ನಮ್ಮ ಮನಸ್ಸು ನಾವು ಮಾಡುವ ಎಲ್ಲ ಕೆಲಸ-ಕಾರ್ಯಗಳಿಗೂ ಮೂಲ ಶಕ್ತಿ. ಎಲ್ಲ ರೀತಿಯ ಸಾಧನ-ಸಲಕರಣೆಗಳಿದ್ದರೂ ಮನಸ್ಸು ಕೆಲಸ ಮಾಡದಿದ್ದರೆ ಮನುಷ್ಯನು ನಿಷ್ಕ್ರಿಯನಾಗುತ್ತಾನೆ. ಅದೇ ರೀತಿ ಕೆಲವು ಅವಶ್ಯಕ ಸಂಪತ್ತುಗಳಿಲ್ಲದಿದ್ದರೂ ಕೂಡ ಮನುಷ್ಯನು ಮನಸ್ಸು ಮಾಡಿದರೆ ಅವುಗಳನ್ನು ಹೇಗೋ ಹೊಂದಿಸಿಕೊಂಡು, ಅಥವಾ ಅವುಗಳಿಗೆ ಪರ್ಯಾಯ ಪರಿಕರಗಳನ್ನು ಹುಡುಕಿಕೊಂಡು, ಉದ್ದೇಶಿತ ಕೆಲಸಗಳನ್ನು ಸಾಧಿಸುತ್ತಾನೆ.  ಇದು ನಾವು ನಮ್ಮ ನಮ್ಮ ಅನುಭವಗಳಿಂದ ಕಂಡುಕೊಂಡಿರುವ ಸತ್ಯ. 

"ನೀನು ಮನಸ್ಸು ಮಾಡಿದರೆ ಇದನ್ನು ಸುಲಭವಾಗಿ ಮಾಡಿ ಮುಗಿಸುವೆ. ಮುಖ್ಯ, ನೀನು ಮನಸ್ಸು ಮಾಡಬೇಕು" ಎನ್ನುವ ಮಾತನ್ನು ನಾವು ಮತ್ತೆ ಮತ್ತೆ ಆಡುತ್ತಿರುತ್ತೇವೆ ಅಥವಾ ಕೇಳುತ್ತಿರುತ್ತೇವೆ. "ಎಷ್ಟು ಹೇಳಿದರೂ ಅವನು ಮನಸ್ಸು ಮಾಡಲಿಲ್ಲ. ಕೆಲಸ ಆಗಲಿಲ್ಲ" ಅನ್ನುತ್ತೇವೆ. "ವೇರ್ ದೇರ್ ಈಸ್ ಎ ವಿಲ್, ದೇರ್ ಈಸ್ ಎ ವೇ" ಎಂದು ಇಂಗ್ಲಿಷಿನಲ್ಲಿ ಹೇಳುವುದೂ ಇದನ್ನೇ. "ಮನ ಏವ ಮನುಷ್ಯಾಣಾ೦ ಕಾರಣಂ ಬಂಧ ಮೊಕ್ಷಯೋ:" ಎನ್ನುವುದಂತೂ ಬಹಳ ಪ್ರಸಿದ್ಧವಾದ ನುಡಿ. ಮನುಷ್ಯನ ಕರ್ತೃತ್ವ ಶಕ್ತಿಗೆ ಮನಸ್ಸೇ ಕೀಲಿಕೈ. ಮನಸ್ಸು ಈ ಕಡೆ ತಿರುಗಿದರೆ ಅದನ್ನು ಮುಚ್ಚಿ ಬೀಗ ಹಾಕುತ್ತದೆ. ಆ ಕಡೆ ತಿರುಗಿದರೆ ಅದನ್ನು ತೆಗೆದು ದಾರಿಮಾಡುತ್ತದೆ. ನಮ್ಮ ಕೈಯಲ್ಲಿ ಇರುವ ಮತ್ತು ಸಿಕ್ಕುವ ಎಲ್ಲ ಶಕ್ತಿಗಳಲ್ಲಿ ಅತ್ಯಂತ ಪ್ರಮುಖವಾದವುಗಳಲ್ಲಿ  ಮನಸ್ಸು ಒಂದು ಮುಖ್ಯ ಶಕ್ತಿ. 

ನಾವು ಮಾಡುವ ಕೆಲಸಗಳು ಸರಿಯಾಗಿ, ನೇರವಾಗಿ, ಸಾರ್ಥಕವಾದರೆ, ನ್ಯಾಯಯುತವಾಗಿದ್ದರೆ ಅವುಗಳಿಂದ ಪುಣ್ಯ ಸಂಪಾದನೆ. ಅನ್ಯಾಯದ, ಅಧರ್ಮದ ಕೆಲಸಗಳಾದರೆ ಅವುಗಳಿಂದ ಪಾಪ ಸಂಪಾದನೆ. ಪಾಪ, ಪುಣ್ಯಗಳೆಂಬುವು ಮಾಡುವ ಕೆಲಸಗಳಿಂದ ಬಂದ ಫಲಿತಾಂಶಗಳು. ಆದ್ದರಿಂದಲೇ ಈ ರೀತಿ ಹೇಳುವುದು:

ಮನಸು ಕಾರಣವಲ್ಲ ಪಾಪ ಪುಣ್ಯಕ್ಕೆಲ್ಲ 
ಅನಲಾಕ್ಷ ನಿನ್ನ ಪ್ರೇರಣೆ ಇಲ್ಲದೇ 
ದನುಜಗಜ ಮದಹಾರಿ ದಂಡ ಪ್ರಣಾಮ ಮಾಳ್ಫೆ   
ಮಣಿಸೋ ಈ ಶಿರವನ್ನು ಸಜ್ಜನರ ಚರಣದಲಿ 
 
ಹೀಗಿರುವಲ್ಲಿ, ಮೇಲೆ ಏಕೆ "ಮನಸು ಕಾರಣವಲ್ಲ" ಎಂದು ಹೇಳಿರುವುದು? ಇದೊಂದು ವಿಚಿತ್ರ ಅಲ್ಲವೇ? ಇದು ಒಂದು ಸಾಧುವಾದ ಪ್ರಶ್ನೆಯೇ.  ಪಾಪ ಪುಣ್ಯಕ್ಕೆಲ್ಲಾ ಮನಸ್ಸೇ ಕಾರಣ ಎನ್ನುವುದು ಸರಿ. ಆದರೆ ಮನಸ್ಸು ಒಂದು ವಾಹನವಿದ್ದಂತೆ. ವಾಹನ ಸರಿಯಾಗಿ ನಡೆದರೆ ಅದರಿಂದ ಪ್ರಯೋಜನ. ಅದೇ ವಾಹನ ಅಡ್ಡಾದಿಡ್ಡಿಯಾಗಿ ನಡೆದು ಅಪಘಾತ ಮಾಡಿದರೆ? ಆಗ ವಾಹನದಿಂದ ಆಗುವ ಪ್ರಯೋಜನಕ್ಕಿಂತ ಹಾನಿಯೇ ಹೆಚ್ಚು. ಆದರೆ ಅದು ಅಪಘಾತ ಮಾಡಿದರೆ ಅದಕ್ಕೆ ವಾಹನ ಹೊಣೆ ಅಲ್ಲ. ಒಂದು ಕಾರು ರಸ್ತೆಯಲ್ಲಿ ನಡೆಯುತ್ತಿರುವ ಜನಗಳ ಮೇಲೆ ಹಾದು ಹೋಯಿತು ಎಂದರೆ ಅದು ಕಾರಿನ ತಪ್ಪಲ್ಲ. ಅದು ಅದನ್ನು ನಡೆಸುತ್ತಿರುವ ಚಾಲಕನ ಹೊಣೆ. ಹೀಗೆಯೇ ಮನಸ್ಸಿನ ಕೆಲಸಗಳಿಗೆ ಅದರ ಒಡೆಯನಾದ ಜೀವನೇ ಹೊಣೆ ಹೊರಬೇಕು. 

ಯಾವುದೋ ಒಂದು ಅಪಘಾತವಾದಾಗ ಸಂಬಂಧಿಸಿದ ವಾಹನದ ಚಾಲಕನು "ನನಗೇನೂ ಗೊತ್ತಿಲ್ಲ. ನಾನೇನು ಮಾಡಲಿ? ಕಾರು ಅಡ್ಡಾದಿಡ್ಡಿ ಚಲಿಸಿತು. ಅಪಘಾತಕ್ಕೆ ಅದೇ ಕಾರಣ. ಅದನ್ನೇ ಕೇಳಿ. ನನ್ನನ್ನೇನು ಕೇಳುತ್ತೀರಿ?" ಎಂದು ಹೇಳಿದರೆ ಕೇಳಿದವರು ನಗುತ್ತಾರೆ. ಮನಸ್ಸಿನ ವಿಷಯವೂ ಹೀಗೆ. ಅದನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು ಅದರಿಂದ ಪ್ರಯೋಜನ ಪಡೆಯುವುದು ಜೀವನ ಜವಾಬ್ದಾರಿ. ಚಾಲಕನು ವಾಹನವನ್ನು ಅಂಕೆಯಲ್ಲಿಟ್ಟುಕೊಂಡು ಸರಿಯಾಗಿ ನಡೆಸಬೇಕು. ಹೀಗೆ ಸರಿಯಾಗಿ ನಡೆಸಲು ತಿಳಿದವರಿಂದ ವಾಹನ ಚಾಲನೆ ಮೊದಲು ಕಲಿಯಬೇಕು. ಟ್ರ್ಯಾಫಿಕ್ ಸಿಗ್ನಲ್ಲುಗಳು ಸರಿಯಾಗಿ ಕೆಲಸ ಮಾಡಬೇಕು. ವಾಹನಗಳು ಸುಸ್ಥಿತಿಯಲ್ಲಿರಬೇಕು. ಮನಸ್ಸಿನೆಂಬ ವಾಹನ ನಡೆಸಲು ಕಲಿಸುವ ಪ್ರಭುಗಳು ಮಹಾರುದ್ರದೇವರು. ನಿಯಮಗಳಿಗೆ ವಿರುದ್ಧವಾಗಿ ಹೋಗದಂತೆ, ಸರಿದಾರಿಯಲ್ಲಿ ನಡೆಯುವಂತೆ ಮೇಲ್ವಿಚಾರಣೆ ಮಾಡುವವರು ಅವರು. ಚಾಲಕನು ಕಲಿಸುವ ಗೈಡನ್ನು ಪಕ್ಕದಲ್ಲಿ ಕೂಡಿಸಿಕೊಂಡರೆ ಅಪಘಾತ ಆಗುವ ಸಂದರ್ದಗಳಲ್ಲಿ ಅವರು ಅವನ್ನು ನಿವಾರಣೆ ಮಾಡುತ್ತಾರೆ. ಅವರ ಪ್ರಾರ್ಥನೆ ಮಾಡಿ, ಅವರ ಮೇಲ್ವಿಚಾರಣೆಯಲ್ಲಿ ಮನಸ್ಸೆಂಬ ವಾಹನ ನಡೆಸಿದರೆ ದುರ್ಘಟನೆಗಳು ಆಗುವುದಿಲ್ಲ. 

ಮನಸ್ಸು ಸರಿದಾರಿಯಲ್ಲಿ ಹರಿಯಬೇಕಾದರೆ ಏನು ಮಾಡಬೇಕು? ಕೆಟ್ಟವರ ಸಹವಾಸ ಮಾಡಿದರೆ ಮನಸ್ಸು ಕೆಡುತ್ತದೆ. ಅದೇ ಒಳ್ಳೆಯವರ ಜೊತೆ ಸಿಕ್ಕರೆ ಮನಸ್ಸು ಒಳ್ಳೆಯ ನಡತೆ ತೋರಿಸುತ್ತದೆ. ಹೀಗೆ ಸಜ್ಜನರ ಜೊತೆ ಸಿಗುವಂತೆ ಮಾಡುವವರು ಮಹಾದೇವರು. ಈ ಹಿನ್ನೆಲಿಯಲ್ಲಿ "ಪಾಪ-ಪುಣ್ಯಕ್ಕೆಲ್ಲ ಮನಸು ಕಾರಣವಲ್ಲ. ನಿನ್ನ ಪ್ರೇರಣೆ ಮುಖ್ಯ. ನನ್ನನ್ನು ಸತ್ಕಾರ್ಯಗಳಲ್ಲಿ ಪ್ರೇರೇಪಿಸು. ಈ ಮನಸ್ಸು ರಸ್ತೆಯ ಅಕ್ಕ-ಪಕ್ಕದ ಹಳ್ಳ-ಕೊಳ್ಳಗಳೊಳಗೆ ಬೀಳದಂತೆ ತಡೆ. ಯಾವಾಗಲೂ ನನ್ನನ್ನು ರಕ್ಷಿಸು" ಎಂದು ಹೇಳುವುದು ಮೇಲಿನ ಪ್ರಾರ್ಥನೆಯ ತಿರುಳು. 

*****

ಪರಶಿವನ ಆರಾಧನೆ ಮಾಡುವಾಗ ಅವನ ಅನೇಕ ಹೆಸರುಗಳನ್ನೂ, ವಿಶೇಷಣಗಳನ್ನೂ  ಉಪಯೋಗಿಸುತ್ತೇವೆ. ಹೀಗೆ ಅವನ ಅನೇಕ ಹೆಸರುಗಳನ್ನು ಹೇಳುವಾಗ "ಕೃತ್ತಿವಾಸ" "ಚರ್ಮಾ೦ಬರ" "ಚರ್ಮಾ೦ಬರಧರ" 'ಗಜಚರ್ಮಾ೦ಬರಧರ" ಮುಂತಾಗಿ ಹೇಳುತ್ತೇವೆ. ಏಕೆ? "ದನುಜ ಗಜ ಮದಹಾರಿ" ಎಂದು ಏಕೆ ಹೇಳಿದರು? 

ಅನೇಕ ಜನ ರಕ್ಕಸರು ಸಜ್ಜನರ ಹಿಂಸಕರಾಗಿ ಅವರ ಜೀವನಗಳಿಗೆ ಉಪದ್ರವ ಕೊಡುವುದೇ ವೃತ್ತಿ ಮಾಡಿಕೊಂಡಿದ್ದರು. ಈಗಲೂ ಇದ್ದಾರೆ. ಇಂತಹ ದನುಜರ ಉಪಟಳದಿಂದ ತಮ್ಮನ್ನು ರಕ್ಷಿಸಲು ಸುಜೀವರು ರುದ್ರದೇವರನ್ನು ಪ್ರಾರ್ಥಿಸುತ್ತಾರೆ. ಶಂಭುವು ಸುರಗುರುವು. ಹಿಂದೆ ಒಬ್ಬ ರಾಕ್ಷಸನು ಸಜ್ಜನರಿಗೆ ಬಹಳ ತೊಂದರೆಯನ್ನು ಕೊಡುತ್ತಿದ್ದ. ಆಗಾಗ ಆನೆಯ ರೂಪವನ್ನು ಧರಿಸಿ ಮದಿಸಿದ ಆನೆ ಮನಸ್ಸು ಬಂದಂತೆ ಎಲ್ಲ ಕಡೆ ಧಾಂಧಲೆ ಮಾಡುವಂತೆ ನಡೆದುಕೊಳ್ಳುತ್ತಿದ್ದ. ಆರ್ತ ಭಕ್ತರ ಮನವಿಗೆ ಸ್ಪಂದಿಸಿ ಮಹಾದೇವನು ಆ ಗಜಾಸುರನನ್ನು ಕೊಂದನು. ಅವನ ಚರ್ಮವನ್ನು ಸುಲಿದು ಅದನ್ನೇ ವಸ್ತ್ರದಂತೆ ಧರಿಸಿ "ಒಳ್ಳೆಯ ಜೀವಿಗಳಿಗೆ ಕಷ್ಟ ಕೊಡುವ ದುರುಳರಿಗೆ ಇದೇ ಗತಿ" ಎಂದು ಮಾದರಿ ಮಾಡಿ ತೋರಿಸಿದನು. ಮದಿಸಿದ ಆನೆಯ ರೂಪದ ಗಜಾಸುರನ ಸೊಕ್ಕನ್ನು ಅಡಗಿಸಿ ಕೊಂದುದರಿಂದ "ದನುಜ ಗಜ ಮದ ಹಾರಿ" ಆದನು. ಚರ್ಮವನ್ನು ಹೊದ್ದುದರಿಂದ "ಚರ್ಮಧಾರಿ" ಆದನು. ಆನೆಯ ಚರ್ಮವಾದುದರಿಂದ "ಗಜಚರ್ಮಾ೦ಬರಧರ" ಎಂದು ಹೆಸರಾಯಿತು. 

"ವಲುವೂರು" ಎನ್ನುವ ಹೆಸರಿನ ಸ್ಥಳ ತಮಿಳುನಾಡಿನ "ಮಯಿಲಾಡುತುರೈ" (ಹಿಂದಿನ "ಮಾಯಾವರಂ") ಜಿಲ್ಲೆಯ ಒಂದು ಊರು. ಜಿಲ್ಲಾಕೇಂದ್ರದಿಂದ ಆರು ಮೈಲಿ ದೂರದ ಸಣ್ಣ ಪಟ್ಟಣ. ಇಲ್ಲರುವ ದೇವಾಲಯದಲ್ಲಿ ಎಂಟು ಕೈಗಳುಳ್ಳ "ಗಜಾಸುರಸಂಹಾರಿ" ಈಶ್ವರನ ಕಂಚಿನ ಪ್ರತಿಮೆಯನ್ನು ಆರಾಧಿಸುತ್ತಾರೆ. ಕರ್ನಾಟಕದ ಹೆಸರಾಂತ ಹಳೇಬೀಡಿನ "ಶಾಂತಲೇಶ್ವರ" ದೇವಾಲಯದಲ್ಲಿ ಗಜಾಸುರಸಂಹಾರಿ ಪ್ರತಿಮೆಯ ಕೆತ್ತನೆಯಿದೆ. ಪಕ್ಕದ ಚಿತ್ರದಲ್ಲಿ ಅದನ್ನು ನೋಡಬಹುದು. 

ಮಹೇಶ್ವರನು ಕೇವಲ ದುಷ್ಟರ ಶಿಕ್ಷೆಗೆ ಮಾತ್ರವಲ್ಲದೆ ಒಳ್ಳೆಯವರಿಗೆ  ಬಹುಪ್ರೀತಿ ತೋರಿಸುವ ಕರುಣಾಳು. ಉಮಾಪತಿಗೆ ಕೆಟ್ಟವರನ್ನು ಕಂಡರೆ ಎಷ್ಟು ಕೋಪವೋ, ಒಳ್ಳೆಯವರನ್ನು ಕಂಡರೆ ಅಷ್ಟೇ ಪ್ರೀತಿ. "ಖಳಜನ ಕೃತರೋಷ:". ಹಾಗೆಯೇ "ಭಕ್ತಜನಾಶ್ರ್ರಯ ವರದ". ಪೊಲೀಸು ಅಧಿಕಾರಿಗೆ ಕಳ್ಲರು ಹೆದರುವಂತೆ ದುಷ್ಟರು ಅವರನ್ನು ಕಂಡರೆ ಹೆದರುತ್ತಾರೆ. ಸಜ್ಜನರು ರಕ್ಷಣೆಗೆ ಅವರ ಮೊರೆ ಹೋಗುತ್ತಾರೆ. 

*****

ದೇವೇಂದ್ರನು ಎಲ್ಲ ದೇವತೆಗಳಿಗೆ ಅಧಿಪತಿಯು. ಸಕಲ ಮಂತ್ರಪೂತ ಅಸ್ತ್ರಗಳೂ ಅವನ  ಬಳಿ ಇವೆ. ಯಾವ ಅಸ್ತ್ರ ಬೇಕಾದರೂ ಅವನನ್ನೇ ಕೇಳಬೇಕು. ಮಹಾಭಾರತದ ಕುರುಕ್ಷೇತ್ರ ಯುದ್ಧಕ್ಕೆ ತಯಾರಾಗಲು ಅರ್ಜುನನು ವನವಾಸ ಕಾಲದಲ್ಲಿ ಅಸ್ತ್ರಗಳ ಶೇಖರಣೆಗೆ ಹೊರಡುತ್ತಾನೆ. ತಪಸ್ಸಿನಿಂದ ದೇವೇಂದ್ರನನ್ನು ಮೆಚ್ಚಿಸುತ್ತಾನೆ. ಅಸ್ತ್ರಗಳನ್ನು ಕೇಳುತ್ತಾನೆ. ದೇವೇಂದ್ರನು ಅರ್ಜುನನು ತನ್ನ ಮಗನಾದರೂ ಅವನಿಗೆ ಕೊಡುವುದಿಲ್ಲ. "ಎಲ್ಲ ಅಸ್ತ್ರಗಳೂ ನನ್ನ ಬಳಿ ಇವೆ.  ಆದರೆ ನಾನು ಅವುಗಳ ನ್ಯಾಸಾಧಿಕಾರಿ (ಟ್ರಸ್ಟಿ) ಇರುವಂತೆ. ಮಹಾದೇವರು ಅವುಗಳ ಒಡೆಯರು. ಅವರ ಅಪ್ಪಣೆ ಇಲ್ಲದೆ ನಾನು ಕೊಡುವುದಿಲ್ಲ. ಮೊದಲು ಅವರನ್ನು ಮೆಚ್ಚಿಸಿ ಅವರ ಪ್ರೀತಿ ಸಂಪಾದಿಸು. ಅವರಿಂದ "ಪಾಶುಪತ" ಅನ್ನುವ ಅಸ್ತ್ರವನ್ನು ಪಡೆದುಕೋ. ನಂತರ ಅವರ ಅಪ್ಪಣೆಯಾಗುವುದರಿಂದ ನಾನು ಬೇರೆ ಎಲ್ಲ ಅಸ್ತ್ರಗಳನ್ನೂ ಕೊಡುತ್ತೇನೆ" ಅನ್ನುತ್ತಾನೆ. 

ಅಂತಹ ದೇವೆತೆಗಳ ಅಧಿಪತಿಗೂ ದಳಪತಿಗಳಾದವರು ಮಹಾರುದ್ರದೇವರು. 

Thursday, July 3, 2025

ಗೀತೆ ಎಂಬ ಹಾಲು; ಭಾಗವತವೆಂಬ ಹಣ್ಣು


ಪ್ರತಿಯೊಂದು ವಿಷಯವನ್ನೂ ಸಂದರ್ಭಗಳ ಹಿನ್ನೆಲೆಯಲ್ಲಿ ಸರಿಯಾಗಿ ತಿಳಿಯುವ ಸಲುವಾಗಿ ಅದಕ್ಕೆ ಸಂಬಂಧಿಸಿದ ಗ್ರಂಥಗಳನ್ನೂ, ವಿಶಿಷ್ಟ ವಾಂಗ್ಮಯವನ್ನೂ ಕೂಲಂಕುಷವಾಗಿ ಅಭ್ಯಸಿಸಿ, ಅವುಗಳ ಹಿಂದು-ಮುಂದಿನ ವಿವರಗಳ ಬೆಳಕಿನಲ್ಲಿ ನಿಖರವಾಗಿ ಅರ್ಥ ಮಾಡಿಕೋಳ್ಳಬೇಕೆಂಬ ಪ್ರಮೇಯವನ್ನು ಮುಕುಂದರಾಯರ "ಏಕಾದಶಿಯ ದಿನ ಹಾಲು-ಹಣ್ಣು ಸೇವಿಸಿ" ಎಂಬ ಸಂಚಿಕೆಯ ಅನುಭವದಿಂದ ತಿಳಿದೆವು. ಈ ಸಂಚಿಕೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

ಮುಕುಂದರಾಯರ ಎಡವಟ್ಟಿನ ಪರಿಸ್ಥಿತಿಯನ್ನು ಕಂಡ ಹಿರಿಯರೊಬ್ಬರು "ನಾಳೆ ಪುರಾಣಕ್ಕೆ ಸ್ವಲ್ಪ ಬೇಗ ಬನ್ನಿ. ಹಾಲು ಎಂದರೆ ಭಗವದ್ಗೀತೆ. ಹಣ್ಣು ಎಂದರೆ ಶ್ರೀಮದ್ ಭಾಗವತ.  ಅದು ಹೇಗೆ ಎಂದು ನಿಮಗೆ ವಿವರಿಸುತ್ತೇನೆ" ಎಂದು ಹೇಳಿದ್ದರು. ಅದರ ವಿವರಗಳನ್ನು ಈಗ ನೋಡೋಣ. 

*****

ಮುಕುಂದರಾಯರು ದೇವಾಲಯವನ್ನು ಬೇಗ ತಲುಪಿ ಹಿರಿಯರ ಬರವಿಗೆ ಕಾತುರದಿಂದ ಕಾಯುತ್ತಿದ್ದರು. ಹೇಳಿದ ಮಾತಿಗೆ ಸರಿಯಾಗಿ ಆ ವೃದ್ಧರು ಬಂದರು. ಇನ್ನೂ ಪುರಾಣ ಕೇಳುವ ಜನಗಳ ಆಗಮನ ಆಗಿರಲಿಲ್ಲ. ಇಬ್ಬರೂ ಪರಸ್ಪರ ಮಾತಾಡಲು ಅನುಕೂಲವಾಗಿರುವ ಒಂದು ಜಾಗದಲ್ಲಿ ಕುಳಿತರು. ಮಾತುಕತೆ ಪ್ರಾರಂಭವಾಯಿತು. 

"ಏನು, ನಿರೀಕ್ಷಿದಂತೆ ಬೇಗ ಬಂದಿದ್ದೀರಿ"
"ನಿನ್ನೆ ಮನೆಗೆ ಹೋದಮೇಲೆ ರಾತ್ರಿಯೆಲ್ಲ  ನೀವು ಹೇಳಿದ "ಗೀತೆಯೇ ಹಾಲು. ಭಾಗವತವೇ ಹಣ್ಣು" ಎಂಬುದನ್ನೇ ಯೋಚಿಸುತ್ತಿದ್ದೆ. ಅದು ಹೇಗೆ ಈ ರೀತಿ ಪ್ರಚುರವಾಯಿತು ಎಂದು ತಿಳಿಯುವ ಕುತೂಹಲ. ನೀವು ವಿವರಿಸುತ್ತೇನೆ ಎಂದು ಹೇಳಿದುದು  ಒಳ್ಳೆಯದಾಯಿತು. ಅದನ್ನು ಸ್ವಲ್ಪ ಬಿಡಿಸಿ ಹೇಳಿದರೆ ನನಗೆ ಬಹಳ ಅನುಕೂಲವಾಗುತ್ತದೆ"
"ಭಗವದ್ಗೀತೆಯನ್ನು ಕ್ರಮವಾಗಿ ಅಭ್ಯಾಸ ಮಾಡುವವರನ್ನು, ಪಾರಾಯಣ ಮಾಡುವವರನ್ನು ನೀವು ನೋಡಿದ್ದೀರಲ್ಲ"
"ಅನೇಕರನ್ನು ನೋಡಿದ್ದೇನೆ"
"ಅವರು ಹೇಗೆ ಪ್ರಾರಂಭಿಸುತ್ತಾರೆ?"
"ಅಂದರೆ ಅರ್ಥವಾಗಲಿಲ್ಲ"
"ನೇರವಾಗಿ ಮೊದಲನೇ ಅಧ್ಯಾಯದಿಂದ ಪ್ರಾರಂಭಿಸುತ್ತಾರೋ, ಅಥವಾ ಅದಕ್ಕೆ ಮೊದಲು ಏನಾದರೂ ಮಾಡುತ್ತಾರೋ?"
"ಮೊದಲು  ಬೇರೆ ಕೆಲವು ಶ್ಲೋಕಗಳನ್ನು ಹೇಳುತ್ತಾರೆ"
"ಅವುಗಳಿಗೆ "ಧ್ಯಾನ ಶ್ಲೋಕಗಳು" ಎನ್ನುತ್ತಾರೆ"
"ಹಾಗಂದರೆ ಏನು?"
"ಕೃತಿಯನ್ನು ಪ್ರಾರಂಭ ಮಾಡುವ ಮೊದಲು ಅದರ ಹುಟ್ಟಿಗೆ ಕಾರಣರಾದವರನ್ನು ನೆನೆಯುವ ಶ್ಲೋಕಗಳನ್ನು ಹೇಳುತ್ತಾರೆ"
"ಹೀಗೆ ಮಾಡುವುದು ಏಕೆ?"
"ಲೌಕಿಕದಲ್ಲಿ ಯಾವುದಾದರೂ ಪುಸ್ತಕ ಓದುವ ಮುಂಚೆ ಅದರ ಬಗ್ಗೆ ಏನಾದರೂ ತಿಳಿದುಕೊಳ್ಳಲು ಪ್ರಯತ್ನ ಪಡುತ್ತೀರೋ? ಅದನ್ನು ಬರೆದವರು ಯಾರು, ಅದರ ಕಥಾವಸ್ತು, ಏನು? ರಚನೆ ಎಲ್ಲಿ ಮತ್ತು ಏಕೆ ಆಯಿತು, ಈ ರೀತಿ"
"ನಾವು ಶಾಲೆಗಳಲ್ಲಿ ಓದುವಾಗ ಕವಿ-ಕಾವ್ಯ ವಿಚಾರ ಎಂದು ಸ್ವಲ್ಪ ಹಿನ್ನೆಲೆ ಓದುತ್ತಿದ್ದೆವು"
"ಯಾವುದಾದರೂ ಅಮೂಲ್ಯವಾದ ಗ್ರಂಥ ಓದುವ ಮೊದಲು ಅದರ ಹಿನ್ನೆಲೆ ಇದೇ ರೀತಿ ತಿಳಿಯುವುದು, ತಿಳಿದಮೇಲೆ ಮತ್ತೆ ಓದುವಾಗ ಅದನ್ನು ನೆನೆಸಿಕೊಳ್ಳುವುದು ನಡೆದುಬಂದಿರುವ ಪದ್ಧತಿ"
"ಭಗವದ್ಗೀತೆ ಓದುವಾಗ ಅಥವಾ ಪಾರಾಯಣ ಮಾಡುವಾಗ ಯಾವ ಶ್ಲೋಕಗಳನ್ನು ಹೇಳುತ್ತಾರೆ?"
"ಅವರವರ ಮನೆತನದ ರೀತಿಯಂತೆ ಅಥವಾ ಗುರುಗಳು ಹೇಳಿಕೊಟ್ಟ ಪದ್ಧತಿಯ ಪ್ರಕಾರ ಹೇಳುತ್ತಾರೆ"
"ಇದರಲ್ಲಿ ಏನು ವಿವರಗಳು ಇರುತ್ತವೆ?"
"ಗ್ರಂಥಕರ್ತೃವಾದ ಭಗವಾನ್ ವೇದವ್ಯಾಸರು ಮತ್ತು ಗೀತೆಯನ್ನು ಉಪದೇಶಿಸಿದ ಶ್ರೀಕೃಷ್ಣ, ಇವರುಗಳ ನೆನಪು ಮಾಡಿಕೊಂಡು ಅವರಿಗೆ ಕೃತಜ್ಞತೆಗಳನ್ನು ಹೇಳುವ ಶ್ಲೋಕಗಳು. ಇದರ ಜೊತೆಗೆ ಭಗವದ್ಗೀತೆಯ ಶ್ರೇಷ್ಠತೆಯನ್ನು ಹೇಳುವ ಶ್ಲೋಕಗವಿರುತ್ತದೆ"
"ಭಗವದ್ಗೀತೆಯ ಉತ್ತಮತೆಯನ್ನು ಹೇಳುವ ಶ್ಲೋಕವೇನು?'
"ಅದು ಹೀಗಿದೆ. ಕೇಳಿ"

ಸರ್ವೋಪನಿಷದೋ ಗಾವಃ ದೋಗ್ಧಾ ಗೋಪಾಲನಂದನಃ 
ಪಾರ್ಥೋ ವತ್ಸ: ಸುಧೀರ್ಭೋಕ್ತಾ ದುಗ್ಧಮ್ ಗೀತಾಮೃತಮ್ ಮಹತ್

"ಎಲ್ಲ ಉಪನಿಷತ್ತುಗಳೇ ಹಸುಗಳು. ಶ್ರೀಕೃಷ್ಣನು ಈ ಹಸುಗಳ ಹಾಲನ್ನು ಕರೆದು ಕೊಡುವ ಗೋಪಾಲಕನು. ಪಾರ್ಥನೆಂಬ ಹೆಸರಿನ ಅರ್ಜುನನೇ ಕರುವು. ಭಕ್ತಮಹಾಜನರೇ ಆ ಅಮೃತಸಮವಾದ ಹಾಲನ್ನು ಸೇವಿಸುವವರು"

"ಎಲ್ಲ ಉಪನಿಷತ್ತುಗಳೇ ಹಸುಗಳು ಅಂದಮೇಲೆ ಬೇರೆ ಸಂಬಂಧಿಸಿದ ವೇದಾದಿ ವಾಂಗ್ಮಯದ ಪಾತ್ರವೇನು?"
"ಉಪನಿಷತ್ತುಗಳೇ ಹಸುಗಳು ಎಂದರೆ ಬರೀ ಉಪನಿಷತ್ತುಗಳೆಂದು ಅರ್ಥವಲ್ಲ. ಉಪನಿಷತ್ತುಗಳು ವಿಶಾಲ ವಾಂಗ್ಮಯದ ಸಿಹಿ ಕೆನೆ ಎಂದು ನಂಬಿಕೆ. ಆದ್ದರಿಂದ ಭಗವದ್ಗೀತೆ ಈ ಎಲ್ಲ ವಾಂಗ್ಮಯದ ಸಾರಭೂತ ಕೃತಿಯೂ ಹೌದು"
"ಅರ್ಜುನನು ಕರು ಎನ್ನುವುದೇಕೆ?"
"ನೀವು ಹಸುವಿನ ಹಾಲು ಕರೆಯುವುದು ನೋಡಿದ್ದೀರಾ?"
"ನೋಡಿದ್ದೇನೆ"
"ಹಾಲು ಕರೆಯುವ ಮೊದಲು ಕರುವನ್ನು ಹಸುವಿನ ಬಳಿ ಬಿಡುತ್ತಾರೆ. ಕರು ಹತ್ತಿರ ಬಂದಾಗ ಹಸು ಸುಲಭವಾಗಿ ಕೆಚ್ಚಲಿನಿಂದ ಹಾಲನ್ನು ಹರಿಸುತ್ತದೆ. ಕರು ಹಾಲು ಕುಡಿದನಂತರ ಮಿಕ್ಕ ಹಾಲನ್ನು ಕರೆದುಕೊಳ್ಳುತ್ತಾರೆ. (ದುರಾಸೆ ಮನುಷ್ಯರು ಕರು ಪೂರ್ತಿ ಕುಡಿಯುವವರೆಗೂ ಬಿಡುವುದಿಲ್ಲ). ಭಗವದ್ಗೀತೆ ಎಂಬ ಹಾಲನ್ನು ಮೊದಲು ಕುಡಿದವನು ಪಾರ್ಥ. ಆದ್ದರಿಂದ ಅವನು ಕರು. ಎಲ್ಲ ಸಜ್ಜನರಿಗೆ ಅವನ ನಿಮಿತ್ತದಿಂದ, ಮತ್ತು ಅವನ ನಂತರ ಸಿಕ್ಕಿತು. ಆದ್ದರಿಂದ ಅವನೇ ವತ್ಸ"
"ಅರ್ಥವಾಯಿತು"
"ಏನು ಅರ್ಥವಾಯಿತು?"
"ನೀವು ಹೇಳಿದ ಎಲ್ಲ ಅಂಶಗಳು ಮತ್ತು  ಎಲ್ಲಕ್ಕಿಂತ ಹೆಚ್ಚಾಗಿ ಪುರಾಣದಲ್ಲಿ ಹೇಳಿದ "ಏಕಾದಶಿಯ ದಿನ ಹಾಲು ಸೇವಿಸಿರಿ ಎಂದರೆ ಭಗವದ್ಗೀತೆಯೆಂಬ ಹಾಲನ್ನು ಕುಡಿಯಿರಿ. ಅದರ ಪಾರಾಯಣ ಮಾಡುವ ಮೂಲಕ", ಎಂದು"
*****

"ಶ್ರೀಮದ್ ಭಾಗವತ ಹಣ್ಣು ಎಂದು ಹೇಗಾಯಿತು?"
"ಶ್ರೀಮದ್ ಭಾಗವತದ ಮೊದಲ ಸ್ಕಂದ, ಮೊದಲ ಅಧ್ಯಾಯದಲ್ಲಿ ಬರುವ ಶ್ಲೋಕ ಹೀಗಿದೆ. ಕೇಳಿ"

ನಿಗಮಕಲ್ಪತರೋರ್ಗಲಿತಂ  ಫಲಂ 
ಶುಕಮುಖಾತ್ ಅಮೃತದ್ರವ ಸಂಯುತಂ 
ಪಿಬತ ಭಾಗವತರಸಮಾಲಯಂ
ಮುಹುರಹೋ ರಸಿಕ ಭುವಿಭಾವುಕ : 

"ದೊಡ್ಡದನ್ನು ತಿಳಿಯಬೇಕೆಂಬ ಮತ್ತು ತಿಳಿದ ಈ ಜಗತ್ತಿನ ಎಲ್ಲ ಮಹಾಜನಗಳೇ! ಶುಕಮಹಾಮುನಿಗಳಿಂದ ಹೇಳಲ್ಪಟ್ಟ ವೈದಿಕ ವಾಂಗ್ಮಯವೆಂಬ ಕಲ್ಪವೃಕ್ಷದ ಅಮೃತದಂತಹ ರಸಭರಿತವಾದ ಶ್ರೀಮದ್ ಭಾಗವತವೆಂಬ ಹಣ್ಣನ್ನು ತಿನ್ನಿರಿ.  ಶ್ರೀಮದ್ ಭಾಗವತವೆಂಬ ಹಣ್ಣಿನ ದಿವ್ಯ ರಸವನ್ನು ಕುಡಿಯಿರಿ. (ಈ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ)" 

"ಭಗವದ್ಗೀತೆ ಹಾಲು ಎಂದಂತೆ ಶ್ರೀಮದ್ ಭಾಗವತ ಹಣ್ಣು ಎಂದು ಅರ್ಥವಾಯಿತು. ಈ ಹಣ್ಣಿನ ರಸದ ವಿಶೇಷವೇನು?"
"ಬೇರೆ ಹಣ್ಣುಗಳ ರಸಕ್ಕೆ ಕಾಲ ಮಿತಿ ಇದೆ. ಭಾಗವತವೆಂಬ ಹಣ್ಣಿನ ರಸಕ್ಕೆ ಕಾಲ ಮಿತಿ ಇಲ್ಲ. ಅಷ್ಟು ಮಾತ್ರವಲ್ಲ. ಇದು ಬರಿಯ ಸಿಹಿಯಾದ ಹಣ್ಣಿನ ರಸವಲ್ಲ. ಅಮೃತದಂತಹ ರಸ. ಅಮೃತ ಸೇವಿಸಿದರೆ ಸಾವಿಲ್ಲ ಎಂದಂತೆ. ದೇವತೆಗಳು ಅಮೃತ ಸವಿದು ಸಾವಿಲ್ಲದವರಾಗುತ್ತಾರೆ. ಆದರೆ ಮಹಾಪ್ರಳಯದಲ್ಲಿ ಅವರ ಕಾಲವೂ ಮುಗಿಯುತ್ತದೆ. ಶ್ರೀಮದ್ ಭಾಗವತದ ಹಣ್ಣಿನ ರಸ ಅಮೃತಕ್ಕಿಂತಲೂ ಹೆಚ್ಚು. ಇದರ ರಸದಿಂದ ಜೀವನ-ಮರಣ ಅನ್ನುವ ಚಕ್ರದಿಂದ ಬಿಡುಗಡೆಯಾಗಿ ಮೋಕ್ಷವೆಂಬ ಅತಿ ದೊಡ್ಡ, ಎಂದಿಗೂ ಹೋಗದ, ಹಾನಿಯಾಗದ ಪದವಿ  ಸಿಗುತ್ತದೆ"
"ಈಗ ಅರ್ಥವಾಯಿತು"
"ಏನು ಅರ್ಥವಾಯಿತು?"
"ಶ್ರೀಮದ್ ಭಾಗವತವನ್ನು ಹಣ್ಣು ಎಂದುದು ಏಕೆ ಎಂದು. "ಏಕಾದಶಿಯಂದು ಹಾಲು-ಹಣ್ಣು ಸೇವಿಸಿ"  ಎಂದು ಹೇಳಿದುದರ ಅರ್ಥ"
"ನಾನು ನಿಮಗೆ ಸ್ವಲ್ಪವೇ ವಿವರ ಕೊಟ್ಟಿದ್ದೇನೆ. ದೊಡ್ಡವರನ್ನು ಕೇಳಿದರೆ ಇನ್ನೂ ಅನೇಕ ಅರ್ಥಗಳನ್ನು ತಿಳಿಸಿಕೊಡುತ್ತಾರೆ" 
"ಆಗಲಿ. ಹೀಗೆಯೇ ಪ್ರಯತ್ನ ಪಡುತ್ತೇನೆ"

ಅಷ್ಟರಲ್ಲಿ ಪುರಾಣೀಕರು ಬಂದು ಪುರಾಣ ಪ್ರಾರಂಭವಾಯಿತು. 

*****

ಮುಕುಂದರಾಯರು ಮುಂದಿನ ಏಕಾದಶಿಯಿಂದ ಈ ಹಾಲು-ಹಣ್ಣುಗಳನ್ನು ಸೇವಿಸಲು ಪ್ರಾರಂಭ ಮಾಡಿದರು.