Friday, January 9, 2026

ಮನಸ್ಸು ನಿಲ್ಲಿಸುವ ಪ್ರಯತ್ನ


ಹಿಂದಿನ ಸಂಚಿಕೆಯಲ್ಲಿ "ಹದಿನಾರು ಮತ್ತು ಇಪ್ಪಂತ್ತೊಂದು" ಅನ್ನುವ ಶೀರ್ಷಿಕೆಯ ಅಡಿಯಲ್ಲಿ ಭಾರತೀಯ ಸಂಖ್ಯಾಶಾಸ್ತ್ರ ಹುಟ್ಟಿ ಬೆಳೆದ ರೀತಿಯ ಮತ್ತು ಅದರ ಜನ್ಮದಾತ ಎಂದು ಹೇಳುವ ಕಪಿಲ ಮುನಿ ಬಗ್ಗೆ ಸ್ವಲ್ಪ ವಿಚಾರ ಮಾಡಿದೆವು. ಕರ್ದಮ ಪ್ರಜಾಪತಿ ಮತ್ತು ದೇವಹೂತಿ ದೇವಿಯರ ಮಗನಾದ ಕಪಿಲನಾಗಿ ಶ್ರೀ ಮಹಾವಿಷ್ಣುವು ಅವತರಿಸಿದ ಸಮಾಚಾರವನ್ನು ನೋಡಿದೆವು. ಪ್ರಜಾಪತಿ ಕರ್ದಮ-ದೇವಹೂತಿ-ಕಪಿಲ ಮುನಿಗಳ ಕಾರ್ಯಕ್ಷೇತ್ರವಾದ ಗುಜರಾತು ರಾಜ್ಯದ ಪಾಟನ್ ಜಿಲ್ಲೆಯಲ್ಲಿರುವ ಸಿದ್ಧಿಪುರ, ಅಲ್ಲಿನ ಪ್ರಸಿದ್ಧ ಬಿಂದು ಸರೋವರ ಮತ್ತು "ಮಾತೃಗಯಾ" ಕ್ಷೇತ್ರದ ಬಗ್ಗೆ ನೋಡಿದ್ದೆವು. 

"I Salute You, Dear Mother" ಎಂಬ ಶೀರ್ಷಿಕೆಯ ಸಂಚಿಕೆಯಲ್ಲಿ ಹೆತ್ತ ತಾಯಿ ನೆನಪಿನಲ್ಲಿ ತಾಯಿಯನ್ನು ಉದ್ದೇಶಿಸಿ ಮಾಡುವ ಹದಿನಾರು ಸಂಖ್ಯೆಯ ಪಿಂಡಪ್ರದಾನ ಮತ್ತು ಪ್ರತಿ ಪಿಂಡ ಕೊಡುವ ಸಂದರ್ಭದಲ್ಲಿ ಹೇಳುವ ಶ್ಲೋಕಗಳು, ಅವುಗಳಲ್ಲಿರುವ ಭಾವ ತುಂಬಿದ ಅರ್ಥಗಳನ್ನೂ ನೋಡಿದೆವು. 

ಇದೇ ವಿಷಯಕ್ಕೆ ಸಂಬಂಧಿಸಿದ ಈ ಹಿಂದಿನ ಎರಡು ಸಂಚಿಕೆಗಳನ್ನು (ಒಂದು ಇಂಗ್ಲೀಷಿನಲ್ಲಿದೆ) ಇಲ್ಲಿ ಕ್ಲಿಕ್ ಮಾಡಿ ಓದಬಹುದು. 
*****

ಬಿಹಾರ ರಾಜ್ಯದಲ್ಲಿರುವ "ಗಯಾ" ಕ್ಷೇತ್ರದ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತು. ಶ್ರದ್ದಾಳು ಜನಗಳು ಈ ಗಯಾ ಕ್ಷೇತ್ರ ಯಾತ್ರೆ ಮಾಡಿ ಅಲ್ಲಿರುವ "ಗದಾಧರ" ದೇವಾಲಯದಲ್ಲಿ ಪಿತೃಶ್ರಾದ್ಧ ಮಾಡಿ, ಗದಾಧರನ ವಿಗ್ರಹದ ಮುಂದುಗಡೆ ಇರುವ ಕಲ್ಲಿನ "ವಿಷ್ಣುಪಾದ" ಸ್ಥಳದಲ್ಲಿ ಪಿಂಡಗಳನ್ನು ವಿಸರ್ಜನೆ ಮಾಡಿದರೆ ಪಿತೃಗಳಿಗೆ ಉತ್ತಮ ಗತಿ ಸಿಗುವುದೆಂದು ನಂಬಿಕೆ. ಸಾಮಾನ್ಯವಾಗಿ ಕಾಶಿಯಾತ್ರೆ ಮಾಡುವ ಯಾತ್ರಿಕರು ಮೊದಲು ಪ್ರಯಾಗ ತಲುಪಿ, ಅಲ್ಲಿ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿ (ಕೆಲವರು "ವೇಣೀದಾನ" ಸಹ ಮಾಡುತ್ತಾರೆ), ನಂತರ ಕಾಶಿಯ ವಿಶ್ವೇಶ್ವರ ಮತ್ತು ಬಿಂದುಮಾಧವ ದರ್ಶನ ಮಾಡಿ, ಆಮೇಲೆ ಗಯಾ ತಲುಪಿ ಅಲ್ಲಿ "ಸರ್ವ ಪಿತೃ ಶ್ರಾದ್ಧ" ಮಾಡುತ್ತಾರೆ. ಅಲ್ಲಿಗೆ "ಕಾಶಿಯಾತ್ರೆ" ಎಂದು ಹೇಳುವ ಸಂಪ್ರದಾಯ ಪದ್ಧತಿ ಪೂರ್ತಿ ಆಯಿತು ಎಂದು ನಂಬುತ್ತಾರೆ. 

ಗದಾಧರ ಅಂದರೆ ಯಾರು? ಗದಾಧರ ಅನ್ನುವ ಶ್ರೀ ಮಹಾವಿಷ್ಣುವನ್ನು ಹೀಗೆ ವರ್ಣಿಸಿ ಹೇಳುತ್ತಾರೆ:

ಬ್ರಹ್ಮಾಂಡ ಭುವನಾರಂಭ ಮೂಲಸ್ತoಭೋ ಗದಾಧರಃ 
ಕೌಮೋದಕೀ ಕರೇ ಯಸ್ಯ ತಂ ನಮಾಮಿ ಗದಾಧರಮ್ 

ಕೈಯಲ್ಲಿ "ಕೌಮೋದಕೀ" ಹೆಸರಿನ ಗದೆ ಹಿಡಿದು ಈ ಬ್ರಹ್ಮಾಂಡಕ್ಕೆ ಆಧಾರವಾದ ಕಂಭದಂತೆ ನಿಂತಿರುವ ಶ್ರೀ ಮಹಾವಿಷ್ಣುವೇ ಗದಾಧರ.

ಪಕ್ಕದಲ್ಲಿ ಕೊಟ್ಟಿರುವ ಗಯಾ ದೇವಾಲಯದ ಮೂಲ ಮೂರ್ತಿ ಚಿತ್ರವನ್ನು ನೋಡಿದರೆ ಕೌಮೋದಕಿ ಗದೆಯನ್ನು ಕಾಣಬಹುದು

ಭೂಮಿಯ ಯಾವ ಪ್ರದೇಶದಲ್ಲಿ ಶ್ರಾದ್ಧ ಮಾಡಿ "ಪಿಂಡಪ್ರದಾನ" ಮಾಡಿದರೂ ಅದು ಭೂಲೋಕದಲ್ಲಿ ಮಾಡಿದಂತೆ ಆಗುತ್ತದೆ. ಆದರೆ ಗಯಾದಲ್ಲಿರುವ ಗದಾಧರನ ಪಾದದ ಮೇಲೆ ಅದನ್ನು ಅರ್ಪಿಸಿದಾಗ ಅದು ಅನಂತ ವಿಶ್ವದ ಮೂಲ ಕಂಭದಂತೆ ನಿಂತಿರುವ ಶ್ರೀಹರಿಯ ಪದತಲದಲ್ಲಿ ಅರ್ಪಿಸಿದಂತೆ. ಈ ಕಾರಣಕ್ಕಾಗಿ ಗಯಾ ಪಿಂಡಪ್ರದಾನಕ್ಕೆ ವಿಶೇಷ ಮಹತ್ವ. 

ಗಯಾ ದೇವಾಲಯದ ಈ ಗದಾಧರ ಮೂರ್ತಿಯ ಮುಂಭಾಗದಲ್ಲಿ ಇರುವ ಅವನ ಪಾದವನ್ನು ಸ್ವಲ್ಪ ಕೆಳಗಡೆ ಕೊಟ್ಟಿರುವ ಚಿತ್ರದಲ್ಲಿ ಕಾಣಬಹುದು. ಈ ಚಿತ್ರದಲ್ಲಿ ಮಹಾವಿಷ್ಣುವಿನ ಪಾದದಲ್ಲಿರುವ ಧ್ವಜ, ವಜ್ರ, ಅಂಕುಶ ಮುಂತಾದ ರೇಖಾ ಲಕ್ಷಣಗಳನ್ನು ಕಾಣಬಹುದು. ಇವುಗಳ ವಿಶೇಷವನ್ನು ಮುಂದೆ ಸ್ವಲ್ಪ ಮಟ್ಟಿಗೆ ನೋಡೋಣ. 

ಪ್ರತಿದಿನ ಸಾವಿರಾರು ಯಾತ್ರಿಕರು ಈ "ವಿಷ್ಣುಪಾದ" ಇರುವ ಕಲ್ಲಿನ ಮೇಲೆ ಪಿಂಡಪ್ರದಾನ ಮಾಡುತ್ತಾರೆ. ಈ ಕಾರಣದಿಂದ ಅಲ್ಲಿ ರಾಶಿ ರಾಶಿ ಪಿಂಡಗಳು ಬಿದ್ದಿರುತ್ತವೆ. ಕೆಲವು ನಿಮಿಷಗಳಿಗೊಮ್ಮೆ ದೇವಾಲಯದ ಕಾರ್ಯಕರ್ತರು ಈ ಪ್ರದೇಶವನ್ನು ಸ್ವಚ್ಛ ಮಾಡುತ್ತಾರೆ. ಕೆಲವರು ಈ ಸಮಯಕ್ಕಾಗಿ ಕಾದುಕೊಂಡಿದ್ದು ಆ ಚಿನ್ಹೆಯಮೇಲೆ ಪಿಂಡಗಳನ್ನು ಹಾಕಿ ಧನ್ಯತಾ ಭಾವ ಹೊಂದುತ್ತಾರೆ. 

ಕೆಲವು ಕುಟುಂಬಗಳಲ್ಲಿ, ವಿಶೇಷವಾಗಿ ವೈಷ್ಣವರಲ್ಲಿ, ಮನೆ-ಮಠಗಳಲ್ಲಿ ಮಾಡುವ ಶ್ರಾದ್ಧ ಸಮಯದಲ್ಲಿ ಹೀಗೆ ಗಯಾಯಾತ್ರೆಯ ಸಮಯದಲ್ಲಿ ಅಲ್ಲಿಂದ ತಂದಿರುವ ತಾಮ್ರದ ವಿಷ್ಣು ಪಾದ ಇಟ್ಟು ಪೂಜಿಸಿ, ಅದರ ಮೇಲೆ ಪಿಂಡಪ್ರದಾನ ಮಾಡುವ ಪದ್ಧತಿ ಈಗಲೂ ನಡೆದುಬಂದಿದೆ. 

******

ಹಿಂದಿನ ಸಂಚಿಕೆಯಲ್ಲಿ ತಾಯಿ ದೇವಹೂತಿ ಮತ್ತು ಮಗ ಕಪಿಲ ಮುನಿಯ ಸಂವಾದವನ್ನು ಸ್ವಲ್ಪ ನೋಡಿದೆವು. ಜೀವನ-ಮರಣ ಚಕ್ರದಿಂದ ಬಿಡುಗಡೆ ಹೊಂದಲು ಯಾವ ದಾರಿ ಹಿಡಿಯಬೇಕೆಂಬ ಬಗ್ಗೆ ದೇವಹೂತಿ ಕೇಳಿದ ಪ್ರಶ್ನೆಗಳಿಗೆ ಮಗನಾದ ಕಪಿಲ ಮುನಿ ನೀಡಿದ ಉತ್ತರರೂಪದ ಉಪದೇಶ ಶ್ರೀಮದ್ ಭಾಗವತದ ಮೂರನೆಯ ಸ್ಕಂಧದಲ್ಲಿ "ಕಪಿಲ ಗೀತೆ" ಎಂದು ಪ್ರಸಿದ್ಧವಾಗಿದೆ. ಮಹಾಭಾರತದ ಮಧ್ಯದಲ್ಲಿ ಕುರುಕ್ಷೇತ್ರದ ಯುದ್ಧ ಪ್ರಾರಂಭವಾಗುವ ಸಮಯದಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ತಿಳಿಸಿದ "ಶ್ರೀಮದ್ ಭಗವದ್ಗೀತೆ" ಗೀತೆ ಎಂಬ ಹೆಸರಿಂದ ಪ್ರಸಿದ್ಧವಾಗಿದೆ. ಭಾಗವತದ ಮೂರನೆಯ ಸ್ಕಂಧದ ಈ "ಕಪಿಲ ಗೀತೆ" ಮತ್ತು ಹನ್ನೊಂದನೆಯ ಸ್ಕಂಧದ ಶ್ರೀಕೃಷ್ಣ ಉದ್ಧವನಿಗೆ ಮಾಡಿದ ಉಪದೇಶದ "ಉದ್ಧವ ಗೀತೆ" ಇವುಗಳು ಕೂಡ ಭಗವದ್ಗೀತೆಯಂತೆಯೇ ಅನೇಕ ಸಾರಯುತ ವಿಷಯಗಳನ್ನು ಒಳಗೊಂಡಿವೆ. 

ಜೀವನ-ಮರಣ ಚಕ್ರದಿಂದ ಬಿಡುಗಡೆಗಾಗಿ ಮಾಡುವ ಸಾಧನೆಯ ಮೊದಲ ಮೆಟ್ಟಿಲು ನಮ್ಮ ಮನಸ್ಸನ್ನು ನಿಯಂತ್ರಿಸಿ ಗಟ್ಟಿ ಮಾಡುವ ಕೆಲಸ. ನಮ್ಮ ಮನಸ್ಸು ಇಡೀ ಪ್ರಪಂಚದಲ್ಲಿ ಅತಿ ವೇಗವಾಗಿ ಓಡುವ ವಸ್ತು. ಅದಕ್ಕೇ ವೇಗದ ಸುದ್ದಿ ಬಂದಾಗಲೆಲ್ಲಾ ವಾಯುವೇಗ, ಮನೋವೇಗ ಅನ್ನುವುದು. ವಾಯುವೇಗಕ್ಕೂ ಮೀರಿದುದು ಮನೋವೇಗ. ಒಂದೇ ಕ್ಷಣದಲ್ಲಿ ವಿಶ್ವವನ್ನೆಲ್ಲಾ ಸುತ್ತಿ ಬರುವುದು ಅದು. ಯಾವುದೇ ಸಾಧನೆಯ ಕೆಲಸ ಮಾಡಲು ತೊಡಗಿದಾಗ ಈ ಮನಸ್ಸನ್ನು ನಿಯಂತ್ರಿಸುವುದೇ ದೊಡ್ಡ ಕಷ್ಟದ ಕಾರ್ಯ. 

ಕಪಿಲ ಮುನಿಯ ಉಪದೇಶದಲ್ಲಿ ಇದಕ್ಕೆ ಪರಿಹಾರ ಸಿಕ್ಕುತ್ತದೆ. ಪ್ರಾರಂಭದಲ್ಲಿ ಎಲ್ಲ ಕೆಲಸಗಳೂ ಕಷ್ಟವೇ. ಹುಟ್ಟಿದ ಮಗು ವರುಷ ತುಂಬುವ ವೇಳೆಗೆ ನಡೆಯಲು ಪ್ರಾರಂಭಿಸುತ್ತದೆ. ಅನೇಕ ಸಲ ಬೀಳುತ್ತದೆ. ಮೊದಲು ಗೋಡೆ ಹಿಡಿದು ನಡೆಯುತ್ತದೆ. ನಂತರ ತಾಯಿಯ ಕೈಬೆಟ್ಟು ಹಿಡಿದು ನಡೆಯುತ್ತದೆ. ಕ್ರಮೇಣ ತಾನೇ ಮೆಲ್ಲಮೆಲ್ಲನೆ ನಡೆಯುತ್ತದೆ. ಬಿದ್ದಾಗ ಮತ್ತೆ ಮೇಲೇಳುತ್ತದೆ. ಹೀಗೆ ಮಾಡುತ್ತ ಮಾಡುತ್ತಾ ಕಲಿಯುತ್ತದೆ. ಮನಸ್ಸಿನ ಹತೋಟಿಯೂ ಹೀಗೆಯೇ. 

ಕಪಿಲ ಮುನಿಯು ಇದಕ್ಕೆ ಉಪಾಯವಾಗಿ "ಸಜ್ಜನರ ಸಹವಾಸ" ಎನ್ನುವ ಪರಿಹಾರ ಹೇಳುತ್ತಾನೆ. ನಾವು ಚಿಕ್ಕವರಿದ್ದಾಗ ನಮ್ಮ ಹಿರಿಯರು "Tell me who is your friend; I will tell you who you are" ಎಂದು ಒಂದು ಗಾದೆ ಹೇಳುತ್ತಿದ್ದರು. ಜೊತೆಯವರು ಸೋಮಾರಿಗಳಾದರೆ ನಾವೂ ಸೋಮಾರಿಗಳಾಗುತ್ತೇವೆ. ಅವರು ದುರಭ್ಯಾಸಗಳ ದಾಸರಾಗಿದ್ದಾರೆ ನಾವೂ ಹಾಗಾಗುತ್ತೇವೆ. ಅವರು ನಡೆಯುವ ರೀತಿಯೇ ನಮಗೆ ಮಾದರಿ ಆಗುತ್ತದೆ. ಸಾಧನೆಯಲ್ಲಿಯೂ ಹೀಗೆಯೇ. ಆದ್ದರಿಂದ ಮೊದಲು ಸಜ್ಜನರನ್ನು ಹುಡುಕಿ ಅವರ ಸಂಗದಲ್ಲಿ ಆದಷ್ಟೂ ಹೆಚ್ಚು ಕಾಲ ಕಳೆಯಬೇಕು. ಶ್ರೀ ಮೋಹನದಾಸರ ಕೋಲೆ ಪದದಲ್ಲಿ "ಸಜ್ಜನರ ಸಹವಾಸ ಮಲ್ಲಿಗೆ ಮುಡಿದಂತೆ, ದುರ್ಜನರ ಸಂಗ ಮುಲ್ಲಂಗಿ ತಿಂದು ತೇಗಿದಂತೆ ಕೋಲೆ" ಎಂದು ಹೇಳುತ್ತಾರೆ. ಮಲ್ಲಿಗೆ ಹೂವು ಮುಡಿದು ಮಾರನೆಯ ದಿನ ಅದನ್ನು ಬಿಸಾಡಿದರೂ ತಲೆಯಲ್ಲಿ ಮಲ್ಲಿಗೆ ಸುವಾಸನೆ ಇರುವುದು. ಮೂಲಂಗಿಯೂ ಹಾಗೆ. ತಿಂದು ಎಷ್ಟೋ ಹೊತ್ತಿನಮೇಲೆ ತೇಗಿದರೂ ಅದೇ ಕಮಟು ವಾಸನೆಯೇ!

ಆಯಿತು. ಒಪ್ಪೋಣ. ಸಜ್ಜನರ ಸಂಗ ಪ್ರಾರಂಭಿಸಿದೆವು. ಅವರು ದಿನಕ್ಕೆ ಇಪ್ಪತ್ತುನಾಲ್ಕು ಗಂಟೆಯೂ ಹತ್ತಿರವಿರುವುದಿಲ್ಲ. ಮೇಲಾಗಿ, ನಾವು ಒಂಟಿಯಾಗಿದ್ದಾಗ ಮನಸ್ಸು ಹಿಡಿದಿಡುವುದು ಇನ್ನೂ ಕಷ್ಟ. ಅದಕ್ಕೆ ಏನು ಉಪಾಯ?
 
ಈ ಕಠಿಣ ಮತ್ತು ಜಟಿಲ ಸಮಸ್ಯೆಗೆ ಕಪಿಲ ಮುನಿ ಹೇಳಿ ಕೊಡುವ ಉಪಾಯವೆಂದರೆ ಒಂಟಿಯಾಗಿದ್ದಾಗಲೆಲ್ಲಾ ಪರಮಾತ್ಮನ ಪಾದದ ಬಗ್ಗೆ ಚಿಂತನೆ ಮಾಡುವುದು:

ಸಂಚಿಂತಯೇತ್ ಭಗವತಃ ಚರಣಾರವಿಂದಮo  
ವಜ್ರಾoಕುಶ ಧ್ವಜ ಸರೋರುಹ ಲಾಂಛನಾಡ್ಯo
ಉತ್ತುಂಗರಕ್ತವಿಲಸನ್  ನಖಚಕ್ರವಾಳ 
ಜ್ಯೋತ್ಸ್ನಾಭಿರಾಹತಾಮಹದ್ ಹೃದಯಾಂಧಕಾರಂ 

ಇದು ಭಾಗವತದ ಅತ್ಯಂತ ಪ್ರಸಿದ್ಧವಾದ ಶ್ಲೋಕಗಳಲ್ಲಿ ಒಂದು.

ಪರಮಾತ್ಮನ ಕಮಲಗಳಂತಿರುವ ಪಾದಗಳನ್ನು ಯಾವಾಗಲೂ ನೆನೆಯುತ್ತಿರಬೇಕು. ಅದರಲ್ಲಿ ಮಿಂಚು, ಅಂಕುಶ, ಧ್ವಜ, ಕಮಲ ಮುಂತಾದ ರೇಖೆಗಳಿವೆ. ಆ ಪಾದದ ಬೆರಳುಗಳ ಉಗುರುಗಳಿಂದ ಸದಾಕಾಲವೂ ಚಂದ್ರನ ಬೆಳದಿಂಗಳಿಗಿಂತಲೂ ಅಧಿಕವಾದ (ಬೆಳಕು ಬೆಳದಿಂಗಳಿಗಿಂತ ಕೋಟಿ ಕೋಟಿ ಬಹುಪಾಲು ಹೆಚ್ಚು. ಆದರೆ ಸೂರ್ಯನ ಬೆಳಕಿನಂತೆ ಕಣ್ಣು ಕುಕ್ಕುವುದಲ್ಲ. ಹೀಗೆ) ಆದರೆ ಹಿತವಾದ ಪ್ರಕಾಶ ಹೊರಹೊಮ್ಮುತ್ತಿರುತ್ತದೆ. ಈ ಬೆಳದಿಂಗಳ ಬೆಳಕು ನಮ್ಮ ಹೃದಯ, ಮನಸ್ಸುಗಳಲ್ಲಿರುವ ಕತ್ತಲನ್ನು ಹೊರದೋಡಿಸುತ್ತದೆ. (ಒಮ್ಮೆ ಆ ಕತ್ತಲೆ ಹೋದರೆ ಮುಂದೆ ಎಲ್ಲವೂ ಸುಗಮವಾಗುವುದು ಎಂದು ಭಾವ). 


ಕೊಟ್ಟಿರುವ ಚಿತ್ರವನ್ನು ಹಿಗ್ಗಿಸಿ ನೋಡಿದರೆ ಅಥವಾ ಪಕ್ಕದಲ್ಲಿ ಕೊಟ್ಟ್ಟಿರುವ ತಾಮ್ರದ ವಿಷ್ಣುಪಾದವನ್ನು ನೋಡಿದರೆ ಈ ರೇಖೆಗಳನ್ನು ಚೆನ್ನಾಗಿ ಕಾಣಬಹುದು. 
*****

ನಮ್ಮ ಮನಸ್ಸುಗಳೂ ಮದವೇರಿದ ಆನೆಗಳಂತೆ. ದಿಕ್ಕಾಪಾಲಾಗಿ ಓಡುತ್ತಿರುತ್ತವೆ. ಎಂತಹ ಮದಿಸಿದ ಆನೆಯಾದರೂ ಮಾವುತನ ಅಂಕುಶ ಅದನ್ನು ಒಂದು ನಿಮಿಷದಲ್ಲಿ ಹಿಡಿತಕ್ಕೆ ತರಬಲ್ಲದು. ಪರಮಾತ್ಮನ ಪಾದಗಳ ಚಿಂತನೆಯಿಂದ ಅದರಲ್ಲಿರುವ ಅಂಕುಶ ನಮ್ಮ ಮನಸ್ಸೆಂಬ ಆನೆಗಳನ್ನು ಹಿಡಿತಕ್ಕೆ ತರುತ್ತದೆ ಎಂದು ಪರ್ಯಾಯವಾದ ಅರ್ಥ. 

ಇದೇ ವಿಷಯವನ್ನು ಶ್ರೀ ಕನಕದಾಸರು ತಮ್ಮ "ಕೇಶವನಾಮ" ಕೃತಿಯಲ್ಲಿ (ಈಶ ನಿನ್ನ ಚರಣ ಭಜನೆ ಆಸೆಯಿಂದ ಮಾಡುವೆನೋ) ಹೀಗೆ ಹೇಳುತ್ತಾರೆ:

ಹಿಂದನೇಕ ಯೋನಿಗಳಲಿ ಬಂದುಬಂದು ನೊಂದೆನಯ್ಯ 
ಇಂದು ಭವದ ಬಂಧ ಬಿಡಿಸೋ ತಂದೆ ಗೋವಿಂದಾ 

ಭಷ್ಟನೆನಿಸಬೇಡ ಕೃಷ್ಣ ಇಷ್ಟು ಮಾತ್ರ ಬೇಡಿಕೊಂಬೆ 
ಶಿಷ್ಟರೊಳಗೆ ಇಟ್ಟು ಕಷ್ಟ ಬಿಡಿಸೋ ವಿಷ್ಣುವೇ  

ಈ ಸಜ್ಜನರ ಸಂಗವನ್ನೇ "ಸತ್ಸಂಗ" ಎಂದು ಪ್ರೀತಿಯಿಂದ ಕರೆಯುವುದು. ಮನಸ್ಸು ನಿಲ್ಲಿಸುವುದು ಬಲು ಕಷ್ಟ. ಆದರೂ ಸತತ ಪ್ರಯತ್ನದಿಂದ ಮತ್ತು ಸಜ್ಜನರ ಸಹವಾಸದಿಂದ ಅದನ್ನು ಸಾಧಿಸಬೇಕು. 

Thursday, January 1, 2026

ಹದಿನಾರು ಮತ್ತು ಇಪ್ಪತ್ತೊಂದು


ಅದೊಂದು ಬಲು ಸುಂದರವಾದ ಮಗು. ಆಗ ತಾನೇ ಹುಟ್ಟಿದ ಕೂಸು. ಅರಳಿದ ಕಮಲದಲ್ಲಿ ಮಲಗಿದ್ದ ಶಿಶು. ಸ್ವಲ್ಪ ವಿಚಿತ್ರವಾದ ಹಸುಳೆ. ಎಲ್ಲಾ ಸರಿ ಇದ್ದರೂ ತಲೆಗಳು ಮಾತ್ರ ನಾಲ್ಕು! ಅದಕ್ಕೆ ಸರಿಯಾಗಿ ನಾಲ್ಕು ಕೈಗಳು. ಅತಿ ಮೋಹಕವಾದ ಶರೀರ. ಎದ್ದ ಮಗು ತಕ್ಷಣ ಕಣ್ಣು ಬಿಟ್ಟಿತು. ತನ್ನ ಸುತ್ತ-ಮುತ್ತ ನೋಡಿತು. 

ಎಲ್ಲ ಕಡೆ ಆವರಿಸಿರುವ ಕತ್ತಲು. ಯಾರೂ ಬೇರೆಯವರು ಕಾಣರು. ತಾನು ಯಾರು? ತನಗೆ ಜನ್ಮ ಕೊಟ್ಟವರು ಯಾರು? ಎಲ್ಲಿಂದ ಬಂದೆ? ಯಾವುದೂ ತಿಳಿಯದು. ಇದೇನು ವಿಚಿತ್ರ?

ಸುಮ್ಮನೆ ಇರುವಂತಹ ಮಗುವಲ್ಲ ಅದು. ತನಗೆ ಆಸರೆಯಾಗಿ, ಹಾಸಿಗೆಯಾಗಿ ಹರಡಿದ್ದ ಕಮಲವನ್ನು ಗಮನಿಸಿತು. ಅದರ ಕೆಳಗಿದ್ದ ದೊಡ್ಡ ಕಾಂಡವನ್ನು ಕಂಡಿತು. ಕಮಲದ ದೇಟಿನೊಳಗೆ ಇಳಿಯಿತು. ಇಳಿದು ಎಲ್ಲೆಡೆ ಹುಡುಕಿತು. ಅಲ್ಲಿ ಎಷ್ಟು ಹುಡುಕಿದರೂ ಯಾರೂ ಕಾಣಲಿಲ್ಲ. 

ಕಾಂಡದ ಆಳದಿಂದ ಹೊರಗೆ ಬಂದು ಅದೇ ಕಮಲದಲ್ಲಿ ಪದ್ಮಾಸನ ಹಾಕಿ ಕೂತಿತು. ಅದಕ್ಕೇನು ಭಯವಿರಲಿಲ್ಲ. ಆದರೂ ಮುಂದೆ ಏನು ಮಾಡಬೇಕೆಂಬ ಸಮಸ್ಯೆ ಎದುರಿಗೆ ಇತ್ತು. ತನಗೆ ಜನ್ಮದಾತರು ಯಾರು? ಮುಂದೆ ತನ್ನ ಕೆಲಸವೇನು? ಈ ಪ್ರಶ್ನೆಗಳಿಗೆ ಉತ್ತರ ಹುಡುಕಲು ತೊಡಗಿತು. 

*****

ಹೀಗೆ ಕುಳಿತ ಮಗುವಿಗೆ ವಿಶಾಲ ಆಕಾಶದಲ್ಲಿ ಶಬ್ದದ ಅನುಭವ ಆಯಿತು. ಮಗು ಆ ಶಬ್ದವನ್ನು ಗಮನವಿಟ್ಟು ಕೇಳಿತು. ಅದು ವಿಶ್ವದ ಮೊದಲ "ಆಕಾಶವಾಣಿ". ಶರೀರವಿಲ್ಲದ, ಆದರೆ ಚೆನ್ನಾಗಿ ಕೇಳಿಸಿದ ಧ್ವನಿ. ಅದೊಂದು "ಅಶರೀರವಾಣಿ". ಎರಡೇ ಎರಡು ಶಬ್ದಗಳು. ನಂತರ ಮತ್ತೇನಿಲ್ಲ. ಅಷ್ಟೇ.

"ಹದಿನಾರು. ಇಪ್ಪತ್ತೊಂದು."

ಹದಿನಾರು ಅನ್ನುವ ಒಂದು ಶಬ್ದ. ಇಪ್ಪತ್ತೊಂದು ಅನ್ನುವ ಇನ್ನೊಂದು ಶಬ್ದ. ಈ ಶಬ್ದಗಳ ಹಿಂದೆ ಮೌನ. ಈ ಎರಡು ಶಬ್ದಗಳ ನಂತರ ಮತ್ತೆ ಅದೇ ಮೌನದ ತಾಂಡವ. 

ಮಗು ಈ ಎರಡು ಶಬ್ದಗಳಿಗೆ ಅರ್ಥ ಹುಡುಕಿತು. ಆಗ ಅದಕ್ಕೆ ಹೊಳೆಯಿತು. ಈ ಎರಡು ಶಬ್ದಗಳು ಎರಡು ಸಂಖ್ಯೆಯನ್ನು ಹೇಳುತ್ತಿವೆ. ಈ ಸಂಖ್ಯೆಗಳ ಅರ್ಥವೇನು?  

ಒಹೋ! ಇವು ವರ್ಣಮಾಲೆಯ ಅಕ್ಷರಗಳು!

ಯಾವ ಅಕ್ಷರಗಳು? ಮೊದಲನೆಯದು ಹದಿನಾರು ಎಂದು. ಎರಡನೆಯದು ಇಪ್ಪತ್ತೊಂದು ಎಂದು. ಅಷ್ಟು ಸಂಖ್ಯೆಯ ಸ್ವರ ಅಕ್ಷರಗಳಿಲ್ಲ. ಆದ್ದರಿಂದ ಅವು ವ್ಯಂಜನಾಕ್ಷರಗಳು. 

*****

ಹದಿನಾರು. ಕ-ವರ್ಗದ ಐದು ಅಕ್ಷರಗಳು. ಚ-ವರ್ಗದ ಐದು ಅಕ್ಷರಗಳು ಟ-ವರ್ಗದ ಐದು ಅಕ್ಷರಗಳು. ಅಲ್ಲಿಗೆ ಹದಿನೈದಾಯಿತು. ತ-ವರ್ಗದ "ತ" ಅನ್ನುವುದು ಹದಿನಾರನೆಯ ಅಕ್ಷರ. 

ಮುಂದೆ ಪ-ವರ್ಗದ ಮೊದಲನೆಯ ಅಕ್ಷರ "ಪ" ಅನ್ನುವುದು ಇಪ್ಪತ್ತೊಂದನೆಯ ಅಕ್ಷರ!

ಎರಡನ್ನೂ ಕೂಡಿಸಿದರೆ "ತಪ' ಎಂದಾಯಿತು. "ತಪ" ಅಂದರೆ ಏನು? "ತಪ್ ತಪನೇ" ಎಂದು. ತಪ ಅನ್ನುವುದರ ಅರ್ಥ "ಆಲೋಚಿಸು" ಎಂದು. ಯಾವುದನ್ನಾದರೂ ಕುರಿತು ಒಂದೇ ಮನಸ್ಸಿನಿಂದ ಯೋಚಿಸುವುದನ್ನೇ ತಪಸ್ಸು ಎನ್ನುವುದು. 

ಹೀಗೆ ಯೋಚಿಸಿದಾಗ ಮಗುವಿಗೆ ಆಕಾಶವಾಣಿಯ ಎರಡು ಶಬ್ದಗಳ ಸೂಚನೆಯ ಅರ್ಥವಾಯಿತು. ಜನನಕ್ಕೆ ಕಾರಣವಾಗಿ ಹುಟ್ಟಿಸಿ ತಂದವನು "ತಂದೆ". ತನ್ನ ಜನನಕ್ಕೆ ಕಾರಣನಾದ ತಂದೆಯನ್ನು ಕುರಿತು ತಪಸ್ಸು ಮಾಡಲು ಪ್ರಾರಂಭಿಸಿತು. 
******

ಅದೇನು ಸಾಧಾರಣವಾದ ತಪಸ್ಸಲ್ಲ. ಒಂದೆರಡು ದಿನ, ವಾರ, ತಿಂಗಳುಗಳ ತಪಸ್ಸಲ್ಲ. ಒಂದೆರಡು ವರುಷಗಳ ತಪಸ್ಸೂ ಅಲ್ಲ. ಒಂದು ನೂರು ವರುಷಗಳ ತಪಸ್ಸು. ನಮ್ಮ ವರುಷದಂತೆ ಮನುಷ್ಯಮಾನದ ವರುಷವಲ್ಲ. ಬ್ರಹ್ಮದೇವರ ವಯೋಮಾನದ ಲೆಕ್ಕದ ಒಂದು ನೂರು ವರ್ಷ!

ಒಂದು ನೂರು ವರುಷದ ತಪಸ್ಸಿನ ನಂತರ ಕೂಸಿನ ತಂದೆ ಕಾಣಿಸಿಕೊಂಡ. ಅವನು ನೀರಿನ ಮೇಲೆ ಮಲಗಿದವನು."ನಾರಾ" ಅಂದರೆ ನೀರು. ಆದ್ದರಿಂದ ಅವನು "ನಾರಾಯಣ".  

ಅವನು ಮಲಗಿರುವುದು ಹಾಲಿನ ಕಡಲ ಮೇಲಲ್ಲವೇ? ಹೌದು. ಆದರೆ ಹಾಲೂ ನೀರಿನಂತೆ. ದ್ರವ ರೂಪ. ಮೇಲಾಗಿ ಇದು ನಡೆದಾಗ ಅವನು "ಪ್ರಳಯಜಲ" ಅಂದರೆ ಎಲ್ಲೆಲ್ಲೂ ಆವರಿಸಿದ್ದ ನೀರಿನ ಮೇಲೆ ಮಲಗಿದ್ದವನು. ಯಾರಾದರೂ ಒಂದು ದ್ರವದ ಮೇಲೆ ಮಲಗಲು ಸಾಧ್ಯವೇ? ಅವನಿಗೆ ಸಾಧ್ಯ. 

ಹೀಗೆ ಕಾಣಿಸಿಕೊಂಡ ತಂದೆ ನಾರಾಯಣ ಮಗ ಬ್ರಹ್ಮನಿಗೆ ನಾಲ್ಕು ಶ್ಲೋಕಗಳ ಸಂಕ್ಷಿಪ್ತವಾದ ಉಪದೇಶ ಮಾಡಿದ. ಇದೇ ಪ್ರಪಂಚದ ಮೊದಲ ಪಾಠ. ಮೊಟ್ಟ ಮೊದಲ ಶಿಕ್ಷಣ. ಅದನ್ನೇ "ಚತುಶ್ಲೋಕೀ ಭಾಗವತ" ಅನ್ನುತ್ತಾರೆ. ಈ ನಾಲ್ಕು ಶ್ಲೋಕಗಳಲ್ಲಿ ಇಡೀ ಸೃಷ್ಟಿಯ ರಹಸ್ಯವನ್ನು ಕಮಲನಾಭ ನಾರಾಯಣನು ಕಮಲಸಂಭವ ಬ್ರಹ್ಮನಿಗೆ ತಿಳಿಸಿ ಹೇಳಿದ. 

***** 

"ಪ್ರಜ್ಞೆ" ಮತ್ತು "ಪ್ರತಿಭೆ" ಅನ್ನುವ ಪದಗಳಿಗೆ ಈಗಿನ ವಾಡಿಕೆಯಲ್ಲಿ ಅನೇಕ ರೀತಿಯ ಅರ್ಥಗಳನ್ನು ಆರೋಪಿಸುತ್ತಾರೆ (ಕೊಡುತ್ತಾರೆ). 

ಒಂದು ವಿಷಯವನ್ನು ಹೇಳಿದರೆ ಅದಕ್ಕೆ ಸಂಬಂಧಿಸಿದ ಎಲ್ಲ ಬೇರೆ ಬೇರೆ ವಿಷಯಗಳನ್ನು ಒಟ್ಟಿಗೆ ತಿಳಿಯುವ ಶಕ್ತಿಗೆ "ಪ್ರಜ್ಞೆ" ಎಂದು ಹೆಸರು. ("ನಿನಗೆ ಮೈಮೇಲೆ ಪ್ರಜ್ಞೆ ಇಲ್ಲವೇ?" ಎಂದು ಕೆಲವೊಮ್ಮೆ ಹೇಳುವುದುಂಟು. ಹೀಗೆ ಹೇಳಿದರೆ "ನಿನಗೆ ಸಮಯ-ಸಂದರ್ಭಗಳ ಹಿನ್ನೆಲೆಯಲ್ಲಿ ತಿಳಿಯುವ ಶಕ್ತಿ ಇಲ್ಲವೇ?" ಎಂದು ತಾನೇ ಕೇಳುವುದು? "ಮೈಮೇಲೆ ಎಚ್ಚರ ಇಲ್ಲವೇ?" ಅನ್ನುವುದು ಅದರ ಅರ್ಥವಲ್ಲ).

ಇದೇ ರೀತಿ ಸ್ವಲ್ಪ ವಿಷಯವನ್ನು ಹೇಳಿದರೆ ಊಹಾಪೋಹ ಮಾಡಿ ಅದನ್ನು ವಿಸ್ತರಿಸಿ ವಿಶಾಲವಾಗಿ ತಿಳಿದುಕೊಳ್ಳುವುದಕ್ಕೆ "ಪ್ರತಿಭೆ" ಎಂದು ಹೆಸರು. 

ಪ್ರಜ್ಞಾ ಮತ್ತು ಪ್ರತಿಭೆ ಇರುವವರಿಗೆ ಸ್ವಲ್ಪ ಸುಳಿವು ಕೊಟ್ಟರೆ ಸಾಕು. ಒಂದು ಸಣ್ಣ ಬೀಜ ಮುಂದೆ ಅರಳಿ ಒಂದು ದೊಡ್ಡ ಮರ ಆಗುವಂತೆ ಸೂಕ್ಶ್ಮವಾಗಿ ಹೇಳಿದ ವಿಷಯ ಅವರ ತಲೆಯಲ್ಲಿ ಅರಳಿ ಪೂರ್ತಿ ಅರಿವು ತುಂಬಿಕೊಳ್ಳುತ್ತದೆ. ಇದನ್ನೇ "ಉಗುರು ತೋರಿಸಿದರೆ ಹಸ್ತ ನುಂಗುವುದು" ಎಂದು ಹೇಳುವುದು.

ಬ್ರಹ್ಮದೇವರಿಗಿಂತ ಹೆಚ್ಚಿನ ಪ್ರಜ್ಞೆ ಮತ್ತು ಪ್ರತಿಭೆ ಈ ಜಗತ್ತಿನಲ್ಲಿ ಯಾರಿಗುಂಟು? 

***** 

ತಂದೆ ನಾರಾಯಣ ಹೇಳಿದ ಪಾಠದಿಂದ ಮುಂದಿನ ದಾರಿ ತಿಳಿದ ಚತುರ್ಮುಖ ಬ್ರಹ್ಮದೇವರು ಸೃಷ್ಟಿ ಕಾರ್ಯವನ್ನು ಪ್ರಾರಂಭಿಸಿದರು. ತನ್ನ ಮಾನಸ ಪುತ್ರರಾದ ನಾರದರಿಗೆ ಮುಂದೊಮ್ಮೆ ತಾವು ತಂದೆಯಿಂದ ಕೇಳಿದ ಭಾಗವತವನ್ನು ಉಪದೇಶಿಸಿದರು. ಕಾಲಾನಂತರ ಪರಾಶರ-ಸತ್ಯವತಿಯರ ಮಗನಾದ, ಶ್ರೀಹರಿಯ ಇನ್ನೊಂದು ರೂಪನಾದ ವೇದವ್ಯಾಸ ಮಹರ್ಷಿಯು ನಾರದರಿಂದ ಇದನ್ನು ಪಡೆದರು. ಅದನ್ನು ವಿಶಾಲವಾದ, ಹದಿನೆಂಟನೆಯ ಪುರಾಣವಾದ, ಹದಿನೆಂಟು ಸಾವಿರ ಶ್ಲೋಕದ "ಭಾಗವತ ಪುರಾಣ" ಮಾಡಿ ವಿವರಿಸಿದರು. 

ವೇದವ್ಯಾಸರು ಈ ಭಾಗವತ ಮಹಾಪುರಾಣವನ್ನು ತಮ್ಮ ಮಗನಾದ ಶುಕ ಮಹರ್ಷಿಗೆ ಕೊಟ್ಟರು. ಪರೀಕ್ಷಿತ್ ಮಹಾರಾಜನು ಶುಕಮುಖವಾಗಿ ಇದನ್ನು ಕೇಳಿದನು. ನಂತರ ಅದು ಎಲ್ಲೆಡೆ ಹರಡಿತು. 

*****

ಚತುರ್ಮುಖ ಬ್ರಹ್ಮರ ಮತ್ತೊಬ್ಬ ಮಗನಾದ ಕರ್ದಮ ಪ್ರಜಾಪತಿ ತನಗೆ ಬಂದ ಸೂಚನೆಯಂತೆ ಸ್ವಾಯಂಭುವ ಮನು ಮತ್ತು ಶತರೂಪಾ ದೇವಿಯರ ಮಗಳಾದ ದೇವಹೂತಿ ದೇವಿಯನ್ನು ವಿವಾಹವಾದರು. ಕರ್ದಮರ ತಪಸ್ಸಿಗೆ ಮೆಚ್ಚಿ ಅವರ ಮಗನಾಗಿ ಹುಟ್ಟುತ್ತೇನೆ ಎಂದು ಮಾತು ಕೊಟ್ಟಿದ್ದ ಮಹಾವಿಷ್ಣುವು ಕರ್ದಮ-ದೇವಹೂತಿಯರ ಮಗನಾಗಿ "ಕಪಿಲ ಋಷಿ" ಎಂದು ಅವತರಿಸಿದನು. ಕರ್ದಮರು ವಾನಪ್ರಸ್ಥರಾದ ಸಮಯದಲ್ಲಿ ದೇವಹೂತಿಯ ಮುಂದಿನ ರಕ್ಷಣೆಯ ಹೊಣೆ ಕಪಿಲರಿಗೆ ಒಪ್ಪಿಸಿದರು. 

ಸ್ವಲ್ಪ ಕಾಲಾನಂತರ ದೇವಹೂತಿಯು ಮಗನಾದ ಕಪಿಲನ ಬಳಿಗೆ ಬಂದು ತನಗೆ ಉಪದೇಶ ಮಾಡುವಂತೆ ಕೇಳಿದಳು. 

"ಕಪಿಲ, ನನಗೆ ಇನ್ನು ಬದುಕಿದ್ದು ಸಾಕಾಯಿತು. ನನಗೆ ಉಪದೇಶ ಮಾಡಿ ಮೋಕ್ಷ ಮಾರ್ಗವನ್ನು ಸೂಚಿಸು"

"ಅಮ್ಮಾ, ನೀನು ನನ್ನ ಹೆತ್ತ ತಾಯಿ. ತಾಯಿತನ ಬಹಳ ದೊಡ್ಡದು. ನಾನು ನಿನಗೆ ನಮಸ್ಕರಿಸಬೇಕೇ ಹೊರತು ನೀನು ನನಗೆ ನಮಸ್ಕಾರ ಮಾಡುವಂತಿಲ್ಲ. ಸನ್ಯಾಸಿಗಳಾದವರೂ ಸಹ ತಾಯಿಗೆ ನಮಸ್ಕರಿಸುತ್ತಾರೆ. ಗುರುವಿಗೆ ನಮಸ್ಕರಿಸದಿರುವವರಿಗೆ ಉಪದೇಶ ಮಾಡುವಂತಿಲ್ಲ. ಆದ್ದರಿಂದ ನಾನು ನಿನಗೆ ಉಪದೇಶ ಮಾಡಲಾಗದು"

"ಕಪಿಲ, ನೀನು ನಿಮಿತ್ತಕ್ಕೆ ನನ್ನ ಮಗನಾದರೂ ನೀನು ಶ್ರೀಹರಿ ಎಂದು ನಾನು ಬಲ್ಲೆ. ಆ ಕಾರಣದಿಂದ ನಾನು ನಮಸ್ಕರಿಸಬಹುದು. ನೀನು ಉಪದೇಶ ಮಾಡಬಹುದು"

"ನಾನು ಶ್ರೀಹರಿ ಎನ್ನುವ ಜ್ಞಾನ ನಿನಗೆ ಬಂದಿದೆ ಅಂದರೆ ಮತ್ತೆ ಯಾವ ಉಪದೇಶವೂ ಬೇಕಾಗಿಲ್ಲವಲ್ಲ!"

"ಅದೇನೇ ಇರಲಿ. ನಿನ್ನಿಂದ ವಿವರವಾಗಿ ಉಪದೇಶ ಪಡೆಯಬೇಕೆಂದು ನನಗೆ ಆಸೆ. ಈ ಆಸೆಯನ್ನು ಪೂರ್ಣ ಮಾಡು" 

ಮುಂದೆ ಮಾತಿಲ್ಲ. ತಾಯಿಯ ಆಸೆ ಪೂರ್ತಿ ಮಾಡಲು ಕಪಿಲ ಮುನಿಯು ದೇವಹೂತಿ ದೇವಿಗೆ ವಿವರವಾಗಿ ಮುಕ್ತಿ ಮಾರ್ಗವನ್ನು ಉಪದೇಶಿಸಿದನು. ಇದು ಭಾಗವತದ ಮೂರನೆಯ ಸ್ಕಂಧದಲ್ಲಿ "ಕಪಿಲ ಗೀತೆ" ಎಂದು ಪ್ರಸಿದ್ಧವಾಗಿದೆ. 

ಕರ್ದಮ-ದೇವಹೂತಿ-ಕಪಿಲ ಮುನಿ ಇವರ ಬಗ್ಗೆ ಹೆಚ್ಚಿನ ವಿವರ ಇರುವ ಇಂಗ್ಲಿಷ್ ಬ್ಲಾಗ್ ಇಲ್ಲಿ ಕ್ಲಿಕ್ ಮಾಡಿ ಓದಬಹುದು.  
*****

ಭಾರತೀಯ ತತ್ವ್ವಶಾಸ್ತ್ರದಲ್ಲಿ ಸಂಖ್ಯೆಗಳಿಗೆ ಬಹಳ ಮಹತ್ವ ಇದೆ. ಅನೇಕ ಗಹನ ವಿಷಯಗಳನ್ನು ಅರಿಯಲು ಅಂಕಿ-ಸಂಖ್ಯೆಗಳ ತಿಳುವಳಿಕೆ ಬಹಳ ಅವಶ್ಯಕ. ಇದೇ ಕಪಿಲ ಮಹರ್ಷಿ ಮುಂದೆ ಮೊದಲು ಸೂಚಿಸಿದ "ಹದಿನಾರು-ಇಪ್ಪತ್ತೊಂದು" ಸೂತ್ರವನ್ನು ಹಿಗ್ಗಿಸಿ "ಸಂಖ್ಯಾಶಾಸ್ತ್ರ" ರಚಿಸಿದ ಮೂಲ ಪುರುಷರು ಎಂದು ನಂಬಿಕೆ. ವೈದಿಕ ವಾಂಗ್ಮಯ ತಿಳಿಯುವ ಪ್ರಯತ್ನ ಮಾಡುವವರಿಗೆ ಇದರ ಅಭ್ಯಾಸ ಬೇಕು. 

ಹದಿನಾರು-ಇಪ್ಪತ್ತೊಂದು ಎಂದು ಆಕಾಶವಾಣಿಯಲ್ಲಿ ಕೇಳಿಬಂದ ಎರಡು ಶಬ್ದಗಳು ಕಡೆಗೆ ಹೀಗೆ "ಸಂಖ್ಯಾಶಾಸ್ತ್ರ" ಆಗಿ ರೂಪುಗೊಂಡಿತು!