Friday, September 19, 2025

ಯಯಾತಿಯ ಮೊಮ್ಮಕ್ಕಳು


ಐವತ್ತೈದು ವರುಷಗಳ ಹಿಂದೆ (1971) ಈಶ್ವರಿ ಪ್ರೊಡಕ್ಷನ್ಸ್  ಅವರ "ಕುಲ ಗೌರವ" ಎನ್ನುವ ಹೆಸರಿನ ಕನ್ನಡ ಚಲನಚಿತ್ರವೊಂದು ತೆರೆ ಕಂಡಿತ್ತು. ನಟ ಸಾರ್ವಭೌಮ ದಾಜಕುಮಾರ್ ಮೂರು ಪಾತ್ರಗಳಲ್ಲಿ ಅಭಿನಯಿಸಿದ್ದ ಚಲನಚಿತ್ರ. ಈಶ್ವರಿ ಪ್ರೊಡಕ್ಷನ್ಸ್ ಸಂಸ್ಥೆಯ ಮಾಲೀಕ ಎನ್. ವೀರಾಸ್ವಾಮಿ ಅವರ ಮಗ ರವಿಚಂದ್ರನ್ ಮೊದಲ ಬಾರಿಗೆ ಅದರಲ್ಲಿ ಬಾಲಕಲಾವಿದನಾಗಿ ಅಭಿನಯಿಸಿದ್ದರು. ಮೂರು ತಲೆಮಾರಿನ ಸಂಘರ್ಷವನ್ನು ತೋರಿಸುವ ಕಥೆಯ ಚಿತ್ರವದು. ತಾತ, ಅಪ್ಪ ಮತ್ತು ಮಗ ಅನ್ನುವ ಮೂರು ಪಾತ್ರಗಳು ರಾಜಕುಮಾರ್ ಪಾಲಿಗೆ. 

ತಾತ-ಅಪ್ಪ-ಮಗ ಮತ್ತು ಅಪ್ಪ-ಮಗ-ಮೊಮ್ಮಗ ಎನ್ನುವ ಮೂರು ತಲೆಮಾರುಗಳನ್ನು ಒಟ್ಟಾಗಿ ಸೂಚಿಸುವ ಪದಪ್ರಯೋಗವನ್ನು ನಾವು ಆಗಾಗ್ಗೆ ಕೇಳಬಹುದು. ಅನೇಕ ತಂದೆ-ತಾಯಿಯರಿಗೆ ಹಿಂದೆಲ್ಲ ಅನೇಕ ಮಕ್ಕಳಿರುತ್ತಿದ್ದರು. (ಈಗ ಇದ್ದರೆ ಒಂದೋ ಅಥವಾ ಎರಡೋ ಇರಬಹುದು). ಹೀಗೆ ಇರುತ್ತಿದ್ದ ಅನೇಕ ಮಕ್ಕಳಲ್ಲಿ ಕೆಲವು ಗಂಡು; ಕೆಲವು ಹೆಣ್ಣು. ಗಂಡು ಸಂತಾನಕ್ಕೆ "ಮಗ" ಎಂದೂ ಹೆಣ್ಣು ಸಂತಾನಕ್ಕೆ "ಮಗಳು" ಎಂದೂ ಹೇಳುವುದು. ಈಗಲೂ ಹಾಗೆಯೇ ನಡೆಯುತ್ತಿದೆ. ಎಲ್ಲರನ್ನೂ ಸೇರಿಸಿ ಒಟ್ಟಾಗಿ ನಿರ್ದೇಶಿಸುವಾಗ ಅದು "ಮಕ್ಕಳು" ಎಂದಾಗುತ್ತದೆ. ಇದೇ ರೀತಿ ಮಕ್ಕಳ ಮಕ್ಕಳನ್ನು "ಮೊಮ್ಮಕ್ಕಳು" ಎಂದು ಹೇಳುವುದು. ಈಗಲೂ ಇದು ಹೀಗೆಯೇ ಇದೆ. 

ಮೊಮ್ಮಕ್ಕಳು ಅವರ ತಂದೆ-ತಾಯಿಯರ ತಂದೆ-ತಾಯಿಯರನ್ನು ಏನೆಂದು ಕರೆಯಬೇಕು? ಸಾಮಾನ್ಯವಾಗಿ ನಾವು ಕೇಳುವ ಪದ "ತಾತ" ಮತ್ತು "ಅಜ್ಜಿ" ಎಂದು. ಕೆಲವೊಮ್ಮೆ "ಅಜ್ಜ" ಮತ್ತು "ಅಜ್ಜಿ" ಎಂದು ಹೇಳಬಹುದು. ನಾವು ಚಿಕ್ಕವರಿದ್ದಾಗ ತಂದೆಯ ತಂದೆಯನ್ನು "ತಾತ" ಎಂದೂ, ತಾಯಿಯ ತಂದೆಯನ್ನು "ಅಜ್ಜ" ಎಂದೂ ಕರೆಯುತ್ತಿದ್ದೆವು. ಆದರೆ ಎರಡೂ ಕಡೆಯವರು ಅಜ್ಜಿಯರು. ತೆಲುಗಿನಲ್ಲಿ ತಾಯಿಯ ತಾಯಿಯನ್ನು "ಅಮ್ಮಮ್ಮ" ಅನ್ನುತ್ತಾರೆ. ಈಗಲೂ ಪ್ರಾಯಶಃ ಕರಾವಳಿಯಲ್ಲಿ ಮತ್ತು ಮಲೆನಾಡಿನಲ್ಲಿ "ಅಜ್ಜ" ಅನ್ನುವ ಪದ ಹೆಚ್ಚು ಬಳಕೆಯಲ್ಲಿದೆ ಅನ್ನಿಸುತ್ತದೆ. ಈಗಂತೂ ತಾತ, ಅಜ್ಜ, ಅಜ್ಜಿ ಎಲ್ಲರೂ ಮರೆಯಾಗಿ "ಗ್ರಾಂಡ್ ಪಾ" ಮತ್ತು "ಗ್ರಾಂಡ್ ಮಾ" ಬಂದಿದ್ದಾರೆ. 

ಸಂಸ್ಕೃತದಲ್ಲಿ ಮಗನಿಗೆ ಮತ್ತು ಮಗಳಿಗೆ ನಿರ್ದೇಶಿಸಲು ಅನೇಕ ಪದಗಳು ಇವೆ. ಮಗನಿಗೆ "ಪುತ್ರ" ಎನ್ನುವ ಪದ ಹೆಚ್ಚು ಬಳಕೆಯಲ್ಲುಂಟು. ಹಾಗೆಯೇ ಮಗಳಿಗೆ "ಪುತ್ರೀ" ಎಂದುಂಟು. "ಸುತ" ಮತ್ತು "ಸುತಾ" ಎಂದೂ ಉಂಟು. ಹಾಗೆಯೇ ಉಪಯೋಗಿಸುವ ಅನೇಕ ಪದಗಳಲ್ಲಿ ಮಗಳಿಗೆ "ದುಹಿತಾ" ಎಂದು ಒಂದು ಪದ ಉಂಟು. ತಂದೆಯ ತಂದೆಯನ್ನು "ಪಿತಾಮಹ" ಎಂದು ಸಂಬೋಧಿಸುತ್ತಾರೆ. ಕನ್ನಡದಲ್ಲಿಯೂ ಹೀಗುಂಟು. ತಾಯಿಯ ತಂದೆಯನ್ನು "ಮಾತಾಮಹ" ಎನ್ನುತ್ತಾರೆ. ಹೀಗೆಯೇ ಮಗನ ಮಗನಾದ  ಮೊಮ್ಮಗನಿಗೆ "ಪೌತ್ರ" ಎಂದೂ, ಮಗಳ ಮಗನಾದ ಮೊಮ್ಮಗನಿಗೆ "ದೌಹಿತ್ರ" (ದುಹಿತಾಳ ಮಗ) ಎಂದೂ ಹೇಳುವುದು.  

ಈ ಪಿತಾಮಹ, ಮಾತಾಮಹ, ಪೌತ್ರ ಮತ್ತು ದೌಹಿತ್ರ ಎನ್ನುವ ಪದಗಳಿಂದ ಸಂಬಂಧಗಳು ಖಚಿತವಾಗಿ ತಿಳಿಯುತ್ತವೆ. ಈ ಸಂಚಿಕೆಯ ಹೆಸರು "ಯಯಾತಿಯ ಮೊಮ್ಮಕ್ಕಳು" ಎಂದು. ಮುಂದೆ "ದೌಹಿತ್ರ" ಎನ್ನುವ ಪದ ಬರುತ್ತದೆ. ಆದ್ದರಿಂದ ಇಷ್ಟು ಪೀಠಿಕೆ. 

*****

ಪರೀಕ್ಷಿತ್ ಮಾಹಾರಾಜನಿಗೆ ಏಳು ದಿನದೊಳಗೆ ಸಾವು ಸಂಭವಿಸುವುದು ಎಂದು ತಿಳಿದಿದೆ. ಸಾಧನೆಯ ಒಂದು ರೀತಿಯಾಗಿ ಶುಕಾಚಾರ್ಯರಿಂದ "ಶ್ರೀಮದ್ಭಾಗವತ" ಕೇಳುತ್ತಿದ್ದಾನೆ. ಎಂಟು ಸ್ಕಂದಗಳು ಮುಗಿದಿವೆ. ಪರೀಕ್ಷಿತನಿಗೆ ತಾನು ತಾಯಿಯ ಗರ್ಭದಲ್ಲಿದ್ದಾಗ ಅಶ್ವತ್ಥಾಮಾಚಾರ್ಯರ  ಬ್ರಹ್ಮಾಸ್ತ್ರದಿಂದ ತನ್ನನ್ನು ಕಾಪಾಡಿದ ಶ್ರೀಕೃಷ್ಣನ ಕಥೆ ಕೇಳಬೇಕೆಂದು ಆಸೆ. ತಾನೂ ಚಂದ್ರವಂಶದವನು. ಶ್ರೀಕೃಷ್ಣನೂ ಚಂದ್ರವಂಶದವನು. ಚಂದ್ರವಂಶದವರ ಕಥೆಯನ್ನು ವಿವರವಾಗಿ ಹೇಳಬೇಕೆಂದು ಶುಕಾಚಾರ್ಯರನ್ನು ಕೇಳುತ್ತಾನೆ. ಶುಕರು ಒಂಭತ್ತನೆಯ ಸ್ಕಂದದಲ್ಲಿ ಚಂದ್ರವಂಶದವರ ವೃತ್ತಾಂತವನ್ನೂ, ನಂತರ ಹತ್ತನೆಯ ಸ್ಕಂದದಲ್ಲಿ ವಿಸ್ತಾರವಾಗಿ ಶ್ರೀಕೃಷ್ಣನ ಕಥೆಯನ್ನೂ ಹೇಳುತ್ತಾರೆ. 

ಹೀಗೆ ಹೇಳುವಾಗ ಯಯಾತಿಯ ಮತ್ತು ಅವನ ಮಕ್ಕಳ, ಮೊಮ್ಮಕ್ಕಳ ಪ್ರಸಂಗಗಳು ಬರುತ್ತವೆ. ಮಹಾಭಾರತದಲ್ಲೂ ಯಯಾತಿಯ, ಅವನ ಸಂತತಿಯ ವಿವರಗಳು ಸಿಕ್ಕುತ್ತವೆ. 

ಚತುರ್ಮುಖ ಬ್ರಹ್ಮನ ಅನೇಕ ಮಕ್ಕಳಲ್ಲಿ ಅತ್ರಿ ಋಷಿಗಳೂ ಒಬ್ಬರು. ಅನಸೂಯ-ಅತ್ರಿಯರ ಮಗ ಚಂದ್ರ. ಚಂದ್ರನ ಮಗ ಬುಧ. ಬುಧ ಮತ್ತು ಇಳಾ ದಂಪತಿಗಳ ಮಗ ಪುರೂರವ. ಪುರೂರವ ಮತ್ತು ಆಯುಷ್ ದಂಪತಿಗಳ ಮಗ ನಹುಷ ಚಕ್ರವರ್ತಿ. ನಹುಷ ಚಕ್ರವತಿಯು ಕೆಲವು ಕಾಲ ದೇವೇಂದ್ರನ ಪದವಿಯನ್ನೂ ಹೊಂದಿದ್ದವನು. 

ನಹುಷನಿಗೆ ಪಿತೃ ದೇವತೆಗಳ ಮಗಳಾದ ವಿರಜಾ ಎನ್ನುವವಳು ಹೆಂಡತಿ. ಇವರ ಮಗನೇ ಯಯಾತಿ. ಯಯಾತಿಗೆ ಶುಕ್ರಾಚಾರ್ಯರ ಮಗಳಾದ ದೇವಯಾನಿ ಮತ್ತು ವೃಷಪರ್ವ ರಾಜನ ಮಗಳಾದ ಶರ್ಮಿಷ್ಠೆ ಪತ್ನಿಯರು. "ರಾಜಾನೋ ಬಹುವಲ್ಲಭಾ:" ಎನ್ನುವಂತೆ ಬೇರೆ ಹೆಂಡತಿಯರೂ ಇದ್ದರು. 

ಯಯಾತಿಗೆ ದೇವಯಾನಿಯಿಂದ ಯದು ಮತ್ತು ತುರ್ವಸು ಎಂದು ಮಕ್ಕಳು. ಈ ಯದು ಮಹಾರಾಜನ ಸಂತತಿಯವರೇ ಮುಂದೆ "ಯಾದವರು" ಎಂದಾದರು. 

ಯಯಾತಿಗೆ ಶರ್ಮಿಷ್ಠೆಯಿಂದ ದೃಹ್ಯು, ಅನುದೃಹ್ಯು ಮತ್ತು ಪುರು ಎಂದು ಮೂವರು ಮಕ್ಕಳು. ಈ ಪುರು ಮಹಾರಾಜನ ಸಂತತಿಯಲ್ಲಿ ಬಂದ ಕುರು ಮಹಾರಾಜನ ಹೆಸರಿನಿಂದ, ಮುಂದೆ ಕೌರವರು ಮತ್ತು ಪಾಂಡವರು ಎಂದಾಯಿತು. 

ಹೀಗೆ ಯಾದವರು, ಕೌರವರು ಮತ್ತು ಪಾಂಡವರು, ಈ ಮೂರೂ ಸಂತತಿಗಳಿಗೆ ಯಯಾತಿಯು ಮೂಲಪುರುಷ. 
*****

ತನ್ನ ಪಿತಾಮಹನಾದ ಪುರೂರವ ಮತ್ತು ತಂದೆಯಾದ ನಹುಷ ಚಕ್ರವರ್ತಿಗಳಂತೆ ಯಯಾತಿ ಸಹ ಬಹಳ ಪ್ರತಾಪಿಯೂ ಮತ್ತು ಧರ್ಮಿಷ್ಟನೂ ಆಗಿದ್ದನು. ಬಹು ಸಂಖ್ಯಾತ ಯಜ್ಞ-ಯಾಗಾದಿಗಳನ್ನು ಮಾಡಿ, ನ್ಯಾಯವಾಗಿ ರಾಜ್ಯಪಾಲನೆ ಮಾಡಿ ಬಹಳ ಪುಣ್ಯವನ್ನು ಸಂಪಾದಿಸಿದ್ದನು. ಕಾಲಕ್ರಮದಲ್ಲಿ ಅವನಿಗೆ ತನ್ನ ಯೋಗ್ಯತೆಗೆ ಅನುಗುಣವಾಗಿ ಸ್ವರ್ಗ ಪ್ರಾಪ್ತಿಯಾಯಿತು. ಅವನಿಗೆ ಸ್ವರ್ಗದಲ್ಲಿ ವಿಶೇಷ ಗೌರವಗಳಿದ್ದವು. ಅನೇಕ ದೇವತೆಗಳು "ಇಂತಹ ಪುಣ್ಯವಂತನ ದರ್ಶನ ಸಿಗುವುದೇ ದುರ್ಲಭ" ಎಂದು ಪ್ರತಿದಿನ ಅವನನ್ನು ನೋಡಿಹೋಗುತ್ತಿದ್ದರಂತೆ!

ಆಗಾಗ ದೇವೇಂದ್ರನು "ಯಯಾತಿ, ನಿನ್ನಂತೆ ಅನೇಕ ಯಜ್ಞ-ಯಾಗಗಳನ್ನು ಮಾಡಿರುವವರು ಭೂಲೋಕದಲ್ಲಿ ಬೇರೆ ಯಾರಾದರೂ ಇದ್ದಾರೆಯೇ?" ಎಂದು ಕೇಳುವನು. ಯಯಾತಿಯು "ಅಯ್ಯೋ, ನನ್ನದೇನು ದೊಡ್ಡದು. ನನಗಿಂತ ಎಷ್ಟೋ ದೊಡ್ಡ ಮಹಾತ್ಮರು ಇರುವರು" ಎನ್ನುವನು. ಹೀಗೆಯೇ ಅನೇಕ ಬಾರಿ ನಡೆಯಿತು. 

ಒಮ್ಮೆ ಯಯಾತಿಗೆ ದೇವೇಂದ್ರನು ಹೀಗೆ ಮತ್ತೆ ಮತ್ತೆ ಕೇಳುವುದರಿಂದ ಅಹಂಕಾರ ಉಂಟಾಯಿತು. ದೇವೇಂದ್ರನು ಮತ್ತೆ ಕೇಳಿದಾಗ "ನನ್ನಷ್ಟು ಮಾಡಿರುವವರು ಯಾರಿದ್ದಾರು? ನಾನೇ ಹೆಚ್ಚು" ಎಂದುಬಿಟ್ಟನು. ದೇವೇಂದ್ರನು ಅವನನ್ನು ಸ್ವರ್ಗದಿಂದ ಕೆಳಗೆ ತಳ್ಳಿಸಿಬಿಟ್ಟನು. 

ಹೀಗೆ ಕೆಳಗೆ ಬೀಳುವಾಗ ಯಯಾತಿಯು ಚತುರ್ಮುಖ ಬ್ರಹ್ಮರನ್ನು ಪ್ರಾರ್ಥಿಸಿದನು. ಅವರ ದರ್ಶನವಾಯಿತು. "ನನಗೆ ಏಕೆ ಈ ಗತಿ ಬಂತು?" ಎಂದು ಕೇಳಿದನು. ಬ್ರಹ್ಮರು "ಸ್ವರ್ಗದಲ್ಲಿ ಅಹಂಕಾರಿಗಳಿಗೆ ಜಾಗ ಇಲ್ಲ. ಆದ್ದರಿಂದ ಹೀಗಾಯಿತು" ಎಂದರು. "ಹೋಗಲಿ. ಈಗ ಬೀಳುತ್ತಿರುವುದಂತೂ ನಿಜ. ನನ್ನನ್ನು ಯಾರಾದರೂ ಯೋಗ್ಯರ ಮಧ್ಯದಲ್ಲಿ ಬೀಳುವಂತೆ ಮಾಡಿ" ಎಂದು ಕೇಳಿಕೊಂಡನು. ಅವರು "ಆಗಲಿ" ಎಂದರು. 

*****

ನೈಮಿಷಾರಣ್ಯದಲ್ಲಿ (ಈಗಿನ ಉತ್ತರಪ್ರದೇಶದಲ್ಲಿ ಇದೆ) ನಾಲ್ವರು ಮಹಾ ತೇಜಸ್ವಿಗಳಾದ ಅಣ್ಣ-ತಮ್ಮಂದಿರು ಒಂದು ಯಜ್ಞವನ್ನು ನಡೆಸುತ್ತಿದ್ದರು. ಸ್ವರ್ಗದಿಂದ ಕೆಳಗೆ ಬೀಳುತ್ತಿದ್ದ ಯಯಾತಿಯು ಚತುರ್ಮುಖ ಬ್ರಹ್ಮರ ಕರುಣೆಯಿಂದ ಆ ನಾಲ್ವರ ಮಧ್ಯದಲ್ಲಿ ಬಿದ್ದನು. ಅಣ್ಣ-ತಮ್ಮಂದಿರು ಅವನನ್ನು ಉಪಚರಿಸಿ, ಮಾತನಾಡಿಸಿದರು. 

"ಮಹಾತ್ಮರೇ, ನೀವು ಯಾರು?" 
"ನಾನು ಯಯಾತಿ. ಚಂದ್ರವಂಶದ ಚಕ್ರವರ್ತಿಯಾಗಿದ್ದವನು"
"ಹೀಗೆ ಬೀಳಲು ಕಾರಣವೇನು?"
"ನಾನು ಸ್ವರ್ಗದಲ್ಲಿದ್ದೆ. ಕಾರಣಾಂತರದಿಂದ ಪುಣ್ಯಕ್ಷಯವಾಯಿತು"
"ನಮ್ಮ ಪುಣ್ಯಗಳನ್ನು ನಿಮಗೆ ಧಾರೆ ಎರೆಯುತ್ತೇವೆ. ತಾವು ಮತ್ತೆ ಅಲ್ಲಿಗೆ ಹೋಗಿರಿ"
"ನಾನು ಕ್ಷತ್ರಿಯ. ದಾನ ಕೊಡಬಹುದೇ ಹೊರತು ದಾನ ತೆಗೆದುಕೊಳ್ಳುವಂತಿಲ್ಲ"
"ನಮ್ಮಿಂದ ತೆಗೆದುಕೊಳ್ಳಬಹುದು"
"ಅದು ಹೇಗೆ?"
"ನಾವು ಬೇರೆಯವರಲ್ಲ. ನಿಮ್ಮ ದೌಹಿತ್ರರು. ಆದ್ದರಿಂದ ಇದು ಆಗಬಹುದು"
"ದೌಹಿತ್ರರೇ? ನೀವು ಯಾರು?"
"ನಾವು ನಾಲ್ವರೂ ನಿನ್ನ ಮಗಳು ಮಾಧವಿ ಪಡೆದ ಮಕ್ಕಳು. ನೀನು ನಮ್ಮ ಮಾತಾಮಹ! ನೀನು ನಮ್ಮ ನಡುವೆ ಬಂದದ್ದು ನಮ್ಮ ಭಾಗ್ಯ"
*****

ಮಾಧವಿಯ ನಾಲ್ಕು ಮಕ್ಕಳೂ ಪ್ರಚಂಡರು. ವಿಶೇಷ ಸಾಧನೆಗಳನ್ನು ಮಾಡಿ ಬಹಳ ಪುಣ್ಯ ಸಂಪಾದನೆ ಮಾಡಿದವರು. 

ಸಂಚಿಕೆ ದೀರ್ಘವಾಯಿತು. ಮಾಧವಿಯ ಮಕ್ಕಳ ಸಂಗತಿಯನ್ನು ಮುಂದಿನ ಸಂಚಿಕೆಯಲ್ಲಿ ನೋಡೋಣ. 

Wednesday, September 17, 2025

ಒಂದು ದೇಹದಲ್ಲಿ ಅನೇಕ ದೇಹಗಳು!

ಶ್ರೀಮದ್ ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ವಿವರಿಸಿರುವ ಬಹಳ ವಿಷಯಗಳು ಅನೇಕ ಸಾಂದರ್ಭಿಕ  ಕಾರಣಗಳಿಂದ ಮತ್ತೆ ಮತ್ತೆ ನಮ್ಮ ಗಮನಕ್ಕೆ ಬರುತ್ತಿರುತ್ತವೆ. ಹುಟ್ಟು ಮತ್ತು ಸಾವು, ಅವುಗಳ ತಪ್ಪಿಸಲಾಗದ ಚಕ್ರ, ಅವುಗಳ ವಿಷಯದಲ್ಲಿ ಅತಿಯಾಗಿ ದುಃಖಿಸಬಾರದೆಂಬುದು, ಇವುಗಳ ಚರ್ಚೆ ಬೇರೆ ಬೇರೆ ಸಂವಾದಗಳಲ್ಲಿ ಆಗಾಗ ನಡೆಯುತ್ತಿರುತ್ತದೆ. ಇದೇ ಭಗವದ್ಗೀತೆಯಲ್ಲಿ ಇದಕ್ಕೆ ಸಂಬಂಧಿಸಿದಂತೆ ಹೇಳಿರುವ ಇನ್ನೊಂದು ವಿಷಯವು ಹೆಚ್ಚಾಗಿ ಚರ್ಚಿತವಾಗುವುದಿಲ್ಲ.

ಕಳೆದ ತಿಂಗಳು ಹಿಂದಿನ ಒಂದು ಸಂಚಿಕೆಯಲ್ಲಿ, "ಸಾವು ಎದುರಲ್ಲಿ ಬಂದು ನಿಂತಾಗ" ಎನ್ನುವ ಶೀರ್ಷಿಕೆಯಡಿಯಲ್ಲಿ, ಈ ಸಂಬಂಧದ ಕೆಲವು ಪದರಗಳನ್ನು ಚರ್ಚಿಸಿದ್ದೆವು. (ಇಲ್ಲಿ ಕ್ಲಿಕ್ ಮಾಡಿ ಈ ಸಂಚಿಕೆಯನ್ನು ಓದಬಹುದು).  

ಸಾವಿನ ಕಾಲದಲ್ಲಿ ಜೀವನು ಈಗ ಪಡೆದಿರುವ ದೇಹವು ಕೊನೆಗೊಂಡು ಮತ್ತೆ ಮುಂದೆ ಬೇರೊಂದು ದೇಹ ಪಡೆಯುವ ಜನನ-ಮರಣ ಚಕ್ರದ ಜೊತೆಯಲ್ಲಿಯೇ, ಈಗಿನ ಒಂದು ಜೀವಿತಕಾಲದಲ್ಲಿಯೇ ಜೀವಿಯು ಪಡೆದ ದೇಹವೊಂದರಲ್ಲಿ ಅನೇಕ ದೇಹಗಳು ಅಡಗಿರುವ ಗುಟ್ಟನ್ನು ಶ್ರೀಕೃಷ್ಣನು ಹೇಳಿದ್ದಾನೆ. ಇದೇನೂ ಅಂತಹ ಗುಟ್ಟಿನ ವಿಷಯವಲ್ಲ. ಅದು ಎಲ್ಲರಿಗೂ ಚೆನ್ನಾಗಿ ತಿಳಿದಿದ್ದರೂ, ಅದರ ಸುಪ್ತವಾಗಿ ಉಳಿಯುವ ಗುಣದಿಂದ,  ಹೆಚ್ಚಾಗಿ ಗಮನಕ್ಕೆ ಬರುವುದಿಲ್ಲ. 

*****

ಯಾವುದೇ ಪ್ರಾಣಿಯಿರಲಿ, ಅದರಲ್ಲಿ ವಿಶೇಷವಾಗಿ ಮನುಷ್ಯ, ಹುಟ್ಟುವಾಗ ಇದ್ದ ದೇಹಕ್ಕೂ ಜೀವನದ ಕೊನೆಯ ಕಾಲದಲ್ಲಿ ಇರುವ ದೇಹಕ್ಕೂ ಅಜ-ಗಜಾಂತರ (ಆಡು-ಆನೆ) ವ್ಯತ್ಯಾಸ. ತಾಯಿಯ ಗರ್ಭದಿಂದ ಮಗು ಅಥವಾ ಪ್ರಾಣಿಯ ಮರಿ ಹೊರಬಂದಾಗ, ಅಥವಾ ಮೊಟ್ಟೆಯೊಡೆದು ಮರಿ ಹೊರಗೆ ಬಂದಾಗ ಅದರ ಗಾತ್ರ ಬಹಳ ಸಣ್ಣದಿರುತ್ತದೆ. ನಂತರ ಕಾಲಕ್ರಮದಲ್ಲಿ ಅದರ ಗಾತ್ರ ದೊಡ್ಡದಾಗುತ್ತ ಹೋಗುತ್ತದೆ. ಇನ್ನೂ ಮುಂದೆ ಅದು ಮೊದಲಿನಂತೆ ಪೂರ್ತಿ ಚಿಕ್ಕದಾಗದೇ ಇದ್ದರೂ ಸಾಮಾನ್ಯವಾಗಿ ಕುಗ್ಗಿ ಅಥವಾ ಕೃಶವಾಗಿ ಹೋಗುತ್ತದೆ. ಇದು ಎಲ್ಲರಿಗೂ ದಿನಂಪ್ರತಿ ಕಣ್ಣಿಗೆ ಕಾಣುವ ವಾಸ್ತವ ಸಂಗತಿ. 

ಏಕೆ ಹೀಗೆ? ಇದು ಪ್ರಸವ ಅಥವಾ ಮೊಟ್ಟೆಯೊಡೆದು ಮರಿ ಸುಖವಾಗಿ ಹೊರಬರಲು ಪ್ರಕೃತಿ ಮಾಡಿರುವ ಒಂದು ಉಪಾಯ. ಇದರಿಂದ ಮರಿ ಮತ್ತು ತಾಯಿ ಇಬ್ಬರಿಗೂ ಕ್ಷೇಮ. ಒಂದು ಆನೆಯ ಮರಿ ಆನೆಯ ಗಾತ್ರದ್ದೇ ಆಗಿ ಹುಟ್ಟುವ ಪರಿಯನ್ನು ನೆನೆಸಿಕೊಂಡರೆ ಮೊದಲು ನಗು ಬರುತ್ತದೆ. ಇದೇನು, ಇಂತಹ ಹಾಸ್ಯಾಸ್ಪದ ವಿಷಯ ಎನಿಸುತ್ತದೆ. ಕೆಲವೊಮ್ಮೆ ನಾಕೂವರೆ ಅಡಿ ಎತ್ತರವಿರುವ ತಾಯಿ ಮತ್ತು ಆರೂವರೆ ಅಡಿ ಎತ್ತರ ಇರುವ ಮಗನನ್ನು ಜೊತೆಯಾಗಿ ನೋಡಿದಾಗ ಇದರ ವಾಸ್ತವತೆ ಅರಿವಾಗುತ್ತದೆ. 

ಶಿಶುಪಾಲನೆ ಅನೇಕ ಪ್ರಾಣಿಗಳಲ್ಲಿ ಮತ್ತು ಮನುಷ್ಯರಲ್ಲಿ ಒಂದು ದೊಡ್ಡ ಕೆಲಸವೇ. ಕೆಲವು ಪ್ರಾಣಿಗಳಲ್ಲಿ ಜನನವಾದ ನಂತರ ತಾಯಿ ಮತ್ತು ಮಗುವಿಗೆ ಯಾವುದೇ ಸಂಬಂಧವಿರುವುದಿಲ್ಲ. ಇನ್ನು ಕೆಲವು ಪ್ರಾಣಿಗಳಲ್ಲಿ ಸ್ವಲ್ಪ ಕಾಲ ಮರಿ ತಾಯಿಗೆ ಅಂಟಿಕೊಂಡಂತೆ ಇರುತ್ತದೆ. ಮನುಷ್ಯರಲ್ಲಿ ಪ್ರಾಯಶಃ ಇದರ ಅವಧಿ ಅತ್ಯಂತ ಹೆಚ್ಚು. ಮಗು ಎಷ್ಟು ದೊಡ್ಡದಾದರೂ ತಾಯಿ-ಮಗ ಅಥವಾ ತಾಯಿ-ಮಗಳ ಸಂಬಂಧ ಕೊಂಚವೂ ಮಾಸುವುದಿಲ್ಲ. 

ಸುಮಾರು ಇಪ್ಪತ್ತು ವರುಷಗಳ ಹಿಂದಿನ ಮಾತು. ನಮ್ಮ ಹಿರಿಯ ಸ್ನೇಹಿತರೊಬ್ಬರಿಗೆ ಎಂಭತ್ತರ ವಯಸ್ಸು. ಅವರ ನಿವೃತ್ತಿಯ ನಂತರ ಪರಸ್ಪರ ಈಮೈಲ್ ಮುಖಾಂತರ ಸಂಪರ್ಕ ಇದ್ದರೂ ಮುಖಾಮುಖಿ ಆಗಿರಲಿಲ್ಲ. ಅಪರೂಪಕ್ಕೆ ಅಮೆರಿಕೆಯ ಸಿಯಾಟಲ್ ನಗರದಲ್ಲಿ ಸಿಕ್ಕರು. ಅದು ಒಂದು ಅವಸರದ ಭೇಟಿ ಆಗಿತ್ತು. ಸಿಕ್ಕಾಗ ಬಹಳ ಉಲ್ಲಸಿತರಾಗಿದ್ದರು. "ಏನು, ಇಷ್ಟು ಸಂತೋಷದಲ್ಲಿದ್ದೀರಿ?" ಎಂದೆ. "ಹೌದಪ್ಪ, ಬಹಳ ಆನಂದದ ದಿನ. ನಾಳೆ ಬೆಂಗಳೂರು ಮಾರ್ಗವಾಗಿ ನನ್ನ ದಕ್ಷಿಣ ಕನ್ನಡದ ಹಳ್ಳಿಗೆ ಹೋಗುತ್ತಿದ್ದೇನೆ. ಅಲ್ಲಿ ನನ್ನ ತಾಯಿಯಿದ್ದಾಳೆ. ಅವಳನ್ನು ನೋಡಿ ಹತ್ತು ವರುಷವಾಗಿದೆ. ಕೆಲವು ತಿಂಗಳಲ್ಲಿ ಅವಳಿಗೆ ಶತಮಾನೋತ್ಸವ. ಕುಟುಂಬದ ಎಲ್ಲರೂ ಅಲ್ಲಿ ಸೇರುತ್ತಾರೆ. ಅವಳನ್ನು ನೋಡುವುದೇ ಒಂದು ಪುಳಕ. ಅದರಿಂದ ಈ ಸಂತೋಷ" ಅಂದರು. ಇವರಿಗೆ ಸ್ವಲ್ಪದರಲ್ಲಿ ಸಹಸ್ರ ಪೂರ್ಣ ಚಂದ್ರ ದರ್ಶನ! ಆಕೆಗೆ ಅದರ ಜೊತೆಯಲ್ಲಿ ಶತಮಾನೋತ್ಸವ! ತಾಯಿ-ಮಕ್ಕಳ ಸಂಬಂಧ ಅಂತಹುದು. 

*****

ಮಗು ಪುಟ್ಟದಿರುವಾಗ ಬಲು ಚೆಂದ. ಸ್ವಲ್ಪ ದೊಡ್ಡದಾಗಿ ಓಡಾಡಲು ಪ್ರಾರಂಭಿಸಿದರೆ ಎಲ್ಲರಿಗೂ ಸಂತಸ. ಹುಟ್ಟಿದ ದೇಹ ಈಗ ಹೋಗಿದೆ. ಬೇರೆ ದೇಹ ಬಂದಿದೆ. ಒಂದು ಕಡೆ ಬಿದ್ದುಕೊಂಡಿರುವ ಕೂಸೆಲ್ಲಿ? ಈಗ ಹಿಡಿಯಲು ಕಷ್ಟಪಡುವ ಈ ಮಗುವೆಲ್ಲಿ? ಆದರೆ ನಮ್ಮ ಮಗುವಿನ ಹಳೆಯ ದೇಹ ಹೋಯಿತಲ್ಲಾ ಎಂದು ಯಾರೂ ಗೋಳಾಡುವುದಿಲ್ಲ. ಒಮ್ಮೆಮ್ಮೆ "ಮಗು ಬೆಳೆಯಿತು. ಮೊದಲಿನಂತೆ ಕೈಗೆ ಸಿಗುವುದಿಲ್ಲ" ಎಂದು ಸ್ವಲ್ಪ ಬೇಜಾರಾಗಬಹುದು. ಆದರೆ ಅದರಿಂದ ದುಃಖವಿಲ್ಲ. ಮುಂದೆ ಯುವಕನಾದಾಗ ಅಥವಾ ಯುವತಿಯಾದಾಗ ಬಾಲಕ ಅಥವಾ ಬಾಲಕಿಯ ದೇಹ ಹೋಗಿದೆ. ಬೇರೆ ದೇಹ ಬಂದಿದೆ. ಹಳೆಯ ದೇಹ ಹೋಯಿತು ಎಂದು ದುಃಖವಿಲ್ಲ. ಹೊಸತು ಬಂದಿತು ಎಂದು ಉತ್ಸಾಹ. ವಿವಾಹ ಮಾಡುವ ಚಿಂತೆ. ನಂತರ ಮುಪ್ಪಿನಲ್ಲಂತೂ ಸರಿಯೇ ಸರಿ. ಬೇರೆ ದೇಹವಾಗಿರುವುದು ಕಣ್ಣು ಮುಚ್ಚಿಕೊಂಡವರಿಗೂ ಕಾಣುವುದು. 

ಹೀಗೆ ಪ್ರತಿ ಹಂತದಲ್ಲೂ ಹೊಸ ದೇಹವೇ ಬಂದಿರುತ್ತದೆ. ಹಿಂದೆ ಕನ್ನಡದಲ್ಲಿ "ಕೊರವಂಜಿ' ಎಂದೊಂದು ಹಾಸ್ಯಪತ್ರಿಕೆ ಬರುತ್ತಿತ್ತು. ಅದರಲ್ಲಿ ಒಂದು ನಗೆಹನಿ. ತಾಯಿಯು ನಾಲ್ಕೈದು ವರುಷದ ಮಗನ ಜೊತೆ ತನ್ನ ಹದಿನೈದು ವಷಗಳ ಹಿಂದಿನ ಮದುವೆಯ ಫೋಟೋ ಆಲ್ಬಮ್ ನೋಡುತ್ತಿದ್ದಾಳೆ. ಆರತಕ್ಷತೆಯ ಸುಂದರ ಫೋಟೋ. ಮಗುವಿಗೆ ತಾಯಿಯ ಗುರುತು ಥಟ್ಟೆ೦ದು ಸಿಕ್ಕಿತು. ಅವಳ ಪಕ್ಕದಲ್ಲಿದ್ದ ಗುಂಗುರು ಕೂದಲಿನ ಸುಂದರ ವ್ಯಕ್ತಿಯ ಗುರುತು ಸಿಗಲಿಲ್ಲ. "ಅಮ್ಮ, ಇವನು ಯಾರು?" ಅಂದಿತು ಮಗು. "ಅಯ್ಯೋ ಮರೀ, ಗೊತ್ತಾಗಲಿಲ್ಲವೇ? ಇದು ನಿಮ್ಮಪ್ಪ ಕಾಣೋ" ಅಂದಳು. ತಕ್ಷಣ ಮಗು, "ಹಾಗಿದ್ದರೆ ನಮ್ಮ ಜೊತೆಯಲ್ಲಿದ್ದಾನಲ್ಲ ಬೋಡಮುಂಡ, ಅವನು ಯಾರು?" ಅಂದಿತು. (ಭಾಷೆಗೆ ಕ್ಷಮೆ ಇರಲಿ. ಕೊರವಂಜಿಯಲ್ಲಿ ಇದ್ದಂತೆ ಹೇಳದಿದ್ದರೆ ಅದರ ನಿಜವಾದ ಮೋಜು ಸಿಗದು).   

ಹೀಗೆ ಬೆಳೆಯುವ ಕಾಲದಲ್ಲಿ ಆಗಾಗ ಹಳೆಯ ದೇಹ ಹೋಗಿ ಹೊಸದು ಬರುತ್ತಿದ್ದರೂ ಅದು ಅಷ್ಟಾಗಿ ನಮಗೆ ಭಾಸವಾಗುವುದಿಲ್ಲ. ಮುಂದೆ ಕಾಲಕ್ರಮದಲ್ಲಿ ಯೌವನ ಮತ್ತು ಮಧ್ಯ ಕಾಲಗಳು ಕಳೆದು ವೃದ್ಧಾಪ್ಯ ಬಂದಾಗ ಅದು ಮಾತ್ರ ಚೆನ್ನಾಗಿ ಕಂಡುಬರುತ್ತದೆ. "ಏನಿದು? ಇಷ್ಟು ಮುದುಕನೇ? ಹಲ್ಲೆಲ್ಲಾ ಬಿದ್ದು ಹೋಗಿವೆ. ಕೂದಲು ನರೆತು ಹೋಗಿದೆ" ಎನ್ನಬಹುದು. "ಎಲಬು ಸೊಟ್ಟಗಾಗಿದೆ. ಬೊಕ್ಕತಲೆ ಆಗಿದೆ" ಎಂದು ಆಶ್ಚರ್ಯಪಡಬಹುದು. ನೆಟ್ಟಗೆ ನಡೆಯುತ್ತಿದ್ದವರಿಗೆ ಈಗ ಕೋಲು ಹಿಡಿಯುವಂತಾಗಿದೆ. ಜೀವನದಲ್ಲಿ ಮುಖ್ಯ ಕಾರ್ಯಕ್ರಮವೆಂದರೆ ಮುಂದಿನ ವೈದ್ಯರ ಸಂದರ್ಶನದ ಸಮಯ ನಿಗದಿಮಾಡುವುದು. ಬೇಜಾರಾದಾಗಲೆಲ್ಲಾ ಒಂದು ಗುಳಿಗೆ ನುಂಗುವುದು. ಜೊತೆಗಾರರ ಸಕ್ಕರೆಯ ಅಂಶ ಎಷ್ಟಿದೆ ಎಂದು ಕೇಳಿ, ಅದು ನಮಗಿಂತ ಕಡಿಮೆ ಇದ್ದಾಗ ಸಮಾಧಾನ ಪಟ್ಟುಕೊಳ್ಳುವುದು.  ಹೀಗೆ. 

ಈ ಎಲ್ಲ ಕಾರಣಗಳ ಹಿನ್ನೆಲೆಯಲ್ಲಿ 'ಒಂದು ದೇಹದಲ್ಲಿ ಅನೇಕ ದೇಹಗಳು" ಎನ್ನುವುದು. 

*****

ಹಾಗಿದ್ದರೆ ಭಗವದ್ಗೀತೆಯಡ್ನಲ್ಲಿ ಶ್ರೀಕೃಷ್ಣನು ಇದರ ಬಗ್ಗೆ ಹೇಳಿರುವುದು ಏನು? ಎರಡನೆಯ ಅಧ್ಯಾಯದ ಹದಿಮೂರನೆಯ ಶ್ಲೋಕ ಹೀಗಿದೆ:

देहिनोऽस्मिन्यथा देहे कौमारं यौवनं जरा |
तथा देहान्तरप्राप्तिर्धीरस्तत्र न मुह्यति ||  

ದೇಹಿನೋಸ್ಮಿನ್ ಯಥಾ ದೇಹೇ ಕೌಮಾರಂ ಯೌವನಂ ಜರಾ
ತಥಾ ದೇಹಾಂತರಪ್ರಾಪ್ತಿ: ಧೀರಸ್ತತ್ರ ನ ಮುಹ್ಯತಿ 


ಹೇಗೆ ಆತ್ಮನು ತನ್ನ ದೇಹದಲ್ಲಿಯೇ ಬಾಲ್ಯ, ಯೌವನ ಮತ್ತು ಮುಪ್ಪಿನಲ್ಲಿ ದೇಹ ಬಲಾವಣೆಗಳನ್ನು ಕಾಣುತ್ತಾನೋ, ಹಾಗೆ  ಸಾವಿನ ನಂತರ ಮತ್ತೊಂದು ದೇಹವನ್ನು ಪಡೆಯುತ್ತಾನೆ. ಆದ್ದರಿಂದ ತಿಳಿದವರು ಇದರ ಬಗ್ಗೆ ಚಿಂತಿಸುವುದಿಲ್ಲ. 


"ಬದುಕಿರುವಾಗ ಹಂತ ಹಂತಗಳಲ್ಲಿ ಹೇಗೆ ಇದೇ ದೇಹದಲ್ಲಿ ಬದಲಾವಣೆಗಳಾಗುವುದೋ, ಹಾಗೆಯೇ ಸಾವಿನ ನಂತರ ಬರುವ ಬೇರೆ ದೇಹವೂ ಒಂದು ಬಲಾವಣೆಯೇ ಆಗಿರುತ್ತದೆ. ಆದ್ದರಿಂದ ಜ್ಞಾನಿಗಳು ಸಾವಿನ ವಿಷಯದಲ್ಲಿ ಯಾವ ದುಃಖವನ್ನೂ ಹೊಂದುವುದಿಲ್ಲ" ಎನ್ನುವುದು ಇದರ ಭಾವ. 

*****

"ಹೆರಾಕ್ಲಿಟಸ್" ಎನ್ನುವ ಗ್ರೀಕ್ ತತ್ವಜ್ಞಾನಿಯೊಬ್ಬ ಸುಮಾರು ಎರಡು ಸಾವಿರದ ಐದು ನೂರು ವರುಷಗಳ ಹಿಂದೆ "No man ever steps into a river twice" ಎಂದು ಹೇಳಿರುವುದೂ ಹೀಗೆ ಸಮಯದಿಂದ ಆಗುವ ಬದಲಾವಣೆಗಳ ಬಗ್ಗೆಯೇ. ಆಸಕ್ತರು ಇಂಗ್ಲೀಷಿನಲ್ಲಿರುವ ಬ್ಲಾಗ್ ಪೋಸ್ಟನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು. 

Sunday, September 14, 2025

ಸರಸ್ವತಿ ದೇವಿಯ ರಂಗಮಂದಿರ


ಒಂದು ತಿಂಗಳ ಹಿಂದೆ, ಶ್ರೀ ರಾಘವೇಂದ್ರ ಸ್ವಾಮಿಗಳ 354ನೆಯ ವರುಷದ ಆರಾಧನೆಯ ಸಂದರ್ಭದಲ್ಲಿ, "ದೊಡ್ಡವರ ಶಾಪಗಳೆಂಬ ವರಗಳು" ಎನ್ನುವ ಶೀರ್ಷಿಕೆಯ ಸಂಚಿಕೆಯಲ್ಲಿ, ಶಂಕುಕರ್ಣ ಎಂಬ ಕರ್ಮಜದೇವತೆಗೆ ಚತುರ್ಮುಖ ಬ್ರಹ್ಮದೇವರು ಕೊಟ್ಟ ಶಾಪವು ಅನೇಕರಿಗೆ ಹೇಗೆ ವರವಾಗಿ ಪರಿಣಮಿಸಿತು ಎನ್ನುವುದನ್ನು ಸಂಕ್ಷೇಪವಾಗಿ ನೋಡಿದೆವು. (ಈ ಸಂಚಿಕೆಯನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು). ಇಂತಹ ವಿಷಯಗಳಲ್ಲಿ ಕೆಲವೊಂದು ಕಣ್ಣಿಗೆ ಕಾಣುವ, ಪಂಚೇಂದ್ರಿಯಗಳಿಂದ ತಿಳಿಯುವ ಸತ್ಯಗಳು. ಇನ್ನು ಅನೇಕವು ಅವರವರ ನಂಬಿಕೆಯಿಂದ ಒಪ್ಪುವ, ಸ್ವಾನುಭವ ಮತ್ತು ಪರಾನುಭವದಿಂದ ಅರಿಯುವ ಸಂಗತಿಗಳು.  

ಈ ಸಂಚಿಕೆಯ ಒಂದು ಭಾಗದಲ್ಲಿ ಶಂಕುಕರ್ಣನಿಗೆ ಸರಸ್ವತಿ ದೇವಿಯ ಅನುಗ್ರಹವಾಗಿ ಮುಂದೆ ಅದು ರೂಪತಾಳಿದ ಸೂಚನೆ ಇತ್ತು. ಅದರ ಸ್ವಲ್ಪ ವಿವರಗಳನ್ನು ಈಗ ನೋಡೋಣ. 

ಶ್ರೀ ರಾಘವೇಂದ್ರ ಸ್ವಾಮಿಗಳೆಂದರೆ "ಕಲಿಯುಗದ ಕಾಮಧೇನು", ಸೇವೆ ಮಾಡಿ ಬೇಡಿದರೆ ಕಷ್ಟಗಳನ್ನು ದೂರ ಮಾಡಿ ಇಷ್ಟಾರ್ಥಗಳನ್ನು ಕರುಣಿಸುವವರು ಎಂದು ಬಹಳ ಜನರಿಗೆ ಗೊತ್ತು. ಅವರನ್ನು "ಪರಿಮಳಾಚಾರ್ಯ" ಎಂದೂ ಕರೆಯುತ್ತರೆ ಎಂದು ಕೆಲವರಿಗೆ ಗೊತ್ತು. ಮಂತ್ರಾಲಯದ ಸಿಹಿ ಪ್ರಸಾದವನ್ನು "ಪರಿಮಳ ಪ್ರಸಾದ" ಎಂದು ಕರೆಯುತ್ತಾರೆ ಎನ್ನುವುದು ಅಲ್ಲಿಗೆ ಹೋದ ಅಥವಾ ಪ್ರಸಾದ ಪಡೆದ ಎಲ್ಲರಿಗೂ ಗೊತ್ತು. ಈ "ಪರಿಮಳ" ಅನ್ನುವ ಪದದ ವಿಶೇಷವೇನು?

*****



ಚೆನ್ನಾಗಿ ತಿಳಿದ ವಿದ್ಯಾವಂತರನ್ನು, ವಾಚಾಳಿಗಳನ್ನು "ಸರಸ್ವತಿ ಪುತ್ರ" ಎಂದು ಕರೆಯುವುದು ವಾಡಿಕೆ. "ಅವರ ನಾಲಿಗೆಯ ಮೇಲೆ ಸರಸ್ವತಿಯು ನಲಿಯುತ್ತಾಳೆ, ನಾಟ್ಯವಾಡುತ್ತಾಳೆ" ಎಂದು ಹೇಳುವುದು ಉಂಟು. ಚತುರ್ಮುಖ ಬ್ರಹ್ಮದೇವರ ದೇವತಾರ್ಚನೆಯ ಸಮಯದಲ್ಲಿ ಸರಸ್ವತಿ ದೇವಿಯು ನೃತ್ಯ ಸೇವೆ ಒಪ್ಪಿಸುತ್ತಾಳೆ.  ಹಾಗೆ ನೃತ್ಯ ಮಾಡಲು ಆಕೆಗೆ ಒಂದು ಸರಿಯಾದ "ರಂಗಸ್ಥಳ" ಬೇಕು ಅನ್ನಿಸಿತಂತೆ. ಯಾವುದು ಅಂತಹ ಸರಿಯಾದ ವೇದಿಕೆ ಎಂದು ಹುಡುಕಿದಳಂತೆ. ಮನುಷ್ಯನ ನಾಲಿಗೆ ಎಲ್ಲ ಅಂಗಗಳಲ್ಲಿಯೂ ಹೆಚ್ಚು ಕೆಟ್ಟದು! ಅದು ಸುಮ್ಮನಿರುವುದಿಲ್ಲ. ಯಾವಾಗಲೂ ಏನಾದರೂ ತಿನ್ನುತ್ತಿರಬೇಕು. ಇಲ್ಲದಿದ್ದರೆ ಏನಾದರೂ ಅನ್ನುತ್ತಿರಬೇಕು. ಆದರೆ, ಇಂತಹ ನಾಲಿಗೆಯನ್ನು ಇಟ್ಟುಕೊಂಡಿದ್ದೂ ತಿನ್ನಬಾರದ್ದನ್ನು ತಿನ್ನದೇ, ಅನ್ನಬಾರದ್ದನ್ನು ಅನ್ನದೆ ಇರುವವರು ಬಹಳ ಅಪರೂಪಕ್ಕೆ ಸಿಕ್ಕುತ್ತಾರೆ. ಸರಸ್ವತಿ ದೇವಿಯು ಹೀಗೆ ಒಂದು ಸರಿಯಾದ ನೃತ್ಯ ವೇದಿಕೆ ಹುಡುಕಿದಾಗ ಶ್ರೀ ರಾಘವೇಂದ್ರ ಸ್ವಾಮಿಗಳ ನಾಲಿಗೆ ಕಾಣಿಸಿತು. ಎಂದೂ ಯಾರನ್ನೂ ಕಟು ಮಾತಿನಿಂದ ನೋಯಿಸಿದವರಲ್ಲ. ಇನ್ನೊಬ್ಬರನ್ನು ಏನೂ ಬೇಡಿದವರಲ್ಲ. ಸದಾಚಾರ ಸಂಪನ್ನರು. ಸದಾಕಾಲ ಪಾಠ-ಪ್ರವಚನಗಳಲ್ಲೇ ತಮ್ಮ ಕಾಲ ಕಳೆಯುತ್ತಿರುವವರು. ಆದ್ದರಿಂದ ಇದೇ ಸರಿಯಾದ ರಂಗಸ್ಥಳ ಎಂದು ತೀರ್ಮಾನಿಸಿದಳಂತೆ. 

ನೃತ್ಯ ಪ್ರಾರಂಭವಾಯಿತು. ದೇವಲೋಕದ ಮಂದಾರ, ಪಾರಿಜಾತ ಮುಂತಾದ ದಿವ್ಯ ಪುಷ್ಪಗಳ ದಂಡೆಯನ್ನು ಸರಸ್ವತಿ ದೇವಿಯು ತನ್ನ ತುರುಬಿನಲ್ಲಿ ಮುಡಿದಿದ್ದಳು. ಆನಂದದಿಂದ ನರ್ತಿಸುವಾಗ ಆ ಹೂವಿನ ದಂಡೆಯಿಂದ ಅನೇಕ ಹೂವುಗಳು ಅದುರಿ ಉದುರಿದವಂತೆ. ನೃತ್ಯ ಮುಗಿದ ಮೇಲೆ ಆ ಹೂವುಗಳು ಶ್ರೀ ರಾಯರ ನಾಲಿಗೆಯ ಮೇಲೆ ಉಳಿದವು. ಅವರು ಅವನ್ನೆಲ್ಲ ಸೇರಿಸಿ, ಪೋಣಿಸಿ, ಅವುಗಳ ಸುಗಂಧದ ಕಾರಣ "ಪರಿಮಳ" ಎಂದು ಹೆಸರಿಟ್ಟು ಕೊಟ್ಟರಂತೆ. ಅದೇ "ಪರಿಮಳ" ಎಂಬ ಹೆಸರಿನ ಗ್ರಂಥವಾಯಿತಂತೆ!

ಮಂತ್ರಾಲಯಕ್ಕೆ ಹೋದವರು ಶ್ರೀ ರಾಯರ ವೃಂದಾವನದ ಪಕ್ಕದಲ್ಲಿಯೇ ಇರುವ ಇನ್ನೊಂದು ಭವ್ಯ ವೃಂದಾವನ ನೋಡಿರುತ್ತಾರೆ. ಇದು ಶ್ರೀ ರಾಘವೇಂದ್ರ ತೀರ್ಥರ ನಂತರ ಬಂದ ಐದನೆಯವರಾದ ಶ್ರೀ ವಾದೀಂದ್ರ ತೀರ್ಥರದ್ದು. ಈ ಶ್ರೀ ವಾದೀಂದ್ರ ತೀರ್ಥರು ಶ್ರೀ ರಾಘವೇಂದ್ರರ ಕುರಿತಾಗಿ "ಗುರುಗುಣಸ್ತವನ" ಎನ್ನುವ ಗ್ರಂಥವೊಂದನ್ನು ರಚಿಸಿದ್ದಾರೆ. ಅದರಲ್ಲಿ ಶ್ರೀ ರಾಯರ "ಪರಿಮಳ" ಎನ್ನುವ ಗ್ರಂಥದ ರಚನೆಯ ಕುರಿತಾಗಿ "ಧೀರಶ್ರೀ ರಾಘವೇಂದ್ರ ತ್ವದತುಲರಸನಾ ರಂಗನೃತ್ಯ ಸ್ವಯಂಭೂ...." ಎನ್ನುವ ಶ್ಲೋಕದಲ್ಲಿ ಮೇಲಿನಂತೆ ಚಮತ್ಕಾರಿಕವಾಗಿ ವರ್ಣಿಸಿದ್ದಾರೆ. 

ಮಧ್ವ ಸಂಪ್ರದಾಯದಲ್ಲಿ ಆಚಾರ್ಯ ಮಧ್ವರ ಕೃತಿಗಳಿಗೆ ಟೀಕಾಗ್ರಂಥಗಳನ್ನು ಬರೆದವರಲ್ಲಿ ಶ್ರೀ ಜಯತೀರ್ಥರು ಅಗ್ರಗಣ್ಯರು. ಅವರಿಗೆ "ಟೀಕಾಚಾರ್ಯರು" ಎಂದು ಕರೆಯುವುದು ವಾಡಿಕೆ. ಅವರ "ಶ್ರೀಮನ್ ನ್ಯಾಯಸುಧಾ" ಗ್ರಂಥವು ಬಲು ವಿಖ್ಯಾತ. ಮೂಲ ಗ್ರಂಥಗಳಲ್ಲಿ, ವಿಶೇಷವಾಗಿ ಶ್ರೀಮನ್ಯಾಯಸುಧಾ ಗ್ರಂಥದಲ್ಲಿ,  ಸುಲಭವಾಗಿ ಅರ್ಥ ಆಗದ ವಿಷಯಗಳನ್ನು ಶ್ರೀ ರಾಘವೇಂದ್ರರು ತಮ್ಮ ಪರಿಮಳ ಗ್ರಂಥದಲ್ಲಿ ವಿವರಿಸಿದ್ದಾರೆ. ಈ ಕಾರಣಕ್ಕೆ ಅವರನ್ನು "ಪರಿಮಳಾಚಾರ್ಯರು" ಎಂದು ಕರೆಯುವುದು. ಮುಂದೆ ಇದೇ ನಡೆದು ಬಂದು ಮಂತ್ರಾಲಯದ ಪ್ರಸಾದವೂ "ಪರಿಮಳ ಪ್ರಸಾದ" ಆಗಿದೆ. 

******


ದೇವರಪೂಜೆಯಲ್ಲಿ ದೀಪ, ಹೂವು, ಹೂವಿನ ಹಾರ, ತುಳಸಿ, ಮಂಗಳಾರತಿ, ನೈವೇದ್ಯಗಳ ಉಪಯೋಗ ಉಂಟು. ಇವುಗಳು ಸ್ವಲ್ಪ ಕಾಲ ಇರುವಂತಹವು. ಹೂವು, ತುಳಸಿ ಮಾರನೆಯ ದಿನ ಬಾಡಿರುತ್ತದೆ. ದೀಪ, ಮಂಗಳಾರತಿ ಸ್ವಲ್ಪ ಸಮಯದ ನಂತರ ಆರಿಹೋಗುತ್ತವೆ.  ಸದಾಕಾಲ ಇರಬೇಕಾದರೆ ಏನು ಮಾಡಬೇಕು? ಶ್ರೀ ರಾಘವೇಂದ್ರ ಸ್ವಾಮಿಗಳು ಇದಕ್ಕೆ ಉಪಾಯ ಹುಡುಕಿದರಂತೆ. 

ಎಡಗಡೆ ಮತ್ತು ಬಲಗಡೆ ಇಡಲು ಎರಡು ದೀಪಗಳಾಗಿ "ಭಾವದೀಪ" ಮತ್ತು "ನ್ಯಾಯದೀಪ" ಎಂದು ಎರಡು ಗ್ರಂಥಗಳನ್ನು ರಚಿಸಿದರಂತೆ. ತುಳಸಿಯ ತೆನೆ ಇರುವ ಕುಡಿಯು ಪೂಜೆಗೆ ವಿಶೇಷವಂತೆ. ಅದಕ್ಕೆ "ಮಂಜರಿ" ಅನ್ನುತ್ತಾರೆ. (ಮೇಲಿನ ಚಿತ್ರದಲ್ಲಿ ನೋಡಬಹುದು). ಒಣಗುವ ತುಳಸಿಯ ಬದಲಾಗಿ "ತತ್ತ್ವ ಮಂಜರಿ" ಎನ್ನುವ ಗ್ರಂಥ. ಪೂಜೆಯ ವೇಳೆ ಹೆಚ್ಚಿನ ಬೆಳಕು ಬರಲು "ಚಂದ್ರಿಕಾ ಪ್ರಕಾಶ" ಎನ್ನುವ ಗ್ರಂಥ. (ಶ್ರೀ ವ್ಯಾಸರಾಯರ "ತಾತ್ಪರ್ಯ ಚಂದ್ರಿಕಾ" ಗ್ರಂಥದ ವಿವರಣೆ). ಮತ್ತೆ ಹೂವು-ಗಂಧಗಳಿಗೆ "ಪರಿಮಳ" ಕೃತಿ. ಹಾರದ ಸ್ಥಳದಲ್ಲಿ "ನ್ಯಾಯ ಮುಕ್ತಾವಳಿ" ಎನ್ನುವ ಮುತ್ತಿನ ಹಾರದಂತಹ ಗ್ರಂಥ. ಮಂಗಳಾರತಿಯ ಸಲುವಾಗಿ "ತಂತ್ರದೀಪಿಕಾ". ನೈವೇದ್ಯದ ಹರಿವಾಣದಲ್ಲಿ ಬಗೆಬಗೆಯ ಇತರ ಅನೇಕ ಗ್ರಂಥಗಳು. 

"ಪ್ರಾತಃ ಸಂಕಲ್ಪ ಗದ್ಯ"  ಎನ್ನುವುದು ಅವರು ಪ್ರತಿದಿನ ಬೆಳಿಗ್ಗೆ ಮಾಡುತ್ತಿದ್ದ "ಟು ಡು ಲಿಸ್ಟ್". "ಸರ್ವ ಸಮರ್ಪಣ" ಎನ್ನುವುದು ಅವರು ದಿನದ ಕೊನೆಯಲ್ಲಿ ಅಂದು ಮಾಡಿದುದನ್ನೆಲ್ಲ ಪರಮಾತ್ಮನಿಗೆ ಒಪ್ಪಿಸುತ್ತಿದ್ದ ರೀತಿ. ದಿನಕ್ಕೆ ಹದಿನೆಂಟು ಗಂಟೆಗಳ ಅಧ್ಯಯನ-ಅಧ್ಯಾಪನ; ಪೂಜೆ-ಅತಿಥಿಸೇವೆ. 

ಹೀಗೆ ಒಂದು ದಿನ ಇದ್ದು ಕೆಡುವ-ಬಾಡುವ ಪದಾರ್ಥಗಳ ಬದಲು ಚಿರಕಾಲ ಉಳಿಯುವ ಗ್ರಂಥಗಳನ್ನು ದೇವರಪೂಜೆಗೆ ಮಾಡಿಟ್ಟದ್ದು ಶ್ರೀ ರಾಘವೇಂದ್ರಸ್ವಾಮಿಗಳ ವಿಶೇಷತೆ ಎಂದು ತಿಳಿದವರು ಹೇಳುತ್ತಾರೆ. 


*****

ಶ್ರೀ ರಾಯರ ಅನೇಕ ಪವಾಡಗಳನ್ನು ಹೇಳುತ್ತಾರೆ. ಈ ಎಲ್ಲ ಪವಾಡಗಳಿಗಿಂತ ಹೆಚ್ಚಿನದು ಅವರ ನಲವತ್ತೈದು ಗ್ರಂಥಗಳ ಭಂಡಾರ. ಇವುಗಳಲ್ಲಿ ಅನೇಕವು ಅವರು "ಶ್ರೀ ರಾಘವೇಂದ್ರ ತೀರ್ಥ" ಎಂದು ಪೀಠ ಸ್ವೀಕರಿಸುವ ಮುಂಚೆ, ವೆಂಕಟನಾಥ ಎಂದು ಹೆಸರಿನ ವಟು ಮತ್ತು ಗೃಹಸ್ಥ ಆಗಿದ್ದಾಗ ರಚಿಸಿದ್ದು. 

ವಿಜಯನಗರದ ಅರಸರ ಆಸ್ಥಾನ ವಿದ್ವಾಂಸರಾಗಿ ಅವರಿಗೆ ವೀಣಾ ಗುರುಗಳಾಗಿದ್ದ ವಿದ್ವಾಂಸರ ವಂಶದಲ್ಲಿ ಜನಿಸಿದ್ದು. ಸಿರಿ-ಸಂಪತ್ತಿನಲ್ಲಿ ನಡೆದುಬಂದ ಕುಟುಂಬವಾದರೂ ಇವರ ಕಾಲಕ್ಕೆ ವಿಜಯನಗರ ಸಾಮ್ರಾಜ್ಯ ಹರಿದು-ಹಂಚಿಹೋಗಿ ಇವರಿಗೆ ಹೇಳತೀರದ ದಾರಿದ್ರ್ಯ. ಅಂತಹ ಸಂದರ್ಭಗಳಲ್ಲಿ ಈ ಗ್ರಂಥಗಳ ರಚನೆ. 

ಭಗವದ್ಗೀತೆಗೆ ಹೊಂದಿದ "ಗೀತಾ ವಿವೃತ್ತಿ", ಬ್ರಹ್ಮಸೂತ್ರ ಭಾಷ್ಯಗಳಿಗೆ ಸಂಬಂಧಿಸಿದಂತೆ "ತಂತ್ರದೀಪಿಕಾ", ಋಗ್ವೇದ ಮಂತ್ರಗಳಿಗೆ "ಮಂತ್ರಾರ್ಥ ಮಂಜರಿ", ಹತ್ತು ಪ್ರಮುಖ ಉಪನಿಷತ್ತುಗಳಿಗೆ ಭಾಷ್ಯಗಳು, ಮತ್ತನೇಕ ಗ್ರಂಥಗಳು. ಹಿಂದಿದ್ದ ಗ್ರಂಥಗಳಿಗೆ ಬಂದಿದ್ದ ಟೀಕಾಗ್ರಂಥಗಳಿಗೆ ಟಿಪ್ಪಣಿಗಳು. ಹಿಂದಿದ್ದ ಗ್ರಂಥಗಳಿಗೆ ಟೀಕೆಗಳು. ಜೊತೆಗೆ ಸ್ವತಂತ್ರ ಗ್ರಂಥಗಳು. ದೊಡ್ಡ ಗ್ರಂಥಗಳನ್ನು ಸಂಗ್ರಹ ಮಾಡಿ ಚಿಕ್ಕದಾಗಿಸಿ ಪ್ರತಿನಿತ್ಯ ಪಾರಾಯಣಕ್ಕೆ ಕೊಟ್ಟರು. ಚಿಕ್ಕದಾದ ಗ್ರಂಥಗಳನ್ನು ವಿವರಿಸಿ ದೊಡ್ಡದು ಮಾಡಿ ಕೊಟ್ಟರು. ಹೀಗೂ ಸರಿ. ಹಾಗೂ ಸರಿ.  ಎಲ್ಲದರಲ್ಲೂ ಪ್ರಚಂಡ ವಿದ್ವತ್ ದರ್ಶನ. 

ಕನ್ನಡದಲ್ಲಿ ರಚಿಸಿದ ರಚನೆಗಳು ಸಿಕ್ಕಿಲ್ಲ. ಸಿಕ್ಕಿರುವ ಒಂದೇ "ಇಂದು ಎನಗೆ ಗೋವಿಂದ" ದೇವರನಾಮ ಎಲ್ಲರ ಬಾಯಲ್ಲಿ. 

ಭಜಿಸಿ ಬೇಡಿದ ಭಕ್ತರಿಗೆ ಕೇಳಿದ್ದು ಕೊಟ್ಟಂತೆ, ವಾಂಗ್ಮಯ ವಿಸ್ತಾರದಲ್ಲೂ ಯಾರಿಗೆ ಏನು ಬೇಕೋ ಅದುಂಟು. 

*****

ಚಿಕ್ಕ ವಯಸ್ಸಿನಲ್ಲೇ ತಂದೆ-ತಾಯಿಯರ ಅಗಲಿಕೆ. ಅಕ್ಕ-ಭಾವ ಮತ್ತು ಅಣ್ಣನ ನೆರಳಿನಲ್ಲಿ ಬಾಲ್ಯ. ಏಳು ವರುಷಕ್ಕೆ ಅಣ್ಣನಿಂದ ಉಪನಯನ. ಹದಿನೆಂಟು ವರುಷಕ್ಕೆ ವಿವಾಹ. ಇಪ್ಪತ್ತಾರು ವರುಷಕ್ಕೆ ಸನ್ಯಾಸ. ಚಿಕ್ಕ ವಯಸ್ಸಿನ ಹೆಂಡತಿ ಮತ್ತು ಏಳು ವರುಷದ ಮಗನನ್ನು ತೊರೆದು ಯತಿಯಾದದ್ದು. ಕಡು ಬಡತನದ ಜೀವನ. ಈ ಹಿನ್ನೆಲೆಯಲ್ಲಿ ಸಂಪಪಾದಿಸಿದ ಪ್ರಚಂಡ ಪಾಂಡಿತ್ಯ. ರಚಿಸಿದ ಗ್ರಂಥ ರಾಶಿ. ಪೀಠ ಸ್ವೀಕರಿಸಿದ ಮೇಲೆ ಐವತ್ತು ವರುಷ ಪೀಠಾಧಿಪತಿಯಾಗಿ ಸಮಾಜದ ಸೇವೆ. ನಂತರ ಜೀವಂತವಾಗಿದ್ದಾಗಲೇ ವೃಂದಾವನ ಪ್ರವೇಶ.  

ವೇದ-ಉಪನಿಷತ್ತುಗಳು, ತರ್ಕ, ವ್ಯಾಕರಣ, ಅಲಂಕಾರ ಶಾಸ್ತ, ಕಾವ್ಯ-ನಾಟಕ, ಮಹಾಭಾಷ್ಯ, ಪೂರ್ವ ಮೀಮಾಂಸಾ, ಜ್ಯೋತಿಷ್ಯ, ಸಂಗೀತ, ವೀಣಾವಾದನ ಮುಂತಾದ ಅನೇಕ ವಿಷಯಗಳಲ್ಲಿ ಪೂರ್ಣ ಪ್ರಭುತ್ವ. ಅನೇಕ ಕಲೆಗಳಲ್ಲಿ ಪರಿಣತಿ. ಒಂದೊಂದರಲ್ಲಿ ಸಾಧನೆ ಮಾಡಲು ಅನೇಕರಿಗೆ ಕಷ್ಟಸಾಧ್ಯ. ಇವರಿಗೆ ಎಲ್ಲವೂ ಸಲೀಸು. 

ರಾಯರ ಬೇರೆ ಪವಾಡಗಳು ಒತ್ತಟ್ಟಿಗಿರಲಿ. ಇವೆಲ್ಲದರ ಹಿನ್ನೆಲೆಯಲ್ಲಿ ಅವರನ್ನು ನೆನೆದಾಗ, ನೋಡಿದಾಗ ಅವರ ಬದುಕೇ ಒಂದು ದೊಡ್ಡ ಪವಾಡ.   

Saturday, September 6, 2025

ನಾನು ಶಾಲಿಗಾಗಿ ಬಂದವನು, ಗುರುಗಳೇ!


ಗುರು-ಶಿಷ್ಯರ ಸಂಬಂಧದ ಬಗ್ಗೆ "ಗುರು ಪೂರ್ಣಿಮಾ" ಸಮಯದಲ್ಲಿ ಒಂದು ಸಂಚಿಕೆಯಲ್ಲಿ ಸ್ವಲ್ಪ ವಿಚಾರ ಮಾಡಿದ್ದೆವು. ಯೋಗ್ಯನಾದ ಶಿಷ್ಯನು ಸಿಗಲಿ ಎಂದು ಗುರುವು ಕಾಯುತ್ತಿರುವುದು ಮತ್ತು ಸರಿಯಾದ ಗುರು ದೊರೆಯಲಿ ಎಂದು ಜಿಜ್ಞಾಸು ಶಿಷ್ಯನು ಅರಸುವುದು, ಇವುಗಳ ಬಗ್ಗೆ ಕೆಲವು ವಿಷಯಗಳನ್ನು ನೋಡಿದ್ದೆವು. (ಈ ಸಂಚಿಕೆಯನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು). 

ಈ ವಿಷಯದ ಕುರಿತಂತೆ ಬಹಳ ಹಿಂದೆ ತಿಳಿದವರೊಬ್ಬರು ಸಾಂದರ್ಭಿಕವಾಗಿ ಹೇಳಿದ್ದ ಸಂಗತಿಯೊಂದನ್ನು ನೆನಪಿಸಿಕೊಳ್ಳಬಹುದು. ಇದರ ಬಗ್ಗೆ ಹೆಚ್ಚಿನ ವಿಚಾರಗಳು ತಿಳಿದಿಲ್ಲ. ತಿಳಿಯುವ ಪ್ರಯತ್ನ ಮಾಡಿದರೂ ಅವು ಸಫಲವಾಗಲಿಲ್ಲ. ಆದರೆ ಅದನ್ನು ಹೇಳಿದವರು ಸ್ವತಃ ಘನ ವಿದ್ವಾಂಸರು. ಅನೇಕ ವಿಷಯಗಳ ಬಗ್ಗೆ ಅಧಿಕಾರಯುತವಾಗಿ ಮಾತಾಡಬಲ್ಲವರು. ಅದಕ್ಕಿಂತ ಹೆಚ್ಚಾಗಿ ಈ ಪ್ರಸಂಗ ಜ್ಞಾನದಾಹ ಮತ್ತು ಗುರುಗಳ ಶಿಷ್ಯ ವಾತ್ಸಲ್ಯವನ್ನು ತೋರಿಸುವ ಒಂದು ಉತ್ತಮ ಉದಾಹರಣೆ. ಆದ್ದರಿಂದ ಅದನ್ನು ಅದರ ಇತಿ-ಮಿತಿಗಳಲ್ಲೇ ನೋಡೋಣ. 

ತುಂಗಭದ್ರಾ ನದಿಯ ಆಣೆಕಟ್ಟು ಈಗ ತುಂಬಿ ತುಳುಕುತ್ತಿದೆ. ಜಲಾಶಯದ ಎಲ್ಲ ಗೇಟುಗಳನ್ನೂ ತೆಗೆದು ನದಿಯ ಪಾತ್ರಕ್ಕೆ ನೀರು ಬಿಡುತ್ತಿದ್ದಾರೆ. ಕೆಲವು ತಿಂಗಳುಗಳ ಹಿಂದೆ ಗೇಟುಗಳಲ್ಲಿ ತೊಂದರೆ ಉಂಟಾಗಿ ನೀರು ಸೋರಿಹೋಗುತ್ತಿದ್ದುದು, ಮತ್ತು ಬಲು ಕಠಿಣ ಪರಿಸ್ಥಿತಿಯಲ್ಲೂ ಕೆಲವು ಎಂಜಿನಿಯರುಗಳು ಕಷ್ಟಪಟ್ಟು ಅದನ್ನು ಸರಿಪಡಿಸಿ ನೀರು ಪೋಲಾಗುವುದನ್ನು ನಿಲ್ಲಿಸಿದುದನ್ನೂ ಕೇಳಿದ್ದೆವು. ಈ ಜಲಾಶಯವು ನೀರು ತುಂಬಿದ್ದಾಗ ನೋಡಲು ಬಹಳ ಸುಂದರ. ಅದಕ್ಕೆ ಸೇರಿದಂತೆ "ಪಂಪಾವನ" ಎನ್ನುವ ಉದ್ಯಾನವಿದೆ. ರಾಮಾಯಣದ ಪ್ರಸಿದ್ಧ "ಋಷ್ಯಮೂಕ" ಬೆಟ್ಟವೂ ಅದರ ಒಂದು ಬದಿಯಲ್ಲಿದೆ. 

ತುಂಗಭದ್ರಾ ಜಲಾಶಯವು ಹೊಸಪೇಟೆಯಿಂದ ಸುಮಾರು ಐದು ಮೈಲು ದೂರದ, ಈಗಿನ ಕೊಪ್ಪಳ ಜಿಲ್ಲೆಗೆ ಸೇರಿದ ಮುನಿರಾಬಾದ್ ಪಟ್ಟಣಕ್ಕೆ ಹೊಂದಿಕೊಂಡಿದೆ. ಹುಲಿಗಿ ಎನ್ನುವ ಸಣ್ಣ ಊರು ಈಗ ಹೆಚ್ಚು-ಕಡಿಮೆ ಈ ಪಟ್ಟಣದಲ್ಲಿ ಸೇರಿಹೋಗಿದೆ. "ಹುಲಿಗೆಮ್ಮ" ಎನ್ನುವ ಇತಿಹಾಸ ಪ್ರಸಿದ್ಧ ದೇವಸ್ಥಾನ ಇಲ್ಲಿನ ಹೆಗ್ಗುರುತು. 

*****

ಹುಲಿಗಿ ಶ್ರೀಪತ್ಯಾಚಾರ್ಯರು ಒಂದು ಕಾಲಘಟ್ಟದಲ್ಲಿ ಅದ್ವಿತೀಯ ತರ್ಕ ಶಾಸ್ತ್ರ ವಿದ್ವಾಂಸರು. ಅವರನ್ನು ಅರಸಿಕೊಂಡು ನಾಡಿನ ಮೂಲೆ ಮೂಲೆಗಳಿಂದ ತರ್ಕ ಶಾಸ್ತ್ರ ಕಲಿಯಬೇಕೆಂದು ಆಸೆಪಡುವ ವಿದ್ಯಾರ್ಥಿಗಳು ಬರುತ್ತಿದ್ದರಂತೆ. ಅವರ ಮನೆಯೇ ಒಂದು ಗುರುಕುಲ. ಆಗ ತಮ್ಮ ಬಳಿ ವಿದ್ಯಾರ್ಜನೆಗೆ ಬರುವವರಿಗೆ ಊಟ-ವಸತಿ ಕೊಟ್ಟು ಪಾಠ ಹೇಳುವ ಕಾಯಕ ಅವರದು. ಹತ್ತು-ಹನ್ನೆರಡು ವಿದ್ಯಾರ್ಥಿಗಳವರೆಗೆ ಒಪ್ಪಿಕೊಳ್ಳುತ್ತಿದ್ದರು. ಅದಕ್ಕಿಂತ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳನ್ನು ಸಂಭಾಳಿಸುವುದು ಆಗದ ಕೆಲಸ. 

ಶ್ರೀಪತಿ ಆಚಾರ್ಯರು ತರ್ಕ ಶಾಸ್ತ್ರದ ಜೊತೆಯಲ್ಲಿ ಬೇರೆ ಇತರ ಶಾಖೆಗಳಲ್ಲೂ ಪಂಡಿತರೇ. ಅವರಿಗೆ ಅನೇಕ ಕಡೆಗಳಿಂದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಹ್ವಾನಗಳು ಬರುತ್ತಿದ್ದವು. ವಿದ್ವತ್ ಗೋಷ್ಠಿಗಳನ್ನು ನಿರ್ವಹಿಸುವುದು, ಉಪನ್ಯಾಸಗಳನ್ನು ನೀಡುವುದು, ಮತ್ತು ಪರೀಕ್ಷೆಗಳಲ್ಲಿ ನಿರ್ಣಾಯಕರಾಗಲು ಅಲ್ಲಲ್ಲಿ ಅವರಿಗೆ ಕರೆಗಳು ಬರುತ್ತಿದ್ದವು. ಹೀಗೆ ಹೋದ ಸಂದರ್ಭಗಳಲ್ಲಿ ಅವರಿಗೆ ಸನ್ಮಾನ ಮಾಡುವುದು ಸರ್ವೇಸಾಮಾನ್ಯವಾಗಿತ್ತು. ಈ ಮನ್ನಣೆಗಳ ಅಂಗವಾಗಿ ಶಾಲುಗಳನ್ನು ಹೊದ್ದಿಸಿ, ಫಲ-ತಾಂಬೂಲಗಳನ್ನು ನೀಡುವುದು ನಡೆಯುತ್ತಿತ್ತು. ಈ ಕಾರಣಗಳಿಂದ ಅವರ ಬಳಿ ಶಾಲುಗಳ ಒಂದು ಸಂಗ್ರಹವೇ ಇರುತ್ತಿತ್ತು. 

ಹೀಗೆ ತಮಗೆ ಕೊಟ್ಟಿರುವ ಶಾಲುಗಳನ್ನು ವಿದ್ಯಾರ್ಥಿಗಳಿಗೆ ಹಂಚುವುದು ಆಚಾರ್ಯರ ಹವ್ಯಾಸ. ಯಾವುದೇ ಪದಾರ್ಥವನ್ನು ಸುಮ್ಮನೆ ಕೊಟ್ಟರೆ ಅದಕ್ಕೆ ಅಷ್ಟು ಬೆಲೆ ಇರುವುದಿಲ್ಲ. ಈ ಕಾರಣದಿಂದ ಆಚಾರ್ಯರು ಆಗಿಂದಾಗ್ಗೆ ವಿದ್ಯಾರ್ಥಿಗಳಲ್ಲಿ ಸ್ಪರ್ಧೆಗಳನ್ನು ಏರ್ಪಡಿಸುತ್ತಿದ್ದರು. ಈ ಸ್ಪರ್ಧೆಗಳು ಬೇರೆ ಬೇರೆ ಶಾಖೆಯ ವಿಷಯಗಳ ಮೇಲೆ ಇರುತ್ತಿದ್ದವು. ತಮ್ಮ ಶಿಷ್ಯರ ಜೊತೆಯಲ್ಲಿ ಬೇರೆ ಯಾವುದೇ ವಿದ್ಯಾರ್ಥಿ ಭಾಗವಹಿಸಲು ಅವಕಾಶ ಇರುತ್ತಿತ್ತು. ಒಂದು ವಿಷಯವನ್ನು ಆರಿಸಿ ನಿಗದಿತ ದಿನಾಂಕದಂದು ಸ್ಪರ್ಧೆ. ಅಂದು ಬಂದು ಭಾಗವಹಿಸಿದ ವಿದ್ಯಾರ್ಥಿಗಲ್ಲಿ ಉತ್ತಮ ಪ್ರದರ್ಶನ ನೀಡಿದವರಿಗೆ ಶಾಲುಗಳ ಬಹುಮಾನ. ಈ ರೀತಿಯಿಂದ ವಿದ್ಯಾರ್ಥಿಗಲ್ಲಿ ಸ್ಪರ್ಧಾಮನೋಭಾವದಿಂದ ಕಲಿಕೆಯೂ ನಡೆದು ಶಾಲುಗಳ ವಿತರಣೆಯೂ ಆಗುತ್ತಿತ್ತು. 

***** 

ಹೀಗೆ ಒಂದು ದಿನ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ಮೀಮಾಂಸಾ ಶಾಸ್ತ್ರದ "ಮಂಗಳವಾದ" ಎನ್ನುವ ವಿಷಯ. ವೈದಿಕ ಕಾರ್ಯಗಳಲ್ಲಿ ಪ್ರಾರಂಭದಲ್ಲಿ "ಮಂಗಳ" ಎಂಬ ಒಂದು ಪ್ರಾರಂಭಿಕ ಕ್ರಿಯೆ ಬೇಕೇ ಅಥವಾ ಬೇಡವೇ ಎನ್ನುವ ವಿಷಯದಮೇಲೆ ಚರ್ಚೆ. ಅನೇಕ ವಿದ್ಯಾರ್ಥಿಗಳು ಬಂದು ಭಾಗವಹಿಸಿದರು. ತಮಗೆ ಪರಿಚಯವಿಲ್ಲದ ಒಬ್ಬ ವಿದ್ಯಾರ್ಥಿಯ ಪ್ರಖರವಾದ ವಿಷಯ ಮಂಡನೆಯ ರೀತಿ ಶ್ರೀಪತಿ ಆಚಾರ್ಯರಿಗೆ ಬಹಳ ಹಿಡಿಸಿತು. ತೀರ್ಪುಗಾರರ ಮನ್ನಣೆ ಗಳಿಸಿ ಆ ವಿದ್ಯಾರ್ಥಿ ಬಹುಮಾನವಾಗಿ ಶಾಲನ್ನೂ ಗೆದ್ದುಕೊಂಡ. ಶ್ರೀಪತ್ಯಾಚಾರ್ಯರು ಶಾಲನ್ನು ಹೊದಿಸಿ ಅವನನ್ನು ಸ್ವಲ್ಪ ಕಾಲ ಇರುವಂತೆ ಹೇಳಿದರು. 

ಕಾರ್ಯಕ್ರಮ ಎಲ್ಲ ಮುಗಿದ ನಂತರ ಆಚಾರ್ಯರು ಆ ವಿದ್ಯಾರ್ಥಿಯನ್ನು ಕರೆದರು. 

"ನೀನು ಬಹಳ ಚೆನ್ನಾಗಿ ವಿಷಯ ಮಂಡನೆ ಮಾಡಿದಿ"
"ತಮ್ಮ ಅನುಗ್ರಹವಾಯಿತು. ನನ್ನ ಪುಣ್ಯ"
"ಮೀಮಾಂಸಾ ಶಾಸ್ತ್ರವನ್ನು ಎಲ್ಲಿ ಅಧ್ಯಯನ ಮಾಡಿದೆ?"
"ನಾನು ಮೀಮಾಂಸಾ ಶಾಸ್ತ್ರದ ವಿದ್ಯಾರ್ಥಿಯಲ್ಲ. ತರ್ಕದ ವಿದ್ಯಾರ್ಥಿ"
"ಮತ್ತೆ ಈ ವಿಷಯದ ಸ್ಪರ್ಧೆಗೆ ಬಂದಿದ್ದು ಹೇಗೆ?"
"ನಾನು ಬಡವ. ಚಳಿಗಾಲದಲ್ಲಿ ಹೊದೆಯಲು ನನ್ನ ಬಳಿ ಶಾಲಿಲ್ಲ. ತಾವು ಆಗಾಗ ಸ್ಪರ್ಧೆ ಏರ್ಪಡಿಸಿ ಗೆದ್ದವರಿಗೆ ಶಾಲು ಕೊಡುವುದು ತಿಳಿಯಿತು. ಅದಕ್ಕೇ ಈ ವಿಷಯಕ್ಕೆ ತಯಾರಿ ಮಾಡಿಕೊಂಡು ಸ್ಪರ್ಧೆಗೆ ಬಂದೆ. ಕ್ಷಮಿಸಬೇಕು. ನಾನು ಶಾಲಿಗಾಗಿ ಬಂದವನು, ಗುರುಗಳೇ"
"ಸ್ಪರ್ಧೆಗೆ ವಿಷಯ ಸಂಗ್ರಹಣೆಗೆ ಗ್ರಂಥ ಹೇಗೆ ಸಂಪಾದಿಸಿದೆ?"
"ಮೀಮಾಂಸಾ ಶಾಸ್ತ್ರದ ವಿದ್ಯಾರ್ಥಿಯೊಬ್ಬನಿಂದ ಒಂದು ವಾರದ ಮಟ್ಟಿಗೆ ಪಡೆದುಕೊಂಡು, ಅಭ್ಯಸಿಸಿ ಸ್ಪರ್ಧೆಗೆ ಬಂದೆ"
"ಈಗ ಎಲ್ಲಿ ವಾಸವಾಗಿದ್ದೀ"
"ಒಬ್ಬರು ದೂರದ ಬಂಧುಗಳು ಅವರ ಮನೆಯಲ್ಲಿ ಇರಲು ಅವಕಾಶ ಮಾಡಿಕೊಟ್ಟಿದ್ದಾರೆ. ಅಲ್ಲಿ ಉಳಿದುಕೊಂಡಿದ್ದೇನೆ"
"ತರ್ಕ ಶಾಸ್ತ್ರದಲ್ಲಿ ಆಸಕ್ತಿಯಿದ್ದರೆ ನಮ್ಮ ಬಳಿಯೇ ಕಲಿಯಲು ಬರಬಹುದಿತ್ತಲ್ಲ"

ವಿದ್ಯಾರ್ಥಿಗೆ ಮಾತನಾಡಲಾಗಲಿಲ್ಲ. ಕಣ್ಣುಗಳಲ್ಲಿ ನೀರು ತುಂಬಿಕೊಂಡಿತು.

"ಏಕೆ? ಏನಾಯಿತು?" 
"ಕೆಲವು ತಿಂಗಳ ಹಿಂದೆ ತಮ್ಮ ಬಳಿ ಬಂದು ಪ್ರಾರ್ಥಿಸಿದೆ. ಈಗ ನನ್ನ ಬಳಿ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಅವಕಾಶ ಇಲ್ಲ. ಬೇರೆಯವರ ಬಳಿ ಪ್ರಯತ್ನಿಸು ಎಂದಿರಿ. ನಾನು ನತದೃಷ್ಟ"
"ಈಗ ಅವಕಾಶವಾದರೆ ನಮ್ಮಲ್ಲಿ ಕಲಿಯಲು ಬರುವಿಯಾ?"
"ಅದಕ್ಕಿಂತ ಬೇರೆ ಭಾಗ್ಯವಿಲ್ಲ ನನಗೆ"

ಮಾರನೆಯ ದಿನದಿಂದ ಅವನು ಆಚಾರ್ಯರ ಗುರುಕುಲದ ವಿದ್ಯಾರ್ಥಿಯಾದ. ಆಚಾರ್ಯರಿಗೆ ಬಹಳ ಕಾಲದಿಂದ ಹುಡುಕುತ್ತಿದ್ದ ಯೋಗ್ಯ ಶಿಷ್ಯ ಸಿಕ್ಕ. ಅವನಿಗೆ ತನ್ನ ಕನಸಿನ ನಿಧಿ ಸಿಕ್ಕಂತೆ ಆಗಿ ಹಾತೊರೆಯುತ್ತಿದ್ದ ಗುರುಗಳು ದೊರಕಿದರು!

*****

ದೇವರ್ಷಿ ನಾರದರಿಗೆ ಪ್ರಹ್ಲಾದನಂತಹ ಶಿಷ್ಯ ಸಿಕ್ಕ ಸಂದರ್ಭದಲ್ಲಿ ಈ ಮೇಲೆ ಹೇಳಿದ ಸಂಗತಿ ಕೇಳಿದಂತೆ ನೆನಪು. 

ಯೋಗ್ಯರಾದ ಶಿಷ್ಯರು ಸಿಗುವುದು ಗುರುಗಳಿಗೆ ಆನಂದ. ಮನಬಿಚ್ಚಿ ಜ್ಞಾನ ಧಾರೆ ಎರೆಯುವ ಗುರುಗಳು ದೊರಕುವುದು ಶಿಷ್ಯರ ಸುಯೋಗ. 

Tuesday, September 2, 2025

ಕೊಟ್ಟಿದೀನಿ, ಕೊಟ್ಟಿದೀನಿ!


"ಗೋದಾನ" ಅನ್ನುವ ಪದವನ್ನು ಸಾಮಾನ್ಯವಾಗಿ ಎಲ್ಲರೂ ಕೇಳಿರುತ್ತಾರೆ. ಬಹಳ ಮಂದಿ ತಿಳಿದಿರುವಂತೆ ಅದು ಸತ್ತವರ ಅಪರ ಕ್ರಿಯಾದಿಗಳನ್ನು ಮಾಡುವ ಕಾಲದಲ್ಲಿ ಕೊಡುವ ಒಂದು ದಾನ. ಬದುಕಿರುವಾಗ ಒಬ್ಬರು ಗೋದಾನ ಕೊಡಲಿಲ್ಲ. ಇನ್ನೊಬ್ಬರು ಕೊಡಬೇಕು ಎಂದುಕೊಂಡರು. ಕೊಡುವ ಮೊದಲೇ ಸತ್ತರು. ಈಗ ಅವರ ಬದಲು ಅವರ ಮನೆಯವರು ಕೊಡುತ್ತಾರೆ. ಸತ್ತವರ ಕ್ರಿಯಾಕರ್ಮಗಳನ್ನು ಮಾಡುವವರು ಸತ್ತ ದಿನದಿಂದ ಒಂದು ವರುಷದೊಳಗೆ ಕೊಟ್ಟರೆ ಈಗಲೂ ಕಾಲವಾದವರೇ ದಾನಕೂಟ್ಟತೆರನಾಗಿ ಅವರಿಗೆ ತಲಪುತ್ತದೆ ಎಂದು ಭಾವನೆ.  ಬಹಳ ಕಡೆ, ಅದರಲ್ಲಿಯೂ ಸಾಮಾನ್ಯವಾಗಿ ಆರನೇ ತಿಂಗಳಿನ ಆಸು-ಪಾಸಿನಲ್ಲಿ ಕೊಡುವುದುಂಟು. 

ಸತ್ತ ವರುಷದಲ್ಲಿ ಸತ್ತವರ ಮಗಳ ಮದುವೆ ಮಾಡಿದರೆ ("ಕನ್ಯೆ" ಒಂದು ವಸ್ತುವಲ್ಲ. ಅವಳನ್ನು ದಾನ ಮಾಡುವಂತಿಲ್ಲ ಎನ್ನುವ ನಿಜವಾದ ವೈದಿಕ ಪದ್ಧತಿ ಮರೆಯಾದ ಮೇಲೆ, ಕನ್ಯಾದಾನ ಎನ್ನುವ ಆಚರಣೆ ಬಂದ ಮೇಲೆ) ಅವರಿಗೆ ಕನ್ಯಾದಾನ ಫಲ ಸಿಗುತ್ತದೆ ಎಂದು ನಂಬಿದಂತೆ. ಸತ್ತವರ ಗಂಡು ಮಕ್ಕಳಿಗೆ ಆ ವ್ಯಕ್ತಿ ಸತ್ತು ವರುಷ ತುಂಬುವ ಮುಂಚೆ ಮದುವೆ ಮಾಡುತ್ತಿರಲಿಲ್ಲ. ವಿವಾಹಯೋಗ್ಯ ಹೆಣ್ಣು ಮಕ್ಕಳಿದ್ದರೆ ಮಾಡದೆ ಬಿಡುತ್ತಿರಲಿಲ್ಲ. ಹೀಗೆ ನಡೆಯುತ್ತಿತ್ತು. ಮುಂದೆ ಬರಬರುತ್ತ ಸ್ವಲ್ಪ ನಿಯಮ ಸಡಿಲವಾಯಿತು. ಯಾರೋ ಬುದ್ಧಿವಂತರು "ಯುಗಾದಿ ಬಂದರೆ ಹೊಸ ವರ್ಷ ಬಂತು. ವರ್ಷವಾಯಿತು. ಮಾಡಬಹುದು", ಅಂದರು. ಹೀಗೆ. ಹಾಗಿದ್ದರೆ ಫಾಲ್ಗುಣ ಶುಕ್ಲ ಪಕ್ಷದಲ್ಲಿ ಸತ್ತವರ ಮಗನಿಗೆ ಚೈತ್ರದಲ್ಲಿ, ಅದು ಕೇವಲ ಒಂದು ತಿಂಗಳ ನಂತರವಾದರೂ, ಮದುವೆಯಾಗಬಹುದು ಎಂದಾಯಿತು. 

ಹಿಂದೆಲ್ಲಾ ಒಂದು ಸುಲಕ್ಷಣವಾದ (ಕಪಿಲೆ ಎನ್ನುವ ಕಂಡು ಬಣ್ಣದ ಹಸು ಸಿಕ್ಕಿದರೆ ಉತ್ತಮ), ಚಿಕ್ಕ ಕರುವಿರುವ, ಹೆಚ್ಚಾದ ಹಾಲನ್ನು ಕೊಡುವ ಗೋವನ್ನು ತಂದು, ಅದಕ್ಕೆ ಚೆನ್ನಾಗಿ ಅಲಂಕರಿಸಿ, ಕೊಂಬುಗಳಿಗೆ ತಮ್ಮ ಶಕ್ತಿಯ ಪ್ರಕಾರ ಚಿನ್ನದ ಇಲ್ಲವೇ ಬೆಳ್ಳಿಯ ಕೋಡನ್ನು ಸೇರಿಸಿ, ಮೈಮೇಲೆ ಸೊಗಸಾದ ಮೇಲು ಹೊದ್ದಿಕೆ ಹೊದಿಸಿ, ಮುತ್ತಿನ ಮತ್ತು ಹೂವಿನ ಹಾರಗಳನ್ನು ಹಾಕಿ, ಪೂಜಿಸಿ, ಗೋದಾನದ ಸಂಕಲ್ಪ ಮಾಡಿ, ನಂತರ ಕ್ರಮವಾಗಿ ಯೋಗ್ಯರಿಗೆ ದಾನ ಮಾಡುತ್ತಿದ್ದರು. ನಮ್ಮ ಚಿಕ್ಕಂದಿನಲ್ಲಿ ಹೀಗೆ ಹಳ್ಳಿಗಳಲ್ಲಿ ಅನೇಕ ದಾನ ಮಾಡಿರುವುದನ್ನು ಕಂಡಿದ್ದೇವೆ. ಹೀಗೆ ಮಾಡಿದ ಮೇಲೆ ಆ ಹಿರಿಯರ ಮುಖದಲ್ಲಿ ಕಂಡು ಬಂದ ಧನ್ಯತಾಭಾವ ನೋಡಿದ್ದು ಇಂದಿಗೂ ಮಾಸದು. ಒಂದು ಸಂದರ್ಭದಲ್ಲಿ, ಸುಮಾರು ನಲವತ್ತು ವರುಷಗಳ ಹಿಂದೆ, ಒಂದು ಕುಟುಂಬದವರು ಡೈರಿ ಅಂಗಡಿಯವರಿಂದ ಹಾಲಿನ ಚೀಟಿಗಳನ್ನು ಕೊಂಡುತಂದು 365 ಚೀಟಿಗಳನ್ನು ಒಂದು ಲಕೋಟೆಯಲ್ಲಿ ಹಾಕಿ ದಾನ ಕೊಟ್ಟಿದ್ದರು. ಹಸು ಸಾಕುವ ಚಿಂತೆಯಿಲ್ಲ. ಒಂದು ವರುಷ ಪ್ರತಿದಿನ ಒಂದು ಲೀಟರು ಹಾಲು ಸಿಕ್ಕುತ್ತದೆ ಎಂದು. ಈಗ ಒಂದು ಕವರಿನಲ್ಲಿ ನೂರೋ, ಇನ್ನೂರೋ ರೂಪಾಯಿಗಳನ್ನು ಹಾಕಿ "ಗೋದಾನ" ಎಂದು ಬಾಯಲ್ಲಿ ಹೇಳಿ, "ಕವರ್ ದಾನ" ಮಾಡುತ್ತಾರೆ. 

ಮನುಷ್ಯ ಸತ್ತ ಮೇಲೆ ಜೀವನು ಮುಂದೆ ಹೋಗುವ ದಾರಿಯಲ್ಲಿ "ವೈತರಣೀ" ಎನ್ನುವ ಹೆಸರಿನ ನದಿ ಇದೆಯಂತೆ. ಅದು ನಾವು ಕೇಳಿದ, ನೋಡಿದ ಎಲ್ಲ ನೀರು ಹರಿಯುವ ನದಿಗಳಂತಲ್ಲ. ಕೀವು, ರಕ್ತ, ಹೇಳಬಾರದ, ಹೇಳಲಾಗದ ಕೊಳಕು ತುಂಬಿ ಹರಿಯುವ ನದಿ. ಜೀವಿಯು ಅದನ್ನು ದಾಟಬೇಕು. ದಾಟಿಯೇ ಮುಂದೆ ಹೋಗಬೇಕು. ತನ್ನ ಜೀವಿತ ಕಾಲದಲ್ಲಿ ಗೋದಾನ ಮಾಡಿದ್ದರೆ ಆ ನದಿಯ ದಂಡೆಗೆ ಹೋದಾಗ ಅಲ್ಲಿ ಗೋವೊಂದು ಕಾಣಿಸಿಕೊಳ್ಳುತ್ತದಂತೆ. ಅದರ ಬಾಲವನ್ನು ಹಿಡಿದುಕೊಂಡರೆ ಅದು ಮೇಲೆ ಹಾರಿ ಜೀವಿಯನ್ನು ಈ ನದಿಯ ಇನ್ನೊಂದು ದಡ ಸೇರಿಸುತ್ತದಂತೆ. ಅವರು ಗೋದಾನ ಮಾಡಲಿಲ್ಲ. ಈಗ ಅವರ ಮನೆಯವರು ಮಾಡಿದರೆ ಅವರು ಮಾಡಿದಂತೆಯೇ ಆಗಿ ಬದಲಿ ಗೋವು ವೈತರಣಿಯ ದಡದಲ್ಲಿ ನಿಂತಿರುವ ಆ ಜೀವಿಗೆ ಸಿಗುತ್ತದೆ. ಶ್ರಮವಿಲ್ಲದೆ, ಸುಖವಾಗಿ ವೈತರಣೀ ದಾಟಿಸುತ್ತದೆ. ಜೀವಿಗೆ ಸದ್ಗತಿ ಸಿಗುತ್ತದೆ. ಹೀಗೆ ನಂಬಿಕೆಗಳು. 

ನಮ್ಮ ಪದ್ಧತಿಗಳಲ್ಲಿ ಐದು ವಿಧದ ಗೋದಾನಗಳಿವೆ. "ವೈತರಣೀ ಗೋದಾನ" ಐದು ವಿಧದ ಗೋದಾನಗಳಲ್ಲಿ ಒಂದು. ಅದೊಂದೇ ಅಲ್ಲ.  ಋಣ ಗೋದಾನ, ಅಂತರ್ಧೇನು ಗೋದಾನ, ಉತ್ಕ್ರಾಂತಿ ಗೋದಾನ, ವೈತರಣೀ ಗೋದಾನ ಮತ್ತು ಮೋಕ್ಷಧೇನು ಗೋದಾನ ಎಂದು ಐದು ವಿಧಗಳು. ಹೆಚ್ಚಿನ ವಿವರಗಳು ಬೇಕಿದ್ದಲ್ಲಿ ಇಲ್ಲಿ ಕ್ಲಿಕ್ ಮಾಡಿ ಇಂಗ್ಲಿಷಿನಲ್ಲಿ ಓದಬಹುದು. 

*****

ಕನ್ನಡ ಸಿನಿಮಾ ಪ್ರಿಯರು 1962-63 ಇಸವಿಯಲ್ಲಿ ಬಿಡುಗಡೆಯಾದ "ಮನ ಮೆಚ್ಚಿದ ಮಡದಿ" ಎನ್ನುವ ಚಲನಚಿತ್ರವನ್ನು ನೋಡಿರುತ್ತಾರೆ. ಚಿತ್ರ ಈಗಲೂ ಯೂಟ್ಯೂಬಿನಲ್ಲಿ ಲಭ್ಯವಿದೆ. ಆಸಕ್ತರು ನೋಡಬಹುದು. ಕಡಿಮೆ ಖರ್ಚಿನಲ್ಲಿ ಕನ್ನಡ ಸಿನಿಮಾ ನಿರ್ಮಿಸುತ್ತಿದ್ದ ಕಾಲ. ಪ್ರಾಯಶಃ ಒಂದೇ ಕ್ಯಾಮರಾ, ಎರಡು ಸೆಟ್ಟುಗಳು (ಪಟ್ಟಣದ ಒಂದು ಮನೆ ಮತ್ತು ಹಳ್ಳಿಯ ಒಂದು ಮನೆ), ಸ್ವಲ್ಪವೇ ಹೊರಾಂಗಣ ಚಿತ್ರೀಕರಣ, ಕಪ್ಪು-ಬಿಳುಪು ಚಿತ್ರವಾದದ್ದರಿಂದ ಹೆಚ್ಚಿನ ಬಟ್ಟೆ-ಬರೆ  ಬೇಕಿಲ್ಲ, ಹೀಗೆ ಚಿತ್ರೀಕರಣ. ಒಂದು ರೀತಿ ಹಳೆಯ ಕಂಪನಿ ನಾಟಕ ಚಿತ್ರೀಕರಣ ಮಾಡಿದಂತಿರುತ್ತಿತ್ತು. 

ಶ್ರೀನಾಥ ಎನ್ನುವ ಹಳ್ಳಿಯ ಹುಡುಗನೊಬ್ಬ (ರಾಜಕುಮಾರ್) ಪಟ್ಟಣದ ಶ್ರೀಮಂತ ದೇವರಾಜಯ್ಯನ (ಉದಯ ಕುಮಾರ್) ಮನೆಗೆ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ "ಪೇಯಿಂಗ್ ಗೆಸ್ಟ್'" ಆಗಿ ಬರುತ್ತಾನೆ. ಶ್ರೀನಾಥ ಮತ್ತು ದೇವರಾಜಯ್ಯನ ಹಿರಿಯ ಮಗಳು ಸುಮನ  (ಲೀಲಾವತಿ) ಅನುರಕ್ತರಾಗಿ ಹಿರಿಯರ ಇಚ್ಛೆಯ ವಿರುದ್ಧ ಮದುವೆಯಾಗುತ್ತಾರೆ. ಬಡತನದ ಜೀವನ. ಒಮ್ಮೆ ಶ್ರೀನಾಥ ತನ್ನ ಸ್ನೇಹಿತನ್ನು (ನರಸಿಂಹರಾಜು) ಹಠಾತ್ತಾಗಿ ಮನೆಗೆ ಊಟಕ್ಕೆ ಕರೆತರುತ್ತಾನೆ. ಮನೆಯಲ್ಲಿ ಅಡಿಗೆಗೆ ಪದಾರ್ಥಗಳಿಲ್ಲ. ಸುಮನಾ ಮನೆಯ ಹಿತ್ತಿಲಿನಿಂದ ಪಕ್ಕದ ಮನೆಯಾಕೆಯನ್ನು ಕರೆದು ಒಂದು ಬಟ್ಟಲು ಸಾಸಿವೆ ಮತ್ತು ಒಂದು ಸ್ವಲ್ಪ ಎಣ್ಣೆಯನ್ನು ಎರವಲು ಕೇಳುತ್ತಾಳೆ. ಆಕೆ ತನ್ನ ಮಗಳನ್ನು ಕರೆದು ತೋಟದಿಂದ ತರಕಾರಿ ಮತ್ತು ಇತರ ಸಾಮಾನುಗಳನ್ನು ತರಿಸಿ ಹಿತ್ತಿಲಿನಿಂದಲೇ ಕೊಡುತ್ತಾಳೆ. ಅಡಿಗೆ ಮುಗಿದು, ಎಲ್ಲರ ಊಟ ನಡೆದು ಸಂಸಾರದ ಮರ್ಯಾದೆ ಕಾಪಾಡಿಕೊಳ್ಳುತ್ತಾರೆ. 

ಇಂದಿನ ಪೀಳಿಗೆಗೆ ಇಂಥದೊಂದು ರೀತಿಯ ಜೀವನವಿತ್ತು ಎನ್ನುವ ಕಲ್ಪನೆಯೂ ಇರುವುದಿಲ್ಲ. ಈ ರೀತಿ ಅಕ್ಕ-ಪಕ್ಕದ ಮನೆಯ ಗೃಹಿಣಿಯರ ಪರಸ್ಪರ ಸಹಕಾರದಿಂದ ಗೃಹಕೃತ್ಯ ನಡೆಯುತ್ತಿತ್ತು. ಈಗ ಕ್ರೆಡಿಟ್ ಕಾರ್ಡ್, ಡೋರ್ ಡೆಲಿವರಿ ಮುಂತಾದುವುಗಳು ಇರುವುದರಿಂದ ಹಳೆಯ ಸಹಕಾರಿ ಮನೋಭಾವ ಮರೆತೇಹೋಗಿದೆ. ಪದಾರ್ಥಗಳೇನು, ತಯಾರಾದ ತಿಂಡಿ-ತಿನಿಸುಗಳೇ  ನಿಮಿಷಗಳಲ್ಲಿ ಹಾಜರಾಗುವಾಗ ಹೀಗೆ ಸಣ್ಣ-ಪುಟ್ಟ ಪದಾರ್ಥಗಳ ಕಡ ಪಡೆಯುವಿಕೆ ಅವಶ್ಯಕತೆಯೂ ಇಲ್ಲ. 

ಹೀಗೆ ತೆಗೆದುಕೊಂಡ ಪದಾರ್ಥಗಳನ್ನು ಮತ್ತೆ ಎಂದಾದರೂ ಹಿಂದಿರುಗಿಸುತ್ತಿದ್ದರು. ಕುರ್ಚಿಗಳು, ಪಾತ್ರೆಗಳು, ಮುಂತಾದವನ್ನೂ ಸಮಯ ಬಂದಾಗ ಪಡೆಯುವ ಅಭ್ಯಾಸವೂ ಇತ್ತು. ಹೆಣ್ಣು ನೋಡಲು ಬಂದಾಗ ಚಿನ್ನದ ಸರ, ಬಳೆಗಳನ್ನು ಈ ರೀತಿ ಕೆಲವರು ತರುತ್ತಿದ್ದುದೂ ಇತ್ತು. ಹಾಗೆ ಹಿಂದಿರುಗಿ ಕೊಡುವಾಗ "ಕೊಟ್ಟಿದ್ದೇನೆ. ಕೊಟ್ಟಿದ್ದೇನೆ!" ಎಂದು ಎರಡೆರಡು ಸಲ ಹೇಳುತ್ತಿದ್ದರು. ಪದಾರ್ಥಗಳಲ್ಲಿ ಹಿಂದಿರುಗಿಸುವಾಗ ಸ್ವಲ್ಪ ಹೆಚ್ಚು-ಕಡಿಮೆ ಇದ್ದರೂ ಎರಡು ಮನೆಯವರೂ ಚಿಂತಿಸುತ್ತಿರಲಿಲ್ಲ. "ತೆಗೆದುಕೊಂಡಾಗ ಲೋಟದ ತುಂಬಾ. ಹಿಂದಿರುಗಿಸಿದಾಗ ತಲೆ ಒಡೆದು" (ಅಳತೆ ಕಡಿಮೆ) ಎಂದು ಮನೆಯ ಕೆಲವು ಸದಸ್ಯರು ಹಾಸ್ಯ ಮಾಡಿದರೆ ಹಿರಿಯರು ಸುಮ್ಮನಿರುವಂತೆ ಹೇಳುತ್ತಿದ್ದರು. ಆದರೆ ಬೆಲೆಬಾಳುವ ವಸ್ತು, ಆಭರಣಗಳಾದರೆ "ಕೊಟ್ಟಿದ್ದೇನೆ. ಕೊಟ್ಟಿದ್ದೇನೆ! ಜೋಪಾನ. ಭದ್ರ!" ಎಂದು ಹೇಳುತ್ತಿದ್ದರು. "ಜೋಪಾನ ಅಥವಾ ಜೋಕೆ" ಎಂದು ಗಮನ ಸೆಳೆಯುವುದು  ಮುಖ್ಯವಾಗಿರುತ್ತಿತ್ತು. 

*****

ಇನ್ನೊಬ್ಬರ ವಸ್ತುವನ್ನು ಅವರು ತಾವಾಗಿ ಕೊಟ್ಟರೆ ಅದು ಅವರು ಕೊಟ್ಟಂತೆ. "ದಾನವಾಗಿ ಕೊಡುತ್ತಿದ್ದೇನೆ" ಎಂದು ಸಂಕಲ್ಪ ಮಾಡಿ ಕೊಟ್ಟರೆ ಆಗ ಅದು "ದಾನ". ಅವರಿಗೆ ಗೊತ್ತಿಲ್ಲದಂತೆ ನಾವು ತೆಗೆದುಕೊಂಡರೆ ಅದು "ಚೌರ್ಯ". ಕಳ್ಳತನ ಎಂದರೆ ಅಮಾವಾಸ್ಯೆಯ ರಾತ್ರಿಯಲ್ಲಿ ಕನ್ನ ಹಾಕಿಯೋ, ಬಸ್ಸಿನಲ್ಲಿ ಜೇಬು ಕತ್ತರಿಸಿಯೋ, ಮತ್ತಿದೇತರಹ  ತೆಗೆದುಕೊಂಡರೆ ಮಾತ್ರವಲ್ಲ. 

ನಮ್ಮ ಜೀವನದಲ್ಲಿ ನಾವು ಅನೇಕ ಬಾರಿ ಬೇರೆಯವರಿಂದ ಸಣ್ಣ-ಪುಟ್ಟ ಪ್ರಮಾಣದಲ್ಲಿ ಪದಾರ್ಥಗಳನ್ನೋ, ಹಣವನ್ನೋ ಪಡೆಯುತ್ತೇವೆ. ಅದನ್ನು ಕೊಡುವವರೂ "ಸಾಲ" ಎಂದು ಪರಿಗಣಿಸುವುದಿಲ್ಲ. ತೆಗೆದುಕೊಂಡವರು ಹಿಂದಿರುಗಿಸಲು ಮರೆತರೂ ಲೆಕ್ಕವಿಲ್ಲ. ಉದಾಹರಣೆಗೆ ದೇವಸ್ಥಾನದಲ್ಲಿ ಮಂಗಳಾರತಿ ಬಂತು. ತಟ್ಟೆಗೆ ಕಾಸು ಹಾಕದೆ ಮಂಗಳಾರತಿ ತೆಗೆದುಕೊಳ್ಳಬಾರದು ಎಂದು ಒಂದು ಅಭ್ಯಾಸ. ಜೇಬಿನಲ್ಲಿ ಬರಿ ದೊಡ್ಡ ಮೊತ್ತದ ನೋಟುಗಳೇ ತುಂಬಿವೆ. ಒಂದು ರೂಪಾಯಿ ನಾಣ್ಯವಿಲ್ಲ. ದೇವರಿಗೇನೂ ನಮ್ಮ ಕಾಸು ಬೇಕಿಲ್ಲ. ಆದರೆ ಅರ್ಚಕರಿಗೆ ಬೇಕು. ಪಕ್ಕದ ಮನೆಯವರು ಜೊತೆಯಲ್ಲಿದ್ದಾರೆ. ನಾವು ಪರದಾಡುವುದನ್ನು ಕಂಡು ಅವರು ಒಂದು ರೂಪಾಯಿ ನಾಣ್ಯ ಕೊಟ್ಟರು. "ಆಮೇಲೆ ಕೊಡುತ್ತೇನೆ" ಎಂದು ತೆಗೆದುಕೊಂಡವರು ಹೇಳಿದರು. "ಅಯ್ಯೋ, ಪರವಾಗಿಲ್ಲ" ಎಂದು ಅವರು ಹೇಳಿದರು. ಆಮೇಲೆ ಮರೆತು ಹೋಯಿತು. ಬಸ್ಸಿನಲ್ಲಿ ಟಿಕೇಟು ತೆಗೆದುಕೊಳ್ಳಲು ಸಣ್ಣ ಚಿಲ್ಲರೆ ಬೇಕು. ಜೊತೆಯಲ್ಲಿದ್ದ ಸ್ನೇಹಿತರು ಕೊಟ್ಟರು. ಅದನ್ನು ಹಿಂದಿರುಗಿಸಲಿಲ್ಲ. ಹಣ್ಣಿನಂಗಡಿಯಲ್ಲಿ ಕೊಂಡದ್ದು ನೂರಾಐದು ರೂಪಾಯಿ ಹಣ್ಣುಗಳು. ಐದು ರೂಪಾಯಿ ಚಿಲ್ಲರೆ ಇಲ್ಲ. "ನಾಳೆ ಕೊಡಿ. ಪರವಾಗಿಲ್ಲ" ಅಂದಳು ಹಣ್ಣು ಮಾರುವ ಮುದುಕಿ. ನಂತರ ಅವಳ ಅಂಗಡಿಗೆ ಹೋಗಲೇ ಇಲ್ಲ. ಹೀಗೆ ನೂರಾರು. 

ನಮ್ಮ ಜೀವನದಲ್ಲಿ ಹೀಗೆ ಅನೇಕ ಸಾರಿ ಆಗುತ್ತದೆ. ಅವರೆಲ್ಲರ "ಋಣಭಾರ" ಈಗ ನಮ್ಮ ತಲೆಯ ಮೇಲೆ ಕುಳಿತಿದೆ. ನಮ್ಮ ಜೀವನ ಯಾತ್ರೆ ಮುಗಿಯುವ ಕಾಲ. ಅವರೆಲ್ಲರನ್ನು ಹುಡುಕಿಕೊಂಡು ಹೋಗಿ ಈಗ ಕೊಡಲು ಬರುವುದಿಲ್ಲ. ಋಣಭಾರದಿಂದ ಜೀವನ ಮುಗಿಸಲು ಇಷ್ಟವಿಲ್ಲ. ಆದದ್ದರಿಂದ ಇಂತಹ ಎಲ್ಲ ಭಾರಗಳನ್ನು ಒಂದೇ ಬಾರಿ ಮುಗಿಸಲು ಕೊಡುವುದು "ಋಣ ಗೋದಾನ" ಎನಿಸುತ್ತದೆ. ಇಂತಹ ಒಂದು ಗೋದಾನದಿಂದ ಎಲ್ಲ ಚಿಲ್ಲರೆ ಸಾಲಗಳು ತೀರಿಸಿದಂತೆ. 

*****

ದಾನಗಳನ್ನು ಕೊಡುವಾಗ "ದತ್ತಂ, ನಮಮ, ನಮಮ" ಎಂದೋ, "ತುಭ್ಯಮಹಂ ಸ೦ಪ್ರತತೇ, ನಮಮ, ನಮಮ" ಎಂದು ಹೇಳುತ್ತಾರೆ. ಅದು ನಮ್ಮಮ್ಮನೂ ಅಲ್ಲ. ಅವರಮ್ಮನೂ ಅಲ್ಲ. "ಮಮ" ಎಂದರೆ ನನ್ನದು. ನಮಮ ಎಂದರೆ ನನ್ನದಲ್ಲ. "ಈ ಪದಾರ್ಥ ಇಲ್ಲಿಯವರೆಗೆ ನನ್ನದಾಗಿತ್ತು. ಈಗ ನಿಮಗೆ ಕೊಟ್ಟಿದ್ದೇನೆ. ಇನ್ನು ಮುಂದೆ ಇದು ನನ್ನದಲ್ಲ. ನಿಮ್ಮದು. ನಿಮಗೆ ಬೇಕಿದ್ದಂತೆ ವಿನಿಯೋಗಿಸಬಹುದು" ಎಂದು ಹೇಳುವುದು ಅದು. "ಕೊಟ್ಟಿದ್ದೇನೆ. ಕೊಟ್ಟಿದ್ದೇನೆ", "ನನ್ನದಲ್ಲ, ನನ್ನದಲ್ಲ" ಎಂದು ಹೇಳುವುದು. ಒಂದಲ್ಲ. ಎರಡು ಸಾರಿ!

ಈ ರೀತಿ ಅನೇಕ ಕೆಲಸಗಳಿಗೆ ದಾನ ಕೊಡುವಾಗ "ಗೋದಾನ" ಎಂದೇಕೆ? ಬೇರೆ ಏನಾದರೂಎಕೆ ಆಗಬಾರದು? ಒಂದು ಕುರಿ ಅಥವಾ ಮೇಕೆ ಕೊಟ್ಟರೆ? ಬೇಡಪ್ಪ, ಒಂದು ಆನೆಯನ್ನೇ ಕೊಟ್ಟರೆ ಹೇಗೆ? ಅಥವಾ ಒಂದು ಚಿನ್ನದ ಸಣ್ಣದೋ ಅಥವಾ ಹಣವಿದ್ದರೆ ದೊಡ್ಡದೋ ಬಿಸ್ಕತ್ತು. ಆಗಬಾರದೇ?

ದೇವುಡು ನರಸಿಂಹ ಶಾಸ್ತ್ರಿಗಳು ತಮ್ಮ ಕಾದಂಬರಿಯೊಂದರಲ್ಲಿ ಇದಕ್ಕೆ ಉತ್ತರ ಸೂಚಿಸಿದ್ದಾರೆ. ಚ್ಯವನ ಋಷಿಗಳು ಜಲಾಶಯದ ಬುಡದಲ್ಲಿ ಶ್ವಾಸ ಬಂಧಿಸಿ ಅನೇಕ ವರುಷ ತಪಸ್ಸು ಮಾಡಿದ್ದಾರೆ. ಕೂದಲು, ಉಗುರುಗಳು ಅಡ್ಡಾದಿಡ್ಡಿ ಬೆಳೆದು, ದೇಹ ಕೃಶವಾಗಿದೆ. ಬೆಸ್ತರು ಮೀನು ಹಿಡಿಯಲು ಹಾಕಿದ ಬಲೆಯಲ್ಲಿ ಸಿಕ್ಕಿಬಿದ್ದರು. ಹೊರಗೆ ತಂದಾಗ ತಪಸ್ವಿ ಮನುಷ್ಯ ಎಂದು ಬೆಸ್ತರ ನಾಯಕನಿಗೆ ಗೊತ್ತಾಯಿತು. ಏನೂ ಮಾಡಲು ತೋಚದೆ ರಾಜನ ಬಳಿಗೆ ಅವರನ್ನು ಕರೆತರುತ್ತಾರೆ. ಚ್ಯವನರು ರಾಜನಿಗೆ "ನಾನು ಈಗ ಅವರ ಸ್ವತ್ತು. ಅವರಿಗೆ ನನ್ನ ಮೌಲ್ಯ (ಸಮನಾದ ಬೆಲೆ) ಕೊಟ್ಟು ನನ್ನನ್ನು ಬಿಡಿಸಿಕೊ" ಎನ್ನುತ್ತಾರೆ. ಬೆಸ್ತರ ನಾಯಕ "ನಮಗೆ ಏನೂ ಬೇಡ ಬುದ್ಧಿ. ದೊಡ್ಡವರು ನಮಗೆ ಶಾಪ ಕೊಡದಿದ್ದರೆ ಸಾಕು. ಅಪಚಾರವಾಯಿತು" ಅನ್ನುತ್ತಾನೆ. ರಾಜನಿಗೆ ಏನು ಮಾಡಬೇಕೆಂದು ತೋಚುವುದಿಲ್ಲ. ರಾಜಪುರೋಹಿತರನ್ನು ಕೇಳುತ್ತಾನೆ. ರಾಜಪುರೋಹಿತರು ಹೇಳುತ್ತಾರೆ. "ಬ್ರಹ್ಮಜ್ಞಾನಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಹಾಗೆಯೇ ಗೋವಿಗೂ ಬೆಲೆ ಕಟ್ಟಲು ಸಾಧ್ಯವಿಲ್ಲ" ಎಂದು. ರಾಜನು ಚಿನ್ನದ ಕೊಂಬಿನಿಂದ ಅಲಂಕರಿಸಿದ ಒಂದು ಸಾವಿರ ಹಸುಗಳನ್ನು ಕೊಡುತ್ತಾನೆ. ಚ್ಯವನರು ಸಂತುಷ್ಟರಾಗುತ್ತಾರೆ.  

ಮನುಷ್ಯನಿಗೆ, ಗಂಡಾಗಲಿ ಅಥವಾ ಹೆಣ್ಣಾಗಲಿ, ತಾಯಿಯು ಕೆಲವು ತಿಂಗಳು ಹಾಲು ಉಣಿಸುತ್ತಾಳೆ. ಆದರೆ, ಜೀವನ ಪೂರ್ತಿ ಹಸುವಿನ ಹಾಲು ಬೇಕಾಗುತ್ತದೆ. ಅದಕ್ಕೆ ಅದು ಬರೀ ಗೋವಲ್ಲ. "ಗೋಮಾತೆ" ಆಗುತ್ತಾಳೆ. ಹಸುವಿನ ಹಾಲಿನಿಂದಲೇ ಮುಂದೆ ಮೊಸರು, ಮಜ್ಜಿಗೆ, ಬೆಣ್ಣೆ ಮತ್ತು ತುಪ್ಪ. ಇವೆಲ್ಲಾ ಜೀವನ ನಿರ್ವಹಣೆಗೆ, ಹವನ-ಹೋಮಗಳಿಗೆ, ಎಲ್ಲಕ್ಕೂ ಬೇಕು. ಅದರ ಗೋಮೂತ್ರ-ಗೋಮಯಗಳಿಗೂ ಬೆಲೆ ಉಂಟು. ಗೋವಿಗೆ ಬೆಲೆ ಕಟ್ಟಲಾಗುವುದಿಲ್ಲ. ಒಂದು ಗೋದಾನದಿಂದ, ಬೆಲೆ ಕಟ್ಟಲಾಗದ ಆ ಹಸುವಿನಿಂದ, ಎಲ್ಲ ಸಾಲಗಗಳೂ ತೀರಿದಂತೆಯೇ ಅಲ್ಲವೇ? 

*****

ತೆಂಗಿನ ಸಸಿಗೆ ಅದು ಚಿಕ್ಕದಿದ್ದಾಗ ಯಾರೋ ಕೆಲವು ಗಡಿಗೆ ನೀರು ಉಣಿಸುತ್ತಾರೆ. ನಂತರ ಅನೇಕ ದಶಕಗಳ ಕಾಲ ಆ ತೆಂಗಿನ ಮರ ಕೃತಜ್ಞತೆಯಿಂದ ಭೂಮಿಯ ಮೇಲೆ ಸಿಗಬಹುದಾದ ಅತ್ಯಂತ ಸಿಹಿಯಾದ, ಶುದ್ಧವಾದ ನೀರನ್ನು ತನ್ನ ತಲೆಯ ಮೇಲೆ ಹೊತ್ತು ಬೇರೆಯವರಿಗೆ ಕೊಡಲು ನಿಂತಿರುತ್ತದೆ. ಕವಿಗಳು ಕೃತಜ್ಞತೆಗೆ ಇದನ್ನು ಅತ್ಯುತ್ತಮ ಉದಾಹರಣೆ ಅನ್ನುತ್ತಾರೆ. ಉಪ್ಪುನೀರು ಕುಡಿದು ಸಿಹಿ ನೀರು ಕೊಡುವ ತೆಂಗು ಮತ್ತು ಹುಲ್ಲು ತಿಂದು ಹಾಲು ಕೊಡುವ ಹಸುಗಳು ಈ ರೀತಿ ಬೆಲೆ ಕಟ್ಟಲಾಗದ ವಸ್ತುಗಳಿಗೆ ಉದಾಹರಣೆಗಳು. 

ಕೃತಜ್ಞತೆ ಅನ್ನುವುದು ಮನುಷ್ಯನಲ್ಲಿ ಇರಲೇಬೇಕಾದ ಗುಣಗಳಲ್ಲಿ ಮೊದಲ ಸಾಲಿನಲ್ಲಿ ನಿಲ್ಲುತ್ತದೆ.

ಬಾಲ್ಯದಲ್ಲಿ ಓದಿದ "ಬೇಡ ಮತ್ತು ಆನೆ" ಎಂಬ ಬೋಧಿಸತ್ವನ ಕಥೆಯ ಕೊನೆಯ ಸಾಲುಗಳು:

ಆಸೆಯೆಂಬ ಭೂತ ಹಿಡಿದು ಬೇಡ ನೆಲದೊಳಿಳಿದನು 
ಆಸೆಬಿಟ್ಟು ದಾನ ಕೊಟ್ಟು ಸಲಗ ಸ್ವರ್ಗಕೇರಿತು! 
ಉಪಕಾರ ಸ್ಮರಣೆಯಲಿ, ಪ್ರ್ರೇತಿ-ದಯೆ-ಕರುಣೆಯಲಿ 
ಪ್ರಾಣಿಗಳೇ ಬಲು ಮೇಲು; ಕೆಲಜನರು ಬಲು ಕೀಳು!

Friday, August 29, 2025

ಸಾವು ಎದುರಲ್ಲಿ ಬಂದು ನಿಂದಾಗ


ಅರ್ಜುನನ ಮೊಮ್ಮಗ, ಅಭಿಮನ್ಯುವಿನ ಮಗ, ಪರೀಕ್ಷಿತ ಮಹಾರಾಜನಿಗೆ ಋಷಿಕುಮಾರ ಶೃಂಗಿಯ ಶಾಪದ ವಿಚಾರ ಗೊತ್ತಾಯಿತು. ಈಗ ಬದುಕಿನಲ್ಲಿ ಇನ್ನುಳಿದಿದ್ದು ಕೇವಲ ಏಳು ದಿನಗಳು. ಜೀವನದ ಕೊನೆಗಾಲ ಬಂದಿದೆ. ಸಾವು ಎದುರಲ್ಲಿ ಬಂದು ನಿಂತಿದೆ. ತಪ್ಪಿಸಿಕೊಳ್ಳುವಹಾಗಿಲ್ಲ. ಯೋಚನೆ ಮಾಡುತ್ತಿದ್ದಷ್ಟೂ ಸಮಯ ಸೋರಿಹೋಗುತ್ತಿದೆ. ಇರುವ ಸಮಯ ಸದುಪಯೋಗ ಮಾಡಿಕೊಳ್ಳಬೇಕು. ಅವನ ಪುಣ್ಯಕ್ಕೆ ವೇದವ್ಯಾಸ ಪುತ್ರರಾದ ಶುಕಾಚಾರ್ಯ ಅದೇ ಸಮಯಕ್ಕೆ ಬಂದರು. ಪರೀಕ್ಷಿತನಿಗೆ ಜೀವನದಲ್ಲಿ ಉಳಿದ ಏಳು ದಿನಗಳಲ್ಲಿ ಹೇಗೆ ಮತ್ತೆ ಮತ್ತೆ ಕಾಡುವ ಜೇವನ-ಮರಣ ಚಕ್ರದಿಂದ ಮುಕ್ತಿ ಪಡೆಯುವುದು ಎಂಬ ಚಿಂತೆ. "ಇಷ್ಟು ಕಡಿಮೆ ಕಾಲದಲ್ಲಿ ಹೇಗೆ ಇಂತಹ ಸಾಧನೆ ಸಾಧ್ಯ?" ಎಂದು ಅವರನ್ನು ಕೇಳಿದ. 

"ನೀನು ಭಾಗ್ಯವಂತ. ನಿನಗೆ ಏಳು ದಿನಗಳ ಕಾಲ ಬಾಕಿ ಇದೆ. ಅದಕ್ಕಿಂತ ಹೆಚ್ಚಾಗಿ, ಇಷ್ಟು ಕಾಲ ಇದೆ ಎಂದೂ ಗೊತ್ತಿದೆ!"
"ತಮ್ಮ ಅಭಿಪ್ರಾಯ ದಯಮಾಡಿ ವಿವರಿಸಬೇಕು"
"ಅನೇಕರಿಗೆ ಎಷ್ಟು ಕಾಲ ಜೀವಿತ ಉಳಿದಿದೆ ಎಂದು ಗೊತ್ತಿರುವುದಿಲ್ಲ. ನಿನಗೆ ಅದು ಖಚಿತವಾಗಿ ಗೊತ್ತಾಯಿತು"
"ಇದು ಒಳ್ಳೆಯದೇ?"
"ಹೇಗೆ ಯೋಚಿಸಿದರೆ ಹಾಗೆ. 'ಅಯ್ಯೋ! ಏಳೇ ದಿನವೇ ಅನ್ನಬಹುದು.' ಅಥವಾ 'ಸದ್ಯ! ಏಳು ದಿನ ಇವೆಯಲ್ಲ' ಅನ್ನಬಹುದು"
"ಹಾಗಿದ್ದರೆ ಇಷ್ಟು ಕಡಿಮೆ ಅವಧಿಯಲ್ಲಿ ಮುಕ್ತಿ ಸಾಧಿಸಬಹುದೇ?"
"ಕೇವಲ ಒಂದು ಮುಹೂರ್ತ ಕಾಲದಲ್ಲಿ ಸಾಧಿಸಿದವರಿದ್ದಾರೆ"
"ಹೌದೇ? ಆ ಬಗ್ಗೆ ಕೃಪೆಮಾಡಿ ತಿಳಿಸಿಕೊಡಿ" 

ಶುಕಾಚಾರ್ಯರು ಪರೀಕ್ಷಿತ ಮಹರ್ರಾಜನಿಗೆ ಈ ವಿಷಯವನ್ನು ವಿವರಿಸಿದರು. ಹೇಳಿದ್ದು ಪರೀಕ್ಷಿತ ಮಹಾರಾಜನಿಗೆ. ಆದರೆ ಅದು ಎಲ್ಲರಿಗೂ ಸಂಬಂಧಿಸಿದ್ದು. ಅವನ ಮೂಲಕ ಸರ್ವರಿಗೂ ತಿಳುವಳಿಕೆ ಕೊಟ್ಟದ್ದು. 

*****

ದೇವತೆಗಳಿಗೂ ಅಸುರರಿಗೂ ತೀರದ ಹಗೆ. ಆಗಾಗ ಜಗಳಗಳು. ದೇವತೆಗಳಿಗೆ ಅಮೃತಪಾನದ ಬಲದಿಂದ ಸಾವಿಲ್ಲದಿದ್ದರೂ ಸೋಲಿಲ್ಲದಿಲ್ಲ. ಅಸುರ ಸಂತಾನದಲ್ಲಿ ಕಾಲಕಾಲಕ್ಕೆ ಪ್ರಬಲರು ಹುಟ್ಟುವರು. ಅವರು ಬಹಳ ಶ್ರಮಪಟ್ಟು ಬ್ರಹ್ಮನನ್ನೋ, ರುದ್ರನನ್ನೋ ಮೆಚ್ಚಿಸುವರು. ಆ ಮೂಲಕ ವರಗಳನ್ನು ಸಂಪಾದಿಸುವರು. ಕೆಲ ಕಾಲ ಅವುಗಳಿಂದ ಬಲಿಷ್ಠರಾಗುವರು. ಆ ಮದದಿಂದ ದೇವತೆಗಳ ಮೇಲೆ ದಂಡೆತ್ತಿ ಬರುವರು. ಯುದ್ಧಗಳಾಗುವುವು. ಹೀಗೆ ನಡೆಯುತ್ತಾ ಇರುವುದು. ಕೆಲವು ವೇಳೆ ಹೀಗೆ ಯುದ್ಧವಾಗುವಾಗ ದೇವತೆಗಳು ಭೂಲೋಕದಲ್ಲಿರುವ ಪ್ರಬಲರಾದ ರಾಜರ ಸಹಾಯ ಕೇಳುವರು. ಆ ರಾಜರು ಕರ್ತವ್ಯವೆಂದೂ, ಧರ್ಮದ ಪರ ಎಂದೂ ದೇವತೆಗಳಿಗೆ ಯುದ್ಧಗಳಲ್ಲಿ ಸಹಾಯ ಮಾಡುವರು. ಹೀಗೆ ಯುದ್ಧಗಳಲ್ಲಿ ಸಹಾಯ ಮಾಡಿದ ರಾಜರುಗಳಿಗೆ ದೇವತೆಗಳು ವರಗಳನ್ನೋ, ಸಂಪತ್ತನ್ನೊ, ಭೋಗ-ಭಾಗ್ಯಗಳನ್ನೋ ಸಂತೋಷದಿಂದ ಕೊಡುವರು. 

ಅನೇಕ ವೇಳೆ ಇಂತಹ ಸಹಾಯಗಳಿಂದ ದೇವತೆಗಳು ಅಸುರರನ್ನು ಕದನದಲ್ಲಿ ಸೋಲಿಸಿ ಓಡಿಸಿದುದು ನಡೆದಿದೆ. ಶ್ರೀರಾಮಚಂದ್ರನ ತಂದೆಯಾದ ದಶರಥನು ಸಹ ಹೀಗೆ ದೇವಾಸುರ ಯುದ್ಧದಲ್ಲಿ ದೇವತೆಗಳ ಸಹಾಯ ಮಾಡಲು ಹೋಗುತ್ತಿದ್ದನು. ಒಮ್ಮೆ ಹೀಗೆ ಹೋದಾಗ ತನ್ನ ಜೊತೆ ಚಿಕ್ಕ ರಾಣಿ ಕೈಕೆಯನ್ನು ಕರೆದೊಯ್ದ. ಯುದ್ಧದ ಮಧ್ಯೆ ರಥದ ಕಡಾಣಿ ಬಿದ್ದುಹೋದಾಗ ಕೈಕೆ ತನ್ನ ಬೆರಳನ್ನೇ ಕಡಾಣಿಯಾಗಿ ಮಾಡಿ, ನೋವು ಲೆಕ್ಕಿಸದೆ ರಥವನ್ನೂ, ದಶರಥನನ್ನೂ ಕಾಪಾಡಿದಳು. ಆಗ ಅವಳು  ಮಾಡಿದ ಉಪಕಾರಕ್ಕಾಗಿ ದಶರಥನು ತಾನೇ ಅವಳಿಗೆ ವರಗಳನ್ನು ಕೊಟ್ಟುದದರಿಂದ ಮುಂದೆ ರಾಮಾಯಣವೇ ನಡೆಯಿತು ಎನ್ನುವುದನ್ನು ನೆನಪಿಸಿಕೊಳ್ಳಬಹುದು. 

ಒಂದು ಸಮಯದಲ್ಲಿ ಭೂಲೋಕದಲ್ಲಿ ಖಟ್ವಾಂಗ ಎನ್ನುವ ರಾಜರ್ಷಿ ಆಳುತ್ತಿದ್ದ ಕಾಲ. ಬಹಳ ಪರಾಕ್ರಮಿಯೂ, ಧರ್ಮಿಷ್ಟನೂ ಆದ ಚಕ್ರವರ್ತಿ. ಅಸುರರೊಡನೆ ಯುದ್ಧದ ಪ್ರಸಂಗ ದೇವಗಳಿಗೆ ಬಂತು. ದೇವತೆಗಳು ಖಟ್ವಾಂಗನ ಸಹಾಯ ಕೇಳಿದರು. ಖಟ್ವಾಂಗ ಚಕ್ರವರ್ತಿಯು ಒಪ್ಪಿ ದೇವತೆಗಳ ಕಡೆಯಿಂದ ಹೋರಾಡಿದ. ದೇವತೆಗಳಿಗೆ ದೊಡ್ಡ ವಿಜಯವಾಯಿತು. ಖಟ್ವಾಂಗನ ಸಹಾಯಕ್ಕೆ ಅವರು ಕೃತಜ್ಞರಾದರು. 

"ರಾಜರ್ಷಿ ಖಟ್ವಾಂಗ, ನಿನ್ನ ಸಹಾಯದಿಂದ ನಮಗೆ ವಿಜಯವಾಯಿತು. ನಾವು ಬಹಳ ಸಂತುಷ್ಟರಾಗಿದ್ದೇವೆ. ನಿನಗೆ ಏನು ವರ ಬೇಕು? ಕೇಳು. ಧನ-ಕನಕಗಳೇ? ದೇವಲೋಕದ ಅಪೂರ್ವ ಭೋಗ-ಭಾಗ್ಯಗಳೇ? ಅಥವಾ ಮತ್ತೆ ಇನ್ನೇನಾದರೂ ಬೇಕೇ?"
"ನಿಮ್ಮ ಕೃಪೆಯಿಂದ ನನಗೆ ಎಲ್ಲವೂ ಪ್ರಾಪ್ತವಾಗಿವೆ. ನನಗೆ ಇವು ಯಾವುವೂ ಬೇಡ"
"ಹಾಗಿದ್ದರೆ ಇನ್ನೇನು ಕೊಡೋಣ?"
"ಕೊಡುವಹಾಗಿದ್ದಾರೆ ನನ್ನ ಶೇಷ ಆಯು ಪ್ರಮಾಣ ಎಷ್ಟು ಎನ್ನುವುದನ್ನು ತಿಳಿಸಿ"
"ಅದನ್ನು ತಿಳಿಯಬೇಕೇ? ಬೇರೇನೂ ಬೇಡವೇ?"
"ಅದನ್ನು ಹೇಳಿದರೆ ಸಾಕು. ಬೇರೇನೂ ಬೇಡ"
"ಈಗ ನಿನ್ನ ಅಆಯುಸ್ಸಿನಲ್ಲಿ ಒಂದು ಮುಹೂರ್ತ ಕಾಲ ಮಾತ್ರ ಉಳಿದಿದೆ"

ಖಟ್ವಾಂಗನಿಗೆ ಬಹಳ ಆಶ್ಚರ್ಯವಾಯಿತು. ಒಂದು ಮುಹೂರ್ತ ಅಂದರೆ ಎರಡು ಘಳಿಗೆಗಳ ಕಾಲ. ನಲವತ್ತೆಂಟು ನಿಮಿಷಗಳು ಮಾತ್ರ. ಇಂತಹ ಸಂದರ್ಭದಲ್ಲೂ ದೇವತೆಗಳು ಧನ-ಕನಕ, ಭೋಗ-ಭಾಗ್ಯಗಳ ಆಸೆ ತೋರಿಸುತ್ತಿದ್ದಾರೆ! 

ಖಟ್ವಾಂಗ ತಡಮಾಡದೆ ಹಿಂದಿರುಗಿದ. ಅರ್ಧ ಗಳಿಗೆಯಲ್ಲಿ ತನ್ನ ರಾಜ್ಯ-ಕೋಶಗಳಿಗೆ ಮುಂದಿನ ವ್ಯವಸ್ಥೆಗಳನ್ನು ಮಾಡಿ, ಧ್ಯಾನಮಗ್ನನಾಗಿ ದೇಹ ತ್ಯಜಿಸಿ ಮೋಕ್ಷ ಪಡೆದ!

*****

ಶ್ರೀಮದ್ಭಾಗವತದ (9.9.42) ಶ್ಲೋಕ ಖಟ್ವಾಂಗನ ವೃತ್ತಾಂತವನ್ನು ಹೀಗೆ ಹೇಳುತ್ತದೆ:

ಯೋ ದೇವೈರರ್ಥಿತೋ ಅವಧೀ: ಯುಧಿದುರ್ಜಯಃ 
ಮುಹೂರ್ತಮ್ ಆಯುರ್ಜ್ಞಾತ್ವೈತ್ಯ  ಸ್ವಪುರಂ ಸಂದಧೇ: ಪುನಃ  

ಖಟ್ವಾಂಗ ರಾಜರ್ಷಿಯು ಆಗ ಮಾಡಿದ ಒಂದು ಘಳಿಗೆಯ ಧ್ಯಾನದಿಂದಲೇ ಮೋಕ್ಷ ಸಿಕ್ಕಿತು ಎಂದು ತಪ್ಪು ತಿಳಿಯಬಾರದು.  ಅಡಿಗೆ ಮಾಡುವವರು ಅನೇಕ ಪದಾರ್ಥಗಳನ್ನು ಮಾಡಿ ಮಾಡಿ ಇಟ್ಟಿರುತ್ತಾರೆ. ಕಡೆಯಲ್ಲಿ ಸ್ವಲ್ಪ ಸಮಯದಲ್ಲಿ ಒಗ್ಗರಣೆ ತಯಾರು ಮಾಡಿ ಅವೆಲ್ಲದಕ್ಕೂ ಬೆರೆಸಿ ಅಡಿಗೆ ಮುಗಿಸುತ್ತಾರೆ. ಒಗ್ಗರಣೆಯಿಂದ ಅಡಿಗೆ ಆದದ್ದಲ್ಲ. ಒಗ್ಗರಣೆಯಿಂದ ಅದು ಮುಗಿಯಿತು. ಅದು ಕಡೆಯ ಹಂತ ಮಾತ್ರ. ಇದೂ ಹಾಗೆಯೇ. ಅನೇಕ ಕಾಲಗಳಲ್ಲಿ ಮಾಡಿದ್ದ ಸಾಧನೆಗೆ ಕೊನೆಯ ಕಳಸ ಈ ಒಂದು ಘಳಿಗೆಯಲ್ಲಿ ಮಾಡಿದ ಅಂತಿಮ ಧ್ಯಾನ. ಪರೀಕ್ಷಿತನಿಗೂ ಹೀಗೆಯೇ ಆಯಿತು. ಏಳು ದಿನಗಳ ಅಖಂಡ ಸಾಧನೆ ಶುಕ್ರಾಚಾರ್ಯರ ಮಾರ್ಗದರ್ಶನದಿಂದ ನಡೆಸಿ ಪರಮಪದವನ್ನು ಪಡೆದ.

ಅಜಾಮಿಳನ ಪ್ರಸಂಗದಲೂ ಹೀಗೆ ತಪ್ಪು ಕಲ್ಪನೆ ಇದೆ. ಮಾಡಬಾರದ್ದನ್ನೆಲ್ಲ ಮಾಡಿ, ಕಡೆಯ ಸಮಯದಲ್ಲಿ ಮಗನ ಮೋಹದಿಂದ ಅವನ ಹೆಸರಾದ "ನಾರಾಯಣ" ಎಂದು ಕೂಗಿ ಮೋಕ್ಷ ಪಡೆದ ಎಂದು ಕಥೆ. ನಾರಾಯಣ ಎಂದು ಕರೆದದ್ದರಿಂದ ಅವನಿಗೆ ಹಿಂದಿನ ಸಾಧನೆಗಳ ಸ್ಮರಣೆ ಬಂತು. ಮತ್ತೆ ಕೊನೆಯ ಹಂತದ ಸಾಧನೆ ಮುಗಿಸಿ ಪರಮಪದ ಪಡೆದ. ಇದರ ವಿವರಗಳೂ ಶ್ರೀಮದ್ ಭಾಗವತದಲ್ಲಿ ಇದೆ. (ಹೆಚ್ಚಿನ ವಿವರಗಳಿಗೆ "Ajamila's Cheque" ಎನ್ನುವ ಅಂಕಣವನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು). 

*****

"ಜಾತಸ್ಯ ಹಿ ಧ್ರುವಂ ಮೃತ್ಯು:" ಎನ್ನುವುದು ಎಲ್ಲರೂ ತಿಳಿದಿರುವ, ಎಲ್ಲರೊ ಮತ್ತೆ ಮತ್ತೆ ಹೇಳುವ ಮಾತು. ಹುಟ್ಟಿನೊಡನೆ ಬರುವ ಒಂದೇ ಪರಮ ಸತ್ಯವೆಂದರೆ ಸಾವು. ಮುಂದು ಹಾಕಲಾಗದ ಪ್ರಯಾಣದ ಕೊನೆಯ ನಿಲ್ದಾಣ ಅದು. ಇದು ಎಲ್ಲರಿಗೂ ಗೊತ್ತು. ಸಾವು ಎಂದೋ ಒಂದು ದಿನ ನಮ್ಮ ಮುಂದೆ ಬಂದು ನಿಲ್ಲುವ ಅಪರಿಚಿತ ಅಲ್ಲ. ನಾವು ಹುಟ್ಟಿದಂದೇ ಹುಟ್ಟಿ, ಅಂದಿನಿಂದ ನಮ್ಮ ಎದುರು ನಿಂತಿರುವ ಸತ್ಯ ಅದು. ಹುಟ್ಟಿದಾಗ ದೂರದಲ್ಲಿರುತ್ತದೆ. ಅದು ಅಲ್ಲೇ ನಿಂತಿರುತ್ತದೆ. ನಾವು ಮಾತ್ರ ಪ್ರತಿ ಕ್ಷಣ ಅದರ ಹತ್ತಿರ ಹತ್ತಿರ ಹೋಗುತ್ತಿರುತ್ತೇವೆ. ದಿನ, ಕಾಲ ಗೊತ್ತಿಲ್ಲದ ರಿಸರ್ವೇಶನ್ ಅದಕ್ಕೆ ಉಂಟು. 

ನಮ್ಮ ಕಣ್ಣುಗಳು ನಮಗೆ ಏನು ಇಷ್ಟವೂ ಅದನ್ನೇ ತೋರಿಸುತ್ತವೆ. ಇಷ್ಟವಿಲ್ಲದ್ದನ್ನು ಮುಚ್ಚಿಡುತ್ತವೆ. ಆದ್ದರಿಂದ ಸಾವಿನ ವಿಷಯದಲ್ಲಿ ನಮಗೆ ಕಣ್ಣಿನ ಪೊರೆ ಬಂದಂತೆ. ಬಾಕಿಯ ಪ್ರಪಂಚವೆಲ್ಲಾ ನಿಚ್ಚಳವಾಗಿ ಕಂಡರೂ ಸಾವು ಕಾಣದು. ಮನುಷ್ಯನಿಗೆ ಅನೇಕ ಆಸೆಗಳು. "ಆಸೆಯೆಂಬ ತಳ ಒಡೆದ ದೋಣಿಯೊಳು ದೂರತೀರ ಯಾನ" ಎನ್ನುತ್ತದೆ ಅಡಿಗರ "ಅಳುವ ಕಡಲೊಳು ತೇಲಿಬರುತಲಿದೆ ನಗೆಯ ಹಾಯಿ ದೋಣಿ" ಎನ್ನುವ ಗೀತೆ. ಈ ಅನೇಕ ಆಸೆಗಳಲ್ಲಿ ಎರಡು ಬಲು ಮುಖ್ಯವಾದವು. "ಧನಾಶಾ, ಜೀವಿತಾಶಾ ಚ" ಎಂದು ಹೇಳುತ್ತಾರೆ. ಹಣದ ಆಸೆ ಮೊದಲನೆಯದು. ಅದಕ್ಕಿಂತ ಹೆಚ್ಚಿನದು ಇನ್ನಷ್ಟು ದಿನ ಬದುಕುವಾಸೆ. 

ಯಾರಾದರೂ ಇಷ್ಟ ಪಡಲಿ, ಇಲ್ಲದಿರಲಿ, ಭೌತಿಕ ದೇಹಕ್ಕೆ ಅದರದೇ ಆದ ಇತಿ-ಮಿತಿಗಳು ಉಂಟು. ದೇಹ ಕಾಲದಿಂದ ಕಾಲಕ್ಕೆ ಅಲ್ಲಲ್ಲಿ ಅಲಾರಾಂ ಕೊಡುತ್ತಲೇ ಇರುತ್ತದೆ. ಮಧ್ಯೆ ಮಧ್ಯೆ ಆಗುವ ಚಿಕಿತ್ಸೆಗಳು, ಶಸ್ತ್ರ ಚಿಕಿತ್ಸೆಗಳು ಹರಿದ ಬಟ್ಟೆಗೆ ತೇಪೆ ಹಾಕಿದಂತೆ. ಈಗಿನ ಜನಾಂಗಕ್ಕೆ ತೇಪೆ ಎನ್ನುವುದು ಗೊತ್ತಿಲ್ಲ. ಹಿಂದೆ ಡಾರ್ನಿಂಗ್ ಎಂದು ಮಾಡುತ್ತಿದ್ದರು. ಅದು ಒಂದು ರೀತಿ ತೇಪೆ ಹಾಕಿರುವುದು ಗೊತ್ತಾಗದಂತೆ ಮಾಡಿದ ತೇಪೆ. ತೇಪೆ ಹಾಕಿದ ಬಟ್ಟೆ ತೇಪೆ ಹಾಕಿರುವ ಪಕ್ಕದಲ್ಲೇ ಮತ್ತೆ ಪಿಂಜಿಕೊಳ್ಳುತ್ತದೆ. ನಮ್ಮ ದೇಹವೂ ಹಾಗೆಯೇ!

*****

ಕೆಲವು ಜನರಿಗೆ ಸಾವು ಧಿಡೀರ್ ಎಂದು ಬರಬಹುದು. "ಅದೊಂದು ಸುಖ ಮರಣ" ಎಂದು ಜನರಾಡಬಹುದು. ಮತ್ತೆ ಕೆಲವರಿಗೆ ವೈದ್ಯರು ಕೊಟ್ಟ ಗಡುವು ಎಚ್ಚರ ಕೊಡಬಹುದು. ಕೊನೆ ಬಂದಿರುವುದು ಎಂದು ದೇಹ  ಹೇಳುವುದು, ಯಾತನೆ ಹೆಚ್ಚುವುದು ಇವೆಲ್ಲವೂ ಅವರಿಗೆ ಆಗಬಹುದು. ಮತ್ತೆ ಕೆಲವರಿಗೆ ಅದು ಹತ್ತಿರದಲ್ಲಿಯೇ ಇದೆ ಎಂದು ಖಚಿತವಾಗಿ ಪ್ರತಿದಿನ ಅದನ್ನೇ ನೆನೆದು, ನೆನೆದು ಹಿಂಸೆ ಆಗಬಹುದು. 

ಅನತಿ ದೂರದಲ್ಲಿ ಅದು ನಿಂತಿದೆ ಎಂದು ಗೊತ್ತಾದವರು, ನಮ್ಮ ಸುತ್ತ-ಮುತ್ತಲಿನವರು ಅದನ್ನು ಹೇಗೆ ಎದುರಿಸಿದರು? ಕೂಗಾಡಿ-ಅರಚಾಡಿ ಹಿಂಸೆ ಪಟ್ಟು, ಸುತ್ತಲಿನವರಿಗೂ ಕಷ್ಟ ಕೊಟ್ಟವರು ಕಡಿಮೆಯಿಲ್ಲ. ಅದರಂತೆ, ಧೈರ್ಯವಾಗಿ ಅದನ್ನು ಎದುರಿಸಿದವರನ್ನೂ ನಾವು ನಮ್ಮ ಜೀವಿತ ಕಾಲದಲ್ಲೇ ಕಂಡಿದ್ದೇವೆ. ಅನೇಕ ವರ್ಷಗಳ ಕಾಲ ಕುಟುಂಬಗಳ ನಡುವೆ ನಡೆದುಬಂದಿದ್ದ ವೈರತ್ವ ಕೊನೆ ಮಾಡಿ ಶಾಂತಿ ತಂದವರಿದ್ದಾರೆ. ಚಿಕ್ಕ ವಯಸ್ಸಿನ ಹೆಂಡತಿಗೆ ಮರು ಮದುವೆ ವ್ಯವಸ್ಥೆ ಮಾಡಿ ನಂತರ ನಿರಾಳವಾಗಿ ಹೋದವರಿದ್ದಾರೆ. ತಮ್ಮ ಅಪಾರ ಆಸ್ತಿಯನ್ನು ಸದ್ವಿನಿಯೋಗ ಮಾಡಿ ಕಣ್ಮುಚ್ಚಿದವರಿದ್ದಾರೆ. ಅಂಗಾಂಗಗಳ, ಇಡೀ ದೇಹವನ್ನೇ ದಾನ ಮಾಡಿದವರೂ ಉಂಟು. 

"ಸಾಧನ ಶರೀರವಿದು, ನೀ ದಯದಿ ಕೊಟ್ಟದ್ದು; ಸಾಧಾರಣವಲ್ಲ, ಸಾಧುವಂದ್ಯ" ಎಂದು ದಾಸರು ಹೇಳುವಂತೆ ಆದಷ್ಟು ದಿನ ದೇಹವನ್ನು ಕಾಪಾಡಿಕೊಳ್ಳುವುದು ನ್ಯಾಯವೇ. ಆದರೆ ಕಾಲ ಬಂದಾಗ ಮರು ಮಾತಿಲ್ಲದೆ ಹೋಗಲು ತಯಾರಾಗಿರಬೇಕಾದ್ದು ಸಹ ಕರ್ತವ್ಯವೇ. 

*****

ಮರುಜನ್ಮ, ಪಾಪ-ಪುಣ್ಯಗಳು, ಇವೆಲ್ಲಾ ಇವೆಯೋ, ಇಲ್ಲವೋ ಗೊತ್ತಿಲ್ಲ. ಅಲ್ಲಿ ಹೋದವರು ಯಾರೂ ಮತ್ತೆ ಬಂದಿಲ್ಲ. ಆದ್ದರಿಂದ ಅದನ್ನು ಹೇಳುವವರಿಲ್ಲ. ನಮ್ಮ ವೈದಿಕ ವಾಂಗ್ಮಯದಲ್ಲಿ ನಂಬಿಕೆ ಇಟ್ಟವರಿಗೆ, ಶ್ರದ್ದೆ ಇರುವವರಿಗೆ ಈ ರೀತಿ ಸಾವು ಎದುರು ನಿಂತಾಗ ಧೈರ್ಯದಿನ ಎದುರಿಸುವ, ಸ್ವೀಕರಿಸುವ ಮನಸ್ಥಿತಿ ಬರುವುದಂತೂ ನಾವು ಕಂಡ ಸತ್ಯಗಳಲ್ಲಿ ಒಂದು ಎನ್ನಬಹುದು. 

Sunday, August 24, 2025

ಅನುಭವ ಮತ್ತು ಅನುಭಾವ


ಹಿಂದಿನ ಸಂಚಿಕೆಯಲ್ಲಿ "ಗುರು-ಶಿಷ್ಯರ ಸಂಬಂಧ" ಅನ್ನುವ ಶೀರ್ಷಿಕೆಯಡಿಯಲ್ಲಿ ಗುರುವು ತನ್ನ ಬಳಿ ಬಂದ ಜ್ಞಾನಾರ್ಥಿಯನ್ನು ಹೇಗೆ ಪರೀಕ್ಷಿಸಿ, ನಂತರ ಶಿಷ್ಯನನ್ನಾಗಿ ಸ್ವೀಕರಿಸುತ್ತಾನೆ ಎನ್ನುವುದನ್ನು  ನೋಡಿದೆವು. ಈಗಿನ ಕಾಲದ ಶಿಕ್ಷಕ-ವಿದ್ಯಾರ್ಥಿ ನಡುವಿನ ಬಾಂಧವ್ಯಕ್ಕೂ ಗುರು-ಶಿಷ್ಯರ ನಡುವಿನ ಹೊಂದಾಣಿಕೆ, ಸಾಮ್ಯ-ವಿರುದ್ಧಗಳ ಸಣ್ಣ ನೋಟದ ಪ್ರಯತ್ನ ಮಾಡಿದೆವು. ಈ ಹಿಂದಿನ ಸಂಚಿಕೆಯನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು.

ಹಿಂದಿನ ಸಂಚಿಕೆಯ ಒಂದು ಕಡೆಯಲ್ಲಿ "ಶಿಷ್ಯನಿಗೆ ಉತ್ತರ ಗೊತ್ತಿಲ್ಲ. ಆದದ್ದರಿಂದ ಪ್ರಶ್ನೆ ಕೇಳುತ್ತಾನೆ. ಗುರುವಿಗೆ ಉತ್ತರ ಗೊತ್ತಿದ್ದರೆ ಹೇಳುತ್ತಾನೆ. ಅವನಿಗೂ ಗೊತ್ತಿಲ್ಲದಿದ್ದರೆ ಇಬ್ಬರೂ ಸೇರಿ ಉತ್ತರ ಹುಡುಕುತ್ತಾರೆ. ಇಲ್ಲಿ ಸೋಲು-ಗೆಲವುಗಳ ಜಂಜಾಟವಿಲ್ಲ" ಎಂದಿದ್ದೆವು. ಹಿರಿಯ ಸ್ನೇಹಿತರೊಬ್ಬರು "ಗುರುವು ಪ್ರತಿ ಶಿಷ್ಯನೊಂದಿಗೆ, ಅವನ ಪ್ರತಿ ಸಂಶಯಕ್ಕೆ ಅವನ ಜೊತೆಯಲ್ಲಿ ಉತ್ತರ ಹುಡುಕಲು ಹೋಗುತ್ತಾನೆಯೇ? ಇದು ಸಾಧ್ಯವೇ?" ಎಂದು ಕೇಳಿದ್ದಾರೆ. ಹೌದು. ಇದು ಸಾಧ್ಯವಿಲ್ಲದ ಮಾತು. ಅನವಶ್ಯಕವೂ ಹೌದು. ಜಿಜ್ಞಾಸುವು ತನ್ನ ಅನೇಕ ಪ್ರಶ್ನೆಗಳಿಗೆ ತಾನೇ ಉತ್ತರ ಹುಡುಕಿಕೊಳ್ಳಬೇಕು. ಗುರುವು ಅದಕ್ಕೆ ಪೂರಕವಾದ ವಾತಾವರಣ ನಿರ್ಮಾಣ ಮಾಡಬಹುದು. ಮಾರ್ಗದರ್ಶನ ನೀಡಬಹುದು. ಪರಮಸತ್ಯದ ಅನ್ವೇಷಣೆಯಲ್ಲಿ ಜೊತೆ-ಜೊತೆಯಾಗಿ ಉತ್ತರ ಹುಡುಕುವ ಅನೇಕ ನಿದರ್ಶನಗಳಿವೆ. ಆದರೆ ಪ್ರತಿಯೊಬ್ಬ ಶಿಷ್ಯನ ಪ್ರತಿಯೊಂದು ಸಂಶಯದ ಪರಿಹಾರ ಇಬ್ಬರೂ ಜೊತೆಯಲ್ಲಿ ಹುಡುಕುವುದು ಸಾಧ್ಯವಿಲ್ಲ. 

ಒಂದು ವಿಷಯದ ಬಗ್ಗೆ ಹೊರಗಿನಿಂದ ತಿಳಿಯುವುದು ಅನುಭವ. ಒಳಗಿನಿಂದ ತಿಳಿಯುವುದು ಅನುಭಾವ. ಲೌಕಿಕದ ಅನೇಕ ವಿಷಯಗಳು ಅನುಭವದ ಮಟ್ಟದಲ್ಲಿಯೇ ನಿಲ್ಲುತ್ತವೆ. ಪಾರಮಾರ್ಥಿಕ ವಿಷಯಗಳಲ್ಲಿ ಇನ್ನೊಬ್ಬರ ಅನುಭವದಿಂದ ನಮಗೆ ತೃಪ್ತಿಯಾಯಿತು ಎನ್ನುವಂತಿಲ್ಲ. ನಾವೇ ನಮ್ಮ ಅನುಭವದಿಂದ ತಿಳಿಯಬೇಕು. ಆಗ ಅನುಭವದ ಮಟ್ಟದಿಂದ ಅನುಭಾವಕ್ಕೆ ಏರುವ ಅವಶ್ಯಕತೆ ಇದೆ. ಇಲ್ಲಿ ಗುರುವು ಮಾರ್ಗದರ್ಶಕನಾಗಬಹುದೇ ಹೊರತು ಉತ್ತರ ಹುಡುಕಲು ಶಿಷ್ಯನ ಜೊತೆಯಲ್ಲಿ ಸೇರುವಹಾಗಿಲ್ಲ. 

*****

"ನಿನಗೆ ಮೈಮೇಲೆ ಪ್ರಜ್ಞೆ ಇದೆಯೇ?" ಎಂದು ದೊಡ್ಡವರು ಚಿಕ್ಕವರನ್ನು ಗದರುವುದು ಕೇಳಿದ್ದೇವೆ. "ಪ್ರಜ್ಞೆ" ಅಂದರೆ ಏನು? "ಅಪಘಾತದಿಂದ ಅವನಿಗೆ ಪ್ರಜ್ಞೆ ಹೋಯಿತು" ಅನ್ನುತ್ತೇವೆ. ಪ್ರಜ್ಞೆ ಅನ್ನುವ ಪದವನ್ನು ಸಾಮಾನ್ಯವಾಗಿ "ಎಚ್ಚರ" (conciousness) ಅನ್ನುವ ಅರ್ಥದಲ್ಲಿ ಪ್ರಯೋಗಿಸುತ್ತೇವೆ. ಪ್ರಜ್ಞೆ ಪದದ ಸರಿಯಾದ ಅರ್ಥವೆಂದರೆ "ಒಂದು ವಿಷಯವನ್ನು ಹೇಳಿದರೆ ಅದಕ್ಕೆ ಸಂಬಂಧಿಸಿದ ಬೇರೆಲ್ಲ ಹಿಂದೆ ಕಲಿತ ವಿಷಯಗಳನ್ನೂ ಸೇರಿಸಿಕೊಂಡು ಒಟ್ಟಾರೆ ಅರ್ಥ ತಿಳಿಯುವ ಶಕ್ತಿ". ಈ ಪ್ರಜ್ಞಾಶಕ್ತಿಯ ವಿಕಾಸ ಮಾಡಿಕೊಂಡು ಬೆಳೆಯುವುದು "ಪ್ರತಿಭೆ". 

ಆಚಾರ್ಯ ಅಭಿನವ ಗುಪ್ತನು ತನ್ನ ಗುರುಗಲ್ಲೊಬ್ಬ ಎಂದು ಹೇಳಿಕೊಂಡಿರುವ ಭಟ್ಟತೌತ (ಭಟ್ಟತಾತ) ತನ್ನ "ಕಾವ್ಯ ಕೌತುಕ" ಅನ್ನುವ ಗ್ರಂಥದಲ್ಲಿ ಈ "ಪ್ರತಿಭೆ" ಅನ್ನುವ ಪದಕ್ಕೆ ವಿವರಣೆ ಕೊಡುತ್ತಾನೆ. ದುರ್ದೈವಕ್ಕೆ ಈ "ಕಾವ್ಯ ಕೌತುಕ" ಅನ್ನುವ ಗ್ರಂಥವೂ, ಅದಕ್ಕೆ ಅಭಿನವ ಗುಪ್ತ ರಚಿಸಿಕೊಟ್ಟ "ವಿವರಣ" ಎನ್ನುವ ಟೀಕಾಗ್ರಂಥವೂ ಈಗ ಸಿಕ್ಕುವುದಿಲ್ಲ. ಆದರೆ ಈ ಗ್ರಂಥದ ಒಂದು ಶ್ಲೋಕ ಬೇರೆ ಕಡೆಗಳಲ್ಲಿ ಮುಂದಿನ ಕವಿಗಳು ಉಲ್ಲೇಖಿಸಿರುವುದರಿಂದ ಸಿಗುತ್ತದೆ. ಅದು ಹೀಗಿದೆ: 

ಪ್ರಜ್ಞಾ ನವನವೋಲ್ಲೇಖಶಾಲಿನೀ ಪ್ರತಿಭಾ ಮತಾ
ತದನುಪ್ರಾಣನಾಜೀವದ್ ವರ್ಣಾನಾನಿಪುಣಃ  ಕವಿ: 

"ಹೊಸಹೊಸದಾಗಿ ಉಲ್ಲೇಖಿಸುವ ಸಾಮರ್ಥ್ಯವುಳ್ಳ ಪ್ರಜ್ಞಾಶಕ್ತಿಗೆ "ಪ್ರತಿಭೆ" ಎಂದು ಹೆಸರು. ಆ ಪ್ರತಿಭೆಯನ್ನವಲಂಬಿಸಿ ಜೀವಂತವಾದ ವರ್ಣನೆಯನ್ನು ಮಾಡುವುದರಲ್ಲಿ ನೈಪುಣ್ಯವುಳ್ಳವನು ಕವಿ" ಎನ್ನುವುದು ಇದರ ಅರ್ಥ. ಸುಮಾರು ಒಂದು ಸಾವಿರದ ಎರಡು ನೂರು ವರುಷಗಳ ಹಿಂದೆ (ಎಂಟನೆಯ ಶತಮಾನ) ಈ ಮಟ್ಟದ ಖಚಿತವಾದ ಲಕ್ಷಣ (ಅರ್ಥ ನಿರೂಪಣೆ) ನಮ್ಮ ಹಿರಿಯರು ಮಾಡಿದ್ದಾರೆ ಎಂದು ಹೆಮ್ಮೆ ಪಡಬಹುದು. ಇಂತಹ ನುಡಿಮುತ್ತುಗಳುಳ್ಳ ಗ್ರಂಥಗಳು ಪರಕೀಯರ ಧಾಳಿಗಳಲ್ಲಿ ಸುಟ್ಟು ಬೂದಿಯಾದುವು ಎಂದು ವಿಷಾದಿಸಲೂಬಹುದು. 

ಒಳ್ಳೆಯ ಗುರುವನ್ನು ಆರಿಸಿಕೊಂಡು ಅವನಿಂದ ಕಲಿಯುವ ಶಿಷ್ಯನಿಗೆ ಈ "ಪ್ರಜ್ಞಾಶಕ್ತಿ" ಇರುವುದು ಅತಿ ಅವಶ್ಯಕ. 
*****

ಈಗಿನ ಶಾಲಾ-ಕಾಲೇಜುಗಳ ಮಾದರಿಯ ವಿದ್ಯಾಭ್ಯಾಸ ನಡೆಯುವ ಸಂದರ್ಭದಲ್ಲಿ ಗುರು-ಶಿಷ್ಯರ ಸಂಬಂಧದ ಬಗ್ಗೆ ಹಿಂದಿನ ಸಂಚಿಕೆಯಲ್ಲಿ ಚರ್ಚಿಸಿದ್ದೆವು. ಇದಕ್ಕೆ ಒಂದು ಉದಾಹರಣೆ ನೋಡುವುದು ಸೂಕ್ತ. ಇದೇನೂ ಇಂದಿನ ವೃತ್ತಾಂತವಲ್ಲ. ಸುಮಾರು ಆರೇಳು ದಶಕಗಳ ಹಿಂದಿನದು. ಈಗಂತೂ ಕೇವಲ ಪರೀಕ್ಷೆಯಲ್ಲಿ ಅಂಕ ಗಳಿಸುವ ಏಕಮೇವ ಗುರಿಯಿಂದ ಓದುವ ವಿದ್ಯಾರ್ಥಿಗಳ ಪರಿ ಹೇಳುವುದೇ ಬೇಡ. 

ಪ್ರಾಚಾರ್ಯ ಬಿ. ಎಂ. ಶ್ರೀಕಂಠಯ್ಯನವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದ ಸಮಯ. ಅವರಿಗೆ ಮುಂಬಡ್ತಿ (ಪ್ರಮೋಷನ್) ಕೊಡುವ ಸಂದರ್ಭ. ಆಗ ಅಕ್ಸಫರ್ಡ್ ಅಥವಾ ಕೇಂಬ್ರಿಜ್ ವಿದ್ಯಾಲಯಗಳಲ್ಲಿ ಡಿಗ್ರಿ ಪಡೆದವರಿಗೆ ಮಾತ್ರವೇ ಇಂಗ್ಲಿಷ್ ಪ್ರಾಧ್ಯಾಪಕರಾಗಿ ನೇಮಕ ಮಾಡಲಾಗುತ್ತಿತ್ತಂತೆ. ಶ್ರೀಕಂಠಯ್ಯನವರು ಅಲ್ಲಿಗೆ ಹೋಗಿ ಡಿಗ್ರಿ ಪಡೆದವರಲ್ಲ. ಅವರಿಗೆ ಒಂದು ಆಯ್ಕೆಯನ್ನು ಕೊಟ್ಟರಂತೆ. ಹೆಚ್ಚು ಸಂಬಳದ ಕನ್ನಡ ಪ್ರಾಧ್ಯಾಪಕನ ಕೆಲಸ ಅಥವಾ ಕಡಿಮೆ ಸಂಬಳದ ಇಂಗ್ಲಿಷ್ ಪ್ರಾಧ್ಯಾಪಕನ ಕೆಲಸ. ಆಯ್ಕೆ ಶ್ರೀಯವರಿಗೆ ಬಿಟ್ಟದ್ದು. ಅವರ ಎರಡೂ ಭಾಷೆಗಳ ಮೇಲಿನ ಅಪಾರ ಪಾಂಡಿತ್ಯ ತಿಳಿದಿದ್ದ ಮೇಲಧಿಕಾರಿಗಳಿಂದ ಈ ಅವಕಾಶ. "ನಾನು ಕನ್ನಡದ ಕೆಲಸವನ್ನು ಹೇಗಾದರೂ ಮಾಡುತ್ತೇನೆ. ವಿದೇಶೀಯರಿಗಿಂತ, ಅಲ್ಲಿನ ಡಿಗ್ರಿ ಪಡೆದವರಿಗಿಂತ ಇಲ್ಲಿನವರು ಏನೂ ಕಡಿಮೆ ಇಲ್ಲ ಎಂದು ತೋರಿಸಬೇಕು" ಎನ್ನುವ ಛಲದಿಂದ ಕಡಿಮೆ ಸಂಬಳದ ಇಂಗ್ಲಿಷ್ ಪ್ರೊಫೆಸರ್ ಹುದ್ದೆ ಆರಿಸಿಕೊಂಡರು. 

ಶೇಕ್ಸಪೀಯರ್ ಮಹಾಕವಿಯ "ಒಥೆಲೋ" ನಾಟಕ ಒಂದು ತರಗತಿಗೆ ಪಠ್ಯಪುಸ್ತಕ. ಶ್ರೀಯವರು ಕೇವಲ ಪರೀಕ್ಷೆಗೆ ಪಾಠ ಹೇಳಿದವರಲ್ಲ. ಆಯಾಗೋ ಪಾತ್ರ ಚಿತ್ರಣ ವಿವರಿಸುವಾಗ ಬೇರೆ ಬೇರೆ ಭಾಷೆಗಳ ಮುಖ್ಯ ಕೃತಿಗಳಲ್ಲಿ ಬರುವ ಖಳನಾಯಕರ ಪಾತ್ರಗಳ ಜೊತೆ ಆಯಾಗೋವಿನ ಸಾಮ್ಯ-ಭೇದಗಳನ್ನು ಒಂದು ವಾರದವರೆಗೂ ವಿವರಿಸಿದರಂತೆ. ಅನೇಕ ವಿದ್ಯಾರ್ಥಿಗಳಿಗೆ ಇಷ್ಟೆಲ್ಲಾ ಬೇಡವಾಯಿತು. ಕಡೆಗೆ ಉಪಕುಲಪತಿಗಳಾದ ಏನ್. ಎಸ. ಸುಬ್ಬ ರಾವ್ ಅವರಿಗೆ ದೂರೊಂದು ಹೋಯಿತು. "ಪರೀಕ್ಷೆಗೆ ಪಾಠ ಹೇಳದೆ ಏನೇನೋ ಹೇಳುತ್ತಾ ಕಾಲಹರಣ ಮಾಡುತ್ತಾರೆ" ಎಂದು ದೂರು. ಶ್ರೀಯವರ ಬಗ್ಗೆ ಗೊತ್ತಿದ್ದ ಉಪಕುಲಪತಿಗಳು ದೂರಿನ ಮೇಲೆ ಏನೂ ಕ್ರಮ ಕೈಗೊಳ್ಳಲಿಲ್ಲ ಅನ್ನುವುದು ಬೇರೆ ಮಾತು. ವಿದ್ಯಾರ್ಥಿಗಳು ಪಾಠವನ್ನು ಹೇಗೆ ಸ್ವೀಕರಿಸುತ್ತಾರೆ ಅನ್ನುವುದಕ್ಕೆ ಈ ಉದಾಹರಣೆ. ಇದನ್ನು ಶ್ರೀಯವರ ಜೀವನಚರಿತ್ರೆಯಲ್ಲಿ ಕಾಣಬಹುದು. 

*****

ಒಂದು ವಿಷಯವನ್ನು ಓದಿದರೆ ಅಥವಾ ಮತ್ತೊಬ್ಬರಿಂದ ಕೇಳಿದರೆ ಅದು ಪೂರ್ತಿಯಾಗಿ ಅರ್ಥವಾಗುತ್ತದೆ ಅನ್ನುವಂತಿಲ್ಲ. ಸ್ಥೂಲವಾಗಿ ಕೆಲಮಟ್ಟಿಗೆ ತಿಳಿಯಬಹುದು. ಆಳವಾದ ತಿಳಿವಿಗೆ ಅದರ ಸಂಬಂಧಿಸಿದ ವಿಷಯಗಳ ಮನನ-ಮಂಥನ ಬೇಕಾಗುತ್ತದೆ. ಓದಿ, ಕೇಳಿ, ಮನನ ಮಾಡಿ, ಪೂರ್ಣವಾಗಿ ಅರ್ಥವಾಗಿವೆ ಅನ್ನುವ ಅನೇಕ ವಿಷಯಗಳು ಒಂದು ಹಂತದಲ್ಲಿ ಮತ್ತೊಮ್ಮೆ ಅಧ್ಯಯನ ಮಾಡಬೇಕು ಅನ್ನುವ ಪರಿಸ್ಥಿತಿ ಬರುವುದೂ ಉಂಟು. 

ಪ್ರಾಚಾರ್ಯ ತಿ. ನಂ. ಶ್ರೀಕಂಠಯ್ಯನವರು ಕನ್ನಡ ಸಾಹಿತ್ಯದ ಸಂದರ್ಭದಲ್ಲಿ ದೊಡ್ಡ ಹೆಸರು. ತತ್ವಶಾಸ್ತ್ರದ ಪರಮ ಗುರುಗಳಾದ ಪ್ರಾಚಾರ್ಯ ಎಂ. ಹಿರಿಯಣ್ಣನವರ ಶಿಷ್ಯರು. ಹಿರಿಯಣ್ಣನವರು ಮತ್ತು ಇತರ ಪಂಡಿತೋತ್ತಮರ ಶಿಷ್ಯರಾಗಿ ಅಧ್ಯಯನ ಮಾಡಿ ಮುಂದೆ ತಾವೇ ದೊಡ್ಡ ಮಟ್ಟದ ಗುರುವರ್ಯರಾದವರು ತಿ. ನಂ. ಶ್ರೀಕಂಠಯ್ಯನವರು. "ಭಾರತದ ಸಂವಿಧಾನ" ಕನ್ನಡದಲ್ಲಿ ಹೊರಬರಲು ಕಾರಣಕರ್ತರು. "ಪ್ರೆಸಿಡೆಂಟ್" ಅನ್ನುವದಕ್ಕೆ ಪರ್ಯಾಯವಾಗಿ "ರಾಷ್ಟ್ರಪತಿ" ಅನ್ನುವ ಪದವನ್ನು ಕೊಟ್ಟವರು. ಅವರು ಜೀವಿಸಿದ್ದುದು ಕೇವಲ ಅರವತ್ತು ವರ್ಷ. ಅಷ್ಟು ಕಾಲದಲ್ಲೇ ಅನೇಕ ಸಾಧನೆಗಳನ್ನು ಮಾಡಿದ ಮಹನೀಯರು. 

ಅವರ ಮೇರು ಕೃತಿ "ಭಾರತೀಯ ಕಾವ್ಯಮೀಮಾಂಸೆ" ರಚನೆಯ ಸಂದರ್ಭ. ಆನಂದವರ್ಧನನ "ಧ್ವನ್ಯಾಲೋಕ" ಮೇರು ಕೃತಿಯನ್ನು ಅನೇಕ ಬಾರಿ ತಾವು ಅಧ್ಯಯನ ಮಾಡಿದುದಲ್ಲದೇ ಅನೇಕ ವಿದ್ಯಾರ್ಥಿಗಳಿಗೆ ಪಾಠ ಹೇಳಿದವರು. "ಭಾರತೀಯ ಕಾವ್ಯಮೀಮಾಂಸೆ" ಕೃತಿ ರಚನೆಯ ಸಂದರ್ಭದಲ್ಲಿ ಅವರಿಗೆ ಅದನ್ನು ಮತ್ತೊಮ್ಮೆ ಗುರುಮುಖೇನ ಅಧ್ಯಯನ ಮಾಡಬೇಕೆನ್ನಿಸಿತಂತೆ! ಆ ವೇಳೆಗೆ ಅವರ ಗುರುಗಳಾದ ಹಿರಿಯಣ್ಣನವರಿಗೆ ಹತ್ತಿರ ಹತ್ತಿರ ಎಂಭತ್ತರ ವಯಸ್ಸು. ಅವರು ಬೇರೆ ಚಟುವಟಿಕೆಗಳನ್ನು ನಿಲ್ಲಿಸಿ ಕೇವಲ ತಮ್ಮ ಅಧ್ಯಯನ ಮಾತ್ರ ನಡೆಸುತ್ತಿದ್ದರಂತೆ. ಆದರೂ ಶಿಷ್ಯನ ಕೋರಿಕೆ ಮನ್ನಿಸಿ ಶಿಷ್ಯ ವಾತ್ಸಲ್ಯದಿಂದ ಮತ್ತೊಮ್ಮೆ ಪಾಠ ಹೇಳಿದರಂತೆ! 

"ಭಾರತೀಯ ಕಾವ್ಯಮೀಮಾಂಸೆ" ಕೃತಿಯ ಮುನ್ನುಡಿಯಲ್ಲಿ ಶ್ರೀಕಂಠಯ್ಯನವರು ಈ ವಿಷಯವನ್ನು ಅತ್ಯಂತ ಕೃತಜ್ಞತೆಯಿಂದ ಸ್ಮರಿಸಿದ್ದಾರೆ. 

ಒಂದು ಕಡೆ ಪರೀಕ್ಷೆಗೆ ಓದುವ ವಿದ್ಯಾರ್ಥಿಗಳು. ಮತ್ತೊಂದೆಡೆ ಎಷ್ಟು ತಿಳಿದರೂ ಇನ್ನೂ ತಿಳಿಯುವುದು ಇದೆ ಎನ್ನುವ ಘನಪಾಠಿ ಗುರು-ಶಿಷ್ಯರು. ಗುರು-ಶಿಷ್ಯ ಬಾಂಧವ್ಯಕ್ಕೆ ಸೊಗಸಾದ ಉದಾಹರಣೆಗಳು. 

***** 

ಜ್ಞಾನದ ಒಂದು ಶಾಖೆಯನ್ನು ಒಬ್ಬರು ಮತ್ತೊಬ್ಬರಿಂದ ಶಿಷ್ಯರಾಗಿ ಕಲಿತು, ಅವರಿಗೆ ಗುರುವಾಗಿ ಮತ್ತೊಂದು ಜ್ಞಾನದ ಶಾಖೆಯನ್ನು ಕಲಿಸಿರುವ ಉದಾಹರಣೆಗಳಿವೆ. ಇದೆ ರೀತಿ ಗುರು-ಶಿಷ್ಯರಿಬ್ಬರೂ ಜೊತೆಯಾಗಿ ಪರಮ ಸತ್ಯದ ಅನ್ವೇಷಣೆ ಮಾಡಿರುವುದೂ ಇದೆ. ಇವುಗಳನ್ನು ಮುಂದೆ ಎಂದಾದರೂ ಅವಕಾಶವಾದಾಗ ನೋಡೋಣ.