Wednesday, January 21, 2026

ತಾಯಿಯ ತೊಳಲಾಟ

 
ಮದುವೆಯ ಮನೆಯಲ್ಲಿ ಬಲು ಸಂಭ್ರಮ. ಸಭಾಂಗಣ ತುಂಬಿದೆ. ಪ್ರತಿಯೊಬ್ಬರಿಗೂ ಅವರದೇ ಆದ ಕೆಲಸ. ಮುಖ್ಯ ಕೆಲಸ ಮಾಡುವವರಿಗೆ ಅವುಗಳ ಚಿಂತೆ. ಅವರ ಸಹಾಯಕರಿಗೆ ಅವರ ಪಾಲಿಗೆ ಹಂಚಿಕೊಟ್ಟ ಕೆಲಸಗಳು. ಅಡಿಗೆಯ ಮನೆಯಂತೂ ತುಂಬು ಚಟುವಟಿಕೆಯಿಂದ ಓಡುತ್ತಿದೆ. ಪುರೋಹಿತರ ತಂಡಕ್ಕೆ ಬಂದ ಕೆಲಸ ಸುಗಮವಾಗಿ ಮುಗಿಸಿ ಮತ್ತೊಂದೆಡೆ ಇರುವ ಸಂಜೆಯ ಕಾರ್ಯಕ್ರಮಕ್ಕೆ ಹೋಗುವ ತವಕ. ವಾದ್ಯದವರಿಗೆ ಹೀಗೆಯೇ ಚಿಂತೆ. ಬಂದ ಅತಿಥಿ-ಅಭ್ಯಾಗತರನ್ನು ಗಮನಿಸುವವರಿಗೆ ಬಾಗಿಲ ಕಡೆಯೇ ಗಮನ. ಉಡುಗೊರೆ ಪೆಟ್ಟಿಗೆಗಳ ಕೀಲಿಕೈ ಹಿಡಿದವರಿಗೆ ಅದರ ಮೇಲೆ ಒಂದು ಕಣ್ಣಾದರೆ ಮತ್ತೊಂದು ಅವನ್ನು ಪಡೆಯಲು ಅರ್ಹರಾದವರ ಮೇಲೆ. ಹೀಗೆ ನಡೆಯುತ್ತಿದೆ. 

ಅಂದ ಮಾತ್ರಕ್ಕೆ ಬೇರೆ ಯಾವುದೇ ಕೆಲಸ ಇಲ್ಲದವರು ಇಲ್ಲವೆಂದಲ್ಲ. ಅವರೂ ಬಂದು ಕುಳಿತಿದ್ದಾರೆ. ಬೆಳಗ್ಗೆ ಗಡತ್ತಾಗಿ ತಿಂಡಿಯ ಸೇವನೆ ಆಗಿದೆ. ಇನ್ನು ಸಮಾರಂಭದ ಮಧ್ಯೆ ಸ್ವಲ್ಪ ಪಾನಕ ಬರಬಹುದು. ಅದೇನೂ ಅಷ್ಟು ದೊಡ್ಡದಲ್ಲ. ಲಗ್ನದ ಸಮಯದ ನಂತರ, ಮಾಂಗಲ್ಯಧಾರಣೆ ಕಳೆದ ಮೇಲೆ ಭೂರಿ ಭೋಜನ ಬರುವವರೆಗೂ ಏನು ಮಾಡುವುದು? ನಾಲಿಗೆ ಸುಮ್ಮನಿರುವುದಿಲ್ಲ. ಅದು ಏನಾದರೂ ತಿನ್ನುತ್ತಿರಬೇಕು. ಇಲ್ಲವೇ ಇನ್ನೇನಾದರೂ ಅನ್ನುತ್ತಿರಬೇಕು. ವಿಮಲಮ್ಮ ಅಂತಹ ನಾಲಗೆಯುಳ್ಳ ಒಬ್ಬ ವ್ಯಕ್ತಿ. 

ವಿಮಲಮ್ಮನ ಕಣ್ಣಿಗೆ ಕಮಲಮ್ಮ ಬಿದ್ದರು. ಸುಮ್ಮನಿರುವುದು ಸಾಧ್ಯವೇ? ಸಾಧ್ಯವಿದ್ದರೂ ಅದು ಸಾಧುವೇ? ಬಾಯಿತುಂಬಾ ಮಾತಿಗೆ ಅವಕಾಶ ಇರುವಾಗ ಸುಮ್ಮನೆ ಇದ್ದರೆ ಅದೊಂದು ಅನ್ಯಾಯವೇ ಅಲ್ಲವೇ? ಸರಸರನೆ ನಡೆದು ಕಮಲಮ್ಮ ಕುಳಿತಿರುವ ಕಡೆ ನುಗ್ಗಿದರು. ಉಭಯ ಕುಶಲೋಪರಿ ಪ್ರಾರಂಭವಾಯಿತು. 

"ಏನು ಕಮಲಮ್ಮ? ಚೆನ್ನಾಗಿದ್ದೀರಾ? ಮೂರು ವರುಷ ಆಯಿತು ನಿಮ್ಮನ್ನು ನೋಡಿ"
"ಹೌದು ವಿಮಲಮ್ಮ. ತುಂಬಾ ದಿನ ಆಯಿತು. ಚೆನ್ನಾಗಿದ್ದೇವೆ. ನೀವು ಹೇಗೆ?"
"ಏನೋ, ನೋಡಿ. ಹೀಗಿದ್ದೇನೆ. ನಿಮ್ಮನ್ನು ಕಂಡು ಬಹಳ ಸಂತೋಷ ಆಯಿತು"
"ನನಗೂ ಅಷ್ಟೇ. ಈ ರೀತಿ ಸಮಾರಂಭಗಳಿಗೆ ಬಂದರೆ ಒಬ್ಬರನ್ನೊಬ್ಬರು ನೋಡಲು ಅವಕಾಶ"
"ಹೌದು, ನೋಡಿ. ಅಂದಹಾಗೆ ನಿಮ್ಮ ಮಗಳು ಸರಸು ಎಲ್ಲಿ? ಅವಳ ಮದುವೆ ಆಯಿತೇ?"
"ಇಲ್ಲ ವಿಮಲಮ್ಮ. ಒಂದೇ ಸಮ ವರ ಹುಡುಕುತ್ತಿದ್ದೇವೆ. ಆದರೆ ಯಾವುದೂ ಕೂಡಿಬರುತ್ತಿಲ್ಲ"
"ಅಯ್ಯೋ, ಹೌದೇ? ಅಲ್ಲಿ ನೋಡಿ. ನಿಮ್ಮ ಮಗಳ ಜೊತೆಗಾತಿ ಸರಳ"
"ಆಗಲೇ ನೋಡಿ ಮಾತನಾಡಿಸಿದೆ"
"ಅವಳಿಗೆ ಕಂಕಳಲ್ಲೊಂದು, ಕೈಯಲ್ಲೊಂದು. ನೋಡಿದರೆ ಇನ್ನೊಂದೂ ಬರುವಂತಿದೆ"
"ಹೌದು. ಕಳೆ  ಕಳೆಯಾಗಿದ್ದಾಳೆ"
"ನೀವು ನೋಡಿದರೆ ಸರಸುಗೆ ಮದುವೆಯೇ ಆಗಲಿಲ್ಲ ಅನ್ನುತ್ತೀರಿ"
"ಏನು ಮಾಡುವುದು? ನಮಗೆ ಅದೇ ಚಿಂತೆಯಾಗಿದೆ"
"ಹೋಗಲಿ ಬಿಡಿ. ಅವಳಿಗೂ ಆಗುತ್ತೆ. ಯಾವುದಕ್ಕೂ ಋಣಾನುಬಂಧ ಕೂಡಿಬರಬೇಕು"
"ನಿಮ್ಮ ಹಾರೈಕೆಯಿಂದ ಬೇಗ ಹಾಗಾಗಲಿ ಅನ್ನುತ್ತೇನೆ"
"ಚಿಂತಿಸಬೇಡಿ. ಬ್ರಹ್ಮನು ಗಂಟು ಹಾಕಿಯೇ ಕಳಿಸಿರುತ್ತಾನೆ. ಕಂಕಣಬಲ ಕೂಡಿದರೆ ಎಷ್ಟು ಹೊತ್ತು?"

ಅಷ್ಟರಲ್ಲಿ ವಿಮಲಮ್ಮನಿಗೆ ಕನಕಮ್ಮ ಕಣ್ಣಿಗೆ ಬಿದ್ದರು. ಇನ್ನೊಂದು ಸುವರ್ಣ ಅವಕಾಶ. ಆ ಕಡೆ ನುಗ್ಗಿದರು. ಕಮಲಮ್ಮನಿಗೆ ಬಿಡುಗಡೆ ಆಯಿತು. ಈ ಪ್ರಶ್ನೆ ಬರುತ್ತದೆ ಎಂದು ಗೊತ್ತಿತ್ತು. ಅದಕ್ಕೇ ಈ ಮದುವೆಗೆ ಬರುವುದಕ್ಕೆ ಅನುಮಾನಿಸಿ, ಯೋಚಿಸಿ, ತಪ್ಪಿಸಬಾರದ ಮದುವೆ ಅಂತ ಬಂದಿದ್ದರು. ಈ ಪ್ರಶ್ನೆ ಯಾರಾದರೂ ಕೇಳಿದರೆ "ಇನ್ನೂ ಆಗಿಲ್ಲ" ಎಂದು ಹೇಳಲು ಸಂಕೋಚ. ಅದೊಂದು ಲಜ್ಜೆಗೆ ಕಾರಣವಾದ ಪರಿಸ್ಥಿತಿ. 

ಹೆಣ್ಣು ಹೆತ್ತವರಿಗೆ ಈ ರೀತಿ ಸಂದರ್ಭಗಳು ಎದುರಾಗುತ್ತಿದ್ದ ಕಾಲವೊಂದಿತ್ತು. ಐವತ್ತು-ಅರವತ್ತು ವರುಷಗಳ ಹಿಂದೆ ಅದು ಸರ್ವೇಸಾಮಾನ್ಯವಾಗಿತ್ತು. ಈಗಲೂ ಈ ಪ್ರಶ್ನೆ ಬರುವುದೇ ಆದರೂ ಅದರ ತೀವ್ರತೆ ಆಷ್ಟಿರುವುದಿಲ್ಲ. ಹೆಣ್ಣು-ಗಂಡುಗಳು ಪರಸ್ಪರ ಜೊತೆ ಹಾಕಿಕೊಳ್ಳುವುದು ಹೆಚ್ಚಾದ ಕಾಲ ಇದಾದುದರಿಂದ ಪರಿಸ್ಥಿತಿಯೂ ಬದಲಾಗಿದೆ. 

ಏನೇ ಆದರೂ ಹೆಣ್ಣು ಮಕ್ಕಳ ತಾಯಂದಿರಿಗೆ ಈ ರೀತಿಯ ತೊಳಲಾಟ ಎಲ್ಲ ಕಾಲಕ್ಕೂ ಇರುತ್ತದೆ. ಒಂದು ಸರಿಯಾದ ವರ ಸಿಕ್ಕಿ ಮಗಳು ವಿವಾಹಿತಳಾಗಲಿ ಎನ್ನುವ ಆಸೆ ಹೆತ್ತ ಕರುಳಿಗೆ ಎಂದೂ ಇರುವುದೇ. ಇದು ಮಗಳ ಮದುವೆ ಆಗುವ ಮುಂಚಿನ ಕಥೆ. 

***** 

ಧಾರೆ, ನಾಗೋಲಿ ಮುಂತಾದುವೆಲ್ಲಾ ಸಾಂಗವಾಗಿ ನಡೆದವು. ಈಗ ಸಂಜೆಯ ಸಮಯ. ಕೆಲವರಿಗೆ ಮುಂದಿನ ಆರತಕ್ಷತೆಯ ಗಡಿಬಿಡಿ. ಆಗಿನ ಅಲಂಕಾರಕ್ಕೆ ಹೂವಿನ ರಾಶಿಯೇ ಬಂದು ಬಿದ್ದಿದೆ. ಸಂಬಂಧಿಸಿದ ಕೆಲಸಗಾರರು ಬೇಗ ಬೇಗ ತಯಾರಿ ನಡೆಸುತ್ತಿದ್ದಾರೆ. ಹೆಣ್ಣು ಮತ್ತು ಗಂಡು, ಈಗ ಗಂಡ-ಹೆಂಡತಿ, ಅವರ ಮನೆಯವರಿಗೆ ಮುಂದಿನ ನಡವಳಿಕೆ ಒಂದು ದೊಡ್ಡ ಹಂತ. ಗಂಡಿನವರು ಹೆಣ್ಣನ್ನು ಮನೆ ತುಂಬಿಸಿಕೊಳ್ಳಲು ಉತ್ಸುಕರು. ಹೆಣ್ಣಿನ ಕಡೆಯವರು ಒಪ್ಪಿಸಿಕೊಡಬೇಕು. ಈ ಕೋಣೆಯಲ್ಲಿ ಒಂದು ರೀತಿಯ ಸಂಭ್ರಮ. ಆ ಕೋಣೆಯಲ್ಲಿ ಒಂದು ವಿಧದ ದುಗುಡ. 

ಎಲ್ಲರಿಗಿಂತ ಹೆಚ್ಚು ಕಳವಳ ಪಡುತ್ತಿರುವವಳು ಹುಡುಗಿಯ ಹೆತ್ತತಾಯಿ. ತನ್ನ ಕಣ್ಣ ಮುಂದಿನ ಕೂಸು ಇಂದು ಮನೆ ಬಿಟ್ಟು ಹೋಗುತ್ತಿದ್ದಾಳೆ. ಮುಂದೆ ಅವಳ ಜೀವನ ಹೇಗೋ, ಏನೋ? ಅಳೆದು-ಸುರಿದು ಸಂಬಂಧ ಗೊತ್ತು ಮಾಡಿದ್ದಾಯಿತು. ಗಂಡಿನ ಕಡೆಯವರು ಒಳ್ಳೆಯವರೆಂದೇ ನಂಬಿಕೆ. ಹತ್ತು ಜನ ಹಾಗೆ ಹೇಳಿದ್ದು ಕೇಳಿದಮೇಲೆ ತಾನೇ ಮದುವೆ ಗೊತ್ತು ಮಾಡಿದ್ದು. ಮದುವೆ ಮಾಡುವುದರಲ್ಲಿ ಏನೂ ಕೊರತೆಯಿಲ್ಲ. ಕೊಡುವುದೆಲ್ಲ ಕೊಟ್ಟಾಯಿತು. ಸಾಲ-ಸೋಲ ಮಾಡಿದ್ದು ಹೇಗಾದರೂ ಮಾಡಿ ತೀರಿಸಬಹುದು. ಆದರೆ ಮುಂದಿನ ದಿನಗಳಲ್ಲಿ ಮಗಳು ಅತ್ತೆಯ ಮನೆಯಲ್ಲಿ ಹೇಗಿರುತ್ತಾಳೋ, ಏನೋ? ಅತ್ತೆ-ಅತ್ತಿಗೆ-ನಾದಿನಿಯರು ಹೇಗೆ ನಡೆದುಕೊಂಡಾರೋ? ಮಾವ ಒಳ್ಳೆಯವರಂತೆ ಕಾಣುತ್ತಾರೆ. ಆದರೂ ಏನೂ ಹೇಳುವಂತಿಲ್ಲ. 

"ಎಮ್ಮ ಮನೆಯಂಗಳದಿ ಬೆಳೆದೊಂದು ಹೂವನ್ನು ನಿಮ್ಮ ಮಡಿಲೊಳಗಿಡಲು ಬಂದಿರುವೆವು....." ಎಂದು ಯಾರೋ ಹಾಡಲು ಶುರು ಮಾಡಿದ್ದಾರೆ. ವಿ. ಸೀತಾರಾಮಯ್ಯನವರ ಈ ಹಾಡಿಲ್ಲದೆ ಹೆಣ್ಣು ಒಪ್ಪಿಸಿಕೊಡುವುದು ಮುಗಿಯುವಂತಿರಲಿಲ್ಲ. ಬೇರೆ ಹಂತಗಳಲ್ಲಿ ಕೆಲಸ ತೂಗಿಸಲು ಮಂತ್ರಗಳು ಉಂಟು. ಈ ಹಂತದಲ್ಲಿ ಅವರ ಹಾಡೇ ಆಗಬೇಕು. ಹಾಡುತ್ತಿರುವವರಿಗೆ ಅವರ ಹಾಡುವಿಕೆಯ ಮೇಲೆ ಅಭಿಮಾನ. ತಾಯಿಗಾದಾರೋ ಆ ಹಾಡಿನ ಒಂದೊಂದು ಪದವೂ ಮೊದಲೇ ಬೆದರಿರುವ ಹೃದಯದ ಮೇಲೆ ಒಂದೊಂದು ಏಟು ಹಾಕುತ್ತಿದೆ. ಎಷ್ಟು ಸಮಾಧಾನ ಪಟ್ಟುಕೊಂಡರೂ ದುಃಖ ನುಗ್ಗುತ್ತಾ ಬರುತ್ತಿದೆ. ಕಣ್ಣುಗಳಲ್ಲಿ ನೀರು ತುಂಬಿಕೊಂಡು ದೃಷ್ಟಿ ಮಂಜಾಗಿದೆ. ಮುಂದೆ ಮಗಳ ಜೀವನ ಹೇಗೋ ಎಂದು ಆತಂಕ ಆವರಿಸಿದೆ. 

ಈಗ ಕಾಲ ಬದಲಾಗಿದೆ. "ಅಷ್ಟ ವರ್ಷಾ ಭವೇತ್ ಕನ್ಯಾ" ಅನ್ನುವುದಿಲ್ಲ. "ಆದಷ್ಟು ವರ್ಷ ಭವೇತ್ ಕನ್ಯಾ" ಎಂದಾಗಿದೆ. ಮಗಳೂ ತಿಳಿದವಳು. ವಿದ್ಯಾವಂತೆ. ಸಮಾಜವೂ ಎಷ್ಟೋ ಬದಲಾಗಿದೆ. ಆದರೂ ಮಾತೃ ಹೃದಯ ಚೀರುತ್ತಲೇ ಇದೆ. ಇದು ಮಗಳ ಮದುವೆಯ ನಂತರದ ಕಥೆ. 

*****

ಮೇಲಿನ ಸಂಗತಿಗಳು ಕೇವಲ ಐವತ್ತು-ಅರವತ್ತು ವರುಷಗಳ ಸಂಗತಿಯಲ್ಲ. ಎರಡು ಸಾವಿರ ವರುಷಗಳ ಹಿಂದೆಯೂ ಇದೇ ಪರಿಸ್ಥಿತಿ ಇತ್ತು. "ಸ್ವಪ್ನ ವಾಸವದತ್ತಮ್" ನಾಟಕ ಚಿರಪರಿಚಿತ. ಭಾಸ ಮಹಾಕವಿಯ ಈ ನಾಟಕ ಎರಡು ಸಾವಿರ ವರುಷಗಳ ಹಿಂದಿನದು ಎನ್ನುವ ಅಭಿಪ್ರಾಯವಿದೆ. ಮಹಾಕವಿ ಕಾಳಿದಾಸ ತನ್ನ "ಮಾಳವಿಕಾಗ್ನಿಮಿತ್ರ" ನಾಟಕದ ಪ್ರಾರಂಭದಲ್ಲಿ ಭಾಸ, ಸೌಮಿಲ್ಲ, ಕವಿಪುತ್ರ ಮೊದಲಾದ ತನಗಿಂತ ಹಿಂದಿನ ಪ್ರಸಿದ್ಧ ಕವಿಗಳ ನಾಟಕಗಳನ್ನು ನೆನೆಸಿಕೊಳ್ಳುತ್ತಾನೆ. ಆರು ಅಂಕಗಳ ಈ ನಾಟಕದ ಹಿಂದಿನ ಭಾಗ ನಾಲ್ಕು ಅಂಕಗಳ ಇನ್ನೊಂದು ನಾಟಕ "ಪ್ರತಿಜ್ನಾಯೌಗಂಧರಾಯಣಮ್". ಯೌಗಂಧರಾಯಣ ವತ್ಸರಾಜನಾದ ಉದಯನನ ಪ್ರಧಾನ ಮಂತ್ರಿ. 

ಈ ಪ್ರತಿಜ್ನಾಯೌಗಂಧರಾಯಣಮ್ ನಾಟಕದ ಎರಡನೇ ಅಂಕದಲ್ಲಿ ವಾಸವದತ್ತೆಯ ತಂದೆಯಾದ ಪ್ರದ್ಯೋತ ಮಹಾರಾಜನ ಪಾತ್ರ ರಂಗದ ಮೇಲೆ ಹೇಳುವ ಒಂದು ಶ್ಲೋಕವು ಹೀಗಿದೆ:

ಅದತ್ತೇತಿ ಆಗತಾ ಲಜ್ಜಾ ದತ್ತೇತಿ ವ್ಯಥಿತಂ ಮನಃ 
ಧರ್ಮಸ್ನೇಹಾಂತರೇ ನ್ಯಸ್ತಾ ದುಃಖಿತಾಃ ಖಲು ಮಾತರಃ 

(ವಿವಾಹಯೋಗ್ಯ ವಯಸ್ಸು ತಲುಪಿದ ತನ್ನ ಒಬ್ಬ ಮಗಳು ಮನೆಯಲ್ಲಿದ್ದಾಗ) ಮೊದಲು ಮದುವೆ ಮಾಡಿಕೊಡಲಿಲ್ಲವಲ್ಲಾ ಎಂದು ನಾಚಿಕೆಯಿಂದ ಕೊರಗು. ವಿವಾಹದ ನಂತರ ಮಗಳು ಮನೆ ಬಿಟ್ಟು ಹೋಗುವಳಲ್ಲಾ ಎಂದು ಕೊರಗು. ಹೀಗೆ, ತಾಯಿಯರು ಅತ್ತ ಕಡೆ ತಾಯಿಯಾಗಿ ಮಾಡಬೇಕಾದ ಕರ್ತವ್ಯ  ಮತ್ತು ಇತ್ತ ಕಡೆ ಮಗಳ ಮೇಲಿನ ಅತಿಶಯವಾದ ಪ್ರೀತಿ, ಇವೆರಡರ ನಡುವೆ ತೊಳಲಿ ಬಳಲುವರು. 

ಎರಡು ಸಾವಿರ ವರುಷ ಹಿಂದೆ ವಾಸವದತ್ತೆಯ ಕಾಲದಲ್ಲಿದ್ದಂತೆ, ಕೆಲವು ದಶಕಗಳ ಹಿಂದೆಯೂ ಇತ್ತು. ಈಗ ಅದರ ತೀವ್ರತೆ ಇಳಿದಿದ್ದರೂ ಅದರ ಒಟ್ಟಾರೆ ಪರಿಣಾಮ ತಾಯಿಯರ ಮೇಲೆ ಅದೇ ರೀತಿ ಇರುವುದು. ಇದು ಮಾತೆಯರಿಗೆ ಚೆನ್ನಾಗಿ ಗೊತ್ತು. ಇತರರಿಗೆ ಅಷ್ಟು ವಿಶದವಾಗಿ ಗೊತ್ತಾಗದಿರಬಹುದು.

*****

ಮನುಷ್ಯನ ಜೀವನದಲ್ಲಿ ಅನೇಕ ಮುಖ್ಯ ಘಟ್ಟಗಳಿರುತ್ತವೆ. ಆಯುಪ್ರಮಾಣದ ದೃಷ್ಟಿಯಿಂದ ನಮ್ಮ ಸಂಪ್ರದಾಯಗಳಲ್ಲಿ ಐದು ಪ್ರಮುಖ ಘಟ್ಟಗಳನ್ನು ಗುರುತಿಸಿದ್ದಾರೆ. ಹುಟ್ಟಿನಿಂದ ಅರವತ್ತು ವರುಷಗಳ ಉಗ್ರರಥ ಶಾಂತಿ, ಎಪ್ಪತ್ತು ವರುಷಗಳ ಭೀಮರಥ ಶಾಂತಿ, ಸಹಸ್ರ (ಒಂದು ಸಾವಿರ) ಪೂರ್ಣ ಚಂದ್ರ (ಹುಣ್ಣಿಮೆ ಚಂದ್ರ) ದರ್ಶನ ಶಾಂತಿ, ಪ್ರಪೌತ್ರ ದರ್ಶನ ಶಾಂತಿ (ಮೊಮ್ಮಗನ ಮಗನ ಜನನ), ಮತ್ತು ಶತಮಾನ (ಒಂದು ನೂರು ವರುಷಗಳ ಜೀವನ) ಶಾಂತಿ.  ಇವುಗಳ ಬಗ್ಗೆ ಈ ಹಿಂದೆ (2012 ಫೆಬ್ರವರಿಯಲ್ಲಿ) ಈ ಬ್ಲಾಗಿನಲ್ಲಿ ನೋಡಿದ್ದೇವೆ. ಸಹಸ್ರ ಪೂರ್ಣಚಂದ್ರ ದರ್ಶನ ಶಾಂತಿಯ ಬಗ್ಗೆ ಇಲ್ಲಿ ಕ್ಲಿಕ್ ಮಾಡಿ ಓದಬಹುದು. ಸುಮಾರು 81 ವರ್ಷ 2 ತಿಂಗಳುಗಳಿಗೆ ಈ ಘಟ್ಟ ಬರುತ್ತದೆ. 

ಎಂಭತ್ತು ವರುಷಗಳ ಹುಟ್ಟು ಹಬ್ಬ ಆಚರಿಸುವ ಭಾಗ್ಯ ಎಲ್ಲರಿಗೂ ಸಿಗುವುದಿಲ್ಲ. ಅಂದಾಜುಗಳ ಪ್ರಕಾರ ನೂರಕ್ಕೆ ಐದಾರು ಮಂದಿ ಮಾತ್ರ ಈ ಘಟ್ಟ ತಲಪುತ್ತಾರೆ. ಎಂಭತ್ತರ ಹುಟ್ಟು ಹಬ್ಬ ಈ ಕಾರಣದಿಂದ ಒಂದು ವಿಶೇಷವೇ. ಇದೇ ರೀತಿ ಒಂದು ಪುಸ್ತಕವನ್ನು ಬರೆಯಲು ಪ್ರಾರಂಭಿಸಿ, ಮುಗಿಸಿ, ಮುದ್ರಿಸಿ, ಪ್ರಕಟಿಸುವ ಯಶಸ್ಸು ನೂರಕ್ಕೆ ಒಬ್ಬರಿಗಿಂತಲೂ (ಶೇಕಡಾ ೦.4 ಎಂದು ಒಂದು ಅಂದಾಜು) ಕಡಿಮೆ ಜನರಿಗೆ ಸಿಕ್ಕುವುದು. ಪುಸ್ತಕ ಬಿಡುಗಡೆ ಒಂದು ಸಾಧನೆ. ಒಂದಲ್ಲಾ ಒಂದು ರೀತಿಯಲ್ಲಿ ಪ್ರತಿ ಮನುಷ್ಯನೂ ಒಬ್ಬ ಕವಿಯೇ. ಹೆಚ್ಚಿನವರಿಗೆ ಅದು ಒಂದು ಮಿಂಚಿನಂತೆ ಬಂದು ಮಾಯವಾಗುವುದು. ಅದು ಬೌದ್ಧಿಕವಿರಬಹುದು ಅಥವಾ ಭಾವನಾತ್ಮಕ ಇರಬಹುದು. ಬುದ್ಧಿಯಲ್ಲಿ ಅಥವಾ ಮನಸ್ಸಿನಲ್ಲಿ ಬಂದ ಹೊಳಹುಗಳನ್ನು ಕಾಗದದ ಮೇಲೆ ಇಳಿಸುವುದು ಅಪರೂಪ. ಅವೆಲ್ಲವನ್ನೂ ಒಂದೆಡೆ ಸೇರಿಸಿ, ಪರಿಷ್ಕರಿಸಿ, ಪ್ರಕಟಿಸುವುದು ಅನೇಕರಿಗೆ ಸಾಧ್ಯ ಆಗುವುದಿಲ್ಲ. ಇದಕ್ಕೆ ಮತ್ತೆ ಕೆಲವರ ಒತ್ತಾಸೆಯೂ ಬೇಕಾಗುತ್ತದೆ. ಇದು ಇನ್ನೊಂದು ರೀತಿಯ ಭಾಗ್ಯ. 

ಈ ಎರಡೂ ರೀತಿಯ ಭಾಗ್ಯಗಳು ಒಟ್ಟಾಗಿ ಸಿಗುವುದು ಎಷ್ಟು ಅಪರೂಪ ಎಂದು ಇನ್ನೊಮ್ಮೆ ಹೇಳಬೇಕಾಗಿಲ್ಲ. ಕಳೆದ ಭಾನುವಾರ (18 ಜನವರಿ 2026) ಇಂತಹ ಸುಂದರ ಸಮಾರಂಭವೊಂದು ಬೆಂಗಳೂರಿನಲ್ಲಿ ನಡೆಯಿತು. "ಸಮನ್ವಯ" ಅನ್ನುವ ಕವನ ಸಂಕಲನ ಬಿಡುಗಡೆ ಆಯಿತು. 

ಶೈಲಾ ಬಿ. ಅಗಡಿ ಅವರು ಕನ್ನಡ ಮತ್ತು ಹಿಂದಿಯಲ್ಲಿ ಆಗಾಗ ಬರೆದು ಜೋಪಾನವಾಗಿಟ್ಟಿದ್ದ ಕವನಗಳನ್ನು ಅವರ ಕುಟುಂಬದ ಸದಸ್ಯರು ಮತ್ತು ಸ್ನೇಹಿತರು ಒಟ್ಟುಗೂಡಿಸಿ, ಮುದ್ರಿಸಿ ಅಂದು ಬಿಡುಗಡೆ ಮಾಡಿದರು. ಪುಸ್ತಕದ ಚಿತ್ರವನ್ನು ಮೇಲುಗಡೆ ನೋಡಬಹುದು. 

*****

"ಸಮನ್ವಯ" ಕವನ ಸಂಕಲದಲ್ಲಿ ಇರುವ ಕವನಗಳಲ್ಲಿ "ಮಡಿಲ ಅಳಲು" ಮತ್ತು "ಸ್ವ-ಸಾಂತ್ವನ" ಎನ್ನುವ ಎರಡು ಕವನಗಳು ಮೇಲೆ ಚರ್ಚಿಸಿದ ಒಬ್ಬ "ತಾಯಿಯ ತೊಳಲಾಟ" ಕುರಿತಾದ ವಸ್ತುವನ್ನು ಬಿಂಬಿಸುವುವು. 

"ಮಡಿಲ ಅಳಲು" ಕವನದ ಕೆಲವು ಸಾಲುಗಳು:

ತುತ್ತು ಉಣುವ ಪುಟ್ಟ ಹಕ್ಕಿಗೆ 
ಹೊಂಬಣ್ಣದ ರೆಕ್ಕೆ ಮೂಡಿರಲು 
ಹೆತ್ತೊಡಲು ಬರಿದು ಮಾಡುವ 
ಸಂಚು ಹೂಡಿರಲು, ಪಣ ತೊಟ್ಟಿರಲು 
ಕಂದಾ, ನೀ ಮಡಿಲ ತೊರೆದು ಪೊದೆಯಾ? 

ಹೀಗೆ ದುಃಖಿಸುವ ಮಾತೃಹೃದಯ ತನಗೆ ತಾನೇ ಕೊಡುವ ಉತ್ತರ "ಸ್ವ-ಸಾಂತ್ವನ" ಕವನ. ಅದರ ಕೆಲವು ಸಾಲುಗಳು:

ಮರಳಿ ಪಡೆಯುವ ಅತಿಯಾಸೆ ಬೇಡ ನಿನಗೆ 
ಕುಸುಮಕೆ ಪ್ರೀತಿಯ  ಧಾರೆಯೆರೆಯನೆರೆವವರು 
ಮತ್ತೂ ಇಹರೆಂಬುದ ನೀ ಮರೆಯದಿರು 
ನೀ ನಡೆದು ಬಂದ ಪಥವ ಮರೆತೆಯಾ? 

ಹೀಗೆ  ತೊಳಲಾಡುವ ಪ್ರತಿ ತಾಯಿಯೂ ಹಿಂದೆ ಒಂದು ದಿನ ಇದೇ ರೀತಿ ತನ್ನ ಹುಟ್ಟಿನ ಗೂಡನ್ನು ತೊರೆದು ಬಂದವಳೇ ಅಲ್ಲವೇ? ಈಗ ಗೂಡು ಬಿಟ್ಟು ಹಾರುತ್ತಿರುವ ಹಕ್ಕಿಯೂ ಮುಂದೆ ಒಂದು ದಿನ ಇದೇ ಹಂತ ತಲುಪುವವಳಲ್ಲವೇ? ಇದೇ ತಾನೇ ಸೃಷ್ಟಿಯ ಮತ್ತು ಸಮಾಜದಲ್ಲಿ ಜೀವನ ನಡೆಸುವ ಸೊಬಗು?

*****

ಎರಡು ಹಿರಿಮೆಯ ಘಟ್ಟಗಳನ್ನು ದಾಟಿ, ಎಂಭತ್ತರ ವಿಶೇಷ ಹುಟ್ಟುಹಬ್ಬದ ಆಚರಣೆ ಮತ್ತು ಕವನ ಸಂಕಲನದ ಬಿಡುಗಡೆ ಸುಸಂದರ್ಭದಲ್ಲಿ ಶ್ರೀಮತಿ ಶೈಲಾ ಅವರಿಗೆ ಅನೇಕ ಸಾದರ ಶುಭಾಶಯಗಳು.

Friday, January 9, 2026

ಮನಸ್ಸು ನಿಲ್ಲಿಸುವ ಪ್ರಯತ್ನ


ಹಿಂದಿನ ಸಂಚಿಕೆಯಲ್ಲಿ "ಹದಿನಾರು ಮತ್ತು ಇಪ್ಪಂತ್ತೊಂದು" ಅನ್ನುವ ಶೀರ್ಷಿಕೆಯ ಅಡಿಯಲ್ಲಿ ಭಾರತೀಯ ಸಂಖ್ಯಾಶಾಸ್ತ್ರ ಹುಟ್ಟಿ ಬೆಳೆದ ರೀತಿಯ ಮತ್ತು ಅದರ ಜನ್ಮದಾತ ಎಂದು ಹೇಳುವ ಕಪಿಲ ಮುನಿ ಬಗ್ಗೆ ಸ್ವಲ್ಪ ವಿಚಾರ ಮಾಡಿದೆವು. ಕರ್ದಮ ಪ್ರಜಾಪತಿ ಮತ್ತು ದೇವಹೂತಿ ದೇವಿಯರ ಮಗನಾದ ಕಪಿಲನಾಗಿ ಶ್ರೀ ಮಹಾವಿಷ್ಣುವು ಅವತರಿಸಿದ ಸಮಾಚಾರವನ್ನು ನೋಡಿದೆವು. ಪ್ರಜಾಪತಿ ಕರ್ದಮ-ದೇವಹೂತಿ-ಕಪಿಲ ಮುನಿಗಳ ಕಾರ್ಯಕ್ಷೇತ್ರವಾದ ಗುಜರಾತು ರಾಜ್ಯದ ಪಾಟನ್ ಜಿಲ್ಲೆಯಲ್ಲಿರುವ ಸಿದ್ಧಿಪುರ, ಅಲ್ಲಿನ ಪ್ರಸಿದ್ಧ ಬಿಂದು ಸರೋವರ ಮತ್ತು "ಮಾತೃಗಯಾ" ಕ್ಷೇತ್ರದ ಬಗ್ಗೆ ನೋಡಿದ್ದೆವು. 

"I Salute You, Dear Mother" ಎಂಬ ಶೀರ್ಷಿಕೆಯ ಸಂಚಿಕೆಯಲ್ಲಿ ಹೆತ್ತ ತಾಯಿ ನೆನಪಿನಲ್ಲಿ ತಾಯಿಯನ್ನು ಉದ್ದೇಶಿಸಿ ಮಾಡುವ ಹದಿನಾರು ಸಂಖ್ಯೆಯ ಪಿಂಡಪ್ರದಾನ ಮತ್ತು ಪ್ರತಿ ಪಿಂಡ ಕೊಡುವ ಸಂದರ್ಭದಲ್ಲಿ ಹೇಳುವ ಶ್ಲೋಕಗಳು, ಅವುಗಳಲ್ಲಿರುವ ಭಾವ ತುಂಬಿದ ಅರ್ಥಗಳನ್ನೂ ನೋಡಿದೆವು. 

ಇದೇ ವಿಷಯಕ್ಕೆ ಸಂಬಂಧಿಸಿದ ಈ ಹಿಂದಿನ ಎರಡು ಸಂಚಿಕೆಗಳನ್ನು (ಒಂದು ಇಂಗ್ಲೀಷಿನಲ್ಲಿದೆ) ಇಲ್ಲಿ ಕ್ಲಿಕ್ ಮಾಡಿ ಓದಬಹುದು. 
*****

ಬಿಹಾರ ರಾಜ್ಯದಲ್ಲಿರುವ "ಗಯಾ" ಕ್ಷೇತ್ರದ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತು. ಶ್ರದ್ದಾಳು ಜನಗಳು ಈ ಗಯಾ ಕ್ಷೇತ್ರ ಯಾತ್ರೆ ಮಾಡಿ ಅಲ್ಲಿರುವ "ಗದಾಧರ" ದೇವಾಲಯದಲ್ಲಿ ಪಿತೃಶ್ರಾದ್ಧ ಮಾಡಿ, ಗದಾಧರನ ವಿಗ್ರಹದ ಮುಂದುಗಡೆ ಇರುವ ಕಲ್ಲಿನ "ವಿಷ್ಣುಪಾದ" ಸ್ಥಳದಲ್ಲಿ ಪಿಂಡಗಳನ್ನು ವಿಸರ್ಜನೆ ಮಾಡಿದರೆ ಪಿತೃಗಳಿಗೆ ಉತ್ತಮ ಗತಿ ಸಿಗುವುದೆಂದು ನಂಬಿಕೆ. ಸಾಮಾನ್ಯವಾಗಿ ಕಾಶಿಯಾತ್ರೆ ಮಾಡುವ ಯಾತ್ರಿಕರು ಮೊದಲು ಪ್ರಯಾಗ ತಲುಪಿ, ಅಲ್ಲಿ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿ (ಕೆಲವರು "ವೇಣೀದಾನ" ಸಹ ಮಾಡುತ್ತಾರೆ), ನಂತರ ಕಾಶಿಯ ವಿಶ್ವೇಶ್ವರ ಮತ್ತು ಬಿಂದುಮಾಧವ ದರ್ಶನ ಮಾಡಿ, ಆಮೇಲೆ ಗಯಾ ತಲುಪಿ ಅಲ್ಲಿ "ಸರ್ವ ಪಿತೃ ಶ್ರಾದ್ಧ" ಮಾಡುತ್ತಾರೆ. ಅಲ್ಲಿಗೆ "ಕಾಶಿಯಾತ್ರೆ" ಎಂದು ಹೇಳುವ ಸಂಪ್ರದಾಯ ಪದ್ಧತಿ ಪೂರ್ತಿ ಆಯಿತು ಎಂದು ನಂಬುತ್ತಾರೆ. 

ಗದಾಧರ ಅಂದರೆ ಯಾರು? ಗದಾಧರ ಅನ್ನುವ ಶ್ರೀ ಮಹಾವಿಷ್ಣುವನ್ನು ಹೀಗೆ ವರ್ಣಿಸಿ ಹೇಳುತ್ತಾರೆ:

ಬ್ರಹ್ಮಾಂಡ ಭುವನಾರಂಭ ಮೂಲಸ್ತoಭೋ ಗದಾಧರಃ 
ಕೌಮೋದಕೀ ಕರೇ ಯಸ್ಯ ತಂ ನಮಾಮಿ ಗದಾಧರಮ್ 

ಕೈಯಲ್ಲಿ "ಕೌಮೋದಕೀ" ಹೆಸರಿನ ಗದೆ ಹಿಡಿದು ಈ ಬ್ರಹ್ಮಾಂಡಕ್ಕೆ ಆಧಾರವಾದ ಕಂಭದಂತೆ ನಿಂತಿರುವ ಶ್ರೀ ಮಹಾವಿಷ್ಣುವೇ ಗದಾಧರ.

ಪಕ್ಕದಲ್ಲಿ ಕೊಟ್ಟಿರುವ ಗಯಾ ದೇವಾಲಯದ ಮೂಲ ಮೂರ್ತಿ ಚಿತ್ರವನ್ನು ನೋಡಿದರೆ ಕೌಮೋದಕಿ ಗದೆಯನ್ನು ಕಾಣಬಹುದು

ಭೂಮಿಯ ಯಾವ ಪ್ರದೇಶದಲ್ಲಿ ಶ್ರಾದ್ಧ ಮಾಡಿ "ಪಿಂಡಪ್ರದಾನ" ಮಾಡಿದರೂ ಅದು ಭೂಲೋಕದಲ್ಲಿ ಮಾಡಿದಂತೆ ಆಗುತ್ತದೆ. ಆದರೆ ಗಯಾದಲ್ಲಿರುವ ಗದಾಧರನ ಪಾದದ ಮೇಲೆ ಅದನ್ನು ಅರ್ಪಿಸಿದಾಗ ಅದು ಅನಂತ ವಿಶ್ವದ ಮೂಲ ಕಂಭದಂತೆ ನಿಂತಿರುವ ಶ್ರೀಹರಿಯ ಪದತಲದಲ್ಲಿ ಅರ್ಪಿಸಿದಂತೆ. ಈ ಕಾರಣಕ್ಕಾಗಿ ಗಯಾ ಪಿಂಡಪ್ರದಾನಕ್ಕೆ ವಿಶೇಷ ಮಹತ್ವ. 

ಗಯಾ ದೇವಾಲಯದ ಈ ಗದಾಧರ ಮೂರ್ತಿಯ ಮುಂಭಾಗದಲ್ಲಿ ಇರುವ ಅವನ ಪಾದವನ್ನು ಸ್ವಲ್ಪ ಕೆಳಗಡೆ ಕೊಟ್ಟಿರುವ ಚಿತ್ರದಲ್ಲಿ ಕಾಣಬಹುದು. ಈ ಚಿತ್ರದಲ್ಲಿ ಮಹಾವಿಷ್ಣುವಿನ ಪಾದದಲ್ಲಿರುವ ಧ್ವಜ, ವಜ್ರ, ಅಂಕುಶ ಮುಂತಾದ ರೇಖಾ ಲಕ್ಷಣಗಳನ್ನು ಕಾಣಬಹುದು. ಇವುಗಳ ವಿಶೇಷವನ್ನು ಮುಂದೆ ಸ್ವಲ್ಪ ಮಟ್ಟಿಗೆ ನೋಡೋಣ. 

ಪ್ರತಿದಿನ ಸಾವಿರಾರು ಯಾತ್ರಿಕರು ಈ "ವಿಷ್ಣುಪಾದ" ಇರುವ ಕಲ್ಲಿನ ಮೇಲೆ ಪಿಂಡಪ್ರದಾನ ಮಾಡುತ್ತಾರೆ. ಈ ಕಾರಣದಿಂದ ಅಲ್ಲಿ ರಾಶಿ ರಾಶಿ ಪಿಂಡಗಳು ಬಿದ್ದಿರುತ್ತವೆ. ಕೆಲವು ನಿಮಿಷಗಳಿಗೊಮ್ಮೆ ದೇವಾಲಯದ ಕಾರ್ಯಕರ್ತರು ಈ ಪ್ರದೇಶವನ್ನು ಸ್ವಚ್ಛ ಮಾಡುತ್ತಾರೆ. ಕೆಲವರು ಈ ಸಮಯಕ್ಕಾಗಿ ಕಾದುಕೊಂಡಿದ್ದು ಆ ಚಿನ್ಹೆಯಮೇಲೆ ಪಿಂಡಗಳನ್ನು ಹಾಕಿ ಧನ್ಯತಾ ಭಾವ ಹೊಂದುತ್ತಾರೆ. 

ಕೆಲವು ಕುಟುಂಬಗಳಲ್ಲಿ, ವಿಶೇಷವಾಗಿ ವೈಷ್ಣವರಲ್ಲಿ, ಮನೆ-ಮಠಗಳಲ್ಲಿ ಮಾಡುವ ಶ್ರಾದ್ಧ ಸಮಯದಲ್ಲಿ ಹೀಗೆ ಗಯಾಯಾತ್ರೆಯ ಸಮಯದಲ್ಲಿ ಅಲ್ಲಿಂದ ತಂದಿರುವ ತಾಮ್ರದ ವಿಷ್ಣು ಪಾದ ಇಟ್ಟು ಪೂಜಿಸಿ, ಅದರ ಮೇಲೆ ಪಿಂಡಪ್ರದಾನ ಮಾಡುವ ಪದ್ಧತಿ ಈಗಲೂ ನಡೆದುಬಂದಿದೆ. 

******

ಹಿಂದಿನ ಸಂಚಿಕೆಯಲ್ಲಿ ತಾಯಿ ದೇವಹೂತಿ ಮತ್ತು ಮಗ ಕಪಿಲ ಮುನಿಯ ಸಂವಾದವನ್ನು ಸ್ವಲ್ಪ ನೋಡಿದೆವು. ಜೀವನ-ಮರಣ ಚಕ್ರದಿಂದ ಬಿಡುಗಡೆ ಹೊಂದಲು ಯಾವ ದಾರಿ ಹಿಡಿಯಬೇಕೆಂಬ ಬಗ್ಗೆ ದೇವಹೂತಿ ಕೇಳಿದ ಪ್ರಶ್ನೆಗಳಿಗೆ ಮಗನಾದ ಕಪಿಲ ಮುನಿ ನೀಡಿದ ಉತ್ತರರೂಪದ ಉಪದೇಶ ಶ್ರೀಮದ್ ಭಾಗವತದ ಮೂರನೆಯ ಸ್ಕಂಧದಲ್ಲಿ "ಕಪಿಲ ಗೀತೆ" ಎಂದು ಪ್ರಸಿದ್ಧವಾಗಿದೆ. ಮಹಾಭಾರತದ ಮಧ್ಯದಲ್ಲಿ ಕುರುಕ್ಷೇತ್ರದ ಯುದ್ಧ ಪ್ರಾರಂಭವಾಗುವ ಸಮಯದಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ತಿಳಿಸಿದ "ಶ್ರೀಮದ್ ಭಗವದ್ಗೀತೆ" ಗೀತೆ ಎಂಬ ಹೆಸರಿಂದ ಪ್ರಸಿದ್ಧವಾಗಿದೆ. ಭಾಗವತದ ಮೂರನೆಯ ಸ್ಕಂಧದ ಈ "ಕಪಿಲ ಗೀತೆ" ಮತ್ತು ಹನ್ನೊಂದನೆಯ ಸ್ಕಂಧದ ಶ್ರೀಕೃಷ್ಣ ಉದ್ಧವನಿಗೆ ಮಾಡಿದ ಉಪದೇಶದ "ಉದ್ಧವ ಗೀತೆ" ಇವುಗಳು ಕೂಡ ಭಗವದ್ಗೀತೆಯಂತೆಯೇ ಅನೇಕ ಸಾರಯುತ ವಿಷಯಗಳನ್ನು ಒಳಗೊಂಡಿವೆ. 

ಜೀವನ-ಮರಣ ಚಕ್ರದಿಂದ ಬಿಡುಗಡೆಗಾಗಿ ಮಾಡುವ ಸಾಧನೆಯ ಮೊದಲ ಮೆಟ್ಟಿಲು ನಮ್ಮ ಮನಸ್ಸನ್ನು ನಿಯಂತ್ರಿಸಿ ಗಟ್ಟಿ ಮಾಡುವ ಕೆಲಸ. ನಮ್ಮ ಮನಸ್ಸು ಇಡೀ ಪ್ರಪಂಚದಲ್ಲಿ ಅತಿ ವೇಗವಾಗಿ ಓಡುವ ವಸ್ತು. ಅದಕ್ಕೇ ವೇಗದ ಸುದ್ದಿ ಬಂದಾಗಲೆಲ್ಲಾ ವಾಯುವೇಗ, ಮನೋವೇಗ ಅನ್ನುವುದು. ವಾಯುವೇಗಕ್ಕೂ ಮೀರಿದುದು ಮನೋವೇಗ. ಒಂದೇ ಕ್ಷಣದಲ್ಲಿ ವಿಶ್ವವನ್ನೆಲ್ಲಾ ಸುತ್ತಿ ಬರುವುದು ಅದು. ಯಾವುದೇ ಸಾಧನೆಯ ಕೆಲಸ ಮಾಡಲು ತೊಡಗಿದಾಗ ಈ ಮನಸ್ಸನ್ನು ನಿಯಂತ್ರಿಸುವುದೇ ದೊಡ್ಡ ಕಷ್ಟದ ಕಾರ್ಯ. 

ಕಪಿಲ ಮುನಿಯ ಉಪದೇಶದಲ್ಲಿ ಇದಕ್ಕೆ ಪರಿಹಾರ ಸಿಕ್ಕುತ್ತದೆ. ಪ್ರಾರಂಭದಲ್ಲಿ ಎಲ್ಲ ಕೆಲಸಗಳೂ ಕಷ್ಟವೇ. ಹುಟ್ಟಿದ ಮಗು ವರುಷ ತುಂಬುವ ವೇಳೆಗೆ ನಡೆಯಲು ಪ್ರಾರಂಭಿಸುತ್ತದೆ. ಅನೇಕ ಸಲ ಬೀಳುತ್ತದೆ. ಮೊದಲು ಗೋಡೆ ಹಿಡಿದು ನಡೆಯುತ್ತದೆ. ನಂತರ ತಾಯಿಯ ಕೈಬೆಟ್ಟು ಹಿಡಿದು ನಡೆಯುತ್ತದೆ. ಕ್ರಮೇಣ ತಾನೇ ಮೆಲ್ಲಮೆಲ್ಲನೆ ನಡೆಯುತ್ತದೆ. ಬಿದ್ದಾಗ ಮತ್ತೆ ಮೇಲೇಳುತ್ತದೆ. ಹೀಗೆ ಮಾಡುತ್ತ ಮಾಡುತ್ತಾ ಕಲಿಯುತ್ತದೆ. ಮನಸ್ಸಿನ ಹತೋಟಿಯೂ ಹೀಗೆಯೇ. 

ಕಪಿಲ ಮುನಿಯು ಇದಕ್ಕೆ ಉಪಾಯವಾಗಿ "ಸಜ್ಜನರ ಸಹವಾಸ" ಎನ್ನುವ ಪರಿಹಾರ ಹೇಳುತ್ತಾನೆ. ನಾವು ಚಿಕ್ಕವರಿದ್ದಾಗ ನಮ್ಮ ಹಿರಿಯರು "Tell me who is your friend; I will tell you who you are" ಎಂದು ಒಂದು ಗಾದೆ ಹೇಳುತ್ತಿದ್ದರು. ಜೊತೆಯವರು ಸೋಮಾರಿಗಳಾದರೆ ನಾವೂ ಸೋಮಾರಿಗಳಾಗುತ್ತೇವೆ. ಅವರು ದುರಭ್ಯಾಸಗಳ ದಾಸರಾಗಿದ್ದಾರೆ ನಾವೂ ಹಾಗಾಗುತ್ತೇವೆ. ಅವರು ನಡೆಯುವ ರೀತಿಯೇ ನಮಗೆ ಮಾದರಿ ಆಗುತ್ತದೆ. ಸಾಧನೆಯಲ್ಲಿಯೂ ಹೀಗೆಯೇ. ಆದ್ದರಿಂದ ಮೊದಲು ಸಜ್ಜನರನ್ನು ಹುಡುಕಿ ಅವರ ಸಂಗದಲ್ಲಿ ಆದಷ್ಟೂ ಹೆಚ್ಚು ಕಾಲ ಕಳೆಯಬೇಕು. ಶ್ರೀ ಮೋಹನದಾಸರ ಕೋಲೆ ಪದದಲ್ಲಿ "ಸಜ್ಜನರ ಸಹವಾಸ ಮಲ್ಲಿಗೆ ಮುಡಿದಂತೆ, ದುರ್ಜನರ ಸಂಗ ಮುಲ್ಲಂಗಿ ತಿಂದು ತೇಗಿದಂತೆ ಕೋಲೆ" ಎಂದು ಹೇಳುತ್ತಾರೆ. ಮಲ್ಲಿಗೆ ಹೂವು ಮುಡಿದು ಮಾರನೆಯ ದಿನ ಅದನ್ನು ಬಿಸಾಡಿದರೂ ತಲೆಯಲ್ಲಿ ಮಲ್ಲಿಗೆ ಸುವಾಸನೆ ಇರುವುದು. ಮೂಲಂಗಿಯೂ ಹಾಗೆ. ತಿಂದು ಎಷ್ಟೋ ಹೊತ್ತಿನಮೇಲೆ ತೇಗಿದರೂ ಅದೇ ಕಮಟು ವಾಸನೆಯೇ!

ಆಯಿತು. ಒಪ್ಪೋಣ. ಸಜ್ಜನರ ಸಂಗ ಪ್ರಾರಂಭಿಸಿದೆವು. ಅವರು ದಿನಕ್ಕೆ ಇಪ್ಪತ್ತುನಾಲ್ಕು ಗಂಟೆಯೂ ಹತ್ತಿರವಿರುವುದಿಲ್ಲ. ಮೇಲಾಗಿ, ನಾವು ಒಂಟಿಯಾಗಿದ್ದಾಗ ಮನಸ್ಸು ಹಿಡಿದಿಡುವುದು ಇನ್ನೂ ಕಷ್ಟ. ಅದಕ್ಕೆ ಏನು ಉಪಾಯ?
 
ಈ ಕಠಿಣ ಮತ್ತು ಜಟಿಲ ಸಮಸ್ಯೆಗೆ ಕಪಿಲ ಮುನಿ ಹೇಳಿ ಕೊಡುವ ಉಪಾಯವೆಂದರೆ ಒಂಟಿಯಾಗಿದ್ದಾಗಲೆಲ್ಲಾ ಪರಮಾತ್ಮನ ಪಾದದ ಬಗ್ಗೆ ಚಿಂತನೆ ಮಾಡುವುದು:

ಸಂಚಿಂತಯೇತ್ ಭಗವತಃ ಚರಣಾರವಿಂದಮo  
ವಜ್ರಾoಕುಶ ಧ್ವಜ ಸರೋರುಹ ಲಾಂಛನಾಡ್ಯo
ಉತ್ತುಂಗರಕ್ತವಿಲಸನ್  ನಖಚಕ್ರವಾಳ 
ಜ್ಯೋತ್ಸ್ನಾಭಿರಾಹತಾಮಹದ್ ಹೃದಯಾಂಧಕಾರಂ 

ಇದು ಭಾಗವತದ ಅತ್ಯಂತ ಪ್ರಸಿದ್ಧವಾದ ಶ್ಲೋಕಗಳಲ್ಲಿ ಒಂದು.

ಪರಮಾತ್ಮನ ಕಮಲಗಳಂತಿರುವ ಪಾದಗಳನ್ನು ಯಾವಾಗಲೂ ನೆನೆಯುತ್ತಿರಬೇಕು. ಅದರಲ್ಲಿ ಮಿಂಚು, ಅಂಕುಶ, ಧ್ವಜ, ಕಮಲ ಮುಂತಾದ ರೇಖೆಗಳಿವೆ. ಆ ಪಾದದ ಬೆರಳುಗಳ ಉಗುರುಗಳಿಂದ ಸದಾಕಾಲವೂ ಚಂದ್ರನ ಬೆಳದಿಂಗಳಿಗಿಂತಲೂ ಅಧಿಕವಾದ (ಬೆಳಕು ಬೆಳದಿಂಗಳಿಗಿಂತ ಕೋಟಿ ಕೋಟಿ ಬಹುಪಾಲು ಹೆಚ್ಚು. ಆದರೆ ಸೂರ್ಯನ ಬೆಳಕಿನಂತೆ ಕಣ್ಣು ಕುಕ್ಕುವುದಲ್ಲ. ಹೀಗೆ) ಆದರೆ ಹಿತವಾದ ಪ್ರಕಾಶ ಹೊರಹೊಮ್ಮುತ್ತಿರುತ್ತದೆ. ಈ ಬೆಳದಿಂಗಳ ಬೆಳಕು ನಮ್ಮ ಹೃದಯ, ಮನಸ್ಸುಗಳಲ್ಲಿರುವ ಕತ್ತಲನ್ನು ಹೊರದೋಡಿಸುತ್ತದೆ. (ಒಮ್ಮೆ ಆ ಕತ್ತಲೆ ಹೋದರೆ ಮುಂದೆ ಎಲ್ಲವೂ ಸುಗಮವಾಗುವುದು ಎಂದು ಭಾವ). 


ಕೊಟ್ಟಿರುವ ಚಿತ್ರವನ್ನು ಹಿಗ್ಗಿಸಿ ನೋಡಿದರೆ ಅಥವಾ ಪಕ್ಕದಲ್ಲಿ ಕೊಟ್ಟ್ಟಿರುವ ತಾಮ್ರದ ವಿಷ್ಣುಪಾದವನ್ನು ನೋಡಿದರೆ ಈ ರೇಖೆಗಳನ್ನು ಚೆನ್ನಾಗಿ ಕಾಣಬಹುದು. 
*****

ನಮ್ಮ ಮನಸ್ಸುಗಳೂ ಮದವೇರಿದ ಆನೆಗಳಂತೆ. ದಿಕ್ಕಾಪಾಲಾಗಿ ಓಡುತ್ತಿರುತ್ತವೆ. ಎಂತಹ ಮದಿಸಿದ ಆನೆಯಾದರೂ ಮಾವುತನ ಅಂಕುಶ ಅದನ್ನು ಒಂದು ನಿಮಿಷದಲ್ಲಿ ಹಿಡಿತಕ್ಕೆ ತರಬಲ್ಲದು. ಪರಮಾತ್ಮನ ಪಾದಗಳ ಚಿಂತನೆಯಿಂದ ಅದರಲ್ಲಿರುವ ಅಂಕುಶ ನಮ್ಮ ಮನಸ್ಸೆಂಬ ಆನೆಗಳನ್ನು ಹಿಡಿತಕ್ಕೆ ತರುತ್ತದೆ ಎಂದು ಪರ್ಯಾಯವಾದ ಅರ್ಥ. 

ಇದೇ ವಿಷಯವನ್ನು ಶ್ರೀ ಕನಕದಾಸರು ತಮ್ಮ "ಕೇಶವನಾಮ" ಕೃತಿಯಲ್ಲಿ (ಈಶ ನಿನ್ನ ಚರಣ ಭಜನೆ ಆಸೆಯಿಂದ ಮಾಡುವೆನೋ) ಹೀಗೆ ಹೇಳುತ್ತಾರೆ:

ಹಿಂದನೇಕ ಯೋನಿಗಳಲಿ ಬಂದುಬಂದು ನೊಂದೆನಯ್ಯ 
ಇಂದು ಭವದ ಬಂಧ ಬಿಡಿಸೋ ತಂದೆ ಗೋವಿಂದಾ 

ಭಷ್ಟನೆನಿಸಬೇಡ ಕೃಷ್ಣ ಇಷ್ಟು ಮಾತ್ರ ಬೇಡಿಕೊಂಬೆ 
ಶಿಷ್ಟರೊಳಗೆ ಇಟ್ಟು ಕಷ್ಟ ಬಿಡಿಸೋ ವಿಷ್ಣುವೇ  

ಈ ಸಜ್ಜನರ ಸಂಗವನ್ನೇ "ಸತ್ಸಂಗ" ಎಂದು ಪ್ರೀತಿಯಿಂದ ಕರೆಯುವುದು. ಮನಸ್ಸು ನಿಲ್ಲಿಸುವುದು ಬಲು ಕಷ್ಟ. ಆದರೂ ಸತತ ಪ್ರಯತ್ನದಿಂದ ಮತ್ತು ಸಜ್ಜನರ ಸಹವಾಸದಿಂದ ಅದನ್ನು ಸಾಧಿಸಬೇಕು. 

Thursday, January 1, 2026

ಹದಿನಾರು ಮತ್ತು ಇಪ್ಪತ್ತೊಂದು


ಅದೊಂದು ಬಲು ಸುಂದರವಾದ ಮಗು. ಆಗ ತಾನೇ ಹುಟ್ಟಿದ ಕೂಸು. ಅರಳಿದ ಕಮಲದಲ್ಲಿ ಮಲಗಿದ್ದ ಶಿಶು. ಸ್ವಲ್ಪ ವಿಚಿತ್ರವಾದ ಹಸುಳೆ. ಎಲ್ಲಾ ಸರಿ ಇದ್ದರೂ ತಲೆಗಳು ಮಾತ್ರ ನಾಲ್ಕು! ಅದಕ್ಕೆ ಸರಿಯಾಗಿ ನಾಲ್ಕು ಕೈಗಳು. ಅತಿ ಮೋಹಕವಾದ ಶರೀರ. ಎದ್ದ ಮಗು ತಕ್ಷಣ ಕಣ್ಣು ಬಿಟ್ಟಿತು. ತನ್ನ ಸುತ್ತ-ಮುತ್ತ ನೋಡಿತು. 

ಎಲ್ಲ ಕಡೆ ಆವರಿಸಿರುವ ಕತ್ತಲು. ಯಾರೂ ಬೇರೆಯವರು ಕಾಣರು. ತಾನು ಯಾರು? ತನಗೆ ಜನ್ಮ ಕೊಟ್ಟವರು ಯಾರು? ಎಲ್ಲಿಂದ ಬಂದೆ? ಯಾವುದೂ ತಿಳಿಯದು. ಇದೇನು ವಿಚಿತ್ರ?

ಸುಮ್ಮನೆ ಇರುವಂತಹ ಮಗುವಲ್ಲ ಅದು. ತನಗೆ ಆಸರೆಯಾಗಿ, ಹಾಸಿಗೆಯಾಗಿ ಹರಡಿದ್ದ ಕಮಲವನ್ನು ಗಮನಿಸಿತು. ಅದರ ಕೆಳಗಿದ್ದ ದೊಡ್ಡ ಕಾಂಡವನ್ನು ಕಂಡಿತು. ಕಮಲದ ದೇಟಿನೊಳಗೆ ಇಳಿಯಿತು. ಇಳಿದು ಎಲ್ಲೆಡೆ ಹುಡುಕಿತು. ಅಲ್ಲಿ ಎಷ್ಟು ಹುಡುಕಿದರೂ ಯಾರೂ ಕಾಣಲಿಲ್ಲ. 

ಕಾಂಡದ ಆಳದಿಂದ ಹೊರಗೆ ಬಂದು ಅದೇ ಕಮಲದಲ್ಲಿ ಪದ್ಮಾಸನ ಹಾಕಿ ಕೂತಿತು. ಅದಕ್ಕೇನು ಭಯವಿರಲಿಲ್ಲ. ಆದರೂ ಮುಂದೆ ಏನು ಮಾಡಬೇಕೆಂಬ ಸಮಸ್ಯೆ ಎದುರಿಗೆ ಇತ್ತು. ತನಗೆ ಜನ್ಮದಾತರು ಯಾರು? ಮುಂದೆ ತನ್ನ ಕೆಲಸವೇನು? ಈ ಪ್ರಶ್ನೆಗಳಿಗೆ ಉತ್ತರ ಹುಡುಕಲು ತೊಡಗಿತು. 

*****

ಹೀಗೆ ಕುಳಿತ ಮಗುವಿಗೆ ವಿಶಾಲ ಆಕಾಶದಲ್ಲಿ ಶಬ್ದದ ಅನುಭವ ಆಯಿತು. ಮಗು ಆ ಶಬ್ದವನ್ನು ಗಮನವಿಟ್ಟು ಕೇಳಿತು. ಅದು ವಿಶ್ವದ ಮೊದಲ "ಆಕಾಶವಾಣಿ". ಶರೀರವಿಲ್ಲದ, ಆದರೆ ಚೆನ್ನಾಗಿ ಕೇಳಿಸಿದ ಧ್ವನಿ. ಅದೊಂದು "ಅಶರೀರವಾಣಿ". ಎರಡೇ ಎರಡು ಶಬ್ದಗಳು. ನಂತರ ಮತ್ತೇನಿಲ್ಲ. ಅಷ್ಟೇ.

"ಹದಿನಾರು. ಇಪ್ಪತ್ತೊಂದು."

ಹದಿನಾರು ಅನ್ನುವ ಒಂದು ಶಬ್ದ. ಇಪ್ಪತ್ತೊಂದು ಅನ್ನುವ ಇನ್ನೊಂದು ಶಬ್ದ. ಈ ಶಬ್ದಗಳ ಹಿಂದೆ ಮೌನ. ಈ ಎರಡು ಶಬ್ದಗಳ ನಂತರ ಮತ್ತೆ ಅದೇ ಮೌನದ ತಾಂಡವ. 

ಮಗು ಈ ಎರಡು ಶಬ್ದಗಳಿಗೆ ಅರ್ಥ ಹುಡುಕಿತು. ಆಗ ಅದಕ್ಕೆ ಹೊಳೆಯಿತು. ಈ ಎರಡು ಶಬ್ದಗಳು ಎರಡು ಸಂಖ್ಯೆಯನ್ನು ಹೇಳುತ್ತಿವೆ. ಈ ಸಂಖ್ಯೆಗಳ ಅರ್ಥವೇನು?  

ಒಹೋ! ಇವು ವರ್ಣಮಾಲೆಯ ಅಕ್ಷರಗಳು!

ಯಾವ ಅಕ್ಷರಗಳು? ಮೊದಲನೆಯದು ಹದಿನಾರು ಎಂದು. ಎರಡನೆಯದು ಇಪ್ಪತ್ತೊಂದು ಎಂದು. ಅಷ್ಟು ಸಂಖ್ಯೆಯ ಸ್ವರ ಅಕ್ಷರಗಳಿಲ್ಲ. ಆದ್ದರಿಂದ ಅವು ವ್ಯಂಜನಾಕ್ಷರಗಳು. 

*****

ಹದಿನಾರು. ಕ-ವರ್ಗದ ಐದು ಅಕ್ಷರಗಳು. ಚ-ವರ್ಗದ ಐದು ಅಕ್ಷರಗಳು ಟ-ವರ್ಗದ ಐದು ಅಕ್ಷರಗಳು. ಅಲ್ಲಿಗೆ ಹದಿನೈದಾಯಿತು. ತ-ವರ್ಗದ "ತ" ಅನ್ನುವುದು ಹದಿನಾರನೆಯ ಅಕ್ಷರ. 

ಮುಂದೆ ಪ-ವರ್ಗದ ಮೊದಲನೆಯ ಅಕ್ಷರ "ಪ" ಅನ್ನುವುದು ಇಪ್ಪತ್ತೊಂದನೆಯ ಅಕ್ಷರ!

ಎರಡನ್ನೂ ಕೂಡಿಸಿದರೆ "ತಪ' ಎಂದಾಯಿತು. "ತಪ" ಅಂದರೆ ಏನು? "ತಪ್ ತಪನೇ" ಎಂದು. ತಪ ಅನ್ನುವುದರ ಅರ್ಥ "ಆಲೋಚಿಸು" ಎಂದು. ಯಾವುದನ್ನಾದರೂ ಕುರಿತು ಒಂದೇ ಮನಸ್ಸಿನಿಂದ ಯೋಚಿಸುವುದನ್ನೇ ತಪಸ್ಸು ಎನ್ನುವುದು. 

ಹೀಗೆ ಯೋಚಿಸಿದಾಗ ಮಗುವಿಗೆ ಆಕಾಶವಾಣಿಯ ಎರಡು ಶಬ್ದಗಳ ಸೂಚನೆಯ ಅರ್ಥವಾಯಿತು. ಜನನಕ್ಕೆ ಕಾರಣವಾಗಿ ಹುಟ್ಟಿಸಿ ತಂದವನು "ತಂದೆ". ತನ್ನ ಜನನಕ್ಕೆ ಕಾರಣನಾದ ತಂದೆಯನ್ನು ಕುರಿತು ತಪಸ್ಸು ಮಾಡಲು ಪ್ರಾರಂಭಿಸಿತು. 
******

ಅದೇನು ಸಾಧಾರಣವಾದ ತಪಸ್ಸಲ್ಲ. ಒಂದೆರಡು ದಿನ, ವಾರ, ತಿಂಗಳುಗಳ ತಪಸ್ಸಲ್ಲ. ಒಂದೆರಡು ವರುಷಗಳ ತಪಸ್ಸೂ ಅಲ್ಲ. ಒಂದು ನೂರು ವರುಷಗಳ ತಪಸ್ಸು. ನಮ್ಮ ವರುಷದಂತೆ ಮನುಷ್ಯಮಾನದ ವರುಷವಲ್ಲ. ಬ್ರಹ್ಮದೇವರ ವಯೋಮಾನದ ಲೆಕ್ಕದ ಒಂದು ನೂರು ವರ್ಷ!

ಒಂದು ನೂರು ವರುಷದ ತಪಸ್ಸಿನ ನಂತರ ಕೂಸಿನ ತಂದೆ ಕಾಣಿಸಿಕೊಂಡ. ಅವನು ನೀರಿನ ಮೇಲೆ ಮಲಗಿದವನು."ನಾರಾ" ಅಂದರೆ ನೀರು. ಆದ್ದರಿಂದ ಅವನು "ನಾರಾಯಣ".  

ಅವನು ಮಲಗಿರುವುದು ಹಾಲಿನ ಕಡಲ ಮೇಲಲ್ಲವೇ? ಹೌದು. ಆದರೆ ಹಾಲೂ ನೀರಿನಂತೆ. ದ್ರವ ರೂಪ. ಮೇಲಾಗಿ ಇದು ನಡೆದಾಗ ಅವನು "ಪ್ರಳಯಜಲ" ಅಂದರೆ ಎಲ್ಲೆಲ್ಲೂ ಆವರಿಸಿದ್ದ ನೀರಿನ ಮೇಲೆ ಮಲಗಿದ್ದವನು. ಯಾರಾದರೂ ಒಂದು ದ್ರವದ ಮೇಲೆ ಮಲಗಲು ಸಾಧ್ಯವೇ? ಅವನಿಗೆ ಸಾಧ್ಯ. 

ಹೀಗೆ ಕಾಣಿಸಿಕೊಂಡ ತಂದೆ ನಾರಾಯಣ ಮಗ ಬ್ರಹ್ಮನಿಗೆ ನಾಲ್ಕು ಶ್ಲೋಕಗಳ ಸಂಕ್ಷಿಪ್ತವಾದ ಉಪದೇಶ ಮಾಡಿದ. ಇದೇ ಪ್ರಪಂಚದ ಮೊದಲ ಪಾಠ. ಮೊಟ್ಟ ಮೊದಲ ಶಿಕ್ಷಣ. ಅದನ್ನೇ "ಚತುಶ್ಲೋಕೀ ಭಾಗವತ" ಅನ್ನುತ್ತಾರೆ. ಈ ನಾಲ್ಕು ಶ್ಲೋಕಗಳಲ್ಲಿ ಇಡೀ ಸೃಷ್ಟಿಯ ರಹಸ್ಯವನ್ನು ಕಮಲನಾಭ ನಾರಾಯಣನು ಕಮಲಸಂಭವ ಬ್ರಹ್ಮನಿಗೆ ತಿಳಿಸಿ ಹೇಳಿದ. 

***** 

"ಪ್ರಜ್ಞೆ" ಮತ್ತು "ಪ್ರತಿಭೆ" ಅನ್ನುವ ಪದಗಳಿಗೆ ಈಗಿನ ವಾಡಿಕೆಯಲ್ಲಿ ಅನೇಕ ರೀತಿಯ ಅರ್ಥಗಳನ್ನು ಆರೋಪಿಸುತ್ತಾರೆ (ಕೊಡುತ್ತಾರೆ). 

ಒಂದು ವಿಷಯವನ್ನು ಹೇಳಿದರೆ ಅದಕ್ಕೆ ಸಂಬಂಧಿಸಿದ ಎಲ್ಲ ಬೇರೆ ಬೇರೆ ವಿಷಯಗಳನ್ನು ಒಟ್ಟಿಗೆ ತಿಳಿಯುವ ಶಕ್ತಿಗೆ "ಪ್ರಜ್ಞೆ" ಎಂದು ಹೆಸರು. ("ನಿನಗೆ ಮೈಮೇಲೆ ಪ್ರಜ್ಞೆ ಇಲ್ಲವೇ?" ಎಂದು ಕೆಲವೊಮ್ಮೆ ಹೇಳುವುದುಂಟು. ಹೀಗೆ ಹೇಳಿದರೆ "ನಿನಗೆ ಸಮಯ-ಸಂದರ್ಭಗಳ ಹಿನ್ನೆಲೆಯಲ್ಲಿ ತಿಳಿಯುವ ಶಕ್ತಿ ಇಲ್ಲವೇ?" ಎಂದು ತಾನೇ ಕೇಳುವುದು? "ಮೈಮೇಲೆ ಎಚ್ಚರ ಇಲ್ಲವೇ?" ಅನ್ನುವುದು ಅದರ ಅರ್ಥವಲ್ಲ).

ಇದೇ ರೀತಿ ಸ್ವಲ್ಪ ವಿಷಯವನ್ನು ಹೇಳಿದರೆ ಊಹಾಪೋಹ ಮಾಡಿ ಅದನ್ನು ವಿಸ್ತರಿಸಿ ವಿಶಾಲವಾಗಿ ತಿಳಿದುಕೊಳ್ಳುವುದಕ್ಕೆ "ಪ್ರತಿಭೆ" ಎಂದು ಹೆಸರು. 

ಪ್ರಜ್ಞಾ ಮತ್ತು ಪ್ರತಿಭೆ ಇರುವವರಿಗೆ ಸ್ವಲ್ಪ ಸುಳಿವು ಕೊಟ್ಟರೆ ಸಾಕು. ಒಂದು ಸಣ್ಣ ಬೀಜ ಮುಂದೆ ಅರಳಿ ಒಂದು ದೊಡ್ಡ ಮರ ಆಗುವಂತೆ ಸೂಕ್ಶ್ಮವಾಗಿ ಹೇಳಿದ ವಿಷಯ ಅವರ ತಲೆಯಲ್ಲಿ ಅರಳಿ ಪೂರ್ತಿ ಅರಿವು ತುಂಬಿಕೊಳ್ಳುತ್ತದೆ. ಇದನ್ನೇ "ಉಗುರು ತೋರಿಸಿದರೆ ಹಸ್ತ ನುಂಗುವುದು" ಎಂದು ಹೇಳುವುದು.

ಬ್ರಹ್ಮದೇವರಿಗಿಂತ ಹೆಚ್ಚಿನ ಪ್ರಜ್ಞೆ ಮತ್ತು ಪ್ರತಿಭೆ ಈ ಜಗತ್ತಿನಲ್ಲಿ ಯಾರಿಗುಂಟು? 

***** 

ತಂದೆ ನಾರಾಯಣ ಹೇಳಿದ ಪಾಠದಿಂದ ಮುಂದಿನ ದಾರಿ ತಿಳಿದ ಚತುರ್ಮುಖ ಬ್ರಹ್ಮದೇವರು ಸೃಷ್ಟಿ ಕಾರ್ಯವನ್ನು ಪ್ರಾರಂಭಿಸಿದರು. ತನ್ನ ಮಾನಸ ಪುತ್ರರಾದ ನಾರದರಿಗೆ ಮುಂದೊಮ್ಮೆ ತಾವು ತಂದೆಯಿಂದ ಕೇಳಿದ ಭಾಗವತವನ್ನು ಉಪದೇಶಿಸಿದರು. ಕಾಲಾನಂತರ ಪರಾಶರ-ಸತ್ಯವತಿಯರ ಮಗನಾದ, ಶ್ರೀಹರಿಯ ಇನ್ನೊಂದು ರೂಪನಾದ ವೇದವ್ಯಾಸ ಮಹರ್ಷಿಯು ನಾರದರಿಂದ ಇದನ್ನು ಪಡೆದರು. ಅದನ್ನು ವಿಶಾಲವಾದ, ಹದಿನೆಂಟನೆಯ ಪುರಾಣವಾದ, ಹದಿನೆಂಟು ಸಾವಿರ ಶ್ಲೋಕದ "ಭಾಗವತ ಪುರಾಣ" ಮಾಡಿ ವಿವರಿಸಿದರು. 

ವೇದವ್ಯಾಸರು ಈ ಭಾಗವತ ಮಹಾಪುರಾಣವನ್ನು ತಮ್ಮ ಮಗನಾದ ಶುಕ ಮಹರ್ಷಿಗೆ ಕೊಟ್ಟರು. ಪರೀಕ್ಷಿತ್ ಮಹಾರಾಜನು ಶುಕಮುಖವಾಗಿ ಇದನ್ನು ಕೇಳಿದನು. ನಂತರ ಅದು ಎಲ್ಲೆಡೆ ಹರಡಿತು. 

*****

ಚತುರ್ಮುಖ ಬ್ರಹ್ಮರ ಮತ್ತೊಬ್ಬ ಮಗನಾದ ಕರ್ದಮ ಪ್ರಜಾಪತಿ ತನಗೆ ಬಂದ ಸೂಚನೆಯಂತೆ ಸ್ವಾಯಂಭುವ ಮನು ಮತ್ತು ಶತರೂಪಾ ದೇವಿಯರ ಮಗಳಾದ ದೇವಹೂತಿ ದೇವಿಯನ್ನು ವಿವಾಹವಾದರು. ಕರ್ದಮರ ತಪಸ್ಸಿಗೆ ಮೆಚ್ಚಿ ಅವರ ಮಗನಾಗಿ ಹುಟ್ಟುತ್ತೇನೆ ಎಂದು ಮಾತು ಕೊಟ್ಟಿದ್ದ ಮಹಾವಿಷ್ಣುವು ಕರ್ದಮ-ದೇವಹೂತಿಯರ ಮಗನಾಗಿ "ಕಪಿಲ ಋಷಿ" ಎಂದು ಅವತರಿಸಿದನು. ಕರ್ದಮರು ವಾನಪ್ರಸ್ಥರಾದ ಸಮಯದಲ್ಲಿ ದೇವಹೂತಿಯ ಮುಂದಿನ ರಕ್ಷಣೆಯ ಹೊಣೆ ಕಪಿಲರಿಗೆ ಒಪ್ಪಿಸಿದರು. 

ಸ್ವಲ್ಪ ಕಾಲಾನಂತರ ದೇವಹೂತಿಯು ಮಗನಾದ ಕಪಿಲನ ಬಳಿಗೆ ಬಂದು ತನಗೆ ಉಪದೇಶ ಮಾಡುವಂತೆ ಕೇಳಿದಳು. 

"ಕಪಿಲ, ನನಗೆ ಇನ್ನು ಬದುಕಿದ್ದು ಸಾಕಾಯಿತು. ನನಗೆ ಉಪದೇಶ ಮಾಡಿ ಮೋಕ್ಷ ಮಾರ್ಗವನ್ನು ಸೂಚಿಸು"

"ಅಮ್ಮಾ, ನೀನು ನನ್ನ ಹೆತ್ತ ತಾಯಿ. ತಾಯಿತನ ಬಹಳ ದೊಡ್ಡದು. ನಾನು ನಿನಗೆ ನಮಸ್ಕರಿಸಬೇಕೇ ಹೊರತು ನೀನು ನನಗೆ ನಮಸ್ಕಾರ ಮಾಡುವಂತಿಲ್ಲ. ಸನ್ಯಾಸಿಗಳಾದವರೂ ಸಹ ತಾಯಿಗೆ ನಮಸ್ಕರಿಸುತ್ತಾರೆ. ಗುರುವಿಗೆ ನಮಸ್ಕರಿಸದಿರುವವರಿಗೆ ಉಪದೇಶ ಮಾಡುವಂತಿಲ್ಲ. ಆದ್ದರಿಂದ ನಾನು ನಿನಗೆ ಉಪದೇಶ ಮಾಡಲಾಗದು"

"ಕಪಿಲ, ನೀನು ನಿಮಿತ್ತಕ್ಕೆ ನನ್ನ ಮಗನಾದರೂ ನೀನು ಶ್ರೀಹರಿ ಎಂದು ನಾನು ಬಲ್ಲೆ. ಆ ಕಾರಣದಿಂದ ನಾನು ನಮಸ್ಕರಿಸಬಹುದು. ನೀನು ಉಪದೇಶ ಮಾಡಬಹುದು"

"ನಾನು ಶ್ರೀಹರಿ ಎನ್ನುವ ಜ್ಞಾನ ನಿನಗೆ ಬಂದಿದೆ ಅಂದರೆ ಮತ್ತೆ ಯಾವ ಉಪದೇಶವೂ ಬೇಕಾಗಿಲ್ಲವಲ್ಲ!"

"ಅದೇನೇ ಇರಲಿ. ನಿನ್ನಿಂದ ವಿವರವಾಗಿ ಉಪದೇಶ ಪಡೆಯಬೇಕೆಂದು ನನಗೆ ಆಸೆ. ಈ ಆಸೆಯನ್ನು ಪೂರ್ಣ ಮಾಡು" 

ಮುಂದೆ ಮಾತಿಲ್ಲ. ತಾಯಿಯ ಆಸೆ ಪೂರ್ತಿ ಮಾಡಲು ಕಪಿಲ ಮುನಿಯು ದೇವಹೂತಿ ದೇವಿಗೆ ವಿವರವಾಗಿ ಮುಕ್ತಿ ಮಾರ್ಗವನ್ನು ಉಪದೇಶಿಸಿದನು. ಇದು ಭಾಗವತದ ಮೂರನೆಯ ಸ್ಕಂಧದಲ್ಲಿ "ಕಪಿಲ ಗೀತೆ" ಎಂದು ಪ್ರಸಿದ್ಧವಾಗಿದೆ. 

ಕರ್ದಮ-ದೇವಹೂತಿ-ಕಪಿಲ ಮುನಿ ಇವರ ಬಗ್ಗೆ ಹೆಚ್ಚಿನ ವಿವರ ಇರುವ ಇಂಗ್ಲಿಷ್ ಬ್ಲಾಗ್ ಇಲ್ಲಿ ಕ್ಲಿಕ್ ಮಾಡಿ ಓದಬಹುದು.  
*****

ಭಾರತೀಯ ತತ್ವ್ವಶಾಸ್ತ್ರದಲ್ಲಿ ಸಂಖ್ಯೆಗಳಿಗೆ ಬಹಳ ಮಹತ್ವ ಇದೆ. ಅನೇಕ ಗಹನ ವಿಷಯಗಳನ್ನು ಅರಿಯಲು ಅಂಕಿ-ಸಂಖ್ಯೆಗಳ ತಿಳುವಳಿಕೆ ಬಹಳ ಅವಶ್ಯಕ. ಇದೇ ಕಪಿಲ ಮಹರ್ಷಿ ಮುಂದೆ ಮೊದಲು ಸೂಚಿಸಿದ "ಹದಿನಾರು-ಇಪ್ಪತ್ತೊಂದು" ಸೂತ್ರವನ್ನು ಹಿಗ್ಗಿಸಿ "ಸಂಖ್ಯಾಶಾಸ್ತ್ರ" ರಚಿಸಿದ ಮೂಲ ಪುರುಷರು ಎಂದು ನಂಬಿಕೆ. ವೈದಿಕ ವಾಂಗ್ಮಯ ತಿಳಿಯುವ ಪ್ರಯತ್ನ ಮಾಡುವವರಿಗೆ ಇದರ ಅಭ್ಯಾಸ ಬೇಕು. 

ಹದಿನಾರು-ಇಪ್ಪತ್ತೊಂದು ಎಂದು ಆಕಾಶವಾಣಿಯಲ್ಲಿ ಕೇಳಿಬಂದ ಎರಡು ಶಬ್ದಗಳು ಕಡೆಗೆ ಹೀಗೆ "ಸಂಖ್ಯಾಶಾಸ್ತ್ರ" ಆಗಿ ರೂಪುಗೊಂಡಿತು!

Thursday, December 25, 2025

ಅಂಥ ಇಂಥವರಲ್ಲ


ಅರವತ್ತು ವರುಷಗಳ ಹಿಂದಿನ ಮಾತು. ಆಗ ಸಂಚಾರ ಸೌಲಭ್ಯಗಳು ಇಂದಿನಂತೆ ಇರಲಿಲ್ಲ. ಪರಸ್ಥಳಗಳಿಗೆ ಪ್ರಯಾಣ ಮಾಡಲು ರೈಲು ಅಥವಾ ಬಸ್ಸುಗಳನ್ನು ಅವಲಂಬಿಸಬೇಕಿತ್ತು. ಕೆಲವು ಗಂಟೆಗಳ ಪ್ರಯಾಣಕ್ಕೆ ಬಸ್ಸುಗಳ ಉಪಯೋಗ. ಬಲು ದೂರದ ಪ್ರಯಾಣಗಳಿಗೆ (ಕೆಲವು ಕಡೆ ಎರಡು-ಮೂರು ದಿನಗಳ ಪ್ರಯಾಣ) ರೈಲು ಪ್ರಯಾಣವೇ ದಾರಿ. ವಿಮಾನಯಾನ ಬಹುಪಾಲು ಜನರ ಕೈಗೆಟುಕುವಂತೆ ಇರಲಿಲ್ಲ. ಕಾರುಗಳು ಇದ್ದದ್ದು ಅಲ್ಲೊಂದು-ಇಲ್ಲೊಂದು. ಮುಂಗಡ ರಿಸೆರ್ವಶನ್ ಅನ್ನುವುದು ಬಹಳ ಅಪರೂಪ. ರೈಲಿನಲ್ಲಿ ಮೂರು ದರ್ಜೆಗಳು. ಮೂರನೆಯ ದರ್ಜೆಯಲ್ಲೂ ಕಾದಿರಿಸದ ಬೋಗಿಗಳಲ್ಲಿ ಪ್ರಯಾಣ. ಅಸಾಧ್ಯ ಜನಜಂಗುಳಿ. ಕಬ್ಬಿಣದ ಪೆಟ್ಟಿಗೆಗಳಲ್ಲಿ ಪದಾರ್ಥಗಳು. ಹಾಸಿಗೆ ಅಥವಾ ಹೋಲ್ಡಾಲುಗಳು. ರೈಲು ತಂಬಿಗೆಗಳು. ಪ್ರತಿ ಪ್ರಯಾಣವೂ ಒಂದು ಪ್ರಯಾಸವೇ. 

ಬೆಂಗಳೂರಿನ ಸುತ್ತಮುತ್ತಲಿನ ಜನ ಮಂತ್ರಾಲಯ ತಲುಪಲು ಮೊದಲು ಬಸ್ಸಿನಲ್ಲಿ ಬೆಂಗಳೂರಿಗೆ ಹೋಗಬೇಕಿತ್ತು. ಅಲ್ಲಿಂದ ಮುಂದಕ್ಕೆ ಪ್ರತಿದಿನ ಒಂದೋ-ಎರಡೋ ಬಸ್ಸುಗಳು ಮಂತ್ರಾಲಯಕ್ಕೆ ಹೋಗುತ್ತಿದ್ದವು. ಕೂಡಲು ಸ್ಥಳ ಸಿಗುವುದು ಕಷ್ಟ. ಎಂಟು-ಹತ್ತು ಗಂಟೆಗಳ ಪ್ರಯಾಣ ನಿಂತು ಹೋಗುವುದು ಅಸಾಧ್ಯ. ಆದ ಕಾರಣ ರೈಲು ಪ್ರಯಾಣ. ಬೆಂಗಳೂರು-ಗುಂತಕಲ್ಲು ರೈಲು ಮಾರ್ಗ ಆಗ ಇನ್ನೂ ಮೀಟರುಗೇಜು. ಗುಂತಕಲ್ಲಿನಿಂದ ಮುಂದಕ್ಕೆ "ಮಂತ್ರಾಲಯಂ ರೋಡ್" ಅನ್ನುವ ಸ್ಟೇಷನ್ ತನಕ ಬ್ರಾಡ್ ಗೇಜು. ಅನೇಕ ರೈಲುಗಳಿಗೆ ಮಂತ್ರಾಲಯಂ ರೋಡ್ ಸ್ಟೇಷನ್ನಿನಲ್ಲಿ ನಿಲುಗಡೆ ಇರಲಿಲ್ಲ. ಗುಂತಕಲ್ಲಿನಲ್ಲಿ ರೈಲು ಬದಲಾಯಿಸಬೇಕು. ಮಂತ್ರಾಲಯಂ ರೋಡ್ ಸ್ಟೇಷನ್ ವರೆಗೆ ಲೋಕಲ್ ರೈಲು. ಪ್ರತಿ ಸಣ್ಣ ಸ್ಟೇಷನ್ನಲ್ಲೂ ನಿಲುಗಡೆ. "ಕೋಸಗಿ", "ಇಸವಿ" ಮುಂತಾಗಿ ಸ್ಟೇಷನ್ ಹೆಸರುಗಳು. ಚಿಕ್ಕವಯಸ್ಸಿನ ಮಕ್ಕಳಿಗೆ ಅದೊಂದು ವಿನೋದ. 

ರಾತ್ರಿ ಹತ್ತು ಗಂಟೆಗೆ ಬೆಂಗಳೂರಿನಿಂದ ಹೊರಡುವ ರೈಲು ಬೆಳಗಿನ ಆರು ಗಂಟೆಗೆ ಗುಂತಕಲ್ಲು ತಲುಪುತ್ತಿತ್ತು. ಅಲ್ಲಿಂದ ಎಂಟು ಗಂಟೆಯ ಲೋಕಲ್ ರೈಲಿನಲ್ಲಿ ಮಂತ್ರಾಲಯಂ ರೋಡ್ ವರೆಗೆ ಸುಮಾರು ಮೂರು ಗಂಟೆ ಪ್ರಯಾಣ. ಮುಂದೆ ಏಳು ಮೈಲು ದೂರದ ಮಂತ್ರಾಲಯಕ್ಕೆ ನಡೆದು ಹೋಗುವುದು. ದಿನಕ್ಕೆ ಮೂರೋ, ನಾಲ್ಕೋ ಬಸ್ಸುಗಳಿದ್ದವು. ಅಶಕ್ತರು ಬಸ್ಸಿಗೆ ಕಾಯುತ್ತಿದ್ದರು. ಮಿಕ್ಕವರು ನಡೆದೇ ಹೋಗುವುದು. ಗುಂಪು ಗುಂಪಾಗಿ ರಾಯರ ಕುರಿತಾದ ಹಾಡುಗಳನ್ನು ಹಾಡುತ್ತಾ ನಡೆಯುವುದು. "ಭಾಗ್ಯವಂತ" ಕನ್ನಡ ಚಲನಚಿತ್ರದಲ್ಲಿ "ವಾರ ಬಂತಮ್ಮಾ, ಗುರುವಾರ ಬಂತಮ್ಮಾ" ಎಂದು ರಾಜ್ ಕುಮಾರ್ ನೇತೃತ್ವದಲ್ಲಿ ಹೋಗುವ ಗುಂಪಿನಂತೆ. ಹೀಗೆ ಪ್ರಯಾಣ.  ಆ ಚಿತ್ರ ಸುಮಾರು ನಲವತ್ತು ವರುಷಗಳ ಹಿಂದಿನದು. ಇದು ಅದಕ್ಕೂ ಇಪ್ಪತ್ತು ವರುಷಗಳ ಹಿಂದಿನ ಸಮಾಚಾರ. 

*****

ಮಂತ್ರಾಲಯಂ ರೋಡ್ ರೈಲ್ವೆ ಸ್ಟೇಷನ್ ತಲುಪುವ ವೇಳೆಗೆ ಮಧ್ಯಾನ್ಹ ಹನ್ನೊಂದು ಗಂಟೆ ಸಮಯ. ಇದೇ ರೀತಿ ಉತ್ತರದ ಕಡೆಯಿಂದ ಬಂದವರೂ ಅಲ್ಲಿಗೆ ಬೆಳಿಗ್ಗೆ ಸುಮಾರು ಇದೇ ಸಮಯಕ್ಕೆ ಬಂದು ಸೇರುತ್ತಿದ್ದರು. ಎಷ್ಟು ಬೇಗ ನಡೆದರೂ ಮಂತ್ರಾಲಯ ತಲುಪುವ ವೇಳೆಗೆ ಅಂದಿನ ಬೆಳಗಿನ ದರ್ಶನ, ಪ್ರಸಾದದ ಸಮಯ ದಾಟುತ್ತಿತ್ತು. ಆದ್ದರಿಂದ ಬಹುತೇಕ ಮಂದಿ ಸ್ಟೇಷನ್ ಪಕ್ಕ ತುಂಗಾನದಿಯಲ್ಲಿ ಮಿಂದು, ಪಕ್ಕದ "ಅಣು ಮಂತ್ರಾಲಯ" ಎಂದು ಪ್ರಸಿದ್ಧವಾದ ರಾಯರ ವೃಂದಾವನದ ದರ್ಶನ ಮಾಡಿ ಪ್ರಸಾದ ಸ್ವೀಕರಿಸುತ್ತಿದ್ದರು. ಸ್ವಲ್ಪ ವಿಶ್ರಾಂತಿಯ ನಂತರ, ಬಿಸಿಲು ಕಡಿಮೆ ಆದಮೇಲೆ ನಡೆದುಕೊಂಡು ಸಂಜೆಯ ದರ್ಶನದ ವೇಳೆಗೆ ಮಂತ್ರಾಲಯ ತಲುಪುತ್ತಿದ್ದರು. ಸಂಜೆ ಐದೂವರೆ ಸಮಯಕ್ಕೆ ದಿನದ ಕೊನೆಯ ಬಸ್ಸು. ಕೆಲವರು ಆ ಬಸ್ಸಿಗೆ ಕಾಯುತ್ತಿದ್ದರು. 

ನಮ್ಮ ಕುಟುಂಬ ಹೀಗೆ ಮಂತ್ರಾಲಯ ರಸ್ತೆ ಸ್ಟೇಷನ್ ತಲುಪಿ, ಅಣು ಮಂತ್ರಾಲಯದಲ್ಲಿ ದರ್ಶನ ಮತ್ತು ಪ್ರಸಾದ ಪಡೆದು ಐದು ಗಂಟೆಯ ಬಸ್ಸಿಗೆ ಕಾದೆವು. ಬಸ್ಸಿನ ಮುಂದುಗಡೆ ಬಾಗಿಲಲ್ಲಿ ಹತ್ತಲು ವಯೋವೃದ್ಧೆ ಅಜ್ಜಿ, ದೊಡ್ಡಮ್ಮ, ಅಮ್ಮ ಮತ್ತು ಅಕ್ಕ ಒಂದು ಕಡೆ. ತಂದೆ ಮತ್ತು ನಾನು ಬಸ್ಸಿನ ಹಿಂದಿನ ಬಾಗಿಲಲಿನ ಇನ್ನೊಂದು ಕಡೆ. ಬಸ್ಸು ನಿಲ್ದಾಣಕ್ಕೆ ಬರುವ ವೇಳೆಗೇ ತುಂಬಿ ಬಂದಿತ್ತು. ಹೇಗೋ ಮಾಡಿ ಮುಂದಿನ ಬಾಗಿಲಲ್ಲಿ ಅವರು ಹತ್ತಿದರು. ನಾವಿಬ್ಬರು ಬಾಗಿಲ ಬಳಿಯೇ ಹೋಗಲಾಗಲಿಲ್ಲ. ಬಸ್ಸು ಹೊರಟುಹೋಯಿತು. ಇಬ್ಬರೂ ಹಿಂದುಳಿದೆವು. ಅಂದು ರಾತ್ರಿ ಅಲ್ಲಿಯೇ ಉಳಿದು ಮಾರನೆಯ ದಿನ ಹೋಗುವುದು ಒಂದು ದಾರಿ. ತಕ್ಷಣ ನಡೆಯುತ್ತಾ ಹೊರಟು, ಏಳು ಮೈಲು ನಡೆದು ರಾತ್ರಿ ಮಂತ್ರಾಲಯ ತಲುಪುವುದು ಇನ್ನೊಂದು ದಾರಿ. ನಾವಿಬ್ಬರೂ ನಡೆಯುತ್ತಾ ಹೊರಟೆವು. 

ಹುಣ್ಣಿಮೆಯ ದಿನವಾದುದರಿಂದ ಮಸುಕಾಗಿಯಾದರೂ ರಸ್ತೆ ಕಾಣುತ್ತಿತ್ತು. ಜೊತೆಗೆ ಕೆಲವರು ಸೇರಿದರು. ದಾರಿ ಕಳೆಯಲೆಂದು ತಂದೆಯವರು ರಾಯರ ಚರಿತ್ರೆಯ ಕಥೆಗಳನ್ನು ಹೇಳುತ್ತಿದ್ದರು. ದಾರಿಯಲ್ಲಿ ಮಾದಾವರ ಗ್ರಾಮದ ಕೆರೆಯ ಬಳಿಯ ಬಂಡೆಗಳನ್ನು ನೋಡಿದೆವು. ಇಂತಹ ಒಂದು ಬಂಡೆಯ ಮೇಲೆ ಶ್ರೀರಾಮಚಂದ್ರ ವನವಾಸದ ಕಾಲದಲ್ಲಿ ವಿಶ್ರಾಂತಿಗಾಗಿ ಕುಳಿತಿದ್ದರಂತೆ. ರಾಯರು ಅದೋನಿಯ ನವಾಬನ ದಿವಾನನಾಗಿದ್ದ ತಮ್ಮ ಶಿಷ್ಯ ವೆಂಕಣ್ಣನಿಗೆ ಆ ಬಂಡೆ ತೋರಿಸಿ ಅದರ ಶಿಲೆಯಲ್ಲಿಯೇ ತಮ್ಮ ವೃಂದಾವನ ಮಾಡಲು ಹೇಳಿದರಂತೆ. ರಾತ್ರಿ ಎಂಟು ಗಂಟೆಯ ಸುಮಾರಿಗೆ ಮಂತ್ರಾಲಯ ತಲುಪಿದೆವು. 

ಆಗ ಮಂತ್ರಾಲಯಕ್ಕೆ ಪ್ರತಿದಿನ ಬರುತ್ತಿದ್ದಷ್ಟು ಜನ ಈಗ ಬೇರೆಬೇರೆ ಕಡೆಗಳಲ್ಲಿರುವ "ಮೃತ್ತಿಕಾ ಬೃಂದಾವನ" ಇರುವೆಡೆಯೇ ಬರುತ್ತಾರೆ. ಮಂತ್ರಾಲಯದ ಮೂಲ ಬೃಂದಾವನದ ಮೇಲಿರುವ ಮೃತ್ತಿಕೆ (ಮಣ್ಣು) ಸ್ವಲ್ಪ ತಂದು ಬೇರೆಡೆ ವೃಂದಾವನ ನಿರ್ಮಿಸುತ್ತಾರೆ. ಇವನ್ನು "ಮೃತ್ತಿಕಾ ಬೃಂದಾವನ" ಎಂದು ಕರೆಯುತ್ತಾರೆ. ಇಪ್ಪತ್ತೈದು ವರುಷಗಳ ಹಿಂದೆ ಮದರಾಸಿನ ಟ್ರಿಪ್ಲಿಕೇನ್ ರಾಯರ ಮಠದ ಬಳಿ ಪ್ರತಿ ಗುರುವಾರ ಪೊಲೀಸರು ಬಂದು ದರ್ಶನಕ್ಕೆ ಬರುವ ಜನಜಂಗುಳಿಯ ನಿಯಂತ್ರಣ ಮಾಡುತ್ತಿದ್ದರು. ಆ ರಸ್ತೆಯಲ್ಲಿ ಗುರುವಾರ ಸಂಜೆ ವಾಹನಗಳ ನಡೆಸುವಿಕೆಗೆ ಅವಕಾಶ ಇರಲಿಲ್ಲ. ಈಗ ಜನಸಂದಣಿ ಇನ್ನೂ ಹೆಚ್ಚಾಗಿರಬಹುದು. ಇದೊಂದು ಉದಾಹರಣೆ ಅಷ್ಟೇ. 

ಗುರು ರಾಘವೇಂದ್ರ ರಾಯರು ಸಾಮಾನ್ಯರಲ್ಲ. ಅವರು "ಅಂಥ ಇಂಥವರಲ್ಲ. ಅವರಂಥವರೇ ಬೇಕು ಅಂತ ಹುಡುಕಿದರಿಲ್ಲ" ಅನ್ನುವುದು ಅಲ್ಲಿ ಎಲ್ಲರೂ ಹೇಳುವ ಒಂದು ಮಾತಾಗಿತ್ತು. 

*****

ಶ್ರೀ ಗೋಕಾವಿ ಅನಂತಾದ್ರೀಶ ದಾಸರು (1670-1750) ಘಟಪ್ರಭಾ ಮತ್ತು ಮಲಪ್ರಭಾ ನದಿಗಳ ಸಂಗಮ ಸ್ಥಾನವಾದ ಬೆಳಗಾವಿ ಜಿಲ್ಲೆಯ ಗೋಕಾಕ ಪಟ್ಟಣದವರು. ಗೋಕಾಕ್ ಅನಂತಾಚಾರ್ಯ ಎಂದು ಹೆಸರಿನ ಅವರು ವೇದ-ವೇದಾಂಗಗಳ ಘನ ವಿದ್ವಾಂಸರು. ಗೋಕಾಕ್ ಪಟ್ಟಣದ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಾಲಯದ ಮುಖ್ಯ ಅರ್ಚಕರಾಗಿದ್ದರಂತೆ. ಆಗಿನ ಸಮಯದ ಪ್ರಸಿದ್ಧ ಗುರುಗಳಾದ ಅಡವಿ ಆಚಾರ್ಯರು ಅಥವಾ ಅರಣ್ಯಕಾಚಾರ್ಯರು ಎಂದು ಹೆಸರು ಪಡೆದ ಮಾದನೂರು ವಿಷ್ಣು ತೀರ್ಥ (1678-1728)  ಅವರ ಪ್ರಭಾವಕ್ಕೆ ಒಳಗಾಗಿ ಅವರ ಶಿಷ್ಯರಾದವರು. 

ಉದ್ದಾಮ ಪಂಡಿತರಾದ ಅನಂತಾಚಾರ್ಯರು "ಅನಂತಾದ್ರೀಶ" ಅನ್ನುವ ಅಂಕಿತ ಹೊಂದಿದ ಅನೇಕ ಕೃತಿಗಳನ್ನು ರಚನೆ ಮಾಡಿದ್ದಾರೆ. ಅವರ "ಶ್ರೀ ವೆಂಕಟೇಶ ಪಾರಿಜಾತ" ಮತ್ತು "ಶ್ರೀ ಪ್ರಹ್ಲಾದ ಚರಿತ್ರೆ" ಹೆಸರಾದ ಕೃತಿಗಳು. ಮಾಧ್ವ ಸಂಪ್ರದಾಯದವರ ಅನೇಕ ಮನೆಗಳಲ್ಲಿ ಈಗಲೂ ಅವರ ಈ ಕೃತಿಗಳನ್ನು ಪ್ರತಿದಿನ ಹಾಡುತ್ತಾರೆ. "ಭೋ ಯತಿವರದೇಂದ್ರ, ಶ್ರೀ ಗುರು ರಾಯ ರಾಘವೇಂದ್ರ" ಅನ್ನುವುದು ಅವರ ಬಹಳ ಪ್ರಸಿದ್ಧವಾದ ಪದ. "ಬಾರೆ ಭಾಗ್ಯ ನಿಧಿಯೇ" ಅನ್ನುವುದು ಇನ್ನೊಂದು ಪದ. ಹೀಗೆ ಅನೇಕ ಕನ್ನಡ ಪದಗಳನ್ನು ರಚಿಸಿದ್ದಾರೆ. 

ಗೋಕಾವಿ ಅನಂತಾಚಾರ್ಯರು ಜನಿಸಿದ್ದು 1670ನೇ ಇಸವಿಯಲ್ಲಿ. ಶ್ರೀ ರಾಯರು ಬೃಂದಾವನಸ್ಥರಾಗಿದ್ದು 1671ರಲ್ಲಿ. ಅನಂತಾಚಾರ್ಯರ ಜೀವಿತಕಾಲ ಶ್ರೀ ರಾಯರು ಬೃಂದಾವನ ಪ್ರವೇಶ ಮಾಡಿದ ಪ್ರಾರಂಭದ ವರುಷಗಳಲ್ಲಿ. ಹಿರಣ್ಯ ಕಷಿಪುವಿನ ಮಗನಾದ ಪ್ರಹ್ಲಾದರಾಜರು ಮುಂದೆ ಶ್ರೀ ರಾಘವೇಂದ್ರ ತೀರ್ಥರೆಂದು ಅವತರಿಸಿ "ಮಂತ್ರಾಲಯದ ರಾಯರು"  ಎಂದಾಗಿದ್ದರೆ ಎಂದು ಅವರ ಶಿಷ್ಯ ಪರಂಪರೆಯ ನಂಬಿಕೆ. "ಶ್ರೀ ಪ್ರಹ್ಲಾದ ಚರಿತ್ರೆ" ಕೃತಿಯಲ್ಲಿ ಶ್ರೀ ಅನಂತಾದ್ರೀಶರು ಹೇಳುವ ಸಾಲುಗಳು ಹೀಗಿವೆ:

ಅಂಥ ಇಂಥವರಲ್ಲ 
ಇವರಂಥವರೇ ಬೇಕು ಅಂತ ಹುಡುಕಿದರಿಲ್ಲ 
ಎಂತೆಂಥ ವಿಷಯದ ಭ್ರಾಂತಿ ಈತಗೆ ಇಲ್ಲ 
ಅನಂತಾದ್ರೀಶನ ಚಿಂತನದ ಬಗೆ ಬಲ್ಲ 
ಸಂಶಯವು ಇಲ್ಲ 

ಶ್ರೀ ರಾಯರ ಗ್ರಂಥಗಳು ಬೇರೆ ಗ್ರಂಥಗಳ ಅಧ್ಯಯನ ಕಾಲದಲ್ಲಿ ಬರುವ ಸಂಶಯಗಳ ನಿವಾರಣೆಗಾಗಿ ಮಾಡಿದವುಗಳೇ ಹೊರತು ಸಂಶಯ ಹುಟ್ಟಿಸುವುಗಳಲ್ಲ.  ಶ್ರೀ ಅನಂತಾದ್ರೀಶರು ಇದನ್ನೇ ಸೂಚ್ಯವಾಗಿ ಮೇಲಿನಂತೆ ಹೇಳಿದ್ದಾರೆ. 

*****

ಆಚಾರ್ಯ ಶ್ರೀ ಮಧ್ವರು, ಶ್ರೀ ಜಯತೀರ್ಥರು, ಶ್ರೀ ವ್ಯಾಸರಾಜರು ಮೊದಲಾದವರ ದ್ವೈತ ಸಂಪ್ರದಾಯದ ಗ್ರಂಥಗಳ ಅಧ್ಯಯನದಲ್ಲಿ ಬರುವ ಸಂದೇಹ, ಅಲ್ಲಲ್ಲಿ ಬೇಕಾದ ವಿವರಣೆಗಳಿಗೆ ಅವುಗಳ ಅಧ್ಯಯನ ಮಾಡುವ ಪಂಡಿತರು ಮೊದಲಿಗೆ ಶ್ರೀ ರಾಘವೇಂದ್ರ ಸ್ವಾಮಿಗಳ ಗ್ರಂಥಗಳಲ್ಲಿ ಅವುಗಳಿಗೆ ಉತ್ತರ ಹುಡುಕುತ್ತಾರೆ. ಬಹುತೇಕ ಉತ್ತರ ಸಿಗುತ್ತದಂತೆ. ಅಂತಹ ಉದ್ದಾಮ ಪಂಡಿತರಾಗಿದ್ದರೂ ಶ್ರೀ ರಾಯರು ಎಂದೂ ಯಾರ ಮನಸ್ಸನ್ನೂ ನೋಯಿಸುವಂತೆ ಮಾತನಾಡಿದವರಲ್ಲವಂತೆ. ತಮ್ಮೊಡನೆ ವಾದದಲ್ಲಿ ಸೋತ ಪ್ರತಿವಾದಿಗಳೊಡನೆಯೂ ಅತ್ಯಂತ ಗೌರವಯುತವಾದ ನಡವಳಿಕೆಗೆ ಮಾದರಿಯಾಗಿದ್ದರಂತೆ. "ಕೋಪ ಅರಿಯನಮ್ಮ, ಯಾರನು ದೂರ ತಳ್ಳನಮ್ಮ" ಅನ್ನುವುದು ಕೇವಲ ಹೇಳಿಕೆಯ ಮಾತಲ್ಲ. ಆದ್ದರಿಂದಲೇ ಅವರು "ಅಂಥ ಇಂಥವರಲ್ಲ. ಇಂಥವರೇ ಬೇಕು ಅಂತ ಹುಡುಕಿದರಿಲ್ಲ". 

ಈಗ ಮನೆಯ ಮುಂದೆ ವಾಹನ ಏರಿದರೆ ಮಂತ್ರಾಲಯದ ಮಠದ ಮುಂದೆ ವಾಹನದಿಂದ ಇಳಿಯುವಷ್ಟು ಅನುಕೂಲಗಳು ಬಂದಿವೆ. ನೇರವಾಗಿ ಮಂತ್ರಾಲಯಂ ರೋಡ್ ನಿಲ್ದಾಣದವರೆಗೆ ಟ್ರೇನುಗಳೂ ಉಂಟು. ಮೊದಲೇ ಹೋಗಿ-ಬರಲು ಸ್ಥಳ ಕಾದಿರುಸುವ ವ್ಯಸ್ಥೆಯೂ ಉಂಟು. ಬಹುತೇಕ ಜನರ ಕಿಸೆಯಲ್ಲಿ ಹಣವೂ ಉಂಟು. 

ಏನೆಲ್ಲಾ ಬದಲಾವಣೆಗಳಾದರೂ, ವೃಂದಾವನ ಪ್ರವೇಶ ಮಾಡಿ 350 ವರುಷಗಳು ಕಳೆದಿದ್ದರೂ ಶ್ರೀ ರಾಯರು "ಅಂಥ ಇಂಥವರಲ್ಲ" ಅನ್ನುವುದರಲ್ಲಿ ಏನೂ ಬದಲಾವಣೆ ಇಲ್ಲ. 

Friday, December 19, 2025

ನಿರಂಜನ


ಕಳೆದ ತಿಂಗಳಿನ ಒಂದು ಸಂಚಿಕೆಯಲ್ಲಿ "ರಾಗಿ ಮೂಟೆಯ ಮೇಲೆ ಸಾವೇರಿ ರಾಗ" ಅನ್ನುವ ಶಿರೋನಾಮೆಯಡಿಯಲ್ಲಿ ನಮ್ಮ ನಾಡಿನ ಹೆಮ್ಮೆಯ ಸಂಗೀತ ವಿದ್ವಾಂಸರು ಮತ್ತು ಗಾಯಕರಲ್ಲಿ ಒಬ್ಬರಾದ ಭೈರವಿ ಕೆಂಪೇಗೌಡ ಅವರನ್ನು ಕುರಿತು ಕೆಲವು ಸಂಗತಿಗಳನ್ನು ನೋಡಿದ್ದೆವು. ಇದರಲ್ಲಿ ಬೆಂಗಳೂರಿನ ಬದಲಾದ ರೂಪದ ಬಗ್ಗೆ ಕೆಲವು ವಿಷಯಗಳನ್ನು ನೆನಪಿಸಿಕೊಂಡಿದ್ದೆವು. ಈ ಕುರಿತ ಸಂಚಿಕೆಯನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು.

ಅಲ್ಲಿ ನೋಡಿದ ವಿವರಗಳಲ್ಲಿ ಪ್ರಾಸ್ತಾವಿಕವಾಗಿ "ಧರ್ಮಾ೦ಬುಧಿ ಕೆರೆ" ಎನ್ನುವ ಹೆಸರು ಬಂದಿತ್ತು. ನಗರದ ಮಧ್ಯೆ ಇದ್ದ ಒಂದು ಸುಂದರ ಕೆರೆ ಅದು.  ಅದರ ನೀರು ಕುಡಿದು ಬೆಳೆದ ನಾವು ಕಡೆಗೆ ನಮ್ಮ ನಗರೀಕರಣದ ಪಿಶಾಚಿಯ ಪ್ರೀತಿಗಾಗಿ ಅದನ್ನೇ ನುಂಗಿ ನೀರು ಕುಡಿದಿದ್ದೇವೆ. ಈಗ ಆ ಕೆರೆ ಇತ್ತು ಅನ್ನುವ ಕುರುಹೂ ಉಳಿದಿಲ್ಲ. ಒಂದು ಕಾಲದಲ್ಲಿ ಅದಕ್ಕೆ ಸ್ವತಂತ್ರ ಸೇನಾನಿ ಸುಭಾಷ್ ಚಂದ್ರ ಬೋಸ್ ಅವರ ನೆನಪಿನಲ್ಲಿ "ಸುಭಾಷ್ ನಗರ" ಅನ್ನುವ ಹೆಸರಿತ್ತು. ಕೆರೆಯಲ್ಲಿ ನೀರು ನಿಲ್ಲುವುದು ತಪ್ಪಿದ ಮೇಲೆ ಅದಕ್ಕೆ "ಸುಭಾಷ್ ನಗರ ಕೆರೆಯ ಅಂಗಳ" ಅನ್ನುತ್ತಿದ್ದರು. ವೃತ್ತಿ ನಾಟಕರಂಗದ ಮರೆಯಲಾಗದ ತಂಡ "ಹಿರಣ್ಣಯ್ಯ ಮಿತ್ರ ಮಂಡಳಿ" ಅವರ ಪ್ರಸಿದ್ಧ ನಾಟಕಗಳಾದ "ದೇವದಾಸಿ", "ಸದಾರಮೆ", "ಲಂಚಾವತಾರ" ಮತ್ತು ಇತರ ನಾಟಕಗಳು ಇಲ್ಲಿಯೇ ನಡೆಯುತ್ತಿದ್ದವು. ಈಗ ಅವೆಲ್ಲಾ ನೆನಪು ಮಾತ್ರ. ಇನ್ನು ಕೆಲವೇ ವರ್ಷಗಳಲ್ಲಿ ಅದನ್ನು ನೆನಪಿಸಿಕೊಳ್ಳುವ ತಲೆಮಾರೂ ಇಲ್ಲವಾಗುತ್ತದೆ. 

ಈ ಸುಭಾಷ್ ನಗರ ಕೆರೆಯ ಅಂಗಳದಲ್ಲಿ ಪ್ರತಿವರ್ಷ "ಕಾಂಗ್ರೆಸ್ ವಸ್ತುಪ್ರದರ್ಶನ" ಏರ್ಪಡುತ್ತಿತ್ತು. ವಸ್ತು ಪ್ರದರ್ಶನಕ್ಕೆ ನೋಡಲು ಬಂದ ಜನಜಂಗುಳಿಯಲ್ಲಿ ಕೆಲವರು, ವಿಶೇಷವಾಗಿ ಮಕ್ಕಳು, ತಪ್ಪಿಸಿಕೊಳ್ಳುವುದು ನಡೆಯುತ್ತಿತ್ತು. ವಸ್ತುಪ್ರದರ್ಶನದಲ್ಲಿ ಒಂದು "ಪೊಲೀಸ್ ಔಟ್ ಪೋಸ್ಟ್" ಕೂಡ ಇದ್ದು ಹೀಗೆ ತಪ್ಪಿಸಿಕೊಂಡವರು ಮತ್ತು ಕಳೆದು ಹೋದ ಮತ್ತು ಸಿಕ್ಕಿದ ವಸ್ತುಗಳ ಬಗ್ಗೆ ಆಗಾಗ ಧನಿವರ್ಧಕಗಳ ಮೂಲಕ ಪ್ರಕಟಿಸುತ್ತಿದ್ದರು. ಟಿವಿ ಇಲ್ಲದ ಕಾಲದಲ್ಲಿ ಕುಟುಂಬದ ಸದಸ್ಯರು ಒಟ್ಟಾಗಿ ಒಂದು ಸಂಜೆ ಕಳೆಯಲು ಈ ವಸ್ತುಪ್ರದರ್ಶನ ಸಹಕಾರಿಯಾಗಿತ್ತು. 

ಈಗ ಸುಭಾಷ್ ನಗರ ಅನ್ನುವ ಹೆಸರೇ ಕೇಳಿಬರುವುದಿಲ್ಲ. ದೊಡ್ಡ ಬಸ್ ನಿಲ್ದಾಣ ತಲೆಯೆತ್ತಿ ನಿಂತಿದೆ. ಸುಭಾಷ್ ನಗರ ಮರೆಯಾದರೂ ಹತ್ತಿರವಿದ್ದ "ಮೆಜೆಸ್ಟಿಕ್" ಚಿತ್ರಮಂದಿರದ ಹೆಸರನ್ನು ಜನ ಮರೆತಿಲ್ಲ. ಆ ಸುತ್ತಮುತ್ತಲಿನ ಪ್ರದೇಶಕ್ಕೆ ಈಗಲೂ "ಮೆಜೆಸ್ಟಿಕ್" ಏರಿಯಾ ಅನ್ನುವುದು ನಡೆದೇ ಇದೆ. 

*****

ಹಳ್ಳಿಗಳಲ್ಲಿ ಜನಗಳು ತಪ್ಪಿಸಿಕೊಳ್ಳುವುದು ನಡೆಯದಿದ್ದರೂ ಜಾನುವಾರುಗಳು (ದನಗಳು) ತಪ್ಪಿಸಿಕೊಳ್ಳುವುದು ಅಲ್ಲಲ್ಲಿ ಆಗಾಗ ನಡೆಯುತ್ತಿತ್ತು. ಈಗಿನಂತೆ ಹಳ್ಳಿಗಳಲ್ಲಿ ಆಗ ಹೆಚ್ಚಾಗಿ ರಸ್ತೆಗಳಿರಲ್ಲ. ಮೋಟಾರ್ ಸೈಕಲ್ಗಳಲ್ಲಿ ಓಡಾಡುವವರಿರಲಿಲ್ಲ. ಜಮೀನಿನಲ್ಲಿ ಬೆಳೆ ತೆಗೆಯುವುದರ ಜೊತೆಗೆ ರೈತರ ಜೀವನದ ಮುಖ್ಯ ಭಾಗ "ಹೈನುಗಾರಿಕೆ" ಆಗಿತ್ತು. (ಹಯನು ಅಂದರೆ ಹಾಲು ಕರೆಯುತ್ತಿರುವ ಪ್ರಾಣಿ. ಮುಖ್ಯವಾಗಿ ಹಸು. ಬರಡು ಹಸು ಅಂದರೆ ಹಾಲು ಕೊಡದಿರುವ ಹಸು. "ನೀನೊಲಿದರೆ ಬರಡು ಹಯನಹುದಯ್ಯ" ಎನ್ನುವ ಶರಣರ ವಚನವನ್ನು ನೆನಪಿಸಿಕೊಳ್ಳಬಹುದು). ತಮ್ಮ ಕುಟುಂಬದ ಹಾಲು, ಮೊಸರು, ಮಜ್ಜಿಗೆ, ತುಪ್ಪ ಇವುಗಳ ಪೂರೈಕೆಗಲ್ಲದೇ ಹತ್ತಿರದ ಪಟ್ಟಣಗಳಿಗೆ ಹೆಚ್ಚಿನ ಈ ಪದಾರ್ಥಗಳನ್ನು ಸರಬರಾಜು ಮಾಡುವುದರಿಂದ ರೈತಾಪಿ ಜನ ಕೆಲವು ಪುಡಿಗಾಸು ಸಂಪಾದಿಸುತ್ತಿದ್ದರು. ಹೀಗೆ ತಮ್ಮ ಜೀವನಕ್ಕೆ ಆಧಾರವಾಗಿದ್ದ ಹಸುಗಳು ಕಳೆದುಹೋದರೆ ರೈತರಿಗೆ ಬಲು ಕಷ್ಟ. ಇವುಗಳ ಜೊತೆ, ಗುಡಿಸಲುಗಳಲ್ಲಿ ವಾಸಿಸುತ್ತಿದ್ದ ಜನ ಕೆಲವು ಬೆಲೆ ಬಾಳುವ ಅವಶ್ಯಕ ಪದಾರ್ಥಗಳನ್ನು ಆಗಾಗ ಕಳೆದುಕೊಳ್ಳುತ್ತಿದ್ದರು. 

ಹುಲ್ಲು ಮೇಯಲು ಹೊರಗಡೆ ಹೋದ ದನಗಳು ಅಲ್ಲಿ-ಇಲ್ಲಿ ಕಂಡ ಹುಲುಸಾದ ಹಸಿರು ಪೈರಿನ ಆಸೆಯಲ್ಲಿ ಅವರಿವರ ಹೊಲ, ತೋಟಗಳಿಗೆ ನುಗ್ಗಿ ಪೈರುಗಳನ್ನು ತಿನ್ನುವುದು ಕೆಲವೊಮ್ಮೆ ನಡೆಯುತ್ತಿತ್ತು. ಆ ಜಮೀನಿನ ಮಾಲೀಕರಿಗೆ ಅವು ಯಾರ ದನಗಳು ಎಂದು ಗೊತ್ತಾಗುತ್ತಿರಲಿಲ್ಲ. ಮೇಲಾಗಿ, ತಮ್ಮ ಹೊಲಗಳ ಪೈರು ತಿಂದ ದನಗಳ ಮೇಲೆ ಅವರಿಗೆ ಸಹಜವಾಗಿಯೇ ಸ್ವಲ್ಪ ಅಸಹನೆ ಇರುತ್ತ್ತಿತ್ತು. ಪುರಸಭೆಗಳು ಅಲ್ಲಲ್ಲಿ "ತೊಂಡಿನ ಮನೆ" ಎನ್ನುವ ವ್ಯವಸ್ಥೆ ಮಾಡಿರುತ್ತಿದ್ದರು. ಅವು ಹೆಸರಿಗೆ ಮನೆ. ವಾಸ್ತವವಾಗಿ ನಾಲ್ಕು ಗೋಡೆಗಳು ಮತ್ತು ಒಂದು ಬಾಗಿಲು ಇದ್ದು ಬೀಗ ಹಾಕುವ ವ್ಯವಸ್ಥೆ ಇರುತ್ತಿತ್ತು. ದನಗಳಿಗೆ ಕುಡಿಯಲು ನೀರಿನ ವ್ಯವಸ್ಥೆ ಇರುತ್ತಿತ್ತು. "ತೊಂಡು" ಅನ್ನುವ ಪದಕ್ಕೆ "ದಾರಿ ತಪ್ಪಿದ", "ಹೇಳುವವರು-ಕೇಳುವವರು ಇಲ್ಲದ" ಅಥವಾ "ಅಂಕೆಯಿಲ್ಲದ" ಎಂದು ಅರ್ಥ. ಇಂಗ್ಲೀಷಿನಲ್ಲಿ "ವೈಲ್ಡ್" ಅಥವಾ "ಆನ್-ಕಂಟ್ರೊಲ್ಡ್" ಎನ್ನಬಹುದು. ಯಾರಾದರೂ ಹುಡುಗರು ಮನೆಯಲ್ಲಿ ಹೇಳಿದ ಮಾತು ಕೇಳದಿದ್ದರೆ "ಇವನೇನು, ತೊಂಡು ಬಿದ್ದಿದ್ದಾನೆ" ಎಂದು ಗದರುತ್ತಿದ್ದರು. 

ಜಮೀನಿನ ಮಾಲೀಕರು ತಮ್ಮ ಭೂಮಿಗೆ ನುಗ್ಗಿದ ಹಸುಗಳನ್ನು ಹೊಡೆದುಕೊಂಡು ಹೋಗಿ ತೊಂಡಿನ ಮನೆಗೆ ದಬ್ಬುತ್ತಿದ್ದರು. ದನ ಕಳೆದುಕೊಂಡವರು ಮೊದಲು ತೊಂಡಿನ ಮನೆಗೆ ಹೋಗಿನೋಡಿ, ತಮ್ಮ ಹುಸುಗಳು ಅಲ್ಲಿದ್ದರೆ ಪುರಸಭೆಗೆ ದಂಡ ಕಟ್ಟಿ ಅವನ್ನು ಬಿಡಿಸಿಕೊಂಡು ತಮ್ಮೊಡನೆ ಕರೆದೊಯ್ಯುತ್ತಿದ್ದರು. ಅಲ್ಲಿಯೂ ತಮ್ಮ ಹಸುಗಳು ಇಲ್ಲದಿದ್ದರೆ ಹುಡುಕುವ ಕೆಲಸ ನಡೆಯುತ್ತಿತ್ತು. 

ಹೀಗೆ ಕಳೆದುಹೋದ ಜಾನುವಾರು ಮತ್ತು ಪದಾರ್ಥಗಳನ್ನು ಹಿಂಪಡೆಯಲು ಸಾಮಾನ್ಯವಾಗಿ ಮೊದಲು ಮಾಡುತ್ತಿದ್ದ ಕೆಲಸ "ಶಾಸ್ತ್ರ ಕೇಳುವುದು". ಅಲ್ಲಲ್ಲಿ ಇದ್ದ ಜೋಯಿಸರು, ಅಯ್ಯನೋರು, ಶಾಸ್ತ್ರಿಗಳು ಮುಂತಾದವರ ಬಳಿ ಹೋಗುವುದು. ಅವರ ಬತ್ತಳಿಕೆಯಲ್ಲಿ ಅನೇಕ ಉಪಾಯಗಳಿದ್ದವು. ಪ್ರಶ್ನೆ ಕೇಳುವುದು, "ಕವಡೆ ಶಾಸ್ತ್ರ", ಚೀಟಿ ಎತ್ತುವುದು ಮುಂತಾದುವು. ಹೀಗೆ ಮಾಡಿ "ನಿಮ್ಮ ಹಸು ಉತ್ತರ ದಿಕ್ಕಿನಲ್ಲಿ ಇದೆ. ಅಲ್ಲಿ ಹುಡುಕಿ" ಮುಂತಾಗಿ ಅವರು ಹೇಳುತ್ತಿದ್ದರು. ಕೆಲವೊಮ್ಮೆ "ಏನೂ ಮಾಡಬೇಡಿ. ಅದೇ ನಿಮ್ಮ ಮನೆಯ ಮುಂದೆ ಬಂದು ನಿಲ್ಲುತ್ತದೆ" ಎಂದೂ ಹೇಳಬಹುದಿತ್ತು. ಇವು ನಿಜವಾದಷ್ಟೂ ಆಯಾ ಶಾಸ್ತ್ರ ಹೇಳುವವರಿಗೆ ಬೆಲೆ ಹೆಚ್ಚುತ್ತಿತ್ತು. 

*****

ಬೆಲೆಬಾಳುವ ವಸ್ತುಗಳು ಕಳೆದು ಹೋದಾಗ ಕಳವಳ ಮತ್ತಷ್ಟು ಹೆಚ್ಚುತ್ತಿತ್ತು. ಹೊಟ್ಟೆ-ಬಟ್ಟೆ ಕಟ್ಟಿ ಆಸೆಯಿಂದ ಸಂಪಾಸಿದ ಬೆಳ್ಳಿ-ಬಂಗಾರದ ಒಡವೆಗಳು ಮುಂತಾದವು ಹೀಗೆ ಕಳೆದುಹೋದರೆ ಅಥವಾ ಕಳವಾದರೆ ಸಹಜವಾದ ನೋವು ಇರುತ್ತಿತ್ತು. ಇವು ದನಗಳನ್ನು ಹುಡುಕಿದಂತೆ ಅಲ್ಲ. ಕವಡೆ ಶಾಸ್ತ್ರ ಮುಂತಾದುವು ಇವುಗಳ ಹುಡುಕುವಿಕೆಗೆ ಸಾಲವು. ಆಗ ಜನಗಳು "ಅಂಜನ" ಹಾಕುವವರ ಮೊರೆಹೋಗುತ್ತಿದ್ದರು. 

ಅಂಜನ ಹಾಕುವವರು ತಮ್ಮ ಬಳಿ ಬಂದವರ ಸಮಸ್ಯೆ ವಿಚಾರಿಸಿ ಅಂಜನ ಹಾಕುತ್ತಿದ್ದರು. "ಅಂಜನ ಹಾಕುವುದು" ಎಂದರೇನು? ಒಂದು ಇಷ್ಟದೈವದ ಪೂಜೆ ಮಾಡುವುದು. ನಂತರ ಒಂದು ಹರಿವಾಣದಲ್ಲಿ (ತಟ್ಟೆ ಅಥವಾ ಬಾಂಡಲೆ) ತಿಳಿಯಾದ ಎಣ್ಣೆ ತುಂಬಿಸುವುದು. ತಮ್ಮ ಬಳಿ ಇರುವ ಕಾಡಿಗೆಯಂತಹ ಒಂದು ಮುಲಾಮು ಕಣ್ಣಿಗೆ ಹಚ್ಚಿಕೊಳ್ಳುವುದು. ನಂತರ ಬಂದವರನ್ನು ಪ್ರಶ್ನೆ ಕೇಳುತ್ತಾ ಆ ಎಣ್ಣೆಯಲ್ಲಿ ನೋಡುತ್ತಾ ಹೋಗುವುದು. ಹೀಗೆ ನೋಡುತ್ತಿರುವಾಗ ಕಳೆದಿರುವ ಪದಾರ್ಥ ಎಲ್ಲಿದೆ ಎಂದು ಅವರಿಗೆ ಕಾಣುವುದು. ಕಂಡದ್ದನ್ನು ಬಂದವರಿಗೆ ಹೇಳುವುದು. ಈ ಸುಳಿವಿನ ಮೇರೆಗೆ ಅವರು ತಮ್ಮ ಹುಡುಕಾಟ ಮುಂದುವರೆಸುವುದು. ಹೀಗೆ ವ್ಯವಸ್ಥೆ. 

ಇದು ನಿಜವೇ? ಹೀಗೆ ಕಾಣಿಸುತ್ತದೆಯೇ? ಈ ರೀತಿಯ ಪ್ರಶ್ನೆಗಳು ಬರುತ್ತವೆ. ಇವೆಲ್ಲಾ ಅವರವರ ನಂಬಿಕೆಯ ಸಮಾಚಾರ. ಹೀಗೆ ಅಂಜನ ಹಾಕಿ ಕೇಳಿ ಪದಾರ್ಥಗಳು ಸಿಕ್ಕಿದ್ದೂ ಉಂಟು. ಸಿಗದಿದ್ದದ್ದೂ ಉಂಟು. ಸಿಕ್ಕಿದ್ದು ಕಾಕತಾಳೀಯ ನ್ಯಾಯ ಇರುವಂತೆ ಇರಬಹುದು. (ಒಬ್ಬ ವ್ಯಕ್ತಿ ಒಂದು ತಾಳೆಯ ಮರದ ಕೆಳಗೆ ಹೋಗಿ ಕುಳಿತುಕೊಂಡ. ಅದೇ ಸಮಯಕ್ಕೆ ಒಂದು ಕಾಗೆ ಆ ಮರದ ಮೇಲೆ ಬಂದು ಕುಳಿತುಕೊಂಡಿತು. ಮರ ಅವನ ಮೇಲೆ ಬಿದ್ದಿತು. ಕಾಗೆಯ ಭಾರಕ್ಕೆ ಮರ ಮುರಿದು ಅವನ ಮೇಲೆ ಬಿತ್ತು ಎನ್ನುವುದು ಕಾಕ-ತಾಳೀಯ ನ್ಯಾಯ ಎಂದು ಹೇಳುವುದು. ಇಂಗ್ಲೀಷಿನಲ್ಲಿ coincidence ಅನ್ನಬಹುದು). ಏನಾದರೂ ಮಾಡಿ ಬೆಲೆಬಾಳುವ ವಸ್ತು ಮರಳಿ ಪಡೆಯಬೇಕೆಂಬ ಆಸೆ ಇರುವ ವ್ಯಕ್ತಿ ಏನು ಬೇಕಾದರೂ ಮಾಡುತ್ತಾನೆ. ಇದು ಮನುಷ್ಯ ಸಹಜ ವ್ಯವಹಾರ. 

*****

ವಿದ್ಯಾರ್ಥಿಗಳಿಗೆ ವಿಜ್ಞಾನದ ತರಗತಿಗಳಲ್ಲಿ, ವಿಶೇಷವಾಗಿ ರಸಾಯನ ಶಾಸ್ತ್ರ ಕಲಿಸುವ ಸಂದರ್ಭದಲ್ಲಿ, ಆಮ್ಲಜನಕ (oxygen) ತಯಾರಿಸುವುದನ್ನು ಕಲಿಸುತ್ತಾರೆ. ಇದಕ್ಕೆ ಅನೇಕ ವಿಧಾನಗಳಿವೆ. (ಮೇಲಿನ ಚಿತ್ರದಲ್ಲಿ ತೋರಿಸಿರುವಂತೆ ಹೈಡ್ರೋಜನ್ ಪರಾಕ್ಸೈಡ್ ಉಪಯೋಗಿಸುವುದು ಒಂದು ವಿಧಾನ). ಸಾಮಾನ್ಯವಾಗಿ ಪೊಟ್ಯಾಸಿಯಂ ಕ್ಲೋರೇಟ್ (Potassium Chlorate - KClO3)) ಹೆಸರಿನ ರಾಸಾಯನಿಕ ಪುಡಿಯನ್ನು ಕಾಯಿಸಿದರೆ ಅದು ಪೊಟ್ಯಾಸಿಯಂ ಕ್ಲೋರೈಡ್ (KCl) ಆಗಿ ರೂಪಾಂತರಗೊಂಡು ಆಮ್ಲಜನಕ (O2) ಬಿಡುಗಡೆ ಆಗುತ್ತದೆ. ಆದರೆ ಈ ಕ್ರಿಯೆ ಬಹಳ ನಿಧಾನ. ಇದು ಬೇಗ ಆಗುವುದಕ್ಕೆ ಪೊಟ್ಯಾಸಿಯಂ ಕ್ಲೋರೇಟ್ ಜೊತೆಗೆ ಸ್ವಲ್ಪ ಮ್ಯಾಂಗನೀಸ್ ಡೈ ಆಕ್ಸೈಡ್ (Mn O2) ಬೆರೆಸುತ್ತಾರೆ. ಹೀಗೆ ಮಾಡುವುದರಿಂದ ಆಮ್ಲಜನಕ ಬೇಗ ಬಿಡುಗಡೆ ಆಗುತ್ತದೆ. ಈ ಮ್ಯಾಂಗನೀಸ್ ಡೈ ಆಕ್ಸೈಡ್ ಅನ್ನುವುದು ರಾಸಾಯನಿಕ ಕ್ರಿಯೆಯಲ್ಲಿ ಭಾಗವಹಿಸುವುದಿಲ್ಲ. ಆದರೆ ಅದರ ಇರುವುಕೆ ಆಗಬೇಕಾದ ಕೆಲಸವನ್ನು ಬೇಗ ನಡೆಯುವಂತೆ ಮಾಡುತ್ತದೆ.

ಕ್ರೀಡಾಂಗಣಗಳಲ್ಲಿ ಭಾಗವಹಿಸುವ ಆಟಗಾರರಂತೆ ಅವರ ಸಮರ್ಥಕರೂ, ಅಭಿಮಾನಿಗಳೂ, ಸಾಮಾನ್ಯ ಪ್ರೇಕ್ಷಕರೂ ಸೇರಿರುತ್ತಾರೆ. "ಹೊಡಿ, ಹಿಡಿ, ನುಗ್ಗು, ಓಡು, ಎಗರು" ಮುಂತಾಗಿ ಆಟಗಾರರನ್ನು ಅವರು ಹುರಿದುಂಬಿಸುತ್ತಾರೆ. ಆಡುವವರು, ಗೆಲ್ಲುವವರು ಮತ್ತು ಸೋಲುವವರು ಆಟಗಾರರೇ. ಪ್ರೇಕ್ಷಕರಿಗೆ ಅದರಿಂದ ನೋಡಿದ ಸಂತೋಷ ಅಷ್ಟೇ. ಬಹುಮಾನ, ಮನ್ನಣೆ, ಟ್ರೋಫಿ, ಹಣ, ಇವು ಯಾವುವೂ ಪ್ರೇಕ್ಷಕರಿಗೆ ಸಿಗುವುದಿಲ್ಲ. ಅವೆಲ್ಲಾ ಆಟಗಾರರಿಗೆ ಮಾತ್ರ. ಆದರೂ ಕ್ರೀಡಾಂಗಣ ಪ್ರೇಕ್ಷಕರಿಲ್ಲದೆ ಕೋವಿಡ್ ಮಾರಿಯ ಸಮಯದಂತೆ ಬರಿದಾಗಿದ್ದರೆ ಆಟಗಾರರಿಗೆ ಎಲ್ಲ ನೀರಸವಾಗುತ್ತದೆ. 

ಇದು ನಾನ್-ಸ್ಟಿಕ್ ಪಾತ್ರೆಗಳ ಯುಗ. ಸೌದೆ ಒಲೆಯ ಮಸಿಯಿಲ್ಲ. ಎಣ್ಣೆಯ ಜಿಡ್ಡಿಲ್ಲ. ತಂಗಳಿನ ವಾಸನೆಯಿಲ್ಲ. ಸುಮ್ಮನೆ ಸ್ವಲ್ಪ ನೀರು ಹಾಕಿ ಒರೆಸಿದರೆ ಆಯಿತು. ಹಿಂದಿನ ದಿನಗಳಂತೆ ತಿಕ್ಕಿ-ತಿಕ್ಕಿ ತೊಳೆಯುವ ಕೆಲಸವಿಲ್ಲ. ತೊಳೆದರೂ ಮಸಿ ಉಳಿಯಿತೆಂಬ ಕಸಿವಿಸಿ ಇಲ್ಲ. ಮತ್ಯಾರೋ ಏನಾದರೂ ಅನ್ನುತ್ತಾರೆ ಅನ್ನುವ ಅಳುಕಿಲ್ಲ. 
***** 

ಪರಮಾತ್ಮನನ್ನು ಅನೇಕ ಹೆಸರುಗಳಿಂದ ಕರೆಯುತ್ತೇವೆ. ಅವುಗಳಲ್ಲಿ "ನಿರಂಜನ" ಅನ್ನುವುದೂ ಒಂದು. ಹೀಗೆ ನಿರಂಜನ ಎಂದು ಕರೆಯುವುದರ ಕಾರಣವೇನು? 

"ಅಂಜನ" ಅಂದರೆ ಏನು ಅನ್ನುವುದರ ವಿವರವನ್ನು ಮೇಲೆ ನೋಡಿದೆವು. ಅಂಜನ ಹಾಕುವವರು ಕಣ್ಣಿಗೆ ಹಚ್ಚಿಕೊಳ್ಳುವ ಮುಲಾಮಿನಂತಹ ವಸ್ತುವಿಗೆ ಅಂಜನ ಎನ್ನುವುದೇಕೆ? ಅದು ಕಣ್ಣಿಗೆ ಅಂಟಿಕೊಂಡು ಕೂಡುತ್ತದೆ. "ಅಂಜನ" ಪದಕ್ಕೆ "ಅಂಟಿಕೊಳ್ಳುವುದು" ಎಂದು ಅರ್ಥ. 

ಅಂಟಿಕೊಳ್ಳುವ ಪದಾರ್ಥ ಅಂಜನ ಎಂದಾದರೆ ಅಂಟಿಕೊಳ್ಳದ ವಸ್ತು "ನಿರಂಜನ". ಆದ್ದರಿಂದ ಪರಮಾತ್ಮನು "ನಿರಂಜನ". 

ಆಮ್ಲಜನಕದ ತಯಾರಿಕೆಯಲ್ಲಿ ಉಪಯೋಗಿಸುವ ಮ್ಯಾಂಗನೀಸ್ ಡೈ ಆಕ್ಸೈಡ್ ಎಂಬ ವಸ್ತುವಿಗೆ "ವೇಗವರ್ಧಕ" (Catalyst) ಅನ್ನುತ್ತಾರೆ. ಅದು ತಯಾರಿಕೆಯಲ್ಲಿ ಸುಮ್ಮನೆ ಇರುವುದೇ ಹೊರತು ಆ ಕ್ರಿಯೆಯಲ್ಲಿ ಭಾಗವಹಿಸುವುದಿಲ್ಲ. ಕ್ರಿಯೆಯ ಮೊದಲು ಹೇಗೆ ಇತ್ತೋ ಕ್ರಿಯೆಯ ನಂತರವೂ ಹಾಗೆಯೇ ಉಳಿಯುವುದು. ಕ್ರೀಡಾಂಗಣದಲ್ಲಿ ಸೇರಿದ ಪ್ರೇಕ್ಷಕರೂ ಹಾಗೆಯೇ. ಅವರಿಗೆ ಆಟದ ನೇರ ಲಾಭ ಏನೂ ಇಲ್ಲ. ನಾನ್-ಸ್ಟಿಕ್ ಪಾತ್ರೆಯೂ ಹೀಗೆಯೇ. 

ಪರಮಾತ್ಮನು ನಮ್ಮ ಎಲ್ಲ ಕ್ರಿಯೆಗಳ ಅಂತಃಶಕ್ತಿಯಾಗಿ ಜೊತೆಗಿರುತ್ತಾನೆ. ಅವನಿಗೆ ಈ ಕ್ರಿಯೆಗಳ ಯಾವುದೇ ವಿಕಾರಗಳೂ ಆಗುವುದಿಲ್ಲ. ಮ್ಯಾಂಗನೀಸ್ ಡೈ ಆಕ್ಸೈಡ್ ಆದರೂ ಬೇರೆ ಪದಾರ್ಥಗಳ ಜೊತೆ ಕಾದು, ನಂತರ ತಣ್ಣಗಾಗುತ್ತದೆ. ಪರಮಾತ್ಮನಿಗೆ ಈ ರೀತಿ ವಿಕಾರಗಳೂ ಇಲ್ಲ. ಪ್ರೇಕ್ಷಕರಿಗೆ ಕೂಗಿದುದರಿಂದ ಆಯಾಸ, ತಮ್ಮ ನೆಚ್ಚಿನ ತಂಡ ಗೆದ್ದರೆ ಆನಂದ, ಸೋತರೆ ದುಃಖ ಆಗುತ್ತವೆ. ಪರಮಾತ್ಮನಿಗೆ ಈ ರೀತಿ ಆಗುವುದಿಲ್ಲ. ಅವನಿಗೆ ಲಾಭದ ಆಸೆಯಿಲ್ಲ. ನಷ್ಟದ ಭೀತಿಯಿಲ್ಲ. ಕೆಲಸ ಮಾಡಿದ ಆಯಾಸವಿಲ್ಲ. ನಾನ್-ಸ್ಟಿಕ್ ಪಾತ್ರೆಯಂತೆ ಬಿಸಿಯಾಗುವುದಿಲ್ಲ. ಒಮ್ಮೆ ತೊಳೆದು ಒರೆಸಬೇಕಾದದ್ದೂ ಇಲ್ಲ. ಅವನು ಯಾವುದಕ್ಕೂ ಅಂಟಿಕೊಂಡವನಲ್ಲ. ಆದ್ದರಿಂದ ಪರಮಾತ್ಮ ನಿರಂಜನ. 

ಹಾಗಿದ್ದರೆ ಕರ್ಮಗಳನ್ನು ಮಾಡುವುದರಲ್ಲಿ ಕೆಲವರಿಗೆ ಪಾಪ, ಮತ್ತೆ ಕೆಲವರಿಗೆ ಪುಣ್ಯ ಏಕೆ? ಎಲ್ಲರೂ ಅವನ ಮಕ್ಕಳಲ್ಲವೇ? ಕೆಲವರಿಗೆ ಯಾಕೆ ಕಷ್ಟ? ಮತ್ತೆ ಕೆಲವರಿಗೆ ಯಾಕೆ ಸುಖ? ಅವನು ಒಬ್ಬ ನ್ಯಾಯಾಧೀಶನಂತೆ. ಒಬ್ಬನಿಗೆ ಶಿಕ್ಷೆ. ಮತ್ತೊಬ್ಬನಿಗೆ ಮನ್ನಣೆ. ಅವರವರು ಮಾಡಿದ ಕೆಲಸಗಳಂತೆ ತೀರ್ಪು. ಇದೇ ಅವನ "ಸಂವಿಧಾನ". 
*****

ಭಗವದ್ಗೀತೆ ಮೂರನೆಯ ಅಧ್ಯಾಯ, ಇಪ್ಪತ್ತೆರಡನೆಯ ಶ್ಲೋಕದಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ಹೇಳುತ್ತಾನೆ: 

ನ ಮೇ ಪಾರ್ಥಾಸ್ತಿ ಕರ್ತವ್ಯಮ್  ತ್ರಿಷು ಲೋಕೇಷು ಕಿಂಚನ 
ನಾನಾವಾಪ್ತಮವಾಪ್ತವ್ಯಮ್ ವರ್ತ ಏವ ಚ ಕರ್ಮಣಿ 

ಪಾರ್ಥ, ನನಗೆ ಎಲ್ಲಿಯೂ (ಮೂರು ಲೋಕಗಳಲ್ಲಿಯೂ) ಯಾವುದೇ ಕರ್ತವ್ಯಗಳಿಲ್ಲ. 
(ಇಂಥದು ಮಾಡಲೇಬೇಕೆಂಬ ಬಂಧವಿಲ್ಲ). 
ಸಂಪಾದಿಸಬೇಕು, ಗೆಲ್ಲಬೇಕು ಅಥವಾ ಪಡೆಯಬೇಕು ಎನ್ನುವುದು ಯಾವುದೂ ಇಲ್ಲ. 
ಆದರೂ ನಾನು ಕೆಲಸಗಳನ್ನು (ಕರ್ತವ್ಯ ಎನ್ನುವಂತೆ) ಮಾಡುತ್ತಲೇ ಇರುತ್ತೇನೆ. 

ಇದೇ ಅವನ ನಿರಂಜನತ್ವದ ಲಕ್ಷಣ. 

ನಾವು ಮೇಲೆ ಮಾಡಿದ ಚರ್ಚೆಯೆಲ್ಲವೂ ಇದನ್ನೇ ಸೂಚಿಸುತ್ತದೆ. ಪರಮಾತ್ಮನ ಪರಿಪೂರ್ಣ ಜ್ಞಾನ, ಪರಿಪೂರ್ಣ ಆನಂದ, ಮೊದಲಾದ ಗುಣಗಳಂತೆ ಅವನ ನಿರಂಜನ ಗುಣವೂ ಅವನ ಉಪಾಸನೆಯಲ್ಲಿ ಬಹಳ ಮುಖ್ಯವಾದುದು. 

Wednesday, December 17, 2025

ರಾಮನಾಮ ಎಂಬ ರಸವುಳ್ಳ ನೀರಿಗೆ


ಕಳೆದ ಸಂಚಿಕೆಯಲ್ಲಿ "ತಾರಕ್ಕ ಬಿಂದಿಗೆ ನಾ ನೀರಿಗ್ಹೋಗುವೆ" ಎನ್ನುವ ಶೀರ್ಷಿಕೆಯ ಅಡಿಯಲ್ಲಿ ಬಹು ಜನಪ್ರಿಯ ದೇವರನಾಮ ಶ್ರೀ ಪುರಂದರದಾಸರ ಕೃತಿ "ತಾರಕ್ಕ ಬಿಂದಿಗೆ ನಾ ನೀರಿಗ್ಹೋಗುವೆ, ತಾರೇ ಬಿಂದಿಗೆಯ" ವಿಶೇಷಾರ್ಥಗಳ ಅನ್ವೇಷಣೆಯಲ್ಲಿ ಕೃತಿಯ ಪಲ್ಲವಿಯ ಎರಡು ಸಾಲುಗಳಲ್ಲಿ ತುಂಬಿರುವ ಅರ್ಥವಿಶೇಷಗಳನ್ನು ನೋಡುವ ಪ್ರಯತ್ನ ಮಾಡಿದ್ದೆವು. ಈ ಸಂಚಿಕೆಯನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು.

ಈಗ ಈ ಹಾಡಿನ ಉಳಿದ ಭಾಗಗಳ ವಿಶೇಷ ಅರ್ಥಗಳನ್ನು ನೋಡೋಣ. 

*****

ಬಿಂದಿಗೆ ಕೊಡು ಎಂದು ಕೇಳಿದ್ದು ನೀರು ತರಲು. ಯಾವ ನೀರು? ನಾವು ನಮ್ಮ ಸುತ್ತ-ಮುತ್ತ ಕಾಣುವ ಮತ್ತು ದಿನಂಪ್ರತಿ ಉಪಯೋಗಿಸುವ ನೀರು ಎನ್ನುವುದು ಸಾಮಾನ್ಯವಾದ ಹೊರ ಅರ್ಥ. ನೀರಿಲ್ಲದೆ ಜೀವನವಿಲ್ಲ. ಗಾಳಿಯ ನಂತರ ಜೀವಿಗೆ ಬೇಕಾದ ಅತ್ಯಂತ ಮುಖ್ಯ ಅವಶ್ಯಕತೆ ನೀರು. ನೀರನ್ನು ಶೇಖರಿಸಿ ತರಲು ಒಂದು ಸಾಧನ ಬೇಕು. ಬಿಂದಿಗೆಯು ಅಂತಹ ಒಂದು ಸಾಧನ. ನೀರಿಲ್ಲದೆ ಕರ್ಮವಿಲ್ಲ. ಏನಾದರೂ ಮಾಡುವ ಮೊದಲು ಕೈ, ಕಾಲುಗಳನ್ನಾದರೂ ತೊಳೆದುಕೊಳ್ಳುತ್ತೇವೆ. ಅದಕ್ಕೆ ನೀರು ಬೇಕು. ಸ್ನಾನ ಮಾಡಿದರೆ ನೀರು ಬೇಕು. ಪೂಜೆ-ಹೋಮಾದಿಗಳನ್ನು ಮಾಡಲು ಮೊದಲು ನೀರಿನಿಂದಲೇ ಪ್ರಾರಂಭ. ಕಡೆಯಲ್ಲಿ ಸಮರ್ಪಣ ಮಾಡಲೂ ನೀರು ಬೇಕು. ನೀರಿನಿಂದ ಪ್ರಾರಂಭವಾದ ಕೆಲಸಗಳು ನೀರಿನಿಂದಲೇ ಕೊನೆ! ಬೇರೆ ಯಾವುದಾದರೂ ಪದಾರ್ಥ ಇಲ್ಲದಿದ್ದರೆ ಹೇಗೋ ಕೆಲಸ ತೂಗಿಸಬಹುದು. ನೀರಿಲ್ಲದಿದ್ದರೆ ಮುಂದೆ ಹೋಗಲು ಆಗುವುದೇ ಇಲ್ಲ.  

ನೀರಿಗೆ ಒಂದು ವಿಶೇಷಾರ್ಥವಿದೆ. ಬಿಂದಿಗೆ ಅನ್ನುವುದು ದೇಹವಾದಾಗ (ಏಕೆ ಅನ್ನುವುದನ್ನು ಹಿಂದಿನ ಸಂಚಿಕೆಯಲ್ಲಿ ನೋಡಿದ್ದೇವೆ) ನೀರು ಅನ್ನುವುದು ಜೀವಿಯು ಮಾಡುವ "ಕರ್ಮ" ಸೂಚಕವಾಗುತ್ತದೆ. ಬಿಂದಿಗೆಯಲ್ಲಿ ನೀರನ್ನು ತರುವಂತೆ ದೇಹದಿಂದ ಜೀವಿಯು ಕರ್ಮಗಳನ್ನು ಮಾಡಿ ಆ ಮೂಲಕ ಸಾಧನೆಗಳನ್ನು ಮಾಡುತ್ತಾನೆ. 

ಈಶಾವಾಸ್ಯ ಉಪನಿಷತ್ತು ತನ್ನ ನಾಲ್ಕನೆಯ ಮಂತ್ರದಲ್ಲಿ "ತಸ್ಮಿನ್ ಆಪಃ ಮಾತರಿಶ್ವಾ ದಧಾತಿ" ಎಂದು ಹೇಳುತ್ತದೆ. "ಆಪಃ" ಅಂದರೆ ನೀರು. "ಮಾತರಿಶ್ವ" ಅಂದರೆ ವಾಯು. ವಾಯುವು ಕೊಡುವ ನೀರು ಯಾವುದು? ಕೊಡುವುದು ಯಾರಿಗೆ? ಜೀವಿಯ ಎಲ್ಲ ಕರ್ಮಗಳಿಗೆ ಪ್ರತ್ಯಕ್ಷ ಸಾಕ್ಷಿ ಪ್ರಾಣವಾಯು. ಮೊದಲ ಉಸಿರಿನಿಂದ ಪ್ರಾರಂಭವಾದ ಜೀವನದಿಂದ ಕರ್ಮ ಪ್ರಾರಂಭ. ಕೊನೆಯ ಉಸಿರಿನೊಡನೆ ಅದು ಮುಗಿಯಿತು. ಬೇರೆಯವರ ಕಣ್ಣು ತಪ್ಪಿಸಿ ಅನೇಕ ಕೆಲಸಗಳನ್ನು ಮಾಡಬಹುದು. ಹಾಗೆ ಏನಾದರೂ ಮಾಡಿ ಅರಗಿಸಿಕೊಳ್ಳಬಹುದು. ಆದರೆ ಮಾತರಿಶ್ವನ ಕಣ್ಣು ತಪ್ಪಿಸಲಾಗದು. ಇದನ್ನೇ "ಅಂತಃಸಾಕ್ಷಿ" ಎಂದೂ ಹೇಳುತ್ತೇವೆ.  ಜೀವನ ಕಾಲ ಮುಗಿದ ಮೇಲೆ ಜೀವಿಯನ್ನು ಪರಮಾತ್ಮನ ಮುಂದೆ ನಿಲ್ಲಿಸಿ ವಾಯುದೇವನು ಅವನ ಸಮಸ್ತ ಕರ್ಮಗಳನ್ನು ಹಾಜರು ಮಾಡುತ್ತಾನೆ. 

ಈ ಕಾರಣದಿಂದ "ನಾ ನೀರಿಗ್ಹೋಗುವೆ" ಅಂದರೆ "ನೀನು ಕೊಟ್ಟ ದೇಹದಿಂದ ನಾನು ಕರ್ಮಗಳನ್ನು ಆಚರಿಸಿ ಸಾಧನೆಗಳನ್ನು ಮಾಡುವೆ, ಮಹಾಲಕ್ಷ್ಮಿ ಅಕ್ಕಾ" ಎಂದು ಹೇಳುವುದು. ಇದು ಅಂತರಾರ್ಥ. 
***** 

"ರಾಮನಾಮ ಎಂಬೋ ರಸವುಳ್ಳ ನೀರಿಗೆ" ಬಿಂದಿಗೆ ಬೇಕು. ರಾಮನಾಮದ ವಿಶೇಷವೇನು? ಅನಂತರೂಪಿ ಪರಮಾತ್ಮನಿಗೆ ಅನಂತ ಹೆಸರುಗಳು. ಸೃಷ್ಟಿಯಲ್ಲಿ ಇರುವ ಸಕಲ ಶಬ್ದಗಳೂ ಪರಮಾತ್ಮನನ್ನೇ ಹೇಳುತ್ತವೆ ಎನ್ನುವುದು ಒಂದು ಪ್ರಮೇಯ. (ಧ್ವನ್ಯಾತ್ಮಕ ಮತ್ತು ವರ್ಣಾತ್ಮಕ ಶಬ್ದಗಳ ಬಗ್ಗೆ ಹಿಂದೊಂದು ಸಂಚಿಕೆಯಲ್ಲಿ ನೋಡಿದ್ದೇವೆ). "ರಮಯತಿ ಇತಿ ರಾಮಃ". "ಆನಂದ (ಸಂತೋಷ) ಕೊಡುವವನು ರಾಮ" ಎಂದು ಇದರ ಅರ್ಥ. ಜೀವಿಗಳಿಗೆ ಈ ಸುತ್ತುವ ಸಂಸಾರದ ಹುಟ್ಟು-ಸಾವುಗಳಿಂದ ಬಿಡುಗಡೆ ಕೊಟ್ಟು ಶಾಶ್ವತ ಆನಂದ ಕೊಡುವವನು ರಾಮ. ಈ ಮೋಕ್ಷದ ನಂತರದ ಆನಂದಕ್ಕೆ ಅದರ ಪ್ರಮಾಣದಲ್ಲಿ ಆಗಾಗ ಹೆಚ್ಚು-ಕಡಿಮೆ ಆಗುವ ಭಯವಿಲ್ಲ. ಎಂದೋ ಒಂದು ದಿನ ಮುಗಿದುಹೋಗುವುದು ಎನ್ನುವ ಆತಂಕವಿಲ್ಲ. ಅದು ಶಾಶ್ವತವಾದ, ಕೊನೆಯಿಲ್ಲದ, ಪರಿಪೂರ್ಣ ಆನಂದ. 

ರಾಮನು ಎಲ್ಲ ಕಾಲದಲ್ಲೂ ಇದ್ದನು. ಎಲ್ಲ ಕಾಲದಲ್ಲೂ ಇರುತ್ತಾನೆ. ತ್ರೇತಾಯುಗದ ಶ್ರೀರಾಮಚಂದ್ರನು ಅವತಾರ ಮಾಡುವ ಮೊದಲೂ ಇದ್ದನು. ಆ ಅವತಾರ ಮುಗಿದಮೇಲೂ ಇರುತ್ತಾನೆ. ಇಂತಹ ರಾಮನ ಹೆಸರನ್ನೇ ದಶರಥ-ಕೌಸಲ್ಯೆಯರ ಮಗನಿಗೂ ಕೊಟ್ಟರು. ಇಬ್ಬರೂ ಒಂದೇ. ಭೇದವಿಲ್ಲ. 

ಪರಮಾತ್ಮನ ಅನಂತ ನಾಮಗಳಲ್ಲಿ ರಾಮನಾಮ ಅತ್ಯಂತ ಸುಲಭವಾದದ್ದು. ಒತ್ತಕ್ಷರಗಳ ಗೊಂದಲವಿಲ್ಲ. ಆರು-ಎಂಟು-ಹತ್ತು ಅಕ್ಷರಗಳ ದೊಡ್ಡ ಹೆಸರಲ್ಲ. ಈಗ ತಾನೇ ಮಾತು ಕಲಿಯುತ್ತಿರುವ ಮಗುವೂ ಸುಖವಾಗಿ "ರಾಮ" ಎಂದು ಹೇಳುವುದು. "ಹೃಷಿಕೇಶ" "ತ್ರಿವಿಕ್ರಮ" "ಪದ್ಮನಾಭ" "ಸಂಕರ್ಷಣ" "ಅಧೋಕ್ಷಜ" ಮುಂತಾದುವನ್ನು ಹೇಳಲು ಅನೇಕರಿಗೆ ಕಷ್ಟವಾಗುತ್ತದೆ. ರಾಮನಾಮಕ್ಕೆ ಇಂತಹ ಬಂಧವಿಲ್ಲ. ಅದು ಗಟ್ಟಿಯಾದ ಚಕ್ಕುಲಿ, ಕೋಡುಬಳೆ, ಪುಳ್ಳಂಗಾಯಿ ಉಂಡೆ ತಿಂದು ಅರಗಿಸಿಕೊಂಡಂತೆ ಅಲ್ಲ. ಪಾಯಸ ಕುಡಿದಂತೆ ಸುಲಭ. ಸಿಹಿಯೂ ಹೌದು. ಆದ್ದರಿಂದ "ರಾಮನಾಮ ಪಾಯಸ"!
*****

ರಾಮನಾಮ ಎಂಬ ನೀರು ಎಂದಾಯಿತು. "ರಸವುಳ್ಳ ನೀರು" ಎಂದೇಕೆ ಹೇಳಿದರು? ನೀರಿನಲ್ಲಿ ಎಂತಹ ರಸ? ನಮಗೆ ಬಾಯಾರಿಕೆ ಆದಾಗ ಕುಡಿಯಲು ನೀರು ಬೇಕು. ಒಳ್ಳೆಯ ಬಾದಾಮಿ ಹಾಲೋ, ಎಳನೀರೋ ಕೊಟ್ಟರೆ ಹೇಗೆ? ಸೊಗಸಾದ ಕಾಫಿ? ಅಥವಾ ಕಿತ್ತಳೆ ರಸ? "ಅದೆಲ್ಲಾ ಇರಲಿ. ಕೊಡುವಿರಂತೆ. ಮೊದಲು ಒಂದು ಲೋಟ ನೀರು ಕೊಡಿ, ಆಮೇಲೆ ಬೇರೆಯದು" ಎನ್ನುತ್ತೇವೆ. ಆಯಿತು. ಕೊಟ್ಟರು. ಎಲ್ಲ ನೀರೂ ಒಂದೇ ರೀತಿ ಇರುವುದಿಲ್ಲ. ಬೆಂಗಳೂರಿನಲ್ಲಿ ಬೋರ್ವೆಲ್ ನೀರು ಕೊಡಬಹುದು. ಯಾವುದೊ ಕೆರೆಯಿಂದ ತಂಡ ಟ್ಯಾಂಕರ್ ನೀರು ಇರಬಹುದು. ಕಾವೇರಿ, ಅರ್ಕಾವತಿ ನೀರು ತಂದಿರಬಹುದು. ಎಲ್ಲವೂ ಒಂದೇ ರೀತಿ ಇರುವುದಿಲ್ಲ. ಕೆಲವು ನೀರು ಕುಡಿದರೆ ಮುಖ ಸಿಂಡರಿಸುತ್ತೇವೆ. "ಈ ನೀರು ಅಷ್ಟು ಸರಿ ಇಲ್ಲ" ಅನ್ನುತ್ತೇವೆ. ಯಾಕೆ? ನೀರು ಚೆನ್ನಾಗಿರಬೇಕು. "ಇಂತಹ ಒಳ್ಳೆಯ ನೀರು ತರುತ್ತೇನೆ, ಬಿಂದಿಗೆ ಕೊಡು" ಅನ್ನುವುದು ಸಾಮಾನ್ಯ ಅರ್ಥ. 

"ರಸ" ಅನ್ನುವುದಕ್ಕೆ ವಿಶೇಷಾರ್ಥವೂ ಉಂಟು. ಅದು ತಿಳಿಯಬೇಕಾದರೆ ಶ್ರೀಮದ್ ಭಗವದ್ಗೀತೆಯ ಏಳನೆಯ ಅಧ್ಯಾಯ ನೋಡಬೇಕು. ಎಂಟನೆಯ ಶ್ಲೋಕದಲ್ಲಿ ಶ್ರೀಕೃಷ್ಣ ಹೇಳುತ್ತಾನೆ:

ರಸೋಹಂ ಅಪ್ಸು ಕೌಂತೇಯ ಪ್ರಭಾಸ್ಮಿ ಶಶಿ ಸೂರ್ಯಯೋ: 
ಪ್ರಣವಃ ಸರ್ವವೇದೇಷು ಶಬ್ದ: ಖೇ ಪೌರುಷಮ್ ನೃಷು 

"ನೀರಿನಲ್ಲಿ ನಾನು ರಸ ಆಗಿದ್ದೇನೆ. ಚಂದ್ರ-ಸೂರ್ಯರಲ್ಲಿ ಬೆಳಕಾಗಿದ್ದೇನೆ. 
ವೇದಗಳಲ್ಲಿ ಓಂಕಾರವಾಗಿದ್ದೇನೆ. ಆಕಾಶದಲ್ಲಿ ಶಬ್ದ ರೂಪದಲ್ಲಿ ಇದ್ದೇನೆ. 
ಮನುಷ್ಯರಲ್ಲಿ ಕ್ರಿಯಾಶಕ್ತಿಯ ರೂಪವಾಗಿ ನಿಂತಿದ್ದೇನೆ"

ಪರಮಾತ್ಮನ ಸನ್ನಿಧಾನ ಇದ್ದಾಗ ನೀರು ರುಚಿಸುತ್ತದೆ. ಪದಾರ್ಥಗಳ ಸೊಗಸು ನಾಲಿಗೆಗೆ ಸಿಗುತ್ತದೆ. ಕಿತ್ತಳೆ ತೊಳೆ ನೋಡಲು ಕೆಂಪಾಗಿದೆ. ದಪ್ಪಗೂ ಇದೆ. ಆದರೆ ತಿಂದಾಗ ಬರೀ ಬೆಂಡು ಬೆಂಡು. ಯಾಕೆ? ಅಲ್ಲಿ ಪರಮಾತ್ಮನ ಅಭಿವ್ಯಕ್ತಿ ಇಲ್ಲ. ಬಾದಾಮಿ, ಗೋಡಂಬಿ ಬಹಳ ಚೆನ್ನಾಗಿವೆ. ಬಾಯಿಯಲ್ಲಿ ಹಾಕಿಕೊಂಡು ಎಷ್ಟು ಹೊತ್ತು ಇಟ್ಟುಕೊಂಡರೂ ಏನೂ ರುಚಿಯಿಲ್ಲವಲ್ಲ? ಅಗಿದು ಅದಕ್ಕೆ ಸ್ವಲ್ಪ ರಸರೂಪದ ನೀರು ಸೇರಿದರೆ ತಕ್ಷಣ ರುಚಿ ಸಿಕ್ಕಿತು!  

ಮನುಷ್ಯನು ಮಾಡುವ ಕೆಲಸಗಳೂ ಅಂತೆಯೇ. ಯಾವುದೋ ಕಾರಣಕ್ಕೆ ಮಾಡಿದ ಕಾರ್ಯಗಳು ನೀರಸ. "ಪರಮಾತ್ಮನಿಗೆ ಪ್ರೀತಿಯಾಗಲಿ" ಎಂದು ಮಾಡಿದ ತಕ್ಷಣ ಅಲ್ಲಿ ರಸ ಬಂದು ಕೂತಿತು. ಮಾಡಿದ ಕರ್ಮ ಸತ್ಕರ್ಮ ಆಯಿತು. ಅವನಿದ್ದರೆ ಅದು ಸರಸ. ರಸದಿಂದ ಕೂಡಿದ್ದು. ಅವನಿಲ್ಲದಿದ್ದರೆ ಅದು ನೀರಸ. ರಸವಿಲ್ಲದ್ದು. ಅವನಿಗೆ ವಿರುದ್ಧವಾಗಿದ್ದರೆ ವಿರಸ. ಇದೇ ಸತ್ಕರ್ಮಗಳ ರಹಸ್ಯ!

"ರಾಮನಾಮವೆಂಬ ರಸವುಳ್ಳ ನೀರು ತರುತ್ತೇನೆ, ಬಿಂದಿಗೆ ಕೊಡು ಅಕ್ಕಾ" ಅಂದಾಗ "ಸತ್ಕರ್ಮಗಳನ್ನು ಮಾಡಿ ರಸರೂಪವಾದ ಸಾಧನೆಯನ್ನು ದೇಹದಲ್ಲಿ ತುಂಬಿಕೊಳ್ಳುತ್ತೇನೆ" ಎಂದು ಅರ್ಥ. ಇದೇ ಇಲ್ಲಿನ ವಿಶೇಷಾರ್ಥ. 
*****

"ಗೋವಿಂದ ಎಂಬ ಗುಣವುಳ್ಳ ನೀರಿಗೆ ತಾರೆ ಬಿಂದಿಗೆಯ, ಆವಾವ ಪರಿಯಲ್ಲಿ ಅಮೃತದ ನೀರಿಗೆ ತಾರೇ ಬಿಂದಿಗೆಯ" ಅನ್ನುವುದು ಮುಂದಿನದು. "ಗೋವಿಂದ" ಅನ್ನುವ ಪದಕ್ಕೆ ಅನೇಕ ಅರ್ಥಗಳು. ಗೋ ಅನ್ನುವ ಪದಕ್ಕೆ "ನೀರು" "ಹಸು" "ಭೂಮಿ" "ವೇದಗಳು" ಇನ್ನೂ ಮುಂತಾಗಿ ವಿವರಣೆಗಳಿವೆ. "ಉತ್ತಮವಾದದ್ದು" ಎಂದೂ ಅರ್ಥವುಂಟು. "ನೀರಿನಲ್ಲಿ ಶ್ರೇಷ್ಠವಾದ ರೀತಿಯ ನೀರು ತರುತ್ತೇನೆ" ಎಂದು ಹೇಳುವುದು ಸಾಮಾನ್ಯ ಅರ್ಥ. 

ಅಮೃತದ ನೀರು ಹೇಗೆ? ಸತ್ಕರ್ಮ ಮಾಡಿದ ಮೇಲೆ ಮುಂದೆ ಜನ್ಮವಿಲ್ಲದ ಮುಕ್ತಿ ಸಿಗುತ್ತದೆ. ಸಾವಿಲ್ಲದ್ದು ಅಮೃತ. ಗೋವಿಂದನ ಪ್ರೀತಿಗಾಗಿ ಮಾಡಿದ ಕರ್ಮಗಳನ್ನು, ನಿಷ್ಕಾಮ ಕರ್ಮಗಳನ್ನು, ತುಂಬಿಕೊಂಡಮೇಲೆ ಮತ್ತೆ ಮರಣವಿಲ್ಲ. ಅಂದರೆ ಅಮೃತತ್ವ ಸಿಕ್ಕಿತು. ಆದ್ದರಿಂದ "ಅಮೃತದ ನೀರು". 

"ಕಾಮಿನಿಯರ ಕೂಡೆ ಏಕಾಂತವಾಡೆನು, ತಾರೆ ಬಿಂದಿಗೆಯ" ಎಂದರೇನು? ನೀರು ತರಲು ನದಿಗೋ, ಭಾವಿಗೋ ಹೋದಾಗ ಅಲ್ಲಿ ನಮ್ಮಂತೆಯೇ ಅನೇಕರು ಬಂದಿರುತ್ತಾರೆ. ಸಾಮಾನ್ಯವಾಗಿ ನೀರು ತರಲು ಹೋಗುತ್ತಿದ್ದುದು ಲೋಕಾರೂಢಿಯಾಗಿ ಹೆಣ್ಣುಮಕ್ಕಳು. ಕಾಮಿನಿ ಅನ್ನುವ ಪದಕ್ಕೆ ಹೆಣ್ಣು ಎಂದೂ ಒಂದು ಅರ್ಥ. ಒಂದರ್ಥವೇನು, ಇದೇ ಅರ್ಥದಲ್ಲಿ ಆ ಪದವನ್ನು ಸಾಮಾನ್ಯವಾಗಿ ಬಳಸುವುದು. ಕೆಲವರು ಅಲ್ಲಿ ಕಂಡಾಗ ಸಹಜವಾಗಿ ಸ್ವಲ್ಪ ಅದು-ಇದು ಮಾತಾಡುವಂತೆ ಆಗುತ್ತದೆ. ಹರಟೆಯಲ್ಲಿ ಕಾಲಹರಣ ನಡೆಯುತ್ತದೆ. "ನಾನು ಹರಟೆಯಲ್ಲಿ ಕಾಲ ವ್ಯಯ ಮಾಡುವುದಿಲ್ಲ. ಅಲ್ಲಿ ಹೋಗಿ, ನೀರು ತುಂಬಿಕೊಂಡು ಬೇಗ ಬಂದುಬಿಡುತ್ತೇನೆ" ಎನ್ನುವುದು ಸಾಮಾನ್ಯ ಅರ್ಥ. 

"ಕಾಮ" ಅಂದರೆ ಆಸೆ. ಆಸೆ ಯಾವಾಗಲೂ ಒಂದೇ ಒಂದಾಗಿ ಬರುವುದಿಲ್ಲ. ಆಸೆಗಳು ಗುಂಪಾಗಿ ಮನುಷ್ಯನನ್ನು ಕಾಡುತ್ತವೆ. ಕಾಮದಿಂದ ಹುಟ್ಟಿದ್ದು ಕಾಮಿನಿ ಎಂದಾಗುತ್ತದೆ. "ಅಕ್ಕ, ನೀನು ದೇಹವನ್ನು ಕೊಟ್ಟರೆ ಅದನ್ನು ಇತರೆ ಆಸೆಗಳ, ಪ್ರಾಪಂಚಿಕ ಸುಖ-ಭೋಗಗಳ, ತೃಪ್ತಿಗೆ ಬಳಸುವುದಿಲ್ಲ. ಕೇವಲ ಸಾಧನೆಗಾಗಿಯೇ ಜೀವಿತ ಕಾಲವನ್ನು ಬಳಸಿಕೊಳ್ಳುತ್ತೇನೆ" ಎಂದು ಹೇಳುವುದೇ ವಿಶೇಷಾರ್ಥ. 

ನೀರು ತರಲೆಂದು ಬಿಂದಿಗೆ ಹಿಡಿದು ಹೊರಟು, ಜಲಾಶಯದ ಬಳಿ ಸಮಯವೆಲ್ಲ ಹರಟೆಯಲ್ಲಿ ಕಳೆದು, ಕಡೆಗೆ ಮನೆಗೆ ಖಾಲಿ ಬಿಂದಿಗೆ ಹಿಡಿದು ಬಂದರೆ ಹೇಗಿರುತ್ತದೆ? ಅಮೂಲ್ಯವಾದ ಮತ್ತು ಅಪರೂಪವಾದ ಮನುಷ್ಯ ಜನ್ಮ ಪಡೆದು. ಲೌಕಿಕ ಸುಖಗಳಲ್ಲಿ ಎಲ್ಲ ಕಾಲ ಕಳೆದು, ಕಡೆಗೆ ಅಲ್ಲಿ ಹೋಗಿ ನಿಂತಾಗ ಖಾಲಿ ಕೈ ಆಗುವಂತಾದರೆ ಹೇಗೆ? ಕಾಡಿ-ಬೇಡಿ ಪಡೆದ ದೇಹ, ಜನ್ಮ ವ್ಯರ್ಥವಾಯಿತು. ಹೀಗಾಗಲು ಬಿಡುವುದಿಲ್ಲ ಎಂದು ಮಹಾಲಕ್ಷ್ಮಿ ದೇವಿಗೆ ವಚನ ಕೊಟ್ಟಂತೆ ಈ ಮಾತು. 
***** 

"ಬಿಂದು ಮಾಧವನ ಘಟ್ಟಕ್ಕೆ ಹೋಗುವೆ, ಪುರಂದರ ವಿಠಲಗೆ ಅಭಿಷೇಕ ಮಾಡುವೆ" ಎನ್ನುವುದು ಕಡೆಯ ನುಡಿಯ ತಿರುಳು. ಕಾಶಿಯಲ್ಲಿ ಬಿಂದುಮಾಧವನ ದೇವಾಲಯ ಇದೆ. ಗಂಗಾನದಿಯ ಪಕ್ಕದಲ್ಲೇ ಇದೆ. "ಒಳ್ಳೆಯ ಗಂಗೆ ನೀರು ಬಿಂದಿಗೆಯಲ್ಲಿ ತುಂಬಿಕೊಂಡು ಬಂದು ವಿಠಲನ ಇನ್ನೊಂದು ರೂಪನಾದ ಮಾಧವನಿಗೆ ಅಭಿಷೇಕ ಮಾಡುತ್ತೇನೆ" ಅನ್ನುವುದು ಸಾಮಾನ್ಯ ಅರ್ಥ. 

"ನೀನು ನನ್ನ ಈ ಬೇಡಿಕೆಯ ಫಲವಾಗಿ ಕೊಡುವ ದೇಹದಲ್ಲಿ ಅನೇಕ ಸಾಧನೆಗಳನ್ನು ಮಾಡಿ ಅವುಗಳನ್ನೆಲ್ಲಾ ಪರಮಾತ್ಮನಿಗೆ ಸಮರ್ಪಣ ಮಾಡುತ್ತೇನೆ" ಎಂದು ಮಹಾಲಕ್ಷ್ಮೀದೇವಿಯ ಮುಂದೆ ಪ್ರತಿಜ್ಞೆ ಮಾಡುವುದೇ ಒಟ್ಟು ತಾತ್ಪರ್ಯ ಮತ್ತು ವಿಶೇಷಾರ್ಥ. 

"ಪ್ರತ್ಯಕ್ಷರಂ ಪ್ರತಿಪದಂ ಅನೇಕಾಕೂತಿ ಗರ್ಭಿತಂ" ಎಂದು ಒಂದು ಮಾತಿದೆ. ದೊಡ್ಡವರ ಮಾತುಗಳಲ್ಲಿ ಅವರ ಅನೇಕ ಕಾಲದ ಅನುಭವದ, ಅಧ್ಯಯನದ ಸಾರ ತುಂಬಿರುತ್ತದೆ. ಶ್ರೀ ಪುರಂದರದಾಸರ ಪದಗಳಲ್ಲಿ ಇವನ್ನು ಚೆನ್ನಾಗಿ ಕಾಣಬಹುದು. ಒಂದೊಂದು ಸಾಲಿನಲ್ಲೂ, ಒಂದೊಂದು ಪದದಲ್ಲೂ, ಸಾಮಾನ್ಯ ಅರ್ಥಗಳೂ, ಅವುಗಳ ಜೊತೆ-ಜೊತೆಯಾಗಿ ವಿಶೇಷ ಅರ್ಥಗಳೂ, ಗೂಡಾರ್ಥಗಳೂ ತುಂಬಿರುತ್ತವೆ. ಒಂದು ಸಲ ಓದಿದರೆ ಅಥವಾ ಕೇಳಿದರೆ ಅಷ್ಟಿಷ್ಟು ಅರ್ಥವೇನೋ ಆಗುತ್ತದೆ. ಸರಿಯಾದ ಮೌಲ್ಯ ನಮಗೆ ಸಿಗಬೇಕಾದರೆ ಹೆಚ್ಚಿನ ಅಧ್ಯಯನ ಅಗತ್ಯ. 

*****

ಹಿಂದಿನ ಮತ್ತು ಈ ಸಂಚಿಕೆಯನ್ನು ಓದಿದ ನಂತರ ಹಾಡನ್ನು ಕೇಳಿದರೆ ಹೆಚ್ಚು ಉಪಯೋಗವಾಗುತ್ತದೆ. ಆದ್ದರಿಂದ ಅದನ್ನು ಈ ಕೆಳಗೆ ಕೊಟ್ಟಿದೆ:


ಒಂದು ಬಾರಿ ಓದಿದರೆ ವಿಶೇಷಾರ್ಥಗಳು ಮನಸ್ಸಿನಲ್ಲಿ ನಿಲ್ಲುವುದಿಲ್ಲ. ಅದಕ್ಕೆ ಎರಡು ಮೂರು ಬಾರಿ ಓದುವ ತಾಳ್ಮೆ ಬೇಕು. ಒಮ್ಮೆ ಮನಸ್ಸಿನಲ್ಲಿ ನಿಂತರೆ ಮುಂದೆ ಬೇರೆ ಬೇರೆ ವಿಷಯಗಳ ಅಧ್ಯಯನ ಕಾಲದಲ್ಲಿ ಮತ್ತಷ್ಟು ಹೊಸ ವಿಷಯಗಳು ತೆರೆದುಕೊಳ್ಳುತ್ತವೆ. 

Tuesday, December 16, 2025

ತಾರಕ್ಕ ಬಿಂದಿಗೆ ನಾ ನೀರಿಗ್ಹೋಗುವೆ


ಹಿಂದೊಮ್ಮೆ "ಹೂವು-ಹುಲ್ಲು ಮತ್ತು ಶ್ರೀಕೃಷ್ಣ" ಅನ್ನುವ ಶೀರ್ಷಿಕೆಯಡಿ ಶ್ರೀ ಪುರಂದರದಾಸರ ಜನಪ್ರಿಯ ಕೃತಿ "ಹೂವ ತರುವರ ಮನೆಗೆ ಹುಲ್ಲ ತರುವ, ಅವ್ವ ಲಕುಮಿರಮಣ ಇವಗಿಲ್ಲ ಗರುವ" ಬಗ್ಗೆ ವಿಚಾರ ಮಾಡಿದ್ದೆವು. ಇಲ್ಲಿ ಕ್ಲಿಕ್ ಮಾಡಿ ಅದನ್ನು ಓದಬಹುದು.  

ಅನೇಕ ಕೃತಿಗಳಲ್ಲಿ ಹೊರನೋಟಕ್ಕೆ ಕಾಣುವ ಅರ್ಥಕ್ಕೂ, ಒಳಗಿನ ಅಂತರಾರ್ಥಕ್ಕೂ ಬಹಳ ವ್ಯತ್ಯಾಸವಿರುತ್ತದೆ. ಒಟ್ಟಿನಲ್ಲಿ ಮೂರು ವಿಧದ ಅರ್ಥಗಳು ಉಂಟು. ಇವನ್ನು ಬಾಹ್ಯಾರ್ಥ, ಅಂತರಾರ್ಥ ಮತ್ತು ಗೂಡಾರ್ಥ ಅನ್ನುತ್ತಾರೆ. ಇದರ ಬಗ್ಗೆ ವಿವರಗಳನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು. 

ಇದೇ ಸಂದರ್ಭದಲ್ಲಿ "ಬಿಂದು ಗಂಗೋದಕ" ಎನ್ನುವ ವಿಷಯದ ಚರ್ಚೆಯಲ್ಲಿ ವಾರಣಾಸಿಯಲ್ಲಿರುವ ಬಿಂದುಮಾಧವ ದೇವಾಲಯ, ದೇಶದಲ್ಲಿರುವ ಇತರೆ ಮಾಧವ ದೇವಾಲಯಗಳು ಮತ್ತು ಕಾಶಿಯ ಬಿಂದುಮಾಧವ ಘಟ್ಟ ಮುಂತಾದ ವಿವರಗಳನ್ನು ನೋಡಿದ್ದೆವು. ಓದುಗರೊಬ್ಬರು "ತಾರಕ್ಕ ಬಿಂದಿಗೆ ನಾ ನೀರಿಗ್ಹೋಗುವೆ" ಕೃತಿಯಲ್ಲಿ ಬರುವ "ಬಿಂದು ಮಾಧವನ ಘಟ್ಟಕ್ಕೆ ಹೋಗುವೆ ತಾರೇ ಬಿಂದಿಗೆಯ" ಅಂತರಾರ್ಥ ಮತ್ತು ಗೂಡಾರ್ಥಗಳ ಬಗ್ಗೆ ಕೇಳಿದ್ದಾರೆ. ಈಗ ಅದನ್ನು ಸ್ವಲ್ಪ ನೋಡೋಣ. 

*****

"ತಾರಕ್ಕ ಬಿಂದಿಗೆ.." ಕೃತಿಯಲ್ಲಿ ಒಬ್ಬರು (ಪುರುಷ ಅಥವಾ ಸ್ತ್ರೀ) ಮತ್ತೊಬ್ಬರನ್ನು (ಸ್ತ್ರೀ) ನೀರು ತರಲು ಒಂದು ಬಿಂದಿಗೆ ಕೊಡಲು ಕೇಳುವಂತೆ ಇದೆ. ಇದನ್ನು ನರ್ಸರಿ ಶಾಲೆಯಲ್ಲಿ ಪುಟ್ಟ ಮಕ್ಕಳಿಗೆ ಚೆನ್ನಾಗಿ ಅಲಂಕಾರ ಮಾಡಿ ಶಾಲಾ ವಾರ್ಷಿಕೋತ್ಸವದಂದು ನೃತ್ಯ ಮಾಡಲು ವಿಶೇಷವಾಗಿ ಬಳಸುತ್ತಾರೆ. ಸಂಗೀತ ಕಲಿಯುವ ಮಕ್ಕಳಿಗೆ ಪ್ರಾರಂಭದಲ್ಲಿ ಹೇಳಿಕೊಡುವ ಹಾಡುಗಳಲ್ಲಿ ಇದೂ ಒಂದು. ಸರಳವಾದ ಪದಗಳ ಬಳಕೆಯ ಮೂರು ನುಡಿಗಳ ಪುಟ್ಟ ಹಾಡು. ಕಲಿಯಲು ಸುಲಭ. ನೆನಪಿಡಲು ಸರಳ. ಹಾಡಲು ಸುಗಮ. ಆದರೆ ಅರ್ಥ ಬಹಳ ಗಹನ. ಇದೇ ಇದರ ವಿಶೇಷ. 

ಶ್ರೀ ಪುರಂದರದಾಸರು ಮಾಧ್ವ ಸಂಪ್ರದಾಯದ ಕವಿಗಳು ಮತ್ತು ತತ್ವಜ್ಞರು. "ಸುಮಧ್ವ ವಿಜಯ" ಅನ್ನುವ ಗ್ರಂಥದಲ್ಲಿ (ಅದ್ವೈತದಲ್ಲಿ "ಶ್ರೀ ಶಂಕರ ದಿಗ್ವಿಜಯ" ಗ್ರಂಥವಿದ್ದಂತೆ ದ್ವೈತದಲ್ಲಿ ಈ "ಸುಮಧ್ವ ವಿಜಯ ಗ್ರಂಥ) ಆಚಾರ್ಯ ಮಧ್ವರ ಭಾಷ್ಯಗಳ ಮತ್ತು ಪ್ರವಚನಗಳ ಪರಿಣಾಮಗಳನ್ನು ವರ್ಣಿಸುವ ಪ್ರಸಂಗವಿದೆ. ಈ ಗ್ರಂಥದ ಒಂಭತ್ತನೆಯ ಸರ್ಗದ ಹತ್ತನೆಯ ಶ್ಲೋಕದಲ್ಲಿ "ಬಾಲಸಂಗಮಪಿ ಬೋಧಯದ್ ಭೃಶಂ ದುರ್ನಿರೂಪವಚನಂ ಚ ಪಂಡಿತೈ:" ಎನ್ನುವ ಒಂದು ಹೇಳಿಕೆಯಿದೆ. "ಚಿಕ್ಕಮಕ್ಕಳಿಗೂ ಅರ್ಥವಾಗುವುದು. ಆದರೆ ಘನ ಪಂಡಿತರಿಗೂ ಗೊತ್ತಾಗದು!" ಎಂದು ಅದರ ಅರ್ಥ. ಈ ಹಾಡೂ ಅಂತೆಯೇ. ಬಾಹ್ಯಾರ್ಥ ಪುಟ್ಟ ಮಕ್ಕಳಿಗೂ ಗೊತ್ತಾಗುವುದು. ನೀರು ತರಲು ಬಿಂದಿಗೆ ಕೊಡು ಎನ್ನುವುದು. ಅಂತರಾರ್ಥ-ಗೂಡಾರ್ಥಗಳು ತಿಳಿಯಲು ಅನೇಕ ಗ್ರಂಥಗಳ ಆಳವಾದ ಅಭ್ಯಾಸ ಬೇಕಾಗುವುದು. ಇದು ಏಕೆ ಎನ್ನುವುದನ್ನು ಸ್ವಲ್ಪಮಟ್ಟಿಗೆ ನೋಡೋಣ. 

*****

ಬಿಂದಿಗೆ ಕೊಡು ಎಂದು ಕೇಳುತ್ತಿರುವುದು ಅಕ್ಕನನ್ನು. ಅಕ್ಕ ಯಾರು? ಒಂದು ಮನೆಯಲ್ಲಿ ಹುಟ್ಟಿದ ಹುಡುಗಿ ತನ್ನ ನಂತರ ಹುಟ್ಟಿದ ತಮ್ಮ-ತಂಗಿಯರಿಗೆ ಅಕ್ಕ. ಇದು ಲೋಕಾರೂಢಿ. ತಮ್ಮ-ತಂಗಿಯರು ಏನಾದರೂ ಬೇಕಾದರೆ ತಮಗಿಂತ ದೊಡ್ಡವಳಾದ, ಮತ್ತು ಆ ಕಾರಣದಿಂದ ಮನೆಯಲ್ಲಿ ಸ್ವಲ್ಪ ಹೆಚ್ಚಿನ ಅಧಿಕಾರ ಹೊಂದಿರುವ ಅಕ್ಕನನ್ನು ಕೇಳುವುದು ಸಹಜ. ಅದಲ್ಲದೆ ಅಕ್ಕ ಎಂದರೆ ಸ್ವಲ್ಪ ಸಲಿಗೆಯೂ ಹೆಚ್ಚಾಗಿ ಉಂಟು. ಅಣ್ಣನಿಗಿಂತ ಅಕ್ಕನಲ್ಲಿ ಕೇಳುವುದು ಸುಲಭ. ಅವಳದ್ದು ಹೆಂಗರುಳು. ತುಂಬಿದ ಮನೆಯಲ್ಲಿ ಬೆಳೆದವರಿಗೆ ಇದು ಗೊತ್ತು. ವಯಸ್ಸಿನ ಅಂತರ ಹೆಚ್ಚಿದ್ದರೆ ಕೇಳುವವರು ರಾಗವಾಗಿ ಬೇಡುವುದು ಸಾಮಾನ್ಯ. ಇಲ್ಲಿ ಕೇಳುವುದು ಹಾಗೆ ಇದೆ. "ಕೊಡೇ ಅಕ್ಕಾ...." ಎಂದು ಪ್ರೀತಿಯಿಂದ ಮನವೊಲಿಸುವ ರೀತಿ. ಆದ್ದರಿಂದ "ತಾರೇ ಬಿಂದಿಗೆಯಾ" ಎಂದು ದೀರ್ಘ! ಇದು ಇಲ್ಲಿನ ಸಾಮಾನ್ಯ ಅರ್ಥ. 

ಕೆಲವು ಕುಟುಂಬಗಳಲ್ಲಿ ತಾಯಿಗೆ "ಅಮ್ಮ" ಎಂದು ಸಂಬೋಧಿಸುವ ಪದ್ಧತಿ ಉಂಟು. ಹೆಚ್ಚಿನ ಕುಟುಂಬಗಳಲ್ಲಿ ಹೀಗೆಯೇ ಅಭ್ಯಾಸ. ಕೆಲವು ಪ್ರದೇಶಗಳಲ್ಲಿ (ಹೆಚ್ಚಾಗಿ ಉತ್ತರ ಕರ್ನಾಟಕದಲ್ಲಿ) "ಅವ್ವ" ಎಂದೂ ಕರೆಯುತ್ತಾರೆ. ಗಂಡ-ಹೆಂಡತಿ ಮದುವೆಯ ನಂತರ ಹೊಸದಾಗಿ ಸಂಸಾರ ಹೂಡಿದಾಗ ಇನ್ನೂ ಸಂತಾನ ಇರುವುದಿಲ್ಲ. ಅವರ ಜೊತೆ ಗಂಡನ ತಮ್ಮ-ತಂಗಿಯರು ವಾಸವಿದ್ದರೆ ಅವರು ಅವನನ್ನು "ಅಣ್ಣ" ಎಂದು ಕರೆಯುತ್ತಾರೆ. ನಂತರ ಆ ದಂಪತಿಗಳ ಸಂತಾನವಾಗಿ ಹುಟ್ಟಿದ ಮಕ್ಕಳು ತಂದೆಯನ್ನು "ಅಣ್ಣ" ಎಂದು ಈ ಕಾರಣದಿಂದ ಕರೆಯುವುದು ಉಂಟು. ಇದೇ ರೀತಿ ಹೆಂಡತಿಯ ತಮ್ಮ-ತಂಗಿಯರು ಅವರೊಡನಿದ್ದರೆ ಆಕೆಯನ್ನು "ಅಕ್ಕ" ಎಂದು ಕರೆಯುತ್ತಾರೆ. ಮುಂದೆ ಹುಟ್ಟಿದ ಮಕ್ಕಳು ಇದನ್ನೇ ಅನುಸರಿಸಿ ತಾಯಿಯನ್ನೂ "ಅಕ್ಕ" ಎಂದೇ ಕರೆಯುತ್ತಾರೆ. ಮಹಾಲಕ್ಷ್ಮಿ ಎಲ್ಲರಿಗೂ ತಾಯಿಯಾದರೂ ಈ ಹಿನ್ನೆಲೆಯಲ್ಲಿ ಅಕ್ಕನೂ ಆಗುತ್ತಾಳೆ.       

ಬಿಂದಿಗೆ ಒಂದು ದಿನಬಳಕೆಯ ಜಡ ಪದಾರ್ಥ. ಸ್ವಲ್ಪ ಅನುಕೂಲವಂತರಾದ ಜನರ ಮನೆಯಾದರೆ ಅಲ್ಲಿ ಹಿತ್ತಾಳೆ ಅಥವಾ ತಾಮ್ರದ ಬಿಂದಿಗೆ ಉಂಟು. ಬಡವರ ಮನೆಯಾದರೆ ಮಣ್ಣಿನ ಮಡಕೆ ಮಾತ್ರ ಇರುವುದು. ಚಿಕ್ಕವರಿಗೆ ಕೊಟ್ಟಾಗ, ಅವರು ಕಳೆದುಕೊಂಡರೆ ಬೆಲೆಬಾಳುವ ವಸ್ತು ಹೋಯಿತು. ಮಣ್ಣಿನದಾದರೆ, ಅವರು ಬಲು ಬೇಗ ಒಡೆದುಹಾಕಿ ಅದು ಹಾಳಾಗಬಹುದು. ಆದ್ದರಿಂದ ಎರಡು ರೀತಿಯಲ್ಲೂ ನಷ್ಟವೇ ಹೌದು. ಈ ಕಾರಣಕ್ಕಾಗಿ ದೊಡ್ಡವರನ್ನು ಕೇಳಿ ಪಡೆದುಕೊಳ್ಳಬೇಕಾಗುತ್ತದೆ. 

ಒಂದೆಡೆ ಒಬ್ಬ ಪರಮಾತ್ಮ. ಇನ್ನೊಂದೆಡೆ ಅನೇಕ ಜೀವರುಗಳು. ಮೂರನೆಯವು ಜಡ ವಸ್ತುಗಳು. ಜಡ ಪ್ರಕೃತಿಗಳಿಗೆ ಅಭಿಮಾನಿ ದೇವತೆ ಮಹಾಲಕ್ಷ್ಮೀದೇವಿ. ಇಲ್ಲಿ ಜೀವಿಗಳು ಮಹಾಲಕ್ಷ್ಮೀದೇವಿಯನ್ನು ತಮಗೊಂದು ದೇಹವನ್ನು ಕೊಡು ಎಂದು ಕೇಳುತ್ತಿರುವುದು ಅಂತರಾರ್ಥ. ನಮ್ಮ ದೇಹವೂ ಒಂದು ಬಿಂದಿಗೆಯಂತೆ ಅಥವಾ ಮಡಕೆಯಂತೆಯೇ ಇದೆ. ಅವುಗಳಿಗೂ ಕತ್ತು ಅಥವಾ ಕಂಠ ಪ್ರದೇಶ ಉಂಟು. ನಮ್ಮ ದೇಹಗಳಿಗೂ ಹೀಗೆಯೇ ಕತ್ತು ಇದೆ. ನದಿಯಲ್ಲೋ, ಜಲಾಶಯದಲ್ಲೋ ಬೇಕಾದಷ್ಟು ನೀರುಂಟು. ಆದರೆ ನೀರು ತರಬೇಕಾದರೆ ಬಿಂದಿಗೆ ಬೇಕು. ಬಿಂದಿಗೆಗಳಲ್ಲಿ ನೀರು ತುಂಬಬಹುದು. ಜೀವನಿಗೆ ಸಾಧನೆ ಮಾಡಲು ಅನೇಕ ಅವಕಾಶಗಳಿವೆ. ಆದರೆ ಸಾಧನೆ ಮಾಡಲು ಒಂದು ದೇಹ ಬೇಕು! ನಮ್ಮ ದೇಹಗಳಿಂದ ಅನೇಕ ರೀತಿಯ ಸಾಧನೆಕ್ರಿಯೆಗಳನ್ನು ಮಾಡಿ ಸಾಧನೆಯ ಫಲವನ್ನು ಜೀವಿಯು ತುಂಬಿಕೊಳ್ಳಬಹುದು. ದೇಹವಿಲ್ಲದಿದ್ದರೆ ಜೀವನು ಏನೂ ಸಾಧನೆ ಮಾಡಲು ಸಾಧ್ಯವಿಲ್ಲ.

"ತಾರಕ್ಕ ಬಿಂದಿಗೆ ನಾ ನೀರಿಗೆ ಹೋಗುವೆ" ಅನ್ನುವಲ್ಲಿ ಜೀವನು ಜಡ ಪ್ರಕೃತಿಯ ಅಭಿಮಾನಿ ದೇವತೆ ಮಹಾಲಕ್ಷ್ಮಿಯನ್ನು ಸಾಧನೆ ಮಾಡುವ ಸಲುವಾಗಿ ನಮಗೆ ಒಂದು ದೇಹವನ್ನು ಕೊಡು ಎಂದು ಬೇಡುವುದು ಅಂತರಾರ್ಥ. 
***** 

ಇನ್ನು "ಬಿಂದಿಗೆ ಒಡೆದರೆ ಒಂದೇ ಕಾಸು" ಎಂದರೇನು? ತಾಮ್ರದ ಅಥವಾ ಹಿತ್ತಾಳೆ ಬಿಂದಿಗೆ ಒಡೆಯುವುದಿಲ್ಲ. ಅವು ಕಳೆದುಹೋಗಬಹುದು ಅಥವಾ ಚಿಕ್ಕವರನ್ನು ಹೆದರಿಸಿ ಮತ್ಯಾರೋ ಧಾಂಡಿಗರು ಕಿತ್ತುಕೊಂಡು ಹೋಗಬಹುದು. ಒಡೆಯಬೇಕಾದರೆ ಅದು ಮಣ್ಣಿನ ಬಿಂದಿಗೆ (ಮಡಕೆ) ಆಗಿರಬೇಕು. ಇದು ನೇರವಾಗಿ ದೇಹವನ್ನೇ ಸೂಚಿಸುತ್ತದೆ. ಯಾರಾದರೂ ಸತ್ತ ಸುದ್ದಿ ಕೇಳಿದಾಗ ಹಿಂದಿನ ದಿನಗಳಲ್ಲಿ "ಒಂದು ಘಟ ಬಿತ್ತು" ಎಂದು ಸೂಚ್ಯವಾಗಿ ಹೇಳುತ್ತಿದ್ದರು. ಘಟ ಸಂಸ್ಕೃತ ಪದ. ಕನ್ನಡಲ್ಲಿ ಮಡಕೆ. 

ಸ್ಮಶಾನದಲ್ಲಿ ಮೃತ ದೇಹಗಳ ಅಂತ್ಯ ಸಂಸ್ಕಾರ ಮಾಡುವಾಗ, ಸಂಸ್ಕಾರ ಮಾಡುತ್ತಿರುವ ವ್ಯಕ್ತಿಯ ಹೆಗಲ ಮೇಲೆ ಒಂದು ನೀರು ತುಂಬಿದ ಮಣ್ಣಿನ ಘಟ (ಮಡಕೆ) ಹೊರಿಸುತ್ತಾರೆ. ಮೃತ ದೇಹದ ಸುತ್ತ ಅವನು ಸುತ್ತುವಾಗ ಒಂದು ಸಣ್ಣ ಕಲ್ಲಿನಿಂದ ಅದಕ್ಕೆ ಮತ್ತೊಬ್ಬರು ಒಂದು ರಂಧ್ರ ಮಾಡುತ್ತಾರೆ. ಮೂರು ಸುತ್ತು. ಒಂದು ಸುತ್ತಿಗೆ ಒಂದರಂತೆ ಮೂರು ರಂಧ್ರಗಳು. ಈ ತೂತುಗಳಿಂದ ನೀರು ಹೊರಗೆ ಸೋರಿಹೋಗುತ್ತಿರುತ್ತದೆ. ಮೂರನೆಯ ಸುತ್ತು ಬಂದ ಮೇಲೆ ಮಡಕೆ ಹೊತ್ತುಕೊಂಡಿರುವ ವ್ಯಕ್ತಿ ಅದನ್ನು ಹಿಮ್ಮುಖವಾಗಿ ಬೀಳಿಸುತ್ತಾನೆ. ಈಗ ಮಡಕೆ ಪೂರ್ತಿ ಒಡೆದು ಚೂರುಗಳಾಗಿ ಬೀಳುತ್ತದೆ. ಹೀಗೆ ಬಿದ್ದ ಒಂದು ದೊಡ್ಡ ಮಡಕೆಯ ಚೂರಿನಲ್ಲಿ ಇರುವ ಸ್ವಲ್ಪ ನೀರನ್ನು ಮುಂದಿನ ಕರ್ಮದ ಕೆಲಸಗಳಿಗೆ ಬಳಸುತ್ತಾರೆ. "ಒಂದು ಘಟ ಬಿತ್ತು" ಎನ್ನುವ ಪದಪ್ರಯೋಗ ಈ ಕಾರಣದಿಂದ ಬಂದದ್ದು. 

ಹಿಂದೆಲ್ಲಾ ಸುಡುಗಾಡಿಗೆ ಅಥವಾ ಸ್ಮಶಾನಕ್ಕೆ ಹೋಗಿ ಇದನ್ನು ನೋಡಿದವರಿಗೆ ಮಾತ್ರ ಇವು ಗೊತ್ತಾಗುತ್ತಿತ್ತು. ಸುಡುವ ಕಾಡು ಸುಡುಗಾಡು. ಈಗ ಟಿವಿ ಕಾರ್ಯಕ್ರಮಗಳಲ್ಲಿ ಮತ್ತು ಸಿನಿಮಾಗಳಲ್ಲಿ ವೈಭವದಿಂದ ತೋರಿಸುವುದರಿಂದ ಹೆಚ್ಚಿನ ಜನಕ್ಕೆ ಗೊತ್ತು. 

ಉಳಿದಿದ್ದು "ಒಂದೇ ಕಾಸು" ಅನ್ನುವುದು. ಒಬ್ಬ ವ್ಯಕ್ತಿ ಸತ್ತ ಮೇಲೆ ಆ ದೇಹವನ್ನು ಏನು ಮಾಡಬೇಕು? ಎಷ್ಟೇ ಪ್ರೀತಿಯ ವ್ಯಕ್ತಿಯಾದರೂ ಆ ದೇಹವನ್ನು ಇಟ್ಟುಕೊಳ್ಳುವಂತಿಲ್ಲ. ಸಂಸ್ಕಾರ ಮಾಡಬೇಕು. ಹಾಗೆ ಮಾಡಿ ದೇಹದ ಕೆಲಸ ಮುಗಿಸಬೇಕು. ಇದು ಲೋಕದಲ್ಲಿ ಎರಡು ರೀತಿಯಲ್ಲಿ ನಡೆಯುತ್ತದೆ. ಕೆಲವರು ಭೂಮಿಯಲ್ಲಿ ಹೂಳುತ್ತಾರೆ. ಮತ್ತೆ ಕೆಲವರು ಬೆಂಕಿಯಲ್ಲಿ ಸುಡುತ್ತಾರೆ. ಬೆಂಕಿಯಲ್ಲಿ ಸುಡುವುದಕ್ಕೆ "ಕಾಯಿಸುವುದು" ಎಂದೂ ಹೇಳುತ್ತಾರೆ. ಆಡು ಭಾಷೆಯಲ್ಲಿ "ಕಾಯಿಸು" ಅನ್ನುವುದು "ಕಾಸು" ಆಗುತ್ತದೆ. "ಇನ್ನೇನು, ಕಾಫಿ ಕಾಸು" ಎಂದು ಹಿಂದೆಲ್ಲಾ ಹೇಳುತ್ತಿದ್ದರು. "ಸ್ನಾನಕ್ಕೆ ನೀರು ಕಾಸು" ಅನ್ನುತ್ತಿದ್ದರು. ದಾಸರು ಇದನ್ನೇ "ಬಿಂದಿಗೆ ಒಡೆದರೆ ಒಂದೇ ಕಾಸು" ಎಂದಿದ್ದಾರೆ. ಒಂದೇ ಕಾಸು. ಏಕೆಂದರೆ "ಮತ್ತೆ ಮತ್ತೆ ಕಾಸುವಂತಿಲ್ಲ". ಇದು ಕಡೆಯ ಕಾಸುವಿಕೆ. ಅಲ್ಲಿಗೆ ಎಲ್ಲ ಮುಗಿಯಿತು. ಹೀಗೆ. 

*****

ಕೇವಲ ಎರಡು ಸಾಲಿನ ಪಲ್ಲವಿಗೇ ಇಷ್ಟಾಯಿತು. ಇದರಲ್ಲೂ "ನೀರು" ಪದದ ವಿಶೇಷಾರ್ಥ ಉಳಿದಿದೆ. ಈಗಿನ ಪೀಳಿಗೆಗೆ ಇಂತಹ ಹೆಚ್ಚು ವಿಷಯಗಳು ಗೊತ್ತಿರುವುದಿಲ್ಲ. ಪ್ರಶ್ನೆಗಳನ್ನು ಕೇಳುವವರು ಬಹುತೇಕ ಈಗಿನ ತಲೆಮಾರಿನವರು. ಆದ್ದರಿಂದ ವಿವರಗಳು ಜಾಸ್ತಿ. ಲೇಖನದ ಉದ್ದವೂ ದೊಡ್ಡದು.

ಮುಂದಿನ ಸಂಚಿಕೆಯಲ್ಲಿ ಈ ಕೃತಿಯ ಇತರೆ ಅಂತರಾರ್ಥ, ಗೂಡಾರ್ಥಗಳನ್ನು ಹುಡುಕುವ ಪ್ರಯತ್ನ ಮಾಡೋಣ.